[ಹನ್ನೊಂದನೆಯ ಅಧ್ಯಾಯ]
ಭಾಗಸೂಚನಾ
ಮಾನವಧರ್ಮ, ವರ್ಣಧರ್ಮ, ಸ್ತ್ರೀಧರ್ಮ ಇವುಗಳ ನಿರೂಪಣೆ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಶ್ರುತ್ವೇಹಿತಂ ಸಾಧುಸಭಾಸಭಾಜಿತಂ-
ಮಹತ್ತಮಾಗ್ರಣ್ಯ ಉರುಕ್ರಮಾತ್ಮನಃ ।
ಯುಧಿಷ್ಠಿರೋ ದೈತ್ಯಪತೇರ್ಮುದಾ
ಯುತಃಪಪ್ರಚ್ಛ ಭೂಯಸ್ತನಯಂ ಸ್ವಯಂಭುವಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಗವನ್ಮಯನಾದ ಪ್ರಹ್ಲಾದನ ಕುರಿತಾದ ಸಾಧುಸಭೆಯಲ್ಲಿ ಸಮ್ಮಾನಿತವಾದ ಪವಿತ್ರ ಚರಿತ್ರೆಯನ್ನು ಕೇಳಿ, ಸಂತಶಿರೋಮಣಿ ಯುಧಿಷ್ಠಿರನಿಗೆ ತುಂಬಾ ಆನಂದವಾಯಿತು. ಅವನು ನಾರದರಲ್ಲಿ ಮತ್ತೆ ಕೇಳಿದನು ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ಭಗವನ್ ಶ್ರೋತುಮಿಚ್ಛಾಮಿ ನೃಣಾಂ ಧರ್ಮಂ ಸನಾತನಮ್ ।
ವರ್ಣಾಶ್ರಮಾಚಾರಯುತಂ ಯತ್ಪುಮಾನ್ವಿಂದತೇ ಪರಮ್ ॥
ಅನುವಾದ
ಯುಧಿಷ್ಠಿರನು ಕೇಳಿದನು — ಪೂಜ್ಯರೇ! ಈಗ ನಾನು ವರ್ಣ ಮತ್ತು ಆಶ್ರಮಗಳ ಸದಾಚಾರದೊಂದಿಗೆ ಮನುಷ್ಯರ ಸನಾತನ ಧರ್ಮವನ್ನು ಕೇಳಲಿಚ್ಛಿಸುತ್ತೇನೆ. ಏಕೆಂದರೆ, ಧರ್ಮದಿಂದಲೇ ಮನುಷ್ಯನಿಗೆ ಜ್ಞಾನ, ಭಗವತ್ಪ್ರೇಮ, ಸಾಕ್ಷಾತ್ ಪರಮಪುರುಷ ಭಗವಂತನ ಪ್ರಾಪ್ತಿಯು ಉಂಟಾಗುತ್ತದೆ. ॥2॥
(ಶ್ಲೋಕ-3)
ಮೂಲಮ್
ಭವಾನ್ಪ್ರಜಾಪತೇಃ ಸಾಕ್ಷಾದಾತ್ಮಜಃ ಪರಮೇಷ್ಠಿನಃ ।
ಸುತಾನಾಂ ಸಮ್ಮತೋ ಬ್ರಹ್ಮನ್ ಸ್ತಪೋಯೋಗಸಮಾಧಿಭಿಃ ॥
ಅನುವಾದ
ನೀವು ಸ್ವಯಂ ಪ್ರಜಾಪತಿ ಬ್ರಹ್ಮದೇವರ ಪುತ್ರರಾಗಿರುವಿರಿ. ನಾರದರೇ! ನಿಮ್ಮ ತಪಸ್ಸು, ಯೋಗ, ಸಮಾಧಿಯ ಕಾರಣದಿಂದಾಗಿ ಅವರು ತಮ್ಮ ಇತರ ಪುತ್ರರಿಗಿಂತ ನಿಮ್ಮನ್ನು ಹೆಚ್ಚು ಸಮ್ಮಾನಿಸುವರು. ॥3॥
(ಶ್ಲೋಕ-4)
ಮೂಲಮ್
ನಾರಾಯಣಪರಾ ವಿಪ್ರಾ ಧರ್ಮಂ ಗುಹ್ಯಂ ಪರಂ ವಿದುಃ ।
ಕರುಣಾಃ ಸಾಧವಃ ಶಾಂತಾಃ ತ್ವದ್ವಿಧಾ ನ ತಥಾಪರೇ ॥
ಅನುವಾದ
ನಿಮ್ಮಂತಹ ಪರಾಯಣರೂ, ದಯಾಳುಗಳೂ, ಸದಾಚಾರ ಸಂಪನ್ನರೂ, ಶಾಂತರೂ ಆಗಿರುವ ನೀವು ಬ್ರಾಹ್ಮಣ ಧರ್ಮದ ಅತಿಗೋಪ್ಯವಾದ ರಹಸ್ಯವನ್ನು ಯಥಾರ್ಥವಾಗಿ ತಿಳಿದಿರುವಂತೆ ಬೇರೆ ಯಾರೂ ತಿಳಿಯಲಾರರು. ॥4॥
(ಶ್ಲೋಕ-5)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ನತ್ವಾ ಭಗವತೇಜಾಯ ಲೋಕಾನಾಂ ಧರ್ಮಹೇತವೇ ।
ವಕ್ಷ್ಯೇ ಸನಾತನಂ ಧರ್ಮಂ ನಾರಾಯಣಮುಖಾಚ್ಛ್ರುತಮ್ ॥
(ಶ್ಲೋಕ-6)
ಮೂಲಮ್
ಯೋವತೀರ್ಯಾತ್ಮನೋಂಶೇನದಾಕ್ಷಾಯಣ್ಯಾಂ ತು ಧರ್ಮತಃ ।
ಲೋಕಾನಾಂ ಸ್ವಸ್ತಯೇಧ್ಯಾಸ್ತೇತಪೋ ಬದರಿಕಾಶ್ರಮೇ ॥
ಅನುವಾದ
ನಾರದರು ಹೇಳಿದರು — ಯುಧಿಷ್ಠಿರನೇ! ಜನ್ಮರಹಿತನಾದ ಭಗವಂತನೇ ಸಮಸ್ತ ಧರ್ಮಗಳ ಮೂಲಕಾರಣನಾಗಿದ್ದಾನೆ. ಆ ಪ್ರಭುವೇ ಚರಾಚರ ಜಗತ್ತಿನ ಕಲ್ಯಾಣಕ್ಕಾಗಿ ಧರ್ಮ ಮತ್ತು ದಕ್ಷಪುತ್ರಿಯಾದ ಮೂರ್ತಿದೇವಿಯಲ್ಲಿ ತನ್ನ ಅಂಶದಿಂದ ಅವತರಿಸಿ ಬದರಿಕಾಶ್ರಮದಲ್ಲಿ ತಪಸ್ಸು ಮಾಡುತ್ತಾ ಇರುವನು. ಆ ನಾರಾಯಣಮುನಿಯನ್ನು ನಮಸ್ಕರಿಸಿ, ಅವರ ಬಾಯಿಂದಲೇ ಕೇಳಿರುವ ಸನಾತನ ಧರ್ಮವನ್ನು ನಾನು ವರ್ಣಿಸುತ್ತೇನೆ. ॥5-6॥
(ಶ್ಲೋಕ-7)
ಮೂಲಮ್
ಧರ್ಮಮೂಲಂ ಹಿ ಭಗವಾನ್ಸರ್ವವೇದಮಯೋ ಹರಿಃ ।
ಸ್ಮೃತಂ ಚ ತದ್ವಿದಾಂ ರಾಜನ್ಯೇನ ಚಾತ್ಮಾ ಪ್ರಸೀದತಿ ॥
ಅನುವಾದ
ಯುಧಿಷ್ಠಿರನೇ! ಸರ್ವ ವೇದಸ್ವರೂಪನಾದ ಭಗವಾನ್ ಶ್ರೀಹರಿಯೂ, ಅವನ ತತ್ತ್ವವನ್ನರಿತ ಮಹರ್ಷಿಗಳು ರಚಿಸಿದ ಸ್ಮೃತಿಗಳೂ ಮತ್ತು ಯಾವುದರಿಂದ ಮನಸ್ಸಿಗೆ ಪ್ರಸನ್ನತೆ ಉಂಟಾಗುತ್ತದೋ ಆ ಕರ್ಮವು ಧರ್ಮಕ್ಕೆ ಮೂಲವಾದುದು. ॥7॥
(ಶ್ಲೋಕ-8)
ಮೂಲಮ್
ಸತ್ಯಂ ದಯಾ ತಪಃ ಶೌಚಂ ತಿತಿಕ್ಷೇಕ್ಷಾ ಶಮೋ ದಮಃ ।
ಅಹಿಂಸಾ ಬ್ರಹ್ಮಚರ್ಯಂ ಚ ತ್ಯಾಗಃ ಸ್ವಾಧ್ಯಾಯ ಆರ್ಜವಮ್ ॥
(ಶ್ಲೋಕ-9)
ಮೂಲಮ್
ಸಂತೋಷಃ ಸಮದೃಕ್ಸೇವಾ ಗ್ರಾಮ್ಯೇಹೋಪರಮಃ ಶನೈಃ ।
ನೃಣಾಂ ವಿಪರ್ಯಯೇಹೇಕ್ಷಾ ವೌನಮಾತ್ಮವಿಮರ್ಶನಮ್ ॥
(ಶ್ಲೋಕ-10)
ಮೂಲಮ್
ಅನ್ನಾದ್ಯಾದೇಃ ಸಂವಿಭಾಗೋ ಭೂತೇಭ್ಯಶ್ಚ ಯಥಾರ್ಹತಃ ।
ತೇಷ್ವಾತ್ಮದೇವತಾಬುದ್ಧಿಃ ಸುತರಾಂ ನೃಷು ಪಾಂಡವ ॥
(ಶ್ಲೋಕ-11)
ಮೂಲಮ್
ಶ್ರವಣಂ ಕೀರ್ತನಂ ಚಾಸ್ಯ ಸ್ಮರಣಂ ಮಹತಾಂ ಗತೇಃ ।
ಸೇವೇಜ್ಯಾವನತಿರ್ದಾಸ್ಯಂ ಸಖ್ಯಮಾತ್ಮಸಮರ್ಪಣಮ್ ॥
(ಶ್ಲೋಕ-12)
ಮೂಲಮ್
ನೃಣಾಮಯಂ ಪರೋ ಧರ್ಮಃ ಸರ್ವೇಷಾಂ ಸಮುದಾಹೃತಃ ।
ತ್ರಿಂಶಲ್ಲಕ್ಷಣವಾನ್ರಾಜನ್ಸರ್ವಾತ್ಮಾ ಯೇನ ತುಷ್ಯತಿ ॥
ಅನುವಾದ
ಎಲೈ ರಾಜನೇ! ಧರ್ಮಕ್ಕೆ ಮೂವತ್ತು ಲಕ್ಷಣಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ ಸತ್ಯ, ದಯೆ, ತಪಸ್ಸು, ಶೌಚ, ತಿತಿಕ್ಷೆ, ಉಚಿತ-ಅನುಚಿತಗಳ ವಿಚಾರ, ಮನಸ್ಸಿನ ಮತ್ತು ಇಂದ್ರಿಯಗಳ ಸಂಯಮ, ಅಹಿಂಸಾ, ಬ್ರಹ್ಮಚರ್ಯ, ತ್ಯಾಗ, ಸ್ವಾಧ್ಯಾಯ, ಸರಳತೆ, ಸಂತೋಷ, ಸಮದರ್ಶಿತ್ವ, ಮಹಾತ್ಮರ ಸೇವೆ, ನಿಧಾನವಾಗಿ ಸಾಂಸಾರಿಕ ಭೋಗಗಳ ಚೇಷ್ಟೆಗಳಿಂದ ನಿವೃತ್ತಿ, ಮನುಷ್ಯರ ಅಭಿಮಾನಪೂರ್ಣ ಪ್ರಯತ್ನಗಳ ಫಲವು ವಿರುದ್ಧವಾಗಿಯೇ ಉಂಟಾಗುವುದು ಎಂಬ ವಿಚಾರ, ಮೌನ, ಆತ್ಮಚಿಂತನೆ, ಪ್ರಾಣಿಗಳಿಗೆ ಅನ್ನವೇ ಮುಂತಾದವುಗಳನ್ನು ಯಥಾಯೋಗ್ಯವಾಗಿ ಹಂಚಿ ಕೊಡುವುದು, ಪ್ರಾಣಿಗಳಲ್ಲಿ ಮತ್ತು ವಿಶೇಷವಾಗಿ ಮನುಷ್ಯರಲ್ಲಿ ತನ್ನ ಆತ್ಮನ ಹಾಗೂ ಇಷ್ಟದೇವರ ಭಾವ, ಸಂತರ ಪರಮಾ ಶ್ರಯ ಭಗವಾನ್ ಶ್ರೀಕೃಷ್ಣನ ನಾಮ-ಗುಣ-ಲೀಲೆ ಮುಂತಾದವುಗಳ ಶ್ರವಣ, ಕೀರ್ತನೆ, ಸ್ಮರಣೆ, ಅವನ ಸೇವೆ, ಪೂಜೆ ಮತ್ತು ನಮಸ್ಕಾರ, ಅವನ ಕುರಿತು ದಾಸ್ಯ, ಸಖ್ಯ, ಆತ್ಮಸಮರ್ಪಣ ಈ ಮೂವತ್ತು ಬಗೆಯ ಆಚರಣೆಯು ಮನುಷ್ಯರೆಲ್ಲರ ಪರಮಧರ್ಮವಾಗಿದೆ. ಇವುಗಳ ಪಾಲನೆ ಯಿಂದ ಸರ್ವಾತ್ಮನಾದ ಭಗವಂತನು ಪ್ರಸನ್ನನಾಗುತ್ತಾನೆ. ॥8-12॥
(ಶ್ಲೋಕ-13)
ಮೂಲಮ್
ಸಂಸ್ಕಾರಾ ಯದವಿಚ್ಛಿನ್ನಾಃ ಸ ದ್ವಿಜೋಜೋ ಜಗಾದ ಯಮ್ ।
ಇಜ್ಯಾಧ್ಯಯನದಾನಾನಿ ವಿಹಿತಾನಿ ದ್ವಿಜನ್ಮನಾಮ್ ।
ಜನ್ಮಕರ್ಮಾವದಾತಾನಾಂ ಕ್ರಿಯಾಶ್ಚಾಶ್ರಮಚೋದಿತಾಃ ॥
ಅನುವಾದ
ಧರ್ಮರಾಜನೇ! ಯಾರ ವಂಶದಲ್ಲಿ ಅಖಂಡವಾಗಿ ಸಂಸ್ಕಾರಗಳು ಆಗುತ್ತಾ ಬಂದಿವೆಯೋ, ಯಾರನ್ನು ಬ್ರಹ್ಮದೇವರು ಸಂಸ್ಕಾರಕ್ಕೆ ಯೋಗ್ಯರೆಂದು ಸ್ವೀಕರಿಸಿರುವರೋ, ಅವರನ್ನು ‘ದ್ವಿಜ’ ರೆಂದು ಹೇಳುತ್ತಾರೆ. ಜನ್ಮ ಮತ್ತು ಕರ್ಮಗಳಿಂದ ಶುದ್ಧರಾದ ದ್ವಿಜರಿಗಾಗಿ ಯಜ್ಞ, ಅಧ್ಯಯನ, ದಾನ ಮತ್ತು ಬ್ರಹ್ಮಚರ್ಯವೇ ಮುಂತಾದ ಎಲ್ಲ ಆಶ್ರಮಗಳ ವಿಶೇಷ ಧರ್ಮ-ಕರ್ಮಗಳೂ ವಿಹಿತವಾಗಿವೆ. ॥13॥
(ಶ್ಲೋಕ-14)
ಮೂಲಮ್
ವಿಪ್ರಸ್ಯಾಧ್ಯಯನಾದೀನಿ ಷಡನ್ಯಸ್ಯಾಪ್ರತಿಗ್ರಹಃ ।
ರಾಜ್ಞೋ ವೃತ್ತಿಃ ಪ್ರಜಾಗೋಪ್ತುರವಿಪ್ರಾದ್ವಾ ಕರಾದಿಭಿಃ ॥
ಅನುವಾದ
ಅಧ್ಯಯನ, ಅಧ್ಯಾಪನ, ದಾನ ಪಡೆಯುವುದು, ದಾನ ಮಾಡುವುದು, ಯಜ್ಞ ಮಾಡುವುದು, ಯಜ್ಞ ಮಾಡಿಸುವುದು ಈ ಆರು ಕರ್ಮಗಳು ಬ್ರಾಹ್ಮಣನದ್ದಾಗಿವೆ. ಕ್ಷತ್ರಿಯನು ದಾನವನ್ನು ತೆಗೆದುಕೊಳ್ಳಬಾರದು. ಪ್ರಜೆಗಳನ್ನು ರಕ್ಷಿಸುವ ಕ್ಷತ್ರಿಯನ ಜೀವನ ನಿರ್ವಾಹವು ಬ್ರಾಹ್ಮಣನನ್ನು ಬಿಟ್ಟು ಉಳಿದೆಲ್ಲರಿಂದ ಯಥಾಯೋಗ್ಯ ತೆರಿಗೆ, ದಂಡ (ಜುಲ್ಮಾನೆ) ಮುಂತಾದವುಗಳ ಮೂಲಕ ನಡೆಯುತ್ತದೆ. ॥14॥
(ಶ್ಲೋಕ-15)
ಮೂಲಮ್
ವೈಶ್ಯಸ್ತು ವಾರ್ತಾವೃತ್ತಿಶ್ಚ ನಿತ್ಯಂ ಬ್ರಹ್ಮಕುಲಾನುಗಃ ।
ಶೂದ್ರಸ್ಯ ದ್ವಿಜಶುಶ್ರೂಷಾ ವೃತ್ತಿಶ್ಚ ಸ್ವಾಮಿನೋ ಭವೇತ್ ॥
ಅನುವಾದ
ವೈಶ್ಯರು ಸದಾಕಾಲ ಬ್ರಾಹ್ಮಣವಂಶೀಯರ ಅನುಯಾಯಿಗಳಾಗಿದ್ದು ಗೋರಕ್ಷಣೆ, ಕೃಷಿ ಮತ್ತು ವ್ಯಾಪಾರದ ಮೂಲಕ ತಮ್ಮ ಜೀವನವನ್ನು ನಡೆಸಬೇಕು. ಶೂದ್ರರ ಧರ್ಮವು ದ್ವಿಜಾತಿಯರ ಸೇವೆ. ಅವನ ಜೀವನ ನಿರ್ವಹಣೆಯನ್ನು ಅವನ ಒಡೆಯನು ಮಾಡುತ್ತಾನೆ.॥15॥
(ಶ್ಲೋಕ-16)
ಮೂಲಮ್
ವಾರ್ತಾ ವಿಚಿತ್ರಾ ಶಾಲೀನಯಾಯಾವರಶಿಲೋಂಛನಮ್ ।
ವಿಪ್ರವೃತ್ತಿಶ್ಚತುರ್ಧೇಯಂ ಶ್ರೇಯಸೀ ಚೋತ್ತರೋತ್ತರಾ ॥
ಅನುವಾದ
ಬ್ರಾಹ್ಮಣನಿಗೆ ವಾರ್ತಾ,1 ಶಾಲೀನ,2 ಯಾಯಾವರ3 ಮತ್ತು ಶಿಲೋಂಛನ4* ಎಂಬ ನಾಲ್ಕು ಬಗೆಯ ವೃತ್ತಿಗಳನ್ನು ಜೀವನ ನಿರ್ವಾಹಕ್ಕೆ ಹೇಳಲಾಗಿವೆ. ಇವುಗಳಲ್ಲಿ ಮುಂದು-ಮುಂದಿನ ವೃತ್ತಿಗಳು ಹಿಂದು-ಹಿಂದಿನಗಳಿಂದ ಶ್ರೇಷ್ಠವಾಗಿವೆ. ॥16॥
ಟಿಪ್ಪನೀ
*1-ಯಜ್ಞ ಅಧ್ಯಯನಾದಿಗಳನ್ನೂ ಮಾಡಿಸಿ ಹಣ ಪಡೆಯುವುದು. 2-ಯಾಚಿಸದೇ ಏನಾದರೂ ಸಿಕ್ಕಿದರೆ ಅದರಲ್ಲೇ ನಿರ್ವಾಹ ಮಾಡುವುದು. 3-ಪ್ರತಿದಿನವು ಧಾನ್ಯಾದಿಗಳನ್ನು ಬೇಡಿತರುವುದು. 4-ರೈತನು ಹೊಲದಲ್ಲಿ ಕಟಾವುಮಾಡಿ ಧಾನ್ಯವನ್ನು ಮನೆಗೆ ಕೊಂಡುಹೋದ ಬಳಿಕ ಭೂಮಿಯಲ್ಲಿ ಬಿದ್ದಿರುವ ಕಾಳುಗಳನ್ನು ‘ಶಿಲ’ ಹಾಗೂ ಮಂಡಿಯಲ್ಲಿ ಬಿದ್ದಿರುವ ಧಾನ್ಯವನ್ನು ‘ಉಂಛ’ ಎಂದು ಹೇಳುತ್ತಾರೆ. ಆ ಶಿಲ ಮತ್ತು ಉಂಛಗಳನ್ನು ಹೆಕ್ಕಿ ತಂದು ತನ್ನ ಜೀವನ ನಿರ್ವಾಹ ಮಾಡುವುದು ‘ಶಿಲೋಂಛನ’ ವೃತ್ತಿ ಎಂದು ಹೇಳುತ್ತಾರೆ.
(ಶ್ಲೋಕ-17)
ಮೂಲಮ್
ಜಘನ್ಯೋ ನೋತ್ತಮಾಂ ವೃತ್ತಿಮನಾಪದಿ ಭಜೇನ್ನರಃ ।
ಋತೇ ರಾಜನ್ಯಮಾಪತ್ಸು ಸರ್ವೇಷಾಮಪಿ ಸರ್ವಶಃ ॥
ಅನುವಾದ
ಕೆಳವರ್ಣದ ಮನುಷ್ಯನು ಆಪತ್ಕಾಲವಿಲ್ಲದೆ ಉತ್ತಮ ವರ್ಣದವರ ವೃತ್ತಿಗಳನ್ನೂ ಅವಲಂಬಿಸಬಾರದು. ಕ್ಷತ್ರಿಯನು ದಾನ ಪಡೆಯುವುದನ್ನು ಬಿಟ್ಟು ಬ್ರಾಹ್ಮಣರ ಉಳಿದ ಐದೂ ವೃತ್ತಿಗಳನ್ನು ಅವಲಂಬಿಸಬಹುದು. ಆಪತ್ಕಾಲದಲ್ಲಿ ಎಲ್ಲರೂ ಎಲ್ಲರ ವೃತ್ತಿಗಳನ್ನೂ ಸ್ವೀಕರಿಸಬಹುದು. ॥17॥
(ಶ್ಲೋಕ-18)
ಮೂಲಮ್
ಋತಾಮೃತಾಭ್ಯಾಂ ಜೀವೇತ ಮೃತೇನ ಪ್ರಮೃತೇನ ವಾ ।
ಸತ್ಯಾನೃತಾಭ್ಯಾಂ ಜೀವೇತ ನ ಶ್ವವೃತ್ತ್ಯಾ ಕಥಂಚನ ॥
ಅನುವಾದ
ಋತ, ಅಮೃತ, ಮೃತ, ಪ್ರಮೃತ ಮತ್ತು ಸತ್ಯಾನೃತ ಇವುಗಳಲ್ಲಿ ಯಾವುದೇ ವೃತ್ತಿಯನ್ನು ಅವಲಂಬಿಸಿದರೂ ಶ್ವಾನವೃತ್ತಿಯನ್ನು ಎಂದೂ ಅವಲಂಬಿಸಬಾರದು. ॥18॥
(ಶ್ಲೋಕ-19)
ಮೂಲಮ್
ಋತಮುಂಛಶಿಲಂ ಪ್ರೋಕ್ತಮಮೃತಂ ಯದಯಾಚಿತಮ್ ।
ಮೃತಂ ತು ನಿತ್ಯಯಾಚ್ಞಾ ಸ್ಯಾತ್ಪ್ರಮೃತಂ ಕರ್ಷಣಂ ಸ್ಮೃತಮ್ ॥
ಅನುವಾದ
ಮಂಡಿಯಲ್ಲಿ ಚೆಲ್ಲಿಹೋದ ಧಾನ್ಯವನ್ನು (ಉಂಛ) ಹಾಗೂ ಹೊಲದಲ್ಲಿ ಬಿದ್ದಿರುವ ಧಾನ್ಯವನ್ನು (ಶಿಲ) ಹೆಕ್ಕಿತಂದು ಶಿಲೋಂಛ ವೃತ್ತಿಯಿಂದ ಜೀವನ ನಿರ್ವಾಹ ಮಾಡುವುದು ‘ಋತ’ವಾಗಿದೆ. ಬೇಡದೆಯೇ ಏನಾದರೂ ಸಿಕ್ಕಿದರೆ ಅದನ್ನು ಅಯಾಚಿತ (ಶಾಲೀನ) ವೃತ್ತಿಯಿಂದ ಜೀವನ ನಿರ್ವಾಹ ಮಾಡುವುದು, ‘ಅಮೃತ’ವಾಗಿದೆ. ನಿತ್ಯವೂ ಬೇಡಿತರುವುದು ಅರ್ಥಾತ್ ‘ಯಾಯಾವರ’ ವೃತ್ತಿಯಿಂದ ಜೀವನ ನಡೆಸುವುದು ‘ಮೃತ’ವಾಗಿದೆ. ಕೃಷಿಯೇ ಮುಂತಾದವುಗಳಿಂದ ‘ವಾರ್ತಾ’ ವೃತ್ತಿಯಿಂದ ಜೀವನ ನಡೆಸುವುದು ‘ಪ್ರಮೃತ’ವಾಗಿದೆ. ॥19॥
(ಶ್ಲೋಕ-20)
ಮೂಲಮ್
ಸತ್ಯಾನೃತಂ ತು ವಾಣಿಜ್ಯಂ ಶ್ವವೃತ್ತಿರ್ನೀಚಸೇವನಮ್ ।
ವರ್ಜಯೇತ್ತಾಂ ಸದಾ ವಿಪ್ರೋ ರಾಜನ್ಯಶ್ಚ ಜುಗುಪ್ಸಿತಾಮ್ ।
ಸರ್ವವೇದಮಯೋ ವಿಪ್ರಃ ಸರ್ವದೇವಮಯೋ ನೃಪಃ ॥
ಅನುವಾದ
ವಾಣಿಜ್ಯವು ‘ಸತ್ಯಾನೃತ’ವಾಗಿದೆ. ಕೆಳವರ್ಣದವರ ಸೇವೆಮಾಡುವುದು ‘ಶ್ವಾನವೃತ್ತಿ’ ಯಾಗಿದೆ. ಬ್ರಾಹ್ಮಣರು ಮತ್ತು ಕ್ಷತ್ರಿಯರು ಈ ಕೊನೆಯ ನಿಂದಿತವೃತ್ತಿಯನ್ನು ಎಂದಿಗೂ ಆಶ್ರಯಿಸಬಾರದು. ಏಕೆಂದರೆ, ಬ್ರಾಹ್ಮಣನು ಸರ್ವವೇದಮಯನಾಗಿದ್ದರೆ, ಕ್ಷತ್ರಿಯನು ಸರ್ವದೇವಮಯನಾಗಿದ್ದಾನೆ. ॥20॥
(ಶ್ಲೋಕ-21)
ಮೂಲಮ್
ಶಮೋ ದಮಸ್ತಪಃ ಶೌಚಂ ಸಂತೋಷಃ ಕ್ಷಾಂತಿರಾರ್ಜವಮ್ ।
ಜ್ಞಾನಂ ದಯಾಚ್ಯುತಾತ್ಮತ್ವಂ ಸತ್ಯಂ ಚ ಬ್ರಹ್ಮಲಕ್ಷಣಮ್ ॥
ಅನುವಾದ
ಶಮ, ದಮ, ತಪಸ್ಸು, ಶೌಚ, ಸಂತೋಷ, ಕ್ಷಮೆ, ಸರಳತೆ, ಜ್ಞಾನ, ದಯೆ, ಭಗವತ್ಪರಾಯಣತೆ, ಮತ್ತು ಸತ್ಯ ಇವು ಬ್ರಾಹ್ಮಣನ ಲಕ್ಷಣಗಳಾಗಿವೆ. ॥21॥
(ಶ್ಲೋಕ-22)
ಮೂಲಮ್
ಶೌರ್ಯಂ ವೀರ್ಯಂ ಧೃತಿಸ್ತೇಜಸ್ತ್ಯಾಗ ಆತ್ಮಜಯಃ ಕ್ಷಮಾ ।
ಬ್ರಹ್ಮಣ್ಯತಾ ಪ್ರಸಾದಶ್ಚ ರಕ್ಷಾ ಚ ಕ್ಷತ್ರಲಕ್ಷಣಮ್ ॥
ಅನುವಾದ
ಯುದ್ಧದಲ್ಲಿ ಉತ್ಸಾಹ, ವೀರತೆ, ಧೀರತೆ, ತೇಜಸ್ವಿತೆ, ತ್ಯಾಗ, ಮನಸ್ಸಿನ ಜಯ, ಕ್ಷಮೆ, ಬ್ರಾಹ್ಮಣರ ಕುರಿತು ಭಕ್ತಿ, ಅನುಗ್ರಹ, ಮತ್ತು ಪ್ರಜಾರಕ್ಷಣೆ ಇವು ಕ್ಷತ್ರಿಯರ ಲಕ್ಷಣಗಳು. ॥22॥
(ಶ್ಲೋಕ-23)
ಮೂಲಮ್
ದೇವಗುರ್ವಚ್ಯುತೇ ಭಕ್ತಿಸಿವರ್ಗಪರಿಪೋಷಣಮ್ ।
ಆಸ್ತಿಕ್ಯಮುದ್ಯಮೋ ನಿತ್ಯಂ ನೈಪುಣಂ ವೈಶ್ಯಲಕ್ಷಣಮ್ ॥
ಅನುವಾದ
ದೇವತೆ, ಗುರು ಮತ್ತು ಭಗವಂತನ ಕುರಿತು ಭಕ್ತಿ, ಅರ್ಥ, ಧರ್ಮ ಮತ್ತು ಕಾಮ ಮೂರೂ ಪುರುಷಾರ್ಥಗಳನ್ನು ರಕ್ಷಿಸುವುದು, ಆಸ್ತಿಕತೆ, ಉದ್ಯೋಗಶೀಲತೆ, ವ್ಯಾವಹಾರಿಕ ನಿಪುಣತೆ ಇವು ವೈಶ್ಯರ ಲಕ್ಷಣಗಳಾಗಿವೆ. ॥23॥
(ಶ್ಲೋಕ-24)
ಮೂಲಮ್
ಶೂದ್ರಸ್ಯ ಸಂನತಿಃ ಶೌಚಂ ಸೇವಾ ಸ್ವಾಮಿನ್ಯಮಾಯಯಾ ।
ಅಮಂತ್ರ ಯಜ್ಞೋ ಹ್ಯಸ್ತೇಯಂ ಸತ್ಯಂ ಗೋವಿಪ್ರರಕ್ಷಣಮ್ ॥
ಅನುವಾದ
ಮೇಲಿನ ವರ್ಣದವರ ಮುಂದೆ ನಮ್ರವಾಗಿರುವುದು. ಪವಿತ್ರತೆ, ಒಡೆಯನ ನಿಷ್ಕಪಟ ಸೇವೆ, ವೈದಿಕ ಮಂತ್ರಗಳಿಲ್ಲದೆ ಯಜ್ಞಮಾಡುವುದು, ಕಳ್ಳತನ ಮಾಡದಿರುವುದು, ಸತ್ಯ ಹಾಗೂ ಗೋ-ಬ್ರಾಹ್ಮಣರ ರಕ್ಷಣೆ ಇವು ಶೂದ್ರನ ಲಕ್ಷಣಗಳು. ॥24॥
(ಶ್ಲೋಕ-25)
ಮೂಲಮ್
ಸೀಣಾಂ ಚ ಪತಿದೇವಾನಾಂ ತಚ್ಛುಶ್ರೂಷಾನುಕೂಲತಾ ।
ತದ್ಬಂಧುಷ್ವನುವೃತ್ತಿಶ್ಚ ನಿತ್ಯಂ ತದ್ವ್ರತಧಾರಣಮ್ ॥
ಅನುವಾದ
ಪತಿಯ ಸೇವೆ ಮಾಡುವುದು, ಅವನಿಗೆ ಅನುಕೂಲಳಾಗಿರುವುದು ಪತಿಯ ಸಂಬಂಧಿಗಳನ್ನು ಸಂತೋಷಪಡಿಸುವುದು, ಸದಾಕಾಲ ಪತಿಯ ನಿಯಮಗಳನ್ನು ರಕ್ಷಿಸುವುದು ಇವು ಪತಿಯನ್ನೇ ಈಶ್ವರನೆಂದು ತಿಳಿದಿರುವ ಪತಿವ್ರತಾ ಸ್ತ್ರೀಯರ ಧರ್ಮವಾಗಿದೆ.॥25॥
(ಶ್ಲೋಕ-26)
ಮೂಲಮ್
ಸಂಮಾರ್ಜನೋಪಲೇಪಾಭ್ಯಾಂ ಗೃಹಮಂಡಲವರ್ತನೈಃ ।
ಸ್ವಯಂ ಚ ಮಂಡಿತಾ ನಿತ್ಯಂ ಪರಿಮೃಷ್ಟಪರಿಚ್ಛದಾ ॥
ಅನುವಾದ
ಸಾಧ್ವಿಯಾದ ಹೆಂಗಸು ಮನೆಯನ್ನು ಗುಡಿಸಿ, ಸಾರಿಸಿ, ಒರೆಸಿ ಮಂಡಲ ರಂಗವಲ್ಲಿಗಳಿಂದ ಓರಣವಾಗಿಟ್ಟುಕೊಳ್ಳುವಿಕೆ, ಮನೋಹರವಾದ ಉಡಿಗೆ, ತೊಡಿಗೆಗಳಿಂದ ಶರೀರವನ್ನು ಅಲಂಕರಿಸಿಕೊಳ್ಳುವಿಕೆ, ವಸ್ತುಗಳನ್ನು ಅಚ್ಚುಕಟ್ಟಾಗಿ ಇಡುವುದು ಮುಂತಾದವುಗಳನ್ನು ಮಾಡಬೇಕು. ॥26॥
(ಶ್ಲೋಕ-27)
ಮೂಲಮ್
ಕಾಮೈರುಚ್ಚಾವಚೈಃ ಸಾಧ್ವೀ ಪ್ರಶ್ರಯೇಣ ದಮೇನ ಚ ।
ವಾಕ್ಯೈಃ ಸತ್ಯೈಃ ಪ್ರಿಯೈಃ ಪ್ರೇಮ್ಣಾ ಕಾಲೇ ಕಾಲೇ ಭಜೇತ್ಪತಿಮ್ ॥
ಅನುವಾದ
ತನ್ನ ಪತಿದೇವರ ಸಣ್ಣ-ದೊಡ್ಡ ಇಚ್ಛೆಗಳನ್ನು ಸಮಯಾನುಸಾರ ಪೂರೈಸುವುದು, ವಿನಯ, ಇಂದ್ರಿಯ ಸಂಯಮ, ಸತ್ಯ ಹಾಗೂ ಪ್ರಿಯವಾದ ಮಾತುಗಳಿಂದ ಪ್ರೇಮಪೂರ್ವಕವಾಗಿ ಪತಿಯ ಸೇವೆಮಾಡಬೇಕು. ॥27॥
(ಶ್ಲೋಕ-28)
ಮೂಲಮ್
ಸಂತುಷ್ಟಾಲೋಲುಪಾ ದಕ್ಷಾ ಧರ್ಮಜ್ಞಾ ಪ್ರಿಯಸತ್ಯವಾಕ್ ।
ಅಪ್ರಮತ್ತಾ ಶುಚಿಃ ಸ್ನಿಗ್ಧಾ ಪತಿಂ ತ್ವಪತಿತಂ ಭಜೇತ್ ॥
ಅನುವಾದ
ದೊರೆತುದರಲ್ಲಿ ಸಂತುಷ್ಟಳಾಗಿದ್ದು, ಯಾವುದೇ ವಸ್ತುವಿಗಾಗಿ ಆಸೆಪಡಬಾರದು. ಎಲ್ಲ ಕಾರ್ಯಗಳಲ್ಲಿಯೂ ದಕ್ಷಳಾಗಿದ್ದು, ಧರ್ಮಜ್ಞಳಾಗಿರಬೇಕು. ಸತ್ಯ ಹಾಗೂ ಪ್ರಿಯವನ್ನೇ ನುಡಿಯಬೇಕು. ತನ್ನ ಕರ್ತವ್ಯಗಳಲ್ಲಿ ಎಚ್ಚರಿಕೆಯಿಂದಿರಬೇಕು. ಪವಿತ್ರ ಳಾಗಿದ್ದು, ಪ್ರೇಮದಿಂದ ತುಂಬಿದವಳಾಗಿ ಪತಿಯು ಧರ್ಮಭ್ರಷ್ಟನಾಗದೇ ಇದ್ದರೆ ಆತನ ಸಹವಾಸ ಮಾಡಬೇಕು. ॥28॥
(ಶ್ಲೋಕ-29)
ಮೂಲಮ್
ಯಾ ಪತಿಂ ಹರಿಭಾವೇನ ಭಜೇಚ್ಛ್ರೀರಿವ ತತ್ಪರಾ ।
ಹರ್ಯಾತ್ಮನಾ ಹರೇರ್ಲೋಕೇ ಪತ್ಯಾ ಶ್ರೀರಿವ ಮೋದತೇ ॥
ಅನುವಾದ
ಹೆಂಡತಿಯು ಲಕ್ಷ್ಮೀದೇವಿಯಂತೆ ಪತಿಪರಾಯಣೆಯಾಗಿ ತನ್ನ ಪತಿಯನ್ನು ಸಾಕ್ಷಾತ್ ಭಗವಂತನ ಸ್ವರೂಪವೆಂದು ತಿಳಿದು ಸೇವೆ ಮಾಡುವವಳ ಪತಿಯು ವೈಕುಂಠ ಲೋಕದಲ್ಲಿ ಭಗವತ್ಸ್ವರೂಪವನ್ನು ಪಡೆದುಕೊಳ್ಳುವನು. ಅವಳು ಲಕ್ಷ್ಮೀಯಂತೆ ಅವನೊಂದಿಗೆ ಆನಂದವಾಗಿರುವಳು.॥29॥
(ಶ್ಲೋಕ-30)
ಮೂಲಮ್
ವೃತ್ತಿಃ ಸಂಕರಜಾತೀನಾಂ ತತ್ತತ್ಕುಲಕೃತಾ ಭವೇತ್ ।
ಅಚೌರಾಣಾಮಪಾಪಾನಾಮಂತ್ಯಜಾಂತೇವಸಾಯಿನಾಮ್ ॥
ಅನುವಾದ
ಯುಧಿಷ್ಠಿರನೇ! ಕಳ್ಳತನವೇ ಮುಂತಾದ ಪಾಪಗಳನ್ನು ಆಚರಿಸದೇ ಇರುವ ಅಂತ್ಯಜ, ಚಾಂಡಲರೇ ಮುಂತಾದ ವರ್ಣಸಂಕರ ಜಾತಿಗಳಿಗೂ ಅವರವರ ವಂಶಪರಂಪರೆಯಿಂದ ಬಂದಿರುವ ವೃತ್ತಿಗಳೇ ಅವರ ಜೀವನೋಪಾಯಗಳು. ॥30॥
(ಶ್ಲೋಕ-31)
ಮೂಲಮ್
ಪ್ರಾಯಃ ಸ್ವಭಾವವಿಹಿತೋ ನೃಣಾಂ ಧರ್ಮೋ ಯುಗೇ ಯುಗೇ ।
ವೇದದೃಗ್ಭಿಃ ಸ್ಮೃತೋ ರಾಜನ್ಪ್ರೇತ್ಯ ಚೇಹ ಚ ಶರ್ಮಕೃತ್ ॥
ಅನುವಾದ
ವೇದದರ್ಶಿ ಋಷಿ-ಮುನಿಗಳು ಸಾಮಾನ್ಯವಾಗಿ ಯುಗ-ಯುಗಗಳಲ್ಲಿ ಮನುಷ್ಯರ ಸ್ವಭಾವಕ್ಕನು ಸಾರ ಧರ್ಮದ ವ್ಯವಸ್ಥೆ ಮಾಡಿರುವರು. ಆ ಧರ್ಮವೇ ಅವರಿಗೆ ಇಹ-ಪರಲೋಕಗಳಲ್ಲಿ ಕಲ್ಯಾಣಕಾರಿಯಾಗಿದೆ. ॥31॥
(ಶ್ಲೋಕ-32)
ಮೂಲಮ್
ವೃತ್ತ್ಯಾ ಸ್ವಭಾವಕೃತಯಾ ವರ್ತಮಾನಃ ಸ್ವಕರ್ಮಕೃತ್ ।
ಹಿತ್ವಾ ಸ್ವಭಾವಜಂ ಕರ್ಮ ಶನೈರ್ನಿರ್ಗುಣತಾಮಿಯಾತ್ ॥
ಅನುವಾದ
ಸ್ವಾಭಾವಿಕ ವೃತ್ತಿಯನ್ನು ಆಶ್ರಯಿಸಿ ತಮ್ಮ ಸ್ವಧರ್ಮವನ್ನು ಪಾಲಿಸುವವರು ನಿಧಾನವಾಗಿ ಆ ಸ್ವಾಭಾವಿಕ ಕರ್ಮಗಳಿಂದಲೂ ಮೀರಿದವರಾಗಿ ತ್ರಿಗುಣಾ ತೀತರೇ ಆಗುವರು. ॥32॥
(ಶ್ಲೋಕ-33)
ಮೂಲಮ್
ಉಪ್ಯಮಾನಂ ಮುಹುಃ ಕ್ಷೇತ್ರಂಸ್ವಯಂ ನಿರ್ವೀರ್ಯತಾಮಿಯಾತ್ ।
ನ ಕಲ್ಪತೇ ಪುನಃ ಸೂತ್ಯೈಉಪ್ತಂ ಬೀಜಂ ಚ ನಶ್ಯತಿ ॥
(ಶ್ಲೋಕ-34)
ಮೂಲಮ್
ಏವಂ ಕಾಮಾಶಯಂ ಚಿತ್ತಂ ಕಾಮಾನಾಮತಿಸೇವಯಾ ।
ವಿರಜ್ಯೇತ ಯಥಾ ರಾಜನ್ನಾಗ್ನಿವತ್ಕಾಮಬಿಂದುಭಿಃ ॥
ಅನುವಾದ
ಮಹಾರಾಜಾ! ಮತ್ತೆ-ಮತ್ತೆ ಉಳುವುದರಿಂದ ಹೊಲವು ಶಕ್ತಿಹೀನವಾಗಿ, ಅದರಲ್ಲಿ ಬಿತ್ತಿದ ಬೀಜವು ಮೊಳೆಯವುದೂ ನಿಂತುಹೋಗುತ್ತದೆ. ಹಾಗೆಯೇ ವಾಸನೆಗಳ ಭಂಡಾರವಾದ ಈ ಚಿತ್ತವು ವಿಷಯಗಳನ್ನು ಮಿತಿಮೀರಿ ಸೇವಿಸುವುದರಿಂದ ಆ ಬಗೆಗೆ ಬೇಸರ ಹೊಂದವುದು. ಆದರೆ ಸ್ವಲ್ಪ ಭೋಗಗಳಿಂದ ಹೀಗಾಗು ವುದಿಲ್ಲ. ಒಂದೇ-ಒಂದು ಬೊಟ್ಟು ತುಪ್ಪ ಹಾಕುವುದರಿಂದ ಬೆಂಕಿಯು ನಂದಿಹೋಗುವುದಿಲ್ಲ. ಆದರೆ ಒಮ್ಮೆಲೇ ಹೆಚ್ಚು ತುಪ್ಪ ಸುರಿದರೆ ಅದು ನಂದಿ ಹೋದೀತು. ॥33-34॥
(ಶ್ಲೋಕ-35)
ಮೂಲಮ್
ಯಸ್ಯ ಯಲ್ಲಕ್ಷಣಂ ಪ್ರೋಕ್ತಂ ಪುಂಸೋ ವರ್ಣಾಭಿವ್ಯಂಜಕಮ್ ।
ಯದನ್ಯತ್ರಾಪಿ ದೃಶ್ಯೇತ ತತ್ತೇನೈವ ವಿನಿರ್ದಿಶೇತ್ ॥
ಅನುವಾದ
ಮೇಲೆ ಹೇಳಲಾದ ಲಕ್ಷಣಗಳು ಎಲ್ಲಿ ಕಂಡು ಬಂದರೂ ಅವನನ್ನು ಆ ವರ್ಣದವನೆಂದು ತಿಳಿಯಬೇಕು. ॥35॥
ಅನುವಾದ (ಸಮಾಪ್ತಿಃ)
ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಯುಧಿಷ್ಠಿರ-ನಾರದಸಂವಾದೇ ಸದಾಚಾರನಿರ್ಣಯೋ ನಾಮೈಕಾದಶೋಽಧ್ಯಾಯಃ ॥11॥