೧೩

[ಹದಿಮೂರನೆಯ ಅಧ್ಯಾಯ]

ಭಾಗಸೂಚನಾ

ಯತಿಧರ್ಮದ ನಿರೂಪಣೆ ಮತ್ತು ಅವಧೂತ-ಪ್ರಹ್ಲಾದ ಸಂವಾದ

(ಶ್ಲೋಕ-1)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಕಲ್ಪಸ್ತ್ವೇವಂ ಪರಿವ್ರಜ್ಯ ದೇಹಮಾತ್ರಾವಶೇಷಿತಃ ।
ಗ್ರಾಮೈಕರಾತ್ರವಿಧಿನಾ ನಿರಪೇಕ್ಷಶ್ಚರೇನ್ಮಹೀಮ್ ॥

ಅನುವಾದ

ನಾರದರು ಹೇಳುತ್ತಾರೆ — ಧರ್ಮರಾಜನೇ! ವಾನಪ್ರಸ್ಥ ಮುನಿಗೆ ಬ್ರಹ್ಮವಿಚಾರದ ಸಾಮರ್ಥ್ಯವಿದ್ದರೆ ಶರೀರಬಿಟ್ಟು ಉಳಿದೆಲ್ಲವನ್ನು ತ್ಯಾಗಮಾಡಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಬೇಕು. ಯಾವುದೇ ವಸ್ತು, ವ್ಯಕ್ತಿ, ಸ್ಥಾನ, ಸಮಯದ ಅಪೇಕ್ಷೆಯನ್ನಿಡದೆ ಒಂದು ಹಳ್ಳಿಯಲ್ಲಿ ಒಂದು ರಾತ್ರಿ ಮಾತ್ರ ತಂಗುವ ನಿಯಮವನ್ನು ಕೈಗೊಂಡು ಭೂಮಿಯಲ್ಲಿ ಸಂಚರಿಸಬೇಕು. ॥1॥

(ಶ್ಲೋಕ-2)

ಮೂಲಮ್

ಬಿಭೃಯಾದ್ಯದ್ಯಸೌ ವಾಸಃ ಕೌಪೀನಾಚ್ಛಾದನಂ ಪರಮ್ ।
ತ್ಯಕ್ತಂ ನ ದಂಡ ಲಿಂಗಾದೇರನ್ಯತ್ಕಿಂಚಿದನಾಪದಿ ॥

ಅನುವಾದ

ಅವನು ವಸ್ತ್ರವನ್ನು ಧರಿಸುವುದಿದ್ದರೆ ಗುಹ್ಯಾಂಗಗಳನ್ನು ಮುಚ್ಚುವಂತಹ ಕೌಪೀನವನ್ನು ಮಾತ್ರ ಧರಿಸಬೇಕು. ಯಾವುದೇ ಆಪತ್ತು ಇಲ್ಲದಿದ್ದರೆ ದಂಡ-ಕಮಂಡಲುಗಳೇ ಮುಂತಾದ ಆಶ್ರಮದ ಚಿಹ್ನೆಗಳನ್ನು ಬಿಟ್ಟು ತಾನು ತ್ಯಜಿಸಿದ ಯಾವ ವಸ್ತುವನ್ನು ಪರಿಗ್ರಹಿಸಬಾರದು.॥2॥

(ಶ್ಲೋಕ-3)

ಮೂಲಮ್

ಏಕ ಏವ ಚರೇದ್ಭಿಕ್ಷುರಾತ್ಮಾರಾಮೋನಪಾಶ್ರಯಃ ।
ಸರ್ವಭೂತಸುಹೃಚ್ಛಾಂತೋ ನಾರಾಯಣಪರಾಯಣಃ ॥

ಅನುವಾದ

ಸಂನ್ಯಾಸಿಯು ಎಲ್ಲ ಪ್ರಾಣಿಗಳಿಗೂ ಹಿತೈಷಿಯಾಗಿದ್ದು, ಶಾಂತನಾಗಿರಬೇಕು. ಭಗವತ್ಪರಾಯಣನಾಗಿ, ಯಾರ ಆಶ್ರಯವನ್ನು ಪಡೆಯದೆ ತನ್ನ ಆತ್ಮ ಸ್ವರೂಪದಲ್ಲೇ ರಮಿಸುತ್ತಾ ಒಬ್ಬಂಟಿಗನಾಗಿ ಸಂಚರಿಸಬೇಕು.॥3॥

(ಶ್ಲೋಕ-4)

ಮೂಲಮ್

ಪಶ್ಯೇದಾತ್ಮನ್ಯದೋ ವಿಶ್ವಂ ಪರೇ ಸದಸತೋವ್ಯಯೇ ।
ಆತ್ಮಾನಂ ಚ ಪರಂ ಬ್ರಹ್ಮ ಸರ್ವತ್ರ ಸದಸನ್ಮಯೇ ॥

ಅನುವಾದ

ಈ ಸಮಸ್ತ ವಿಶ್ವವು ಕಾರ್ಯ-ಕಾರಣಗಳಿಂದ ಅತೀತನಾದ ಪರಮಾತ್ಮನಲ್ಲಿ ನೆಲೆಸಿದೆ ಎಂದು ತಿಳಿಯಬೇಕು. ಕಾರ್ಯ-ಕಾರಣ ಸ್ವರೂಪವಾದ ಈ ಜಗತ್ತಿನಲ್ಲಿ ಬ್ರಹ್ಮಸ್ವರೂಪನಾದ ತನ್ನ ಆತ್ಮನು ತುಂಬಿರುವನೆಂದು ನೋಡಬೇಕು. ॥4॥

(ಶ್ಲೋಕ-5)

ಮೂಲಮ್

ಸುಪ್ತಪ್ರಬೋಧಯೋಃ ಸಂಧಾವಾತ್ಮನೋ ಗತಿಮಾತ್ಮದೃಕ್ ।
ಪಶ್ಯನ್ ಬಂಧಂ ಚ ಮೋಕ್ಷಂ ಚ ಮಾಯಾಮಾತ್ರಂ ನ ವಸ್ತುತಃ ॥

ಅನುವಾದ

ಆತ್ಮದರ್ಶಿಯಾದ ಸಂನ್ಯಾಸಿಯು ಸುಷುಪ್ತಿ ಮತ್ತು ಎಚ್ಚರದ ಸಂಧಿಯಲ್ಲಿ ತನ್ನ ಸ್ವಸ್ವರೂಪವನ್ನು ಅನುಭವಿಸಬೇಕು. ಬಂಧ ಮತ್ತು ಮೋಕ್ಷ ಇವೆರಡೂ ಕೇವಲ ಮಾಯೆಯಾಗಿದೆ. ವಸ್ತುತಃ ಏನೂ ಇಲ್ಲ ಎಂದು ತಿಳಿಯಬೇಕು. ॥5॥

(ಶ್ಲೋಕ-6)

ಮೂಲಮ್

ನಾಭಿನಂದೇದ್ಧ್ರುವಂ ಮೃತ್ಯುಮಧ್ರುವಂ ವಾಸ್ಯ ಜೀವಿತಮ್ ।
ಕಾಲಂ ಪರಂ ಪ್ರತೀಕ್ಷೇತ ಭೂತಾನಾಂ ಪ್ರಭವಾಪ್ಯಯಮ್ ॥

ಅನುವಾದ

ಶರೀರಕ್ಕೆ ಅವಶ್ಯವಾಗಿ ಬರುವ ಮೃತ್ಯುವಿನ ಕುರಿತು ಮತ್ತು ಅನಿಶ್ಚಿತ ಜೀವನದ ಕುರಿತು ಚಿಂತಿಸಬಾರದು. ಕೇವಲ ಸಮಸ್ತ ಪ್ರಾಣಿಗಳ ಉತ್ಪತ್ತಿ ಹಾಗೂ ನಾಶದ ಕಾರಣನಾದ ಕಾಲನನ್ನು ಪ್ರತೀಕ್ಷೆ ಮಾಡುತ್ತಾ ಇರಬೇಕು. ॥6॥

(ಶ್ಲೋಕ-7)

ಮೂಲಮ್

ನಾಸಚ್ಛ್ರಾಸೇಷು ಸಜ್ಜೇತ ನೋಪಜೀವೇತ ಜೀವಿಕಾಮ್ ।
ವಾದವಾದಾಂಸ್ತ್ಯ ಜೇತ್ತರ್ಕಾನ್ಪಕ್ಷಂ ಕಂ ಚ ನ ಸಂಶ್ರಯೇತ್ ॥

ಅನುವಾದ

ಅಸತ್-ಅನಾತ್ಮ ವಸ್ತುಗಳನ್ನು ಪ್ರತಿಪಾದನೆ ಮಾಡುವ ಶಾಸ್ತ್ರಗಳನ್ನು ಪ್ರೀತಿಸಬಾರದು. ತನ್ನ ಜೀವನ ನಿರ್ವಾಹಕ್ಕಾಗಿ ಯಾವುದೇ ವೃತ್ತಿಯನ್ನು ಅವಲಂಬಿಸಬಾರದು. ಕೇವಲ ವಾದ-ವಿವಾದಕ್ಕಾಗಿಯೇ ಯಾವುದೇ ತರ್ಕಮಾಡಬಾರದು. ಪ್ರಪಂಚದಲ್ಲಿ ಯಾರ ಪಕ್ಷವನ್ನೂ ವಹಿಸಬಾರದು. ॥7॥

(ಶ್ಲೋಕ-8)

ಮೂಲಮ್

ನ ಶಿಷ್ಯಾನನುಬಧ್ನೀತ ಗ್ರಂಥಾನ್ನೈವಾಭ್ಯಸೇದ್ಬಹೂನ್ ।
ನ ವ್ಯಾಖ್ಯಾಮುಪಯುಂಜೀತ ನಾರಂಭಾನ್ನಾರಭೇತ್ಕ್ವಚಿತ್ ॥

ಅನುವಾದ

ಶಿಷ್ಯ ಮಂಡಳಿಯನ್ನು ಕೂಡಿಸಬಾರದು. ಬಹಳ ಗ್ರಂಥಗಳನ್ನು ಅಭ್ಯಾಸ ಮಾಡಕೂಡದು. ವ್ಯಾಖ್ಯಾನ-ಉಪನ್ಯಾಸವನ್ನು ಮಾಡಬಾರದು. ದೊಡ್ಡ-ದೊಡ್ಡ ಕೆಲಸಗಳನ್ನು ಯೋಜನೆಗಳನ್ನು ಕೈಗೊಳ್ಳಬಾರದು. ॥8॥

(ಶ್ಲೋಕ-9)

ಮೂಲಮ್

ನ ಯತೇರಾಶ್ರಮಃ ಪ್ರಾಯೋ ಧರ್ಮಹೇತುರ್ಮಹಾತ್ಮನಃ ।
ಶಾಂತಸ್ಯ ಸಮಚಿತ್ತಸ್ಯ ಬಿಭೃಯಾದುತ ವಾ ತ್ಯಜೇತ್ ॥

ಅನುವಾದ

ಶಾಂತನೂ, ಸಮದರ್ಶಿಯೂ, ಮಹಾತ್ಮನೂ ಆದ ಸಂನ್ಯಾಸಿಗೆ ಯಾವುದೇ ಆಶ್ರಮದ ಬಂಧನವು ಧರ್ಮದ ಕಾರಣವಾಗುವುದಿಲ್ಲ. ಅವನು ತನ್ನ ಆಶ್ರಮದ ಚಿಹ್ನೆಗಳನ್ನು ಬೇಕಾದರೆ ಧರಿಸಬಹುದು, ಬೇಡವಾದರೆ ಬಿಟ್ಟುಬಿಡಬಹುದು. ॥9॥

(ಶ್ಲೋಕ-10)

ಮೂಲಮ್

ಅವ್ಯಕ್ತಲಿಂಗೋ ವ್ಯಕ್ತಾರ್ಥೋ ಮನೀಷ್ಯುನ್ಮತ್ತಬಾಲವತ್ ।
ಕವಿರ್ಮೂಕವದಾತ್ಮಾನಂ ಸ ದೃಷ್ಟ್ಯಾ ದರ್ಶಯೇನ್ನೃಣಾಮ್ ॥

ಅನುವಾದ

ಅವನ ಬಳಿಯಲ್ಲಿ ಯಾವುದೇ ಆಶ್ರಮದ ಚಿಹ್ನೆಗಳು ಇಲ್ಲದಿದ್ದರೂ ಅವನು ಆತ್ಮಾನುಸಂಧಾನದಲ್ಲಿ ಮುಳುಗಿರಬೇಕು. ಅತ್ಯಂತ ವಿಚಾರ ಶೀಲನಾಗಿದ್ದರೂ ಹುಚ್ಚನಂತೆ, ಬಾಲಕನಂತೆ ಕಾಣಿಸಿಕೊಳ್ಳಬೇಕು. ಕವಿ(ಜ್ಞಾನಿ)ಯಾಗಿ ಸುಂದರವಾಗಿ ಮಾತಾಡಬಲ್ಲವನಾಗಿದ್ದರೂ ಇತರರಿಗೆ ಮೂಕನಂತೆ ತೋರಿಸಿಕೊಳ್ಳಬೇಕು. ॥10॥

(ಶ್ಲೋಕ-11)

ಮೂಲಮ್

ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್ ।
ಪ್ರಹ್ಲಾದಸ್ಯ ಚ ಸಂವಾದಂ ಮುನೇರಾಜಗರಸ್ಯ ಚ ॥

ಅನುವಾದ

ಯುಧಿಷ್ಠಿರನೇ! ಈ ವಿಷಯದಲ್ಲಿ ಮಹಾತ್ಮರು ಒಂದು ಪ್ರಾಚೀನ ಇತಿಹಾಸವನ್ನು ಹೇಳುತ್ತಾರೆ. ಅದು ಅವಧೂತ ಶಿಖಾಮಣಿ ದತ್ತಾತ್ರೇಯಮುನಿಗಳಿಗೂ, ಭಕ್ತರಾಜ ಪ್ರಹ್ಲಾದನಿಗೂ ನಡೆದ ಸಂವಾದವಾಗಿದೆ. ॥11॥

(ಶ್ಲೋಕ-12)

ಮೂಲಮ್

ತಂ ಶಯಾನಂ ಧರೋಪಸ್ಥೇ ಕಾವೇರ್ಯಾಂ ಸಹ್ಯಸಾನುನಿ ।
ರಜಸ್ವಲೈಸ್ತನೂದೇಶೈರ್ನಿಗೂಢಾಮಲತೇಜಸಮ್ ॥

(ಶ್ಲೋಕ-13)

ಮೂಲಮ್

ದದರ್ಶ ಲೋಕಾನ್ವಿಚರಲ್ಲೋಕತತ್ತ್ವವಿವಿತ್ಸಯಾ ।
ವೃತೋಮಾತ್ಯೈಃ ಕತಿಪಯೈಃ ಪ್ರಹ್ಲಾದೋ ಭಗವತ್ಪ್ರಿಯಃ ॥

ಅನುವಾದ

ಒಮ್ಮೆ ಭಗವಂತನ ಪರಮ ಪ್ರೇಮಿ ಪ್ರಹ್ಲಾದನು ತನ್ನ ಕೆಲವು ಮಂತ್ರಿಗಳೊಂದಿಗೆ ಜನರ ಹೃದಯದ ಮಾತನ್ನು ತಿಳಿಯಲಿಕ್ಕಾಗಿ ಲೋಕ ಸಂಚಾರ ಮಾಡುತ್ತಿದ್ದನು. ಆಗ ಅವನಿಗೆ ಸಹ್ಯಪರ್ವತದ ತಪ್ಪಲಿನಲ್ಲಿ ಕಾವೇರಿನದಿಯ ದಡದಲ್ಲಿ ನೆಲದಮೇಲೆ ಮಲಗಿದ್ದ ಓರ್ವ ಮುನಿಯು ದೃಷ್ಟಿಗೆ ಬಿದ್ದನು. ಅವರ ಶರೀರದ ನಿರ್ಮಲ ತೇಜಸ್ಸು ಮೈಯೆಲ್ಲ ಧೂಳು ತುಂಬಿದ್ದರಿಂದ ಮರೆಯಾಗಿತ್ತು. ॥12-13॥

(ಶ್ಲೋಕ-14)

ಮೂಲಮ್

ಕರ್ಮಣಾಕೃತಿಭಿರ್ವಾಚಾ ಲಿಂಗೈರ್ವರ್ಣಾಶ್ರಮಾದಿಭಿಃ ।
ನ ವಿದಂತಿ ಜನಾ ಯಂ ವೈ ಸೋಸಾವಿತಿ ನ ವೇತಿ ಚ ॥

ಅನುವಾದ

ಅವರ ಕರ್ಮ, ಆಕಾರ, ಮಾತು, ವರ್ಣಾಶ್ರಮಾದಿಗಳ ಚಿಹ್ನೆಗಳಿಂದ ಇವರು ಯಾರೋ ಸಿದ್ಧಪುರುಷರಾಗಿದ್ದಾರೋ, ಅಲ್ಲವೋ ಎಂದು ಸಾಮಾನ್ಯಜನರು ತಿಳಿಯುತ್ತಿರಲಿಲ್ಲ.॥14॥

(ಶ್ಲೋಕ-15)

ಮೂಲಮ್

ತಂ ನತ್ವಾಭ್ಯರ್ಚ್ಯ ವಿಧಿವತ್ಪಾದಯೋಃ ಶಿರಸಾ ಸ್ಪೃಶನ್ ।
ವಿವಿತ್ಸುರಿದಮಪ್ರಾಕ್ಷೀನ್ಮಹಾಭಾಗವತೋಸುರಃ ॥

ಅನುವಾದ

ಪರಮ ಭಾಗವತೋತ್ತಮನಾದ ಅಸುರರಾಜ ಪ್ರಹ್ಲಾದನು ಅವರ ಚರಣಗಳಲ್ಲಿ ಶಿರವನ್ನಿಟ್ಟು ನಮಸ್ಕಾರ ಮಾಡಿ, ವಿಧಿಪೂರ್ವಕವಾಗಿ ಅವರನ್ನು ಪೂಜಿಸಿ ತತ್ತ್ವವನ್ನು ತಿಳಿಯುವ ಇಚ್ಛೆಯಿಂದ ಹೀಗೆ ಪ್ರಶ್ನಿಸಿದನು. ॥15॥

(ಶ್ಲೋಕ-16)

ಮೂಲಮ್

ಬಿಭರ್ಷಿ ಕಾಯಂ ಪೀವಾನಂ ಸೋದ್ಯಮೋ ಭೋಗವಾನ್ಯಥಾ ।
ವಿತ್ತಂ ಚೈವೋದ್ಯಮವತಾಂ ಭೋಗೋ ವಿತ್ತವತಾಮಿಹ ।
ಭೋಗಿನಾಂ ಖಲು ದೇಹೋಯಂ ಪೀವಾ ಭವತಿ ನಾನ್ಯಥಾ ॥

ಅನುವಾದ

ಓ ಭಗವಂತರೇ! ತಮ್ಮ ಶರೀರವು ಉದ್ಯಮೀ ಮತ್ತು ಭೋಗೀ ಪುರುಷರಂತೆ ಹೃಷ್ಟ-ಪುಷ್ಟವಾಗಿದೆ. ಉದ್ಯೋಗ ಮಾಡುವವರಿಗೆ ಧನ ಸಿಗುತ್ತದೆ, ಧನಿಕರಿಗೇ ಭೋಗಗಳು ದೊರೆಯುತ್ತವೆ ಮತ್ತು ಭೋಗಿಗಳ ಶರೀರವೇ ಹೃಷ್ಟ-ಪುಷ್ಟವಾಗಿರುತ್ತದೆ. ಇದು ಪ್ರಪಂಚದ ನಿಯಮವಾಗಿದೆ. ಬೇರೆ ಯಾವ ಕಾರಣದಿಂದಲೂ ಹೀಗಾಗಲು ಸಾಧ್ಯವಿಲ್ಲ. ॥16॥

(ಶ್ಲೋಕ-17)

ಮೂಲಮ್

ನ ತೇ ಶಯಾನಸ್ಯ ನಿರುದ್ಯಮಸ್ಯಬ್ರಹ್ಮನ್ನು ಹಾರ್ಥೋ ಯತ ಏವ ಭೋಗಃ ।
ಅಭೋಗಿನೋಯಂ ತವ ವಿಪ್ರ ದೇಹಃಪೀವಾ ಯತಸ್ತದ್ವದ ನಃ ಕ್ಷಮಂ ಚೇತ್ ॥

ಅನುವಾದ

ಪೂಜ್ಯರೇ! ನೀವು ಯಾವ ಉದ್ಯೋಗವನ್ನೂ ಮಾಡದೆ ಹೆಬ್ಬಾವಿನಂತೆ ಬಿದ್ದುಕೊಂಡಿರುವಿರಿ. ಇದರಿಂದ ನಿಮ್ಮ ಬಳಿಯಲ್ಲಿ ಧನವೂ ಇಲ್ಲ. ಮತ್ತೆ ಭೋಗಗಳು ನಿಮಗೆ ಎಲ್ಲಿಂದ ಬರಬೇಕು? ಭೂಸುರರೇ! ಭೋಗವಿಲ್ಲದೆಯೇ ನಿಮ್ಮ ಶರೀರವು ಇಷ್ಟು ಹೃಷ್ಟ-ಪುಷ್ಟ ಹೇಗಿದೆ? ನಾವು ಕೇಳಲು ಯೋಗ್ಯರಾಗಿದ್ದರೆ ಅವಶ್ಯವಾಗಿ ಹೇಳುವ ಕೃಪೆಮಾಡಬೇಕು. ॥17॥

(ಶ್ಲೋಕ-18)

ಮೂಲಮ್

ಕವಿಃ ಕಲ್ಪೋ ನಿಪುಣದೃಕ್ಚಿತ್ರಪ್ರಿಯಕಥಃ ಸಮಃ ।
ಲೋಕಸ್ಯ ಕುರ್ವತಃ ಕರ್ಮ ಶೇಷೇ ತದ್ವೀಕ್ಷಿತಾಪಿ ವಾ ॥

ಅನುವಾದ

ತಾವು ಕವಿಗಳೂ, ವಿದ್ವಾಂಸರೂ, ಸಮರ್ಥರೂ, ಚತುರರೂ ಆಗಿದ್ದೀರಿ. ನಿಮ್ಮ ಮಾತುಗಳು ಅದ್ಭುತವೂ, ಪ್ರಿಯವೂ ಆಗಿರುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಇಡೀ ಜಗತ್ತು ಕರ್ಮ ಮಾಡುತ್ತಾ ಇರುವುದನ್ನು ನೋಡಿಯೂ ಸಮಭಾವದಿಂದ ಮಲಗಿಕೊಂಡೇ ಇರುವಿರಲ್ಲ! ಇದರ ಕಾರಣವೇನು? ॥18॥

(ಶ್ಲೋಕ-19)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಸ ಇತ್ಥಂ ದೈತ್ಯಪತಿನಾ ಪರಿಪೃಷ್ಟೋ ಮಹಾಮುನಿಃ ।
ಸ್ಮಯಮಾನಸ್ತಮಭ್ಯಾಹ ತದ್ವಾಗಮೃತಯಂತ್ರಿತಃ ॥

ಅನುವಾದ

ನಾರದರು ಹೇಳಿದರು — ಧರ್ಮನಂದನಾ! ಪ್ರಹ್ಲಾದನು ಮಹಾಮುನಿ ದತ್ತಾತ್ರೇಯರಲ್ಲಿ ಹೀಗೆ ಪ್ರಶ್ನೆಮಾಡಿದಾಗ ಅವರು ಇವನ ಅಮೃತಮಯ ವಾಣಿಗೆ ವಶರಾಗಿ ಮುಗುಳ್ನಗುತ್ತಾ ಹೀಗೆಂದರು ॥19॥

ಮೂಲಮ್

(ಶ್ಲೋಕ-20)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ವೇದೇದಮಸುರಶ್ರೇಷ್ಠ ಭವಾನ್ನನ್ವಾರ್ಯಸಮ್ಮತಃ ।
ಈಹೋಪರಮಯೋರ್ನೃಣಾಂ ಪದಾನ್ಯಧ್ಯಾತ್ಮ ಚಕ್ಷುಷಾ ॥

ಅನುವಾದ

ದತ್ತಾತ್ರೇಯರು ಹೇಳಿದರು — ಎಲೈ ಅಸುರೋತ್ತಮನೇ! ಎಲ್ಲ ಶ್ರೇಷ್ಠ ಪುರುಷರೂ ನಿನ್ನನ್ನು ಸಮ್ಮಾನಿಸುವರು. ಕರ್ಮಗಳ ಪ್ರವೃತ್ತಿ ಮತ್ತು ನಿವೃತ್ತಿ ಇವುಗಳ ಯಾವ ಫಲ ಮನುಷ್ಯನಿಗೆ ಸಿಗುತ್ತದೆ ಎಂಬುದು ನೀನು ನಿನ್ನ ಜ್ಞಾನ ದೃಷ್ಟಿಯಿಂದ ತಿಳಿದೇ ಇರುವೆ. ॥20॥

(ಶ್ಲೋಕ-21)

ಮೂಲಮ್

ಯಸ್ಯ ನಾರಾಯಣೋ ದೇವೋ ಭಗವಾನ್ಹೃದ್ಗತಃ ಸದಾ ।
ಭಕ್ತ್ಯಾ ಕೇವಲಯಾಜ್ಞಾನಂ ಧುನೋತಿ ಧ್ವಾಂತಮರ್ಕವತ್ ॥

ಅನುವಾದ

ನಿನ್ನ ಅನನ್ಯ ಭಕ್ತಿಯಿಂದ ದೇವಾಧಿದೇವ ಭಗವಾನ್ ನಾರಾಯಣನು ಸದಾ ನಿನ್ನ ಹೃದಯದಲ್ಲಿ ಬೆಳಗುತ್ತಾ, ಸೂರ್ಯನು ಅಂಧಕಾರ ವನ್ನು ನಾಶಮಾಡಿಬಿಡುವಂತೆ ನಿನ್ನ ಅಜ್ಞಾನವನ್ನು ನಾಶಪಡಿಸುತ್ತಿದ್ದಾನೆ.॥21॥

(ಶ್ಲೋಕ-22)

ಮೂಲಮ್

ಅಥಾಪಿ ಬ್ರೂಮಹೇ ಪ್ರಶ್ನಾನ್ಸ್ತವ ರಾಜನ್ಯಥಾಶ್ರುತಮ್ ।
ಸಂಭಾವನೀಯೋ ಹಿ ಭವಾನಾತ್ಮನಃ ಶುದ್ಧಿಮಿಚ್ಛತಾಮ್ ॥

ಅನುವಾದ

ಆದರೂ ಪ್ರಹ್ಲಾದ! ನಾನು ತಿಳಿದಿರುವಂತೆ ನಿನ್ನ ಪ್ರಶ್ನೆಗಳ ಉತ್ತರಗಳನ್ನು ಕೊಡುವೆ. ಏಕೆಂದರೆ, ಆತ್ಮಶುದ್ಧಿಯ ಅಭಿಲಾಷಿಗಳು ನಿನ್ನನ್ನು ಅವಶ್ಯವಾಗಿ ಸಮ್ಮಾನಿಸಬೇಕು.॥22॥

(ಶ್ಲೋಕ-23)

ಮೂಲಮ್

ತೃಷ್ಣಯಾ ಭವವಾಹಿನ್ಯಾಯೋಗ್ಯೈಃ ಕಾಮೈರಪೂರಯಾ ।
ಕರ್ಮಾಣಿ ಕಾರ್ಯಮಾಣೋಹಂನಾನಾಯೋನಿಷು ಯೋಜಿತಃ ॥

ಅನುವಾದ

ಪ್ರಹ್ಲಾದನೇ! ತೃಷ್ಣೆಯು ಇಚ್ಛಾನುಸಾರ ಭೋಗಗಳು ಪ್ರಾಪ್ತವಾದರೂ ಪೂರ್ಣವಾಗದಿರುವಂತಹ ಒಂದು ವಸ್ತು ಆಗಿದೆ. ಅದರಿಂದಲೇ ಹುಟ್ಟು-ಸಾವುಗಳ ಚಕ್ರದಲ್ಲಿ ಅಲೆಯ ಬೇಕಾಗುತ್ತದೆ. ತೃಷ್ಣೆಯು ನನ್ನಿಂದ ಎಷ್ಟು ಕರ್ಮಗಳನ್ನು ಮಾಡಿಸಿತೋ ತಿಳಿಯದು. ಅವುಗಳಿಂದಾಗಿಯೇ ಎಷ್ಟು ಯೋನಿಗಳಲ್ಲಿ ನನ್ನನ್ನು ಬೀಳಿಸಿದೆಯೋ? ತಿಳಿಯದು. ॥23॥

(ಶ್ಲೋಕ-24)

ಮೂಲಮ್

ಯದೃಚ್ಛಯಾ ಲೋಕಮಿಮಂ ಪ್ರಾಪಿತಃ ಕರ್ಮಬಿರ್ಭ್ರಮನ್ ।
ಸ್ವರ್ಗಾಪವರ್ಗಯೋರ್ದ್ವಾರಂ ತಿರಶ್ಚಾಂ ಪುನರಸ್ಯ ಚ ॥

ಅನುವಾದ

ಕರ್ಮಗಳ ಕಾರಣದಿಂದ ಅನೇಕ ಯೋನಿಗಳಲ್ಲಿ ಅಲೆಯುತ್ತಾ ಕೊನೆಗೆ ದೈವವಶದಿಂದ ನನಗೆ ಸ್ವರ್ಗ, ಮೋಕ್ಷ, ತಿರ್ಯಕ್ಯೋನಿ ಹಾಗೂ ಈ ಮಾನವದೇಹದ ಪ್ರಾಪ್ತಿಯ ದ್ವಾರವಾದ ಈ ಮನುಷ್ಯಯೋನಿ ದೊರೆತಿದೆ. ಇದರಲ್ಲಿ ಪುಣ್ಯಮಾಡಿದರೆ ಸ್ವರ್ಗ, ಪಾಪಮಾಡಿದರೆ ಪಶು-ಪಕ್ಷಿ ಮುಂತಾದ ಯೋನಿಗಳು, ನಿವೃತ್ತನಾದರೆ ಮೋಕ್ಷ ಮತ್ತು ಎರಡು ರೀತಿಯ ಕರ್ಮಗಳನ್ನು ಮಾಡಿದರೆ ಪುನಃ ಮನುಷ್ಯಯೋನಿಯೇ ದೊರೆಯಬಲ್ಲದು. ॥24॥

(ಶ್ಲೋಕ-25)

ಮೂಲಮ್

ಅತ್ರಾಪಿ ದಂಪತೀನಾಂ ಚ ಸುಖಾಯಾನ್ಯಾಪನುತ್ತಯೇ ।
ಕರ್ಮಾಣಿ ಕುರ್ವತಾಂ ದೃಷ್ಟ್ವಾ ನಿವೃತ್ತೋಸ್ಮಿ ವಿಪರ್ಯಯಮ್ ॥

ಅನುವಾದ

ಆದರೆ ಪ್ರಪಂಚದ ಸ್ತ್ರೀ-ಪುರುಷರೆಲ್ಲರೂ ಸುಖದ ಪ್ರಾಪ್ತಿಗಾಗಿ ಮತ್ತು ದುಃಖದ ನಿವೃತ್ತಿಗಾಗಿಯೇ ಕರ್ಮಗಳನ್ನು ಮಾಡುತ್ತಾರೆ. ಆದರೂ ಫಲವು ಅದಕ್ಕೆ ವಿಪರೀತವೇ ಆಗಿ ಹೋಗುತ್ತದೆ. ಅವರು ಇನ್ನೂ ದುಃಖದಲ್ಲೇ ಬಿದ್ದುಹೋಗು ವರು. ಅದಕ್ಕಾಗಿ ನಾನು ಕರ್ಮಗಳಿಂದ ನಿವೃತ್ತನಾಗಿ ಬಿಟ್ಟಿದ್ದೇನೆ. ॥25॥

(ಶ್ಲೋಕ-26)

ಮೂಲಮ್

ಸುಖಮಸ್ಯಾತ್ಮನೋ ರೂಪಂ ಸರ್ವೇಹೋಪರತಿಸ್ತನುಃ ।
ಮನಃಸಂಸ್ಪರ್ಶಜಾನ್ದೃಷ್ಟ್ವಾ ಭೋಗಾನ್ಸ್ವಪ್ಸ್ಯಾಮಿ ಸಂವಿಶನ್ ॥

ಅನುವಾದ

ಸುಖವೇ ಆತ್ಮನ ಸ್ವರೂಪವಾಗಿದೆ. ಸಮಸ್ತ ವ್ಯಾಪಾರಗಳಿಂದ ನಿವೃತ್ತಿಯೇ ಆತ್ಮನ ಶರೀರ ಅದು ಆತ್ಮನಾಗುವ ಸ್ಥಾನವಾಗಿದೆ. ಅದಕ್ಕಾಗಿ ಎಲ್ಲ ಭೋಗಗಳನ್ನು ಮನೋ ರಾಜ್ಯಮಾತ್ರವೆಂದು ತಿಳಿದು ನಾನು ನನ್ನ ಪ್ರಾರಬ್ಧವನ್ನು ಅನುಭವಿಸುತ್ತಾ ಬಿದ್ದುಕೊಂಡಿರುವೆನು. ॥26॥

(ಶ್ಲೋಕ-27)

ಮೂಲಮ್

ಇತ್ಯೇತದಾತ್ಮನಃ ಸ್ವಾರ್ಥಂ ಸಂತಂ ವಿಸ್ಮೃತ್ಯ ವೈ ಪುಮಾನ್ ।
ವಿಚಿತ್ರಾಮಸತಿ ದ್ವೈತೇ ಘೋರಾಮಾಪ್ನೋತಿ ಸಂಸೃತಿಮ್ ॥

ಅನುವಾದ

ಮನುಷ್ಯನು ತನ್ನ ನಿಜವಾದ ಸ್ವಾರ್ಥ ಅರ್ಥಾತ್ ತನ್ನ ಸ್ವರೂಪವೇ ಆದ ಸುಖವನ್ನು ಮರೆತು ಈ ಮಿಥ್ಯೆಯಾದ ದ್ವೈತವನ್ನೇ ಸತ್ಯವೆಂದು ತಿಳಿಯುತ್ತಾ ಅತ್ಯಂತ ಭಯಂಕರವೂ, ವಿಚಿತ್ರವೂ ಆದ ಜನ್ಮ-ಮೃತ್ಯುಗಳಲ್ಲಿ ಅಲೆಯುತ್ತಾ ಇರುತ್ತಾನೆ. ॥27॥

(ಶ್ಲೋಕ-28)

ಮೂಲಮ್

ಜಲಂ ತದುದ್ಭವೈಶ್ಛನ್ನಂ ಹಿತ್ವಾಜ್ಞೋ ಜಲಕಾಮ್ಯಯಾ ।
ಮೃಗತೃಷ್ಣಾಮುಪಾಧಾವೇದ್ಯಥಾನ್ಯತ್ರಾರ್ಥದೃಕ್ಸ್ವತಃ ॥

ಅನುವಾದ

ಅಜ್ಞಾನೀ ಮನುಷ್ಯನು ನೀರಿನಲ್ಲಿರುವ ಜೊಂಡು, ಪಾಚಿಗಳಿಂದ ಮುಚ್ಚಿಹೋದ ನೀರನ್ನು ನೀರೆಂದು ತಿಳಿಯದೆ, ಬಿಸಿಲ್ಗುದುರೆಯ ಕಡೆಯ ಓಡುವಂತೆಯೇ ತನ್ನ ಆತ್ಮನಿಗಿಂತ ಭಿನ್ನವಾದ ವಸ್ತುಗಳಲ್ಲಿ ಸುಖವನ್ನು ತಿಳಿಯುವವನು ಆತ್ಮ ನನ್ನು ಬಿಟ್ಟು ವಿಷಯಗಳ ಕಡೆಗೆ ಓಡುತ್ತಾ ಇದ್ದಾನೆ. ॥28॥

(ಶ್ಲೋಕ-29)

ಮೂಲಮ್

ದೇಹಾದಿಭಿರ್ದೈವತಂತ್ರೈರಾತ್ಮನಃ ಸುಖಮೀಹತಃ ।
ದುಃಖಾತ್ಯಯಂ ಚಾನೀಶಸ್ಯ ಕ್ರಿಯಾ ಮೋಘಾಃ ಕೃತಾಃ ಕೃತಾಃ ॥

ಅನುವಾದ

ಭಕ್ತ ಪ್ರಹ್ಲಾದನೇ! ಶರೀರಾದಿಗಳಾದರೋ ಪ್ರಾರಬ್ಧಕ್ಕೆ ಅಧೀನವಾಗಿವೆ. ಅವುಗಳ ಮೂಲಕ ತನಗಾಗಿ ಸುಖವನ್ನು ಪಡೆಯಲು ಮತ್ತು ದುಃಖವನ್ನು ಹೋಗಲಾಡಿಸಲು ಬಯ ಸುವವನು ಎಂದಿಗೂ ತನ್ನ ಕಾರ್ಯದಲ್ಲಿ ಸಫಲನಾಗುವುದಿಲ್ಲ. ಅವನು ಬಾರಿ-ಬಾರಿಗೂ ಮಾಡಿದ ಕರ್ಮಗಳೆಲ್ಲ ವ್ಯರ್ಥವಾಗಿ ಹೋಗುತ್ತವೆ. ॥29॥

(ಶ್ಲೋಕ-30)

ಮೂಲಮ್

ಆಧ್ಯಾತ್ಮಿಕಾದಿಭಿರ್ದುಃಖೈರವಿಮುಕ್ತಸ್ಯ ಕರ್ಹಿಚಿತ್ ।
ಮರ್ತ್ಯಸ್ಯ ಕೃಚ್ಛ್ರೋಪನತೈರರ್ಥೈಃ ಕಾಮೈಃ ಕ್ರಿಯೇತ ಕಿಮ್ ॥

ಅನುವಾದ

ಮನುಷ್ಯನನ್ನು ಸದಾ ಕಾಲ ಶಾರೀರಿಕ, ಮಾನಸಿಕ ಮುಂತಾದ ದುಃಖಗಳು ಆಕ್ರಮಿಸಿಕೊಂಡಿರುತ್ತವೆ. ಅವನು ಸಾವನ್ನಂತೂ ಒಪ್ಪಲೇಬೇಕು. ಹೀಗಿರುವಾಗ ಆತನು ಅತಿಕಷ್ಟಪಟ್ಟು, ಪರಿಶ್ರಮದಿಂದ ಸ್ವಲ್ಪ ಧನ-ಭೋಗಗಳನ್ನು ಗಳಿಸಿಕೊಂಡರೂ ಏನು ಲಾಭವಿದೆ? ॥30॥

(ಶ್ಲೋಕ-31)

ಮೂಲಮ್

ಪಶ್ಯಾಮಿ ಧನಿನಾಂ ಕ್ಲೇಶಂ ಲುಬ್ಧಾನಾಮಜಿತಾತ್ಮನಾಮ್ ।
ಭಯಾದಲಬ್ಧನಿದ್ರಾಣಾಂ ಸರ್ವತೋಭಿವಿಶಂಕಿನಾಮ್ ॥

ಅನುವಾದ

ಲೋಭಿಗಳು ಮತ್ತು ಇಂದ್ರಿಯಗಳಿಗೆ ವಶರಾದ ಶ್ರೀಮಂತರ ದುಃಖವನ್ನಂತೂ ನಾನು ನೋಡುತ್ತಾ ಇರುತ್ತೇನೆ. ಭಯದಿಂದಾಗಿ ಅವರಿಗೆ ನಿದ್ದೆಯೇ ಬರುವುದಿಲ್ಲ. ಅವರಿಗೆ ಎಲ್ಲರ ಮೇಲೂ ಸಂದೇಹವೇ ಇರುತ್ತದೆ. ॥31॥

(ಶ್ಲೋಕ-32)

ಮೂಲಮ್

ರಾಜತಶ್ಚೋರತಃ ಶತ್ರೋಃ ಸ್ವಜನಾತ್ಪಶುಪಕ್ಷಿತಃ ।
ಅರ್ಥಿಭ್ಯಃ ಕಾಲತಃ ಸ್ವಸ್ಮಾನ್ನಿತ್ಯಂ ಪ್ರಾಣಾರ್ಥವದ್ಭಯಮ್ ॥

ಅನುವಾದ

ಜೀವನ ಮತ್ತು ಧನದ ಲೋಭಿಯಾದವನು ರಾಜ, ಕಳ್ಳ, ಶತ್ರು, ಸ್ವಜನರು, ಪಶು-ಪಕ್ಷಿ, ಯಾಚಕ ಮತ್ತು ಕಾಲ ಇವುಗಳಿಗೆ ಹೆದರುತ್ತಾ ಇರುತ್ತಾನೆ. ಅಷ್ಟೇ ಅಲ್ಲ ‘ನಾನೆಲ್ಲಿಯಾದರೂ ತಪ್ಪುಮಾಡಿ, ಹೆಚ್ಚು ಖರ್ಚುಮಾಡಿ ಬಿಟ್ಟೇನೋ’ ಎಂಬ ಆಶಂಕೆಯಿಂದ ತನ್ನ ಕುರಿತೂ ಕೂಡ ಭಯಪಡುತ್ತಾ ಇರುತ್ತಾನೆ. ॥32॥

(ಶ್ಲೋಕ-33)

ಮೂಲಮ್

ಶೋಕಮೋಹಭಯಕ್ರೋಧ-ರಾಗಕ್ಲೈಬ್ಯಶ್ರಮಾದಯಃ ।
ಯನ್ಮೂಲಾಃ ಸ್ಯುರ್ನೃಣಾಂ ಜಹ್ಯಾತ್ಸ್ಪೃಹಾಂ ಪ್ರಾಣಾರ್ಥಯೋರ್ಬುಧಃ ॥

ಅನುವಾದ

ಅದಕ್ಕಾಗಿ ಶೋಕ, ಮೋಹ, ಭಯ, ಕ್ರೋಧ, ರಾಗ, ಹೇಡಿತನ, ಶ್ರಮ ಇವುಗಳಿಗೆ ತುತ್ತಾಗಬೇಕಾಗುವುದು. ಬುದ್ಧಿವಂತನಾದ ಮನುಷ್ಯನು ಆ ಧನ ಮತ್ತು ಜೀವನದ ಆಸೆಯನ್ನು ತ್ಯಜಿಸಿಬಿಡಬೇಕು. ॥33॥

(ಶ್ಲೋಕ-34)

ಮೂಲಮ್

ಮಧುಕಾರಮಹಾಸರ್ಪೌಲೋಕೇಸ್ಮಿನ್ನೋ ಗುರೂತ್ತವೌ ।
ವೈರಾಗ್ಯಂ ಪರಿತೋಷಂ ಚ ಪ್ರಾಪ್ತಾ ಯಚ್ಛಿಕ್ಷಯಾ ವಯಮ್ ॥

ಅನುವಾದ

ಈ ಲೋಕದಲ್ಲಿ ಅಜಗರ (ಹೆಬ್ಬಾವು) ಮತ್ತು ಜೇನು ನೊಣ ಇವೆರಡೂ ಎಲ್ಲರಿಗಿಂತ ದೊಡ್ಡ ಗುರುಗಳು ನನಗೆ. ಅವುಗಳ ಶಿಕ್ಷಣದಿಂದ ನಮಗೆ ವೈರಾಗ್ಯ ಮತ್ತು ಸಂತೋಷಗಳು ಉಂಟಾಗಿವೆ. ॥34॥

(ಶ್ಲೋಕ-35)

ಮೂಲಮ್

ವಿರಾಗಃ ಸರ್ವಕಾಮೇಭ್ಯಃ ಶಿಕ್ಷಿತೋ ಮೇ ಮಧುವ್ರತಾತ್ ।
ಕೃಚ್ಛ್ರಾಪ್ತಂ ಮಧುವದ್ವಿತ್ತಂ ಹತ್ವಾಪ್ಯನ್ಯೋ ಹರೇತ್ಪತಿಮ್ ॥

ಅನುವಾದ

ಜೇನುನೊಣವು ಜೇನುತುಪ್ಪವನ್ನು ಸಂಗ್ರಹಿಸುವಂತೆಯೇ ಜನರು ಅತಿಕಷ್ಟದಿಂದ ಹಣವನ್ನು ಸಂಗ್ರಹಿಸುತ್ತಾರೆ. ಆದರೆ ಬೇರೆ ಯಾರೋ ಆ ಧನರಾಶಿಯ ಒಡೆಯನನ್ನು ಕೊಂದು ಅದನ್ನು ಕಿತ್ತುಕೊಳ್ಳುವನು. ಇದರಿಂದ ನಾನು ‘ವಿಷಯ ಭೋಗಗಳಿಂದ ವಿರಕ್ತನೇ ಆಗಿರಬೇಕು’ ಎಂಬ ಪಾಠವನ್ನು ಕಲಿತೆ.॥35॥

(ಶ್ಲೋಕ-36)

ಮೂಲಮ್

ಅನೀಹಃ ಪರಿತುಷ್ಟಾತ್ಮಾ ಯದೃಚ್ಛೋಪನತಾದಹಮ್ ।
ನೋ ಚೇಚ್ಛಯೇ ಬಹ್ವಹಾನಿ ಮಹಾಹಿರಿವ ಸತ್ತ್ವವಾನ್ ॥

ಅನುವಾದ

ನಾನು ಅಜಗರದಂತೆ ನಿಶ್ಚೇಷ್ಟಿತನಾಗಿ ಬಿದ್ದುಕೊಂಡಿರುತ್ತೇನೆ. ದೈವವಶದಿಂದ ಏನಾದರೂ ಸಿಕ್ಕಿದರೆ ಅದರಲ್ಲೇ ಸಂತುಷ್ಟನಾಗಿರುತ್ತೇನೆ. ಏನೂ ಸಿಗದಿದ್ದರೆ ಅನೇಕ ದಿನಗಳವರೆಗೆ ಧೈರ್ಯವಹಿಸಿ ಹೀಗೆಯೇ ಬಿದ್ದುಕೊಂಡಿರುತ್ತೇನೆ.॥36॥

(ಶ್ಲೋಕ-37)

ಮೂಲಮ್

ಕ್ವಚಿದಲ್ಪಂ ಕ್ವಚಿದ್ಭೂರಿ ಭುಂಜೇನ್ನಂ ಸ್ವಾದ್ವಸ್ವಾದು ವಾ ।
ಕ್ವಚಿದ್ಭೂರಿಗುಣೋಪೇತಂ ಗುಣಹೀನಮುತ ಕ್ವಚಿತ್ ॥

ಅನುವಾದ

ಕೆಲವೊಮ್ಮೆ ಕಡಿಮೆ ಅನ್ನ ತಿಂದರೆ, ಕೆಲವೊಮ್ಮೆ ಹೆಚ್ಚು. ಅದೂ ಕೂಡ ಎಂದಾದರೂ ರುಚಿಕರವಾಗಿದ್ದರೆ, ಎಂದಾದರೂ ನೀರಸ, ಸಪ್ಪೆ, ಕೆಲವೊಮ್ಮೆ ಅನೇಕ ಗುಣಗಳಿಂದ ಕೂಡಿದ್ದರೆ, ಕೆಲವೊಮ್ಮೆ ಸರ್ವಥಾ ಗುಣಹೀನ.॥37॥

(ಶ್ಲೋಕ-38)

ಮೂಲಮ್

ಶ್ರದ್ಧಯೋಪಾಹೃತಂ ಕ್ವಾಪಿ ಕದಾಚಿನ್ಮಾನವರ್ಜಿತಮ್ ।
ಭುಂಜೇ ಭುಕ್ತ್ವಾಥ ಕಸ್ಮಿಂಶ್ಚಿದ್ದಿವಾ ನಕ್ತಂ ಯದೃಚ್ಛಯಾ ॥

ಅನುವಾದ

ಕೆಲವೊಮ್ಮೆ ತುಂಬಾ ಶ್ರದ್ಧೆಯಿಂದ ದೊರೆತ ಅನ್ನವನ್ನು ತಿಂದರೆ, ಕೆಲವೊಮ್ಮೆ ಅಪಮಾನದಿಂದ ದೊರೆತ ಅನ್ನವನ್ನು ತಿನ್ನುತ್ತೇನೆ. ಕೆಲವೊಮ್ಮೆ ತಾನಾಗಿಯೇ ದೊರೆತಾಗ, ಕೆಲವೊಮ್ಮೆ ಹಗಲಿನಲ್ಲಿ, ಕೆಲವೊಮ್ಮೆ ರಾತ್ರೆಯಲ್ಲಿ ಭೋಜನ ಮಾಡುತ್ತೇನೆ. ಕೆಲವೊಮ್ಮೆ ಒಂದು ಊಟಮಾಡಿದರೆ ಕೆಲವೊಮ್ಮೆ ಎರಡುಬಾರಿ ಭುಂಜಿಸುತ್ತೇನೆ.॥38॥

(ಶ್ಲೋಕ-39)

ಮೂಲಮ್

ಕ್ಷೌಮಂ ದುಕೂಲಮಜಿನಂ ಚೀರಂ ವಲ್ಕಲಮೇವ ವಾ ।
ವಸೇನ್ಯದಪಿ ಸಂಪ್ರಾಪ್ತಂ ದಿಷ್ಟಭುಕ್ತುಷ್ಟಧೀರಹಮ್ ॥

ಅನುವಾದ

ನಾನು ನನ್ನ ಪ್ರಾರಬ್ಧದ ಭೋಗದಲ್ಲೇ ಸಂತೋಷವಾಗಿರುತ್ತೇನೆ. ಅದರಿಂದ ನನಗೆ ರೇಷ್ಮೆ ಅಥವಾ ಹತ್ತಿಯ, ಮೃಗಚರ್ಮ ಅಥವಾ ನಾರುಬಟ್ಟೆ ಅಥವಾ ಬೇರೇನಾದರೂ ವಸವು ಒದಗಿಬರುತ್ತದೋ ಅದನ್ನೇ ಉಟ್ಟುಕೊಳ್ಳುತ್ತೇನೆ.॥39॥

(ಶ್ಲೋಕ-40)

ಮೂಲಮ್

ಕ್ವಚಿಚ್ಛಯೇ ಧರೋಪಸ್ಥೇ ತೃಣಪರ್ಣಾಶ್ಮಭಸ್ಮಸು ।
ಕ್ವಚಿತ್ಪ್ರಾಸಾದಪರ್ಯಂಕೇ ಕಶಿಪೌ ವಾ ಪರೇಚ್ಛಯಾ ॥

ಅನುವಾದ

ಕೆಲವೊಮ್ಮೆ ನಾನು ಭೂಮಿಯಲ್ಲಿ, ಹುಲ್ಲಿನ ಮೇಲೆ, ಎಲೆಗಳಮೇಲೆ, ಕಲ್ಲಿನಮೇಲೆ, ಬೂದಿಯರಾಶಿಯಲ್ಲೇ ಬಿದ್ದುಕೊಂಡಿರುತ್ತೇನೆ. ಕೆಲವೊಮ್ಮೆ ಇತರರ ಇಚ್ಛೆಯಂತೆ ಅರಮನೆಯಲ್ಲಿ ಮಂಚದಲ್ಲಿ, ಹಾಸಿಗೆಗಳಲ್ಲಿ ಮಲಗಿರುತ್ತೇನೆ. ॥40॥

(ಶ್ಲೋಕ-41)

ಮೂಲಮ್

ಕ್ವಚಿತ್ಸ್ನಾತೋನುಲಿಪ್ತಾಂಗಃ ಸುವಾಸಾಃ ಸ್ರಗ್ವ್ಯಲಂಕೃತಃ ।
ರಥೇಭಾಶ್ವೈಶ್ಚರೇ ಕ್ವಾಪಿ ದಿಗ್ವಾಸಾ ಗ್ರಹವದ್ವಿಭೋ ॥

ಅನುವಾದ

ದೈತ್ಯ ರಾಜನೇ! ಕೆಲವೊಮ್ಮೆ ಸ್ನಾನಮಾಡಿ ಶುಚಿಯಾಗಿ, ಗಂಧವನ್ನು ಹಚ್ಚಿಕೊಂಡು, ಸುಂದರ ವಸ್ತ್ರಗಳನ್ನು ಉಟ್ಟು, ಹೂವಿನ ಹಾರವನ್ನು ಧರಿಸಿಕೊಂಡು, ಒಡವೆಗಳನ್ನು ತೊಟ್ಟು ರಥ, ಆನೆ, ಕುದುರೆಗಳನ್ನು ಏರಿಕೊಂಡು ಹೋಗುತ್ತಿರುತ್ತೇನೆ. ಆದರೆ ಕೆಲವೊಮ್ಮೆ ದಿಗಂಬರನಾಗಿ ಪಿಶಾಚಿಯಂತೆ ಓಡಾಡುತ್ತೇನೆ. ॥41॥

(ಶ್ಲೋಕ-42)

ಮೂಲಮ್

ನಾಹಂ ನಿಂದೇ ನ ಚ ಸ್ತೌಮಿ ಸ್ವಭಾವವಿಷಮಂ ಜನಮ್ ।
ಏತೇಷಾಂ ಶ್ರೇಯ ಆಶಾಸೇ ಉತೈಕಾತ್ಮ್ಯಂ ಮಹಾತ್ಮನಿ ॥

ಅನುವಾದ

ಮನುಷ್ಯರ ಸ್ವಭಾವಗಳು ಬೇರೆ-ಬೇರೆಯಾಗಿರುತ್ತವೆ. ಆದ್ದರಿಂದ ನಾನು ಯಾರನ್ನೂ ನಿಂದಿಸುವುದಿಲ್ಲ, ಸ್ತುತಿಸುವುದೂ ಇಲ್ಲ. ನಾನು ಕೇವಲ ಇವರ ಪರಮಕಲ್ಯಾಣ ಮತ್ತು ಪರಮಾತ್ಮ ನಲ್ಲಿ ಏಕತೆಯನ್ನು ಬಯಸುತ್ತೇನೆ. ॥42॥

(ಶ್ಲೋಕ-43)

ಮೂಲಮ್

ವಿಕಲ್ಪಂ ಜುಹುಯಾಚ್ಚಿತ್ತೌ ತಾಂ ಮನಸ್ಯರ್ಥವಿಭ್ರಮೇ ।
ಮನೋ ವೈಕಾರಿಕೇ ಹುತ್ವಾ ತನ್ಮಾಯಾಯಾಂ ಜುಹೋತ್ಯನು ॥

(ಶ್ಲೋಕ-44)

ಮೂಲಮ್

ಆತ್ಮಾನುಭೂತೌ ತಾಂ ಮಾಯಾಂ ಜುಹುಯಾತ್ಸತ್ಯದೃಙ್ಮುನಿಃ ।
ತತೋ ನಿರೀಹೋ ವಿರಮೇತ್ಸ್ವಾನುಭೂತ್ಯಾತ್ಮನಿ ಸ್ಥಿತಃ ॥

ಅನುವಾದ

ಸತ್ಯವನ್ನು ಅನುಸಂಧಾನ ಮಾಡುವ ಮನುಷ್ಯನಿಗೆ ಕಂಡು ಬರುವ ನಾನಾಪದಾರ್ಥಗಳು ಮತ್ತು ಅವುಗಳ ಭೇದ-ವಿಭೇದಗಳನ್ನು ಚಿತ್ತವೃತ್ತಿಯಲ್ಲಿ ಹೋಮ ಮಾಡಬೇಕು. ಚಿತ್ತವೃತ್ತಿಯನ್ನು ಈ ಪದಾರ್ಥಗಳ ಸಂಬಂಧವಾಗಿ ವಿವಿಧ ಭ್ರಮೆಗಳನ್ನು ಉಂಟು ಮಾಡುವ ಮನಸ್ಸಿನಲ್ಲಿ, ಮನಸ್ಸನ್ನು ಸಾತ್ತ್ವಿಕ ಅಹಂಕಾರದಲ್ಲಿ, ಸಾತ್ತ್ವಿಕ ಅಹಂಕಾರವನ್ನು ಮಹತ್ತತ್ತ್ವದ ಮೂಲಕ ಮಾಯೆಯಲ್ಲಿ ಹವನ ಮಾಡಬೇಕು. ಹೀಗೆ ಇವೆಲ್ಲ ಭೇದ-ವಿಭೇದಗಳು ಮತ್ತು ಅವುಗಳ ಕಾರಣ ಮಾಯೆಯೇ ಆಗಿದೆ ಹೀಗೆ ನಿಶ್ಚಯ ಮಾಡಿ ಮತ್ತೆ ಆ ಮಾಯೆಯನ್ನು ಆತ್ಮಾನುಭೂತಿಯಲ್ಲಿ ಸ್ವಾಹಾಮಾಡಬೇಕು. ಈ ವಿಧವಾಗಿ ಆತ್ಮಸಾಕ್ಷಾತ್ಕಾರದ ಮೂಲಕ ಆತ್ಮಸ್ವರೂಪದಲ್ಲಿ ನೆಲೆಸಿ ಕರ್ಮರಹಿತನಾಗಿ ವಿಶ್ರಾಂತಿಯನ್ನು ಹೊಂದಬೇಕು. ॥43-44॥

(ಶ್ಲೋಕ-45)

ಮೂಲಮ್

ಸ್ವಾತ್ಮವೃತ್ತಂ ಮಯೇತ್ಥಂ ತೇ ಸುಗುಪ್ತಮಪಿ ವರ್ಣಿತಮ್ ।
ವ್ಯಪೇತಂ ಲೋಕಶಾಸಾಭ್ಯಾಂ ಭವಾನ್ಹಿ ಭಗವತ್ಪರಃ ॥

ಅನುವಾದ

ಎಲೈ ಪ್ರಹ್ಲಾದ! ನನ್ನ ಈ ಆತ್ಮವೃತ್ತಾಂತವು ಅತ್ಯಂತ ಗೋಪ್ಯವೂ, ಲೋಕ ಮತ್ತು ಶಾಸ್ತ್ರಗಳ ಮರ್ಯಾದೆಯನ್ನು ಮೀರಿದ್ದರೂ, ನೀನು ಭಗವತ್ಪರಾಯಣನಾದ ಸಾಧುಶ್ರೇಷ್ಠನಾಗಿರುವುದ ರಿಂದ ನಿನಗೆ ಇದನ್ನು ವರ್ಣಿಸಿರುವೆನು. ॥45॥

(ಶ್ಲೋಕ-46)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಧರ್ಮಂ ಪಾರಮಹಂಸ್ಯಂ ವೈ ಮುನೇಃ ಶ್ರುತ್ವಾಸುರೇಶ್ವರಃ ।
ಪೂಜಯಿತ್ವಾ ತತಃ ಪ್ರೀತ ಆಮಂತ್ರ್ಯ ಪ್ರಯಯೌ ಗೃಹಮ್ ॥

ಅನುವಾದ

ನಾರದರು ಹೇಳಿದರು — ಯುಧಿಷ್ಠಿರನೇ! ಪ್ರಹ್ಲಾದನು ದತ್ತಾತ್ರೇಯಮುನಿಗಳಿಂದ ಪರಮಹಂಸರ ಈ ಧರ್ಮವನ್ನು ಶ್ರವಣಿಸಿ, ಅವರನ್ನು ಪೂಜಿಸಿ, ಅವರಿಂದ ಬೀಳ್ಕೊಂಡು, ಪರಮ ಸಂತೋಷದಿಂದ ತನ್ನ ರಾಜಧಾನಿಗೆ ಮರಳಿದನು. ॥46॥

ಅನುವಾದ (ಸಮಾಪ್ತಿಃ)

ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಯುಧಿಷ್ಠಿರ-ನಾರದಸಂವಾದೇ ಯತಿಧರ್ಮೇ ತ್ರಯೋದಶೋಽಧ್ಯಾಯಃ ॥13॥