[ಹತ್ತನೆಯ ಅಧ್ಯಾಯ]
ಭಾಗಸೂಚನಾ
ಪ್ರಹ್ಲಾದನ ರಾಜ್ಯಾಭಿಷೇಕ ಮತ್ತು ತ್ರಿಪುರ ದಹನದ ಕಥೆ
(ಶ್ಲೋಕ-1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಭಕ್ತಿಯೋಗಸ್ಯ ತತ್ಸರ್ವಮಂತರಾಯತಯಾರ್ಭಕಃ ।
ಮನ್ಯಮಾನೋ ಹೃಷೀಕೇಶಂ ಸ್ಮಯಮಾನ ಉವಾಚ ಹ ॥
ಅನುವಾದ
ನಾರದರು ಹೇಳುತ್ತಾರೆ — ಯುಧಿಷ್ಠಿರನೇ! ಪ್ರಹ್ಲಾದನು ಬಾಲಕನಾಗಿದ್ದರೂ ವರವನ್ನು ಬೇಡುವುದು ಪ್ರೇಮಾ-ಭಕ್ತಿ ಯಲ್ಲಿ ವಿಘ್ನವಾಗಿದೆ ಎಂದು ತಿಳಿದಿದ್ದನು. ಅದಕ್ಕಾಗಿ ಅವನು ನಸು ನಗುತ್ತಾ ಶ್ರೀಭಗವಂತನಲ್ಲಿ ಹೀಗೆ ವಿಜ್ಞಾಪಿಸಿ ಕೊಂಡನು. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಪ್ರಹ್ಲಾದ ಉವಾಚ
ಮೂಲಮ್
ಮಾ ಮಾಂ ಪ್ರಲೋಭಯೋತ್ಪತ್ತ್ಯಾಸಕ್ತಂ ಕಾಮೇಷು ತೈರ್ವರೈಃ ।
ತತ್ಸಂಗಭೀತೋ ನಿರ್ವಿಣ್ಣೋ ಮುಮುಕ್ಷುಸ್ತ್ವಾಮುಪಾಶ್ರಿತಃ ॥
ಅನುವಾದ
ಪ್ರಹ್ಲಾದನು ಹೇಳಿದನು — ಪ್ರಭೋ! ಈಗಾಗಲೇ ಕಾಮ ಭೋಗಗಳಲ್ಲಿ ಆಸಕ್ತನಾಗಿರುವ ನನಗೆ ಈ ವರಗಳ ಮೂಲಕ ಇನ್ನೂ ಆಸೆ ಹುಟ್ಟಿಸಬೇಡ. ನಾನು ಆ ಸಂಗಕ್ಕೆ ಹೆದರಿ, ಅವುಗಳಿಂದಾಗುವ ತೀವ್ರವೇದನೆಯನ್ನು ಅನುಭವಿಸಿ, ಅವುಗಳಿಂದ ಬಿಡುಗಡೆ ಹೊಂದುವ ಆಸೆಯಿಂದ ನಿನ್ನಲ್ಲಿ ಶರಣಾಗಿದ್ದೇನೆ. ॥2॥
(ಶ್ಲೋಕ-3)
ಮೂಲಮ್
ಭೃತ್ಯಲಕ್ಷಣಜಿಜ್ಞಾಸುರ್ಭಕ್ತಂ ಕಾಮೇಷ್ವಚೋದಯತ್ ।
ಭವಾನ್ ಸಂಸಾರಬೀಜೇಷು ಹೃದಯಗ್ರಂಥಿಷು ಪ್ರಭೋ ॥
ಅನುವಾದ
ಭಗವಂತಾ! ನನ್ನಲ್ಲಿ ಭಕ್ತಿಯ ಲಕ್ಷಣಗಳು ಇವೆಯೋ, ಇಲ್ಲವೋ ಎಂದು ತಿಳಿಯಲಿಕ್ಕಾಗಿ ನೀನು ನಿನ್ನ ಭಕ್ತನಿಗೆ ವರವನ್ನು ಕೇಳಲು ಪ್ರೇರೇಪಿಸಿದೆ. ಈ ವಿಷಯ ಭೋಗಗಳು ಹೃದಯದ ಗಂಟನ್ನು ಇನ್ನೂ ಬಲಪಡಿಸುವುವು ಹಾಗೂ ಮತ್ತೆ-ಮತ್ತೆ ಜನ್ಮ-ಮೃತ್ಯುವಿನ ಚಕ್ರದಲ್ಲಿ ಬೀಳಿಸುವಂತಹುದು. ॥3॥
(ಶ್ಲೋಕ-4)
ಮೂಲಮ್
ನಾನ್ಯಥಾ ತೇಖಿಲಗುರೋ ಘಟೇತ ಕರುಣಾತ್ಮನಃ ।
ಯಸ್ತ ಆಶಿಷ ಆಶಾಸ್ತೇ ನ ಸ ಭೃತ್ಯಃ ಸ ವೈ ವಣಿಕ್ ॥
ಅನುವಾದ
ಜಗದ್ಗುರುವೇ! ನೀನು ವರವನ್ನು ಬೇಡಿಕೋ ಎಂದು ಹೇಳಿರುವುದು ನನ್ನನ್ನು ಪರೀಕ್ಷಿಸುವುದಲ್ಲದೆ ಬೇರೆ ಯಾವ ಕಾರಣವೂ ಇರಲಾರದು. ಏಕೆಂದರೆ ನೀನು ಪರಮ ದಯಾಳುವಾಗಿರುವೆ. (ತನ್ನ ಭಕ್ತರನ್ನು ಭೋಗಗಳಲ್ಲಿ ಸಿಕ್ಕಿಸುವಂತಹ ವರವನ್ನು ನೀನು ಹೇಗೆ ಕೊಡಬಲ್ಲೆ?) ತನ್ನ ಕಾಮನೆಗಳನ್ನು ನಿನ್ನಿಂದ ಪೂರ್ಣಗೊಳಿಸಿಕೊಳ್ಳುವವನು ಸೇವಕನೇ ಅಲ್ಲ. ಅವನಾದರೋ ಕೊಟ್ಟು-ಕೊಳ್ಳುವ ವ್ಯಾಪಾರಿಯೇ ಸರಿ. ॥4॥
(ಶ್ಲೋಕ-5)
ಮೂಲಮ್
ಆಶಾಸಾನೋ ನ ವೈ ಭೃತ್ಯಃ ಸ್ವಾಮಿನ್ಯಾಶಿಷ ಆತ್ಮನಃ ।
ನ ಸ್ವಾಮೀ ಭೃತ್ಯತಃ ಸ್ವಾಮ್ಯಮಿಚ್ಛನ್ಯೋ ರಾತಿ ಚಾಶಿಷಃ ॥
ಅನುವಾದ
ಒಡೆಯನಿಂದ ತನ್ನ ಕಾಮನೆಗಳನ್ನು ನೆರವೇರುವಂತೆ ಬಯಸುವವನು ಸೇವಕನೇ ಅಲ್ಲ ಮತ್ತು ಸೇವಕನಿಂದ ಸೇವೆ ಮಾಡಿಸಿಕೊಳ್ಳಲು ಒಡೆಯನಾದವನು ಅವನ ಕಾಮನೆಗಳನ್ನು ಪೂರ್ಣಗೊಳಿಸುವವನು ಸ್ವಾಮಿಯೂ ಅಲ್ಲ. ॥5॥
(ಶ್ಲೋಕ-6)
ಮೂಲಮ್
ಅಹಂ ತ್ವಕಾಮಸ್ತ್ವದ್ಭಕ್ತಸ್ತ್ವಂ ಚ ಸ್ವಾಮ್ಯನಪಾಶ್ರಯಃ ।
ನಾನ್ಯಥೇಹಾವಯೋರರ್ಥೋ ರಾಜಸೇವಕಯೋರಿವ ॥
ಅನುವಾದ
ನಾನು ನಿನ್ನ ನಿಷ್ಕಾಮ ಸೇವಕನಾಗಿದ್ದೇನೆ. ನೀನು ನನ್ನ ನಿರಪೇಕ್ಷ ಸ್ವಾಮಿಯಾಗಿರುವೆ. ರಾಜ ಮತ್ತು ಅವನ ಸೇವಕರ ಪ್ರಯೋಜನಕ್ಕಾಗಿ ಸ್ವಾಮಿ. ಸೇವಕ ಸಂಬಂಧವಿರುವಂತೆ ನನ್ನ ಮತ್ತು ನಿನ್ನ ಸಂಬಂಧ ಅಲ್ಲವೇ ಅಲ್ಲ. ॥6॥
(ಶ್ಲೋಕ-7)
ಮೂಲಮ್
ಯದಿ ರಾಸೀಶ ಮೇ ಕಾಮಾನ್ವರಾಂಸ್ತ್ವಂ ವರದರ್ಷಭ ।
ಕಾಮಾನಾಂ ಹೃದ್ಯಸಂರೋಹಂ ಭವತಸ್ತು ವೃಣೇ ವರಮ್ ॥
ಅನುವಾದ
ವರದಾನಿಗಳಲ್ಲಿ ಶಿರೋ ಮಣಿಯಾದ ಸ್ವಾಮಿಯೇ! ನೀನು ನನಗೆ ಇಚ್ಛಿತ ವರವನ್ನು ಕೊಡಲು ಬಯಸುವೆಯಾದರೆ ‘ನನ್ನ ಹೃದಯದಲ್ಲಿ ಯಾವುದೇ ಕಾಮನೆಯ ಬೀಜವೂ ಮೊಳೆಯದೆ ಹೋಗಲಿ’ ಎಂಬ ವರವನ್ನು ಕರುಣಿಸು. ॥7॥
(ಶ್ಲೋಕ-8)
ಮೂಲಮ್
ಇಂದ್ರಿಯಾಣಿ ಮನಃ ಪ್ರಾಣ ಆತ್ಮಾ ಧರ್ಮೋ ಧೃತಿರ್ಮತಿಃ ।
ಹ್ರೀಃ ಶ್ರೀಸ್ತೇಜಃ ಸ್ಮೃತಿಃ ಸತ್ಯಂ ಯಸ್ಯ ನಶ್ಯಂತಿ ಜನ್ಮನಾ ॥
ಅನುವಾದ
ಹೃದಯದಲ್ಲಿ ಯಾವುದೇ ಕಾಮನೆಯ ಉದಯವಾಗುತ್ತಲೇ ಇಂದ್ರಿಯಗಳು, ಮನಸ್ಸು, ಪ್ರಾಣ, ದೇಹ, ಧರ್ಮ, ಧೈರ್ಯ, ಬುದ್ಧಿ, ಲಜ್ಜೆ, ಶ್ರೀ, ತೇಜ, ಸ್ಮೃತಿ ಮತ್ತು ಸತ್ಯ ಇವೆಲ್ಲವೂ ನಾಶವಾಗಿ ಹೋಗುತ್ತವೆ. ॥8॥
(ಶ್ಲೋಕ-9)
ಮೂಲಮ್
ವಿಮುಂಚತಿ ಯದಾ ಕಾಮಾನ್ಮಾನವೋ ಮನಸಿ ಸ್ಥಿತಾನ್ ।
ತರ್ಹ್ಯೇವ ಪುಂಡರೀಕಾಕ್ಷ ಭಗವತ್ತ್ವಾಯ ಕಲ್ಪತೇ ॥
ಅನುವಾದ
ಪುಂಡರೀ ಕಾಕ್ಷನೇ! ಮನುಷ್ಯನು ತನ್ನ ಮನಸ್ಸಿನಲ್ಲಿರುವ ಕಾಮನೆಗಳನ್ನು ಪರಿತ್ಯಾಗಮಾಡಿದಾಗಲೇ ಅವನು ಭಗವತ್ಸ್ವರೂಪ ವನ್ನು ಪಡೆದುಕೊಳ್ಳುವನು. ॥9॥
(ಶ್ಲೋಕ-10)
ಮೂಲಮ್
ನಮೋ ಭಗವತೇ ತುಭ್ಯಂ ಪುರುಷಾಯ ಮಹಾತ್ಮನೇ ।
ಹರಯೇದ್ಭುತಸಿಂಹಾಯ ಬ್ರಹ್ಮಣೇ ಪರಮಾತ್ಮನೇ ॥
ಅನುವಾದ
ಭಗವಂತಾ! ನಿನಗೆ ನಮಸ್ಕಾರವು. ನೀನು ಎಲ್ಲರ ಹೃದಯದಲ್ಲಿ ಬೆಳಗುವವನೂ, ಉದಾರ ಶಿರೋಮಣಿಯೂ, ಸ್ವಯಂ ಪರಬ್ರಹ್ಮ ಪರಮಾತ್ಮನೂ ಆಗಿರುವೆ. ಅದ್ಭುತ ನರಸಿಂಹ ರೂಪವನ್ನು ಧರಿಸಿರುವ ಶ್ರೀಹರಿಯ ಚರಣಗಳಲ್ಲಿ ನಾನು ಮತ್ತೆ-ಮತ್ತೆ ನಮಸ್ಕರಿಸುತ್ತಿದ್ದೇನೆ. ॥10॥
(ಶ್ಲೋಕ-11)
ಮೂಲಮ್ (ವಾಚನಮ್)
ನೃಸಿಂಹ ಉವಾಚ
ಮೂಲಮ್
ನೈಕಾಂತಿನೋ ಮೇ ಮಯಿ ಜಾತ್ವಿಹಾಶಿಷ
ಆಶಾಸತೇಮುತ್ರ ಚ ಯೇ ಭವದ್ವಿಧಾಃ ।
ಅಥಾಪಿ ಮನ್ವಂತರಮೇತದತ್ರ
ದೈತ್ಯೇಶ್ವರಾಣಾಮನುಭುಂಕ್ಷ್ವ ಭೋಗಾನ್ ॥
ಅನುವಾದ
ಭಗವಾನ್ ನರಸಿಂಹನು ಹೇಳಿದನು — ನಿನ್ನಂತಹ ನನ್ನ ಏಕಾಂತಭಕ್ತರು ಈ ಲೋಕ ಅಥವಾ ಪರಲೋಕದ ಯಾವುದೇ ವಸ್ತುವಿಗಾಗಿ ಎಂದಿಗೂ ಯಾವುದೇ ಕಾಮನೆ ಮಾಡುವುದಿಲ್ಲ. ಹೀಗಿದ್ದರೂ ಹೆಚ್ಚಲ್ಲ, ಕೇವಲ ಒಂದು ಮನ್ವಂತರದವರೆಗೆ ನನ್ನ ಸಂತೋಷಕ್ಕಾಗಿ ನೀನು ಈ ಲೋಕದಲ್ಲಿ ದೈತ್ಯಾಧಿಪತಿಗಳ ಸಮಸ್ತ ಭೋಗಗಳನ್ನು ಸ್ವೀಕರಿಸು. ॥11॥
(ಶ್ಲೋಕ-12)
ಮೂಲಮ್
ಕಥಾ ಮದೀಯಾ ಜುಷಮಾಣಃ ಪ್ರಿಯಾಸ್ತ್ವ-
ಮಾವೇಶ್ಯ ಮಾಮಾತ್ಮನಿ ಸಂತಮೇಕಮ್ ।
ಸರ್ವೇಷು ಭೂತೇಷ್ವಧಿಯಜ್ಞಮೀಶಂ
ಯಜಸ್ವ ಯೋಗೇನ ಚ ಕರ್ಮ ಹಿನ್ವನ್ ॥
ಅನುವಾದ
ಸಮಸ್ತ ಪ್ರಾಣಿಗಳ ಹೃದಯದಲ್ಲಿ ಯಜ್ಞಗಳ ಭೋಕ್ತಾ ಈಶ್ವರರೂಪದಲ್ಲಿ ನಾನೇ ವಿರಾಜಮಾನನಾಗಿದ್ದೇನೆ. ನೀನು ನಿನ್ನ ಹೃದಯದಲ್ಲಿ ನನ್ನನ್ನು ನೋಡುತ್ತಾ, ನಿನಗೆ ಪ್ರಿಯ ವಾದ ನನ್ನ ಲೀಲಾ-ಕಥೆಗಳನ್ನು ಕೇಳುತ್ತಾ ಇರು. ಸಮಸ್ತ ಕರ್ಮಗಳ ಮೂಲಕ ನನ್ನನ್ನೇ ಆರಾಧಿಸುತ್ತಾ, ಹೀಗೆ ನಿನ್ನ ಪ್ರಾರಬ್ಧ ಕರ್ಮವನ್ನು ಕಳೆದುಕೋ. ॥12॥
(ಶ್ಲೋಕ-13)
ಮೂಲಮ್
ಭೋಗೇನ ಪುಣ್ಯಂ ಕುಶಲೇನ ಪಾಪಂ
ಕಲೇವರಂ ಕಾಲಜವೇನ ಹಿತ್ವಾ ।
ಕೀರ್ತಿಂ ವಿಶುದ್ಧಾಂ ಸುರಲೋಕಗೀತಾಂ
ವಿತಾಯ ಮಾಮೇಷ್ಯಸಿ ಮುಕ್ತಬಂಧಃ ॥
ಅನುವಾದ
ಭೋಗದ ಮೂಲಕ ಪುಣ್ಯ ಕರ್ಮಗಳ ಫಲವನ್ನೂ, ನಿಷ್ಕಾಮಕರ್ಮಗಳ ಮೂಲಕ ಪಾಪವನ್ನೂ ನಾಶಮಾಡುತ್ತಾ, ಸಮಯಬಂದಾಗ ಶರೀರವನ್ನು ತ್ಯಜಿಸಿ ಸಮಸ್ತ ಬಂಧನಗಳಿಂದ ಮುಕ್ತನಾಗಿ ನೀನು ನನ್ನ ಬಳಿಗೆ ಬರುವಿಯಂತೆ. ವತ್ಸ! ಭಾಗವತೋತ್ತಮ ನಾದ ನಿನ್ನ ಪರಿಶುದ್ಧ ಕೀರ್ತಿಯನ್ನು ದೇವಲೋಕದಲ್ಲಿಯೂ ಗಾನಮಾಡುವರು. ॥13॥
(ಶ್ಲೋಕ-14)
ಮೂಲಮ್
ಯ ಏತತ್ಕೀರ್ತಯೇನ್ಮಹ್ಯಂ ತ್ವಯಾ ಗೀತಮಿದಂ ನರಃ ।
ತ್ವಾಂ ಚ ಮಾಂ ಚ ಸ್ಮರನ್ಕಾಲೇ ಕರ್ಮಬಂಧಾತ್ಪ್ರಮುಚ್ಯತೇ ॥
ಅನುವಾದ
ನೀನು ಮಾಡಿದ ನನ್ನ ಈ ಸ್ತುತಿಯನ್ನು ಯಾವ ಮನುಷ್ಯನು ಕೀರ್ತಿಸುವನೋ, ಜೊತೆಗೆ ನನ್ನನ್ನು ಮತ್ತು ನಿನ್ನನ್ನು ಸ್ಮರಿಸುವನೋ ಅವನು ಸಮಯಬಂದಾಗ ಕರ್ಮಗಳ ಬಂಧನದಿಂದ ಮುಕ್ತನಾಗಿ ಹೋಗುವನು. ॥14॥
(ಶ್ಲೋಕ-15)
ಮೂಲಮ್ (ವಾಚನಮ್)
ಪ್ರಹ್ಲಾದ ಉವಾಚ
ಮೂಲಮ್
ವರಂ ವರಯ ಏತತ್ತೇ ವರದೇಶಾನ್ಮಹೇಶ್ವರ ।
ಯದನಿಂದತ್ಪಿತಾ ಮೇ ತ್ವಾಮವಿದ್ವಾಂಸ್ತೇಜ ಐಶ್ವರಮ್ ॥
(ಶ್ಲೋಕ-16)
ಮೂಲಮ್
ವಿದ್ಧಾಮರ್ಷಾಶಯಃ ಸಾಕ್ಷಾತ್ಸರ್ವಲೋಕಗುರುಂ ಪ್ರಭುಮ್ ।
ಭ್ರಾತೃಹೇತಿ ಮೃಷಾದೃಷ್ಟಿಸ್ತ್ವದ್ಭಕ್ತೇ ಮಯಿ ಚಾಘವಾನ್ ॥
ಅನುವಾದ
ಪ್ರಹ್ಲಾದನು ಹೇಳಿದನು — ಮಹೇಶ್ವರನೇ! ನೀನು ವರ ಕೊಡುವವರ ಸ್ವಾಮಿಯಾಗಿರುವೆ. ನಿನ್ನಲ್ಲಿ ನಾನು ಇನ್ನೊಂದು ವರವನ್ನು ಬೇಡುವೆನು. ನನ್ನ ತಂದೆಯು ನಿನ್ನ ಈಶ್ವರೀಯ ತೇಜವನ್ನು ಮತ್ತು ಸರ್ವಶಕ್ತಿವಂತನಾದ ಚರಾಚರಗುರು ವಾದ ಸ್ವಯಂ ನಿನ್ನನ್ನು ತಿಳಿಯದೆ ತುಂಬಾ ನಿಂದಿಸಿದನು. ‘ಈ ವಿಷ್ಣುವು ನನ್ನ ತಮ್ಮನನ್ನು ಕೊಂದು ಹಾಕಿದನು’ ಎಂಬ ಮಿಥ್ಯಾದೃಷ್ಟಿಯು ಇದ್ದ ಕಾರಣ ತಂದೆಯು ಕ್ರೋಧದ ವೇಗವನ್ನು ಸಹಿಸುವುದರಲ್ಲಿ ಅಸಮರ್ಥನಾಗಿದ್ದನು. ಇದರಿಂದ ಅವನು ನಿನ್ನ ಭಕ್ತನಾದ ಕಾರಣ ನನ್ನಲ್ಲಿ ದ್ರೋಹ ಮಾಡಿದನು. ॥15-16॥
(ಶ್ಲೋಕ-17)
ಮೂಲಮ್
ತಸ್ಮಾತ್ಪಿತಾ ಮೇ ಪೂಯೇತ ದುರಂತಾದ್ದುಸ್ತರಾದಘಾತ್ ।
ಪೂತಸ್ತೇಪಾಂಗಸಂದೃಷ್ಟಸ್ತದಾ ಕೃಪಣವತ್ಸಲ ॥
ಅನುವಾದ
ದೀನಬಂಧುವೇ! ನಿನ್ನ ದೃಷ್ಟಿಯು ಬೀಳುತ್ತಲೇ ಅವನು ಪವಿತ್ರನಾಗಿದ್ದರೂ ಬೇಗನೇ ನಾಶವಾಗದಿರುವ ಆ ದುಸ್ತರ ದೋಷದಿಂದ ನನ್ನ ತಂದೆಯು ಶುದ್ಧವಾಗಲೀ ಎಂದು ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ. ॥17॥
(ಶ್ಲೋಕ-18)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ತ್ರಿಃಸಪ್ತಭಿಃ ಪಿತಾ ಪೂತಃ ಪಿತೃಭಿಃ ಸಹ ತೇನಘ ।
ಯತ್ಸಾಧೋಸ್ಯ ಗೃಹೇ ಜಾತೋ ಭವಾನ್ವೈ ಕುಲಪಾವನಃ ॥
ಅನುವಾದ
ನರಸಿಂಹ ಭಗವಂತನು ಹೇಳಿದನು — ಪುಣ್ಯಾತ್ಮನಾದ ಪ್ರಹ್ಲಾದನೇ! ನಿನ್ನ ತಂದೆಯು ಸ್ವಯಂ ಪವಿತ್ರನಾಗಿ ಉದ್ಧಾರವಾದನು, ಇದರಲ್ಲಿ ಹೇಳುವುದೇನಿದೆ? ಅವನ ಇಪ್ಪತ್ತೊಂದು ತಲೆಮಾರಿನ ಪಿತೃಗಳೂ ಇರುತ್ತಿದ್ದರೆ ಇವನೊಂದಿಗೆ ಅವರೂ ಉದ್ಧಾರವಾಗುತ್ತಿದ್ದರು. ಏಕೆಂದರೆ, ಕುಲವನ್ನು ಪವಿತ್ರಗೊಳಿಸುವ ನಿನ್ನಂತಹ ಪುತ್ರನನ್ನು ಅವನು ಪಡೆದಿದ್ದನು. ॥18॥
(ಶ್ಲೋಕ-19)
ಮೂಲಮ್
ಯತ್ರ ಯತ್ರ ಚ ಮದ್ಭಕ್ತಾಃ ಪ್ರಶಾಂತಾಃ ಸಮದರ್ಶಿನಃ ।
ಸಾಧವಃ ಸಮುದಾಚಾರಾಸ್ತೇ ಪೂಯಂತ್ಯಪಿ ಕೀಕಟಾಃ ॥
ಅನುವಾದ
ಪ್ರಶಾಂತರೂ, ಸಮದರ್ಶಿಗಳೂ, ಸುಖವಾಗಿ ಸದಾಚಾರವನ್ನು ಪಾಲಿಸುವವರೂ ನನ್ನ ಪ್ರೇಮೀ ಭಕ್ತರು ಎಲ್ಲೆಲ್ಲಿ ವಾಸಿಸುತ್ತಾರೋ, ಆ ಸ್ಥಾನವು ಕೀಕಟವೇ ಆಗಿದ್ದರೂ ಪವಿತ್ರವಾಗಿ ಹೋಗುತ್ತದೆ. ॥19॥
(ಶ್ಲೋಕ-20)
ಮೂಲಮ್
ಸರ್ವಾತ್ಮನಾ ನ ಹಿಂಸಂತಿ ಭೂತಗ್ರಾಮೇಷು ಕಿಂಚನ ।
ಉಚ್ಚಾವಚೇಷು ದೈತ್ಯೇಂದ್ರ ಮದ್ಭಾವೇನ ಗತಸ್ಪೃಹಾಃ ॥
ಅನುವಾದ
ದೈತ್ಯರಾಜನೇ! ನನ್ನ ಭಕ್ತಿಭಾವದಿಂದ ಕಾಮನೆಗಳು ನಾಶವಾದವರು ಸರ್ವತ್ರ ಆತ್ಮಭಾವ ಉಂಟಾದ ಕಾರಣ ಸಣ್ಣ-ದೊಡ್ಡ ಯಾವುದೇ ಪ್ರಾಣಿಗೆ ಯಾವ ವಿಧದಿಂದಲೂ ಕಷ್ಟಕೊಡುವುದಿಲ್ಲ. ॥20॥
(ಶ್ಲೋಕ-21)
ಮೂಲಮ್
ಭವಂತಿ ಪುರುಷಾ ಲೋಕೇ ಮದ್ಭಕ್ತಾಸ್ತ್ವಾ ಮನುವ್ರತಾಃ ।
ಭವಾನ್ಮೇ ಖಲು ಭಕ್ತಾನಾಂ ಸರ್ವೇಷಾಂ ಪ್ರತಿರೂಪಧೃಕ್ ॥
ಅನುವಾದ
ಪ್ರಪಂಚದಲ್ಲಿ ನಿನ್ನ ಅನುಯಾಯಿ ಆಗುವವರೂ ಕೂಡ ನನ್ನ ಭಕ್ತರಾಗಿ ಹೋಗುವರು. ಮಗು! ನೀನು ನನ್ನ ಎಲ್ಲ ಭಕ್ತರಲ್ಲಿ ಆದರ್ಶನಾಗಿರುವೆ. ॥21॥
(ಶ್ಲೋಕ-22)
ಮೂಲಮ್
ಕುರು ತ್ವಂ ಪ್ರೇತಕಾರ್ಯಾಣಿ ಪಿತುಃ ಪೂತಸ್ಯ ಸರ್ವಶಃ ।
ಮದಂಗಸ್ಪರ್ಶನೇನಾಂಗ ಲೋಕಾನ್ಯಾಸ್ಯತಿ ಸುಪ್ರಜಾಃ ॥
ಅನುವಾದ
ನನ್ನ ಅಂಗಸ್ಪರ್ಶದಿಂದ ನಿನ್ನ ತಂದೆಯು ಪೂರ್ಣವಾಗಿ ಪವಿತ್ರವಾಗಿ ಹೋಗಿದ್ದರೂ ನೀನು ಅವನ ಅಂತ್ಯೇಷ್ಟಿ ಕರ್ಮಗಳನ್ನು ಮಾಡು. ನಿನ್ನಂತಹ ಸಂತಾನದಿಂದಾಗಿ ಅವನಿಗೆ ಉತ್ತಮ ಲೋಕಗಳೇ ದೊರೆಯುವುವು. ॥22॥
(ಶ್ಲೋಕ-23)
ಮೂಲಮ್
ಪಿತ್ರ್ಯಂ ಚ ಸ್ಥಾನಮಾತಿಷ್ಠ ಯಥೋಕ್ತಂ ಬ್ರಹ್ಮವಾದಿಭಿಃ ।
ಮಯ್ಯಾವೇಶ್ಯ ಮನಸ್ತಾತ ಕುರು ಕರ್ಮಾಣಿ ಮತ್ಪರಃ ॥
ಅನುವಾದ
ವತ್ಸ! ನೀನು ನಿನ್ನ ತಂದೆಯ ಸ್ಥಾನದಲ್ಲಿ ಪಟ್ಟಾಭಿಷಿಕ್ತನಾಗು. ವೇದವಾದಿಗಳಾದ ಮುನಿಗಳ ಆಜ್ಞೆಯಂತೆ ನನ್ನಲ್ಲಿ ನಿನ್ನ ಮನಸ್ಸನ್ನಿರಿಸಿ, ನನ್ನಲ್ಲಿ ಶರಣಾಗಿ, ನನ್ನ ಸೇವೆಗಾಗಿಯೇ ನಿನ್ನ ಎಲ್ಲ ಕಾರ್ಯವನ್ನು ಮಾಡುತ್ತಿರು. ॥23॥
(ಶ್ಲೋಕ-24)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಪ್ರಹ್ಲಾದೋಪಿ ತಥಾ ಚಕ್ರೇ ಪಿತುರ್ಯತ್ಸಾಂಪರಾಯಿಕಮ್ ।
ಯಥಾಹ ಭಗವಾನ್ರಾಜನ್ನಭಿಷಿಕ್ತೋ ದ್ವಿಜೋತ್ತಮೈಃ ॥
ಅನುವಾದ
ನಾರದರು ಹೇಳಿದರು — ಯುಧಿಷ್ಠಿರನೇ! ಭಗವಂತನ ಆಜ್ಞೆಯಂತೆ ಪ್ರಹ್ಲಾದನು ತನ್ನ ತಂದೆಯ ಅಂತ್ಯೇಷ್ಟಿ ಕ್ರಿಯೆಗಳನ್ನು ಮಾಡಿದನು. ಇದಾದ ಬಳಿಕ ಶ್ರೇಷ್ಠಬ್ರಾಹ್ಮಣರು ಅವನಿಗೆ ರಾಜ್ಯಾಭಿಷೇಕವನ್ನು ಮಾಡಿದರು. ॥24॥
(ಶ್ಲೋಕ-25)
ಮೂಲಮ್
ಪ್ರಸಾದಸುಮುಖಂ ದೃಷ್ಟ್ವಾ ಬ್ರಹ್ಮಾ ನರಹರಿಂ ಹರಿಮ್ ।
ಸ್ತುತ್ವಾ ವಾಗ್ಭಿಃ ಪವಿತ್ರಾಭಿಃ ಪ್ರಾಹ ದೇವಾದಿಭಿರ್ವೃತಃ ॥
ಅನುವಾದ
ಇದೇ ಸಮಯದಲ್ಲಿ ದೇವತೆಗಳು, ಋಷಿಗಳು ಮುಂತಾದವರೊಂದಿಗೆ ಬ್ರಹ್ಮದೇವರು ನರಸಿಂಹ ಭಗವಂತನ ಪ್ರಸನ್ನ ವದನವನ್ನು ಕಂಡು ಪವಿತ್ರವಚನಗಳಿಂದ ಅವನನ್ನು ಸ್ತುತಿಸಿ, ಅವನಲ್ಲಿ ಇಂತೆಂದರು. ॥25॥
(ಶ್ಲೋಕ-26)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ದೇವ ದೇವಾಖಿಲಾಧ್ಯಕ್ಷ ಭೂತಭಾವನ ಪೂರ್ವಜ ।
ದಿಷ್ಟ್ಯಾ ತೇ ನಿಹತಃ ಪಾಪೋ ಲೋಕಸಂತಾಪನೋಸುರಃ ॥
ಅನುವಾದ
ಬ್ರಹ್ಮದೇವರು ಹೇಳಿದರು — ದೇವತೆಗಳಿಗೂ ಆರಾಧ್ಯನಾದ ಭಗವಂತನೇ! ನೀನು ಸರ್ವಾಂತರ್ಯಾಮಿಯೂ, ಜೀವರಿಗೆ ಜೀವನದಾತೃವೂ, ನನಗೆ ಪಿತನೂ ಆಗಿರುವೆ. ಈ ಪಾಪೀ ದೈತ್ಯನು ಜನರನ್ನು ತುಂಬಾ ಸತಾಯಿಸುತ್ತಿದ್ದನು. ನೀನು ಇವನನ್ನು ಸಂಹಾರ ಮಾಡಿದುದು ದೊಡ್ಡ ಸೌಭಾಗ್ಯದ ಮಾತಾಗಿದೆ. ॥26॥
(ಶ್ಲೋಕ-27)
ಮೂಲಮ್
ಯೋಸೌ ಲಬ್ಧವರೋ ಮತ್ತೋ ನ ವಧ್ಯೋ ಮಮ ಸೃಷ್ಟಿಭಿಃ ।
ತಪೋಯೋಗಬಲೋನ್ನದ್ಧಃ ಸಮಸ್ತನಿಗಮಾನಹನ್ ॥
ಅನುವಾದ
‘ನನ್ನ ಸೃಷ್ಟಿಯ ಯಾವುದೇ ಪ್ರಾಣಿಯು ನಿನ್ನನ್ನು ವಧಿಸಲಾರದು’ ಎಂಬ ವರವನ್ನು ನಾನು ಇವನಿಗೆ ಕೊಟ್ಟಿದ್ದೆ. ಇದರಿಂದ ಇವನು ಉನ್ಮತ್ತನಾಗಿದ್ದನು. ತಪಸ್ಸು, ಯೋಗ ಮತ್ತು ಬಲದಿಂದಾಗಿ ಉಚ್ಛಂಖಲನಾಗಿ ಇವನು ವೇದವಿಧಿಗಳನ್ನು ನಿರ್ಮೂಲನಗೊಳಿಸಿದ್ದನು. ॥27॥
(ಶ್ಲೋಕ-28)
ಮೂಲಮ್
ದಿಷ್ಟ್ಯಾಸ್ಯ ತನಯಃ ಸಾಧುರ್ಮಹಾಭಾಗವತೋರ್ಭಕಃ ।
ತ್ವಯಾ ವಿಮೋಚಿತೋ ಮೃತ್ಯೋರ್ದಿಷ್ಟ್ಯಾ ತ್ವಾಂ ಸಮಿತೋಧುನಾ ॥
ಅನುವಾದ
ಇವನ ಪುತ್ರನೂ ಪರಮಭಾಗವತನೂ, ಶುದ್ಧಹೃದಯನೂ ಆದ ಮಗು ಪ್ರಹ್ಲಾದನನ್ನು ನೀನು ಸಾವಿನ ದವಡೆಯಿಂದ ಬಿಡಿಸಿದುದು ದೊಡ್ಡ ಸೌಭಾಗ್ಯದ ಮಾತಾಗಿದೆ ಹಾಗೂ ಅವನು ಈಗ ನಿನ್ನಲ್ಲಿ ಶರಣುಹೊಂದಿರುವುದು ಕೂಡ ಅತ್ಯಂತ ಆನಂದದ ಮತ್ತು ಮಂಗಳಕರ ವಿಷಯವೇ ಆಗಿದೆ. ॥28॥
(ಶ್ಲೋಕ-29)
ಮೂಲಮ್
ಏತದ್ವಪುಸ್ತೇ ಭಗವನ್ಧ್ಯಾಯತಃ ಪ್ರಯತಾತ್ಮನಃ ।
ಸರ್ವತೋ ಗೋಪ್ತೃ ಸಂತ್ರಾಸಾನ್ಮೃತ್ಯೋರಪಿ ಜಿಘಾಂಸತಃ ॥
ಅನುವಾದ
ಭಗವಂತಾ! ನಿನ್ನ ಈ ನರಸಿಂಹರೂಪವನ್ನು ಏಕಾಗ್ರ ಮನಸ್ಸಿನಿಂದ ಧ್ಯಾನಿಸುವವನು ಎಲ್ಲ ಬಗೆಯ ಭಯದಿಂದ ರಕ್ಷಿತನಾಗುವನು. ಕೊಲ್ಲಲು ಬಂದಿರುವ ಮೃತ್ಯುವೂ ಕೂಡ ಅವನಿಗೆ ಯಾವ ಕೆಡುಕನ್ನು ಮಾಡಲಾರದು. ॥29॥
(ಶ್ಲೋಕ-30)
ಮೂಲಮ್ (ವಾಚನಮ್)
ನೃಸಿಂಹ ಉವಾಚ
ಮೂಲಮ್
ಮೈವಂ ವರೋಸುರಾಣಾಂ ತೇ ಪ್ರದೇಯಃ ಪದ್ಮಸಂಭವ ।
ವರಃ ಕ್ರೂರನಿಸರ್ಗಾಣಾಮಹೀನಾಮಮೃತಂ ಯಥಾ ॥
ಅನುವಾದ
ಶ್ರೀನರಸಿಂಹದೇವರು ಹೇಳಿದರು — ಚತುರ್ಮುಖ ಬ್ರಹ್ಮನೇ! ನೀನು ದೈತ್ಯರಿಗೆ ಇಂತಹ ವರವನ್ನು ಕೊಡಬೇಡ. ಸ್ವಭಾವದಿಂದಲೇ ಕ್ರೂರರಾದವರಿಗೆ ಕೊಟ್ಟ ವರವು ಹಾವಿಗೆ ಹಾಲೆರೆದಂತೆ ಆಗುವುದು. ॥30॥
(ಶ್ಲೋಕ-31)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಇತ್ಯುಕ್ತ್ವಾ ಭಗವಾನ್ರಾಜಂಸ್ತತ್ರೈವಾಂತರ್ದಧೇ ಹರಿಃ ।
ಅದೃಶ್ಯಃ ಸರ್ವಭೂತಾನಾಂ ಪೂಜಿತಃ ಪರಮೇಷ್ಠಿನಾ ॥
ಅನುವಾದ
ನಾರದರು ಹೇಳಿದರು — ಯುಧಿಷ್ಠಿರನೇ! ನರಸಿಂಹ ಭಗವಂತನು ಇಷ್ಟು ಹೇಳಿ, ಬ್ರಹ್ಮದೇವರಿಂದ ಪೂಜೆಗೊಂಡು ಯಾವ ಪ್ರಾಣಿಗಳಿಗೂ, ಕಾಣಿಸದಿರುವಂತೆ ಅಲ್ಲಿಯೇ ಅಂತ ರ್ಧಾನ ಹೊಂದಿದನು. ॥31॥
(ಶ್ಲೋಕ-32)
ಮೂಲಮ್
ತತಃ ಸಂಪೂಜ್ಯ ಶಿರಸಾ ವವಂದೇ ಪರಮೇಷ್ಠಿನಮ್ ।
ಭವಂ ಪ್ರಜಾಪತೀನ್ದೇವಾನ್ಪ್ರಹ್ಲಾದೋ ಭಗವತ್ಕಲಾಃ ॥
ಅನುವಾದ
ಇದಾದ ನಂತರ ಪ್ರಹ್ಲಾದನು ಭಗವತ್ಸ್ವರೂಪರಾದ ಬ್ರಹ್ಮಾ-ಶಂಕರ, ಪ್ರಜಾಪತಿಗಳು ಮತ್ತು ದೇವತೆಗಳು ಹೀಗೆ ಎಲ್ಲರ ಪೂಜೆಮಾಡಿ ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದನು. ॥32॥
(ಶ್ಲೋಕ-33)
ಮೂಲಮ್
ತತಃ ಕಾವ್ಯಾದಿಭಿಃ ಸಾರ್ಧಂ ಮುನಿಭಿಃ ಕಮಲಾಸನಃ ।
ದೈತ್ಯಾನಾಂ ದಾನವಾನಾಂ ಚ ಪ್ರಹ್ಲಾದಮಕರೋತ್ಪತಿಮ್ ॥
ಅನುವಾದ
ಆಗ ಶುಕ್ರಾಚಾರ್ಯರೇ ಮುಂತಾದ ಮುನಿಗಳೊಂದಿಗೆ ಬ್ರಹ್ಮದೇವರು ಪ್ರಹ್ಲಾದನನ್ನು ಸಮಸ್ತ ದಾನವರ ಮತ್ತು ದೈತ್ಯರ ಅಧಿಪತಿಯಾಗಿಸಿದರು. ॥33॥
(ಶ್ಲೋಕ-34)
ಮೂಲಮ್
ಪ್ರತಿನಂದ್ಯ ತತೋ ದೇವಾಃ ಪ್ರಯುಜ್ಯ ಪರಮಾಶಿಷಃ ।
ಸ್ವಧಾಮಾನಿ ಯಯೂ ರಾಜನ್ಬ್ರಹ್ಮಾದ್ಯಾಃ ಪ್ರತಿಪೂಜಿತಾಃ ॥
ಅನುವಾದ
ಅನಂತರ ಬ್ರಹ್ಮಾದಿ ದೇವತೆಗಳು ಪ್ರಹ್ಲಾದನನ್ನು ಅಭಿನಂದಿಸುತ್ತಾ, ಅವನಿಗೆ ಶುಭಾಶೀರ್ವಾದಗಳನ್ನು ಕೊಟ್ಟರು. ಪ್ರಹ್ಲಾದನಿಂದ ಎಲ್ಲರೂ ಯಥಾಯೋಗ್ಯ ಸತ್ಕಾರವನ್ನು ಸ್ವೀಕರಿಸಿ ತಮ್ಮ-ತಮ್ಮ ಲೋಕಗಳಿಗೆ ಹೊರಟು ಹೋದರು. ॥34॥
(ಶ್ಲೋಕ-35)
ಮೂಲಮ್
ಏವಂ ತೌ ಪಾರ್ಷದೌ ವಿಷ್ಣೋಃ ಪುತ್ರತ್ವಂ ಪ್ರಾಪಿತೌ ದಿತೇಃ ।
ಹೃದಿ ಸ್ಥಿತೇನ ಹರಿಣಾ ವೈರಭಾವೇನ ತೌ ಹತೌ ॥
ಅನುವಾದ
ಯುಧಿಷ್ಠಿರನೇ! ಹೀಗೆ ಭಗವಂತನ ಪಾರ್ಷದರಾದ ಜಯ-ವಿಜಯರಿಬ್ಬರೂ ದಿತಿಯಪುತ್ರರಾಗಿ ದೈತ್ಯರಾಗಿ ದ್ದರು. ಅವರು ಭಗವಂತನಲ್ಲಿ ವೈರಭಾವವನ್ನಿರಿಸಿದ್ದರು. ಅವರ ಹೃದಯದಲ್ಲಿ ನೆಲೆಸಿರುವ ಭಗವಂತನು ಅವರ ಉದ್ಧಾರ ಮಾಡಲಿಕ್ಕಾಗಿಯೇ ಅವರನ್ನು ಸಂಹರಿಸಿದ್ದನು. ॥35॥
(ಶ್ಲೋಕ-36)
ಮೂಲಮ್
ಪುನಶ್ಚ ವಿಪ್ರಶಾಪೇನ ರಾಕ್ಷಸೌ ತೌ ಬಭೂವತುಃ ।
ಕುಂಭಕರ್ಣದಶಗ್ರೀವೌ ಹತೌ ತೌ ರಾಮವಿಕ್ರಮೈಃ ॥
ಅನುವಾದ
ಋಷಿಗಳ ಶಾಪದಿಂದ ಅವರ ಮುಕ್ತಿಯು ಆಗದೆ ಅವರು ಮತ್ತೆ ಕುಂಭಕರ್ಣ ಮತ್ತು ರಾವಣರ ರೂಪದಲ್ಲಿ ರಾಕ್ಷಸರಾದರು. ಆ ಸಮಯದಲ್ಲಿ ಭಗವಾನ್ ಶ್ರೀರಾಮನು ಪರಾಕ್ರಮದಿಂದ ಅವರನ್ನು ಮುಗಿಸಿಬಿಟ್ಟನು. ॥36॥
(ಶ್ಲೋಕ-37)
ಮೂಲಮ್
ಶಯಾನೌ ಯುಧಿ ನಿರ್ಭಿನ್ನಹೃದಯೌ ರಾಮಸಾಯಕೈಃ ।
ತಚ್ಚಿತ್ತೌ ಜಹತುರ್ದೇಹಂ ಯಥಾ ಪ್ರಾಕ್ತನಜನ್ಮನಿ ॥
ಅನುವಾದ
ಯುದ್ಧದಲ್ಲಿ ಭಗವಾನ್ ರಾಮನ ಬಾಣಗಳಿಂದ ಅವರ ಹೃದಯವು ಒಡೆದುಹೋಯಿತು. ಅವರು ಹಿಂದಿನ ಜನ್ಮ ದಂತೆ ಭಗವಂತನನ್ನು ಸ್ಮರಿಸುತ್ತಾ ತಮ್ಮ ಶರೀರವನ್ನು ತ್ಯಜಿಸಿದರು. ॥37॥
(ಶ್ಲೋಕ-38)
ಮೂಲಮ್
ತಾವಿಹಾಥ ಪುನರ್ಜಾತೌ ಶಿಶುಪಾಲಕರೂಷಜೌ ।
ಹರೌ ವೈರಾನುಬಂಧೇನ ಪಶ್ಯತಸ್ತೇ ಸಮೀಯತುಃ ॥
ಅನುವಾದ
ಅವರೇ ಈಗ ಈ ಯುಗದಲ್ಲಿ ಶಿಶುಪಾಲ ಮತ್ತು ದಂತವಕ್ತ್ರರ ರೂಪದಲ್ಲಿ ಹುಟ್ಟಿದ್ದರು. ಭಗವಂತನ ಕುರಿತು ವೈರಭಾವ ಉಂಟಾದಕಾರಣ ನಿನ್ನ ಎದುರಿನಲ್ಲೇ ಅವರು ಅವನಲ್ಲಿ ಒಂದಾಗಿಹೋದರು. ॥38॥
(ಶ್ಲೋಕ-39)
ಮೂಲಮ್
ಏನಃ ಪೂರ್ವಕೃತಂ ಯತ್ತದ್ರಾಜಾನಃ ಕೃಷ್ಣವೈರಿಣಃ ।
ಜಹುಸ್ತ್ವಂತೇ ತದಾತ್ಮಾನಃ ಕೀಟಃ ಪೇಶಸ್ಕೃತೋ ಯಥಾ ॥
ಅನುವಾದ
ಯುಧಿಷ್ಠಿರ! ಶ್ರೀಕೃಷ್ಣನಲ್ಲಿ ಶತ್ರುತ್ವವಿರಿಸಿಕೊಂಡ ರಾಜರೆಲ್ಲರೂ ಅಂತ್ಯಸಮಯದಲ್ಲಿ ಶ್ರೀಕೃಷ್ಣನ ಸ್ಮರಣೆಯಿಂದ ತದ್ರೂಪರಾಗಿ ತಮ್ಮ ಪೂರ್ವಕೃತ ಪಾಪಗಳಿಂದ ಎಂದೆಂದಿಗೂ ಮುಕ್ತರಾಗಿ ಹೋದರು. ದುಂಬಿಯು ಹಿಡಿದು ತಂದು ಗೂಡಿನಲ್ಲಿ ಕೂಡಿಹಾಕಿದ ಹುಳುವು ಭಯದಿಂದ ದುಂಬಿಯನ್ನೇ ಚಿಂತಿಸುತ್ತಾ ದುಂಬಿಯೇ ಆಗುವಂತೆ ಅವನಂತೆ ಆದರು. ॥39॥
(ಶ್ಲೋಕ-40)
ಮೂಲಮ್
ಯಥಾ ಯಥಾ ಭಗವತೋ ಭಕ್ತ್ಯಾ ಪರಮಯಾಭಿದಾ ।
ನೃಪಾಶ್ಚೈದ್ಯಾದಯಃ ಸಾತ್ಮ್ಯಂ ಹರೇಸ್ತಚ್ಚಿಂತಯಾ ಯಯುಃ ॥
ಅನುವಾದ
ಭಗವಂತನ ಪ್ರಿಯಭಕ್ತರು ತಮ್ಮ ಭೇದ-ಭಾವರಹಿತ ಅನನ್ಯ ಭಕ್ತಿಯ ಮೂಲಕ ಭಗವತ್ಸ್ವ ರೂಪವನ್ನು ಪಡೆದುಕೊಂಡಂತೆ ಶಿಶುಪಾಲರೇ ಮುಂತಾದ ರಾಜರೂ ಕೂಡ ಭಗವಂತನ ವೈರದಿಂದ ಉಂಟಾದ ಅನನ್ಯ ಚಿಂತನದಿಂದ ಭಗವಂತನ ಸಾರೂಪ್ಯವನ್ನೇ ಪಡೆದುಕೊಂಡರು. ॥40॥
(ಶ್ಲೋಕ-41)
ಮೂಲಮ್
ಆಖ್ಯಾತಂ ಸರ್ವಮೇತತ್ತೇ ಯನ್ಮಾಂ ತ್ವಂ ಪರಿಪೃಷ್ಟವಾನ್ ।
ದಮಘೋಷಸುತಾದೀನಾಂ ಹರೇಃ ಸಾತ್ಮ್ಯಮಪಿ ದ್ವಿಷಾಮ್ ॥
ಅನುವಾದ
ಯುಧಿಷ್ಠಿರನೇ! ಭಗವಂತನಲ್ಲಿ ದ್ವೇಷಮಾಡುತ್ತಿದ್ದ ಶಿಶುಪಾಲರೇ ಮುಂತಾದವರಿಗೆ ಶ್ರೀಭಗವಂತನ ಸಾರೂಪ್ಯ ಮುಕ್ತಿಯು ಹೇಗೆ ಉಂಟಾಯಿತು? ಎಂದು ನೀನು ಕೇಳಿದ್ದೆ. ಅದಕ್ಕೆ ನಾನು ಉತ್ತರ ನೀಡಿಯಾಯಿತು.॥41॥
(ಶ್ಲೋಕ-42)
ಮೂಲಮ್
ಏಷಾ ಬ್ರಹ್ಮಣ್ಯದೇವಸ್ಯ ಕೃಷ್ಣಸ್ಯ ಚ ಮಹಾತ್ಮನಃ ।
ಅವತಾರಕಥಾ ಪುಣ್ಯಾ ವಧೋ ಯತ್ರಾದಿದೈತ್ಯಯೋಃ ॥
ಅನುವಾದ
ಆದಿದೈತ್ಯರಾದ ಹಿರಣ್ಯಾಕ್ಷ-ಹಿರಣ್ಯಕಶಿಪುಗಳ ವಧೆಯನ್ನು ವರ್ಣಿಸುವ ಈ ಕಥೆಯು ಬ್ರಹ್ಮಣ್ಯ ದೇವನಾದ ಶ್ರೀಕೃಷ್ಣ ಪರಮಾತ್ಮನ ಪರಮಪವಿತ್ರ ಅವತಾರಚರಿತ್ರವೇ ಆಗಿದೆ. ॥42॥
(ಶ್ಲೋಕ-43)
ಮೂಲಮ್
ಪ್ರಹ್ಲಾದಸ್ಯಾನುಚರಿತಂ ಮಹಾಭಾಗವತಸ್ಯ ಚ ।
ಭಕ್ತಿರ್ಜ್ಞಾನಂ ವಿರಕ್ತಿಶ್ಚ ಯಾಥಾತ್ಮ್ಯಂ ಚಾಸ್ಯ ವೈ ಹರೇಃ ॥
(ಶ್ಲೋಕ-44)
ಮೂಲಮ್
ಸರ್ಗಸ್ಥಿತ್ಯಪ್ಯಯೇಶಸ್ಯ ಗುಣಕರ್ಮಾನುವರ್ಣನಮ್ ।
ಪರಾವರೇಷಾಂ ಸ್ಥಾನಾನಾಂ ಕಾಲೇನ ವ್ಯತ್ಯಯೋ ಮಹಾನ್ ॥
ಅನುವಾದ
ಈ ಪ್ರಸಂಗದಲ್ಲಿ ಮಹಾಭಾಗವತೋತ್ತಮನಾದ ಪ್ರಹ್ಲಾದನ ಚರಿತ್ರೆಯನ್ನು, ಭಕ್ತಿ, ಜ್ಞಾನ, ವೈರಾಗ್ಯ ಹಾಗೂ ಪ್ರಪಂಚದ ಸೃಷ್ಟಿ, ಸ್ಥಿತಿ, ಪ್ರಳಯಗಳ ಸ್ವಾಮಿಯಾದ ಶ್ರೀಹರಿಯ ಯಥಾರ್ಥ ಸ್ವರೂಪವನ್ನೂ, ದಿವ್ಯಗುಣಗಳನ್ನೂ, ಲೀಲೆಗಳನ್ನೂ ವರ್ಣನೆ ಮಾಡಿದೆ. ಈ ಆಖ್ಯಾನದಲ್ಲಿ ದೇವತೆಗಳ, ದೈತ್ಯರ ಪದವಿಯಲ್ಲಿ ಕಾಲಕ್ರಮದಲ್ಲಿ ಉಂಟಾಗುವ ಪರಿವರ್ತನೆಯನ್ನು ನಿರೂಪಿಸಲಾಯಿತು. ॥43-44॥
(ಶ್ಲೋಕ-45)
ಮೂಲಮ್
ಧರ್ಮೋ ಭಾಗವತಾನಾಂ ಚ ಭಗವಾನ್ಯೇನ ಗಮ್ಯತೇ ।
ಆಖ್ಯಾನೇಸ್ಮಿನ್ಸಮಾಮ್ನಾತಮಾಧ್ಯಾತ್ಮಿಕಮಶೇಷತಃ ॥
ಅನುವಾದ
ಭಗವಂತನನ್ನು ದೊರಕಿಸುವ ಭಾಗವತಧರ್ಮವನ್ನೂ ವರ್ಣಿಸಿದ್ದೇನೆ. ಅಧ್ಯಾತ್ಮಕ್ಕೆ ಸಂಬಂಧಪಟ್ಟಂತೆ ತಿಳಿಯ ಬೇಕಾದ ವಿಷಯಗಳನ್ನು ಇಲ್ಲಿ ಹೇಳಲಾಗಿದೆ. ॥45॥
(ಶ್ಲೋಕ-46)
ಮೂಲಮ್
ಯ ಏತತ್ಪುಣ್ಯಮಾಖ್ಯಾನಂ ವಿಷ್ಣೋರ್ವೀರ್ಯೋಪಬೃಂಹಿತಮ್ ।
ಕೀರ್ತಯೇಚ್ಛ್ರದ್ಧಯಾ ಶ್ರುತ್ವಾ ಕರ್ಮಪಾಶೈರ್ವಿಮುಚ್ಯತೇ ॥
ಅನುವಾದ
ಭಗವಂತನ ಪರಾಕ್ರಮದಿಂದ ಪೂರ್ಣವಾದ ಈ ಪವಿತ್ರವಾದ ಆಖ್ಯಾನವನ್ನು ಶ್ರದ್ಧೆಯಿಂದ ಕೀರ್ತಿಸುವವನು, ಶ್ರವಣಿಸುವವನು ಕರ್ಮಬಂಧನದಿಂದ ಬಿಡುಗಡೆಹೊಂದುವನು. ॥46॥
(ಶ್ಲೋಕ-47)
ಮೂಲಮ್
ಏತದ್ಯ ಆದಿಪುರುಷಸ್ಯ ಮೃಗೇಂದ್ರಲೀಲಾಂ
ದೈತ್ಯೇಂದ್ರಯೂಥಪವಧಂ ಪ್ರಯತಃ ಪಠೇತ ।
ದೈತ್ಯಾತ್ಮಜಸ್ಯ ಚ ಸತಾಂ ಪ್ರವರಸ್ಯ ಪುಣ್ಯಂ
ಶ್ರುತ್ವಾನುಭಾವಮಕುತೋಭಯಮೇತಿ ಲೋಕಮ್ ॥
ಅನುವಾದ
ಪರಮಪುರುಷ ಪರಮಾತ್ಮನ ಈ ನರಸಿಂಹ ಲೀಲೆಯನ್ನೂ, ಸೇನಾಪತಿಗಳ ಸಹಿತ ಹಿರಣ್ಯಕಶಿಪುವಿನ ವಧೆಯನ್ನೂ, ಸಂತಶಿರೋಮಣಿ ಪ್ರಹ್ಲಾದನ ಪಾವನವಾದ ಪ್ರಭಾವವನ್ನೂ ಏಕಾಗ್ರವಾದ ಮನಸ್ಸಿನಿಂದ ಓದುವವನಿಗೆ, ಕೇಳುವವನಿಗೆ ಭಗವಂತನ ಅಭಯಪ್ರದವಾದ ಶ್ರೀವೈಕುಂಠ ಧಾಮವು ದೊರೆಯುವುದು. ॥47॥
(ಶ್ಲೋಕ-48)
ಮೂಲಮ್
ಯೂಯಂ ನೃಲೋಕೇ ಬತ ಭೂರಿಭಾಗಾ
ಲೋಕಂ ಪುನಾನಾ ಮುನಯೋಭಿಯಂತಿ ।
ಯೇಷಾಂ ಗೃಹಾನಾವಸತೀತಿ ಸಾಕ್ಷಾ-
ದ್ಗೂಢಂ ಪರಂ ಬ್ರಹ್ಮ ಮನುಷ್ಯಲಿಂಗಮ್ ॥
ಅನುವಾದ
ಯುಧಿಷ್ಠಿರನೇ! ಈ ಮನುಷ್ಯಲೋಕದಲ್ಲಿ ನಿಮ್ಮಗಳ ಭಾಗ್ಯವು ಅತ್ಯಂತ ಪ್ರಶಂಸನೀಯವಾಗಿದೆ. ಏಕೆಂದರೆ, ನಿಮ್ಮ ಮನೆಯಲ್ಲಿ ಸಾಕ್ಷಾತ್ ಪರಬ್ರಹ್ಮ ಪರಮಾತ್ಮನು ಮನುಷ್ಯ ರೂಪವನ್ನು ಧರಿಸಿ ಗುಪ್ತವಾಗಿ ವಾಸಿಸುತ್ತಾನೆ. ಇದರಿಂದ ಇಡೀ ಪ್ರಪಂಚವನ್ನು ಪವಿತ್ರಗೊಳಿಸುವಂತಹ ಋಷಿ-ಮುನಿಗಳು ಮೇಲಿಂದ-ಮೇಲೆ ಅವನ ದರ್ಶನ ಪಡೆಯಲು ಎಲ್ಲೆಡೆಗಳಿಂದ ನಿಮ್ಮ ಬಳಿಗೆ ಬರುತ್ತಾ ಇರುತ್ತಾರೆ. ॥48॥
(ಶ್ಲೋಕ-49)
ಮೂಲಮ್
ಸ ವಾ ಅಯಂ ಬ್ರಹ್ಮ ಮಹದ್ವಿಮೃಗ್ಯ-
ಕೈವಲ್ಯನಿರ್ವಾಣಸುಖಾನುಭೂತಿಃ ।
ಪ್ರಿಯಃ ಸುಹೃದ್ವಃ ಖಲು ಮಾತುಲೇಯ
ಆತ್ಮಾರ್ಹಣೀಯೋ ವಿಧಿಕೃದ್ಗುರುಶ್ಚ ॥
ಅನುವಾದ
ದೊಡ್ಡ-ದೊಡ್ಡ ಮಹಾಪುರುಷರು ಯಾವನನ್ನು ನಿರಂತರವಾಗಿ ಹುಡುಕುತ್ತಿರುವರೋ, ಯಾರು ಮಾಯೆಯ ಲೇಶವೂ ಇಲ್ಲದ ಪರಮ ಶಾಂತ, ಪರಮಾನಂದಾನು ಭವಸ್ವರೂಪ, ಪರಬ್ರಹ್ಮ ಪರಮಾತ್ಮನೇ ಆಗಿರುವನೋ, ಅವನು ನಿಮಗೆ ಪ್ರಿಯನೂ, ಹಿತೈಷಿಯೂ, ಸೋದರತ್ತೆಯ ಮಗನೂ, ಪೂಜ್ಯನೂ, ಆಜ್ಞಾಕಾರಿಯೂ, ಗುರುವೂ ಮತ್ತು ಸ್ವಯಂ ಆತ್ಮನೂ ಆದ ಶ್ರೀಕೃಷ್ಣನೇ ಆಗಿದ್ದಾನೆ. ॥49॥
(ಶ್ಲೋಕ-50)
ಮೂಲಮ್
ನ ಯಸ್ಯ ಸಾಕ್ಷಾದ್ಭವಪದ್ಮಜಾದಿಭೀ
ರೂಪಂ ಧಿಯಾ ವಸ್ತುತಯೋಪವರ್ಣಿತಮ್ ।
ವೌನೇನ ಭಕ್ತ್ಯೋಪಶಮೇನ ಪೂಜಿತಃ
ಪ್ರಸೀದತಾಮೇಷ ಸ ಸಾತ್ವತಾಂ ಪತಿಃ ॥
ಅನುವಾದ
‘ಇವನು ಹೀಗೆಯೇ ಇದ್ದಾನೆ’ ಎಂಬ ಇವನ ಸ್ವರೂಪವನ್ನು ಬ್ರಹ್ಮರುದ್ರಾದಿಗಳೂ ತಮ್ಮ ಬುದ್ಧಿಶಕ್ತಿಯಿಂದ ಹೇಗೆ ವರ್ಣಿಸಬಲ್ಲರು? ಹೀಗಿರುವಾಗ ನಾವಾದರೋ ಹೇಗೆ ವರ್ಣಿಸಬಲ್ಲೆವು? ನಾವುಗಳು ಮೌನ, ಭಕ್ತಿ ಮತ್ತು ಸಂಯಮದಿಂದ ಅವನಿಗೆ ನಮಸ್ಕರಿಸುತ್ತೇವೆ. ಅದನ್ನೇ ಪೂಜೆಯೆಂದು ಕರುಣೆಯಿಂದ ಸ್ವೀಕರಿಸಿ ಭಕ್ತ ವತ್ಸಲನಾದ ಭಗವಂತನು ನಮ್ಮ ಮೇಲೆ ಪ್ರಸನ್ನನಾಗಲಿ. ॥50॥
(ಶ್ಲೋಕ-51)
ಮೂಲಮ್
ಸ ಏಷ ಭಗವಾನ್ರಾಜನ್ವ್ಯತನೋದ್ವಿಹತಂ ಯಶಃ ।
ಪುರಾ ರುದ್ರಸ್ಯ ದೇವಸ್ಯ ಮಯೇನಾನಂತಮಾಯಿನಾ ॥
ಅನುವಾದ
ಯುಧಿಷ್ಠಿರನೇ! ಹಿಂದೆ ಮಹಾಮಾಯಾವಿಯಾದ ಮಯಾಸುರನು ಶ್ರೀರುದ್ರದೇವರ ಕೀರ್ತಿಗೆ ಕಲಂಕವನ್ನು ತರಲು ಬಯಸಿದಾಗ ಈ ಭಗವಂತನೇ ಅವರ ಕೀರ್ತಿಯನ್ನು ಮತ್ತೆ ರಕ್ಷಿಸಿ ವಿಸ್ತಾರಪಡಿಸಿದನು. ॥51॥
(ಶ್ಲೋಕ-52)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕಸ್ಮಿನ್ಕರ್ಮಣಿ ದೇವಸ್ಯ ಮಯೋಹನ್ ಜಗದೀಶಿತುಃ ।
ಯಥಾ ಚೋಪಚಿತಾ ಕೀರ್ತಿಃ ಕೃಷ್ಣೇನಾನೇನ ಕಥ್ಯತಾಮ್ ॥
ಅನುವಾದ
ಯುಧಿಷ್ಠಿರ ಮಹಾರಾಜನು ಕೇಳಿದನು — ನಾರದರೇ! ಮಯದಾನವನು ಯಾವ ಕಾರ್ಯದಲ್ಲಿ ವಿಶ್ವೇಶ್ವರನಾದ ರುದ್ರದೇವರ ಕೀರ್ತಿಯನ್ನು ಕೆಡಿಸಲು ಬಯಸಿದ್ದನು? ಮತ್ತು ಭಗವಾನ್ ಶ್ರೀಕೃಷ್ಣನು ಯಾವ ವಿಧದಿಂದ ಅವರ ಕೀರ್ತಿಯನ್ನು ರಕ್ಷಿಸಿದನು? ಎಂಬುದನ್ನು ಕೃಪೆಯಿಟ್ಟು ತಿಳಿಸಿರಿ. ॥52॥
(ಶ್ಲೋಕ-53)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ನಿರ್ಜಿತಾ ಅಸುರಾ ದೇವೈರ್ಯುಧ್ಯನೇನೋಪಬೃಂಹಿತೈಃ ।
ಮಾಯಿನಾಂ ಪರಮಾಚಾರ್ಯಂ ಮಯಂ ಶರಣಮಾಯಯುಃ ॥
ಅನುವಾದ
ನಾರದರು ಹೇಳಿದರು — ಹಿಂದೊಮ್ಮೆ ಭಗವಾನ್ ಶ್ರೀಕೃಷ್ಣನ ಶಕ್ತಿಯನ್ನು ಪಡೆದುಕೊಂಡು ದೇವತೆಗಳು ಯುದ್ಧದಲ್ಲಿ ಅಸುರರನ್ನು ಗೆದ್ದುಕೊಂಡಿದ್ದರು. ಆಗ ಅಸುರರೆಲ್ಲರೂ ಮಾಯಾವಿಗಳ ಪರಮಗುರು ಮಯ ದಾನವನಿಗೆ ಶರಣಾದರು. ॥53॥
(ಶ್ಲೋಕ-54)
ಮೂಲಮ್
ಸ ನಿರ್ಮಾಯ ಪುರಸ್ತಿಸ್ರೋ ಹೈಮೀರೌಪ್ಯಾಯಸೀರ್ವಿಭುಃ ।
ದುರ್ಲಕ್ಷ್ಯಾಪಾಯಸಂಯೋಗಾ ದುರ್ವಿತರ್ಕ್ಯಪರಿಚ್ಛದಾಃ ॥
ಅನುವಾದ
ಮಹಾಶಕ್ತಿಶಾಲಿ ಮಯಾಸುರನು ಚಿನ್ನ, ಬೆಳ್ಳಿ ಮತ್ತು ಕಬ್ಬಿಣಗಳಿಂದ ಮೂರು ವಿಚಿತ್ರವಾದ ವಿಮಾನ ಗಳನ್ನು ರಚಿಸಿದನು. ಆ ವಿಮಾನಗಳೆಂದರೆ ಮೂರುಪುರಗಳೇ ಆಗಿದ್ದವು. ಅವುಗಳು ಬಂದು-ಹೋಗುವುದು ಯಾರಿಗೂ ತಿಳಿಯದಷ್ಟು ವಿಲಕ್ಷಣವಾಗಿದ್ದವು. ಅವುಗಳಲ್ಲಿ ಅಪರಿಮಿತವಾದ ಯುದ್ಧದ ಸಾಮಗ್ರಿಗಳು ತುಂಬಿದ್ದವು. ॥54॥
(ಶ್ಲೋಕ-55)
ಮೂಲಮ್
ತಾಭಿಸ್ತೇಸುರಸೇನಾನ್ಯೋ ಲೋಕಾಂಸೀನ್ಸೇಶ್ವರಾನ್ನೃಪ ।
ಸ್ಮರಂತೋ ನಾಶಯಾನ್ಚಕ್ರುಃ ಪೂರ್ವವೈರಮಲಕ್ಷಿತಾಃ ॥
ಅನುವಾದ
ಯುಧಿಷ್ಠಿರನೇ! ದೈತ್ಯಸೇನಾಪತಿಗಳ ಮನಸ್ಸಿನಲ್ಲಿ ಮೂರೂ ಲೋಕಗಳ ಬಗ್ಗೆ ಹಾಗೂ ಲೋಕಪಾಲರ ಬಗ್ಗೆ ವೈರಭಾವವು ಇದ್ದೇ ಇತ್ತು. ಈಗ ಅದನ್ನು ನೆನೆದು ಆ ಮೂರು ವಿಮಾನಗಳಿಂದ ಅವರು ಅವುಗಳಲ್ಲಿ ಅಡಗಿದ್ದುಕೊಂಡು ಎಲ್ಲರನ್ನೂ ನಾಶಪಡಿಸತೊಡಗಿದರು. ॥55॥
(ಶ್ಲೋಕ-56)
ಮೂಲಮ್
ತತಸ್ತೇ ಸೇಶ್ವರಾ ಲೋಕಾ ಉಪಾಸಾದ್ಯೇಶ್ವರಂ ವಿಭೋ ।
ತ್ರಾಹಿ ನಸ್ತಾವಕಾನ್ದೇವ ವಿನಷ್ಟಾಂಸಿಪುರಾಲಯೈಃ ॥
ಅನುವಾದ
ಆಗ ಲೋಕಪಾಲರೊಂದಿಗೆ ಎಲ್ಲ ಪ್ರಜೆಯೂ ಭಗವಾನ್ ಶಂಕರನಲ್ಲಿ ಶರಣು ಹೊಕ್ಕರು ಮತ್ತು ಅವನಲ್ಲಿ ಪ್ರಾರ್ಥಿಸಿದರು ‘ಪ್ರಭೋ! ತ್ರಿಪುರಗಳಲ್ಲಿ ಇರುವ ಅಸುರರು ನಮ್ಮನ್ನು ನಾಶಪಡಿಸುತ್ತಿದ್ದಾರೆ. ನಾವು ನಿನ್ನವರೇ ಆಗಿದ್ದೇವೆ. ಆದ್ದರಿಂದ ಮಹಾ ದೇವಾ! ನಮ್ಮನ್ನು ರಕ್ಷಿಸು.’ ॥56॥
(ಶ್ಲೋಕ-57)
ಮೂಲಮ್
ಅಥಾನುಗೃಹ್ಯ ಭಗವಾನ್ಮಾ ಭೈಷ್ಟೇತಿ ಸುರಾನ್ವಿಭುಃ ।
ಶರಂ ಧನುಷಿ ಸಂಧಾಯ ಪುರೇಷ್ವಸಂ ವ್ಯಮುಂಚತ ॥
ಅನುವಾದ
ಅವರ ಪ್ರಾರ್ಥನೆಯನ್ನು ಕೇಳಿ ಭಗವಾನ್ ಶಂಕರನು ‘ಹೆದರಬೇಡಿರಿ’ ಎಂದು ಕೃಪಾಪೂರ್ಣವಾಗಿ ಅವರಿಗೆ ಅಭಯವನ್ನೂ ಇತ್ತು, ಮತ್ತೆ ಅವನು ಧನುಸ್ಸಿಗೆ ಬಾಣವನ್ನು ತೊಟ್ಟು ಮೂರೂ ಪುರಗಳ ಮೇಲೆ ಪ್ರಯೋಗಿಸಿದನು. ॥57॥
(ಶ್ಲೋಕ-58)
ಮೂಲಮ್
ತತೋಗ್ನಿವರ್ಣಾ ಇಷವಉತ್ಪೇತುಃ ಸೂರ್ಯಮಂಡಲಾತ್ ।
ಯಥಾ ಮಯೂಖಸಂದೋಹಾನಾದೃಶ್ಯಂತ ಪುರೋ ಯತಃ ॥
ಅನುವಾದ
ಅವನ ಆ ಬಾಣದಿಂದ ಸೂರ್ಯಮಂಡಲದಲ್ಲಿ ಹೊರ ಸೂಸುವ ಕಿರಣಗಳಂತೆ ಬೇರೆ ಅನೇಕ ಬಾಣಗಳು ಹೊರಟವು. ಬೆಂಕಿಯ ಜ್ವಾಲೆಗಳನ್ನೇ ಉಗುಳುತ್ತಿದ್ದ ಆ ಬಾಣಗಳಿಂದಾಗಿ ಆ ಪುರಗಳು ಕಾಣಿಸದಾದವು. ॥58॥
(ಶ್ಲೋಕ-59)
ಮೂಲಮ್
ತೈಃ ಸ್ಪೃಷ್ಟಾ ವ್ಯಸವಃ ಸರ್ವೇ ನಿಪೇತುಃ ಸ್ಮ ಪುರೌಕಸಃ ।
ತಾನಾನೀಯ ಮಹಾಯೋಗೀ ಮಯಃ ಕೂಪರಸೇಕ್ಷಿಪತ್ ॥
ಅನುವಾದ
ಆ ಬಾಣಗಳ ಸ್ಪರ್ಶದಿಂದ ವಿಮಾನದಲ್ಲಿ ವಾಸಿಸುವವರೆಲ್ಲರೂ ಗತಪ್ರಾಣರಾಗಿ ಬಿದ್ದುಬಿಟ್ಟರು. ಅನೇಕ ಉಪಾಯಗಳನ್ನು ಬಲ್ಲಂತಹ ಮಾಯಾವಿಯು ತಾನೇ ನಿರ್ಮಿಸಿದ ಅಮೃತದ ಕುಂಡಕ್ಕೆ ಆ ದೈತ್ಯರನ್ನು ಎತ್ತಿ ಹಾಕಿದನು. ॥59॥
(ಶ್ಲೋಕ-60)
ಮೂಲಮ್
ಸಿದ್ಧಾಮೃತರಸಸ್ಪೃಷ್ಟಾ ವಜ್ರಸಾರಾ ಮಹೌಜಸಃ ।
ಉತ್ತಸ್ಥುರ್ಮೇಘದಲನಾ ವೈದ್ಯುತಾ ಇವ ವಹ್ನಯಃ ॥
ಅನುವಾದ
ಆ ಸಿದ್ಧ ಅಮೃತರಸದ ಸ್ಪರ್ಶವಾಗುತ್ತಲೇ ಅಸುರರ ಶರೀರಗಳು ಅತ್ಯಂತ ತೇಜಸ್ವಿಯೂ, ವಜ್ರದಂತೆ ಸುದೃಢವೂ ಆಯಿತು. ಮೋಡಗಳನ್ನು ಚದುರಿಸುವ ಮಿಂಚಿನಂತೆ ಅವರು ಎದ್ದು ನಿಂತರು. ॥60॥
(ಶ್ಲೋಕ-61)
ಮೂಲಮ್
ವಿಲೋಕ್ಯ ಭಗ್ನಸಂಕಲ್ಪಂ ವಿಮನಸ್ಕಂ ವೃಷಧ್ವಜಮ್ ।
ತದಾಯಂ ಭಗವಾನ್ವಿಷ್ಣುಸ್ತತ್ರೋಪಾಯಮಕಲ್ಪಯತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು — ಮಹಾದೇವನಾದರೋ ತನ್ನ ಸಂಕಲ್ಪವು ಪೂರ್ಣಗೊಳ್ಳದಿರುವ ಕಾರಣ ಚಿಂತಾಮಗ್ನನಾಗಿರುವುದನ್ನು ಕಂಡಾಗ ಆ ಅಸುರರನ್ನು ಗೆಲ್ಲಲಿಕ್ಕಾಗಿ ಅವನು ಒಂದು ಯುಕ್ತಿಯನ್ನು ಹೂಡಿದನು. ॥61॥
(ಶ್ಲೋಕ-62)
ಮೂಲಮ್
ವತ್ಸ ಆಸೀತ್ತದಾ ಬ್ರಹ್ಮಾ ಸ್ವಯಂ ವಿಷ್ಣುರಯಂ ಹಿ ಗೌಃ ।
ಪ್ರವಿಶ್ಯ ತ್ರಿಪುರಂ ಕಾಲೇ ರಸಕೂಪಾಮೃತಂ ಪಪೌ ॥
ಅನುವಾದ
ಇದೇ ಭಗವಾನ್ ವಿಷ್ಣುವು ಒಂದು ಹಸುವಿನ ರೂಪವನ್ನು ತಾಳಿದನು ಮತ್ತು ಬ್ರಹ್ಮದೇವರು ಕರುವಿನ ರೂಪವನ್ನು ಧರಿಸಿದರು. ಅವರಿಬ್ಬರೂ ಮಧ್ಯಾಹ್ನದ ಸಮಯದಲ್ಲಿ ಆ ತ್ರಿಪುರಗಳನ್ನು ಪ್ರವೇಶಿಸಿ ಆ ಸಿದ್ಧರಸದ ಕುಂಡದ ಎಲ್ಲ ಅಮೃತವನ್ನು ಕುಡಿದು ಬಿಟ್ಟರು. ॥62॥
(ಶ್ಲೋಕ-63)
ಮೂಲಮ್
ತೇಸುರಾ ಹ್ಯಪಿ ಪಶ್ಯಂತೋ ನ ನ್ಯಷೇಧನ್ವಿಮೋಹಿತಾಃ ।
ತದ್ವಿಜ್ಞಾಯ ಮಹಾಯೋಗೀ ರಸಪಾಲಾನಿದಂ ಜಗೌ ॥
(ಶ್ಲೋಕ-64)
ಮೂಲಮ್
ಸ್ವಯಂ ವಿಶೋಕಃ ಶೋಕಾರ್ತಾನ್ಸ್ಮರನ್ದೈವಗತಿಂ ಚ ತಾಮ್ ।
ದೇವೋಸುರೋ ನರೋನ್ಯೋ ವಾನೇಶ್ವರೋಸ್ತೀಹ ಕಶ್ಚನ ॥
(ಶ್ಲೋಕ-65)
ಮೂಲಮ್
ಆತ್ಮನೋನ್ಯಸ್ಯ ವಾ ದಿಷ್ಟಂ ದೈವೇನಾಪೋಹಿತುಂ ದ್ವಯೋಃ ।
ಅಥಾಸೌ ಶಕ್ತಿಭಿಃ ಸ್ವಾಭಿಃ ಶಂಭೋಃ ಪ್ರಾಧಾನಿಕಂ ವ್ಯಧಾತ್ ॥
ಅನುವಾದ
ಅದನ್ನು ಕಾಯುತ್ತಿದ್ದ ದೈತ್ಯರು ಇವರಿಬ್ಬರನ್ನು ನೋಡುತ್ತಿದ್ದರೂ ಭಗವಂತನ ಮಾಯೆಯಿಂದ ಮೋಹಿತರಾಗಿ ಇವರನ್ನು ತಡೆಯದಾದರು. ಸರ್ವ ಉಪಾಯಗಳನ್ನು ತಿಳಿಯುವವರಲ್ಲಿ ಶ್ರೇಷ್ಠನಾದ ಮಯಾಸುರನಿಗೆ ಈ ಸಂಗತಿ ಅರಿವಾದಾಗ ಭಗವಂತನ ಈ ಲೀಲೆಯನ್ನು ಸ್ಮರಿಸುತ್ತಾ ಅವನಿಗೆ ಶೋಕವು ಉಂಟಾಗಲಿಲ್ಲ. ಶೋಕಿಸುತ್ತಿರುವ ಅಮೃತ ರಕ್ಷಕರಲ್ಲಿ ಹೇಳಿದನು ಅಯ್ಯಾ! ದೇವತೆಗಳು, ಅಸುರರು, ಮನುಷ್ಯರು ಅಥವಾ ಯಾವುದೇ ಪ್ರಾಣಿಯೂ ಕೂಡ ತನಗಾಗಲೀ ಪರರಿಗಾಗಲೀ ಇಬ್ಬರಿಗೂ ವಿಧಿಯು ವಿಧಿಸಿದ ಪ್ರಾರಬ್ಧವನ್ನು ಅಳಿಸಲಾರರು. ಏನಾಗ ಬೇಕಿತ್ತೋ ಅದು ಆಗಿಹೋಯಿತು. ಶೋಕಿಸಿ ಏನು ಮಾಡುವುದಿದೆ? ಇದಾದ ಬಳಿಕ ಭಗವಾನ್ ಶ್ರೀಕೃಷ್ಣನು ತನ್ನ ಶಕ್ತಿಗಳ ಮೂಲಕ ಭಗವಾನ್ ಶಂಕರನ ಯುದ್ಧದ ಸಾಮಗ್ರಿಗಳನ್ನು ಸಿದ್ಧಪಡಿಸಿದನು. ॥63-65॥
(ಶ್ಲೋಕ-66)
ಮೂಲಮ್
ಧರ್ಮಜ್ಞಾನವಿರಕ್ತ್ಯೃದ್ಧಿತಪೋವಿದ್ಯಾಕ್ರಿಯಾದಿಭಿಃ ।
ರಥಂ ಸೂತಂ ಧ್ವಜಂ ವಾಹಾನ್ ಧನುರ್ವರ್ಮ ಶರಾದಿ ಯತ್ ॥
ಅನುವಾದ
ಅವನು ಧರ್ಮದಿಂದ ರಥವನ್ನೂ, ಜ್ಞಾನದಿಂದ ಸಾರಥಿಯನ್ನೂ, ವೈರಾಗ್ಯದಿಂದ ಧ್ವಜವನ್ನೂ, ಐಶ್ವರ್ಯದಿಂದ ಕುದುರೆಗಳನ್ನೂ, ತಪಸ್ಸಿನಿಂದ ಧನುಸ್ಸನ್ನೂ, ವಿದ್ಯೆಯಿಂದ ಕವಚವನ್ನೂ, ಕ್ರಿಯೆಯಿಂದ ಬಾಣಗಳನ್ನು ಮತ್ತು ಬೇರೆ-ಬೇರೆ ಶಕ್ತಿಗಳಿಂದ ಬೇರೆ-ಬೇರೆ ವಸ್ತುಗಳನ್ನು ನಿರ್ಮಾಣ ಮಾಡಿದನು. ॥66॥
(ಶ್ಲೋಕ-67)
ಮೂಲಮ್
ಸನ್ನದ್ಧೋ ರಥಮಾಸ್ಥಾಯ ಶರಂ ಧನುರುಪಾದದೇ ।
ಶರಂ ಧನುಷಿ ಸಂಧಾಯ ಮುಹೂರ್ತೇಭಿಜಿತೀಶ್ವರಃ ॥
(ಶ್ಲೋಕ-68)
ಮೂಲಮ್
ದದಾಹ ತೇನ ದುರ್ಭೇದ್ಯಾ ಹರೋಥ ತ್ರಿಪುರೋ ನೃಪ ।
ದಿವಿ ದುಂದುಭಯೋ ನೇದುರ್ವಿಮಾನಶತಸಂಕುಲಾಃ ॥
ಅನುವಾದ
ಈ ಸಾಮಗ್ರಿಗಳಿಂದ ಸನ್ನದ್ಧನಾಗಿ ಭಗವಾನ್ ಶಂಕರನು ಅಭಿಜಿತ್ ಮುಹೂರ್ತದಲ್ಲಿ ಧನುಸ್ಸಿಗೆ ಬಾಣವನ್ನು ಹೂಡಿ ಆ ದುರ್ಭೇದ್ಯ ವಾದ ಮೂರೂ ವಿಮಾನಗಳನ್ನು ಭಸ್ಮಮಾಡಿ ಬಿಟ್ಟನು. ಯುಧಿಷ್ಠಿರನೇ! ಆಗಲೇ ಸ್ವರ್ಗದಲ್ಲಿ ದೇವ ದುಂದುಭಿಗಳು ಮೊಳಗಿದವು. ನೂರಾರು ವಿಮಾನಗಳು ಮಹಾದೇವರನ್ನು ಅಭಿನಂದಿಸಲು ನೆರೆದವು. ॥67-68॥
(ಶ್ಲೋಕ-69)
ಮೂಲಮ್
ದೇವರ್ಷಿಪಿತೃಸಿದ್ಧೇಶಾ ಜಯೇತಿ ಕುಸುಮೋತ್ಕರೈಃ ।
ಅವಾಕಿರನ್ ಜಗುರ್ಹೃಷ್ಟಾ ನನೃತುಶ್ಚಾಪ್ಸರೋಗಣಾಃ ॥
ಅನುವಾದ
ದೇವತೆಗಳು, ಋಷಿಗಳು, ಪಿತೃಗಳು, ಸಿದ್ಧೇಶ್ವರರು, ಆನಂದದಿಂದ ಜಯ-ಜಯಕಾರವನ್ನು ಮಾಡುತ್ತಾ ಹೂವಿನ ಮಳೆಯನ್ನು ಸುರಿಸಿದರು. ಅಪ್ಸರೆಯರು ಹಾಡುತ್ತಾ ಕುಣಿಯ ತೊಡಗಿದರು. ॥69॥
(ಶ್ಲೋಕ-70)
ಮೂಲಮ್
ಏವಂ ದಗ್ಧ್ವಾ ಪುರಸ್ತಿಸ್ರೋ ಭಗವಾನ್ಪುರಹಾ ನೃಪ ।
ಬ್ರಹ್ಮಾದಿಭಿಃ ಸ್ತೂಯಮಾನಃ ಸ್ವಧಾಮ ಪ್ರತ್ಯಪದ್ಯತ ॥
ಅನುವಾದ
ಯುಧಿಷ್ಠಿರನೇ! ಹೀಗೆ ಆ ಮೂರು ಪುರಗಳನ್ನೂ ಸುಟ್ಟು ಭಗವಾನ್ ಶಂಕರನು ‘ಪುರಾರಿ’ ಎಂಬ ಹೆಸರನ್ನು ಗಳಿಸಿದನು ಮತ್ತು ಬ್ರಹ್ಮಾದಿದೇವತೆಗಳ ಸ್ತುತಿಯನ್ನು ಕೇಳುತ್ತಾ ತನ್ನ ಧಾಮಕ್ಕೆ ಬಿಜಯಂಗೈದನು. ॥70॥
(ಶ್ಲೋಕ-71)
ಮೂಲಮ್
ಏವಂ ವಿಧಾನ್ಯಸ್ಯ ಹರೇಃ ಸ್ವಮಾಯಯಾವಿಡಂಬಮಾನಸ್ಯ ನೃಲೋಕಮಾತ್ಮನಃ ।
ವೀರ್ಯಾಣಿ ಗೀತಾನ್ಯೃಷಿಭಿರ್ಜಗದ್ಗುರೋ-ರ್ಲೋಕಾನ್ಪುನಾನಾನ್ಯಪರಂ ವದಾಮಿ ಕಿಮ್ ॥
ಅನುವಾದ
ಆತ್ಮ ಸ್ವರೂಪನಾದ ಜಗದ್ಗುರು ಭಗವಾನ್ ಶ್ರೀಕೃಷ್ಣನು ಹೀಗೆ ತನ್ನ ಮಾಯೆಯಿಂದ ಮನುಷ್ಯರಂತೆ ಲೀಲೆಗಳನ್ನು ಮಾಡುತ್ತಾನೆ. ಋಷಿಗಳು ಆ ಅನೇಕ ಲೋಕಪಾವನ ಲೀಲೆಗಳನ್ನು ಹಾಡುತ್ತಾ ಇರುತ್ತಾರೆ. ಈಗ ನಾನು ನಿನಗೆ ಮತ್ತೇನು ಹೇಳಲಿ? ಕೇಳು. ॥71॥
ಅನುವಾದ (ಸಮಾಪ್ತಿಃ)
ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಯುಧಿಷ್ಠಿರ-ನಾರದಸಂವಾದೇ ತ್ರಿಪುರವಿಜಯೋ ನಾಮ ದಶಮೋಽಧ್ಯಾಯಃ ॥10॥