[ಹದಿನೈದನೆಯ ಅಧ್ಯಾಯ]
ಭಾಗಸೂಚನಾ
ಗೃಹಸ್ಥರಿಗಾಗಿ ಮೋಕ್ಷಧರ್ಮದ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಕರ್ಮನಿಷ್ಠಾ ದ್ವಿಜಾಃ ಕೇಚಿತ್ತಪೋನಿಷ್ಠಾ ನೃಪಾಪರೇ ।
ಸ್ವಾಧ್ಯಾಯೇನ್ಯೇ ಪ್ರವಚನೇ ಯೇ ಕೇಚಿಜ್ಜ್ಞಾನಯೋಗಯೋಃ ॥
ಅನುವಾದ
ನಾರದರು ಹೇಳುತ್ತಾರೆ — ಯುಧಿಷ್ಠಿರನೇ! ಕೆಲವು ದ್ವಿಜರ ನಿಷ್ಠೆ ಕರ್ಮದಲ್ಲಾದರೆ, ಕೆಲವರಲ್ಲಿ ತಪಸ್ಸಿನಲ್ಲಿ, ಕೆಲವರಲ್ಲಿ ವೇದಗಳ ಅಧ್ಯಯನ-ಪ್ರವಚನಗಳಲ್ಲಿ, ಕೆಲವರಲ್ಲಿ ಆತ್ಮಜ್ಞಾನ ಸಂಪಾದನೆಯಲ್ಲಿ, ಕೆಲವರಲ್ಲಿ ಯೋಗದಲ್ಲಿ ಇರುತ್ತದೆ. ॥1॥
(ಶ್ಲೋಕ-2)
ಮೂಲಮ್
ಜ್ಞಾನನಿಷ್ಠಾಯ ದೇಯಾನಿ ಕವ್ಯಾನ್ಯಾನಂತ್ಯಮಿಚ್ಛತಾ ।
ದೈವೇ ಚ ತದಭಾವೇ ಸ್ಯಾದಿತರೇಭ್ಯೋ ಯಥಾರ್ಹತಃ ॥
ಅನುವಾದ
ಶ್ರಾದ್ಧ ಅಥವಾ ದೇವರ ಪೂಜೆಗಳೇ ಮುಂತಾದ ಕರ್ಮಗಳ ಅಕ್ಷಯ ಫಲವನ್ನು ಬಯಸುವ ಗೃಹಸ್ಥನಾದವನು ಜ್ಞಾನನಿಷ್ಠ ದ್ವಿಜನಿಗೆ ಹವ್ಯ-ಕವ್ಯಗಳನ್ನು ಸಮರ್ಪಿಸಬೇಕು. ಅವರು ಸಿಗದಿದ್ದಾಗ ಯೋಗೀ, ಪ್ರವಚನಕಾರ ಮುಂತಾದವರಿಗೆ ಯಥಾಯೋಗ್ಯ, ಯಥಾಕ್ರಮದಲ್ಲಿ ದಾನಮಾಡಬೇಕು. ॥2॥
(ಶ್ಲೋಕ-3)
ಮೂಲಮ್
ದ್ವೌದೈವೇ ಪಿತೃಕಾರ್ಯೇ ತ್ರೀನೇಕೈಕಮುಭಯತ್ರ ವಾ ।
ಭೋಜಯೇತ್ಸುಸಮೃದ್ಧೋಪಿ ಶ್ರಾದ್ಧೇ ಕುರ್ಯಾನ್ನ ವಿಸ್ತರಮ್ ॥
ಅನುವಾದ
ದೇವತಾ ಕಾರ್ಯದಲ್ಲಿ ಇಬ್ಬರು ಮತ್ತು ಪಿತೃಕಾರ್ಯದಲ್ಲಿ ಮೂರು ಅಥವಾ ಎರಡರಲ್ಲಿಯೂ ಒಂದೊಂದು ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು. ತುಂಬಾ ಶ್ರೀಮಂತನಾಗಿದ್ದರೂ ಶ್ರಾದ್ಧ ಕರ್ಮದಲ್ಲಿ ಹೆಚ್ಚು ವಿಸ್ತಾರವನ್ನು ಮಾಡಬಾರದು. ॥3॥
(ಶ್ಲೋಕ-4)
ಮೂಲಮ್
ದೇಶಕಾಲೋಚಿತಶ್ರದ್ಧಾದ್ರವ್ಯಪಾತ್ರಾರ್ಹಣಾನಿ ಚ ।
ಸಮ್ಯಗ್ಭವಂತಿ ನೈತಾನಿ ವಿಸ್ತರಾತ್ಸ್ವಜನಾರ್ಪಣಾತ್ ॥
ಅನುವಾದ
ಏಕೆಂದರೆ, ನೆಂಟರಿಗೆ, ಸ್ವಜನರಿಗೆ ಕೊಡುವುದರಿಂದ, ಶ್ರಾದ್ಧವಿಸ್ತಾರ ಮಾಡುವುದರಿಂದ ದೇಶ-ಕಾಲೋಚಿತ ಶ್ರದ್ಧೆ, ಪದಾರ್ಥ, ಪಾತ್ರ ಮತ್ತು ಪೂಜೆ ಸರಿಯಾಗಿ ನಡೆಯುವುದಿಲ್ಲ. ॥4॥
(ಶ್ಲೋಕ-5)
ಮೂಲಮ್
ದೇಶೇ ಕಾಲೇ ಚ ಸಂಪ್ರಾಪ್ತೇ ಮುನ್ಯನ್ನಂ ಹರಿದೈವತಮ್ ।
ಶ್ರದ್ಧಯಾ ವಿಧಿವತ್ಪಾತ್ರೇ ನ್ಯಸ್ತಂ ಕಾಮಧುಗಕ್ಷಯಮ್ ॥
ಅನುವಾದ
ಸರಿಯಾದ ದೇಶ-ಕಾಲಗಳು ಕೂಡಿ ಬಂದಾಗ ಋಷಿ-ಮುನಿಗಳಿಗೆ ಭೋಜನಯೋಗ್ಯವಾದ ಹವಿಷ್ಯಾನ್ನವನ್ನು ಭಗವಂತನಿಗೆ ನಿವೇದನೆ ಮಾಡಿ, ಶ್ರದ್ಧೆಯಿಂದ ವಿಧಿವತ್ತಾಗಿ ಸತ್ಪಾತ್ರರಿಗೆ ಕೊಡಬೇಕು. ಅದು ಸಮಸ್ತ ಕಾಮನೆಗಳನ್ನು ಪೂರ್ಣಗೊಳಿಸುವಂತಹುದು ಮತ್ತು ಅಕ್ಷಯವಾಗುತ್ತದೆ. ॥5॥
(ಶ್ಲೋಕ-6)
ಮೂಲಮ್
ದೇವರ್ಷಿಪಿತೃಭೂತೇಭ್ಯ ಆತ್ಮನೇ ಸ್ವಜನಾಯ ಚ ।
ಅನ್ನಂ ಸಂವಿಭಜನ್ಪಶ್ಯೇತ್ಸರ್ವಂ ತತ್ಪುರುಷಾತ್ಮಕಮ್ ॥
ಅನುವಾದ
ದೇವತೆಗಳಿಗೆ, ಋಷಿಗಳಿಗೆ, ಪಿತೃಗಳಿಗೆ, ಬೇರೆ ಪ್ರಾಣಿಗಳಿಗೆ, ಸ್ವಜನರಿಗೆ ಅನ್ನವನ್ನು ನೀಡುವಾಗ ಮತ್ತು ತನಗಾಗಿ ತೆಗೆದಿರಿಸಿದಾಗಲೂ ಅವರೆಲ್ಲರನ್ನೂ ಪರಮಾತ್ಮ ಸ್ವರೂಪರೆಂದೇ ನೋಡಬೇಕು.॥6॥
(ಶ್ಲೋಕ-7)
ಮೂಲಮ್
ನ ದದ್ಯಾದಾಮಿಷಂ ಶ್ರಾದ್ಧೇ ನ ಚಾದ್ಯಾದ್ಧರ್ಮತತ್ತ್ವವಿತ್ ।
ಮುನ್ಯನ್ನೈಃ ಸ್ಯಾತ್ಪರಾ ಪ್ರೀತಿರ್ಯಥಾ ನ ಪಶುಹಿಂಸಯಾ ॥
ಅನುವಾದ
ಧರ್ಮದ ಮರ್ಮವನ್ನು ಅರಿತಿರುವವರು ಶ್ರಾದ್ಧದಲ್ಲಿ ಮಾಂಸವನ್ನು ಅರ್ಪಿಸಬಾರದು ಮತ್ತು ಸ್ವತಃ ತಾನು ಕೂಡ ತಿನ್ನಬಾರದು. ಏಕೆಂದರೆ ಪಿತೃಗಳಿಗೆ, ಋಷಿ-ಮುನಿಗಳಿಗೆ ಯೋಗ್ಯವಾದ ಹವಿಷ್ಯಾನ್ನದಿಂದ ಪ್ರಸನ್ನತೆ ಉಂಟಾಗುವಂತೆ ಪಶು-ಹಿಂಸೆಯಿಂದ ಆಗುವುದಿಲ್ಲ.॥7॥
(ಶ್ಲೋಕ-8)
ಮೂಲಮ್
ನೈತಾದೃಶಃ ಪರೋ ಧರ್ಮೋ ನೃಣಾಂ ಸದ್ಧರ್ಮಮಿಚ್ಛತಾಮ್ ।
ನ್ಯಾಸೋ ದಂಡಸ್ಯ ಭೂತೇಷು ಮನೋವಾಕ್ಕಾಯಜಸ್ಯ ಯಃ ॥
ಅನುವಾದ
ಸದ್ಧರ್ಮವನ್ನು ಪಾಲಿಸಬೇಕೆಂದು ಬಯಸುವ ಜನರಿಗೆ ಯಾವುದೇ ಪ್ರಾಣಿಗೂ ಮನಸ್ಸಿನಿಂದ, ಮಾತಿನಿಂದ, ಶರೀರದಿಂದ ಯಾವ ವಿಧದಿಂದಲೂ ಕಷ್ಟ ಕೊಡಬಾರದು. ಇದರಿಂದ ಮಿಗಿಲಾದ ಬೇರೆ ಯಾವ ಧರ್ಮವು ಇಲ್ಲ.॥8॥
(ಶ್ಲೋಕ-9)
ಮೂಲಮ್
ಏಕೇ ಕರ್ಮಮಯಾನ್ ಯಜ್ಞಾನ್ ಜ್ಞಾನಿನೋ ಯಜ್ಞವಿತ್ತಮಾಃ ।
ಆತ್ಮಸಂಯಮನೇನೀಹಾ ಜುಹ್ವತಿ ಜ್ಞಾನದೀಪಿತೇ ॥
ಅನುವಾದ
ಇದರಿಂದಲೇ ಕೆಲ-ಕೆಲವರು ಯಜ್ಞತತ್ತ್ವವನ್ನು ಬಲ್ಲಜ್ಞಾನಿಗಳು ಜ್ಞಾನದ ಮೂಲಕ ಪ್ರಜ್ವಲಿತ ಆತ್ಮಸಂಯಮವೆಂಬ ಅಗ್ನಿಯಲ್ಲಿ ಈ ಕರ್ಮಮಯ ಯಜ್ಞಗಳನ್ನು ಹೋಮಮಾಡಿ ಬಿಡುತ್ತಾರೆ ಮತ್ತು ಬಾಹ್ಯಕರ್ಮ ಕಲಾಪಗಳಿಂದ ಉಪರತರಾಗುತ್ತಾರೆ. ॥9॥
(ಶ್ಲೋಕ-10)
ಮೂಲಮ್
ದ್ರವ್ಯಯಜ್ಞೈರ್ಯಕ್ಷ್ಯಮಾಣಂ ದೃಷ್ಟ್ವಾ ಭೂತಾನಿ ಬಿಭ್ಯತಿ ।
ಏಷ ಮಾಕರುಣೋ ಹನ್ಯಾದತಜ್ಜ್ಞೋ ಹ್ಯಸುತೃಬ್ಧ್ರುವಮ್ ॥
ಅನುವಾದ
ಯಾರಾದರೂ ಪಶುಬಲಿ ಇತ್ಯಾದಿ ಸಾಮಗ್ರಿಗಳಿಂದ ಯಜ್ಞ ಮಾಡಲು ಬಯಸಿದಾಗ ಎಲ್ಲ ಪ್ರಾಣಿಗಳು ಹೆದರಿಹೋಗುತ್ತವೆ. ಅವುಗಳು ಯೋಚಿಸುತ್ತವೆ ಇವನು ತನ್ನ ಪ್ರಾಣಗಳನ್ನು ಪೋಷಿಸುವ ನಿರ್ದಯೀ ಮೂರ್ಖನು ನಮ್ಮನ್ನು ಖಂಡಿತವಾಗಿ ಕೊಂದು ಬಿಟ್ಟಾನು ಎಂದುಕೊಳ್ಳುವವು. ॥10॥
(ಶ್ಲೋಕ-11)
ಮೂಲಮ್
ತಸ್ಮಾದ್ದೈವೋಪಪನ್ನೇನ ಮುನ್ಯನ್ನೇನಾಪಿ ಧರ್ಮವಿತ್ ।
ಸಂತುಷ್ಟೋಹರಹಃ ಕುರ್ಯಾನ್ನಿತ್ಯನೈಮಿತ್ತಿಕೀಃ ಕ್ರಿಯಾಃ ॥
ಅನುವಾದ
ಅದಕ್ಕಾಗಿ ಧರ್ಮಜ್ಞ ನಾದವನು ಪ್ರತಿದಿನವು ಪ್ರಾರಬ್ಧದ ಮೂಲಕ ದೊರೆತ ಮುನಿಜನೋಚಿತವಾದ ಹವಿಷ್ಯಾನ್ನದಿಂದಲೇ ತನ್ನ ನಿತ್ಯ-ನೈಮಿತ್ತಿಕ ಕರ್ಮಗಳನ್ನು ಮಾಡಿ, ಅದರಿಂದಲೇ ಸಂತುಷ್ಟನಾಗಿರುವುದೇ ಉಚಿತವಾಗಿದೆ.॥11॥
(ಶ್ಲೋಕ-12)
ಮೂಲಮ್
ವಿಧರ್ಮಃ ಪರಧರ್ಮಶ್ಚಆಭಾಸ ಉಪಮಾ ಛಲಃ ।
ಅಧರ್ಮಶಾಖಾಃ ಪಂಚೇಮಾಧರ್ಮಜ್ಞೋಧರ್ಮವತ್ತ್ಯಜೇತ್ ॥
ಅನುವಾದ
ವಿಧರ್ಮ, ಪರಧರ್ಮ, ಆಭಾಸ, ಉಪಮೆ ಮತ್ತು ಛಲ ಎಂಬ ಈ ಐದು ಅಧರ್ಮದ ಶಾಖೆಗಳು. ಧರ್ಮಜ್ಞನಾದ ಮನುಷ್ಯನು ಅಧರ್ಮದಂತೆ ಇವುಗಳನ್ನು ತ್ಯಜಿಸಿ ಬಿಡಬೇಕು. ॥12॥
(ಶ್ಲೋಕ-13)
ಮೂಲಮ್
ಧರ್ಮಬಾಧೋ ವಿಧರ್ಮಃ ಸ್ಯಾತ್ಪರಧರ್ಮೋನ್ಯಚೋದಿತಃ ।
ಉಪಧರ್ಮಸ್ತು ಪಾಖಂಡೋ ದಂಭೋ ವಾ ಶಬ್ದಭಿಚ್ಛಲಃ ॥
ಅನುವಾದ
ಯಾವ ಕಾರ್ಯವನ್ನು ಧರ್ಮಬುದ್ಧಿಯಿಂದ ಮಾಡಿದರೂ ತನ್ನ ಧರ್ಮದಲ್ಲಿ ಬಾಧೆ ಉಂಟಾದರೆ ಅದು ‘ವಿಧರ್ಮ’ವಾಗಿದೆ. ಯಾರೋ ಬೇರೆ ಯವರಿಂದ ಇತರರಿಗೆ ಉಪದೇಶಿಸಲ್ಪಟ್ಟ ಧರ್ಮವು ‘ಪರಧರ್ಮ’ವಾಗಿದೆ. ಪಾಷಂಡ ಮತ್ತು ಡಾಂಭಿಕತೆಯನ್ನು ‘ಉಪ ಧರ್ಮ’ ಅಥವಾ ‘ಉಪಮಾ’ ಎಂದು ಹೇಳುತ್ತಾರೆ. ಶಾಸ್ತ್ರ ವಚನಗಳನ್ನು ಬೇರೆ ಪ್ರಕಾರದಿಂದ ಅರ್ಥೈಸುವುದು ‘ಛಲ’ವಾಗಿದೆ. ॥13॥
(ಶ್ಲೋಕ-14)
ಮೂಲಮ್
ಯಸ್ತ್ವಿಚ್ಛಯಾ ಕೃತಃ ಪುಂಭಿರಾಭಾಸೋ ಹ್ಯಾಶ್ರಮಾತ್ಪೃಥಕ್ ।
ಸ್ವಭಾವವಿಹಿತೋ ಧರ್ಮಃ ಕಸ್ಯ ನೇಷ್ಟಃ ಪ್ರಶಾಂತಯೇ ॥
ಅನುವಾದ
ಮನುಷ್ಯನು ತನ್ನ ಆಶ್ರಮಕ್ಕೆ ವಿಪರೀತವಾಗಿ ಸ್ವೇಚ್ಛೆಯಿಂದ ಯಾವುದನ್ನು ಧರ್ಮವೆಂದು ತಿಳಿಯುತ್ತಾನೋ ಅದು ‘ಆಭಾಸ’ವಾಗಿದೆ. ತಮ್ಮ-ತಮ್ಮ ಸ್ವಭಾವಕ್ಕನುಕೂಲವಾದ ವರ್ಣಾಶ್ರಮೋಚಿತ ಧರ್ಮಗಳು ಯಾರಿಗೆ ತಾನೇ ಶಾಂತಿಯನ್ನು ಉಂಟು ಮಾಡುವುದಿಲ್ಲ? ॥14॥
(ಶ್ಲೋಕ-15)
ಮೂಲಮ್
ಧರ್ಮಾರ್ಥಮಪಿ ನೇಹೇತ ಯಾತ್ರಾರ್ಥಂ ವಾಧನೋ ಧನಮ್ ।
ಅನೀಹಾನೀಹಮಾನಸ್ಯ ಮಹಾಹೇರಿವ ವೃತ್ತಿದಾ ॥
ಅನುವಾದ
ಧರ್ಮಾತ್ಮ ಮನುಷ್ಯನು ನಿರ್ಧನನಾಗಿದ್ದರೂ ಧರ್ಮಕ್ಕಾಗಿ ಅಥವಾ ಶರೀರನಿರ್ವಾಹಕ್ಕಾಗಿ, ಹಣವನ್ನು ಗಳಿಸುವ ಪ್ರಯತ್ನ ಮಾಡಬಾರದು. ಏಕೆಂದರೆ, ಯಾವುದೇ ರೀತಿಯ ಪ್ರಯತ್ನ ಮಾಡದೆಯೇ ಹೆಬ್ಬಾವಿನ ಜೀವನ ನಡೆಯುವಂತೆಯೇ ನಿವೃತ್ತಿ ಪರಾಯಣ ಮನುಷ್ಯನ ನಿವೃತ್ತಿಯೇ ಅವನ ಜೀವನ ನಿರ್ವಹಣೆ ಮಾಡುತ್ತದೆ. ॥15॥
(ಶ್ಲೋಕ-16)
ಮೂಲಮ್
ಸಂತುಷ್ಟಸ್ಯ ನಿರೀಹಸ್ಯ ಸ್ವಾತ್ಮಾರಾಮಸ್ಯ ಯತ್ಸುಖಮ್ ।
ಕುತಸ್ತತ್ಕಾಮಲೋಭೇನ ಧಾವತೋರ್ಥೇಹಯಾ ದಿಶಃ ॥
ಅನುವಾದ
ತನ್ನ ಆತ್ಮನಲ್ಲೇ ರಮಿಸುತ್ತಾ ಕರ್ಮರಹಿತನಾಗಿ ಸಂತುಷ್ಟನಾಗಿರುವ ಮನುಷ್ಯನಿಗೆ ಸಿಗುವ ಸುಖವು, ಕಾಮನೆಗಳಿಂದಲೂ, ಲೋಭದಿಂದಲೂ ಹಣಕ್ಕಾಗಿ ಹಂಬಲಿಸುತ್ತಾ ಅಲ್ಲಿ-ಇಲ್ಲಿ ಎಲ್ಲೆಡೆ ಅಲೆಯುತ್ತಿರುವ ಮನುಷ್ಯನಿಗೆ ಹೇಗೆ ತಾನೇ ಸಿಗಬಲ್ಲದು? ॥16॥
(ಶ್ಲೋಕ-17)
ಮೂಲಮ್
ಸದಾ ಸಂತುಷ್ಟಮನಸಃ ಸರ್ವಾಃ ಸುಖಮಯಾ ದಿಶಃ ।
ಶರ್ಕರಾಕಂಟಕಾದಿಭ್ಯೋ ಯಥೋಪಾನತ್ಪದಃ ಶಿವಮ್ ॥
ಅನುವಾದ
ಕಾಲಿಗೆ ಎಕ್ಕಡಗಳನ್ನು ಧರಿಸಿಕೊಂಡು ನಡೆಯುವವನಿಗೆ ಕಲ್ಲು-ಮುಳ್ಳುಗಳ ಯಾವುದೇ ಭಯವು ಇರುವುದಿಲ್ಲ. ಅಂತೆಯೇ ಮನಸ್ಸಿನಲ್ಲಿ ಸಂತೋಷವಿರುವವನಿಗೆ ಎಂದೆಂದಿಗೂ ಮತ್ತು ಎಲ್ಲೆಡೆಗಳಲ್ಲಿಯೂ ಸುಖವೇ ಸುಖವಿದೆ; ದುಃಖವು ಇಲ್ಲವೇ ಇಲ್ಲ. ॥17॥
(ಶ್ಲೋಕ-18)
ಮೂಲಮ್
ಸಂತುಷ್ಟಃ ಕೇನ ವಾ ರಾಜನ್ನ ವರ್ತೆತಾಪಿ ವಾರಿಣಾ ।
ಔಪಸ್ಥ್ಯಜೈಹ್ವ್ಯಕಾರ್ಪಣ್ಯಾದ್ಗೃಹಪಾಲಾಯತೇ ಜನಃ ॥
ಅನುವಾದ
ಯುಧಿಷ್ಠಿರನೇ! ಮನುಷ್ಯನು ಕೇವಲ ನೀರಿನಿಂದಲೇ ಸಂತುಷ್ಟನಾಗಿದ್ದು ತನ್ನ ಜೀವನ ನಿರ್ವಾಹ ಏಕೆ ಮಾಡಿಕೊಳ್ಳುವುದಿಲ್ಲವೋ ತಿಳಿಯದು. ಆದರೆ ರಸನೇಂದ್ರಿಯ ಮತ್ತು ಜನನೇಂದ್ರಿಯಗಳ ಆಸೆಗಳನ್ನು ತೀರಿಸುವ ಅಲ್ಪ ಸುಖಕ್ಕೆ ಒಳಗಾಗಿ ಮನೆಕಾಯುವ ನಾಯಿಯಂತೆ ಆಗುವನು. ॥18॥
(ಶ್ಲೋಕ-19)
ಮೂಲಮ್
ಅಸಂತುಷ್ಟಸ್ಯ ವಿಪ್ರಸ್ಯ ತೇಜೋ ವಿದ್ಯಾ ತಪೋ ಯಶಃ ।
ಸ್ರವಂತೀಂದ್ರಿಯಲೌಲ್ಯೇನ ಜ್ಞಾನಂ ಚೈವಾವಕೀರ್ಯತೇ ॥
ಅನುವಾದ
ಸಂತೋಷಿಯಲ್ಲದ ಬ್ರಾಹ್ಮಣನು ಇಂದ್ರಿಯಗಳ ಲೋಲುಪತೆಯಿಂದ ಅವನ ತೇಜ, ವಿದ್ಯೆ, ತಪಸ್ಸು, ಕೀರ್ತಿ ಇವುಗಳು ಕ್ಷೀಣಿಸಿ ಬಿಡುವುವು ಮತ್ತು ವಿವೇಕವನ್ನು ಕಳೆದುಕೊಳ್ಳುವನು. ॥19॥
(ಶ್ಲೋಕ-20)
ಮೂಲಮ್
ಕಾಮಸ್ಯಾಂತಂ ಚ ಕ್ಷುತ್ತೃಡ್ಭ್ಯಾಂ ಕ್ರೋಧಸ್ಯೈತತ್ಫಲೋದಯಾತ್ ।
ಜನೋ ಯಾತಿ ನ ಲೋಭಸ್ಯ ಜಿತ್ವಾ ಭುಕ್ತ್ವಾ ದಿಶೋ ಭುವಃ ॥
ಅನುವಾದ
ಹಸಿವು, ಬಾಯಾರಿಕೆ ಇಂಗಿಹೋದ ಬಳಿಕ ತಿನ್ನುವ-ಕುಡಿಯುವ ಕಾಮನೆ ಮುಗಿದುಹೋಗುತ್ತದೆ. ಕ್ರೋಧವೂ ತನ್ನ ಕೆಲಸವನ್ನು ಪೂರ್ಣಗೊಳಿಸಿ ಶಾಂತವಾಗುವುದು. ಆದರೆ ಮನುಷ್ಯನು ಪೃಥಿವಿಯ ಎಲ್ಲ ದಿಕ್ಕುಗಳನ್ನು ಗೆದ್ದುಕೊಂಡು, ಭೋಗಿಸಿದರೂ ಅವನ ಲೋಭವು ಕೊನೆಗೊಳ್ಳುವುದಿಲ್ಲ. ॥20॥
(ಶ್ಲೋಕ-21)
ಮೂಲಮ್
ಪಂಡಿತಾ ಬಹವೋ ರಾಜನ್ಬಹುಜ್ಞಾಃ ಸಂಶಯಚ್ಛಿದಃ ।
ಸದಸತ್ಪತಯೋಪ್ಯೇಕೇ ಅಸಂತೋಷಾತ್ಪತಂತ್ಯಧಃ ॥
ಅನುವಾದ
ಅನೇಕ ವಿಷಯಗಳನ್ನು ಬಲ್ಲವನಾಗಿ, ಸಂಶಯಗಳನ್ನು ಸಮಾಧಾನಪಡಿಸಿಕೊಂಡು ಮನಸ್ಸಿನಲ್ಲಿ ಶಾಸ್ತ್ರೋಕ್ತವಾದ ಅರ್ಥವನ್ನು ನಿಶ್ಚಯಿಸಿಕೊಂಡಿರುವವರು, ವಿದ್ವತ್ಸಭೆಗಳ ಅಧ್ಯಕ್ಷರಾದ ದೊಡ್ಡ-ದೊಡ್ಡ ವಿದ್ವಾಂಸರೂ ಕೂಡ ಅಸಂತೋಷದ ಕಾರಣ ಪತನಹೊಂದುವರು. ॥21॥
(ಶ್ಲೋಕ-22)
ಮೂಲಮ್
ಅಸಂಕಲ್ಪಾಜ್ಜಯೇತ್ಕಾಮಂ ಕ್ರೋಧಂ ಕಾಮವಿವರ್ಜನಾತ್ ।
ಅರ್ಥಾನರ್ಥೇಕ್ಷಯಾ ಲೋಭಂ ಭಯಂ ತತ್ತ್ವಾವಮರ್ಶನಾತ್ ॥
ಅನುವಾದ
ಧರ್ಮನಂದನಾ! ಸಂಕಲ್ಪಗಳ ಪರಿತ್ಯಾಗದಿಂದ ಕಾಮವನ್ನೂ, ಕಾಮನೆಗಳ ತ್ಯಾಗದಿಂದ ಕ್ರೋಧವನ್ನೂ, ಸಂಸಾರಿಗಳು ಹೇಳುವ ‘ಅರ್ಥ’ವನ್ನು ಅನರ್ಥವೆಂದು ತಿಳಿದುಕೊಂಡು ಲೋಭವನ್ನೂ ಮತ್ತು ತತ್ತ್ವದ ವಿಚಾರದಿಂದ ಭಯವನ್ನೂ ಗೆದ್ದುಕೊಳ್ಳಬೇಕು. ॥22॥
(ಶ್ಲೋಕ-23)
ಮೂಲಮ್
ಆನ್ವೀಕ್ಷಿಕ್ಯಾ ಶೋಕಮೋಹೌ ದಂಭಂ ಮಹದುಪಾಸಯಾ ।
ಯೋಗಾಂತರಾಯಾನ್ಮೌನೇನ ಹಿಂಸಾಂ ಕಾಯಾದ್ಯನೀಹಯಾ ॥
ಅನುವಾದ
ಅಧ್ಯಾತ್ಮವಿದ್ಯೆಯಿಂದ ಶೋಕ-ಮೋಹಗಳನ್ನೂ ಸಂತರ ಉಪಾಸನೆಯಿಂದ ದಂಭವನ್ನೂ, ಮೌನದಿಂದ ಯೋಗದ ವಿಘ್ನಗಳನ್ನೂ ಮತ್ತು ಶರೀರ-ಪ್ರಾಣ ಮುಂತಾದವುಗಳನ್ನು ನಿಶ್ಚೇಷ್ಟಗೊಳಿಸಿ ಹಿಂಸೆಯನ್ನು ಜಯಿಸಿಕೊಳ್ಳಬೇಕು. ॥23॥
(ಶ್ಲೋಕ-24)
ಮೂಲಮ್
ಕೃಪಯಾ ಭೂತಜಂ ದುಃಖಂ ದೈವಂ ಜಹ್ಯಾತ್ಸಮಾಧಿನಾ ।
ಆತ್ಮಜಂ ಯೋಗವೀರ್ಯೇಣ ನಿದ್ರಾಂ ಸತ್ತ್ವನಿಷೇವಯಾ ॥
ಅನುವಾದ
ಆಧಿಭೌತಿಕ ದುಃಖವನ್ನು ದಯೆಯ ಮೂಲಕ, ಆಧಿದೈವಿಕ ವೇದನೆಯನ್ನು ಸಮಾಧಿಯಿಂದ, ಆಧ್ಯಾತ್ಮಿಕ ದುಃಖವನ್ನು ಯೋಗ ಬಲದಿಂದ ಹಾಗೂ ನಿದ್ರೆಯನ್ನು ಸಾತ್ವಿಕ ಭೋಜನ, ಸ್ಥಾನ, ಸಂಗ ಮುಂತಾದವುಗಳ ಸೇವನೆಯಿಂದ ಗೆದ್ದುಕೊಳ್ಳಬೇಕು. ॥24॥
(ಶ್ಲೋಕ-25)
ಮೂಲಮ್
ರಜಸ್ತಮಶ್ಚ ಸತ್ತ್ವೇನ ಸತ್ತ್ವಂ ಚೋಪಶಮೇನ ಚ ।
ಏತತ್ಸರ್ವಂ ಗುರೌ ಭಕ್ತ್ಯಾ ಪುರುಷೋ ಹ್ಯಂಜಸಾ ಜಯೇತ್ ॥
ಅನುವಾದ
ಸತ್ತ್ವಗುಣದಿಂದ ರಜೋಗುಣ-ತಮೋಗುಣಗಳನ್ನು ಮತ್ತು ಉಪಶಾಂತಿಯ ಮೂಲಕ ಸತ್ತ್ವಗುಣದ ಮೇಲೆ ವಿಜಯವನ್ನು ಪಡೆಯಬೇಕು. ಶ್ರೀಗುರುಗಳಲ್ಲಿರುವ ಭಕ್ತಿಯಿಂದ ಸಾಧಕನು ಇವೆಲ್ಲ ದೋಷಗಳ ಮೇಲೆ ಸುಲಭವಾಗಿ ವಿಜಯವನ್ನು ಪಡೆಯಬಲ್ಲನು. ॥25॥
(ಶ್ಲೋಕ-26)
ಮೂಲಮ್
ಯಸ್ಯ ಸಾಕ್ಷಾದ್ಭಗವತಿ ಜ್ಞಾನದೀಪಪ್ರದೇ ಗುರೌ ।
ಮರ್ತ್ಯಾಸದ್ಧೀಃ ಶ್ರುತಂ ತಸ್ಯ ಸರ್ವಂ ಕುಂಜರಶೌಚವತ್ ॥
ಅನುವಾದ
ಹೃದಯದಲ್ಲಿ ಜ್ಞಾನದ ದೀಪವನ್ನು ಹಚ್ಚುವ ಗುರುದೇವನು ಸಾಕ್ಷಾತ್ ಭಗವಂತನೇ ಆಗಿರುವನು. ಅವರನ್ನು ಮನುಷ್ಯನೆಂದು ತಿಳಿಯುವ ದುರ್ಬುದ್ಧಿಯುಳ್ಳ ಮನುಷ್ಯನ ಸಮಸ್ತ ಶಾಸ್ತ್ರಶ್ರವಣವು ಗಜಸ್ನಾನದಂತೆ ವ್ಯರ್ಥವೇ ಆಗುವುದು. ॥26॥
(ಶ್ಲೋಕ-27)
ಮೂಲಮ್
ಏಷ ವೈ ಭಗವಾನ್ಸಾಕ್ಷಾತ್ಪ್ರಧಾನಪುರುಷೇಶ್ವರಃ ।
ಯೋಗೇಶ್ವರೈರ್ವಿಮೃಗ್ಯಾಂಘ್ರಿ-ರ್ಲೋಕೋ ಯಂ ಮನ್ಯತೇ ನರಮ್ ॥
ಅನುವಾದ
ದೊಡ್ಡ-ದೊಡ್ಡ ಯೋಗೇಶ್ವರರು ಯಾರ ಚರಣ ಕಮಲಗಳನ್ನು ಅನುಸಂಧಾನ ಮಾಡುವರೋ, ಪ್ರಕೃತಿ-ಪುರುಷರ ಅಧೀಶ್ವರನೋ ಅಂತಹ ಭಗವಂತನೇ ಗುರುದೇವರ ರೂಪದಲ್ಲಿ ಪ್ರಕಟನಾಗಿರುವನು. ಇವನನ್ನು ಜನರು ಭ್ರಮೆಯಿಂದ ಮನುಷ್ಯನೆಂದು ಭಾವಿಸುವರು. ॥27॥
(ಶ್ಲೋಕ-28)
ಮೂಲಮ್
ಷಡ್ವರ್ಗಸಂಯಮೈಕಾಂತಾಃ ಸರ್ವಾ ನಿಯಮಚೋದನಾಃ ।
ತದಂತಾ ಯದಿ ನೋ ಯೋಗಾನಾವಹೇಯುಃ ಶ್ರಮಾವಹಾಃ ॥
ಅನುವಾದ
ಶಾಸ್ತ್ರಗಳಲ್ಲಿ ಎಷ್ಟು ನಿಯಮಸಂಬಂಧೀ ಆದೇಶಗಳಿವೆಯೋ ಅವುಗಳ ಏಕಮಾತ್ರ ತಾತ್ಪರ್ಯವು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಶತ್ರುಗಳನ್ನು ಗೆದ್ದುಕೊಳ್ಳುವುದು ಅಥವಾ ಐದು ಇಂದ್ರಿಯಗಳು, ಒಂದು ಮನಸ್ಸು ಹೀಗೆ ಆರನ್ನು ವಶಪಡಿಸಿಕೊಳ್ಳುವುದೇ ಆಗಿದೆ. ಹೀಗಾದ ಬಳಿಕವೂ ಆ ನಿಯಮಗಳ ಮೂಲಕ ಭಗವಂತನ ಧ್ಯಾನ-ಚಿಂತನೆಗಳು ಪ್ರಾಪ್ತವಾಗದಿದ್ದರೆ, ಅವುಗಳನ್ನು ಕೇವಲ ಶ್ರಮವೆಂದೇ ತಿಳಿಯಬೇಕು. ॥28॥
(ಶ್ಲೋಕ-29)
ಮೂಲಮ್
ಯಥಾ ವಾರ್ತಾದಯೋ ಹ್ಯರ್ಥಾ ಯೋಗಸ್ಯಾರ್ಥಂ ನ ಬಿಭ್ರತಿ ।
ಅನರ್ಥಾಯ ಭವೇಯುಸ್ತೇ ಪೂರ್ತಮಿಷ್ಟಂ ತಥಾಸತಃ ॥
ಅನುವಾದ
ಕೃಷಿ, ವ್ಯಾಪಾರ ಮುಂತಾದವುಗಳು ಮತ್ತು ಅದರ ಫಲಗಳೂ ಕೂಡ ಯೋಗಸಾಧನೆಯ ಫಲವಾದ ಭಗವತ್ಪ್ರಾಪ್ತಿ ಅಥವಾ ಮುಕ್ತಿಯನ್ನು ಕೊಡಲಾರವೋ, ಅಂತೆಯೇ ದುಷ್ಟ ಮನುಷ್ಯನ ಶ್ರೌತ-ಸ್ಮಾರ್ತ ಕರ್ಮಗಳೂ ಕೂಡ ಶ್ರೇಯಸ್ಕರವಾಗುವುದಿಲ್ಲ. ಬದಲಿಗೆ ವಿರುದ್ಧ ಫಲವನ್ನೇ ಕೊಡುವವು. ॥29॥
(ಶ್ಲೋಕ-30)
ಮೂಲಮ್
ಯಶ್ಚಿತ್ತವಿಜಯೇ ಯತ್ತಃ ಸ್ಯಾನ್ನಿಃಸಂಗೋಪರಿಗ್ರಹಃ ।
ಏಕೋ ವಿವಿಕ್ತಶರಣೋ ಭಿಕ್ಷುರ್ಭಿಕ್ಷಾಮಿತಾಶನಃ ॥
ಅನುವಾದ
ತನ್ನ ಮನಸ್ಸಿನ ಮೇಲೆ ವಿಜಯವನ್ನು ಪಡೆದುಕೊಳ್ಳಲಿಕ್ಕಾಗಿ ಹೊರಟಿರುವ ಮನುಷ್ಯನು ಆಸಕ್ತಿ ಮತ್ತು ಪರಿಗ್ರಹವನ್ನು ತ್ಯಜಿಸಿ ಸಂನ್ಯಾಸವನ್ನು ಸ್ವೀಕರಿಸಿಬೇಕು. ಏಕಾಂತದಲ್ಲಿ ಒಬ್ಬಂಟಿಗನಾಗಿ ಇದ್ದು, ಭಿಕ್ಷೆ ಎತ್ತಿ ಶರೀರ ನಿರ್ವಾಹ ಮಾತ್ರಕ್ಕೆ ಸ್ವಲ್ಪ ಮತ್ತು ಪರಿಮಿತ ಭೋಜನವನ್ನು ಸೇವಿಸಬೇಕು.॥30॥
(ಶ್ಲೋಕ-31)
ಮೂಲಮ್
ದೇಶೇ ಶುಚೌ ಸಮೇ ರಾಜನ್ಸಂಸ್ಥಾಪ್ಯಾಸನಮಾತ್ಮನಃ ।
ಸ್ಥಿರಂ ಸಮಂ ಸುಖಂ ತಸ್ಮಿನ್ನಾಸೀತರ್ಜ್ವಂಗಓಮಿತಿ ॥
ಅನುವಾದ
ಯುಧಿಷ್ಠಿರನೇ! ಶುಚಿಯಾಗಿ ಸಮತಟ್ಟಾಗಿರುವ ಭೂಮಿಯಲ್ಲಿ ತನ್ನ ಆಸನವನ್ನು ಹಾಸಿ ಕೊಂಡು, ಅದರ ಮೇಲೆ ನೇರವಾಗಿ, ಸ್ಥಿರವಾಗಿ, ಸಮವಾಗಿ, ಸುಖಕರವಾದ ಯೋಗಾಸನದಲ್ಲಿ ಕುಳಿತುಕೊಂಡು ಓಂಕಾರವನ್ನು ಜಪಿಸಬೇಕು. ॥31॥
(ಶ್ಲೋಕ-32)
ಮೂಲಮ್
ಪ್ರಾಣಾಪಾನೌ ಸನ್ನಿರುಂಧ್ಯಾತ್ಪೂರಕುಂಭಕರೇಚಕೈಃ ।
ಯಾವನ್ಮನಸ್ತ್ಯಜೇತ್ಕಾಮಾನ್ಸ್ವನಾಸಾಗ್ರನಿರೀಕ್ಷಣಃ ॥
ಅನುವಾದ
ಮನಸ್ಸು, ಸಂಕಲ್ಪ-ವಿಕಲ್ಪಗಳನ್ನು ಬಿಟ್ಟು ಬಿಡುವ ತನಕ ದೃಷ್ಟಿಯನ್ನು ನಾಸಿಕಾಗ್ರದಲ್ಲಿ ನೆಟ್ಟು ಪೂರಕ, ಕುಂಭಕ ಮತ್ತು ರೇಚಕದ ಮೂಲಕ ಪ್ರಾಣ ಹಾಗೂ ಅಪಾನದ ಗತಿಯನ್ನು ತಡೆಗಟ್ಟಬೇಕು. ॥32॥
(ಶ್ಲೋಕ-33)
ಮೂಲಮ್
ಯತೋ ಯತೋ ನಿಃಸರತಿ ಮನಃ ಕಾಮಹತಂ ಭ್ರಮತ್ ।
ತತಸ್ತತ ಉಪಾಹೃತ್ಯ ಹೃದಿ ರುಂಧ್ಯಾಚ್ಛನೈರ್ಬುಧಃ ॥
ಅನುವಾದ
ಕಾಮದ ಆಘಾತದಿಂದ ಗಾಯಗೊಂಡ ಮನಸ್ಸು ಎಲ್ಲೆಲ್ಲಿ ಸುತ್ತಾಡುತ್ತಾ ಅಲೆಯುವುದೋ, ಅಲ್ಲಲ್ಲಿಂದ ಅದನ್ನು ಹಿಂದಿರುಗಿಸಿ ಮೆಲ್ಲ-ಮೆಲ್ಲನೆ ಹೃದಯದಲ್ಲಿ ನೆಲೆಗೊಳಿಸಬೇಕು.॥33॥
(ಶ್ಲೋಕ-34)
ಮೂಲಮ್
ಏವಮಭ್ಯಸತಶ್ಚಿತ್ತಂ ಕಾಲೇನಾಲ್ಪೀಯಸಾ ಯತೇಃ ।
ಅನಿಶಂ ತಸ್ಯ ನಿರ್ವಾಣಂ ಯಾತ್ಯನಿಂಧನವಹ್ನಿವತ್ ॥
ಅನುವಾದ
ಸಾಧಕನು ನಿರಂತರವಾಗಿ ಹೀಗೆ ಅಭ್ಯಾಸ ಮಾಡುವಾಗ ಕಟ್ಟಿಗೆ ಇಲ್ಲದೆ ಬೆಂಕಿಯು ಆರಿಹೋಗುವಂತೆಯೇ ಸ್ವಲ್ಪ ಸಮಯದಲ್ಲೇ ಅವನ ಚಿತ್ತವು ಶಾಂತವಾಗಿ ಹೋಗುತ್ತದೆ.॥34॥
(ಶ್ಲೋಕ-35)
ಮೂಲಮ್
ಕಾಮಾದಿಭಿರನಾವಿದ್ಧಂ ಪ್ರಶಾಂತಾಖಿಲವೃತ್ತಿ ಯತ್ ।
ಚಿತ್ತಂ ಬ್ರಹ್ಮ ಸುಖಸ್ಪೃಷ್ಟಂ ನೈವೋತ್ತಿಷ್ಠೇತ ಕರ್ಹಿಚಿತ್ ॥
ಅನುವಾದ
ಹೀಗೆ ಕಾಮ ವಾಸನೆಗಳು ಏಟುಕೊಡುವುದನ್ನು ನಿಲ್ಲಿಸಿದಾಗ ಮತ್ತು ಸಮಸ್ತ ವೃತ್ತಿಗಳು ಅತ್ಯಂತ ಶಾಂತವಾಗಿ ಹೋದಾಗ ಚಿತ್ತವು ಬ್ರಹ್ಮಾನಂದದ ಸ್ಪರ್ಶದಲ್ಲಿ ಮುಳುಗಿಹೋಗುವುದು, ಮತ್ತೆ ಅದು ಎಂದಿಗೂ ಅಲ್ಲಿಂದ ಎದ್ದು ಬರುವುದಿಲ್ಲ.॥35॥
(ಶ್ಲೋಕ-36)
ಮೂಲಮ್
ಯಃ ಪ್ರವ್ರಜ್ಯ ಗೃಹಾತ್ಪೂರ್ವಂ ತ್ರಿವರ್ಗಾವಪನಾತ್ಪುನಃ ।
ಯದಿ ಸೇವೇತ ತಾನ್ಭಿಕ್ಷುಃ ಸ ವೈ ವಾಂತಾಶ್ಯಪತ್ರಪಃ ॥
ಅನುವಾದ
ಯಾವ ಸಂನ್ಯಾಸಿಯು ಮೊದಲಿಗೆ ಧರ್ಮ, ಅರ್ಥ ಮತ್ತು ಕಾಮ ಇವುಗಳ ಮೂಲ ಕಾರಣವಾದ ಗೃಹಸ್ಥಾಶ್ರಮವನ್ನು ತ್ಯಜಿಸಿ, ಪುನಃ ಅದನ್ನೇ ಸೇವಿಸತೊಡಗಿದರೆ, ನಿರ್ಲಜ್ಜನಾದ ಅವನು ತಾನು ಉಗುಳಿದುದನ್ನೇ ತಿನ್ನುವ ನಾಯಿಯೇ ಆಗಿದ್ದಾನೆ. ॥36॥
(ಶ್ಲೋಕ-37)
ಮೂಲಮ್
ಯೈಃ ಸ್ವದೇಹಃ ಸ್ಮೃತೋ ನಾತ್ಮಾ ಮರ್ತ್ಯೋ ವಿಟ್ಕೃಮಿಭಸ್ಮಸಾತ್ ।
ತ ಏನಮಾತ್ಮಸಾತ್ಕೃತ್ವಾ ಶ್ಲಾಘಯಂತಿ ಹ್ಯಸತ್ತಮಾಃ ॥
ಅನುವಾದ
ಯಾರು ತನ್ನ ಶರೀರವನ್ನು ಅನಾತ್ಮಾ, ಮೃತ್ಯುಗ್ರಸ್ತ ಮತ್ತು ಮಲ, ಕ್ರಿಮಿಗಳು, ಬೂದಿ ಎಂದು ತಿಳಿದಿದ್ದನೋ, ಅದನ್ನು ಮತ್ತೆ ಆತ್ಮಾ ಎಂದು ತಿಳಿದು ಪ್ರಶಂಸೆ ಮಾಡತೊಡಗಿದರೆ ಅವನು ಮೂಢನೇ ಸರಿ.॥37॥
(ಶ್ಲೋಕ-38)
ಮೂಲಮ್
ಗೃಹಸ್ಥಸ್ಯ ಕ್ರಿಯಾತ್ಯಾಗೋ ವ್ರತತ್ಯಾಗೋ ವಟೋರಪಿ ।
ತಪಸ್ವಿನೋ ಗ್ರಾಮಸೇವಾ ಭಿಕ್ಷೋರಿಂದ್ರಿಯಲೋಲತಾ ॥
(ಶ್ಲೋಕ-39)
ಮೂಲಮ್
ಆಶ್ರಮಾಪಸದಾ ಹ್ಯೇತೇ ಖಲ್ವಾಶ್ರಮವಿಡಂಬಕಾಃ ।
ದೇವಮಾಯಾವಿಮೂಢಾಂಸ್ತಾನುಪೇಕ್ಷೇತಾನುಕಂಪಯಾ ॥
ಅನುವಾದ
ಕರ್ಮತ್ಯಾಗಿಯಾದ ಗೃಹಸ್ಥನು, ವ್ರತತ್ಯಾಗಿಯಾದ ಬ್ರಹ್ಮಚಾರಿ, ಊರಿನಲ್ಲಿ ವಾಸಿಸುವ ತಪಸ್ವೀ (ವಾನಪ್ರಸ್ಥಿ) ಮತ್ತು ಇಂದ್ರಿಯಲೋಲುಪನಾದ ಸಂನ್ಯಾಸಿ ಇವರು ನಾಲ್ವರೂ ಆಶ್ರಮಗಳಿಗೆ ಕಲಂಕಪ್ರಾಯರಾಗಿದ್ದಾರೆ. ವ್ಯರ್ಥವಾಗಿಯೇ ಆಶ್ರಮಗಳ ವೇಷವನ್ನು ಧರಿಸಿದವರು. ಭಗವಂತನ ಮಾಯೆಯಿಂದ ಮೋಹಿತರಾದ ಆ ಮೂಢರಲ್ಲಿ ಕನಿಕರಗೊಂಡು ಅವರ ವಿಷಯದಲ್ಲಿ ಉದಾಸೀನನಾಗಿರಬೇಕು. ॥38-39॥
(ಶ್ಲೋಕ-40)
ಮೂಲಮ್
ಆತ್ಮಾನಂ ಚೇದ್ವಿಜಾನೀಯಾತ್ಪರಂ ಜ್ಞಾನಧುತಾಶಯಃ ।
ಕಿಮಿಚ್ಛನ್ಕಸ್ಯ ವಾ ಹೇತೋರ್ದೇಹಂ ಪುಷ್ಣಾತಿ ಲಂಪಟಃ ॥
ಅನುವಾದ
ಆತ್ಮಜ್ಞಾನದಿಂದ ಎಲ್ಲ ವಾಸನೆಗಳನ್ನು ನಿರ್ಮೂಲನಗೊಳಿಸಿಕೊಂಡು ಪರಮಾತ್ಮ ಸಾಕ್ಷಾತ್ಕಾರಸುಖದ ಅನುಭವ ವನ್ನು ಪಡೆದ ಯಾವನೂ ಇಂದ್ರಿಯ ಲಂಪಟನಾಗುವುದಿಲ್ಲ. ಆತನು ಯಾವ ವಿಷಯದ ಬಯಕೆಯಿಂದ ಮತ್ತು ಯಾವ ಭೋಕ್ತೃವಿನ ತೃಪ್ತಿಗಾಗಿ ಇಂದ್ರಿಯ ಲಂಪಟನಾಗಿ ತನ್ನ ಶರೀರವನ್ನು ಪೋಷಿಸಿಯಾನು? ॥40॥
(ಶ್ಲೋಕ-41)
ಮೂಲಮ್
ಆಹುಃ ಶರೀರಂ ರಥಮಿಂದ್ರಿಯಾಣಿಹಯಾನಭೀಷೂನ್ಮನ ಇಂದ್ರಿಯೇಶಮ್ ।
ವರ್ತ್ಮಾನಿ ಮಾತ್ರಾ ಧಿಷಣಾಂ ಚ ಸೂತಂಸತ್ತ್ವಂ ಬೃಹದ್ಬಂಧುರಮೀಶಸೃಷ್ಟಮ್ ॥
(ಶ್ಲೋಕ-42)
ಮೂಲಮ್
ಅಕ್ಷಂ ದಶಪ್ರಾಣಮಧರ್ಮಧರ್ವೌ
ಚಕ್ರೇಭಿಮಾನಂ ರಥಿನಂ ಚ ಜೀವಮ್ ।
ಧನುರ್ಹಿ ತಸ್ಯ ಪ್ರಣವಂ ಪಠಂತಿ
ಶರಂ ತು ಜೀವಂ ಪರಮೇವ ಲಕ್ಷ್ಯಮ್ ॥
ಅನುವಾದ
ಪರಮಾತ್ಮನ ಸಿದ್ಧಿಗಾಗಿ ಮಾಡುವ ಸಾಧನೆಯಲ್ಲಿ ಈ ಶರೀರವೇ ರಥವು-ಇಂದ್ರಿಯಗಳೇ ಕುದುರೆಗಳು, ಇಂದ್ರಿಯಗಳ ಒಡೆಯ ಮನಸ್ಸು ಲಗಾಮು. ಶಬ್ದಾದಿ ವಿಷಯಗಳೇ ಮಾರ್ಗವು. ಬುದ್ಧಿಯೇ ಸಾರಥಿ, ಚಿತ್ತವೇ ಭಗವಂತನಿಂದ ನಿರ್ಮಿತವಾದ ಕಟ್ಟುವ ವಿಶಾಲವಾದ ಹಗ್ಗ. ಹತ್ತು ಪ್ರಾಣಗಳೇ ಅಚ್ಚುಮರ, ಧರ್ಮ-ಅಧರ್ಮಗಳೇ ಚಕ್ರಗಳು. ಇದರ ಅಭಿಮಾನೀ ಜೀವನೇ ರಥಿಯೆಂದು ಹೇಳಲಾಗಿದೆ. ಓಂಕಾರವೇ ಆ ರಥಿಯ ಧನುಸ್ಸು, ಶುದ್ಧ ಜೀವಾತ್ಮನೇ ಬಾಣ ಮತ್ತು ಪರಮಾತ್ಮನೇ ಗುರಿಯಾಗಿದೆ ಎಂದು ಉಪನಿಷತ್ತುಗಳು ಹೇಳುತ್ತವೆ. (ಈ ಓಂಕಾರದ ಮೂಲಕ ಅಂತರಾತ್ಮನನ್ನು ಪರಮಾತ್ಮನಲ್ಲಿ ಲೀನಗೊಳಿಸಬೇಕು.) ॥41-42॥
(ಶ್ಲೋಕ-43)
ಮೂಲಮ್
ರಾಗೋ ದ್ವೇಷಶ್ಚ ಲೋಭಶ್ಚ
ಶೋಕಮೋಹೌ ಭಯಂ ಮದಃ ।
ಮಾನೋವಮಾನೋಸೂಯಾ ಚ
ಮಾಯಾ ಹಿಂಸಾ ಚ ಮತ್ಸರಃ ॥
(ಶ್ಲೋಕ-44)
ಮೂಲಮ್
ರಜಃ ಪ್ರಮಾದಃ ಕ್ಷುನ್ನಿದ್ರಾ ಶತ್ರವಸ್ತ್ವೇವಮಾದಯಃ ।
ರಜಸ್ತಮಃ ಪ್ರಕೃತಯಃ ಸತ್ತ್ವಪ್ರಕೃತಯಃ ಕ್ವಚಿತ್ ॥
ಅನುವಾದ
ರಾಗ, ದ್ವೇಷ, ಲೋಭ, ಶೋಕ, ಮೋಹ, ಭಯ, ಮದ, ಮಾನ, ಅಪಮಾನ, ಬೇರೆಯವರ ಗುಣಗಳಲ್ಲಿ ದೋಷ ನೋಡುವುದು ಛಲ, ಹಿಂಸೆ, ಇತರರ ಉನ್ನತಿಯನ್ನು ಕಂಡು ಹೊಟ್ಟೆಯುರಿ, ತೃಷ್ಣೆ, ಪ್ರಮಾದ, ಹಸಿವು, ನಿದ್ದೆ ಇವೆಲ್ಲವೂ ಜೀವಿಯ ಶತ್ರುಗಳು. ಇವುಗಳಲ್ಲದೆ ಇನ್ನೂ ಅನೇಕ ಶತ್ರುಗಳು ಅವನಿಗಿವೆ. ಅವುಗಳಲ್ಲಿ ರಜೋಗುಣ, ತಮೋಗುಣವೃತ್ತಿಗಳೇ ಹೆಚ್ಚಾಗಿವೆ. ಕೆಲ-ಕೆಲವು ಸತ್ತ್ವಗುಣ ಪ್ರಧಾನವೂ ಆಗಿರುತ್ತವೆ. ॥43-44॥
(ಶ್ಲೋಕ-45)
ಮೂಲಮ್
ಯಾವನ್ನೃಕಾಯರಥಮಾತ್ಮವಶೋಪಕಲ್ಪಂ
ಧತ್ತೇ ಗರಿಷ್ಠ ಚರಣಾರ್ಚನಯಾ ನಿಶಾತಮ್ ।
ಜ್ಞಾನಾಸಿಮಚ್ಯುತಬಲೋ ದಧದಸ್ತಶತ್ರುಃ
ಸ್ವಾರಾಜ್ಯತುಷ್ಟ ಉಪಶಾಂತ ಇದಂ ವಿಜಹ್ಯಾತ್ ॥
ಅನುವಾದ
ಈ ಮನುಷ್ಯಶರೀರವೆಂಬ ರಥವು ತನ್ನ ವಶದಲ್ಲಿದ್ದು ಇಂದ್ರಿಯ, ಮನಸ್ಸು ಮುಂತಾದ ಎಲ್ಲ ಸಾಧನೆಗಳು ಚೆನ್ನಾಗಿರುವಷ್ಟರೊಳಗೆ ಶ್ರೀಗುರುದೇವರ ಚರಣ ಕಮಲಗಳ ಸೇವೆ-ಪೂಜೆಗಳಿಂದ ಹರಿತವಾಗಿ ಮಾಡಲ್ಪಟ್ಟ ಜ್ಞಾನವೆಂಬ ತೀಕ್ಷ್ಣವಾದ ಖಡ್ಗವನ್ನು ಎತ್ತಿಕೊಂಡು ಶ್ರೀಭಗವಂತನ ಬಲದಿಂದ ಈ ಎಲ್ಲ ಶತ್ರುಗಳನ್ನು ನಾಶಪಡಿಸಿ, ತನ್ನ ಸ್ವಾರಾಜ್ಯವೆಂಬ ಸಿಂಹಾಸನದಲ್ಲಿ ವಿರಾಜಮಾನನಾಗಬೇಕು. ಮತ್ತೆ ಪುನಃ ಅತ್ಯಂತ ಶಾಂತಭಾವದಿಂದ ಈ ಶರೀರವನ್ನು ಪರಿತ್ಯಾಗಮಾಡಬೇಕು. ॥45॥
(ಶ್ಲೋಕ-46)
ಮೂಲಮ್
ನೋ ಚೇತ್ಪ್ರಮತ್ತಮಸದಿಂದ್ರಿಯವಾಜಿಸೂತಾ
ನೀತ್ವೋತ್ಪಥಂ ವಿಷಯದಸ್ಯುಷು ನಿಕ್ಷಿಪಂತಿ ।
ತೇ ದಸ್ಯವಃ ಸಹಯಸೂತಮಮುಂ ತಮೋಂಧೇ
ಸಂಸಾರಕೂಪ ಉರುಮೃತ್ಯುಭಯೇ ಕ್ಷಿಪಂತಿ ॥
ಅನುವಾದ
ಇಲ್ಲದಿದ್ದರೆ ಸ್ವಲ್ಪವೇ ಪ್ರಮಾದ ಉಂಟಾದರೂ ಈ ಇಂದ್ರಿಯಗಳೆಂಬ ದುಷ್ಟ ಕುದುರೆಗಳು ಮತ್ತು ಅವುಗಳೊಂದಿಗೆ ಮಿತ್ರತೆಯುಳ್ಳ ಬುದ್ಧಿ ರೂಪೀ ಸಾರಥಿಯು ರಥದ ಒಡೆಯ ಜೀವನನ್ನು ವಿರುದ್ಧವಾದ ದಾರಿಯಲ್ಲಿ ಕೊಂಡೊಯ್ದು ವಿಷಯರೂಪೀ ದರೋಡೆಗಾರರ ಕೈಗೊಪ್ಪಿಸುವರು. ಆ ಕಳ್ಳರು ಸಾರಥಿ ಮತ್ತು ಕುದುರೆಗಳೊಂದಿಗೆ ಈ ಜೀವನನ್ನು ಮೃತ್ಯುವಿಗಿಂತಲೂ ಅತ್ಯಂತ ಭಯಂಕರವಾದ ಸಂಸಾರವೆಂಬ ಕಗ್ಗತ್ತಲೆಯ ಬಾವಿಯೊಳಗೆ ತಳ್ಳಿಬಿಡುವರು. ॥46॥
(ಶ್ಲೋಕ-47)
ಮೂಲಮ್
ಪ್ರವೃತ್ತಂ ಚ ನಿವೃತ್ತಂ ಚ ದ್ವಿವಿಧಂ ಕರ್ಮ ವೈದಿಕಮ್ ।
ಆವರ್ತೇತ ಪ್ರವೃತ್ತೇನ ನಿವೃತ್ತೇನಾಶ್ನುತೇಮೃತಮ್ ॥
ಅನುವಾದ
ವೈದಿಕ ಕರ್ಮಗಳಲ್ಲಿ ಎರಡು ವಿಧಗಳಿವೆ. ಒಂದು ಪ್ರವೃತ್ತಿಪರವಾದುದು. ಇದು ವೃತ್ತಿಗಳನ್ನು ಅವುಗಳ ವಿಷಯಗಳ ಕಡೆಗೆ ಕೊಂಡೊಯ್ಯುವುದು. ಇನ್ನೊಂದು ನಿವೃತ್ತಿಪರ ವಾದುದು. ಇದು ವೃತ್ತಿಗಳನ್ನು ಅವುಗಳ ವಿಷಯಗಳಿಂದ ಹಿಂದಿರುಗಿಸಿ ಶಾಂತ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಯೋಗ್ಯ ವಾಗಿಸುತ್ತದೆ. ಪ್ರವೃತ್ತಿಪರ ಕರ್ಮಮಾರ್ಗದಿಂದ ಮತ್ತೆ-ಮತ್ತೆ ಹುಟ್ಟು-ಸಾವುಗಳು ಒದಗುತ್ತವೆ ಮತ್ತು ನಿವೃತ್ತಿಪರ ಭಕ್ತಿಮಾರ್ಗ ಅಥವಾ ಜ್ಞಾನಮಾರ್ಗದಿಂದ ಪರಮಾತ್ಮನ ಪ್ರಾಪ್ತಿಯುಂಟಾಗುತ್ತದೆ.॥47॥
(ಶ್ಲೋಕ-48)
ಮೂಲಮ್
ಹಿಂಸ್ರಂ ದ್ರವ್ಯಮಯಂ ಕಾಮ್ಯಮಗ್ನಿಹೋತ್ರಾದ್ಯಶಾಂತಿದಮ್ ।
ದರ್ಶಶ್ಚ ಪೂರ್ಣಮಾಸಶ್ಚ ಚಾತುರ್ಮಾಸ್ಯಂ ಪಶುಃ ಸುತಃ ॥
(ಶ್ಲೋಕ-49)
ಮೂಲಮ್
ಏತದಿಷ್ಟಂ ಪ್ರವೃತ್ತಾಖ್ಯಂ ಹುತಂ ಪ್ರಹುತಮೇವ ಚ ।
ಪೂರ್ತಂ ಸುರಾಲಯಾರಾಮಕೂಪಾಜೀವ್ಯಾದಿಲಕ್ಷಣಮ್ ॥
ಅನುವಾದ
ಶ್ಯೇನಯಾಗಾದಿ ಹಿಂಸಾಮಯ ಕರ್ಮ, ಅಗ್ನಿಹೋತ್ರ, ದರ್ಶ, ಪೂರ್ಣಮಾಸ, ಚಾತುರ್ಮಾಸ್ಯ, ಪಶುಯಾಗ, ಸೋಮಯಾಗ, ವೈಶ್ವದೇವ, ಬಲಿಹರಣ ಮುಂತಾದ ದ್ರವ್ಯಮಯ ಕರ್ಮಗಳನ್ನು ‘ಇಷ್ಟ’ವೆಂದು ಹೇಳುತ್ತಾರೆ. ದೇವಾಲಯ, ಹೂದೋಟ, ಕೆರೆ-ಕಟ್ಟೆ ಮುಂತಾದವುಗಳನ್ನು ನಿರ್ಮಿಸುವುದು, ಅರವಟ್ಟಿಗೆ ಇರಿಸುವುದು ಮುಂತಾದವುಗಳು ‘ಪೂರ್ತ’ ಕರ್ಮಗಳಾಗಿವೆ. ಇವೆಲ್ಲವೂ ಪ್ರವೃತ್ತಿಪರವಾದ ಕರ್ಮಗಳಾಗಿವೆ. ಸಕಾಮಭಾವದಿಂದ ಇವುಗಳನ್ನು ಆಚರಿಸಿದರೆ ಇವು ಅಶಾಂತಿಗೆ ಕಾರಣವಾಗುತ್ತವೆ. ॥48-49॥
(ಶ್ಲೋಕ-50)
ಮೂಲಮ್
ದ್ರವ್ಯಸೂಕ್ಷ್ಮವಿಪಾಕಶ್ಚ ಧೂಮೋ ರಾತ್ರಿರಪಕ್ಷಯಃ ।
ಅಯನಂ ದಕ್ಷಿಣಂ ಸೋಮೋ ದರ್ಶ ಓಷಧಿವೀರುಧಃ ॥
(ಶ್ಲೋಕ-51)
ಮೂಲಮ್
ಅನ್ನಂ ರೇತ ಇತಿ ಕ್ಷ್ಮೇಶ ಪಿತೃಯಾನಂ ಪುನರ್ಭವಃ ।
ಏಕೈಕಶ್ಯೇನಾನುಪೂರ್ವಂ ಭೂತ್ವಾ ಭೂತ್ವೇಹ ಜಾಯತೇ ॥
ಅನುವಾದ
ಪ್ರವೃತ್ತಿ ಪರಾಯಣನಾದ ಮನುಷ್ಯನು ಸತ್ತಮೇಲೆ ಚರು-ಪುರೋಡಾಶ ಮುಂತಾದ ಯಜ್ಞಸಂಬಂಧೀ ದ್ರವ್ಯಗಳ ಸೂಕ್ಷ್ಮವಾದ ಭಾಗದಿಂದ ಉಂಟಾದ ಶರೀರವನ್ನು ಧರಿಸಿ ಧೂಮಾಭಿಮಾನಿದೇವತೆಗಳ ಬಳಿಗೆ ಹೋಗುತ್ತಾನೆ. ಮತ್ತೆ ಕ್ರಮವಾಗಿ ರಾತ್ರಿ, ಕೃಷ್ಣಪಕ್ಷ, ದಕ್ಷಿಣಾಯನ ಇವುಗಳ ಅಭಿಮಾನಿದೇವತೆಗಳ ಬಳಿಗೆ ಹೋಗಿ ಚಂದ್ರಲೋಕಕ್ಕೆ ತಲುಪುತ್ತಾನೆ. ಅಲ್ಲಿಯ ಭೋಗಗಳು ಮುಗಿದಾಗ ಅಮಾವಾಸ್ಯೆಯ ಚಂದ್ರನಂತೆ ಕ್ಷೀಣನಾಗಿ ಮಳೆಯ ಮೂಲಕ ಕ್ರಮವಾಗಿ ಔಷಧಿ, ಲತೆಗಳು, ಅನ್ನ ಮತ್ತು ವೀರ್ಯ ರೂಪದಲ್ಲಿ ಪರಿಣಾಮ ಹೊಂದಿ ಪಿತೃಯಾನದಿಂದ ಪುನಃ ಸಂಸಾರದಲ್ಲಿ ಹುಟ್ಟುವನು. ॥50-51॥
(ಶ್ಲೋಕ-52)
ಮೂಲಮ್
ನಿಷೇಕಾದಿಶ್ಮಶಾನಾಂತೈಃ ಸಂಸ್ಕಾರೈಃ ಸಂಸ್ಕೃತೋ ದ್ವಿಜಃ ।
ಇಂದ್ರಿಯೇಷು ಕ್ರಿಯಾಯಜ್ಞಾನ್ ಜ್ಞಾನದೀಪೇಷು ಜುಹ್ವತಿ ॥
ಅನುವಾದ
ಯುಧಿಷ್ಠಿರನೇ! ಗರ್ಭಾಧಾನದಿಂದ ಹಿಡಿದು ಅಂತ್ಯೇಷ್ಟಿವರೆಗೆ ಎಲ್ಲ ಸಂಸ್ಕಾರಗಳು ಯಾರಿಗೆ ಆಗುತ್ತವೋ ಅವನಿಗೆ ‘ದ್ವಿಜ’ ಎಂದು ಹೇಳುತ್ತಾರೆ. ಅವರಲ್ಲಿ ಕೆಲವರು ಹಿಂದೆ ಹೇಳಿದ ಪ್ರವೃತ್ತಿಮಾರ್ಗವನ್ನು ಅನುಷ್ಠಾನಮಾಡಿದರೆ, ಕೆಲವರು ಮುಂದೆ ಹೇಳಲಿರುವ ನಿವೃತ್ತಿಮಾರ್ಗವನ್ನು ಅನುಸರಿಸುತ್ತಾರೆ. ನಿವೃತ್ತಿ ಪರಾಯಣ ಮನುಷ್ಯನು ಇಷ್ಟ-ಪೂರ್ತ ಮುಂತಾದ ಕರ್ಮಗಳಿಂದ ಉಂಟಾಗುವ ಸಮಸ್ತ ಯಜ್ಞಗಳನ್ನು ವಿಷಯಗಳ ಜ್ಞಾನ ಮಾಡಿಸುವ ಇಂದ್ರಿಯಗಳಲ್ಲಿ ಹವನ ಮಾಡುತ್ತಾನೆ. ॥52॥
(ಶ್ಲೋಕ-53)
ಮೂಲಮ್
ಇಂದ್ರಿಯಾಣಿ ಮನಸ್ಯೂರ್ವೌ ವಾಚಿ ವೈಕಾರಿಕಂ ಮನಃ ।
ವಾಚಂ ವರ್ಣಸಮಾಮ್ನಾಯೇ ತಮೋಂಕಾರೇ ಸ್ವರೇ ನ್ಯಸೇತ್ ।
ಓಂಕಾರಂ ಬಿಂದೌ ನಾದೇ ತಂ ತಂ ತು ಪ್ರಾಣೇ ಮಹತ್ಯಮುಮ್ ॥
ಅನುವಾದ
ಇಂದ್ರಿಯಗಳನ್ನು ದರ್ಶನಾದಿ ಸಂಕಲ್ಪರೂಪೀ ಮನಸ್ಸಿನಲ್ಲಿ, ವೈಕಾರಿಕ ಮನಸ್ಸನ್ನು ಪರಾವಾಣಿಯಲ್ಲೂ ಮತ್ತು ಪರಾವಾಣಿಯನ್ನು ವರ್ಣ ಸಮುದಾಯದಲ್ಲಿ, ವರ್ಣಸಮುದಾಯವನ್ನು ‘ಅ-ಉ-ಮ್’ ಈ ಮೂರು ಸ್ವರಗಳ ರೂಪದಲ್ಲಿರುವ ಓಂಕಾರದಲ್ಲಿ, ಓಂಕಾರವನ್ನು ಬಿಂದುವಿನಲ್ಲಿ, ಬಿಂದುವನ್ನು ನಾದದಲ್ಲಿ, ನಾದವನ್ನು ಸೂತ್ರಾತ್ಮ ಪ್ರಾಣದಲ್ಲಿ ಹಾಗೂ ಪ್ರಾಣವನ್ನು ಬ್ರಹ್ಮನಲ್ಲಿ ಲೀನಗೊಳಿಸುತ್ತಾನೆ. ॥53॥
(ಶ್ಲೋಕ-54)
ಮೂಲಮ್
ಅಗ್ನಿಃ ಸೂರ್ಯೋ ದಿವಾ ಪ್ರಾಹ್ಣಃಶುಕ್ಲೋ ರಾಕೋತ್ತರಂ ಸ್ವರಾಟ್ ।
ವಿಶ್ವಶ್ಚ ತೈಜಸಃ ಪ್ರಾಜ್ಞ-ಸ್ತುರ್ಯ ಆತ್ಮಾ ಸಮನ್ವಯಾತ್ ॥
ಅನುವಾದ
ಆ ನಿವೃತ್ತಿನಿಷ್ಠ ಜ್ಞಾನಿಯು ಕ್ರಮವಾಗಿ ಅಗ್ನಿ, ಸೂರ್ಯ, ಹಗಲು, ಸಾಯಂಕಾಲ, ಶುಕ್ಲಪಕ್ಷ, ಪೌರ್ಣಮಿ ಮತ್ತು ಉತ್ತರಾಯಣದ ಅಭಿಮಾನಿದೇವತೆಗಳ ಬಳಿಗೆ ಹೋಗಿ ಬ್ರಹ್ಮಲೋಕಕ್ಕೆ ತಲುಪುತ್ತಾನೆ. ಅಲ್ಲಿಯ ಭೋಗಗಳು ಮುಗಿದಾಗ ಅವನು ಸ್ಥೂಲೋಪಾಧಿಕ ‘ವಿಶ್ವ’ವೆಂಬ ತನ್ನ ಸ್ಥೂಲ ಉಪಾಧಿಯನ್ನು ಸೂಕ್ಷ್ಮದಲ್ಲಿ ಲೀನಗೊಳಿಸಿ, ಸೂಕ್ಷ್ಮೋ ಪಾಧಿಕ ‘ತೈಜಸ’ನಾಗುತ್ತಾನೆ. ಮತ್ತೆ ಸೂಕ್ಷ್ಮ ಉಪಾಧಿಯನ್ನು ಕಾರಣದಲ್ಲಿ ಲಯಗೊಳಿಸಿ, ಕಾರಣೋಪಾಧಿಕ ‘ಪ್ರಾಜ್ಞ’ ರೂಪದಿಂದ ಸ್ಥಿತನಾಗುತ್ತಾನೆ. ಮತ್ತೆ ಎಲ್ಲರ ಸಾಕ್ಷಿರೂಪದಿಂದ ಸರ್ವತ್ರ ತುಂಬಿಹೋದ ಕಾರಣ ಸಾಕ್ಷಿಯ ಸ್ವರೂಪದಲ್ಲೇ ಕಾರಣೋಪಾಧಿಯನ್ನು ಲಯಗೊಳಿಸಿ ತುರೀಯ ರೂಪದಲ್ಲಿ ಸ್ಥಿತನಾಗುತ್ತಾನೆ. ಹೀಗೆ ದೃಶ್ಯಗಳು ಲಯವಾಗಿ ಹೋದಮೇಲೆ ಅವನು ಶುದ್ಧ ಆತ್ಮನಾಗಿ ಉಳಿಯುವನು. ಇದೇ ಮೋಕ್ಷಪದವಾಗಿದೆ. ॥54॥
(ಶ್ಲೋಕ-55)
ಮೂಲಮ್
ದೇವಯಾನಮಿದಂ ಪ್ರಾಹುರ್ಭೂತ್ವಾ ಭೂತ್ವಾನುಪೂರ್ವಶಃ ।
ಆತ್ಮಯಾಜ್ಯುಪಶಾಂತಾತ್ಮಾ ಹ್ಯಾತ್ಮಸ್ಥೋ ನ ನಿವರ್ತತೇ ॥
ಅನುವಾದ
ಇದನ್ನು ‘ದೇವ ಯಾನ’ ಮಾರ್ಗವೆಂದು ಹೇಳುತ್ತಾರೆ. ಈ ಮಾರ್ಗದಿಂದ ಹೋಗುವವರು ಆತ್ಮೋಪಾಸಕ ಸಂಸಾರದಿಂದ ನಿವೃತ್ತರಾಗಿ ಕ್ರಮವಾಗಿ ಒಬ್ಬರಿಂದ ಮತ್ತೊಬ್ಬ ದೇವತೆಯ ಬಳಿಗೆ ಹೋಗುತ್ತಾ, ಬ್ರಹ್ಮಲೋಕಕ್ಕೆ ಹೋಗಿ ನೆಲೆಗೊಳ್ಳುವನು. ಅವನು ಪ್ರವೃತ್ತಿಮಾರ್ಗಿಯಂತೆ ಮತ್ತೆ ಹುಟ್ಟು- ಸಾವುಗಳ ಚಕ್ರದಲ್ಲಿ ಬೀಳುವುದಿಲ್ಲ. ॥55॥
(ಶ್ಲೋಕ-56)
ಮೂಲಮ್
ಯ ಏತೇ ಪಿತೃದೇವಾನಾಮಯನೇ ವೇದನಿರ್ಮಿತೇ ।
ಶಾಸೇಣ ಚಕ್ಷುಷಾ ವೇದ ಜನಸ್ಥೋಪಿ ನ ಮುಹ್ಯತಿ ॥
ಅನುವಾದ
ಈ ಪಿತೃಯಾನ ಮತ್ತು ದೇವಯಾನ ಮಾರ್ಗಗಳೆರಡೂ ವೇದೋಕ್ತವೇ ಆಗಿವೆ. ಶಾಸ್ತ್ರೀಯ ದೃಷ್ಟಿಯಿಂದ ಇವನ್ನು ತತ್ತ್ವತಃ ಅರಿತುಕೊಳ್ಳುವವನು ಶರೀರದಲ್ಲೇ ಸ್ಥಿತನಾಗಿದ್ದರೂ ಮೋಹಿತನಾಗುವುದಿಲ್ಲ.॥56॥
(ಶ್ಲೋಕ-57)
ಮೂಲಮ್
ಆದಾವಂತೇ ಜನಾನಾಂ ಸದ್-ಬಹಿರಂತಃ ಪರಾವರಮ್ ।
ಜ್ಞಾನಂ ಜ್ಞೇಯಂ ವಚೋ ವಾಚ್ಯಂತಮೋ ಜ್ಯೋತಿಸ್ತ್ವಯಂ ಸ್ವಯಮ್ ॥
ಅನುವಾದ
ಶರೀರಗಳು ಹುಟ್ಟುವ ಮೊದಲೂ ಕೂಡ ಕಾರಣರೂಪದಿಂದ ಮತ್ತು ಅವುಗಳು ಅಂತ್ಯವಾದ ಬಳಿಕವೂ ಅವುಗಳ ಅವಧಿರೂಪದಿಂದ ಯಾವುದು ಸ್ವಯಂ ಇರುತ್ತದೋ, ಯಾವುದು ಭೋಗ ರೂಪದಿಂದ ಹೊರಗೆ ಮತ್ತು ಭೋಕ್ತಾರೂಪದಿಂದ ಒಳಗಡೆ ಹಾಗೂ ಉಚ್ಚ-ನೀಚ, ತಿಳಿಯುವುದು-ತಿಳಿಯುವ ವಿಷಯ, ವಾಣಿ-ವಾಣಿಯ ವಿಷಯ, ಅಂಧಕಾರ-ಪ್ರಕಾಶ ಮುಂತಾದ ವಸ್ತುಗಳ ರೂಪದಲ್ಲಿ ಏನೆಲ್ಲ ದೊರೆಯುತ್ತದೋ ಅವೆಲ್ಲ ಸ್ವಯಂ ಪರಮಾತ್ಮನೇ ಆಗಿದ್ದಾನೆ.॥57॥
(ಶ್ಲೋಕ-58)
ಮೂಲಮ್
ಆಬಾಧಿತೋಪಿ ಹ್ಯಾಭಾಸೋ ಯಥಾ ವಸ್ತುತಯಾ ಸ್ಮೃತಃ ।
ದುರ್ಘಟತ್ವಾದೈಂದ್ರಿಯಕಂ ತದ್ವದರ್ಥವಿಕಲ್ಪಿತಮ್ ॥
ಅನುವಾದ
ಕನ್ನಡಿಯೇ ಮುಂತಾದವುಗಳಲ್ಲಿ ಕಾಣುವ ಪ್ರತಿಬಿಂಬವು ವಿಚಾರ ಮತ್ತು ಯುಕ್ತಿಯಿಂದ ಬಾಧಿತವಾಗುತ್ತದೆ. ಅದರಲ್ಲಿ ಅವರ ಅಸ್ತಿತ್ವವೇ ಇಲ್ಲ. ಆದರೂ ಅದು ವಸ್ತುವಿನ ರೂಪದಲ್ಲಿ ಕಂಡು ಬರುತ್ತದೆ. ಹಾಗೆಯೇ ಇಂದ್ರಿಯಗಳ ಮೂಲಕ ಕಂಡುಬರುವ ವಸ್ತುಗಳ ಭೇದ-ಭಾವಗಳೂ ವಿಚಾರ, ಯುಕ್ತಿ ಮತ್ತು ಆತ್ಮಾನುಭವದಿಂದ ಅಸಂಭವವಾಗಿರುವ ಕಾರಣ ವಾಸ್ತವವಾಗಿ ಇಲ್ಲದಿದ್ದರೂ ಸತ್ಯದಂತೆ ಕಂಡು ಬರುತ್ತದೆ.॥58॥
(ಶ್ಲೋಕ-59)
ಮೂಲಮ್
ಕ್ಷಿತ್ಯಾದೀನಾಮಿಹಾರ್ಥಾನಾಂ ಛಾಯಾ ನ ಕತಮಾಪಿ ಹಿ ।
ನ ಸಂಘಾತೋ ವಿಕಾರೋಪಿ ನ ಪೃಥಙ್ನಾನ್ವಿತೋ ಮೃಷಾ ॥
ಅನುವಾದ
ಪೃಥಿವಿಯೇ ಮುಂತಾದ ಪಂಚಭೂತಗಳಿಂದ ಈ ಶರೀರದ ನಿರ್ಮಾಣವಾಗಲಿಲ್ಲ. ವಾಸ್ತವಿಕ ದೃಷ್ಟಿಯಿಂದ ನೋಡಿದರೆ ಅದು ಈ ಪಂಚಭೂತಗಳ ಸಮುದಾಯವೂ ಅಲ್ಲ ಮತ್ತು ವಿಕಾರ ಅಥವಾ ಪರಿಣಾಮವೂ ಅಲ್ಲ. ಏಕೆಂದರೆ, ಇದು ತನ್ನ ಅವಯವಗಳಿಂದ ಬೇರೆಯಾಗಿಲ್ಲ ಮತ್ತು ಅವುಗಳಲ್ಲಿ ಸೇರಿಕೊಂಡೂ ಇಲ್ಲ. ಆದ್ದರಿಂದ ಮಿಥ್ಯೆಯಾಗಿದೆ.॥59॥
(ಶ್ಲೋಕ-60)
ಮೂಲಮ್
ಧಾತವೋವಯವಿತ್ವಾಚ್ಚ ತನ್ಮಾತ್ರಾವಯವೈರ್ವಿನಾ ।
ನ ಸ್ಯುರ್ಹ್ಯಸತ್ಯವಯವಿನ್ಯಸನ್ನವಯವೋಂತತಃ ॥
ಅನುವಾದ
ಹೀಗೆಯೇ ಶರೀರದ ಕಾರಣ ರೂಪೀ ಪಂಚಭೂತಗಳೂ ಕೂಡ ಅವಯವಿಯಾದ್ದರಿಂದ ತನ್ನ ಅವಯವಗಳಿಂದ ಸೂಕ್ಷ್ಮ ಭೂತಗಳಿಂದ ಭಿನ್ನವಾಗಿಲ್ಲ. ಅವಯವರೂಪವೇ ಆಗಿವೆ. ಎಷ್ಟೇ ಹುಡುಕಿದರೂ ಅವಯವಗಳಲ್ಲದೆ ಅವಯವಿಯ ಅಸ್ತಿತ್ವವು ದೊರೆಯು ವುದಿಲ್ಲ. ಅದು ಅಸತ್ತೆಂದೇ ಸಿದ್ಧವಾಗುತ್ತದೆ. ಆಗ ಈ ಅವಯವಗಳೂ ಅಸತ್ಯವೆಂದು ತಾನಾಗಿಯೇ ಸಿದ್ಧವಾಗುತ್ತದೆ. ॥60॥
(ಶ್ಲೋಕ-61)
ಮೂಲಮ್
ಸ್ಯಾತ್ಸಾದೃಶ್ಯಭ್ರಮಸ್ತಾವದ್ ವಿಕಲ್ಪೇ ಸತಿ ವಸ್ತುನಃ ।
ಜಾಗ್ರತ್ಸ್ವಾಪೌ ಯಥಾ ಸ್ವಪ್ನೇ ತಥಾ ವಿಧಿನಿಷೇಧತಾ ॥
ಅನುವಾದ
ಅಜ್ಞಾನದ ಕಾರಣ ಒಂದೇ ಪರಮತತ್ತ್ವದಲ್ಲಿ ಅನೇಕ ವಸ್ತುಗಳ ಭೇದಗಳು ಕಂಡುಬರುತ್ತಾ ಇರುವ ತನಕ ಯಾವ ವಸ್ತುವು ಮೊದಲಿಗೆ ಇತ್ತೋ ಅದು ಈಗಲೂ ಇದೆ ಎಂಬ ಭ್ರಮೆಯೂ ಇರಬಲ್ಲದು ಮತ್ತು ಸ್ವಪ್ನದಲ್ಲಿಯೂ ಹೇಗೆ ಜಾಗ್ರತ್, ಸ್ವಪ್ನ ಮುಂತಾದ ಅವಸ್ಥೆಗಳ ಬೇರೆ-ಬೇರೆ ಅನುಭವಗಳು ಆಗಿಯೇ ಆಗುತ್ತದೆ ಹಾಗೂ ಅವುಗಳಲ್ಲಿಯೂ ವಿಧಿನಿಷೇಧದ ಶಾಸ್ತ್ರ ಇರುತ್ತದೆ ಹಾಗೆಯೇ ಈ ಭಿನ್ನತೆಗಳ ಅಸ್ತಿತ್ವದ ಮೋಹ ಇರುವ ತನಕ ಇಲ್ಲಿಯೂ ವಿಧಿನಿಷೇಧದ ಶಾಸ್ತ್ರವು ಇದ್ದೇ ಇರುತ್ತದೆ.॥61॥
(ಶ್ಲೋಕ-62)
ಮೂಲಮ್
ಭಾವಾದ್ವೈತಂ ಕ್ರಿಯಾದ್ವೈತಂ ದ್ರವ್ಯಾದ್ವೈತಂ ತಥಾತ್ಮನಃ ।
ವರ್ತಯನ್ಸ್ವಾನುಭೂತ್ಯೇಹ ತ್ರೀನ್ಸ್ವಪ್ನಾನ್ಧುನುತೇ ಮುನಿಃ ॥
ಅನುವಾದ
ಯಾರು ವಿಚಾರಶೀಲನಾದ ಮನುಷ್ಯನು ಸ್ವಾನುಭೂತಿಯಿಂದ ಆತ್ಮನ ತ್ರಿವಿಧ ಅದ್ವೈತಗಳ ಸಾಕ್ಷಾತ್ಕಾರ ಮಾಡಿ ಕೊಳ್ಳುತ್ತಾನೋ ಅದು ಜಾಗ್ರತ್, ಸ್ವಪ್ನ, ಸುಷುಪ್ತಿ ಮತ್ತು ದ್ರಷ್ಟಾ, ದರ್ಶನ ಮತ್ತು ದೃಶ್ಯದ ಭೇದರೂಪೀ ಸ್ವಪ್ನವನ್ನು ತೊಡೆದುಹಾಕುತ್ತದೆ. ಭಾವಾದ್ವೈತ, ಕ್ರಿಯಾದ್ವೈತ ಮತ್ತು ದ್ರವ್ಯಾದ್ವೈತ ಎಂಬ ಮೂರು ಪ್ರಕಾರದ ಅದ್ವೈತಗಳಿವೆ. ॥62॥
(ಶ್ಲೋಕ-63)
ಮೂಲಮ್
ಕಾರ್ಯಕಾರಣವಸ್ತ್ವೆ ಕ್ಯಮರ್ಶನಂ ಪಟತಂತುವತ್ ।
ಅವಸ್ತು ತ್ವಾದ್ವಿಕಲ್ಪಸ್ಯ ಭಾವಾದ್ವೈತಂ ತದುಚ್ಯತೇ ॥
ಅನುವಾದ
ವಸ್ತ್ರವು ಸೂತ್ರರೂಪವೇ ಆಗಿರುವಂತೆಯೇ ಕಾರ್ಯವು ಕಾರಣಮಾತ್ರವೇ ಆಗಿದೆ. ಏಕೆಂದರೆ, ಭೇದ ವಾದರೋ ವಾಸ್ತವವಾಗಿ ಇಲ್ಲವೇ ಇಲ್ಲ. ಹೀಗೆ ಎಲ್ಲದರ ಏಕತೆಯ ವಿಚಾರವೇ ‘ಭಾವಾದ್ವೈತ’ವಾಗಿದೆ. ॥63॥
(ಶ್ಲೋಕ-64)
ಮೂಲಮ್
ಯದ್ಬ್ರಹ್ಮಣಿ ಪರೇ ಸಾಕ್ಷಾತ್ಸರ್ವಕರ್ಮಸಮರ್ಪಣಮ್ ।
ಮನೋವಾಕ್ತನುಭಿಃ ಪಾರ್ಥ ಕ್ರಿಯಾದ್ವೈತಂ ತದುಚ್ಯತೇ ॥
ಅನುವಾದ
ಯುಧಿಷ್ಠಿರನೇ! ಮನಸ್ಸು, ಮಾತು ಮತ್ತು ಶರೀರಗಳಿಂದಾಗುವ ಎಲ್ಲ ಕರ್ಮಗಳು ಸ್ವಯಂ ಪರಬ್ರಹ್ಮ ಪರಮಾತ್ಮನಲ್ಲೇ ಆಗುತ್ತಾ ಇವೆ, ಅದರಲ್ಲೇ ಅಧ್ಯಸ್ತವಾಗಿದೆ ಈ ಭಾವದಿಂದ ಸಮಸ್ತ ಕರ್ಮಗಳನ್ನು ಸಮರ್ಪಿಸುವುದು ‘ಕ್ರಿಯಾದ್ವೈತ’ವಾಗಿದೆ. ॥64॥
(ಶ್ಲೋಕ-65)
ಮೂಲಮ್
ಆತ್ಮಜಾಯಾಸುತಾದೀನಾಮನ್ಯೇಷಾಂ ಸರ್ವದೇಹಿನಾಮ್ ।
ಯತ್ಸ್ವಾರ್ಥಕಾಮಯೋರೈಕ್ಯಂ ದ್ರವ್ಯಾದ್ವೈತಂ ತದುಚ್ಯತೇ ॥
ಅನುವಾದ
ಪತ್ನೀ-ಪುತ್ರಾದಿ ನೆಂಟರಿಷ್ಟರು ಹಾಗೂ ಪ್ರಪಂಚದ ಬೇರೆ ಸಮಸ್ತ ಪ್ರಾಣಿಗಳ ಹಾಗೂ ತನ್ನ ಸ್ವಾರ್ಥ ಮತ್ತು ಭೋಗಗಳು ಒಂದೇ ಆಗಿವೆ. ಅವುಗಳಲ್ಲಿ ತನ್ನದು ಹಾಗೂ ಪರರದು ಎಂಬ ಭೇದವೇ ಇಲ್ಲ ಈ ವಿಧದ ವಿಚಾರ ‘ದ್ರವ್ಯಾದ್ವೈತ’ವಾಗಿದೆ.॥65॥
(ಶ್ಲೋಕ-66)
ಮೂಲಮ್
ಯದ್ಯಸ್ಯ ವಾನಿಷಿದ್ಧಂ ಸ್ಯಾದ್ಯೇನ ಯತ್ರ ಯತೋ ನೃಪ ।
ಸ ತೇನೇಹೇತ ಕರ್ಮಾಣಿ ನರೋ ನಾನ್ಯೈರನಾಪದಿ ॥
ಅನುವಾದ
ಯುಧಿಷ್ಠಿರನೇ! ಯಾವ ಮನುಷ್ಯನಿಗೆ ಯಾವ ದ್ರವ್ಯವನ್ನು ಯಾವ ಸಮಯದಲ್ಲಿ ಯಾವ ಉಪಾಯದಿಂದ ಯಾರಿಂದ ಸ್ವೀಕರಿಸುವುದು ಶಾಸ್ತ್ರದ ಆಜ್ಞೆಗೆ ವಿರುದ್ಧವಲ್ಲವೋ ಅವನು ಅದರಿಂದಲೇ ಎಲ್ಲ ಕಾರ್ಯಗಳನ್ನು ನೆರವೇರಿಸಿಕೊಳ್ಳಬೇಕು. ಆಪತ್ಕಾಲವನ್ನು ಬಿಟ್ಟು ಇದರಿಂದ ಬೇರೆಯದನ್ನು ಮಾಡಬಾರದು. ॥66॥
(ಶ್ಲೋಕ-67)
ಮೂಲಮ್
ಏತೈರನ್ಯೈಶ್ಚ ವೇದೋಕ್ತೈರ್ವರ್ತಮಾನಃ ಸ್ವಕರ್ಮಭಿಃ ।
ಗೃಹೇಪ್ಯಸ್ಯ ಗತಿಂ ಯಾಯಾದ್ರಾಜನ್ ಸ್ತದ್ಭಕ್ತಿಭಾಙ್ನರಃ ॥
ಅನುವಾದ
ಮಹಾರಾಜಾ! ಭಗವದ್ಭಕ್ತ ಮನುಷ್ಯನು ವೇದದಲ್ಲಿ ಹೇಳಲ್ಪಟ್ಟ ಈ ಕರ್ಮಗಳನ್ನು ಹಾಗೂ ಬೇರೆ-ಬೇರೆ ಸ್ವಕರ್ಮಗಳನ್ನು ಅನುಷ್ಠಾನ ಮಾಡುತ್ತಾ ಮನೆಯಲ್ಲಿ ಇದ್ದರೂ ಕೂಡ ಶ್ರೀಕೃಷ್ಣನ ಗತಿಯನ್ನು ಪಡೆದುಕೊಳ್ಳುವನು. ॥67॥
(ಶ್ಲೋಕ-68)
ಮೂಲಮ್
ಯಥಾ ಹಿ ಯೂಯಂ ನೃಪದೇವ ದುಸ್ತ್ಯಜಾ-
ದಾಪದ್ಗಣಾದುತ್ತರತಾತ್ಮನಃ ಪ್ರಭೋಃ ।
ಯತ್ಪಾದಪಂಕೇರುಹಸೇವಯಾ ಭವಾ-
ನಹಾರ್ಷೀನ್ನಿರ್ಜಿತದಿಗ್ಗಜಃ ಕ್ರತೂನ್ ॥
ಅನುವಾದ
ಯುಧಿಷ್ಠಿರನೇ! ನೀನು ನಿನ್ನ ಸ್ವಾಮಿಯಾದ ಭಗವಾನ್ ಶ್ರೀಕೃಷ್ಣನ ಕೃಪೆ ಮತ್ತು ಸಹಾಯದಿಂದ ದೊಡ್ಡ-ದೊಡ್ಡ ಕಠಿಣ ವಿಪತ್ತುಗಳನ್ನೂ ದಾಟಿಹೋಗಿರುವೆ ಮತ್ತು ಅವನ ಚರಣಕಮಲಗಳ ಸೇವೆಯಿಂದ ಸಮಸ್ತ ಭೂಮಂಡಲವನ್ನು ಗೆದ್ದು ನೀನು ದೊಡ್ಡ-ದೊಡ್ಡ ರಾಜಸೂಯವೇ ಮುಂತಾದ ಯಜ್ಞಗಳನ್ನು ಮಾಡಿರುವೆ.॥68॥
(ಶ್ಲೋಕ-69)
ಮೂಲಮ್
ಅಹಂ ಪುರಾಭವಂ ಕಶ್ಚಿದ್ಗಂಧರ್ವ ಉಪಬರ್ಹಣಃ ।
ನಾಮ್ನಾತೀತೇ ಮಹಾಕಲ್ಪೇ ಗಂಧರ್ವಾಣಾಂ ಸುಸಮ್ಮತಃ ॥
ಅನುವಾದ
ಹಿಂದಿನ ಜನ್ಮದಲ್ಲಿ ಇದಕ್ಕೆ ಮೊದಲಿನ ಕಲ್ಪದಲ್ಲಿ ನಾನು ಓರ್ವಗಂಧರ್ವನಾಗಿದ್ದೆ. ನನ್ನ ಹೆಸರು ‘ಉಪಬರ್ಹಣ’ ಎಂದಿತ್ತು ಮತ್ತು ಗಂಧರ್ವರಲ್ಲಿ ನನಗೆ ತುಂಬಾ ಸಮ್ಮಾನವಿತ್ತು. ॥69॥
(ಶ್ಲೋಕ-70)
ಮೂಲಮ್
ರೂಪಪೇಶಲಮಾಧುರ್ಯಸೌಗಂಧ್ಯಪ್ರಿಯದರ್ಶನಃ ।
ಸೀಣಾಂ ಪ್ರಿಯತಮೋ ನಿತ್ಯಂ ಮತ್ತಸ್ತು ಪುರುಲಂಪಟಃ ॥
ಅನುವಾದ
ನಾನು ಅಪೂರ್ವವಾದ ಸೌಂದರ್ಯ, ಸೌಕುಮಾರ್ಯ ಮತ್ತು ಮಾಧುರ್ಯಗಳಿಂದ ಸಂಪನ್ನನಾಗಿದ್ದೆನು. ನನ್ನ ಶರೀರದಿಂದ ಸುಗಂಧವು ಸೂಸುತ್ತಿತ್ತು ಮತ್ತು ನೋಡಲು ನಾನು ತುಂಬಾ ಸುಂದರನಾಗಿದ್ದೆ. ಸ್ತ್ರೀಯರು ನನ್ನಲ್ಲಿ ಬಹಳ ಪ್ರೇಮವಿಟ್ಟಿದ್ದರು ಮತ್ತು ನಾನೂ ಸದಾಕಾಲ ಪ್ರಮಾದದಲ್ಲೇ ಇರುತ್ತಿದ್ದು, ಅತ್ಯಂತ ವಿಲಾಸಿಯಾಗಿದ್ದೆ. ॥70॥
(ಶ್ಲೋಕ-71)
ಮೂಲಮ್
ಏಕದಾ ದೇವಸತ್ರೇ ತು ಗಂಧರ್ವಾಪ್ಸರಸಾಂ ಗಣಾಃ ।
ಉಪಹೂತಾ ವಿಶ್ವಸೃಗ್ಭಿರ್ಹರಿಗಾಥೋಪಗಾಯನೇ ॥
ಅನುವಾದ
ಒಮ್ಮೆ ದೇವತೆಗಳು ಒಂದು ಜ್ಞಾನ ಸತ್ರವನ್ನು ಆಚರಿಸಿದರು. ದೊಡ್ಡ-ದೊಡ್ಡ ಪ್ರಜಾಪತಿಗಳು ಅಲ್ಲಿಗೆ ಬಂದಿದ್ದರು. ಭಗವಂತನ ಲೀಲೆಯನ್ನು ಹಾಡುವುದಕ್ಕಾಗಿ ಗಂಧರ್ವರನ್ನೂ, ಅಪ್ಸರೆಯನ್ನೂ ಕರೆಸಿದರು. ॥71॥
(ಶ್ಲೋಕ-72)
ಮೂಲಮ್
ಅಹಂ ಚ ಗಾಯಂಸ್ತದ್ವಿದ್ವಾನ್ ಸೀಭಿಃ ಪರಿವೃತೋ ಗತಃ ।
ಜ್ಞಾತ್ವಾ ವಿಶ್ವಸೃಜಸ್ತನ್ಮೇ ಹೇಲನಂ ಶೇಪುರೋಜಸಾ ।
ಯಾಹಿ ತ್ವಂ ಶೂದ್ರತಾಮಾಶು ನಷ್ಟಶ್ರೀಃ ಕೃತಹೇಲನಃ ॥
ಅನುವಾದ
ಅದು ಸಂತರ ಸಭೆ ಮತ್ತು ಅಲ್ಲಿ ಭಗವಂತನ ಲೀಲೆಗಳೇ ಹಾಡಲ್ಪಡುತ್ತವೆ ಎಂದು ನಾನು ತಿಳಿದಿದ್ದೆ. ಆದರೂ ನಾನು ಸ್ತ್ರೀಯರೊಂದಿಗೆ ಲೌಕಿಕ ಗೀತೆಗಳನ್ನು ಹಾಡುತ್ತಾ ಉನ್ಮತ್ತನಂತೆ ಅಲ್ಲಿಗೆ ತಲುಪಿದೆ. ಇವನಾದರೋ ನಮ್ಮಗಳ ಅನಾದರವನ್ನು ಮಾಡುತ್ತಿದ್ದಾನೆ ಎಂದು ದೇವತೆಗಳು ನೋಡಿದರು. ಅವರು ತಮ್ಮ ಶಕ್ತಿಯಿಂದ ನೀನು ನಮ್ಮನ್ನು ಅವಹೇಳನ ಮಾಡಿರುವಿ, ಅದರಿಂದ ನಿನ್ನ ಎಲ್ಲ ಸೌಂದರ್ಯ ಸಂಪತ್ತು ನಾಶವಾಗಿ, ನೀನು ಬೇಗನೇ ಶೂದ್ರನಾಗು’ ಎಂದು ಶಾಪವನ್ನು ಕೊಟ್ಟರು. ॥72॥
(ಶ್ಲೋಕ-73)
ಮೂಲಮ್
ತಾವದ್ದಾಸ್ಯಾಮಹಂ ಜಜ್ಞೇ ತತ್ರಾಪಿ ಬ್ರಹ್ಮವಾದಿನಾಮ್ ।
ಶುಶ್ರೂಷಯಾನುಷಂಗೇಣ ಪ್ರಾಪ್ತೋಹಂ ಬ್ರಹ್ಮಪುತ್ರತಾಮ್ ॥
ಅನುವಾದ
ಅವರ ಶಾಪದಿಂದ ನಾನು ದಾಸೀಪುತ್ರನಾಗಿ ಹುಟ್ಟಿದೆ. ಆದರೆ ಆ ಶೂದ್ರಜೀವನದಲ್ಲಿ ಮಾಡಿದ ಮಹಾತ್ಮರ ಸತ್ಸಂಗ ಮತ್ತು ಸೇವೆ-ಶುಶ್ರೂಷೆಯ ಪ್ರಭಾವದಿಂದ ನಾನು ಮರುಜನ್ಮದಲ್ಲಿ ಬ್ರಹ್ಮದೇವರ ಪುತ್ರನಾದೆ. ॥73॥
(ಶ್ಲೋಕ-74)
ಮೂಲಮ್
ಧರ್ಮಸ್ತೇ ಗೃಹಮೇಧೀಯೋ ವರ್ಣಿತಃ ಪಾಪನಾಶನಃ ।
ಗೃಹಸ್ಥೋ ಯೇನ ಪದವೀಮಂಜಸಾ ನ್ಯಾಸಿನಾಮಿಯಾತ್ ॥
ಅನುವಾದ
ಸಂತರ ಅವಹೇಳನೆ ಮತ್ತು ಸೇವೆಯ ಪ್ರತ್ಯಕ್ಷವಾದ ನನ್ನ ಅನುಭವವಾಗಿದೆ ಇದು. ಸಂತರ ಸೇವೆಯಿಂದಲೇ ಭಗವಂತನು ಪ್ರಸನ್ನನಾಗುತ್ತಾನೆ. ನಾನು ನಿನಗೆ ಗೃಹಸ್ಥರ ಪಾಪನಾಶಕ ಧರ್ಮವನ್ನು ಹೇಳಿದೆ. ಈ ಧರ್ಮದ ಆಚರಣೆಯಿಂದ ಗೃಹಸ್ಥರೂ ಕೂಡ ಆಯಾಸವಿಲ್ಲದೆ ಸಂನ್ಯಾಸಿಗಳಿಗೆ ಸಿಗುವಂತಹ ಪರಮಪದವನ್ನು ಪಡೆದುಕೊಳ್ಳುವರು.॥74॥
(ಶ್ಲೋಕ-75)
ಮೂಲಮ್
ಯೂಯಂ ನೃಲೋಕೇ ಬತ ಭೂರಿಭಾಗಾ
ಲೋಕಂ ಪುನಾನಾ ಮುನಯೋಭಿಯಂತಿ ।
ಯೇಷಾಂ ಗೃಹಾನಾವಸತೀತಿ ಸಾಕ್ಷಾ-
ದ್ಗೂಢಂ ಪರಂ ಬ್ರಹ್ಮ ಮನುಷ್ಯಲಿಂಗಮ್ ॥
ಅನುವಾದ
ಯುಧಿಷ್ಠಿರನೇ! ಈ ಮನುಷ್ಯಲೋಕದಲ್ಲಿ ನೀವೇ ಅತ್ಯಂತ ಭಾಗ್ಯಶಾಲಿಗಳು. ಏಕೆಂದರೆ, ನಿಮ್ಮ ಮನೆಯಲ್ಲಿ ಸಾಕ್ಷಾತ್ ಪರಬ್ರಹ್ಮ ಪರಮಾತ್ಮನು ಮನುಷ್ಯರೂಪವನ್ನು ಧರಿಸಿ ಗುಪ್ತರೂಪದಿಂದ ವಾಸಿಸುತ್ತಿರುವನು. ಇದರಿಂದ ಇಡೀ ಜಗತ್ತನ್ನು ಪವಿತ್ರವಾಗಿಸುವ ಋಷಿ-ಮುನಿಗಳು ಮತ್ತೆ-ಮತ್ತೆ ಅವನ ದರ್ಶನ ಪಡೆಯಲು ನಾಲ್ಕೂ ಕಡೆಗಳಿಂದ ನಿಮ್ಮ ಬಳಿಗೆ ಬರುತ್ತಾ ಇರುತ್ತಾರೆ. ॥75॥
(ಶ್ಲೋಕ-76)
ಮೂಲಮ್
ಸ ವಾ ಅಯಂ ಬ್ರಹ್ಮ ಮಹದ್ವಿಮೃಗ್ಯಂ
ಕೈವಲ್ಯ ನಿರ್ವಾಣಸುಖಾನುಭೂತಿಃ ।
ಪ್ರಿಯಃ ಸುಹೃದ್ವಃ ಖಲು ಮಾತುಲೇಯ
ಆತ್ಮಾರ್ಹಣೀಯೋ ವಿಧಿಕೃದ್ಗುರುಶ್ಚ ॥
ಅನುವಾದ
ದೊಡ್ಡ-ದೊಡ್ಡ ಮಹಾಪುರುಷರು ನಿರಂತರವಾಗಿ ಯಾರನ್ನು ಹುಡುಕುತ್ತಾ ಇರುತ್ತಾರೋ, ಯಾರು ಮಾಯಾಲೇಶದಿಂದ ರಹಿತನಾಗಿ ಪರಮಶಾಂತ ಪರಮಾನಂದಾನು ಭವಸ್ವರೂಪ ಪರಬ್ರಹ್ಮ ಪರಮಾತ್ಮನಿದ್ದಾನೋ ಅವನೇ ನಿಮ್ಮ ಹಿತೈಷಿಯೂ, ಪ್ರಿಯನೂ, ಸೋದರತ್ತೆಯ ಮಗನೂ, ಪೂಜ್ಯನೂ, ಆಜ್ಞಾಕಾರಿಯೂ, ಗುರುವೂ ಮತ್ತು ಸ್ವಯಂ ಆತ್ಮಾ ಶ್ರೀಕೃಷ್ಣನಾಗಿದ್ದಾನೆ. ॥76॥
(ಶ್ಲೋಕ-77)
ಮೂಲಮ್
ನ ಯಸ್ಯ ಸಾಕ್ಷಾದ್ಭವಪದ್ಮಜಾದಿಭೀ
ರೂಪಂ ಧಿಯಾ ವಸ್ತುತಯೋಪವರ್ಣಿತಮ್ ।
ವೌನೇನ ಭಕ್ತ್ಯೋಪಶಮೇನ ಪೂಜಿತಃ
ಪ್ರಸೀದತಾಮೇಷ ಸ ಸಾತ್ವತಾಂ ಪತಿಃ ॥
ಅನುವಾದ
ರುದ್ರದೇವರು, ಬ್ರಹ್ಮ ದೇವರು ಮುಂತಾದವರೂ ಕೂಡ ತಮ್ಮ ಬುದ್ಧಿಯಿಂದ ‘ಅವನು ಹೀಗೆಯೇ ಇದ್ದಾನೆ’ ಈ ರೂಪದಿಂದ ಅವನನ್ನು ವರ್ಣಿಸಲಾರದೆ ಹೋದರು. ಹಾಗಿರುವಾಗ ನಾವು ಹೇಗೆ ವರ್ಣಿಸಬಲ್ಲೆವು? ನಾವಾದರೋ ಮೌನ, ಭಕ್ತಿ ಮತ್ತು ಸಂಯಮದ ಮೂಲಕವೇ ಅವನ ಪೂಜೆಯನ್ನು ಮಾಡುತ್ತೇವೆ. ಕೃಪೆಗೈದು ನಮ್ಮ ಈ ಪೂಜೆಯನ್ನು ಸ್ವೀಕರಿಸಿ ಭಕ್ತ ವತ್ಸಲ ಭಗವಂತನು ನಮ್ಮ ಮೇಲೆ ಕೃಪೆದೋರಲಿ.॥77॥
(ಶ್ಲೋಕ-78)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ದೇವರ್ಷಿಣಾ ಪ್ರೋಕ್ತಂ ನಿಶಮ್ಯ ಭರತರ್ಷಭಃ ।
ಪೂಜಯಾಮಾಸ ಸುಪ್ರೀತಃ ಕೃಷ್ಣಂ ಚ ಪ್ರೇಮವಿಹ್ವಲಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೇವರ್ಷಿ ನಾರದರ ಈ ಪ್ರವಚನವನ್ನು ಕೇಳಿ ರಾಜಾ ಯುಧಿಷ್ಠಿರನಿಗೆ ಅತ್ಯಂತ ಆನಂದವಾಯಿತು. ಅವನು ಪ್ರೇಮ ವಿಹ್ವಲನಾಗಿ ದೇವರ್ಷಿನಾರದರನ್ನು ಮತ್ತು ಭಗವಾನ್ ಶ್ರೀಕೃಷ್ಣನನ್ನು ಪೂಜಿಸಿದನು. ॥78॥
(ಶ್ಲೋಕ-79)
ಮೂಲಮ್
ಕೃಷ್ಣಪಾರ್ಥಾವುಪಾಮಂತ್ರ್ಯ ಪೂಜಿತಃ ಪ್ರಯಯೌ ಮುನಿಃ ।
ಶ್ರುತ್ವಾ ಕೃಷ್ಣಂ ಪರಂ ಬ್ರಹ್ಮ ಪಾರ್ಥಃ ಪರಮವಿಸ್ಮಿತಃ ॥
ಅನುವಾದ
ದೇವರ್ಷಿ ನಾರದರು ಭಗವಾನ್ ಕೃಷ್ಣನಿಂದ ಮತ್ತು ಯುಧಿಷ್ಠಿರನಿಂದ ಬೀಳ್ಕೊಂಡು, ಅವನಿಂದ ಸತ್ಕಾರಪಡೆದು ಹೊರಟು ಹೋದರು. ಭಗವಾನ್ ಶ್ರೀಕೃಷ್ಣನೇ ಪರಬ್ರಹ್ಮನಾಗಿದ್ದಾನೆ ಎಂದು ಕೇಳಿ ಯುಧಿಷ್ಠಿರನಿಗೆ ಪರಮಾಶ್ಚರ್ಯವಾಯಿತು. ॥79॥
(ಶ್ಲೋಕ-80)
ಮೂಲಮ್
ಇತಿ ದಾಕ್ಷಾಯಣೀನಾಂ ತೇ ಪೃಥಗ್ವಂಶಾಃ ಪ್ರಕೀರ್ತಿತಾಃ ।
ದೇವಾಸುರಮನುಷ್ಯಾದ್ಯಾ ಲೋಕಾ ಯತ್ರ ಚರಾಚರಾಃ ॥
ಅನುವಾದ
ಪರೀಕ್ಷಿತನೇ! ಹೀಗೆ ನಾನು ನಿನಗೆ ದಕ್ಷಪುತ್ರಿಯರ ವಂಶಗಳ ಬೇರೆ-ಬೇರೆಯಾಗಿ ವರ್ಣನೆ ಮಾಡಿದನು. ಅವರ ವಂಶದಲ್ಲೇ ದೇವತೆಗಳು ಅಸುರರು, ಮನುಷ್ಯರೇ ಮುಂತಾದವರು ಮತ್ತು ಸಮಸ್ತ ಚರಾಚರದ ಸೃಷ್ಟಿಯಾಯಿತು.॥80॥
ಅನುವಾದ (ಸಮಾಪ್ತಿಃ)
ಹದಿನೈದನೆಯ ಅಧ್ಯಾಯವು ಮುಗಿಯಿತು. ॥15॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಪ್ರಹ್ಲಾದಾನುಚರಿತೇ ಯುಧಿಷ್ಠಿರ-ನಾರದಸಂವಾದೇ ಸದಾಚಾರನಿರ್ಣಯೋ ನಾಮ ಪಂಚದಶೋಧ್ಯಾಯಃ ॥15॥
ಏಳನೆಯ ಸ್ಕಂಧವು ಸಂಪೂರ್ಣವಾಯಿತು.