೦೩

[ಮೂರನೆಯ ಅಧ್ಯಾಯ]

ಭಾಗಸೂಚನಾ

ಹಿರಣ್ಯಕಶಿಪುವಿನ ತಪಸ್ಸು ಮತ್ತು ವರಪ್ರಾಪ್ತಿಯು

(ಶ್ಲೋಕ-1)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಹಿರಣ್ಯಕಶಿಪೂ ರಾಜನ್ ಅಜೇಯಮಜರಾಮರಮ್ ।
ಆತ್ಮಾನಮಪ್ರತಿದ್ವಂದ್ವಮೇಕರಾಜಂ ವ್ಯಧಿತ್ಸತ ॥

ಅನುವಾದ

ನಾರದರು ಹೇಳುತ್ತಾರೆ — ಎಲೈ ಯುಧಿಷ್ಠಿರನೇ! ಆ ಹಿರಣ್ಯ ಕಶಿಪು ತಾನು ಅಜೇಯನಾಗಬೇಕು, ಮುಪ್ಪು-ಸಾವುಗಳಿಲ್ಲದವ ನಾಗಬೇಕು. ಇಡೀ ಜಗತ್ತಿಗೆ ಏಕಚ್ಛತ್ರಾಧಿಪತಿಯಾಗಬೇಕು. ತನಗೆ ಯಾರೂ ಎದುರಾಳಿಗಳು ಇರದಂತೆ ಮಾಡಿಕೊಳ್ಳಬೇಕು ಎಂದು ಸಂಕಲ್ಪಮಾಡಿದನು. ॥1॥

(ಶ್ಲೋಕ-2)

ಮೂಲಮ್

ಸ ತೇಪೇ ಮಂದರದ್ರೋಣ್ಯಾಂ ತಪಃ ಪರಮದಾರುಣಮ್ ।
ಊರ್ಧ್ವಬಾಹುರ್ನಭೋದೃಷ್ಟಿಃ ಪಾದಾಂಗುಷ್ಠಾಶ್ರಿತಾವನಿಃ ॥

ಅನುವಾದ

ಅದಕ್ಕಾಗಿ ಅವನು ಮಂದರ ಪರ್ವತದ ತಪ್ಪಲಿಗೆ ಹೋಗಿ ಅಲ್ಲಿ ಅತ್ಯಂತ ದಾರುಣವಾದ ತಪಸ್ಸನ್ನು ಆಚರಿಸ ತೊಡಗಿದನು. ಕೈಗಳನ್ನು ಮೇಲಕ್ಕೆ ಎತ್ತಿಕೊಂಡು ಆಕಾಶದ ಕಡೆಗೆ ನೋಡುತ್ತಾ ಕಾಲಿನ ಹೆಬ್ಬೆರಳಿನ ಬಲದಿಂದ ಭೂಮಿಯ ಮೇಲೆ ನಿಂತುಕೊಂಡನು. ॥2॥

(ಶ್ಲೋಕ-3)

ಮೂಲಮ್

ಜಟಾದೀಧಿತಿಭೀ ರೇಜೇ ಸಂವರ್ತಾರ್ಕ ಇವಾಂಶುಭಿಃ ।
ತಸ್ಮಿಂಸ್ತಪಸ್ತಪ್ಯಮಾನೇ ದೇವಾಃ ಸ್ಥಾನಾನಿ ಭೇಜಿರೇ ॥

ಅನುವಾದ

ಆಗ ಅವನ ಜಟೆಗಳು ಪ್ರಳಯಕಾಲದ ಸೂರ್ಯಕಿರಣಗಳಂತೆ ಹೊಳೆಯುತ್ತಿದ್ದವು. ಅವನು ಹೀಗೆ ತಪಸ್ಸಿನಲ್ಲಿ ನಿರತನಾದಾಗ ದೇವತೆಗಳು ಹಿಂದಿನಂತೆ ತಮ್ಮ-ತಮ್ಮ ಸ್ಥಾನಗಳಲ್ಲಿ ನೆಲೆಗೊಂಡರು. ॥3॥

(ಶ್ಲೋಕ-4)

ಮೂಲಮ್

ತಸ್ಯ ಮೂರ್ಧ್ನಃ ಸಮುದ್ಭೂತಃ ಸಧೂಮೋಗ್ನಿಸ್ತಪೋಮಯಃ ।
ತಿರ್ಯಗೂರ್ಧ್ವಮಧೋಲೋಕಾನತಪದ್ವಿಷ್ವಗೀರಿತಃ ॥

ಅನುವಾದ

ಬಹಳ ಕಾಲದವರೆಗೆ ತಪಸ್ಸು ಮಾಡಿದಾಗ ಅವನ ತಲೆಯಿಂದ ಹೊಗೆಯೊಂದಿಗೆ ತಪೋಜ್ಞಾಲೆಯು ಹೊರಟು ಎಲ್ಲ ಕಡೆಗಳಲ್ಲಿಯೂ ಹರಡಿಕೊಂಡಿತು ಮತ್ತು ಮೇಲೂ, ಕೆಳಗೂ, ಅಕ್ಕಪಕ್ಕಗಳಲ್ಲಿಯೂ ಇದ್ದ ಲೋಕಗಳನ್ನು ಸುಡಲು ತೊಡಗಿತು. ॥4॥

(ಶ್ಲೋಕ-5)

ಮೂಲಮ್

ಚುಕ್ಷುಭುರ್ನದ್ಯುದನ್ವಂತಃ ಸದ್ವೀಪಾದ್ರಿಶ್ಚಚಾಲ ಭೂಃ ।
ನಿಪೇತುಃ ಸಗ್ರಹಾಸ್ತಾರಾ ಜಜ್ವಲುಶ್ಚ ದಿಶೋ ದಶ ॥

ಅನುವಾದ

ಅದರ ಜ್ವಾಲೆಯಿಂದ ನದಿಗಳೂ, ಸಮುದ್ರಗಳೂ ಕುದಿಯ ತೊಡಗಿದವು. ದ್ವೀಪ ಮತ್ತು ಪರ್ವತಗಳಿಂದೊಡ ಗೂಡಿದ ಭೂಮಿಯು ನಡುಗ ತೊಡಗಿತು. ಗ್ರಹ-ನಕ್ಷತ್ರಗಳು ಉರುಳಿಬಿದ್ದವು. ದಶದಿಕ್ಕುಗಳೂ ಉರಿಯ ತೊಡಗಿದವು. ॥5॥

(ಶ್ಲೋಕ-6)

ಮೂಲಮ್

ತೇನ ತಪ್ತಾ ದಿವಂ ತ್ಯಕ್ತ್ವಾ ಬ್ರಹ್ಮಲೋಕಂ ಯಯುಃ ಸುರಾಃ ।
ಧಾತ್ರೇ ವಿಜ್ಞಾಪಯಾಮಾಸುರ್ದೇವದೇವ ಜಗತ್ಪತೇ ॥

(ಶ್ಲೋಕ-7)

ಮೂಲಮ್

ದೈತ್ಯೇಂದ್ರತಪಸಾ ತಪ್ತಾ ದಿವಿ ಸ್ಥಾತುಂ ನ ಶಕ್ನುಮಃ ।
ತಸ್ಯ ಚೋಪಶಮಂ ಭೂಮನ್ವಿಧೇಹಿ ಯದಿ ಮನ್ಯಸೇ ।
ಲೋಕಾ ನ ಯಾವನ್ನಂಕ್ಷ್ಯಂತಿ ಬಲಿಹಾರಾಸ್ತವಾಭಿಭೂಃ ॥

ಅನುವಾದ

ಹಿರಣ್ಯಕಶಿಪುವಿನ ಆ ತಪೋಮಯ ಅಗ್ನಿಜ್ವಾಲೆಗಳಿಂದ ಸ್ವರ್ಗದ ದೇವತೆಗಳೂ ಉರಿಯತೊಡಗಿದರು. ಅವರೆಲ್ಲರೂ ಗಾಬರಿ ಗೊಂಡು ಸ್ವರ್ಗದಿಂದ ಬ್ರಹ್ಮಲೋಕಕ್ಕೆ ಹೋಗಿ ಬ್ರಹ್ಮ ದೇವರಲ್ಲಿ ಪ್ರಾರ್ಥಿಸತೊಡಗಿದರು. ಓ ದೇವತೆಗಳಿಗೂ ಆರಾಧ್ಯ ದೇವನಾದ ಜಗತ್ಪಿತನಾದ ಬ್ರಹ್ಮದೇವರೇ! ನಾವು ಗಳು ಹಿರಣ್ಯಕಶಿಪುವಿನ ತಪೋಜ್ವಾಲೆಗಳಿಂದ ಬೆಂದು ಹೋಗುತ್ತಿದ್ದೇವೆ. ಈಗ ನಾವು ಸ್ವರ್ಗದಲ್ಲಿ ಇರಲಾರೆವು. ಓ ಅನಂತನೇ ಸರ್ವಾಧ್ಯಕ್ಷನೇ! ನಿನಗೆ ಉಚಿತವೆನಿಸಿದರೆ ನಿನ್ನ ಸೇವೆ ಮಾಡುವ ಜನತೆಯ ನಾಶವಾಗುವ ಮೊದಲೇ ಆ ಜ್ವಾಲೆಯನ್ನು ಶಾಂತಗೊಳಿಸು. ॥6-7॥

(ಶ್ಲೋಕ-8)

ಮೂಲಮ್

ತಸ್ಯಾಯಂ ಕಿಲ ಸಂಕಲ್ಪಶ್ಚರತೋ ದುಶ್ಚರಂ ತಪಃ ।
ಶ್ರೂಯತಾಂ ಕಿಂ ನ ವಿದಿತಸ್ತವಾಥಾಪಿ ನಿವೇದಿತಃ ॥

(ಶ್ಲೋಕ-9)

ಮೂಲಮ್

ಸೃಷ್ಟ್ವಾ ಚರಾಚರಮಿದಂ ತಪೋಯೋಗಸಮಾಧಿನಾ ।
ಅಧ್ಯಾಸ್ತೇ ಸರ್ವಧಿಷ್ಣ್ಯೇಭ್ಯಃ ಪರಮೇಷ್ಠೀ ನಿಜಾಸನಮ್ ॥

(ಶ್ಲೋಕ-10)

ಮೂಲಮ್

ತದಹಂ ವರ್ಧಮಾನೇನ ತಪೋಯೋಗಸಮಾಧಿನಾ ।
ಕಾಲಾತ್ಮನೋಶ್ಚ ನಿತ್ಯತ್ವಾತ್ಸಾಧಯಿಷ್ಯೇ ತಥಾತ್ಮನಃ ॥

ಅನುವಾದ

ಎಲೈ ಭಗವಂತನೇ! ನೀನು ಎಲ್ಲವನ್ನೂ ಬಲ್ಲವನು. ಹೀಗಿದ್ದರೂ ನಾವು ನಮ್ಮ ಕಡೆಯಿಂದ ಅವನು ಯಾವ ಅಭಿಪ್ರಾಯದಿಂದ ತಪಸ್ಸನ್ನು ಮಾಡುತ್ತಿದ್ದಾನೆಂಬುದನ್ನು ನಿವೇದಿಸಿಕೊಳ್ಳುವೆವು. ಕೇಳೋಣವಾಗಲಿ. ‘ಬ್ರಹ್ಮದೇವರು ತಮ್ಮ ತಪಸ್ಸು ಮತ್ತು ಯೋಗದ ಪ್ರಭಾವದಿಂದ ಈ ಚರಾಚರ ಜಗತ್ತನ್ನು ಸೃಷ್ಟಿಸಿ ಎಲ್ಲ ಲೋಕಗಳಿಗೂ ಮೇಲಿನ ಸತ್ಯಲೋಕದಲ್ಲಿ ವಿರಾಜಿಸುತ್ತಿರುವಂತೆ ನಾನೂ ಕೂಡ ನನ್ನ ಉಗ್ರವಾದ ತಪಸ್ಸು ಮತ್ತು ಯೋಗದ ಪ್ರಭಾವದಿಂದ ಅದೇ ಪದವಿಯನ್ನು ಹಾಗೂ ಸ್ಥಾನವನ್ನು ಪಡೆದುಕೊಳ್ಳುವೆನು. ಒಂದು ಜನ್ಮದಲ್ಲಿ ಆಗದಿದ್ದರೆ ಅನೇಕ ಜನ್ಮಗಳಲ್ಲಿ, ಒಂದು ಯುಗ ದಲ್ಲಾಗದಿದ್ದರೆ ಅನೇಕ ಯುಗಗಳಲ್ಲಿ ಅದನ್ನು ಗಳಿಸಿಯೇಕೊಳ್ಳುವೆನು. ಏಕೆಂದರೆ ಸಮಯವು ಅಸೀಮವಾಗಿದೆ ಹಾಗೂ ಆತ್ಮನು ನಿತ್ಯನಾಗಿದ್ದಾನೆ. ॥8-10॥

(ಶ್ಲೋಕ-11)

ಮೂಲಮ್

ಅನ್ಯಥೇದಂ ವಿಧಾಸ್ಯೇಹಮಯಥಾಪೂರ್ವಮೋಜಸಾ ।
ಕಿಮನ್ಯೈಃ ಕಾಲನಿರ್ಧೂತೈಃ ಕಲ್ಪಾಂತೇ ವೈಷ್ಣವಾದಿಭಿಃ ॥

ಅನುವಾದ

ನನ್ನ ತಪಸ್ಸಿನ ಶಕ್ತಿಯಿಂದ ನಾನು ಪಾಪ-ಪುಣ್ಯಗಳ ನಿಯಮಗಳನ್ನು ತಲೆಕೆಳಗಾಗಿಸುವೆನು. ಈ ಜಗತ್ತಿನಲ್ಲಿ ಹಿಂದೆ ಎಂದೂ ಇಲ್ಲದ ಬದಲಾವಣೆಯನ್ನು ಮಾಡಿ ಬಿಡುವೆನು. ವೈಷ್ಣವಾದಿಲೋಕಗಳಲ್ಲಾದರೋ ಏನು ಮಹಿಮೆ ಯಿದ್ದೀತು? ಕಲ್ಪದ ಕೊನೆಯಲ್ಲಿ ಅವೂ ಕೂಡ ಕಾಲದ ದವಡೆಯಲ್ಲಿ ಸೇರಿ ಹೋಗುವುದು.* ॥11॥

ಟಿಪ್ಪನೀ
  • ವೈಕುಂಠಾದಿ ವೈಷ್ಣವ ನಿತ್ಯಧಾಮಗಳು ಅವಿನಾಶಿಯಾಗಿದ್ದರೂ, ಹಿರಣ್ಯಕಶಿಪುವು ತನ್ನ ಆಸುರೀ ಬುದ್ಧಿಯಿಂದ ಅವನ್ನು ಕಲ್ಪದ ಕೊನೆಯಲ್ಲಿ ನಾಶವಾಗುವುವು ಎಂದೇ ತಿಳಿಯುತ್ತಿದ್ದನು. ತಾಮಸೀ ಬುದ್ಧಿಗೆ ಹೀಗೆ ಎಲ್ಲವೂ ವಿಪರೀತವೇ ಕಂಡುಬರುತ್ತದೆ.

(ಶ್ಲೋಕ-12)

ಮೂಲಮ್

ಇತಿ ಶುಶ್ರುಮ ನಿರ್ಬಂಧಂ ತಪಃ ಪರಮಮಾಸ್ಥಿತಃ ।
ವಿಧತ್ಸ್ವಾನಂತರಂ ಯುಕ್ತಂ ಸ್ವಯಂ ತ್ರಿಭುವನೇಶ್ವರ ॥

ಅನುವಾದ

ಇಂತಹ ಹಟವನ್ನು ತೊಟ್ಟುಕೊಂಡೇ ಅವನು ತಪಸ್ಸು ಮಾಡುತ್ತಿದ್ದಾನೆ ಎಂದು ನಾವು ಕೇಳಿದ್ದೇವೆ. ನೀವು ಮೂರುಲೋಕಗಳಿಗೂ ಒಡೆಯರಾಗಿದ್ದೀರಿ. ಈಗ ತಮಗೆ ಉಚಿತವಾಗಿ ಕಂಡಂತೆ ಮಾಡಿರಿ. ॥12॥

(ಶ್ಲೋಕ-13)

ಮೂಲಮ್

ತವಾಸನಂ ದ್ವಿಜಗವಾಂ ಪಾರಮೇಷ್ಠ್ಯಂ ಜಗತ್ಪತೇ ।
ಭವಾಯ ಶ್ರೇಯಸೇ ಭೂತ್ಯೈ ಕ್ಷೇಮಾಯ ವಿಜಯಾಯ ಚ ॥

ಅನುವಾದ

ಬ್ರಹ್ಮದೇವರೇ! ತಮ್ಮ ಈ ಸರ್ವಶ್ರೇಷ್ಠವಾದ ಪರಮೇಷ್ಠಿಪದವು ಬ್ರಾಹ್ಮಣರು ಹಾಗೂ ಗೋವುಗಳ ವೃದ್ಧಿ, ಕಲ್ಯಾಣ, ವಿಭೂತಿ, ಕುಶಲ ಮತ್ತು ವಿಜಯಕ್ಕಾಗಿಯೇ ಇದೆ. ಇದು ಎಲ್ಲಾದರೂ ಹಿರಣ್ಯಕಶಿಪುವಿನ ಕೈಗೆ ಸಿಕ್ಕಿದರೆ ಸಜ್ಜನರ ಮೇಲೆ ಸಂಕಟದ ಪರ್ವತವೇ ಬಿದ್ದಂತಾಗುವುದು. ॥13॥

(ಶ್ಲೋಕ-14)

ಮೂಲಮ್

ಇತಿ ವಿಜ್ಞಾಪಿತೋ ದೇವೈರ್ಭಗವಾನಾತ್ಮಭೂರ್ನೃಪ ।
ಪರೀತೋ ಭೃಗುದಕ್ಷಾದ್ಯೈರ್ಯಯೌ ದೈತ್ಯೇಶ್ವರಾಶ್ರಮಮ್ ॥

ಅನುವಾದ

ಯುಧಿಷ್ಠಿರನೇ! ದೇವತೆಗಳು ಭಗವಾನ್ ಬ್ರಹ್ಮದೇವರಲ್ಲಿ ಹೀಗೆ ನಿವೇದಿಸಿಕೊಂಡಾಗ ಅವರು ಭೃಗು, ದಕ್ಷರೇ ಮುಂತಾದ ಪ್ರಜಾಪತಿಗಳೊಡನೆ ಹಿರಣ್ಯಕಶಿಪುವಿನ ಆಶ್ರಮಕ್ಕೆ ಹೋದರು. ॥14॥

(ಶ್ಲೋಕ-15)

ಮೂಲಮ್

ನ ದದರ್ಶ ಪ್ರತಿಚ್ಛನ್ನಂ ವಲ್ಮೀಕತೃಣಕೀಚಕೈಃ ।
ಪಿಪೀಲಿಕಾಭಿರಾಚೀರ್ಣಮೇದಸ್ತ್ವಙ್ಮಾಂಸಶೋಣಿತಮ್ ॥

ಅನುವಾದ

ಅಲ್ಲಿಗೆ ಹೋದಾಗ ಅವರಿಗೆ ಮೊದಲು ಅವನು ಕಾಣಿಸಲೇ ಇಲ್ಲ. ಏಕೆಂದರೆ, ಹುತ್ತದಿಂದ ಮತ್ತು ಹುಲ್ಲು-ಬಿದಿರುಮೇಳೆಯಿಂದ ಅವನ ದೇಹವು ಮುಚ್ಚಿಹೋಗಿತ್ತು. ಇರುವೆಗಳು ಅವನ ದೇಹದ ಮೇದಸ್ಸು, ಚರ್ಮ, ಮಾಂಸ, ರಕ್ತ ಇವೆಲ್ಲವನ್ನು ಕಬಳಿಸಿ ಬಿಟ್ಟಿದ್ದವು. ॥15॥

(ಶ್ಲೋಕ-16)

ಮೂಲಮ್

ತಪಂತಂ ತಪಸಾ ಲೋಕಾನ್ಯಥಾಭ್ರಾಪಿಹಿತಂ ರವಿಮ್ ।
ವಿಲಕ್ಷ್ಯ ವಿಸ್ಮಿತಃ ಪ್ರಾಹ ಪ್ರಹಸನ್ ಹಂಸವಾಹನಃ ॥

ಅನುವಾದ

ಮೋಡಗಳಿಂದ ಮುಚ್ಚಲ್ಪಟ್ಟ ಸೂರ್ಯನಂತೆ ಅವನು ತನ್ನ ತಪಸ್ಸಿನ ತೇಜದಿಂದ ಲೋಕಗಳನ್ನು ಸುಡುತ್ತಿದ್ದನು. ಅವನನ್ನು ನೋಡಿ, ಬ್ರಹ್ಮದೇವರೂ ಕೂಡ ವಿಸ್ಮಿತರಾಗಿ, ನಗುತ್ತಾ ಇಂತೆಂದರು. ॥16॥

(ಶ್ಲೋಕ-17)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಉತ್ತಿಷ್ಠೋತ್ತಿಷ್ಠ ಭದ್ರಂ ತೇ ತಪಃಸಿದ್ಧೋಸಿ ಕಾಶ್ಯಪ ।
ವರದೋಹಮನುಪ್ರಾಪ್ತೋ ವ್ರಿಯತಾಮೀಪ್ಸಿತೋ ವರಃ ॥

ಅನುವಾದ

ಬ್ರಹ್ಮದೇವರು ಹೇಳಿದರು — ವತ್ಸ! ಹಿರಣ್ಯಕಶಿಪುವೇ! ಏಳು; ಮೇಲೇಳು! ನಿನಗೆ ಮಂಗಳವಾಗಲಿ. ಕಶ್ಯಪ ಪುತ್ರನೇ! ಈಗ ನಿನ್ನ ತಪಸ್ಸು ಸಿದ್ಧಿಸಿತು. ನಾನು ನಿನಗೆ ವರವನ್ನು ಕೊಡಲು ಬಂದಿರುವೆನು. ನಿನಗೆ ಇಷ್ಟವಾದ ವರವನ್ನು ಕೇಳಿಕೋ.॥17॥

(ಶ್ಲೋಕ-18)

ಮೂಲಮ್

ಅದ್ರಾಕ್ಷಮಹಮೇತತ್ತೇ ಹೃತ್ಸಾರಂ ಮಹದದ್ಭುತಮ್ ।
ದಂಶಭಕ್ಷಿತದೇಹಸ್ಯ ಪ್ರಾಣಾ ಹ್ಯಸ್ಥಿಷು ಶೇರತೇ ॥

ಅನುವಾದ

ನಾನು ನಿನ್ನ ಹೃದಯದ ಅದ್ಭುತವಾದ ಬಲವನ್ನು ನೋಡಿದೆ. ಅಯ್ಯಾ! ಇರುವೆ-ಸೊಳ್ಳೆಗಳು ನಿನ್ನ ದೇಹವನ್ನು ತಿಂದುಬಿಟ್ಟಿವೆ. ಆದರೂ ನಿನ್ನ ಪ್ರಾಣಗಳು ಅಸ್ಥಿಗತವಾಗಿ ಉಳಿದಿವೆ. ॥18॥

(ಶ್ಲೋಕ-19)

ಮೂಲಮ್

ನೈತತ್ಪೂರ್ವರ್ಷಯಶ್ಚಕ್ರುರ್ನ ಕರಿಷ್ಯಂತಿ ಚಾಪರೇ ।
ನಿರಂಬುರ್ಧಾರಯೇತ್ಪ್ರಾಣಾನ್ಕೋ ವೈ ದಿವ್ಯಸಮಾಃ ಶತಮ್ ॥

ಅನುವಾದ

ಇಂತಹ ಕಠಿಣವಾದ ತಪಸ್ಸನ್ನು ಹಿಂದೆ ಯಾವ ಋಷಿಯೂ ಮಾಡಿಲ್ಲ, ಮುಂದೆ ಯಾರೂ ಮಾಡಲಾರರು. ದೇವತೆಗಳ ದಿವ್ಯವಾದ ನೂರು ವರ್ಷಗಳವರೆಗೆ ನೀರೂ ಕುಡಿಯದೆ ಜೀವಿಸಿಯಾರು ತಾನೇ ಇರ ಬಲ್ಲರು? ॥19॥

(ಶ್ಲೋಕ-20)

ಮೂಲಮ್

ವ್ಯವಸಾಯೇನ ತೇನೇನ ದುಷ್ಕರೇಣ ಮನಸ್ವಿನಾಮ್ ।
ತಪೋನಿಷ್ಠೇನ ಭವತಾ ಜಿತೋಹಂ ದಿತಿನಂದನ ॥

ಅನುವಾದ

ವತ್ಸ ಹಿರಣ್ಯಕಶಿಪು! ನಿನ್ನ ಇಂತಹ ಕಾರ್ಯವನ್ನು ದೊಡ್ಡ-ದೊಡ್ಡ ಧೀರರು ಮಾತ್ರ ಕಷ್ಟದಿಂದ ಮಾಡಬಲ್ಲರು. ನೀನು ಈ ತಪೋನಿಷ್ಠೆಯಿಂದ ನನ್ನನ್ನು ನಿನ್ನ ವಶವಾಗಿಸಿಕೊಂಡು ಬಿಟ್ಟಿರುವೆ. ॥20॥

(ಶ್ಲೋಕ-21)

ಮೂಲಮ್

ತತಸ್ತ ಆಶಿಷಃ ಸರ್ವಾ ದದಾಮ್ಯ ಸುರಪುಂಗವ ।
ಮರ್ತ್ಯಸ್ಯ ತೇ ಅಮರ್ತ್ಯಸ್ಯ ದರ್ಶನಂ ನಾಲಂ ಮಮ ॥

ಅನುವಾದ

ದೈತ್ಯಶಿರೋಮಣಿಯೇ! ಇದರಿಂದ ಪ್ರಸನ್ನನಾದ ನಾನು ನೀನು ಬೇಡಿದ ವರವನ್ನು ಕೊಟ್ಟೇ ಬಿಡುವೆನು. ಸಾಯುವವನು ನೀನು, ಸಾಯದೇ ಇರುವ ಅಮರನು ನಾನು. ಆದ್ದರಿಂದ ನಿನಗಾದ ನನ್ನ ದರ್ಶನವು ನಿಷ್ಫಲವಾಗಲಾರದು. ॥21॥

(ಶ್ಲೋಕ-22)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಇತ್ಯುಕ್ತ್ವಾದಿಭವೋ ದೇವೋ ಭಕ್ಷಿತಾಂಗಂ ಪಿಪೀಲಿಕೈಃ ।
ಕಮಂಡಲುಜಲೇನೌಕ್ಷದ್ದಿವ್ಯೇನಾಮೋಘರಾಧಸಾ ॥

ಅನುವಾದ

ನಾರದರು ಹೇಳುತ್ತಾರೆ — ಧರ್ಮನಂದನಾ! ಇಷ್ಟು ಹೇಳಿ ಬ್ರಹ್ಮದೇವರು ಇರುವೆಗಳಿಂದ ತಿಂದಿರುವ ಅವನ ಶರೀರದ ಮೇಲೆ ತನ್ನ ಕಮಂಡಲುವಿನ ದಿವ್ಯವೂ, ಅಮೋಘವೂ ಆದ ಪ್ರಭಾವಶಾಲಿ ನೀರನ್ನು ಚಿಮುಕಿಸಿದರು. ॥22॥

(ಶ್ಲೋಕ-23)

ಮೂಲಮ್

ಸ ತತ್ಕೀಚಕವಲ್ಮೀಕಾತ್ಸಹ ಓಜೋಬಲಾನ್ವಿತಃ ।
ಸರ್ವಾವಯವಸಂಪನ್ನೋ ವಜ್ರಸಂಹನನೋ ಯುವಾ ।
ಉತ್ಥಿತಸ್ತಪ್ತಹೇಮಾಭೋ ವಿಭಾವಸುರಿವೈಧಸಃ ॥

ಅನುವಾದ

ಆ ಜಲವನ್ನು ಪ್ರೋಕ್ಷಿಸುತ್ತಲೇ ಕಟ್ಟಿಗೆಯ ರಾಶಿಯಿಂದ ಬೆಂಕಿಯು ಉರಿದೇಳುವಂತೆ ಅವನು ಬದಿರುಮೇಳೆ ಮತ್ತು ಹುತ್ತದ ಮಣ್ಣಿನಿಂದ ಎದ್ದು ನಿಂತನು. ಆಗ ಅವನ ದೇಹವು ಎಲ್ಲ ಅವಯವಗಳಿಂದ ಪರಿಪೂರ್ಣವಾಗಿ ಬಲಿಷ್ಠವಾಗಿತ್ತು. ಇಂದ್ರಿಯಗಳಿಗೆ ಶಕ್ತಿಯು ಬಂದು, ಮನಸ್ಸು ಎಚ್ಚರ ಗೊಂಡಿತ್ತು. ಎಲ್ಲ ಅಂಗಾಂಗಗಳು ವಜ್ರದಂತೆ ಕಠೋರ ಹಾಗೂ ಕಾದ ಚಿನ್ನದಂತೆ ಥಳ-ಥಳಿಸುತ್ತಿದ್ದವು. ॥23॥

(ಶ್ಲೋಕ-24)

ಮೂಲಮ್

ಸ ನಿರೀಕ್ಷ್ಯಾಂಬರೇ ದೇವಂ ಹಂಸವಾಹಮವಸ್ಥಿತಮ್ ।
ನನಾಮ ಶಿರಸಾ ಭೂವೌ ತದ್ದರ್ಶನಮಹೋತ್ಸವಃ ॥

ಅನುವಾದ

ತನ್ನ ಮುಂದೆ ಅಂತರಿಕ್ಷದಲ್ಲಿ ಹಂಸವಾಹನರಾಗಿ ಬ್ರಹ್ಮದೇವರು ನಿಂತಿರುವುದನ್ನು ಅವನು ನೋಡಿ, ಅವನಿಗೆ ಬಹಳ ಆನಂದ ವಾಯಿತು. ತನ್ನ ಶಿರಸ್ಸನ್ನು ಭೂಮಿಯ ಮೇಲಿರಿಸಿ ಅವನು ಬ್ರಹ್ಮದೇವರಿಗೆ ನಮಸ್ಕಾರ ಮಾಡಿದನು. ॥24॥

(ಶ್ಲೋಕ-25)

ಮೂಲಮ್

ಉತ್ಥಾಯ ಪ್ರಾಂಜಲಿಃ ಪ್ರಹ್ವ ಈಕ್ಷಮಾಣೋ ದೃಶಾ ವಿಭುಮ್ ।
ಹರ್ಷಾಶ್ರುಪುಲಕೋದ್ಭೇದೋ ಗಿರಾ ಗದ್ಗದಯಾಗೃಣಾತ್ ॥

ಅನುವಾದ

ಮತ್ತೆ ಅಂಜಲಿ ಬದ್ಧನಾಗಿ ವಿನಮ್ರಭಾವದಿಂದ ನಿಂತುಕೊಂಡು, ತುಂಬುಪ್ರೇಮದಿಂದ ತನ್ನ ಕಣ್ಣುಗಳನ್ನು ಮಿಟುಕಿಸದೆ ಅವನನ್ನು ನೋಡುತ್ತಾ, ಗದ್ಗದ ವಾಣಿಯಿಂದ ಸ್ತುತಿಸ ತೊಡಗಿದನು. ಆಗ ಅವನ ಕಣ್ಣುಗಳಿಂದ ಆನಂದಾಶ್ರುಗಳು ಹರಿಯುತ್ತಿದ್ದು, ಶರೀರವು ಪುಳಕಿತವಾಗಿತ್ತು. ॥25॥

(ಶ್ಲೋಕ-26)

ಮೂಲಮ್ (ವಾಚನಮ್)

ಹಿರಣ್ಯಕಶಿಪುರುವಾಚ

ಮೂಲಮ್

ಕಲ್ಪಾಂತೇ ಕಾಲಸೃಷ್ಟೇನ ಯೋಂಧೇನ ತಮಸಾವೃತಮ್ ।
ಅಭಿವ್ಯನಗ್ಜಗದಿದಂ ಸ್ವಯಂಜ್ಯೋತಿಃ ಸ್ವರೋಚಿಷಾ ॥

ಅನುವಾದ

ಹಿರಣ್ಯಕಶಿಪು ಹೇಳಿದನು — ಕಲ್ಪಾಂತ್ಯದಲ್ಲಿ ಈ ಎಲ್ಲ ಸೃಷ್ಟಿಯು ಕಾಲನಿಂದ ಪ್ರೇರಿತವಾದ ತಮೋಗುಣದಿಂದ, ಘೋರ ಅಂಧಕಾರದಿಂದ ಮುಚ್ಚಿಹೋಗಿತ್ತು. ಆ ಸಮಯದಲ್ಲಿ ಸ್ವಯಂ ಪ್ರಕಾಶಸ್ವರೂಪನಾದ ನೀನೇ ನಿನ್ನ ತೇಜದಿಂದ ಪುನಃ ಇದನ್ನು ಪ್ರಕಟಿಸಿದೆ. ॥26॥

(ಶ್ಲೋಕ-27)

ಮೂಲಮ್

ಆತ್ಮನಾ ತ್ರಿವೃತಾ ಚೇದಂ ಸೃಜತ್ಯವತಿ ಲುಂಪತಿ ।
ರಜಃಸತ್ತ್ವತಮೋಧಾಮ್ನೇ ಪರಾಯ ಮಹತೇ ನಮಃ ॥

ಅನುವಾದ

ನೀನೇ ನಿನ್ನ ತ್ರಿಗುಣಮಯ ರೂಪದಿಂದ ಇದನ್ನು ರಚಿಸಿ, ರಕ್ಷಿಸಿ, ಸಂಹರಿಸುತ್ತಿರುವೆ. ನೀನೇ ಗುಣತ್ರಯಗಳಿಗೆ ಆಶ್ರಯನಾಗಿರುವೆ. ಎಲ್ಲರಿಗಿಂತಲೂ ಶ್ರೇಷ್ಠನೂ ದೊಡ್ಡವನೂ ನೀನೇ ಆಗಿರುವೆ. ಅಂತಹ ನಿನಗೆ ನಮಸ್ಕರಿಸುತ್ತೇನೆ. ॥27॥

(ಶ್ಲೋಕ-28)

ಮೂಲಮ್

ನಮ ಆದ್ಯಾಯ ಬೀಜಾಯ ಜ್ಞಾನವಿಜ್ಞಾನಮೂರ್ತಯೇ ।
ಪ್ರಾಣೇಂದ್ರಿಯಮನೋಬುದ್ಧಿ ವಿಕಾರೈರ್ವ್ಯಕ್ತಿಮೀಯುಷೇ ॥

ಅನುವಾದ

ನೀನೇ ಜಗತ್ತಿನ ಮೂಲಕಾರಣನು. ಜ್ಞಾನ-ವಿಜ್ಞಾನ ಗಳು ನಿನ್ನ ಮೂರ್ತಿಯೇ ಆಗಿದೆ. ಪ್ರಾಣ, ಇಂದ್ರಿಯಗಳು, ಮನಸ್ಸು, ಬುದ್ಧಿಮುಂತಾದ ವಿಕಾರಗಳಿಂದ ಪ್ರಕಟಗೊಳ್ಳುವ ನಿನಗೆ ನಮಸ್ಕಾರವು. ॥28॥

(ಶ್ಲೋಕ-29)

ಮೂಲಮ್

ತ್ವಮೀಶಿಷೇ ಜಗತಸ್ತಸ್ಥುಷಶ್ಚ ಪ್ರಾಣೇನ
ಮುಖ್ಯೇನ ಪತಿಃ ಪ್ರಜಾನಾಮ್ ।
ಚಿತ್ತಸ್ಯ ಚಿತ್ತೇರ್ಮನಇಂದ್ರಿಯಾಣಾಂ
ಪತಿರ್ಮಹಾನ್ಭೂತಗುಣಾಶಯೇಶಃ ॥

ಅನುವಾದ

ನೀನೇ ಮುಖ್ಯ ಪ್ರಾಣ ಸೂತ್ರಾತ್ಮನ ರೂಪದಲ್ಲಿ ಚರಾಚರ ಜಗತ್ತನ್ನು ನಿನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವೆ. ನೀನೇ ಪ್ರಜೆಯ ರಕ್ಷಕನಾಗಿರುವೆ. ಭಗವಂತಾ! ಚಿತ್ತ, ಚೈತನ್ಯ, ಮನಸ್ಸು, ಇಂದ್ರಿಯಗಳ ಸ್ವಾಮಿಯೂ ನೀನೇ ಆಗಿರುವೆ. ಪಂಚ ಭೂತಗಳು, ಶಬ್ದಾದಿ ವಿಷಯಗಳು ಮತ್ತು ಅವುಗಳ ಸಂಸ್ಕಾರ ಗಳನ್ನು ರಚಿಸುವವನೂ, ಮಹತ್ತತ್ತ್ವದ ರೂಪದಲ್ಲಿಯೂ ನೀನೇ ಇರುವೆ. ॥29॥

(ಶ್ಲೋಕ-30)

ಮೂಲಮ್

ತ್ವಂ ಸಪ್ತತಂತೂನ್ವಿತನೋಷಿ ತನ್ವಾ
ತ್ರಯ್ಯಾ ಚಾತುರ್ಹೋತ್ರಕವಿದ್ಯಯಾ ಚ ।
ತ್ವಮೇಕ ಆತ್ಮಾತ್ಮವತಾಮನಾದಿ
ರನಂತಪಾರಃ ಕವಿರಂತರಾತ್ಮಾ ॥

ಅನುವಾದ

ಹೋತಾ, ಅಧ್ವರ್ಯು, ಬ್ರಹ್ಮಾ, ಉದ್ಗಾತಾ ಈ ನಾಲ್ಕು ಋತ್ವಿಜರಿಂದ ನೆರವೇರುವ ಯಜ್ಞದ ಪ್ರತಿಪಾದನೆ ಮಾಡುವ ವೇದವೇ ನಿನ್ನ ಶರೀರ ವಾಗಿದೆ. ಅವುಗಳ ಮೂಲಕ ಅಗ್ನಿಷ್ಟೋಮ ಮುಂತಾದ ಏಳು ಯಜ್ಞಗಳನ್ನು ನೀನೇ ವಿಸ್ತಾರಮಾಡುವೆ. ನೀನೇ ಸಮಸ್ತ ಪ್ರಾಣಿಗಳ ಆತ್ಮನಾಗಿರುವೆ. ಏಕೆಂದರೆ, ನೀನು ಅನಾದಿಯೂ, ಅನಂತನೂ, ಅಪಾರನೂ, ಸರ್ವಜ್ಞನೂ, ಸರ್ವಾಂತರ್ಯಾಮಿಯೂ ಆಗಿರುವೆ. ॥30॥

(ಶ್ಲೋಕ-31)

ಮೂಲಮ್

ತ್ವಮೇವ ಕಾಲೋನಿಮಿಷೋ ಜನಾನಾ
ಮಾಯುರ್ಲವಾದ್ಯಾವಯವೈಃ ಕ್ಷಿಣೋಷಿ ।
ಕೂಟಸ್ಥ ಆತ್ಮಾ ಪರಮೇಷ್ಠ್ಯಜೋ ಮಹಾಂಸ್ತ್ವಂ
ಜೀವಲೋಕಸ್ಯ ಚ ಜೀವ ಆತ್ಮಾ ॥

ಅನುವಾದ

ನೀನೇ ಕಾಲನಾಗಿರುವೆ. ನೀನು ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನ ಕ್ಷಣ, ಲವ ಮುಂತಾದ ವಿಭಾಗಗಳಿಂದ ಜನರ ಆಯುಷ್ಯ ವನ್ನು ಕ್ಷೀಣಗೊಳಿಸುತ್ತಿರುವೆ. ಹೀಗಿದ್ದರೂ ನೀನು ನಿರ್ವಿಕಾರ ನಾಗಿರುವೆ. ಏಕೆಂದರೆ, ಜ್ಞಾನಸ್ವರೂಪನೂ, ಪರಮೇಶ್ವರನೂ, ಜನ್ಮರಹಿತನೂ, ಮಹಾನ್ ಆಗಿರುವ ನೀನು ಸಮಸ್ತ ಜೀವಿಗಳಿಗೂ ಜೀವನವನ್ನು ಕೊಡುವ ಅಂತರಾತ್ಮನಾಗಿರುವೆ. ॥31॥

(ಶ್ಲೋಕ-32)

ಮೂಲಮ್

ತ್ವತ್ತಃ ಪರಂ ನಾಪರಮಪ್ಯನೇಜದೇಜಚ್ಚ ಕಿಂಚಿದ್ವ್ಯತಿರಿಕ್ತಮಸ್ತಿ ।
ವಿದ್ಯಾಃ ಕಲಾಸ್ತೇ ತನವಶ್ಚ ಸರ್ವಾ ಹಿರಣ್ಯಗರ್ಭೋಸಿ ಬೃಹತಿಪೃಷ್ಠಃ ॥

ಅನುವಾದ

ಪ್ರಭೋ! ನಿನ್ನಿಂದ ಬೇರೆಯಾದ ಕಾರ್ಯ, ಕಾರಣ, ಚಲ ಮತ್ತು ಅಚಲವಾದ ಯಾವ ವಸ್ತುವೂ ಇಲ್ಲ. ಸಮಸ್ತ ವಿದ್ಯೆಗಳೂ ಕಲೆಗಳೂ ನಿನ್ನ ಶರೀರಗಳೇ ಆಗಿವೆ. ತ್ರಿಗುಣಮಯವಾದ ಮಾಯೆಯನ್ನು ಮೀರಿರುವ ಸ್ವಯಂ ಬ್ರಹ್ಮನು ನೀನೇ ಆಗಿರುವೆ. ಈ ಸ್ವರ್ಣಮಯ ಬ್ರಹ್ಮಾಂಡವು ನಿನ್ನ ಗರ್ಭದಲ್ಲೇ ಅಡಗಿದೆ. ನೀನು ಇದನ್ನು ನಿನ್ನಿಂದಲೇ ಪ್ರಕಟಗೊಳಿಸಿರುವೆ. ॥32॥

(ಶ್ಲೋಕ-33)

ಮೂಲಮ್

ವ್ಯಕ್ತಂ ವಿಭೋ ಸ್ಥೂಲಮಿದಂ ಶರೀರಂ
ಯೇನೇಂದ್ರಿಯಪ್ರಾಣಮನೋಗುಣಾಂಸ್ತ್ವಮ್ ।
ಭುಂಕ್ಷೇ ಸ್ಥಿತೋ ಧಾಮನಿ ಪಾರಮೇಷ್ಠ್ಯೇ
ಅವ್ಯಕ್ತ ಆತ್ಮಾ ಪುರುಷಃ ಪುರಾಣಃ ॥

ಅನುವಾದ

ಪ್ರಭೋ! ಈ ವ್ಯಕ್ತವಾದ ಬ್ರಹ್ಮಾಂಡವು ನಿನ್ನ ಸ್ಥೂಲಶರೀರವಾಗಿದೆ. ಇದರಿಂದ ನೀನು ಇಂದ್ರಿಯಗಳು, ಪ್ರಾಣ ಮತ್ತು ಮನಸ್ಸಿನ ವಿಷಯಗಳನ್ನು ಉಪಭೋಗಿಸುತ್ತಿರುವೆ. ಆದರೆ ಆಗಲೂ ನೀನೇ ನಿನ್ನ ಪರಮ ಐಶ್ವರ್ಯಮಯ ಸ್ವರೂಪದಲ್ಲೇ ಸ್ಥಿತನಾಗಿರುವೆ. ವಾಸ್ತವವಾಗಿ ನೀನೇ ಪುರಾಣ ಪುರುಷನು. ಸ್ಥೂಲ-ಸೂಕ್ಷ್ಮಗಳನ್ನು ಮೀರಿರುವ ಬ್ರಹ್ಮಸ್ವರೂಪನೇ ಆಗಿದ್ದೀಯೆ. ॥33॥

(ಶ್ಲೋಕ-34)

ಮೂಲಮ್

ಅನಂತಾವ್ಯಕ್ತರೂಪೇಣ ಯೇನೇದಮಖಿಲಂ ತತಮ್ ।
ಚಿದಚಿಚ್ಛಕ್ತಿಯುಕ್ತಾಯ ತಸ್ಮೈ ಭಗವತೇ ನಮಃ ॥

ಅನುವಾದ

ನೀನು ಅನಂತನಾಗಿದ್ದು, ಅವ್ಯಕ್ತಸ್ವರೂಪದಿಂದ ಇಡೀ ಜಗತ್ತನ್ನು ವ್ಯಾಪಿಸಿಕೊಂಡಿರುವೆ. ಚೇತನ ಮತ್ತು ಅಚೇತನ ಎರಡೂ ನಿನ್ನ ಶಕ್ತಿಗಳೇ ಆಗಿವೆ. ಇಂತಹ ಭಗವಂತಾ! ನಾನು ನಿನಗೆ ನಮಸ್ಕರಿಸುತ್ತೇನೆ. ॥34॥

(ಶ್ಲೋಕ-35)

ಮೂಲಮ್

ಯದಿ ದಾಸ್ಯಸ್ಯಭಿಮತಾನ್ ವರಾನ್ಮೇ ವರದೋತ್ತಮ ।
ಭೂತೇಭ್ಯಸ್ತ್ವದ್ವಿಸೃಷ್ಟೇಭ್ಯೋ ಮೃತ್ಯುರ್ಮಾ ಭೂನ್ಮಮ ಪ್ರಭೋ ॥

(ಶ್ಲೋಕ-36)

ಮೂಲಮ್

ನಾಂತರ್ಬಹಿರ್ದಿವಾ ನಕ್ತಮನ್ಯಸ್ಮಾದಪಿ ಚಾಯುಧೈಃ ।
ನ ಭೂವೌ ನಾಂಬರೇ ಮೃತ್ಯುರ್ನ ನರೈರ್ನ ಮೃಗೈರಪಿ ॥

(ಶ್ಲೋಕ-37)

ಮೂಲಮ್

ವ್ಯಸುಭಿರ್ವಾಸುಮದ್ಭಿರ್ವಾ ಸುರಾಸುರಮಹೋರಗೈಃ ।
ಅಪ್ರತಿದ್ವಂದ್ವತಾಂ ಯುದ್ಧೇ ಐಕಪತ್ಯಂ ಚ ದೇಹಿನಾಮ್ ॥

ಅನುವಾದ

ಪ್ರಭುವೇ! ನೀನೇ ವರಕೊಡುವವರಲ್ಲಿ ಸರ್ವಶ್ರೇಷ್ಠನಾಗಿರುವೆ. ನೀನು ನನಗೆ ಅಭೀಷ್ಟವಾದ ವರವನ್ನು ಕೊಡುವುದಾದರೆ ನೀನು ಸೃಷಿಸಿರುವ ಯಾವುದೇ ಪ್ರಾಣಿಯಿಂದಲೂ, ಬೇಕಾದರೆ ಮನುಷ್ಯನಿರಲಿ, ಪಶು, ಪ್ರಾಣಿಯಾಗಿರಲಿ, ಅಪ್ರಾಣಿಯಾಗಿರಲಿ, ದೇವತೆ, ದೈತ್ಯ, ನಾಗಗಳು ಮುಂತಾದ ಯಾರಿಂದಲೂ ನನ್ನ ಮೃತ್ಯುವು ಆಗದಿರಲಿ. ಒಳಗೆ-ಹೊರಗೆ, ಹಗಲಲ್ಲಿ-ರಾತ್ರಿಯಲ್ಲಿ, ಯಾವುದೇ ಅಸ್ತ್ರ-ಶಸ್ತ್ರಗಳಿಂದಾಗಲೀ, ಭೂಮಿಯಲ್ಲಾಗಲೀ, ಆಕಾಶದಲ್ಲಾಗಲೀ, ಯಾವುದರಿಂದಲೂ, ಎಲ್ಲೆಯಾಗಲೀ, ಯಾವಾಗಲೇ ಆಗಲೀ ನನಗೆ ಮರಣವುಂಟಾಗದಿರಲಿ. ಯುದ್ಧದಲ್ಲಿ ನನಗೆ ಎದುರಾಳಿಗಳು ಯಾರೂ ಇಲ್ಲದಿರಲಿ. ನಾನು ಎಲ್ಲ ಪ್ರಾಣಿಗಳಿಗೂ ಏಕಚ್ಛತ್ರಾಧಿಪತಿಯಾಗುವಂತೆ ವರವನ್ನು ಕರುಣಿಸು. ॥35-37॥

(ಶ್ಲೋಕ-38)

ಮೂಲಮ್

ಸರ್ವೇಷಾಂ ಲೋಕಪಾಲಾನಾಂ ಮಹಿಮಾನಂ ಯಥಾತ್ಮನಃ ।
ತಪೋಯೋಗಪ್ರಭಾವಾಣಾಂ ಯನ್ನ ರಿಷ್ಯತಿ ಕರ್ಹಿಚಿತ್ ॥

ಅನುವಾದ

ಇಂದ್ರಾದಿ ಸಮಸ್ತ ಲೋಕಪಾಲಕರಲ್ಲಿ ಯಾವಮಹಿಮೆಯುಂಟೋ ಅಂತಹ ಮಹಿಮೆಯು ನನಗೂ ಇರಲಿ. ತಪಸ್ವಿಗಳಲ್ಲಿ ಯೋಗಿಗಳಲ್ಲಿ ಇರುವ ಅಕ್ಷಯವಾದ ಐಶ್ವರ್ಯವನ್ನು ನನಗೂ ಅನುಗ್ರಹಿಸು. ॥38॥

ಅನುವಾದ (ಸಮಾಪ್ತಿಃ)

ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇಹಿರಣ್ಯಕಶಿಪೋರ್ವರಯಾಚನಂ ನಾಮ ತೃತೀಯೋಽಧ್ಯಾಯಃ ॥3॥