[ಹನ್ನೆರಡನೆಯ ಅಧ್ಯಾಯ]
ಭಾಗಸೂಚನಾ
ಬ್ರಹ್ಮಚರ್ಯ ಮತ್ತು ವಾನಪ್ರಸ್ಥ ಆಶ್ರಮಗಳ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಬ್ರಹ್ಮಚಾರೀ ಗುರುಕುಲೇ ವಸನ್ದಾಂತೋ ಗುರೋರ್ಹಿತಮ್ ।
ಆಚರನ್ದಾಸವನ್ನೀಚೋ ಗುರೌ ಸುದೃಢಸೌಹೃದಃ ॥
ಅನುವಾದ
ನಾರದ ಮಹರ್ಷಿಗಳು ಹೇಳುತ್ತಾರೆ — ಧರ್ಮರಾಜನೇ! ಗುರುಕುಲದಲ್ಲಿ ವಾಸಿಸುವ ಬ್ರಹ್ಮಚಾರಿಯು ತನ್ನ ಇಂದ್ರಿಯಗಳನ್ನು ವಶದಲ್ಲಿರಿಸಿಕೊಂಡು, ದಾಸನಂತೆ ತನ್ನನ್ನು ಚಿಕ್ಕವನೆಂದು ತಿಳಿದು, ಗುರುಗಳ ಚರಣಗಳಲ್ಲಿ ದೃಢವಾದ ಭಕ್ತಿಯನ್ನಿರಿಸಿ, ಅವರ ಹಿತದ ಕಾರ್ಯವನ್ನೇ ಮಾಡುತ್ತಾ ಇರಬೇಕು. ॥1॥
(ಶ್ಲೋಕ-2)
ಮೂಲಮ್
ಸಾಯಂ ಪ್ರಾತರುಪಾಸೀತ ಗುರ್ವಗ್ನ್ಯರ್ಕಸುರೋತ್ತಮಾನ್ ।
ಉಭೇ ಸಂಧ್ಯೇ ಚ ಯತವಾಗ್ಜಪನ್ ಬ್ರಹ್ಮ ಸಮಾಹಿತಃ ॥
ಅನುವಾದ
ಸಾಯಂಕಾಲ ಮತ್ತು ಪ್ರಾತಃಕಾಲಗಳಲ್ಲಿ ಗುರು, ಅಗ್ನಿ, ಸೂರ್ಯ ಮತ್ತು ಶ್ರೇಷ್ಠ ದೇವತೆಗಳ ಉಪಾಸನೆ ಮಾಡಬೇಕು. ಮೌನವಾಗಿದ್ದು ಏಕಾಗ್ರತೆಯಿಂದ ಗಾಯತ್ರಿಯ ಜಪವನ್ನು ಮಾಡುತ್ತಾ ಎರಡೂ ಹೊತ್ತಿನಲ್ಲಿ ಸಂಧ್ಯಾವಂದನೆ ಮಾಡಬೇಕು. ॥2॥
(ಶ್ಲೋಕ-3)
ಮೂಲಮ್
ಛಂದಾಂಸ್ಯಧೀಯೀತ ಗುರೋರಾಹೂತಶ್ಚೇತ್ಸುಯಂತ್ರಿತಃ ।
ಉಪಕ್ರಮೇವಸಾನೇ ಚ ಚರಣೌ ಶಿರಸಾ ನಮೇತ್ ॥
ಅನುವಾದ
ಗುರುಗಳು ಕರೆದಾಗಲೇ ಪೂರ್ಣವಾಗಿ ಅನುಶಾಸನದಲ್ಲಿದ್ದು ಕೊಂಡು ಅವರಿಂದ ವೇದವನ್ನು ಕಲಿಯಬೇಕು. ವೇದಪಾಠದ ಮೊದಲಿಗೆ ಮತ್ತು ಕೊನೆಯಲ್ಲಿ ಗುರುಗಳ ಚರಣಗಳಲ್ಲಿ ತಲೆಯನ್ನಿಟ್ಟು ನಮಸ್ಕರಿಸಬೇಕು. ॥3॥
(ಶ್ಲೋಕ-4)
ಮೂಲಮ್
ಮೇಖಲಾಜಿನವಾಸಾಂಸಿ ಜಟಾದಂಡ ಕಮಂಡಲೂನ್ ।
ಬಿಭೃಯಾದುಪವೀತಂ ಚ ದರ್ಭಪಾಣಿರ್ಯಥೋದಿತಮ್ ॥
ಅನುವಾದ
ಶಾಸ್ತ್ರದ ಆಜ್ಞೆಯಂತೆ ಮೇಖಲೆ, ಮೃಗಚರ್ಮ, ವಸ್ತ್ರ, ಜಟೆ, ದಂಡ, ಕಮಂಡಲು, ಯಜ್ಞೋಪವೀತ ಹಾಗೂ ಕೈಯಲ್ಲಿ ದರ್ಭೆಗಳ ಪವಿತ್ರಕವನ್ನು ಧರಿಸಬೇಕು. ॥4॥
(ಶ್ಲೋಕ-5)
ಮೂಲಮ್
ಸಾಯಂ ಪ್ರಾತಶ್ಚರೇದ್ಭೈಕ್ಷಂ ಗುರವೇ ತನ್ನಿವೇದಯೇತ್ ।
ಭುಂಜೀತ ಯದ್ಯನುಜ್ಞಾತೋ ನೋ ಚೇದುಪವಸೇತ್ಕ್ವಚಿತ್ ॥
ಅನುವಾದ
ಸಾಯಂಕಾಲ ಮತ್ತು ಪ್ರಾತಃಕಾಲಗಳಲ್ಲಿ ಭಿಕ್ಷೆಯನ್ನು ಎತ್ತಿತಂದು ಅದನ್ನು ಗುರುಗಳಿಗೆ ಅರ್ಪಿಸಬೇಕು. ಅವರು ಅಪ್ಪಣೆ ಮಾಡಿದಾಗ ಭೋಜನ ಮಾಡಬೇಕು. ಇಲ್ಲದಿದ್ದರೆ ಉಪವಾಸವಿರಬೇಕು. ॥5॥
(ಶ್ಲೋಕ-6)
ಮೂಲಮ್
ಸುಶೀಲೋ ಮಿತಭುಗ್ದಕ್ಷಃ ಶ್ರದ್ದಧಾನೋ ಜಿತೇಂದ್ರಿಯಃ ।
ಯಾವದರ್ಥಂ ವ್ಯವಹರೇತ್ ಸೀಷು ಸೀನಿರ್ಜಿತೇಷು ಚ ॥
ಅನುವಾದ
ತನ್ನ ಶೀಲವನ್ನು ಕಾಪಾಡಿಕೊಳ್ಳಬೇಕು. ಮಿತವಾಗಿ ಭೋಜನ ಮಾಡಬೇಕು. ತನ್ನ ಕೆಲಸಗಳನ್ನು ನಿಷ್ಠೆಯಿಂದ ಮಾಡಬೇಕು. ಶ್ರದ್ಧೆ ಇರಿಸಬೇಕು. ಇಂದ್ರಿಯಗಳನ್ನು ತನ್ನ ವಶದಲ್ಲಿರಿಸಿಕೊಳ್ಳಬೇಕು. ಸ್ತ್ರೀಯರೊಂದಿಗೆ ಮತ್ತು ಸ್ತ್ರೀಯರ ವಶದಲ್ಲಿರುವವರೊಂದಿಗೆ ಆವಶ್ಯಕತೆ ಇದ್ದಷ್ಟೇ ವ್ಯವಹಾರವಿಟ್ಟುಕೊಳ್ಳಬೇಕು.॥6॥
(ಶ್ಲೋಕ-7)
ಮೂಲಮ್
ವರ್ಜಯೇತ್ಪ್ರಮದಾಗಾಥಾಮಗೃಹಸ್ಥೋ ಬೃಹದ್ವ್ರತಃ ।
ಇಂದ್ರಿಯಾಣಿ ಪ್ರಮಾಥೀನಿ ಹರಂತ್ಯಪಿ ಯತೇರ್ಮನಃ ॥
ಅನುವಾದ
ಗೃಹಸ್ಥನಾಗದೆ ಬ್ರಹ್ಮಚರ್ಯ ವ್ರತದಲ್ಲೇ ಇರುವವನು ಸ್ತ್ರೀಯರ ಚರ್ಚೆಗಳಿಂದ ದೂರವಿರಬೇಕು. ಇಂದ್ರಿಯಗಳು ಅತ್ಯಂತ ಬಲಿಷ್ಠವಾಗಿರುವವು. ಇವು ಪ್ರಯತ್ನ ಪೂರ್ವಕ ಸಾಧನೆ ಮಾಡುವವರ ಮನಸ್ಸನ್ನೂ ಕೂಡ ಸೆಳೆದುಕೊಳ್ಳುವವು. ॥7॥
(ಶ್ಲೋಕ-8)
ಮೂಲಮ್
ಕೇಶಪ್ರಸಾಧನೋನ್ಮರ್ದಸ್ನಪನಾಭ್ಯಂಜನಾದಿಕಮ್ ।
ಗುರುಸೀಭಿರ್ಯುವತಿಭಿಃ ಕಾರಯೇನ್ನಾತ್ಮನೋ ಯುವಾ ॥
ಅನುವಾದ
ಯುವಕನಾದ ಬ್ರಹ್ಮಚಾರಿಯು ಯುವತಿಯರಾದ ಗುರುಪತ್ನಿಯರಿಂದ ಕೂದಲು ಬಾಚಿಸಿಕೊಳ್ಳುವುದು, ಶರೀರ ತಿಕ್ಕಿಸಿಕೊಳ್ಳುವುದು, ಸ್ನಾನ ಮಾಡಿಸಿಕೊಳ್ಳುವುದು, ಎಣ್ಣೆ ಹಚ್ಚಿಸಿಕೊಳ್ಳುವುದು ಮುಂತಾದ ಕಾರ್ಯಗಳನ್ನು ಮಾಡಿಸಿಕೊಳ್ಳಬಾರದು. ॥8॥
(ಶ್ಲೋಕ-9)
ಮೂಲಮ್
ನನ್ವಗ್ನಿಃ ಪ್ರಮದಾ ನಾಮ ಘೃತಕುಂಭಸಮಃ ಪುಮಾನ್ ।
ಸುತಾಮಪಿ ರಹೋ ಜಹ್ಯಾದನ್ಯದಾ ಯಾವದರ್ಥಕೃತ್ ॥
ಅನುವಾದ
ಸ್ತ್ರೀಯರು ಬೆಂಕಿಯಂತಿದ್ದು, ಪುರುಷರು ತುಪ್ಪದ ಗಡಿಗೆಯಂತಿದ್ದಾರೆ. ಏಕಾಂತದಲ್ಲಿ ತನ್ನ ಮಗಳೊಂದಿಗೂ ಇರಬಾರದು. ಆಕೆಯು ಏಕಾಂತದಲ್ಲಿರದಿದ್ದರೂ ಅವಳೊಂದಿಗೆ ಆವಶ್ಯಕದಷ್ಟೇ ಇರಬೇಕು. ॥9॥
(ಶ್ಲೋಕ-10)
ಮೂಲಮ್
ಕಲ್ಪಯಿತ್ವಾತ್ಮನಾ ಯಾವದಾಭಾಸಮಿದಮೀಶ್ವರಃ ।
ದ್ವೈತಂ ತಾವನ್ನ ವಿರಮೇತ್ತತೋ ಹ್ಯಸ್ಯ ವಿಪರ್ಯಯಃ ॥
ಅನುವಾದ
ಜೀವನು ಆತ್ಮಸಾಕ್ಷಾತ್ಕಾರದ ಮೂಲಕ ಈ ದೇಹ-ಇಂದ್ರಿಯಗಳನ್ನು ಪ್ರತೀತಿ ಮಾತ್ರವೆಂದು ನಿಶ್ಚಯಿಸಿ ಸ್ವತಂತ್ರನಾಗುವವರೆಗೆ ‘ನಾನು ಪುರುಷನಾಗಿದ್ದೇನೆ, ಈಕೆಯು ಸ್ತ್ರೀಯಾಗಿದ್ದಾಳೆ’ ಎಂಬ ದ್ವೈತವು ಅಳಿಯುವುದಿಲ್ಲ. ಅಲ್ಲಿಯವರೆಗೆ ಇಂತಹ ಪುರುಷರು ಸ್ತ್ರೀಯ ಸಂಸರ್ಗದಲ್ಲಿ ಇದ್ದರೆ ಅವನಿಗೆ ಅವಳಲ್ಲಿ ಭೋಗ್ಯಬುದ್ಧಿಯು ಉಂಟಾಗುವುದೂ ನಿಶ್ಚಿತವಾಗಿದೆ. ॥10॥
(ಶ್ಲೋಕ-11)
ಮೂಲಮ್
ಏತತ್ಸರ್ವಂ ಗೃಹಸ್ಥಸ್ಯ ಸಮಾಮ್ನಾತಂ ಯತೇರಪಿ ।
ಗುರುವೃತ್ತಿರ್ವಿಕಲ್ಪೇನ ಗೃಹಸ್ಥಸ್ಯರ್ತುಗಾಮಿನಃ ॥
ಅನುವಾದ
ಈ ಶೀಲರಕ್ಷಣೆಯೇ ಮುಂತಾದ ಗುಣಗಳು ಗೃಹಸ್ಥನಿಗೂ ಮತ್ತು ಸಂನ್ಯಾಸಿಗೂ ಕೂಡ ನಿಯತವಾಗಿವೆ. ಗುರು ಕುಲದಲ್ಲಿದ್ದು ಗುರುವಿನ ಸೇವೆ, ಶುಶ್ರೂಷೆಗಳಲ್ಲೇ ನಿರತನಾಗಿರುವುದು ಗೃಹಸ್ಥನಿಗೆ ವೈಕಲ್ಪಿಕ, ಅನಿವಾರ್ಯವಲ್ಲ. ಏಕೆಂದರೆ, ಋತುಗಮನದಿಂದಾಗಿ ಅವನಿಗೆ ಅಲ್ಲಿಂದ ಬೇರೆಯಾಗ ಬೇಕಾಗುತ್ತದೆ. ॥11॥
(ಶ್ಲೋಕ-12)
ಮೂಲಮ್
ಅಂಜನಾಭ್ಯಂಜನೋನ್ಮರ್ದಸ್ಯವಲೇಪಾಮಿಷಂ ಮಧು ।
ಸ್ರಗ್ಗಂಧಲೇಪಾಲಂಕಾರಾನ್ಸ್ತ್ಯಜೇಯುರ್ಯೇ ಧೃತವ್ರತಾಃ ॥
ಅನುವಾದ
ಬ್ರಹ್ಮಚರ್ಯವ್ರತವನ್ನು ಕೈಗೊಂಡಿರುವವನು ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳಬಾರದು. ಮೈಗೆ ಎಣ್ಣೆ ಹಚ್ಚಿಕೊಳ್ಳಬಾರದು. ಸ್ತ್ರೀಯರ ಚಿತ್ರಗಳನ್ನು ಬರೆಯಬಾರದು. ಮದ್ಯ-ಮಾಂಸವನ್ನು ಸೇವಿಸಲೇಬಾರದು. ಹೂಮಾಲೆ, ಅತ್ತರು, ಗಂಧ ಮತ್ತು ಆಭೂಷಣಗಳನ್ನು ತೊರೆಯಲೇಬೇಕು. ॥12॥
(ಶ್ಲೋಕ-13)
ಮೂಲಮ್
ಉಷಿತ್ವೈವಂ ಗುರುಕುಲೇ ದ್ವಿಜೋಧೀತ್ಯಾವಬುಧ್ಯ ಚ ।
ತ್ರಯೀಂ ಸಾಂಗೋಪನಿಷದಂ ಯಾವದರ್ಥಂ ಯಥಾಬಲಮ್ ॥
ಅನುವಾದ
ಹೀಗೆ ಗುರುಕುಲದಲ್ಲಿ ವಾಸಮಾಡಿ ದ್ವಿಜಾತಿಯಾದವನು ತನ್ನ ಶಕ್ತಿ ಮತ್ತು ಆವಶ್ಯಕತೆಗನುಸಾರ ವೇದವನ್ನು, ವೇದಾಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ, ಕಲ್ಪ ಇವುಗಳನ್ನೂ, ಉಪನಿಷತ್ತುಗಳನ್ನೂ ಅಧ್ಯಯನ ಮಾಡಿ ಜ್ಞಾನವನ್ನು ಗಳಿಸಬೇಕು. ॥13॥
(ಶ್ಲೋಕ-14)
ಮೂಲಮ್
ದತ್ತ್ವಾ ವರಮನುಜ್ಞಾತೋ ಗುರೋಃ ಕಾಮಂ ಯದೀಶ್ವರಃ ।
ಗೃಹಂ ವನಂ ವಾ ಪ್ರವಿಶೇತ್ಪ್ರವ್ರಜೇತ್ತತ್ರ ವಾ ವಸೇತ್ ॥
ಅನುವಾದ
ಅನಂತರ ಸಾಮರ್ಥ್ಯವಿದ್ದರೆ ಗುರುಗಳು ಕೇಳಿದಷ್ಟು ಗುರುದಕ್ಷಿಣೆಯನ್ನು ಕೊಡಬೇಕು. ಮತ್ತೆ ಅವರ ಅನುಮತಿಯನ್ನು ಪಡೆದು ಗೃಹಸ್ಥಾಶ್ರಮ, ವಾನಪ್ರಸ್ಥ ಅಥವಾ ಸಂನ್ಯಾಸ ಆಶ್ರಮಗಳಲ್ಲಿ ಪ್ರವೇಶಿಸಲಿ. ಅಥವಾ ಆಜೀವನ ಬ್ರಹ್ಮಚರ್ಯವನ್ನು ಪಾಲಿಸುತ್ತಾ ಅದೇ ಆಶ್ರಮದಲ್ಲಿ ಇರಬಹುದು.॥14॥
(ಶ್ಲೋಕ-15)
ಮೂಲಮ್
ಅಗ್ನೌ ಗುರಾವಾತ್ಮನಿ ಚ ಸರ್ವಭೂತೇಷ್ವಧೋಕ್ಷಜಮ್ ।
ಭೂತೈಃ ಸ್ವಧಾಮಭಿಃ ಪಶ್ಯೇದಪ್ರವಿಷ್ಟಂ ಪ್ರವಿಷ್ಟವತ್ ॥
ಅನುವಾದ
ಭಗವಂತನು ಸ್ವರೂಪತಃ ಸರ್ವತ್ರ ಏಕರಸನಾಗಿ ನೆಲೆಸಿದ್ದಾನೆ. ಆದ್ದರಿಂದ ಅವನು ಎಲ್ಲಿಗೂ ಪ್ರವೇಶಿಸುವುದು ಅಥವಾ ಹೊರಟುಹೋಗುವುದ ಆಗಲಾರದು. ಹೀಗಿದ್ದರೂ ಅಗ್ನಿ, ಗುರು, ಆತ್ಮಾ ಮತ್ತು ಸಮಸ್ತ ಪ್ರಾಣಿಗಳಲ್ಲಿ ತನ್ನ ಆಶ್ರಿತ ಜೀವರೊಂದಿಗೆ ಅವನು ವಿಶೇಷರೂಪದಿಂದ ವಿರಾಜಿಸುತ್ತಿದ್ದಾನೆ. ಅದಕ್ಕಾಗಿ ಇವುಗಳನ್ನು ಪರಮಾತ್ಮ ಭಾವದಿಂದ ನೋಡಬೇಕು.॥15॥
(ಶ್ಲೋಕ-16)
ಮೂಲಮ್
ಏವಂವಿಧೋ ಬ್ರಹ್ಮಚಾರೀ ವಾನಪ್ರಸ್ಥೋ ಯತಿರ್ಗೃಹೀ ।
ಚರನ್ವಿದಿತವಿಜ್ಞಾನಃ ಪರಂ ಬ್ರಹ್ಮಾಧಿಗಚ್ಛತಿ ॥
ಅನುವಾದ
ಹೀಗೆ ಆಚರಿಸುವುದರಿಂದ ಬ್ರಹ್ಮಚಾರಿಯಾಗಲೀ, ವಾನಪ್ರಸ್ಥನಾಗಲೀ, ಸಂನ್ಯಾಸಿಯಾಗಲೀ ಅಥವಾ ಗೃಹಸ್ಥನಾಗಲೀ ವಿಜ್ಞಾನಸಂಪನ್ನನಾಗಿ ಪರಬ್ರಹ್ಮ ತತ್ತ್ವದ ಅನುಭವವನ್ನು ಪಡೆದುಕೊಳ್ಳುತ್ತಾನೆ. ॥16॥
(ಶ್ಲೋಕ-17)
ಮೂಲಮ್
ವಾನಪ್ರಸ್ಥಸ್ಯ ವಕ್ಷ್ಯಾಮಿ ನಿಯಮಾನ್ಮುನಿಸಮ್ಮತಾನ್ ।
ಯಾನಾತಿಷ್ಠನ್ಮುನಿರ್ಗಚ್ಛೇದೃಷಿಲೋಕಮಿಹಾಂಜಸಾ ॥
ಅನುವಾದ
ಈಗ ನಾನು ಋಷಿಗಳ ಮತಾನುಸಾರವಾಗಿ ವಾನಪ್ರಸ್ಥ ಆಶ್ರಮದ ನಿಯಮಗಳನ್ನು ಹೇಳುತ್ತೇನೆ. ಇವುಗಳ ಆಚರಣೆಯಿಂದ ವಾನಪ್ರಸ್ಥ ಆಶ್ರಮಿಯು ಅನಾಯಾಸವಾಗಿ ಋಷಿಗಳ ಲೋಕವಾದ ಮಹರ್ಲೋಕವನ್ನು ಹೊಂದುವನು. ॥17॥
(ಶ್ಲೋಕ-18)
ಮೂಲಮ್
ನ ಕೃಷ್ಟಪಚ್ಯಮಶ್ನೀಯಾದಕೃಷ್ಟಂ ಚಾಪ್ಯಕಾಲತಃ ।
ಅಗ್ನಿಪಕ್ವಮಥಾಮಂ ವಾ ಅರ್ಕಪಕ್ವಮುತಾಹರೇತ್ ॥
ಅನುವಾದ
ವಾನಪ್ರಸ್ಥಾಶ್ರಮಿಯು ಉತ್ತಿರುವ ನೆಲದಲ್ಲಿ ಬೆಳೆದ ಅಕ್ಕಿ, ಗೋಧಿ ಮುಂತಾದ ಧಾನ್ಯಗಳನ್ನು ತಿನ್ನಕೂಡದು. ಉಳದೇ ಉತ್ಪನ್ನವಾದ ಧಾನ್ಯವೂ ಕೂಡ ಅಕಾಲದಲ್ಲಿ ಬೆಳೆದಿದ್ದರೆ ಅದನ್ನು ಕೂಡ ತಿನ್ನಬಾರದು. ಬೆಂಕಿಯಲ್ಲಿ ಬೇಯಿಸಿದ ಅಥವಾ ಹಸಿಯಾದ ಧಾನ್ಯವನ್ನೂ ತಿನ್ನಬಾರದು. ಕೇವಲ ಸೂರ್ಯನ ತಾಪದಿಂದ ಪಕ್ವವಾದ ಕಂದ, ಮೂಲ, ಫಲ ಮುಂತಾದವುಗಳನ್ನೇ ಸೇವಿಸಬೇಕು. ॥18॥
(ಶ್ಲೋಕ-19)
ಮೂಲಮ್
ವನ್ಯೈಶ್ಚರುಪುರೋಡಾಶಾನ್ನಿರ್ವಪೇತ್ಕಾಲಚೋದಿತಾನ್ ।
ಲಬ್ಧೇ ನವೇ ನವೇನ್ನಾದ್ಯೇ ಪುರಾಣಂ ತುಂ ಪರಿತ್ಯಜೇತ್ ॥
ಅನುವಾದ
ಕಾಡಿನಲ್ಲಿ ತಾನಾಗಿಯೇ ಬೆಳೆದ ಧಾನ್ಯಗಳಿಂದ ನಿತ್ಯ-ನೈಮಿತ್ತಿಕ ಚರು ಮತ್ತು ಪುರೋಡಾಶವನ್ನು ಸಿದ್ಧಗೊಳಿಸಿ ಹವನ ಮಾಡಬೇಕು. ಹೊಸದಾಗಿ ಅನ್ನ, ಫಲ, ಪುಷ್ಪ ಮುಂತಾದವುಗಳು ಸಿಗಲು ಪ್ರಾರಂಭವಾದಾಗ ಸಂಗ್ರಹಿಸಿಟ್ಟ ಹಳೆಯ ಆಹಾರವನ್ನು ತ್ಯಜಿಸಿಬಿಡಬೇಕು. ॥19॥
(ಶ್ಲೋಕ-20)
ಮೂಲಮ್
ಅಗ್ನ್ಯರ್ಥಮೇವ ಶರಣಮುಟಜಂ ವಾದ್ರಿಕಂದರಾಮ್ ।
ಶ್ರಯೇತ ಹಿಮವಾಯ್ವಗ್ನಿವರ್ಷಾರ್ಕಾತಪಷಾಟ್ಸ್ವಯಮ್ ॥
ಅನುವಾದ
ಅಗ್ನಿಹೋತ್ರದ ಅಗ್ನಿಯ ರಕ್ಷಣೆಗಾಗಿಯೇ ಮನೆಯನ್ನು, ಪರ್ಣಕುಟಿಯನ್ನು ಅಥವಾ ಪರ್ವತದ ಗುಹೆಯನ್ನು ಆಶ್ರಯಿಸಬೇಕು. ಸ್ವತಃ ಚಳಿ, ಗಾಳಿ, ಮಳೆ ಬಿಸಿಲುಗಳನ್ನು ಸಹಿಸಿಕೊಳ್ಳಬೇಕು. ॥20॥
(ಶ್ಲೋಕ-21)
ಮೂಲಮ್
ಕೇಶರೋಮನಖಶ್ಮಶ್ರುಮಲಾನಿ ಜಟಿಲೋ ದಧತ್ ।
ಕಮಂಡಲ್ವಜಿನೇ ದಂಡವಲ್ಕಲಾಗ್ನಿಪರಿಚ್ಛದಾನ್ ॥
ಅನುವಾದ
ತಲೆಯಲ್ಲಿ ಜಟೆಯನ್ನು ಧರಿಸಬೇಕು ಮತ್ತು ಕೂದಲು, ರೋಮ, ಉಗುರು ಹಾಗೂ ಗಡ್ಡ-ಮೀಸೆಗಳನ್ನು ಕತ್ತರಿಸಬಾರದು. ಮೈಕೊಳೆಯನ್ನೂ ಕೂಡ ತೆಗೆಯಬಾರದು. ಕಮಂಡಲು, ಮೃಗ ಚರ್ಮ, ದಂಡ, ವಲ್ಕಲ-ವಸ್ತ್ರ ಮತ್ತು ಅಗ್ನಿಹೋತ್ರದ ಸಾಮಗ್ರಿಗಳನ್ನು ಮಾತ್ರವೇ ತನ್ನ ಬಳಿ ಇರಿಸಿಕೊಳ್ಳಬೇಕು. ॥21॥
(ಶ್ಲೋಕ-22)
ಮೂಲಮ್
ಚರೇದ್ವನೇ ದ್ವಾದಶಾಬ್ದಾನಷ್ಟೌ ವಾ ಚತುರೋ ಮುನಿಃ ।
ದ್ವಾವೇಕಂ ವಾ ಯಥಾ ಬುದ್ಧಿರ್ನ ವಿಪದ್ಯೇತ ಕೃಚ್ಛ್ರತಃ ॥
ಅನುವಾದ
ವಿಚಾರ ಶೀಲನಾದ ಮನುಷ್ಯನು ಹನ್ನೆರಡು, ಎಂಟು, ನಾಲ್ಕು, ಎರಡು ಅಥವಾ ಒಂದು ವರ್ಷದವರೆಗೆ ವಾನಪ್ರಸ್ಥಾಶ್ರಮದ ನಿಯಮಗಳನ್ನು ಪಾಲಿಸಬೇಕು. ಎಲ್ಲಾದರೂ ಹೆಚ್ಚು ತಪಸ್ಸಿನ ಕ್ಲೇಶಗಳನ್ನು ಸಹಿಸುವುದರಿಂದ ಬುದ್ಧಿಯು ಕೆಟ್ಟುಹೋಗದಂತೆ ಗಮನವಿರಿಸಬೇಕು. ॥22॥
(ಶ್ಲೋಕ-23)
ಮೂಲಮ್
ಯದಾಕಲ್ಪಃ ಸ್ವಕ್ರಿಯಾಯಾಂ ವ್ಯಾಧಿಭಿರ್ಜರಯಾಥವಾ ।
ಆನ್ವೀಕ್ಷಿಕ್ಯಾಂ ವಾ ವಿದ್ಯಾಯಾಂ ಕುರ್ಯಾದನಶನಾದಿಕಮ್ ॥
ಅನುವಾದ
ವಾನಪ್ರಸ್ಥಾಶ್ರಮವನ್ನು ಕೈಗೊಂಡ ಮನುಷ್ಯನಿಗೆ ರೋಗದ ಅಥವಾ ಮುಪ್ಪಿನ ಕಾರಣದಿಂದ ತನ್ನ ಕರ್ಮಗಳನ್ನು ಪೂರ್ಣ ಗೊಳಿಸಲು ಮತ್ತು ವೇದಾಂತ ವಿಚಾರ ಮಾಡುವ ಸಾಮರ್ಥ್ಯವು ಉಳಿಯದಿದ್ದಾಗ ಅವನು ಉಪವಾಸವೇ ಮುಂತಾದ ವ್ರತವನ್ನು ಆಚರಿಸಬೇಕು. ॥23॥
(ಶ್ಲೋಕ-24)
ಮೂಲಮ್
ಆತ್ಮನ್ಯಗ್ನೀನ್ಸಮಾರೋಪ್ಯ ಸಂನ್ಯಸ್ಯಾಹಂಮಮಾತ್ಮತಾಮ್ ।
ಕಾರಣೇಷು ನ್ಯಸೇತ್ಸಮ್ಯಕ್ಸಂಘಾತಂ ತು ಯಥಾರ್ಹತಃ ॥
ಅನುವಾದ
ಉಪವಾಸದ ಮೊದಲಿಗೆ ಅವನು ತನ್ನ ಆಹವನೀಯ ಮುಂತಾದ ಅಗ್ನಿಗಳನ್ನು ತನ್ನ ಆತ್ಮನಲ್ಲಿ ಲೀನಗೊಳಿಸಿಕೊಳ್ಳಬೇಕು. ‘ನಾನು ಮತ್ತು ನನ್ನದು’ ಇವನ್ನು ತ್ಯಾಗಮಾಡಿ ಶರೀರವನ್ನು ಅದರ ಕಾರಣ ಭೂತ ತತ್ತ್ವಗಳಲ್ಲಿ ಯಥೋಚಿತವಾಗಿ ಚೆನ್ನಾಗಿ ಲೀನಗೊಳಿಸಬೇಕು. ॥24॥
(ಶ್ಲೋಕ-25)
ಮೂಲಮ್
ಖೇ ಖಾನಿ ವಾಯೌ ನಿಃಶ್ವಾಸಾಂಸ್ತೇಜಸ್ಯೂಷ್ಮಾಣಮಾತ್ಮವಾನ್ ।
ಅಪ್ಸ್ವಸೃಕ್ಶ್ಲೇಷ್ಮಪೂಯಾನಿ ಕ್ಷಿತೌ ಶೇಷಂ ಯಥೋದ್ಭವಮ್ ॥
ಅನುವಾದ
ಜಿತೇಂದ್ರಿಯನಾದವನು ತನ್ನ ಶರೀರದ ಛಿದ್ರಾಕಾಶಗಳನ್ನು ಮಹಾಕಾಶದಲ್ಲಿ, ಪ್ರಾಣಗಳನ್ನು ವಾಯುವಿನಲ್ಲಿ, ಉಷ್ಣತೆಯನ್ನು ಅಗ್ನಿಯಲ್ಲಿ, ರಕ್ತ, ಕಫ, ಕೀವು ಮುಂತಾದ ಜಲಕ್ಕೆ ಸೇರಿದ ತತ್ತ್ವಗಳನ್ನು ಜಲದಲ್ಲಿ ಮತ್ತು ಮೂಳೆಯೇ ಮುಂತಾದ ಘನಪದಾರ್ಥಗಳನ್ನು ಪೃಥಿವಿಯಲ್ಲಿ ಲೀನಗೊಳಿಸಬೇಕು.॥25॥
(ಶ್ಲೋಕ-26)
ಮೂಲಮ್
ವಾಚಮಗ್ನೌ ಸವಕ್ತವ್ಯಾಮಿಂದ್ರೇ ಶಿಲ್ಪಂ ಕರಾವಪಿ ।
ಪದಾನಿ ಗತ್ಯಾ ವಯಸಿ ರತ್ಯೋಪಸ್ಥಂ ಪ್ರಜಾಪತೌ ॥
(ಶ್ಲೋಕ-27)
ಮೂಲಮ್
ಮೃತ್ಯೌ ಪಾಯುಂ ವಿಸರ್ಗಂ ಚ ಯಥಾಸ್ಥಾನಂ ವಿನಿರ್ದಿಶೇತ್ ।
ದಿಕ್ಷು ಶ್ರೋತ್ರಂ ಸನಾದೇನ ಸ್ಪರ್ಶಮಧ್ಯಾತ್ಮನಿ ತ್ವಚಮ್ ॥
(ಶ್ಲೋಕ-28)
ಮೂಲಮ್
ರೂಪಾಣಿ ಚಕ್ಷುಷಾ ರಾಜನ್ ಜ್ಯೋತಿಷ್ಯಭಿನಿವೇಶಯೇತ್ ।
ಅಪ್ಸು ಪ್ರಚೇತಸಾ ಜಿಹ್ವಾಂ ಘ್ರೇಯೈರ್ಘ್ರಾಣಂ ಕ್ಷಿತೌ ನ್ಯಸೇತ್ ॥
ಅನುವಾದ
ಹೀಗೆಯೇ ವಾಣಿ ಮತ್ತು ಅದರ ಕರ್ಮ ಭಾಷಣವನ್ನು ಅದರ ಅಧಿಷ್ಠಾತೃ ದೇವತೆ ಅಗ್ನಿಯಲ್ಲಿಯೂ, ಕೈ ಮತ್ತು ಅದರಿಂದಾಗುವ ಕಲಾ-ಕೌಶಲ್ಯವನ್ನು ಇಂದ್ರನಲ್ಲಿಯೂ, ಕಾಲು ಮತ್ತು ಅದರ ಗತಿ (ನಡೆ)ಯನ್ನು ಕಾಲಸ್ವರೂಪನಾದ ವಿಷ್ಣುವಿನಲ್ಲಿಯೂ, ರತಿ ಮತ್ತು ಉಪಸ್ಥವನ್ನು ಪ್ರಜಾಪತಿಯಲ್ಲಿಯೂ, ಪಾಯು ಮತ್ತು ಮಲೋತ್ಸರ್ಗವನ್ನು ಅದರ ಆಶ್ರಯಕ್ಕನುಸಾರ ಮೃತ್ಯುವಿನಲ್ಲಿಯೂ ಲೀನಗೊಳಿಸಬೇಕು. ಶ್ರೋತ್ರ ಮತ್ತು ಅದರಿಂದ ಕೇಳುವ ಶಬ್ದವನ್ನು ದಿಕ್ಕುಗಳಲ್ಲಿಯೂ, ಸ್ಪರ್ಶ ಮತ್ತು ತ್ವಚೆಯನ್ನು ವಾಯುವಿನಲ್ಲಿಯೂ, ನೇತ್ರಸಹಿತ ರೂಪವನ್ನು ಜ್ಯೋತಿಯಲ್ಲಿಯೂ, ಮಧುರವೇ ಮುಂತಾದ ರಸಗಳ ಸಹಿತ* ರಸನೇಂದ್ರಿಯವನ್ನು ಜಲದಲ್ಲಿ ಹಾಗೂ ಯುಧಿಷ್ಠಿರನೇ! ಘ್ರಾಣೇಂದ್ರಿಯ ಹಾಗೂ ಅದರಂದ ಮೂಸಲಾಗು ಗಂಧವನ್ನು ಪೃಥಿವಿಯಲ್ಲಿ ಲೀನಗೊಳಿಸಬೇಕು. ॥26-28॥
ಟಿಪ್ಪನೀ
- ಇಲ್ಲಿ ಮೂಲದಲ್ಲಿ ‘ಪ್ರಚೇತಸಾ’ ಪದವಿದೆ. ಅದರ ಅರ್ಥ ‘ವರುಣನ ಸಹಿತ’ ಎಂದಾಗುತ್ತದೆ. ವರುಣನು ರಸನೇಂದ್ರಿಯದ ಅಧಿಷ್ಠಾತೃನಾಗಿದ್ದಾನೆ. ಶ್ರೀಧರಸ್ವಾಮಿಯೂ ಇದೇ ಮತವನ್ನು ಸ್ವೀಕರಿಸಿರುವರು. ಆದರೆ ಈ ಪ್ರಸಂಗದಲ್ಲಿ ಸರ್ವತ್ರ ಇಂದ್ರಿಯ ಮತ್ತು ಅದರ ವಿಷಯದ ಅಧಿಷ್ಠಾತೃದೇವತೆಯಲ್ಲಿ ಲಯಗೊಳಿಸಲು ಹೇಳಲಾಗಿದೆ. ಮತ್ತೆ ರಸನೇಂದ್ರಿಯಕ್ಕಾಗಿಯೇ ಹೊಸ ಕ್ರಮ ಯುಕ್ತಿಯುಕ್ತವೆಂದು ತಿಳಿಯುವುದಿಲ್ಲ. ಅದಕ್ಕಾಗಿ ಇಲ್ಲಿ ಶ್ರೀವಿಶ್ವನಾಥ ಚಕ್ರವರ್ತಿಯ ಮತಾನುಸಾರ ‘ಪ್ರಚೇತಸಾ’ ಪದದ (‘ಪ್ರಕೃಷ್ಟಂ ಚೇತೋ ಯತ್ರ ಸ ಪ್ರಚೇತೋ ಮಧುರಾದಿರಸಸ್ತೇನ’ ಯಾವುದರ ಕಡೆಗೆ ಚಿತ್ತವು ಹೆಚ್ಚಾಗಿ ಆಕೃಷ್ಟವಾಗುವ ಆ ಮಧುರಾದಿ ರಸ ‘ಪ್ರಚೇತಸ್’ ಆಗಿದೆ. ಅದರ ಸಹಿತ) ಈ ವಿಗ್ರಹಕ್ಕನುಸಾರ ಪ್ರಸ್ತುತ ಅರ್ಥವನ್ನು ಮಾಡಲಾಗಿದೆ ಮತ್ತು ಇದೇ ಯುಕ್ತಿಯುಕ್ತವೆಂದೂ ತಿಳಿಯುತ್ತದೆ.
(ಶ್ಲೋಕ-29)
ಮೂಲಮ್
ಮನೋ ಮನೋರಥೈಶ್ಚಂದ್ರೇ ಬುದ್ಧಿಂ ಬೋಧ್ಯೈಃ ಕವೌ ಪರೇ ।
ಕರ್ಮಾಣ್ಯಧ್ಯಾತ್ಮನಾ ರುದ್ರೇ ಯದಹಂಮಮತಾಕ್ರಿಯಾ ।
ಸತ್ತ್ವೇನ ಚಿತ್ತಂ ಕ್ಷೇತ್ರಜ್ಞೇ ಗುಣೈರ್ವೈಕಾರಿಕಂ ಪರೇ ॥
ಅನುವಾದ
ಮನೋರಥಗಳೊಂದಿಗೆ ಮನಸ್ಸನ್ನು ಚಂದ್ರನಲ್ಲಿಯೂ, ಅರಿವಿಗೆ ಬರುವ ಪದಾರ್ಥಗಳ ಸಹಿತ ಬುದ್ದಿಯನ್ನು ಬ್ರಹ್ಮನಲ್ಲಿಯೂ ಹಾಗೂ ಅಹಂತೆ ಮತ್ತು ಮಮತಾರೂಪ ಕ್ರಿಯೆಗಳನ್ನು ಮಾಡುವ ಅಹಂಕಾರವನ್ನು ಅದರ ಕರ್ಮಗಳೊಂದಿಗೆ ರುದ್ರನಲ್ಲಿಯೂ ಲೀನಗೊಳಿಸಬೇಕು. ಹೀಗೆಯೇ ಚೈತನ್ಯಸಹಿತ ಚಿತ್ತವನ್ನು ಕ್ಷೇತ್ರಜ್ಞ (ಜೀವ) ನಲ್ಲಿ ಮತ್ತು ಗುಣಗಳ ಕಾರಣ ವಿಕಾರಿಯಂತೆ ಕಂಡು ಬರುವ ಜೀವವನ್ನು ಪರಬ್ರಹ್ಮನಲ್ಲಿ ಲೀನಗೊಳಿಸಿ ಬಿಡಬೇಕು. ॥29॥
(ಶ್ಲೋಕ-30)
ಮೂಲಮ್
ಅಪ್ಸು ಕ್ಷಿತಿಮಪೋ ಜ್ಯೋತಿಷ್ಯದೋ ವಾಯೌ ನಭಸ್ಯಮುಮ್ ।
ಕೂಟಸ್ಥೇ ತಚ್ಚ ಮಹತಿ ತದವ್ಯಕ್ತೇಕ್ಷರೇ ಚ ತತ್ ॥
ಅನುವಾದ
ಜೊತೆಗೆ ಪೃಥಿವಿಯನ್ನು ಜಲದಲ್ಲಿ, ಜಲವನ್ನು ಅಗ್ನಿಯಲ್ಲಿ, ಅಗ್ನಿಯನ್ನು ವಾಯುವಿನಲ್ಲಿ, ವಾಯುವನ್ನು ಆಕಾಶದಲ್ಲಿ, ಆಕಾಶವನ್ನು ಅಹಂಕಾರದಲ್ಲಿ, ಅಹಂಕಾರವನ್ನು ಮಹತ್ತತ್ತ್ವದಲ್ಲಿ, ಮಹತ್ತತ್ತ್ವವನ್ನು ಅವ್ಯಕ್ತದಲ್ಲಿ ಮತ್ತು ಅವ್ಯಕ್ತವನ್ನು ಅವಿನಾಶಿಯಾದ ಪರಮಾತ್ಮನಲ್ಲಿ ಲಯಗೊಳಿಸಬೇಕು. ॥30॥
(ಶ್ಲೋಕ-31)
ಮೂಲಮ್
ಇತ್ಯಕ್ಷರತಯಾತ್ಮಾನಂ ಚಿನ್ಮಾತ್ರಮವಶೇಷಿತಮ್ ।
ಜ್ಞಾತ್ವಾದ್ವಯೋಥ ವಿರಮೇದ್ದಗ್ಧಯೋನಿರಿವಾನಲಃ ॥
ಅನುವಾದ
ಈ ವಿಧವಾಗಿ ಅವಿನಾಶಿಯಾದ ಪರಮಾತ್ಮನ ರೂಪದಲ್ಲಿ ಉಳಿದಿರುವ ಚಿದ್ವಸ್ತುವೇ ಆತ್ಮಾ ಆಗಿದೆ. ಅದು ನಾನೇ ಆಗಿದ್ದೇನೆ ಹೀಗೆ ತಿಳಿದುಕೊಂಡು ಅದ್ವಿತೀಯ ಭಾವದಲ್ಲಿ ನೆಲೆಗೊಳ್ಳ ಬೇಕು. ತನ್ನ ಆಶ್ರಯವಾದ ಕಾಷ್ಠಾದಿಗಳು ಭಸ್ಮವಾಗಿ ಹೋದಮೇಲೆ ಅಗ್ನಿಯು ಶಾಂತವಾಗಿ ತನ್ನ ಸ್ವರೂಪದಲ್ಲಿ ಸ್ಥಿತವಾಗುವಂತೆ ಅವನೂ ಸ್ವ-ಸ್ವರೂಪದಲ್ಲಿ ನೆಲೆಗೊಂಡು ಮುಕ್ತನಾಗಬೇಕು. ॥31॥
ಅನುವಾದ (ಸಮಾಪ್ತಿಃ)
ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಯುಧಿಷ್ಠಿರ-ನಾರದಸಂವಾದೇ ಸದಾಚಾರನಿರ್ಣಯೋ ನಾಮ ದ್ವಾದಶೋಽಧ್ಯಾಯಃ ॥12॥