೦೫

[ಐದನೆಯ ಅಧ್ಯಾಯ]

ಭಾಗಸೂಚನಾ

ಹಿರಣ್ಯಕಶಿಪುವು ಪ್ರಹ್ಲಾದನನ್ನು ವಧಿಸಲು ಪ್ರಯತ್ನಿಸಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಪೌರೋಹಿತ್ಯಾಯ ಭಗವಾನ್ವ ತಃ ಕಾವ್ಯಃ ಕಿಲಾಸುರೈಃ ।
ಶಂಡಾಮರ್ಕೌ ಸುತೌ ತಸ್ಯ ದೈತ್ಯರಾಜಗೃಹಾಂತಿಕೇ ॥

(ಶ್ಲೋಕ-2)

ಮೂಲಮ್

ತೌ ರಾಜ್ಞಾ ಪ್ರಾಪಿತಂ ಬಾಲಂ ಪ್ರಹ್ಲಾದಂ ನಯಕೋವಿದಮ್ ।
ಪಾಠಯಾಮಾಸತುಃ ಪಾಠ್ಯಾನನ್ಯಾಂಶ್ಚಾಸುರಬಾಲಕಾನ್ ॥

ಅನುವಾದ

ನಾರದರು ಹೇಳುತ್ತಾರೆ — ಯುಧಿಷ್ಠಿರನೇ! ದೈತ್ಯರು ಪರಮ ಪೂಜ್ಯರಾದ ಶುಕ್ರಾಚಾರ್ಯರನ್ನು ತಮ್ಮ ಪುರೋಹಿತನನ್ನಾಗಿಸಿ ಮಾಡಿಕೊಂಡಿದ್ದರು. ಅವರಿಗೆ ಶಂಡ-ಅಮರ್ಕ ಎಂಬ ಇಬ್ಬರು ಪುತ್ರರಿದ್ದರು. ಅವರಿಬ್ಬರೂ ದೈತ್ಯರಾಜನ ಅರಮನೆಯ ಬಳಿಯೇ ಇದ್ದು, ಹಿರಣ್ಯ ಕಶಿಪು ಕಳಿಸಿಕೊಟ್ಟ ನೀತಿನಿಪುಣನಾದ ಬಾಲಕ ಪ್ರಹ್ಲಾದನಿಗೆ ಮತ್ತು ಬೇರೆ ಓದಲು ಯೋಗ್ಯರಾದ ದೈತ್ಯಬಾಲಕರಿಗೆ ರಾಜ ನೀತಿ, ಅರ್ಥಶಾಸ್ತ್ರಗಳನ್ನು ಕಲಿಸುತ್ತಿದ್ದರು. ॥1-2॥

(ಶ್ಲೋಕ-3)

ಮೂಲಮ್

ಯತ್ತತ್ರ ಗುರುಣಾ ಪ್ರೋಕ್ತಂ ಶುಶ್ರುವೇನು ಪಪಾಠ ಚ ।
ನ ಸಾಧು ಮನಸಾ ಮೇನೇ ಸ್ವಪರಾಸದ್ಗ್ರಹಾಶ್ರಯಮ್ ॥

ಅನುವಾದ

ಪ್ರಹ್ಲಾದನು ಗುರುಗಳು ಹೇಳಿದ ಪಾಠಗಳನ್ನು ಕೇಳುತ್ತಿದ್ದನು ಮತ್ತು ಹಾಗೆಯೇ ಗುರುಗಳಿಗೆ ಒಪ್ಪಿಸುತ್ತಿದ್ದನು. ಆದರೆ ಅವನು ಮನಸ್ಸಿನಲ್ಲಿ ಆ ಪಾಠಗಳು ಸರಿಯೆಂದು ಒಪ್ಪುತ್ತಿರಲಿಲ್ಲ. ಏಕೆಂದರೆ, ಆ ಪಾಠಗಳ ಮೂಲ ಆಧಾರ ತಾನು ಮತ್ತು ಪರರು ಎಂಬ ಮಿಥ್ಯಾ ಆಗ್ರಹವೇ ಆಗಿತ್ತು. ॥3॥

(ಶ್ಲೋಕ-4)

ಮೂಲಮ್

ಏಕದಾಸುರರಾಟ್ಪುತ್ರಮಂಕಮಾರೋಪ್ಯ ಪಾಂಡವ ।
ಪಪ್ರಚ್ಛ ಕಥ್ಯತಾಂ ವತ್ಸ ಮನ್ಯತೇ ಸಾಧು ಯದ್ಭವಾನ್ ॥

ಅನುವಾದ

ಧರ್ಮನಂದನಾ! ಒಂದುದಿನ ಹಿರಣ್ಯಕಶಿಪು ತನ್ನ ಪುತ್ರನಾದ ಪ್ರಹ್ಲಾದನನ್ನು ಕರೆಸಿ ಪ್ರೇಮದಿಂದ ತೊಡೆಯಲ್ಲಿ ಕುಳ್ಳಿರಿಸಿಕೊಂಡು ಕೇಳಿದನು ಮಗು! ನೀನು ಓದಿದರಲ್ಲಿ ಯಾವುದು ನಿನಗೆ ಒಳ್ಳೆಯದೆಂದು ಅನಿಸುತ್ತದೋ ಅದನ್ನು ಹೇಳು ನೋಡೋಣ! ॥4॥

ಮೂಲಮ್

(ಶ್ಲೋಕ-5)

ಮೂಲಮ್ (ವಾಚನಮ್)

ಪ್ರಹ್ಲಾದ ಉವಾಚ

ಮೂಲಮ್

ತತ್ಸಾಧು ಮನ್ಯೇಸುರವರ್ಯ ದೇಹಿನಾಂ
ಸದಾ ಸಮುದ್ವಿಗ್ನಧಿಯಾಮಸದ್ಗ್ರಹಾತ್ ।
ಹಿತ್ವಾತ್ಮಪಾತಂ ಗೃಹಮಂಧಕೂಪಂ
ವನಂ ಗತೋ ಯದ್ಧರಿಮಾಶ್ರಯೇತ ॥

ಅನುವಾದ

ಪ್ರಹ್ಲಾದನು ಹೇಳಿದನು — ‘ಅಪ್ಪಾ! ಪ್ರಪಂಚದಲ್ಲಿರುವ ಪ್ರಾಣಿಗಳು’ ‘ನಾನುನನ್ನದು’ ಎಂಬ ಮಿಥ್ಯಾ ಆಗ್ರಹದಲ್ಲಿ ಬಿದ್ದು ಸದಾಕಾಲ ಅತ್ಯಂತ ಉದ್ವಿಗ್ನರಾಗಿರುತ್ತಾರೆ. ಅವರು ತಮ್ಮ ಅಧಃಪತನಕ್ಕೆ ಮೂಲಕಾರಣವಾದ ಹುಲ್ಲು ಮುಚ್ಚಿ ರುವ ಕತ್ತಲೆಯ ಬಾವಿಯಂತಿರುವ ಈ ಮನೆ-ಮಠಗಳನ್ನು ತೊರೆದು ಅರಣ್ಯಕ್ಕೆ ಹೋಗಿ ಭಗವಾನ್ ಶ್ರೀಹರಿಯಲ್ಲಿ ಶರಣುಹೊಂದುವುದೇ ಸರಿ ಎಂದು ನಾನು ತಿಳಿಯುತ್ತೇನೆ.’ ॥5॥

(ಶ್ಲೋಕ-6)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಶ್ರುತ್ವಾ ಪುತ್ರಗಿರೋ ದೈತ್ಯಃ ಪರಪಕ್ಷಸಮಾಹಿತಾಃ ।
ಜಹಾಸ ಬುದ್ಧಿರ್ಬಾಲಾನಾಂ ಭಿದ್ಯತೇ ಪರಬುದ್ಧಿಭಿಃ ॥

ಅನುವಾದ

ನಾರದರು ಹೇಳುತ್ತಾರೆ — ಪ್ರಹ್ಲಾದನು ಹೀಗೆ ಶತ್ರು ಪಕ್ಷವನ್ನು ಪ್ರಶಂಸೆಮಾಡುತ್ತಾ ಆಡಿದ ಮಾತುಗಳನ್ನು ಕೇಳಿ ಹಿರಣ್ಯಕಶಿಪು ಗಹಗಹಿಸಿ ನಕ್ಕುಬಿಟ್ಟನು. ಇತರರು ಆಡುವ ಒಡಕು ಮಾತುಗಳಿಂದ ಹುಡುಗರ ಬುದ್ಧಿಯು ಕೆಟ್ಟು ಹೋಗುವುದು. ॥6॥

(ಶ್ಲೋಕ-7)

ಮೂಲಮ್

ಸಮ್ಯಗ್ವಿಧಾರ್ಯತಾಂ ಬಾಲೋ ಗುರುಗೇಹೇ ದ್ವಿಜಾತಿಭಿಃ ।
ವಿಷ್ಣುಪಕ್ಷೈಃ ಪ್ರತಿಚ್ಛನ್ನೈರ್ನ ಭಿದ್ಯೇತಾಸ್ಯ ಧೀರ್ಯಥಾ ॥

ಅನುವಾದ

ಗುರುಗಳ ಮನೆಯಲ್ಲಿ ವಿಷ್ಣುವಿನ ಪಕ್ಷಪಾತಿಗಳಾದ ಯಾರೋ ಬ್ರಾಹ್ಮಣರು ವೇಷಬದಲಿಸಿ ವಾಸಮಾಡುತ್ತಾರೆಂದು ಕಾಣುತ್ತದೆ. ಅದರಿಂದ ನಮ್ಮ ಮಗುವಿನ ಬುದ್ಧಿಯು ಕೆಡದಂತೆ ಸರಿಯಾಗಿ ನೋಡಿಕೊಳ್ಳಿ ಎಂದು ಅಧ್ಯಾಪಕರಿಗೆ ಆದೇಶ ನೀಡಿದನು. ॥7॥

(ಶ್ಲೋಕ-8)

ಮೂಲಮ್

ಗೃಹಮಾನೀತಮಾಹೂಯ ಪ್ರಹ್ಲಾದಂ ದೈತ್ಯಯಾಜಕಾಃ ।
ಪ್ರಶಸ್ಯ ಶ್ಲಕ್ಷ್ಣಯಾ ವಾಚಾ ಸಮಪೃಚ್ಛಂತ ಸಾಮಭಿಃ ॥

ಅನುವಾದ

ದೈತ್ಯರು ಪ್ರಹ್ಲಾದನನ್ನು ಗುರುಗಳ ಮನೆಗೆ ಕರಕೊಂಡು ಬಂದಾಗ ದೈತ್ಯಪುರೋಹಿತರು ಅವನನ್ನು ಹತ್ತಿರಕ್ಕೆ ಕರೆದು ಸವಿಮಾತುಗಳಿಂದ ಪುಸಲಾಯಿಸುತ್ತಾ ಕೇಳಿದರು ॥8॥

(ಶ್ಲೋಕ-9)

ಮೂಲಮ್

ವತ್ಸ ಪ್ರಹ್ಲಾದ ಭದ್ರಂ ತೇ ಸತ್ಯಂ ಕಥಯ ಮಾ ಮೃಷಾ ।
ಬಾಲಾನತಿ ಕುತಸ್ತುಭ್ಯಮೇಷ ಬುದ್ಧಿವಿಪರ್ಯಯಃ ॥

ಅನುವಾದ

ಮಗು ಪ್ರಹ್ಲಾದ! ನಿನಗೆ ಮಂಗಳವಾಗಲಿ. ನಿಜವಾಗಿ ಹೇಳು. ಸುಳ್ಳು ಹೇಳಬೇಡ. ನಿನ್ನ ಬುದ್ಧಿಯು ಏಕೆ ಹೀಗೆ ತಲೆಕೆಳಗಾಯಿತು? ಬೇರೆ ಯಾವ ಹುಡುಗರಿಗೂ ಹೀಗಾಗಿಲ್ಲವಲ್ಲ! ॥9॥

(ಶ್ಲೋಕ-10)

ಮೂಲಮ್

ಬುದ್ಧಿಭೇದಃ ಪರಕೃತ ಉತಾಹೋ ತೇ ಸ್ವತೋಭವತ್ ।
ಭಣ್ಯತಾಂ ಶ್ರೋತುಕಾಮಾನಾಂ ಗುರೂಣಾಂ ಕುಲನಂದನ ॥

ಅನುವಾದ

ಕುಲಮಣಿಯೇ! ಮಗು! ನಿನ್ನ ಗುರುಗಳಾದ ನಾವು ಇದನ್ನು ತಿಳಿಯಬಯಸುತ್ತೇವೆ. ನಿನ್ನ ಬುದ್ಧಿಯು ತಾನಾಗಿಯೇ ಹೀಗಾಯಿತೋ ಅಥವಾ ಯಾರಾದರೂ ನಿಜವಾಗಿ ನಿನ್ನನ್ನು ಪ್ರಚೋದಿಸಿರುವರೇ? ಹೇಳು, ಮಗು! ಎಂದಾಗ ಪ್ರಹ್ಲಾದನು ಉತ್ತರಿಸಿದನು ॥10॥

(ಶ್ಲೋಕ-11)

ಮೂಲಮ್ (ವಾಚನಮ್)

ಪ್ರಹ್ಲಾದ ಉವಾಚ

ಮೂಲಮ್

ಸ್ವಃ ಪರಶ್ಚೇತ್ಯಸದ್ಗ್ರಾಹಃ ಪುಂಸಾಂ ಯನ್ಮಾಯಯಾ ಕೃತಃ ।
ವಿಮೋಹಿತಧಿಯಾಂ ದೃಷ್ಟಸ್ತಸ್ಮೈ ಭಗವತೇ ನಮ ॥

ಅನುವಾದ

ಪ್ರಹ್ಲಾದನು ಹೇಳಿದನು — ಯಾರ ಬುದ್ಧಿಯು ಮೋಹದಿಂದ ಗ್ರಸ್ತವಾಗಿದೆಯೋ ಅವನಿಗೆ ಭಗವಂತನ ಮಾಯೆಯಿಂದ ಇವನು ನನ್ನವನು ಇವನು ಬೇರೆಯವನು ಎಂಬ ಈ ಅಸತ್ ದುರಾಗ್ರಹವು ಉಂಟಾಗುತ್ತದೆ. ಆ ಮಾಯೆಗೆ ಅಧಿಪತಿಯಾದ ಭಗವಂತನಿಗೆ ನಮಸ್ಕರಿಸುತ್ತೇನೆ. ॥11॥

(ಶ್ಲೋಕ-12)

ಮೂಲಮ್

ಸ ಯದಾನುವ್ರತಃ ಪುಂಸಾಂ ಪಶುಬುದ್ಧಿರ್ವಿಭಿದ್ಯತೇ ।
ಅನ್ಯ ಏಷ ತಥಾನ್ಯೋಹಮಿತಿ ಭೇದಗತಾಸತೀ ॥

ಅನುವಾದ

ಆ ಭಗವಂತನು ಕೃಪೆದೋರಿದಾಗಲೇ ಮನುಷ್ಯರ ಪಾಶವಿಕ ಬುದ್ಧಿಯು ನಾಶವಾಗುತ್ತದೆ. ಈ ಪಶುಬುದ್ಧಿಯಿಂದಲೇ ‘ಇದು ನಾನು ಇವನು ನನ್ನಿಂದ ಬೇರೆಯವನು’ ಎಂಬ ಸುಳ್ಳಾದ ಭೇದ-ಭಾವವು ಉಂಟಾಗುತ್ತದೆ. ॥12॥

(ಶ್ಲೋಕ-13)

ಮೂಲಮ್

ಸ ಏಷ ಆತ್ಮಾ ಸ್ವಪರೇತ್ಯಬುದ್ಧಿಭಿರ್ದುರತ್ಯಯಾನುಕ್ರಮಣೋ ನಿರೂಪ್ಯತೇ ।
ಮುಹ್ಯಂತಿ ಯದ್ವರ್ತ್ಮನಿ ವೇದವಾದಿನೋ ಬ್ರಹ್ಮಾದಯೋ ಹ್ಯೇಷ ಭಿನತ್ತಿ ಮೇ ಮತಿಮ್ ॥

ಅನುವಾದ

ಅದೇ ಪರಮಾತ್ಮನು ಈ ಆತ್ಮನಾಗಿರುವನು. ಅಜ್ಞಾನೀ ಜನರು ತನ್ನದು ಮತ್ತು ಬೇರೆಯವರದು ಎಂಬ ಭೇದವನ್ನು ಮಾಡಿ ಅವನನ್ನು ವರ್ಣಿಸುತ್ತಾರೆ. ಅವರ ತಿಳುವಳಿಕೆಯು ಸರಿಯಾದುದಲ್ಲ. ಏಕೆಂದರೆ, ಅದರ ತತ್ತ್ವ ವನ್ನು ತಿಳಿಯುವುದು ತುಂಬಾ ಕಷ್ಟ, ಬ್ರಹ್ಮಾದಿ ದೊಡ್ಡ-ದೊಡ್ಡ ವೇದಜ್ಞರೂ ಕೂಡ ಅದರ ವಿಷಯದಲ್ಲಿ ಮೋಹಿತರಾಗುತ್ತಾರೆ. ನಿಮ್ಮ ಭಾಷೆಯಲ್ಲಿ ಹೇಳುವುದಾದರೆ ಆ ಪರಮಾತ್ಮನೇ ನನ್ನ ಬುದ್ಧಿಯನ್ನು ಕೆಡಿಸಿರುವನು. ॥13॥

(ಶ್ಲೋಕ-14)

ಮೂಲಮ್

ಯಥಾ ಭ್ರಾಮ್ಯತ್ಯಯೋ ಬ್ರಹ್ಮನ್ಸ್ವಯಮಾಕರ್ಷಸನ್ನಿಧೌ ।
ತಥಾ ಮೇ ಭಿದ್ಯತೇ ಚೇತಶ್ಚಕ್ರಪಾಣೇರ್ಯದೃಚ್ಛಯಾ ॥

ಅನುವಾದ

ಗುರುಗಳೇ! ಸೂಜಿಗಲ್ಲಿನ ಕಡೆಗೆ ಕಬ್ಬಿಣವು ತಾನಾಗಿ ಸೆಳೆಯಲ್ಪಡುವಂತೆ ಚಕ್ರಪಾಣಿಯಾದ ಭಗವಂತನ ಸ್ವತಂತ್ರ ಇಚ್ಛೆಯಿಂದಲೇ ನನ್ನ ಚಿತ್ತವೂ ಕೂಡ ಪ್ರಪಂಚದಿಂದ ಬೇರೆಯಾಗಿ ಆತನ ಕಡೆಗೆ ಬಲವಂತನಾಗಿ ಸೆಳೆಯಲ್ಪಟ್ಟಿದೆ.॥14॥

(ಶ್ಲೋಕ-15)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಏತಾವದ್ಬ್ರಾಹ್ಮಣಾಯೋಕ್ತ್ವಾ ವಿರರಾಮ ಮಹಾಮತಿಃ ।
ತಂ ನಿರ್ಭರ್ತ್ಸ್ಯಾಥ ಕುಪಿತಃ ಸ ದೀನೋ ರಾಜಸೇವಕಃ ॥

ಅನುವಾದ

ನಾರದರು ಹೇಳುತ್ತಾರೆ — ಮಹಾಜ್ಞಾನಿಯಾದ ಪ್ರಹ್ಲಾದನು ಇಷ್ಟು ಹೇಳಿ ಸುಮ್ಮನಾದನು. ಬಡಪಾಯಿಗಳಾದ ಆ ಪುರೋಹಿತರಾದರೋ ರಾಜಸೇವಕರು, ಪರಾಧೀನರಾಗಿದ್ದರು. ರಾಜನಿಗೆ ಹೆದರಿ ಅವರು ಪ್ರಹ್ಲಾದನ ಮೇಲೆ ಕೋಪಗೊಂಡು ಆತನನ್ನು ಗದರಿಸುತ್ತಾ ಹೀಗೆಂದರು ॥15॥

(ಶ್ಲೋಕ-16)

ಮೂಲಮ್

ಆನೀಯತಾಮರೇ ವೇತ್ರಮಸ್ಮಾಕಮಯಶಸ್ಕರಃ ।
ಕುಲಾಂಗಾರಸ್ಯ ದುರ್ಬುದ್ಧೇಶ್ಚತುರ್ಥೋಸ್ಯೋದಿತೋ ದಮಃ ॥

ಅನುವಾದ

‘ಅರೇ! ಯಾರಲ್ಲಿ? ನನ್ನ ಬೆತ್ತ ತೆಗೆದುಕೊಂಡು ಬನ್ನಿ. ಇವನು ನಮ್ಮ ಕೀರ್ತಿಗೆ ಕಳಂಕವನ್ನು ತರುತ್ತಿದ್ದಾನೆ. ಕುಲಾಂಗಾರನಾದ ಈ ದುರ್ಬುದ್ಧಿಗೆ ನಾಲ್ಕನೆಯ ಉಪಾಯವಾದ ದಂಡವನ್ನು ಪ್ರಯೋಗಿಸುವುದೇ ಉಚಿತವಾಗಿದೆ. ॥16॥

(ಶ್ಲೋಕ-17)

ಮೂಲಮ್

ದೈತೇಯಚಂದನವನೇ ಜಾತೋಯಂ ಕಂಟಕದ್ರುಮಃ ।
ಯನ್ಮೂಲೋನ್ಮೂಲಪರಶೋರ್ವಿಷ್ಣೋರ್ನಾಲಾಯಿತೋರ್ಭಕಃ ॥

ಅನುವಾದ

ದೈತ್ಯವಂಶವೆಂಬ ಶ್ರೀಗಂಧದ ಕಾಡಿನಲ್ಲಿ ಈ ಮುಳ್ಳಿನ ಜಾಲಿಮರ ಹೇಗೆ ಹುಟ್ಟಿಕೊಂಡಿತು? ಈ ವನದ ಬೇರನ್ನೇ ಕತ್ತರಿಸಲು ಕೊಡಲಿಯಂತೆ ಕೆಲಸಮಾಡುವ ವಿಷ್ಣುವಿಗೆ ಈ ಬಾಲಕನು ಅದರ ಕಾವಿನಂತಿದ್ದಾನೆ, ಸಹಾಯಕನಾಗುತ್ತಿದ್ದಾನೆ. ॥17॥

(ಶ್ಲೋಕ-18)

ಮೂಲಮ್

ಇತಿ ತಂ ವಿವಿಧೋಪಾಯೈರ್ಭೀಷಯಂಸ್ತರ್ಜನಾದಿಭಿಃ ।
ಪ್ರಹ್ಲಾದಂ ಗ್ರಾಹಯಾಮಾಸ ತ್ರಿವರ್ಗಸ್ಯೋಪಪಾದನಮ್ ॥

ಅನುವಾದ

ಹೀಗೆ ಪ್ರಹ್ಲಾದನನ್ನು ಗುರುಗಳು ಬಗೆ-ಬಗೆಯಾಗಿ ಗದರಿಸಿ, ಹೆದರಿಸಿ ಆತನಿಗೆ ಧರ್ಮ, ಅರ್ಥ ಮತ್ತು ಕಾಮ ಸಂಬಂಧವಾದ ಶಿಕ್ಷಣವನ್ನು ಕೊಟ್ಟರು. ॥18॥

(ಶ್ಲೋಕ-19)

ಮೂಲಮ್

ತತ ಏನಂ ಗುರುರ್ಜ್ಞಾತ್ವಾ ಜ್ಞಾತಜ್ಞೇಯಚತುಷ್ಟಯಮ್ ।
ದೈತ್ಯೇಂದ್ರಂ ದರ್ಶಯಾಮಾಸ ಮಾತೃಮೃಷ್ಟಮಲಂಕೃತಮ್ ॥

ಅನುವಾದ

ಕೆಲ ಸಮಯದ ನಂತರ ಪ್ರಹ್ಲಾದನು ಸಾಮ, ದಾನ, ಭೇದ ಮತ್ತು ದಂಡಗಳೆಂಬ ನಾಲ್ಕು ಉಪಾಯಗಳ ಸಂಬಂಧವಾಗಿ ಎಲ್ಲ ವಿಷಯಗಳನ್ನು ಗ್ರಹಿಸಿರುವನು ಎಂದು ತಿಳಿದು ಗುರುಗಳು ಅವನನ್ನು ಅವನ ತಾಯಿಯ ಬಳಿಗೆ ಕರೆತಂದರು. ತಾಯಿಯು ಪ್ರೀತಿಯಿಂದ ಅವನಿಗೆ ಸ್ನಾನಮಾಡಿಸಿ, ಉಡಿಗೆ-ತೊಡಿಗೆ ಗಳಿಂದ ಅಲಂಕಾರ ಮಾಡಿದಳು. ಅನಂತರ ಗುರುಜನರು ಆತನನ್ನು ಹಿರಣ್ಯಕಶಿಪುವಿನ ಬಳಿಗೆ ಕೊಂಡೊಯ್ದರು. ॥19॥

(ಶ್ಲೋಕ-20)

ಮೂಲಮ್

ಪಾದಯೋಃ ಪತಿತಂ ಬಾಲಂ ಪ್ರತಿನಂದ್ಯಾಶಿಷಾಸುರಃ ।
ಪರಿಷ್ವಜ್ಯ ಚಿರಂ ದೋರ್ಭ್ಯಾಂ ಪರಮಾಮಾಪ ನಿರ್ವೃತಿಮ್ ॥

ಅನುವಾದ

ಪ್ರಹ್ಲಾದನು ತನ್ನ ಪಾದಗಳಿಗೆ ಬೀಳಲು ದೈತ್ಯೇಂದ್ರನು ಅವನಿಗೆ ಆಶೀರ್ವದಿಸಿ, ಎರಡೂ ಕೈಗಳಿಂದ ಎತ್ತಿಕೊಂಡು ಬಹಳ ಹೊತ್ತಿನವರೆಗೆ ಅಲಿಂಗಿಸಿಕೊಂಡು ಪರಮಾನಂದ ಭರಿತನಾದನು. ॥20॥

(ಶ್ಲೋಕ-21)

ಮೂಲಮ್

ಆರೋಪ್ಯಾಂಕಮವಘ್ರಾಯ ಮೂರ್ಧನ್ಯಶ್ರುಕಲಾಂಬುಭಿಃ ।
ಆಸಿಂಚನ್ವಿಕಸದ್ವಕಮಿದಮಾಹ ಯುಧಿಷ್ಠಿರ ॥

ಅನುವಾದ

ಯುಧಿಷ್ಠಿರನೇ! ಹಿರಣ್ಯಕಶಿಪು ಪ್ರಸನ್ನಮುಖದಿಂದ ಪ್ರಹ್ಲಾದನನ್ನು ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು ಅವನ ಶಿರವನ್ನು ಆಘ್ರಾಣಿಸಿದನು. ಅವನ ಕಣ್ಣುಗಳಿಂದ ಪ್ರೇಮಾಶ್ರುಗಳು ಸುರಿ-ಸುರಿದು ಪ್ರಹ್ಲಾದನ ಶರೀರವನ್ನು ನೆನೆಸಿದವು. ಅವನು ತನ್ನ ಪುತ್ರನಲ್ಲಿ ಕೇಳಿದನು ॥21॥

(ಶ್ಲೋಕ-22)

ಮೂಲಮ್ (ವಾಚನಮ್)

ಹಿರಣ್ಯಕಶಿಪುರುವಾಚ

ಮೂಲಮ್

ಪ್ರಹ್ಲಾದಾನೂಚ್ಯತಾಂ ತಾತ ಸ್ವಧೀತಂ ಕಿಂಚಿದುತ್ತಮಮ್ ।
ಕಾಲೇನೈತಾವತಾಯುಷ್ಮನ್ಯದಶಿಕ್ಷದ್ಗುರೋರ್ಭವಾನ್ ॥

ಅನುವಾದ

ಹಿರಣ್ಯಕಶಿಪು ಹೇಳಿದನು — ‘ಮಗು ಪ್ರಹ್ಲಾದ! ಚಿರಂಜೀವಿಯಾಗು! ಇಷ್ಟು ದಿನಗಳಲ್ಲಿ ನೀನು ಗುರುಗಳಿಂದ ಕಲಿತಿರುವುದರಲ್ಲಿ ಯಾವುದಾದರೂ ಒಳ್ಳೆಯ ಒಂದು ಮಾತನ್ನು ಹೇಳು, ನೋಡೋಣ.’ ॥22॥

(ಶ್ಲೋಕ-23)

ಮೂಲಮ್ (ವಾಚನಮ್)

ಪ್ರಹ್ಲಾದ ಉವಾಚ

ಮೂಲಮ್

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ ।
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ॥

(ಶ್ಲೋಕ-24)

ಮೂಲಮ್

ಇತಿ ಪುಂಸಾರ್ಪಿತಾ ವಿಷ್ಣೌ ಭಕ್ತಿಶ್ಚೇನ್ನವಲಕ್ಷಣಾ ।
ಕ್ರಿಯತೇ ಭಗವತ್ಯದ್ಧಾ ತನ್ಮನ್ಯೇಧೀತಮುತ್ತಮಮ್ ॥

ಅನುವಾದ

ಪ್ರಹ್ಲಾದನು ಹೇಳಿದನು — ತೀರ್ಥರೂಪರೇ! ಭಗವಾನ್ ವಿಷ್ಣುವಿನ ಭಕ್ತಿಯಲ್ಲಿ ಒಂಭತ್ತು ಭೇದಗಳಿವೆ. ಭಗವಂತನ ಗುಣ-ಲೀಲೆ-ನಾಮ ಇವುಗಳನ್ನು ಕೇಳುವುದು, ಅವನನ್ನೇ ಕೀರ್ತಿಸುವುದು, ಅವನ ನಾಮ-ರೂಪಾದಿಗಳನ್ನು ಸ್ಮರಿಸುವುದು, ಅವನ ಚರಣಗಳ ಸೇವೆಮಾಡುವುದು, ಪೂಜೆ-ಅರ್ಚನೆ ಮಾಡುವುದು, ವಂದಿಸುವುದು, ದಾಸ ನಾಗುವುದು, ಸಖ್ಯವಿರಿಸುವುದು, ಆತ್ಮನಿವೇದನ ಮಾಡುವುದು. ಭಗವಂತನ ಕುರಿತು ಸಮರ್ಪಣ ಭಾವದಿಂದ ಈ ಒಂಭತ್ತು ಪ್ರಕಾರದ ಭಕ್ತಿಯನ್ನು ಮಾಡಿದರೆ, ನಾನು ಅದನ್ನೇ ಉತ್ತಮ ಅಧ್ಯಯನವೆಂದು ತಿಳಿಯುತ್ತೇನೆ. ॥23-24॥

(ಶ್ಲೋಕ-25)

ಮೂಲಮ್

ನಿಶಮ್ಯೈತತ್ಸುತವಚೋ ಹಿರಣ್ಯಕಶಿಪುಸ್ತದಾ ।
ಗುರುಪುತ್ರಮುವಾಚೇದಂ ರುಷಾ ಪ್ರಸ್ಫುರಿತಾಧರಃ ॥

ಅನುವಾದ

ಪ್ರಹ್ಲಾದನ ಈ ಮಾತನ್ನು ಕೇಳುತ್ತಲೇ ಕ್ರೋಧದಿಂದ ಹಿರಣ್ಯ ಕಶಿಪುವಿನ ತುಟಿಗಳು ಅದುರ ತೊಡಗಿದವು. ಅವನು ಗುರುಪುತ್ರರಲ್ಲಿ ಹೇಳಿದನು. ॥25॥

(ಶ್ಲೋಕ-26)

ಮೂಲಮ್

ಬ್ರಹ್ಮಬಂಧೋ ಕಿಮೇತತ್ತೇ ವಿಪಕ್ಷಂ ಶ್ರಯತಾಸತಾ ।
ಅಸಾರಂ ಗ್ರಾಹಿತೋ ಬಾಲೋ ಮಾಮನಾದೃತ್ಯ ದುರ್ಮತೇ ॥

ಅನುವಾದ

ಎಲೈ ಬ್ರಾಹ್ಮಣಾಧಮನೇ! ನೀನು ಎಂತಹ ಪಿತೂರಿಯನ್ನು ಮಾಡಿದ್ದೀಯೆ. ದುರ್ಬುದ್ಧಿಯವನೇ! ನೀನು ನನ್ನನ್ನು ಸ್ವಲ್ಪವೂ ಲಕ್ಷಿಸದೆ ಈ ಹುಡುಗನಿಗೆ ಎಂತಹ ನಿಸ್ಸಾರವಾದ ಶಿಕ್ಷಣವನ್ನು ಕೊಟ್ಟಿರುವೆ. ಖಂಡಿತವಾಗಿಯೂ ನೀನು ನಮ್ಮ ಶತ್ರುಗಳ ಆಶ್ರಿತನಾಗಿರುವೆ. ॥26॥

(ಶ್ಲೋಕ-27)

ಮೂಲಮ್

ಸಂತಿ ಹ್ಯಸಾಧವೋ ಲೋಕೇ ದುರ್ಮೈತ್ರಾಶ್ಛದ್ಮವೇಷಿಣಃ ।
ತೇಷಾಮುದೇತ್ಯಘಂ ಕಾಲೇ ರೋಗಃ ಪಾತಕಿನಾಮಿವ ॥

ಅನುವಾದ

ಜಗತ್ತಿನಲ್ಲಿ ಸ್ನೇಹಿತರಂತೆ ಮುಂದೆ ನಟಿಸಿ ಹಿಂದಿನಿಂದ ಶತ್ರುಗಳಂತೆ ಕಾರ್ಯಮಾಡುವಂತಹ ದುಷ್ಟರ ಕೊರತೆಯಿಲ್ಲ. ಆದರೆ ಮರೆಯಲ್ಲಿ ಮಾಡಿದ ಪಾಪವು ಸಮಯ ಬಂದಾಗ ರೋಗದ ರೂಪದಲ್ಲಿ ಪ್ರಕಟಗೊಂಡು ಬಯಲಾಗುವಂತೆ ಅವರ ಕಪಟವು ಬಹಿರಂಗಕ್ಕೆ ಬಂದೇ ಬರುವುದು. ॥27॥

(ಶ್ಲೋಕ-28)

ಮೂಲಮ್ (ವಾಚನಮ್)

ಗುರುಪುತ್ರ ಉವಾಚ

ಮೂಲಮ್

ನ ಮತ್ಪ್ರಣೀತಂ ನ ಪರಪ್ರಣೀತಂ ಸುತೋ ವದತ್ಯೇಷ ತವೇಂದ್ರಶತ್ರೋ ।
ನೈಸರ್ಗಿಕೀಯಂ ಮತಿರಸ್ಯ ರಾಜನ್ನಿಯಚ್ಛ ಮನ್ಯುಂ ಕದದಾಃ ಸ್ಮ ಮಾ ನಃ ॥

ಅನುವಾದ

ಗುರುಪುತ್ರರು ಹೇಳಿದರು — ಎಲೈ ಇಂದ್ರಶತ್ರುವೇ! ನಿನ್ನ ಪುತ್ರನು ಹೇಳುತ್ತಿರುವುದು ನಾನು ಹೇಳಿಕೊಟ್ಟಿದ್ದಲ್ಲ ಅಥವಾ ಬೇರೆ ಯಾರಿಂದಲೂ ಕಲಿತದ್ದಲ್ಲ. ರಾಜನೇ! ಇದಾದರೋ ಇವನ ಜನ್ಮಜಾತ ಸ್ವಾಭಾವಿಕ ಬುದ್ಧಿಯಾಗಿದೆ. ಕೋಪವನ್ನು ಶಾಂತಪಡಿಸಿಕೊಳ್ಳಿ. ವ್ಯರ್ಥವಾಗಿ ನಮ್ಮ ಮೇಲೆ ದೋಷವನ್ನು ಹೊರಿಸಬೇಡಿ. ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಗುರುಣೈವಂ ಪ್ರತಿಪ್ರೋಕ್ತೋ ಭೂಯ ಆಹಾಸುರಃ ಸುತಮ್ ।
ನ ಚೇದ್ಗುರುಮುಖೀಯಂ ತೇ ಕುತೋಭದ್ರಾಸತೀ ಮತಿಃ ॥

ಅನುವಾದ

ನಾರದರು ಹೇಳಿದರು — ಯುಧಿಷ್ಠಿರನೇ! ಗುರುಗಳು ಹೀಗೆ ಉತ್ತರಿಸಿದಾಗ ಹಿರಣ್ಯಕಶಿಪು ಪುನಃ ಪ್ರಹ್ಲಾದನಲ್ಲಿ ‘ಎಲವೋ! ಅಹಿತವನ್ನುಂಟುಮಾಡುವ ಮೋಸದ ಬುದ್ಧಿಯು ನಿನಗೆ ಗುರುಮುಖದಿಂದ ಬಂದಿಲ್ಲವಾದರೆ ಎಲ್ಲಿಂದ ಬಂತು? ಎಂದು ಕೇಳಿದನು. ॥29॥

(ಶ್ಲೋಕ-30)

ಮೂಲಮ್ (ವಾಚನಮ್)

ಪ್ರಹ್ಲಾದ ಉವಾಚ

ಮೂಲಮ್

ಮತಿರ್ನ ಕೃಷ್ಣೇ ಪರತಃ ಸ್ವತೋ ವಾ
ಮಿಥೋಭಿಪದ್ಯೇತ ಗೃಹವ್ರತಾನಾಮ್ ।
ಅದಾಂತಗೋಭಿರ್ವಿಶತಾಂ ತಮಿಸ್ರಂ
ಪುನಃ ಪುನಶ್ಚರ್ವಿತಚರ್ವಣಾನಾಮ್ ॥

ಅನುವಾದ

ಪ್ರಹ್ಲಾದನು ಹೇಳಿದನು — ಅಪ್ಪಾ! ಸಂಸಾರಿಗಳಾದ ಜನರು ಇಂದ್ರಿಯಗಳ ಮೇಲೆ ಹತೋಟಿಯಿಲ್ಲದಿರುವುದರಿಂದ ಅನುಭವಿಸಿದ ವಿಷಯಗಳನ್ನೇ ಮತ್ತೆ-ಮತ್ತೆ ಭೋಗಿಸಲಿಕ್ಕಾಗಿ, ಸಂಸಾರವೆಂಬ ಘೋರವಾದ ನರಕದ ಕಡೆಗೆ ಹೋಗುತ್ತಿದ್ದಾರೆ. ಚಪ್ಪರಿಸಿದುದನ್ನೇ ಮತ್ತೆ-ಮತ್ತೆ ಚಪ್ಪರಿಸುತ್ತಿರುವ ಮೂರ್ಖರು ಅವರು. ಇಂತಹ ಮನೆಯಲ್ಲೇ ಆಸಕ್ತರಾಗಿರುವವರ ಬುದ್ಧಿಯು ತಾನಾಗಿಯೇ ಯಾರದೋ ಉಪದೇಶದಿಂದ ಅಥವಾ ನಿಮ್ಮಂತಹವರ ಸಂಗದಿಂದ ಭಗವಾನ್ ಶ್ರೀಕೃಷ್ಣನಲ್ಲಿ ತೊಡಗುವುದಿಲ್ಲ. ॥30॥

(ಶ್ಲೋಕ-31)

ಮೂಲಮ್

ನ ತೇ ವಿದುಃ ಸ್ವಾರ್ಥಗತಿಂ ಹಿ ವಿಷ್ಣುಂ
ದುರಾಶಯಾ ಯೇ ಬಹಿರರ್ಥಮಾನಿನಃ ।
ಅಂಧಾ ಯಥಾಂಧೈರುಪನೀಯಮಾನಾ
ವಾಚೀಶತಂತ್ಯಾಮುರುದಾಮ್ನಿ ಬದ್ಧಾಃ ॥

ಅನುವಾದ

ಇಂದ್ರಿಯಗಳಿಂದ ಕಂಡುಬರುವ ಬಾಹ್ಯವಿಷಯಗಳನ್ನೇ ಪರಮ ಇಷ್ಟವೆಂದು ತಿಳಿದವರು ಮೂರ್ಖತೆಯಿಂದ ಕುರುಡನ ಬೆನ್ನುಹತ್ತಿದ ಕುರುಡನಂತೆ ಹಳ್ಳಕ್ಕೆ ಬೀಳಲು ಸಾಗುತ್ತಿದ್ದಾರೆ. ವೇದವಾಣೀರೂಪವಾದ ಹಗ್ಗದಿಂದ-ಕಾಮ್ಯಕರ್ಮಗಳ ದೃಢವಾದ ಬಂಧನದಿಂದ ಬಂಧಿಸಲ್ಪಟ್ಟಿರುವರು. ಅವರಿಗೆ ತಮ್ಮ ಸ್ವಾರ್ಥ ಮತ್ತು ಪರಮಾರ್ಥ ಭಗವಾನ್ ವಿಷ್ಣುವೇ ಆಗಿದ್ದಾನೆಂಬುದೂ, ಅವನ ಪ್ರಾಪ್ತಿಯಿಂದ ತಮಗೆ ಎಲ್ಲ ಪುರುಷಾರ್ಥಗಳು ದೊರೆಯಬಹುದೆಂಬುದೂ ತಿಳಿಯದು. ॥31॥

(ಶ್ಲೋಕ-32)

ಮೂಲಮ್

ನೈಷಾಂ ಮತಿಸ್ತಾವದುರುಕ್ರಮಾಂಘ್ರಿಂ
ಸ್ಪೃಶತ್ಯನರ್ಥಾಪಗಮೋ ಯದರ್ಥಃ ।
ಮಹೀಯಸಾಂ ಪಾದರಜೋಭಿಷೇಕಂ
ನಿಷ್ಕಿಂಚನಾನಾಂ ನ ವೃಣೀತ ಯಾವತ್ ॥

ಅನುವಾದ

ಭಗವಂತನ ಚರಣ ಕಮಲಗಳನ್ನು ಸ್ಪರ್ಶಿಸುವ ಬುದ್ಧಿಯುಳ್ಳವರ ಜನ್ಮ-ಮರಣರೂಪವಾದ ಅನರ್ಥಗಳು ಪೂರ್ಣವಾಗಿ ನಾಶವಾಗಿ ಹೋಗುತ್ತವೆ. ಆದರೆ ವೈರಾಗ್ಯಶೀಲರಾದ ಭಗವತ್ಪ್ರೇಮೀ ಮಹಾತ್ಮರ ಪಾದಧೂಳಿಯಲ್ಲಿ ಸ್ನಾನವನ್ನು ಮಾಡದವರ ಬುದ್ಧಿಯು ಕಾಮ್ಯಕರ್ಮಗಳನ್ನೇ ಪೂರ್ಣವಾಗಿ ಸೇವಿಸಿದರೂ ಭಗವಚ್ಚರಣಗಳ ಸ್ಪರ್ಶವನ್ನು ಮಾಡಲಾರರು. ॥32॥

(ಶ್ಲೋಕ-33)

ಮೂಲಮ್

ಇತ್ಯುಕ್ತ್ವೋಪರತಂ ಪುತ್ರಂ ಹಿರಣ್ಯಕಶಿಪೂ ರುಷಾ ।
ಅಂಧೀಕೃತಾತ್ಮಾ ಸ್ವೋತ್ಸಂಗಾನ್ನಿರಸ್ಯತ ಮಹೀತಲೇ ॥

ಅನುವಾದ

ಪ್ರಹ್ಲಾದನು ಇಷ್ಟು ಹೇಳಿ ಸಮ್ಮನಾದನು. ಹಿರಣ್ಯಕಶಿಪು ಕ್ರೋಧಾಂಧನಾಗಿ ಅವನನ್ನು ತನ್ನ ತೊಡೆಯಿಂದ ಎತ್ತಿ ಭೂಮಿಗೆ ಅಪ್ಪಳಿಸಿದನು. ॥33॥

(ಶ್ಲೋಕ-34)

ಮೂಲಮ್

ಆಹಾಮರ್ಷರುಷಾವಿಷ್ಟಃ ಕಷಾಯೀಭೂತಲೋಚನಃ ।
ವಧ್ಯತಾಮಾಶ್ವಯಂ ವಧ್ಯೋ ನಿಃಸಾರಯತ ನೈರ್ಋತಾಃ ॥

ಅನುವಾದ

ಪ್ರಹ್ಲಾದನ ಮಾತುಗಳು ಆತನಿಗೆ ಸಹಿಸಲಾಗಲಿಲ್ಲ. ಅವನ ಕಣ್ಣುಗಳು ರೋಷದಿಂದ ಕೆಂಪಾದವು. ಅವನು ತನ್ನ ಸೇವಕರಿಗೆ ಆದೇಶಿಸಿದನು. ಎಲೈ ದೈತ್ಯರೇ! ಈತನನ್ನು ಇಲ್ಲಿಂದ ಹೊರಕ್ಕೆ ಕೊಂಡು ಹೋಗಿ ಕೂಡಲೇ ಕೊಂದುಹಾಕಿರಿ, ಈತನು ಕೊಲ್ಲಲು ಯೋಗ್ಯನಾಗಿದ್ದಾನೆ. ॥34॥

(ಶ್ಲೋಕ-35)

ಮೂಲಮ್

ಅಯಂ ಮೇ ಭ್ರಾತೃಹಾ ಸೋಯಂ ಹಿತ್ವಾ ಸ್ವಾನ್ಸುಹೃದೋಧಮಃ ।
ಪಿತೃವ್ಯಹಂತುರ್ಯಃ ಪಾದೌ ವಿಷ್ಣೋರ್ದಾಸವದರ್ಚತಿ ॥

ಅನುವಾದ

ನೋಡಿರಲ್ಲ! ನೀಚನಾದ ಇವನು ತನ್ನ ನೆಂಟರಿಷ್ಟರನ್ನೂ, ಸ್ನೇಹಿತರನ್ನೂ ತೊರೆದು ತನ್ನ ಚಿಕ್ಕಪ್ಪನನ್ನು ಕೊಂದುಹಾಕಿದ ವಿಷ್ಣುವಿನ ಚರಣಗಳನ್ನು ದಾಸನಂತೆ ಪೂಜಿಸುತ್ತಿದ್ದಾನಲ್ಲ! ನನ್ನ ಸೋದರನನ್ನು ವಧಿಸಿದ ವಿಷ್ಣುವೇ ಇವನ ರೂಪದಲ್ಲಿ ಬಂದಿರಲಿಕ್ಕಿಲ್ಲವಲ್ಲ! ॥35॥

(ಶ್ಲೋಕ-36)

ಮೂಲಮ್

ವಿಷ್ಣೋರ್ವಾ ಸಾಧ್ವಸೌ ಕಿಂ ನು ಕರಿಷ್ಯತ್ಯಸಮಂಜಸಃ ।
ಸೌಹೃದಂ ದುಸ್ತ್ಯಜಂ ಪಿತ್ರೋರಹಾದ್ಯಃ ಪಂಚಹಾಯನಃ ॥

ಅನುವಾದ

ಈಗ ಈತನು ವಿಶ್ವಾಸಕ್ಕೆ ಯೋಗ್ಯನಲ್ಲ. ಐದು ವರ್ಷ ವಯಸ್ಸಿನವನಾಗಿರುವಾಗಲೇ ಬಿಡುವುದಕ್ಕೆ ಕಷ್ಟ ವಾದ ತನ್ನ ತಂದೆ-ತಾಯಿಯ ಸ್ನೇಹವನ್ನೇ ಮರೆತು ಬಿಟ್ಟಿದ್ದಾನಲ್ಲ! ಇಂತಹ ಕೃತಘ್ನನು ಆ ವಿಷ್ಣುವಿಗಾದರೂ ಏನು ಒಳ್ಳೆಯದನ್ನು ಮಾಡಿಯಾನು? ॥36॥

(ಶ್ಲೋಕ-37)

ಮೂಲಮ್

ಪರೋಪ್ಯಪತ್ಯಂ ಹಿತಕೃದ್ಯಥೌಷಧಂ
ಸ್ವದೇಹಜೋಪ್ಯಾಮಯವತ್ಸುತೋಹಿತಃ ।
ಛಿಂದ್ಯಾತ್ತದಂಗಂ ಯದುತಾತ್ಮನೋಹಿತಂ
ಶೇಷಂ ಸುಖಂ ಜೀವತಿ ಯದ್ವಿವರ್ಜನಾತ್ ॥

ಅನುವಾದ

ಪರಕೀಯನೇ ಆದರೂ ಔಷಧದಂತೆ ಹಿತವನ್ನು ಮಾಡಿದರೆ ಒಂದು ವಿಧದಿಂದ ಅವನು ಪುತ್ರನೇ ಆಗಿದ್ದಾನೆ. ಆದರೆ ತನ್ನ ಪುತ್ರನೇ ಅಹಿತವನ್ನು ಮಾಡತೊಡಗಿದರೆ ರೋಗದಂತೆ ಅವನು ಶತ್ರುವೇ ಆಗಿದ್ದಾನೆ. ತನ್ನ ಶರೀರದ ಯಾವು ದಾದರೂ ಅವಯವದಿಂದ ಇಡೀ ಶರೀರಕ್ಕೆ ಹಾನಿಯಾಗು ವುದಿದ್ದರೆ ಅದನ್ನು ತುಂಡರಿಸಿ ಬಿಡಬೇಕು. ಏಕೆಂದರೆ, ಅದನ್ನು ತುಂಡರಿಸುವುದರಿಂದ ಉಳಿದ ಶರೀರವು ಸುಖ ವಾಗಿ ಬದುಕಬಲ್ಲದು. ॥37॥

(ಶ್ಲೋಕ-38)

ಮೂಲಮ್

ಸರ್ವೈರುಪಾಯೈರ್ಹಂತವ್ಯಃ ಸಂಭೋಜಶಯನಾಸನೈಃ ।
ಸುಹೃಲ್ಲಿಂಗಧರಃ ಶತ್ರುರ್ಮುನೇರ್ದುಷ್ಟಮಿವೇಂದ್ರಿಯಮ್ ॥

ಅನುವಾದ

ಇವನು ಸ್ವಜನರ ವೇಷ ವನ್ನು ಧರಿಸಿ ಬಂದಿರುವ ಶತ್ರುವೇ ಆಗಿದ್ದಾನೆ. ಯೋಗಿಯ ಭೋಗಾಸಕ್ತವಾದ ಇಂದ್ರಿಯಗಳು ಅವನಿಗೆ ಅನಿಷ್ಟವನ್ನೇ ಮಾಡುವಂತೆಯೇ ಇವನು ನನ್ನ ಅಹಿತವನ್ನೇ ಮಾಡುವ ವನಾಗಿದ್ದಾನೆ. ಅದಕ್ಕಾಗಿ ಉಂಬಾಗ, ಮಲಗಿದಾಗ, ಕುಳಿತಿ ರುವಾಗ, ಯಾವುದೇ ಸಮಯದಲ್ಲಾದರೂ ಯಾವುದೇ ಉಪಾಯದಿಂದ ಇವನನ್ನು ಕೊಂದುಹಾಕಿರಿ. ॥38॥

(ಶ್ಲೋಕ-39)

ಮೂಲಮ್

ನೈರ್ಋತಾಸ್ತೇ ಸಮಾದಿಷ್ಟಾ ಭರ್ತ್ರಾ ವೈ ಶೂಲಪಾಣಯಃ ।
ತಿಗ್ಮದಂಷ್ಟ್ರಕರಾಲಾಸ್ಯಾಸ್ತಾಮ್ರಶ್ಮಶ್ರುಶಿರೋರುಹಾಃ ॥

(ಶ್ಲೋಕ-40)

ಮೂಲಮ್

ನದಂತೋ ಭೈರವಾನ್ನಾದಾಂಶ್ಛಿಂಧಿ ಭಿಂಧೀತಿ ವಾದಿನಃ ।
ಆಸೀನಂ ಚಾಹನಞ್ಶೂಲೈಃ ಪ್ರಹ್ಲಾದಂ ಸರ್ವಮರ್ಮಸು ॥

ಅನುವಾದ

ಹಿರಣ್ಯಕಶಿಪು ದೈತ್ಯರಿಗೆ ಹೀಗೆ ಅಪ್ಪಣೆಮಾಡಿದಾಗ ತೀಕ್ಷ್ಣವಾದ ಕೋರೆದಾಡೆಗಳಿಂದಲೂ, ವಿಕರಾಳ ಮುಖ ದಿಂದಲೂ, ಕೆಂಪು-ಕೆಂಪಾದ ಗಡ್ಡ-ಮೀಸೆ-ಕೂದಲುಗಳುಳ್ಳ ದೈತ್ಯರು ಕೈಯಲ್ಲಿ ತ್ರಿಶೂಲವನ್ನು ಎತ್ತಿಕೊಂಡು ‘ಕೊಲ್ಲಿರಿ, ಕಡಿಯಿರಿ’ ಎಂದು ಜೋರಾಗಿ ಕೂಗಿಕೊಳ್ಳತೊಡಗಿದರು. ಪ್ರಹ್ಲಾದನು ಸುಮ್ಮನೇ ಕುಳಿತಿದ್ದನು. ದೈತ್ಯರು ಅವನ ಎಲ್ಲ ಮರ್ಮಸ್ಥಾನಗಳಲ್ಲಿ ಶೂಲದಿಂದ ತಿವಿಯುತ್ತಿದ್ದರು. ॥ 39-40॥

(ಶ್ಲೋಕ-41)

ಮೂಲಮ್

ಪರೇ ಬ್ರಹ್ಮಣ್ಯನಿರ್ದೇಶ್ಯೇ ಭಗವತ್ಯಖಿಲಾತ್ಮನಿ ।
ಯುಕ್ತಾತ್ಮನ್ಯಲಾ ಆಸನ್ನಪುಣ್ಯಸ್ಯೇವ ಸತ್ಕ್ರಿಯಾಃ ॥

ಅನುವಾದ

ಆಗ ಭಕ್ತ ಪ್ರಹ್ಲಾದನ ಚಿತ್ತವು ಮನಸ್ಸು - ಮಾತುಗಳಿಗೆ ಅಗೋಚರನಾಗಿ, ಸರ್ವಾತ್ಮನಾಗಿ, ಸಮಸ್ತ ಶಕ್ತಿಗಳಿಗೆ ಆಧಾರನಾಗಿರುವ, ಪರಬ್ರಹ್ಮ ಪರಮಾತ್ಮನಲ್ಲಿ ನೆಟ್ಟು ಹೋಗಿತ್ತು. ಆದುದರಿಂದ ಭಾಗ್ಯಹೀನರು ಮಾಡುವ ಮಹತ್ಕಾರ್ಯ ಗಳು ನಿಷ್ಪಲವಾಗುವಂತೆ ಅವರ ಎಲ್ಲ ಪ್ರಯಾಸಗಳು ವ್ಯರ್ಥ ವಾದುವು. ॥41॥

(ಶ್ಲೋಕ-42)

ಮೂಲಮ್

ಪ್ರಯಾಸೇಪಹತೇ ತಸ್ಮಿಂದೈತ್ಯೇಂದ್ರಃ ಪರಿಶಂಕಿತಃ ।
ಚಕಾರ ತದ್ವಧೋಪಾಯಾನ್ನಿರ್ಬಂಧೇನ ಯುಧಿಷ್ಠಿರ ॥

ಅನುವಾದ

ಯುಧಿಷ್ಠಿರನೇ! ಶೂಲಗಳ ಹೊಡೆತದಿಂದ ಪ್ರಹ್ಲಾದನ ಶರೀರದ ಮೇಲೆ ಯಾವುದೇ ಪರಿಣಾಮ ಆಗದಿದ್ದಾಗ ಹಿರಣ್ಯ ಕಶಿಪುವಿಗೆ ಭಾರೀ ಚಿಂತೆ-ಶಂಕೆಗಳು ಉಂಟಾದವು. ಈಗ ಅವನು ಪ್ರಹ್ಲಾದನನ್ನು ಕೊಂದು ಹಾಕಲು ಹಟತೊಟ್ಟು ಬಗೆ-ಬಗೆಯ ಉಪಾಯಗಳನ್ನು ಮಾಡತೊಡಗಿದನು. ॥42॥

(ಶ್ಲೋಕ-43)

ಮೂಲಮ್

ದಿಗ್ಗಜೈರ್ದಂದಶೂಕೈಶ್ಚ ಅಭಿಚಾರಾವಪಾತನೈಃ ।
ಮಾಯಾಭಿಃ ಸಂನಿರೋಧೈಶ್ಚ ಗರದಾನೈರಭೋಜನೈಃ ॥

ಅನುವಾದ

ಆತನು ಆ ಬಾಲಕನನ್ನು ದಿಗ್ಗಜಗಳಿಂದ ತುಳಿಸಿದನು. ವಿಷಸರ್ಪಗಳಿಂದ ಕಚ್ಚಿಸಿದನು. ಪುರೋಹಿತರಿಂದ ಆಭಿಚಾರಿಕ ಕೃತ್ಯಗಳನ್ನು ಮಾಡಿಸಿದನು. ಪರ್ವತದ ಶಿಖರದಿಂದ ತಳ್ಳಿಸಿದನು. ಶಂಬರಾಸುರನಿಂದ ಅನೇಕ ವಿಧದ ಮಾಯೆಗಳನ್ನು ಮಾಡಿಸಿದನು. ಕತ್ತಲೆಯ ಕೋಣೆಯಲ್ಲಿ ಕೂಡಿಹಾಕಿದನು. ವಿಷವುಣಿಸಿದನು. ಆಹಾರ ಸೇವನೆಯನ್ನು ನಿಲ್ಲಿಸಿ ಬಿಟ್ಟನು. ॥43॥

(ಶ್ಲೋಕ-44)

ಮೂಲಮ್

ಹಿಮವಾಯ್ವಗ್ನಿಸಲಿಲೈಃ ಪರ್ವತಾಕ್ರಮಣೈರಪಿ ।
ನ ಶಶಾಕ ಯದಾ ಹಂತುಮಪಾಪಮಸುರಃ ಸುತಮ್ ।
ಚಿಂತಾಂ ದೀರ್ಘತಮಾಂ ಪ್ರಾಪ್ತಸ್ತತ್ಕರ್ತುಂ ನಾಭ್ಯಪದ್ಯತ ॥

ಅನುವಾದ

ಕೊರೆಯುವ ಮಂಜಿನಮೇಲೆ, ಧಗ-ಧಗನೆ ಉರಿಯುವ ಬೆಂಕಿಯಲ್ಲೂ, ಹಾಗೂ ಸಮುದ್ರದಲ್ಲಿಯೂ ಮತ್ತೆ-ಮತ್ತೆ ಹಾಕಿಸಿದನು. ಬಿರುಗಾಳಿಗೆ ಒಡ್ಡಿದನು. ಪರ್ವತಗಳ ಕೆಳಗೆ ಅದುಮಿಸಿದನು. ಆದರೆ ಇವುಗಳಲ್ಲಿ ಯಾವುದೇ ಉಪಾಯಗಳಿಂದಲೂ ಅವನಿಂದ ನಿಷ್ಪಾಪನಾದ ತನ್ನ ಪುತ್ರನ ಕೂದಲನ್ನೂ ಕೊಂಕಿಸಲಾಗಲಿಲ್ಲ. ತನ್ನ ವಿವಶತೆಯನ್ನು ಕಂಡು ಹಿರಣ್ಯಕಶಿಪುವಿಗೆ ಭಾರೀ ಚಿಂತೆ ಉಂಟಾಯಿತು. ಆ ಬಾಲಕನನ್ನು ವಧಿಸಲು ಆತನಿಗೆ ಬೇರಾವ ಉಪಾಯವೂ ತೋಚಲಿಲ್ಲ. ॥44॥

(ಶ್ಲೋಕ-45)

ಮೂಲಮ್

ಏಷ ಮೇ ಬಹ್ವಸಾಧೂಕ್ತೋ ವಧೋಪಾಯಾಶ್ಚ ನಿರ್ಮಿತಾಃ ।
ತೈಸ್ತೈರ್ದ್ರೋಹೈರಸದ್ಧರ್ಮೈರ್ಮುಕ್ತಃ ಸ್ವೇನೈವ ತೇಜಸಾ ॥

ಅನುವಾದ

ಅವನು ಯೋಚಿಸತೊಡಗಿದನು ‘ಇವನನ್ನು ನಾನು ಸಿಕ್ಕಾ ಬಟ್ಟೆಯಾಗಿ ಕೆಟ್ಟ ಮಾತುಗಳಿಂದ ಥಳಿಸಿದೆನು. ಕೊಂದು ಹಾಕಲು ಅನೇಕ ಉಪಾಯಗಳನ್ನು ಮಾಡಿದೆ. ಆದರೆ ಇವನು ನನ್ನ ದ್ರೋಹ ಮತ್ತು ದುರ್ವ್ಯವಹಾರಗಳಿಂದ ಯಾರ ಉಪಾಯವು ಇಲ್ಲದೆ ತನ್ನ ಪ್ರಭಾವದಿಂದಲೇ ಬದುಕಿರುವನಲ್ಲ! ॥45॥

(ಶ್ಲೋಕ-46)

ಮೂಲಮ್

ವರ್ತಮಾನೋವಿದೂರೇ ವೈ ಬಾಲೋಪ್ಯಜಡಧೀರಯಮ್ ।
ನ ವಿಸ್ಮರತಿ ಮೇನಾರ್ಯಂ ಶುನಃಶೇಪ ಇವ ಪ್ರಭುಃ ॥

ಅನುವಾದ

ಇವನು ಬಾಲಕನಾಗಿದ್ದರೂ ತಿಳುವಳಿಕಸ್ಥನಾಗಿದ್ದು, ನನ್ನ ಬಳಿಯಲ್ಲೇ ನಿಃಶಂಕಭಾವದಿಂದ ಇರುತ್ತಾನೆ. ಏನೇ ಇರಲಿ, ಇವನಲ್ಲಿ ಖಂಡಿತವಾಗಿ ಏನೋ ಅದ್ಭುತವಾದ ಸಾಮರ್ಥ್ಯ ವಿದೆ. ಶುನಃಶೇಪನು* ತನ್ನ ತಂದೆಯ ನೀಚತನದ ದೌರ್ಜನ್ಯಗಳಿಂದ ಅವನ ವಿರೋಧಿಯಾದಂತೆಯೇ ಇವನೂ ಕೂಡ ನಾನು ಮಾಡಿದ ಅಪಕಾರಗಳನ್ನು ಮರೆಯಲಾರನು. ॥46॥

ಟಿಪ್ಪನೀ
  • ಶುನಃಶೇಪನು ಅಜೀಗರ್ತನ ನಡುವಣ ಪುತ್ರನಾಗಿದ್ದನು. ಅವನನ್ನು ತಂದೆಯು ವರುಣನ ಯಜ್ಞದಲ್ಲಿ ಬಲಿಕೊಡಲಿಕ್ಕಾಗಿ ಹರಿಶ್ಚಂದ್ರನ ಪುತ್ರ ರೋಹಿತಾಶ್ವನಿಗೆ ಬದಲಿಗೆ ಮಾರಿಬಿಟ್ಟಿದ್ದನು. ಆಗ ಅವನ ಮಾವ ವಿಶ್ವಾಮಿತ್ರರು ಅವನನ್ನು ರಕ್ಷಿಸಿದ್ದರು ಮತ್ತು ಅವನು ತನ್ನ ತಂದೆಗೆ ವಿರುದ್ಧನಾಗಿ ಅವನ ವಿಪಕ್ಷಿಯಾದ ವಿಶ್ವಾಮಿತ್ರರ ಗೋತ್ರವನ್ನು ಸೇರಿಕೊಂಡನು. ಈ ಕಥೆ ಮುಂದೆ ಒಂಭತ್ತನೇ ಸ್ಕಂಧದ ಏಳನೆಯ ಅಧ್ಯಾಯದಲ್ಲಿ ಬರುವುದು.

(ಶ್ಲೋಕ-47)

ಮೂಲಮ್

ಅಪ್ರಮೇಯಾನುಭಾವೋಯಮಕುತಶ್ಚಿದ್ಭಯೋಮರಃ ।
ನೂನಮೇತದ್ವಿರೋಧೇನ ಮೃತ್ಯುರ್ಮೇ ಭವಿತಾ ನ ವಾ ॥

ಅನುವಾದ

ಇವನು ಯಾರಿಗೂ ಹೆದರುವುದಿಲ್ಲ. ಇವನ ಮೃತ್ಯುವು ಆಗುವುದಿಲ್ಲ. ಇವನ ಶಕ್ತಿಯನ್ನು ಅಳೆಯಲು ಸಾಧ್ಯವಾಗುವುದಿಲ್ಲ. ಇವನ ವಿರೋಧದಿಂದ ಅವಶ್ಯವಾಗಿ ನನ್ನ ಮೃತ್ಯುವು ಆಗಬಹುದು ಅಥವಾ ಆಗದೆಯೂ ಇರಬಹುದು. ॥47॥

(ಶ್ಲೋಕ-48)

ಮೂಲಮ್

ಇತಿ ತಂ ಚಿಂತಯಾ ಕಿಂಚಿನ್ಮ್ಲಾನಶ್ರಿಯಮಧೋಮುಖಮ್ ।
ಶಂಡಾಮರ್ಕಾವೌಶನಸೌ ವಿವಿಕ್ತ ಇತಿ ಹೋಚತುಃ ॥

ಅನುವಾದ

ಹೀಗೆಲ್ಲಾ ಯೋಚಿಸುತ್ತಾ-ಯೋಚಿಸುತ್ತಾ ಅವನ ಮುಖವು ಸ್ವಲ್ಪ ಬಾಡಿತು. ಶುಕ್ರಾಚಾರ್ಯರ ಪುತ್ರರಾದ ಶಂಡ-ಅಮರ್ಕರು ಹಿರಣ್ಯಕಶಿಪು ತಲೆತಗ್ಗಿಸಿ ಕುಳಿತಿರುವುದನ್ನು ಕಂಡಾಗ ಅವರು ಏಕಾಂತದಲ್ಲಿ ಹೋಗಿ ಅವನಲ್ಲಿ ಹೀಗೆ ಹೇಳಿದರು ॥48॥

(ಶ್ಲೋಕ-49)

ಮೂಲಮ್

ಜಿತಂ ತ್ವಯೈಕೇನ ಜಗತಯಂ ಭ್ರುವೋ-
ರ್ವಿಜೃಂಭಣತ್ರಸ್ತಸಮಸ್ತಧಿಷ್ಣ್ಯಪಮ್ ।
ನ ತಸ್ಯ ಚಿಂತ್ಯಂ ತವ ನಾಥ ಚಕ್ಷ್ಮಹೇ
ನ ವೈ ಶಿಶೂನಾಂ ಗುಣದೋಷಯೋಃ ಪದಮ್ ॥

ಅನುವಾದ

‘ಮಹಾರಾಜಾ! ನೀವೊಬ್ಬರೇ ಮೂರು ಲೋಕಗಳ ಮೇಲೆ ವಿಜಯವನ್ನು ಸಂಪಾದಿಸಿ ರುವಿರಿ. ನೀವು ಹುಬ್ಬು ಓರೆಮಾಡಿದರೆ ಸಾಕು, ಎಲ್ಲ ಲೋಕಪಾಲರು ನಡುಗಿ ಹೋಗುತ್ತಾರೆ. ಹೀಗೆ ಚಿಂತೆ ಪಡಲು ಯಾವ ಕಾರಣವೂ ನಮಗೆ ಕಾಣುವುದಿಲ್ಲ. ಮಕ್ಕಳು ಆಟಗಾರಿಕೆಯಲ್ಲಿ ಮಾಡುವ ಸರಿ-ತಪ್ಪುಗಳನ್ನು ಕುರಿತು ಯಾರಾದರೂ ಚಿಂತೆ ಪಡುವರೇ? ॥49॥

(ಶ್ಲೋಕ-50)

ಮೂಲಮ್

ಇಮಂ ತು ಪಾಶೈರ್ವರುಣಸ್ಯ ಬದ್ಧ್ವಾ
ನಿಧೇಹಿ ಭೀತೋ ನ ಪಲಾಯತೇ ಯಥಾ ।
ಬುದ್ಧಿಶ್ಚ ಪುಂಸೋ ವಯಸಾರ್ಯಸೇವಯಾ
ಯಾವದ್ಗುರುರ್ಭಾರ್ಗವ ಆಗಮಿಷ್ಯತಿ ॥

ಅನುವಾದ

ನಮ್ಮ ತಂದೆಯಾದ ಶುಕ್ರಾಚಾರ್ಯರು ಬರುವುದರೊಳಗೆ ಇವನು ಹೆದರಿ ಎಲ್ಲಾದರೂ ಹೋಗದಿರುವಂತೆ ಇವನನ್ನು ವರುಣಪಾಶಗಳಿಂದ ಬಂಧಿಸಿಡಿರಿ. ವಯಸ್ಸು ಆಗುತ್ತಾ-ಆಗುತ್ತಾ ಮತ್ತು ಗುರು ಹಿರಿಯರ ಸೇವೆ ಮಾಡುತ್ತಾ-ಮಾಡುತ್ತಾ ಮನುಷ್ಯರಿಗೆ ಬುದ್ಧಿ ಬರುವುದು. ॥50॥

(ಶ್ಲೋಕ-51)

ಮೂಲಮ್

ತಥೇತಿ ಗುರುಪುತ್ರೋಕ್ತಮನುಜ್ಞಾಯೇದಮಬ್ರವೀತ್ ।
ಧರ್ಮಾ ಹ್ಯಸ್ಯೋಪದೇಷ್ಟವ್ಯಾ ರಾಜ್ಞಾಂ ಯೇ ಗೃಹಮೇಧಿನಾಮ್ ॥

ಅನುವಾದ

ಹಿರಣ್ಯಕಶಿಪು ‘ಹಾಗೆಯೇ ಆಗಲಿ’ ಎಂದು ಹೇಳಿ ಗುರುಪುತ್ರರ ಸಲಹೆಯನ್ನು ಒಪ್ಪಿಕೊಂಡು ‘ಇವನಿಗೆ ಗೃಹಸ್ಥರಾದ ರಾಜರು ಆಚರಿಸಬೇಕಾದ ಧರ್ಮಗಳನ್ನೇ ಉಪದೇಶ ಮಾಡಿರಿ’ ಎಂದು ಗುರುಪುತ್ರರಿಗೆ ಆದೇಶಮಾಡಿದನು. ॥51॥

(ಶ್ಲೋಕ-52)

ಮೂಲಮ್

ಧರ್ಮಮರ್ಥಂ ಚ ಕಾಮಂ ಚ ನಿತರಾಂ ಚಾನುಪೂರ್ವಶಃ ।
ಪ್ರಹ್ಲಾದಾಯೋಚತೂ ರಾಜನ್ ಪ್ರಶ್ರಿತಾವನತಾಯ ಚ ॥

ಅನುವಾದ

ಯುಧಿಷ್ಠಿರನೇ! ಅದಾದ ಬಳಿಕ ಪುರೋಹಿತರು ಅವನನ್ನು ಕರಕೊಂಡು ಪಾಠಶಾಲೆಗೆ ಹೋದರು ಮತ್ತು ಕ್ರಮವಾಗಿ ಧರ್ಮ, ಅರ್ಥ ಮತ್ತು ಕಾಮ ಈ ಮೂರು ಪುರುಷಾರ್ಥಗಳ ಶಿಕ್ಷಣವನ್ನು ಕೊಡಲು ತೊಡಗಿದರು. ಪ್ರಹ್ಲಾದನು ಅಲ್ಲಿ ಅತ್ಯಂತ ನಮ್ರ ಸೇವಕನಂತೆ ಇರತೊಡ ಗಿದನು. ॥52॥

(ಶ್ಲೋಕ-53)

ಮೂಲಮ್

ಯಥಾ ತ್ರಿವರ್ಗಂ ಗುರುಭಿರಾತ್ಮನೇ ಉಪಶಿಕ್ಷಿತಮ್ ।
ನ ಸಾಧು ಮೇನೇ ತಚ್ಛಿಕ್ಷಾಂ ದ್ವಂದ್ವಾರಾಮೋಪವರ್ಣಿತಾಮ್ ॥

ಅನುವಾದ

ಆದರೆ ಗುರುಗಳ ಆ ಶಿಕ್ಷಣವು ಪ್ರಹ್ಲಾದನಿಗೆ ಮೆಚ್ಚಿಕೆಯಾಗಲಿಲ್ಲ. ಏಕೆಂದರೆ ಗುರುಗಳು ಅವನಿಗೆ ಕೇವಲ ಅರ್ಥ, ಧರ್ಮ ಮತ್ತು ಕಾಮದ್ದೇ ಶಿಕ್ಷಣ ಕೊಡುತ್ತಿದ್ದರು. ಈ ಶಿಕ್ಷಣವು ರಾಗ-ದ್ವೇಷಾದಿ ದ್ವಂದ್ವಗಳು ಮತ್ತು ವಿಷಯ ಭೋಗಗಳಲ್ಲಿ ರಸವನ್ನನುಭವಿಸುವಂತಹ ಜನರಿಗೆ ಮಾತ್ರವೇ ಇದೆ. ॥53॥

(ಶ್ಲೋಕ-54)

ಮೂಲಮ್

ಯದಾಚಾರ್ಯಃ ಪರಾವೃತ್ತೋ ಗೃಹಮೇಧೀಯಕರ್ಮಸು ।
ವಯಸ್ಯೈರ್ಬಾಲಕೈಸ್ತತ್ರ ಸೋಪಹೂತಃ ಕೃತಕ್ಷಣೈಃ ॥

ಅನುವಾದ

ಒಂದು ದಿನ ಗುರುಗಳು ಮನೆಯ ಕೆಲಸಕ್ಕಾಗಿ ಎಲ್ಲೋ ಹೊರಗೆ ಹೋಗಿದ್ದರು. ಪಾಠಕ್ಕೆ ವಿರಾಮ ಸಿಕ್ಕಿದ್ದರಿಂದ ಸಮವ ಯಸ್ಸಿನ ಬಾಲಕರು ಪ್ರಹ್ಲಾದನನ್ನು ಆಟಕ್ಕಾಗಿ ಕರೆದರು. ॥54॥

(ಶ್ಲೋಕ-55)

ಮೂಲಮ್

ಅಥ ತಾನ್ ಶ್ಲಕ್ಷ್ಣಯಾ ವಾಚಾ ಪ್ರತ್ಯಾಹೂಯ ಮಹಾಬುಧಃ ।
ಉವಾಚ ವಿದ್ವಾಂಸ್ತನ್ನಿಷ್ಠಾಂ ಕೃಪಯಾ ಪ್ರಹಸನ್ನಿವ ॥

ಅನುವಾದ

ಪರಮ ಜ್ಞಾನಿಯಾಗಿದ್ದ ಪ್ರಹ್ಲಾದನು ಆ ಹುಡುಗರ ಪ್ರೇಮವನ್ನು ಕಂಡು ಸಂತೋಷಗೊಂಡು ಸವಿಮಾತುಗಳಿಂದ ಅವರನ್ನೇ ತನ್ನ ಬಳಿಗೆ ಬರಮಾಡಿಕೊಂಡನು. ಅವರ ಮತಿಯನ್ನೂ, ಗತಿಯನ್ನೂ ಬಲ್ಲವನಾದ್ದರಿಂದ ಅವರ ಮೇಲೆ ಕರುಣೆದೋರಿ ಮುಗುಳ್ನಗುತ್ತಾ ಅವರಿಗೆ ಉಪದೇಶ ಮಾಡತೊಡಗಿದನು. ॥55॥

(ಶ್ಲೋಕ-56)

ಮೂಲಮ್

ತೇ ತು ತದ್ಗೌರವಾತ್ಸರ್ವೇ ತ್ಯಕ್ತಕ್ರೀಡಾಪರಿಚ್ಛದಾಃ ।
ಬಾಲಾ ನ ದೂಷಿತಧಿಯೋ ದ್ವಂದ್ವಾರಾಮೇರಿತೇಹಿತೈಃ ॥

(ಶ್ಲೋಕ-57)

ಮೂಲಮ್

ಪರ್ಯುಪಾಸತ ರಾಜೇಂದ್ರ ತನ್ನ್ಯಸ್ತಹೃದಯೇಕ್ಷಣಾಃ ।
ತಾನಾಹ ಕರುಣೋ ಮೈತ್ರೋ ಮಹಾಭಾಗವತೋಸುರಃ ॥

ಅನುವಾದ

ಯುಧಿಷ್ಠಿರ! ಅವರೆಲ್ಲರೂ ಇನ್ನೂ ಬಾಲಕರಾಗಿದ್ದರು. ಅದರಿಂದ ರಾಗ-ದ್ವೇಷ ಪರಾಯಣ ವಿಷಯಭೋಗೀ ಪುರುಷರ ಉಪದೇಶದಿಂದ, ಕೃತಿಗಳಿಂದ ಅವರ ಬುದ್ಧಿಯು ಇನ್ನೂ ದೂಷಿತವಾಗಿರಲಿಲ್ಲ. ಇದರಿಂದ ಹಾಗೂ ಪ್ರಹ್ಲಾದನ ಕುರಿತು ಆದರ ಬುದ್ಧಿ ಇರುವುದರಿಂದ ಅವರೆಲ್ಲರೂ ಆಟದ ವಸ್ತುಗಳನ್ನು ಬಿಟ್ಟು ಪ್ರಹ್ಲಾದನ ಹತ್ತಿರ ಹೋಗಿ ಸುತ್ತಲೂ ಕುಳಿತುಕೊಂಡರು. ಪ್ರಹ್ಲಾದನ ಉಪದೇಶವನ್ನು ಮನಸ್ಸಿಟ್ಟು ಕೇಳಲು ತುಂಬಾ ಪ್ರೇಮದಿಂದ ನೆಟ್ಟನೋಟದಿಂದ ಅವನನ್ನೇ ನೋಡತೊಡಗಿದರು. ಭಗವಂತನ ಪರಮ ಪ್ರೇಮಿಭಕ್ತನಾದ ಪ್ರಹ್ಲಾದನ ಹೃದಯವು ಅವರ ಕುರಿತು ಕರುಣೆ ಮತ್ತು ಮೈತ್ರೀಭಾವದಿಂದ ತುಂಬಿಹೋಗಿತ್ತು. ಅವನು ಹೇಳ ತೊಡಗಿದನು ॥56-57॥

ಅನುವಾದ (ಸಮಾಪ್ತಿಃ)

ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಪ್ರಹ್ಲಾದಾನುಚರಿತೇಪಂಚಮೋಽಧ್ಯಾಯಃ ॥5॥