[ಎರಡನೆಯ ಅಧ್ಯಾಯ]
ಭಾಗಸೂಚನಾ
ಹಿರಣ್ಯಾಕ್ಷನ ವಧೆಯಿಂದ ದುಃಖಿತರಾದ ತಾಯಿಯನ್ನೂ ಮತ್ತು ಕುಟುಂಬದವರನ್ನೂ ಹಿರಣ್ಯಕಶಿಪುವು ಸಂತೈಸಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಭ್ರಾತರ್ಯೇವಂ ವಿನಿಹತೇ ಹರಿಣಾ ಕ್ರೋಡಮೂರ್ತಿನಾ ।
ಹಿರಣ್ಯಕಶಿಪೂ ರಾಜನ್ಪರ್ಯತಪ್ಯದ್ರುಷಾ ಶುಚಾ ॥
ಅನುವಾದ
ನಾರದರು ಹೇಳಿದರು — ಯುಧಿಷ್ಠಿರನೇ! ಭಗವಂತನು ವರಾಹಾವತಾರವನ್ನು ತಾಳಿ ಹಿರಣ್ಯಾಕ್ಷನನ್ನು ವಧಿಸಿದನು. ತಮ್ಮನು ಈ ವಿಧವಾಗಿ ಕೊಲ್ಲಲ್ಪಟ್ಟಾಗ ಹಿರಣ್ಯಕಶಿಪು ಕ್ರೋಧದಿಂದ ಉರಿದೆದ್ದು, ಶೋಕದಿಂದ ಸಂತಪ್ತನಾದನು. ॥1॥
(ಶ್ಲೋಕ-2)
ಮೂಲಮ್
ಆಹ ಚೇದಂ ರುಷಾ ಘೂರ್ಣಃ ಸಂದಷ್ಟದಶನಚ್ಛದಃ ।
ಕೋಪೋಜ್ಜ್ವಲದ್ಭ್ಯಾಂ ಚಕ್ಷುರ್ಭ್ಯಾಂ ನಿರೀಕ್ಷನ್ ಧೂಮ್ರಮಂಬರಮ್ ॥
ಅನುವಾದ
ಸಿಟ್ಟಿನಿಂದ ನಡುಗುತ್ತಾ ಪದೇ-ಪದೇ ಅವುಡು ಗಳನ್ನು ಕಚ್ಚಿಕೊಳ್ಳತೊಡಗಿದನು. ಕೋಪದಿಂದ ಉರಿಯು ತ್ತಿದ್ದ ಕಣ್ಣುಗಳ ಉರಿಯ ಹೊಗೆಯಿಂದ ಬೂದುಬಣ್ಣವನ್ನು ಹೊಂದಿದ ಆಕಾಶದ ಕಡೆಗೆ ನೋಡುತ್ತಾ ಹೇಳ ತೊಡಗಿದನು. ॥2॥
(ಶ್ಲೋಕ-3)
ಮೂಲಮ್
ಕರಾಲಂಷ್ಟ್ರೋಗ್ರದೃಷ್ಟ್ಯಾ ದುಷ್ಪ್ರೇಕ್ಷ್ಯಭ್ರುಕುಟೀಮುಖಃ ।
ಶೂಲಮುದ್ಯಮ್ಯ ಸದಸಿ ದಾನವಾನಿದಮಬ್ರವೀತ್ ॥
(ಶ್ಲೋಕ-4)
ಮೂಲಮ್
ಭೋ ಭೋ ದಾನವದೈತೇಯಾ ದ್ವಿಮೂರ್ಧಂಸ್ಯಕ್ಷ ಶಂಬರ ।
ಶತಬಾಹೋ ಹಯಗ್ರೀವ ನಮುಚೇ ಪಾಕ ಇಲ್ವಲ ॥
(ಶ್ಲೋಕ-5)
ಮೂಲಮ್
ವಿಪ್ರಚಿತ್ತೇ ಮಮ ವಚಃ ಪುಲೋಮನ್ ಶಕುನಾದಯಃ ।
ಶೃಣುತಾನಂತರಂ ಸರ್ವೇ ಕ್ರಿಯತಾಮಾಶು ಮಾ ಚಿರಮ್ ॥
ಅನುವಾದ
ಆಗ ವಿಕರಾಳವಾದ ಕೋರೆದಾಡೆಗಳಿಂದ, ಬೆಂಕಿಯನ್ನು ಉಗುಳುತ್ತಿದ್ದ ಉಗ್ರವಾದ ದೃಷ್ಟಿಯಿಂದ ಹಾಗೂ ಗಂಟುಗಟ್ಟಿದ ಹುಬ್ಬುಗಳಿಂದ ಭೀಕರವಾಗಿ ಕಾಣುತ್ತಿದ್ದ ಅವನ ಮುಖವನ್ನು ನೋಡಲಾಗುತ್ತಿರಲಿಲ್ಲ. ತುಂಬಿದ ಸಭೆಯಲ್ಲಿ ತ್ರಿಶೂಲವನ್ನೆತ್ತಿ ಅವನು ದ್ವಿಮೂರ್ಧಾ, ತ್ಯ್ರಕ್ಷ, ಶಂಬರ, ಶತಬಾಹು, ಹಯಗ್ರೀವ, ನಮೂಚಿ, ಪಾಕ, ಇಲ್ವಲ, ವಿಪ್ರಚಿತ್ತಿ, ಪುಲೋಮಾ ಮತ್ತು ಶಕುನ ಮುಂತಾದವರನ್ನು ಸಂಬೋಧಿಸುತ್ತಾ ಎಲೈ ದೈತ್ಯ-ದಾನವರೇ! ನೀವೆಲ್ಲರೂ ಈ ನನ್ನ ಮಾತನ್ನು ಕೇಳಿರಿ. ಅನಂತರ ನಾನು ಹೇಳಿದಂತೆಯೇ ಮಾಡಿರಿ. ॥3-5॥
(ಶ್ಲೋಕ-6)
ಮೂಲಮ್
ಸಪತ್ನೈರ್ಘಾತಿತಃ ಕ್ಷುದ್ರೈರ್ಭ್ರಾತಾ ಮೇ ದಯಿತಃ ಸುಹೃತ್ ।
ಪಾರ್ಷ್ಣಿಗ್ರಾಹೇಣ ಹರಿಣಾ ಸಮೇನಾಪ್ಯುಪಧಾವನೈಃ ॥
ಅನುವಾದ
ಕ್ಷುದ್ರರಾದ ನನ್ನ ಶತ್ರುಗಳು ನನ್ನ ಪರಮ ಪ್ರಿಯನೂ, ಹಿತೈಷಿಯೂ ಆದ ತಮ್ಮನನ್ನು ವಿಷ್ಣುವಿನಿಂದ ಕೊಲ್ಲಿಸಿರು ವುದು ನಿಮಗೆಲ್ಲ ತಿಳಿದೇ ಇದೆ. ಆ ವಿಷ್ಣುವು ದೇವತೆಗಳಿಗೆ, ದೈತ್ಯರಿಗೆ ಸಮಾನನಾಗಿದ್ದರೂ ದೇವತೆಗಳು ಮಹಾಪ್ರಯತ್ನ ಮಾಡಿ ಆತನನ್ನು ಒಲಿಸಿಕೊಂಡು ತಮ್ಮ ಪಕ್ಷದವನನ್ನಾಗಿಸಿ ಕೊಂಡರು. ॥6॥
(ಶ್ಲೋಕ-7)
ಮೂಲಮ್
ತಸ್ಯ ತ್ಯಕ್ತಸ್ವಭಾವಸ್ಯ ಘೃಣೇರ್ಮಾಯಾವನೌಕಸಃ ।
ಭಜಂತಂ ಭಜಮಾನಸ್ಯ ಬಾಲಸ್ಯೇವಾಸ್ಥಿರಾತ್ಮನಃ ॥
ಅನುವಾದ
ಈ ವಿಷ್ಣುವು ಮೊದಲು ತುಂಬಾ ಶುದ್ಧನೂ, ಪಕ್ಷಪಾತರಹಿತನೂ ಆಗಿದ್ದನು. ಆದರೆ ಈಗ ಮಾಯೆಯಿಂದ ವರಾಹವೇ ಮುಂತಾದ ರೂಪಗಳನ್ನು ಧರಿಸ ತೊಡಗಿರುವನು ಮತ್ತು ತನ್ನ ಸ್ವಭಾವದಿಂದ ಚ್ಯುತ ನಾಗಿರುವನು. ಮಕ್ಕಳಂತೆ ಅವನ ಸೇವೆ ಮಾಡಿದವರ ಕಡೆಗೆ ಹೋಗುತ್ತಾನೆ. ಅವನ ಚಿತ್ತವು ಸ್ಥಿರವಾಗಿಲ್ಲ. ॥7॥
(ಶ್ಲೋಕ-8)
ಮೂಲಮ್
ಮಚ್ಛೂಲಭಿನ್ನಗ್ರೀವಸ್ಯ ಭೂರಿಣಾ ರುಧಿರೇಣ ವೈ ।
ರುಧಿರಪ್ರಿಯಂ ತರ್ಪಯಿಷ್ಯೇ ಭ್ರಾತರಂ ಮೇ ಗತವ್ಯಥಃ ॥
ಅನುವಾದ
ಈಗ ನಾನು ನನ್ನ ಈ ಶೂಲದಿಂದ ಅವನ ಕತ್ತನ್ನು ಕತ್ತರಿಸಿ ಹಾಕುವೆನು. ಅವನ ರಕ್ತದ ಧಾರೆಯಿಂದ ರುಧಿರಪ್ರೇಮಿ ಯಾದ ನನ್ನ ತಮ್ಮನಿಗೆ ತರ್ಪಣವನ್ನು ಕೊಡುವೆನು. ಆಗಲೇ ನನ್ನ ಹೃದಯದ ವ್ಯಥೆಯು ಶಾಂತವಾದೀತು. ॥8॥
(ಶ್ಲೋಕ-9)
ಮೂಲಮ್
ತಸ್ಮಿನ್ಕೂಟೇಹಿತೇ ನಷ್ಟೇ ಕೃತ್ತಮೂಲೇ ವನಸ್ಪತೌ ।
ವಿಟಪಾ ಇವ ಶುಷ್ಯಂತಿ ವಿಷ್ಣುಪ್ರಾಣಾ ದಿವೌಕಸಃ ॥
ಅನುವಾದ
ಆ ಮಾಯಾವಿ ಶತ್ರುವು ನಾಶವಾದಾಗ ಬೇರು ಕಡಿದಾಗ ಮರದ ಟೊಂಗೆಗಳು ಒಣಗಿ ಹೋಗುವಂತೆ ಎಲ್ಲ ದೇವತೆಗಳು ತಾವಾಗಿಯೇ ಒಣಗಿಹೋಗುವರು. ಏಕೆಂದರೆ, ಅವರ ಜೀವನವು ವಿಷ್ಣುವೇ ಆಗಿರುವನು. ॥9॥
(ಶ್ಲೋಕ-10)
ಮೂಲಮ್
ತಾವದ್ಯಾತ ಭುವಂ ಯೂಯಂ ವಿಪ್ರಕ್ಷತ್ರಸಮೇಧಿತಾಮ್ ।
ಸೂದಯಧ್ವಂ ತಪೋಯಜ್ಞಸ್ವಾಧ್ಯಾಯವ್ರತದಾನಿನಃ ॥
ಅನುವಾದ
ಅದಕ್ಕಾಗಿ ನೀವೆಲ್ಲ ಈಗಲೇ ಭೂಮಿಗೆ ಹೋಗಿರಿ. ಅಲ್ಲಿ ಬ್ರಾಹ್ಮಣರ ಮತ್ತು ಕ್ಷತ್ರಿಯರ ಸಂಖ್ಯೆಯು ತುಂಬಾ ಬೆಳೆದಿದೆ. ಅಲ್ಲಿ ತಪಸ್ಸು, ಯಜ್ಞ, ಸ್ವಾಧ್ಯಾಯ, ವ್ರತ, ದಾನಾದಿ ಶುಭಕರ್ಮಗಳನ್ನು ಮಾಡುತ್ತಿರುವ ಜನರೆಲ್ಲರನ್ನು ಕೊಂದುಹಾಕಿಬಿಡಿರಿ. ॥10॥
(ಶ್ಲೋಕ-11)
ಮೂಲಮ್
ವಿಷ್ಣುರ್ದ್ವಿಜಕ್ರಿಯಾಮೂಲೋ ಯಜ್ಞೋ ಧರ್ಮಮಯಃ ಪುಮಾನ್ ।
ದೇವರ್ಷಿಪಿತೃಭೂತಾನಾಂ ಧರ್ಮಸ್ಯ ಚ ಪರಾಯಣಮ್ ॥
ಅನುವಾದ
ದ್ವಿಜರ ಧರ್ಮ-ಕರ್ಮಗಳೇ ವಿಷ್ಣುವಿನ ಮೂಲವಾಗಿದೆ. ಏಕೆಂದರೆ, ಯಜ್ಞ ಮತ್ತು ಧರ್ಮವೇ ಅವನ ಸ್ವರೂಪವಾಗಿದೆ. ದೇವತೆಗಳು, ಋಷಿ ಗಳು, ಪಿತೃಗಳು, ಸಮಸ್ತ ಪ್ರಾಣಿಗಳು ಮತ್ತು ಧರ್ಮ ಇವುಗಳಿಗೆಲ್ಲ ಆತನೇ ಪರಮಾಶ್ರಯನಾಗಿದ್ದಾನೆ. ॥11॥
(ಶ್ಲೋಕ-12)
ಮೂಲಮ್
ಯತ್ರ ಯತ್ರ ದ್ವಿಜಾ ಗಾವೋ ವೇದಾ ವರ್ಣಾಶ್ರಮಾಃ ಕ್ರಿಯಾಃ ।
ತಂ ತಂ ಜನಪದಂ ಯಾತ ಸಂದೀಪಯತ ವೃಶ್ಚತ ॥
ಅನುವಾದ
ಬ್ರಾಹ್ಮಣರು, ಗೋವುಗಳು, ವೇದಗಳು, ವರ್ಣಾಶ್ರಮ ಮತ್ತು ಧರ್ಮ-ಕರ್ಮಗಳು ಎಲ್ಲೆಲ್ಲಿರುವವೋ, ಅಲ್ಲಿಗೆ ಹೋಗಿ ಅವೆಲ್ಲವನ್ನು ಹಾಳುಗೆಡವಿರಿ, ಸುಟ್ಟು ಹಾಕಿರಿ. ॥12॥
(ಶ್ಲೋಕ-13)
ಮೂಲಮ್
ಇತಿ ತೇ ಭರ್ತೃನಿರ್ದೇಶಮಾದಾಯ ಶಿರಸಾದೃತಾಃ ।
ತಥಾ ಪ್ರಜಾನಾಂ ಕದನಂ ವಿದಧುಃ ಕದನಪ್ರಿಯಾಃ ॥
ಅನುವಾದ
ದೈತ್ಯರಾದರೋ ಸ್ವಭಾವದಿಂದಲೇ ಬೇರೆ ಜನರಿಗೆ ಕಷ್ಟಕೊಟ್ಟು ಅದರಿಂದ ಸುಖಪಡುವರು. ದೈತ್ಯ ರಾಜ ಹಿರಣ್ಯಕಶಿಪುವಿನ ಆಜ್ಞೆಯನ್ನು ಅವರು ಬಹಳ ಆದರದಿಂದ ತಲೆತಗ್ಗಿಸಿಕೊಂಡು ಸ್ವೀಕರಿಸಿ, ಅದರಂತೆ ಜನತೆಯನ್ನು ನಾಶಪಡಿಸ ತೊಡಗಿದರು. ॥13॥
(ಶ್ಲೋಕ-14)
ಮೂಲಮ್
ಪುರಗ್ರಾಮವ್ರಜೋದ್ಯಾನಕ್ಷೇತ್ರಾರಾಮಾಶ್ರಮಾಕರಾನ್ ।
ಖೇಟಖರ್ವಟಘೋಷಾಂಶ್ಚ ದದಹುಃ ಪತ್ತನಾನಿ ಚ ॥
ಅನುವಾದ
ಅವರು ನಗರಗಳನ್ನು, ಹಳ್ಳಿಗಳನ್ನು ಹಸುಗಳ ಹಟ್ಟಿಗಳನ್ನು, ತೋಟಗಳನ್ನು, ಹೊಲ-ಗದ್ದೆಗಳನ್ನು, ವಿಹಾರ ಸ್ಥಳಗಳನ್ನು, ಋಷಿಗಳ ಆಶ್ರಮಗಳನ್ನು, ರತ್ನಾದಿಗಳ ಗಣಿಗಳನ್ನು, ರೈತರ ವಾಸಸ್ಥಾನಗಳನ್ನು, ತಪ್ಪಲುಗಳಲ್ಲಿದ್ದ ಹಳ್ಳಿಗಳನ್ನು ಶ್ರೀಮಂತರ ಬಡಾವಣೆಗಳನ್ನು, ವ್ಯಾಪಾರಿಗಳ ಕೇಂದ್ರಗಳನ್ನು, ದೊಡ್ಡ-ದೊಡ್ಡ ಊರುಗಳನ್ನು ಸುಟ್ಟುಹಾಕಿದರು. ॥14॥
(ಶ್ಲೋಕ-15)
ಮೂಲಮ್
ಕೇಚಿತ್ಖನಿತ್ರೈರ್ಬಿಭಿದುಃ ಸೇತುಪ್ರಾಕಾರಗೋಪುರಾನ್ ।
ಆಜೀವ್ಯಾಂಶ್ಚಿಚ್ಛಿದುರ್ವೃಕ್ಷಾನ್ಕೇಚಿತ್ಪರಶುಪಾಣಯಃ ।
ಪ್ರಾದಹಞ್ಶರಣಾನ್ಯನ್ಯೇಪ್ರಜಾನಾಂ ಜ್ವಲಿತೋಲ್ಮುಕೈಃ ॥
ಅನುವಾದ
ಕೆಲವು ದೈತ್ಯರು ಅಗೆಯುವ ಶಸ್ತ್ರಗಳಿಂದ ದೊಡ್ಡ-ದೊಡ್ಡ ಸೇತುವೆಗಳನ್ನು, ಕೋಟೆಗೋಡೆಗಳನ್ನು, ನಗರದ್ವಾರಗಳನ್ನು ಒಡೆದು ಹಾಕಿದರು. ಮತ್ತೆ ಕೆಲವರು ಕೊಡಲಿಗಳಿಂದ ಹೂವು-ಹಣ್ಣು ಬಿಟ್ಟಿದ್ದ, ಸೊಂಪಾಗಿ ಬೆಳೆದ ಮರಗಳನ್ನು ಕಡಿದು ಹಾಕಿದರು. ಕೆಲವರು ಉರಿಯುವ ಕೊಳ್ಳಿಗಳಿಂದ ಜನರ ಮನೆಗಳಿಗೆ ಬೆಂಕಿಯಿಟ್ಟರು. ॥15॥
(ಶ್ಲೋಕ-16)
ಮೂಲಮ್
ಏವಂ ವಿಪ್ರಕೃತೇ ಲೋಕೇ ದೈತ್ಯೇಂದ್ರಾನುಚರೈರ್ಮುಹುಃ ।
ದಿವಂ ದೇವಾಃ ಪರಿತ್ಯಜ್ಯ ಭುವಿ ಚೇರುರಲಕ್ಷಿತಾಃ ॥
ಅನುವಾದ
ಹೀಗೆ ದೈತ್ಯರು ನಿರಪರಾಧಿಗಳಾದ ಜನರಿಗೆ ತುಂಬಾ ಪೀಡೆಯನ್ನು ಕೊಡತೊಡಗಿದರು. ಆಗ ದೇವತೆಗಳು ಸ್ವರ್ಗವನ್ನು ಬಿಟ್ಟು ಮಾರುವೇಷ ಧರಿಸಿ ಅಡಗಿಸಿಕೊಂಡು ಪೃಥಿವಿಯಲ್ಲಿ ಸಂಚರಿಸುತ್ತಿದ್ದರು. ॥16॥
(ಶ್ಲೋಕ-17)
ಮೂಲಮ್
ಹಿರಣ್ಯಕಶಿಪುರ್ಭ್ರಾತುಃ ಸಂಪರೇತಸ್ಯ ದುಃಖಿತಃ ।
ಕೃತ್ವಾ ಕಟೋದಕಾದೀನಿ ಭ್ರಾತೃಪುತ್ರಾನಸಾಂತ್ವಯತ್ ॥
(ಶ್ಲೋಕ-18)
ಮೂಲಮ್
ಶಕುನಿಂ ಶಂಬರಂ ಧೃಷ್ಟಂ ಭೂತಸಂತಾಪನಂ ವೃಕಮ್ ।
ಕಾಲನಾಭಂ ಮಹಾನಾಭಂ ಹರಿಶ್ಮಶ್ರುಮಥೋತ್ಕಚಮ್ ॥
ಅನುವಾದ
ಯುಧಿಷ್ಠಿರನೇ! ತಮ್ಮನ ಮರಣದಿಂದ ಹಿರಣ್ಯ ಕಶಿಪುವಿಗೆ ಭಾರೀ ದುಃಖವಾಗಿತ್ತು. ಹಿರಣ್ಯಾಕ್ಷನ ಅಂತ್ಯೇಷ್ಟಿ ಕ್ರಿಯೆಗಳಾದ ಬಳಿಕ, ಅವನ ಮಕ್ಕಳಾದ ಶಕುನಿ, ಶಂಬರ, ದೃಷ್ಟ, ಭೂತಸಂತಾಪನ, ವೃಕ, ಕಾಲನಾಭ, ಮಹಾನಾಭ, ಹರಿಶ್ಮಶ್ರು ಮತ್ತು ಉತ್ಕಚ ಎಂಬುವರಿಗೆ ಸಾಂತ್ವನ ಹೇಳಿದನು. ॥17-18॥
(ಶ್ಲೋಕ-19)
ಮೂಲಮ್
ತನ್ಮಾತರಂ ರುಷಾಭಾನುಂ ದಿತಿಂ ಚ ಜನನೀಂ ಗಿರಾ ।
ಶ್ಲಕ್ಷ್ಣಯಾ ದೇಶಕಾಲಜ್ಞ ಇದಮಾಹ ಜನೇಶ್ವರ ॥
ಅನುವಾದ
ಅವರ ತಾಯಿಯಾದ ರುಷಾಭಾನುವನ್ನೂ ಮತ್ತು ತನ್ನ ತಾಯಿಯಾದ ದಿತಿದೇವಿಯನ್ನು ದೇಶಕಾಲಕ್ಕನುಸಾರವಾಗಿ ಮಧುರವಾಣಿಯಿಂದ ಸಂತೈಸುತ್ತಾ ಹೀಗೆಂದನು ॥19॥
(ಶ್ಲೋಕ-20)
ಮೂಲಮ್ (ವಾಚನಮ್)
ಹಿರಣ್ಯಕಶಿಪುರುವಾಚ
ಮೂಲಮ್
ಅಂಬಾಂಬ ಹೇ ವಧೂಃ ಪುತ್ರಾ ವೀರಂ ಮಾರ್ಹಥ ಶೋಚಿತುಮ್ ।
ರಿಪೋರಭಿಮುಖೇ ಶ್ಲಾಘ್ಯಃ ಶೂರಾಣಾಂ ವಧ ಈಪ್ಸಿತಃ ॥
ಅನುವಾದ
ಹಿರಣ್ಯಕಶಿಪು ಹೇಳಿದನು — ನನ್ನ ಪ್ರೀತಿಯ ತಾಯೇ! ಸೊಸೆಯೇ! ಪುತ್ರರೇ! ನೀವೆಲ್ಲರೂ ಮಹಾವೀರನಾದ ಹಿರಣ್ಯಾಕ್ಷನ ಕುರಿತು ಸ್ವಲ್ಪವೂ ಶೋಕಪಡಬಾರದು. ಏಕೆಂದರೆ, ರಣರಂಗದಲ್ಲಿ ಶತ್ರುವಿನೊಡನೆ ಹೋರಾಡುತ್ತಾ ಪ್ರಾಣತ್ಯಾಗ ಮಾಡುವುದೇ ವೀರಪುರುಷನು ಬಯಸುವ ಶ್ಲಾಘ್ಯವಾದ ಮರಣವು. ॥20॥
(ಶ್ಲೋಕ-21)
ಮೂಲಮ್
ಭೂತಾನಾಮಿಹ ಸಂವಾಸಃ ಪ್ರಪಾಯಾಮಿವ ಸುವ್ರತೇ ।
ದೈವೇನೈಕತ್ರ ನೀತಾನಾಮುನ್ನೀತಾನಾಂ ಸ್ವಕರ್ಮಭಿಃ ॥
ಅನುವಾದ
ದೇವಿಯೇ! ಅರವಟ್ಟಿಗೆಯಲ್ಲಿ ಅನೇಕ ಜನರು ಒಂದಾಗುತ್ತಾರೆ. ಆದರೆ ಕೊಂಚಕಾಲ ಮಾತ್ರ ಜೊತೆಯಲ್ಲಿದ್ದು ಅಗಲಿಹೋಗುತ್ತಾರೆ. ಹಾಗೆಯೇ ತಮ್ಮ ಕರ್ಮಗಳನುಸಾರ ದೈವಸಂಕಲ್ಪದಿಂದ ಈ ಜಗತ್ತಿನಲ್ಲಿ ಒಂದಾಗುತ್ತಾರೆ ಅಗಲುತ್ತಾ ಇರುತ್ತಾರೆ. ॥21॥
(ಶ್ಲೋಕ-22)
ಮೂಲಮ್
ನಿತ್ಯ ಆತ್ಮಾವ್ಯಯಃ ಶುದ್ಧಃ ಸರ್ವಗಃ ಸರ್ವವಿತ್ಪರಃ ।
ಧತ್ತೇಸಾವಾತ್ಮನೋ ಲಿಂಗಂ ಮಾಯಯಾ ವಿಸೃಜನ್ಗುಣಾನ್ ॥
ಅನುವಾದ
ವಾಸ್ತವವಾಗಿ ಆತ್ಮನು ನಿತ್ಯನೂ, ಅವಿನಾಶಿಯೂ, ಶುದ್ಧನೂ, ಸರ್ವಗತನೂ, ಸರ್ವಜ್ಞನೂ, ದೇಹ-ಇಂದ್ರಿಯಗಳಿಂದ ಬೇರೆಯೇ ಆಗಿರುವನು. ಅವನು ತನ್ನ ಅವಿದ್ಯೆಯಿಂದಲೇ ದೇಹಾದಿಗಳ ಸೃಷ್ಟಿಗೈದು ಭೋಗಗಳಿಗೆ ಸಾಧನವಾದ ಸೂಕ್ಷ್ಮಶರೀರವನ್ನು ಸ್ವೀಕರಿಸುತ್ತಾನೆ. ॥22॥
(ಶ್ಲೋಕ-23)
ಮೂಲಮ್
ಯಥಾಂಭಸಾ ಪ್ರಚಲತಾ ತರವೋಪಿ ಚಲಾ ಇವ ।
ಚಕ್ಷುಷಾ ಭ್ರಾಮ್ಯಮಾಣೇನ ದೃಶ್ಯತೇ ಚಲತೀವ ಭೂಃ ॥
(ಶ್ಲೋಕ-24)
ಮೂಲಮ್
ಏವಂ ಗುಣೈರ್ಭ್ರಾಮ್ಯಮಾಣೇ ಮನಸ್ಯವಿಕಲಃ ಪುಮಾನ್ ।
ಯಾತಿ ತತ್ಸಾಮ್ಯತಾಂ ಭದ್ರೇ ಹ್ಯಲಿಂಗೋ ಲಿಂಗವಾನಿವ ॥
ಅನುವಾದ
ಅಲ್ಲಾಡುತ್ತಿರುವ ನೀರಿನಲ್ಲಿ ಪ್ರತಿಬಿಂಬಿಸುವ ಮರಗಳೂ ಅಲ್ಲಾಡುತ್ತಿರುವಂತೆ ಕಾಣುತ್ತವೆ. ತಿರುಗುತ್ತಿರುವ ಕಣ್ಣುಗಳೊಂದಿಗೆ ಇಡೀ ಪೃಥ್ವಿಯು ತಿರುಗಿದಂತೆ ಕಂಡುಬರುತ್ತದೆ. ಕಲ್ಯಾಣಿಯೇ! ಹಾಗೆಯೇ ವಿಷಯಗಳ ಕಾರಣದಿಂದ ಮನಸ್ಸು ಅಲೆಯತೊಡಗುತ್ತದೆ ಮತ್ತು ನಿಜವಾಗಿ ನಿರ್ವಿಕಾರನಾಗಿದ್ದರೂ ಮನಸ್ಸಿನಂತೆ ಆತ್ಮನೂ ಅಲೆಯುತ್ತಿರುವಂತೆ ತಿಳಿಯುತ್ತದೆ. ಅವನಿಗೆ ಸ್ಥೂಲ ಹಾಗೂ ಸೂಕ್ಷ್ಮ ಶರೀರಗಳೊಂದಿಗೆ ಯಾವುದೇ ಸಂಬಂಧ ವಿಲ್ಲದಿದ್ದರೂ ಅವನು ಸಂಬಂಧಪಟ್ಟವನಂತೆ ತಿಳಿದು ಬರುತ್ತಾನೆ. ॥23-24॥
(ಶ್ಲೋಕ-25)
ಮೂಲಮ್
ಏಷ ಆತ್ಮವಿಪರ್ಯಾಸೋ ಹ್ಯಲಿಂಗೇ ಲಿಂಗಭಾವನಾ ।
ಏಷ ಪ್ರಿಯಾಪ್ರಿಯೈರ್ಯೋಗೋ ವಿಯೋಗಃ ಕರ್ಮಸಂಸೃತಿಃ ॥
ಅನುವಾದ
ಎಲ್ಲ ವಿಧದಿಂದ ಶರೀರರಹಿತ ಆತ್ಮನನ್ನು ಶರೀರವೆಂದು ತಿಳಿಯುವುದೇ ಅಜ್ಞಾನವಾಗಿದೆ. ಇದರಿಂದಲೇ ಪ್ರಿಯ ಅಥವಾ ಅಪ್ರಿಯ ವಸ್ತುಗಳು ಒಂದಾಗುವುದು ಮತ್ತು ಅಗಲುವುದು ಉಂಟಾಗುತ್ತದೆ. ಇದರಿಂದಲೇ ಕರ್ಮಗಳೊಂದಿಗೆ ಸಂಬಂಧ ಉಂಟಾದ ಕಾರಣ ಸಂಸಾರದಲ್ಲಿ ಅಲೆದಾಡಬೇಕಾಗುತ್ತದೆ. ॥25॥
(ಶ್ಲೋಕ-26)
ಮೂಲಮ್
ಸಂಭವಶ್ಚ ವಿನಾಶಶ್ಚ ಶೋಕಶ್ಚ ವಿವಿಧಃ ಸ್ಮೃತಃ ।
ಅವಿವೇಕಶ್ಚ ಚಿಂತಾ ಚ ವಿವೇಕಾಸ್ಮೃತಿರೇವ ಚ ॥
ಅನುವಾದ
ಜನ್ಮ, ಮೃತ್ಯು, ಅನೇಕ ಪ್ರಕಾರದ ಶೋಕಗಳು, ಅವಿವೇಕ, ಚಿಂತೆ, ವಿವೇಕದ ವಿಸ್ಮೃತಿ ಇವೆಲ್ಲವುಗಳ ಕಾರಣ ಅಜ್ಞಾನವೇ ಆಗಿದೆ. ॥26॥
(ಶ್ಲೋಕ-27)
ಮೂಲಮ್
ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್ ।
ಯಮಸ್ಯ ಪ್ರೇತಬಂಧೂನಾಂ ಸಂವಾದಂ ತಂ ನಿಬೋಧತ ॥
ಅನುವಾದ
ಈ ವಿಷಯದಲ್ಲಿ ಮಹಾತ್ಮರು ಒಂದು ಪ್ರಾಚೀನವಾದ ಇತಿಹಾಸವನ್ನು ಹೇಳುತ್ತಿರುತ್ತಾರೆ. ಆ ಇತಿಹಾಸವು ಸತ್ತಿರುವ ಮನುಷ್ಯನ ಸಂಬಂಧಿಗಳೊಂದಿಗೆ ಯಮರಾಜನ ಮಾತುಕತೆಯಾಗಿದೆ. ನೀವೆಲ್ಲರೂ ಗಮನ ಕೊಟ್ಟು ಕೇಳಿರಿ. ॥27॥
(ಶ್ಲೋಕ-28)
ಮೂಲಮ್
ಉಶೀನರೇಷ್ವಭೂದ್ರಾಜಾ ಸುಯಜ್ಞ ಇತಿ ವಿಶ್ರುತಃ ।
ಸಪತ್ನೈರ್ನಿಹತೋ ಯುದ್ಧೇ ಜ್ಞಾತಯಸ್ತಮುಪಾಸತ ॥
ಅನುವಾದ
ಉಶೀನರ ದೇಶದಲ್ಲಿ ಒಬ್ಬ ಕೀರ್ತಿಶಾಲಿಯಾಗಿದ್ದ ರಾಜನಿದ್ದನು. ಅವನ ಹೆಸರು ಸುಯಜ್ಞ. ಕಾಳಗದಲ್ಲಿ ಅವನನ್ನು ಶತ್ರುಗಳು ಕೊಂದುಹಾಕಿದರು. ಆಗ ಅವನ ಬಂಧು-ಬಾಂಧವರು ಅವನನ್ನು ಸುತ್ತುವರೆದು ಕುಳಿತು ಗೋಳಾಡುತ್ತಿದ್ದರು. ॥28॥
(ಶ್ಲೋಕ-29)
ಮೂಲಮ್
ವಿಶೀರ್ಣರತ್ನಕವಚಂ ವಿಭ್ರಷ್ಟಾಭರಣಸ್ರಜಮ್ ।
ಶರನಿರ್ಭಿನ್ನಹೃದಯಂ ಶಯಾನಮಸೃಗಾವಿಲಮ್ ॥
(ಶ್ಲೋಕ-30)
ಮೂಲಮ್
ಪ್ರಕೀರ್ಣಕೇಶಂ ಧ್ವಸ್ತಾಕ್ಷಂ ರಭಸಾ ದಷ್ಟದಚ್ಛದಮ್ ।
ರಜಃಕುಂಠಮುಖಾಂಭೋಜಂ ಛಿನ್ನಾಯುಧಭುಜಂ ಮೃಧೇ ॥
ಅನುವಾದ
ರಾಜನ ರತ್ನಖಚಿತವಾದ ಕವಚವು ಹರಿದು ಚಿಂದಿಯಾಗಿತ್ತು. ಭೂಷಣಗಳೂ, ಮಾಲೆಗಳೂ ಚೆಲ್ಲಾಪಿಲ್ಲಿಯಾಗಿದ್ದವು. ಬಾಣಗಳಿಂದ ಅವನ ಎದೆಯು ಸೀಳಿಹೋಗಿತ್ತು. ರಕ್ತದಿಂದ ಶರೀರವು ತೊಯ್ದು ಹೋಗಿತ್ತು. ಕೂದಲು ಕೆದರಿತ್ತು. ಕಣ್ಣುಗಳು ಕುಸಿದುಹೋಗಿದ್ದವು. ಕೋಪದಿಂದ ಹಲ್ಲುಗಳು ತುಟಿಗಳನ್ನು ಕಚ್ಚಿಕೊಂಡಿದ್ದವು. ಕಮಲದಂತಿದ್ದ ಮುಖವು ಧೂಳಿನಿಂದ ಮುಚ್ಚಿಹೋಗಿತ್ತು. ಯುದ್ಧದಲ್ಲಿ ಅವನ ಶಸ್ತ್ರಗಳು, ಬಾಹುಗಳು ತುಂಡಾಗಿದ್ದವು. ॥29-30॥
(ಶ್ಲೋಕ-31)
ಮೂಲಮ್
ಉಶೀನರೇಂದ್ರಂ ವಿಧಿನಾ ತಥಾ ಕೃತಂ
ಪತಿಂ ಮಹಿಷ್ಯಃ ಪ್ರಸಮೀಕ್ಷ್ಯ ದುಃಖಿತಾಃ ।
ಹತಾಃ ಸ್ಮ ನಾಥೇತಿ ಕರೈರುರೋ ಭೃಶಂ
ಘ್ನಂತ್ಯೋ ಮುಹುಸ್ತತ್ಪದಯೋರುಪಾಪತನ್ ॥
ಅನುವಾದ
ವಿಧಿವಶದಿಂದ ತಮ್ಮ ಪತಿಗೆ ಒದಗಿದ ಈ ಅವಸ್ಥೆಯನ್ನು ಕಂಡು ಉಶೀನರ ನರೇಶನ ರಾಣಿಯರಿಗೆ ಭಾರೀ ದುಃಖವಾಯಿತು. ಅವರು ಹಾ ನಾಥಾ! ನಿರ್ಭಾಗ್ಯರಾದ ನಾವು ಸತ್ತೆವು. ಕೆಟ್ಟೆವು! ಎಂದು ಮತ್ತೆ-ಮತ್ತೆ ಗೋಳಾಡುತ್ತಾ, ಎದೆಯನ್ನು ಬಡಿದುಕೊಂಡು ತಮ್ಮ ಪತಿಯ ಪಾದಗಳ ಬಳಿ ಕುಸಿದುಬಿದ್ದರು. ॥31॥
(ಶ್ಲೋಕ-32)
ಮೂಲಮ್
ರುದತ್ಯ ಉಚ್ಚೈರ್ದಯಿತಾಂಘ್ರಿಪಂಕಜಂ
ಸಿಂಚಂತ್ಯ ಅಸ್ರೈಃ ಕುಚಕುಂಕುಮಾರುಣೈಃ ।
ವಿಸ್ರಸ್ತಕೇಶಾಭರಣಾಃ ಶುಚಂ ನೃಣಾಂ
ಸೃಜಂತ್ಯ ಅಕ್ರಂದನಯಾ ವಿಲೇಪಿರೇ ॥
ಅನುವಾದ
ಹಾಗೆ ಗಟ್ಟಿಯಾಗಿ ಅಳುತ್ತಿರುವಾಗ ಸ್ತನಗಳಿಗೆ ಲೇಪಿಸಿಕೊಂಡ ಕುಂಕುಮ-ಕೇಸರಿಯೊಂದಿಗೆ ಬೆರೆತ ಅವರ ಕಣ್ಣೀರಧಾರೆಗಳು ಕೆಂಪಾಗಿ ಪ್ರಿಯಕರನ ಪಾದಪದ್ಮಗಳನ್ನು ನೆನೆಸಿದವು. ಅವರ ತಲೆಗೂದಲು, ಆಭರಣಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಅವರ ಆ ಕರುಣಾಜನಕವಾದ ವಿಲಾಪವನ್ನು ಕೇಳಿದವರೆಲ್ಲ ದುಃಖಪರವಶರಾಗುತ್ತಿದ್ದರು. ॥32॥
(ಶ್ಲೋಕ-33)
ಮೂಲಮ್
ಅಹೋ ವಿಧಾತ್ರಾಕರುಣೇನ ನಃ ಪ್ರಭೋ
ಭವಾನ್ಪ್ರಣೀತೋ ದೃಗಗೋಚರಾಂ ದಶಾಮ್ ।
ಉಶೀನರಾಣಾಮಸಿ ವೃತ್ತಿದಃ ಪುರಾ
ಕೃತೋಧುನಾ ಯೇನ ಶುಚಾಂ ವಿವರ್ಧನಃ ॥
ಅನುವಾದ
ಅಯ್ಯೋ! ವಿಧಿಯು ಎಂತಹ ನಿಷ್ಕರುಣಿಯು! ಆತನೇ ಈಗ ನಿನ್ನನ್ನು ನಮ್ಮ ಕಣ್ಣುಗಳಿಂದ ಮರೆಮಾಚಿದ್ದಾನೆ. ಪ್ರಿಯನೇ! ಪ್ರಭೋ! ಹಿಂದೆ ನೀನು ಉಶೀನರ ದೇಶವಾಸಿಗಳಿಗೆಲ್ಲರಿಗೂ ಜೀವನ ದಾತನಾಗಿದ್ದೆ. ಆದರೆ ಈಗ ನಿನ್ನ ಜೀವನವನ್ನೇ ಕಳೆದುಕೊಂಡು ನಮ್ಮ ದುಃಖವನ್ನೇ ಹೆಚ್ಚಿಸುತ್ತಿರುವೆ. ॥33॥
(ಶ್ಲೋಕ-34)
ಮೂಲಮ್
ತ್ವಯಾ ಕೃತಜ್ಞೇನ ವಯಂ ಮಹೀಪತೇ
ಕಥಂ ವಿನಾ ಸ್ಯಾಮ ಸುಹೃತ್ತಮೇನ ತೇ ।
ತತ್ರಾನುಯಾನಂ ತವ ವೀರ ಪಾದಯೋಃ
ಶುಶ್ರೂಷತೀನಾಂ ದಿಶ ಯತ್ರ ಯಾಸ್ಯಸಿ ॥
ಅನುವಾದ
ಪತಿದೇವಾ! ನೀನು ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದೆ. ನಮ್ಮ ಅತ್ಯಲ್ಪವಾದ ಸೇವೆಯನ್ನೇ ಬಹುದೊಡ್ಡದೆಂದು ತಿಳಿಯುತ್ತಿದ್ದೆ. ಅಯ್ಯೋ! ಈಗ ನೀನಿಲ್ಲದೆ ನಾವು ಬದುಕುವುದೆಂತು? ನಾವು ನಿನ್ನ ಪಾದಗಳ ಸೇವಕಿಯರಲ್ಲವೇ! ವೀರವರನೇ! ನೀನು ಹೋದಲ್ಲಿಗೆ ಬರಲು ನಮಗೂ ಅಪ್ಪಣೆಯನ್ನು ಕೊಡು. ॥34॥
(ಶ್ಲೋಕ-35)
ಮೂಲಮ್
ಏವಂ ವಿಲಪತೀನಾಂ ವೈ ಪರಿಗೃಹ್ಯ ಮೃತಂ ಪತಿಮ್ ।
ಅನಿಚ್ಛತೀನಾಂ ನಿರ್ಹಾರಮರ್ಕೋಸ್ತಂ ಸಂನ್ಯವರ್ತತ ॥
ಅನುವಾದ
ಅವರೆಲ್ಲರೂ ತಮ್ಮ ಪತಿಯ ಶವವನ್ನು ಅಪ್ಪಿಕೊಂಡು ಹೀಗೆ ವಿಲಾಪಿಸುತ್ತಿದ್ದರು. ಆ ಶವವನ್ನು ದಹನ ಸಂಸ್ಕಾರಕ್ಕಾಗಿ ಅಲ್ಲಿಂದ ಎತ್ತಿಕೊಂಡು ಹೋಗಲು ಅವರು ಇಷ್ಟಪಡುತ್ತಿರಲಿಲ್ಲ. ಅಷ್ಟರಲ್ಲಿ ಸೂರ್ಯಾಸ್ತವಾಯಿತು. ॥35॥
(ಶ್ಲೋಕ-36)
ಮೂಲಮ್
ತತ್ರ ಹ ಪ್ರೇತಬಂಧೂನಾಮಾಶ್ರುತ್ಯ ಪರಿದೇವಿತಮ್ ।
ಆಹ ತಾನ್ಬಾಲಕೋ ಭೂತ್ವಾ ಯಮಃ ಸ್ವಯಮುಪಾಗತಃ ॥
ಅನುವಾದ
ಆಗ ಉಶೀನರ ರಾಜನ ಸಂಬಂಧಿಗಳು ಮಾಡಿದ ವಿಲಾಪವನ್ನು ಕೇಳಿದ ಯಮರಾಜನು ಸ್ವಯಂ ಬಾಲಕನ ವೇಷದಿಂದ ಅಲ್ಲಿಗೆ ಬಂದು ಆ ಜನರನ್ನು ಕುರಿತು ಹೀಗೆಂದನು ॥36॥
(ಶ್ಲೋಕ-37)
ಮೂಲಮ್ (ವಾಚನಮ್)
ಯಮ ಉವಾಚ
ಮೂಲಮ್
ಅಹೋ ಅಮೀಷಾಂ ವಯಸಾಧಿಕಾನಾಂ
ವಿಪಶ್ಯತಾಂ ಲೋಕವಿಧಿಂ ವಿಮೋಹಃ ।
ಯತ್ರಾಗತಸ್ತತ್ರ ಗತಂ ಮನುಷ್ಯಂ
ಸ್ವಯಂ ಸಧರ್ಮಾ ಅಪಿ ಶೋಚಂತ್ಯಪಾರ್ಥಮ್ ॥
ಅನುವಾದ
ಯಮರಾಜನು ಹೇಳಿದನು — ಆಹಾ! ಇದೇನಿದು! ವಯಸ್ಸಿನಲ್ಲಿ ಇಷ್ಟು ದೊಡ್ಡವರಾಗಿ ಲೋಕದಲ್ಲಿ ಜನರ ಬದುಕು-ಸಾವುಗಳನ್ನು ದಿನನಿತ್ಯವೂ ನೋಡುತ್ತಿದ್ದರೂ ಇವರು ಹೀಗೆ ಮೋಹಕ್ಕೆ ಒಳಗಾಗಿದ್ದಾರಲ್ಲ! ಅರೇ! ಈ ಮನುಷ್ಯನು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ಹೊರಟು ಹೋದನು. ಈ ಜನರೂ ಕೂಡ ಒಂದಲ್ಲ ಒಂದು ದಿನ ಅಲ್ಲಿಗೇ ಹೋಗಲೇಬೇಕು. ಆದರೂ ಹೀಗೇಕೆ ವ್ಯರ್ಥವಾಗಿ ಇಷ್ಟು ಶೋಕಪಡುತ್ತಿದ್ದಾರೆ? ॥37॥
(ಶ್ಲೋಕ-38)
ಮೂಲಮ್
ಅಹೋ ವಯಂ ಧನ್ಯತಮಾ ಯದತ್ರ
ತ್ಯಕ್ತಾಃ ಪಿತೃಭ್ಯಾಂ ನ ವಿಚಿಂತಯಾಮಃ ।
ಅಭಕ್ಷ್ಯಮಾಣಾ ಅಬಲಾ ವೃಕಾದಿಭಿಃ
ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ ॥
ಅನುವಾದ
ನಿಮಗಿಂತಲೂ ನಾನೇ ಎಷ್ಟೋ ಪಾಲು ಶ್ರೇಷ್ಠನು. ಏಕೆಂದರೆ, ತಂದೆ-ತಾಯಿಗಳು ತೊರೆದುಬಿಟ್ಟಿದ್ದರೂ, ದೇಹದಿಂದ ದುರ್ಬಲನಾಗಿದ್ದರೂ ನಾನು ಎಳ್ಳಷ್ಟೂ ಚಿಂತೆಪಡುತ್ತಿಲ್ಲ. ತೋಳವೇ ಮುಂತಾದ ಕ್ರೂರಮೃಗಗಳು ನನ್ನನ್ನು ಏನೂ ಮಾಡಲಾರವು. ತಾಯಿಯ ಗರ್ಭದಲ್ಲಿದ್ದಾಗ ಯಾರು ರಕ್ಷಿಸಿದ್ದನೋ ಅವನೇ ಈ ಜೀವನದಲ್ಲಿಯೂ ನನ್ನನ್ನು ರಕ್ಷಿಸುತ್ತಾ ಇರುತ್ತಾನೆ. ॥38॥
(ಶ್ಲೋಕ-39)
ಮೂಲಮ್
ಯ ಇಚ್ಛಯೇಶಃ ಸೃಜತೀದಮವ್ಯಯೋ
ಯ ಏವ ರಕ್ಷತ್ಯವಲುಂಪತೇ ಚ ಯಃ ।
ತಸ್ಯಾಬಲಾಃ ಕ್ರೀಡನಮಾಹುರೀಶಿತು-
ಶ್ಚರಾಚರಂ ನಿಗ್ರಹಸಂಗ್ರಹೇ ಪ್ರಭುಃ ॥
ಅನುವಾದ
ದೇವಿಯರೇ! ತನ್ನ ಇಚ್ಛಾಮಾತ್ರದಿಂದ ಈ ಜಗತ್ತನ್ನು ರಚಿಸಿ, ರಕ್ಷಿಸಿ, ಲಯಗೊಳಿಸುವ ಪರಮೇಶ್ವರನಿಗೆ ಈ ಜಗತ್ತು ಒಂದು ಆಟದ ಬೊಂಬೆಯಂತೆ ಇದೆ. ಈ ಚರಾಚರ ಜಗತ್ತನ್ನು ನಿಗ್ರಹಿಸಲಿಕ್ಕೂ, ಅನುಗ್ರಹಿಸಲಿಕ್ಕೂ ಅವನೊಬ್ಬನೇ ಸಮರ್ಥನು. ॥39॥
(ಶ್ಲೋಕ-40)
ಮೂಲಮ್
ಪಥಿ ಚ್ಯುತಂ ತಿಷ್ಠತಿ ದಿಷ್ಟರಕ್ಷಿತಂ
ಗೃಹೇ ಸ್ಥಿತಂ ತದ್ವಿಹತಂ ವಿನಶ್ಯತಿ ।
ಜೀವತ್ಯನಾಥೋಪಿ ತದೀಕ್ಷಿತೋ ವನೇ
ಗೃಹೇಪಿ ಗುಪ್ತೋಸ್ಯ ಹತೋ ನ ಜೀವತಿ ॥
ಅನುವಾದ
ಅದೃಷ್ಟವು ಅನುಕೂಲವಾಗಿದ್ದರೆ ರಸ್ತೆಯಲ್ಲಿ ಕಳೆದುಹೋದ ವಸ್ತುವೂ ಹಾಗೆಯೇ ಬಿದ್ದಿರುತ್ತದೆ. ಆದರೆ ಅದೇ ಅದೃಷ್ಟವು ಪ್ರತಿಕೂಲವಾದರೆ ಮನೆಯೊಳಗೆ ಪೆಟ್ಟಿಗೆಯೊಳಗೆ ಜೋಪಾನವಾಗಿ ಇಟ್ಟಿರುವ ವಸ್ತುವೂ ಕಳೆದು ಹೋಗುವುದು. ಜೀವಿಯು ಯಾರ ಆಸರೆಯಿಲ್ಲದೆಯೇ ದೈವದ ದಯಾದೃಷ್ಟಿಯಿಂದ ಕಾಡಿನಲ್ಲಿಯೂ ಅನೇಕ ದಿನಗಳವರೆಗೆ ಬದುಕಿರ ಬಲ್ಲನು. ಆದರೆ ದೈವವು ವಿಪರೀತವಾದಾಗ ಮನೆಯಲ್ಲಿ ಸುರಕ್ಷಿತನಾಗಿದ್ದರೂ ಸತ್ತು ಹೋಗುತ್ತಾನೆ. ॥40॥
(ಶ್ಲೋಕ-41)
ಮೂಲಮ್
ಭೂತಾನಿ ತೈಸ್ತೈರ್ನಿಜಯೋನಿಕರ್ಮಭಿ-
ರ್ಭವಂತಿ ಕಾಲೇ ನ ಭವಂತಿ ಸರ್ವಶಃ ।
ನ ತತ್ರ ಹಾತ್ಮಾ ಪ್ರಕೃತಾವಪಿ ಸ್ಥಿತ-
ಸ್ತಸ್ಯಾ ಗುಣೈರನ್ಯತಮೋ ನಿಬಧ್ಯತೇ ॥
ಅನುವಾದ
ರಾಣಿಯರೇ! ಎಲ್ಲ ಪ್ರಾಣಿಗಳ ಮೃತ್ಯುವು ತಮ್ಮ ಪೂರ್ವ ಜನ್ಮಗಳ ಕರ್ಮವಾಸನೆಗನುಸಾರವಾಗಿ ಸಮಯಕ್ಕೆ ಸರಿಯಾಗಿ ಆಗುತ್ತದೆ ಮತ್ತು ಅದಕ್ಕನುಸಾರವೇ ಅವನ ಜನ್ಮವೂ ಉಂಟಾಗುತ್ತದೆ. ಆದರೆ ಆತ್ಮನು ಶರೀರದಿಂದ ಅತ್ಯಂತ ಭಿನ್ನನಾಗಿದ್ದಾನೆ. ಅದಕ್ಕಾಗಿ ಅವನು ಶರೀರದ ಲ್ಲಿದ್ದರೂ ಅವರ ಜನ್ಮ-ಮೃತ್ಯು ಮುಂತಾದ ಧರ್ಮಗಳು ಆತನನ್ನು ಮುಟ್ಟಲಾರವು. ॥41॥
(ಶ್ಲೋಕ-42)
ಮೂಲಮ್
ಇದಂ ಶರೀರಂ ಪುರುಷಸ್ಯ ಮೋಹಜಂ
ಯಥಾ ಪೃಥಗ್ಭೌತಿಕಮೀಯತೇ ಗೃಹಮ್ ।
ಯಥೌದಕೈಃ ಪಾರ್ಥಿವತೈಜಸೈರ್ಜನಃ
ಕಾಲೇನ ಜಾತೋ ವಿಕೃತೋ ವಿನಶ್ಯತಿ ॥
ಅನುವಾದ
ಮನುಷ್ಯನು ತನ್ನ ಮನೆಯನ್ನು ತನ್ನಿಂದ ಬೇರೆ ವಸ್ತುವೆಂದೂ, ಒಂದು ಮಣ್ಣಿನ ಪದಾರ್ಥವೆಂದೂ ತಿಳಿಯುವಂತೆಯೇ ಈ ಶರೀರವು ಬೇರೆ ಯಾಗಿದ್ದು, ಮಣ್ಣಿನದೇ ಆಗಿದೆ. ಮೋಹವಶದಿಂದ ಅವನು ಇದನ್ನು ತನ್ನದೆಂದು ತಿಳಿದಿರುತ್ತಾನೆ. ಗುಳ್ಳೆಗಳೇ ಮುಂತಾದವುಗಳು ನೀರಿನ ವಿಕಾರವು. ಮಡಕೆಯೇ ಮುಂತಾದವು ಮಣ್ಣಿನ ವಿಕಾರವು. ಒಡವೆ ಮುಂತಾದವುಗಳು ಚಿನ್ನದ ವಿಕಾರವು ಇವು ಆಗಾಗ ಉಂಟಾಗುತ್ತವೆ, ರೂಪಾಂತರ ವಾಗುತ್ತವೆ ಹಾಗೂ ನಾಶವಾಗುತ್ತವೆ. ಹಾಗೆಯೇ ಈ ಮೂರರ ವಿಕಾರದಿಂದಲೇ ಉಂಟಾದ ಈ ಶರೀರವೂ ಕೂಡ ಆಗಾಗ ಉಂಟಾಗುತ್ತಾ-ಕೆಡುತ್ತಾ ಇರುತ್ತದೆ. ॥42॥
(ಶ್ಲೋಕ-43)
ಮೂಲಮ್
ಯಥಾನಲೋ ದಾರುಷು ಭಿನ್ನ ಈಯತೇ
ಯಥಾನಿಲೋ ದೇಹಗತಃ ಪೃಥಕ್ ಸ್ಥಿತಃ ।
ಯಥಾ ನಭಃ ಸರ್ವಗತಂ ನ ಸಜ್ಜತೇ
ತಥಾ ಪುಮಾನ್ಸರ್ವಗುಣಾಶ್ರಯಃ ಪರಃ ॥
ಅನುವಾದ
ಕಟ್ಟಿಗೆಯಲ್ಲಿ ಅಡಗಿರುವ ವ್ಯಾಪಕ ಅಗ್ನಿಯು ಸ್ಪಷ್ಟವಾಗಿ ಅದರಿಂದ ಬೇರೆಯೇ ಆಗಿದೆ. ಶರೀರದಲ್ಲಿದ್ದರೂ ವಾಯುವಿಗೆ ಅದರೊಂದಿಗೆ ಯಾವ ಸಂಬಂಧವೂ ಇಲ್ಲ. ಆಕಾಶವು ಎಲ್ಲಕಡೆ ಒಂದೇ ರೀತಿಯಿಂದ ಇದ್ದರೂ ಯಾರ ಗುಣ-ದೋಷಗಳಿಂದಲೂ ಲಿಪ್ತವಾಗುವುದಿಲ್ಲ. ಹಾಗೆಯೇ ಸಮಸ್ತ ದೇಹೇಂದ್ರಿಯಗಳಲ್ಲಿ ಇರುತ್ತಿರುವ ಮತ್ತು ಅವುಗಳ ಆಶ್ರಯನಾದ ಆತ್ಮನೂ ಕೂಡ ಅವುಗಳಿಂದ ಬೇರೆಯಾಗಿ ನಿರ್ಲಿಪ್ತನೇ ಆಗಿದ್ದಾನೆ. ॥43॥
(ಶ್ಲೋಕ-44)
ಮೂಲಮ್
ಸುಯಜ್ಞೋ ನನ್ವಯಂ ಶೇತೇ ಮೂಢಾ ಯಮನುಶೋಚಥ ।
ಯಃ ಶ್ರೋತಾ ಯೋನುವಕ್ತೇಹ ಸ ನ ದೃಶ್ಯೇತ ಕರ್ಹಿಚಿತ್ ॥
ಅನುವಾದ
ಮೂರ್ಖರೇ! ಯಾರಿಗಾಗಿ ನೀವೆಲ್ಲರೂ ಶೋಕ ಮಾಡುತ್ತಿರುವಿರೋ ಆ ಸುಯಜ್ಞವೆಂಬ ಶರೀರವಾದರೋ ನಿಮ್ಮ ಮುಂದೆಯೇ ಬಿದ್ದಿದೆ. ನೀವೆಲ್ಲರೂ ನೋಡುತ್ತಾ ಇದ್ದೀರಿ. ಇದರಲ್ಲಿ ಯಾವ ಕೇಳುವವನು ಮತ್ತು ಮಾತಾಡು ವವನು ಇದ್ದನೋ ಅವನಾದರೋ ಎಂದಿಗೂ ಯಾರಿಗೂ ಕಾಣುತ್ತಿರಲಿಲ್ಲ. ಮತ್ತೆ ಇಂದೂ ಕೂಡ ಕಾಣಿಸಿ ಕೊಳ್ಳುವುದಿಲ್ಲ. ಹಾಗಾದರೆ ಶೋಕವೇಕೆ? ॥44॥
(ಶ್ಲೋಕ-45)
ಮೂಲಮ್
ನ ಶ್ರೋತಾ ನಾನುವಕ್ತಾಯಂ ಮುಖ್ಯೋಪ್ಯತ್ರ ಮಹಾನಸುಃ ।
ಯಸ್ತ್ವಿಹೇಂದ್ರಿಯವಾನಾತ್ಮಾ ಸ ಚಾನ್ಯಃ ಪ್ರಾಣದೇಹಯೋಃ ॥
ಅನುವಾದ
(‘ಇದರೊಳಗೆ ಮಾತನಾಡುತ್ತಿದ್ದವನು ಮತ್ತು ಕೇಳುತ್ತಿದ್ದವನು ಪ್ರಾಣನು. ಅವನು ಇದನ್ನು ಬಿಟ್ಟು ಹೋದನು’ ಎಂದು ಹೇಳುವಿರೋ? ಅದು ಸರಿಯಲ್ಲ. ಏಕೆಂದರೆ, ಗಾಢ ನಿದ್ರೆಯ ಸಮಯದಲ್ಲಿ ಪ್ರಾಣನು ಇದ್ದರೂ ಆತನು ಮಾತ ನಾಡುವುದಿಲ್ಲ, ಕೇಳುವುದೂ ಇಲ್ಲ.) ಶರೀರದಲ್ಲಿ ಎಲ್ಲ ಇಂದ್ರಿಯಗಳ ಚೇಷ್ಟೆಗಳಿಗೂ ಕಾರಣವಾಗಿರುವ ಯಾವ ಮಹಾಪ್ರಾಣವುಂಟೋ, ಅದು ಮುಖ್ಯವಾಗಿದ್ದರೂ ಕೇಳು ವುದು ಮತ್ತು ಮಾತನಾಡುವುದು ಆ ಪ್ರಾಣವಲ್ಲ. ಏಕೆಂದರೆ ಅದು ಜಡವಾಗಿದೆ. ದೇಹ ಮತ್ತು ಇಂದ್ರಿಯಗಳ ಮೂಲಕ ಎಲ್ಲ ಪದಾರ್ಥಗಳನ್ನೂ ದರ್ಶಿಸುತ್ತಿರುವ, ಎಲ್ಲದಕ್ಕೂ ಸಾಕ್ಷಿಯಾಗಿರುವ ಯಾವ ಆತ್ಮವುಂಟೋ ಅದು ಶರೀರ ಮತ್ತು ಪ್ರಾಣ ಇವೆರಡಕ್ಕಿಂತಲೂ ಬೇರೆಯಾದುದು. ॥45॥
(ಶ್ಲೋಕ-46)
ಮೂಲಮ್
ಭೂತೇಂದ್ರಿಯಮನೋಲಿಂಗಾನ್ದೇಹಾನುಚ್ಚಾವಚಾನ್ವಿಭುಃ ।
ಭಜತ್ಯುತ್ಸೃಜತಿ ಹ್ಯನ್ಯಸ್ತಚ್ಚಾಪಿ ಸ್ವೇನ ತೇಜಸಾ ॥
ಅನುವಾದ
ಈ ಆತ್ಮನು ವ್ಯಾಪಕನಾಗಿದ್ದಾನೆ, ಆದರೆ ಪರಿಚ್ಛಿನ್ನನಲ್ಲ. ಆದರೂ ಪಂಚಭೂತ, ಇಂದ್ರಿಯ ಮತ್ತು ಮನಸ್ಸುಗಳಿಂದ ಕೂಡಿದ ದೇವ, ಮನುಷ್ಯ, ಪಶು, ಪಕ್ಷಿ ಇತ್ಯಾದಿ ಉಚ್ಚ-ನೀಚ ಶರೀರಗಳನ್ನು ಧರಿಸುತ್ತಾನೆ ಮತ್ತು ತನ್ನ ವಿವೇಕದಿಂದ ಮುಕ್ತನೂ ಆಗುವನು. ವಾಸ್ತವವಾಗಿ ಅವನು ಇವೆಲ್ಲವುಗಳಿಂದ ಬೇರೆಯೇ ಆಗಿದ್ದಾನೆ. ॥46॥
(ಶ್ಲೋಕ-47)
ಮೂಲಮ್
ಯಾವಲ್ಲಿಂಗಾನ್ವಿತೋ ಹ್ಯಾತ್ಮಾ ತಾವತ್ಕರ್ಮನಿಬಂಧನಮ್ ।
ತತೋ ವಿಪರ್ಯಯಃ ಕ್ಲೇಶೋ ಮಾಯಾಯೋಗೋನುವರ್ತತೇ ॥
ಅನುವಾದ
ಅವನು ಪಂಚಪ್ರಾಣ, ಪಂಚ ಕರ್ಮೇಂದ್ರಿಯ, ಪಂಚಜ್ಞಾನೇಂದ್ರಿಯ, ಬುದ್ಧಿ ಮತ್ತು ಮನಸ್ಸು ಈ ಹದಿನೇಳು ತತ್ತ್ವಗಳಿಂದ ಉಂಟಾದ ಲಿಂಗ ಶರೀರದೊಂದಿಗೆ ಕೂಡಿಕೊಂಡಿರುವ ತನಕ ಕರ್ಮಗಳಿಂದ ಬಂಧಿತವಾಗಿರುತ್ತಾನೆ. ಈ ಬಂಧನದಿಂದಲೇ ಮಾಯೆಯಿಂದ ಉಂಟಾಗುವ ಮೋಹ ಮತ್ತು ಕ್ಲೇಶಗಳು ಯಾವಾಗಲೂ ಅವನ ಬೆನ್ನುಹತ್ತಿರುತ್ತವೆ. ॥47॥
(ಶ್ಲೋಕ-48)
ಮೂಲಮ್
ವಿತಥಾಭಿನಿವೇಶೋಯಂ ಯದ್ಗುಣೇಷ್ವರ್ಥದೃಗ್ವಚಃ ।
ಯಥಾ ಮನೋರಥಃ ಸ್ವಪ್ನಃ ಸರ್ವಮೈಂದ್ರಿಯಕಂ ಮೃಷಾ ॥
ಅನುವಾದ
ಪ್ರಕೃತಿಯ ಗುಣಗಳು ಮತ್ತು ಅವುಗಳಿಂದ ಉಂಟಾದ ವಸ್ತುಗಳನ್ನು ಪರಮಾರ್ಥವೆಂದು ತಿಳಿಯುವುದು ಅಥವಾ ಹೇಳುವುದು ವ್ಯರ್ಥವಾದ ದುರಾಗ್ರಹವಾಗಿದೆ. ಮನೋರಥ, ಸಮಯದ ಕಲ್ಪನೆ ಮತ್ತು ಸ್ವಪ್ನದಲ್ಲಿ ಕಂಡುಬರುವ ವಸ್ತುಗಳಂತೆ ಇಂದ್ರಿಯಗಳಿಂದ ಗ್ರಹಿಸಲಾಗುವುದೆಲ್ಲವೂ ಮಿಥ್ಯೆಯೇ ಆಗಿದೆ. ॥48॥
(ಶ್ಲೋಕ-49)
ಮೂಲಮ್
ಅಥ ನಿತ್ಯಮನಿತ್ಯಂ ವಾ ನೇಹ ಶೋಚಂತಿ ತದ್ವಿದಃ ।
ನಾನ್ಯಥಾ ಶಕ್ಯತೇ ಕರ್ತುಂ ಸ್ವಭಾವಃ ಶೋಚತಾಮಿತಿ ॥
ಅನುವಾದ
ಅದಕ್ಕಾಗಿ ಶರೀರ ಮತ್ತು ಆತ್ಮನ ತತ್ತ್ವವನ್ನರಿತ ಮನುಷ್ಯನು ಅನಿತ್ಯಶರೀರಕ್ಕಾಗಲಿ, ಆತ್ಮನಿಗಾಗಲೀ ಶೋಕಿಸುವುದಿಲ್ಲ. ಆದರೆ ಜ್ಞಾನವು ದೃಢವಾಗದಿರುವ ಕಾರಣ ಶೋಕಿಸುತ್ತಿರುವವರ ಸ್ವಭಾವವನ್ನು ಬದಲಿಸುವುದು ಅತಿಕಷ್ಟ. ॥49॥
(ಶ್ಲೋಕ-50)
ಮೂಲಮ್
ಲುಬ್ಧಕೋ ವಿಪಿನೇ ಕಶ್ಚಿತ್ಪಕ್ಷಿಣಾಂ ನಿರ್ಮಿತೋಂತಕಃ ।
ವಿತತ್ಯ ಜಾಲಂ ವಿದದೇ ತತ್ರ ತತ್ರ ಪ್ರಲೋಭಯನ್ ॥
ಅನುವಾದ
ಒಂದು ಅರಣ್ಯದಲ್ಲಿ ಓರ್ವ ಬೇಟೆಗಾರನಿದ್ದನು. ಅವನು ಅರಣ್ಯದ ಹಕ್ಕಿಗಳ ಪಾಲಿಗೆ ವಿಧಿಯು ಸೃಷ್ಟಿಸಿ ಕಳಿಸಿದ ಯಮನೇ ಆಗಿದ್ದನು. ಅಲ್ಲಲ್ಲಿ ಬಲೆಯನ್ನು ಬೀಸಿ ಹಕ್ಕಿಗಳಿಗೆ ಆಹಾರದ ಆಸೆತೋರಿಸಿ ಬಲೆಯಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದನು. ॥50॥
(ಶ್ಲೋಕ-51)
ಮೂಲಮ್
ಕುಲಿಂಗಮಿಥುನಂ ತತ್ರ ವಿಚರತ್ಸಮದೃಶ್ಯತ ।
ತಯೋಃ ಕುಲಿಂಗೀ ಸಹಸಾ ಲುಬ್ಧಕೇನ ಪ್ರಲೋಭಿತಾ ॥
ಅನುವಾದ
ಒಂದುದಿನ ಅವನು ಒಂದು ಕುಲಿಂಗಪಕ್ಷಿಯ ಜೋಡಿಯು ಕಾಳು ತಿನ್ನುತ್ತಿರುವುದನ್ನು ನೋಡಿದನು. ಅವುಗಳಲ್ಲಿ ಅವನು ಹೆಣ್ಣುಹಕ್ಕಿಯನ್ನು ಶೀಘ್ರವಾಗಿ ಬಲೆಯಲ್ಲಿ ಹಿಡಿದು ಬಿಟ್ಟನು. ॥51॥
(ಶ್ಲೋಕ-52)
ಮೂಲಮ್
ಸಾಸಜ್ಜತ ಸಿಚಸ್ತಂತ್ಯಾಂ ಮಹಿಷೀ ಕಾಲಯಂತ್ರಿತಾ ।
ಕುಲಿಂಗಸ್ತಾಂ ತಥಾಪನ್ನಾಂ ನಿರೀಕ್ಷ್ಯ ಭೃಶದುಃಖಿತಃ ।
ಸ್ನೇಹಾದಕಲ್ಪಃ ಕೃಪಣಃ ಕೃಪಣಾಂ ಪರ್ಯದೇವಯತ್ ॥
ಅನುವಾದ
ಅದು ಕಾಲವಶದಿಂದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ಡಾಡ ತೊಡಗಿತು. ತನ್ನ ಮಡದಿಯ ಆ ವಿಪತ್ತನ್ನು ಕಂಡು ಗಂಡುಹಕ್ಕಿಗೆ ಅಪಾರವಾದ ಶೋಕವುಂಟಾಯಿತು. ಆ ಬಡಪಾಯಿಗೆ ಅದನ್ನು ಬಿಡಿಸಲಾಗದಿದ್ದರೂ, ಸ್ನೇಹವಶದಿಂದ ಆ ಹೆಣ್ಣು ಪಕ್ಷಿಗಾಗಿ ವಿಲಾಪಿಸತೊಡಗಿತು. ॥52॥
(ಶ್ಲೋಕ-53)
ಮೂಲಮ್
ಅಹೋ ಅಕರುಣೋ ದೇವಃ ಸಿಯಾಕರುಣಯಾ ವಿಭುಃ ।
ಕೃಪಣಂ ಮಾನುಶೋಚಂತ್ಯಾ ದೀನಯಾ ಕಿಂ ಕರಿಷ್ಯತಿ ॥
ಅನುವಾದ
ಈ ವಿಧಾತನು ಎಲ್ಲವನ್ನೂ ಮಾಡಬಲ್ಲನು, ಆದರೆ ಇವನು ಅತ್ಯಂತ ನಿರ್ದಯಿಯು! ನನ್ನ ಸಹಚರಿಯು ಮೊದಲನೆಯದಾಗಿ ಹೆಂಗಸು, ಎರಡನೆಯದಾಗಿ ಭಾಗ್ಯಹೀನನಾದ ನನ್ನ ಕುರಿತು ಶೋಕಿಸುತ್ತಾ ತುಂಬಾ ದೀನತೆಯಿಂದ ಒದ್ದಾಡುತ್ತಿರುವಳು. ಈ ಬಡಪಾಯಿಯನ್ನು ಹೀಗೆ ವಿಪತ್ತಿಗೆ ತಳ್ಳಿ ಆ ವಿಧಿಗೆ ಏನು ಪ್ರಯೋಜನ? ॥53॥
(ಶ್ಲೋಕ-54)
ಮೂಲಮ್
ಕಾಮಂ ನಯತು ಮಾಂ ದೇವಃ ಕಿಮರ್ಧೇನಾತ್ಮನೋ ಹಿ ಮೇ ।
ದೀನೇನ ಜೀವತಾ ದುಃಖಮನೇನ ವಿಧುರಾಯುಷಾ ॥
ಅನುವಾದ
ಹಾಗೆ ಕಾರಣವಿಲ್ಲದೆ ಕಷ್ಟಕೊಡುವುದೇ ಈತನ ಇಚ್ಛೆ ಇದ್ದರೆ ನನ್ನನ್ನೇ ಎತ್ತಿಕೊಂಡು ಹೋಗಲೀ. ಇವಳಿಲ್ಲದೆ ನನ್ನ ಈ ದೀನತೆ, ದುಃಖದಿಂದ ತುಂಬಿರುವ ವಿಧುರ ಜೀವನದಿಂದ ಏನು ಮಾಡಲಿ? ॥54॥
(ಶ್ಲೋಕ-55)
ಮೂಲಮ್
ಕಥಂ ತ್ವಜಾತಪಕ್ಷಾಂಸ್ತಾನ್ಮಾತೃಹೀನಾನ್ಬಿಭರ್ಮ್ಯಹಮ್ ।
ಮಂದಭಾಗ್ಯಾಃ ಪ್ರತೀಕ್ಷಂತೇ ನೀಡೇ ಮೇ ಮಾತರಂ ಪ್ರಜಾಃ ॥
ಅನುವಾದ
ಇನ್ನೂ ನನ್ನ ಮರಿಗಳ ರೆಕ್ಕೆಗಳೇ ಬಲಿತಿಲ್ಲ. ಈ ಮಡದಿಯು ಸತ್ತು ಹೋದರೆ ತಬ್ಬಲಿಗಳಾದ ಆ ಮಕ್ಕಳನ್ನು ನಾನು ಹೇಗೆ ಸಾಕಲಿ? ಅಯ್ಯೋ ಪಾಪ! ಗೂಡಿನಲ್ಲಿ ಆ ನನ್ನ ಮರಿಗಳು ತಾಯಿಯ ದಾರಿಯನ್ನೇ ಎದುರು ನೋಡುತ್ತಿರಬಹುದು. ॥55॥
(ಶ್ಲೋಕ-56)
ಮೂಲಮ್
ಏವಂ ಕುಲಿಂಗಂ ವಿಲಪಂತಮಾರಾತ್
ಪ್ರಿಯಾವಿಯೋಗಾತುರಮಶ್ರುಕಂಠಮ್ ।
ಸ ಏವ ತಂ ಶಾಕುನಿಕಃ ಶರೇಣ
ವಿವ್ಯಾಧ ಕಾಲಪ್ರಹಿತೋ ವಿಲೀನಃ ॥
ಅನುವಾದ
ಹೀಗೆ ಆ ಪಕ್ಷಿಯು ಬಹಳ ವಿಧದಿಂದ ವಿಲಾಪಿಸ ತೊಡಗಿತು. ತನ್ನ ಸಂಗಾತಿಯ ವಿಯೋಗದಿಂದ ಅದು ಶೋಕದಲ್ಲಿ ಮುಳುಗಿಹೋಗಿತ್ತು. ಕಣ್ಣೀರಿನಿಂದ ಅದರ ಕಂಠ ಬಿಗಿದುಹೋಗಿತ್ತು. ಅಷ್ಟರಲ್ಲಿ ಕಾಲನಿಂದ ಪ್ರೇರಿತನಾದ ಅಲ್ಲೇ ಅಡಗಿಕೊಂಡಿದ್ದ ಆ ಬೇಟೆಗಾರನು ಅದರ ಮೇಲೆ ಬಲವಾದ ಬಾಣವನ್ನು ಬಿಟ್ಟು ಅದು ಅಲ್ಲೇ ಸತ್ತು ಉರುಳು ವಂತೆ ಮಾಡಿದನು. ॥56॥
(ಶ್ಲೋಕ-57)
ಮೂಲಮ್
ಏವಂ ಯೂಯಮಪಶ್ಯಂತ್ಯ ಆತ್ಮಾಪಾಯಮಬುದ್ಧಯಃ ।
ನೈನಂ ಪ್ರಾಪ್ಸ್ಯಥ ಶೋಚಂತ್ಯಃ ಪತಿಂ ವರ್ಷಶತೈರಪಿ ॥
ಅನುವಾದ
ಮೂರ್ಖರಾದ ರಾಣಿಯರೇ! ನಿಮ್ಮದೂ ಇದೇ ಸ್ಥಿತಿಯಾಗುವುದು. ನಿಮ್ಮ ಮೃತ್ಯುವು ನಿಮಗೆ ಕಂಡುಬರುತ್ತಿಲ್ಲ. ಅದಕ್ಕಾಗಿ ಗೋಳಾಡುತ್ತಿರುವಿರಿ! ನೀವುಗಳು ಹೀಗೆ ನೂರು ವರ್ಷಗಳವರೆಗೆ ಶೋಕದಿಂದ ಎದೆಬಡಿದುಕೊಂಡರೂ ಇವನನ್ನು ಪಡೆಯಲಾರಿರಿ. ॥57॥
(ಶ್ಲೋಕ-58)
ಮೂಲಮ್ (ವಾಚನಮ್)
ಹಿರಣ್ಯಕಶಿಪುರುವಾಚ
ಮೂಲಮ್
ಬಾಲ ಏವಂ ಪ್ರವದತಿ ಸರ್ವೇ ವಿಸ್ಮಿತಚೇತಸಃ ।
ಜ್ಞಾತಯೋ ಮೇನೀರೇ ಸರ್ವಮನಿತ್ಯ ಮಯಥೋತ್ಥಿತಮ್ ॥
ಅನುವಾದ
ಹಿರಣ್ಯಕಶಿಪು ಹೇಳಿದನು — ಆ ಚಿಕ್ಕ ಹುಡುಗನ ಇಂತಹ ಜ್ಞಾನಪೂರ್ಣ ಮಾತುಗಳನ್ನು ಕೇಳಿ ಎಲ್ಲರೂ ಆಶ್ಚರ್ಯ ಚಕಿತರಾದರು. ಉಶೀನರ ನರೇಶನ ಬಂಧು-ಬಾಂಧವರೂ ಹಾಗೂ ಹೆಂಡಿರುಗಳೂ ಸಮಸ್ತ ಸಂಸಾರವೂ ಮತ್ತು ಸುಖ-ದುಃಖಗಳು ಅನಿತ್ಯವಾಗಿ ಮಿಥ್ಯೆಯಾಗಿವೆ ಎಂಬ ಮಾತನ್ನು ಅರಿತುಕೊಂಡರು. ॥58॥
(ಶ್ಲೋಕ-59)
ಮೂಲಮ್
ಯಮ ಏತದುಪಾಖ್ಯಾಯ ತತ್ರೈವಾಂತರಧೀಯತ ।
ಜ್ಞಾತಯೋಪಿ ಸುಯಜ್ಞಸ್ಯ ಚಕ್ರುರ್ಯತ್ಸಾಂಪರಾಯಿಕಮ್ ॥
ಅನುವಾದ
ಯಮರಾಜನು ಈ ಆಖ್ಯಾನವನ್ನು ಹೇಳಿ ಅಲ್ಲೇ ಅಂತರ್ಧಾನನಾದನು. ಬಂಧು-ಬಾಂಧವರೂ ಕೂಡ ಸುಯಜ್ಞನ ಅಂತ್ಯೇಷ್ಟಿಕ್ರಿಯೆಗಳನ್ನು ನಡೆಸಿದರು. ॥59॥
(ಶ್ಲೋಕ-60)
ಮೂಲಮ್
ತತಃ ಶೋಚತ ಮಾ ಯೂಯಂ ಪರಂ ಚಾತ್ಮಾನಮೇವ ಚ ।
ಕ ಆತ್ಮಾ ಕಃ ಪರೋ ವಾತ್ರ ಸ್ವೀಯಃ ಪಾರಕ್ಯ ಏವ ವಾ ।
ಸ್ವಪರಾಭಿನಿವೇಶೇನ ವಿನಾಜ್ಞಾನೇನ ದೇಹಿನಾಮ್ ॥
ಅನುವಾದ
ಅದಕ್ಕಾಗಿ ನೀವುಗಳೂ ತನಗಾಗಿ ಅಥವಾ ಇತರರಿಗಾಗಿ ಶೋಕ ಮಾಡಬೇಡಿರಿ. ಈ ಪ್ರಪಂಚದಲ್ಲಿ ಆತ್ಮನು ಯಾರು ಮತ್ತು ಆತನಿಂದ ಭಿನ್ನನಾದವನು ಯಾರು? ಸ್ವಕೀಯನು ಯಾರು ಪರಕೀಯನು ಯಾರು? ಪ್ರಾಣಿಗಳಿಗೆ ಅಜ್ಞಾನದಿಂದಲೇ ಈ ತನ್ನವರು-ಪರಕೀಯರು ಎಂಬ ದುರಾಗ್ರಹವು ಉಂಟಾಗಿದೆ. ಅಜ್ಞಾನವಲ್ಲದೆ ಈ ಭೇದ-ಬುದ್ಧಿಗೆ ಬೇರೆ ಯಾವುದೇ ಕಾರಣವಿಲ್ಲ. ॥60॥
(ಶ್ಲೋಕ-61)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಇತಿ ದೈತ್ಯಪತೇರ್ವಾಕ್ಯಂ ದಿತಿರಾಕರ್ಣ್ಯ ಸಸ್ನುಷಾ ।
ಪುತ್ರಶೋಕಂ ಕ್ಷಣಾತ್ತ್ಯಕ್ತ್ವಾ ತತ್ತ್ವೇ ಚಿತ್ತಮಧಾರಯತ್ ॥
ಅನುವಾದ
ನಾರದರು ಹೇಳಿದರು — ಯುಧಿಷ್ಠಿರನೇ! ತನ್ನ ಸೊಸೆಯೊಂದಿಗೆ ದಿತಿಯು ಹಿರಣ್ಯಕಶಿಪುವಿನ ಈ ಮಾತುಗಳನ್ನು ಕೇಳಿ ಒಡನೆಯೇ ಪುತ್ರಶೋಕವನ್ನು ತ್ಯಜಿಸಿಬಿಟ್ಟಳು ಹಾಗೂ ತನ್ನ ಚಿತ್ತವನ್ನು ಪರಮ ತತ್ತ್ವಸ್ವರೂಪನಾದ ಪರಮಾತ್ಮನಲ್ಲಿ ತೊಡಗಿಸಿದಳು. ॥61॥
ಅನುವಾದ (ಸಮಾಪ್ತಿಃ)
ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ದಿತಿಶೋಕಾಪನಯನಂ ನಾಮ ದ್ವಿತೀಯೋಽಧ್ಯಾಯಃ ॥2॥