[ಮೊದಲನೆಯ ಅಧ್ಯಾಯ]
ಭಾಗಸೂಚನಾ
ನಾರದ-ಯುಧಿಷ್ಠಿರ ಸಂವಾದ ಮತ್ತು ಜಯ-ವಿಜಯರ ಕಥೆ
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಸಮಃ ಪ್ರಿಯಃ ಸುಹೃದ್ಬ್ರಹ್ಮನ್ಭೂತಾನಾಂ ಭಗವಾನ್ ಸ್ವಯಮ್ ।
ಇಂದ್ರಸ್ಯಾರ್ಥೇ ಕಥಂ ದೈತ್ಯಾನವಧೀದ್ವಿಷಮೋ ಯಥಾ ॥
ಅನುವಾದ
ಪರೀಕ್ಷಿತ ಮಹಾರಾಜನು ಕೇಳಿದನು — ಪೂಜ್ಯರಾದ ಮಹರ್ಷಿಗಳೇ! ಭಗವಂತನಾದರೋ ಸ್ವಭಾವದಿಂದಲೇ ಭೇದ ಭಾವ ರಹಿತನಾಗಿದ್ದು, ಸಮನಾಗಿದ್ದಾನೆ. ಸಮಸ್ತ ಪ್ರಾಣಿಗಳ ಪ್ರಿಯನೂ, ಸುಹೃದನೂ ಆಗಿದ್ದಾನೆ. ಆದರೂ ಅವನು ಸಾಧಾರಣ ಮನುಷ್ಯರು ಭೇದ-ಭಾವದಿಂದ ತನ್ನ ಮಿತ್ರನ ಪಕ್ಷವನ್ನು ವಹಿಸಿಕೊಂಡು, ಶತ್ರುಗಳಿಗೆ ಅನಿಷ್ಟ ವೆಸಗುವಂತೆ ಇಂದ್ರನಿಗಾಗಿ ದೈತ್ಯರನ್ನು ಏಕೆ ವಧಿಸಿದನು? ॥1॥
(ಶ್ಲೋಕ-2)
ಮೂಲಮ್
ನ ಹ್ಯಸ್ಯಾರ್ಥಃ ಸುರಗಣೈಃ ಸಾಕ್ಷಾನ್ನಿಃಶ್ರೇಯಸಾತ್ಮನಃ ।
ನೈವಾಸುರೇಭ್ಯೋ ವಿದ್ವೇಷೋ ನೋದ್ವೇಗಶ್ಚಾಗುಣಸ್ಯ ಹಿ ॥
ಅನುವಾದ
ಅವನು ಸ್ವಯಂ ಪರಿಪೂರ್ಣನಾಗಿ ಕಲ್ಯಾಣ ಸ್ವರೂಪನಾಗಿರುವುದರಿಂದ ಅವನಿಗೆ ದೇವತೆಗಳಿಂದ ಯಾವ ಪ್ರಯೋಜನವೂ ಇಲ್ಲ ಮತ್ತು ತ್ರಿಗುಣಾತೀತನಾಗಿ ರುವುದರಿಂದ ಅವನಿಗೆ ದೈತ್ಯರೊಂದಿಗೆ ಯಾವುದೇ ವೈರ-ವಿರೋಧಗಳೂ ಇರಲಾರದು. ಯಾವ ಉದ್ವೇಗವೂ ಇಲ್ಲ. ॥2॥
(ಶ್ಲೋಕ-3)
ಮೂಲಮ್
ಇತಿ ನಃ ಸುಮಹಾಭಾಗ ನಾರಾಯಣಗುಣಾನ್ ಪ್ರತಿ ।
ಸಂಶಯಃ ಸುಮಹಾಂಜಾತಸ್ತದ್ಭವಾಂಶ್ಛೇತ್ತುಮರ್ಹತಿ ॥
ಅನುವಾದ
ಭಗವತ್ಪ್ರೇಮದ ಸೌಭಾಗ್ಯದಿಂದ ಸಂಪನ್ನರಾದ ಮಹಾತ್ಮರೇ! ಭಗವಂತನ ಸಮತ್ವವೇ ಮುಂತಾದ ಗುಣಗಳ ಸಂಬಂಧದಲ್ಲಿ ಮನಸ್ಸಿನಲ್ಲಿ ತುಂಬಾ ಸಂದೇಹ ಉಂಟಾಗಿದೆ. ತಾವು ದಯಮಾಡಿ ಅದನ್ನು ಪರಿಹರಿಸಬೇಕು. ॥3॥
(ಶ್ಲೋಕ-4)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸಾಧು ಪೃಷ್ಟಂ ಮಹಾರಾಜ ಹರೇಶ್ಚರಿತಮದ್ಭುತಮ್ ।
ಯದ್ಭಾಗವತಮಾಹಾತ್ಮ್ಯಂ ಭಗವದ್ಭಕ್ತಿವರ್ಧನಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಮಹಾರಾಜಾ! ಭಗವಂತನ ಅದ್ಭುತ ಚರಿತ್ರೆಯ ಸಂಬಂಧವಾಗಿ ನೀನು ಬಹಳ ಒಳ್ಳೆಯ ಪ್ರಶ್ನೆಯನ್ನೇ ಕೇಳಿರುವೆ. ಏಕೆಂದರೆ, ಇಂತಹ ಪ್ರಸಂಗಗಳು ಪ್ರಹ್ಲಾದಾದಿ ಭಕ್ತರ ಮಹಿಮೆಯಿಂದಲೇ ಪರಿಪೂರ್ಣವಾಗುತ್ತವೆ. ಅವುಗಳ ಶ್ರವಣದಿಂದ ಭಗವಂತನಲ್ಲಿ ಭಕ್ತಿಯು ವೃದ್ಧಿಸುತ್ತದೆ. ॥4॥
(ಶ್ಲೋಕ-5)
ಮೂಲಮ್
ಗೀಯತೇ ಪರಮಂ ಪುಣ್ಯಮೃಷಿಭಿರ್ನಾರದಾದಿಭಿಃ ।
ನತ್ವಾ ಕೃಷ್ಣಾಯ ಮುನಯೇ ಕಥಯಿಷ್ಯೇ ಹರೇಃ ಕಥಾಮ್ ॥
ಅನುವಾದ
ಇಂತಹ ಪರಮಪುಣ್ಯ ಪ್ರದವಾದ ಪ್ರಸಂಗಗಳನ್ನು ನಾರದಾದಿ ಮಹಾತ್ಮರು ತುಂಬಾ ಪ್ರೇಮದಿಂದ ಹಾಡುತ್ತಾ ಇರುತ್ತಾರೆ. ಈಗ ನಾನು ನನ್ನ ತಂದೆಯಾದ ಶ್ರೀಕೃಷ್ಣದ್ವೈಪಾಯನ ಮುನಿಗಳಿಗೆ ನಮಸ್ಕರಿಸಿ ಭಗವಂತನ ಲೀಲಾ-ಕಥೆಯನ್ನು ವರ್ಣಿಸುವೆನು. ॥5॥
(ಶ್ಲೋಕ-6)
ಮೂಲಮ್
ನಿರ್ಗುಣೋಪಿ ಹ್ಯಜೋವ್ಯಕ್ತೋ ಭಗವಾನ್ಪ್ರಕೃತೇಃ ಪರಃ ।
ಸ್ವಮಾಯಾಗುಣಮಾವಿಶ್ಯ ಬಾಧ್ಯಬಾಧಕತಾಂ ಗತಃ ॥
ಅನುವಾದ
ವಾಸ್ತವವಾಗಿ ಭಗವಂತನು ನಿರ್ಗುಣನೂ, ಜನ್ಮರಹಿತನೂ, ಅವ್ಯಕ್ತನೂ, ಪ್ರಕೃತಿಯಿಂದ ಮೀರಿದವನಾಗಿದ್ದಾನೆ. ಹೀಗಿದ್ದರೂ ಅವನು ತನ್ನ ಮಾಯೆಯ ಗುಣಗಳನ್ನು ಸ್ವೀಕರಿಸಿಕೊಂಡು ಬಾಧ್ಯ-ಬಾಧಕ ಭಾವವನ್ನು ಅಂದರೆ ಸಾಯುವ ಮತ್ತು ಸಾಯಿಸುವ ಎರಡರ ಪರಸ್ಪರ ವಿರೋಧೀ ರೂಪಗಳನ್ನು ಸ್ವೀಕರಿಸುವನು. ॥6॥
(ಶ್ಲೋಕ-7)
ಮೂಲಮ್
ಸತ್ತ್ವಂ ರಜಸ್ತಮ ಇತಿ ಪ್ರಕೃತೇರ್ನಾತ್ಮನೋ ಗುಣಾಃ ।
ನ ತೇಷಾಂ ಯುಗಪದ್ರಾಜನ್ ಹ್ರಾಸ ಉಲ್ಲಾಸ ಏವ ವಾ ॥
ಅನುವಾದ
ಸತ್ತ್ವಗುಣ, ರಜೋಗುಣ, ತಮೋಗುಣ ಇವು ಪ್ರಕೃತಿಯ ಗುಣಗಳು, ಪರಮಾತ್ಮನವುಗಳಲ್ಲ. ಪರೀಕ್ಷಿತನೇ! ಈ ಗುಣಗಳು ಒಟ್ಟಿಗೆ ವೃದ್ಧಿಯನ್ನಾಗಲೀ, ಕ್ಷಯವನ್ನಾಗಲೀ ಹೊಂದುವುದಿಲ್ಲ. ॥7॥
(ಶ್ಲೋಕ-8)
ಮೂಲಮ್
ಜಯಕಾಲೇ ತು ಸತ್ತ್ವಸ್ಯ ದೇವರ್ಷೀನ್ರಜಸೋಸುರಾನ್ ।
ತಮಸೋ ಯಕ್ಷರಕ್ಷಾಂಸಿ ತತ್ಕಾಲಾನುಗುಣೋಭಜತ್ ॥
ಅನುವಾದ
ಭಗವಂತನು ಆಯಾಕಾಲಕ್ಕೆ ಅನುಗುಣವಾಗಿ ಗುಣಗಳನ್ನು ಸ್ವೀಕರಿಸುತ್ತಾನೆ. ಅವನಲ್ಲಿ ಸತ್ತ್ವಗುಣವು ವೃದ್ಧಿಹೊಂದಿದಾಗ ದೇವತೆಗಳನ್ನೂ ಮತ್ತು ಋಷಿಗಳನ್ನೂ; ರಜೋಗುಣವು ವೃದ್ಧಿಹೊಂದಿದಾಗ ದೈತ್ಯರನ್ನು ಹಾಗೂ ತಮೋಗುಣವು ವೃದ್ಧಿಹೊಂದಿದಾಗ ಯಕ್ಷರನ್ನೂ, ರಾಕ್ಷಸರನ್ನೂ ತನ್ನವರಾಗಿಸಿಕೊಂಡು ಅವರ ಅಭ್ಯುದಯವನ್ನು ಮಾಡುತ್ತಾನೆ. ॥8॥
(ಶ್ಲೋಕ-9)
ಮೂಲಮ್
ಜ್ಯೋತಿರಾದಿರಿವಾಭಾತಿ ಸಂಘಾತಾನ್ನ ವಿವಿಚ್ಯತೇ ।
ವಿದಂತ್ಯಾತ್ಮಾನಮಾತ್ಮಸ್ಥಂ ಮಥಿತ್ವಾ ಕವಯೋಂತತಃ ॥
ಅನುವಾದ
ವ್ಯಾಪಕವಾದ ಅಗ್ನಿಯು ಕಟ್ಟಿಗೆಯೇ ಮುಂತಾದ ಬೇರೆ-ಬೇರೆ ಆಶ್ರಯಗಳಲ್ಲಿದ್ದರೂ ಅವುಗಳಿಂದ ಪ್ರತ್ಯೇಕವಾಗಿ ಕಾಣುವುದಿಲ್ಲ. ಆದರೆ ಆಶ್ರಯವನ್ನು ಪಡೆದಾಗ ಅದು ಪ್ರಕಟಗೊಳ್ಳುವುದು. ಹಾಗೆಯೇ ಪರಮಾತ್ಮನು ಎಲ್ಲ ಶರೀರಗಳಲ್ಲಿ ಇದ್ದರೂ ಪ್ರತ್ಯೇಕವಾಗಿ ತಿಳಿದುಬರುವುದಿಲ್ಲ. ಆದರೆ ವಿಚಾರಶೀಲರು ಹೃದಯವನ್ನು ಮಂಥನ ಮಾಡಿ, ಎಲ್ಲವೂ ಕಳೆದ ಬಳಿಕ ಕೊನೆಗೆ ತಮ್ಮ ಹೃದಯದಲ್ಲೇ ಅಂತರ್ಯಾಮಿ ರೂಪದಿಂದ ಆತನನ್ನು ಪಡೆದುಕೊಳ್ಳುವರು. ॥9॥
(ಶ್ಲೋಕ-10)
ಮೂಲಮ್
ಯದಾ ಸಿಸೃಕ್ಷುಃ ಪುರ ಆತ್ಮನಃ ಪರೋ
ರಜಃ ಸೃಜತ್ಯೇಷ ಪೃಥಕ್ಸ್ವಮಾಯಯಾ ।
ಸತ್ತ್ವಂ ವಿಚಿತ್ರಾಸು ರಿರಂಸುರೀಶ್ವರಃ
ಶಯಿಷ್ಯಮಾಣಸ್ತಮ ಈರಯತ್ಯಸೌ ॥
ಅನುವಾದ
ಪರಮೇಶ್ವರನು ತನಗಾಗಿ ಶರೀರಗಳನ್ನು ನಿರ್ಮಿಸಲು ಬಯಸಿದಾಗ ತನ್ನ ಮಾಯೆಯಿಂದ ರಜೋಗುಣವನ್ನು ಬೇರೆಯಾಗಿ ಸೃಷ್ಟಿಸುತ್ತಾನೆ. ಅವನು ವಿಚಿತ್ರಯೋನಿಗಳಲ್ಲಿ ರಮಿಸಲು ಬಯಸಿದಾಗ ಸತ್ತ್ವಗುಣ ಸೃಷ್ಟಿಸುತ್ತಾನೆ. ಅವನು ಶಯನ ಮಾಡಲು ಬಯಸಿದಾಗ ತಮೋಗುಣವನ್ನು ಬೆಳೆಸುತ್ತಾನೆ. ॥10॥
(ಶ್ಲೋಕ-11)
ಮೂಲಮ್
ಕಾಲಂ ಚರಂತಂ ಸೃಜತೀಶ ಆಶ್ರಯಂ
ಪ್ರಧಾನಪುಂಭ್ಯಾಂ ನರದೇವ ಸತ್ಯಕೃತ್ ।
ಯ ಏಷ ರಾಜನ್ನಪಿ ಕಾಲ ಈಶಿತಾ
ಸತ್ತ್ವಂ ಸುರಾನೀಕಮಿವೈಧಯತ್ಯತಃ ।
ತತ್ಪ್ರತ್ಯ ನೀಕಾನಸುರಾನ್ಸುರಪ್ರಿಯೋ
ರಜಸ್ತಮಸ್ಕಾನ್ಪ್ರಮಿಣೋತ್ಯುರುಶ್ರವಾಃ ॥
ಅನುವಾದ
ಪರೀಕ್ಷಿತನೇ! ಭಗವಂತನು ಸತ್ಯಸಂಕಲ್ಪನು. ಅವನೇ ಜಗತ್ತಿನ ಉತ್ಪತ್ತಿಗಾಗಿ ನಿಮಿತ್ತ ಭೂತನಾದ ಪ್ರಕೃತಿ ಮತ್ತು ಪುರುಷರ ಸಹಕಾರಿಯಾದ ಆಶ್ರಯವೂ ಆಗಿರುವ ಕಾಲವನ್ನು ಸೃಷ್ಟಿಸುತ್ತಾನೆ. ಅದಕ್ಕಾಗಿ ಅವನು ಕಾಲಕ್ಕೆ ಅಧೀನನಲ್ಲ, ಕಾಲವೇ ಅವನ ಅಧೀನ. ಈ ಕಾಲಸ್ವರೂಪನಾದ ಈಶ್ವರನು ಸತ್ತ್ವಗುಣವನ್ನು ವೃದ್ಧಿಪಡಿಸಿದಾಗ ಸತ್ತ್ವಮಯ ದೇವತೆಗಳ ಬಲವು ಹೆಚ್ಚುತ್ತವೆ. ಆಗಲೇ ಆ ಪರಮಯಶಸ್ವೀ ದೇವಪ್ರಿಯ ಪರಮಾತ್ಮನು ದೇವತೆಗಳ ವಿರೋಧಿಗಳಾದ ರಜೋಗುಣೀ ಹಾಗೂ ತಮೋಗುಣೀ ದೈತ್ಯರನ್ನು ಸಂಹರಿಸುತ್ತಾನೆ. ವಾಸ್ತವವಾಗಿ ಅವನು ಸರ್ವಸಮನೇ ಆಗಿರುವನು. ॥11॥
(ಶ್ಲೋಕ-12)
ಮೂಲಮ್
ಅತ್ರೈವೋದಾಹೃತಃ ಪೂರ್ವಮಿತಿಹಾಸಃ ಸುರರ್ಷಿಣಾ ।
ಪ್ರೀತ್ಯಾ ಮಹಾಕ್ರತೌ ರಾಜನ್ಪೃಚ್ಛತೇಜಾತಶತ್ರವೇ ॥
ಅನುವಾದ
ರಾಜನೇ! ಹಿಂದೆ ರಾಜಸೂಯ ಯಜ್ಞದಲ್ಲಿ ಯುಧಿಷ್ಠಿರನು ದೇವರ್ಷಿ ನಾರದರಲ್ಲಿ ಒಂದು ಪ್ರಶ್ನೆಯನ್ನು ಕೇಳಿದ್ದನು. ಆಗ ಉತ್ತರವಾಗಿ ಅವರು ಈ ಇತಿಹಾಸವನ್ನು ಹೇಳಿದ್ದರು.॥12॥
(ಶ್ಲೋಕ-13)
ಮೂಲಮ್
ದೃಷ್ಟ್ವಾ ಮಹಾದ್ಭುತಂ ರಾಜಾ ರಾಜಸೂಯೇ ಮಹಾಕ್ರತೌ ।
ವಾಸುದೇವೇ ಭಗವತಿ ಸಾಯುಜ್ಯಂ ಚೇದಿಭೂಭುಜಃ ॥
ಅನುವಾದ
ಆ ರಾಜಸೂಯ ಯಜ್ಞದಲ್ಲಿ ರಾಜಾಯುಧಿಷ್ಠಿರನು ತನ್ನ ಕಣ್ಣು ಮುಂದೆಯೇ ಶ್ರೀಕೃಷ್ಣನಿಂದ ಸಂಹರಿಸಲ್ಪಟ್ಟ ಚೇದಿರಾಜನಾದ ಶಿಶುಪಾಲನು ಎಲ್ಲರೂ ನೋಡು-ನೋಡುತ್ತಿರುವಂತೆ ಭಗವಾನ್ ಶ್ರೀಕೃಷ್ಣನಲ್ಲಿ ಸೇರಿಹೋದ ಈ ಆಶ್ಚರ್ಯಜನಕ ಘಟನೆಯು ನಡೆಯಿತು. ॥13॥
(ಶ್ಲೋಕ-14)
ಮೂಲಮ್
ತತ್ರಾಸೀನಂ ಸುರಋಷಿಂ ರಾಜಾ ಪಾಂಡುಸುತಃ ಕ್ರತೌ ।
ಪಪ್ರಚ್ಛ ವಿಸ್ಮಿತಮನಾ ಮುನೀನಾಂ ಶೃಣ್ವತಾಮಿದಮ್ ॥
ಅನುವಾದ
ಈ ಘಟನೆಯಿಂದ ಆಶ್ಚರ್ಯಚಕಿತನಾಗಿ ಆ ಯಜ್ಞಮಂಟಪದಲ್ಲಿ ಯುಧಿಷ್ಠಿರನು ದೊಡ್ಡ-ದೊಡ್ಡ ಮುನಿಗಳಿಂದ ತುಂಬಿದ ಸಭೆಯಲ್ಲೇ ಕುಳಿತಿದ್ದ ನಾರದರನ್ನು ಹೀಗೆ ಪ್ರಶ್ನಿಸಿದನು. ॥14॥
(ಶ್ಲೋಕ-15)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ಅಹೋ ಅತ್ಯದ್ಭುತಂ ಹ್ಯೇತದ್ದುರ್ಲಭೈಕಾಂತಿನಾಮಪಿ ।
ವಾಸುದೇವೇ ಪರೇ ತತ್ತ್ವೇ ಪ್ರಾಪ್ತಿಶ್ಚೈದ್ಯಸ್ಯ ವಿದ್ವಿಷಃ ॥
ಅನುವಾದ
ಯುಧಿಷ್ಠಿರನು ಕೇಳಿದನು — ಆಹಾ! ಇದಾದರೋ ಪರಮಾದ್ಭುತವಾದುದು. ಪರಮತತ್ತ್ವ ಭಗವಾನ್ ಶ್ರೀಕೃಷ್ಣನಲ್ಲಿ ಸೇರಿ ಹೋಗುವುದು ದೊಡ್ಡ-ದೊಡ್ಡ ಅನನ್ಯ ಭಕ್ತರಿಗೂ ದುರ್ಲಭವಾಗಿದೆ. ಹಾಗಿರುವಾಗ ಭಗವಂತನಲ್ಲಿ ಅತಿ ದ್ವೇಷಮಾಡುತ್ತಿದ್ದ ಶಿಶುಪಾಲನಿಗೆ ಈ ಸದ್ಗತಿಯು ಹೇಗೆ ದೊರೆಯಿತು? ॥15॥
(ಶ್ಲೋಕ-16)
ಮೂಲಮ್
ಏತದ್ವೇದಿತುಮಿಚ್ಛಾಮಃ ಸರ್ವ ಏವ ವಯಂ ಮುನೇ ।
ಭಗವನ್ನಿಂದಯಾ ವೇನೋ ದ್ವಿಜೈಸ್ತಮಸಿ ಪಾತಿತಃ ॥
ಅನುವಾದ
ನಾರದಮುನಿಗಳೇ! ಇದರ ರಹಸ್ಯವನ್ನು ನಾವೆಲ್ಲರೂ ಕೇಳಲು ಬಯಸುತ್ತಿದ್ದೇವೆ. ಹಿಂದೆ ಶ್ರೀಭಗವಂತನನ್ನು ನಿಂದಿಸಿದ ಕಾರಣವೇನರಾಜನನ್ನು ಋಷಿಗಳು ನರಕಕ್ಕೆ ತಳ್ಳಿಬಿಟ್ಟಿದ್ದರು. ॥16॥
(ಶ್ಲೋಕ-17)
ಮೂಲಮ್
ದಮಘೋಷಸುತಃ ಪಾಪ ಆರಭ್ಯ ಕಲಭಾಷಣಾತ್ ।
ಸಂಪ್ರತ್ಯಮರ್ಷೀ ಗೋವಿಂದೇ ದಂತವಕಶ್ಚ ದುರ್ಮತಿಃ ॥
ಅನುವಾದ
ಈ ದಮಘೋಷನ ಪುತ್ರ ಪಾಪಿಷ್ಠನಾದ ಶಿಶುಪಾಲನೂ ಮತ್ತು ದುರ್ಬುದ್ಧಿಯಾದ ದಂತವಕ್ತ್ರನೂ ತೊದಲು ಮಾತಾನ್ನಾಡುತ್ತಿದ್ದ ಕಾಲದಿಂದ ಈಗಿನವರೆಗೆ ಶ್ರೀಭಗವಂತನಲ್ಲಿ ದ್ವೇಷವನ್ನೇ ಸಾಧಿಸುತ್ತಿದ್ದರು. ॥17॥
(ಶ್ಲೋಕ-18)
ಮೂಲಮ್
ಶಪತೋರಸಕೃದ್ವಿಷ್ಣುಂ ಯದ್ಬ್ರಹ್ಮ ಪರಮವ್ಯಯಮ್ ।
ಶ್ವಿತ್ರೋ ನ ಜಾತೋ ಜಿಹ್ವಾಯಾಂ ನಾಂಧಂ ವಿವಿಶತುಸ್ತಮಃ ॥
ಅನುವಾದ
ಅವಿನಾಶಿಯಾದ ಪರಬ್ರಹ್ಮ ಭಗವಾನ್ ಶ್ರೀಕೃಷ್ಣನನ್ನು ಇವರು ಬಾರಿ-ಬಾರಿಗೂ ಬೈಯ್ಯುತ್ತಿದ್ದರು. ಇಂತಹ ಇವರ ನಾಲಿಗೆಗೆ ಕುಷ್ಠರೋಗವು ಬಂದಿಲ್ಲ, ಇವರಿಗೆ ಘೋರವಾದ ಅಂಧಕಾರಮಯ ನರಕವೂ ಸಿಗಲಿಲ್ಲ. ॥18॥
(ಶ್ಲೋಕ-19)
ಮೂಲಮ್
ಕಥಂ ತಸ್ಮಿನ್ಭಗವತಿ ದುರವಗ್ರಾಹಧಾಮನಿ ।
ಪಶ್ಯತಾಂ ಸರ್ವಲೋಕಾನಾಂ ಲಯಮೀಯತುರಂಜಸಾ ॥
ಅನುವಾದ
ಆದರೆ, ಇದಕ್ಕೆ ವಿರುದ್ಧವಾಗಿ ಅವರಿಬ್ಬರೂ ಎಲ್ಲರೂ ನೋಡು-ನೋಡುತ್ತಿರುವಂತೆ ಅತಿ ದುರ್ಲಭವಾದ ಶ್ರೀಕೃಷ್ಣನ ಸಾಯುಜ್ಯವನ್ನೇ ಅನಾಯಾಸವಾಗಿ ಹೊಂದಿಬಿಟ್ಟರು. ಇದರ ಕಾರಣವೇನು? ॥19॥
(ಶ್ಲೋಕ-20)
ಮೂಲಮ್
ಏತದ್ಭ್ರಾಮ್ಯತಿ ಮೇ ಬುದ್ಧಿರ್ದೀಪಾರ್ಚಿರಿವ ವಾಯುನಾ ।
ಬ್ರೂಹ್ಯೇತದದ್ಭುತತಮಂ ಭಗವಾಂಸ್ತತ್ರ ಕಾರಣಮ್ ॥
ಅನುವಾದ
ಮಹರ್ಷಿಗಳೇ! ಗಾಳಿಯ ಹೊಡೆತದಿಂದ ಅಲ್ಲಾಡುತ್ತಿರುವ ದೀಪಜ್ಞಾಲೆಯಂತೆ ನನ್ನ ಮನಸ್ಸು ಈ ವಿಷಯದಲ್ಲಿ ತೂಗಾಡುತ್ತಿದೆ. ಸರ್ವಜ್ಞರಾದ ತಾವು ಈ ಅದ್ಭುತ ಘಟನೆಯ ರಹಸ್ಯವನ್ನು ತಿಳಿಸುವ ಕೃಪೆ ಮಾಡಬೇಕು. ॥20॥
(ಶ್ಲೋಕ-21)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ರಾಜ್ಞಸ್ತದ್ವಚ ಅಕರ್ಣ್ಯ ನಾರದೋ ಭಗವಾನೃಷಿಃ ।
ತುಷ್ಟಃ ಪ್ರಾಹ ತಮಾಭಾಷ್ಯ ಶೃಣ್ವತ್ಯಾಸ್ತತ್ಸದಃ ಕಥಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಸರ್ವಸಮರ್ಥರಾದ ದೇವರ್ಷಿನಾರದರು ಯುಧಿಷ್ಠಿರನ ಈ ಪ್ರಶ್ನೆಯನ್ನು ಕೇಳಿ ಬಹಳ ಪ್ರಸನ್ನರಾದರು. ಅವರು ಧರ್ಮರಾಜನಿಗೆ ಸಂಬೋಧಿಸುತ್ತಾ ತುಂಬಿದ ಸಭೆಯಲ್ಲಿ ಎಲ್ಲರೂ ಕೇಳುತ್ತಿರುವಂತೆ ಈ ಕಥೆಯನ್ನು ನಿರೂಪಿಸಿದರು. ॥21॥
(ಶ್ಲೋಕ-22)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ನಿಂದನಸ್ತವಸತ್ಕಾರನ್ಯಕ್ಕಾರಾರ್ಥಂ ಕಲೇವರಮ್ ।
ಪ್ರಧಾನಪರಯೋ ರಾಜನ್ನವಿವೇಕೇನ ಕಲ್ಪಿತಮ್ ॥
ಅನುವಾದ
ನಾರದರು ಹೇಳಿದರು — ಎಲೈ ಯುಧಿಷ್ಠಿರಾ! ನಿಂದೆ, ಸ್ತುತಿ, ಸತ್ಕಾರ-ತಿರಸ್ಕಾರ ಇವೆಲ್ಲವೂ ಉಂಟಾಗುವುದು ಶರೀರಕ್ಕೆ ತಾನೇ. ಈ ಶರೀರದ ಕಲ್ಪನೆ ಪ್ರಕೃತಿ ಮತ್ತು ಪುರುಷರ ಸರಿಯಾದ ವಿವೇಕವಿಲ್ಲದಿರುವುದರಿಂದಲೇ ಉಂಟಾಗಿದೆ. ॥22॥
(ಶ್ಲೋಕ-23)
ಮೂಲಮ್
ಹಿಂಸಾ ತದಭಿಮಾನೇನ ದಂಡಪಾರುಷ್ಯಯೋರ್ಯಥಾ ।
ವೈಷಮ್ಯಮಿಹ ಭೂತಾನಾಂ ಮಮಾಹಮಿತಿ ಪಾರ್ಥಿವ ॥
ಅನುವಾದ
ಈ ಶರೀರವನ್ನೇ ತನ್ನ ಆತ್ಮವೆಂದು ತಿಳಿದಾಗ ‘ಇದು ನಾನು, ಇದು ನನ್ನದು’ ಎಂಬ ಭಾವವು ಉಂಟಾಗುವುದು. ಇದೇ ಎಲ್ಲ ಭೇದಭಾವದ ಮೂಲವಾಗಿದೆ. ಇದರಿಂದಲೇ ಏಟುಬಿದ್ದಾಗ ಹಾಗೂ ದುರ್ವಚನಗಳನ್ನು ಕೇಳಿ ದಾಗ ಪೀಡೆಯುಂಟಾಗುವುದು. ॥23॥
(ಶ್ಲೋಕ-24)
ಮೂಲಮ್
ಯನ್ನಿಬದ್ಧೋಭಿಮಾನೋಯಂ ತದ್ವಧಾತ್ಪ್ರಾಣಿನಾಂ ವಧಃ ।
ತಥಾ ನ ಯಸ್ಯ ಕೈವಲ್ಯಾದಭಿಮಾನೋಖಿಲಾತ್ಮನಃ ।
ಪರಸ್ಯ ದಮಕರ್ತುರ್ಹಿ ಹಿಂಸಾ ಕೇನಾಸ್ಯ ಕಲ್ಪ್ಯತೇ ॥
ಅನುವಾದ
ಯಾವ ಶರೀರದಲ್ಲಿ ‘ಇದು ನಾನೇ’ ಎಂಬ ಅಭಿಮಾನ ಉಂಟಾಗುವುದೋ ಆ ಶರೀರವನ್ನು ವಧಿಸಿದಾಗ ತನ್ನ ವಧೆಯೇ ಆಯಿತೆಂದು ಪ್ರಾಣಿಗಳಿಗೆ ಅನಿಸುತ್ತದೆ. ಆದರೆ ಭಗವಂತನಲ್ಲಿ ಜೀವಿಗಳಂತೆ ಇಂತಹ ಅಭಿಮಾನ ಇರುವುದಿಲ್ಲ. ಏಕೆಂದರೆ, ಅವನು ಸರ್ವಾತ್ಮನಾಗಿದ್ದಾನೆ, ಅದ್ವಿತೀಯನಾಗಿದ್ದಾನೆ. ಅವನು ಬೇರೆಯವರಿಗೆ ಕೊಡುವ ದಂಡನೆಯೂ ಅವರ ಶ್ರೇಯಸ್ಸಿಗಾಗಿಯೇ ಇರುತ್ತದೆ, ಕ್ರೋಧದಿಂದಾಗಲೀ, ದ್ವೇಷದಿಂದಾಗಲೀ ಅಲ್ಲ. ಹೀಗಿರುವಾಗ ಭಗವಂತನ ಸಂಬಂಧದಲ್ಲಿ ಹಿಂಸಾದಿ ಕಲ್ಪನೆಯನ್ನು ಹೇಗೆ ಮಾಡಲಾಗುವುದು? ॥24॥
(ಶ್ಲೋಕ-25)
ಮೂಲಮ್
ತಸ್ಮಾದ್ವೈರಾನುಬಂಧೇನ ನಿರ್ವೈರೇಣ ಭಯೇನ ವಾ ।
ಸ್ನೇಹಾತ್ಕಾಮೇನ ವಾ ಯುಂಜ್ಯಾತ್ಕಥಂಚಿನ್ನೇಕ್ಷತೇ ಪೃಥಕ್ ॥
ಅನುವಾದ
ಆದುದರಿಂದ ಸುದೃಢವಾದ ವೈರಭಾವದಿಂದಾಗಲೀ, ವೈರರಹಿತ ಭಕ್ತಿಭಾವದಿಂದಾಗಲೀ, ಭಯದಿಂದಾಗಲೀ, ಸ್ನೇಹದಿಂದಾಗಲೀ, ಅಥವಾ ಕಾಮದಿಂದಾಗಲೀ ಹೇಗಾದರೂ ಶ್ರೀಭಗವಂತನಲ್ಲಿ ತನ್ನ ಮನಸ್ಸನ್ನು ಪೂರ್ಣರೂಪದಿಂದ ತೊಡಗಿಸಬೇಕು. ಭಗವಂತನ ದೃಷ್ಟಿಯಲ್ಲಿ ಈ ಭಾವಗಳಲ್ಲಿ ಯಾವುದೇ ಭೇದವೂ ಇಲ್ಲ. ॥25॥
(ಶ್ಲೋಕ-26)
ಮೂಲಮ್
ಯಥಾ ವೈರಾನುಬಂಧೇನ ಮರ್ತ್ಯಸ್ತನ್ಮಯತಾಮಿಯಾತ್ ।
ನ ತಥಾ ಭಕ್ತಿಯೋಗೇನ ಇತಿ ಮೇ ನಿಶ್ಚಿತಾ ಮತಿಃ ॥
ಅನುವಾದ
ಯುಧಿಷ್ಠಿರನೇ! ಮನುಷ್ಯನು ವೈರಭಾವದಿಂದ ಭಗವಂತನಲ್ಲಿ ತನ್ಮಯನಾಗುವಷ್ಟು ಭಕ್ತಿಯೋಗದಿಂದ ಆಗುವುದಿಲ್ಲ ಎಂಬುದು ನನ್ನ ದೃಢವಾದ ನಿಶ್ಚಯವಾಗಿದೆ. ॥26॥
(ಶ್ಲೋಕ-27)
ಮೂಲಮ್
ಕೀಟಃ ಪೇಶಸ್ಕೃತಾ ರುದ್ಧಃ ಕುಡ್ಯಾಯಾಂ ತಮನುಸ್ಮರನ್ ।
ಸಂರಂಭ ಭಯಯೋಗೇನ ವಿಂದತೇ ತತ್ಸರೂಪತಾಮ್॥
ಅನುವಾದ
ಕಣಜವು ಒಂದು ಹುಳುವನ್ನು ತಂದು ಗೋಡೆಯ ತನ್ನ ಗೂಡಿನಲ್ಲಿ ಕೂಡಿ ಹಾಕುತ್ತದೆ. ಆಗ ಆ ಹುಳವು ಭಯದಿಂದಲೂ, ಉದ್ವೇಗದಿಂದಲೂ ಕಣಜ ವನ್ನೇ ಚಿಂತಿಸುತ್ತಾ-ಚಿಂತಿಸುತ್ತಾ ಅದರಂತೆಯೇ ಆಗಿಬಿಡುವುದು. ॥27॥
(ಶ್ಲೋಕ-28)
ಮೂಲಮ್
ಏವಂ ಕೃಷ್ಣೇ ಭಗವತಿ ಮಾಯಾಮನುಜ ಈಶ್ವರೇ ।
ವೈರೇಣ ಪೂತಪಾಪ್ಮಾನಸ್ತಮಾಪುರನುಚಿಂತಯಾ ॥
ಅನುವಾದ
ಹೀಗೆಯೇ ಮಾಯೆಯಿಂದ ಮನುಷ್ಯನಂತೆ ಕಂಡುಬರುವ ಸರ್ವಶಕ್ತನಾದ ಭಗವಾನ್ ಶ್ರೀಕೃಷ್ಣನಲ್ಲಿ ವೈರಭಾವದಿಂದ ನಿರಂತರ ಆತನನ್ನೇ ಚಿಂತಿಸುತ್ತಾ-ಚಿಂತಿಸುತ್ತಾ ಪಾಪರಹಿತನಾಗಿ ಅವನನ್ನೇ ಪಡೆದುಕೊಳ್ಳುವರು. ॥28॥
(ಶ್ಲೋಕ-29)
ಮೂಲಮ್
ಕಾಮಾದ್ದ್ವೇಷಾದ್ಭಯಾತ್ ಸ್ನೇಹಾದ್ಯಥಾ ಭಕ್ತ್ಯೇಶ್ವರೇ ಮನಃ ।
ಆವೇಶ್ಯ ತದಘಂ ಹಿತ್ವಾ ಬಹವಸ್ತದ್ಗತಿಂ ಗತಾಃ ॥
ಅನುವಾದ
ಒಬ್ಬರಲ್ಲ, ಅನೇಕ ಮನುಷ್ಯರು ಕಾಮದಿಂದ, ದ್ವೇಷದಿಂದ, ಭಯದಿಂದ, ಸ್ನೇಹದಿಂದ ತಮ್ಮ ಮನಸ್ಸನ್ನು ಭಗವಂತನಲ್ಲಿ ತೊಡಗಿಸಿ, ತಮ್ಮ ಎಲ್ಲ ಪಾಪಗಳನ್ನು ತೊಳೆದುಕೊಂಡು ಭಕ್ತರು ಭಕ್ತಿಯಿಂದ ಭಗವಂತನನ್ನು ಪಡೆಯುವಂತೆ ಆತನನ್ನು ಪಡೆದುಕೊಂಡಿರುವರು. ॥29॥
(ಶ್ಲೋಕ-30)
ಮೂಲಮ್
ಗೋಪ್ಯಃ ಕಾಮಾದ್ಭಯಾತ್ಕಂಸೋದ್ವೇಷಾಚ್ಚೈದ್ಯಾದಯೋ ನೃಪಾಃ ।
ಸಂಬಂಧಾದ್ ವೃಷ್ಣಯಃ ಸ್ನೇಹಾದ್ ಯೂಯಂ ಭಕ್ತ್ಯಾ ವಯಂ ವಿಭೋ ॥
ಅನುವಾದ
ಮಹಾರಾಜಾ! ಗೋಪಿಯರು ಭಗವಂತನನ್ನು ಸೇರುವ ತೀವ್ರಕಾಮದಿಂದ ಅರ್ಥಾತ್ ಪ್ರೇಮದಿಂದ, ಕಂಸನು ಭಯದಿಂದ, ಶಿಶುಪಾಲ-ದಂತವಕ್ತ್ರ ಮೊದಲಾದ ರಾಜರು ದ್ವೇಷದಿಂದ, ಯದುವಂಶೀಯರು ಕೌಟುಂಬಿಕ ಸಂಬಂಧದಿಂದ, ನೀವುಗಳು ಸ್ನೇಹದಿಂದ ಮತ್ತು ನಾವುಗಳು ಭಕ್ತಿಯಿಂದ ಮನಸ್ಸುಗಳನ್ನು ಭಗವಂತನಲ್ಲಿ ತೊಡಗಿಸಿರುವೆವು. ॥30॥
(ಶ್ಲೋಕ-31)
ಮೂಲಮ್
ಕತಮೋಪಿ ನ ವೇನಃ ಸ್ಯಾತ್ಪಂಚಾನಾಂ ಪುರುಷಂ ಪ್ರತಿ ।
ತಸ್ಮಾತ್ಕೇನಾಪ್ಯುಪಾಯೇನ ಮನಃ ಕೃಷ್ಣೇ ನಿವೇಶಯೇತ್ ॥
ಅನುವಾದ
ಭಕ್ತರಲ್ಲದೆ ಇತರ ಐದು ವಿಧದಿಂದ ಭಗವಂತನನ್ನು ಚಿಂತಿಸುವವನಲ್ಲಿ ಯಾರೊಂದಿಗೂ ವೇನನ ಗಣನೆಯಾಗುವುದಿಲ್ಲ. ಏಕೆಂದರೆ, ಅವನು ಯಾವುದೇ ರೀತಿಯಿಂದ ಭಗವಂತನಲ್ಲಿ ಮನಸ್ಸನ್ನು ತೊಡಗಿಸಿರಲಿಲ್ಲ. ಸಾರಾಂಶ ಹೇಗೆ ಬೇಕಾದರೂ ಆಗಲೀ ನಮ್ಮ ಮನಸ್ಸನ್ನು ಭಗವಾನ್ ಶ್ರೀಕೃಷ್ಣನಲ್ಲಿ ತನ್ಮಯಗೊಳಿಸಬೇಕು. ॥31॥
(ಶ್ಲೋಕ-32)
ಮೂಲಮ್
ಮಾತೃಷ್ವಸೇಯೋ ವಶ್ಚೈದ್ಯೋ ದಂತವಕಶ್ಚ ಪಾಂಡವ ।
ಪಾರ್ಷದಪ್ರವರೌ ವಿಷ್ಣೋರ್ವಿಪ್ರಶಾಪಾತ್ಪದಾಚ್ಚ್ಯುತೌ ॥
ಅನುವಾದ
ಮಹಾರಾಜಾ! ಮತ್ತೆ ನಿಮ್ಮಗಳ ಚಿಕ್ಕಮ್ಮನ ಪುತ್ರನಾದ ಶಿಶುಪಾಲ ಮತ್ತು ದಂತವಕ್ತ್ರರು ಇಬ್ಬರೂ ಭಗವಂತನಾದ ಮಹಾವಿಷ್ಣುವಿನ ಮುಖ್ಯರಾದ ಪಾರ್ಷದರಾಗಿದ್ದರು. ಬ್ರಾಹ್ಮಣರ ಶಾಪದಿಂದ ಇವರಿಬ್ಬರೂ ತಮ್ಮ ಪದದಿಂದ ಚ್ಯುತರಾಗಬೇಕಾಯಿತು. ॥32॥
(ಶ್ಲೋಕ-33)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ಕೀದೃಶಃ ಕಸ್ಯ ವಾ ಶಾಪೋ ಹರಿದಾಸಾಭಿಮರ್ಶನಃ ।
ಅಶ್ರದ್ಧೇಯ ಇವಾಭಾತಿ ಹರೇರೇಕಾಂತಿನಾಂ ಭವಃ ॥
ಅನುವಾದ
ಯುಧಿಷ್ಠಿರ ಮಹಾರಾಜನು ಕೇಳಿದನು — ನಾರದ ಮಹರ್ಷಿಗಳೇ! ಶ್ರೀಭಗವಂತನ ಪಾರ್ಷದರನ್ನೂ ಕೂಡ ಪ್ರಭಾವಿತರಾಗುವಂತಹ ಶಾಪವನ್ನು ಯಾರು ಕೊಟ್ಟರು? ಆ ಶಾಪ ಏನಾಗಿತ್ತು? ಭಗವಂತನ ಅನನ್ಯ ಪ್ರೇಮೀಭಕ್ತರು ಪುನಃ ಜನ್ಮ-ಮೃತ್ಯುರೂಪವಾದ ಸಂಸಾರಕ್ಕೆ ಮರಳಿ ಬರುವುದೆಂದರೆ ನಂಬುವುದೇ ಕಷ್ಟ. ॥33॥
(ಶ್ಲೋಕ-34)
ಮೂಲಮ್
ದೇಹೇಂದ್ರಿಯಾಸುಹೀನಾನಾಂ ವೈಕುಂಠಪುರವಾಸಿನಾಮ್ ।
ದೇಹಸಂಬಂಧಸಂಬದ್ಧಮೇತದಾಖ್ಯಾತುಮರ್ಹಸಿ ॥
ಅನುವಾದ
ವೈಕುಂಠದಲ್ಲಿ ಇರುವವರು ಪ್ರಾಕೃತ ಶರೀರ, ಇಂದ್ರಿಯಗಳು, ಪ್ರಾಣಗಳು ಇವುಗಳಿಂದ ರಹಿತರಾಗಿರುತ್ತಾರೆ. ಅವರಿಗೆ ಪ್ರಾಕೃತ ಶರೀರದ ಸಂಬಂಧ ಹೇಗೆ ಉಂಟಾಯಿತು? ಇದನ್ನು ತಾವು ಅವಶ್ಯವಾಗಿ ತಿಳಿಸೋಣವಾಗಲಿ. ॥34॥
(ಶ್ಲೋಕ-35)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಏಕದಾ ಬ್ರಹ್ಮಣಃ ಪುತ್ರಾ ವಿಷ್ಣೋರ್ಲೋಕಂ ಯದೃಚ್ಛಯಾ ।
ಸನಂದನಾದಯೋ ಜಗ್ಮುಶ್ಚರಂತೋ ಭುವನತ್ರಯಮ್ ॥
ಅನುವಾದ
ನಾರದ ಮಹರ್ಷಿಗಳು ಹೇಳಿದರು — ಒಂದು ದಿನ ಬ್ರಹ್ಮದೇವರ ಮಾನಸಪುತ್ರರಾದ ಸನಕಾದಿ ಋಷಿಗಳು ಮೂರೂ ಲೋಕಗಳಲ್ಲಿ ಯಥೇಷ್ಟವಾಗಿ ಸಂಚರಿಸುತ್ತಾ ವೈಕುಂಠಕ್ಕೆ ಹೋದರು. ॥35॥
(ಶ್ಲೋಕ-36)
ಮೂಲಮ್
ಪಂಚಷಡ್ಢಾಯನಾರ್ಭಾಭಾಃ ಪೂರ್ವೇಷಾಮಪಿ ಪೂರ್ವಜಾಃ ।
ದಿಗ್ವಾಸಸಃ ಶಿಶೂನ್ಮತ್ವಾ ದ್ವಾಃಸ್ಥೌ ತಾನ್ಪ್ರತ್ಯಷೇಧತಾಮ್ ॥
ಅನುವಾದ
ಇವರಾದರೋ ಎಲ್ಲರಿಗಿಂತಲೂ ಹಳಬರಾಗಿದ್ದರೂ ಐದು-ಆರು ವರ್ಷದ ಬಾಲಕರಂತೆ ಕಂಡುಬರುತ್ತಿದ್ದರು. ವಸ್ತ್ರವನ್ನೂ ಧರಿಸುತ್ತಿರಲಿಲ್ಲ. ಅವರನ್ನು ಸಾಮಾನ್ಯ ಶಿಶುಗಳೆಂದು ತಿಳಿದುಕೊಂಡು ದ್ವಾರಪಾಲಕರು ಅವರನ್ನು ಒಳಗೆ ಹೋಗದಂತೆ ತಡೆದರು. ॥36॥
(ಶ್ಲೋಕ-37)
ಮೂಲಮ್
ಅಶಪನ್ಕುಪಿತಾ ಏವಂ ಯುವಾಂ ವಾಸಂ ನ ಚಾರ್ಹಥಃ ।
ರಜಸ್ತಮೋಭ್ಯಾಂ ರಹಿತೇ ಪಾದಮೂಲೇ ಮಧುದ್ವಿಷಃ ।
ಪಾಪಿಷ್ಠಾ ಮಾಸುರೀಂ ಯೋನಿಂ ಬಾಲಿಶೌ ಯಾತಮಾಶ್ವತಃ ॥
ಅನುವಾದ
ಇದರಿಂದ ಅವರು ಕೋಪಗೊಂಡವರಂತೆ ಆಗಿ ದ್ವಾರಪಾಲಕರಿಗೆ ಎಲೈ ಮೂರ್ಖರೇ! ಭಗವಾನ್ ಶ್ರೀವಿಷ್ಣುವಿನ ಪಾದಮೂಲವು ರಜೋಗುಣ-ತಮೋಗುಣದಿಂದ ರಹಿತವಾದುದು. ನೀವು ಇಲ್ಲಿ ವಾಸಮಾಡಲು ಯೋಗ್ಯರಲ್ಲ. ಅದಕ್ಕಾಗಿ ಬೇಗನೇ ನೀವು ಇಲ್ಲಿಂದ ಹೋಗಿ ಪಾಪಮಯ ಅಸುರ ಯೋನಿಯನ್ನು ಹೊಂದಿರಿ’ ಎಂದು ಶಾಪವನ್ನು ಕೊಟ್ಟರು. ॥37॥
(ಶ್ಲೋಕ-38)
ಮೂಲಮ್
ಏವಂ ಶಪ್ತೌ ಸ್ವಭವನಾತ್ಪತಂತೌ ತೈಃ ಕೃಪಾಲುಭಿಃ
ಪ್ರೋಕ್ತೌ ಪುನರ್ಜನ್ಮಭಿರ್ವಾಂ ತ್ರಿಭಿರ್ಲೋಕಾಯ ಕಲ್ಪತಾಮ್ ॥
ಅನುವಾದ
ಹೀಗೆ ಶಪಿಸಲ್ಪಟ್ಟ ಆ ದ್ವಾರಪಾಲಕರು ವೈಕುಂಠದಿಂದ ಕೆಳಗೆ ಬೀಳುತ್ತಿರುವುದನ್ನು ಕಂಡು ಕೃಪಾಳುಗಳಾದ ಆ ಮಹಾತ್ಮರು ‘ನೀವು ಮೂರು ಜನ್ಮಗಳಲ್ಲಿ ಈ ಶಾಪವನ್ನು ಅನುಭವಿಸಿ ಮತ್ತೆ ಇಲ್ಲಿಗೆ ಹಿಂದಿರುಗಿರಿ’ ಎಂದು ಶಾಪವಿಮೋಚನೆ ಯನ್ನು ಅನುಗ್ರಹಿಸಿದರು. ॥38॥
(ಶ್ಲೋಕ-39)
ಮೂಲಮ್
ಜಜ್ಞಾತೇ ತೌ ದಿತೇಃ ಪುತ್ರೌ ದೈತ್ಯದಾನವವಂದಿತೌ ।
ಹಿರಣ್ಯಕಶಿಪುರ್ಜ್ಯೇಷ್ಠೋ ಹಿರಣ್ಯಾಕ್ಷೋನುಜಸ್ತತಃ ॥
ಅನುವಾದ
ಯುಧಿಷ್ಠಿರಾ! ಅವರೇ ದ್ವಾರಪಾಲಕರಿಬ್ಬರು ದಿತಿಯ ಪುತ್ರರಾದರು. ಅವರಲ್ಲಿ ಹಿರಿಯವನ ಹೆಸರು ಹಿರಣ್ಯಕಶಿಪು ಮತ್ತು ಕಿರಿಯವನ ಹೆಸರು ಹಿರಣ್ಯಾಕ್ಷ ಎಂದಿತ್ತು. ದೈತ್ಯ-ದಾನವರಲ್ಲಿ ಇವರಿಬ್ಬರೇ ಸರ್ವಶ್ರೇಷ್ಠರಾಗಿದ್ದರು. ॥39॥
(ಶ್ಲೋಕ-40)
ಮೂಲಮ್
ಹತೋ ಹಿರಣ್ಯಕಶಿಪುರ್ಹರಿಣಾ ಸಿಂಹರೂಪಿಣಾ ।
ಹಿರಣ್ಯಾಕ್ಷೋ ಧರೋದ್ಧಾರೇ ಬಿಭ್ರತಾ ಸೌಕರಂ ವಪುಃ ॥
ಅನುವಾದ
ಭಗವಾನ್ ಮಹಾವಿಷ್ಣುವು ನರಸಿಂಹರೂಪವನ್ನು ಧರಿಸಿ ಹಿರಣ್ಯಕಶಿಪುವನ್ನೂ ಮತ್ತು ಪೃಥಿವಿಯನ್ನು ಉದ್ಧರಿಸುವ ಸಮಯದಲ್ಲಿ ವರಾಹ ಅವತಾರದಿಂದ ಹಿರಣ್ಯಾಕ್ಷನನ್ನೂ ಸಂಹರಿಸಿದನು. ॥40॥
(ಶ್ಲೋಕ-41)
ಮೂಲಮ್
ಹಿರಣ್ಯಕಶಿಪುಃ ಪುತ್ರಂ ಪ್ರಹ್ಲಾದಂ ಕೇಶವಪ್ರಿಯಮ್ ।
ಜಿಘಾಂಸುರಕರೋನ್ನಾನಾ ಯಾತನಾ ಮೃತ್ಯುಹೇತವೇ ॥
ಅನುವಾದ
ಹಿರಣ್ಯಕಶಿಪುವು ಭಗವತ್ಪ್ರೇಮಿಯಾಗಿದ್ದ ತನ್ನ ಪುತ್ರನಾದ ಪ್ರಹ್ಲಾದನನ್ನು ಕೊಲ್ಲಲು ಬಯಸಿದನು ಹಾಗೂ ಅದಕ್ಕಾಗಿ ಅವನಿಗೆ ಅನೇಕ ಕಷ್ಟಗಳನ್ನು ಕೊಟ್ಟನು. ॥41॥
(ಶ್ಲೋಕ-42)
ಮೂಲಮ್
ಸರ್ವಭೂತಾತ್ಮಭೂತಂ ತಂ ಪ್ರಶಾಂತಂ ಸಮದರ್ಶನಮ್ ।
ಭಗವತ್ತೇಜಸಾ ಸ್ಪೃಷ್ಟಂ ನಾಶಕ್ನೋದ್ಧಂತುಮುದ್ಯಮೈಃ ॥
ಅನುವಾದ
ಆದರೆ ಪ್ರಹ್ಲಾದನು ಸರ್ವಾತ್ಮನಾದ ಭಗವಂತನಿಗೆ ಪರಮ ಪ್ರಿಯನಾಗಿದ್ದನು, ಸಮದರ್ಶಿಯಾಗಿದ್ದನು. ಅವನ ಹೃದಯದಲ್ಲಿ ಕದಲಲಾರದ ಶಾಂತಿಯು ನೆಲೆಸಿತ್ತು. ಭಗವಂತನ ಪ್ರಭಾವದಿಂದ ಅವನು ಸುರಕ್ಷಿತನಾಗಿದ್ದನು. ಅದಕ್ಕಾಗಿ ಅನೇಕ ವಿಧದಿಂದ ಪ್ರಯತ್ನಿಸಿದರೂ ಹಿರಣ್ಯಕಶಿಪುವಿನಿಂದ ಆತನನ್ನು ಕೊಲ್ಲಲಾಗಲಿಲ್ಲ. ॥42॥
(ಶ್ಲೋಕ-43)
ಮೂಲಮ್
ತತಸ್ತೌ ರಾಕ್ಷಸೌ ಜಾತೌ ಕೇಶಿನ್ಯಾಂ ವಿಶ್ರವಃಸುತೌ ।
ರಾವಣಃ ಕುಂಭಕರ್ಣಶ್ಚ ಸರ್ವಲೋಕೋಪತಾಪನೌ ॥
ಅನುವಾದ
ಧರ್ಮನಂದನಾ! ಅವರಿಬ್ಬರೇ ಪುನಃ ವಿಶ್ರವಸ್ಸು ಮುನಿಯ ಮೂಲಕ ಕೇಶಿನೀ (ಕೈಕಸೆ)ಯ ಗರ್ಭದಿಂದ ರಾವಣ-ಕುಂಭಕರ್ಣರೆಂಬ ಹೆಸರುಗಳಿಂದ ರಾಕ್ಷಸರಾಗಿ ಹುಟ್ಟಿದರು. ಅವರು ತಮ್ಮ ಉತ್ಪಾತಗಳಿಂದ ಎಲ್ಲ ಲೋಕಗಳಿಗೂ ಕಂಟಕರಾಗಿ ಸಂತಾಪವನ್ನು ಹರಡಿದರು. ॥43॥
(ಶ್ಲೋಕ-44)
ಮೂಲಮ್
ತತ್ರಾಪಿ ರಾಘವೋ ಭೂತ್ವಾ ನ್ಯಹನಚ್ಛಾಪಮುಕ್ತಯೇ ।
ರಾಮವೀರ್ಯಂ ಶ್ರೋಷ್ಯಸಿ ತ್ವಂ ಮಾರ್ಕಂಡೇಯಮುಖಾತ್ಪ್ರಭೋ ॥
ಅನುವಾದ
ಆಗಲೂ ಭಗವಂತನು ಅವರನ್ನು ಶಾಪಮುಕ್ತಗೊಳಿಸಲು ರಾಮಾವತಾರವನ್ನು ಎತ್ತಿ ಅವರನ್ನು ವಧಿಸಿದನು. ನೀನು ಮುಂದೆ ಮಾರ್ಕಂಡೇಯ ಮಹರ್ಷಿಗಳ ಬಾಯಿಯಿಂದ ಭಗವಾನ್ ಶ್ರೀರಾಮನ ಚರಿತ್ರೆಯನ್ನು ಕೇಳುವೆ. ॥44॥
(ಶ್ಲೋಕ-45)
ಮೂಲಮ್
ತಾವೇವ ಕ್ಷತ್ರಿಯೌ ಜಾತೌ ಮಾತೃಷ್ವಸ್ರಾತ್ಮಜೌ ತವ ।
ಅಧುನಾ ಶಾಪನಿರ್ಮುಕ್ತೌ ಕೃಷ್ಣಚಕ್ರಹತಾಂಹಸೌ ॥
ಅನುವಾದ
ಆ ಜಯ-ವಿಜಯರಿಬ್ಬರೇ ಪುನಃ ಈ ಜನ್ಮದಲ್ಲಿ ನಿನ್ನ ಚಿಕ್ಕಮ್ಮನ ಪುತ್ರರಾಗಿ ಶಿಶುಪಾಲ ಮತ್ತು ದಂತವಕ್ತ್ರರಾಗಿ ಕ್ಷತ್ರಿಯಕುಲದಲ್ಲಿ ಜನಿಸಿದ್ದರು. ಭಗವಾನ್ ಶ್ರೀಕೃಷ್ಣನ ಚಕ್ರದ ಸ್ಪರ್ಶವಾಗುತ್ತಲೇ ಅವರ ಎಲ್ಲ ಪಾಪಗಳೂ ನಾಶವಾಗಿ, ಸನಕಾದಿಗಳ ಶಾಪದಿಂದ ಮುಕ್ತರಾದರು. ॥45॥
(ಶ್ಲೋಕ-46)
ಮೂಲಮ್
ವೈರಾನುಬಂಧತೀವ್ರೇಣ ಧ್ಯಾನೇನಾಚ್ಯುತಸಾತ್ಮತಾಮ್ ।
ನೀತೌ ಪುನರ್ಹರೇಃ ಪಾರ್ಶ್ವಂ ಜಗ್ಮತುರ್ವಿಷ್ಣುಪಾರ್ಷದೌ ॥
ಅನುವಾದ
ವೈರ ಭಾವದ ಕಾರಣ ನಿರಂತರವಾಗಿ ಅವರು ಭಗವಾನ್ ಶ್ರೀಕೃಷ್ಣನನ್ನು ಚಿಂತಿಸುತ್ತಾ ಇದ್ದರು. ಆ ತೀವ್ರವಾದ ತನ್ಮಯತೆಯಿಂದ ಅವರು ಭಗವಂತನನ್ನು ಸೇರಿದರು ಮತ್ತು ಪುನಃ ಅವನ ಪಾರ್ಷದರಾಗಿ ಅವನ ಬಳಿಗೇ ತಲುಪಿದರು. ॥46॥
(ಶ್ಲೋಕ-47)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ವಿದ್ವೇಷೋ ದಯಿತೇ ಪುತ್ರೇ ಕಥಮಾಸೀನ್ಮಹಾತ್ಮನಿ ।
ಬ್ರೂಹಿ ಮೇ ಭಗವನ್ಯೇನ ಪ್ರಹ್ಲಾದಸ್ಯಾಚ್ಯುತಾತ್ಮತಾ ॥
ಅನುವಾದ
ಯುಧಿಷ್ಠಿರನು ಕೇಳಿದನು — ಮಹಾತ್ಮರೇ! ಹಿರಣ್ಯಕಶಿಪುವು ತನ್ನ ಪ್ರಿಯಪುತ್ರನಾದ ಪ್ರಹ್ಲಾದನಲ್ಲಿ ಇಷ್ಟೊಂದು ದ್ವೇಷ ಏಕೆ ಮಾಡಿದನು? ಪ್ರಹ್ಲಾದನಾದರೋ ಮಹಾತ್ಮನಾಗಿದ್ದನು. ಜೊತೆಗೆ ಯಾವ ಸಾಧನೆಯಿಂದ ಪ್ರಹ್ಲಾದನು ಭಗವನ್ಮಯನಾದನು? ಇದನ್ನೂ ತಿಳಿಸಿರಿ.॥47॥
ಅನುವಾದ (ಸಮಾಪ್ತಿಃ)
ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಸಪ್ತಮ ಸ್ಕಂಧೇ ಪ್ರಹ್ಲಾದಚರಿತೋಪಕ್ರಮೇ ಪ್ರಥಮೋಽಧ್ಯಾಯಃ ॥1॥