[ಒಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಪ್ರಹ್ಲಾದನು ಮಾಡಿದ ಶ್ರೀನರಸಿಂಹದೇವರ ಸ್ತುತಿ
(ಶ್ಲೋಕ-1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಏವಂ ಸುರಾದಯಃ ಸರ್ವೇ ಬ್ರಹ್ಮರುದ್ರಪುರಃಸರಾಃ ।
ನೋಪೈತುಮಶಕನ್ಮನ್ಯುಸಂರಂಭಂ ಸುದುರಾಸದಮ್ ॥
ಅನುವಾದ
ನಾರದರು ಹೇಳಿದರು — ಯುಧಿಷ್ಠಿರನೇ! ಹೀಗೆ ಬ್ರಹ್ಮ ದೇವರೂ, ರುದ್ರದೇವರೂ ಮೊದಲಾದ ಎಲ್ಲ ದೇವತೆಗಳೂ ಭಗವಾನ್ ನರಸಿಂಹನನ್ನು ಸ್ತೋತ್ರಮಾಡಿದರೂ ಅವನ ಕ್ರೋಧಾವೇಶವನ್ನು ಶಾಂತಗೊಳಿಸಲು ಸಾಧ್ಯವಾಗಲಿಲ್ಲ. ಅವನ ಬಳಿಗೆ ಹೋಗಲೂ ಅವರಿಂದ ಶಕ್ಯವಾಗಲಿಲ್ಲ. ಆತನನ್ನು ಹೊಂದುವುದಂತೂ ಅತಿಕಷ್ಟವಾಗಿತ್ತು. ॥1॥
(ಶ್ಲೋಕ-2)
ಮೂಲಮ್
ಸಾಕ್ಷಾಚ್ಛ್ರೀಃ ಪ್ರೇಷಿತಾ ದೇವೈರ್ದೃಷ್ಟ್ವಾ ತನ್ಮಹದದ್ಭುತಮ್ ।
ಅದೃಷ್ಟಾಶ್ರುತಪೂರ್ವತ್ವಾತ್ಸಾ ನೋಪೇಯಾಯ ಶಂಕಿತಾ ॥
ಅನುವಾದ
ದೇವತೆಗಳು ಅವನನ್ನು ಶಾಂತಗೊಳಿಸಲು ಸ್ವಯಂ ಲಕ್ಷ್ಮೀ ದೇವಿಯನ್ನು ಕಳಿಸಿದರು. ಆಕೆಯು ಹೋಗಿ ನರಸಿಂಹ ಭಗವಂತನ ಆ ಅದ್ಭುತ ಮಹಾನ್ರೂಪವನ್ನು ನೋಡಿದಾಗ ಭಯದಿಂದ ಅವಳಿಗೂ ಕೂಡ ಬಳಿಗೆ ಹೋಗಲಾಗಲಿಲ್ಲ. ಅವಳು ತನ್ನ ಸ್ವಾಮಿಯ ಇಂತಹ ಭಯಂಕರ ರೂಪವನ್ನು ಎಂದೂ ನೋಡಿರಲಿಲ್ಲ, ಕೇಳಿರಲಿಲ್ಲ. ॥2॥
(ಶ್ಲೋಕ-3)
ಮೂಲಮ್
ಪ್ರಹ್ಲಾದಂ ಪ್ರೇಷಯಾಮಾಸ ಬ್ರಹ್ಮಾವಸ್ಥಿತಮಂತಿಕೇ ।
ತಾತ ಪ್ರಶಮಯೋಪೇಹಿ ಸ್ವಪಿತ್ರೇ ಕುಪಿತಂ ಪ್ರಭುಮ್ ॥
ಅನುವಾದ
ಆಗ ಬ್ರಹ್ಮ ದೇವರು ತನ್ನ ಬಳಿಯಲ್ಲೇ ನಿಂತಿದ್ದ ಪ್ರಹ್ಲಾದನನ್ನು ಕುರಿತು ‘ಮಗು! ನಿನ್ನ ತಂದೆಯ ಮೇಲಲ್ಲವೇ ಭಗವಂತನು ಕುಪಿತನಾಗಿದ್ದನು. ಈಗ ನೀನೇ ಅವನ ಬಳಿಗೆ ಹೋಗಿ ಅವನನ್ನು ಶಾಂತಗೊಳಿಸು’ ಎಂದು ಹೇಳಿ ಅವನನ್ನು ಭಗವಂತನ ಬಳಿಗೆ ಕಳಿಸಿದರು. ॥3॥
(ಶ್ಲೋಕ-4)
ಮೂಲಮ್
ತಥೇತಿ ಶನಕೈ ರಾಜನ್ಮಹಾಭಾಗವತೋರ್ಭಕಃ ।
ಉಪೇತ್ಯ ಭುವಿ ಕಾಯೇನ ನನಾಮ ವಿಧೃತಾಂಜಲಿಃ ॥
ಅನುವಾದ
ಪರಮಭಾಗವತ ಶ್ರೇಷ್ಠನಾದ ಪ್ರಹ್ಲಾದನು ‘ಅಪ್ಪಣೆ’ ಎಂದು ಹೇಳಿ ಮೆಲ್ಲಗೆ ಭಗವಂತನ ಬಳಿಗೆ ಹೋಗಿ ಕೈಜೋಡಿಸಿಕೊಂಡು ಭೂಮಿಯ ಮೇಲೆ ಸಾಷ್ಟಾಂಗ ನಮಸ್ಕಾರಮಾಡಿದನು. ॥4॥
(ಶ್ಲೋಕ-5)
ಮೂಲಮ್
ಸ್ವಪಾದಮೂಲೇ ಪತಿತಂ ತಮರ್ಭಕಂ
ವಿಲೋಕ್ಯ ದೇವಃ ಕೃಪಯಾ ಪರಿಪ್ಲುತಃ ।
ಉತ್ಥಾಪ್ಯ ತಚ್ಛೀರ್ಷ್ಣ್ಯದಧಾತ್ಕರಾಂಬುಜಂ
ಕಾಲಾಹಿವಿತ್ರಸ್ತಧಿಯಾಂ ಕೃತಾಭಯಮ್ ॥
ಅನುವಾದ
ಹೀಗೆ ಆ ಬಾಲಕನು ತನ್ನ ಪಾದಮೂಲದಲ್ಲಿ ಅಡ್ಡಬಿದ್ದಿರುವುದನ್ನು ಕಂಡು ದೇವದೇವನ ಹೃದಯವು ಕರುಣೆಯಿಂದ ತುಂಬಿ ಬಂತು. ಆತನು ಆ ಬಾಲಕನನ್ನು ಎಬ್ಬಿಸಿ ಕಾಳಸರ್ಪಕ್ಕೆ ಹೆದರಿದವರಿಗೆ ಅಭಯಪ್ರದಾನವನ್ನು ಮಾಡುವ ತನ್ನ ಕರ ಕಮಲವನ್ನು ಅವನ ಶಿರದಲ್ಲಿರಿಸಿದನು. ॥5॥
(ಶ್ಲೋಕ-6)
ಮೂಲಮ್
ಸ ತತ್ಕರಸ್ಪರ್ಶಧುತಾಖಿಲಾಶುಭಃ
ಸಪದ್ಯಭಿವ್ಯಕ್ತಪರಾತ್ಮದರ್ಶನಃ ।
ತತ್ಪಾದಪದ್ಮಂ ಹೃದಿ ನಿರ್ವೃತೋ ದಧೌ
ಹೃಷ್ಯತ್ತನುಃ ಕ್ಲಿನ್ನಹೃದಶ್ರುಲೋಚನಃ ॥
ಅನುವಾದ
ಭಗವಂತನ ಕರಕಮಲಗಳ ಸ್ಪರ್ಶವಾಗುತ್ತಲೇ ಪ್ರಹ್ಲಾದನಲ್ಲಿ ಉಳಿದಿದ್ದ ಅಲ್ಪ-ಸ್ವಲ್ಪ ಅಶುಭ ಸಂಸ್ಕಾರಗಳು ತೊಳೆದುಹೋದುವು. ಒಡನೆಯೇ ಆತನಿಗೆ ಪರಮಾತ್ಮನ ತತ್ತ್ವದ ಸಾಕ್ಷಾತ್ಕಾರ ವಾಯಿತು. ಅವನು ಪರಮಪ್ರೇಮದ ಆನಂದದಲ್ಲಿ ಮುಳುಗಿ ಭಗವಂತನ ಚರಣಕಮಲಗಳನ್ನು ತನ್ನ ಹೃದಯದಲ್ಲಿ ಧರಿಸಿ ಕೊಂಡನು. ಆಗ ಅವನ ಶರೀರವೆಲ್ಲ ಪುಳಕಿತವಾಗಿ, ಹೃದಯದಲ್ಲಿ ಪ್ರೇಮದ ಪ್ರವಾಹ ಹರಿಯತೊಡಗಿತು ಮತ್ತು ಕಣ್ಣುಗಳಿಂದ ಆನಂದಾಶ್ರುಗಳು ಹರಿಯ ತೊಡಗಿತು. ॥6॥
(ಶ್ಲೋಕ-7)
ಮೂಲಮ್
ಅಸ್ತೌಷೀದ್ಧರಿಮೇಕಾಗ್ರಮನಸಾ ಸುಸಮಾಹಿತಃ ।
ಪ್ರೇಮಗದ್ಗದಯಾ ವಾಚಾ ತನ್ನ್ಯಸ್ತಹೃದಯೇಕ್ಷಣಃ ॥
ಅನುವಾದ
ಪ್ರಹ್ಲಾದನು ಭಾವತುಂಬಿದ ಹೃದಯ ಮತ್ತು ರೆಪ್ಪೆಮಿಟು ಕಿಸದ ಕಣ್ಣುಗಳಿಂದ ಭಗವಂತನನ್ನು ನೋಡುತ್ತಲೇ ಇದ್ದನು. ಭಾವಸಮಾಧಿಯಿಂದ ಸ್ವಯಂ ಏಕಾಗ್ರವಾದ ಮನಸ್ಸಿನಿಂದ ಅವನು ಭಗವಂತನ ಗುಣಗಳನ್ನು ಚಿಂತಿಸುತ್ತಾ ಪ್ರೇಮಗದ್ಗದ ವಾಣಿಯಿಂದ ಹೀಗೆ ಸ್ತುತಿಸಿದನು. ॥7॥
(ಶ್ಲೋಕ-8)
ಮೂಲಮ್ (ವಾಚನಮ್)
ಪ್ರಹ್ಲಾದ ಉವಾಚ
ಮೂಲಮ್
ಬ್ರಹ್ಮಾದಯಃ ಸುರಗಣಾ ಮುನಯೋಥ ಸಿದ್ಧಾಃ
ಸತ್ತ್ವೆ ಕತಾನಮತಯೋ ವಚಸಾಂ ಪ್ರವಾಹೈಃ ।
ನಾರಾಧಿತುಂ ಪುರುಗುಣೈರಧುನಾಪಿ ಪಿಪ್ರುಃ
ಕಿಂ ತೋಷ್ಟುಮರ್ಹತಿ ಸ ಮೇ ಹರಿರುಗ್ರಜಾತೇಃ ॥
ಅನುವಾದ
ಪ್ರಹ್ಲಾದನು ಹೇಳಿದನು — ಬ್ರಹ್ಮಾದಿದೇವತೆಗಳು, ಋಷಿ-ಮುನಿಗಳ, ಸಿದ್ಧಪುರುಷರ ಬುದ್ಧಿಯು ನಿರಂತರ ಸತ್ತ್ವಗುಣದಲ್ಲೇ ನೆಲೆಸಿರುತ್ತದೆ. ಹೀಗಿದ್ದರೂ ಅವರಿಂದ ತಮ್ಮ ಧಾರಾಪ್ರವಾಹ ಸ್ತುತಿಗಳಿಂದ ಮತ್ತು ತಮ್ಮ ನಾನಾ ಗುಣಾತಿಶಯಗಳಿಂದ ನಿನ್ನನ್ನು ಇಷ್ಟರವರೆಗೆ ಸಂತುಷ್ಟ ಗೊಳಿಸಲಾಗಲಿಲ್ಲ. ಮತ್ತೆ ನಾನಾದರೋ ಘೋರ ಅಸುರ ಜಾತಿಯಲ್ಲಿ ಹುಟ್ಟಿರುವೆನು. ನಾನು ಶ್ರೀಹರಿಯನ್ನು ಸಂತುಷ್ಟಗೊಳಿಸಲು ಸಾಧ್ಯವೇ? ॥8॥
(ಶ್ಲೋಕ-9)
ಮೂಲಮ್
ಮನ್ಯೇ ಧನಾಭಿಜನರೂಪತಪಃಶ್ರುತೌಜಃ
ತೇಜಃ ಪ್ರಭಾವಬಲಪೌರುಷಬುದ್ಧಿಯೋಗಾಃ ।
ನಾರಾಧನಾಯ ಹಿ ಭವಂತಿ ಪರಸ್ಯ ಪುಂಸೋ
ಭಕ್ತ್ಯಾ ತುತೋಷ ಭಗವಾನ್ಗಜಯೂಥಪಾಯ ॥
ಅನುವಾದ
ಧನ, ಶ್ರೇಷ್ಠಕುಲ, ರೂಪ, ತಪಸ್ಸು, ವಿದ್ಯೆ, ಓಜಸ್ಸು, ತೇಜಸ್ಸು, ಪ್ರಭಾವ, ಬಲ, ಪೌರುಷ, ಬುದ್ಧಿ ಮತ್ತು ಯೋಗ ಇವೆಲ್ಲ ಗುಣಗಳು ಪರಮಪುರುಷ ಭಗವಂತನನ್ನು ಸಂತುಷ್ಟಗೊಳಿಸಲು ಸಮರ್ಥ ವಾಗಲಾರವು ಎಂದೇ ನಾನು ತಿಳಿಯುತ್ತೇನೆ. ಆದರೆ ಭಕ್ತಿಯಿಂದಲೇ ಭಗವಂತನು ಗಜೇಂದ್ರನ ಮೇಲೆಯೂ ಸಂತುಷ್ಟನಾಗಿದ್ದನು. ॥9॥
(ಶ್ಲೋಕ-10)
ಮೂಲಮ್
ವಿಪ್ರಾದ್ವಷಡ್ಗುಣಯುತಾದರವಿಂದನಾಭ-
ಪಾದಾರವಿಂದವಿಮುಖಾಚ್ಛ ್ವಪಚಂ ವರಿಷ್ಠಮ್ ।
ಮನ್ಯೇ ತದರ್ಪಿತಮನೋವಚನೇಹಿತಾರ್ಥ-
ಪ್ರಾಣಂ ಪುನಾತಿ ಸ ಕುಲಂ ನ ತು ಭೂರಿಮಾನಃ ॥
ಅನುವಾದ
ಈ ಹನ್ನೆರಡು ಗುಣಗಳಿಂದ ಕೂಡಿದ ಬ್ರಾಹ್ಮಣನು ಭಗವಂತನಾದ ಕಮಲನಾಭನ ಚರಣಕಮಲಗಳಿಂದ ವಿಮುಖನಾಗಿದ್ದರೆ, ಅವನಿಗಿಂತ ತನ್ನ ಮನ, ವಚನ, ಕರ್ಮ, ಧನ ಮತ್ತು ಪ್ರಾಣಗಳನ್ನು ಭಗವಂತನ ಚರಣಗಳಲ್ಲಿ ಅರ್ಪಿಸಿದ ಚಾಂಡಾಲನೇ ಶ್ರೇಷ್ಠನೆಂದು ನಾನು ತಿಳಿಯುತ್ತೇನೆ. ಏಕೆಂದರೆ, ಆ ಚಾಂಡಾಲ ನಾದರೋ ತಾನು ಪವಿತ್ರನಾಗುವುದೊಂದಿಗೆ ತನ್ನ ಕುಲವನ್ನೂ ಪವಿತ್ರಗೊಳಿಸುತ್ತಾನೆ. ಆದರೆ ದುರಭಿಮಾನಿಯಾದ ಬ್ರಾಹ್ಮಣನಾದರೋ ತನ್ನನ್ನೂ ಕೂಡ ಪವಿತ್ರವಾಗಿಸಿಕೊಳ್ಳಲಾರನು. ॥10॥
(ಶ್ಲೋಕ-11)
ಮೂಲಮ್
ನೈವಾತ್ಮನಃ ಪ್ರಭುರಯಂ ನಿಜಲಾಭಪೂರ್ಣೋ
ಮಾನಂ ಜನಾದವಿದುಷಃ ಕರುಣೋ ವೃಣೀತೇ ।
ಯದ್ಯಜ್ಜನೋ ಭಗವತೇ ವಿದಧೀತ ಮಾನಂ
ತಚ್ಚಾತ್ಮನೇ ಪ್ರತಿಮುಖಸ್ಯ ಯಥಾ ಮುಖಶ್ರೀಃ ॥
ಅನುವಾದ
ಸ್ವಸ್ವರೂಪದಲ್ಲಿದ್ದು ಅದರ ಅನುಭವದಲ್ಲೇ ಪರಿಪೂರ್ಣನಾಗಿರುವ ಆ ಮಹಾಪ್ರಭುವಿಗೆ ಕ್ಷುದ್ರ ಪುರುಷರು ಮಾಡುವ ಆರಾಧನೆಯ ಅಪೇಕ್ಷೆಯೇನೂ ಇಲ್ಲ. ಆದರೂ ಕರುಣಾಪೂರ್ಣನಾಗಿರುವ ಈತನು ಭಕ್ತರ ಹಿತಕ್ಕಾಗಿ ಅವರು ಮಾಡುವ ಪೂಜೆಯನ್ನು ಸರಳಹೃದಯದಿಂದ ಸ್ವೀಕರಿಸುತ್ತಾನೆ. ಮುಖವು ಸುಂದರವಾಗಿದ್ದರೆ ಅದು ಕನ್ನಡಿಯಲ್ಲಿ ಕಾಣುವ ತನ್ನ ಪ್ರತಿಬಿಂಬವನ್ನೂ ಸುಂದರವಾಗಿಸುತ್ತದೆ. ಹಾಗೆಯೇ ಶ್ರೀಭಗವಂತನನ್ನು ಸತ್ಯ-ಶಿವ- ಸುಂದರನಾಗಿ ಪೂಜಿಸಿದರೆ ಆ ಸತ್ಯ-ಶಿವ-ಸೌಂದರ್ಯಗಳು ಭಕ್ತನಿಗೂ ಬಂದುಸೇರುತ್ತವೆ. ॥11॥
(ಶ್ಲೋಕ-12)
ಮೂಲಮ್
ತಸ್ಮಾದಹಂ ವಿಗತವಿಕ್ಲವ ಈಶ್ವರಸ್ಯ
ಸರ್ವಾತ್ಮನಾ ಮಹಿ ಗೃಣಾಮಿ ಯಥಾಮನೀಷಮ್ ।
ನೀಚೋಜಯಾ ಗುಣವಿಸರ್ಗಮನುಪ್ರವಿಷ್ಟಃ
ಪೂಯೇತ ಯೇನ ಹಿ ಪುಮಾನನುವರ್ಣಿತೇನ ॥
ಅನುವಾದ
ಅದಕ್ಕಾಗಿ ನಾನು ಶ್ರೀಭಗವಂತನನ್ನು ಸ್ತುತಿಸುವುದಕ್ಕೆ ಸರ್ವಥಾ ಅಯೋಗ್ಯನೂ, ಅನಧಿಕಾರಿಯೂ ಆಗಿದ್ದರೂ ನನ್ನ ಬುದ್ಧಿ ಶಕ್ತಿಗೆ ಅನುಗುಣವಾಗಿ ಯಾವ ಶಂಕೆಯೂ ಇಲ್ಲದೇ ಈತನ ಮಹಿಮೆಯನ್ನು ಕೊಂಡಾಡುತ್ತಿದ್ದೇನೆ. ಈ ಮಹಿಮೆಯ ಗಾನಕ್ಕೆ ಎಷ್ಟು ಪ್ರಭಾವ ವಿದೆಯೆಂದರೆ ಅವಿದ್ಯೆಯಿಂದ ಸಂಸಾರಚಕ್ರದಲ್ಲಿ ಸಿಕ್ಕಿಕೊಂಡಿರುವ ಜೀವನು ತತ್ಕಾಲದಲ್ಲೇ ಪವಿತ್ರವಾಗಿ ಹೋಗುತ್ತಾನೆ. ॥12॥
(ಶ್ಲೋಕ-13)
ಮೂಲಮ್
ಸರ್ವೇ ಹ್ಯಮೀ ವಿಧಿಕರಾಸ್ತವ ಸತ್ತ್ವಧಾಮ್ನೋ
ಬ್ರಹ್ಮಾದಯೋ ವಯಮಿವೇಶ ನ ಚೋದ್ವಿಜಂತಃ ।
ಕ್ಷೇಮಾಯ ಭೂತಯ ಉತಾತ್ಮಸುಖಾಯ ಚಾಸ್ಯ
ವಿಕ್ರೀಡಿತಂ ಭಗವತೋ ರುಚಿರಾವತಾರೈಃ ॥
ಅನುವಾದ
ಓ ಭಗವಂತಾ! ನೀನು ಸತ್ತ್ವಗುಣಕ್ಕೆ ಆಶ್ರಯನಾಗಿರುವೆ. ಈ ಬ್ರಹ್ಮಾದಿ ದೇವತೆಗಳೆಲ್ಲರೂ ನಿನ್ನ ಆಜ್ಞಾಕಾರೀ ಭಕ್ತರಾಗಿದ್ದಾರೆ. ಇವರು ನಮ್ಮಂತೆ ಉದ್ವೇಗವಿಲ್ಲದೆ, ದ್ವೇಷವಿಲ್ಲದೆ ನಿನ್ನ ಸೇವೆಯನ್ನು ಮಾಡುತ್ತಾರೆ. ನೀನು ಅತಿಸುಂದರವಾದ ದೊಡ್ಡ-ದೊಡ್ಡ ಅವತಾರಗಳನ್ನು ಮಾಡಿ ಈ ಜಗತ್ತಿಗೆ ಕಲ್ಯಾಣವನ್ನೂ, ಏಳಿಗೆಯನ್ನೂ ಆತ್ಮಾನಂದವನ್ನೂ ಅನುಗ್ರಹಿಸುವುದಕ್ಕಾಗಿಯೇ ಬಗೆ-ಬಗೆಯ ಲೀಲೆಗಳನ್ನು ಮಾಡುತ್ತಿರುವೆ. ಈ ನರಸಿಂಹಾವತಾರವೂ ಅತ್ಯಂತ ದಿವ್ಯವಾದ ಲೀಲೆಯೇ. ॥13॥
(ಶ್ಲೋಕ-14)
ಮೂಲಮ್
ತದ್ಯಚ್ಛ ಮನ್ಯುಮಸುರಶ್ಚ ಹತಸ್ತ್ವಯಾದ್ಯ
ಮೋದೇತ ಸಾಧುರಪಿ ವೃಶ್ಚಿಕಸರ್ಪಹತ್ಯಾ ।
ಲೋಕಾಶ್ಚ ನಿರ್ವೃತಿಮಿತಾಃ ಪ್ರತಿಯಂತಿ ಸರ್ವೇ
ರೂಪಂ ನೃಸಿಂಹ ವಿಭಯಾಯ ಜನಾಃ ಸ್ಮರಂತಿ ॥
ಅನುವಾದ
ಯಾವ ಅಸುರನನ್ನು ಕೊಲ್ಲುವುದಕ್ಕಾಗಿ ನೀನು ಕ್ರೋಧಗೊಂಡೆಯೋ ಅವನು ವಧಿಸಲ್ಪಟ್ಟನು. ಈಗ ನೀನು ನಿನ್ನ ಕ್ರೋಧವನ್ನು ಶಾಂತಗೊಳಿಸು. ಹಾವು-ಚೇಳುಗಳ ಸಾವಿನಿಂದ ಸಜ್ಜನರೂ ಕೂಡ ಸುಖಿಗಳಾಗುವಂತೆಯೇ ಈ ದೈತ್ಯನ ಸಂಹಾರದಿಂದ ಎಲ್ಲ ಜನರಿಗೂ ತುಂಬಾ ಸುಖವು ಉಂಟಾಗಿದೆ. ಈಗ ಎಲ್ಲರೂ ನಿನ್ನ ಶಾಂತಸ್ವರೂಪವನ್ನು ದರ್ಶಿಸಲು ದಾರಿ ನೋಡುತ್ತಿದ್ದಾರೆ. ಓ ನರಸಿಂಹ! ಭಯದಿಂದ ಮುಕ್ತರಾಗಲು ಭಕ್ತರು ನಿನ್ನ ಈ ರೂಪವನ್ನು ಸ್ಮರಿಸುವರು. ॥14॥
(ಶ್ಲೋಕ-15)
ಮೂಲಮ್
ನಾಹಂ ಬಿಭೇಮ್ಯಜಿತ ತೇತಿಭಯಾನಕಾಸ್ಯ-
ಜಿಹ್ವಾರ್ಕನೇತ್ರಭ್ರುಕುಟೀರಭಸೋಗ್ರದಂಷ್ಟ್ರಾತ್ ।
ಆಂತ್ರಸ್ರಜಃ ಕ್ಷತಜಕೇಸರಶಂಕುಕರ್ಣಾ-
ನ್ನಿರ್ಹ್ರಾದಭೀತದಿಗಿಭಾದರಿಭಿನ್ನಖಾಗ್ರಾತ್ ॥
ಅನುವಾದ
ಪರಮಾತ್ಮನೇ! ನಿನ್ನ ಮುಖವು ಅತಿಭಯಂಕರವಾಗಿದೆ. ನಾಲಿಗೆಯು ಭೀಕರವಾಗಿ ಹೊರಕ್ಕೆ ಚಾಚಿದೆ. ಕಣ್ಣುಗಳು ಸೂರ್ಯನಂತೆ ಹೊಳೆಯುತ್ತಿವೆ. ಹುಬ್ಬುಗಳು ಮೇಲಕ್ಕೆದ್ದಿವೆ. ಕೋರೆದಾಡೆಗಳು ಕೂರಾಗಿವೆ (ತೀಕ್ಷ್ಣವಾಗಿವೆ). ನೀನು ಧರಿಸಿರುವ ಕರುಳಮಾಲೆಗಳು, ರಕ್ತದಿಂದ ತೊಯ್ದಿರುವ ಕೇಸರಗಳು, ಮೇಲಕ್ಕೆ ನಿಮಿರಿನಿಂತಿರುವ ಕಿವಿಗಳು, ದಿಗ್ಗಜಗಳನ್ನು ಭಯ ಪಡಿಸುವ ಸಿಂಹ ಗರ್ಜನೆ ಮತ್ತು ಶತ್ರುಗಳನ್ನು ಸೀಳಿಹಾಕು ವಂತಹ ಉಗುರುಗಳು ಇವೆಲ್ಲ ಅತಿಭಯಂಕರವಾಗಿದ್ದರೂ ನಾನು ಇವುಗಳನ್ನು ಕಂಡು ಸ್ವಲ್ಪವೂ ಭಯಪಡುವುದಿಲ್ಲ. ॥15॥
(ಶ್ಲೋಕ-16)
ಮೂಲಮ್
ತ್ರಸ್ತೋಸ್ಮ್ಯಹಂ ಕೃಪಣವತ್ಸಲ ದುಃಸಹೋಗ್ರ-
ಸಂಸಾರಚಕ್ರಕದನಾದ್ಗ್ರಸತಾಂ ಪ್ರಣೀತಃ ।
ಬದ್ಧಃ ಸ್ವಕರ್ಮಭಿರುಶತ್ತಮ ತೇಂಘ್ರಿಮೂಲಂ
ಪ್ರೀತೋಪವರ್ಗಶರಣಂ ಹ್ವಯಸೇ ಕದಾ ನು ॥
ಅನುವಾದ
ದೀನಬಂಧುವೇ! ಆದರೆ ನಾನು ಈ ಅಸಹ್ಯವೂ, ಉಗ್ರವೂ ಆದ ಸಂಸಾರಚಕ್ರದಲ್ಲಿ ಬಿದ್ದು ಕಬ್ಬಿನಂತೆ ಅಗಿಯಲ್ಪಡುತ್ತಿರುವುದರಿಂದ ಕರ್ಮಪಾಶಗಳಿಗೆ ಸಿಲುಕಿ ಈ ಭಯಂಕರವಾದ ಜಂತುಗಳ ಮಧ್ಯದಲ್ಲಿ ಬಿದ್ದಿದ್ದೇನೆ. ನನ್ನ ಸ್ವಾಮಿಯೇ! ನೀನು ಪ್ರಸನ್ನನಾಗಿ ಸಮಸ್ತ ಜೀವಿಗಳಿಗೂ ಏಕೈಕ ರಕ್ಷಕವಾದ ಮೋಕ್ಷ ಸ್ವರೂಪವೇ ಆಗಿರುವ ನಿನ್ನ ಪಾದಾರವಿಂದಗಳಲ್ಲಿ ನನ್ನನ್ನು ಎಂದು ಕರೆಸಿ ಕೊಳ್ಳುವೆ? ॥16॥
(ಶ್ಲೋಕ-17)
ಮೂಲಮ್
ಯಸ್ಮಾತ್ಪ್ರಿಯಾಪ್ರಿಯವಿಯೋಗಸಯೋಗಜನ್ಮ-
ಶೋಕಾಗ್ನಿನಾ ಸಕಲಯೋನಿಷು ದಹ್ಯಮಾನಃ ।
ದುಃಖೌಷಧಂ ತದಪಿ ದುಃಖಮತದ್ಧಿಯಾಹಂ
ಭೂಮನ್ ಭ್ರಮಾಮಿ ವದ ಮೇ ತವ ದಾಸ್ಯಯೋಗಮ್ ॥
ಅನುವಾದ
ಪ್ರಭೋ! ಅನಂತ! ನಾನು ಇಷ್ಟರವರೆಗೆ ಹುಟ್ಟಿದ ಎಲ್ಲ ಯೋನಿಗಳಲ್ಲಿಯೂ ಇಷ್ಟ ಪದಾರ್ಥಗಳ ಅಗಲಿಕೆ, ಅನಿಷ್ಟ ಪದಾರ್ಥಗಳ ಸಂಯೋಗದಿಂದ ಉಂಟಾದ ಶೋಕದ ಬೆಂಕಿಯಲ್ಲಿ ಬೇಯುತ್ತಾ ಬಂದಿದ್ದೇನೆ. ಈ ದುಃಖಗಳನ್ನು ಹೋಗಲಾಡಿಸಲು ಬಳಸಿದ ಔಷಧಗಳೂ ದುಃಖರೂಪವೇ ಆಗಿವೆ. ಇದರ ಪರಿಹಾರಕ್ಕಾಗಿ ನಿನ್ನ ಆತ್ಯಂತಿಕ ದಾಸರಾದ ನಾರದಾದಿ ಮಹಾತ್ಮರ ಸಂಗವು ಸದಾಕಾಲ ನನಗೆ ದೊರಕುತ್ತಿರಲಿ. ಅದರಿಂದ ನಿನ್ನ ದಿವ್ಯಲೀಲೆಗಳ ಚರ್ಚೆ ನಡೆಯುತ್ತಾ, ಆತ್ಮ ಸ್ವರೂಪದ ಅರಿವು ಉಂಟಾದೀತು. ॥17॥
(ಶ್ಲೋಕ-18)
ಮೂಲಮ್
ಸೋಹಂ ಪ್ರಿಯಸ್ಯ ಸುಹೃದಃ ಪರದೇವತಾಯಾ
ಲೀಲಾಕಥಾಸ್ತವ ನೃಸಿಂಹ ವಿರಿಂಚಗೀತಾಃ ।
ಅಂಜಸ್ತಿತರ್ಮ್ಯನುಗೃಣನ್ಗುಣವಿಪ್ರಮುಕ್ತೋ
ದುರ್ಗಾಣಿ ತೇ ಪದಯುಗಾಲಯಹಂಸಸಂಗಃ ॥
ಅನುವಾದ
ಪ್ರಭೋ! ನೀನು ನಮಗೆ ಅತ್ಯಂತ ಪ್ರಿಯನಾದವನು. ಅಹೈತುಕ ಹಿತೈಷಿಯೂ, ಪರಮಮಿತ್ರನೂ ಆಗಿರುವೆ. ನೀನೇ ನಿಜವಾಗಿ ಎಲ್ಲರ ಪರಮಾರಾಧ್ಯನಾಗಿರುವ ಪರದೇವತೆಯು. ಬ್ರಹ್ಮದೇವರಿಂದ ಗಾನಮಾಡಲ್ಪಟ್ಟ ನಿನ್ನ ಲೀಲಾ-ಕಥೆಗಳನ್ನು ಹಾಡುತ್ತಾ ನಾನು ತುಂಬಾ ಸುಲಭವಾಗಿ ರಾಗವೇ ಮುಂತಾದ ಪ್ರಾಕೃತ ಗುಣಗಳಿಂದ ಮುಕ್ತನಾಗಿ ಈ ಸಂಸಾರದ ಸಂಕಷ್ಟಗಳಿಂದ ದಾಟಿ ಬಿಡುವೆನು. ಏಕೆಂದರೆ, ನಿನ್ನ ಚರಣಯುಗಳಗಳಲ್ಲಿ ವಾಸ ಮಾಡುವ ಭಕ್ತರಾದ ಪರಮಹಂಸ ಮಹಾತ್ಮರ ಸಂಗವಾದರೋ ನನಗೆ ದೊರೆಯುತ್ತಲೇ ಇರುವುದು. ॥18॥
(ಶ್ಲೋಕ-19)
ಮೂಲಮ್
ಬಾಲಸ್ಯ ನೇಹ ಶರಣಂ ಪಿತರೌ ನೃಸಿಂಹ
ನಾರ್ತಸ್ಯ ಚಾಗದಮುದನ್ವತಿ ಮಜ್ಜತೋ ನೌಃ ।
ತಪ್ತಸ್ಯ ತತ್ಪ್ರತಿವಿಧಿರ್ಯ ಇಹಾಂಜಸೇಷ್ಟ-
ಸ್ತಾವದ್ವಿಭೋ ತನುಭೃತಾಂ ತ್ವದುಪೇಕ್ಷಿತಾನಾಮ್ ॥
ಅನುವಾದ
ಭಗವಾನ್ ನರಸಿಂಹನೇ! ಈ ಲೋಕದಲ್ಲಿ ಜೀವಿಗಳ ದುಃಖಗಳನ್ನು ಹೋಗಲಾಡಿಸಲು ಮಾಡಲಾಗುವ ಉಪಾಯಗಳೆಲ್ಲವನ್ನು ನೀನು ಉಪೇಕ್ಷೆ ಮಾಡಿದರೆ ಕ್ಷಣ ಕಾಲವೂ ಉಳಿಯಲಾರವು. ನೀನು ಉಪೇಕ್ಷೆ ಮಾಡಿದರೆ ತಂದೆ-ತಾಯಿಗಳು ಬಾಲಕನನ್ನು ರಕ್ಷಿಸಲಾರರು, ಔಷಧಿಯು ರೋಗವನ್ನು ಗುಣಪಡಿಸಲಾರದು. ಕಡಲಿನಲ್ಲಿ ಮುಳುಗು ತ್ತಿರುವವನನ್ನು ಹಡಗು ಕಾಪಾಡಲಾರದು. ॥19॥
(ಶ್ಲೋಕ-20)
ಮೂಲಮ್
ಯಸ್ಮಿನ್ಯತೋ ಯರ್ಹಿ ಯೇನ ಚ ಯಸ್ಯ ಯಸ್ಮಾದ್
ಯಸ್ಮೈ ಯಥಾ ಯದುತ ಯಸ್ತ್ವಪರಃ ಪರೋ ವಾ ।
ಭಾವಃ ಕರೋತಿ ವಿಕರೋತಿ ಪೃಥಕ್ಸ್ವಭಾವಃ
ಸಂಚೋದಿತಸ್ತದಖಿಲಂ ಭವತಃ ಸ್ವರೂಪಮ್ ॥
ಅನುವಾದ
ಸತ್ತ್ವಾದಿ ಗುಣಗಳಿಂದ ಬೇರೆ-ಬೇರೆ ಸ್ವಭಾವವುಳ್ಳ ಶ್ರೇಷ್ಠ ಬ್ರಹ್ಮಾದಿಗಳು ಮತ್ತು ಕಾಲವೇ ಮುಂತಾದ ಕನಿಷ್ಟ ಕರ್ತೃ ಗಳಿದ್ದಾರೋ, ಅವರೆಲ್ಲರನ್ನೂ ಪ್ರೇರಿಸುವವನು ನೀನೇ ಆಗಿದ್ದೀಯೆ. ನಿನ್ನ ಪ್ರೇರಣೆಯಿಂದ ಅವರು ಯಾವುದನ್ನು ಆಧರಿಸಿ, ಯಾವ ಕಾರಣದಿಂದ, ಯಾವ ಉಪಕರಣಗಳಿಂದ, ಯಾವ ಸಮಯದಲ್ಲಿ, ಯಾವ ಸಾಧನಗಳಿಂದ, ಯಾವ ಸಹಾಯದಿಂದ, ಯಾವ ಪ್ರಯೋಜನಕ್ಕಾಗಿ, ಯಾವ ವಿಧಿಯಿಂದ, ಏನೇನನ್ನು ಸೃಷ್ಟಿಸುತ್ತಾರೋ ಅಥವಾ ವಿಕಾರಗೊಳಿಸುತ್ತಾರೋ ಅದೆಲ್ಲವೂ ನಿನ್ನ ಸ್ವರೂಪವೇ ಆಗಿದೆ. ॥20॥
(ಶ್ಲೋಕ-21)
ಮೂಲಮ್
ಮಾಯಾ ಮನಃ ಸೃಜತಿ ಕರ್ಮಮಯಂ ಬಲೀಯಃ
ಕಾಲೇನ ಚೋದಿತಗುಣಾನುಮತೇನ ಪುಂಸಃ ।
ಛಂದೋಮಯಂ ಯದಜಯಾರ್ಪಿತಷೋಡಶಾರಂ
ಸಂಸಾರಚಕ್ರಮಜ ಕೋತಿತರೇತ್ತ್ವದನ್ಯಃ ॥
ಅನುವಾದ
ಓ ಜನ್ಮರಹಿತನಾದ ಪ್ರಭುವೇ! ಪುರುಷನ ಅನುಮತಿಯಂತೆ ಕಾಲನ ಮೂಲಕ ಗುಣಗಳಲ್ಲಿ ಕ್ಷೋಭೆಯು ಉಂಟಾದಾಗ ಮಾಯೆಯು ಮನಃಪ್ರಧಾನವಾದ ಲಿಂಗ ಶರೀರವನ್ನು ನಿರ್ಮಾಣ ಮಾಡುತ್ತಾಳೆ. ಈ ಲಿಂಗಶರೀರವು ಬಲಶಾಲಿಯೂ, ಕರ್ಮಮಯವೂ, ಅನೇಕ ನಾಮ-ರೂಪಗಳಲ್ಲಿ ಆಸಕ್ತವೂ, ಛಂದೋಮಯವೂ ಆಗಿದೆ. ಇದೇ ಅವಿದ್ಯೆಯಿಂದ ಕಲ್ಪಿತ ಮನಸ್ಸು, ಹತ್ತು ಇಂದ್ರಿಯಗಳು, ಐದು ತನ್ಮಾತ್ರೆಗಳು ಈ ಹದಿನಾರು ವಿಕಾರ ರೂಪವಾದ ಅರೆಪಟ್ಟಿಗಳಿಂದ ಕೂಡಿದ ಸಂಸಾರಚಕ್ರವಾಗಿದೆ. ನಿನ್ನಿಂದ ಬೇರೆಯಾಗಿದ್ದು ಈ ಮನರೂಪ ಸಂಸಾರಚಕ್ರವನ್ನು ಯಾರು ತಾನೇ ದಾಟಿಹೋದಾನು? ॥21॥
(ಶ್ಲೋಕ-22)
ಮೂಲಮ್
ಸ ತ್ವಂ ಹಿ ನಿತ್ಯವಿಜಿತಾತ್ಮಗುಣಃ ಸ್ವಧಾಮ್ನಾ
ಕಾಲೋ ವಶೀಕೃತವಿಸೃಜ್ಯ ವಿಸರ್ಗಶಕ್ತಿಃ ।
ಚಕ್ರೇ ವಿಸೃಷ್ಟ ಮಜಯೇಶ್ವರ ಷೋಡಶಾರೇ
ನಿಷ್ಪೀಡ್ಯಮಾನಮುಪಕರ್ಷ ವಿಭೋ ಪ್ರಪನ್ನಮ್ ॥
ಅನುವಾದ
ಸರ್ವ ಶಕ್ತಿಯುಳ್ಳ ಪ್ರಭೋ! ಮಾಯೆಯು ಈ ಹದಿನಾರು ಅರೆಗಳುಳ್ಳ ಸಂಸಾರಚಕ್ರದಲ್ಲಿ ನನ್ನನ್ನು ಕಬ್ಬಿನಂತೆ ಹಿಂಡುತ್ತಿದೆ. ನೀನು ನಿನ್ನ ಚೈತನ್ಯ ಶಕ್ತಿಯಿಂದ ಬುದ್ಧಿಯು ಸಮಸ್ತ ಗುಣಗಳನ್ನು ಸದಾ ಗೆದ್ದವನಾಗಿ, ಕಾಲರೂಪದಿಂದ ಸಾಧ್ಯ-ಸಾಧನಗಳೆಲ್ಲವನ್ನೂ ಸ್ವಾಧೀನದಲ್ಲಿಟ್ಟುಕೊಂಡಿರುವವನು. ಇಂತಹ ನಿನ್ನನ್ನು ನಾನು ಶರಣು ಹೊಂದಿರುವೆನು. ನನ್ನನ್ನು ಈ ಮಾಯಾಚಕ್ರದಿಂದ ದಾಟಿಸಿ ನಿನ್ನ ಸನ್ನಿಧಿಗೆ ಸೆಳೆದುಕೋ ಸ್ವಾಮಿ! ॥22॥
(ಶ್ಲೋಕ-23)
ಮೂಲಮ್
ದೃಷ್ಟಾ ಮಯಾ ದಿವಿ ವಿಭೋಖಿಲಧಿಷ್ಣ್ಯಪಾನಾ-
ಮಾಯುಃ ಶ್ರೀಯೋ ವಿಭವ ಇಚ್ಛತಿ ಯಾನ್ಜನೋಯಮ್ ।
ಯೇಸ್ಮತ್ಪಿತುಃ ಕುಪಿತಹಾಸವಿಜೃಂಭಿತಭ್ರೂ-
ವಿಸ್ಫೂರ್ಜಿತೇನ ಲುಲಿತಾಃ ಸ ತು ತೇ ನಿರಸ್ತಃ ॥
ಅನುವಾದ
ಓ ಭಗವಂತಾ! ಸಂಸಾರದ ಜನರು ಯಾವುದನ್ನು ಪಡೆಯಲು ಹಾತೊರೆಯುತ್ತಿರುತ್ತಾರೋ ಆ ಸ್ವರ್ಗದಲ್ಲಿ ಸಿಗಬಹುದಾದ ಸಮಸ್ತ ಲೋಕಪಾಲರ ಆಯುಸ್ಸು, ಸಂಪತ್ತು, ಐಶ್ವರ್ಯ ಎಲ್ಲವನ್ನೂ ನಾನು ನೋಡಿಯಾಯಿತು. ನನ್ನ ತಂದೆಯು ಸ್ವಲ್ಪ ಕೋಪಗೊಂಡು ನಕ್ಕಾಗ, ಆತನು ಹುಬ್ಬುಗಳನ್ನು ಸ್ವಲ್ಪ ಓರೆಯಾಗಿಸಿದರೆ ಅವರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಚದುರಿಹೋಗುತ್ತಿದ್ದರು. ಅಂತಹ ಮಹಾಪರಾಕ್ರಮಶಾಲಿಯಾದ ನನ್ನ ತಂದೆಯನ್ನೇ ನೀನು ಸಂಹಾರ ಮಾಡಿಬಿಟ್ಟೆ . ॥23॥
(ಶ್ಲೋಕ-24)
ಮೂಲಮ್
ತಸ್ಮಾದಮೂಸ್ತನುಭೃತಾಮಹಮಾಶಿಷೋಜ್ಞ
ಆಯುಃ ಶ್ರಿಯಂ ವಿಭವಮೈಂದ್ರಿಯಮಾವಿರಿಂಚಾತ್ ।
ನೇಚ್ಛಾಮಿ ತೇ ವಿಲುಲಿತಾನುರುವಿಕ್ರಮೇಣ
ಕಾಲಾತ್ಮನೋಪನಯ ಮಾಂ ನಿಜಭೃತ್ಯಪಾರ್ಶ್ವಮ್ ॥
ಅನುವಾದ
ಪ್ರಪಂಚದ ಜನರು ಬಯಸುವಂತಹ ಬ್ರಹ್ಮಲೋಕದವರೆಗಿನ ಆಯುಸ್ಸು, ಸಂಪತ್ತು, ಐಶ್ವರ್ಯ, ಇಂದ್ರಿಯಗಳ ಭೋಗ ಇವು ಯಾವುದನ್ನೂ ನಾನು ಬಯಸುವುದಿಲ್ಲ. ಏಕೆಂದರೆ, ನೀನು ಮಹಾಬಲ ಶಾಲಿಯಾದ ಕಾಲನ ರೂಪವನ್ನು ಧರಿಸಿ ಅವೆಲ್ಲವನ್ನೂ ಕಬಳಿಸುವೆ ಎಂಬುದು ನನಗೆ ಗೊತ್ತು. ಅದಕ್ಕಾಗಿ ನಿನ್ನ ಸೇವಕರ ಸನ್ನಿಧಿಗೆ ನನ್ನನ್ನು ಕರೆದುಕೊಂಡು ಹೋಗು. ॥24॥
(ಶ್ಲೋಕ-25)
ಮೂಲಮ್
ಕುತ್ರಾಶಿಷಃ ಶ್ರುತಿಸುಖಾ ಮೃಗತೃಷ್ಣಿರೂಪಾಃ
ಕ್ವೇದಂ ಕಲೇವರಮಶೇಷರುಜಾಂ ವಿರೋಹಃ ।
ನಿರ್ವಿದ್ಯತೇ ನ ತು ಜನೋ ಯದಪೀತಿ ವಿದ್ವಾನ್
ಕಾಮಾನಲಂ ಮಧುಲವೈಃ ಶಮಯನ್ ದುರಾಪೈಃ ॥
ಅನುವಾದ
ವಿಷಯ ಸುಖಭೋಗಗಳ ಮಾತುಗಳು ಕೇಳುವುದಕ್ಕೇನೋ ಚೆನ್ನಾಗಿರುತ್ತವೆ. ಆದರೆ ವಾಸ್ತವವಾಗಿ ಅವು ಬಿಸಿಲ್ಗುದುರೆಯ ನೀರಿನಂತೆ ಆಗಿವೆ. ಅವುಗಳನ್ನು ಭೋಗಿಸಲು ಸಾಧನವಾದ ಶರೀರವಾದರೋ ಎಲ್ಲ ರೋಗಗಳಿಗೆ ನೆಲೆವೀಡಾಗಿದೆ. ಇವೆರಡೂ ಕ್ಷಣಭಂಗುರವೂ ಅಸಾರವೂ ಎಂದು ತಿಳಿದಿದ್ದರೂ ಕೂಡ ಮನುಷ್ಯನಿಗೆ ಇವುಗಳಲ್ಲಿ ವೈರಾಗ್ಯ ಉಂಟಾಗುವುದಿಲ್ಲ. ಆತನು ಅತಿಕಷ್ಟದಿಂದ ದೊರೆಯುವ ವಿಷಯಭೋಗಗಳ ಸಣ್ಣ-ಪುಟ್ಟ ಸಿಹಿಜೇನಿನ ತೊಟ್ಟುಗಳಿಂದ ತನ್ನ ಕಾಮವೆಂಬ ಅಗ್ನಿಯನ್ನು ಆರಿಸಲು ಪ್ರಯತ್ನಿಸುತ್ತಿದ್ದಾನೆ. ॥25॥
(ಶ್ಲೋಕ-26)
ಮೂಲಮ್
ಕ್ವಾಹಂ ರಜಃಪ್ರಭವ ಈಶ ತಮೋಧಿಕೇಸ್ಮಿನ್
ಜಾತಃ ಸುರೇತರಕುಲೇ ಕ್ವ ತವಾನುಕಂಪಾ ।
ನ ಬ್ರಹ್ಮಣೋ ನ ತು ಭವಸ್ಯ ನ ವೈ ರಮಾಯಾ
ಯನ್ಮೇರ್ಪಿತಃ ಶಿರಸಿ ಪದ್ಮಕರಃ ಪ್ರಸಾದಃ ॥
ಅನುವಾದ
ಪ್ರಭೋ! ತಮೋಗುಣೀ ಅಸುರ ವಂಶದಲ್ಲಿ ರಜೋಗುಣದಿಂದ ಕೂಡಿ ಜನಿಸಿದ ನಾನೆಲ್ಲಿ? ನಿನ್ನ ಪರಮಶ್ರೇಷ್ಠವಾದ ಕೃಪೆಯೆಲ್ಲಿ? ಎಂತಹ ಧನ್ಯನು ನಾನು! ಬ್ರಹ್ಮದೇವರು, ಶಂಕರಪ್ರಭು, ಲಕ್ಷ್ಮೀ ದೇವಿ ಇವರ ಶಿರಸ್ಸಿನ ಮೇಲೆ ಇರಿಸದೇ ಇದ್ದ ಸಕಲ ಸಂತಾಪಹರವಾದ ನಿನ್ನ ಅನುಗ್ರಹ ಹಸ್ತಪದ್ಮವನ್ನು ನನ್ನ ತಲೆಯ ಮೇಲೆ ಇರಿಸಿದೆಯಲ್ಲಾ! ॥26॥
(ಶ್ಲೋಕ-27)
ಮೂಲಮ್
ನೈಷಾ ಪರಾವರಮತಿರ್ಭವತೋ ನನು ಸ್ಯಾ-
ಜ್ಜಂತೋರ್ಯಥಾತ್ಮಸುಹೃದೋ ಜಗತಸ್ತಥಾಪಿ ।
ಸಂಸೇವಯಾ ಸುರತರೋರಿವ ತೇ ಪ್ರಸಾದಃ
ಸೇವಾನುರೂಪಮುದಯೋ ನ ಪರಾವರತ್ವಮ್ ॥
ಅನುವಾದ
ನೀನು ಎಲ್ಲರಿಗೂ ಆತ್ಮನಾಗಿ ಎಲ್ಲರಿಗೂ ನಿಷ್ಕಾರಣ ಪ್ರೇಮಿ ಯಾಗಿದ್ದೀಯೆ. ಆದುದರಿಂದ ಸಂಸಾರಿ ಜೀವಿಗಳಲ್ಲಿರು ವಂತೆ ನಿನ್ನಲ್ಲಿ ಮೇಲು-ಕೀಳು ಎಂಬ ಭೇದಭಾವನೆಯಿಲ್ಲ. ಆದರೂ ನೀನು ಕಲ್ಪವೃಕ್ಷದಂತೆ ಸೇವೆ ಮಾಡುವುದರಲ್ಲಿ ತಾನೇ ಕರುಣೆ-ಅನುಗ್ರಹವನ್ನು ಹರಿಸುವೆ. ತಮ್ಮ-ತಮ್ಮ ಸೇವೆಗೆ ಅನುಗುಣವಾಗಿ ಅವರು ನಿನ್ನ ಅನುಗ್ರಹವನ್ನು ಸಂಪಾದಿಸಿರುವರು. ಆ ಅನುಗ್ರಹಕ್ಕೆ ಜಾತಿ, ಕುಲ, ವಿದ್ಯೆ ಮುಂತಾದವುಗಳಿಂದ ಬರುವ ಮೇಲು-ಕೀಳು ಭಾವನೆಗಳು ಕಾರಣವಾಗುವುದಿಲ್ಲ. ॥27॥
(ಶ್ಲೋಕ-28)
ಮೂಲಮ್
ಏವಂ ಜನಂ ನಿಪತಿತಂ ಪ್ರಭವಾಹಿಕೂಪೇ
ಕಾಮಾಭಿಕಾಮಮನು ಯಃ ಪ್ರಪತನ್ಪ್ರಸಂಗಾತ್ ।
ಕೃತ್ವಾತ್ಮಸಾತ್ಸುರರ್ಷಿಣಾ ಭಗವನ್ಗೃಹೀತಃ
ಸೋಹಂ ಕಥಂ ನು ವಿಸೃಜೇ ತವ ಭೃತ್ಯಸೇವಾಮ್ ॥
ಅನುವಾದ
ಓ ಭಗವಂತನೇ! ಈ ಸಂಸಾರವೆಂಬುದು ಒಂದು ಕತ್ತಲೆ ತುಂಬಿದ ಬಾವಿಯಾಗಿದೆ. ಇದರಲ್ಲಿ ಕಾಲರೂಪೀ ಸರ್ಪವು ಕಚ್ಚಲು ಸದಾ ಸಿದ್ಧವಾಗಿರುವುದು. ವಿಷಯಭೋಗಗಳನ್ನು ಬಯಸುವ ಜನರು ಇದರಲ್ಲೇ ಬಿದ್ದಿರುವರು. ನಾನೂ ಕೂಡ ಪ್ರಸಂಗವಶಾತ್ ಅವರ ಹಿಂದೆ ಅದರಲ್ಲೇ ಬೀಳುವವ ನಾಗಿದ್ದೆ. ಆದರೆ ಭಗವಂತಾ! ದೇವಋಷಿ ನಾರದರು ನನ್ನನ್ನು ತನ್ನವನಾಗಿಸಿಕೊಂಡು ಅದರಿಂದ ರಕ್ಷಿಸಿದರು. ಹೀಗಿರುವಾಗ ನಾನು ನಿನ್ನ ಭಕ್ತಜನರ ಸೇವೆಯನ್ನು ಹೇಗೆ ತಾನೇ ಬಿಟ್ಟೇನು? ॥28॥
(ಶ್ಲೋಕ-29)
ಮೂಲಮ್
ಮತ್ಪ್ರಾಣರಕ್ಷಣಮನಂತ ಪಿತುರ್ವಧಶ್ಚ
ಮನ್ಯೇ ಸ್ವಭೃತ್ಯಋಷಿವಾಕ್ಯಮೃತಂ ವಿಧಾತುಮ್ ।
ಖಡ್ಗಂ ಪ್ರಗೃಹ್ಯ ಯದವೋಚದಸದ್ವಿಧಿತ್ಸು-
ಸ್ತ್ವಾಮೀಶ್ವರೋ ಮದಪರೋವತು ಕಂ ಹರಾಮಿ ॥
ಅನುವಾದ
ಓ ಅನಂತಪ್ರಭುವೇ! ನನ್ನ ತಂದೆಯು ಅಸತ್ಕಾರ್ಯವನ್ನು ಮಾಡುವುದಕ್ಕಾಗಿ ನಡುಕಟ್ಟಿ ಕೈಯಲ್ಲಿ ಖಡ್ಗವನ್ನು ಧರಿಸಿಕೊಂಡು ‘ಎಲವೋ! ನನ್ನನ್ನು ಬಿಟ್ಟು ಬೇರೆ ದೇವರು ಇದ್ದರೆ ನಿನ್ನನ್ನು ಅವನು ಕಾಪಾಡಲೀ. ನಾನು ನಿನ್ನ ತಲೆಯನ್ನು ಕೊಚ್ಚಿಹಾಕುತ್ತೇನೆ’ ಎಂದು ಹೇಳಿದಾಗ, ನೀನು ನನ್ನ ಪ್ರಾಣಗಳನ್ನು ರಕ್ಷಿಸಿ, ನನ್ನ ತಂದೆಯನ್ನು ವಧಿಸಿದೆ. ನೀನು ನಿನ್ನ ಭೃತ್ಯರಾದ ಸನಕಾದಿ ಮಹರ್ಷಿಗಳ ಮಾತನ್ನು ಈಡೇರಿಸಿ ಸತ್ಯಗೊಳಿಸುವುದಕ್ಕಾಗಿಯೇ ಹಾಗೆ ಮಾಡಿದೆ ಎಂದು ಭಾವಿಸುತ್ತೇನೆ.॥29॥
(ಶ್ಲೋಕ-30)
ಮೂಲಮ್
ಏಕಸ್ತ್ವಮೇವ ಜಗದೇತದಮುಷ್ಯ ಯತ್ತ್ವ-
ಮಾದ್ಯಂತಯೋಃ ಪೃಥಗವಸ್ಯಸಿ ಮಧ್ಯತಶ್ಚ ।
ಸೃಷ್ಟ್ವಾ ಗುಣವ್ಯತಿಕರಂ ನಿಜಮಾಯಯೇದಂ
ನಾನೇವ ತೈರವಸಿತಸ್ತದನುಪ್ರವಿಷ್ಟಃ ॥
ಅನುವಾದ
ಓ ಭಗವಂತನೇ! ಈ ಸಂಪೂರ್ಣ ಜಗತ್ತೆಲ್ಲವೂ ನೀನೊಬ್ಬನೇ ಆಗಿದ್ದೀಯೆ. ಎಲ್ಲವೂ ನಿನ್ನ ವಿಸ್ತಾರವೇ ಆಗಿದೆ. ಇದರ ಆದಿಯಲ್ಲಿಯೂ, ಅಂತ್ಯದಲ್ಲಿಯೂ, ಮಧ್ಯ ದಲ್ಲಿಯೂ ನೀನೇ ಇರುತ್ತಿದ್ದೀಯೆ. ನಿನ್ನ ಮಾಯಾಶಕ್ತಿಯಿಂದ ಈ ತ್ರಿಗುಣಾತ್ಮಕವಾದ ಜಗತ್ತನ್ನು ಸೃಷ್ಟಿಮಾಡಿ ಅದರ ಒಳಹೊಕ್ಕು ಒಬ್ಬನೇ ಆಗಿದ್ದರೂ ನಾನಾ ರೂಪಗಳಲ್ಲಿರುವಂತೇ ತೋರುತ್ತಿರುವೆ. ॥30॥
(ಶ್ಲೋಕ-31)
ಮೂಲಮ್
ತ್ವಂ ವಾ ಇದಂ ಸದಸದೀಶ ಭವಾಂಸ್ತತೋನ್ಯೋ
ಮಾಯಾ ಯದಾತ್ಮಪರಬುದ್ಧಿರಿಯಂ ಹ್ಯಪಾರ್ಥಾ ।
ಯದ್ಯಸ್ಯ ಜನ್ಮ ನಿಧನಂ ಸ್ಥಿತಿರೀಕ್ಷಣಂ ಚ
ತದ್ವೈ ತದೇವ ವಸುಕಾಲವದಷ್ಟಿತರ್ವೋಃ ॥
ಅನುವಾದ
ಭಗವಂತಾ! ಕಾರ್ಯ-ಕಾರಣ ರೂಪದಿಂದ ಕಂಡುಬರುವುದೆಲ್ಲವೂ ನೀನೇ ಆಗಿರುವೆ ಮತ್ತು ಇದಕ್ಕಿಂತ ಬೇರೆಯಾಗಿರುವ ಪರತತ್ತ್ವವೂ ನೀನೇ ಆಗಿರುವೆ. ತಾನು ಬೇರೆಯವನು ಎಂಬ ಭೇದಭಾವವೂ ಅರ್ಥಹೀನ ಶಬ್ದಗಳ ಮಾಯೆಯೇ ಆಗಿದೆ. ಏಕೆಂದರೆ, ಯಾರಿಂದ, ಯಾವುದಕ್ಕೆ ಜನ್ಮ, ಸ್ಥಿತಿ, ಲಯ ಮತ್ತು ಪ್ರಕಾಶಗಳು ಉಂಟಾಗುತ್ತವೋ, ಅದು ಅದರ ಸ್ವರೂಪವೇ ಆಗಿರುತ್ತದೆ. ಬೀಜ ಮತ್ತು ವೃಕ್ಷ ಕಾರ್ಯ ಹಾಗೂ ಕಾರಣ ದೃಷ್ಟಿಯಿಂದ ಭಿನ್ನವಾಗಿದ್ದರೂ ಗಂಧ, ತನ್ಮಾತ್ರೆಯ ದೃಷ್ಟಿಯಿಂದ ಎರಡೂ ಒಂದೇ ಆಗಿದೆ. ॥31॥
(ಶ್ಲೋಕ-32)
ಮೂಲಮ್
ನ್ಯಸ್ಯೇದಮಾತ್ಮನಿ ಜಗದ್ವಿಲಯಾಂಬುಮಧ್ಯೇ
ಶೇಷೇತ್ಮನಾ ನಿಜಸುಖಾನುಭವೋ ನಿರೀಹಃ ।
ಯೋಗೇನ ಮೀಲಿತದೃಗಾತ್ಮನಿಪೀತನಿದ್ರ-
ಸ್ತುರ್ಯೇ ಸ್ಥಿತೋ ನ ತು ತಮೋ ನ ಗುಣಾಂಶ್ಚ ಯುಂಕ್ಷೇ ॥
ಅನುವಾದ
ಓ ಭಗವಂತನೇ! ನೀನು ಈ ಇಡೀ ವಿಶ್ವವನ್ನು ತನ್ನಲ್ಲಿಯೇ ಸೇರಿಸಿಕೊಂಡು ಆತ್ಮಸುಖವನ್ನು ಅನುಭವಿಸುತ್ತಾ ನಿಷ್ಕ್ರಿಯನಾಗಿ ಪ್ರಳಯಜಲದಲ್ಲಿ ಪವಡಿಸುವೆ. ಆಗ ತನ್ನ ಸ್ವಯಂಸಿದ್ಧ ಯೋಗದಿಂದ ಬಾಹ್ಯದೃಷ್ಟಿಯನ್ನು ಮುಚ್ಚಿ ನೀನು ನಿನ್ನ ಸ್ವರೂಪಪ್ರಕಾಶದಲ್ಲಿ ನಿದ್ರೆಯನ್ನು ಲಯಗೊಳಿಸಿ, ತುರೀಯವಾದ ಪರಬ್ರಹ್ಮಪದದಲ್ಲಿ ನೆಲೆಸಿರುವೆ. ಆ ಸಮಯದಲ್ಲಿ ನೀನು ತಮೋಗುಣದಿಂದ ಕೂಡಿರುವುದಿಲ್ಲ ಹಾಗೂ ವಿಷಯಗಳನ್ನು ಸ್ವೀಕರಿಸುವುದಿಲ್ಲ. ॥32॥
(ಶ್ಲೋಕ-33)
ಮೂಲಮ್
ತಸ್ಯೈವ ತೇ ವಪುರಿದಂ ನಿಜಕಾಲಶಕ್ತ್ಯಾ
ಸಂಚೋದಿತಪ್ರಕೃತಿಧರ್ಮಣ ಆತ್ಮಗೂಢಮ್ ।
ಅಂಭಸ್ಯನಂತಶಯನಾದ್ವಿರಮತ್ಸಮಾಧೇ-
ರ್ನಾಭೇರಭೂತ್ಸ್ವ ಕಣಿಕಾವಟವನ್ಮಹಾಬ್ಜಮ್ ॥
ಅನುವಾದ
ನೀನು ನಿನ್ನ ಕಾಲ ಶಕ್ತಿಯಿಂದ ಪ್ರಕೃತಿಯ ಗುಣಗಳನ್ನು ಪ್ರೇರಿಸುವುದರಿಂದ ಈ ಬ್ರಹ್ಮಾಂಡವೂ ನಿನ್ನ ಶರೀರವೇ ಆಗಿದೆ. ಸೃಷ್ಟಿಗೆ ಮೊದಲು ಇದು ನಿನ್ನಲ್ಲಿಯೇ ಲೀನವಾಗಿತ್ತು. ಪ್ರಳಯ ಕಾಲದ ಜಲದಲ್ಲಿ ಶೇಷಶಯ್ಯೆಯಲ್ಲಿ ಪವಡಿಸಿದ ನೀನು ಯೋಗನಿದ್ರೆಯ ಸಮಾಧಿಯನ್ನು ತ್ಯಜಿಸಿದಾಗ ಆಲದ ಬೀಜದಿಂದ ವಿಶಾಲವಾದ ಆಲದ ಮರವು ಹೊರಬರುವಂತೆ ನಿನ್ನ ನಾಭಿಯಿಂದ ಬ್ರಹ್ಮಾಂಡ ಕಮಲವು ಉತ್ಪನ್ನವಾಯಿತು.॥33॥
(ಶ್ಲೋಕ-34)
ಮೂಲಮ್
ತತ್ಸಂಭವಃ ಕವಿರತೋನ್ಯದಪಶ್ಯಮಾನ-
ಸ್ತ್ವಾಂ ಬೀಜಮಾತ್ಮನಿ ತತಂ ಸ್ವಬಹಿರ್ವಿಚಿಂತ್ಯ ।
ನಾವಿಂದದಬ್ದಶತಮಪ್ಸು ನಿಮಜ್ಜಮಾನೋ
ಜಾತೇಂಕುರೇ ಕಥಮು ಹೋಪಲಭೇತ ಬೀಜಮ್ ॥
ಅನುವಾದ
ಅದರಲ್ಲಿ ಸೂಕ್ಷ್ಮದರ್ಶಿಯಾದ ಬ್ರಹ್ಮದೇವರು ಪ್ರಕಟಗೊಂಡರು. ಅವರಿಗೆ ಕಮಲವಲ್ಲದೆ ಬೇರೆ ಏನೂ ಕಾಣಿಸದಿದ್ದಾಗ ತನ್ನಲ್ಲೇ ಬೀಜರೂಪದಿಂದ ವ್ಯಾಪ್ತನಾದ ನಿನ್ನನ್ನು ತಿಳಿಯದೇ ಹೋದರು. ನಿನ್ನನ್ನು ತಮ್ಮಿಂದ ಹೊರಗಿನವನು ಎಂದು ಭಾವಿಸಿ ನೀರಿನೊಳಗೆ ಮುಳುಗಿ ನೂರು ವರ್ಷಗಳವರೆಗೆ ಹುಡುಕುತ್ತಲೇ ಇದ್ದರು. ಆದರೆ ಅಲ್ಲಿ ಅವರಿಗೆ ಏನೂ ಸಿಗಲಿಲ್ಲ. ಹೇಗೆ ತಾನೇ ಸಿಕ್ಕೀತು? ಬೀಜವು ಮೊಳೆತು ಬೆಳೆದ ಬಳಿಕ ಅದರಲ್ಲಿ ವ್ಯಾಪಿಸಿ ಕೊಂಡಿರುವ ಬೀಜವನ್ನು ಯಾರಾದರೂ ಹೊರಗೆ ಬೇರೆಯಾಗಿ ಹೇಗೆ ನೋಡಬಲ್ಲರು? ॥34॥
(ಶ್ಲೋಕ-35)
ಮೂಲಮ್
ಸ ತ್ವಾತ್ಮಯೋನಿರತಿವಿಸ್ಮಿತ ಆಸ್ಥಿ ತೋಬ್ಜಂ
ಕಾಲೇನ ತೀವ್ರತಪಸಾ ಪರಿಶುದ್ಧಭಾವಃ ।
ತ್ವಾಮಾತ್ಮನೀಶ ಭುವಿ ಗಂಧಮಿವಾತಿಸೂಕ್ಷ್ಮಂ
ಭೂತೇಂದ್ರಿಯಾಶಯಮಯೇ ವಿತತಂ ದದರ್ಶ ॥
ಅನುವಾದ
ಬ್ರಹ್ಮದೇವರಿಗೆ ತುಂಬಾ ಆಶ್ಚರ್ಯವಾಯಿತು. ಅವರು ಸೋತು ಹೋಗಿ ಕಮಲದ ಮೇಲೆ ಬಂದು ಕುಳಿತರು. ಬಹಳ ಕಾಲ ಕಳೆದ ಬಳಿಕ ತೀವ್ರವಾದ ತಪಸ್ಸನ್ನು ಮಾಡಿದ್ದರಿಂದ ಅವರ ಹೃದಯವು ಪರಿಶುದ್ಧವಾದಾಗ ಅವರಿಗೆ ಭೂತ, ಇಂದ್ರಿಯಗಳು ಮತ್ತು ಅಂತಃ ಕರಣರೂಪವಾದ ತನ್ನ ಶರೀರದಲ್ಲಿಯೇ ಹಾಸು ಹೊಕ್ಕಾಗಿ ತುಂಬಿಕೊಂಡಿರುವ ನಿನ್ನ ಸೂಕ್ಷ್ಮರೂಪದ ಸಾಕ್ಷಾತ್ಕಾರವಾಯಿತು. ಪೃಥಿವಿಯಲ್ಲಿ ವ್ಯಾಪಿಸಿಕೊಂಡಿರುವ ಅದರ ಅತಿಸೂಕ್ಷ್ಮ ತನ್ಮಾತ್ರೆಯಾದ ಗಂಧವನ್ನು ಅರಿಯುವಂತೆ ನಿನ್ನನ್ನು ಅರಿತುಕೊಂಡರು. ॥35॥
(ಶ್ಲೋಕ-36)
ಮೂಲಮ್
ಏವಂ ಸಹಸ್ರವದನಾಂಘ್ರಿಶಿರಃಕರೋರು-
ನಾಸಾಸ್ಯಕರ್ಣನಯನಾಭರಣಾಯುಧಾಢ್ಯಮ್ ।
ಮಾಯಾಮಯಂ ಸದುಪಲಕ್ಷಿತಸಂನಿವೇಶಂ
ದೃಷ್ಟ್ವಾ ಮಹಾಪುರುಷಮಾಪ ಮುದಂ ವಿರಿಂಚಃ ॥
ಅನುವಾದ
ನಿನ್ನ ಲೀಲಾಮಯಮೂರ್ತಿಯಾದ ವಿರಾಟ್ಪುರುಷ ರೂಪದ ಸಾಕ್ಷಾತ್ಕಾರ ಅವರಿಗಾಯಿತು. ಸಾವಿರಾರು ಮುಖಗಳು, ಸಾವಿರಾರು ತಲೆಗಳು, ಸಾವಿರಾರು ಕಿವಿ-ಕಣ್ಣು-ಮೂಗು-ಬಾಯಿಗಳು, ಸಾವಿರಾರು ಕೈ-ಕಾಲುಗಳು ಮತ್ತು ಸಾವಿರಾರು ಭೂಷಣಾಯುಧಗಳಿಂದ ಕೂಡಿ ಹದಿನಾಲ್ಕು ಲೋಕಗಳನ್ನು ತನ್ನ ಅಂಗಾಂಗಗಳ ರೂಪದಲ್ಲಿ ಹೊಂದಿದ್ದ ಅದ್ಭುತ ರೂಪವದು. ಮಹಾಪುರುಷನಾದ ನಿನ್ನ ಆ ರೂಪವನ್ನು ನೋಡಿ ಬ್ರಹ್ಮದೇವರಿಗೆ ತುಂಬಾ ಆನಂದವುಂಟಾಯಿತು. ॥36॥
(ಶ್ಲೋಕ-37)
ಮೂಲಮ್
ತಸ್ಮೈ ಭವಾನ್ಹಯಶಿರಸ್ತನುವಂ ಚ ಬಿಭ್ರ-
ದ್ವೇದದ್ರುಹಾವತಿಬಲೌ ಮಧುಕೈಟಭಾಖ್ಯೌ ।
ಹತ್ವಾನಯಚ್ಛ್ರುತಿಗಣಾಂಸ್ತು ರಜಸ್ತಮಶ್ಚ
ಸತ್ತ್ವಂ ತವ ಪ್ರಿಯತಮಾಂ ತನುಮಾಮನಂತಿ ॥
ಅನುವಾದ
ರಜೋಗುಣ ಮತ್ತು ತಮೋ ಗುಣರೂಪಿಗಳಾದ ಮಧು, ಕೈಟಭರೆಂಬ ಇಬ್ಬರು ದೈತ್ಯರು ಭಾರೀ ಬಲಶಾಲಿ ಗಳಾಗಿದ್ದರು. ಅವರು ವೇದಗಳನ್ನು ಕದ್ದುಕೊಂಡು ಹೋದಾಗ ನೀನು ಹಯಗ್ರೀವ ಅವತಾರವನ್ನು ತಾಳಿ, ಅವರಿಬ್ಬರನ್ನೂ ಕೊಂದು ಸತ್ತ್ವಗುಣರೂಪವಾದ ಶ್ರುತಿ ಗಳನ್ನು (ವೇದಗಳನ್ನು) ಬ್ರಹ್ಮದೇವರಿಗೆ ಹಿಂದಿರುಗಿಸಿ ಕೊಟ್ಟೆ. ಆ ಸತ್ತ್ವಗುಣವೇ ನಿನ್ನ ಅತ್ಯಂತ ಪ್ರಿಯಶರೀರವೆಂದು ಮಹಾತ್ಮರು ಹೀಗೆ ವರ್ಣಿಸುತ್ತಾರೆ. ॥37॥
(ಶ್ಲೋಕ-38)
ಮೂಲಮ್
ಇತ್ಥಂ ನೃತಿರ್ಯಗೃಷಿದೇವಝಷಾವತಾರೈ-
ರ್ಲೋಕಾನ್ವಿಭಾವಯಸಿ ಹಂಸಿ ಜಗತ್ಪ್ರತೀಪಾನ್ ।
ಧರ್ಮಂ ಮಹಾಪುರುಷ ಪಾಸಿ ಯುಗಾನುವೃತ್ತಂ
ಛನ್ನಃ ಕಲೌ ಯದಭವಸಿಯುಗೋಥ ಸ ತ್ವಮ್ ॥
ಅನುವಾದ
ಎಲೈ ಮಹಾಪುರುಷನೇ! ಹೀಗೆ ನೀನು ಮನುಷ್ಯ, ಪಶು-ಪಕ್ಷಿ, ಋಷಿ, ದೇವತೆ ಮತ್ತು ಮತ್ಸ್ಯ ಮುಂತಾದ ಅನೇಕ ಅವತಾರಗಳನ್ನು ಎತ್ತಿ ಲೋಕಗಳನ್ನು ಪಾಲಿಸಿ, ವಿಶ್ವದ ದ್ರೋಹಿಗಳನ್ನು ಸಂಹಾರಮಾಡುತ್ತೀಯೆ. ಈ ಅವತಾರಗಳ ಮೂಲಕ ನೀನು ಪ್ರತಿಯೊಂದು ಯುಗದಲ್ಲಿಯೂ ಅದರ ಧರ್ಮಗಳನ್ನು ರಕ್ಷಿಸುತ್ತೀಯೆ. ಕಲಿಯುಗದಲ್ಲಿ ನೀನು ಮರೆಯಾಗಿ ಗುಪ್ತ ರೂಪದಿಂದಲೇ ಇರುತ್ತೀಯೆ. ಅದಕ್ಕಾಗಿ ನಿನಗೆ ‘ತ್ರಿಯುಗ’ ಎಂಬ ಒಂದು ಹೆಸರೂ ಇದೆ. ॥38॥
(ಶ್ಲೋಕ-39)
ಮೂಲಮ್
ನೈತನ್ಮನಸ್ತವ ಕಥಾಸು ವಿಕುಂಠನಾಥ
ಸಂಪ್ರೀಯತೇ ದುರಿತದುಷ್ಟಮಸಾಧು ತೀವ್ರಮ್ ।
ಕಾಮಾತುರಂ ಹರ್ಷಶೋಕಭಯೈಷಣಾರ್ತಂ
ತಸ್ಮಿನ್ಕಥಂ ತವ ಗತಿಂ ವಿಮೃಶಾಮಿ ದೀನಃ ॥
ಅನುವಾದ
ಓ ವೈಕುಂಠಪತಿಯೇ! ನನ್ನ ಈ ಮನಸ್ಸು ನಿನ್ನ ಕಥೆಗಳನ್ನು ಕೇಳಿ ರಸಾನುಭವವನ್ನು ಪಡುತ್ತಿಲ್ಲ. ಪಾಪವಾಸನೆಗಳಿಂದ ಕಲುಷಿತಗೊಂಡಿದೆ. ದುಷ್ಟತನದಿಂದ ತುಂಬಿದೆ. ಸಾಮಾನ್ಯ ವಾಗಿ ಕಾಮಾತುರವೇ ಆಗಿದ್ದು, ಸುಖ, ದುಃಖ, ಭಯ, ಇಹಲೋಕ-ಪರಲೋಕ, ಹಣ, ಹೆಂಡತಿ, ಮಕ್ಕಳು ಮುಂತಾದ ಚಿಂತೆಗಳಿಂದ ಕಳವಳಪಡುತ್ತಿದೆ. ಇದರಿಂದಾಗಿ ನಾನು ದೀನನಾಗಿದ್ದೇನೆ. ಇಂತಹ ಮನಸ್ಸಿನಿಂದ ನಿನ್ನ ಸ್ವರೂಪವನ್ನು ಹೇಗೆ ಚಿಂತಿಸಲಿ? ॥39॥
(ಶ್ಲೋಕ-40)
ಮೂಲಮ್
ಜಿಹ್ವೈಕತೋಚ್ಯುತ ವಿಕರ್ಷತಿ ಮಾವಿತೃಪ್ತಾ
ಶಿಶ್ನೋನ್ಯತಸ್ತ್ವಗುದರಂ ಶ್ರವಣಂ ಕುತಶ್ಚಿತ್ ।
ಘ್ರಾಣೋನ್ಯತಶ್ಚಪಲದೃಕ್ಕ್ವ ಚ ಕರ್ಮಶಕ್ತಿ-
ರ್ಬಹ್ವ್ಯಃ ಸಪತ್ನ್ಯ ಇವ ಗೇಹಪತಿಂ ಲುನಂತಿ ॥
ಅನುವಾದ
ಓ ಅಚ್ಯುತಾ! ಎಂದೆಂದಿಗೂ ತೃಪ್ತಿಹೊಂದದ ಈ ನಾಲಿಗೆ ನನ್ನನ್ನು ರುಚಿಕರ ರಸಗಳ ಕಡೆಗೆ ಸೆಳೆಯುತ್ತಿದೆ. ಜನನೇಂದ್ರಿಯವು ಸುಂದರ ಸೀಯರ ಕಡೆಗೆ, ಚರ್ಮವು ಸುಕೋಮಲ ಸ್ವರ್ಶಕ್ಕಾಗಿ, ಹೊಟ್ಟೆ ಊಟದ ಕಡೆಗೆ, ಕಿವಿಗಳು ಮಧುರ ಸಂಗೀತಕ್ಕಾಗಿ, ಮೂಗು ಸುವಾಸನೆಗಳ ಕಡೆಗೆ, ಈ ಚಪಲನೇತ್ರಗಳು ಸೌಂದ ರ್ಯದ ಕಡೆಗೆ ನನ್ನನ್ನು ಸೆಳೆಯುತ್ತಾ ಇವೆ. ಇಷ್ಟೇ ಅಲ್ಲದೆ ಕರ್ಮೇಂದ್ರಿಯಗಳೂ ತಮ್ಮ-ತಮ್ಮ ವಿಷಯಗಳ ಕಡೆಗೆ ಕೊಂಡು ಹೋಗಲು ಆತುರ ಪಡುತ್ತಿವೆ. ಗೃಹಸ್ಥನಾದ ಪತಿಯನ್ನು ಆತನ ಬಹುಮಂದಿ ಪತ್ನಿಯರು ತಮ್ಮ-ತಮ್ಮ ಕಡೆಗೆ ಸೆಳೆದುಕೊಳ್ಳುತ್ತಿರುವಂತೆ ನನ್ನ ಸ್ಥಿತಿಯಾಗಿದೆ. ॥40॥
(ಶ್ಲೋಕ-41)
ಮೂಲಮ್
ಏವಂ ಸ್ವಕರ್ಮಪತಿತಂ ಭವವೈತರಣ್ಯಾ-
ಮನ್ಯೋನ್ಯಜನ್ಮಮರಣಾಶನಭೀತಭೀತಮ್ ।
ಪಶ್ಯನ್ಜನಂ ಸ್ವಪರವಿಗ್ರಹವೈರಮೈತ್ರಂ
ಹಂತೇತಿ ಪಾರಚರ ಪೀಪೃಹಿ ಮೂಢಮದ್ಯ ॥
ಅನುವಾದ
ಹೀಗೆ ಈ ಜೀವನು ತನ್ನ ಕರ್ಮಗಳ ಬಂಧನದಲ್ಲಿ ಸಿಕ್ಕಿಬಿದ್ದು ಸಂಸಾರವೆಂಬ ವೈತರಣೀ ನದಿಯಲ್ಲಿ ಬಿದ್ದಿರುವನು. ಹುಟ್ಟಿನ ನಂತರ ಸಾವು, ಸಾವಿನನಂತರ ಹುಟ್ಟು ಎಂಬ ಇವೆರಡರ ಮೂಲಕ ಕರ್ಮಗಳನ್ನು ಭೋಗಿಸುತ್ತಾ ಭಯಗೊಂಡಿರು ವನು. ಇದು ನನ್ನದುಇದು ಪರರದು ಎಂಬ ಭೇದ-ಭಾವನೆಯಿಂದ ಕೂಡಿಕೊಂಡು ಕೆಲವರೊಂದಿಗೆ ಮಿತ್ರತ್ವ ವಿದ್ದರೆ, ಕೆಲವರೊಡನೆ ಶತ್ರುತ್ವವನ್ನು ಹೊಂದಿದ್ದಾನೆ. ನೀನು ಈ ಮೂಢಜೀವಿಯ ದುರ್ದಶೆಯನ್ನು ನೋಡಿ ಕರುಣೆಯಿಂದ ಕರಗಬೇಕು. ಈ ಭವನದಿಯಿಂದ ಆಚೆಗೆ ಇರುವ ಭಗವಂತನೇ! ಈ ಪ್ರಾಣಿಗಳನ್ನೂ ಅಲ್ಲಿಗೆ ದಾಟಿಸು. ॥41॥
(ಶ್ಲೋಕ-42)
ಮೂಲಮ್
ಕೋ ನ್ವತ್ರ ತೇಖಿಲಗುರೋ ಭಗವನ್ಪ್ರಯಾಸ
ಉತ್ತಾರಣೇಸ್ಯ ಭವಸಂಭವಲೋಪಹೇತೋಃ ।
ಮೂಢೇಷು ವೈ ಮಹದನುಗ್ರಹ ಆರ್ತಬಂಧೋ
ಕಿಂ ತೇನ ತೇ ಪ್ರಿಯಜನಾನನುಸೇವತಾಂ ನಃ ॥
ಅನುವಾದ
ಜಗದ್ಗುರುವೇ! ನೀನು ಈ ಸೃಷ್ಟಿಯ ಉತ್ಪತ್ತಿ, ಸ್ಥಿತಿ ಮತ್ತು ರಕ್ಷಣೆಗಳನ್ನು ಮಾಡುತ್ತಿರುವವನು. ಇಂತಹ ಸ್ಥಿತಿ ಯಲ್ಲಿ ಈ ಜೀವಿಗಳನ್ನು ಈ ಭವನದಿಯಿಂದ ದಾಟಿಸಿ ಬಿಡಲು ನಿನಗೆ ಪ್ರಯಾಸವೇನು? ದೀನಜನರ ಪರಮ ಹಿತೈಷಿ ಪ್ರಭೋ! ದಾರಿಗಾಣದೆ ಅಲೆಯುತ್ತಿರುವ ಮೂಢ ಜನರು ತಾನೇ ಮಹಾಪುರುಷರ ಅನುಗ್ರಹಕ್ಕೆ ವಿಶೇಷವಾಗಿ ಪಾತ್ರರಾಗಬೇಕು! ನಮಗೆ ಅದರ ಆವಶ್ಯಕತೆಯಿಲ್ಲ. ಏಕೆಂದರೆ, ನಾವು ನಿನಗೆ ಪ್ರಿಯರಾದ ಭಕ್ತರ ಸೇವೆಯಲ್ಲಿ ತೊಡಗಿದ್ದೇವೆ. ಅದರಿಂದ ದಾಟಿ ಹೋಗಲು ನಮಗೆ ಎಂದಿಗೂ ಚಿಂತೆಗೆ ಅವಕಾಶವಿಲ್ಲ. ॥42॥
(ಶ್ಲೋಕ-43)
ಮೂಲಮ್
ನೈವೋದ್ವಿಜೇ ಪರ ದುರತ್ಯಯವೈತರಣ್ಯಾ-
ಸ್ತ್ವದ್ವೀರ್ಯಗಾಯನಮಹಾಮೃತಮಗ್ನಚಿತ್ತಃ ।
ಶೋಚೇ ತತೋ ವಿಮುಖಚೇತಸ ಇಂದ್ರಿಯಾರ್ಥ-
ಮಾಯಾಸುಖಾಯ ಭರಮುದ್ವಹತೋವಿಮೂಢಾನ್ ॥
ಅನುವಾದ
ಎಲೈ ಪರಮಾತ್ಮನೇ! ಈ ಸಂಸಾರವೆಂಬ ವೈತರಣೀ ನದಿಯನ್ನು ದಾಟುವುದು ಇತರರಿಗೆ ಖಂಡಿತವಾಗಿ ಕಷ್ಟವೇ. ಆದರೆ ನಾನು ಇದಕ್ಕೆ ಸ್ವಲ್ಪವೂ ಭಯ ಪಡುವುದಿಲ್ಲ. ಏಕೆಂದರೆ, ನನ್ನ ಚಿತ್ತವು ಈ ವೈತರಣಿಯಲ್ಲಿ ಇಲ್ಲ. ಅದು ಸ್ವರ್ಗದ ಅಮೃತವನ್ನೂ ಕೂಡ ತಿರಸ್ಕರಿಸುವಂತಹ ಪರಮಾಮೃತ ರೂಪವಾದ ನಿನ್ನ ಲೀಲೆಗಳ ಗಾನದಲ್ಲೇ ಮುಳುಗಿದೆ. ನಿನ್ನ ಗುಣಗಾನದಿಂದ ವಿಮುಖರಾಗಿದ್ದು ಇಂದ್ರಿಯಗಳ ವಿಷಯಗಳ ಮಿಥ್ಯಾಸುಖವನ್ನು ಪಡೆದುಕೊಳ್ಳಲಿಕ್ಕಾಗಿ ತಮ್ಮ ತಲೆಯ ಮೇಲೆ ಇಡೀ ಸಂಸಾರದ ಭಾರವನ್ನು ಹೊರುತ್ತಿರುವ ಆ ಮೂಢ ಪ್ರಾಣಿಗಳಿಗಾಗಿ ನಾನು ಶೋಕಿಸುತ್ತಾ ಇದ್ದೇನೆ. ॥43॥
(ಶ್ಲೋಕ-44)
ಮೂಲಮ್
ಪ್ರಾಯೇಣ ದೇವ ಮುನಯಃ ಸ್ವವಿಮುಕ್ತಿಕಾಮಾ
ವೌನಂ ಚರಂತಿ ವಿಜನೇ ನ ಪರಾರ್ಥನಿಷ್ಠಾಃ ।
ನೈತಾನ್ವಿಹಾಯ ಕೃಪಣಾನ್ವಿಮುಮುಕ್ಷ ಏಕೋ
ನಾನ್ಯಂ ತ್ವದಸ್ಯ ಶರಣಂ ಭ್ರಮತೋನುಪಶ್ಯೇ ॥
ಅನುವಾದ
ಪ್ರಭುವೇ! ದೊಡ್ಡ-ದೊಡ್ಡ ಋಷಿ, ಮುನಿಗಳು ಸಾಮಾನ್ಯವಾಗಿ ತಮ್ಮ ಮುಕ್ತಿಗಾಗಿ ನಿರ್ಜನವಾದ ಅರಣ್ಯಕ್ಕೆ ಹೋಗಿ ಮೌನವ್ರತವನ್ನು ಅವಲಂಬಿಸುತ್ತಾರೆ. ಇತರರ ಒಳಿತಿಗಾಗಿ ಯಾವುದೇ ವಿಶೇಷ ಪ್ರಯತ್ನವನ್ನು ಮಾಡು ವುದಿಲ್ಲ. ಆದರೆ ನನ್ನ ಸ್ಥಿತಿಯೇ ಬೇರೆ ಯಾಗಿದೆ. ದಾರಿ ತಪ್ಪಿರುವ ಈ ಬಡಪಾಯಿಗಳನ್ನು ಬಿಟ್ಟು ಒಬ್ಬಂಟಿಗ ನಾಗಿಯೇ ಮುಕ್ತಿಹೊಂದುವಂತಹ ಲೋಭಿಯು ನಾನಲ್ಲ. ಹೀಗೆ ಅಲೆದಾಡುತ್ತಿರುವ ಈ ಪ್ರಾಣಿಗಳಿಗೆ ನಿನ್ನ ಹೊರತಾಗಿ ಬೇರೆ ಯಾವ ರಕ್ಷಕನೂ ನನಗೆ ಕಂಡುಬರುವುದಿಲ್ಲ. ॥44॥
(ಶ್ಲೋಕ-45)
ಮೂಲಮ್
ಯನ್ಮೈಥುನಾದಿ ಗೃಹಮೇಧಿಸುಖಂ ಹಿ ತುಚ್ಛಂ
ಕಂಡೂಯನೇನ ಕರಯೋರಿವ ದುಃಖದುಃಖಮ್ ।
ತೃಪ್ಯಂತಿ ನೇಹ ಕೃಪಣಾ ಬಹುದುಃಖಭಾಜಃ
ಕಂಡೂತಿವನ್ಮನಸಿಜಂ ವಿಷಹೇತ ಧೀರಃ ॥
ಅನುವಾದ
ಗೃಹಸ್ಥರಿಗೆ ಸಿಗುವ ಮೈಥುನವೇ ಮುಂತಾದ ಸುಖಗಳು ಅತ್ಯಂತ ತುಚ್ಛವೂ, ದುಃಖರೂಪವೂ ಆಗಿವೆ. ತುರಿಕೆಯನ್ನು ಹೋಗಲಾಡಿಸಲು ಎರಡೂ ಕೈಗಳಿಂದ ತುರಿಸಿಕೊಳ್ಳುವವನಿಗೆ ಮೊದಲು ಸ್ವಲ್ಪ ಸುಖದಂತೆ ಅನಿಸಿದರೂ ಅನಂತರ ಉರಿಯ ದುಃಖವೇ ಉಂಟಾಗುತ್ತದೆ. ಆದರೆ ತಪ್ಪುದಾರಿಗೆ ಬಿದ್ದಿರುವ ಈ ಅಜ್ಞಾನೀ ಜನರು ಅನೇಕ ದುಃಖಗಳನ್ನು ಭೋಗಿಸಿಯೂ ಈ ವಿಷಯಗಳಿಂದ ಬೇಸರಪಡುವುದಿಲ್ಲ. ಧೀರಪುರುಷರಾದರೋ ತುರಿಕೆಯನ್ನು ಸಹಿಸಿಕೊಳ್ಳುವಂತೆ ಕಾಮಾದಿ ವೇಗಗಳನ್ನು ಸಹಿಸಿಕೊಳ್ಳುತ್ತಾರೆ. ಸಹಿಸಿಕೊಳ್ಳುವುದರಿಂದಲೇ ಅವುಗಳ ನಾಶವಾಗುತ್ತದೆ. ॥45॥
(ಶ್ಲೋಕ-46)
ಮೂಲಮ್
ವೌನವ್ರತಶ್ರುತತಪೋಧ್ಯಯನಸ್ವಧರ್ಮ-
ವ್ಯಾಖ್ಯಾರಹೋಜಪಸಮಾಧಯ ಆಪವರ್ಗ್ಯಾಃ ।
ಪ್ರಾಯಃ ಪರಂ ಪುರುಷ ತೇ ತ್ವಜಿತೇಂದ್ರಿಯಾಣಾಂ
ವಾರ್ತಾ ಭವಂತ್ಯುತ ನ ವಾತ್ರ ತು ದಾಂಭಿಕಾನಾಮ್ ॥
ಅನುವಾದ
ಓ ಪುರುಷೋತ್ತಮಾ! ಮೌನ, ಬ್ರಹ್ಮಚರ್ಯ, ಶಾಸ್ತ್ರ ಶ್ರವಣ, ತಪಸ್ಸು, ಸ್ವಾಧ್ಯಾಯ, ಸ್ವಧರ್ಮಪಾಲನೆ, ಯುಕ್ತಿ ಗಳಿಂದ ಶಾಸ್ತ್ರಗಳ ವ್ಯಾಖ್ಯೆ, ಏಕಾಂತಸೇವನೆ, ಜಪ ಮತ್ತು ಸಮಾಧಿ ಈ ಹತ್ತೂ ಮೋಕ್ಷಕ್ಕೆ ಸಾಧನೆಗಳೆಂದು ಪ್ರಸಿದ್ಧ ವಾಗಿದೆ. ಆದರೆ ಇಂದ್ರಿಯಗಳು ವಶದಲ್ಲಿ ಇಲ್ಲದಿರು ವವರಿಗೆ ಇವೆಲ್ಲವೂ ಜೀವನಕ್ಕೆ ಸಾಧನೆಗಳು ವ್ಯಾಪಾರ ಮಾತ್ರವೇ ಆಗಿಬಿಡುವವು. ದಾಂಭಿಕರಿಗಾದರೋ ಅವರ ಮೋಸವು ಬಯಲಾಗುವವರೆಗೂ ಜೀವನೋಪಾಯಗಳಾ ಗಿದ್ದು ಅನಂತರ ಯಾವ ಪ್ರಯೋಜನಕ್ಕೂ ಬರದೇ ಹೋಗುವವು. ॥46॥
(ಶ್ಲೋಕ-47)
ಮೂಲಮ್
ರೂಪೇ ಇಮೇ ಸದಸತೀ ತವ ವೇದಸೃಷ್ಟೇ
ಬೀಜಾಂಕುರಾವಿವ ನ ಚಾನ್ಯದರೂಪಕಸ್ಯ ।
ಯುಕ್ತಾಃ ಸಮಕ್ಷಮುಭಯತ್ರ ವಿಚಿನ್ವತೇ ತ್ವಾಂ
ಯೋಗೇನ ವಹ್ನಿಮಿವ ದಾರುಷು ನಾನ್ಯತಃ ಸ್ಯಾತ್ ॥
ಅನುವಾದ
ಬೀಜ ಮತ್ತು ಮೊಳಕೆಗಳಂತೆ ಕಾರ್ಯ ಮತ್ತು ಕಾರಣ ಇವೆರಡು ನಿನ್ನ ರೂಪಗಳೆಂದು ವೇದಗಳು ಹೇಳುತ್ತವೆ. ವಾಸ್ತವವಾಗಿ ನೀನು ಪ್ರಾಕೃತ ರೂಪಗಳಿಂದ ರಹಿತನಾಗಿರುವೆ. ಆದರೆ ಈ ಕಾರ್ಯ- ಕಾರಣ ರೂಪಗಳನ್ನು ಬಿಟ್ಟು ನಿನ್ನ ಜ್ಞಾನವನ್ನು ಪಡೆಯುವುದಕ್ಕೆ ಬೇರಾವ ಸಾಧನೆಯೂ ಇಲ್ಲ. ಅರಣಿಮಂಥನದಿಂದ ಅಗ್ನಿಯನ್ನು ಪ್ರಕಟಿಸುವಂತೆಯೇ ಯೋಗಿಗಳು ಭಕ್ತಿ ಯೋಗದ ಸಾಧನೆಯಿಂದ ಕಾರ್ಯ ಮತ್ತು ಕಾರಣ ಇವೆರಡರಲ್ಲೇ ನಿನ್ನನ್ನು ಹುಡುಕಿ ತೆಗೆಯುತ್ತಾರೆ. ಏಕೆಂದರೆ, ವಾಸ್ತವವಾಗಿ ಇವೆರಡೂ ನಿನ್ನಿಂದ ಬೇರೆಯಲ್ಲ, ನಿನ್ನ ಸ್ವರೂಪವೇ ಆಗಿದೆ. ॥47॥
(ಶ್ಲೋಕ-48)
ಮೂಲಮ್
ತ್ವಂ ವಾಯುರಗ್ನಿರವನಿರ್ವಿಯದಂಬುಮಾತ್ರಾಃ
ಪ್ರಾಣೇಂದ್ರಿಯಾಣಿ ಹೃದಯಂ ಚಿದನುಗ್ರಹಶ್ಚ ।
ಸರ್ವಂ ತ್ವಮೇವ ಸಗುಣೋ ವಿಗುಣಶ್ಚ ಭೂಮನ್
ನಾನ್ಯತ್ತ್ವದಸ್ತ್ಯಪಿ ಮನೋವಚಸಾ ನಿರುಕ್ತಮ್ ॥
ಅನುವಾದ
ಪ್ರಭೋ! ಅನಂತ! ವಾಯು, ಅಗ್ನಿ, ಪೃಥಿವಿ, ಆಕಾಶ, ಜಲ, ಪಂಚತನ್ಮಾತ್ರೆಗಳು, ಪ್ರಾಣ, ಇಂದ್ರಿಯಗಳು, ಮನಸ್ಸು, ಚಿತ್ತ, ಅಹಂಕಾರ, ಸಮಸ್ತ ಜಗತ್ತು ಹಾಗೂ ಸಗುಣ-ನಿರ್ಗುಣ ಹೀಗೆಲ್ಲವೂ ಕೇವಲ ನೀನೇ ಆಗಿರುವೆ. ಹೆಚ್ಚೇನು ಮನಸ್ಸು ಮತ್ತು ಮಾತಿನ ಮೂಲಕ ಏನೆಲ್ಲ ನಿರೂಪಿಸಲಾಗುವುದೋ ಅದೆಲ್ಲವೂ ನಿನ್ನಿಂದ ಹೊರತಾಗಿಲ್ಲ. ॥48॥
(ಶ್ಲೋಕ-49)
ಮೂಲಮ್
ನೈತೇ ಗುಣಾ ನ ಗುಣಿನೋ ಮಹದಾದಯೋ ಯೇ
ಸರ್ವೇ ಮನಃಪ್ರಭೃತಯಃ ಸಹದೇವಮರ್ತ್ಯಾಃ ।
ಆದ್ಯಂತವಂತ ಉರುಗಾಯ ವಿದಂತಿ ಹಿ ತ್ವಾ-
ಮೇವಂ ವಿಮೃಶ್ಯ ಸುಧಿಯೋ ವಿರಮಂತಿ ಶಬ್ದಾತ್ ॥
ಅನುವಾದ
ವಿಶಾಲವಾದ ಕೀರ್ತಿಯುಳ್ಳ ಮಹಾವಿಷ್ಣುವೇ! ಈ ಸತ್ತ್ವಾದಿ ಗುಣಗಳು ಮತ್ತು ಈ ಗುಣಗಳ ಪರಿಣಾಮವಾದ ಮಹತ್ತತ್ತ್ವಾದಿಗಳು, ದೇವತೆಗಳು, ಮನುಷ್ಯರು ಹಾಗೂ ಮನಸ್ಸೇ ಮುಂತಾದ ಯಾವುದೂ ನಿನ್ನ ಸ್ವರೂಪವನ್ನು ಅರಿಯುವುದಕ್ಕೆ ಸಮರ್ಥ ವಲ್ಲ. ಏಕೆಂದರೆ, ಇವೆಲ್ಲವೂ ಆದಿ-ಅಂತ್ಯಗಳಿರುವುವು ಮತ್ತು ನೀನು ಅನಾದಿಯೂ, ಅನಂತನೂ ಆಗಿರುವೆ. ಹೀಗೆ ವಿಚಾರಮಾಡಿ ಜ್ಞಾನಿಗಳು ಶಬ್ದಜಾಲವನ್ನು ನಿಲ್ಲಿಸಿ ಮೌನವಾಗುವರು. ॥49॥
(ಶ್ಲೋಕ-50)
ಮೂಲಮ್
ತತ್ತೇರ್ಹತ್ತಮ ನಮಃಸ್ತುತಿಕರ್ಮಪೂಜಾಃ
ಕರ್ಮ ಸ್ಮೃತಿಶ್ಚರಣಯೋಃ ಶ್ರವಣಂ ಕಥಾಯಾಮ್ ।
ಸಂಸೇವಯಾ ತ್ವಯಿ ವಿನೇತಿ ಷಡಂಗಯಾ ಕಿಂ
ಭಕ್ತಿಂ ಜನಃ ಪರಮಹಂಸಗತೌ ಲಭೇತ ॥
ಅನುವಾದ
ಪರಮಪೂಜ್ಯವಾದ ಪರಮಾತ್ಮನೇ! ನಮಸ್ಕಾರ, ಸ್ತುತಿ, ಸಮಸ್ತ ಕರ್ಮಗಳ ಸಮರ್ಪಣ, ಸೇವೆ-ಪೂಜೆ, ಚರಣಕಮಲಗಳ ಚಿಂತನೆ ಮತ್ತು ಲೀಲಾ-ಕಥೆಗಳ ಶ್ರವಣ ಇವು ಆರು ನಿನ್ನ ಸೇವೆಯ ಅಂಗಗಳಾಗಿವೆ. ಈ ಷಡಂಗ ಸೇವೆಯಲ್ಲದೆ ನಿನ್ನ ಚರಣಕಮಲಗಳ ಭಕ್ತಿಯು ಹೇಗೆ ದೊರೆಯ ಬಲ್ಲದು! ಪ್ರಭೋ! ನೀನಾದರೋ ನಿನ್ನ ಪರಮಪ್ರಿಯ ಭಕ್ತರ, ಪರಮಹಂಸರ ಸರ್ವಸ್ವವೇ ಆಗಿರುವೆ. ॥50॥
(ಶ್ಲೋಕ-51)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಏತಾವದ್ವರ್ಣಿತಗುಣೋ ಭಕ್ತ್ಯಾ ಭಕ್ತೇನ ನಿರ್ಗುಣಃ ।
ಪ್ರಹ್ಲಾದಂ ಪ್ರಣತಂ ಪ್ರೀತೋ ಯತಮನ್ಯುರಭಾಷತ ॥
ಅನುವಾದ
ನಾರದರು ಹೇಳುತ್ತಾರೆ — ಹೀಗೆ ಭಕ್ತಪ್ರಹ್ಲಾದನು ಪ್ರಕೃತಿ ಮತ್ತು ಪ್ರಾಕೃತಗುಣಗಳಿಂದ ರಹಿತನಾದ ಪರಮಾತ್ಮನ ಸ್ವರೂಪ ಗುಣಗಳನ್ನು ಪರಮಪ್ರೇಮದಿಂದ ಸ್ತೋತ್ರಮಾಡಿ, ಬಳಿಕ ಅವನು ಭಗವಂತನ ಚರಣಗಳಲ್ಲಿ ತಲೆಬಾಗಿಸಿ ಸುಮ್ಮನಾದನು. ನರಸಿಂಹ ಭಗವಂತನ ಕ್ರೋಧವು ಶಾಂತವಾಗಿ ಅವನು ತುಂಬಾ ಪ್ರಸನ್ನತೆಯಿಂದ, ಪ್ರೇಮದಿಂದ ಹೀಗೆಂದನು. ॥51॥
(ಶ್ಲೋಕ-52)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಪ್ರಹ್ಲಾದ ಭದ್ರ ಭದ್ರಂ ತೇ ಪ್ರೀತೋಹಂ ತೇಸುರೋತ್ತಮ ।
ವರಂ ವೃಣೀಷ್ವಾಭಿಮತಂ ಕಾಮಪೂರೋಸ್ಮ್ಯಹಂ ನೃಣಾಮ್ ॥
ಅನುವಾದ
ಶ್ರೀನರಸಿಂಹ ಭಗವಂತನು — ಹೇಳಿದನುಭದ್ರ ಪ್ರಹ್ಲಾದನೇ! ನಿನಗೆ ಮಂಗಳವಾಗಲಿ. ಅಸುರೋತ್ತಮನೇ! ನಾನು ನಿನ್ನ ಮೇಲೆ ಅತ್ಯಂತ ಪ್ರಸನ್ನನಾಗಿರುವೆನು. ನಿನಗೆ ಅಭೀಷ್ಟವಾದ ವರವನ್ನು ಕೇಳಿಕೋ. ನಾನು ಜೀವಿಗಳ ಇಚ್ಛೆಯನ್ನು ಪೂರ್ಣಗೊಳಿಸುವವನು. ॥52॥
(ಶ್ಲೋಕ-53)
ಮೂಲಮ್
ಮಾಮಪ್ರೀಣತ ಆಯುಷ್ಮನ್ದರ್ಶನಂ ದುರ್ಲಭಂ ಹಿ ಮೇ ।
ದೃಷ್ಟ್ವಾ ಮಾಂ ನ ಪುನರ್ಜಂತುರಾತ್ಮಾನಂ ತಪ್ತುಮರ್ಹತಿ ॥
ಅನುವಾದ
ಆಯುಷ್ಮಂತನೇ! ನನ್ನನ್ನು ಪ್ರಸನ್ನಗೊಳಿಸದಿರುವವನಿಗೆ ನನ್ನ ದರ್ಶನವು ಬಹಳ ಕಷ್ಟ . ಆದರೆ ನನ್ನ ದರ್ಶನವಾಗುತ್ತಲೇ ಮತ್ತೆ ಪ್ರಾಣಿಗಳ ಹೃದಯದಲ್ಲಿ ಯಾವುದೇ ತಾಪವೂ ಇರುವುದಿಲ್ಲ. ॥53॥
(ಶ್ಲೋಕ-54)
ಮೂಲಮ್
ಪ್ರೀಣಂತಿ ಹ್ಯಥ ಮಾಂ ಧೀರಾಃ ಸರ್ವಭಾವೇನ ಸಾಧವಃ ।
ಶ್ರೇಯಸ್ಕಾಮಾ ಮಹಾಭಾಗಾಃ ಸರ್ವಾಸಾಮಾಶಿಷಾಂ ಪತಿಮ್ ॥
ಅನುವಾದ
ನಾನು ಸಮಸ್ತ ಮನೋರಥಗಳನ್ನು ಪೂರ್ಣಗೊಳಿಸುವವನು. ಅದಕ್ಕಾಗಿ ಶ್ರೇಯಸ್ಸನ್ನು ಬಯಸುವ ಭಾಗ್ಯವಂತರಾದ ಸಾಧುಗಳು ಜೀತೇಂದ್ರಿಯರಾಗಿ, ತಮ್ಮ ಎಲ್ಲ ವೃತ್ತಿಗಳಿಂದ ನನ್ನನ್ನು ಪ್ರಸನ್ನಗೊಳಿಸಲಿಕ್ಕಾಗಿಯೇ ಪ್ರಯತ್ನಿಸುತ್ತಾರೆ. ॥54॥
(ಶ್ಲೋಕ-55)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಏವಂ ಪ್ರಲೋಭ್ಯಮಾನೋಪಿ ವರೈರ್ಲೋಕಪ್ರಲೋಭನೈಃ ।
ಏಕಾಂತಿತ್ವಾದ್ಭಗವತಿ ನೈಚ್ಛತ್ತಾನಸುರೋತ್ತಮಃ ॥
ಅನುವಾದ
ಶ್ರೀನಾರದರು ಹೇಳಿದರು — ಯುಧಿಷ್ಠಿರನೇ! ಅಸುರ ಕುಲ ಭೂಷಣನಾದ ಪ್ರಹ್ಲಾದನು ಭಗವಂತನ ಅನನ್ಯ ಭಕ್ತನಾಗಿದ್ದನು. ಅದಕ್ಕಾಗಿ ದೊಡ್ಡ-ದೊಡ್ಡ ಜನರನ್ನು ಪ್ರಲೋಭನೆ ಗೊಳಿಸುವಂತಹ ವರಗಳ ಮೂಲಕ ಪ್ರಲೋಭನೆಗೊಳಿಸಿದರೂ ಅವನು ಅದನ್ನು ಬಯಸಲಿಲ್ಲ. ॥55॥
ಅನುವಾದ (ಸಮಾಪ್ತಿಃ)
ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥9॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇಪ್ರಹ್ಲಾದಚರಿತೇ ಭಗವತ್ತ್ಸವೋ ನಾಮ ನವಮೋಽಧ್ಯಾಯಃ ॥9॥