[ಹದಿನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಗ್ರಹಸ್ಥಾಶ್ರಮದ ಸದಾಚಾರ
(ಶ್ಲೋಕ-1)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ಗೃಹಸ್ಥ ಏತಾಂ ಪದವೀಂ ವಿಧಿನಾ ಯೇನ ಚಾಂಜಸಾ ।
ಯಾತಿ ದೇವಋಷೇ ಬ್ರೂಹಿ ಮಾದೃಶೋ ಗೃಹಮೂಢಧೀಃ ॥
ಅನುವಾದ
ಯುಧಿಷ್ಠಿರರಾಜನು ಕೇಳಿದನು — ದೇವಋಷಿಗಳಾದ ನಾರದರೇ! ನನ್ನಂತಹ ಗೃಹಾಸಕ್ತ ಗೃಹಸ್ಥನು ವಿಶೇಷ ಪರಿಶ್ರಮವಿಲ್ಲದೆ ಈ ಶ್ರೇಷ್ಠತಮವಾದ ಪದವನ್ನು ಹೇಗೆ ಪಡೆಯಬಲ್ಲನು? ಎಂಬುದನ್ನು ಕೃಪೆಯಿಟ್ಟು ತಿಳಿಸಬೇಕು. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಗೃಹೇಷ್ವವಸ್ಥಿತೋ ರಾಜನ್ ಕ್ರಿಯಾಃ ಕುರ್ವನ್ ಗೃಹೋಚಿತಾಃ ।
ವಾಸುದೇವಾರ್ಪಣಂ ಸಾಕ್ಷಾದುಪಾಸೀತ ಮಹಾಮುನೀನ್ ॥
ಅನುವಾದ
ನಾರದರು ಹೇಳಿದರು — ಯುಧಿಷ್ಠಿರನೇ! ಮನುಷ್ಯನು ಗೃಹಸ್ಥಾಶ್ರಮದಲ್ಲಿ ಇದ್ದು, ಗೃಹಸ್ಥ ಧರ್ಮಕ್ಕೆ ಅನುಗುಣವಾಗಿ ಎಲ್ಲ ಕೆಲಸವನ್ನು ಮಾಡಲಿ. ಆದರೆ ಆ ಎಲ್ಲ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಿ, ದೊಡ್ಡ-ದೊಡ್ಡ ಸಂತ-ಮಹಾತ್ಮರ ಸೇವೆಯನ್ನು ಮಾಡುತ್ತಿರಬೇಕು. ॥2॥
(ಶ್ಲೋಕ-3)
ಮೂಲಮ್
ಶೃಣ್ವನ್ಭಗವತೋಭೀಕ್ಷ್ಣಮವತಾರಕಥಾಮೃತಮ್ ।
ಶ್ರದ್ದಧಾನೋ ಯಥಾಕಾಲಮುಪಶಾಂತಜನಾವೃತಃ ॥
ಅನುವಾದ
ಅವಕಾಶವು ದೊರೆತಾಗ ಪ್ರಶಾಂತ ಚಿತ್ತರಾದ ಸಾಧು-ಸಜ್ಜನರ ಸಹವಾಸದಲ್ಲಿರುತ್ತಾ ಅವರಿಂದ ಶ್ರೀಭಗವಂತನ ಲೀಲಾ-ಕಥಾಮೃತವನ್ನು ಶ್ರದ್ಧೆಯಿಂದ ಮತ್ತೆ-ಮತ್ತೆ ಕೇಳುತ್ತಾ ಇರಬೇಕು. ॥3॥
(ಶ್ಲೋಕ-4)
ಮೂಲಮ್
ಸತ್ಸಂಗಾಚ್ಛನಕೈಃ ಸಂಗಮಾತ್ಮಜಾಯಾತ್ಮಜಾದಿಷು ।
ವಿಮುಚ್ಯೇನ್ಮುಚ್ಯಮಾನೇಷು ಸ್ವಯಂ ಸ್ವಪ್ನವದುತ್ಥಿತಃ ॥
ಅನುವಾದ
ಕನಸಿನಿಂದ ಎಚ್ಚರಗೊಂಡ ಮನುಷ್ಯನು ಕನಸಿನ ಸಂಬಂಧಿಗಳೊಂದಿಗೆ ಆಸಕ್ತನಾಗಿರುವುದಿಲ್ಲ. ಹಾಗೆಯೇ ಸತ್ಸಂಗದಿಂದ ಬುದ್ಧಿಯು ಶುದ್ಧವಾಗುತ್ತಾ ಹೋದಂತೆ ಶರೀರ, ಪತ್ನೀ, ಪುತ್ರ, ಧನ ಮುಂತಾದ ಆಸಕ್ತಿಯನ್ನು ಬಿಟ್ಟು ಬಿಡಬೇಕು. ಏಕೆಂದರೆ ಒಂದಲ್ಲ-ಒಂದುದಿನ ಇವುಗಳು ಬಿಟ್ಟು ಹೋಗುವಂತಹವುಗಳೇ ಆಗಿವೆ. ॥4॥
(ಶ್ಲೋಕ-5)
ಮೂಲಮ್
ಯಾವದರ್ಥಮುಪಾಸೀನೋ ದೇಹೇ ಗೇಹೇ ಚ ಪಂಡಿತಃ ।
ವಿರಕ್ತೋ ರಕ್ತವತ್ತತ್ರ ನೃಲೋಕೇ ನರತಾಂ ನ್ಯಸೇತ್ ॥
ಅನುವಾದ
ಬುದ್ಧಿವಂತನಾದ ಮನುಷ್ಯನು ಆವಶ್ಯಕತೆ ಇದ್ದಷ್ಟೇ ಮನೆಯ ಮತ್ತು ಶರೀರದ ಸೇವೆಮಾಡಬೇಕು. ಹೆಚ್ಚಾಗಬಾರದು. ಒಳಗಿನಿಂದ ವಿರಕ್ತನಾಗಿದ್ದು, ಹೊರಗಿನಿಂದ ಆಸಕ್ತನಾಗಿರುವಂತೆ ಇತರ ಜನರೊಂದಿಗೆ ಸಾಮಾನ್ಯ ಮನುಷ್ಯರಂತೆ ವ್ಯವಹರಿಸುತ್ತಾ ಇರಬೇಕು. ॥5॥
(ಶ್ಲೋಕ-6)
ಮೂಲಮ್
ಜ್ಞಾತಯಃ ಪಿತರೌ ಪುತ್ರಾ ಭ್ರಾತರಃ ಸುಹೃದೋಪರೇ ।
ಯದ್ವದಂತಿ ಯದಿಚ್ಛಂತಿ ಚಾನುಮೋದೇತ ನಿರ್ಮಮಃ ॥
ಅನುವಾದ
ತಂದೆ-ತಾಯಿ, ಅಣ್ಣ-ತಮ್ಮಂದಿರು, ಪುತ್ರ-ಮಿತ್ರರು, ಸ್ವಜನರು ಮತ್ತು ಇತರರು ಏನೇ ಹೇಳಿದರೂ ಅಥವಾ ಬಯಸಿದರೂ ಒಳಗಿನಿಂದ ಮಮತೆಯನ್ನು ಇಟ್ಟು ಕೊಳ್ಳದೆ ಅದನ್ನು ಅನುಮೋದಿಸುತ್ತಿರಬೇಕು. ॥6॥
(ಶ್ಲೋಕ-7)
ಮೂಲಮ್
ದಿವ್ಯಂ ಭೌಮಂ ಚಾಂತರಿಕ್ಷಂ ವಿತ್ತಮಚ್ಯುತನಿರ್ಮಿತಮ್ ।
ತತ್ಸರ್ವಮುಪಭುಂಜಾನ ಏತತ್ಕುರ್ಯಾತ್ಸ್ವತೋ ಬುಧಃ ॥
ಅನುವಾದ
ಬುದ್ಧಿವಂತನಾದ ಮನುಷ್ಯನು ದೇವತೆಗಳಿಂದಲೂ, ಭೂಮಿಯಿಂದಲೂ, ಅಂತರಿಕ್ಷದಿಂದಲೂ ತನಗೆ ದೊರಕುವ ಅನ್ನ-ಚಿನ್ನಗಳೇ ಮುಂತಾದ ಎಲ್ಲ ದ್ರವ್ಯಸಂಪತ್ತುಗಳನ್ನು ಶ್ರೀಭಗವಂತನ ವರಪ್ರದಾನವೆಂದು ಸ್ವೀಕರಿಸಿ ಪ್ರಾರಬ್ಧಕ್ಕನುಸಾರವಾಗಿ ಅವನ್ನು ಉಪಭೋಗಿಸುತ್ತಾ, ಸಂಗ್ರಹಿಸದೆ, ಹಿಂದೆ ಹೇಳಿದ ಸಾಧುಸೇವೆ ಮುಂತಾದ ಕಾರ್ಯಗಳಲ್ಲಿ ತೊಡಗಿಸಬೇಕು. ॥7॥
(ಶ್ಲೋಕ-8)
ಮೂಲಮ್
ಯಾವದ್ಭ್ರಿಯೇತ ಜಠರಂ ತಾವತ್ಸ್ವತ್ವಂ ಹಿ ದೇಹಿನಾಮ್ ।
ಅಧಿಕಂ ಯೋಭಿಮನ್ಯೇತ ಸ ಸ್ತೇನೋ ದಂಡಮರ್ಹತಿ ॥
ಅನುವಾದ
ಮನುಷ್ಯರಿಗೆ ಎಷ್ಟರಿಂದ ಅವರ ಹಸಿವು ಇಂಗಬಹುದೋ ಅಷ್ಟೇ ಧನದ ಮೇಲೆ ಅವನಿಗೆ ಅಧಿಕಾರವಿರುವುದು. ಇದಕ್ಕಿಂತ ಹೆಚ್ಚಿನ ಸಂಪತ್ತನ್ನು ತನ್ನದೆಂದು ತಿಳಿಯುವವನು ಕಳ್ಳನೇ ಸರಿ. ಅವನು ದಂಡಾರ್ಹನು. ॥8॥
(ಶ್ಲೋಕ-9)
ಮೂಲಮ್
ಮೃಗೋಷ್ಪ್ರಖರಮರ್ಕಾಖುಸರೀಸೃಪ್ಖಗಮಕ್ಷಿಕಾಃ ।
ಆತ್ಮನಃ ಪುತ್ರವತ್ಪಶ್ಯೇತ್ತೈರೇಷಾಮಂತರಂ ಕಿಯತ್ ॥
ಅನುವಾದ
ಜಿಂಕೆ, ಒಂಟೇ, ಕತ್ತೆ, ಕಪಿ, ಇಲಿ, ಸರ್ಪವೇ ಮುಂತಾದ ಹರಿದಾಡುವ ಪ್ರಾಣಿ, ಪಕ್ಷಿ ಮತ್ತು ಸೊಳ್ಳೆ ಮುಂತಾದವುಗಳನ್ನು ತನ್ನ ಪುತ್ರರಂತೇ ಭಾವಿಸಬೇಕು. ಅವುಗಳಿಗೂ ಮತ್ತು ತನ್ನ ಪುತ್ರರಿಗೂ ಏನು ಮಹಾವ್ಯತ್ಯಾಸ? ॥9॥
(ಶ್ಲೋಕ-10)
ಮೂಲಮ್
ತ್ರಿವರ್ಗಂ ನಾತಿಕೃಚ್ಛೇಣ ಭಜೇತ ಗೃಹಮೇಧ್ಯಪಿ ।
ಯಥಾದೇಶಂ ಯಥಾಕಾಲಂ ಯಾವದ್ದೈವೋಪಪಾದಿತಮ್ ॥
ಅನುವಾದ
ಗೃಹಸ್ಥನಾದ ಮನುಷ್ಯನೂ ಕೂಡ ಧರ್ಮ, ಅರ್ಥ ಮತ್ತು ಕಾಮ ಇವುಗಳಿಗಾಗಿ ಮಿತಿಮೀರಿ ಕಷ್ಟಪಡಬಾರದು. ದೇಶ, ಕಾಲ, ಅದೃಷ್ಟಗಳಿಗೆ ತಕ್ಕಂತೆ ದೊರೆತು ದರಲ್ಲೇ ಸಂತೋಷಪಟ್ಟುಕೊಳ್ಳಬೇಕು. ॥10॥
(ಶ್ಲೋಕ-11)
ಮೂಲಮ್
ಆಶ್ವಾಘಾಂತೇವಸಾಯಿಭ್ಯಃ ಕಾಮಾನ್ಸಂವಿಭಜೇದ್ಯಥಾ ।
ಅಪ್ಯೇಕಾಮಾತ್ಮನೋ ದಾರಾಂ ನೃಣಾಂ ಸ್ವತ್ವಗ್ರಹೋ ಯತಃ ॥
ಅನುವಾದ
ತನ್ನ ಸಮಸ್ತ ಭೋಗ-ಸಾಮಗ್ರಿಗಳನ್ನು ನಾಯಿ, ಪತಿತ ಮತ್ತು ಚಾಂಡಾಲರವರೆಗೆ ಎಲ್ಲ ಪ್ರಾಣಿಗಳಿಗೆ ಯಥಾಯೋಗ್ಯವಾಗಿ ಹಂಚಿಯೇ ತಾನು ಉಪಯೋಗಿಸಬೇಕು. ಹೆಚ್ಚೇನು ತನ್ನವಳೇ ಎಂದು ತಿಳಿದುಕೊಂಡಿರುವ ಪತ್ನಿಯನ್ನೂ ಕೂಡ ದೋಷವಿಲ್ಲದೇ ಇರುವ ರೀತಿಯಲ್ಲಿ ಅತಿಥಿಗಳ ಸೇವೆಯಲ್ಲಿ ನಿಯೋಜಿಸಬೇಕು. ॥11॥
(ಶ್ಲೋಕ-12)
ಮೂಲಮ್
ಜಹ್ಯಾದ್ಯದರ್ಥೇ ಸ್ವಪ್ರಾಣಾನ್ಹನ್ಯಾದ್ವಾ ಪಿತರಂ ಗುರುಮ್ ।
ತಸ್ಯಾಂ ಸ್ವತ್ವಂ ಸಿಯಾಂ ಜಹ್ಯಾದ್ಯಸ್ತೇನ ಹ್ಯಜಿತೋ ಜಿತಃ ॥
ಅನುವಾದ
ಜನರು ಹೆಂಡತಿಗಾಗಿ ತನ್ನ ಪ್ರಾಣಗಳನ್ನಾದರೂ ಕೊಟ್ಟಾರು. ಅವಳಿಗಾಗಿ ತಂದೆ-ತಾಯಿಗಳನ್ನು ಮತ್ತು ಗುರುಗಳನ್ನು ಕೊಂದುಹಾಕುವರು. ಅಂತಹ ಪತ್ನಿಯಲ್ಲಿರುವ ಮಮತೆಯನ್ನು ಗೆದ್ದವನು ಸರ್ವವಿಜಯಿಯಾದ ಭಗವಂತನನ್ನೂ ಕೂಡ ಗೆದ್ದುಕೊಂಡಂತೆ. ॥12॥
(ಶ್ಲೋಕ-13)
ಮೂಲಮ್
ಕೃಮಿವಿಡ್ಭಸ್ಮನಿಷ್ಠಾಂತಂ ಕ್ವೇದಂ ತುಚ್ಛಂ ಕಲೇವರಮ್ ।
ಕ್ವ ತದೀಯರತಿರ್ಭಾರ್ಯಾ ಕ್ವಾಯಮಾತ್ಮಾ ನಭಶ್ಛದಿಃ ॥
ಅನುವಾದ
ಈ ಶರೀರವು ಕೊನೆಗೆ ಕ್ರಿಮಿ, ಕೀಟ, ಮಲ ಅಥವಾ ಬೂದಿಯ ರಾಶಿಯಾಗಿಬಿಡುವುದು. ಇಂತಹ ತುಚ್ಛವಾದ ಶರೀರ ಮತ್ತು ಅದರ ರತಿಗೆ ಕಾರಣಳಾದ ಆ ಸ್ತ್ರೀಯೆಲ್ಲಿ? ಮತ್ತು ತನ್ನ ಮಹಿಮೆಯಿಂದ ಆಕಾಶವನ್ನೂ ಆವರಿಸಿಕೊಂಡಿ ರುವ ಅನಂತನಾದ ಆತ್ಮನೆಲ್ಲಿ? ॥13॥
(ಶ್ಲೋಕ-14)
ಮೂಲಮ್
ಸಿದ್ಧೈರ್ಯಜ್ಞಾವಶಿಷ್ಟಾರ್ಥೈಃ ಕಲ್ಪಯೇದ್ವತ್ತಿಮಾತ್ಮನಃ ।
ಶೇಷೇ ಸ್ವತ್ವಂ ತ್ಯಜನ್ಪ್ರಾಜ್ಞಃ ಪದವೀಂ ಮಹತಾಮಿಯಾತ್ ॥
ಅನುವಾದ
ಗೃಹಸ್ಥನು ಪ್ರಾರಬ್ಧದಿಂದ ದೊರೆತ ಮತ್ತು ಪಂಚಮಹಾ ಯಜ್ಞಗಳಿಂದ ಮಿಗಿದ ಅನ್ನದಿಂದಲೇ ತನ್ನ ಜೀವನ ನಿರ್ವಹಿಸ ಬೇಕು. ಇದಲ್ಲದೆ ಬೇರೆ ಯಾವುದೇ ವಸ್ತುವನ್ನು ತನ್ನ ಸ್ವತ್ತನ್ನಾಗಿ ಭಾವಿಸದಿರುವ ಬುದ್ಧಿವಂತರಾದ ಮನುಷ್ಯರು ಸಂತರಿಗೆ ದೊರೆಯುವ ಉತ್ತಮಗತಿಯನ್ನು ಪಡೆಯುವರು. ॥14॥
(ಶ್ಲೋಕ-15)
ಮೂಲಮ್
ದೇವಾನೃಷೀನ್ನೃ ಭೂತಾನಿ ಪಿತೃನಾತ್ಮಾನಮನ್ವಹಮ್ ।
ಸ್ವವೃತ್ತ್ಯಾಗತವಿತ್ತೇನ ಯಜೇತ ಪುರುಷಂ ಪೃಥಕ್ ॥
ಅನುವಾದ
ತನ್ನ ವರ್ಣಾಶ್ರಮವಿಹಿತ ವೃತ್ತಿಯಿಂದ ದೊರೆತ ಸಾಮಗ್ರಿಗಳಿಂದ ಪ್ರತಿದಿನವೂ ದೇವತೆಗಳಿಗೂ, ಋಷಿಗಳಿಗೂ, ಮನುಷ್ಯರಿಗೂ, ಭೂತ ಗಣಗಳಿಗೂ, ಪಿತೃಗಳಿಗೂ ಮತ್ತು ತನ್ನ ಆತ್ಮಕ್ಕೂ ಪೂಜೆಯನ್ನು ಸಲ್ಲಿಸಬೇಕು. ಇದು ಪರಮೇ ಶ್ವರನೊಬ್ಬನದೇ ಬೇರೆ-ಬೇರೆ ರೂಪಗಳಲ್ಲಿ ಮಾಡುವ ಆರಾಧನೆಯಾಗಿದೆ. ॥15॥
(ಶ್ಲೋಕ-16)
ಮೂಲಮ್
ಯರ್ಹ್ಯಾತ್ಮನೋಧಿಕಾರಾದ್ಯಾಃ ಸರ್ವಾಃ ಸ್ಯುರ್ಯಜ್ಞ ಸಂಪದಃ ।
ವೈತಾನಿಕೇನ ವಿಧಿನಾ ಅಗ್ನಿಹೋತ್ರಾದಿನಾ ಯಜೇತ್ ॥
ಅನುವಾದ
ತನಗೆ ಅಧಿಕಾರವಿದ್ದರೆ ಯಜ್ಞಕ್ಕಾಗಿ ಆವಶ್ಯಕವಾದ ಎಲ್ಲ ವಸ್ತುಗಳು ದೊರಕಿದ್ದರೆ ದೊಡ್ಡ-ದೊಡ್ಡ ಯಜ್ಞಗಳು ಅಥವಾ ಅಗ್ನಿಹೋತ್ರ ಮುಂತಾದವುಗಳ ಮೂಲಕ ಭಗವಂತನನ್ನು ಆರಾಧಿಸಬೇಕು. ॥16॥
(ಶ್ಲೋಕ-17)
ಮೂಲಮ್
ನ ಹ್ಯಗ್ನಿಮುಖತೋಯಂ ವೈ ಭಗವಾನ್ಸರ್ವಯಜ್ಞಭುಕ್ ।
ಇಜ್ಯೇತ ಹವಿಷಾ ರಾಜನ್ಯಥಾ ವಿಪ್ರಮುಖೇ ಹುತೈಃ ॥
ಅನುವಾದ
ಯುಧಿಷ್ಠಿರನೇ! ಸಮಸ್ತ ಯಜ್ಞಗಳ ಭೋಕ್ತಾ ಭಗವಂತನೇ ಆಗಿದ್ದಾನೆ. ಆದರೂ ಬ್ರಾಹ್ಮಣನ ಮುಖದಲ್ಲಿ ಅರ್ಪಿಸಲ್ಪಟ್ಟ ಹವಿಷ್ಯಾನ್ನದಿಂದ ಅವನಿಗೆ ತೃಪ್ತಿಯುಂಟಾಗುವಂತೆ ಅಗ್ನಿ ಮುಖದಲ್ಲಿ ಹವನ ಮಾಡುವುದರಿಂದ ಉಂಟಾಗುವುದಿಲ್ಲ.॥17॥
(ಶ್ಲೋಕ-18)
ಮೂಲಮ್
ತಸ್ಮಾದ್ಬ್ರಾಹ್ಮಣದೇವೇಷು ಮರ್ತ್ಯಾದಿಷು ಯಥಾರ್ಹತಃ ।
ತೈಸ್ತೈಃ ಕಾಮೈರ್ಯಜಸ್ವೈನಂ ಕ್ಷೇತ್ರಜ್ಞಂ ಬ್ರಾಹ್ಮಣಾನನು ॥
ಅನುವಾದ
ಅದಕ್ಕಾಗಿ ಬ್ರಾಹ್ಮಣ, ದೇವತೆ, ಮನುಷ್ಯ ಮುಂತಾದ ಎಲ್ಲ ಪ್ರಾಣಿಗಳಿಗೆ ಯಥಾಯೋಗ್ಯ ಅವರಿಗೆ ಉಪಯುಕ್ತ ಸಾಮಗ್ರಿಗಳಿಂದ ಅವರೆಲ್ಲರ ಹೃದಯದಲ್ಲಿ ಅಂತರ್ಯಾಮಿರೂಪದಿಂದ ವಿರಾಜಮಾನನಾದ ಭಗವಂತ ನನ್ನು ಪೂಜಿಸಬೇಕು. ಇವುಗಳಲ್ಲಿ ಪ್ರಧಾನತೆ ಬ್ರಾಹ್ಮಣನದೇ ಆಗಿರಬೇಕು.॥18॥
(ಶ್ಲೋಕ-19)
ಮೂಲಮ್
ಕುರ್ಯಾದಾಪರಪಕ್ಷೀಯಂ ಮಾಸಿ ಪ್ರೌಷ್ಠಪದೇ ದ್ವಿಜಃ ।
ಶ್ರಾದ್ಧಂ ಪಿತ್ರೋರ್ಯಥಾವಿತ್ತಂ ತದ್ಬಂಧೂನಾಂ ಚ ವಿತ್ತವಾನ್ ॥
ಅನುವಾದ
ಶ್ರೀಮಂತನಾದ ದ್ವಿಜನು ತನ್ನ ಧನಕ್ಕೆ ಅನುಸಾರವಾಗಿ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ತನ್ನ ಮಾತಾ-ಪಿತಾ ಹಾಗೂ ಅವರ ಬಂಧುಗಳನ್ನು ಉದ್ದೇಶಿಸಿ ಮಹಾಲಯ ಶ್ರಾದ್ಧವನ್ನು ಮಾಡಬೇಕು. ॥19॥
(ಶ್ಲೋಕ-20)
ಮೂಲಮ್
ಅಯನೇ ವಿಷುವೇ ಕುರ್ಯಾದ್ವ್ಯತೀಪಾತೇ ದಿನಕ್ಷಯೇ ।
ಚಂದ್ರಾದಿತ್ಯೋಪರಾಗೇ ಚ ದ್ವಾದಶೀಶ್ರವಣೇಷು ಚ ॥
(ಶ್ಲೋಕ-21)
ಮೂಲಮ್
ತೃತೀಯಾಯಾಂ ಶುಕ್ಲಪಕ್ಷೇ ನವಮ್ಯಾಮಥ ಕಾರ್ತಿಕೇ ।
ಚತಸೃಷ್ವಪ್ಯಷ್ಟಕಾಸು ಹೇಮಂತೇ ಶಿಶಿರೇ ತಥಾ ॥
(ಶ್ಲೋಕ-22)
ಮೂಲಮ್
ಮಾಘೇ ಚ ಸಿತಸಪ್ತಮ್ಯಾಂ ಮಘಾರಾಕಾಸಮಾಗಮೇ ।
ರಾಕಯಾ ಚಾನುಮತ್ಯಾ ವಾ ಮಾಸರ್ಕ್ಷಾಣಿ ಯುತಾನ್ಯಪಿ ॥
(ಶ್ಲೋಕ-23)
ಮೂಲಮ್
ದ್ವಾದಶ್ಯಾಮನುರಾಧಾ ಸ್ಯಾಚ್ಛ್ರವಣಸ್ತಿಸ್ರ ಉತ್ತರಾಃ ।
ತಿಸೃಷ್ವೇಕಾದಶೀ ವಾಸು ಜನ್ಮರ್ಕ್ಷಶ್ರೋಣಯೋಗಯುಕ್ ॥
(ಶ್ಲೋಕ-24)
ಮೂಲಮ್
ತ ಏತೇ ಶ್ರೇಯಸಃ ಕಾಲಾ ನೃಣಾಂ ಶ್ರೇಯೋವಿವರ್ಧನಾಃ ।
ಕುರ್ಯಾತ್ಸರ್ವಾತ್ಮನೈತೇಷು ಶ್ರೇಯೋಮೋಘಂ ತದಾಯುಷಃ ॥
ಅನುವಾದ
ಇದಲ್ಲದೆ ಅಯನ (ಮಕರಸಂಕ್ರಾಂತಿ ಮತ್ತು ಕರ್ಕಾಟಕ ಸಂಕ್ರಾಂತಿ)ಗಳಲ್ಲಿ, ವಿಷುವ (ತುಲಾ ಮತ್ತು ಮೇಷ ಸಂಕ್ರಾಂತಿ)ಗಳಲ್ಲಿ, ವ್ಯತೀಪಾತ, ದಿನಕ್ಷಯ, ಚಂದ್ರಗ್ರಹಣ, ಸೂರ್ಯಗ್ರಹಣಗಳ ಸಮಯದಲ್ಲಿ, ದ್ವಾದಶಿ, ಶ್ರವಣ, ಧನಿಷ್ಠಾ, ಅನುರಾಧಾ ನಕ್ಷತ್ರಗಳಲ್ಲಿ ವೈಶಾಖ ಶುಕ್ಲ ತೃತೀಯೆ (ಅಕ್ಷಯತದಿಗೆ)ಯಲ್ಲಿ, ಕಾರ್ತೀಕ ಶುಕ್ಲ ನವಮೀ(ಅಕ್ಷಯ ನವಮಿ)ಯಲ್ಲಿ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಈ ನಾಲ್ಕು ಮಾಸಗಳ ಕೃಷ್ಣ ಅಷ್ಟಮಿಗಳಲ್ಲಿ, ಮಾಘ ಶುಕ್ಲ ಸಪ್ತಮಿ, ಮಾಘಮಾಸದ ಮಘಾನಕ್ಷತ್ರ ಯುಕ್ತ ಪೌರ್ಣಿಮೆಯಲ್ಲಿ ಮತ್ತು ಮಾಸ ನಕ್ಷತ್ರ ಚಿತ್ರಾ, ವಿಶಾಖಾ, ಜ್ಯೇಷ್ಠ ಮುಂತಾದ ನಕ್ಷತ್ರಗಳಿಂದ ಕೂಡಿದ ಪೌರ್ಣಿಮೆಗಳಲ್ಲಿ, ದ್ವಾದಶೀ ತಿಥಿಗೆ ಅನುರಾಧಾ, ಶ್ರವಣ, ಉತ್ತರಾಫಲ್ಗುನೀ, ಉತ್ತರಾಷಾಢಾ, ಉತ್ತರಾಭಾದ್ರಪದಾ ನಕ್ಷತ್ರಗಳ ಯೋಗವು ಇರುವ ಸಮಯದಲ್ಲಿ, ಏಕಾದಶೀ ತಿಥಿಗೆ ಮೂರು ಉತ್ತರಾ ನಕ್ಷತ್ರಗಳೊಡನೆಯೂ ಅಥವಾ ಜನ್ಮನಕ್ಷತ್ರ, ಇಲ್ಲದೇ ಶ್ರವಣಾ ನಕ್ಷತ್ರದೊಡನೆ ಯೋಗವಿರುವ ಸಮಯದಲ್ಲಿ, ಪಿತೃಗಣಗಳನ್ನು ಉದ್ದೇಶಿಸಿ ಶ್ರಾದ್ಧಮಾಡುವುದು ಯೋಗ್ಯವೂ ಶ್ರೇಷ್ಠವೂ ಆಗಿದೆ. ಈ ಯೋಗಗಳು ಕೇವಲ ಶ್ರಾದ್ಧಕ್ಕೆ ಮಾತ್ರ ಯೋಗ್ಯವಲ್ಲದೆ ಎಲ್ಲ ಪುಣ್ಯಕರ್ಮಗಳ ಆಚರಣೆಗೂ ಉಪಯೋಗಿಯಾಗಿವೆ. ಇವು ಶ್ರೇಯಸ್ಸಿನ ಸಾಧನೆಗೆ ಉಪಯುಕ್ತವು ಮತ್ತು ಶುಭವನ್ನು ವೃದ್ಧಿ ಪಡಿಸುವವು. ಈ ಸಮಯಗಳಲ್ಲಿ ತನ್ನ ಸಂಪೂರ್ಣಶಕ್ತಿಯನ್ನು ತೊಡಗಿಸಿ ಶುಭಕರ್ಮಗಳನ್ನು ಮಾಡಬೇಕು. ಇದರಲ್ಲೇ ಜೀವನದ ಸಫಲತೆ ಇದೆ. ॥20-24॥
(ಶ್ಲೋಕ-25)
ಮೂಲಮ್
ಏಷು ಸ್ನಾನಂ ಜಪೋ ಹೋಮೋ ವ್ರತಂ ದೇವದ್ವಿಜಾರ್ಚನಮ್ ।
ಪಿತೃದೇವನೃಭೂತೇಭ್ಯೋ ಯದ್ದತ್ತಂ ತದ್ಧ್ಯನಶ್ವರಮ್ ॥
ಅನುವಾದ
ಈ ಪರ್ವಕಾಲಗಳಲ್ಲಿ ಮಾಡಲಾಗುವ ಸ್ನಾನ, ಜಪ, ಹೋಮ, ವ್ರತ ಹಾಗೂ ದೇವ-ಬ್ರಾಹ್ಮಣರ ಪೂಜೆ ಇವುಗಳಿಂದ ಮತ್ತು ದೇವತೆಗಳಿಗೆ, ಪಿತೃಗಳಿಗೆ, ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಅರ್ಪಿಸಲ್ಪಡುವ ಪದಾರ್ಥಗಳಿಂದ ಅಕ್ಷಯವಾದ ಫಲವು ದೊರೆಯುತ್ತದೆ. ॥25॥
(ಶ್ಲೋಕ-26)
ಮೂಲಮ್
ಸಂಸ್ಕಾರಕಾಲೋ ಜಾಯಾಯಾ ಅಪತ್ಯಸ್ಯಾತ್ಮನಸ್ತಥಾ ।
ಪ್ರೇತಸಂಸ್ಥಾ ಮೃತಾಹಶ್ಚ ಕರ್ಮಣ್ಯಭ್ಯುದಯೇ ನೃಪ ॥
ಅನುವಾದ
ಯುಧಿಷ್ಠಿರನೇ! ಇದೇ ಪ್ರಕಾರ ಪತ್ನಿಯ ಪುಂಸವನ ಮುಂತಾದ, ಸಂತಾನದ ಜಾತಕರ್ಮ ಮುಂತಾದ, ತನ್ನ ಯಜ್ಞದೀಕ್ಷೆ ಮುಂತಾದ ಸಂಸ್ಕಾರಗಳ ಸಮಯದಲ್ಲಿ, ಪ್ರೇತಕರ್ಮಗಳಲ್ಲಿ, ವಾರ್ಷಿಕ ಪಿತೃ ಶ್ರಾದ್ಧದದಿನ, ಅಥವಾ ಇತರ ಮಾಂಗಲಿಕ ಕರ್ಮಗಳಲ್ಲಿ ದಾನ-ಧರ್ಮಗಳನ್ನು ವಿಶೇಷವಾಗಿ ಮಾಡಬೇಕು. ॥26॥
(ಶ್ಲೋಕ-27)
ಮೂಲಮ್
ಅಥ ದೇಶಾನ್ಪ್ರವಕ್ಷ್ಯಾಮಿ ಧರ್ಮಾದಿಶ್ರೇಯಆವಹಾನ್ ।
ಸ ವೈ ಪುಣ್ಯತಮೋ ದೇಶಃ ಸತ್ಪಾತ್ರಂ ಯತ್ರ ಲಭ್ಯತೇ ॥
ಅನುವಾದ
ಧರ್ಮರಾಯಾ! ಈಗ ನಾನು ಧರ್ಮವೇ ಮುಂತಾದ ಶ್ರೇಯಸ್ಸನ್ನುಂಟುಮಾಡುವಂತಹ ಸ್ಥಾನಗಳನ್ನು ವರ್ಣಿಸುತ್ತೇನೆ. ಸತ್ಪಾತ್ರರು ಎಲ್ಲಿ ಸಿಗುತ್ತಾರೋ ಅದು ಎಲ್ಲಕ್ಕಿಂತ ಪವಿತ್ರವಾದ ದೇಶವು. ॥27॥
(ಶ್ಲೋಕ-28)
ಮೂಲಮ್
ಬಿಂಬಂ ಭಗವತೋ ಯತ್ರ ಸರ್ವಮೇತಚ್ಚರಾಚರಮ್ ।
ಯತ್ರ ಹ ಬ್ರಾಹ್ಮಣಕುಲಂ ತಪೋವಿದ್ಯಾದಯಾನ್ವಿತಮ್ ॥
(ಶ್ಲೋಕ-29)
ಮೂಲಮ್
ಯತ್ರ ಯತ್ರ ಹರೇರರ್ಚಾ ಸ ದೇಶಃ ಶ್ರೇಯಸಾಂ ಪದಮ್ ।
ಯತ್ರ ಗಂಗಾದಯೋ ನದ್ಯಃ ಪುರಾಣೇಷು ಚ ವಿಶ್ರುತಾಃ ॥
ಅನುವಾದ
ಈ ಚರಾಚರ ಜಗತ್ತಿಗೆ ಆಶ್ರಯನಾಗಿರುವ ಭಗವಂತನ ಅರ್ಚಾಮೂರ್ತಿ ಇರುವ ದೇಶವು, ತಪಸ್ಸು, ವಿದ್ಯೆ, ದಯೆ ಮುಂತಾದ ಗುಣಗಳಿಂದ ಕೂಡಿದ ಬ್ರಾಹ್ಮಣರ ಪರಿವಾರಗಳು ನೆಲೆಸಿರುವ ಸ್ಥಳಗಳು, ಪುರಾಣಗಳಲ್ಲಿ ಪ್ರಸಿದ್ಧವಾದ ಗಂಗಾದಿ ನದಿಗಳಿರುವ ಜಾಗಗಳು ಇವೆಲ್ಲವುಗಳೂ ಪರಮಶ್ರೇಯಸ್ಕರವಾದುವುಗಳು. ॥28-29॥
(ಶ್ಲೋಕ-30)
ಮೂಲಮ್
ಸರಾಂಸಿ ಪುಷ್ಕರಾದೀನಿ ಕ್ಷೇತ್ರಾಣ್ಯರ್ಹಾಶ್ರಿತಾನ್ಯುತ ।
ಕುರುಕ್ಷೇತ್ರಂ ಗಯಶಿರಃ ಪ್ರಯಾಗಃ ಪುಲಹಾಶ್ರಮಃ ॥
(ಶ್ಲೋಕ-31)
ಮೂಲಮ್
ನೈಮಿಷಂ ಾಲ್ಗುನಂ ಸೇತುಃ ಪ್ರಭಾಸೋಥ ಕುಶಸ್ಥಲೀ ।
ವಾರಾಣಸೀ ಮಧುಪುರೀ ಪಂಪಾ ಬಿಂದುಸರಸ್ತಥಾ ॥
(ಶ್ಲೋಕ-32)
ಮೂಲಮ್
ನಾರಾಯಣಾಶ್ರಮೋ ನಂದಾ ಸೀತಾರಾಮಾಶ್ರಮಾದಯಃ ।
ಸರ್ವೇ ಕುಲಾಚಲಾ ರಾಜನ್ಮಹೇಂದ್ರಮಲಯಾದಯಃ ॥
(ಶ್ಲೋಕ-33)
ಮೂಲಮ್
ಏತೇ ಪುಣ್ಯತಮಾ ದೇಶಾ ಹರೇರರ್ಚಾಶ್ರಿತಾಶ್ಚ ಯೇ ।
ಏತಾನ್ದೇಶಾನ್ನಿಷೇವೇತ ಶ್ರೇಯಸ್ಕಾಮೋ ಹ್ಯಭೀಕ್ಷ್ಣಶಃ ।
ಧರ್ಮೋ ಹ್ಯತ್ರೇಹಿತಃ ಪುಂಸಾಂ ಸಹಸ್ರಾಧಿಲೋದಯಃ ॥
ಅನುವಾದ
ಪುಷ್ಕರವೇ ಮುಂತಾದ ಸರೋವರಗಳು, ಸಿದ್ಧಪುರುಷರಿಂದ ಸೇವಿತವಾದ ಕ್ಷೇತ್ರಗಳು, ಕುರುಕ್ಷೇತ್ರ, ಗಯಾ, ಪ್ರಯಾಗ, ಪುಲಹಾಶ್ರಮ (ಸಾಲಿಗ್ರಾಮ ಕ್ಷೇತ್ರ), ನೈಮಿಷಾರಣ್ಯ, ಫಾಲ್ಗುಣ ಕ್ಷೇತ್ರ, ಸೇತುಬಂಧ ರಾಮೇಶ್ವರ, ಪ್ರಭಾಸ, ದ್ವಾರಕೆ, ಕಾಶೀ, ಮಥುರೆ, ಪಂಪಾಸರೋವರ, ಬಿಂದು ಸರೋವರ, ಬದರಿ ಕಾಶ್ರಮ, ಅಲಕನಂದಾ ಇವೇ ಪುಣ್ಯಕ್ಷೇತ್ರಗಳು; ಅಯೋಧ್ಯೆ, ಚಿತ್ರಕೂಟ, ಮುಂತಾದ ಸೀತಾರಾಮಾಶ್ರಮ ಕ್ಷೇತ್ರಗಳು, ಮಹೇಂದ್ರ, ಮಲಯವೇ ಮುಂತಾದ ಸಮಸ್ತ ಕುಲ ಪರ್ವತಗಳು, ಭಗವಂತನ ಅರ್ಚಾವತಾರಗಳಿರುವ ಜಾಗಗಳು ಇವೆಲ್ಲವುಗಳೂ ಅತ್ಯಂತ ಪವಿತ್ರವಾದ ದೇಶಗಳು. ॥30-33॥
(ಶ್ಲೋಕ-34)
ಮೂಲಮ್
ಪಾತ್ರಂ ತ್ವತ್ರ ನಿರುಕ್ತಂ ವೈ ಕವಿಭಿಃ ಪಾತ್ರವಿತ್ತಮೈಃ ।
ಹರಿರೇವೈಕ ಉರ್ವೀಶ ಯನ್ಮಯಂ ವೈ ಚರಾಚರಮ್ ॥
ಅನುವಾದ
ಯುಧಿಷ್ಠಿರನೇ! ಸತ್ಪಾತ್ರರು ಯಾರು? ಎಂದು ನಿರ್ಣ ಯಿಸುವ ಸಂದರ್ಭದಲ್ಲಿ ಶ್ರೇಷ್ಠರಾದ ತಜ್ಞರು ‘ಶ್ರೀಹರಿಯೊಬ್ಬನೇ ಸತ್ಪಾತ್ರನು’ ಎಂದು ಸಾರುತ್ತಾರೆ. ಈ ಚರಾಚರ ಜಗತ್ತೆಲ್ಲವೂ ಆ ಹರಿಮಯವೇ ಆಗಿದೆ.॥34॥
(ಶ್ಲೋಕ-35)
ಮೂಲಮ್
ದೇವರ್ಷ್ಯರ್ಹತ್ಸು ವೈ ಸತ್ಸು ತತ್ರ ಬ್ರಹ್ಮಾತ್ಮಜಾದಿಷು ।
ರಾಜನ್ಯದಗ್ರಪೂಜಾಯಾಂ ಮತಃ ಪಾತ್ರತಯಾಚ್ಯುತಃ ॥
ಅನುವಾದ
ಈಗ ನಿನ್ನ ಯಜ್ಞದ ವಿಷಯವನ್ನೇ ನೋಡು. ಆ ಯಜ್ಞದಲ್ಲಿ ದೇವತೆಗಳು, ಋಷಿಗಳು, ಸಿದ್ಧರು, ಸನಕಾದಿಗಳು ಉಪಸ್ಥಿತರಾಗಿದ್ದರೂ ಅಗ್ರಪೂಜೆಗಾಗಿ ಭಗವಾನ್ ಶ್ರೀಕೃಷ್ಣನನ್ನೇ ಸತ್ಪಾತ್ರನೆಂದು ತಿಳಿಯಲಾಯಿತು.॥35॥
(ಶ್ಲೋಕ-36)
ಮೂಲಮ್
ಜೀವರಾಶಿಭಿರಾಕೀರ್ಣ ಆಂಡಕೋಶಾಂಘ್ರಿಪೋ ಮಹಾನ್ ।
ತನ್ಮೂಲತ್ವಾದಚ್ಯುತೇಜ್ಯಾ ಸರ್ವಜೀವಾತ್ಮತರ್ಪಣಮ್ ॥
ಅನುವಾದ
ಅಸಂಖ್ಯ ಜೀವಿಗಳಿಂದ ತುಂಬಿರುವ ಈ ಬ್ರಹ್ಮಾಂಡವೆಂಬ ಮಹಾವೃಕ್ಷಕ್ಕೆ ಭಗವಾನ್ ಶ್ರೀಕೃಷ್ಣನೊಬ್ಬನೇ ಮೂಲ (ಬೇರು) ವಾಗಿದ್ದಾನೆ. ಅದರಿಂದ ಅವನ ಪೂಜೆಯಿಂದ ಸಮಸ್ತ ಜೀವಿಗಳ ಆತ್ಮನು ತೃಪ್ತನಾಗುತ್ತಾನೆ.॥36॥
(ಶ್ಲೋಕ-37)
ಮೂಲಮ್
ಪುರಾಣ್ಯನೇನ ಸೃಷ್ಟಾನಿ ನೃತಿರ್ಯಗೃಷಿದೇವತಾಃ ।
ಶೇತೇ ಜೀವೇನ ರೂಪೇಣ ಪುರೇಷು ಪುರುಷೋ ಹ್ಯಸೌ ॥
ಅನುವಾದ
ಈತನೇ ಮನುಷ್ಯ, ಪಶು-ಪಕ್ಷಿ, ಋಷಿ, ದೇವತೆಗಳು ಮುಂತಾದವುಗಳ ಶರೀರವೆಂಬ ಪುರಗಳನ್ನು ರಚಿಸಿ, ಅವನೇ ಈ ಪುರಗಳಲ್ಲಿ ಜೀವರೂಪದಿಂದ ಶಯನ ಮಾಡಿರುವನು. ಅದರಿಂದಲೇ ಅವನಿಗೆ ‘ಪುರುಷ’ ಎಂಬ ಒಂದು ಹೆಸರೂ ಇದೆ.॥37॥
(ಶ್ಲೋಕ-38)
ಮೂಲಮ್
ತೇಷ್ವೇಷು ಭಗವಾನ್ರಾಜನ್ ತಾರತಮ್ಯೇನ ವರ್ತತೇ ।
ತಸ್ಮಾತ್ಪಾತ್ರಂ ಹಿ ಪುರುಷೋ ಯಾವಾನಾತ್ಮಾ ಯಥೇಯತೇ ॥
ಅನುವಾದ
ಯುಧಿಷ್ಠಿರನೇ! ಭಗವಂತನು ಏಕರಸನಾಗಿದ್ದರೂ ಈ ಮನುಷ್ಯಾದಿ ಶರೀರಗಳಲ್ಲಿ ಅವುಗಳ ಭಿನ್ನತೆಯಿಂದಾಗಿ ತಾರತಮ್ಯದಿಂದ ಕೂಡಿರುವವನಂತೆ ಕಾಣುತ್ತಾನೆ. ಅದಕ್ಕಾಗಿ ಪಶು-ಪಕ್ಷಿ ಮುಂತಾದ ಶರೀರಗಳಿಗಿಂತ ಮನುಷ್ಯನೇ ಶ್ರೇಷ್ಠ ಪಾತ್ರ ನಾಗಿದ್ದಾನೆ. ಮನುಷ್ಯರಲ್ಲಿಯೂ ಯಾರಲ್ಲಿ ಭಗವಂತನ ಅಂಶವು ತಪಸ್ಸು-ಯೋಗಾದಿ ಎಷ್ಟು ಹೆಚ್ಚು ಕಂಡು ಬರುತ್ತದೋ ಅವನು ಅಷ್ಟೇ ಶ್ರೇಷ್ಠನಾಗಿದ್ದಾನೆ.॥38॥
(ಶ್ಲೋಕ-39)
ಮೂಲಮ್
ದೃಷ್ಟ್ವಾ ತೇಷಾಂ ಮಿಥೋ ನೃಣಾಮವಜ್ಞಾನಾತ್ಮತಾಂ ನೃಪ ।
ತ್ರೇತಾದಿಷು ಹರೇರರ್ಚಾ ಕ್ರಿಯಾಯೈ ಕವಿಭಿಃ ಕೃತಾ ॥
ಅನುವಾದ
ಧರ್ಮರಾಯಾ! ತ್ರೇತಾಯುಗವೇ ಮುಂತಾದ ಯುಗಗಳಲ್ಲಿ ಮನುಷ್ಯರು ಪರಸ್ಪರ ಒಬ್ಬರನ್ನೊಬ್ಬರು ಅಪಮಾನ ಮಾಡುವುದನ್ನು ನೋಡಿ ವಿದ್ವಾಂಸರು ಆ ಜನರಿಗೆ ಉಪಾಸನೆಯ ಸಿದ್ಧಿಗಾಗಿ ಭಗವಂತನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದರು. ॥39॥
(ಶ್ಲೋಕ-40)
ಮೂಲಮ್
ತತೋರ್ಚಾಯಾಂ ಹರಿಂ ಕೇಚಿತ್ಸಂಶ್ರದ್ಧಾಯ ಸಪರ್ಯಯಾ ।
ಉಪಾಸತ ಉಪಾಸ್ತಾಪಿ ನಾರ್ಥದಾ ಪುರುಷದ್ವಿಷಾಮ್ ॥
ಅನುವಾದ
ಅಂದಿನಿಂದ ಎಷ್ಟೋ ಜನರು ಅತ್ಯಂತ ಶ್ರದ್ಧೆ ಮತ್ತು ಸಾಮಗ್ರಿಗಳಿಂದ ಪ್ರತಿಮೆಯಲ್ಲೇ ಭಗವಂತನನ್ನು ಪೂಜಿಸುತ್ತಾರೆ. ಆದರೆ ಮನುಷ್ಯರೊಂದಿಗೆ ದ್ವೇಷಮಾಡುವವನಿಗೆ ಪ್ರತಿಮೆಯ ಉಪಾಸನೆ ಮಾಡಿದರೂ ಸಿದ್ಧಿ ಸಿಗಲಾರದು. ॥40॥
(ಶ್ಲೋಕ-41)
ಮೂಲಮ್
ಪುರುಷೇಷ್ವಪಿ ರಾಜೇಂದ್ರ ಸುಪಾತ್ರಂ ಬ್ರಾಹ್ಮಣಂ ವಿದುಃ ।
ತಪಸಾ ವಿದ್ಯಯಾ ತುಷ್ಟ್ಯಾ ಧತ್ತೇ ವೇದಂ ಹರೇಸ್ತನುಮ್ ॥
ಅನುವಾದ
ಯುಧಿಷ್ಠಿರನೇ! ಮನುಷ್ಯರಲ್ಲಿಯೂ ಬ್ರಾಹ್ಮಣನೇ ವಿಶೇಷ ಸತ್ಪಾತ್ರನೆಂದು ತಿಳಿಯಲಾಗಿದೆ. ಏಕೆಂದರೆ, ಅವನು ತನ್ನ ತಪಸ್ಸು, ವಿದ್ಯೆ, ಸಂತೋಷವೇ ಮುಂತಾದ ಗುಣಗಳಿಂದ ಭಗವಂತನ ವೇದರೂಪೀ ಶರೀರ ವನ್ನು ಧರಿಸಿರುತ್ತಾನೆ. ॥41॥
(ಶ್ಲೋಕ-42)
ಮೂಲಮ್
ನನ್ವಸ್ಯ ಬ್ರಾಹ್ಮಣಾ ರಾಜನ್ಕೃಷ್ಣಸ್ಯ ಜಗದಾತ್ಮನಃ ।
ಪುನಂತಃ ಪಾದರಜಸಾ ತ್ರಿಲೋಕೀಂ ದೈವತಂ ಮಹತ್ ॥
ಅನುವಾದ
ಮಹಾರಾಜ! ನಮ್ಮ-ನಿಮ್ಮ ಮಾತಿರಲಿ, ಈ ಸರ್ವಾತ್ಮನಾದ ಭಗವಾನ್ ಶ್ರೀಕೃಷ್ಣನಿಗೂ ಕೂಡ ಬ್ರಾಹ್ಮಣರೇ ಇಷ್ಟ ದೇವರಾಗಿದ್ದಾರೆ. ಏಕೆಂದರೆ, ಅವರ ಚರಣಧೂಳಿಯಿಂದ ಮೂರು ಲೋಕಗಳೂ ಪವಿತ್ರವಾಗುತ್ತವೆ.॥42॥
ಅನುವಾದ (ಸಮಾಪ್ತಿಃ)
ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು. ॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಸದಾಚಾರನಿರ್ಣಯೋ ನಾಮ ಚತುರ್ದಶೋಽಧ್ಯಾಯಃ ॥14॥