[ಮೂರನೆಯ ಅಧ್ಯಾಯ]
ಭಾಗಸೂಚನಾ
ಗಜೇಂದ್ರನು ಮಾಡಿದ ಪರಮಾತ್ಮನ ಸ್ತೋತ್ರ ಗಜೇಂದ್ರಮೋಕ್ಷ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ವ್ಯವಸಿತೋ ಬುದ್ಧ್ಯಾ ಸಮಾಧಾಯ ಮನೋ ಹೃದಿ ।
ಜಜಾಪ ಪರಮಂ ಜಾಪ್ಯಂ ಪ್ರಾಗ್ಜನ್ಮನ್ಯನುಶಿಕ್ಷಿತಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿ ತನೇ! ಗಜೇಂದ್ರನು ಹೀಗೆ ದಯಾಮಯನಾದ ಭಗವಂತ ನನ್ನೇ ಶರಣುಹೊಂದಲು ನಿಶ್ಚಯಿಸಿ ತನ್ನ ಮನಸ್ಸನ್ನು ಹೃದಯದಲ್ಲಿ ಏಕಾಗ್ರಗೊಳಿಸಿ, ಹಿಂದಿನ ಜನ್ಮದಲ್ಲಿ ಉಪ ದಿಷ್ಟವಾಗಿದ್ದ ಶ್ರೇಷ್ಠವಾದ ಸ್ತೋತ್ರದ ಮೂಲಕ ಭಗವಂತ ನನ್ನು ಸ್ತುತಿಸತೊಡಗಿದನು. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಗಜೇಂದ್ರ ಉವಾಚ
ಮೂಲಮ್
ಓಂ ನಮೋ ಭಗವತೇ ತಸ್ಮೈ ಯತ ಏತಚ್ಚಿದಾತ್ಮಕಮ್ ।
ಪುರುಷಾಯಾದಿಬೀಜಾಯ ಪರೇಶಾಯಾಭಿಧೀಮಹಿ ॥
ಅನುವಾದ
ಗಜೇಂದ್ರನು ಹೇಳುತ್ತಾನೆ — ಯಾರು ಜಗತ್ತಿಗೆ ಮೂಲ ಕಾರಣನೋ, ಎಲ್ಲರ ಹೃದಯದಲ್ಲಿ ಪರಮಪುರುಷನ ರೂಪದಲ್ಲಿ ವಿರಾಜಮಾನನಾಗಿರುವನೋ, ಯಾರು ಸಮಸ್ತ ಜಗತ್ತಿನ ಏಕಮಾತ್ರ ಸ್ವಾಮಿಯಾಗಿರುವನೋ, ಯಾರ ಕಾರಣದಿಂದ ಈ ಪ್ರಪಂಚದಲ್ಲಿ ಚೈತನ್ಯದ ವಿಸ್ತಾರವಾಗುತ್ತದೋ, ಅಂತಹ ಸಚ್ಚಿದಾನಂದ ಸ್ವರೂಪೀ ಪರಮಾತ್ಮನಿಗೆ ನಾನು ನಮಸ್ಕರಿಸುತ್ತೇನೆ; ಪ್ರೇಮದಿಂದ ಅವನನ್ನು ಧ್ಯಾನಿಸುತ್ತೇನೆ. ॥2॥
(ಶ್ಲೋಕ-3)
ಮೂಲಮ್
ಯಸ್ಮಿನ್ನಿದಂ ಯತಶ್ಚೇದಂ ಯೇನೇದಂ ಯಂ ಇದಂ ಸ್ವಯಮ್ ।
ಯೋಸ್ಮಾತ್ಪರಸ್ಮಾಚ್ಚ ಪರಸ್ತಂ ಪ್ರಪದ್ಯೇ ಸ್ವಯಂಭುವಮ್ ॥
ಅನುವಾದ
ಈ ಸಮಸ್ತ ಜಗತ್ತು ಅವನಲ್ಲೇ ನೆಲೆಸಿದೆ. ಅವನ ಅಸ್ತಿತ್ವದಿಂದಲೇ ಗೋಚರಿಸುತ್ತಾ ಇದೆ. ಅವನೇ ಇದರಲ್ಲಿ ವ್ಯಾಪಿಸಿಕೊಂಡಿರುವನು ಮತ್ತು ಸ್ವತಃ ಅವನೇ ಇದರ ರೂಪದಲ್ಲಿ ಪ್ರಕಟನಾಗಿರುವನು. ಹೀಗಿದ್ದರೂ ಅವನು ಈ ಜಗತ್ತಿನಿಂದಲೂ, ಇದರ ಕಾರಣ ಪ್ರಕೃತಿಯಿಂದ ಬೇರೆಯೇ ಆಗಿರುವನು. ಅಂತಹ ಸ್ವಯಂ ಪ್ರಕಾಶನೂ, ಸ್ವಯಂಸಿದ್ಧನೂ, ಸರ್ವಾತ್ಮಕನೂ ಆದ ಪರಮಾತ್ಮನಲ್ಲಿ ನಾನು ಶರಣಾಗುತ್ತೇನೆ, ಮೊರೆ ಹೋಗುತ್ತೇನೆ. ॥3॥
(ಶ್ಲೋಕ-4)
ಮೂಲಮ್
ಯಃ ಸ್ವಾತ್ಮನೀದಂ ನಿಜಮಾಯಯಾರ್ಪಿತಂ
ಕ್ವಚಿದ್ವಿಭಾತಂ ಕ್ವ ಚ ತತ್ತಿರೋಹಿತಮ್ ।
ಅವಿದ್ಧದೃಕ್ಸಾಕ್ಷ್ಯುಭಯಂ ತದೀಕ್ಷತೇ
ಸ ಆತ್ಮಮೂಲೋವತು ಮಾಂ ಪರಾತ್ಪರಃ ॥
ಅನುವಾದ
ಈ ಪ್ರಪಂಚವು ಅವನ ಮಾಯೆಯಿಂದ ಅವನಲ್ಲಿಯೇ ಇಡಲ್ಪಟ್ಟಿದೆ. ಆದರೆ ಕೆಲವು ವೇಳೆ (ಸೃಷ್ಟಿಯ ಕಾಲದಲ್ಲಿ) ಕಾಣಿಸಿಕೊಳ್ಳುತ್ತದೆ. ಕೆಲವು ವೇಳೆ (ಪ್ರಳಯಕಾಲದಲ್ಲಿ) ಅದೃಶ್ಯವಾಗಿರುತ್ತದೆ. ಆದರೆ ಅವನ ದೃಷ್ಟಿಯು ಲೋಪ ವಾಗುವುದಿಲ್ಲ. ಸಾಕ್ಷೀ ಭೂತನಾಗಿ ಪ್ರಪಂಚದ ಸೃಷ್ಟಿ ಯನ್ನೂ, ಲಯವನ್ನೂ ನೋಡುತ್ತಲೇ ಇರುತ್ತಾನೆ. ಅಂತಹ ಆತ್ಮನೇ ಮೂಲವಾಗಿ ಉಳ್ಳ, ಎಲ್ಲದರಲ್ಲಿಯೂ ಆತ್ಮ ಸ್ವರೂಪದಿಂದ ಇರುವ ಸ್ವಯಂಪ್ರಕಾಶನಾದ ಪರಾತ್ಪರನಾದ ಪರಮಾತ್ಮನು ನನ್ನನ್ನು ರಕ್ಷಿಸಲಿ. ॥4॥
(ಶ್ಲೋಕ-5)
ಮೂಲಮ್
ಕಾಲೇನ ಪಂಚತ್ವಮಿತೇಷು ಕೃತ್ಸ್ನಶೋ
ಲೋಕೇಷು ಪಾಲೇಷು ಚ ಸರ್ವಹೇತುಷು ।
ತಮಸ್ತದಾಸೀದ್ಗಹನಂ ಗಭೀರಂ
ಯಸ್ತಸ್ಯ ಪಾರೇಭಿವಿರಾಜತೇ ವಿಭುಃ ॥
ಅನುವಾದ
ಎರಡು ಪರಾರ್ಧಗಳು ಕಳೆದೊಡನೆಯೇ ಎಲ್ಲ ಲೋಕಗಳು ಲೋಕಪಾಲರು ಮತ್ತು ಇವೆಲ್ಲದರ ಕಾರಣವು ಸಂಪೂರ್ಣವಾಗಿ ಲಯ ಹೊಂದುವುದು. ಆಗ ಕೇವಲ ಅತ್ಯಂತ ಗಾಢ ವಾದ ಗಹನವಾದ ಅಂಧಕಾರವೇ ಎಲ್ಲೆಡೆ ಹರಡಿಕೊಂಡಿರು ತ್ತದೆ. ಆದರೆ ಅನಂತವಾದ ಪರಮಾತ್ಮನು ಅದರಿಂದ ತೀರಾ ಬೇರೆಯೇ ಆಗಿದ್ದು ಪ್ರಕಾಶಿಸುತ್ತಿರುವನು. ಅಂತಹ ಆದಿತ್ಯ ವರ್ಣನಾದ ಪ್ರಭುವು ನನ್ನನ್ನು ರಕ್ಷಿಸಲಿ. ॥5॥
(ಶ್ಲೋಕ-6)
ಮೂಲಮ್
ನ ಯಸ್ಯ ದೇವಾ ಋಷಯಃ ಪದಂ ವಿದು-
ರ್ಜಂತುಃ ಪುನಃ ಕೋರ್ಹತಿ ಗಂತುಮೀರಿತುಮ್ ।
ಯಥಾ ನಟಸ್ಯಾಕೃತಿಭಿರ್ವಿಚೇಷ್ಟತೋ
ದುರತ್ಯಯಾನುಕ್ರಮಣಃ ಸ ಮಾವತು ॥
ಅನುವಾದ
ಅವನ ಸ್ಥಾನವನ್ನು ದೇವತೆಗಳಾಗಲೀ, ಋಷಿಗಳಾಗಲೀ ತಿಳಿಯಲಾರರು. ಅಂತಹವರ ಪದವನ್ನು ಸಾಮಾನ್ಯರಾದವರು ಹೊಂದಲು ಮತ್ತು ಅದು ಹೀಗೆಯೇ ಇದೆ ಎಂದು ಹೇಳಲು ಹೇಗೆ ಸಮರ್ಥರಾಗುವರು? ನಿಜರೂಪವನ್ನು ಮರೆಸಿ ನಾನಾ ವೇಷಗಳನ್ನು ಹಾಕಿಕೊಂಡು ಕುಣಿಯುವ ನಟನಂತೆ ತಿಳಿಯಲು ಅಸಾಧ್ಯವಾದ ಲೀಲೆಗಳಿಂದ ಕೂಡಿದವನಾಗಿ, ನಾನಾ ಅವತಾರಗಳನ್ನು ಹೊಂದುವ ಆ ಪರಮಾತ್ಮನು ನನ್ನನ್ನು ರಕ್ಷಿಸಲಿ. ॥6॥
(ಶ್ಲೋಕ-7)
ಮೂಲಮ್
ದಿದೃಕ್ಷವೋ ಯಸ್ಯ ಪದಂ ಸುಮಂಗಲಂ
ವಿಮುಕ್ತಸಂಗಾ ಮುನಯಃ ಸುಸಾಧವಃ ।
ಚರಂತ್ಯಲೋಕವ್ರತಮವ್ರಣಂ ವನೇ
ಭೂತಾತ್ಮಭೂತಾಃ ಸುಹೃದಃ ಸ ಮೇ ಗತಿಃ ॥
ಅನುವಾದ
ಯಾವನ ಪರಮ ಮಂಗಲಮಯ ಸ್ವರೂಪವನ್ನು ಸಂದರ್ಶಿಸಲು ಮಹಾಮುನಿಗಳು ಸಂಸಾರದ ಸಮಸ್ತ ಆಸಕ್ತಿಗಳನ್ನು ಪರಿತ್ಯಜಿಸಿ ಅರಣ್ಯಕ್ಕೆ ಹೋಗಿ ನಿರಂತರವಾಗಿ ಬ್ರಹ್ಮಚರ್ಯವೇ ಮುಂತಾದ ಅಲೌಕಿಕ ವ್ರತಗಳನ್ನು ಪಾಲಿಸುವರೋ, ತಮ್ಮ ಆತ್ಮನನ್ನು ಎಲ್ಲರ ಹೃದಯದಲ್ಲಿ ವಿರಾಜಿಸುತ್ತಿರುವುದನ್ನು ನೋಡಿ ಸ್ವಾಭಾವಿಕವಾಗಿಯೇ ಎಲ್ಲರಿಗೂ ಒಳ್ಳೆಯದನ್ನು ಮಾಡುವರೋ, ಆ ಮುನಿಗಳ ಸರ್ವಸ್ವನಾದ ಭಗವಂತನು ನನಗೆ ಸಹಾಯಕನಾಗಿರುವನು. ಅವನೇ ನನಗೆ ಪರಮ ಗತಿಯು. ॥7॥
(ಶ್ಲೋಕ-8)
ಮೂಲಮ್
ನ ವಿದ್ಯತೇ ಯಸ್ಯ ಚ ಜನ್ಮ ಕರ್ಮ ವಾ
ನ ನಾಮರೂಪೇ ಗುಣದೋಷ ಏವ ವಾ ।
ತಥಾಪಿ ಲೋಕಾಪ್ಯಯಸಂಭವಾಯ ಯಃ
ಸ್ವಮಾಯಯಾ ತಾನ್ಯನುಕಾಲಮೃಚ್ಛತಿ ॥
ಅನುವಾದ
ಯಾವನಿಗೆ ಜನ್ಮ-ಕರ್ಮಗಳಾಗಲೀ, ನಾಮ-ರೂಪಗಳಾಗಲೀ, ಇಲ್ಲವೋ, ಅವನ ಸಂಬಂಧವಾಗಿ ಗುಣ- ದೋಷಗಳನ್ನು ಹೇಗೆ ತಾನೇ ಕಲ್ಪಿಸಬಹುದು? ಹೀಗಿದ್ದರೂ ವಿಶ್ವದ ಸೃಷ್ಟಿ ಮತ್ತು ಸಂಹಾರಮಾಡಲಿಕ್ಕಾಗಿ ಆಯಾಕಾಲಕ್ಕೆ ಅವನು ತನ್ನ ಮಾಯೆಯನ್ನು ಸ್ವೀಕರಿಸಿ ಅವತರಿಸುವನು. ಅಂತಹ ಸಚ್ಚಿದಾನಂದ ಪರಮಾತ್ಮನು ನನ್ನನ್ನು ರಕ್ಷಿಸಲಿ. ॥8॥
(ಶ್ಲೋಕ-9)
ಮೂಲಮ್
ತಸ್ಮೈ ನಮಃ ಪರೇಶಾಯ ಬ್ರಹ್ಮಣೇನಂತಶಕ್ತಯೇ ।
ಅರೂಪಾಯೋರುರೂಪಾಯ ನಮ ಆಶ್ಚರ್ಯಕರ್ಮಣೇ ॥
ಅನುವಾದ
ಬ್ರಹ್ಮನೇ ಮೊದಲಾದವರಿಗೆ ಈಶನಾದ, ಅನಂತಶಕ್ತಿಯಾದ, ಸರ್ವೈಶ್ವರ್ಯ ಸಂಪನ್ನನಾದ ಪರಬ್ರಹ್ಮಪರಮಾತ್ಮನಿಗೆ ನಾನು ನಮಸ್ಕರಿಸುತ್ತೇನೆ. ಅವನು ಅರೂಪನಾಗಿದ್ದರೂ ಬಹುರೂಪಿಯಾಗಿದ್ದಾನೆ. ಅವನ ಕರ್ಮಗಳು ಅತ್ಯಂತ ಆಶ್ಚರ್ಯಮಯವಾಗಿವೆ. ಅಂತಹವನ ಚರಣಗಳಿಗೆ ನಾನು ನಮಸ್ಕರಿಸುತ್ತೇನೆ. ॥9॥
(ಶ್ಲೋಕ-10)
ಮೂಲಮ್
ನಮ ಆತ್ಮಪ್ರದೀಪಾಯ ಸಾಕ್ಷಿಣೇ ಪರಮಾತ್ಮನೇ ।
ನಮೋ ಗಿರಾಂ ವಿದೂರಾಯ ಮನಸಶ್ಚೇತಸಾಮಪಿ ॥
ಅನುವಾದ
ಸ್ವಯಂ ಪ್ರಕಾಶನೂ, ಎಲ್ಲರ ಸಾಕ್ಷಿಯೂ ಆದ ಪರಮಾತ್ಮನಿಗೆ ನಾನು ನಮಸ್ಕರಿಸುತ್ತೇನೆ. ಮಾತು, ಮನಸ್ಸು ಮತ್ತು ಬುದ್ಧಿಗಳಿಗಿಂತ ಅತ್ಯಂತ ದೂರನಾದ ಆ ಪರಮಾತ್ಮನಿಗೆ ನಾನು ನಮಸ್ಕರಿಸುತ್ತೇನೆ. ॥10॥
(ಶ್ಲೋಕ-11)
ಮೂಲಮ್
ಸತ್ತ್ವೇನ ಪ್ರತಿಲಭ್ಯಾಯ ನೈಷ್ಕರ್ಮ್ಯೇಣ ವಿಪಶ್ಚಿತಾ ।
ನಮಃ ಕೈವಲ್ಯನಾಥಾಯ ನಿರ್ವಾಣಸುಖಸಂವಿದೇ ॥
ಅನುವಾದ
ವಿವೇಕಿಗಳಾದವರು ಕರ್ಮಸಂನ್ಯಾಸದಿಂದ ಅಥವಾ ಕರ್ಮ-ಸಮರ್ಪಣೆಯ ಮೂಲಕ ತಮ್ಮ ಅಂತಃಕರಣವನ್ನು ಶುದ್ಧಗೊಳಿಸಿಕೊಂಡು ಯಾರನ್ನು ಪಡೆದುಕೊಳ್ಳುವರೋ ಹಾಗೂ ಸ್ವಯಂ ನಿತ್ಯ ಮುಕ್ತನೂ ಪರಮಾನಂದಮಯನೂ, ಜ್ಞಾನ ಸ್ವರೂಪನೂ ಆಗಿದ್ದು, ಬೇರೆಯವರಿಗೆ ಕೈವಲ್ಯಮುಕ್ತಿಯನ್ನು ಕೊಡುವ ಸಾಮರ್ಥ್ಯವು ಕೇವಲ ಅವನೊಬ್ಬನಲ್ಲೇ ಇರುವುದೋ ಅಂತಹ ಸ್ವಾಮಿಗೆ ನಾನು ನಮಸ್ಕರಿಸುತ್ತೇನೆ. ॥11॥
(ಶ್ಲೋಕ-12)
ಮೂಲಮ್
ನಮಃ ಶಾಂತಾಯ ಘೋರಾಯ ಮೂಢಾಯ ಗುಣಧರ್ಮಿಣೇ ।
ನಿರ್ವಿಶೇಷಾಯ ಸಾಮ್ಯಾಯ ನಮೋ ಜ್ಞಾನಘನಾಯ ಚ ॥
ಅನುವಾದ
ಯಾರು ಸತ್ತ್ವ-ರಜ-ತಮ ಈ ತ್ರಿಗುಣಗಳನ್ನು ಸ್ವೀಕರಿಸಿ, ಕ್ರಮವಾಗಿ ಶಾಂತ, ಘೋರ ಮತ್ತು ಮೂಢ ಅವಸ್ಥೆಗಳನ್ನು ಹೊಂದುವನೋ ಆ ಭೇದರಹಿತನೂ, ಸಮ ಭಾವದಿಂದ ಇರುವವನೂ, ಆದ ಜ್ಞಾನಘನಸ್ವರೂಪನಾದ ಪರಮಾತ್ಮನಿಗೆ ನಾನು ಮತ್ತೆ-ಮತ್ತೆ ನಮಸ್ಕರಿಸುತ್ತೇನೆ. ॥12॥
(ಶ್ಲೋಕ-13)
ಮೂಲಮ್
ಕ್ಷೇತ್ರಜ್ಞಾಯ ನಮಸ್ತುಭ್ಯಂ ಸರ್ವಾಧ್ಯಕ್ಷಾಯ ಸಾಕ್ಷಿಣೇ ।
ಪುರುಷಾಯಾತ್ಮಮೂಲಾಯ ಮೂಲಪ್ರಕೃತಯೇ ನಮಃ ॥
ಅನುವಾದ
ನೀನು ಎಲ್ಲರ ಸ್ವಾಮಿಯೂ, ಕ್ಷೇತ್ರಜ್ಞನೂ, ಸಮಸ್ತ ಕ್ಷೇತ್ರಗಳಲ್ಲಿ ಏಕಮಾತ್ರ ಸರ್ವಸಾಕ್ಷಿಯೂ ಆಗಿರುವೆ. ಅಂತಹ ನಿನಗೆ ವಂದಿಸುತ್ತೇನೆ. ನೀನೇ ಸ್ವಯಂ ಮೂಲಕಾರಣನಾಗಿರುವೆ. ಪುರುಷ ಮತ್ತು ಮೂಲ ಪ್ರಕೃತಿಯ ರೂಪ ದಲ್ಲಿಯೂ ನೀನೇ ಇರುವೆ. ಅಂತಹ ನಿನಗೆ ಪದೇ-ಪದೇ ನಮಸ್ಕಾರಗಳು. ॥13॥
(ಶ್ಲೋಕ-14)
ಮೂಲಮ್
ಸರ್ವೇಂದ್ರಿಯಗುಣದ್ರಷ್ಟ್ರೇ ಸರ್ವಪ್ರತ್ಯಯಹೇತವೇ ।
ಅಸತಾ ಚ್ಛಾಯಯೋಕ್ತಾಯ ಸದಾಭಾಸಾಯ ತೇ ನಮಃ ॥
ಅನುವಾದ
ನೀನು ಸಮಸ್ತ ಇಂದ್ರಿಯಗಳು ಮತ್ತು ಅವುಗಳ ವಿಷಯಗಳ ದ್ರಷ್ಟಾ ಆಗಿದ್ದು, ಸಮಸ್ತ ಪ್ರತೀತಿಗಳಿಗೆ ಆಧಾರನಾಗಿರುವೆ. ಅಹಂಕಾರಾದಿ ಛಾಯಾ ರೂಪವಾದ ಅಸತ್ ವಸ್ತುಗಳ ಮೂಲಕ ನಿನ್ನ ಅಸ್ತಿತ್ವವೇ ಪ್ರಕಟವಾಗುತ್ತದೆ. ಸಮಸ್ತ ವಸ್ತುಗಳ ಅಸ್ತಿತ್ವದ ರೂಪದಲ್ಲಿಯೂ ಕೇವಲ ನೀನೇ ಕಂಡುಬರುತ್ತಿರುವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥14॥
(ಶ್ಲೋಕ-15)
ಮೂಲಮ್
ನಮೋ ನಮಸ್ತೇಖಿಲಕಾರಣಾಯ
ನಿಷ್ಕಾರಣಾಯಾದ್ಭುತಕಾರಣಾಯ ।
ಸರ್ವಾಗಮಾಮ್ನಾಯಮಹಾರ್ಣವಾಯ
ನಮೋಪವರ್ಗಾಯ ಪರಾಯಣಾಯ ॥
ಅನುವಾದ
ನೀನು ಎಲ್ಲರ ಮೂಲ ಕಾರಣನಾಗಿರುವೆ. ನಿನಗೆ ಯಾವ ಕಾರಣವೂ ಇಲ್ಲ. ನೀನು ಜಗತ್ತಿನ ಸೃಷ್ಟಿಗೆ ಕಾರಣನಾದರೂ ನಿನ್ನಲ್ಲಿ ವಿಕಾರವಾಗಲೀ, ಪರಿಣಾಮವಾಗಲೀ ಉಂಟಾಗುವುದಿಲ್ಲ. ಆದುದರಿಂದ ನೀನು ಅದ್ಭುತಕಾರಣನಾಗಿರುವೆ. ನಿನಗೆ ಬಾರಿ-ಬಾರಿಗೂ ನಮಸ್ಕಾರವು. ನದೀನದಗಳಿಗೆಲ್ಲ ಪರಮಾಶ್ರಯವು ಸಮುದ್ರವಿರುವಂತೆ ಸಮಸ್ತ ವೇದಶಾಸ್ತ್ರಗಳಿಗೆ ನೀನೇ ಪರಮತಾತ್ಪರ್ಯನಾಗಿರುವೆ. ನೀನು ಮೋಕ್ಷ ಸ್ವರೂಪನೂ, ಸಾಧು-ಸತ್ಪುರುಷರಿಗೆ ಪರಮಾಶ್ರಯನೂ ಆಗಿರುವೆ ಅಂತಹ ನಿನಗೆ ನಮಸ್ಕಾರವು. ॥15॥
(ಶ್ಲೋಕ-16)
ಮೂಲಮ್
ಗುಣಾರಣಿಚ್ಛನ್ನಚಿದೂಷ್ಮಪಾಯ
ತತ್ಕ್ಷೋಭವಿಸ್ಫೂರ್ಜಿತಮಾನಸಾಯ ।
ನೈಷ್ಕರ್ಮ್ಯಭಾವೇನ ವಿವರ್ಜಿತಾಗಮ-
ಸ್ವಯಂಪ್ರಕಾಶಾಯ ನಮಸ್ಕರೋಮಿ ॥
ಅನುವಾದ
ಯಜ್ಞದ ಅರಣಿಯಲ್ಲಿ ಅಗ್ನಿಯು ಗುಪ್ತವಾಗಿರುವಂತೆಯೇ ನೀನು ನಿನ್ನ ಜ್ಞಾನವನ್ನು ಗುಣಮಯ ಮಾಯೆಯಿಂದ ಮುಚ್ಚಿಟ್ಟಿರುವೆ. ಗುಣಗಳಲ್ಲಿ ಕ್ಷೋಭೆ ಉಂಟಾದಾಗ ಅವುಗಳ ಮೂಲಕ ವಿವಿಧ ಪ್ರಕಾರದ ಸೃಷ್ಟಿರಚನೆಯ ಸಂಕಲ್ಪವನ್ನು ನೀನು ಮಾಡುವೆ. ಸರ್ವಕರ್ಮ ಸಂನ್ಯಾಸ ಅಥವಾ ಕರ್ಮ ಸಮರ್ಪಣಮಾಡಿ ವಿಧಿನಿಷೇಧಗಳಿಗೆ ಒಳಪಡದಿರುವ ಜ್ಞಾನಿಗಳ ಹೃದಯದಲ್ಲಿ ನೀನು ಸ್ವಯಂಪ್ರಕಾಶನಾಗಿರುವೆ. ಇಂತಹ ನಿನಗೆ ನಮಸ್ಕಾರವು. ॥16॥
(ಶ್ಲೋಕ-17)
ಮೂಲಮ್
ಮಾದೃಕ್ಪ್ರಪನ್ನಪಶುಪಾಶವಿಮೋಕ್ಷಣಾಯ
ಮುಕ್ತಾಯ ಭೂರಿಕರುಣಾಯ ನಮೋಲಯಾಯ ।
ಸ್ವಾಂಶೇನ ಸರ್ವತನುಭೃನ್ಮನಸಿ ಪ್ರತೀತ-
ಪ್ರತ್ಯಗ್ದೃಶೇ ಭಗವತೇ ಬೃಹತೇ ನಮಸ್ತೇ ॥
ಅನುವಾದ
ದಯಾಳುವಾದ ಮನುಷ್ಯನು ಬಂಧನಕ್ಕೆ ಸಿಕ್ಕಿಹಾಕಿಕೊಂಡಿರುವ ಪಶುವನ್ನು ಬಿಡಿಸುವಂತೆ ಸಂಸಾರಬಂಧನದಿಂದ ಬಂಧಿಸಲ್ಪಟ್ಟಿರುವ ಶರಣಾಗತನಾಗಿರುವ ನನ್ನನ್ನೂ ವಿಮುಕ್ತಿಗೊಳಿಸುವೆ. ನೀನು ನಿತ್ಯಮುಕ್ತನಾಗಿದ್ದು, ಕರುಣಾಮಯನಾಗಿರುವೆ. ಭಕ್ತರಿಗೆ ಕಲ್ಯಾಣವನ್ನುಂಟುಮಾಡಲು ನಿನಗೆ ಎಂದಿಗೂ ಆಲಸ್ಯ ವೆಂಬುದೇ ಇಲ್ಲ. ಅಂತಹ ಪರಮಕಾರುಣಿಕನಾದ ನಿನಗೆ ನಮಸ್ಕರಿಸುತ್ತೇನೆ. ಸಮಸ್ತ ಪ್ರಾಣಿಗಳ ಹೃದಯದಲ್ಲಿಯೂ ನಿನ್ನ ಅಂಶದ ಮೂಲಕ ಅಂತರಾತ್ಮನಾಗಿ ನೀನು ಸರ್ವೈಶ್ವರ್ಯ ಪೂರ್ಣನೂ, ಅಪರಿಚ್ಛಿನ್ನನೂ ಆಗಿರುವೆ. ಇಂತಹ ನಿನಗೆ ನಮಸ್ಕಾರ ಮಾಡುತ್ತೇನೆ. ॥17॥
(ಶ್ಲೋಕ-18)
ಮೂಲಮ್
ಆತ್ಮಾತ್ಮಜಾಪ್ತಗೃಹವಿತ್ತಜನೇಷು ಸಕ್ತೈ-
ರ್ದುಷ್ಪ್ರಾಪಣಾಯ ಗುಣಸಂಗವಿವರ್ಜಿತಾಯ ।
ಮುಕ್ತಾತ್ಮಭಿಃ ಸ್ವಹೃದಯೇ ಪರಿಭಾವಿತಾಯ
ಜ್ಞಾನಾತ್ಮನೇ ಭಗವತೇ ನಮ ಈಶ್ವರಾಯ ॥
ಅನುವಾದ
ಶರೀರ, ಪುತ್ರರು, ಆಪ್ತರು, ಮನೆ, ಸಂಪತ್ತು, ಸ್ವಜನರು ಹೀಗೆ ಇವರಲ್ಲಿ ಆಸಕ್ತರಾದ ಜನರಿಗೆ ನಿನ್ನ ಪ್ರಾಪ್ತಿಯು ಅತ್ಯಂತ ಕಠಿಣವಾಗಿದೆ. ಏಕೆಂದರೆ ನೀನು ಸ್ವತಃ ಗುಣಗಳ ಆಸಕ್ತಿ ಯಿಂದ ರಹಿತನಾಗಿರುವೆ. ಜೀವನ್ಮುಕ್ತರಾದವರು ತಮ್ಮ ಹೃದಯದಲ್ಲಿ ನಿರಂತರವಾಗಿ ನಿನ್ನನ್ನು ಚಿಂತಿಸುತ್ತಾ ಇರುತ್ತಾರೆ. ಆ ಸರ್ವೈಶ್ವರ್ಯಸಂಪನ್ನ ಜ್ಞಾನಸ್ವರೂಪನಾದ ಭಗವಂತನಿಗೆ ನಾನು ನಮಸ್ಕರಿಸುತ್ತೇನೆ. ॥18॥
(ಶ್ಲೋಕ-19)
ಮೂಲಮ್
ಯಂ ಧರ್ಮಕಾಮಾರ್ಥವಿಮುಕ್ತಿಕಾಮಾ
ಭಜಂತ ಇಷ್ಟಾಂ ಗತಿಮಾಪ್ನುವಂತಿ ।
ಕಿಂ ತ್ವಾಶಿಷೋ ರಾತ್ಯಪಿ ದೇಹಮವ್ಯಯಂ
ಕರೋತು ಮೇದಭ್ರದಯೋ ವಿಮೋಕ್ಷಣಮ್ ॥
ಅನುವಾದ
ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಈ ಪುರುಷಾರ್ಥಗಳ ಕಾಮನೆಯಿಂದ ಮನುಷ್ಯರು ಭಗವಂತನನ್ನು ಭಜಿಸಿ ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಳ್ಳುತ್ತಾರೆ. ಇಷ್ಟು ಮಾತ್ರವಲ್ಲ ಪ್ರಸನ್ನನಾದ ಶ್ರೀಭಗವಂತನು ಭಕ್ತರಿಗೆ ಇತರ ಅನೇಕ ವಿಧ ವಾದ ಸುಖಗಳನ್ನೂ, ನಾಶ ರಹಿತವಾದ ದಿವ್ಯಶರೀರವನ್ನೂ ದಯಪಾಲಿಸುತ್ತಾನೆ. ಅಂತಹ ಪರಮ ದಯಾಳುವಾದ ಪರಮಾತ್ಮನು ಈ ಮೊಸಳೆಯಿಂದ ನನ್ನನ್ನು ಬಿಡುಗಡೆ ಮಾಡಲಿ. ॥19॥
(ಶ್ಲೋಕ-20)
ಮೂಲಮ್
ಏಕಾಂತಿನೋ ಯಸ್ಯ ನ ಕಂಚನಾರ್ಥಂ
ವಾಂಛಂತಿ ಯೇ ವೈ ಭಗವತ್ಪ್ರಪನ್ನಾಃ ।
ಅತ್ಯದ್ಭುತಂ ತಚ್ಚರಿತಂ ಸುಮಂಗಲಂ
ಗಾಯಂತ ಆನಂದ ಸಮುದ್ರಮಗ್ನಾಃ ॥
ಅನುವಾದ
ಭಗವಂತನಿಗೆ ಶರಣಾಗತರಾದ ಅವನ ಅನನ್ಯ ಭಕ್ತರು ಯಾವುದೇ ಪ್ರಯೋಜನವನ್ನು ಅಪೇಕ್ಷಿಸುವುದಿಲ್ಲ. ಸರ್ವಾಪೇಕ್ಷಿತವಾದ ಮೋಕ್ಷವನ್ನೂ ಬಯಸುವುದಿಲ್ಲ. ಮಂಗಳಕರವಾದ ಅತ್ಯದ್ಭುತವಾದ ಪರಮಾತ್ಮನ ಚರಿತ್ರೆಗಳನ್ನು ಹಾಡುತ್ತಾ, ನಲಿಯುತ್ತಾ ಆನಂದ ಸಮುದ್ರದಲ್ಲಿ ಮುಳುಗಿರುತ್ತಾರೆ. ॥20॥
(ಶ್ಲೋಕ-21)
ಮೂಲಮ್
ತಮಕ್ಷರಂ ಬ್ರಹ್ಮ ಪರಂ ಪರೇಶ-
ಮವ್ಯಕ್ತಮಾಧ್ಯಾತ್ಮಿಕಯೋಗಗಮ್ಯಮ್ ।
ಅತೀಂದ್ರಿಯಂ ಸೂಕ್ಷ್ಮಮಿವಾತಿದೂರ-
ಮನಂತಮಾದ್ಯಂ ಪರಿಪೂರ್ಣಮೀಡೇ ॥
ಅನುವಾದ
ಅವಿನಾಶಿಯೂ, ಸರ್ವ ಶಕ್ತಿ ಸಂಪನ್ನನೂ, ಅವ್ಯ ಕ್ತನೂ, ಇಂದ್ರಿಯಾತೀತನೂ, ಅತ್ಯಂತ ಸೂಕ್ಷ್ಮನೂ ಆದವನು ಅತ್ಯಂತ ಹತ್ತಿರವಿದ್ದರೂ ಬಹಳ ದೂರನೆಂದು ಭಾಸವಾಗುವವನೂ, ಆಧ್ಯಾತ್ಮಿಕಯೋಗ ಅರ್ಥಾತ್ ಜ್ಞಾನಯೋಗ-ಭಕ್ತಿಯೋಗದಿಂದ ದೊರೆಯು ವಂತಹವನೂ ಆದ ಆ ಆದಿಪುರುಷ ಅನಂತ, ಪರಿಪೂರ್ಣ ಪರಬ್ರಹ್ಮ ಪರಮಾತ್ಮನನ್ನು ನಾನು ಸ್ತುತಿಸುತ್ತೇನೆ. ॥21॥
(ಶ್ಲೋಕ-22)
ಮೂಲಮ್
ಯಸ್ಯ ಬ್ರಹ್ಮಾದಯೋ ದೇವಾ ವೇದಾ ಲೋಕಾಶ್ಚರಾಚರಾಃ ।
ನಾಮರೂಪವಿಭೇದೇನ ಲ್ಗ್ವ್ಯಾ ಚ ಕಲಯಾ ಕೃತಾಃ ॥
(ಶ್ಲೋಕ-23)
ಮೂಲಮ್
ಯಥಾರ್ಚಿಷೋಗ್ನೇಃ ಸವಿತುರ್ಗಭಸ್ತಯೋ
ನಿರ್ಯಾಂತಿ ಸಂಯಾಂತ್ಯಸಕೃತ್ಸ್ವರೋಚಿಷಃ ।
ತಥಾ ಯತೋಯಂ ಗುಣಸಂಪ್ರವಾಹೋ
ಬುದ್ಧಿರ್ಮನಃ ಖಾನಿ ಶರೀರಸರ್ಗಾಃ ॥
(ಶ್ಲೋಕ-24)
ಮೂಲಮ್
ಸ ವೈ ನ ದೇವಾಸುರಮರ್ತ್ಯತಿರ್ಯಙ್
ನ ಸೀ ನ ಷಂಢೋ ನ ಪುಮಾನ್ನ ಜಂತುಃ ।
ನಾಯಂ ಗುಣಃ ಕರ್ಮ ನ ಸನ್ನ ಚಾಸನ್
ನಿಷೇಧಶೇಷೋ ಜಯತಾದಶೇಷಃ ॥
ಅನುವಾದ
ಯಾರ ಅತ್ಯಲ್ಪವಾದ ಅಂಶದಿಂದ ನಾನಾರೂಪಗಳ ಮತ್ತು ನಾಮಗಳ ಭೇದದಿಂದ ಕೂಡಿದ ಬ್ರಹ್ಮಾದಿ ದೇವತೆಗಳೂ, ವೇದಗಳೂ, ಚರಾಚರಗಳೂ, ಲೋಕಗಳೂ ರಚಿತವಾದುವೋ, ಹೇಗೆ ಧಗ-ಧಗನೆ ಉರಿಯುವ ಅಗ್ನಿಯಿಂದ ಜ್ವಾಲೆಗಳು ಮತ್ತು ಸೂರ್ಯನಿಂದ ಅವನ ಕಿರಣಗಳು ಹಲವು ಬಾರಿ ಹೊರಹೊಮ್ಮಿ, ಲೀನವಾಗುವುವೋ, ಹಾಗೆಯೇ ಯಾವ ಸ್ವಯಂಪ್ರಕಾಶ ಪರಮಾತ್ಮನಿಂದ ಗುಣಗಳ ಪ್ರವಾಹರೂಪವಾದ ಬುದ್ಧಿ, ಮನಸ್ಸು, ಇಂದ್ರಿಯಗಳು ಮತ್ತು ಶರೀರಗಳು ಮತ್ತೆ-ಮತ್ತೆ ಪ್ರಕಟವಾಗಿ, ಲೀನವಾಗಿ ಹೋಗುತ್ತವೆ. ಆ ಭಗವಂತನು ದೇವತೆಯಲ್ಲ, ರಾಕ್ಷಸನಲ್ಲ, ಮನುಷ್ಯನಲ್ಲ, ಪಶು-ಪಕ್ಷಿಯೂ ಆಲ್ಲ. ಅವನು ಸ್ತ್ರೀಯಲ್ಲ, ಪುರುಷನಲ್ಲ, ನಪುಂಸಕನಲ್ಲ. ಅವನು ಯಾವುದೇ ಸಾಧಾರಣ ಅಥವಾ ಅಸಾಧಾರಣ ಪ್ರಾಣಿಯೂ ಅಲ್ಲ. ಅವನು ಗುಣವಲ್ಲ, ಕರ್ಮವಲ್ಲ, ಕಾರ್ಯವೂ ಅಲ್ಲ, ಕಾರಣವೂ ಅಲ್ಲ. ಎಲ್ಲವೂ ನಿಷೇಧವಾದ ಬಳಿಕ ಉಳಿಯುವುದೇ ಅವನ ಸ್ವರೂಪವಾಗಿದೆ ಹಾಗೂ ಅವನೇ ಎಲ್ಲವೂ ಆಗಿದ್ದಾನೆ. ಆ ಪರಮಾತ್ಮನೇ ನನ್ನ ಉದ್ಧಾರಕ್ಕಾಗಿ ಪ್ರಕಟನಾಗಲೀ. ॥22-24॥
(ಶ್ಲೋಕ-25)
ಮೂಲಮ್
ಜಿಜೀವಿಷೇ ನಾಹಮಿಹಾಮುಯಾ ಕಿ-
ಮಂತರ್ಬಹಿಷ್ಚಾವೃತಯೇಭಯೋನ್ಯಾ ।
ಇಚ್ಛಾಮಿ ಕಾಲೇನ ನ ಯಸ್ಯ ವಿಪ್ಲವ-
ಸ್ತಸ್ಯಾತ್ಮ ಲೋಕಾವರಣಸ್ಯ ಮೋಕ್ಷಮ್ ॥
ಅನುವಾದ
ನಾನು ಬದುಕಿರಲು ಬಯಸುವುದಿಲ್ಲ. ಈ ಆನೆಯ ಶರೀರವು ಒಳಗೆ-ಹೊರಗೆ ಎಲ್ಲ ಕಡೆಯಿಂದ ಅಜ್ಞಾನ ರೂಪೀ ಆವರಣದಿಂದ ಮುಚ್ಚಿ ಹೋಗಿದೆ. ಇದನ್ನು ಇರಿಸಿಕೊಂಡು ಏನು ಮಾಡಲಿ? ನಾನಾದರೋ ಆತ್ಮಪ್ರಕಾಶ ವನ್ನು ಮುಚ್ಚಿರುವ ಆ ಅಜ್ಞಾನ ರೂಪವಾದ ಆವರಣದಿಂದ ಬಿಡುಗಡೆಯನ್ನು ಬಯಸುತ್ತಿದ್ದೇನೆ. ಅದು ಕಾಲಕ್ರಮ ದಿಂದ ತಾನಾಗಿ ಬಿಟ್ಟುಹೋಗದು. ಅದು ಕೇವಲ ಭಗವತ್ಕೃಪೆಯಿಂದ ಅಥವಾ ತತ್ತ್ವಜ್ಞಾನದಿಂದಲೇ ನಾಶವಾಗುತ್ತದೆ. ॥25॥
(ಶ್ಲೋಕ-26)
ಮೂಲಮ್
ಸೋಹಂ ವಿಶ್ವಸೃಜಂ ವಿಶ್ವಮವಿಶ್ವಂ ವಿಶ್ವವೇದಸಮ್ ।
ವಿಶ್ವಾತ್ಮಾನಮಜಂ ಬ್ರಹ್ಮ ಪ್ರಣತೋಸ್ಮಿ ಪರಂ ಪದಮ್ ॥
ಅನುವಾದ
ಅದಕ್ಕಾಗಿ ನಾನು ಆ ಪರಬ್ರಹ್ಮ ಪರಮಾತ್ಮನಲ್ಲಿ ಶರಣಾಗಿದ್ದೇನೆ. ಅವನು ವಿಶ್ವರಹಿತನಾಗಿದ್ದರೂ ವಿಶ್ವವನ್ನೂ ರಚಿಸುವವನು, ವಿಶ್ವರೂಪನೂ ಆಗಿದ್ದಾನೆ. ಜೊತೆಗೆ ಅವನು ವಿಶ್ವದ ಅಂತರಾತ್ಮನ ರೂಪದಲ್ಲಿ ವಿಶ್ವರೂಪೀ ಸಾಮಗ್ರಿಗಳಿಂದ ಕ್ರೀಡಿಸುತ್ತಲೂ ಇರುವನು. ಅಂತಹ ಜನ್ಮರಹಿತ, ಪರಮಪದ ಸ್ವರೂಪನಾದ ಪರಬ್ರಹ್ಮನಿಗೆ ನಾನು ನಮಸ್ಕರಿಸುತ್ತೇನೆ. ॥26॥
(ಶ್ಲೋಕ-27)
ಮೂಲಮ್
ಯೋಗರಂಧಿತಕರ್ಮಾಣೋ
ಹೃದಿ ಯೋಗವಿಭಾವಿತೇ ।
ಯೋಗಿನೋ ಯಂ ಪ್ರಪಶ್ಯಂತಿ
ಯೋಗೇಶಂ ತಂ ನತೋಸ್ಮ್ಯಹಮ್ ॥
ಅನುವಾದ
ಯೋಗಿಗಳು ಯೋಗದಿಂದ ಕರ್ಮಗಳು, ಕರ್ಮವಾಸನೆ ಮತ್ತು ಕರ್ಮ ಫಲಗಳನ್ನು ಭಸ್ಮಮಾಡಿ ತಮ್ಮ ಯೋಗಶುದ್ಧ ಹೃದಯದಲ್ಲಿ ಯೋಗೇಶ್ವರ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವರು. ಅಂತಹ ಸ್ವಾಮಿಯನ್ನು ನಾನು ನಮಸ್ಕರಿಸುತ್ತೇನೆ. ॥27॥
(ಶ್ಲೋಕ-28)
ಮೂಲಮ್
ನಮೋ ನಮಸ್ತುಭ್ಯಮಸಹ್ಯವೇಗ-
ಶಕ್ತಿತ್ರಯಾಯಾಖಿಲಧೀಗುಣಾಯ ।
ಪ್ರಪನ್ನಪಾಲಾಯ ದುರಂತಶಕ್ತಯೇ
ಕದಿಂದ್ರಿಯಾಣಾಮನವಾಪ್ಯವರ್ತ್ಮನೇ ॥
ಅನುವಾದ
ಪ್ರಭುವೇ! ನಿನ್ನ ಮೂರು ಶಕ್ತಿಗಳಾದ ಸತ್ತ್ವ, ರಜ, ತಮಗಳ ರಾಗಾದಿ ವೇಗಗಳು ಅಸಹ್ಯವಾಗಿವೆ. ಸಮಸ್ತ ಇಂದ್ರಿಯಗಳು ಮತ್ತು ಮನಸ್ಸಿನ ವಿಷಯಗಳ ರೂಪದಲ್ಲಿಯೂ ನೀನೇ ಕಂಡು ಬರುತ್ತೀಯೆ. ಅದಕ್ಕಾಗಿ ಇಂದ್ರಿಯಗಳು ವಶದಲ್ಲಿ ಇರದೇ ಇರುವವರಾದರೋ ನಿನ್ನ ಪ್ರಾಪ್ತಿಯ ಮಾರ್ಗವನ್ನೂ ತಿಳಿಯಲಾರರು. ನಿನ್ನ ಶಕ್ತಿಯು ಅನಂತವಾಗಿದೆ. ನೀನು ಶರಣಾಗತ ವತ್ಸಲನಾಗಿರುವೆ. ನಿನಗೆ ನಾನು ಮತ್ತೆ-ಮತ್ತೆ ನಮಸ್ಕರಿಸುತ್ತೇನೆ. ॥28॥
(ಶ್ಲೋಕ-29)
ಮೂಲಮ್
ನಾಯಂ ವೇದ ಸ್ವಮಾತ್ಮಾನಂ
ಯಚ್ಛಕ್ತ್ಯಾಹಂಧಿಯಾಹತಮ್ ।
ತಂ ದುರತ್ಯಯಮಾಹಾತ್ಮ್ಯಂ
ಭಗವಂತಮಿತೋಸ್ಮ್ಯಹಮ್ ॥
ಅನುವಾದ
ನಿನ್ನ ಮಾಯೆಯ ಅಹಂಬುದ್ಧಿ ಯಿಂದ ಆತ್ಮನ ಸ್ವರೂಪವು ಮುಚ್ಚಿಹೋಗಿದೆ. ಇದರಿಂದ ಈ ಜೀವನು ತನ್ನ ಸ್ವರೂಪವನ್ನು ತಿಳಿಯಲಾರನು. ನಿನ್ನ ಮಹಿಮೆ ಅಪಾರವಾಗಿದೆ. ಅಂತಹ ಸರ್ವಶಕ್ತಿ ಸಂಪನ್ನನಿಗೆ ಹಾಗೂ ಮಾಧುರ್ಯನಿಧಿ ಭಗವಂತನಲ್ಲಿ ನಾನು ಶರಣಾಗಿದ್ದೇನೆ. ॥29॥
(ಶ್ಲೋಕ-30)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಗಜೇಂದ್ರಮುಪವರ್ಣಿತನಿರ್ವಿಶೇಷಂ
ಬ್ರಹ್ಮಾದಯೋ ವಿವಿಧಲಿಂಗಭಿದಾಭಿಮಾನಾಃ ।
ನೈತೇ ಯದೋಪಸಸೃಪುರ್ನಿಖಿಲಾತ್ಮಕತ್ವಾ-
ತ್ತತ್ರಾಖಿಲಾಮರಮಯೋ ಹರಿರಾವಿರಾಸೀತ್ ॥
ಅನುವಾದ
ಶ್ರೀಶುಕದೇವರು ಹೇಳುತ್ತಾರೆ — ಪರೀಕ್ಷಿತನೇ! ಗಜೇಂದ್ರನು ಯಾವುದೇ ಭೇದಭಾವವಿಲ್ಲದೆ ನಿರ್ವಿಶೇಷ ರೂಪದಿಂದ ಭಗವಂತನ ಸ್ತುತಿಯನ್ನು ಮಾಡಿದ್ದನು. ಅದಕ್ಕಾಗಿ ಭಿನ್ನ-ಭಿನ್ನ ನಾಮ-ರೂಪಗಳನ್ನು ತಮ್ಮ ಸ್ವರೂಪವೆಂದು ತಿಳಿದಿರುವ ಬ್ರಹ್ಮಾದಿದೇವತೆಗಳು ಅವನ ರಕ್ಷಣೆಗೆ ಬರಲಿಲ್ಲ. ಏಕೆಂದರೆ, ಅವರ ನಾಮಗಳನ್ನು ನಿರ್ದೇಶಿಸಿ ಅವರನ್ನು ಪ್ರಾರ್ಥಿಸಿರಲಿಲ್ಲ. ಆ ಸಮಯದಲ್ಲಿ ಸರ್ವಾತ್ಮನಾದ ಕಾರಣ ಸರ್ವದೇವಸ್ವರೂಪನಾದ ಸ್ವತಃ ಭಗವಾನ್ ಶ್ರೀಹರಿಯು ಪ್ರಕಟನಾದನು. ॥30॥
(ಶ್ಲೋಕ-31)
ಮೂಲಮ್
ತಂ ತದ್ವದಾರ್ತಮುಪಲಭ್ಯ ಜಗನ್ನಿವಾಸಃ
ಸ್ತೋತ್ರಂ ನಿಶಮ್ಯ ದಿವಿಜೈಃ ಸಹ ಸಂಸ್ತುವದ್ಭಿಃ ।
ಛಂದೋಮಯೇನ ಗರುಡೇನ ಸಮುಹ್ಯಮಾನ-
ಶ್ಚಕ್ರಾಯುಧೋಭ್ಯಗಮದಾಶು ಯತೋ ಗಜೇಂದ್ರಃ ॥
ಅನುವಾದ
ವಿಶ್ವದ ಏಕಮಾತ್ರ ಆಧಾರನಾದ ಭಗವಂತನು ಗಜೇಂದ್ರನು ಅತ್ಯಂತ ಪೀಡಿತನಾಗಿದ್ದಾನೆಂದು ನೋಡಿದನು. ಆದ್ದರಿಂದ ಅವನ ಸ್ತುತಿ ಯನ್ನು ಕೇಳಿ ಚಕ್ರಧಾರಿಯಾದ ಶ್ರೀಹರಿಯು ವೇದಮಯ, ಗರುಡನಮೇಲೆ ಏರಿ, ಅತೀವ ಶೀಘ್ರವಾಗಿ ಗಜೇಂದ್ರನು ಭಾರೀ ಸಂಕಟದಲ್ಲಿ ಬಿದ್ದಲ್ಲಿಗೆ ಆಗಮಿಸಿದನು. ಅವನೊಡನೆ ಭಗವಂತನನ್ನು ಸ್ತುತಿಮಾಡುತ್ತಾ ಎಲ್ಲ ದೇವತೆಗಳೂ ಬಂದರು. ॥31॥
(ಶ್ಲೋಕ-32)
ಮೂಲಮ್
ಸೋಂತಃಸರಸ್ಯುರುಬಲೇನ ಗೃಹೀತ ಅರ್ತೋ
ದೃಷ್ಟ್ವಾ ಗರುತ್ಮತಿ ಹರಿಂ ಖ ಉಪಾತ್ತಚಕ್ರಮ್ ।
ಉತ್ಕ್ಷಿಪ್ಯ ಸಾಂಬುಜಕರಂ ಗಿರಮಾಹ ಕೃಚ್ಛ್ರಾ-
ನ್ನಾರಾಯಣಾಖಿಲಗುರೋ ಭಗವನ್ನಮಸ್ತೇ ॥
ಅನುವಾದ
ಸರೋವರದೊಳಗೆ ಬಲಿಷ್ಠವಾದ ಮೊಸಳೆಯು ಗಜೇಂದ್ರನನ್ನು ಹಿಡಿದುಕೊಂಡಿತ್ತು. ಗಜೇಂದ್ರನು ಅತ್ಯಂತ ವ್ಯಾಕುಲನಾಗಿದ್ದನು. ಆಕಾಶದಲ್ಲಿ ಗರುಡನ ಹೆಗಲೇರಿ, ಕೈಯಲ್ಲಿ ಸುದರ್ಶನ ಚಕ್ರವನ್ನು ಧರಿಸಿರುವ ಶ್ರೀಹರಿಯು ಬರುತ್ತಿರುವುದನ್ನು ಕಂಡು ಗಜೇಂದ್ರನು ತನ್ನ ಸೊಂಡಿಲಿನಿಂದ ಒಂದು ಸುಂದರ ಕಮಲ ಪುಷ್ಪವನ್ನು ಮೇಲೆತ್ತಿಕೊಂಡು ಅತೀವ ಕಷ್ಟ ದಿಂದ ‘ನಾರಾಯಣಾ! ಜಗದ್ಗುರುವೇ! ಭಗವಂತಾ! ನಿನಗೆ ನಮಸ್ಕಾರವು’ ಎಂದು ಸ್ತುತಿಸಿದನು. ॥32॥
(ಶ್ಲೋಕ-33)
ಮೂಲಮ್
ತಂ ವೀಕ್ಷ್ಯ ಪೀಡಿತಮಜಃ ಸಹಸಾವತೀರ್ಯ
ಸಗ್ರಾಹಮಾಶು ಸರಸಃ ಕೃಪಯೋಜ್ಜಹಾರ ।
ಗ್ರಾಹಾದ್ವಿಪಾಟಿತಮುಖಾದರಿಣಾ ಗಜೇಂದ್ರಂ
ಸಂಪಶ್ಯತಾಂ ಹರಿರಮೂಮುಚದುಸ್ರಿಯಾಣಾಮ್ ॥
ಅನುವಾದ
ಗಜೇಂದ್ರನು ಮೊಸಳೆಯಿಂದ ಪೀಡಿಸಲ್ಪಡುತ್ತಿರುವುದನ್ನು ನೋಡಿದೊಡನೆಯೇ ದಯಾಮಯನಾದ ನಾರಾಯಣನು ಗರುಡನಿಂದ ಥಟ್ಟನೆ ಕೆಳಗಿಳಿದು ಗಜೇಂದ್ರನೊಡನೆ ಅವನ ಕಾಲನ್ನು ಹಿಡಿದಿದ್ದ ಮೊಸಳೆಯನ್ನು ಅತಿಶೀಘ್ರವಾಗಿ ಸರೋವರದಿಂದ ಹೊರಗೆ ಎಳೆದುಕೊಂಡನು. ಮರುಕ್ಷಣದಲ್ಲೇ ಎಲ್ಲ ದೇವತೆಗಳು ನೋಡುತ್ತಿದ್ದಂತೆಯೇ ಶ್ರೀಹರಿಯು ಚಕ್ರಾಯುಧದಿಂದ ಮೊಸಳೆಯ ಬಾಯನ್ನು ಸೀಳಿಹಾಕಿ ಗಜೇಂದ್ರನನ್ನು ಬಿಡಿಸಿದನು. ॥33॥
ಅನುವಾದ (ಸಮಾಪ್ತಿಃ)
ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಗಜೇಂದ್ರಮೋಕ್ಷಣೇತೃತೀಯೋಽಧ್ಯಾಯಃ ॥3॥