೧೯

[ಹತ್ತೊಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಪುಂಸವನ ವ್ರತದ ವಿಧಿ

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ವ್ರತಂ ಪುಂಸವನಂ ಬ್ರಹ್ಮನ್ ಭವತಾ ಯದುದೀರಿತಮ್ ।
ತಸ್ಯ ವೇದಿತುಮಿಚ್ಛಾಮಿ ಯೇನ ವಿಷ್ಣುಃ ಪ್ರಸೀದತಿ ॥

ಅನುವಾದ

ಪರೀಕ್ಷಿತರಾಜನು ಕೇಳಿದನು — ಭಗವಂತರೇ! ತಾವು ಈಗ ಪುಂಸವನವ್ರತವನ್ನು ವರ್ಣಿಸಿದಿರಿ. ಇದರಿಂದ ಭಗವಾನ್ ವಿಷ್ಣುವು ಪ್ರಸನ್ನನಾಗುವನು ಎಂದೂ ಹೇಳಿದಿರಿ. ಈಗ ನಾನು ಅದರ ವಿಧಿಯನ್ನು ತಿಳಿಯಲು ಬಯಸುತ್ತಿದ್ದೇನೆ. ದಯಮಾಡಿ ತಿಳಿಸಿರಿ. ॥1॥

(ಶ್ಲೋಕ-2)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಶುಕ್ಲೇ ಮಾರ್ಗಶಿರೇ ಪಕ್ಷೇ ಯೋಷಿದ್ಭರ್ತುರನುಜ್ಞಯಾ ।
ಆರಭೇತ ವ್ರತಮಿದಂ ಸಾರ್ವಕಾಮಿಕಮಾದಿತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಈ ಪುಂಸವನವ್ರತವು ಸಮಸ್ತ ಕಾಮನೆಗಳನ್ನು ಈಡೇರಿಸುವಂತಹುದು. ಇದನ್ನು ಸ್ತ್ರೀಯರು ತಮ್ಮ-ತಮ್ಮ ಪತಿಗಳ ಅನುಮತಿಯನ್ನು ಪಡೆದು ಮಾರ್ಗಶಿರಮಾಸದ ಶುಕ್ಲಪಕ್ಷದ ಪ್ರತಿಪದೆಯಿಂದ ಪ್ರಾರಂಭಿಸಬೇಕು.॥2॥

(ಶ್ಲೋಕ-3)

ಮೂಲಮ್

ನಿಶಮ್ಯ ಮರುತಾಂ ಜನ್ಮ ಬ್ರಾಹ್ಮಣಾನನುಮಂತ್ರ್ಯ ಚ ।
ಸ್ನಾತ್ವಾ ಶುಕ್ಲದತೀ ಶುಕ್ಲೇ ವಸೀತಾಲಂಕೃತಾಂಬರೇ ।
ಪೂಜಯೇತ್ಪ್ರಾತರಾಶಾತ್ಪ್ರಾಗ್ಭಗವಂತಂ ಶ್ರಿಯಾ ಸಹ ॥

ಅನುವಾದ

ಮೊದಲಿಗೆ ಮಂಗಳಕರವಾದ ಮರುದ್ಗಣರ ಕಥೆಯನ್ನು ಕೇಳಿ, ಬ್ರಾಹ್ಮಣರಿಂದ ಅಪ್ಪಣೆ ಪಡೆದು ವ್ರತವನ್ನು ಪ್ರಾರಂಭಿಸಬೇಕು. ಪ್ರತಿದಿನವೂ ಬೆಳಿಗ್ಗೆ ಹಲ್ಲುಗಳನ್ನು ಉಜ್ಜಿತೊಳೆದು, ಸ್ನಾನಮಾಡಿ ಶುಭ್ರವಾದ ವಸ್ತ್ರಾಲಂಕಾರಗಳನ್ನು ಧರಿಸಬೇಕು. ಪ್ರಾತಃಕಾಲದಲ್ಲಿ ಏನನ್ನೂ ತಿನ್ನದೆಯೇ ಭಗವಾನ್ ಲಕ್ಷ್ಮೀನಾರಾಯಣರನ್ನು ಪೂಜೆ ಮಾಡಬೇಕು. ॥3॥

(ಶ್ಲೋಕ-4)

ಮೂಲಮ್

ಅಲಂ ತೇ ನಿರಪೇಕ್ಷಾಯ ಪೂರ್ಣಕಾಮ ನಮೋಸ್ತು ತೇ ।
ಮಹಾವಿಭೂತಿಪತಯೇ ನಮಃ ಸಕಲಸಿದ್ಧಯೇ ॥

ಅನುವಾದ

ಬಳಿಕ ಭಗವಂತನನ್ನು ಹೀಗೆ ಪ್ರಾರ್ಥಿಸಬೇಕು ಪ್ರಭೋ! ನೀನು ಪೂರ್ಣಕಾಮನು. ಆದ್ದರಿಂದ ನಿನಗೆ ಯಾರಿಂದಲೂ ಏನನ್ನೂ ಕೊಟ್ಟು-ಕೊಳ್ಳುವುದಿರುವುದಿಲ್ಲ. ನೀನು ಸಮಸ್ತ ವಿಭೂತಿಗಳಿಗೆ ಸ್ವಾಮಿಯೂ, ಸಕಲಸಿದ್ಧಿ ಸ್ವರೂಪನೂ ಆಗಿರುವೆ. ನಾನು ನಿನಗೆ ಮತ್ತೆ-ಮತ್ತೆ ನಮಸ್ಕರಿಸುತ್ತೇನೆ. ॥4॥

(ಶ್ಲೋಕ-5)

ಮೂಲಮ್

ಯಥಾ ತ್ವಂ ಕ್ವಪಯಾ ಭೂತ್ಯಾ ತೇಜಸಾ ಮಹಿನೌಜಸಾ ।
ಜುಷ್ಟ ಈಶ ಗುಣೈಃ ಸರ್ವೈಸ್ತತೋಸಿ ಭಗವಾನ್ಪ್ರಭುಃ ॥

ಅನುವಾದ

ಓ ನನ್ನ ಆರಾಧ್ಯದೇವನೇ! ನೀನು ಕೃಪೆ, ವಿಭೂತಿ, ತೇಜ, ಮಹಿಮೆ ಮತ್ತು ವೀರ್ಯ ಮುಂತಾದ ಸಕಲಗುಣಗಳಿಂದ ನಿತ್ಯಯುಕ್ತನಾಗಿರುವೆ. ಇವುಗಳಿಗೆ ಭಗವೆಂದು ಹೆಸರು. ಈ ಭಗಗಳಿಂದ ಕೂಡಿರುವುದರಿಂದ ನಿನ್ನನ್ನು ಭಗವಂತನೆಂದು ಹೇಳುತ್ತಾರೆ. ನೀನು ಸರ್ವಶಕ್ತನು. ॥5॥

(ಶ್ಲೋಕ-6)

ಮೂಲಮ್

ವಿಷ್ಣುಪತ್ನಿ ಮಹಾಮಾಯೇ ಮಹಾಪುರುಷಲಕ್ಷಣೇ ।
ಪ್ರೀಯೇಥಾ ಮೇ ಮಹಾಭಾಗೇ ಲೋಕಮಾತರ್ನಮೋಸ್ತು ತೇ ॥

ಅನುವಾದ

ಮಾತೆ ಮಹಾಲಕ್ಷ್ಮಿಯೇ! ನೀನು ಭಗವಂತನ ಅರ್ಧಾಂಗಿನಿಯಾಗಿದ್ದು ಮಹಾಮಾಯಾ ಸ್ವರೂಪಳಾಗಿದ್ದೀಯೆ. ಭಗವಂತನ ಸರ್ವಗುಣಗಳೂ ನಿನ್ನಲ್ಲಿವೆ. ಮಹಾಭಾಗ್ಯವತಿಯಾದ ಭಗವತಿಯೆ! ಜಗನ್ಮಾತೆಯೇ! ನನ್ನಲ್ಲಿ ಪ್ರಸನ್ನಳಾಗು. ನಿನಗೆ ಬಾರಿ-ಬಾರಿಗೂ ನಮಸ್ಕಾರಗಳು. ॥6॥

(ಶ್ಲೋಕ-7)

ಮೂಲಮ್

ಓಂ ನಮೋ ಭಗವತೇ ಮಹಾಪುರುಷಾಯ ಮಹಾನುಭಾವಾಯ ಮಹಾವಿಭೂತಿಪತಯೇ ಸಹ ಮಹಾವಿಭೂತಿಭಿರ್ಬಲಿಮುಪಹರಾಣೀತಿ ಅನೇನಾಹರಹರ್ಮಂತ್ರೇಣ ವಿಷ್ಣೋರಾವಾಹನಾರ್ಘ್ಯ-ಪಾದ್ಯೋಪಸ್ಪರ್ಶನಸ್ನಾನವಾಸಉಪವೀತವಿಭೂಷಣಗಂಧ ಪುಷ್ಪಧೂಪದೀಪೋಪಹಾರಾದ್ಯುಪಚಾರಾಂಶ್ಚ ಸಮಾಹಿತ ಉಪಾಹರೇತ್ ॥

ಅನುವಾದ

ಪರೀಕ್ಷಿತನೇ! ಹೀಗೆ ಸ್ತುತಿಮಾಡಿ ಏಕಾಗ್ರಚಿತ್ತದಿಂದ ‘ಓಂಕಾರ ಸ್ವರೂಪನೂ, ಮಹಾಪುರುಷನೂ, ಮಹಾನುಭಾವನೂ, ಮಹಾವಿಭೂತಿಗಳಿಂದ ಕೂಡಿರುವ ಸ್ವಾಮಿಯೂ, ಆದ ಶ್ರೀಭಗವಂತನಿಗೆ ಹಾಗೂ ಆತನ ಮಹಾವಿಭೂತಿಗಳಿಗೆ ನಮಸ್ಕಾರ ಮಾಡಿ ಅವರಿಗೆ ಪೂಜೋಪಹಾರ ಸಾಮಗ್ರಿಗಳನ್ನು ಸಮರ್ಪಿಸುತ್ತೇನೆ’ ಎಂಬ ಮಂತ್ರದ ಮೂಲಕ ಪ್ರತಿದಿನವೂ ಸ್ಥಿರವಾದ ಚಿತ್ತದಿಂದ ಭಗವಾನ್ ಶ್ರೀವಿಷ್ಣುವನ್ನು ಆವಾಹನ, ಅರ್ಘ್ಯ, ಪಾದ್ಯ, ಆಚಮನ, ಸ್ನಾನ, ವಸ್ತ್ರ, ಯಜ್ಞೋಪವೀತ, ಆಭೂಷಣ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯಗಳೇ ಮುಂತಾದ ಉಪಚಾರಗಳಿಂದ ಪೂಜಿಸಬೇಕು. ॥7॥

(ಶ್ಲೋಕ-8)

ಮೂಲಮ್

ಹವಿಃಶೇಷಂ ತು ಜುಹುಯಾದನಲೇ ದ್ವಾದಶಾಹುತೀಃ ।
ಓಂ ನಮೋ ಭಗವತೇ ಮಹಾಪುರುಷಾಯ ಮಹಾವಿಭೂತಿಪತಯೇ ಸ್ವಾಹೇತಿ ॥

ಅನುವಾದ

ಉಳಿದಿರುವ ನೈವೇದ್ಯದಿಂದ ‘ಓಂ ನಮೋ ಭಗವತೇ ಮಹಾಪುರುಷಾಯ ಮಹಾವಿಭೂತಿ ಪತಯೇ ಸ್ವಾಹಾ’ (ಮಹಾವಿಭೂತಿಗಳಿಗೆ ಅಧಿಪತಿಯಾದ ಭಗವಾನ್ ಪುರುಷೋತ್ತಮನಿಗೆ ನಮಸ್ಕರಿಸುತ್ತೇನೆ) ಎಂಬ ಮಂತ್ರವನ್ನು ಹೇಳಿ ಅಗ್ನಿಯಲ್ಲಿ ಹನ್ನೆರಡು ಆಹುತಿಗಳನ್ನು ಅರ್ಪಿಸಬೇಕು. ॥8॥

(ಶ್ಲೋಕ-9)

ಮೂಲಮ್

ಶ್ರೀಯಂ ವಿಷ್ಣುಂ ಚ ವರದಾವಾಶಿಷಾಂ ಪ್ರಭವಾವುಭೌ ।
ಭಕ್ತ್ಯಾ ಸಂಪೂಜಯೇನ್ನಿತ್ಯಂ ಯದಿಚ್ಛೇತ್ಸರ್ವಸಂಪದಃ ॥

ಅನುವಾದ

ಪರೀಕ್ಷಿದ್ರಾಜನೇ! ಎಲ್ಲ ಬಗೆಯ ಸಂಪತ್ತುಗಳನ್ನು ಬಯಸುವವನು ಪ್ರತಿದಿನವೂ ಭಕ್ತಿಭಾವದಿಂದ ಭಗವಾನ್ ಲಕ್ಷ್ಮೀನಾರಾಯಣರನ್ನು ಪೂಜೆ ಮಾಡಬೇಕು. ಏಕೆಂದರೆ, ಅವರಿಬ್ಬರೂ ಸಮಸ್ತ ಅಭಿಲಾಷೆಗಳನ್ನು ಈಡೇರಿಸುವವರು ಹಾಗೂ ಶ್ರೇಷ್ಠತಮರಾದ ವರದಾಯಕರು. ॥9॥

(ಶ್ಲೋಕ-10)

ಮೂಲಮ್

ಪ್ರಣಮೇದ್ದಂಡವದ್ಭೂವೌ ಭಕ್ತಿಪ್ರಹ್ವೇಣ ಚೇತಸಾ ।
ದಶವಾರಂ ಜಪೇನ್ಮಂತ್ರಂ ತತಃ ಸ್ತೋತ್ರಮುದೀರಯೇತ್ ॥

ಅನುವಾದ

ಅನಂತರ ಭಕ್ತಿಭಾವದಿಂದ ನಮ್ರವಾಗಿ ಶ್ರೀಭಗವಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಹಿಂದೆ ಹೇಳಿದ ಮಂತ್ರವನ್ನು ಹತ್ತುಬಾರಿ ಜಪಿಸಬೇಕು. ಮತ್ತೆ ಈ ಕೆಳಗಿನ ಸ್ತೋತ್ರವನ್ನು ಪಾರಾಯಣ ಮಾಡಬೇಕು. ॥10॥

(ಶ್ಲೋಕ-11)

ಮೂಲಮ್

ಯುವಾಂ ತು ವಿಶ್ವಸ್ಯ ವಿಭೂ ಜಗತಃ ಕಾರಣಂ ಪರಮ್ ।
ಇಯಂ ಹಿ ಪ್ರಕೃತಿಃ ಸೂಕ್ಷ್ಮಾ ಮಾಯಾಶಕ್ತಿರ್ದುರತ್ಯಯಾ ॥

ಅನುವಾದ

ಓ ಲಕ್ಷ್ಮೀನಾರಾಯಣರೇ! ನೀವಿಬ್ಬರೂ ಸರ್ವವ್ಯಾಪಕರೂ ಹಾಗೂ ಇಡೀ ಜಗತ್ತಿಗೆ ಮೂಲಕಾರಣರೂ ಆಗಿದ್ದೀರಿ. ಆದರೆ ನಿಮಗೆ ಬೇರೊಂದು ಕಾರಣವಿಲ್ಲ. ಭಗವಂತಾ! ಮಾತೆ ಲಕ್ಷ್ಮಿಯು ನಿನ್ನ ಮಾಯಾಶಕ್ತಿಯೇ ಆಗಿರುವಳು. ಅವಳು ಸ್ವಯಂ ಅವ್ಯಕ್ತ ಪ್ರಕೃತಿಯೂ ಆಗಿರುವಳು. ಅವಳನ್ನು ದಾಟುವುದು ಅತಿಕಷ್ಟವು. ॥11॥

(ಶ್ಲೋಕ-12)

ಮೂಲಮ್

ತಸ್ಯಾ ಅಧೀಶ್ವರಃ ಸಾಕ್ಷಾತ್ತ್ವಮೇವ ಪುರುಷಃ ಪರಃ ।
ತ್ವಂ ಸರ್ವಯಜ್ಞ ಇಜ್ಯೇಯಂ ಕ್ರಿಯೇಯಂ ಲಭುಗ್ಭವಾನ್ ॥

ಅನುವಾದ

ಪ್ರಭೋ! ನೀನು ಆ ಮಹಾಮಾಯೆಯ ಅಧೀಶ್ವರನಾಗಿರುವೆ ಮತ್ತು ನೀನು ಸ್ವಯಂ ಪರಮಪುರುಷನೂ ಆಗಿರುವೆ. ನೀನು ಸಮಸ್ತ ಯಜ್ಞಗಳೇ ಆಗಿದ್ದು ಅವಳು ಯಜ್ಞ ಕ್ರಿಯೆಯಾಗಿರುವಳು. ನೀನು ಫಲದ ಭೋಕ್ತಾ ಆಗಿದ್ದು, ಅವಳು ಅದನ್ನು ಉತ್ಪನ್ನಗೊಳಿಸುವ ಕ್ರಿಯೆಯಾಗಿದ್ದಾಳೆ. ॥12॥

(ಶ್ಲೋಕ-13)

ಮೂಲಮ್

ಗುಣವ್ಯಕ್ತಿರಿಯಂ ದೇವೀ ವ್ಯಂಜಕೋ ಗುಣಭುಗ್ಭವಾನ್ ।
ತ್ವಂ ಹಿ ಸರ್ವಶರೀರ್ಯಾತ್ಮಾ ಶ್ರೀಃ ಶರೀರೇಂದ್ರಿಯಾಶಯಾ ।
ನಾಮರೂಪೇ ಭಗವತೀ ಪ್ರತ್ಯಯಸ್ತ್ವಮಪಾಶ್ರಯಃ ॥

ಅನುವಾದ

ತಾಯಿಲಕ್ಷ್ಮಿಯು ಮೂರುಗುಣಗಳ ಅಭಿವ್ಯಕ್ತಿಯಾದರೆ, ನೀನು ಅವುಗಳನ್ನು ವ್ಯಕ್ತಗೊಳಿಸುವವನೂ, ಅವುಗಳ ಭೋಕ್ತೃವೂ ಆಗಿರುವೆ. ನೀನು ಸಮಸ್ತ ಪ್ರಾಣಿಗಳ ಆತ್ಮನಾಗಿರುವೆ ಮತ್ತು ಲಕ್ಷ್ಮೀದೇವಿಯು ಶರೀರ, ಇಂದ್ರಿಯಗಳು ಹಾಗೂ ಅಂತಃ ಕರಣವಾಗಿದ್ದಾಳೆ. ಮಾತೆಯಾದ ಲಕ್ಷ್ಮೀದೇವಿಯು ನಾಮ ಮತ್ತು ರೂಪವಾಗಿದ್ದರೆ, ನೀನು ನಾಮ-ರೂಪ ಎರಡರ ಪ್ರಕಾಶಕ ಹಾಗೂ ಆಧಾರನಾಗಿರುವೆ. ॥13॥

(ಶ್ಲೋಕ-14)

ಮೂಲಮ್

ಯಥಾ ಯುವಾಂ ತ್ರಿಲೋಕಸ್ಯ ವರದೌ ಪರಮೇಷ್ಠಿನೌ ।
ತಥಾ ಮ ಉತ್ತಮಶ್ಲೋಕ ಸಂತು ಸತ್ಯಾ ಮಹಾಶಿಷಃ ॥

ಅನುವಾದ

ಪ್ರಭೋ! ನಿನ್ನ ಕೀರ್ತಿಯು ಪವಿತ್ರವಾದುದು. ನೀವಿಬ್ಬರೂ ಮೂರು ಲೋಕಗಳಿಗೂ ವರದಾಯಕರಾದ ಪರಮೇಶ್ವರರಾಗಿರುವಿರಿ. ಆದ್ದರಿಂದ ನನ್ನ ದೊಡ್ಡ-ದೊಡ್ಡ ಆಸೆ-ಆಕಾಂಕ್ಷೆಗಳೆಲ್ಲವೂ ನಿಮ್ಮ ಕೃಪೆಯಿಂದ ಈಡೇರಲಿ. ॥14॥

(ಶ್ಲೋಕ-15)

ಮೂಲಮ್

ಇತ್ಯಭಿಷ್ಟೂಯ ವರದಂ ಶ್ರೀನಿವಾಸಂ ಶ್ರಿಯಾ ಸಹ ।
ತನ್ನಿಃಸಾರ್ಯೋಪಹರಣಂ ದತ್ತ್ವಾಚಮನಮರ್ಚಯೇತ್ ॥

ಅನುವಾದ

ಮಹಾರಾಜ ಪರೀಕ್ಷಿತನೇ! ಹೀಗೆ ಪರಮ ವರಪ್ರದರಾದ ಲಕ್ಷ್ಮೀನಾರಾಯಣರನ್ನು ಸ್ತೋತ್ರಮಾಡಿ, ನೈವೇದ್ಯವನ್ನು ತೆಗೆದಿಟ್ಟು, ಆಚಮನ ಮಾಡಿ ದೇವದೇವಿಯರನ್ನು ಪೂಜಿಸಬೇಕು. ॥15॥

(ಶ್ಲೋಕ-16)

ಮೂಲಮ್

ತತಃ ಸ್ತುವೀತ ಸ್ತೋತ್ರೇಣ ಭಕ್ತಿಪ್ರಹ್ವೇಣ ಚೇತಸಾ ।
ಯಜ್ಞೋಚ್ಛಿಷ್ಟಮವಘ್ರಾಯ ಪುನರಭ್ಯರ್ಚಯೇದ್ಧರಿಮ್ ॥

ಅನುವಾದ

ಅನಂತರ ಭಕ್ತಿಭರಿತವಾದ ಹೃದಯದಿಂದ ಭಗವಂತನನ್ನು ಸ್ತುತಿಸುತ್ತಾ, ಯಜ್ಞಾವಶೇಷವನ್ನು ಮೂಸಿನೋಡಿ ಪುನಃ ಭಗವಂತನನ್ನು ಪೂಜಿಸಬೇಕು. ॥16॥

(ಶ್ಲೋಕ-17)

ಮೂಲಮ್

ಪತಿಂ ಚ ಪರಯಾ ಭಕ್ತ್ಯಾ ಮಹಾಪುರುಷಚೇತಸಾ ।
ಪ್ರಿಯೈಸ್ತೈಸ್ತೈರುಪನಮೇತ್ ಪ್ರೇಮಶೀಲಃ ಸ್ವಯಂ ಪತಿಃ ।
ಬಿಭೃಯಾತ್ಸರ್ವಕರ್ಮಾಣಿ ಪತ್ನ್ಯಾ ಉಚ್ಚಾವಚಾನಿ ಚ ॥

ಅನುವಾದ

ಭಗವಂತನ ಪೂಜೆಯ ಬಳಿಕ ತನ್ನ ಪತಿಯನ್ನೇ ಸಾಕ್ಷಾತ್ ಭಗವಂತನೆಂದು ತಿಳಿದು ಪರಮಪ್ರೇಮದಿಂದ ಅವನ ಪ್ರಿಯವಾದ ವಸ್ತುಗಳನ್ನು ಸೇವಾರೂಪದಲ್ಲಿ ಸಮರ್ಪಿಸಬೇಕು. ಹಾಗೆಯೇ ತನ್ನ ಪತ್ನಿಗೆ ಪ್ರಿಯವಾದ ಪದಾರ್ಥಗಳನ್ನು ತಂದು ಆಕೆಗೆ ಕೊಡುವುದು ಮತ್ತು ಆಕೆಯ ಸಣ್ಣ-ಪುಟ್ಟ ಎಲ್ಲರೀತಿಯ ಕೆಲಸಗಳನ್ನು ಮಾಡಿಕೊಡುವುದು ಪತಿಯ ಕರ್ತವ್ಯವಾಗಿದೆ. ॥17॥

(ಶ್ಲೋಕ-18)

ಮೂಲಮ್

ಕೃತಮೇಕತರೇಣಾಪಿ ದಂಪತ್ಯೋರುಭಯೋರಪಿ ।
ಪತ್ನ್ಯಾಂ ಕುರ್ಯಾದನರ್ಹಾಯಾಂ ಪತಿರೇತತ್ಸಮಾಹಿತಃ ॥

ಅನುವಾದ

ಪರೀಕ್ಷಿತನೇ! ಪತಿ-ಪತ್ನಿಯರಲ್ಲಿ ಯಾರಾದರೊಬ್ಬರು ಯಾವುದೇ ಕೆಲಸ ಮಾಡಿದರೆ ಅದರ ಫಲವು ಇಬ್ಬರಿಗೂ ಉಂಟಾಗುವುದು. ಅದಕ್ಕಾಗಿ ಪತ್ನಿಯು ಅನಿವಾರ್ಯ ಕಾರಣದಿಂದ ಈ ವ್ರತವನ್ನು ಮಾಡಲು ಅಯೋಗ್ಯಳಾದಾಗ ಪತಿಯೇ ಏಕಾಗ್ರಚಿತ್ತದಿಂದ ಇದನ್ನು ಅನುಷ್ಠಾನಮಾಡಬೇಕು. ॥18॥

(ಶ್ಲೋಕ-19)

ಮೂಲಮ್

ವಿಷ್ಣೋರ್ವ್ರತಮಿದಂ ಬಿಭ್ರನ್ ನ ವಿಹನ್ಯಾತ್ಕಥಂಚನ ।
ವಿಪ್ರಾನ್ ಸಿಯೋ ವೀರವತೀಃ ಸ್ರಗ್ಗಂಧಬಲಿಮಂಡನೈಃ ।
ಅರ್ಚೇದಹರಹರ್ಭಕ್ತ್ಯಾ ದೇವಂ ನಿಯಮಮಾಸ್ಥಿತಃ ॥

ಅನುವಾದ

ಇದು ಭಗವಾನ್ ವಿಷ್ಣುವಿನ ವ್ರತವಾಗಿದೆ. ಇದನ್ನು ಮಾಡಲು ನಿಯಮವನ್ನು ಸ್ವೀಕರಿಸಿದ ಬಳಿಕ ನಡುವಿನಲ್ಲಿ ಎಂದೂ ಬಿಡಬಾರದು. ಈ ನಿಯಮವನ್ನು ಸ್ವೀಕರಿಸಿದವನು ಪ್ರತಿದಿನವೂ ಮಾಲೆ, ಗಂಧ, ನೈವೇದ್ಯ, ಆಭೂಷಣ ಮುಂತಾದವುಗಳಿಂದ ಭಕ್ತಿಪೂರ್ವಕವಾಗಿ ಬ್ರಾಹ್ಮಣ-ಸುವಾಸಿನಿಯರನ್ನು ಪೂಜಿಸಿ, ಭಗವಾನ್ ವಿಷ್ಣುವನ್ನೂ ಪೂಜಿಸಬೇಕು. ॥19॥

(ಶ್ಲೋಕ-20)

ಮೂಲಮ್

ಉದ್ವಾಸ್ಯ ದೇವಂ ಸ್ವೇ ಧಾಮ್ನಿ ತನ್ನಿವೇದಿತಮಗ್ರತಃ ।
ಅದ್ಯಾದಾತ್ಮವಿಶುದ್ಧ್ಯರ್ಥಂ ಸರ್ವಕಾಮರ್ಧಯೇ ತಥಾ ॥

ಅನುವಾದ

ಅದಾದನಂತರ ಶ್ರೀಭಗವಂತನನ್ನು ಅವನ ಧಾಮಕ್ಕೆ ಬಿಜಯಮಾಡಿಸಿ ಉದ್ವಾಸನೆ ಮಾಡಬೇಕು. ಬಳಿಕ ಆತ್ಮಶುದ್ಧಿಗಾಗಿ ಮತ್ತು ಸಮಸ್ತ ಅಭಿಲಾಷೆಗಳ ಪೂರ್ತಿಗಾಗಿ ಮೊದಲೇ ಅವನಿಗೆ ನೈವೇದ್ಯಮಾಡಿದ ಪ್ರಸಾದವನ್ನು ಸೇವಿಸಬೇಕು. ॥20॥

(ಶ್ಲೋಕ-21)

ಮೂಲಮ್

ಏತೇನ ಪೂಜಾವಿಧಿನಾ ಮಾಸಾನ್ದ್ವಾದಶ ಹಾಯನಮ್ ।
ನೀತ್ವಾಥೋಪಚರೇತ್ಸಾಧ್ವೀ ಕಾರ್ತಿಕೇ ಚರಮೇಹನಿ ॥

ಅನುವಾದ

ಸಾಧ್ವಿಯಾದ ಪತ್ನಿಯು ಈ ವಿಧಿಯಂತೆ ಹನ್ನೆರಡು ತಿಂಗಳಕಾಲ (ಒಂದು ವರ್ಷ) ಈ ವ್ರತವನ್ನು ಆಚರಣೆ ಮಾಡಿ ಕಾರ್ತಿಕ ಮಾಸದ ಅಮಾವಾಸ್ಯೆಗೆ ಉದ್ಯಾಪನ ಸಂಬಂಧೀ ಉಪವಾಸ ಮತ್ತು ಪೂಜನಾದಿಗಳನ್ನು ಮಾಡಬೇಕು. ॥21॥

(ಶ್ಲೋಕ-22)

ಮೂಲಮ್

ಶ್ವೋಭೂತೇಪ ಉಪಸ್ಪೃಶ್ಯ ಕೃಷ್ಣಮಭ್ಯರ್ಚ್ಯ ಪೂರ್ವವತ್ ।
ಪಯಃಶೃತೇನ ಜುಹುಯಾಚ್ಚರುಣಾ ಸಹ ಸರ್ಪಿಷಾ ।
ಪಾಕಯಜ್ಞವಿಧಾನೇನ ದ್ವಾದಶೈವಾಹುತೀಃ ಪತಿಃ ॥

ಅನುವಾದ

ಅಂದು ಪ್ರಾತಃ ಕಾಲವೇ ಸ್ನಾನಮಾಡಿ ಹಿಂದಿನಂತೆ ಭಗವಾನ್ ವಿಷ್ಣುವನ್ನು ಪೂಜಿಸಬೇಕು. ಅವಳ ಪತಿಯು ಪಾಕಯಜ್ಞದ ವಿಧಿಯಂತೆ ತುಪ್ಪಬೆರೆಸಿದ ಪಾಯಸಾನ್ನದಿಂದ ಅಗ್ನಿಯಲ್ಲಿ ಹನ್ನೆರಡು ಆಹುತಿಗಳನ್ನು ಕೊಡಬೇಕು. ॥22॥

(ಶ್ಲೋಕ-23)

ಮೂಲಮ್

ಆಶಿಷಃ ಶಿರಸಾದಾಯ ದ್ವಿಜೈಃ ಪ್ರೀತೈಃ ಸಮೀರಿತಾಃ ।
ಪ್ರಣಮ್ಯ ಶಿರಸಾ ಭಕ್ತ್ಯಾ ಭುಂಜೀತ ತದನುಜ್ಞಯಾ ॥

ಅನುವಾದ

ಇದಾದ ಬಳಿಕ ಬ್ರಾಹ್ಮಣರು ಪ್ರಸನ್ನರಾಗಿ ಆಶೀರ್ವಾದಗಳನ್ನೂ ಕೊಟ್ಟರೆ, ಬಹಳ ಆದರದಿಂದ ತಲೆತಗ್ಗಿಸಿ ಅವನ್ನು ಸ್ವೀಕರಿಸಬೇಕು. ಭಕ್ತಿಭಾವದಿಂದ ಅವರ ಚರಣಗಳಲ್ಲಿ ತಲೆಯನ್ನಿಟ್ಟು ಅವರ ಅನುಜ್ಞೆಯನ್ನು ಪಡೆದು ಭೋಜನಮಾಡಬೇಕು.॥23॥

(ಶ್ಲೋಕ-24)

ಮೂಲಮ್

ಆಚಾರ್ಯಮಗ್ರತಃ ಕೃತ್ವಾ ವಾಗ್ಯತಃ ಸಹ ಬಂಧುಭಿಃ ।
ದದ್ಯಾತ್ಪತ್ನ್ಯೈ ಚರೋಃ ಶೇಷಂ ಸುಪ್ರಜಸ್ತ್ವಂ ಸುಸೌಭಗಮ್ ॥

ಅನುವಾದ

ಮೊದಲಿಗೆ ಆಚಾರ್ಯನಿಗೆ ಭೋಜನ ಮಾಡಿಸಬೇಕು. ಬಳಿಕ ಮೌನದಿಂದ ಬಂಧು-ಬಾಂಧವರೊಂದಿಗೆ ತಾನು ಭೋಜನ ಮಾಡಬೇಕು. ಇದಾದಬಳಿಕ ಹವನಮಾಡಿ ಮಿಕ್ಕಿದ ತುಪ್ಪವನ್ನು ಬೆರೆಸಿದ ಪಾಯಸಾನ್ನವನ್ನು ಪತ್ನಿಗೆ ಕೊಡಬೇಕು. ಆ ಪ್ರಸಾದವು ಸ್ತ್ರೀಯಳಿಗೆ ಸತ್ಪುತ್ರನನ್ನೂ, ಸೌಭಾಗ್ಯವನ್ನೂ ಅನುಗ್ರಹಿಸುವುದು. ॥24॥

(ಶ್ಲೋಕ-25)

ಮೂಲಮ್

ಏತಚ್ಚರಿತ್ವಾ ವಿಧಿವದ್ವ್ರತಂ ವಿಭೋ-
ರಭೀಪ್ಸಿತಾರ್ಥಂ ಲಭತೇ ಪುಮಾನಿಹ ।
ಸೀ ತ್ವೇತದಾಸ್ಥಾಯ ಲಭೇತ ಸೌಭಗಂ
ಶ್ರಿಯಂ ಪ್ರಜಾಂ ಜೀವಪತಿಂ ಯಶೋ ಗೃಹಮ್ ॥

ಅನುವಾದ

ಪರೀಕ್ಷಿತನೇ! ಭಗವಂತನ ಈ ಪುಂಸವನವ್ರತವನ್ನು ವಿಧಿವತ್ತಾಗಿ ಅನುಷ್ಠಾನ ಮಾಡುವ ಪುರುಷನಿಗೆ ಇಲ್ಲೇ ಅವನ ಅಭೀಷ್ಟ ವಸ್ತುವು ದೊರೆಯುತ್ತದೆ. ಸ್ತ್ರೀಯು ಈ ವ್ರತವನ್ನು ಪಾಲಿಸುವುದರಿಂದ ಸೌಭಾಗ್ಯ, ಸಂಪತ್ತು, ಸಂತಾನ, ಕೀರ್ತಿ, ಮನೆ ಎಲ್ಲವೂ ದೊರೆಯುತ್ತದೆ ಹಾಗೂ ಅವಳ ಪತಿಯು ದೀರ್ಘಾಯುವಾಗುತ್ತಾನೆ. ॥25॥

(ಶ್ಲೋಕ-28)

ಮೂಲಮ್

ಕನ್ಯಾ ಚ ವಿಂದೇತ ಸಮಗ್ರಲಕ್ಷಣಂ
ವರಂ ತ್ವವೀರಾ ಹತಕಿಲ್ಬಿಷಾ ಗತಿಮ್ ।
ಮೃತಪ್ರಜಾ ಜೀವಸುತಾ ಧನೇಶ್ವರೀ
ಸುದುರ್ಭಗಾ ಸುಭಗಾ ರೂಪಮಗ್ರ್ಯಮ್ ॥

(ಶ್ಲೋಕ-27)

ಮೂಲಮ್

ವಿಂದೇದ್ವಿರೂಪಾ ವಿರುಜಾ ವಿಮುಚ್ಯತೇ
ಯ ಆಮಯಾವೀಂದ್ರಿಯಕಲ್ಪದೇಹಮ್ ।
ಏತತ್ಪಠನ್ನಭ್ಯುದಯೇ ಚ ಕರ್ಮಣ್ಯ-
ನಂತತೃಪ್ತಿಃ ಪಿತೃದೇವತಾನಾಮ್ ॥

ಅನುವಾದ

ಈ ವ್ರತವನ್ನು ಅನುಷ್ಠಾನ ಮಾಡುವ ಕನ್ಯೆಯು ಸಮಸ್ತ ಶುಭ ಲಕ್ಷಣಗಳಿಂದ ಯುಕ್ತನಾದ ಪತಿಯನ್ನು ಪಡೆಯುತ್ತಾಳೆ. ವಿಧವೆಯು ಈ ವ್ರತದಿಂದ ಪಾಪರಹಿತಳಾಗಿ ವೈಕುಂಠಕ್ಕೆ ಹೋಗುತ್ತಾಳೆ. ಯಾರ ಮಕ್ಕಳು ಸಾಯುತ್ತಾ ಇರುತ್ತವೋ ಆ ಸ್ತ್ರೀಯು ಇದರ ಪ್ರಭಾವದಿಂದ ದೀರ್ಘಾಯುಸ್ಸುಳ್ಳ ಪುತ್ರರನ್ನು ಪಡೆಯುತ್ತಾಳೆ. ಐಶ್ವರ್ಯವಂತಳಾಗಿದ್ದರೂ ದುರದೃಷ್ಟಳಾದ ಹೆಂಗಸಿಗೆ ಸೌಭಾಗ್ಯವು ಉಂಟಾಗುತ್ತದೆ ಮತ್ತು ಕುರೂಪಿಯಾದವಳಿಗೆ ಶ್ರೇಷ್ಠವಾದ ರೂಪವು ಉಂಟಾಗುತ್ತದೆ. ರೋಗಿಯು ಈ ವ್ರತದ ಪ್ರಭಾವದಿಂದ ರೋಗದಿಂದ ಮುಕ್ತನಾಗುತ್ತಾನೆ, ಹಾಗೂ ಬಲಿಷ್ಠವಾದ ಶರೀರ ಮತ್ತು ಶ್ರೇಷ್ಠ ಇಂದ್ರಿಯಗಳ ಶಕ್ತಿ ಪಡೆಯುತ್ತಾನೆ. ಯಾರು ಮಾಂಗಲಿಕ ಶ್ರಾದ್ಧದಲ್ಲಿ ಇದನ್ನು ಪಾರಾಯಣೆ ಮಾಡುತ್ತಾನೋ ಅವನ ಪಿತೃಗಳು ಮತ್ತು ದೇವತೆಗಳು ಅನಂತವಾದ ತೃಪ್ತಿಯನ್ನು ಪಡೆಯುತ್ತಾರೆ. ॥26-27॥

(ಶ್ಲೋಕ-28)

ಮೂಲಮ್

ತುಷ್ಟಾಃ ಪ್ರಯಚ್ಛಂತಿ ಸಮಸ್ತಕಾಮಾನ್
ಹೋಮಾವಸಾನೇ ಹುತಭುಕ್ ಶ್ರೀರ್ಹರಿಶ್ಚ ।
ರಾಜನ್ಮಹನ್ಮರುತಾಂ ಜನ್ಮ ಪುಣ್ಯಂ
ದಿತೇರ್ವ್ರತಂ ಚಾಭಿಹಿತಂ ಮಹತ್ತೇ ॥

ಅನುವಾದ

ಅವರು ಸಂತುಷ್ಟರಾಗಿ ಹವನವು ಸಾಂಗವಾಗಿ ಮುಗಿದ ಬಳಿಕ ವ್ರತಿಯ ಸಮಸ್ತ ಇಚ್ಛೆಗಳನ್ನು ಪೂರ್ಣಗೊಳಿಸುತ್ತಾರೆ. ಇವರೆಲ್ಲರೂ ಸಂತುಷ್ಟರಾಗಿಯೇ ಆಗುತ್ತಾರೆ ಜೊತೆಗೆ ಸಮಸ್ತ ಯಜ್ಞಗಳ ಏಕಮಾತ್ರ ಭೋಕ್ತೃವಾಗಿರುವ ಭಗವಾನ್ ಲಕ್ಷ್ಮೀ-ನಾರಾಯಣರೂ ಸಂತುಷ್ಟರಾಗಿ ವ್ರತಿಯ ಎಲ್ಲ ಅಭಿಲಾಷೆಗಳನ್ನು ಪೂರ್ಣಗೊಳಿಸುತ್ತಾರೆ. ಪರೀಕ್ಷಿತನೇ! ನಾನು ನಿನಗೆ ಮರುದ್ಗಣರ ಆದರಣೀಯವೂ, ಪುಣ್ಯಪ್ರದವೂ ಆದ ಜನ್ಮ-ಕಥೆಯನ್ನು ಹೇಳಿದೆ ಹಾಗೂ ಜೊತೆಗೆ ದಿತಿಯ ಶ್ರೇಷ್ಠವಾದ ಪುಂಸವನ ವ್ರತವನ್ನೂ ವರ್ಣಿಸಿರುವೆನು.॥28॥

ಅನುವಾದ (ಸಮಾಪ್ತಿಃ)

ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥19॥
ಆರನೆಯ ಸ್ಕಂಧವು ಸಂಪೂರ್ಣವಾಯಿತು.
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಪುಂಸವನವ್ರತ ಕಥನಂ ನಾಮೈಕೋನವಿಂಶೋಽಧ್ಯಾಯಃ ॥19॥
ಆರನೆಯ ಸ್ಕಂಧವು ಸಂಪೂರ್ಣವಾಯಿತು.