[ಎರಡನೆಯ ಅಧ್ಯಾಯ]
ಭಾಗಸೂಚನಾ
ಗಜೇಂದ್ರನು ಮೊಸಳೆಯ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳುವುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಆಸೀದ್ಗಿರಿವರೋ ರಾಜನ್ ಸಿಕೂಟ ಇತಿ ವಿಶ್ರುತಃ ।
ಕ್ಷೀರೋದೇನಾವೃತಃ ಶ್ರೀಮಾನ್ಯೋಜನಾಯುತಮುಚ್ಛ್ರಿತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿದ್ರಾಜನೇ! ಕ್ಷೀರಸಾಗರದಿಂದ ಆವೃತವಾದ ತ್ರಿಕೂಟವೆಂಬ ಪ್ರಸಿದ್ಧವಾದ ಸುಂದರವಾದ ಹಾಗೂ ಶ್ರೇಷ್ಠವಾದ ಒಂದು ಪರ್ವತವಿತ್ತು. ಅದು ಹತ್ತುಸಾವಿರ ಯೋಜನ ಎತ್ತರವಾಗಿತ್ತು. ॥1॥
(ಶ್ಲೋಕ-2)
ಮೂಲಮ್
ತಾವತಾ ವಿಸ್ತೃತಃ ಪರ್ಯಕಿಭಿಃ ಶೃಂಗೈಃ ಪಯೋನಿಧಿಮ್ ।
ದಿಶಃ ಖಂ ರೋಚಯನ್ನಾಸ್ತೇ ರೌಪ್ಯಾಯಸಹಿರಣ್ಮಯೈಃ ॥
ಅನುವಾದ
ಅದರ ಉದ್ದ-ಅಗಲವೂ ಸುತ್ತಲೂ ಅಷ್ಟೇ ಇತ್ತು. ಅದರ ಬೆಳ್ಳಿ, ಕಬ್ಬಿಣ ಮತ್ತು ಚಿನ್ನದ ಮೂರು ಶಿಖರಗಳ ಕಾಂತಿಯಿಂದ ಸಮುದ್ರ, ದಿಕ್ಕುಗಳು ಮತ್ತು ಆಕಾಶವು ಝಗ-ಝಗಿಸುತ್ತಿದ್ದವು. ॥2॥
(ಶ್ಲೋಕ-3)
ಮೂಲಮ್
ಅನ್ಯೈಶ್ಚ ಕಕುಭಃ ಸರ್ವಾ
ರತ್ನಧಾತುವಿಚಿತ್ರಿತೈಃ ।
ನಾನಾದ್ರುಮಲತಾಗುಲ್ಮೈರ್ನಿರ್ಘೋಷೈ-
ರ್ನಿರ್ಝರಾಂಭಸಾಮ್ ॥
ಅನುವಾದ
ಇವಲ್ಲದೆ ಇನ್ನೂ ಅನೇಕ ಶಿಖರಗಳು ರತ್ನಗಳ ಮತ್ತು ಧಾತುಗಳ ಬಣ್ಣ-ಬಣ್ಣದ ಪ್ರಭೆಯನ್ನು ಪಸರಿಸುತ್ತಾ ಎಲ್ಲ ದಿಕ್ಕುಗಳನ್ನು ಬೆಳಗುತ್ತಿದ್ದವು. ಅವುಗಳಲ್ಲಿ ವಿವಿಧ ಜಾತಿಯ ಲತಾ-ವೃಕ್ಷಗಳು ಮತ್ತು ಪೊದೆಗಳಿದ್ದವು. ಜಳ-ಜಳನೆ ಹರಿಯುತ್ತಿದ್ದ ನದಿಗಳು, ಜಲಪಾತದ ಗಂಭೀರಧ್ವನಿಯು ಎಲ್ಲೆಡೆ ಕೇಳಿಬರುತ್ತಿದ್ದವು. ॥3॥
(ಶ್ಲೋಕ-4)
ಮೂಲಮ್
ಸ ಚಾವನಿಜ್ಯಮಾನಾಂಘ್ರಿಃ ಸಮಂತ್ತಾತ್ಪಯಊರ್ಮಿಭಿಃ ।
ಕರೋತಿ ಶ್ಯಾಮಲಾಂ ಭೂಮಿಂ ಹರಿನ್ಮರಕತಾಶ್ಮಭಿಃ ॥
ಅನುವಾದ
ಸುತ್ತಲಿಂದಲೂ ಕ್ಷೀರ ಸಾಗರದ ಅಲೆಗಳು ಬಂದು ಅಪ್ಪಳಿಸುವಾಗ ಅವು ಪರ್ವತ ರಾಜನ ಕಾಲುಗಳನ್ನು ತೊಳೆಯುತ್ತಿವೆಯೋ ಎಂದು ಅನಿಸುತ್ತಿತ್ತು. ಆ ಪರ್ವತದ ಇಂದ್ರನೀಲಮಣಿಗಳಿಂದಲೂ, ಪಚ್ಚೆಯ ಕಲ್ಲುಗಳಿಂದ ಎಲ್ಲೆಡೆ ಹಸಿರಾದ ಗರಿಕೆಯೇ ತುಂಬಿರುವಂತೆ ಶ್ಯಾಮಲ ಭೂಮಿಯು ಕಂಗೊಳಿಸುತ್ತಿತ್ತು. ॥4॥
(ಶ್ಲೋಕ-5)
ಮೂಲಮ್
ಸಿದ್ಧಚಾರಣಗಂಧರ್ವವಿದ್ಯಾಧರಮಹೋರಗೈಃ ।
ಕಿನ್ನರೈರಪ್ಸರೋಭಿಶ್ಚ ಕ್ರೀಡದ್ಭಿರ್ಜುಷ್ಟಕಂದರಃ ॥
ಅನುವಾದ
ಅದರ ಗುಹೆಗಳಲ್ಲಿ ಸಿದ್ಧರೂ, ಚಾರಣರೂ, ಗಂಧರ್ವರೂ, ವಿದ್ಯಾ ಧರರೂ, ನಾಗರೂ, ಕಿನ್ನರರೂ, ಅಪ್ಸರೆಯರು ಮುಂತಾದವರೆಲ್ಲರೂ ವಿಹರಿಸಲು ಸಾಮಾನ್ಯವಾಗಿ ನೆರೆಯುತ್ತಿದ್ದರು. ॥5॥
(ಶ್ಲೋಕ-6)
ಮೂಲಮ್
ಯತ್ರ ಸಂಗೀತಸನ್ನಾದೈರ್ನದದ್ಗುಹಮಮರ್ಷಯಾ ।
ಅಭಿಗರ್ಜಂತಿ ಹರಯಃ ಶ್ಲಾಘಿನಃ ಪರಶಂಕಯಾ ॥
ಅನುವಾದ
ಅಲ್ಲಿನ ಸಂಗೀತ ಧ್ವನಿಯು ಗುಹೆಯೊಳಗೆ ಪ್ರತಿ ಧ್ವನಿಸುತ್ತಿದ್ದಾಗ ಅದನ್ನು ಕೇಳಿದ ಸಿಂಹಗಳು ಅದು ಬೇರೆ ಸಿಂಹದ ಗರ್ಜನೆಯೆಂದು ಭ್ರಮಿಸಿ ಅದನ್ನು ಸಹಿಸಲಾರದೆ ಪ್ರತಿಗರ್ಜನೆ ಮಾಡುತ್ತಿದ್ದವು. ॥6॥
(ಶ್ಲೋಕ-7)
ಮೂಲಮ್
ನಾನಾರಣ್ಯಪಶುವ್ರಾತಸಂಕುಲದ್ರೋಣ್ಯಲಂಕೃತಃ ।
ಚಿತ್ರದ್ರುಮಸುರೋದ್ಯಾನಕಲಕಂಠವಿಹಂಗಮಃ ॥
ಅನುವಾದ
ಆ ಪರ್ವತದ ತಪ್ಪಲು ಪ್ರದೇಶಗಳು ಬಗೆ-ಬಗೆಯ ಕಾಡು ಮೃಗಗಳ ಹಿಂಡುಗಳಿಂದ ಅಲಂಕೃತವಾಗಿತ್ತು. ಅನೇಕ ಪ್ರಕಾರದ ವೃಕ್ಷಗಳಿಂದ ತುಂಬಿದ ದೇವತೋದ್ಯಾನಗಳಲ್ಲಿ ಸುಂದರವಾದ ಪಕ್ಷಿಗಳು ಮಧುರವಾಗಿ ಧ್ವನಿಮಾಡುತ್ತಿದ್ದವು. ॥7॥
(ಶ್ಲೋಕ-8)
ಮೂಲಮ್
ಸರಿತ್ಸರೋಭಿರಚ್ಛೋದೈಃ ಪುಲಿನೈರ್ಮಣಿವಾಲುಕೈಃ ।
ದೇವಸೀಮಜ್ಜನಾಮೋದಸೌರಭಾಂಬ್ವನಿಲೈರ್ಯುತಃ ॥
ಅನುವಾದ
ಅದರಲ್ಲಿ ಅನೇಕ ನದಿಗಳೂ, ಸರೋವರಗಳೂ ನಿರ್ಮಲವಾದ ನೀರಿನಲ್ಲಿ ತುಂಬಿ ಹರಿಯುತ್ತಿದ್ದವು. ಅವುಗಳ ದಡಗಳಲ್ಲಿ ಮಣಿಮಯ ಮಳಲು ಹೊಳೆಯುತ್ತಿತ್ತು. ದೇವಾಂಗನೆಯರು ನದಿ-ಸರೋವರಗಳಲ್ಲಿ ಸ್ನಾನಮಾಡುತ್ತಿದ್ದುದರಿಂದ ಅವುಗಳ ನೀರು ಅತ್ಯಂತ ಸುಗಂಧಿತವಾಗಿತ್ತು. ಅದರ ಸುವಾಸನೆಯನ್ನು ಹೊತ್ತ ತಂಗಾಳಿಯು ಅಲ್ಲಿ ಬೀಸುತ್ತಿತ್ತು. ॥8॥
(ಶ್ಲೋಕ-9)
ಮೂಲಮ್
ತಸ್ಯ ದ್ರೋಣ್ಯಾಂ ಭಗವತೋ ವರುಣಸ್ಯ ಮಹಾತ್ಮನಃ ।
ಉದ್ಯಾನಮೃತುಮನ್ನಾಮ ಆಕ್ರೀಡಂ ಸುರಯೋಷಿತಾಮ್ ॥
ಅನುವಾದ
ಪರ್ವತರಾಜ ತ್ರಿಕೂಟದ ತಪ್ಪಲಿನಲ್ಲಿ ಭಗವತ್ಪ್ರೇಮಿ ಮಹಾತ್ಮಾ ಭಗವಾನ್ ವರುಣನ ಒಂದು ಉದ್ಯಾನವನ ವಿತ್ತು. ಋತುಮಾನ್ ಎಂದು ಪ್ರಸಿದ್ಧವಾದ ಆ ಉದ್ಯಾನವನದಲ್ಲಿ ದೇವಾಂಗನೆಯರು ಕ್ರೀಡಿಸುತ್ತಿದ್ದರು. ॥9॥
(ಶ್ಲೋಕ-10)
ಮೂಲಮ್
ಸರ್ವತೋಲಂಕೃತಂ ದಿವ್ಯೈರ್ನಿತ್ಯಂ ಪುಷ್ಪಲದ್ರುಮೈಃ ।
ಮಂದಾರೈಃ ಪಾರಿಜಾತೈಶ್ಚ ಪಾಟಲಾಶೋಕಚಂಪಕೈಃ ॥
(ಶ್ಲೋಕ-11)
ಮೂಲಮ್
ಚೂತೈಃ ಪ್ರಿಯಾಲೈಃ ಪನಸೈರಾಮ್ರೈರಾಮ್ರಾತಕೈರಪಿ ।
ಕ್ರಮುಕೈರ್ನಾಲಿಕೇರೈಶ್ಚ ಖರ್ಜೂರೈರ್ಬೀಜಪೂರಕೈಃ ॥
(ಶ್ಲೋಕ-12)
ಮೂಲಮ್
ಮಧೂಕೈಃ ಸಾಲತಾಲೈಶ್ಚ ತಮಾಲೈರಸನಾರ್ಜುನೈಃ ।
ಅರಿಷ್ಟೋದುಂಬರಪ್ಲಕ್ಷೈರ್ವಟೈಃ ಕಿಂಶುಕಚಂದನೈಃ ॥
(ಶ್ಲೋಕ-13)
ಮೂಲಮ್
ಪಿಚುಮಂದೈಃ ಕೋವಿದಾರೈಃ ಸರಲೈಃ ಸುರದಾರುಭಿಃ ।
ದ್ರಾಕ್ಷೇಕ್ಷುರಂಭಾಜಂಭೂಭಿರ್ಬದರ್ಯಕ್ಷಾಭಯಾಮಲೈಃ ॥
(ಶ್ಲೋಕ-14)
ಮೂಲಮ್
ಬಿಲ್ವೈಃ ಕಪಿತ್ಥೈರ್ಜಮ್ಬೀರೈರ್ವೃತೋ ಭಲ್ಲಾತಕಾದಿಭಿಃ ।
ತಸ್ಮಿನ್ಸರಃ ಸುವಿಪುಲಂ ಲಸತ್ಕಾಂಚನಪಂಕಜಮ್ ॥
ಅನುವಾದ
ಅದರ ಎಲ್ಲ ಕಡೆಗಳಲ್ಲಿಯೂ ಸದಾ ಹೂವು-ಹಣ್ಣುಗಳಿಂದ ತುಂಬಿ ಕಳಕಳಿಸುತ್ತಿದ್ದ ದಿವ್ಯ ವೃಕ್ಷಗಳು ಶೋಭಿಸುತ್ತಿದ್ದವು. ಮಂದಾರ, ಪಾರಿಜಾತ, ಪಾಟಲ, ಅಶೋಕ, ಸಂಪಿಗೆ, ಬಗೆ-ಬಗೆಯ ಹೂವುಗಳು, ಅಮಟೆ, ಮೊರಟೆ, ಮಾವು, ಹಲಸು, ಅಡಿಕೆ, ತೆಂಗು, ಖರ್ಜೂರ, ಮಾದಳ, ಹಿಪ್ಪೆ, ಸಾಲ, ತಾಳೆ, ಹೊಂಗೆ, ಹೊನ್ನೇಮರ, ಕೆಂಪುಮತ್ತಿಮರ, ಅತ್ತಿಮರ, ಜುಲ್ಲಿಮರ, ಆಲದಮರ, ಮುಳ್ಳುಮುತ್ತುಗ, ಶ್ರೀಗಂಧದ ಮರ, ಬೇವಿನಮರ, ಕೆಂಗಾಂಚಾಲ, ಸರಳ, ದೇವದಾರು, ದ್ರಾಕ್ಷಿ, ಕಬ್ಬು, ಬಾಳೆ, ನೇರಳೆ, ಎಲಚೀಮರ, ತಾಳೆಯಮರ, ರುದ್ರಾಕ್ಷಿಮರ, ಅಳಲೇಮರ, ನೆಲ್ಲಿ, ಬಿಲ್ವಪತ್ರೆ, ಬೇಲ, ನಿಂಬೆ, ಗೇರು ಮುಂತಾದ ಮರಗಳು ಸುತ್ತಲೂ ಕಳಕಳಿಸುತ್ತಿದ್ದವು. ಆ ಉದ್ಯಾನವನದಲ್ಲಿ ಒಂದು ಸುಂದರವಾದ ಮತ್ತು ವಿಸ್ತಾರವಾದ ಸರೋವರವು ಕಂಗೊಳಿಸುತ್ತಿತ್ತು. ಅದರಲ್ಲಿ ಚಿನ್ನದ ಬಣ್ಣದ ಕಮಲಗಳು ಅರಳಿ ಶೋಭಿಸುತ್ತಿದ್ದವು. ॥10-14॥
(ಶ್ಲೋಕ-15)
ಮೂಲಮ್
ಕುಮುದೋತ್ಪಲಕಲ್ಹಾರಶತಪತ್ರಶ್ರಿಯೋರ್ಜಿತಮ್ ।
ಮತ್ತಷಟ್ಪದನಿರ್ಘುಷ್ಟಂ ಶಕುಂತೈಶ್ಚ ಕಲಸ್ವನೈಃ ॥
(ಶ್ಲೋಕ-16)
ಮೂಲಮ್
ಹಂಸಕಾರಂಡವಾಕೀರ್ಣಂ ಚಕ್ರಾಹ್ವೈಃ ಸಾರಸೈರಪಿ ।
ಜಲಕುಕ್ಕುಟಕೋಯಷ್ಟಿದಾತ್ಯೂಹಕುಲಕೂಜಿತಮ್ ॥
(ಶ್ಲೋಕ-17)
ಮೂಲಮ್
ಮತ್ಸ್ಯಕಚ್ಛಪಸಂಚಾರಚಲತ್ಪದ್ಮರಜಃಪಯಃ ।
ಕದಂಬವೇತಸನಲನೀಪವಂಜುಲಕೈರ್ವೃತಮ್ ॥
ಅನುವಾದ
ಹಾಗೆಯೇ ಬೇರೆ-ಬೇರೆ ಜಾತಿಯ ಕುಮುದ, ಉತ್ಪಲ, ಕಲ್ಹಾರ, ಶತದಲ ಮುಂತಾದ ಕಮಲಗಳ ಕಾಂತಿಯು ಹರಡಿತ್ತು. ಮತ್ತೇರಿದ ದುಂಬಿಗಳು ಝೇಂಕರಿಸುತ್ತಿದ್ದವು. ಮನೋಹರ ಪಕ್ಷಿಗಳ ಕೂಜನವು ಎಲ್ಲೆಡೆ ಕೇಳಿಬರುತ್ತಿತ್ತು. ಹಂಸ, ನೀರು ಹಕ್ಕಿ, ಚಕ್ರವಾಕ, ತಾವರೆಹಕ್ಕಿ, ನೀರುಕೋಳಿ, ಕೋಯಷ್ಟಿ, ನೀರುಕಾಗೆ ಮುಂತಾದವುಗಳು ಇಂಪಾಗಿ ಕಲ-ಕಲ ಧ್ವನಿಮಾಡುತ್ತಿದ್ದವು. ಮೀನು, ಆಮೆ ಮುಂತಾದ ಜಲಚರ ಪ್ರಾಣಿಗಳು ಓಡಾಡುವಾಗ ತಾವರೆಹೂಗಳು ಅಲುಗಾಡುತ್ತಾ ನೀರಿನಲ್ಲಿ ಪರಾಗವನ್ನು ಚೆಲ್ಲುತ್ತಿದ್ದವು. ಈಚಲ, ಬೆತ್ತ, ಜೊಂಡುಗಳು, ನೀರುಕಾರಂಜೀಮರ, ಹಬ್ಬೆಗಿಡ ಮುಂತಾದವು ಅದರ ಸುತ್ತಲೂ ಕಂಗೊಳಿಸುತ್ತಿದ್ದವು. ॥15-17॥
(ಶ್ಲೋಕ-18)
ಮೂಲಮ್
ಕುಂದೈಃ ಕುರಬಕಾಶೋಕೈಃ ಶಿರೀಷೈಃ ಕುಟಜೇಂಗುದೈಃ ।
ಕುಬ್ಜಕೈಃ ಸ್ವರ್ಣಯೂಥೀಭಿರ್ನಾಗಪುನ್ನಾಗಜಾತಿಭಿಃ ॥
(ಶ್ಲೋಕ-19)
ಮೂಲಮ್
ಮಲ್ಲಿಕಾಶತಪತ್ರೈಶ್ಚ ಮಾಧವೀಜಾಲಕಾದಿಭಿಃ ।
ಶೋಭಿತಂ ತೀರಜೈಶ್ಚಾನ್ಯೈರ್ನಿತ್ಯರ್ತುಭಿರಲಂ ದ್ರುಮೈಃ ॥
ಅನುವಾದ
ಮಾಘದ ಮೊಲ್ಲೆ, ಮುಳ್ಳುಗೊರಂಟೆ, ಅಶೋಕವೃಕ್ಷ, ಬಾಗೆ, ಬೆಟ್ಟದಮಲ್ಲಿಗೆ ಹಿಪ್ಪೆ, ಕುಬ್ಜಕ, ಸ್ವರ್ಣಯೂಧಿ, ನಾಗ, ಪುನ್ನಾಗ, ಜಾಜಿ, ಮಲ್ಲಿಗೆ, ಮಾಧವೀ ಮುಂತಾದ ಹೂವುಗಳು ಎಲ್ಲ ಋತುಗಳಲ್ಲಿ ಅರಳಿ ತುಂಬಿದ ಸೊಂಪಾಗಿ ಹೂಮರಗಳಿಂದ ಆ ಸರೋವರವು ಶೋಭಾಯಮಾನವಾಗಿತ್ತು. ॥18-19॥
(ಶ್ಲೋಕ-20)
ಮೂಲಮ್
ತತ್ರೈಕದಾ ತದ್ಗಿರಿಕಾನನಾಶ್ರಯಃ
ಕರೇಣುಭಿರ್ವಾರಣಯೂಥಪಶ್ಚರನ್ ।
ಸಕಂಟಕಾನ್ಕೀಚಕವೇಣುವೇತ್ರವದ್
ವಿಶಾಲಗುಲ್ಮಂ ಪ್ರರುಜನ್ವನಸ್ಪತೀನ್ ॥
ಅನುವಾದ
ಆ ಪರ್ವತದ ಘೋರಾರಣ್ಯದಲ್ಲಿ ಹಲವಾರು ಹೆಣ್ಣಾನೆಗಳೊಡನೆ ಒಂದು ಗಜೇಂದ್ರವು ವಾಸವಾಗಿತ್ತು. ಅದು ದೊಡ್ಡ- ದೊಡ್ಡ ಶಕ್ತಿಶಾಲಿ ಆನೆಗಳಿಗೆಲ್ಲ ನಾಯಕವಾಗಿತ್ತು. ಒಂದುದಿನ ಅದೇ ಪರ್ವತದಲ್ಲಿ ತನ್ನ ಸಂಗಾತಿಗಳಾದ ಹೆಣ್ಣಾನೆಗಳಿಂದ ಕೂಡಿಕೊಂಡು ಅರಣ್ಯದಲ್ಲಿದ್ದ ಮುಳ್ಳುಗಳಿಂದ ಕೂಡಿದ್ದ ಹೆಬ್ಬಿದಿರುಗಳನ್ನೂ, ಕಿರುಬಿದಿರುಗಳನ್ನೂ, ಬೆತ್ತಗಳನ್ನೂ, ದೊಡ್ಡ-ದೊಡ್ಡ ಪೊದರುಗಳನ್ನು ಧ್ವಂಸ ಮಾಡುತ್ತಾ ಸಂಚರಿಸುತ್ತಿತ್ತು. ॥20॥
(ಶ್ಲೋಕ-21)
ಮೂಲಮ್
ಯದ್ಗಂಧಮಾತ್ರಾದ್ಧರಯೋ ಗಜೇಂದ್ರಾ
ವ್ಯಾಘ್ರಾದಯೋ ವ್ಯಾಲಮೃಗಾಃ ಸಖಡ್ಗಾಃ ।
ಮಹೋರಗಾಶ್ಚಾಪಿ ಭಯಾದ್ದ್ರವಂತಿ
ಸಗೌರಕೃಷ್ಣಾಃ ಶರಭಾಶ್ಚಮರ್ಯಃ ॥
ಅನುವಾದ
ಅದರ ವಾಸನೆಯಿಂದಲೇ ಸಿಂಹ-ಆನೆ-ಹುಲಿ-ಚಿರತೆ ಮುಂತಾದ ಹಿಂಸ್ರ ಪ್ರಾಣಿಗಳು, ಸರ್ಪಗಳು, ಖಡ್ಗಮೃಗಗಳು, ಗೌರಮೃಗಗಳು, ಕೃಷ್ಣಸಾರ, ಶರಭಗಳು, ಚಮರೀಮೃಗಗಳು ಇನ್ನೂ ಅನೇಕ ದುಷ್ಟಮೃಗಗಳು ಓಡಿಹೋಗುತ್ತಿದ್ದವು. ॥21॥
(ಶ್ಲೋಕ-22)
ಮೂಲಮ್
ವೃಕಾ ವರಾಹಾ ಮಹಿಷರ್ಕ್ಷಶಲ್ಯಾ
ಗೋಪುಚ್ಛಸಾಲಾವೃಕಮರ್ಕಟಾಶ್ಚ ।
ಅನ್ಯತ್ರ ಕ್ಷುದ್ರಾ ಹರಿಣಾಃ ಶಶಾದಯ-
ಶ್ಚರಂತ್ಯಭೀತಾ ಯದನುಗ್ರಹೇಣ ॥
ಅನುವಾದ
ತೋಳಗಳು, ಕಾಡುಹಂದಿ, ಕಾಡುಕೋಣಗಳು, ಕರಡಿಗಳು, ಮುಳ್ಳು ಹಂದಿಗಳು, ಗೋಪುಚ್ಛಗಳು, ನಾಯಿಗಳು, ಕೋತಿಗಳು, ಹುಲ್ಲೆಗಳು, ಮೊಲಗಳು, ಇವೇ ಮುಂತಾದ ದುರ್ಬಲ ಪ್ರಾಣಿಗಳು ಗಜರಾಜನ ಕೃಪೆಯಿಂದ ನಿರ್ಭಯವಾಗಿ ಸಂಚರಿಸುತ್ತಿದ್ದವು. ॥22॥
(ಶ್ಲೋಕ-23)
ಮೂಲಮ್
ಸ ಘರ್ಮತಪ್ತಃ ಕರಿಭಿಃ ಕರೇಣುಭಿ-
ರ್ವೃತೋ ಮದಚ್ಯುತ್ಕಲಭೈರನುದ್ರುತಃ ।
ಗಿರಿಂ ಗರಿಮ್ಣಾ ಪರಿತಃ ಪ್ರಕಂಪಯನ್
ನಿಷೇವ್ಯಮಾಣೋಲಿಕುಲೈರ್ಮದಾಶನೈಃ ॥
(ಶ್ಲೋಕ-24)
ಮೂಲಮ್
ಸರೋನಿಲಂ ಪಂಕಜರೇಣುರೂಷಿತಂ
ಜಿಘ್ರನ್ವಿದೂರಾನ್ಮದವಿಹ್ವಲೇಕ್ಷಣಃ ।
ವೃತಃ ಸ್ವಯೂಥೇನ ತೃಷಾರ್ದಿತೇನ ತತ್
ಸರೋವರಾಭ್ಯಾಶಮಥಾಗಮದ್ದ್ರುತಮ್ ॥
ಅನುವಾದ
ಗಜರಾಜನ ಹಿಂದೆ-ಹಿಂದೆ ಸಣ್ಣ-ಸಣ್ಣ ಆನೆಮರಿಗಳು ಓಡುತ್ತಿದ್ದವು. ದೊಡ್ಡ-ದೊಡ್ಡ ಗಂಡಾನೆಗಳೂ, ಹೆಣ್ಣಾನೆಗಳೂ, ಅವನನ್ನು ಸುತ್ತುವರಿದು ನಡೆಯುತ್ತಿದ್ದವು. ಅದರ ಭಾರವಾದ ಹೆಜ್ಜೆಗಳಿಂದ ಆ ಪರ್ವತವೇ ನಡುಗುತ್ತಿತ್ತು. ಅದರ ಗಂಡಸ್ಥಲದಿಂದ ಒಸರುತ್ತಿದ್ದ ಮದೋದಕವನ್ನು ಪಾನಮಾಡಲು ದುಂಬಿಗಳು ಜೊತೆ-ಜೊತೆಯಾಗಿಯೇ ಹಾರಾಡುತ್ತಿದ್ದವು. ಮದದಿಂದ ಅದರ ಕಣ್ಣುಗಳು ವಿಹ್ವಲವಾಗಿದ್ದುವು. ಬಿಸಿಲು ಭಾರೀ ಸುಡುತ್ತಿತ್ತು. ಅದರಿಂದ ಗಜರಾಜನು ವ್ಯಾಕುಲನಾಗಿದ್ದನು. ಅವನಿಗೆ ಮತ್ತು ಸಂಗಡಿಗರಿಗೆ ಬಾಯಾರಿಕೆ ಪೀಡಿಸುತ್ತಿತ್ತು. ಆಗ ದೂರದಿಂದಲೇ ಕಮಲ ಪರಾಗದಿಂದ ಸುವಾಸಿತವಾದ ವಾಯುವನ್ನು ಮೂಸುತ್ತಾ, ಶೀತಲವಾದ ಸುಗಂಧವನ್ನು ಹೊತ್ತುತರುತ್ತಿದ್ದ ವಾಯುವಿನ ಜಾಡನ್ನು ಹಿಡಿದು ಆ ಸರೋವರದ ಕಡೆಗೆ ಹೊರಟು ವೇಗವಾಗಿ ನಡೆಯುತ್ತಾ ಸ್ವಲ್ಪದರಲ್ಲೇ ಆ ಸರೋವರದ ಬಳಿಗೆ ಬಂದನು. ॥23-24॥
(ಶ್ಲೋಕ-25)
ಮೂಲಮ್
ವಿಗಾಹ್ಯ ತಸ್ಮಿನ್ನಮೃತಾಂಬು ನಿರ್ಮಲಂ
ಹೇಮಾರವಿಂದೋತ್ಪಲರೇಣುವಾಸಿತಮ್ ।
ಪಪೌ ನಿಕಾಮಂ ನಿಜಪುಷ್ಕರೋದ್ಧೃತ-
ಮಾತ್ಮಾನಮದ್ಭಿಃ ಸ್ನಪಯನ್ಗತಕ್ಲಮಃ ॥
ಅನುವಾದ
ಆ ಸರೋವರದ ನೀರು ಅತ್ಯಂತ ನಿರ್ಮಲವೂ, ಅಮೃತ ದಂತೆಯೂ ಮಧುರವಾಗಿತ್ತು. ಚಿನ್ನದ ಕಮಲದ ಮತ್ತು ಕನ್ನೈದಿಲೆಯ ಪರಾಗದಿಂದ ಸುಗಂಧಿತವಾಗಿತ್ತು. ಗಜೇಂದ್ರನು ಮೊದಲಿಗೆ ಆ ಸರೋವರದಲ್ಲಿ ಇಳಿದು ತನ್ನ ಸೊಂಡಿಲಿನಿಂದ ನೀರನ್ನು ಎತ್ತಿ-ಎತ್ತಿ ಯಥೇಚ್ಛವಾಗಿ ಕುಡಿದನು. ಮತ್ತೆ ಆ ನೀರಿನಲ್ಲಿ ಸ್ನಾನಮಾಡಿ ತನ್ನ ದಣಿವನ್ನು ಇಂಗಿಸಿಕೊಂಡನು. ॥25॥
(ಶ್ಲೋಕ-26)
ಮೂಲಮ್
ಸ್ವಪುಷ್ಕರೇಣೋದ್ಧೃತಶೀಕರಾಂಬುಭಿ-
ರ್ನಿಪಾಯಯನ್ಸಂಸ್ನಪಯನ್ಯಥಾ ಗೃಹೀ ।
ಘೃಣೀ ಕರೇಣೂಃ ಕಲಭಾಂಶ್ಚ ದುರ್ಮದೋ
ನಾಚಷ್ಟ ಕೃಚ್ಛ್ರಂ ಕೃಪಣೋಜಮಾಯಯಾ ॥
ಅನುವಾದ
ಗಜೇಂದ್ರನು ಗೃಹಸ್ಥ ಮನುಷ್ಯನಂತೆ ಮೋಹ ಗ್ರಸ್ತನಾಗಿ ತನ್ನ ಸೊಂಡಿಲಿನಿಂದ ನೀರನ್ನೆತ್ತಿ ಚೆಲ್ಲುತ್ತಾ ಸಂಗಡಿಗ ರಾದ ಹೆಣ್ಣಾನೆಗಳನ್ನು, ಮರಿಗಳನ್ನು ಸ್ನಾನಮಾಡಿಸತೊಡಗಿ ದನು. ಹಾಗೂ ಅವರ ಸೊಂಡಿಲಿನೊಳಗೆ ತನ್ನ ಸೊಂಡಿಲನ್ನು ಹಾಕಿ ನೀರು ಕುಡಿಸಿದನು. ಭಗವಂತನ ಮಾಯೆಯಿಂದ ಮೋಹಿತನಾದ ಗಜೇಂದ್ರನು ಉನ್ಮತ್ತನಾಗಿದ್ದನು. ನನ್ನ ತಲೆಯಮೇಲೆ ದೊಡ್ಡ ಆಪತ್ತು ಹೊಂಚು ಹಾಕುತ್ತಿದೆ ಎಂಬುದೂ ಆ ಬಡಪಾಯಿಗೆ ತಿಳಿದಿರಲಿಲ್ಲ. ॥26॥
(ಶ್ಲೋಕ-27)
ಮೂಲಮ್
ತಂ ತತ್ರ ಕಶ್ಚಿನ್ನೃಪ ದೈವಚೋದಿತೋ-
ಗ್ರಾಹೋ ಬಲೀಯಾಂಶ್ಚರಣೇ ರುಷಾಗ್ರಹೀತ್ ।
ಯದೃಚ್ಛಯೈವಂ ವ್ಯಸನಂ ಗತೋ ಗಜೋ
ಯಥಾಬಲಂ ಸೋತಿಬಲೋ ವಿಚಕ್ರಮೇ ॥
ಅನುವಾದ
ಪರೀಕ್ಷಿತನೇ! ಗಜೇಂದ್ರನು ಇಷ್ಟೊಂದು ಉನ್ಮತ್ತನಾಗಿದ್ದಾಗ ಪ್ರಾರಬ್ಧದ ಪ್ರೇರಣೆಯಿಂದ ಒಂದು ಬಲಿಷ್ಠವಾದ ಮೊಸಳೆಯು, ಆನೆಗಳ ತುಳಿತದಿಂದ ಕ್ರೋಧಗೊಂಡು ಗಜೇಂದ್ರನ ಕಾಲನ್ನು ಬಲವಾಗಿ ಹಿಡಿದುಬಿಟ್ಟಿತು. ಈ ವಿಧವಾಗಿ ಅಕಸ್ಮಾತ್ತಾಗಿ ವಿಪತ್ತಿಗೆ ಸಿಲುಕಿದ ಆ ಬಲಶಾಲಿಯಾದ ಗಜೇಂದ್ರನು ತನ್ನನ್ನು ಬಿಡಿಸಿಕೊಳ್ಳಲು ಬಹಳವಾಗಿ ಪ್ರಯತ್ನಿಸಿದನು. ಆದರೆ ಬಿಡಿಸಿಕೊಳ್ಳದಾದನು. ॥27॥
(ಶ್ಲೋಕ-28)
ಮೂಲಮ್
ತಥಾತುರಂ ಯೂಥಪತಿಂ ಕರೇಣವೋ
ವಿಕೃಷ್ಯಮಾಣಂ ತರಸಾ ಬಲೀಯಸಾ ।
ವಿಚುಕ್ರುಶುರ್ದೀನಧಿಯೋಪರೇ ಗಜಾಃ
ಪಾರ್ಷ್ಣಿಗ್ರಹಾಸ್ತಾರಯಿತುಂ ನ ಚಾಶಕನ್ ॥
ಅನುವಾದ
ಬೇರೆ ಗಂಡಾನೆಗಳು, ಹೆಣ್ಣಾನೆಗಳು, ಮರಿಗಳು ತಮ್ಮ ಒಡೆಯನನ್ನು ಬಲಿಷ್ಠವಾದ ಒಂದು ಮೊಸಳೆಯು ಹಿಡಿದು ವೇಗವಾಗಿ ಸೆಳೆಯುತ್ತಿದೆ ಮತ್ತು ಅವನು ಬಹಳ ಸಂಕಟ ಕ್ಕೊಳಗಾಗಿದ್ದಾನೆಂದು ನೋಡಿ ಅವುಗಳಿಗೆ ತುಂಬಾ ದುಃಖ ವಾಯಿತು. ಅವುಗಳೆಲ್ಲವೂ ಆರ್ತರಾಗಿ ಘೀಳಿಟ್ಟವು. ಅನೇಕರು ಅವನಿಗೆ ಸಹಾಯಮಾಡಿ ನೀರಿನಿಂದ ಹೊರಗೆ ತೆಗೆಯಲು ಬಯಸಿದರು, ಆದರೆ ಅವರೆಲ್ಲರೂ ಅಸಮರ್ಥರೇ ಆದರು. ॥28॥
(ಶ್ಲೋಕ-29)
ಮೂಲಮ್
ನಿಯುಧ್ಯತೋರೇವಮಿಭೇಂದ್ರನಕ್ರಯೋ-
ರ್ವಿಕರ್ಷತೋರಂತರತೋ ಬಹಿರ್ಮಿಥಃ ।
ಸಮಾಃ ಸಹಸ್ರಂ ವ್ಯಗಮನ್ಮಹೀಪತೇ
ಸಪ್ರಾಣಯೋಶ್ಚಿತ್ರಮಮಂಸತಾಮರಾಃ ॥
ಅನುವಾದ
ಗಜೇಂದ್ರ ಮತ್ತು ಮೊಸಳೆಯು ತಮ್ಮ- ತಮ್ಮ ಪೂರ್ಣ ಶಕ್ತಿಯಿಂದ ಸೆಣಸಾಡುತ್ತಿದ್ದರು. ಕೆಲವೊಮ್ಮೆ ಗಜೇಂದ್ರನು ಮೊಸಳೆಯನ್ನು ಹೊರಗೆ ಎಳೆದರೆ, ಕೆಲವೊಮ್ಮೆ ಮೊಸಳೆಯು ನೀರಿನೊಳಗೆ ಸೆಳೆದುಬಿಡುತ್ತಿತ್ತು. ಪರೀಕ್ಷಿತನೇ! ಹೀಗೆ ಕಾದಾಡುತ್ತಾ-ಕಾದಾಡುತ್ತಾ ಒಂದು ಸಾವಿರ ವರ್ಷಗಳು ಕಳೆದವು ಮತ್ತು ಇಬ್ಬರು ಸೋಲುತ್ತಾ-ಗೆಲ್ಲುತ್ತಾ ಇದ್ದರು. ಈ ಘಟನೆಯನ್ನು ನೋಡಿದ ದೇವತೆಗಳೂ ಆಶ್ಚರ್ಯಚಕಿತರಾದರು. ॥29॥
(ಶ್ಲೋಕ-30)
ಮೂಲಮ್
ತತೋ ಗಜೇಂದ್ರಸ್ಯ ಮನೋಬಲೌಜಸಾಂ
ಕಾಲೇನ ದೀರ್ಘೇಣ ಮಹಾನಭೂದ್ವ್ಯಯಃ ।
ವಿಕೃಷ್ಯಮಾಣಸ್ಯ ಜಲೇವಸೀದತೋ
ವಿಪರ್ಯಯೋಭೂತ್ಸಕಲಂ ಜಲೌಕಸಃ ॥
ಅನುವಾದ
ಕೊನೆಗೆ ಬಹಳ ದಿನಗಳವರೆಗೆ ಮತ್ತೆ-ಮತ್ತೆ ನೀರಿಗೆ ಸೆಳೆಯಲ್ಪಟ್ಟಿದ್ದರಿಂದ ಗಜೇಂದ್ರನ ಶರೀರವು ಶಿಥಿಲವಾಗ ತೊಡಗಿತು. ಅವನ ಮನಸ್ಸಿನಲ್ಲಿ ಉತ್ಸಾಹವೂ, ದೇಹದಲ್ಲಿ ಬಲವು ಉಳಿಯಲಿಲ್ಲ. ಶಕ್ತಿಯೂ ಕ್ಷೀಣವಾಯಿತು. ಇತ್ತ ಮೊಸಳೆ ಯಾದರೋ ಹೇಳಿ-ಕೇಳಿ ಜಲಚರಪ್ರಾಣಿ. ಅದರ ಶಕ್ತಿಯು ಕುಗ್ಗುವ ಬದಲು ಹೆಚ್ಚುತ್ತಾಹೋಯಿತು. ಅದು ಅತೀವ ಉತ್ಸಾಹದಿಂದ ಇನ್ನೂ ಬಲವನ್ನು ಹಾಕಿ ಗಜೇಂದ್ರನನ್ನು ಸೆಳೆಯತೊಡಗಿತು. ॥30॥
(ಶ್ಲೋಕ-31)
ಮೂಲಮ್
ಇತ್ಥಂ ಗಜೇಂದ್ರಃ ಸ ಯದಾಪ ಸಂಕಟಂ
ಪ್ರಾಣಸ್ಯ ದೇಹೀ ವಿವಶೋ ಯದೃಚ್ಛಯಾ ।
ಅಪಾರಯನ್ನಾತ್ಮವಿಮೋಕ್ಷಣೇ ಚಿರಂ
ದಧ್ಯಾವಿಮಾಂ ಬುದ್ಧಿಮಥಾಭ್ಯಪದ್ಯತ ॥
ಅನುವಾದ
ಹೀಗೆ ದೇಹಾಭಿಮಾನಿಯಾದ ಗಜೇಂದ್ರನು ಅಕಸ್ಮಾತ್ತಾಗಿ ಸಂಕಟದಲ್ಲಿ ಬಿದ್ದು, ತನ್ನನ್ನು ಬಿಡಿಸಿಕೊಳ್ಳುವುದರಲ್ಲಿ ಪೂರ್ಣವಾಗಿ ಅಸಮರ್ಥನಾದನು. ಬಹಳ ಹೊತ್ತಿನವರೆಗೆ ತನ್ನ ಬಿಡುಗಡೆಯ ಬಗ್ಗೆ ಯೋಚಿಸಿ, ಕೊನೆಗೆ ಅವನು ಈ ನಿಶ್ಚಯಕ್ಕೆ ತಲುಪಿದನು. ॥31॥
(ಶ್ಲೋಕ-32)
ಮೂಲಮ್
ನ ಮಾಮಿಮೇ ಜ್ಞಾತಯ ಆತುರಂ ಗಜಾಃ
ಕುತಃ ಕರಿಣ್ಯಃ ಪ್ರಭವಂತಿ ಮೋಚಿತುಮ್ ।
ಗ್ರಾಹೇಣ ಪಾಶೇನ ವಿಧಾತುರಾವೃತೋ-
ಪ್ಯಹಂ ಚ ತಂ ಯಾಮಿ ಪರಂ ಪರಾಯಣಮ್ ॥
ಅನುವಾದ
ಈ ನಕ್ರ (ಮೊಸಳೆ)ವು ವಿಧಾತನ ಉರುಳೇ ಆಗಿದೆ. ಇದರಲ್ಲಿ ಸಿಕ್ಕಿಕೊಂಡು ಸಂಕಟಕ್ಕೊಳಗಾದ ನನ್ನನ್ನು ನನ್ನ ಜೊತೆ ಯವರಾದ ಆನೆಗಳೇ ಈ ವಿಪತ್ತಿನಿಂದ ಎತ್ತಲಾರದೆ ಹೋದಾಗ ಬಡಪಾಯಿಗಳಾದ ಹೆಣ್ಣಾನೆಗಳೂ ಹೇಗೆ ತಾನೇ ಬಿಡಿಸಬಲ್ಲರು? ಅದಕ್ಕಾಗಿ ನಾನು ಈಗ ಸಮಸ್ತ ವಿಶ್ವದ ಏಕೈಕ ಆಶ್ರಯನಾದ ಭಗವಂತನನ್ನೇ ಶರಣು ಹೊಂದುವೆನು. ॥32॥
(ಶ್ಲೋಕ-33)
ಮೂಲಮ್
ಯಃ ಕಶ್ಚನೇಶೋ ಬಲಿನೋಂತಕೋರಗಾತ್
ಪ್ರಚಂಡವೇಗಾದಭಿಧಾವತೋ ಭೃಶಮ್ ।
ಭೀತಂ ಪ್ರಪನ್ನಂ ಪರಿಪಾತಿ ಯದ್ಭಯಾ-
ನ್ಮೃತ್ಯುಃ ಪ್ರಧಾವತ್ಯರಣಂ ತಮೀಮಹಿ ॥
ಅನುವಾದ
ಕಾಲವು ಭಾರೀ ಬಲಿಷ್ಠವಾಗಿದೆ. ಇದು ಸರ್ಪದಂತೆ ಅತ್ಯಂತ ಪ್ರಚಂಡ ವೇಗದಿಂದ ಎಲ್ಲರನ್ನೂ ನುಂಗಲು ಓಡುತ್ತಾ ಇರುತ್ತದೆ. ಇದಕ್ಕೆ ಭಯಗೊಂಡು ಯಾರಾದರೂ ಭಗವಂತನಲ್ಲಿ ಶರಣಾದರೆ ಅವನನ್ನು ಆ ಪ್ರಭುವು ಖಂಡಿತವಾಗಿ ಮೃತ್ಯುವಿನಿಂದ ಕಾಪಾಡುತ್ತಾನೆ. ಅವನ ಭಯದಿಂದಲೇ ಹೆದರಿ ಕಾಲವೂ ಕೂಡ ಓಡಿ ಹೋಗುತ್ತದೆ. ಆ ಪ್ರಭುವೇ ಎಲ್ಲರ ಆಶ್ರಯನಾಗಿದ್ದಾನೆ. ನಾನು ಅವನನ್ನೇ ಶರಣು ಹೊಂದುತ್ತೇನೆ. ॥33॥
ಅನುವಾದ (ಸಮಾಪ್ತಿಃ)
ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಮನ್ವಂತರಾನುವರ್ಣನೇ ಗಜೇಂದ್ರೋಪಾಖ್ಯಾನೇ ದ್ವಿತೀಯೋಽಧ್ಯಾಯಃ ॥2॥