[ನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಹಿರಣ್ಯಕಶಿಪುವಿನ ಅತ್ಯಾಚಾರಗಳು ಮತ್ತು ಪ್ರಹ್ಲಾದನ ಗುಣಗಳ ವರ್ಣನೆ
(ಶ್ಲೋಕ-1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಏವಂ ವೃತಃ ಶತಧೃತಿರ್ಹಿರಣ್ಯಕಶಿಪೋರಥ ।
ಪ್ರಾದಾತ್ತತ್ತಪಸಾ ಪ್ರೀತೋ ವರಾಂಸ್ತಸ್ಯ ಸುದುರ್ಲಭಾನ್ ॥
ಅನುವಾದ
ನಾರದರು ಹೇಳುತ್ತಾರೆ — ಯುಧಿಷ್ಠಿರನೇ! ಹಿರಣ್ಯಕಶಿಪು ಬ್ರಹ್ಮದೇವರಲ್ಲಿ ಹೀಗೆ ದುರ್ಲಭವಾದ ವರಗಳನ್ನು ಬೇಡಲು, ಅವರು ಅವನ ತಪಸ್ಸಿನಿಂದ ಪ್ರಸನ್ನರಾಗಿ ಅವನಿಗೆ ಆ ವರಗಳನ್ನು ಕರುಣಿಸಿದರು. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ತಾತೇಮೇ ದುರ್ಲಭಾಃ ಪುಂಸಾಂ ಯಾನ್ವ ಣೀಷೇ ವರಾನ್ಮಮ ।
ತಥಾಪಿ ವಿತರಾಮ್ಯಂಗ ವರಾನ್ಯದಪಿ ದುರ್ಲಭಾನ್ ॥
ಅನುವಾದ
ಬ್ರಹ್ಮದೇವರು ಹೇಳಿದರು — ಅಯ್ಯಾ ವತ್ಸ! ನೀನು ನನ್ನಲ್ಲಿ ಕೇಳಿರುವ ವರಗಳು ಮನುಷ್ಯರಿಗೆ ತುಂಬಾ ದುರ್ಲಭವಾದವುಗಳು. ಆದರೂ ಅವು ಅತಿದುರ್ಲಭ ವಾಗಿದ್ದರೂ ನಾನು ನಿನಗೆ ಅವೆಲ್ಲವನ್ನು ಕೊಡುತ್ತಿದ್ದೇನೆ. ॥2॥
(ಶ್ಲೋಕ-3)
ಮೂಲಮ್
ತತೋ ಜಗಾಮ ಭಗವಾನಮೋಘಾನುಗ್ರಹೋ ವಿಭುಃ ।
ಪೂಜಿತೋಸುರವರ್ಯೇಣ ಸ್ತೂಯಮಾನಃ ಪ್ರಜೇಶ್ವರೈಃ ॥
ಅನುವಾದ
(ನಾರದರು ಹೇಳಿದರು) ಬ್ರಹ್ಮದೇವರ ವರದಾನವು ಎಂದೂ ಸುಳ್ಳಾಗುವುದಿಲ್ಲ. ಅವರು ಸಮರ್ಥರು ಮತ್ತು ಭಗವ ದ್ರೂಪರೇ ಆಗಿದ್ದಾರೆ. ವರಗಳು ದೊರೆತ ಬಳಿಕ ಹಿರಣ್ಯಕಶಿಪು ಅವರನ್ನು ಪೂಜಿಸಿದನು. ಅನಂತರ ಪ್ರಜಾಪತಿಗಳಿಂದ ತನ್ನ ಸ್ತುತಿಯನ್ನು ಕೇಳುತ್ತಾ ಅವರು ತಮ್ಮ ಲೋಕಕ್ಕೆ ಹೊರಟು ಹೋದರು. ॥3॥
(ಶ್ಲೋಕ-4)
ಮೂಲಮ್
ಏವಂ ಲಬ್ಧವರೋ ದೈತ್ಯೋ ಬಿಭ್ರದ್ಧೇಮಮಯಂ ವಪುಃ ।
ಭಗವತ್ಯಕರೋದ್ದ್ವೇಷಂ ಭ್ರಾತುರ್ವಧಮನುಸ್ಮರನ್ ॥
ಅನುವಾದ
ಬ್ರಹ್ಮದೇವರಿಂದ ವರಗಳನ್ನು ಪಡೆದು ಕೊಂಡ ಅನಂತರ ಹಿರಣ್ಯಕಶಿಪುವಿನ ಶರೀರವು ಸುವರ್ಣದಂತೆ ಕಾಂತಿಯುಕ್ತವೂ, ಹೃಷ್ಟ - ಪುಷ್ಟವೂ ಆಯಿತು. ಅವನು ತನ್ನ ತಮ್ಮನ ಮೃತ್ಯುವನ್ನು ನೆನೆದು ಭಗವಂತನನ್ನು ದ್ವೇಷಿಸ ತೊಡಗಿದನು. ॥4॥
(ಶ್ಲೋಕ-5)
ಮೂಲಮ್
ಸ ವಿಜಿತ್ಯ ದಿಶಃ ಸರ್ವಾ ಲೋಕಾಂಶ್ಚ ತ್ರೀನ್ಮಹಾಸುರಃ ।
ದೇವಾಸುರಮನುಷ್ಯೇಂದ್ರಾನ್ಗಂಧರ್ವಗರುಡೋರಗಾನ್ ॥
(ಶ್ಲೋಕ-6)
ಮೂಲಮ್
ಸಿದ್ಧಚಾರಣವಿದ್ಯಾಧ್ರಾನೃಷೀನ್ಪಿತೃಪತೀನ್ಮನೂನ್ ।
ಯಕ್ಷರಕ್ಷಃ ಪಿಶಾಚೇಶಾನ್ಪ್ರೇತಭೂತಪತೀನಥ ॥
(ಶ್ಲೋಕ-7)
ಮೂಲಮ್
ಸರ್ವಸತ್ತ್ವಪತೀನ್ಜಿತ್ವಾ ವಶಮಾನೀಯ ವಿಶ್ವಜಿತ್ ।
ಜಹಾರ ಲೋಕಪಾಲಾನಾಂ ಸ್ಥಾನಾನಿ ಸಹ ತೇಜಸಾ ॥
ಅನುವಾದ
ಆ ಮಹಾ ದೈತ್ಯನು ಎಲ್ಲ ದಿಕ್ಕುಗಳನ್ನು, ಮೂರುಲೋಕಗಳನ್ನು, ದೇವತೆಗಳನ್ನೂ, ಅಸುರರನ್ನೂ, ರಾಜರನ್ನೂ, ಗಂಧರ್ವರನ್ನೂ, ಗರುಡನನ್ನೂ, ಸರ್ಪರನ್ನೂ, ಸಿದ್ಧ-ಚಾರಣರನ್ನೂ, ವಿದ್ಯಾಧರರನ್ನೂ, ಋಷಿಗಳನ್ನೂ, ಪಿತೃಗಳ ಅಧಿಪತಿಗಳನ್ನೂ, ಮನುಗಳನ್ನೂ, ಯಕ್ಷರನ್ನೂ, ರಾಕ್ಷಸರನ್ನೂ, ಪಿಶಾಚರಾಜರನ್ನು, ಪ್ರೇತಗಳನ್ನೂ, ಭೂತ ಪತಿಗಳನ್ನೂ ಮತ್ತು ಸಮಸ್ತ ಪ್ರಾಣಿಗಳ ರಾಜರನ್ನೂ ಸೋಲಿಸಿ ವಶಪಡಿಸಿ ಕೊಂಡನು. ಇಷ್ಟೇ ಅಲ್ಲ, ವಿಶ್ವವಿಜಯಿಯಾದ ಆ ದೈತ್ಯನು ಲೋಕಪಾಲಕರ ಸ್ಥಾನ-ತೇಜಸ್ಸನ್ನು ಸೆಳೆದುಕೊಂಡನು. ॥5-7॥
(ಶ್ಲೋಕ-8)
ಮೂಲಮ್
ದೇವೋದ್ಯಾನಶ್ರಿಯಾ ಜುಷ್ಟಮಧ್ಯಾಸ್ತೇ ಸ್ಮ ತ್ರಿವಿಷ್ಟಪಮ್ ।
ಮಹೇಂದ್ರಭವನಂ ಸಾಕ್ಷಾನ್ನಿರ್ಮಿತಂ ವಿಶ್ವಕರ್ಮಣಾ ।
ತ್ರೈಲೋಕ್ಯಲಕ್ಷ್ಮ್ಯಾಯತನಮಧ್ಯುವಾಸಾಖಿಲರ್ದ್ಧಿಮತ್ ॥
ಅನುವಾದ
ಈಗ ಅವನು ನಂದನವನವೇ ಮುಂತಾದ ಉದ್ಯಾನವನಗಳ ಸೌಂದರ್ಯದಿಂದ ಕೂಡಿದ ಸ್ವರ್ಗದಲ್ಲೇ ಇರತೊಡಗಿದನು. ಸ್ವಯಂ ವಿಶ್ವಕರ್ಮನೇ ರಚಿಸಿದ ಇಂದ್ರನ ಭವನವೇ ಅವನ ವಾಸಸ್ಥಾನವಾಯಿತು. ಆ ಅರಮನೆಯಲ್ಲಿ ಮೂರು ಲೋಕಗಳ ಸೌಂದರ್ಯದ ಮೂರ್ತಾಕಾರನಾಗಿ ವಾಸಮಾಡುತ್ತಿದ್ದನು. ಆತನು ಎಲ್ಲ ವಿಧದ ಸಂಪತ್ತುಗಳಿಂದ ಸಂಪನ್ನನಾಗಿದ್ದನು. ॥8॥
(ಶ್ಲೋಕ-9)
ಮೂಲಮ್
ಯತ್ರ ವಿದ್ರುಮಸೋಪಾನಾ ಮಹಾಮಾರಕತಾ ಭುವಃ ।
ಯತ್ರ ಸ್ಫಾಟಿಕಕುಡ್ಯಾನಿ ವೈದೂರ್ಯಸ್ತಂಭಪಂಕ್ತಯಃ ॥
(ಶ್ಲೋಕ-10)
ಮೂಲಮ್
ಯತ್ರ ಚಿತ್ರವಿತಾನಾನಿ ಪದ್ಮರಾಗಾಸನಾನಿ ಚ ।
ಪಯಃೇನನಿಭಾಃ ಶಯ್ಯಾ ಮುಕ್ತಾದಾಮಪರಿಚ್ಛದಾಃ ॥
ಅನುವಾದ
ಆ ಅರಮನೆಯಲ್ಲಿ ಮೆಟ್ಟಲುಗಳು ಪಚ್ಚೆ ಮಣಿಗಳಿಂದಲೂ, ನೆಲಗಳು ಮರಕತ ಮಣಿಗಳಿಂದಲೂ, ಗೋಡೆಗಳು ಸ್ಫಟಿಕ ಮಣಿಗಳಿಂದಲೂ,ವೈಢೂರ್ಯ ಕಂಭಗಳಿಂದಲೂ, ಪದ್ಮರಾಗ ಮಣಿಗಳಿಂದ ನಿರ್ಮಿತ ಆಸನಗಳು ಇದ್ದವು. ಬಣ್ಣ-ಬಣ್ಣದ ತೋರಣಗಳೂ, ಹಾಲಿನ ನೊರೆಯಂತೆ ಶಯ್ಯೆಗಳು, ಅವುಗಳಿಗೆ ಮುತ್ತುಗಳ ಕುಚ್ಚುಗಳಿದ್ದು ಶೋಭಾಯ ಮಾನವಾಗಿತ್ತು. ॥9-10॥
(ಶ್ಲೋಕ-11)
ಮೂಲಮ್
ಕೂಜದ್ಭಿರ್ನೂಪುರೈರ್ದೇವ್ಯಃ ಶಬ್ದಯಂತ್ಯ ಇತಸ್ತತಃ ।
ರತ್ನಸ್ಥಲೀಷು ಪಶ್ಯಂತಿ ಸುದತೀಃ ಸುಂದರಂ ಮುಖಮ್ ॥
ಅನುವಾದ
ಸರ್ವಾಂಗಸುಂದರಿಯರಾದ ಅಪ್ಸರೆಯರು ತಮ್ಮ ಕಾಲಂದುಗೆಗಳ ಝಣ-ಝಣ ಧ್ವನಿಗೈಯುತ್ತಾ ರತ್ನಮಯ ಭೂಮಿಯಲ್ಲಿ ಅತ್ತ-ಇತ್ತ ಓಡಾಡುತ್ತಿದ್ದರು. ಕೆಲವೆಡೆ ಅದರಲ್ಲೇ ತಮ್ಮ ಸುಂದರ ಮುಖಗಳನ್ನು ನೋಡಿಕೊಳ್ಳುತ್ತಿದ್ದರು. ॥11॥
(ಶ್ಲೋಕ-12)
ಮೂಲಮ್
ತಸ್ಮಿನ್ಮಹೇಂದ್ರಭವನೇ ಮಹಾಬಲೋ
ಮಹಾಮನಾ ನಿರ್ಜಿತಲೋಕ ಏಕರಾಟ್ ।
ರೇಮೇಭಿವಂದ್ಯಾಂಘ್ರಿಯುಗಃ ಸುರಾದಿಭಿಃ
ಪ್ರತಾಪಿತೈರೂರ್ಜಿತಚಂಡಶಾಸನಃ ॥
ಅನುವಾದ
ಮಹಾ ಬಲಶಾಲಿಯಾದ ಹಿರಣ್ಯಕಶಿಪು ಎಲ್ಲರನ್ನೂ ಜಯಿಸಿ ಏಕಚ್ಛ ತ್ರಾಪತಿಯಾಗಿ ಆ ಮಹೇಂದ್ರಭವನದಲ್ಲಿ ಯಥೇಷ್ಟವಾಗಿ ಸ್ವತಂತ್ರನಾಗಿ ವಿಹರಿಸುತ್ತಿದ್ದನು. ಅವನ ಶಾಸನವು ಎಷ್ಟು ಕಠೋರವಾಗಿತ್ತೆಂದರೆ ದೇವ-ದಾನವರೆಲ್ಲರೂ ಭಯ ಭೀತರಾಗಿ ಅವನ ಅಡಿಗಳಿಗೆ ಅಡಿಗಡಿಗೆ ವಂದಿಸುತ್ತಿದ್ದರು. ॥12॥
(ಶ್ಲೋಕ-13)
ಮೂಲಮ್
ತಮಂಗ ಮತ್ತಂ ಮಧುನೋರುಗಂಧಿನಾ
ವಿವೃತ್ತತಾಮ್ರಾಕ್ಷಮಶೇಷಧಿಷ್ಣ್ಯಪಾಃ ।
ಉಪಾಸತೋಪಾಯನಪಾಣಿಭಿರ್ವಿನಾ
ತ್ರಿಭಿಸ್ತಪೋಯೋಗಬಲೌಜಸಾಂ ಪದಮ್ ॥
ಅನುವಾದ
ಯುಧಿಷ್ಠಿರನೇ! ಅವನು ಉತ್ಕಟವಾದ ಗಂಧವುಳ್ಳ ಮದ್ಯವನ್ನು ಕುಡಿದು ಉನ್ಮತ್ತನಾಗಿರುತ್ತ ಅವನ ಅಮಲೇರಿದ್ದ ಕಣ್ಣುಗಳು ಕೆಂಪಗಾಗಿದ್ದುವು. ತಪಸ್ಸು, ಯೋಗ, ಶಾರೀರಿಕ, ಮಾನಸಿಕ ಬಲಗಳಿಗೆ ಆಗರನಾಗಿದ್ದ ಅವನನ್ನು ಬ್ರಹ್ಮಾ, ವಿಷ್ಣು, ಮಹೇಶ್ವರರನ್ನು ಬಿಟ್ಟು ಉಳಿದ ಎಲ್ಲ ದೇವತೆಗಳು ತಮ್ಮ ಕೈಗಳಲ್ಲಿ ಕಪ್ಪ-ಕಾಣಿಕೆಗಳನ್ನು ಹಿಡಿದುಕೊಂಡು ಸೇವಿಸುತ್ತಿದ್ದರು. ॥13॥
(ಶ್ಲೋಕ-14)
ಮೂಲಮ್
ಜಗುರ್ಮಹೇಂದ್ರಾಸನಮೋಜಸಾ ಸ್ಥಿತಂ
ವಿಶ್ವಾವಸುಸ್ತುಂಬುರುರಸ್ಮದಾದಯಃ ।
ಗಂಧರ್ವಸಿದ್ಧಾ ಋಷಯೋಸ್ತುವನ್ಮುಹು-
ರ್ವಿದ್ಯಾಧರಾ ಅಪ್ಸರಸಶ್ಚ ಪಾಂಡವ ॥
ಅನುವಾದ
ಪಾಂಡುಪುತ್ರನೇ! ಪೌರುಷದಿಂದ ಇಂದ್ರನ ಆಸನದಲ್ಲಿ ಕುಳಿತಿರುವಾಗ ವಿಶ್ವಾವಸು, ತುಂಬುರು ಮತ್ತು ನಾವೆಲ್ಲರೂ ಅವನ ಎದುರಿಗೆ ಗಾಯನ ಮಾಡುತ್ತಿದ್ದೆವು. ಹಾಗೆಯೇ ಗಂಧರ್ವರು, ಸಿದ್ಧರು, ಋಷಿಗಡಣ, ವಿದ್ಯಾಧ ರರೂ, ಅಪ್ಸರೆಯರೂ ಮತ್ತೆ-ಮತ್ತೆ ಅವನನ್ನು ಸ್ತುತಿ ಮಾಡುತ್ತಿದ್ದರು. ॥14॥
(ಶ್ಲೋಕ-15)
ಮೂಲಮ್
ಸ ಏವ ವರ್ಣಾಶ್ರಮಿಭಿಃ ಕ್ರತುಭಿರ್ಭೂರಿದಕ್ಷಿಣೈಃ ।
ಇಜ್ಯಮಾನೋ ಹವಿರ್ಭಾಗಾನಗ್ರಹೀತ್ಸ್ವೇನ ತೇಜಸಾ ॥
ಅನುವಾದ
ಯುಧಿಷ್ಠಿರನೇ! ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತಿದ್ದ ಪುಣ್ಯಾತ್ಮರು ಮಾಡುತ್ತಿದ್ದ ದೊಡ್ಡ-ದೊಡ್ಡ ದಕ್ಷಿಣೆಯುಳ್ಳ ಯಜ್ಞಗಳ ಆಹುತಿಗಳನ್ನು ಆತನು ತನ್ನ ತೇಜಸ್ಸಿನಿಂದ ಕಸಿದು ಕೊಳ್ಳುತ್ತಿದ್ದನು. ॥15॥
(ಶ್ಲೋಕ-16)
ಮೂಲಮ್
ಅಕೃಷ್ಟಪಚ್ಯಾ ತಸ್ಯಾಸೀತ್ಸಪ್ತದ್ವೀಪವತೀ ಮಹೀ ।
ತಥಾ ಕಾಮದುಘಾ ದ್ಯೌಸ್ತು ನಾನಾಶ್ಚರ್ಯಪದಂ ನಭಃ ॥
ಅನುವಾದ
ಪೃಥ್ವಿಯ ಸಪ್ತದ್ವೀಪಗಳಲ್ಲಿಯೂ ಅವನ ಅಖಂಡ ರಾಜ್ಯವಿತ್ತು. ಎಲ್ಲ ಕಡೆಗಳಲ್ಲಿಯೂ ಉಳುಮೆಯಿಲ್ಲದೆಯೇ ಭೂಮಿಯು ಆಹಾರ ಬೆಳೆಗಳನ್ನು ನೀಡುತ್ತಿತ್ತು. ಅವನು ಬಯಸಿದೆಲ್ಲವೂ ಅಂತರಿಕ್ಷದಿಂದ ಅವನಿಗೆ ಸಿಗುತ್ತಿತ್ತು. ಆಕಾಶವು ಆತನಿಗೆ ಬಗೆ-ಬಗೆಯ ಆಶ್ಚರ್ಯಜನಕ ವಸ್ತುಗಳನ್ನು ತೋರಿಸಿ ಮನೋರಂಜನೆಯನ್ನು ಮಾಡುತ್ತಿತ್ತು. ॥16॥
(ಶ್ಲೋಕ-17)
ಮೂಲಮ್
ರತ್ನಾಕರಾಶ್ಚ ರತ್ನೌಘಾಂಸ್ತತ್ಪತ್ನ್ಯಶ್ಚೋಹುರೂರ್ಮಿಭಿಃ ।
ಕ್ಷಾರಸೀಧುಘೃತಕ್ಷೌದ್ರದಧಿಕ್ಷೀರಾಮೃತೋದಕಾಃ ॥
ಅನುವಾದ
ಅದೇ ರೀತಿಯಲ್ಲಿ ಉಪ್ಪು, ಕಬ್ಬಿನ ಹಾಲು, ಸುರೆ, ತುಪ್ಪ, ಮೊಸರು, ಹಾಲು ಮತ್ತು ಸಿಹಿನೀರಿನ ಸಮುದ್ರಗಳೂ ಕೂಡ ತಮ್ಮ ಪತ್ನಿಯರಾದ ನದಿಗಳೊಂದಿಗೆ ಅಲೆಗಳ ಮೂಲಕ ರತ್ನ ರಾಶಿಗಳನ್ನು ಅರ್ಪಿಸುತ್ತಿದ್ದುವು. ॥17॥
(ಶ್ಲೋಕ-18)
ಮೂಲಮ್
ಶೈಲಾ ದ್ರೋಣೀಭಿರಾಕ್ರೀಡಂ ಸರ್ವರ್ತುಷು ಗುಣಾನ್ದ್ರುಮಾಃ ।
ದಧಾರ ಲೋಕಪಾಲಾನಾಮೇಕ ಏವ ಪೃಥಗ್ಗುಣಾನ್ ॥
ಅನುವಾದ
ಪರ್ವತಗಳು ತಮ್ಮ ತಪ್ಪಲುಗಳಲ್ಲಿ ಅವನಿಗಾಗಿ ವಿಹಾರೋದ್ಯಾನಗಳನ್ನು ಒದಗಿಸುತ್ತಿದ್ದವು ಹಾಗೂ ವೃಕ್ಷ ಗಳು ಎಲ್ಲ ಋತುಗಳಲ್ಲಿಯೂ ಹೂವು-ಹಣ್ಣುಗಳನ್ನು ಬಿಡುತ್ತಿದ್ದವು. ಅವನೊಬ್ಬನೇ ಎಲ್ಲ ಲೋಕಪಾಲರ ಬೇರೆ- ಬೇರೆ ಗುಣ-ಮಹಿಮೆಗಳನ್ನು ಧರಿಸಿದ್ದನು. ॥18॥
(ಶ್ಲೋಕ-19)
ಮೂಲಮ್
ಸ ಇತ್ಥಂ ನಿರ್ಜಿತಕಕುಬೇಕರಾಡ್ವಿಷಯಾನ್ಪ್ರಿಯಾನ್ ।
ಯಥೋಪಜೋಷಂ ಭುಂಜಾನೋ ನಾತೃಪ್ಯದಜಿತೇಂದ್ರಿಯಃ ॥
ಅನುವಾದ
ಹೀಗೆ ದಿಗ್ವಿಜಯಿಯಾದ ಅವನು ಏಕಚ್ಛತ್ರಾಧಿಪತಿಯಾಗಿ ತನಗೆ ಪ್ರಿಯವಾದ ವಿಷಯಗಳನ್ನು ಸ್ವಚ್ಛಂದವಾಗಿ ಉಪ ಭೋಗಿಸತೊಡಗಿದನು. ಆದರೆ ಇಷ್ಟು ವಿಷಯಭೋಗ ಗಳಿಂದಲೂ ಅವನಿಗೆ ತೃಪ್ತಿಯುಂಟಾಗಲಿಲ್ಲ. ಏಕೆಂದರೆ, ಕೊನೆಗೂ ಅವನು ಇಂದ್ರಿಯಗಳ ಗುಲಾಮನೇ ಆಗಿದ್ದನಲ್ಲ! ॥19॥
(ಶ್ಲೋಕ-20)
ಮೂಲಮ್
ಏವಮೈಶ್ವರ್ಯಮತ್ತಸ್ಯ ದೃಪ್ತಸ್ಯೋಚ್ಛಾಸವರ್ತಿನಃ ।
ಕಾಲೋ ಮಹಾನ್ವ್ಯತೀಯಾಯ ಬ್ರಹ್ಮಶಾಪಮುಪೇಯುಷಃ ॥
ಅನುವಾದ
ಧರ್ಮನಂದನಾ! ಈ ರೂಪದಲ್ಲಿಯೂ ಅವನು ಸನಕಾದಿಗಳಿಂದ ಶಪಿಸಲ್ಪಟ್ಟ ಭಗವಂತನ ಆ ಪಾರ್ಷದನೇ ಆಗಿದ್ದನಲ್ಲ. ಆದರೆ ಅವನು ಐಶ್ವರ್ಯಮದದಿಂದ ಉನ್ಮತ್ತ ನಾಗಿದ್ದನು ಹಾಗೂ ದುರಹಂಕಾರಿಯಾಗಿ ಶಾಸ್ತ್ರಗಳ ಮರ್ಯಾದೆಗಳನ್ನು ಮೀರಿ ನಡೆಯುತ್ತಿರಲು ನೋಡು- ನೋಡುತ್ತಾ ಅವನ ಜೀವನದ ಹೆಚ್ಚಿನ ಸಮಯ ಕಳೆದು ಹೋಯಿತು. ॥20॥
(ಶ್ಲೋಕ-21)
ಮೂಲಮ್
ತಸ್ಯೋಗ್ರದಂಡಸಂವಿಗ್ನಾಃ ಸರ್ವೇ ಲೋಕಾಃ ಸಪಾಲಕಾಃ ।
ಅನ್ಯತ್ರಾಲಬ್ಧಶರಣಾಃ ಶರಣಂ ಯಯುರಚ್ಯುತಮ್ ॥
ಅನುವಾದ
ಅವನ ಕಠೋರವಾದ ಶಾಸನದಿಂದ ಎಲ್ಲ ಲೋಕಗಳು ಮತ್ತು ಲೋಕಪಾಲರು ಗಾಬರಿಗೊಂಡರು. ಅವರಿಗೆ ಬೇರೆಲ್ಲಿಯೂ ಆಶ್ರಯ ದೊರೆಯದಿರಲು ಅವ ರೆಲ್ಲರೂ ಭಗವಂತನಿಗೆ ಶರಣಾದರು. ॥21॥
(ಶ್ಲೋಕ-22)
ಮೂಲಮ್
ತಸ್ಯೈ ನಮೋಸ್ತು ಕಾಷ್ಠಾಯೈ ಯತ್ರಾತ್ಮಾ ಹರಿರೀಶ್ವರಃ ।
ಯದ್ಗತ್ವಾ ನ ನಿವರ್ತಂತೇ ಶಾಂತಾಃ ಸಂನ್ಯಾಸಿನೋಮಲಾಃ ॥
ಅನುವಾದ
ಸರ್ವಾತ್ಮಾ ಜಗದೀಶ್ವರನಾದ ಶ್ರೀಹರಿಯು ವಾಸವಾಗಿರುವಂತಹ, ಯಾವುದನ್ನು ಪಡೆದ ಬಳಿಕ ಶಾಂತರೂ, ನಿರ್ಮಲರೂ ಆದ ಸಂನ್ಯಾಸಿ ಮಹಾತ್ಮರು ಪ್ರಪಂಚಕ್ಕೆ ಮರಳುವುದಿಲ್ಲವೋ ಅಂತಹ ಭಗವಂತನ ಪರಮಧಾಮಕ್ಕೆ ನಾವು ನಮಸ್ಕರಿಸುತ್ತಿದ್ದೇವೆ. ॥22॥
(ಶ್ಲೋಕ-23)
ಮೂಲಮ್
ಇತಿ ತೇ ಸಂಯತಾತ್ಮಾನಃ ಸಮಾಹಿತಧಿಯೋಮಲಾಃ ।
ಉಪತಸ್ಥುರ್ಹೃಷೀಕೇಶಂ ವಿನಿದ್ರಾ ವಾಯುಭೋಜನಾಃ ॥
ಅನುವಾದ
ಆ ದೇವತೆಗಳು ತಮ್ಮ ಇಂದ್ರಿಯ ಗಳನ್ನು ಸಂಯಮನಮಾಡಿ, ಮನಸ್ಸನ್ನು ಏಕಾಗ್ರಗೊಳಿಸಿ, ನಿದ್ರಾಹಾರಗಳನ್ನು ತೊರೆದು, ನಿರ್ಮಲವಾದ ಹೃದಯದಿಂದ ಭಗವಂತನನ್ನು ಆರಾಧಿಸಿದರು. ॥23॥
(ಶ್ಲೋಕ-24)
ಮೂಲಮ್
ತೇಷಾಮಾವಿರಭೂದ್ವಾಣೀ ಅರೂಪಾ ಮೇಘನಿಃಸ್ವನಾ ।
ಸನ್ನಾದಯಂತೀ ಕಕುಭಃ ಸಾಧೂನಾಮಭಯಂಕರೀ ॥
ಅನುವಾದ
ಒಂದು ದಿನ ಅವರಿಗೆ ಮೇಘಗಂಭೀರವಾದ ಆಕಾಶವಾಣಿಯು ಕೇಳಿಸಿತು. ಆ ಧ್ವನಿಯಿಂದ ಎಲ್ಲ ದಿಕ್ಕುಗಳು ಪ್ರತಿಧ್ವನಿಸಿದವು. ಸಾಧು ಗಳಿಗೆ ಅಭಯವನ್ನೀಯುವ ಆ ಆಕಾಶವಾಣಿಯು ಹೀಗಿತ್ತು ॥24॥
(ಶ್ಲೋಕ-25)
ಮೂಲಮ್
ಮಾ ಭೈಷ್ಟ ವಿಬುಧಶ್ರೇಷ್ಠಾಃ ಸರ್ವೇಷಾಂ ಭದ್ರಮಸ್ತು ವಃ ।
ಮದ್ದರ್ಶನಂ ಹಿ ಭೂತಾನಾಂ ಸರ್ವಶ್ರೇಯೋಪಪತ್ತಯೇ ॥
ಅನುವಾದ
‘ಶ್ರೇಷ್ಠ ದೇವತೆಗಳಿರಾ! ಹೆದರ ಬೇಡಿರಿ. ನಿಮಗೆಲ್ಲರಿಗೂ ಮಂಗಳವುಂಟಾಗಲಿ. ನನ್ನ ದರ್ಶನದಿಂದ ಪ್ರಾಣಿಗಳಿಗೆ ಪರಮ ಕಲ್ಯಾಣವು ದೊರೆಯುತ್ತದೆ. ॥25॥
(ಶ್ಲೋಕ-26)
ಮೂಲಮ್
ಜ್ಞಾತಮೇತಸ್ಯ ದೌರಾತ್ಮ್ಯಂ ದೈತೇಯಾಪಸದಸ್ಯ ಚ ।
ತಸ್ಯ ಶಾಂತಿಂ ಕರಿಷ್ಯಾಮಿ ಕಾಲಂ ತಾವತ್ಪ್ರತೀಕ್ಷತ ॥
ಅನುವಾದ
ಈ ದೈತ್ಯಾಧಮನ ದುಷ್ಟತನವು ನನಗೆ ಮೊದಲಿನಿಂದಲೂ ತಿಳಿದಿದೆ. ನಾನು ಇವನನ್ನು ಸಂಹಾರ ಮಾಡುವೆನು. ಇನ್ನೂ ಕೆಲವು ದಿನಗಳವರೆಗೆ ಕಾಯುತ್ತಿರಿ. ॥26॥
(ಶ್ಲೋಕ-27)
ಮೂಲಮ್
ಯದಾ ದೇವೇಷು ವೇದೇಷು ಗೋಷು ವಿಪ್ರೇಷು ಸಾಧುಷು ।
ಧರ್ಮೇ ಮಯಿ ಚ ವಿದ್ವೇಷಃ ಸ ವಾ ಆಶು ವಿನಶ್ಯತಿ ॥
ಅನುವಾದ
ಯಾವುದೇ ಪುರುಷನು ದೇವತೆ, ವೇದ, ಗೋವು, ಬ್ರಾಹ್ಮಣ, ಸಾಧುಗಳು, ಧರ್ಮ ಇವುಗಳನ್ನು ಮತ್ತು ನನ್ನನ್ನು ದ್ವೇಷಿಸತೊಡಗಿದಾಗ ಬೇಗನೇ ಅವನ ವಿನಾಶವಾಗುತ್ತದೆ. ॥27॥
(ಶ್ಲೋಕ-28)
ಮೂಲಮ್
ನಿರ್ವೈರಾಯ ಪ್ರಶಾಂತಾಯ ಸ್ವಸುತಾಯ ಮಹಾತ್ಮನೇ ।
ಪ್ರಹ್ಲಾದಾಯ ಯದಾ ದ್ರುಹ್ಯೇದ್ಧನಿಷ್ಯೇಪಿ ವರೋರ್ಜಿತಮ್ ॥
ಅನುವಾದ
ವೈರಹೀನನೂ, ಶಾಂತಸ್ವಭಾವದವನೂ, ಮಹಾತ್ಮನೂ ಆದ ತನ್ನ ಪುತ್ರನಾದ ಪ್ರಹ್ಲಾದನಲ್ಲಿ ಈ ದೈತ್ಯನು ದ್ವೇಷಮಾಡಿದಾಗ, ಅವನಿಗೆ ಅನಿಷ್ಟವನ್ನು ಉಂಟು ಮಾಡಲು ಬಯಸಿದಾಗ, ಅವನು ಎಷ್ಟೇ ವರಬಲ ಸಂಪನ್ನನಾಗಿದ್ದರೂ ಅವನನ್ನು ಖಂಡಿತವಾಗಿ ಸಂಹರಿಸಿಬಿಡುವೆನು.’ ॥28॥
(ಶ್ಲೋಕ-29)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಇತ್ಯುಕ್ತಾ ಲೋಕಗುರುಣಾ ತಂ ಪ್ರಣಮ್ಯ ದಿವೌಕಸಃ ।
ನ್ಯವರ್ತಂತ ಗತೋದ್ವೇಗಾ ಮೇನಿರೇ ಚಾಸುರಂ ಹತಮ್ ॥
ಅನುವಾದ
ನಾರದರು ಹೇಳುತ್ತಾರೆ — ಲೋಕಗುರುವಾದ ಶ್ರೀಭಗವಂತನು ದೇವತೆಗಳಿಗೆ ಹೀಗೆ ಆದೇಶವನ್ನು ನೀಡಿದಾಗ ಅವರೆಲ್ಲರೂ ಆತನಿಗೆ ನಮಸ್ಕರಿಸಿ ಮರಳಿಹೋದರು. ಅವರ ಉದ್ವೇಗವೆಲ್ಲ ಶಾಂತವಾಗಿತ್ತು. ಇನ್ನು ಹಿರಣ್ಯಕಶಿಪು ಸತ್ತೇಹೋದನೆಂದು ಅವರು ತಿಳಿದರು. ॥29॥
(ಶ್ಲೋಕ-30)
ಮೂಲಮ್
ತಸ್ಯ ದೈತ್ಯಪತೇಃ ಪುತ್ರಾಶ್ಚತ್ವಾರಃ ಪರಮಾದ್ಭುತಾಃ ।
ಪ್ರಹ್ಲಾದೋಭೂನ್ಮಹಾಂಸ್ತೇಷಾಂ ಗುಣೈರ್ಮಹದುಪಾಸಕಃ ॥
ಅನುವಾದ
ಯುಧಿಷ್ಠಿರನೇ! ದೈತ್ಯರಾಜ ಹಿರಣ್ಯಕಶಿಪುವಿಗೆ ಪರಮಾದ್ಭುತರಾದ ನಾಲ್ವರು ಪುತ್ರರಿದ್ದರು. ಅವರಲ್ಲಿ ಪ್ರಹ್ಲಾದನು ವಯಸ್ಸಿನಲ್ಲಿ ಕಿರಿಯವನಾಗಿದ್ದರೂ ಗುಣಗಳಲ್ಲಿ ಎಲ್ಲರಿಗಿಂತ ಹಿರಿಯವನಾಗಿದ್ದನು. ಅವನು ಸಂತರನ್ನು ಸೇವಿಸುವವನಾಗಿದ್ದನು. ॥30॥
(ಶ್ಲೋಕ-31)
ಮೂಲಮ್
ಬ್ರಹ್ಮಣ್ಯಃ ಶೀಲಸಂಪನ್ನಃ ಸತ್ಯಸಂಧೋ ಜಿತೇಂದ್ರಿಯಃ ।
ಆತ್ಮವತ್ಸರ್ವಭೂತಾನಾಮೇಕಃ ಪ್ರಿಯಸುಹೃತ್ತಮಃ ॥
ಅನುವಾದ
ಬ್ರಾಹ್ಮಣರಲ್ಲಿ ಭಕ್ತಿಯುಳ್ಳವನೂ, ಸೌಮ್ಯಸ್ವಭಾವದವನೂ, ಸತ್ಯಪ್ರತಿಜ್ಞನೂ, ಜಿತೇಂದ್ರಿಯನೂ ಆಗಿದ್ದನು. ಎಲ್ಲ ಪ್ರಾಣಿಗಳೊಂದಿಗೆ ತನ್ನಂತೆಯೇ ಸಮತೆಯಿಂದ ವರ್ತಿಸುತ್ತಿದ್ದನು ಮತ್ತು ಎಲ್ಲರ ಏಕಮಾತ್ರ ಪ್ರಿಯನೂ, ನಿಜವಾದ ಹಿತೈಷಿಯೂ ಆಗಿದ್ದನು. ॥31॥
(ಶ್ಲೋಕ-32)
ಮೂಲಮ್
ದಾಸವತ್ಸಂನತಾರ್ಯಾಂಘ್ರಿಃ ಪಿತೃವದ್ದೀನವತ್ಸಲಃ ।
ಭ್ರಾತೃವತ್ಸದೃಶೇ ಸ್ನಿಗ್ಧೋ ಗುರುಷ್ವೀಶ್ವರಭಾವನಃ ।
ವಿದ್ಯಾರ್ಥರೂಪಜನ್ಮಾಢ್ಯೋ ಮಾನಸ್ತಂಭವಿವರ್ಜಿತಃ ॥
ಅನುವಾದ
ಹಿರಿಯರ ಚರಣಗಳಲ್ಲಿ ಸೇವಕನಂತೆ ತಲೆ ಬಾಗಿಕೊಂಡೇ ಇರುತಿದ್ದನು. ಬಡವರ ಮೇಲೆ ತಂದೆಯಂತೆ ಸ್ನೇಹವಿರಿಸಿದ್ದನು. ಸಮವಯಸ್ಕರಲ್ಲಿ ಸೋದರನಂತೆ ಪ್ರೇಮವಿರಿಸಿದ್ದನು ಮತ್ತು ಗುರುಗಳಲ್ಲಿ ಭಗವದ್ಭಾವವನ್ನೇ ಇಟ್ಟಿದ್ದನು. ವಿದ್ಯೆ, ಧನ, ಸೌಂದರ್ಯ ಮತ್ತು ಕುಲೀನತೆಗಳಿಂದ ಸಂಪನ್ನನಾಗಿದ್ದರೂ ಅವನಲ್ಲಿ ಅಹಂಕಾರ, ಮತ್ಸರ, ಎಳ್ಳಷ್ಟೂ ಇರಲಿಲ್ಲ. ॥32॥
(ಶ್ಲೋಕ-33)
ಮೂಲಮ್
ನೋದ್ವಿಗ್ನಚಿತ್ತೋ ವ್ಯಸನೇಷು ನಿಃಸ್ಪೃಹಃ
ಶ್ರುತೇಷು ದೃಷ್ಟೇಷು ಗುಣೇಷ್ವವಸ್ತುದೃಕ್ ।
ದಾಂತೇಂದ್ರಿಯಪ್ರಾಣಶರೀರಧೀಃ ಸದಾ
ಪ್ರಶಾಂತಕಾಮೋ ರಹಿತಾಸುರೋಸುರಃ ॥
ಅನುವಾದ
ದೊಡ್ಡ-ದೊಡ್ಡ ದುಃಖಗಳಲ್ಲಿಯೂ ಅವನು ಸ್ವಲ್ಪವೂ ಅಂಜುತ್ತಿರಲಿಲ್ಲ. ಲೋಕ-ಪರಲೋಕಗಳ ವಿಷಯಗಳ ಬಗ್ಗೆ ಅವನು ಬೇಕಾದಷ್ಟು ಕಂಡು-ಕೇಳಿದ್ದರೂ ಅವನ್ನು ನಿಃಸಾರವೆಂದೂ, ತುಚ್ಛವೆಂದೂ, ಮಿಥ್ಯೆಯೆಂದೇ ತಿಳಿಯುತ್ತಿದ್ದನು. ಅದಕ್ಕಾಗಿ ಅವನ ಮನಸ್ಸಿನಲ್ಲಿ ಭಗವಂತನಲ್ಲದೇ ಬೇರೆ ಯಾವುದರ ಅಭಿಲಾಷೆಯೂ ಇರಲಿಲ್ಲ. ಇಂದ್ರಿಯಗಳು, ಪ್ರಾಣ, ಶರೀರ, ಮನಸ್ಸು ಅವನ ವಶದಲ್ಲಿತ್ತು. ಅವನ ಚಿತ್ತದಲ್ಲಿ ಎಂದೂ ಯಾವುದೇ ಕಾಮನೆ ಉಂಟಾಗುತ್ತಿರಲಿಲ್ಲ. ಅವನು ಹುಟ್ಟಿನಿಂದ ಅಸುರನಾಗಿದ್ದರೂ ಆಸುರೀ ಸ್ವಭಾವವು ಅವನಲ್ಲಿ ಕಿಂಚಿತ್ತಾದರೂ ಇರಲಿಲ್ಲ. ॥33॥
(ಶ್ಲೋಕ-34)
ಮೂಲಮ್
ಯಸ್ಮಿನ್ಮಹದ್ಗುಣಾ ರಾಜನ್ಗೃಹ್ಯಂತೇ ಕವಿಭಿರ್ಮುಹುಃ ।
ನ ತೇಧುನಾಪಿಧೀಯಂತೇ ಯಥಾ ಭಗವತೀಶ್ವರೇ ॥
ಅನುವಾದ
ಶ್ರೀಭಗವಂತನ ಗುಣಗಳು ಅನಂತವಾಗಿರುವಂತೆಯೇ ಪ್ರಹ್ಲಾದನ ಶ್ರೇಷ್ಠಗುಣಗಳು ಎಲ್ಲೆಯನ್ನು ಮೀರಿದ್ದವು. ಮಹಾತ್ಮರು ಅವನನ್ನು ಸದಾಕಾಲ ವರ್ಣಿಸುತ್ತಾ, ತನ್ನವನನ್ನಾಗಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೂ ಆತನು ಇಂದಿಗೂ ಹಾಗೆಯೇ ಇದ್ದಾನೆ. ॥34॥
(ಶ್ಲೋಕ-35)
ಮೂಲಮ್
ಯಂ ಸಾಧುಗಾಥಾಸದಸಿ ರಿಪವೋಪಿ ಸುರಾ ನೃಪ ।
ಪ್ರತಿಮಾನಂ ಪ್ರಕುರ್ವಂತಿ ಕಿಮುತಾನ್ಯೇ ಭವಾದೃಶಾಃ ॥
ಅನುವಾದ
ಯುಧಿಷ್ಠಿರನೇ! ದೇವತೆಗಳು ಅವನ ಶತ್ರುಗಳಾಗಿದ್ದರೂ ಭಕ್ತರ ಚರಿತ್ರೆಗಳನ್ನು ಕೇಳಲು ಸಭೆ ಸೇರಿದಾಗ ಅವರು ಇತರ ಭಕ್ತರನ್ನು ಭಾಗವತೋತ್ತಮ ಪ್ರಹ್ಲಾದನಿಗೆ ಹೋಲಿಸಿ ಅವರಿಗೆ ಸಮ್ಮಾನಗಳನ್ನು ಸಲ್ಲಿಸುತ್ತಾರೆ. ಹೀಗಿರುವಾಗ ಅಜಾತಶತ್ರುವಾದ ನಿನ್ನಂತಹ ಭಗವದ್ಭಕ್ತರು ಅವನನ್ನು ಆದರಿಸುವುದರಲ್ಲಿ ಸಂದೇಹವೇನಿದೆ? ॥35॥
(ಶ್ಲೋಕ-36)
ಮೂಲಮ್
ಗುಣೈರಲಮಸಂಖ್ಯೇಯೈರ್ಮಾಹಾತ್ಮ್ಯಂ ತಸ್ಯ ಸೂಚ್ಯತೇ ।
ವಾಸುದೇವೇ ಭಗವತಿ ಯಸ್ಯ ನೈಸರ್ಗಿಕೀ ರತಿಃ ॥
ಅನುವಾದ
ಅವನ ಮಹಿಮೆಯನ್ನು ವರ್ಣಿಸಲಿಕ್ಕಾಗಿ ಎಣಿಸಲಾರದ ಸದ್ಗುಣ ಸಂಪತ್ತನ್ನು ಹೇಳುವ-ಕೇಳುವ ಆವಶ್ಯಕತೆ ಇಲ್ಲ. ಒಂದೇ ಒಂದು ಗುಣವನ್ನು ಹೇಳಿದರೆ ಸಾಕು. ಅದೇನೆಂದರೆ ಅವನಿಗೆ ಭಗವಾನ್ ಶ್ರೀವಾಸುದೇವನಲ್ಲಿ ಸ್ವಾಭಾವಿಕ ಜನ್ಮಜಾತ ಪ್ರೇಮವಿತ್ತು. ॥36॥
(ಶ್ಲೋಕ-37)
ಮೂಲಮ್
ನ್ಯಸ್ತಕ್ರೀಡನಕೋ ಬಾಲೋ ಜಡವತ್ತನ್ಮನಸ್ತಯಾ ।
ಕೃಷ್ಣಗ್ರಹಗೃಹೀತಾತ್ಮಾ ನ ವೇದ ಜಗದೀದೃಶಮ್ ॥
ಅನುವಾದ
ಯುಧಿಷ್ಠಿರಾ! ಪ್ರಹ್ಲಾದನು ಬಾಲ್ಯದಲ್ಲಿಯೇ ಆಟ-ಪಾಟಗಳನ್ನು ಬಿಟ್ಟು ಭಗವಂತನ ಧ್ಯಾನದಲ್ಲಿ ಮಗ್ನನಾಗಿ ಜಡನಂತೆ ತನ್ಮಯನಾಗುತ್ತಿದ್ದನು. ಭಗವಾನ್ ಶ್ರೀಕೃಷ್ಣನ ಅನುಗ್ರಹವೆಂಬ ಗ್ರಹವು ಅವನ ಹೃದಯವನ್ನು ಸೆಳೆದುಕೊಂಡು ಅವನಿಗೆ ಜಗತ್ತಿನ ಪರಿವೆಯೇ ಇಲ್ಲದಂತೆ ಮಾಡಿ ಬಿಟ್ಟಿತ್ತು. ॥37॥
(ಶ್ಲೋಕ-38)
ಮೂಲಮ್
ಆಸೀನಃ ಪರ್ಯಟನ್ನಶ್ನನ್ ಶಯಾನಃ ಪ್ರಪಿಬನ್ ಬ್ರುವನ್ ।
ನಾನುಸಂಧತ್ತ ಏತಾನಿ ಗೋವಿಂದಪರಿರಂಭಿತಃ ॥
ಅನುವಾದ
ಭಗವಂತನೇ ತನ್ನನ್ನು ಆಲಿಂಗಿಸಿಕೊಂಡಿರುವನು ಎಂದು ಅವನು ಸದಾ ಭಾವಿಸುತ್ತಿದ್ದನು. ತಾನು ಕೂತಿದ್ದರೂ, ಓಡಾಡುತ್ತಿದ್ದರೂ, ತಿನ್ನುತ್ತಿದ್ದರೂ, ಕುಡಿಯುತ್ತಿದ್ದರೂ, ನಿದ್ರಿಸುತ್ತಿದ್ದರೂ, ಮಾತಾಡುತ್ತಿದ್ದರೂ ಇದಾವುದೂ ಅವನಿಗೆ ತಿಳಿಯುತ್ತಿರಲಿಲ್ಲ. ॥38॥
(ಶ್ಲೋಕ-39)
ಮೂಲಮ್
ಕ್ವಚಿದ್ರುದತಿ ವೈಕುಂಠಚಿಂತಾಶಬಲಚೇತನಃ ।
ಕ್ವಚಿದ್ಧಸತಿ ತಚ್ಚಿಂತಾಹ್ಲಾದ ಉದ್ಗಾಯತಿ ಕ್ವಚಿತ್ ॥
ಅನುವಾದ
ಕೆಲವೊಮ್ಮೆ ಅವನು ವೈಕುಂಠಪತಿಯು ತನ್ನನ್ನಗಲಿ ಹೋದನೆಂದು ಅಳುತ್ತಿದ್ದನು. ಕೆಲವೊಮ್ಮೆ ಆತನನ್ನು ಚಿಂತಿಸುತ್ತಾ ಆನಂದದಿಂದ ನಗುತ್ತಿದ್ದನು. ಕೆಲವೊಮ್ಮೆ ಅವನು ಧ್ಯಾನದ ಮಧುರ ಆನಂದವನ್ನು ಅನುಭವಿಸುತ್ತಾ ಗಟ್ಟಿಯಾಗಿ ಹಾಡುತ್ತಿದ್ದನು. ॥39॥
(ಶ್ಲೋಕ-40)
ಮೂಲಮ್
ನದತಿ ಕ್ವಚಿದುತ್ಕಂಠೋ ವಿಲಜ್ಜೋ ನೃತ್ಯತಿ ಕ್ವಚಿತ್ ।
ಕ್ವಚಿತ್ತದ್ಭಾವನಾಯುಕ್ತಸ್ತನ್ಮಯೋನುಚಕಾರ ಹ ॥
ಅನುವಾದ
ಕೆಲವೊಮ್ಮೆ ಅವನು ಉತ್ಸುಕತೆಯಿಂದ ಕೂಗಿಕೊಳ್ಳುತ್ತಿದ್ದನು. ಕೆಲವೊಮ್ಮೆ ನಿರ್ಲಜ್ಜನಾಗಿ ಹಾರಿ-ಹಾರಿ ಕುಣಿಯುತ್ತಿದ್ದನು. ಕೆಲವೊಮ್ಮೆ ಆತನ ಲೀಲೆಗಳನ್ನು ಚಿಂತಿಸುತ್ತಾ ತನ್ಮಯನಾಗಿ ತಿಳಿಯದೆಯೇ ಅವನನ್ನೇ ಅನುಕರಿಸುತ್ತಿದ್ದನು. ॥40॥
(ಶ್ಲೋಕ-41)
ಮೂಲಮ್
ಕ್ವಚಿದುತ್ಪುಲಕಸ್ತೂಷ್ಣೀಮಾಸ್ತೇ ಸಂಸ್ಪರ್ಶನಿರ್ವೃತಃ ।
ಅಸ್ಪನ್ದಪ್ರಣಯಾನಂದಸಲಿಲಾಮೀಲಿತೇಕ್ಷಣಃ ॥
ಅನುವಾದ
ಕೆಲವೊಮ್ಮೆ ಒಳ-ಒಳಗೆ ಭಗವಂತನ ಕೋಮಲ ಸ್ಪರ್ಶವನ್ನು ಅನುಭವಿಸುತ್ತಾ ಆನಂದಮಗ್ನನಾಗಿ, ರೋಮಾಂಚಿತಗೊಂಡು ಸುಮ್ಮನೆ ಕುಳಿತು ಬಿಡುತ್ತಿದ್ದನು. ಆತನ ಅರೆತೆರೆದ ಕಣ್ಣುಗಳು ಪ್ರೇಮದ ಮತ್ತು ಆನಂದದ ಕಂಬನಿಗಳಿಂದ ತುಂಬಿರುತ್ತಿದ್ದವು. ॥41॥
(ಶ್ಲೋಕ-42)
ಮೂಲಮ್
ಸ ಉತ್ತಮಶ್ಲೋಕಪದಾರವಿಂದಯೋ-
ರ್ನಿಷೇವಯಾಕಿಂಚನಸಂಗಲಬ್ಧಯಾ ।
ತನ್ವನ್ಪರಾಂ ನಿರ್ವೃತಿಮಾತ್ಮನೋ ಮುಹು-
ರ್ದುಃಸಂಗದೀನಾನ್ಯಮನಃಶಮಂ ವ್ಯಧಾತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಚರಣಾರವಿಂದಗಳಲ್ಲಿ ಇಂತಹ ಭಕ್ತಿಯು ಅಕಿಂಚನರಾದ ಭಗವತ್ಪ್ರೇಮಿ ಮಹಾತ್ಮರ ಸಂಗದಿಂದ ಆತನಿಗೆ ಉಂಟಾಯಿತು. ಅದರಿಂದ ಆತನ ಮನಸ್ಸು ಪರಮಾನಂದದಲ್ಲಿ ಮುಳುಗಿರುತ್ತಿತ್ತು. ಇಷ್ಟೇ ಅಲ್ಲ, ಅವನ ಸಂಗದಿಂದ ದುಸ್ಸಹವಾಸದಿಂದ ದೀನರಾಗಿದ್ದ ಜನರಿಗೂ ಕೂಡ ಶಾಂತಿಯು ದೊರೆಯುತ್ತಿತ್ತು. ॥42॥
(ಶ್ಲೋಕ-43)
ಮೂಲಮ್
ತಸ್ಮಿನ್ಮಹಾಭಾಗವತೇ ಮಹಾಭಾಗೇ ಮಹಾತ್ಮನಿ ।
ಹಿರಣ್ಯಕಶಿಪೂ ರಾಜನ್ನಕರೋದಘಮಾತ್ಮಜೇ ॥
ಅನುವಾದ
ಯುಧಿಷ್ಠಿರನೇ! ಪ್ರಹ್ಲಾದನು ಭಗವಂತನ ಪರಮಪ್ರೇಮಿ ಭಕ್ತನೂ, ಪರಮಭಾಗ್ಯಶಾಲಿಯೂ, ಶ್ರೇಷ್ಠಮಟ್ಟದ ಮಹಾತ್ಮನೂ ಆಗಿದ್ದನು. ಹಿರಣ್ಯಕಶಿಪು ಇಂತಹ ಸಾಧು ಸ್ವಭಾವದ ಪುತ್ರನನ್ನೂ ಕೂಡ ಅಪರಾಧಿಯೆಂದು ತಿಳಿದು ಅವನಿಗೆ ಅನಿಷ್ಟವನ್ನುಂಟುಮಾಡಲು ಪ್ರಯತ್ನಿಸತೊಡಗಿದನು. ॥43॥
(ಶ್ಲೋಕ-44)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ದೇವರ್ಷ ಏತದಿಚ್ಛಾಮೋ ವೇದಿತುಂ ತವ ಸುವ್ರತ ।
ಯದಾತ್ಮಜಾಯ ಶುದ್ಧಾಯ ಪಿತಾದಾತ್ಸಾಧವೇ ಹ್ಯಘಮ್ ॥
ಅನುವಾದ
ಯುಧಿಷ್ಠಿರನು ಕೇಳಿದನು — ದೇವರ್ಷಿಗಳೇ! ನಿಮ್ಮ ವ್ರತವು ಅಖಂಡವಾಗಿದೆ. ಹಿರಣ್ಯಕಶಿಪು ತಂದೆಯಾಗಿದ್ದರೂ ಇಂತಹ ಶುದ್ಧಹೃದಯವುಳ್ಳ ಮಹಾತ್ಮನಾದ ಪುತ್ರನೊಡನೆ ಏಕೆ ದ್ರೋಹ ಮಾಡಿದನು? ಇದನ್ನು ನಾವು ತಮ್ಮಿಂದ ಕೇಳಲಿಚ್ಛಿಸುತ್ತೇವೆ. ॥44॥
(ಶ್ಲೋಕ-45)
ಮೂಲಮ್
ಪುತ್ರಾನ್ವಿಪ್ರತಿಕೂಲಾಂಸ್ವಾನ್ ಪಿತರಃ ಪುತ್ರವತ್ಸಲಾಃ ।
ಉಪಾಲಭಂತೇ ಶಿಕ್ಷಾರ್ಥಂ ನೈವಾಘಮಪರೋ ಯಥಾ ॥
ಅನುವಾದ
ತಂದೆಯಾದರೋ ಸ್ವಭಾವಿಕವಾಗಿಯೇ ತನ್ನ ಪುತ್ರನನ್ನು ಪ್ರೀತಿಸುತ್ತಾನೆ. ಅವನು ಏನಾದರೂ ವಿರುದ್ಧವಾದ ಕಾರ್ಯಮಾಡಿದರೂ ಅವನಿಗೆ ತಿಳಿವಳಿಕೆ ನೀಡುವುದಕ್ಕಾಗಿ ಗದರಿಸುತ್ತಾರೆಯೇ ಹೊರತು ಶತ್ರುವಿನಂತೆ ಅವನಲ್ಲಿ ವೈರ-ವಿರೋಧವನ್ನು ಮಾಡುವುದಿಲ್ಲ. ॥45॥
(ಶ್ಲೋಕ-46)
ಮೂಲಮ್
ಕಿಮುತಾನುವಶಾನ್ಸಾಧೂಂಸ್ತಾದೃಶಾನ್ಗುರುದೇವತಾನ್ ।
ಏತತ್ಕೌತೂಹಲಂ ಬ್ರಹ್ಮನ್ನಸ್ಮಾಕಂ ವಿಧಮ ಪ್ರಭೋ ।
ಪಿತುಃ ಪುತ್ರಾಯ ಯದ್ದ್ವೇಷೋ ಮರಣಾಯ ಪ್ರಯೋಜಿತಃ ॥
ಅನುವಾದ
ಹಾಗಿರುವಾಗ ಪ್ರಹ್ಲಾದನಂತಹ ವಿಧೇಯನೂ, ಶುದ್ಧಹೃದಯನೂ, ಗುರುಹಿರಿಯರಲ್ಲಿ ಭಗವದ್ಭಾವವನ್ನು ಇರಿಸುವವನೂ ಆದ ಪುತ್ರನಲ್ಲಿ ಯಾರು ತಾನೇ ದ್ವೇಷ ಮಾಡಬಲ್ಲನು? ನಾರದರೇ! ಎಲ್ಲವನ್ನು ಬಲ್ಲವರು ನೀವು. ತಂದೆಯು ದ್ವೇಷದಿಂದ ಪುತ್ರನನ್ನು ಕೊಂದುಹಾಕಲು ಬಯಸಿದನು. ಇದನ್ನು ತಿಳಿದು ನಮಗೆ ತುಂಬಾ ಕುತೂಹಲ ಉಂಟಾಗಿದೆ. ಅದನ್ನು ತಾವು ಶಾಂತಗೊಳಿಸಿರಿ. ॥46॥
ಅನುವಾದ (ಸಮಾಪ್ತಿಃ)
ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಪ್ರಹ್ಲಾದಚರಿತೇ ಚತುರ್ಥೋಽಧ್ಯಾಯಃ ॥4॥