೦೮

[ಎಂಟನೆಯ ಅಧ್ಯಾಯ]

ಭಾಗಸೂಚನಾ

ಶ್ರೀನರಸಿಂಹದೇವರ ಪ್ರಾದುರ್ಭಾವ, ಹಿರಣ್ಯಕಶಿಪುವಿನ ವಧೆ, ಬ್ರಹ್ಮಾದಿಗಳಿಂದ ಭಗವಂತನ ಸ್ತುತಿ

(ಶ್ಲೋಕ-1)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಅಥ ದೈತ್ಯಸುತಾಃ ಸರ್ವೇ ಶ್ರುತ್ವಾ ತದನುವರ್ಣಿತಮ್ ।
ಜಗೃಹುರ್ನಿರವದ್ಯತ್ವಾನ್ನೈವ ಗುರ್ವನುಶಿಕ್ಷಿತಮ್ ॥

ಅನುವಾದ

ನಾರದರು ಹೇಳುತ್ತಾರೆ — ಪ್ರಹ್ಲಾದನ ಪ್ರವಚನವನ್ನು ಕೇಳಿ ದೈತ್ಯಬಾಲಕರು ಆಗಿನಿಂದಲೇ, ನಿರ್ದೋಷವಿದ್ದ ಕಾರಣ ಅವನ ಮಾತನ್ನು ಸರಿ ಎಂದು ಒಪ್ಪಿಕೊಂಡರು. ಗುರುಗಳ ದೂಷಿತವಾದ ಶಿಕ್ಷಣದ ಕಡೆಗೆ ಅವರು ಲಕ್ಷ್ಯವೇ ಕೊಡಲಿಲ್ಲ. ॥1॥

(ಶ್ಲೋಕ-2)

ಮೂಲಮ್

ಅಥಾಚಾರ್ಯಸುತಸ್ತೇಷಾಂ ಬುದ್ಧಿಮೇಕಾಂತಸಂಸ್ಥಿತಾಮ್ ।
ಆಲಕ್ಷ್ಯ ಭೀತಸ್ತ್ವರಿತೋ ರಾಜ್ಞ ಆವೇದಯದ್ಯಥಾ ॥

ಅನುವಾದ

ಆ ಎಲ್ಲ ವಿದ್ಯಾರ್ಥಿಗಳ ಬುದ್ಧಿಯು ಭಗವಂತನಲ್ಲಿ ಸ್ಥಿರವಾಗಿರುವುದನ್ನು ಕಂಡು ಗುರುಗಳು ತುಂಬಾ ಗಾಬರಿ ಗೊಂಡು, ಕೂಡಲೇ ಹಿರಣ್ಯಕಶಿಪುವಿನ ಬಳಿಗೆ ಹೋಗಿ ಅದನ್ನು ನಿವೇದಿಸಿಕೊಂಡರು. ॥2॥

(ಶ್ಲೋಕ-3)

ಮೂಲಮ್

ಶ್ರುತ್ವಾ ತದಪ್ರಿಯಂ ದೈತ್ಯೋ ದುಃಸಹಂ ತನಯಾನಯಮ್ ।
ಕೋಪಾವೇಶಚಲದ್ಗಾತ್ರಃ ಪುತ್ರಂ ಹಂತುಂ ಮನೋ ದಧೇ ॥

ಅನುವಾದ

ತನ್ನ ಪುತ್ರನ ಆ ಅಸಹ್ಯವೂ, ಅಪ್ರಿಯವೂ ಆಗಿದ್ದ ಅನೀತಿಯನ್ನು ಕಂಡು ದೈತ್ಯರಾಜನ ಶರೀರವು ಕ್ರೋಧದಿಂದ ಥರ-ಥರನೆ ನಡುಗ ತೊಡಗಿತು. ಕೊನೆಗೆ ಈ ಪ್ರಹ್ಲಾದನನ್ನು ಈಗ ನನ್ನ ಕೈಯಾರೆ ಕೊಂದುಹಾಕಬೇಕೆಂದು ಅವನು ನಿಶ್ಚಯಿಸಿದನು. ॥3॥

(ಶ್ಲೋಕ-4)

ಮೂಲಮ್

ಕ್ಷಿಪ್ತ್ವಾ ಪರುಷಯಾ ವಾಚಾ ಪ್ರಹ್ಲಾದಮತದರ್ಹಣಮ್ ।
ಆಹೇಕ್ಷಮಾಣಃ ಪಾಪೇನ ತಿರಶ್ಚೀನೇನ ಚಕ್ಷುಷಾ ॥

(ಶ್ಲೋಕ-5)

ಮೂಲಮ್

ಪ್ರಶ್ರಯಾವನತಂ ದಾಂತಂ ಬದ್ಧಾಂಜಲಿಮವಸ್ಥಿತಮ್ ।
ಸರ್ಪಃ ಪದಾಹತ ಇವ ಶ್ವಸನ್ಪ್ರಕೃತಿದಾರುಣಃ ॥

ಅನುವಾದ

ಜಿತೇಂದ್ರಿಯನಾಗಿದ್ದ ಪ್ರಹ್ಲಾದ ಕುಮಾರನು ವಿನಯದಿಂದ ಕೈಜೋಡಿಸಿಕೊಂಡು ತಂದೆಯ ಮುಂದೆ ಸುಮ್ಮನೆ ನಿಂತಿದ್ದನು. ಸ್ವಭಾವದಿಂದಲೇ ಕ್ರೂರನಾಗಿದ್ದ ಹಿರಣ್ಯಕಶಿಪು ನಿಂದೆ - ತಿರಸ್ಕಾರಗಳಿಗೆ ಯೋಗ್ಯನಲ್ಲದ ಸಾಧುಶಿರೋಮಣಿಯನ್ನು ಕಠೋರವಾಣಿಯಿಂದ ಗದರಿಸುತ್ತಾ ಏಟುತಿಂದ ಸರ್ಪದಂತೆ ಬುಸುಗುಟ್ಟತೊಡಗಿದನು. ಪಾಪಿಷ್ಠವಾದ ಓರೆನೋಟದಿಂದ ಅವನನ್ನೇ ನೋಡುತ್ತಾ ಹೀಗೆಂದನು ॥4-5॥

(ಶ್ಲೋಕ-6)

ಮೂಲಮ್

ಹೇ ದುರ್ವಿನೀತ ಮಂದಾತ್ಮನ್ಕುಲಭೇದಕರಾಧಮ ।
ಸ್ತಬ್ಧಂ ಮಚ್ಛಾಸನೋದ್ಧೂತಂ ನೇಷ್ಯೇ ತ್ವಾದ್ಯ ಯಮಕ್ಷಯಮ್ ॥

ಅನುವಾದ

ಎಲವೋ ದುಷ್ಟ! ದುರಹಂಕಾರಿ! ಮೂರ್ಖ! ಕುಲಗೆಡುಕನೇ! ತಾನು ಕೆಟ್ಟಿರುವುದಲ್ಲದೆ, ನಮ್ಮ ಕುಲದ ಬಾಲಕರನ್ನೂ ಕೆಡಿಸಲು ಬಯಸುತ್ತಿದ್ದೀಯೆ. ನನ್ನ ಆಜ್ಞೆಯನ್ನು ಉಲ್ಲಂಘಿಸುವ ದಿಟ್ಟತನವನ್ನು ತೋರಿದ್ದೀಯೆ. ಇದರ ಫಲವಾಗಿ ಇದೋ ನಿನ್ನನ್ನು ಈಗಲೇ ಯಮ ಸದನಕ್ಕೆ ಅಟ್ಟುತ್ತೇನೆ. ॥6॥

(ಶ್ಲೋಕ-7)

ಮೂಲಮ್

ಕ್ರುದ್ಧಸ್ಯ ಯಸ್ಯ ಕಂಪಂತೇ ತ್ರಯೋ ಲೋಕಾಃ ಸಹೇಶ್ವರಾಃ ।
ತಸ್ಯ ಮೇಭೀತವನ್ಮೂಢ ಶಾಸನಂ ಕಿಂಬಲೋತ್ಯಗಾಃ ॥

ಅನುವಾದ

ನಾನು ಸ್ವಲ್ಪ ಕೊಪ ಗೊಂಡರೂ ಮೂರು ಲೋಕಗಳೂ ಮತ್ತು ಲೋಕಪಾಲಕರೂ ಥರ-ಥರನೆ ನಡುಗುವರು. ಹೀಗಿರುವಾಗ ಎಲೈ ಮೂರ್ಖನೇ! ನೀನು ಯಾರ ಬಲದ ಮೇಲೆ ನಿರ್ಭಯನಂತೆ ನನ್ನ ಶಾಸನವನ್ನು ಮುರಿದಿದ್ದೀಯೇ? ಹೇಳು.॥7॥

(ಶ್ಲೋಕ-8)

ಮೂಲಮ್ (ವಾಚನಮ್)

ಪ್ರಹ್ಲಾದ ಉವಾಚ

ಮೂಲಮ್

ನ ಕೇವಲಂ ಮೇ ಭವತಶ್ಚ ರಾಜನ್
ಸ ವೈ ಬಲಂ ಬಲಿನಾಂ ಚಾಪರೇಷಾಮ್ ।
ಪರೇವರೇಮೀ ಸ್ಥಿರಜಂಗಮಾ ಯೇ
ಬ್ರಹ್ಮಾದಯೋ ಯೇನ ವಶಂ ಪ್ರಣೀತಾಃ ॥

ಅನುವಾದ

ಪ್ರಹ್ಲಾದನು ಹೇಳಿದನು — ದೈತ್ಯರಾಜನೇ! ಬ್ರಹ್ಮ ದೇವರಿಂದ ಹಿಡಿದು ಹುಲ್ಲುಕಡ್ಡಿಯವರೆಗಿನ ಚರಾಚರ ಜೀವಿಗಳೆಲ್ಲವೂ ಶ್ರೀಭಗವಂತನಿಗೆ ಅಧೀನವಾಗಿವೆ. ಆತನೇ ಎಲ್ಲರಿಗೂ ಬಲವು. ನನ್ನ ಮತ್ತು ನಿನ್ನ ಬಲಗಳಿಗೆ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿರುವ ಎಲ್ಲ ಬಲಶಾಲಿಗಳ ಬಲಗಳಿಗೂ ಆತನದೇ ಬಲವು. ॥8॥

(ಶ್ಲೋಕ-9)

ಮೂಲಮ್

ಸ ಈಶ್ವರಃ ಕಾಲ ಉರುಕ್ರಮೋಸಾ-
ವೋಜಃ ಸಹಃಸತ್ತ್ವಬಲೇಂದ್ರಿಯಾತ್ಮಾ ।
ಸ ಏವ ವಿಶ್ವಂ ಪರಮಃ ಸ್ವಶಕ್ತಿಭಿಃ
ಸೃಜತ್ಯವತ್ಯತ್ತಿ ಗುಣತ್ರಯೇಶಃ ॥

ಅನುವಾದ

ಆ ಮಹಾಪರಾಕ್ರಮಿ ಸರ್ವಶಕ್ತಿಯುಳ್ಳ ಪ್ರಭುವೇ ಕಾಲನಾಗಿದ್ದಾನೆ. ಸಮಸ್ತ ಪ್ರಾಣಿಗಳ ಇಂದ್ರಿಯಬಲ, ಮನೋಬಲ, ದೇಹಬಲ, ಧೈರ್ಯ ಹಾಗೂ ಇಂದ್ರಿಯಗಳೂ ಕೂಡ ಅವನೇ ಆಗಿದ್ದಾನೆ. ಆ ಪರಮೇಶ್ವರನೇ ತನ್ನ ಶಕ್ತಿಗಳ ಮೂಲಕ ಈ ವಿಶ್ವವನ್ನು ರಚಿಸಿ, ರಕ್ಷಿಸಿ, ಸಂಹರಿಸುತ್ತಾನೆ. ಅವನೇ ತ್ರಿಗುಣಗಳ ಒಡೆಯನಾಗಿದ್ದಾನೆ. ॥9॥

(ಶ್ಲೋಕ-10)

ಮೂಲಮ್

ಜಹ್ಯಾಸುರಂ ಭಾವಮಿಮಂ ತ್ವಮಾತ್ಮನಃ
ಸಮಂ ಮನೋ ಧತ್ಸ್ವ ನ ಸಂತಿ ವಿದ್ವಿಷಃ ।
ಋತೇಜಿತಾದಾತ್ಮನ ಉತ್ಪಥಸ್ಥಿತಾತ್
ತದ್ಧಿ ಹ್ಯನಂತಸ್ಯ ಮಹತ್ಸಮರ್ಹಣಮ್ ॥

ಅನುವಾದ

ನೀನು ನಿನ್ನ ಅಸುರಭಾವವನ್ನು ಬಿಟ್ಟುಬಿಡು. ಎಲ್ಲರ ವಿಷಯದಲ್ಲಿ ಸಮಾನತೆಯನ್ನು ತೋರಿಸು. ಈ ಪ್ರಪಂಚದಲ್ಲಿ ತನ್ನ ವಶದಲ್ಲಿ ಇರದಿರುವ, ಕುಮಾರ್ಗದಲ್ಲೇ ಸಂಚರಿಸುವ ಮನಸ್ಸಿಗಿಂತಲೂ ಬೇರೆ ಶತ್ರುವಿಲ್ಲ. ಮನಸ್ಸಿನಲ್ಲಿ ಎಲ್ಲರ ಕುರಿತು ಸಮತೆಯ ಭಾವವನ್ನಿರಿಸುವುದೇ ಭಗವಂತನ ಅತಿದೊಡ್ಡ ಪೂಜೆಯಾಗಿದೆ. ॥10॥

(ಶ್ಲೋಕ-11)

ಮೂಲಮ್

ದಸ್ಯೂನ್ಪುರಾ ಷಣ್ಣ ವಿಜಿತ್ಯ ಲುಂಪತೋ
ಮನ್ಯಂತ ಏಕೇ ಸ್ವಜಿತಾ ದಿಶೋ ದಶ ।
ಜಿತಾತ್ಮನೋ ಜ್ಞಸ್ಯ ಸಮಸ್ಯ ದೇಹಿನಾಂ
ಸಾಧೋಃ ಸ್ವಮೋಹಪ್ರಭವಾಃ ಕುತಃ ಪರೇ ॥

ಅನುವಾದ

ತಮ್ಮ ಸರ್ವಸ್ವವನ್ನು ಕೊಳ್ಳೆಹೊಡೆಯುವ ಈ ಆರು ಇಂದ್ರಿಯಗಳೆಂಬ ಕಳ್ಳರನ್ನು ಮೊದಲು ಗೆಲ್ಲದೆ ‘ನಾವು ಹತ್ತು ದಿಕ್ಕುಗಳನ್ನೂ ಗೆದ್ದಿದ್ದೇವೆ’ ಎಂದು ಜಂಭಕೊಚ್ಚಿಕೊಳ್ಳುವವರು ಕಡು ಮೂರ್ಖರು. ಜ್ಞಾನಿಯೂ, ಜಿತೇಂದ್ರಿಯನೂ ಆಗಿರುವ ಮಹಾತ್ಮನು ಸಮಸ್ತ ಪ್ರಾಣಿಗಳಲ್ಲಿಯೂ ಸಮತೆಯ ಭಾವವನ್ನು ಹೊಂದಿದವರಿಗೆ ಅಜ್ಞಾನದಿಂದ ಉಂಟಾಗುವ ಕಾಮ-ಕ್ರೋಧಾದಿ ಶತ್ರುಗಳೂ ಹುಟ್ಟಿಕೊಂಡರೂ ಸತ್ತೇಹೋಗುವರು. ಇನ್ನು ಹೊರಗಿನ ಶತ್ರುಗಳಾದರೋ ಹೇಗೆ ಉಳಿಯಬಲ್ಲರು? ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ಹಿರಣ್ಯಕಶಿಪುರುವಾಚ

ಮೂಲಮ್

ವ್ಯಕ್ತಂ ತ್ವಂ ಮರ್ತುಕಾಮೋಸಿ ಯೋತಿಮಾತ್ರಂ ವಿಕತ್ಥಸೇ ।
ಮುಮೂರ್ಷೂಣಾಂ ಹಿ ಮಂದಾತ್ಮನ್ನನು ಸ್ಯುರ್ವಿಪ್ಲವಾ ಗಿರಃ ॥

ಅನುವಾದ

ಹಿರಣ್ಯಕಶಿಪು ಹೇಳಿದನು — ಎಲವೋ ಮಂದ ಬುದ್ಧಿಯೇ! ನಿನ್ನ ಬೊಗಳುವಿಕೆಯು ಅತಿಯಾಯಿತು. ಈಗ ನೀನು ಸಾಯಲು ಬಯಸುತ್ತಿರುವುದು ಸ್ಪಷ್ಟವಾಯಿತು. ಏಕೆಂದರೆ ಸಾಯಲು ಬಯಸುವವನೇ ಇಂತಹ ತಲೆ-ಬುಡ ವಿಲ್ಲದ ಮಾತುಗಳನ್ನು ಗಳಹುತ್ತಿರುತ್ತಾರೆ. ॥12॥

(ಶ್ಲೋಕ-13)

ಮೂಲಮ್

ಯಸ್ತ್ವಯಾ ಮಂದಭಾಗ್ಯೋಕ್ತೋ ಮದನ್ಯೋ ಜಗದೀಶ್ವರಃ ।
ಕ್ವಾಸೌ ಯದಿ ಸ ಸರ್ವತ್ರ ಕಸ್ಮಾತ್ಸ್ತಂಭೇ ನ ದೃಶ್ಯತೇ ॥

ಅನುವಾದ

ಎಲೈ ಮಂದಭಾಗ್ಯನೇ! ನನಗಿಂತಲೂ ಬೇರೆ ಇನ್ನಾವನೋ ಒಬ್ಬ ಜಗದೀಶ್ವರನಿರುವನೆಂದು ನೀನು ಹೇಳಿದೆಯಲ್ಲ! ಆ ಜಗದೀಶ್ವರನು ಎಲ್ಲಿದ್ದಾನೆ? ಅವನು ಎಲ್ಲೆಲ್ಲಿಯೂ ಇರುವನೇ? ಹಾಗಾದರೆ ಈ ಕಂಬದಲ್ಲಿ ಏಕೆ ಕಾಣಿಸುತ್ತಿಲ್ಲ? ॥13॥

(ಶ್ಲೋಕ-14)

ಮೂಲಮ್

ಸೋಹಂ ವಿಕತ್ಥಮಾನಸ್ಯ ಶಿರಃ ಕಾಯಾದ್ಧರಾಮಿ ತೇ ।
ಗೋಪಾಯೇತ ಹರಿಸ್ತ್ವಾದ್ಯ ಯಸ್ತೇ ಶರಣಮೀಪ್ಸಿತಮ್ ॥

ಅನುವಾದ

ಸರಿ, ನಿನಗೆ ಈ ಕಂಬದಲ್ಲಿ ಕಾಣಿಸುತ್ತಿರುವನೇ? ಎಲವೋ! ನೀನು ಏಕೆ ಹೀಗೆ ಜಂಬ ಕೊಚ್ಚಿಕೊಳ್ಳುವೆ,. ನಾನು ಈಗೀಂದೀಗಲೇ ನಿನ್ನ ತಲೆಯನ್ನು ದೇಹದಿಂದ ಬೇರ್ಪಡಿ ಸುವೆನು. ನಿನಗೆ ಸರ್ವಸ್ವನಾದ ನಿನ್ನ ಅದ್ಭುತ ಭರವಸೆಗೆ ಪಾತ್ರನಾದ ಆ ಹರಿಯು ಹೇಗೆ ನಿನ್ನನ್ನು ಕಾಪಾಡುತ್ತಾನೋ ನೋಡೋಣ. ॥14॥

(ಶ್ಲೋಕ-15)

ಮೂಲಮ್

ಏವಂ ದುರುಕ್ತೈರ್ಮುಹುರರ್ದಯನ್ರುಷಾ
ಸುತಂ ಮಹಾಭಾಗವತಂ ಮಹಾಸುರಃ ।
ಖಡ್ಗಂ ಪ್ರಗೃಹ್ಯೋತ್ಪತಿತೋ ವರಾಸನಾತ್
ಸ್ತಂಭಂ ತತಾಡಾತಿಬಲಃ ಸ್ವಮುಷ್ಟಿನಾ ॥

ಅನುವಾದ

ಹೀಗೆ ಆ ಮಹಾಬಲಶಾಲಿಯಾದ ದೈತ್ಯನು ಭಾಗವತೋತ್ತಮನಾದ ಪ್ರಹ್ಲಾದನನ್ನು ಕೋಪಾ ವೇಶದಿಂದ ಪದೇ-ಪದೇ ಜರೆಯುತ್ತಾ ಖಡ್ಗವನ್ನು ಎತ್ತಿ ಕೊಂಡು ಸಿಂಹಾಸನದಿಂದ ಮೇಲಕ್ಕೆ ನೆಗೆದು ಕಂಬವನ್ನು ಮುಷ್ಠಿಯಿಂದ ಜೋರಾಗಿ ಗುದ್ದಿದನು. ॥15॥

(ಶ್ಲೋಕ-16)

ಮೂಲಮ್

ತದೈವ ತಸ್ಮಿನ್ನಿನದೋತಿಭೀಷಣೋ
ಬಭೂವ ಯೇನಾಂಡಕಟಾಹಮಸ್ಫುಟತ್ ।
ಯಂ ವೈ ಸ್ವಧಿಷ್ಣ್ಯೋಪಗತಂ ತ್ವಜಾದಯಃ
ಶ್ರುತ್ವಾ ಸ್ವಧಾಮಾಪ್ಯಯಮಂಗ ಮೇನಿರೇ ॥

ಅನುವಾದ

ಒಡನೆಯೇ ಅಲ್ಲಿ ಇಡೀ ಬ್ರಹ್ಮಾಂಡವೇ ಒಡೆದುಹೋಗುತ್ತಿದೆಯೋ ಎಂಬಂತೆ ಭಯಂಕರವಾದ ಒಂದು ಶಬ್ದವು ಕೇಳಿ ಬಂತು. ಆ ಧ್ವನಿಯು ಲೋಕಪಾಲಕರ ಲೋಕಗಳಿಗೆ ತಲುಪಿದಾಗ ಅದನ್ನು ಕೇಳಿ ಬ್ರಹ್ಮಾದಿಗಳು ತಮ್ಮ ಲೋಕಗಳ ಪ್ರಳಯವೇ ಆಗುತ್ತಿದೆಯೋ ಎಂದು ಭಾವಿಸಿದರು. ॥16॥

(ಶ್ಲೋಕ-17)

ಮೂಲಮ್

ಸ ವಿಕ್ರಮನ್ಪುತ್ರವಧೇಪ್ಸುರೋಜಸಾ
ನಿಶಮ್ಯ ನಿರ್ಹ್ರಾದಮಪೂರ್ವಮದ್ಭುತಮ್ ।
ಅಂತಃ ಸಭಾಯಾಂ ನ ದದರ್ಶ ತತ್ಪದಂ
ವಿತತ್ರಸುರ್ಯೇನ ಸುರಾರಿಯೂಥಪಾಃ ॥

ಅನುವಾದ

ಹಿರಣ್ಯಕಶಿಪು ಪ್ರಹ್ಲಾದನನ್ನು ಕೊಂದುಹಾಕಲೆಂದೇ ಭರ್ರನೇ ಚಿಮ್ಮಿದನು. ಆದರೂ ದೈತ್ಯಸೇನಾಪತಿಗಳನ್ನೂ ಭಯದಿಂದ ನಡುಗಿಸು ತ್ತಿದ್ದ ಆ ಅಪೂರ್ವ, ಅದ್ಬುತ ಶಬ್ದವನ್ನು ಕೇಳಿ ಆತನು ಚಕಿತನಾಗಿ ‘ಯಾರು ಹೀಗೆ ಗರ್ಜಿಸುತ್ತಿದ್ದಾರೆ?’ ಎಂಬುದನ್ನು ನೋಡ ತೊಡಗಿದನು. ಆದರೆ ಅವನಿಗೆ ಸಭೆಯಲ್ಲಿ ಯಾರೂ ಕಾಣಿಸಲಿಲ್ಲ. ॥17॥

(ಶ್ಲೋಕ-18)

ಮೂಲಮ್

ಸತ್ಯಂ ವಿಧಾತುಂ ನಿಜಭೃತ್ಯಭಾಷಿತಂ
ವ್ಯಾಪ್ತಿಂ ಚ ಭೂತೇಷ್ವಖಿಲೇಷು ಚಾತ್ಮನಃ ।
ಅದೃಶ್ಯ ತಾತ್ಯದ್ಭುತರೂಪಮುದ್ವಹನ್
ಸ್ತಂಭೇ ಸಭಾಯಾಂ ನ ಮೃಗಂ ನ ಮಾನುಷಮ್ ॥

ಅನುವಾದ

ಆಗಲೇ ತನ್ನ ಭೃತ್ಯನಾದ ಪ್ರಹ್ಲಾದನ ಮತ್ತು ಬ್ರಹ್ಮದೇವರ ಮಾತುಗಳನ್ನು ಸತ್ಯಗೊಳಿಸಲಿಕ್ಕಾಗಿ ಹಾಗೂ ಸಮಸ್ತ ಭೂತಗಳಲ್ಲಿ ವ್ಯಾಪಿಸಿರುವೆನೆಂಬುದನ್ನು ತೋರಿಸಲಿಕ್ಕಾಗಿ ಸಭೆಯಲ್ಲಿದ್ದ ಆ ಕಂಬದಲ್ಲಿ ಅತ್ಯದ್ಭುತವಾದ ರೂಪದಿಂದ ಭಗವಂತನು ಪ್ರಕಟಗೊಂಡನು. ಆ ರೂಪವು ಕೇವಲ ಮೃಗದಂತಿಲ್ಲ, ಕೇವಲ ಮನುಷ್ಯನೆಂದೂ ಹೇಳುವಂತಿಲ್ಲ. ॥18॥

(ಶ್ಲೋಕ-19)

ಮೂಲಮ್

ಸ ಸತ್ತ್ವಮೇನಂ ಪರಿತೋಪಿ ಪಶ್ಯನ್
ಸ್ತಂಭಸ್ಯ ಮಧ್ಯಾದನು ನಿರ್ಜಿಹಾನಮ್ ।
ನಾಯಂ ಮೃಗೋ ನಾಪಿ ನರೋ ವಿಚಿತ್ರ-
ಮಹೋ ಕಿಮೇತನ್ನೃಮೃಗೇಂದ್ರರೂಪಮ್ ॥

ಅನುವಾದ

ಹಿರಣ್ಯಕಶಿಪು ಶಬ್ದಮಾಡುವವನು ಯಾರು ಎಂದು ಸುತ್ತಲೂ ನೋಡುತ್ತಿರುವಾಗಲೇ ಕಂಬದಿಂದ ಹೊರ ಬಂದ ಆ ಅದ್ಭುತ ಪ್ರಾಣಿಯನ್ನು ನೋಡಿದನು. ಓಹೋ! ಇದೆಂತಹ ವಿಚಿತ್ರಪ್ರಾಣಿ? ಇದು ಮನುಷ್ಯನೂ ಅಲ್ಲ, ಮೃಗವೂ ಅಲ್ಲ. ಮತ್ತೆ ಈ ನರ-ಸಿಂಹ ರೂಪದಲ್ಲಿರುವ ಅಲೌಕಿಕ ಜೀವವು ಯಾವುದು? ಎಂದು ಯೋಚಿಸತೊಡಗಿದನು. ॥19॥

(ಶ್ಲೋಕ-20)

ಮೂಲಮ್

ಮೀಮಾಂಸಮಾನಸ್ಯ ಸಮುತ್ಥಿ ತೋಗ್ರತೋ
ನೃಸಿಂಹರೂಪಸ್ತದಲಂ ಭಯಾನಕಮ್ ।
ಪ್ರತಪ್ತಚಾಮೀಕರಚಂಡಲೋಚನಂ
ಸ್ಫುರತ್ಸಟಾಕೇಸರಜೃಂಭಿತಾನನಮ್ ॥

ಅನುವಾದ

ಹೀಗೆ ಚಿಂತೆಯಲ್ಲಿ ಮುಳುಗಿದ್ದಾಗಲೇ ಹಿರಣ್ಯಕಶಿಪುವಿನ ಎದುರಿಗೇ ನರಸಿಂಹ ಭಗವಂತನು ಬಂದುನಿಂತನು. ಭಗವಂತನ ಆ ರೂಪವು ಭಯಂಕರವಾಗಿತ್ತು. ಅದರಲ್ಲಿ ಕಾದ ಚಿನ್ನದಂತೆ ಕೆಂಪು-ಹಳದಿ ಮಿಶ್ರವಾದ ಭೀಕರವಾದ ಕಣ್ಣುಗಳು, ಆಕಳಿಸುತ್ತಿದ್ದುದರಿಂದ ಕೇಸರಗಳು ಕೆದರಿ ಅತ್ತ-ಇತ್ತ ಅಲೆಗಳಂತೆ ಆಡುತ್ತಿದ್ದವು. ॥20॥

(ಶ್ಲೋಕ-21)

ಮೂಲಮ್

ಕರಾಲದಂಷ್ಟ್ರಂ ಕರವಾಲಚಂಚಲ-
ಕ್ಷುರಾಂತಜಿಹ್ವಂ ಭ್ರುಕುಟೀಮುಖೋಲ್ಬಣಮ್ ।
ಸ್ತಬ್ಧೋರ್ಧ್ವಕರ್ಣಂ ಗಿರಿಕಂದರಾದ್ಭುತ-
ವ್ಯಾತ್ತಾಸ್ಯನಾಸಂ ಹನುಭೇದಭೀಷಣಮ್ ॥

ಅನುವಾದ

ಕರಾಳವಾದ ಕೋರೆದಾಡೆಗಳು, ಕತ್ತಿಯಂತೆ ಝಳಪಿಸುತ್ತಾ ಚೂರಿಯ ಅಲಗಿನಂತೆ ತೀಕ್ಷ್ಣವಾದ ನಾಲಿಗೆಯಿತ್ತು. ಓರೆಯಾದ ಹುಬ್ಬುಗಳಿಂದ ಅವನ ಮುಖವು ಇನ್ನೂ ಭಯಾನಕವಾಗಿತ್ತು. ನಿಶ್ಚಲವಾಗಿ ಮೇಲಕ್ಕೆ ನಿಮಿರಿನಿಂತ ಕಿವಿಗಳು, ಅರಳಿದ ಮೂಗಿನ ಹೊಳ್ಳೆಗಳು, ತೆರೆದಿರುವ ಬಾಯಿಯು ಪರ್ವತ ಗುಹೆಯಂತೆ ಅದ್ಭುತವಾಗಿ ಕಾಣುತ್ತಿತ್ತು. ಸೀಳಿದ ಕೆನ್ನೆಗಳಿಂದ ಅವನ ರೂಪವು ರೌದ್ರತಮವಾಗಿತ್ತು. ॥21॥

(ಶ್ಲೋಕ-22)

ಮೂಲಮ್

ದಿವಿಸ್ಪೃಶತ್ಕಾಯಮದೀರ್ಘಪೀವರ-
ಗ್ರೀವೋರುವಕ್ಷಃಸ್ಥಲಮಲ್ಪಮಧ್ಯಮಮ್ ।
ಚಂದ್ರಾಂಶುಗೌರೈಶ್ಛುರಿತಂ ತನೂರುಹೈ-
ರ್ವಿಶ್ವಗ್ಭುಜಾನೀಕಶತಂ ನಖಾಯುಧಮ್ ॥

ಅನುವಾದ

ಸ್ವರ್ಗವನ್ನು ಮುಟ್ಟುತ್ತಿದ್ದ ವಿಶಾಲವಾದ ದೇಹ, ಉದ್ದವಾಗಿ ಪುಷ್ಟವಾದ ಕತ್ತು, ಅಗಲವಾದ ಎದೆ, ತೆಳುವಾದ ನಡು, ಚಂದ್ರಕಿರಣಗಳಂತೆ ಶರೀರದ ಮೇಲೆ ಥಳಥಳಿಸುತ್ತಿದ್ದ ಬಿಳಿಯ ಕೂದಲು, ಎಲ್ಲ ಕಡೆಗಳಲ್ಲಿಯೂ ಹರಡಿಕೊಂಡಿದ್ದ ನೂರಾರು ಭುಜಗಳು ಮತ್ತು ಅವುಗಳಲ್ಲಿ ಆಯುಧಗಳಂತೆ ಕಂಗೊಳಿಸುತ್ತಿದ್ದ ಉಗುರುಗಳು ಇದ್ದವು. ॥22॥

(ಶ್ಲೋಕ-23)

ಮೂಲಮ್

ದುರಾಸದಂ ಸರ್ವನಿಜೇತರಾಯುಧ-
ಪ್ರವೇಕವಿದ್ರಾವಿತದೈತ್ಯದಾನವಮ್ ।
ಪ್ರಾಯೇಣ ಮೇಯಂ ಹರಿಣೋರುಮಾಯಿನಾ
ವಧಃ ಸ್ಮೃತೋನೇನ ಸಮುದ್ಯತೇನ ಕಿಮ್ ॥

ಅನುವಾದ

ಆತನ ಬಳಿಯಲ್ಲಿ ಸುಳಿಯುವುದಕ್ಕೂ ಯಾರಿಗೂ ಧೈರ್ಯವು ಬರುತ್ತಿರಲಿಲ್ಲ. ಸುದರ್ಶನ ಚಕ್ರದಿಂದ ಮತ್ತು ವಜ್ರವೇ ಮುಂತಾದ ಇತರ ಶ್ರೇಷ್ಠ ಆಯುಧಗಳಿಂದ ಅವನು ಎಲ್ಲ ದೈತ್ಯ-ದಾನವರನ್ನು ಓಡಿಸಿ ಬಿಟ್ಟನು. ಹಿರಣ್ಯಕಶಿಪು ಯೋಚಿಸತೊಡಗಿದನು ಮಹಾಮಾಯಾವಿಯಾದ ವಿಷ್ಣುವೇ ನನ್ನನ್ನು ಕೊಂದು ಹಾಕಲು ಈ ರೂಪ-ವೇಷದಿಂದ ಬಂದಿರಲಿಕ್ಕಿಲ್ಲವಲ್ಲ! ಏನಾದರೇನಂತೆ, ಈತನ ಯಾವ ಆಟವೂ ನನ್ನ ಬಳಿಯಲ್ಲಿ ನಡೆಯಲಿಕ್ಕಿಲ್ಲ. ॥23॥

(ಶ್ಲೋಕ-24)

ಮೂಲಮ್

ಏವಂ ಬ್ರುವಂಸ್ತ್ವಭ್ಯಪತದ್ಗದಾಯುಧೋ
ನದನ್ನೃಸಿಂಹಂ ಪ್ರತಿ ದೈತ್ಯಕುಂಜರಃ ।
ಅಲಕ್ಷಿತೋಗ್ನೌ ಪತಿತಃ ಪತಂಗಮೋ
ಯಥಾ ನೃಸಿಂಹೌಜಸಿ ಸೋಸುರಸ್ತದಾ ॥

ಅನುವಾದ

ಹೀಗೆ ಅಂದುಕೊಂಡು ಸಿಂಹಗರ್ಜನೆಯನ್ನು ಮಾಡುತ್ತಾ ದೈತ್ಯ ರಾಜನಾದ ಹಿರಣ್ಯಕಶಿಪು ಕೈಯಲ್ಲಿ ಗದೆಯನ್ನೆತ್ತಿ ಕೊಂಡು ಶ್ರೀನರಸಿಂಹದೇವರ ಮೇಲೆ ಎಗರಿಬಿದ್ದನು. ಆದರೆ ಬೆಂಕಿಯನ್ನು ಆಕ್ರಮಿಸಲು ಹೋದ ಮಿಡತೆಯು ಅದರಲ್ಲಿ ಬಿದ್ದು ಅದೃಶ್ಯವಾಗುವಂತೆಯೇ ಭಗವಂತನಾದ ನರಸಿಂಹನನ್ನು ಮುತ್ತಲು ಹೋದ ಅಸುರನು ಸ್ವಾಮಿಯ ತೇಜಸ್ಸಿನಲ್ಲಿ ಮುಚ್ಚಿಹೋದನು. ॥24॥

(ಶ್ಲೋಕ-25)

ಮೂಲಮ್

ನ ತದ್ವಿಚಿತ್ರಂ ಖಲು ಸತ್ತ್ವಧಾಮನಿ
ಸ್ವತೇಜಸಾ ಯೋ ನು ಪುರಾಪಿಬತ್ತಮಃ ।
ತತೋಭಿಪದ್ಯಾಭ್ಯಹನನ್ಮಹಾಸುರೋ
ರುಷಾ ನೃಸಿಂಹಂ ಗದಯೋರುವೇಗಯಾ ॥

ಅನುವಾದ

ಸಮಸ್ತ ಶಕ್ತಿಗಳಿಗೂ, ತೇಜಸ್ಸುಗಳಿಗೂ ಆಶ್ರಯನಾಗಿರುವ ಭಗವಂತನ ಸಂಬಂಧದಲ್ಲಿ ಇದು ಆಶ್ಚರ್ಯದ ವಿಷಯವಲ್ಲ. ಏಕೆಂದರೆ, ಸೃಷ್ಟಿಯ ಪ್ರಾರಂಭದಲ್ಲಿ ಅವನು ತನ್ನ ತೇಜಸ್ಸಿನಿಂದ ಪ್ರಳಯಕ್ಕೆ ಕಾರಣವಾದ ತಮೋಗುಣ ರೂಪವಾದ ಘೋರ ಅಂಧಕಾರವನ್ನು ನುಂಗಿಹಾಕಿದ್ದನು. ಅನಂತರ ಆ ದೈತ್ಯನು ಅತಿಕ್ರೋಧದಿಂದ ದೇವನ ಬಳಿಗೆ ನೆಗೆದು, ಗದೆಯನ್ನು ಜೋರಾಗಿ ತಿರುಗಿಸುತ್ತಾ ಬಿರುಸಿನಿಂದ ನರಸಿಂಹ ಭಗವಂತನನ್ನು ಹೊಡೆದನು. ॥25॥

(ಶ್ಲೋಕ-26)

ಮೂಲಮ್

ತಂ ವಿಕ್ರಮಂತಂ ಸಗದಂ ಗದಾಧರೋ
ಮಹೋರಗಂ ತಾರ್ಕ್ಷ್ಯಸುತೋ ಯಥಾಗ್ರಹೀತ್ ।
ಸ ತಸ್ಯ ಹಸ್ತೋತ್ಕಲಿತಸ್ತದಾಸುರೋ
ವಿಕ್ರೀಡತೋ ಯದ್ವದಹಿರ್ಗರುತ್ಮತಃ ॥

ಅನುವಾದ

ಆದರೆ ಭಗವಂತನು ದೈತ್ಯನು ಹೊಡೆಯುತ್ತಿರುವಂತೆಯೇ ಗರುಡನು ಸರ್ಪವನ್ನು ಹಿಡಿದುಕೊಳ್ಳುವಂತೆ ಭಗವಂತನು ಗದೆಯ ಸಹಿತ ಆತನನ್ನು ಹಿಡಿದುಕೊಂಡನು. ದೇವನು ದೈತ್ಯನೊಡನೆ ಆಟವಾಡ ತೊಡಗಿದಾಗ ಅವನು ಆಟವಾಡುತ್ತಿರುವ ಗರುಡನ ಹಿಡಿತದಿಂದ ಹಾವು ತಪ್ಪಿಸಿಕೊಳ್ಳುವಂತೆ ಭಗವಂತನ ಕೈಯಿಂದ ತನ್ನನ್ನು ಬಿಡಿಸಿಕೊಂಡುಬಿಟ್ಟನು. ॥26॥

(ಶ್ಲೋಕ-27)

ಮೂಲಮ್

ಅಸಾಧ್ವಮನ್ಯಂತ ಹೃತೌಕಸೋಮರಾ
ಘನಚ್ಛದಾ ಭಾರತ ಸರ್ವಧಿಷ್ಣ್ಯಪಾಃ ।
ತಂ ಮನ್ಯಮಾನೋ ನಿಜವೀರ್ಯಶಂಕಿತಂ
ಯದ್ಧಸ್ತಮುಕ್ತೋ ನೃಹರಿಂ ಮಹಾಸುರಃ ।
ಪುನಸ್ತಮಾಸಜ್ಜತ ಖಡ್ಗಚರ್ಮಣೀ
ಪ್ರಗೃಹ್ಯ ವೇಗೇನ ಜಿತಶ್ರಮೋ ಮೃಧೇ ॥

ಅನುವಾದ

ಯುಧಿಷ್ಠಿರನೇ! ಆ ಸಮಯದಲ್ಲಿ ಲೋಕಪಾಲ ಕರೆಲ್ಲರೂ ಮೋಡಗಳಲ್ಲಿ ಅವಿತುಕೊಂಡು ಈ ಯುದ್ಧವನ್ನು ನೋಡುತ್ತಿದ್ದರು. ಅವರ ಸ್ವರ್ಗವನ್ನಾದರೋ ಹಿರಣ್ಯಕಶಿಪು ಮೊದಲೇ ಕಸಿದುಕೊಂಡಿದ್ದನು. ದೈತ್ಯನು ಭಗವಂತನ ಕೈಯಿಂದ ಜಾರಿಹೋದುದನ್ನು ನೋಡಿದಾಗ ಅವರು ಇನ್ನೂ ಹೆದರಿದರು. ಹಿರಣ್ಯಕಶಿಪುವೂ ನರಸಿಂಹನು ನನ್ನ ಬಲವೀರ್ಯದಿಂದ ಹೆದರಿಯೇ ನನ್ನನ್ನು ತನ್ನ ಕೈಯಿಂದ ಬಿಟ್ಟುಬಿಟ್ಟನು ಎಂದೇ ತಿಳಿದನು. ಹೀಗೆ ವಿಚಾರಮಾಡಿದ್ದರಿಂದ ಅವನ ಬಳಲಿಕೆ ದೂರವಾಯಿತು. ಮತ್ತೆ ಅವನು ಯುದ್ಧಕ್ಕಾಗಿ ಕತ್ತಿ-ಗುರಾಣಿಗಳನ್ನು ಹಿಡಿದುಕೊಂಡು ನರಸಿಂಹದೇವರ ಕಡೆಗೆ ನುಗ್ಗಿದನು. ॥27॥

(ಶ್ಲೋಕ-28)

ಮೂಲಮ್

ತಂ ಶ್ಯೇನವೇಗಂ ಶತಚಂದ್ರವರ್ತ್ಮಭಿ-
ಶ್ಚರಂತಮಚ್ಛಿದ್ರಮುಪರ್ಯಧೋ ಹರಿಃ ।
ಕೃತ್ವಾಟ್ಟಹಾಸಂ ಖರಮುತ್ಸ್ವನೋಲ್ಬಣಂ
ನಿಮೀಲಿತಾಕ್ಷಂ ಜಗೃಹೇ ಮಹಾಜವಃ ॥

(ಶ್ಲೋಕ-29)

ಮೂಲಮ್

ವಿಷ್ವಕ್ಸ್ಫುರಂತಂ ಗ್ರಹಣಾತುರಂ ಹರಿ-
ರ್ವ್ಯಾಲೋ ಯಥಾಖುಂ ಕುಲಿಶಾಕ್ಷತತ್ವಚಮ್ ।
ದ್ವಾರ್ಯೂರ ಆಪಾತ್ಯ ದದಾರ ಲೀಲಯಾ
ನಖೈರ್ಯಥಾಹಿಂ ಗರುಡೋ ಮಹಾವಿಷಮ್ ॥

ಅನುವಾದ

ಆಗ ಅವನು ಗಿಡುಗಿನಂತೆ ಅತಿವೇಗದಿಂದ ಮೇಲೆ-ಕೆಳಗೆ ಕತ್ತಿ-ಗುರಾಣಿಗಳನ್ನು ತಿರುಗಿಸುವ ವರಸೆಗಳಿಂದ ಶತ್ರುವು ತನ್ನ ಮೇಲೆ ಆಕ್ರಮಣ ಮಾಡುವುದಕ್ಕೆ ಅವಕಾಶವೇ ಸಿಕ್ಕದಂತೆ ಮಾಡುತ್ತಿದ್ದನು. ಆಗ ಭಗವಂತನು ಗಟ್ಟಿಯಾಗಿ ಪ್ರಚಂಡ ಮತ್ತು ಭಯಂಕರ ಅಟ್ಟಹಾಸ ಮಾಡಿದನು. ಇದರಿಂದ ಹಿರಣ್ಯಕಶಿಪುವಿನ ಕಣ್ಣುಗಳು ಮುಚ್ಚಿ ಹೋದುವು. ಮತ್ತೆ ಅತಿರಭಸದಿಂದ ಜಿಗಿದು ಸರ್ಪವು ಇಲಿಯನ್ನು ಹಿಡಿಯುವಂತೆ ಭಗವಂತನು ಆತನನ್ನು ಹಿಡಿದುಕೊಂಡನು. ವಜ್ರಾಯುಧದ ಏಟಿನಿಂದಲೂ ಯಾವಾತನ ಚರ್ಮವು ತರಚಲಿಲ್ಲವೋ ಅಂತಹ ಹಿರಣ್ಯಕಶಿಪು ಈಗ ಶ್ರೀನರಸಿಂಹನ ಪಂಜದಿಂದ ತನ್ನನ್ನು ಬಿಡಿಸಿಕೊಳ್ಳಲು ಚಡಪಡಿಸತೊಡಗಿದನು. ಭಗವಂತನು ಆತನನ್ನು ಸಭೆಯ ದ್ವಾರದ ಬಳಿಗೆ ಎಳೆದುಕೊಂಡು ಹೋಗಿ ಹೊಸ್ತಿಲಮೇಲೆ ಕುಳಿತು ತನ್ನ ತೊಡೆಯ ಮೇಲೆ ಕೆಡವಿಕೊಂಡು ಗರುಡನು ಮಹಾವಿಷ ಧಾರಿಯಾದ ಸರ್ಪವನ್ನು ಸೀಳಿಹಾಕುವಂತೆ ಶ್ರೀನರಸಿಂಹನು ಲೀಲಾಜಾಲವಾಗಿ ತನ್ನ ಉಗುರುಗಳಿಂದಲೇ ಅವನ ಉದರವನ್ನು ಬಗೆದು ಸೀಳಿ ಹಾಕಿದನು. ॥28-29॥

(ಶ್ಲೋಕ-30)

ಮೂಲಮ್

ಸಂರಂಭದುಷ್ಪ್ರೇಕ್ಷ್ಯಕರಾಲಲೋಚನೋ
ವ್ಯಾತ್ತಾನನಾಂತಂ ವಿಲಿಹನ್ಸ್ವಜಿಹ್ವಯಾ ।
ಅಸೃಗ್ಲವಾಕ್ತಾರುಣಕೇಸರಾನನೋ
ಯಥಾಂತ್ರಮಾಲೀ ದ್ವಿಪಹತ್ಯಯಾ ಹರಿಃ ॥

ಅನುವಾದ

ಆ ಸಮಯದಲ್ಲಿ ಅವನ ಕ್ರೋಧ ತುಂಬಿದ ವಿಕರಾಳ ಕಣ್ಣುಗಳ ಕಡೆಗೆ ನೋಡಲಾಗುತ್ತಿರಲಿಲ್ಲ. ಅವನು ಚಾಚಿದ ನಾಲಿಗೆಯಿಂದ ತನ್ನ ತೆರೆದ ಬಾಯಿಯ ಎರಡೂ ಮೂಲೆಗಳನ್ನೂ ನೆಕ್ಕುತ್ತಿದ್ದನು. ರಕ್ತದ ಕಣಗಳಿಂದ ಅವನ ಬಾಯಿಯು ಮತ್ತು ಕತ್ತಿನ ಕೇಸರಗಳು ಕೆಂಪಗಾಗಿದ್ದವು. ಆನೆಯನ್ನು ಕೊಂದು ಅದರ ಕರುಳಬಳ್ಳಿಯನ್ನು ಕುತ್ತಿಗೆಗೆ ಹಾಕಿಕೊಂಡ ಸಿಂಹದಂತೆ ಆ ನರಸಿಂಹನು ರುದ್ರ ಸೌಂದರ್ಯದಿಂದ ಕಂಗೊಳಿಸುತ್ತಿದ್ದನು. ॥30॥

(ಶ್ಲೋಕ-31)

ಮೂಲಮ್

ನಖಾಂಕುರೋತ್ಪಾಟಿತಹೃತ್ಸರೋರುಹಂ
ವಿಸೃಜ್ಯ ತಸ್ಯಾನುಚರಾನುದಾಯುಧಾನ್ ।
ಅಹನ್ಸಮಂತಾನ್ನಖಶಸಪಾರ್ಷ್ಣಿಭಿ-
ರ್ದೋರ್ದಂಡಯೂಥೋನುಪಥಾನ್ಸಹಸ್ರಶಃ ॥

ಅನುವಾದ

ಅವನು ತನ್ನ ತೀಕ್ಷ್ಣವಾದ ಉಗುರುಗಳಿಂದ ಹಿರಣ್ಯಕಶಿಪುವಿನ ಹೃದಯವನ್ನು ಕಿತ್ತು ನೆಲಕ್ಕೆ ಒಗೆದುಬಿಟ್ಟನು. ಆಗ ಸಾವಿರಾರು ದೈತ್ಯ-ದಾನವರು ಕೈಗಳಲ್ಲಿ ಶಸ್ತ್ರಗಳನ್ನು ಹಿಡಿದುಕೊಂಡು ಭಗವಂತನ ಮೇಲೆ ಪ್ರಹಾರ ಮಾಡತೊಡಗಿದರು. ಆದರೆ ಭಗವಂತನು ತನ್ನ ಭುಜಗಳೆಂಬ ಸೈನ್ಯದಿಂದಲೂ, ಒದೆತಗಳಿಂದಲೂ, ಉಗುರುಗಳೆಂಬ ಶಸ್ತ್ರಗಳಿಂದಲೂ ನಾಲ್ಕೂ ಕಡೆಗಳಲ್ಲಿಯೂ ಅವರನ್ನು ಕೊಂದುಹಾಕಿದನು. ॥31॥

(ಶ್ಲೋಕ-32)

ಮೂಲಮ್

ಸಟಾವಧೂತಾ ಜಲದಾಃ ಪರಾಪತನ್-
ಗ್ರಹಾಶ್ಚ ತದ್ದೃಷ್ಟಿವಿಮುಷ್ಟರೋಚಿಷಃ ।
ಅಂಭೋಧಯಃ ಶ್ವಾಸಹತಾ ವಿಚುಕ್ಷುಭು-
ರ್ನಿರ್ಹ್ರಾದಭೀತಾ ದಿಗಿಭಾ ವಿಚುಕ್ರುಶುಃ ॥

ಅನುವಾದ

ಯುಧಿಷ್ಠಿರನೇ! ಆಗ ಭಗವಾನ್ ನರಸಿಂಹನ ಕತ್ತಿನ ಕೇಸರಗಳ ಅಪ್ಪಳಿಕೆಯಿಂದ ಮೋಡಗಳು ಚೆದುರಿ ಹೋದುವು. ಅವನ ಕಣ್ಣುಗಳ ಜ್ವಾಲೆಗಳಿಂದ ಸೂರ್ಯಾದಿಗ್ರಹರ ತೇಜಸ್ಸು ಮಂಕಾಯಿತು. ಅವನ ಉಸಿರಾಟದ ಹೊಡೆತದಿಂದ ಸಮುದ್ರಗಳು ಕ್ಷೋಭೆಗೊಂಡವು. ಅವನ ಸಿಂಹನಾದಕ್ಕೆ ಹೆದರಿ ದಿಗ್ಗಜಗಳು ಘೀಳಿಟ್ಟವು. ॥32॥

(ಶ್ಲೋಕ-33)

ಮೂಲಮ್

ದ್ಯೌಸ್ತತ್ಸಟೋತ್ಕ್ಷಿಪ್ತವಿಮಾನಸಂಕುಲಾ
ಪ್ರೋತ್ಸರ್ಪತ ಕ್ಷ್ಮಾಚ ಪದಾತಿಪೀಡಿತಾ ।
ಶೈಲಾಃ ಸಮುತ್ಪೇತುರಮುಷ್ಯ ರಂಹಸಾ
ತತ್ತೇಜಸಾ ಖಂ ಕಕುಭೋ ನ ರೇಜಿರೇ ॥

ಅನುವಾದ

ಅವನ ಕೇಸರಗಳಿಗೆ ಢಿಕ್ಕಿ ಹೊಡೆದು ದೇವತೆಗಳ ವಿಮಾನಗಳು ಅಸ್ತ-ವ್ಯಸ್ತವಾದುವು. ಸ್ವರ್ಗವು ನಡುಗಿಹೋಯಿತು. ಅವನ ಪಾದಾಘಾತದಿಂದ ಭೂಕಂಪ ಉಂಟಾಯಿತು. ವೇಗದಿಂದ ಪರ್ವತಗಳು ಹಾರತೊಡಗಿದವು. ಅವನ ತೇಜಸ್ಸಿನ ಮಿಂಚಿನಿಂದ ಆಕಾಶವೂ, ದಿಕ್ಕುಗಳೂ ಕಳೆಗುಂದಿ ಕತ್ತಲಾವರಿಸಿ ಕಾಣಿಸದೇ ಹೋದುವು. ॥33॥

(ಶ್ಲೋಕ-34)

ಮೂಲಮ್

ತತಃ ಸಭಾಯಾಮುಪವಿಷ್ಟಮುತ್ತಮೇ
ನೃಪಾಸನೇ ಸಂಭೃತತೇಜಸಂ ವಿಭುಮ್ ।
ಅಲಕ್ಷಿತದ್ವೈರಥಮತ್ಯಮರ್ಷಣಂ
ಪ್ರಚಂಡ ವಕಂ ನ ಬಭಾಜ ಕಶ್ಚನ ॥

ಅನುವಾದ

ಆ ಸಮಯದಲ್ಲಿ ನರಸಿಂಹ ಭಗವಂತನನ್ನು ಇದಿರಿಸುವವರು ಯಾರೂ ಕಂಡು ಬಂದಿಲ್ಲ. ಆದರೂ ಅವನ ಕ್ರೋಧವು ಇನ್ನೂ ಹೆಚ್ಚುತ್ತಲೇ ಇತ್ತು. ಅವನು ಹಿರಣ್ಯಕಶಿಪುವಿನ ರಾಜ ಸಭೆಯ ಎತ್ತರವಾದ ಸಿಂಹಾಸನದ ಮೇಲೆ ಹೋಗಿ ಕುಳಿತನು. ಆಗ ಅವನ ಅತ್ಯಂತ ತೇಜಃ ಪುಂಜ ಮತ್ತು ಕ್ರೋಧದಿಂದ ತುಂಬಿದ ಭಯಂಕರ ವದನವನ್ನು ಕಂಡು ಅವನ ಬಳಿಗೆ ಹೋಗಿ ಸೇವೆ ಮಾಡಲೂ ಯಾರಿಗೂ ಧೈರ್ಯಬರಲಿಲ್ಲ. ॥34॥

(ಶ್ಲೋಕ-35)

ಮೂಲಮ್

ನಿಶಮ್ಯ ಲೋಕತ್ರಯಮಸ್ತಕಜ್ವರಂ
ತಮಾದಿದೈತ್ಯಂ ಹರಿಣಾ ಹತಂ ಮೃಧೇ ।
ಪ್ರಹರ್ಷವೇಗೋತ್ಕಲಿತಾನನಾ ಮುಹುಃ
ಪ್ರಸೂನವರ್ಷೈರ್ವವೃಷುಃ ಸುರಸಿಯಃ ॥

ಅನುವಾದ

ಯುಧಿಷ್ಠಿರನೇ! ಮೂರು ಲೋಕಗಳಿಗೂ ತಲೆ ನೋವಾಗಿದ್ದ ಆ ಆದಿದೈತ್ಯ ಹಿರಣ್ಯಕಶಿಪು ಯುದ್ಧದಲ್ಲಿ ಭಗವಂತನ ಕೈಯಿಂದ ಹತನಾದನೆಂಬ ಶುಭಸಮಾಚಾರವು ಸ್ವರ್ಗದ ದೇವಿಯರಿಗೆ ತಿಳಿದಾಗ ಆನಂದದಿಂದ ಅವರ ಮುಖಗಳು ಅರಳಿದವು. ಅವರು ಮತ್ತೆ-ಮತ್ತೆ ಭಗವಂತನ ಮೇಲೆ ಹೂವಿನ ಮಳೆಗರೆಯ ತೊಡಗಿದರು. ॥35॥

(ಶ್ಲೋಕ-36)

ಮೂಲಮ್

ತದಾ ವಿಮಾನಾವಲಿಭಿರ್ನಭಸ್ಥಲಂ
ದಿದೃಕ್ಷತಾಂ ಸಂಕುಲಮಾಸ ನಾಕಿನಾಮ್ ।
ಸುರಾನಕಾ ದುಂದುಭಯೋಥ ಜಘ್ನಿರೇ
ಗಂಧರ್ವಮುಖ್ಯಾ ನನೃತುರ್ಜಗುಃ ಸಿಯಃ ॥

ಅನುವಾದ

ಭಗವಂತನ ದರ್ಶನಕ್ಕಾಗಿ ಬಂದ ದೇವತೆಗಳ ವಿಮಾನಗಳಿಂದ ಆಕಾಶವು ತುಂಬಿಹೋಯಿತು. ದೇವದುಂದು ಭಿಗಳು ಮೊಳಗಿದವು. ಗಂಧರ್ವರು ಗಾನ ಮಾಡತೊಡಗಿದರು. ಅಪ್ಸರೆಯರು ನರ್ತನ ಮಾಡತೊಡಗಿದರು. ॥36॥

(ಶ್ಲೋಕ-37)

ಮೂಲಮ್

ತತ್ರೋಪವ್ರಜ್ಯ ವಿಬುಧಾ ಬ್ರಹ್ಮೇಂದ್ರಗಿರಿಶಾದಯಃ ।
ಋಷಯಃ ಪಿತರಃ ಸಿದ್ಧಾ ವಿದ್ಯಾಧರಮಹೋರಗಾಃ ॥

(ಶ್ಲೋಕ-38)

ಮೂಲಮ್

ಮನವಃ ಪ್ರಜಾನಾಂ ಪತಯೋ ಗಂಧರ್ವಾಪ್ಸರಚಾರಣಾಃ ।
ಯಕ್ಷಾಃ ಕಿಂಪುರುಷಾಸ್ತಾತ ವೇತಾಲಾಃ ಸಿದ್ಧಕಿನ್ನರಾಃ ॥

(ಶ್ಲೋಕ-39)

ಮೂಲಮ್

ತೇ ವಿಷ್ಣು ಪಾರ್ಷದಾಃ ಸರ್ವೇ ಸುನಂದಕುಮುದಾದಯಃ ।
ಮೂರ್ಧ್ನಿ ಬದ್ಧಾಂಜಲಿಪುಟಾ ಆಸೀನಂ ತೀವ್ರತೇಜಸಮ್ ।
ಈಡಿರೇ ನರಶಾರ್ದೂಲಂ ನಾತಿದೂರಚರಾಃ ಪೃಥಕ್ ॥

ಅನುವಾದ

ಅದೇ ಸಮಯಕ್ಕೆ ಬ್ರಹ್ಮದೇವರು, ಸ್ವಾಮಿ ಶಂಕರನು, ಇಂದ್ರಾದಿದೇವತೆಗಳೂ, ಋಷಿಗಳೂ, ಪಿತೃಗಳೂ, ಸಿದ್ಧರೂ, ವಿದ್ಯಾಧರರೂ, ಮಹಾನಾಗರೂ, ಮನುಗಳೂ, ಪ್ರಜಾಪತಿಗಳೂ, ಗಂಧರ್ವರೂ, ಅಪ್ಸರೆಯರೂ, ಚಾರಣರೂ, ಯಕ್ಷರೂ, ಕಿಂಪುರುಷರೂ, ಬೇತಾಳರೂ, ಸಿದ್ಧರೂ, ಕಿನ್ನರರೂ ಹಾಗೂ ಸುನಂದ-ಕುಮುದ ಮೊದಲಾದ ಭಗವಂತನ ಪಾರ್ಷದರೂ, ನರಸಿಂಹ ಭಗವಂತನ ಬಳಿಗೆ ಬಂದರು. ಅವರೆಲ್ಲರೂ ತಲೆಯಮೇಲೆ ಕೈಜೋಡಿಸಿಕೊಂಡು ಸಿಂಹಾಸನದ ಮೇಲೆ ಬೆಳಗುತ್ತಿದ್ದ ಅತ್ಯಂತ ತೇಜಸ್ವೀ ನರಸಿಂಹನನ್ನು ಸ್ವಲ್ಪ ದೂರದಿಂದಲೇ ಬೇರೆ-ಬೇರೆಯಾಗಿ ಸ್ತುತಿಸ ತೊಡಗಿದರು. ॥37-39॥

(ಶ್ಲೋಕ-40)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ನತೋಸ್ಮ್ಯನಂತಾಯ ದುರಂತಶಕ್ತಯೇ
ವಿಚಿತ್ರವೀರ್ಯಾಯ ಪವಿತ್ರಕರ್ಮಣೇ ।
ವಿಶ್ವಸ್ಯ ಸರ್ಗಸ್ಥಿತಿಸಂಯಮಾನ್ಗುಣೈಃ
ಸ್ವಲೀಲಯಾ ಸಂದಧತೇವ್ಯಯಾತ್ಮನೇ ॥

ಅನುವಾದ

ಬ್ರಹ್ಮದೇವರು ಹೇಳಿದರು — ಪ್ರಭೋ! ನಿನ್ನ ಶಕ್ತಿಯ ಪಾರವನ್ನು ಕಾಣಲು ಸಾಧ್ಯವಿಲ್ಲದ ಅನಂತನಾದ ದೇವನಿಗೆ ನಮಸ್ಕಾರವು. ನಿನ್ನ ಪರಾಕ್ರಮವು ವಿಚಿತ್ರವಾಗಿದ್ದು, ಕರ್ಮ ಗಳು ಪವಿತ್ರವಾಗಿವೆ. ಗುಣಗಳ ಮೂಲಕ ನೀನು ಲೀಲೆ ಯಂದಲೇ ಸಮಸ್ತ ವಿಶ್ವದ ಉತ್ಪತ್ತಿ, ಪಾಲನೆ, ಪ್ರಳಯ ಗಳನ್ನು ಯಥೋಚಿತವಾಗಿ ಮಾಡುತ್ತಿದ್ದರೂ, ನೀನು ಅವು ಗಳೊಂದಿಗೆ ಯಾವ ಸಂಬಂಧವನ್ನೂ ಇರಿಸಿಕೊಳ್ಳುವುದಿಲ್ಲ. ಸ್ವಯಂ ನಿರ್ವಿಕಾರನಾಗಿರುವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥40॥

(ಶ್ಲೋಕ-41)

ಮೂಲಮ್ (ವಾಚನಮ್)

ಶ್ರೀರುದ್ರ ಉವಾಚ

ಮೂಲಮ್

ಕೋಪಕಾಲೋ ಯುಗಾಂತಸ್ತೇಹತೋಯಮಸುರೋಲ್ಪಕಃ ।
ತತ್ಸುತಂ ಪಾಹ್ಯುಪಸೃತಂಭಕ್ತಂ ತೇ ಭಕ್ತವತ್ಸಲ ॥

ಅನುವಾದ

ಶ್ರೀರುದ್ರದೇವರು ಹೇಳಿದರು — ನಿನ್ನ ಕೋಪವನ್ನು ಉಪಸಂಹಾರ ಮಾಡಿಕೋ. ನೀನು ಕ್ರೋಧವನ್ನು ಪ್ರಕಟಿಸುವ ಕಾಲ ಮಹಾಪ್ರಳಯವಲ್ಲವೇ? ಆದರೂ ಈ ತುಚ್ಛನಾದ ದೈತ್ಯನ ಮೇಲೆ ಕ್ರೋಧವನ್ನು ತೋರಿದೆ. ಆತನನ್ನು ಸಂಹಾರ ಮಾಡಿಯೂ ಆಯಿತು. ಅವನ ಪುತ್ರನು ನಿನಗೆ ಶರಣು ಬಂದಿರುವನು. ಭಕ್ತವತ್ಸಲ ಪ್ರಭೋ! ನೀನು ನಿನ್ನ ಈ ಭಕ್ತ ನನ್ನು ರಕ್ಷಿಸು. ॥41॥

(ಶ್ಲೋಕ-42)

ಮೂಲಮ್ (ವಾಚನಮ್)

ಇಂದ್ರ ಉವಾಚ

ಮೂಲಮ್

ಪ್ರತ್ಯಾನೀತಾಃ ಪರಮ ಭವತಾ ತ್ರಾಯತಾ ನಃ ಸ್ವಭಾಗಾ
ದೈತ್ಯಾಕ್ರಾಂತಂ ಹೃದಯಕಮಲಂ ತ್ವದ್ಗೃಹಂ ಪ್ರತ್ಯಬೋಧಿ ।
ಕಾಲಗ್ರಸ್ತಂ ಕಿಯದಿದಮಹೋ ನಾಥ ಶುಶ್ರೂಷತಾಂ ತೇ
ಮುಕ್ತಿಸ್ತೇಷಾಂ ನ ಹಿ ಬಹುಮತಾ ನಾರಸಿಂಹಾಪರೈಃ ಕಿಮ್ ॥

ಅನುವಾದ

ಇಂದ್ರನು ಹೇಳಿದನು — ಓ ಪುರುಷೋತ್ತಮಾ! ನೀನು ನಮ್ಮನ್ನು ರಕ್ಷಿಸಿದ್ದೀಯೆ. ನೀನು ನಮ್ಮ ಯಜ್ಞಭಾಗಗಳನ್ನು ಹಿಂದಿರುಗಿಸಿ ಕೊಟ್ಟಿರುವೆ, ಅವು ವಾಸ್ತವವಾಗಿ ಅಂತರ್ಯಾಮಿ ಯಾದ ನಿನ್ನದೇ ಆಗಿವೆ. ದೈತ್ಯರ ಆತಂಕದಿಂದ ಮುಚ್ಚಿ ಹೋಗಿದ್ದ ನಮ್ಮ ಹೃದಯಕಮಲಗಳನ್ನು ನೀನು ಅರಳು ವಂತೆ ಮಾಡಿರುವೆ. ಅವೂ ಕೂಡ ನಿನ್ನ ವಾಸಸ್ಥಾನಗಳೇ ಆಗಿವೆ. ನಮ್ಮಗಳಿಗೆ ಪುನಃ ದೊರೆತ ಈ ಸ್ವರ್ಗಾದಿ ರಾಜ್ಯ ವೆಲ್ಲವೂ ಕಾಲಕ್ಕೆ ತುತ್ತಾಗಿದೆ. ನಿನ್ನ ಸೇವಕರಾದವರಿಗೆ ಇದೇನು ಮಹಾ! ಸ್ವಾಮಿಯೇ! ನಿನ್ನ ಸೇವೆಯನ್ನು ಬಯಸುವವರು ಮುಕ್ತಿಯನ್ನು ಆದರಿಸುವುದಿಲ್ಲ. ಮತ್ತೆ ಬೇರೆ ಭೋಗಗಳಾದರೋ ಅವರಿಗೆ ಆವಶ್ಯಕತೆ ಏನಿದೆ? ॥42॥

(ಶ್ಲೋಕ-43)

ಮೂಲಮ್ (ವಾಚನಮ್)

ಋಷಯ ಊಚುಃ

ಮೂಲಮ್

ತ್ವಂ ನಸ್ತಪಃ ಪರಮಮಾತ್ಥ ಯದಾತ್ಮತೇಜೋ
ಯೇನೇದಮಾದಿಪುರುಷಾತ್ಮಗತಂ ಸಸರ್ಜ ।
ತದ್ವಿಪ್ರಲುಪ್ತಮಮುನಾದ್ಯ ಶರಣ್ಯಪಾಲ
ರಕ್ಷಾಗೃಹೀತವಪುಷಾ ಪುನರನ್ವಮಂಸ್ಥಾಃ ॥

ಅನುವಾದ

ಋಷಿಗಳು ಹೇಳಿದರು — ಓ ಶರಣಾಗತವತ್ಸಲನೇ! ಪುರುಷೋತ್ತಮನೇ! ನಿನ್ನಲ್ಲಿ ಲೀನವಾಗಿದ್ದ ಜಗತ್ತನ್ನು ನೀನು ತಪಸ್ಸಿನ ಮೂಲಕವೇ ಮತ್ತೆ ಸೃಷ್ಟಿಮಾಡಿ, ಕರುಣೆ ಯಿಂದ ಅದೇ ಆತ್ಮತೇಜೋರೂಪವಾದ ಶ್ರೇಷ್ಠ ತಪಸ್ಸಿನ ಉಪದೇಶವನ್ನು ನಮಗೆಲ್ಲರಿಗೂ ಕರುಣಿಸಿದ್ದೆ. ಈ ದೈತ್ಯನು ಆ ತಪಸ್ಸನ್ನೇ ಲುಪ್ತಗೊಳಿಸಿಬಿಟ್ಟಿದ್ದನು. ಆ ತಪಸ್ಸಿನ ರಕ್ಷಣೆ ಗಾಗಿಯೇ ಅವತಾರತಾಳಿ ನೀನು ಮತ್ತೆ ಆ ತಪಸ್ಸಿನ ಉಪದೇಶವನ್ನೇ ಅನುಮೋದಿಸಿರುವೆ ॥43॥

(ಶ್ಲೋಕ-44)

ಮೂಲಮ್ (ವಾಚನಮ್)

ಪಿತರ ಊಚುಃ

ಮೂಲಮ್

ಶ್ರಾದ್ಧಾನಿ ನೋಧಿಬುಭುಜೇ ಪ್ರಸಭಂ ತನೂಜೈ-
ರ್ದತ್ತಾನಿ ತೀರ್ಥಸಮಯೇಪ್ಯಪಿಬತ್ತಿಲಾಂಬು ।
ತಸ್ಯೋದರಾನ್ನ ಖವಿದೀರ್ಣವಪಾದ್ಯ ಆರ್ಚ್ಛತ್
ತಸ್ಮೈ ನಮೋ ನೃಹರಯೇಖಿಲಧರ್ಮಗೋಪೇ ॥

ಅನುವಾದ

ಪಿತೃಗಳು ಹೇಳಿದರು — ಪ್ರಭೋ! ನಮ್ಮ ಪುತ್ರರು ನಮಗಾಗಿ ಪಿಂಡಪ್ರದಾನ ಮಾಡಿದಾಗ ಈ ದುಷ್ಟದೈತ್ಯನು ಅವನ್ನು ಬಲವಂತವಾಗಿ ಕಿತ್ತುಕೊಂಡು ತಿಂದುಬಿಡುತ್ತಿದ್ದನು. ಅವರು ಪವಿತ್ರವಾದ ಪುಣ್ಯತೀರ್ಥಗಳಲ್ಲಿ ತರ್ಪಣವನ್ನೂ, ತಿಲಾಂಜಲಿಯನ್ನೂ ಕೊಡುತ್ತಿದ್ದರೆ ಅದನ್ನೂ ಈತನು ಕುಡಿದುಬಿಡುತ್ತಿದ್ದನು. ಇಂದು ನೀನು ನಿನ್ನ ಉಗುರುಗಳಿಂದ ಅವನ ಹೊಟ್ಟೆಯನ್ನು ಬಗೆದು ಅವೆಲ್ಲವನ್ನೂ ನಮಗೆ ಹಿಂದಿರುಗಿಸಿದ್ದೀಯೆ. ಸಮಸ್ತ ಧರ್ಮಗಳ ಏಕಮಾತ್ರ ರಕ್ಷಕ ನಾದ ನರಸಿಂಹದೇವನೇ! ನಿನಗೆ ನಾವು ನಮಸ್ಕರಿ ಸುತ್ತೇನೆ.॥44॥

(ಶ್ಲೋಕ-45)

ಮೂಲಮ್ (ವಾಚನಮ್)

ಸಿದ್ಧಾ ಊಚುಃ

ಮೂಲಮ್

ಯೋ ನೋ ಗತಿಂ ಯೋಗಸಿದ್ಧಾಮಸಾಧು-
ರಹಾರಷೀದ್ ಯೋಗತಪೋಬಲೇನ ।
ನಾನಾದರ್ಪಂ ತಂ ನಖೈರ್ನಿರ್ದದಾರ
ತಸ್ಮೈ ತುಭ್ಯಂ ಪ್ರಣತಾಃ ಸ್ಮೋ ನೃಸಿಂಹ ॥

ಅನುವಾದ

ಸಿದ್ಧರು ಹೇಳಿದರು — ಓ ನರಸಿಂಹಸ್ವಾಮಿಯೇ! ಈ ದುಷ್ಟನು ತನ್ನ ಯೋಗ ಮತ್ತು ತಪಸ್ಸಿನ ಬಲದಿಂದ ನಮ್ಮ ಯೋಗ ಸಿದ್ಧ ಗತಿಗಳನ್ನು ಕಸಿದುಕೊಂಡಿದ್ದನು. ನೀನು ನಿನ್ನ ನಖಗಳಿಂದ ಆ ದುರಹಂಕಾರಿಯನ್ನು ಸೀಳಿಹಾಕಿದೆ. ನಾವೆಲ್ಲರೂ ನಿನ್ನ ಚರಣಾರವಿಂದಗಳಲ್ಲಿ ವಿನಮ್ರರಾಗಿ ನಮಸ್ಕರಿಸುತ್ತಿದ್ದೇವೆ. ॥45॥

(ಶ್ಲೋಕ-46)

ಮೂಲಮ್ (ವಾಚನಮ್)

ವಿದ್ಯಾಧರಾ ಊಚುಃ

ಮೂಲಮ್

ವಿದ್ಯಾಂ ಪೃಥಗ್ಧಾರಣಯಾನುರಾದ್ಧಾಂ
ನ್ಯಷೇಧದಜ್ಞೋ ಬಲವೀರ್ಯದೃಪ್ತಃ ।
ಸ ಯೇನ ಸಂಖ್ಯೇ ಪಶುವದ್ಧತಸ್ತಂ
ಮಾಯಾನೃಸಿಂಹಂ ಪ್ರಣಾತಾಃ ಸ್ಮ ನಿತ್ಯಮ್ ॥

ಅನುವಾದ

ವಿದ್ಯಾಧರರು ಹೇಳಿದರು — ಈ ಮೂರ್ಖ ಹಿರಣ್ಯ ಕಶಿಪು ತನ್ನ ಬಲ ಪರಾಕ್ರಮಗಳ ದುರಹಂಕಾರದಿಂದ ಮತ್ತ ನಾಗಿದ್ದನು. ನಾವುಗಳು ವಿವಿಧ ಧಾರಣೆಗಳಿಂದ ಪಡೆದು ಕೊಂಡಿದ್ದ ವಿದ್ಯೆಗಳನ್ನು ಇವನು ವ್ಯರ್ಥಗೊಳಿಸಿದ್ದನು. ನೀನು ಯುದ್ಧದಲ್ಲಿ ಯಜ್ಞಪಶುವಿನಂತೆ ಇವನನ್ನು ನಾಶ ಗೊಳಿಸಿದೆ. ತನ್ನ ಲೀಲೆಯಿಂದ ನರಸಿಂಹನಾದ ನಿನಗೆ ನಾವು, ನಿತ್ಯ ನಿರಂತರ ವಂದನೆಗಳನ್ನು ಸಲ್ಲಿಸುತ್ತೇವೆ. ॥46॥

(ಶ್ಲೋಕ-47)

ಮೂಲಮ್ (ವಾಚನಮ್)

ನಾಗಾ ಊಚುಃ

ಮೂಲಮ್

ಯೇನ ಪಾಪೇನ ರತ್ನಾನಿ ಸೀರತ್ನಾನಿ ಹೃತಾನಿ ನಃ ।
ತದ್ವಕ್ಷಃಪಾಟನೇನಾಸಾಂ ದತ್ತಾನಂದ ನಮೋಸ್ತುತೇ ॥

ಅನುವಾದ

ನಾಗಗಳು ಹೇಳಿದರು — ಈ ಪಾಪಿಯು ನಮ್ಮ ಮಣಿಗಳನ್ನು ಮತ್ತು ನಮ್ಮ ಶ್ರೇಷ್ಠ ಸುಂದರಸೀಯರನ್ನು ಕಸಿದುಕೊಂಡಿದ್ದನು. ಇಂದು ಅವನ ಎದೆಯನ್ನು ಸೀಳಿ ನೀನು ನಮ್ಮ ಪತ್ನಿಯರಿಗೆ ಬಹಳ ಆನಂದವನ್ನು ಕೊಟ್ಟಿರುವೆ. ಪ್ರಭೋ! ನಾವು ನಿನಗೆ ನಮಸ್ಕರಿಸುತ್ತೇವೆ. ॥47॥

(ಶ್ಲೋಕ-48)

ಮೂಲಮ್ (ವಾಚನಮ್)

ಮನವ ಊಚುಃ

ಮೂಲಮ್

ಮನವೋ ವಯಂ ತವ ನಿದೇಶಕಾರಿಣೋ
ದಿತಿಜೇನ ದೇವ ಪರಿಭೂತಸೇತವಃ ।
ಭವತಾ ಖಲಃ ಸ ಉಪಸಂಹೃತಃ ಪ್ರಭೋ
ಕರವಾಮ ತೇ ಕಿಮನುಶಾಧಿ ಕಿಂಕರಾನ್ ॥

ಅನುವಾದ

ಮನುಗಳು ಹೇಳಿದರು — ಓ ದೇವಾಧಿದೇವನೇ! ನಾವು ನಿನ್ನ ಆಜ್ಞಾಕಾರಿ ಮನುಗಳು. ಈ ದೈತ್ಯನು ನಮ್ಮಗಳ ಧರ್ಮ ಮರ್ಯಾದೆಗಳನ್ನು ಭಂಗಗೊಳಿಸಿಬಿಟ್ಟಿದ್ದನು. ನೀನು ಆ ದುಷ್ಟನನ್ನು ಸಂಹರಿಸಿ ದೊಡ್ಡ ಉಪಕಾರವನ್ನು ಮಾಡಿರುವೆ. ಪ್ರಭೋ! ನಾವು ನಿನ್ನ ಸೇವಕರಾಗಿದ್ದೇವೆ. ನಿನಗೆ ಏನು ಸೇವೆ ಮಾಡೋಣ? ಅಪ್ಪಣೆ ಕೊಡಿಸು. ॥48॥

(ಶ್ಲೋಕ-49)

ಮೂಲಮ್ (ವಾಚನಮ್)

ಪ್ರಜಾಪತಯ ಊಚುಃ

ಮೂಲಮ್

ಪ್ರಜೇಶಾ ವಯಂ ತೇ ಪರೇಶಾಭಿಸೃಷ್ಟಾ
ನ ಯೇನ ಪ್ರಜಾ ವೈ ಸೃಜಾಮೋ ನಿಷಿದ್ಧಾಃ ।
ಸ ಏಷ ತ್ವಯಾ ಭಿನ್ನವಕ್ಷಾ ನು ಶೇತೇ
ಜಗನ್ಮಂಗಲಂ ಸತ್ತ್ವಮೂರ್ತೇವತಾರಃ ॥

ಅನುವಾದ

ಪ್ರಜಾಪತಿಗಳು ಹೇಳಿದರು — ಓ ಪರಮೇಶ್ವರಾ! ನೀನೇ ನಮ್ಮನ್ನು ಪ್ರಜಾಪತಿಗಳನ್ನಾಗಿ ನೇಮಿಸಿದ್ದೆ. ಆದರೆ ಇವನು ತಡೆದುದರಿಂದ ನಾವು ಪ್ರಜೆಗಳನ್ನು ಸೃಷ್ಟಿಮಾಡಲಾಗುತ್ತಿರಲಿಲ್ಲ. ನೀನು ಇವನ ಎದೆಯನ್ನು ಸೀಳಿದಾಗ ಇವನು ಎಂದೆಂದಿಗೂ ನೆಲಕ್ಕೊರಗಿದನು. ಸತ್ತ್ವಮಯ ಮೂರ್ತಿಯನ್ನು ಧರಿಸುವ ಪ್ರಭುವೇ! ನಿನ್ನ ಈ ಅವತಾರವು ಜಗತ್ತಿನ ಮಂಗಳಕ್ಕಾಗಿಯೇ ಆಗಿದೆ. ॥49॥

(ಶ್ಲೋಕ-50)

ಮೂಲಮ್ (ವಾಚನಮ್)

ಗಂಧರ್ವಾ ಊಚುಃ

ಮೂಲಮ್

ವಯಂ ವಿಭೋ ತೇ ನಟನಾಟ್ಯಗಾಯಕಾ
ಯೇನಾತ್ಮಸಾದ್ವೀರ್ಯಬಲೌಜಸಾ ಕೃತಾಃ ।
ಸ ಏಷ ನೀತೋ ಭವತಾ ದಶಾಮಿಮಾಂ
ಕಿಮುತ್ಪಥಸ್ಥಃ ಕುಶಲಾಯ ಕಲ್ಪತೇ ॥

ಅನುವಾದ

ಗಂಧರ್ವರು ಹೇಳಿದರು — ಪ್ರಭೋ! ನಾವು ನಿನಗೆ ಸೇರಿದ ಸಂಗೀತಗಾರರು, ನಿನಗಾಗಿ ನಾಟ್ಯ-ಗೀತ-ವಾದ್ಯ ಗಳನ್ನು ನುಡಿಸಿ, ಅಭಿನಯಿಸುವ ಸೇವಕರು. ಈ ದೈತ್ಯನು ತನ್ನ ಬಲ-ವೀರ್ಯ- ಪರಾಕ್ರಮಗಳಿಂದ ನಮ್ಮನ್ನು ತನ್ನ ಗುಲಾಮರನ್ನಾಗಿಸಿಕೊಂಡಿದ್ದನು. ಆ ದುಷ್ಟನಿಗೆ ತಕ್ಕ ಶಾಸ್ತಿ ಯನ್ನೇ ಮಾಡಿದೆ. ಕುಮಾರ್ಗದಲ್ಲಿ ನಡೆಯುವವರಿಗೆ ಎಂದಾದರೂ ಕಲ್ಯಾಣ ಉಂಟಾದೀತೇ! ॥50॥

(ಶ್ಲೋಕ-51)

ಮೂಲಮ್ (ವಾಚನಮ್)

ಚಾರಣಾ ಊಚುಃ

ಮೂಲಮ್

ಹರೇ ತವಾಂಘ್ರಿಪಂಕಜಂ ಭವಾಪವರ್ಗಮಾಶ್ರಿತಾಃ ।
ಯದೇಷ ಸಾಧುಹೃಚ್ಛಯಸ್ತ್ವಯಾಸುರಃ ಸಮಾಪಿತಃ ॥

ಅನುವಾದ

ಚಾರಣರು ಹೇಳಿದರು — ಪ್ರಭುವೇ! ಸಜ್ಜನರಿಗೆ ಹೃದಯ ಶೂಲೆಯಾಗಿದ್ದ ಈ ದುಷ್ಟನನ್ನು ನೀನು ಮುಗಿಸಿ ಬಿಟ್ಟೆ. ಅದಕ್ಕಾಗಿ ನಾವು ಹುಟ್ಟು-ಸಾವುಗಳ ರೂಪವಾದ ಸಂಸಾರಚಕ್ರದಿಂದ ಬಿಡುಗಡೆಗೊಳಿಸುವಂತಹ ನಿನ್ನ ಈ ಚರಣಾರವಿಂದಗಳಲ್ಲಿ ಶರಣಾಗಿದ್ದೇವೆ. ॥51॥

(ಶ್ಲೋಕ-52)

ಮೂಲಮ್ (ವಾಚನಮ್)

ಯಕ್ಷಾ ಊಚುಃ

ಮೂಲಮ್

ವಯಮನುಚರಮುಖ್ಯಾಃ ಕರ್ಮಭಿಸ್ತೇ ಮನೋಜ್ಞೈ-
ಸ್ತ ಇಹ ದಿತಿಸುತೇನ ಪ್ರಾಪಿತಾ ವಾಹಕತ್ವಮ್ ।
ಸ ತು ಜನಪರಿತಾಪಂ ತತ್ಕೃತಂ ಜಾನತಾ ತೇ
ನರಹರ ಉಪನೀತಃ ಪಂಚತಾಂ ಪಂಚವಿಂಶ ॥

ಅನುವಾದ

ಯಕ್ಷರು ಹೇಳಿದರು — ಓ ಭಗವಂತನೇ! ನಾವು ನಮ್ಮ ಶ್ರೇಷ್ಠ ಕರ್ಮಗಳಿಂದ ನಿನ್ನ ಸೇವಕರಲ್ಲಿ ಮುಖ್ಯರೆಂದು ಪರಿ ಗಣಿಸಲ್ಪಟ್ಟಿದ್ದೆವು. ಆದರೆ ಹಿರಣ್ಯಕಶಿಪು ನಮ್ಮನ್ನು ತನ್ನ ಪಲ್ಲಕ್ಕಿ ಯನ್ನು ಹೊರುವ ಬೋವಿಗಳಾಗಿಸಿಕೊಂಡಿದ್ದನು. ಪ್ರಕೃತಿಯ ನಿಯಾಮಕ ಪರಮಾತ್ಮನೇ! ಇದರಿಂದ ನಿನ್ನವರಾದ ನಮಗೆ ಉಂಟಾಗಿದ್ದ ಕಷ್ಟಗಳನ್ನು ತಿಳಿದೇ ನೀನು ಈ ದುಷ್ಟನನ್ನು ಸಂಹಾರಮಾಡಿದೆ. ॥52॥

(ಶ್ಲೋಕ-53)

ಮೂಲಮ್ (ವಾಚನಮ್)

ಕಿಂಪುರುಷಾ ಊಚುಃ

ಮೂಲಮ್

ವಯಂ ಕಿಂಪುರುಷಾಸ್ತ್ವಂ ತು ಮಹಾಪುರುಷ ಈಶ್ವರಃ ।
ಅಯಂ ಕುಪುರುಷೋ ನಷ್ಟೋ ಧಿಕ್ಕ ೃತಃ ಸಾಧುಭಿರ್ಯದಾ ॥

ಅನುವಾದ

ಕಿಂಪುರುಷರು ಹೇಳಿದರು — ಪ್ರಭೋ! ನಾವು ಅತ್ಯಂತ ತುಚ್ಛರಾದ ಕಿಂಪುರುಷರಾಗಿದ್ದೇವೆ. ನೀನು ಸರ್ವಶಕ್ತಿವಂತ ನಾದ ಮಹಾಪುರುಷನು. ಈ ಕಿಂಪುರುಷನು ಸಾಧುಗಳ ಧಿಕ್ಕಾರಕ್ಕೆ-ತಿರಸ್ಕಾರಕ್ಕೆ ಪಾತ್ರನಾದಾಗ ಆ ಅಸುರಾಧಮ ನನ್ನು ನೀನು ನಾಶಮಾಡಿ ಬಿಟ್ಟಿರುವೆ. ॥53॥

(ಶ್ಲೋಕ-54)

ಮೂಲಮ್ (ವಾಚನಮ್)

ವೈತಾಲಿಕಾ ಊಚುಃ

ಮೂಲಮ್

ಸಭಾಸು ಸತ್ರೇಷು ತವಾಮಲಂ ಯಶೋ
ಗೀತ್ವಾ ಸಪರ್ಯಾಂ ಮಹತೀಂ ಲಭಾಮಹೇ ।
ಯಸ್ತಾಂ ವ್ಯನೈಷೀದ್ಭೃಶಮೇಷ ದುರ್ಜನೋ
ದಿಷ್ಟ್ಯಾ ಹತಸ್ತೇ ಭಗವನ್ಯಥಾಮಯಃ ॥

ಅನುವಾದ

ವೈತಾಲಿಕರು ಹೇಳಿದರು — ಓ ಭಗವಂತಾ! ದೊಡ್ಡ-ದೊಡ್ಡ ಸಭೆಗಳಲ್ಲಿ ಮತ್ತು ಜ್ಞಾನಯಜ್ಞಗಳಲ್ಲಿ ನಿನ್ನ ನಿರ್ಮಲ ಕೀರ್ತಿಯನ್ನು ಹಾಡಿ-ಹೊಗಳಿ ನಾವು ಪ್ರತಿಷ್ಠೆ-ಸಂಭಾವನೆಗಳನ್ನು ಪಡೆಯುತ್ತಿದ್ದವು. ಈ ದುಷ್ಟನು ನಮ್ಮ ಜೀವನೋಪಾ ಯವನ್ನೇ ನಾಶಮಾಡಿಬಿಟ್ಟಿದ್ದನು. ಮಹಾರೋಗದಂತೆ ಈ ದುಷ್ಟನನ್ನು ನೀನು ಬೇರುಸಹಿತ ಕಿತ್ತು ಬಿಸಾಡಿದೆ, ಇದು ಎಂತಹ ಸೌಭಾಗ್ಯದ ಮಾತಾಗಿದೆ. ॥54॥

(ಶ್ಲೋಕ-55)

ಮೂಲಮ್ (ವಾಚನಮ್)

ಕಿನ್ನರಾ ಊಚುಃ

ಮೂಲಮ್

ವಯಮೀಶ ಕಿನ್ನರಗಣಾಸ್ತವಾನುಗಾ
ದಿತಿಜೇನ ವಿಷ್ಟಿಮಮುನಾನುಕಾರಿತಾಃ ।
ಭವತಾ ಹರೇ ಸ ವೃಜಿನೋವಸಾದಿತೋ
ನರಸಿಂಹ ನಾಥ ವಿಭವಾಯ ನೋ ಭವ ॥

ಅನುವಾದ

ಕಿನ್ನರರು ಹೇಳಿದರು — ಕಿನ್ನರರಾದ ನಾವು ನಿನ್ನ ಸೇವಕರು. ಈ ದೈತ್ಯನು ನಮ್ಮಿಂದ ಬಿಟ್ಟಿಕೆಲಸವನ್ನು ಮಾಡಿಸುತ್ತಿದ್ದನು. ಭಗವಂತಾ! ನೀನು ಕೃಪೆದೋರಿ ಇಂದು ಈ ಪಾಪಿಯನ್ನು ನಾಶಪಡಿಸಿದೆ. ಪ್ರಭೋ! ನೀನು ಹೀಗೆಯೇ ನಮ್ಮ ಅಭ್ಯುದಯವನ್ನು ಮಾಡುತ್ತಾ ಇರು. ॥55॥

(ಶ್ಲೋಕ-56)

ಮೂಲಮ್ (ವಾಚನಮ್)

ವಿಷ್ಣುಪಾರ್ಷದಾ ಊಚುಃ

ಮೂಲಮ್

ಅದ್ಯೈತದ್ಧರಿನರರೂಪಮದ್ಭುತಂ ತೇ
ದೃಷ್ಟಂ ನಃ ಶರಣದ ಸರ್ವಲೋಕಶರ್ಮ ।
ಸೋಯಂ ತೇ ವಿಧಿಕರ ಈಶ ವಿಪ್ರಶಪ್ತ-
ಸ್ತಸ್ಯೇದಂ ನಿಧನಮನುಗ್ರಹಾಯ ವಿದ್ಮಃ ॥

ಅನುವಾದ

ಭಗವಂತನ ಪಾರ್ಷದರು ಹೇಳಿದರು — ಓ ಶರಣಾಗತ ವತ್ಸಲಾ! ಸಮಸ್ತ ಲೋಕಗಳಿಗೆ ಶಾಂತಿಯನ್ನು ಪ್ರದಾನ ಮಾಡುವಂತಹ ನಿನ್ನ ಈ ಅಲೌಕಿಕ ನರಸಿಂಹರೂಪವನ್ನು ನಾವು ಇಂದೇ ನೋಡಿದೆವು. ಭಗವಂತಾ! ಈ ದೈತ್ಯನು ನಿನ್ನ ಆ ಆಜ್ಞಾಕಾರಿ ಸೇವಕನೇ ಆಗಿದ್ದನು. ಇವನಿಗೆ ಸನಕಾದಿಗಳು ಶಾಪವನ್ನು ಕೊಟ್ಟಿದ್ದರು. ನೀನು ಕೃಪೆಮಾಡಿ ಇವನ ಉದ್ಧಾರಕ್ಕಾಗಿಯೇ ಇವನನ್ನು ವಧಿಸಿದ್ದೀಯೆ ಎಂದೇ ನಾವು ತಿಳಿಯುತ್ತೇವೆ. ॥56॥

ಅನುವಾದ (ಸಮಾಪ್ತಿಃ)

ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಪ್ರಹ್ಲಾದಾನುಚರಿತೇ ದೈತ್ಯರಾಜವಧೇ ನೃಸಿಂಹಸ್ತವೋ ನಾಮಾಷ್ಟಮೋಽಧ್ಯಾಯಃ ॥8॥