[ಮೊದಲನೆಯ ಅಧ್ಯಾಯ]
ಭಾಗಸೂಚನಾ
ಮನ್ವಂತರಗಳ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಸ್ವಾಯಂಭುವಸ್ಯೇಹ ಗುರೋ ವಂಶೋಯಂ ವಿಸ್ತರಾಚ್ಛ್ರುತಃ ।
ಯತ್ರ ವಿಶ್ವಸೃಜಾಂ ಸರ್ಗೋ ಮನೂನನ್ಯಾನ್ವದಸ್ವ ನಃ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಗುರುದೇವರೇ! ತಮ್ಮ ಈ ಕಥಾ-ಕೀರ್ತನೆಯಲ್ಲಿ ಸ್ವಾಯಂಭುವ ಮನುವಿನ ವಂಶ ವಿಸ್ತಾರವನ್ನು ನಾನು ಕೇಳಿದೆ. ಇದೇ ವಂಶದಲ್ಲಿ ಅವನ ಪುತ್ರಿಯರಿಂದ ಮರೀಚಿಯೇ ಮುಂತಾದ ಪ್ರಜಾಪತಿಗಳು ತಮ್ಮ ವಂಶವನ್ನು ನಡೆಸಿದರು. ಈಗ ನೀವು ಇತರ ಮನುಗಳ ವಿಷಯವನ್ನು ವರ್ಣಿಸುವ ಕೃಪೆಮಾಡಿರಿ. ॥1॥
(ಶ್ಲೋಕ-2)
ಮೂಲಮ್
ಯತ್ರ ಯತ್ರ ಹರೇರ್ಜನ್ಮ ಕರ್ಮಾಣಿ ಚ ಮಹೀಯಸಃ ।
ಗೃಣಂತಿ ಕವಯೋ ಬ್ರಹ್ಮನ್ತಾನಿ ನೋ ವದ ಶೃಣ್ವತಾಮ್ ॥
ಅನುವಾದ
ಬ್ರಾಹ್ಮ ಣೋತ್ತಮರೇ! ಮಹಾತ್ಮರಾದ ಜ್ಞಾನಿಗಳು ಯಾವ-ಯಾವ ಮನ್ವಂತರದಲ್ಲಿ ಮಹಾಮಹಿಮನಾದ ಶ್ರೀಹರಿಯ ಅವ ತಾರಗಳನ್ನೂ, ಲೀಲೆಗಳನ್ನೂ ವರ್ಣನೆ ಮಾಡಿದ್ದಾರೆ ಅವೆಲ್ಲವನ್ನು ಶ್ರವಣಮಾಡಲು ಬಯಸುವ ನಮಗೆ ತಿಳಿಸಿರಿ. ॥2॥
(ಶ್ಲೋಕ-3)
ಮೂಲಮ್
ಯದ್ಯಸ್ಮಿನ್ನಂತರೇ ಬ್ರಹ್ಮನ್ಭಗವಾನ್ವಿಶ್ವಭಾವನಃ ।
ಕೃತವಾನ್ಕುರುತೇ ಕರ್ತಾ ಹ್ಯತೀತೇನಾಗತೇದ್ಯ ವಾ ॥
ಅನುವಾದ
ಪೂಜ್ಯರೇ! ವಿಶ್ವಭಾವನನಾದ ಭಗವಂತನು ಕಳೆದ ಮನ್ವಂತರಗಳಲ್ಲಿ ಯಾವ-ಯಾವ ಲೀಲೆಗಳನ್ನು ನಡೆಸಿದನು? ಈ ಮನ್ವಂತರದಲ್ಲಿ ಮಾಡುತ್ತಿರುವ ಲೀಲೆಗಳನ್ನೂ, ಮುಂದಿನ ಮನ್ವಂತರಗಳಲ್ಲಿ ಎಸಗಲಿರುವ ಲೀಲೆಗಳನ್ನೂ ಎಲ್ಲವನ್ನೂ ನಮಗೆ ಹೇಳಿರಿ.॥3॥
(ಶ್ಲೋಕ-4)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ಮನವೋಸ್ಮಿನ್ವ್ಯತೀತಾಃ ಷಟ್ಕಲ್ಪೇ ಸ್ವಾಯಂಭುವಾದಯಃ ।
ಆದ್ಯಸ್ತೇ ಕಥಿತೋ ಯತ್ರ ದೇವಾದೀನಾಂ ಚ ಸಂಭವಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜನೇ! ಈ ಕಲ್ಪದಲ್ಲಿ ಸ್ವಾಯಂಭುವ ಮುಂತಾದ ಆರು ಮನ್ವಂತರ ಗಳು ಕಳೆದುಹೋಗಿವೆ. ಅವುಗಳಲ್ಲಿ ದೇವತೆಗಳೇ ಮುಂತಾ ದವರ ಉತ್ಪತ್ತಿಯು ಆಗಿರುವ ಮೊದಲನೆಯ ಮನ್ವಂತರ ವನ್ನು ನಿನಗೆ ವರ್ಣಿಸಿಯಾಗಿದೆ. ॥4॥
(ಶ್ಲೋಕ-5)
ಮೂಲಮ್
ಆಕೂತ್ಯಾಂ ದೇವಹೂತ್ಯಾಂ ಚ ದುಹಿತ್ರೋಸ್ತಸ್ಯ ವೈ ಮನೋಃ ।
ಧರ್ಮಜ್ಞಾನೋಪದೇಶಾರ್ಥಂ ಭಗವಾನ್ಪುತ್ರತಾಂ ಗತಃ ॥
ಅನುವಾದ
ಸ್ವಾಯಂಭುವ ಮನುವಿನ ಪುತ್ರಿಯಾದ ಆಕೂತಿಯಲ್ಲಿ ಯಜ್ಞಪುರುಷ ನಾಗಿ ಧರ್ಮವನ್ನು ಉಪದೇಶ ಮಾಡಲಿಕ್ಕಾಗಿ ಹಾಗೂ ದೇವಹೂತಿಯಲ್ಲಿ ಕಪಿಲಾವತಾರವನ್ನು ಎತ್ತಿ ಜ್ಞಾನವನ್ನು ಉಪದೇಶಿಸಲಿಕ್ಕಾಗಿ ಭಗವಂತನು ಆವಿರ್ಭವಿಸಿದ್ದನು.॥5॥
(ಶ್ಲೋಕ-6)
ಮೂಲಮ್
ಕೃತಂ ಪುರಾ ಭಗವತಃ ಕಪಿಲಸ್ಯಾನುವರ್ಣಿತಮ್ ।
ಆಖ್ಯಾಸ್ಯೇ ಭಗವಾನ್ಯಜ್ಞೋ ಯಚ್ಚಕಾರ ಕುರೂದ್ವಹ ॥
ಅನುವಾದ
ಪರೀಕ್ಷಿತನೇ! ಭಗವಾನ್ ಕಪಿಲಾವತಾರದ ವರ್ಣನೆಯನ್ನು ನಾನು ಮೊದಲೇ (ಮೂರನೆಯ ಸ್ಕಂಧದಲ್ಲಿ) ಮಾಡಿಯಾಗಿದೆ. ಈಗ ಭಗವಾನ್ ಯಜ್ಞಪುರುಷನು ಆಕೂತಿಯ ಗರ್ಭದಲ್ಲಿ ಅವತರಿಸಿ ಮಾಡಿದ ಲೀಲೆಗಳನ್ನು ವರ್ಣಿಸುತ್ತೇನೆ; ಕೇಳು.॥6॥
(ಶ್ಲೋಕ-7)
ಮೂಲಮ್
ವಿರಕ್ತಃ ಕಾಮಭೋಗೇಷು ಶತರೂಪಾಪತಿಃ ಪ್ರಭುಃ ।
ವಿಸೃಜ್ಯ ರಾಜ್ಯಂ ತಪಸೇ ಸಭಾರ್ಯೋ ವನಮಾವಿಶತ್ ॥
ಅನುವಾದ
ಪರೀಕ್ಷಿದ್ರಾಜನೇ! ಪ್ರಭುವಾದ ಸ್ವಾಯಂಭುವ ಮನುವು ಸಮಸ್ತ ಕಾಮನೆಗಳಿಂದ ಮತ್ತು ಭೋಗಗಳಿಂದ ವಿರಕ್ತನಾಗಿ ರಾಜ್ಯವನ್ನು ತ್ಯಜಿಸಿ ಪತ್ನಿಯಾದ ಶತರೂಪಾಳೊಂದಿಗೆ ತಪಸ್ಸಿ ಗಾಗಿ ವನಕ್ಕೆ ತೆರಳಿದನು. ॥7॥
(ಶ್ಲೋಕ-8)
ಮೂಲಮ್
ಸುನಂದಾಯಾಂ ವರ್ಷಶತಂ ಪದೈಕೇನ ಭುವಂ ಸ್ಪೃಶನ್ ।
ತಪ್ಯಮಾನಸ್ತಪೋ ಘೋರಮಿದಮನ್ವಾಹ ಭಾರತ ॥
ಅನುವಾದ
ಅಲ್ಲಿ ಅವನು ಸುನಂದಾ ನದಿಯ ತೀರದಲ್ಲಿ ಭೂಮಿಯಲ್ಲಿ ಒಂಟಿಕಾಲಿನಲ್ಲಿ ನಿಂತು ನೂರುವರ್ಷಗಳವರೆಗೆ ತೀವ್ರವಾದ ತಪಸ್ಸನ್ನು ಮಾಡಿದನು. ತಪಸ್ಸು ಮಾಡುವಾಗ ಅವನು ಪರಮಾತ್ಮನನ್ನು ಹೀಗೆ ಸ್ತುತಿಸಿದನು. ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಮನುರುವಾಚ
ಮೂಲಮ್
ಯೇನ ಚೇತಯತೇ ವಿಶ್ವಂ ವಿಶ್ವಂ ಚೇತಯತೇ ನ ಯಮ್ ।
ಯೋ ಜಾಗರ್ತಿ ಶಯಾನೇಸ್ಮಿನ್ನಾಯಂ ತಂ ವೇದ ವೇದ ಸಃ ॥
ಅನುವಾದ
ಸ್ವಾಯಂಭುವ ಮನುವು ಹೇಳುತ್ತಿದ್ದ — ವಿಶ್ವಕ್ಕೆಲ್ಲ ಚೈತನ್ಯವನ್ನು ತುಂಬಿದ ಪರಮ ಚೇತನನಿವನು. ಆದರೆ ವಿಶ್ವವು ಇವನಿಗೆ ಚೈತನ್ಯವನ್ನು ನೀಡಲಾರದು. ವಿಶ್ವವೆಲ್ಲವೂ ನಿದ್ರಿಸುತ್ತಿರುವ ಪ್ರಳಯಕಾಲದಲ್ಲಿಯೂ ಇವನು ಎಚ್ಚರ ವಾಗಿರುತ್ತಾನೆ. ವಿಶ್ವವು ಈತನನ್ನು ತಿಳಿಯಲಾರದು, ಆದರೆ ಇವನು ಅದನ್ನು ಪೂರ್ಣವಾಗಿ ತಿಳಿದಿರುವನು. ॥9॥
(ಶ್ಲೋಕ-10)
ಮೂಲಮ್
ಆತ್ಮಾವಾಸ್ಯಮಿದಂ ವಿಶ್ವಂ ಯತ್ಕಿಂಚಿಜ್ಜಗತ್ಯಾಂ ಜಗತ್ ।
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ॥
ಅನುವಾದ
ಈ ಇಡೀ ವಿಶ್ವದಲ್ಲಿ ಮತ್ತು ಈ ವಿಶ್ವದಲ್ಲಿ ಇರುವ ಎಲ್ಲ ಚರಾಚರ ಪ್ರಾಣಿಗಳಲ್ಲಿ ಆ ಪರಮಾತ್ಮನೇ ಹಾಸುಹೊಕ್ಕಾಗಿ ತುಂಬಿದ್ದಾನೆ. ಅದರಿಂದ ಈ ಪ್ರಪಂಚದ ಯಾವ ವಸ್ತು ವಿನಲ್ಲಿಯೂ ಮೋಹವನ್ನಿಡದೆ, ಅದನ್ನು ತ್ಯಾಗಬುದ್ಧಿ ಯಿಂದ ಜೀವನ-ನಿರ್ವಾಹಕ್ಕಷ್ಟೇ ಅದನ್ನು ಭೋಗಿಸಬೇಕು. ಆಸೆಯನ್ನು ತೊರೆಯಬೇಕು. ಯಾರ ಸಂಪತ್ತಿಗೂ ಆಸೆಪಡ ಬಾರದು. ॥10॥
(ಶ್ಲೋಕ-11)
ಮೂಲಮ್
ಯಂ ನ ಪಶ್ಯತಿ ಪಶ್ಯಂತಂ ಚಕ್ಷುರ್ಯಸ್ಯ ನ ರಿಷ್ಯತಿ ।
ತಂ ಭೂತನಿಲಯಂ ದೇವಂ ಸುಪರ್ಣಮುಪಧಾವತ ॥
ಅನುವಾದ
ಭಗವಂತನು ಎಲ್ಲರ ಸಾಕ್ಷಿಯಾಗಿದ್ದಾನೆ. ಅವನನ್ನು ಬುದ್ಧಿಯ ವೃತ್ತಿಗಳಾಗಲೀ, ಕಣ್ಣು ಮುಂತಾದ ಇಂದ್ರಿಯಗಳಾಗಲೀ ನೋಡಲಾರವು. ಆದರೂ ಅವನ ಜ್ಞಾನಶಕ್ತಿಯು ಅಖಂಡವಾಗಿದೆ. ಸಮಸ್ತ ಪ್ರಾಣಿಗಳ ಹೃದಯ ದಲ್ಲಿ ನೆಲೆಸಿರುವ ಆ ಸ್ವಯಂಪ್ರಕಾಶನಾದ, ಅಸಂಗನಾದ ಪರಮಾತ್ಮನಲ್ಲಿ ಶರಣಾಗಬೇಕು. ॥11॥
(ಶ್ಲೋಕ-12)
ಮೂಲಮ್
ನ ಯಸ್ಯಾದ್ಯಂತೌ ಮಧ್ಯಂ ಚ ಸ್ವಃ ಪರೋ ನಾಂತರಂ ಬಹಿಃ ।
ವಿಶ್ವಸ್ಯಾಮೂನಿ ಯದ್ಯಸ್ಮಾದ್ವಿಶ್ವಂ ಚ ತದೃತಂ ಮಹತ್ ॥
ಅನುವಾದ
ಆದಿ-ಅಂತ್ಯಗಳೇ ಇಲ್ಲದವನು ಮಧ್ಯದಲ್ಲಿ ಹೇಗೆ ಇರಬಲ್ಲನು? ಸ್ವಕೀಯವಾಗಲೀ, ಪರಕೀಯನಾಗಲೀ ಯಾರೂ ಇಲ್ಲ. ಹೊರಗಿನದಾಗಲೀ, ಒಳಗಿನದಾಗಲೀ ಯಾವುದೂ ಇಲ್ಲ. ಆದರೆ ವಿಶ್ವದಲ್ಲಿ ಎಲ್ಲಕ್ಕೂ ಆದಿ, ಅಂತ್ಯ, ಮಧ್ಯವೂ ಆಗಿ, ಸ್ವಕೀಯ, ಪರಕೀಯ, ಹೊರಗಿನ, ಒಳಗಿನ ಎಲ್ಲವೂ ಅವನೇ ಆಗಿದ್ದಾನೆ. ಎಲ್ಲಕ್ಕೂ ಕಾರಣವಾಗಿರುವ ಮಹಾ ಸತ್ಯಸ್ವರೂಪನು ಇವನೇ. ॥12॥
(ಶ್ಲೋಕ-13)
ಮೂಲಮ್
ಸ ವಿಶ್ವಕಾಯಃ ಪುರುಹೂತ ಈಶಃ
ಸತ್ಯಃ ಸ್ವಯಂಜ್ಯೋತಿರಜಃ ಪುರಾಣಃ ।
ಧತ್ತೇಸ್ಯ ಜನ್ಮಾದ್ಯಜಯಾತ್ಮಶಕ್ತ್ಯಾ
ತಾಂ ವಿದ್ಯಯೋದಸ್ಯ ನಿರೀಹ ಆಸ್ತೇ ॥
ಅನುವಾದ
ಆ ಪರಮಾತ್ಮನೇ ವಿಶ್ವ ರೂಪನು. ಅವನಿಗೆ ಅನಂತನಾಮಗಳಿವೆ. ಅವನು ಸರ್ವೇ ಶ್ವರನೂ, ಸತ್ಯಸ್ವರೂಪಿಯೂ, ಸ್ವಯಂಪ್ರಕಾಶನೂ, ಅಜನೂ, ಪುರಾಣಪುರುಷನೂ ಆಗಿರುವನು. ಅವನೇ ತನ್ನ ಮಾಯಾ ಶಕ್ತಿಯಿಂದಲೇ ವಿಶ್ವಸೃಷ್ಟಿಯ ಜನ್ಮಾದಿಗಳನ್ನು ಸ್ವೀಕರಿಸು ತ್ತಾನೆ ಮತ್ತು ತನ್ನ ವಿದ್ಯಾಶಕ್ತಿಯಿಂದ ಅದನ್ನು ತ್ಯಾಗಮಾಡಿ ನಿಷ್ಕ್ರಿಯನಾಗಿ ಸ್ವತ್ಸ್ವರೂಪಮಾತ್ರನಾಗಿ ಇರುತ್ತಾನೆ.॥13॥
(ಶ್ಲೋಕ-14)
ಮೂಲಮ್
ಅಥಾಗ್ರೇ ಋಷಯಃ ಕರ್ಮಾಣೀಹಂತೇಕರ್ಮಹೇತವೇ ।
ಈಹಮಾನೋ ಹಿ ಪುರುಷಃ ಪ್ರಾಯೋನೀಹಾಂ ಪ್ರಪದ್ಯತೇ ॥
ಅನುವಾದ
ಇದರಿಂದಲೇ ಋಷಿ-ಮುನಿಗಳು ನೈಷ್ಕರ್ಮ್ಯಸ್ಥಿತಿಯನ್ನು ಅಂದರೆ ಬ್ರಹ್ಮನಲ್ಲಿ ಏಕತ್ವವನ್ನೇ ಹೊಂದಲು ಮೊದಲಿಗೆ ಕರ್ಮಯೋಗವನ್ನು ಅನುಷ್ಠಾನ ಮಾಡುತ್ತಾರೆ. ಸಾಮಾನ್ಯ ವಾಗಿ ಕರ್ಮಮಾಡುವವನೇ ಕೊನೆಗೆ ನಿಷ್ಕ್ರಿಯರಾಗಿ ಕರ್ಮ ಗಳಿಂದ ಬಿಡುಗಡೆಹೊಂದುವನು. ॥14॥
(ಶ್ಲೋಕ-15)
ಮೂಲಮ್
ಈಹತೇ ಭಗವಾನೀಶೋ ನ ಹಿ ತತ್ರ ವಿಷಜ್ಜತೇ ।
ಆತ್ಮಲಾಭೇನ ಪೂರ್ಣಾರ್ಥೋ ನಾವಸೀದಂತಿ ಯೇನು ತಮ್ ॥
ಅನುವಾದ
ಸರ್ವಶಕ್ತನಾದ ಭಗವಂತನೂ ಕೂಡ ಕರ್ಮಗಳನ್ನು ಮಾಡುತ್ತಾನೆ. ಆದರೆ ಅವನು ಆತ್ಮಲಾಭದಿಂದ ಪೂರ್ಣಕಾಮನಾದ್ದರಿಂದ ಆ ಕರ್ಮಗಳಲ್ಲಿ ಆಸಕ್ತನಾಗಿರುವುದಿಲ್ಲ. ಆದ್ದರಿಂದ ಅವನನ್ನೇ ಅನುಸರಿಸುತ್ತಾ ಅನಾಸಕ್ತರಾಗಿ ಕರ್ಮಮಾಡುವವರೇ ಕರ್ಮ ಬಂಧನದಿಂದ ಮುಕ್ತರಾಗಿಯೇ ಇರುತ್ತಾರೆ. ॥15॥
(ಶ್ಲೋಕ-16)
ಮೂಲಮ್
ತಮೀಹಮಾನಂ ನಿರಹಂಕೃತಂ ಬುಧಂ
ನಿರಾಶಿಷಂ ಪೂರ್ಣಮನನ್ಯಚೋದಿತಮ್ ।
ನೃನ್ಶಿಕ್ಷಯಂತಂ ನಿಜವರ್ತ್ಮಸಂಸ್ಥಿತಂ
ಪ್ರಭುಂ ಪ್ರಪದ್ಯೇಖಿಲಧರ್ಮಭಾವನಮ್ ॥
ಅನುವಾದ
ಭಗವಂತನು ಜ್ಞಾನಸ್ವರೂಪನಾದ್ದರಿಂದ ಅವನಲ್ಲಿ ಅಹಂಕಾರ ಲವಲೇಶವೂ ಇಲ್ಲ. ಅವನು ಪರಿಪೂರ್ಣನಾದ್ದರಿಂದ ಅವನಿಗೆ ಯಾವುದೇ ವಸ್ತುವಿನ ಕಾಮನೆಯಿಲ್ಲ. ಅವನು ಯಾರ ಪ್ರೇರಣೆಯೂ ಇಲ್ಲದೆ ಸ್ವೇಚ್ಛೆಯಿಂದ ಕರ್ಮಮಾಡುತ್ತಾನೆ. ಅವನು ತಾನೇ ನಿರ್ಮಿಸಿದ ಮರ್ಯಾದೆಯಲ್ಲಿ ನೆಲೆಸಿ ತನ್ನ ಕರ್ಮಗಳ ಮೂಲಕ ಮನುಷ್ಯರಿಗೆ ಶಿಕ್ಷಣವನ್ನು ನೀಡುತ್ತಿರು ವನು. ಅವನೇ ಸಮಸ್ತ ಧರ್ಮಗಳ ಪ್ರವರ್ತಕನೂ, ಅವು ಗಳಿಗೆ ಜೀವನದಾತೃವೂ ಆಗಿದ್ದಾನೆ. ಅಂತಹ ಪ್ರಭುವಿಗೆ ನಾನು ಶರಣು ಹೊಂದುತ್ತೇನೆ. ॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಮಂತ್ರೋಪನಿಷದಂ ವ್ಯಾಹರಂತಂ ಸಮಾಹಿತಮ್ ।
ದೃಷ್ಟ್ವಾಸುರಾ ಯಾತುಧಾನಾ ಜಗ್ಧುಮಭ್ಯದ್ರವನ್ ಕ್ಷುಧಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಒಮ್ಮೆ ಸ್ವಾಯಂಭುವಮನುವು ಏಕಾಗ್ರತೆಯಿಂದ ಈ ಮಂತ್ರಮಯ ಉಪನಿಷತ್ ಸ್ವರೂಪವಾದ ಶ್ರುತಿಯನ್ನು ಪಾರಾಯಣೆ ಮಾಡುತ್ತಾ ಸಮಾಧಿಯಲ್ಲಿ ಇದ್ದುದನ್ನು ಕಂಡು ಅಸುರರೂ ಮತ್ತು ರಾಕ್ಷಸರು ಅವನನ್ನು ತಿಂದು ಹಾಕುವುದಕ್ಕಾಗಿ ಆಕ್ರಮಿಸಿದರು. ॥17॥
(ಶ್ಲೋಕ-18)
ಮೂಲಮ್
ತಾಂಸ್ತಥಾವಸಿತಾನ್ವೀಕ್ಷ್ಯ ಯಜ್ಞಃ ಸರ್ವಗತೋ ಹರಿಃ ।
ಯಾಮೈಃ ಪರಿವೃತೋ ದೇವೈರ್ಹತ್ವಾಶಾಸತಿವಿಷ್ಟಪಮ್ ॥
ಅನುವಾದ
ಇದನ್ನು ನೋಡಿದ ಅಂತರ್ಯಾಮಿ ಭಗವಾನ್ ಯಜ್ಞಪುರುಷನು ತನ್ನ ಪುತ್ರರಾದ ಯಾಮನೆಂಬ ದೇವತೆಗಳೊಂದಿಗೆ ಅಲ್ಲಿಗೆ ಆಗಮಿಸಿದನು. ಅವನು ತಿಂದುಹಾಕಲು ಹವಣಿಸುತ್ತಿರುವ ಅಸುರರನ್ನು ಸಂಹರಿಸಿದನು. ಮತ್ತೆ ಅವನು ಇಂದ್ರಪದದಲ್ಲಿ ನೆಲೆಗೊಂಡು ಸ್ವರ್ಗವನ್ನು ಆಳತೊಡಗಿದನು. ॥18॥
(ಶ್ಲೋಕ-19)
ಮೂಲಮ್
ಸ್ವಾರೋಚಿಷೋ ದ್ವಿತೀಯಸ್ತು ಮನುರಗ್ನೇಃ ಸುತೋಭವತ್ ।
ದ್ಯುಮತ್ಸುಷೇಣರೋಚಿಷ್ಮತ್ಪ್ರಮುಖಾಸ್ತಸ್ಯ ಚಾತ್ಮಜಾಃ ॥
ಅನುವಾದ
ಪರೀಕ್ಷಿತನೇ! ಸ್ವಾರೋಚಿಷನೆಂಬವನು ಎರಡನೆಯ ಮನುವು. ಅವನು ಅಗ್ನಿಯ ಪುತ್ರನಾಗಿದ್ದನು. ಅವನಿಗೆ ದ್ಯುಮಾನ್, ಸುಷೇಣ ಮತ್ತು ರೋಚಿಷ್ಮಾನ್ ಮುಂತಾದ ಪುತ್ರರಿದ್ದರು. ॥19॥
(ಶ್ಲೋಕ-20)
ಮೂಲಮ್
ತತ್ರೇಂದ್ರೋ ರೋಚನಸ್ತ್ವಾಸೀದ್ದೇವಾಶ್ಚ ತುಷಿತಾದಯಃ ।
ಊರ್ಜಸ್ತಂಭಾದಯಃ ಸಪ್ತ ಋಷಯೋ ಬ್ರಹ್ಮವಾದಿನಃ ॥
ಅನುವಾದ
ಆ ಮನ್ವಂತರದಲ್ಲಿ ರೋಚನನೆಂಬ ಇಂದ್ರನು ಇದ್ದನು. ತುಷಿತ ಮುಂತಾದ ದೇವತಾಗಣವು ಪ್ರಧಾನರಾಗಿದ್ದರು. ಊರ್ಜಸ್ತಂಭ ಮುಂತಾದವರು ವೇದ ವಾದಿಗಳಾದ ಸಪ್ತರ್ಷಿಗಳಾಗಿದ್ದರು. ॥20॥
(ಶ್ಲೋಕ-21)
ಮೂಲಮ್
ಋಷೇಸ್ತು ವೇದಶಿರಸಸ್ತುಷಿತಾ ನಾಮ ಪತ್ನ್ಯಭೂತ್ ।
ತಸ್ಯಾಂ ಜಜ್ಞೇ ತತೋ ದೇವೋ ವಿಭುರಿತ್ಯಭಿವಿಶ್ರುತಃ ॥
ಅನುವಾದ
ಆ ಮನ್ವಂತರದಲ್ಲಿ ವೇದಶಿರಾ ಎಂಬ ಋಷಿಯ ಪತ್ನಿ ತುಷಿತೆ ಎಂಬವಳಾಗಿದ್ದಳು. ಅವಳ ಗರ್ಭದಲ್ಲಿ ಭಗವಂತನು ಅವತರಿಸಿ ವಿಭು ಎಂಬ ನಾಮದಿಂದ ಪ್ರಸಿದ್ಧನಾದನು. ॥21॥
(ಶ್ಲೋಕ-22)
ಮೂಲಮ್
ಅಷ್ಟಾಶೀತಿಸಹಸ್ರಾಣಿ ಮುನಯೋ ಯೇ ಧೃತವ್ರತಾಃ ।
ಅನ್ವಶಿಕ್ಷನ್ವ್ರತಂ ತಸ್ಯ ಕೌಮಾರಬ್ರಹ್ಮಚಾರಿಣಃ ॥
ಅನುವಾದ
ಅವನು ನೈಷ್ಠಿಕ ಬ್ರಹ್ಮಚಾರಿಯಾಗಿದ್ದನು. ಅವನ ಆಚರಣೆಯಿಂದಲೇ ಶಿಕ್ಷಣಪಡೆದು ಎಂಭತ್ತೆಂಟುಸಾವಿರ ಮಂದಿ ವ್ರತನಿಷ್ಠ ಋಷಿಗಳೂ ಬ್ರಹ್ಮಚರ್ಯವನ್ನು ಪಾಲಿಸಿದರು. ॥22॥
(ಶ್ಲೋಕ-23)
ಮೂಲಮ್
ತೃತೀಯ ಉತ್ತಮೋ ನಾಮ ಪ್ರಿಯವ್ರತಸುತೋ ಮನುಃ ।
ಪವನಃ ಸೃಂಜಯೋ ಯಜ್ಞಹೋತ್ರಾದ್ಯಾಸ್ತತ್ಸುತಾ ನೃಪ ॥
ಅನುವಾದ
ಉತ್ತಮನೆಂಬವನು ಮೂರನೆಯ ಮನುವಾಗಿದ್ದಾನೆ. ಅವನು ಪ್ರಿಯವ್ರತನ ಪುತ್ರನಾಗಿದ್ದನು. ಅವನಿಗೆ ಪವನ, ಸೃಂಜಯ, ಯಜ್ಞಹೋತ್ರ ಮುಂತಾದ ಪುತ್ರರಿದ್ದರು. ॥23॥
(ಶ್ಲೋಕ-24)
ಮೂಲಮ್
ವಸಿಷ್ಠ ತನಯಾಃ ಸಪ್ತ ಋಷಯಃ ಪ್ರಮದಾದಯಃ ।
ಸತ್ಯಾ ವೇದಶ್ರುತಾ ಭದ್ರಾ ದೇವಾ ಇಂದ್ರಸ್ತು ಸತ್ಯಜಿತ್ ॥
ಅನುವಾದ
ಆ ಮನ್ವಂತರದಲ್ಲಿ ವಸಿಷ್ಠರ ಪುತ್ರರಾದ ಪ್ರಮದರೇ ಮುಂತಾದ ಏಳುಮಂದಿ ಸಪ್ತರ್ಷಿಗಳಾಗಿದ್ದರು. ಸತ್ಯ, ವೇದ ಶ್ರುತ ಮತ್ತು ಭದ್ರ ಎಂಬ ದೇವತೆಗಳ ಗಣಗಳು ಮುಖ್ಯರಾಗಿದ್ದರು ಹಾಗೂ ಸತ್ಯಜಿತ್ನೆಂಬ ಇಂದ್ರನಿದ್ದನು.॥24॥
(ಶ್ಲೋಕ-25)
ಮೂಲಮ್
ಧರ್ಮಸ್ಯ ಸೂನೃತಾಯಾಂ ತು ಭಗವಾನ್ಪುರುಷೋತ್ತಮಃ ।
ಸತ್ಯಸೇನ ಇತಿ ಖ್ಯಾತೋ ಜಾತಃ ಸತ್ಯವ್ರತೈಃ ಸಹ ॥
ಅನುವಾದ
ಆಗ ಧರ್ಮನ ಪತ್ನಿಯಾದ ಸೂನೃತಾ ದೇವಿಯಲ್ಲಿ ಭಗವಾನ್ ಪುರುಷೋತ್ತಮನು ಸತ್ಯಸೇನ ಎಂಬ ಹೆಸರಿ ನಿಂದ ಅವತರಿಸಿದ್ದನು. ಅವನೊಂದಿಗೆ ಸತ್ಯವ್ರತರೆಂಬ ದೇವ ಗಣಗಳೂ ಇದ್ದವು. ॥25॥
(ಶ್ಲೋಕ-26)
ಮೂಲಮ್
ಸೋನೃತವ್ರತದುಃಶೀಲಾನಸತೋ ಯಕ್ಷರಾಕ್ಷಸಾನ್ ।
ಭೂತದ್ರುಹೋ ಭೂತಗಣಾಂಸ್ತ್ವವಧೀತ್ಸತ್ಯಜಿತ್ಸಖಃ ॥
ಅನುವಾದ
ಆ ಸಮಯದ ಸತ್ಯಜಿತ ಇಂದ್ರನ ಸಖನಾಗಿ ಭಗವಂತನು ಅಸತ್ಯಪರಾಯಣರೂ, ದುಃಶೀಲರೂ, ದುಷ್ಟರೂ ಆದ ಯಕ್ಷ-ರಾಕ್ಷಸರನ್ನು ಮತ್ತು ಜೀವಿಗಳ ದ್ರೋಹಿಗಳಾದ ಭೂತಗಣಗಳನ್ನು ಸಂಹಾರ ಮಾಡಿದನು. ॥26॥
(ಶ್ಲೋಕ-27)
ಮೂಲಮ್
ಚತುರ್ಥ ಉತ್ತಮಭ್ರಾತಾ ಮನುರ್ನಾಮ್ನಾ ಚ ತಾಮಸಃ ।
ಪೃಥುಃ ಖ್ಯಾತಿರ್ನರಃ ಕೇತುರಿತ್ಯಾದ್ಯಾ ದಶ ತತ್ಸುತಾಃ ॥
ಅನುವಾದ
ತಾಮಸ ಮನುವೇ ನಾಲ್ಕನೆಯವನು. ಈತನು ಮೂರನೆಯ ಮನು ಉತ್ತಮನ ಸ್ವಂತ ಸೋದರನು. ಇವನಿಗೆ ಪೃಥು, ಖ್ಯಾತಿ, ನರ, ಕೇತು ಮುಂತಾದ ಹತ್ತು ಪುತ್ರರಿದ್ದರು. ॥27॥
(ಶ್ಲೋಕ-28)
ಮೂಲಮ್
ಸತ್ಯಕಾ ಹರಯೋ ವೀರಾ ದೇವಾಸಿಶಿಖ ಈಶ್ವರಃ ।
ಜ್ಯೋತಿರ್ಧಾಮಾದಯಃ ಸಪ್ತ ಋಷಯಸ್ತಾಮಸೇಂತರೇ ॥
ಅನುವಾದ
ಸತ್ಯಕ, ಹರಿ ಮತ್ತು ವೀರರೆಂಬ ದೇವತೆಗಳ ಪ್ರಧಾನಗಣಗಳಿದ್ದವು. ಇಂದ್ರನ ಹೆಸರು ತ್ರಿಶಿಖ ಎಂದಿತ್ತು. ಆ ಮನ್ವಂತರದಲ್ಲಿ ಜ್ಯೋತಿರ್ಧಾಮರೆಂಬ ಸಪ್ತರ್ಷಿಗಳಿದ್ದರು. ॥28॥
(ಶ್ಲೋಕ-29)
ಮೂಲಮ್
ದೇವಾ ವೈಧೃತಯೋ ನಾಮ ವಿಧೃತೇಸ್ತನಯಾ ನೃಪ ।
ನಷ್ಟಾಃ ಕಾಲೇನ ಯೈರ್ವೇದಾ ವಿಧೃತಾಃ ಸ್ವೇನ ತೇಜಸಾ ॥
ಅನುವಾದ
ಪರೀಕ್ಷಿತನೇ! ಆ ತಾಮಸ ವೆಂಬ ಮನ್ವಂತರದಲ್ಲಿ ವಿಧೃತಿಯ ಪುತ್ರ, ವೆಧೃತಿ ಎಂಬ ಇತರ ಇನ್ನೂ ಕೆಲವರು ದೇವತೆಗಳಾದರು. ಇವರು ಕಾಲ ಗತಿಯಿಂದ ನಷ್ಟಪ್ರಾಯವಾದ ವೇದಗಳನ್ನು ತಮ್ಮ ಶಕ್ತಿ ಯಿಂದ ಕಾಪಾಡಿದ್ದರು. ಅದಕ್ಕಾಗಿ ಇವರು ವೈಧೃತಿ ಎನಿಸಿದರು. ॥29॥
(ಶ್ಲೋಕ-30)
ಮೂಲಮ್
ತತ್ರಾಪಿ ಜಜ್ಞೇ ಭಗವಾನ್ಹರಿಣ್ಯಾಂ ಹರಿಮೇಧಸಃ ।
ಹರಿರಿತ್ಯಾಹೃತೋ ಯೇನ ಗಜೇಂದ್ರೋ ಮೋಚಿತೋ ಗ್ರಹಾತ್ ॥
ಅನುವಾದ
ಈ ಮನ್ವಂತರದಲ್ಲಿ ಹರಿಮೇಧಾ ಋಷಿಯ ಹರಿಣಿ ಎಂಬ ಹೆಸರಿನ ಪತ್ನಿಯಲ್ಲಿ ಹರಿಯಾಗಿ ಭಗವಂತನು ಅವತರಿಸಿದನು. ಇದೇ ಮನ್ವಂತರದಲ್ಲಿ ಅವನು ಗಜೇಂದ್ರನನ್ನು ಮೊಸಳೆಯಿಂದ ರಕ್ಷಿಸಿದ್ದನು. ॥30॥
(ಶ್ಲೋಕ-31)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಬಾದರಾಯಣ ಏತತ್ತೇ ಶ್ರೋತುಮಿಚ್ಛಾಮಹೇ ವಯಮ್ ।
ಹರಿರ್ಯಥಾ ಗಜಪತಿಂ ಗ್ರಾಹಗ್ರಸ್ತಮಮೂಮುಚತ್ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಮುನಿವರ್ಯರೇ! ಭಗವಂತನು ಮೊಸಳೆಯ ಹಿಡಿತದಿಂದ ಗಜೇಂದ್ರನನ್ನು ಹೇಗೆ ಕಾಪಾಡಿದನು? ಇದನ್ನು ನಿಮ್ಮಿಂದ ಕೇಳಲು ನಾವು ಬಯಸುತ್ತೇವೆ. ॥31॥
(ಶ್ಲೋಕ-32)
ಮೂಲಮ್
ತತ್ಕಥಾಸು ಮಹತ್ಪುಣ್ಯಂ ಧನ್ಯಂ ಸ್ವಸ್ತ್ಯಯನಂ ಶುಭಮ್ ।
ಯತ್ರ ಯತ್ರೋತ್ತಮಶ್ಲೋಕೋ ಭಗವಾನ್ಗೀಯತೇ ಹರಿಃ ॥
ಅನುವಾದ
ಎಲ್ಲ ಕಥೆಗಳಲ್ಲಿ ಮಹಾತ್ಮರ ಮೂಲಕ ಹಾಡಲ್ಪಟ್ಟ ಭಗವಾನ್ ಶ್ರೀಹರಿಯ ಪವಿತ್ರಕೀರ್ತಿಯ ವರ್ಣನೆಗಳೇ ಪರಮ ಪುಣ್ಯಮಯವೂ, ಪ್ರಶಂಸ ನೀಯವೂ, ಮಂಗಳಕರವೂ, ಶುಭವೂ ಆಗಿವೆ. ॥32॥
(ಶ್ಲೋಕ-33)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಪರೀಕ್ಷಿತೈವಂ ಸ ತು ಬಾದರಾಯಣಿಃ
ಪ್ರಾಯೋಪವಿಷ್ಟೇನ ಕಥಾಸು ಚೋದಿತಃ ।
ಉವಾಚ ವಿಪ್ರಾಃ ಪ್ರತಿನಂದ್ಯ ಪಾರ್ಥಿವಂ
ಮುದಾ ಮುನೀನಾಂ ಸದಸಿ ಸ್ಮ ಶೃಣ್ವತಾಮ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳೇ! ಪರೀಕ್ಷಿದ್ರಾಜನು ಆಮರಣ ಉಪವಾಸಕ್ಕಾಗಿ ಕುಳಿತಿದ್ದನಲ್ಲ. ಅವನು ಶ್ರೀಶುಕಮಹಾಮುನಿಗಳನ್ನು ಹೀಗೆ ಕಥೆಹೇಳಲು ಪ್ರೇರೇಪಿಸಿದಾಗ ಅವರು ತುಂಬಾ ಆನಂದಿತ ರಾಗಿ, ಪ್ರೇಮದಿಂದ ರಾಜನನ್ನು ಅಭಿನಂದಿಸಿ ಮುನಿಗಳ ಆ ತುಂಬಿದ ಸಭೆಯಲ್ಲಿ ಹೀಗೆ ಹೇಳತೊಡಗಿರು. ॥33॥
ಅನುವಾದ (ಸಮಾಪ್ತಿಃ)
ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಅಷ್ಟಮ ಸ್ಕಂಧೇ ಮನ್ವಂತರಾನುಚರಿತೇ ಪ್ರಥಮೋಽಧ್ಯಾಯಃ ॥1॥