೧೮

[ಹದಿನೆಂಟನೆಯ ಅಧ್ಯಾಯ]

ಭಾಗಸೂಚನಾ

ಅದಿತಿ ಮತ್ತು ದಿತಿ ಇವರ ಸಂತಾನಗಳು ಮತ್ತು ಮರುದ್ಗಣಗಳ ಉತ್ಪತ್ತಿಯ ವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಪೃಶ್ನಿಸ್ತು ಪತ್ನೀ ಸವಿತುಃ
ಸಾವಿತ್ರೀಂ ವ್ಯಾಹೃತಿಂ ತ್ರಯೀಮ್ ।
ಅಗ್ನಿಹೋತ್ರಂ ಪಶುಂ ಸೋಮಂ
ಚಾತುರ್ಮಾಸ್ಯಂ ಮಹಾಮಖಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿ ದ್ರಾಜನೇ! ಸವಿತೃದೇವತೆಯ ಪತ್ನಿಯಾದ ಪ್ರಶ್ನಿದೇವಿಯು ಸಾವಿತ್ರೀ, ವ್ಯಾಹೃತಿ, ತ್ರಯೀ, ಅಗ್ನಿಹೋತ್ರ, ಪಶು, ಸೋಮ, ಚಾತುರ್ಮಾಸ್ಯ ಮತ್ತು ಪಂಚಮಹಾಯಜ್ಞ ಎಂಬ ಎಂಟು ಮಂದಿ ಮಕ್ಕಳನ್ನು ಪಡೆದಳು. ॥1॥

(ಶ್ಲೋಕ-2)

ಮೂಲಮ್

ಸಿದ್ಧಿರ್ಭಗಸ್ಯ ಭಾರ್ಯಾಂಗ ಮಹಿಮಾನಂ ವಿಭುಂ ಪ್ರಭುಮ್ ।
ಆಶಿಷಂ ಚ ವರಾರೋಹಾಂ ಕನ್ಯಾಂ ಪ್ರಾಸೂತ ಸುವ್ರತಾಮ್ ॥

ಅನುವಾದ

ಭಗದೇವತೆಯ ಪತ್ನಿಯಾದ ಸಿದ್ಧಿಯಲ್ಲಿ ಮಹಿಮಾ, ವಿಭು, ಪ್ರಭು ಎಂಬ ಮೂವರು ಪುತ್ರರೂ ‘ಆಶಿಷ್’ ಎಂಬ ಸುಂದರಿಯೂ ಸದಾ ಚಾರಿಣಿಯೂ ಆದ ಒಬ್ಬಳು ಪುತ್ರಿಯೂ ಜನಿಸಿದರು. ॥2॥

(ಶ್ಲೋಕ-3)

ಮೂಲಮ್

ಧಾತುಃ ಕುಹೂಃ ಸಿನೀವಾಲೀ ರಾಕಾ ಚಾನುಮತಿಸ್ತಥಾ ।
ಸಾಯಂ ದರ್ಶಮಥ ಪ್ರಾತಃ ಪೂರ್ಣಮಾಸಮನುಕ್ರಮಾತ್ ॥

ಅನುವಾದ

ಧಾತೃದೇವತೆಗೆ ಕುಹೂ, ಸಿನಿವಾಲೀ, ರಾಕಾ, ಅನುಮತಿ ಎಂಬ ನಾಲ್ವರು ಪತ್ನಿಯರಿದ್ದರು. ಅವರಲ್ಲಿ ಕ್ರಮವಾಗಿ ಸಾಯಂಕಾಲ, ದರ್ಶ, ಪ್ರಾತಃಕಾಲ, ಪೂರ್ಣ ಮಾಸರೆಂಬ ನಾಲ್ವರು ಪುತ್ರರು ಹುಟ್ಟಿದರು. ॥3॥

ಮೂಲಮ್

(ಶ್ಲೋಕ-4)
ಅಗ್ನೀನ್ಪುರೀಷ್ಯಾನಾಧತ್ತ ಕ್ರಿಯಾಯಾಂ ಸಮನಂತರಃ ।
ಚರ್ಷಣೀ ವರುಣಸ್ಯಾಸೀದ್ಯಸ್ಯಾಂ ಜಾತೋ ಭೃಗುಃ ಪುನಃ ॥

ಅನುವಾದ

ಧಾತೃವಿನ ತಮ್ಮನಿಗೆ ವಿಧಾತಾ ಎಂದು ಹೆಸರು. ಅವನ ಪತ್ನಿಯು ಕ್ರಿಯೆ. ಅವಳಿಂದ ಪುರೀಷ್ಯ ಎಂಬ ಐದು ಅಗ್ನಿಗಳ ಉತ್ಪತ್ತಿಯಾಯಿತು. ವರುಣದೇವರ ಪತ್ನಿಯ ಹೆಸರು ಚರ್ಷಣೀ. ಆಕೆಯಲ್ಲಿ ಭೃಗುಮಹರ್ಷಿಗಳು ಪುನಃ ಜನ್ಮವನ್ನು ಪಡೆದರು. ಅದಕ್ಕೆ ಮೊದಲು ಅವರು ಬ್ರಹ್ಮದೇವರ ಪುತ್ರರಾಗಿದ್ದರು. ॥4॥

(ಶ್ಲೋಕ-5)

ಮೂಲಮ್

ವಾಲ್ಮೀಕಿಶ್ಚ ಮಹಾಯೋಗೀ ವಲ್ಮೀಕಾದಭವತ್ಕಿಲ ।
ಅಗಸ್ತ್ಯಶ್ಚ ವಸಿಷ್ಠಶ್ಚ ಮಿತ್ರಾವರುಣಯೋರ್ಋಷೀ ॥

(ಶ್ಲೋಕ-6)

ಮೂಲಮ್

ರೇತಃ ನಿಷಿಚತುಃ ಕುಂಭೇ ಊರ್ವಶ್ಯಾಃ ಸನ್ನಿಧೌ ದ್ರುತಮ್ ।
ರೇವತ್ಯಾಂ ಮಿತ್ರ ಉತ್ಸರ್ಗಮರಿಷ್ಟಂ ಪಿಪ್ಪಲಂ ವ್ಯಧಾತ್ ॥

ಅನುವಾದ

ಮಹಾಯೋಗಿಗಳಾದ ವಾಲ್ಮೀಕಿ ಗಳೂ ಕೂಡ ವರುಣನ ಪುತ್ರರೇ ಆಗಿದ್ದರು. ಹುತ್ತ (ವಲ್ಮೀಕ) ದಿಂದ ಹುಟ್ಟಿದ್ದರಿಂದ ಅವರ ಹೆಸರು ವಾಲ್ಮೀಕಿ ಎಂದಾಯಿತು. ಊರ್ವಶಿಯನ್ನು ಕಂಡು ಮಿತ್ರ ಮತ್ತು ವರುಣ ದೇವತೆಗಳಿಬ್ಬರಿಗೂ ವೀರ್ಯಸ್ಖಲನವಾಯಿತು. ಆ ವೀರ್ಯವನ್ನು ಅವರು ಒಂದು ಗಡಿಗೆಯಲ್ಲಿರಿಸಿದರು. ಅದರಿಂದಲೇ ಮುನಿಶ್ರೇಷ್ಠರಾದ ಅಗಸ್ತ್ಯರ ಮತ್ತು ವಸಿಷ್ಠರ ಜನನವಾಯಿತು. ಮಿತ್ರದೇವತೆಯ ಪತ್ನಿಯು ರೇವತೀ. ಆಕೆಯಲ್ಲಿ ಉತ್ಸರ್ಗ, ಅರಿಷ್ಟ, ಪಿಪ್ಪಲ ಎಂಬ ಮೂವರು ಪುತ್ರರು ಉದಿಸಿದರು. ॥5-6॥

(ಶ್ಲೋಕ-7)

ಮೂಲಮ್

ಪೌಲೋಮ್ಯಾಮಿಂದ್ರ ಆಧತ್ತ ತ್ರೀನ್ಪುತ್ರಾನಿತಿ ನಃ ಶ್ರುತಮ್ ।
ಜಯಂತಮೃಷಭಂ ತಾತ ತೃತೀಯಂ ಮೀಢುಷಂ ಪ್ರಭುಃ ॥

ಅನುವಾದ

ಪ್ರಿಯ ಪರೀಕ್ಷಿತನೇ! ಇಂದ್ರದೇವರ ಪತ್ನಿಯು ಪುಲೋಮನ ಪುತ್ರಿಯಾದ ಶಚೀದೇವಿಯು. ಅವಳಲ್ಲಿ ಜಯಂತ, ಋಷಭ, ಮೀಢ್ವಾನ್ ಎಂಬ ಮೂವರು ಪುತ್ರರು ಹುಟ್ಟಿದರೆಂದು ನಾವು ಕೇಳಿದ್ದೇವೆ. ॥7॥

(ಶ್ಲೋಕ-8)

ಮೂಲಮ್

ಉರುಕ್ರಮಸ್ಯ ದೇವಸ್ಯ ಮಾಯಾವಾಮನರೂಪಿಣಃ ।
ಕೀರ್ತೌ ಪತ್ನ್ಯಾಂ ಬೃಹಚ್ಛ್ಲೋಕಸ್ತಸ್ಯಾಸನ್ಸೌಭಗಾದಯಃ ॥

ಅನುವಾದ

ಸ್ವಯಂ ಭಗವಾನ್ ವಿಷ್ಣುವೇ (ಬಲಿಯ ಮೇಲೆ ಅನುಗ್ರಹವನ್ನು ತೋರಲು ಮತ್ತು ಇಂದ್ರನ ರಾಜ್ಯವನ್ನು ಮರಳಿ ಪಡೆಯಲಿಕ್ಕಾಗಿ) ಮಾಯೆಯಿಂದ ವಾಮನ (ಉಪೇಂದ್ರ) ರೂಪದಿಂದ ಅವತರಿಸಿದ್ದನು. ಅವನು ಮೂರು ಹೆಜ್ಜೆ ಭೂಮಿಯನ್ನು ಬೇಡಿ, ಮೂರು ಲೋಕಗಳನ್ನೂ ಅಳೆದು ಬಿಟ್ಟಿದ್ದನು. ಅವನಿಗೆ ‘ಕೀರ್ತಿ’ ಎಂಬ ಪತ್ನಿಯಿದ್ದಳು. ಅವಳಲ್ಲಿ ಬೃಹಚ್ಛ್ಲೋಕ ಎಂಬ ಪುತ್ರನು ಜನಿಸಿದನು. ಆ ಬೃಹಚ್ಛ್ಲೋಕನಿಗೆ ಸೌಭಗನೇ ಮುಂತಾದ ಅನೇಕ ಮಂದಿ ಪುತ್ರರು ಹುಟ್ಟಿದರು. ॥8॥

(ಶ್ಲೋಕ-9)

ಮೂಲಮ್

ತತ್ಕರ್ಮಗುಣವೀರ್ಯಾಣಿ ಕಾಶ್ಯಪಸ್ಯ ಮಹಾತ್ಮನಃ ।
ಪಶ್ಚಾದ್ವಕ್ಷ್ಯಾಮಹೇದಿತ್ಯಾಂ ಯಥಾ ವಾವತತಾರ ಹ ॥

ಅನುವಾದ

ಕಶ್ಯಪನಂದನ ಭಗವಾನ್ ವಾಮನನು ತಾಯಿಯಾದ ಅದಿತಿಯ ಗರ್ಭದಿಂದ ಏಕೆ ಅವತರಿಸಿದನು. ಮತ್ತು ಈ ಅವತಾರದಲ್ಲಿ ಅವನು ಯಾವ-ಯಾವ ಗುಣಗಳನ್ನು ಲೀಲೆಗಳನ್ನು ಪರಾಕ್ರಮವನ್ನು ಪ್ರಕಟಿಸಿದನು. ಇದನ್ನು ನಾನು ಮುಂದೆ (ಎಂಟನೆಯ ಸ್ಕಂಧದಲ್ಲಿ) ವರ್ಣಿಸುವೆನು. ॥9॥

(ಶ್ಲೋಕ-10)

ಮೂಲಮ್

ಅಥ ಕಶ್ಯಪದಾಯಾದಾನ್ದೈತೇಯಾನ್ಕೀರ್ತಯಾಮಿ ತೇ ।
ಯತ್ರ ಭಾಗವತಃ ಶ್ರೀಮಾನ್ ಪ್ರಹ್ಲಾದೋ ಬಲಿರೇವ ಚ ॥

ಅನುವಾದ

ಪ್ರಿಯ ಪರೀಕ್ಷಿತನೇ! ಈಗ ನಾನು ಕಶ್ಯಪರ ಇನ್ನೊಬ್ಬ ಪತ್ನಿಯಾದ ದಿತಿದೇವಿಯಲ್ಲಿ ಉತ್ಪನ್ನವಾದ ಸಂತಾನ ಪರಂಪರೆಯನ್ನು ವರ್ಣಿಸುವೆನು ಕೇಳು. ಆ ವಂಶದಲ್ಲೇ ಭಗವಂತನ ಪ್ರಿಯಭಕ್ತ ಪ್ರಹ್ಲಾದನೂ ಮತ್ತು ಬಲಿಚಕ್ರವರ್ತಿಯೂ ಜನಿಸಿದ್ದರು. ॥10॥

(ಶ್ಲೋಕ-11)

ಮೂಲಮ್

ದಿತೇರ್ದ್ವಾವೇವ ದಾಯಾದೌ ದೈತ್ಯದಾನವವಂದಿತೌ ।
ಹಿರಣ್ಯಕಶಿಪುರ್ನಾಮ ಹಿರಣ್ಯಾಕ್ಷಶ್ಚ ಕೀರ್ತಿತೌ ॥

ಅನುವಾದ

ದಿತಿಗೆ ದೈತ್ಯ-ದಾನವರೆಲ್ಲರಿಂದಲೂ ವಂದನೀಯರಾದ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷ ಎಂಬ ಇಬ್ಬರು ಪುತ್ರರು ಹುಟ್ಟಿದರು. ಇವರ ಸಂಕ್ಷಿಪ್ತ ಕಥೆಯನ್ನು ನಾನು ನಿನಗೆ (ಮೂರನೆಯ ಸ್ಕಂಧದಲ್ಲಿ) ಹೇಳಿಬಿಟ್ಟಿರುವೆನು. ॥11॥

(ಶ್ಲೋಕ-12)

ಮೂಲಮ್

ಹಿರಣ್ಯಕಶಿಪೋರ್ಭಾರ್ಯಾ ಕಯಾಧುರ್ನಾಮ ದಾನವೀ ।
ಜಂಭಸ್ಯ ತನಯಾ ದತ್ತಾ ಸುಷುವೇ ಚತುರಃ ಸುತಾನ್ ॥

(ಶ್ಲೋಕ-13)

ಮೂಲಮ್

ಸಂಹ್ಲಾದಂ ಪ್ರಾಗನುಹ್ಲಾದಂ ಹ್ಲಾದಂ ಪ್ರಹ್ಲಾದಮೇವ ಚ ।
ತತ್ಸ್ವಸಾ ಸಿಂಹಿಕಾ ನಾಮ ರಾಹುಂ ವಿಪ್ರಚಿತೋಗ್ರಹೀತ್ ॥

ಅನುವಾದ

ಜಂಭ ದಾನವನು ತನ್ನ ಸುಪುತ್ರಿಯಾದ ಕಯಾಧು ವನ್ನು ಹಿರಣ್ಯಕಶಿಪುವಿಗೆ ಕೊಟ್ಟು ವಿವಾಹ ಮಾಡಿದನು. ಕಯಾಧುವಿನಲ್ಲಿ ಸಂಹ್ಲಾದ, ಅನುಹ್ಲಾದ, ಹ್ಲಾದ ಮತ್ತು ಪ್ರಹ್ಲಾದ ಎಂಬ ನಾಲ್ವರು ಪುತ್ರರು ಜನಿಸಿದರು. ಅವರ ಸೋದರಿಯಾದ ಸಿಂಹಿಕೆ ಎಂಬುವಳನ್ನು ವಿಪ್ರಚಿತ್ತಿ ಎಂಬ ದಾನವನು ಮದುವೆಯಾಗಿ, ಅವಳಲ್ಲಿ ರಾಹು ಎಂಬ ಪುತ್ರನನ್ನು ಪಡೆದಳು. ॥12-13॥

(ಶ್ಲೋಕ-14)

ಮೂಲಮ್

ಶಿರೋಹರದ್ಯಸ್ಯ ಹರಿಶ್ಚಕ್ರೇಣ ಪಿಬತೋಮೃತಮ್ ।
ಸಂಹ್ಲಾದಸ್ಯ ಕೃತಿರ್ಭಾರ್ಯಾಸೂತ ಪಂಚಜನಂ ತತಃ ॥

ಅನುವಾದ

ಅಮೃತಪಾನದ ಸಮಯದಲ್ಲಿ ಮೋಹಿನೀರೂಪಧಾರಿಯಾದ ಶ್ರೀಮಹಾವಿಷ್ಣುವು ಸುದರ್ಶನಚಕ್ರದಿಂದ ಕತ್ತರಿಸಿ ಹಾಕಿದ್ದು ಇದೇ ರಾಹುವಿನ ಶಿರಸ್ಸನ್ನು. ಸಂಹ್ಲಾದನ ಪತ್ನಿಯಾದ ಕೃತಿಯಲ್ಲಿ ಪಂಚಜನ ನೆಂಬ ಪುತ್ರನು ಹುಟ್ಟಿದನು. ॥14॥

(ಶ್ಲೋಕ-15)

ಮೂಲಮ್

ಹ್ಲಾದಸ್ಯ ಧಮನಿರ್ಭಾರ್ಯಾಸೂತ ವಾತಾಪಿಮಿಲ್ವಲಮ್ ।
ಯೋಗಸ್ತ್ಯಾಯ ತ್ವತಿಥಯೇ ಪೇಚೇ ವಾತಾಪಿಮಿಲ್ವಲಃ ॥

ಅನುವಾದ

ಹ್ಲಾದನ ಪತ್ನಿಯು ಧಮನಿ. ಆಕೆಯು ಇಲ್ವಲ ಮತ್ತು ವಾತಾಪಿ ಎಂಬ ಇಬ್ಬರು ಪುತ್ರರನ್ನು ಪಡೆದಳು. ಈ ಇಲ್ವಲನೇ ಮಹರ್ಷಿ ಅಗಸ್ತ್ಯರ ಆತಿಥ್ಯದಲ್ಲಿ ವಾತಾಪಿಯನ್ನು ಬೇಯಿಸಿ ತಿನ್ನಿಸಿದನೆಂಬುದು ಪ್ರಸಿದ್ಧವಾಗಿದೆ. ॥15॥

(ಶ್ಲೋಕ-16)

ಮೂಲಮ್

ಅನುಹ್ಲಾದಸ್ಯ ಸೂರ್ಮ್ಯಾಯಾಂ ಬಾಷ್ಕಲೋ ಮಹಿಷಸ್ತಥಾ ।
ವಿರೋಚನಸ್ತು ಪ್ರಾಹ್ಲಾದಿರ್ದೇವ್ಯಾಸ್ತಸ್ಯಾಭವದ್ಬಲಿಃ ॥

ಅನುವಾದ

ಅನುಹ್ಲಾದನ ಪತ್ನಿಯು ಸೂರ್ಮ್ಯಾ. ಆಕೆಯಲ್ಲಿ ಬಾಷ್ಕಲ ಮತ್ತು ಮಹಿಷಾಸುರ ಎಂಬ ಇಬ್ಬರು ಪುತ್ರರು ಹುಟ್ಟಿದರು. ಪ್ರಹ್ಲಾದನ ಪುತ್ರನು ವಿರೋಚನ. ಅವನ ಪತ್ನಿಯಾದದೇವಿ ಎಂಬುವಳಲ್ಲಿ ದೈತ್ಯರಾಜನಾದ ಬಲಿಚಕ್ರ ವರ್ತಿಯು ಜನಿಸಿದನು. ॥16॥

(ಶ್ಲೋಕ-17)

ಮೂಲಮ್

ಬಾಣಜ್ಯೇಷ್ಠಂ ಪುತ್ರಶತಮಶನಾಯಾಂ ತತೋಭವತ್ ।
ತಸ್ಯಾನುಭಾವಃ ಸುಶ್ಲೋಕ್ಯಃ ಪಶ್ಚಾದೇವಾಭಿಧಾಸ್ಯತೇ ॥

ಅನುವಾದ

ಬಲಿಯ ಪತ್ನಿಯ ಹೆಸರು ಅಶನಾ ಎಂದಿತ್ತು. ಅವಳಲ್ಲಿ ಬಾಣನೇ ಮುಂತಾದ ನೂರು ಪುತ್ರರಾದರು. ದೈತ್ಯರಾಜ ಬಲಿಯ ಮಹಿಮೆಯು ಗಾನಮಾಡಲು ಯೋಗ್ಯವಾಗಿದೆ. ಅದನ್ನು ನಾನು ಮುಂದೆ (ಎಂಟನೆಯ ಸ್ಕಂಧದಲ್ಲಿ) ಹೇಳುವೆನು. ॥17॥

(ಶ್ಲೋಕ-18)

ಮೂಲಮ್

ಬಾಣ ಆರಾಧ್ಯ ಗಿರಿಶಂ ಲೇಭೇ ತದ್ಗಣಮುಖ್ಯತಾಮ್ ।
ಯತ್ಪಾರ್ಶ್ವೇ ಭಗವಾನಾಸ್ತೇ ಹ್ಯದ್ಯಾಪಿ ಪುರಪಾಲಕಃ ॥

ಅನುವಾದ

ಬಲಿಪುತ್ರ ಬಾಣಾಸುರನು ಭಗವಾನ್ ಶಂಕರನನ್ನು ಆರಾಧಿಸಿ ಆತನ ಗಣಗಳಲ್ಲಿ ಮುಖ್ಯನಾದನು. ಇಂದೂ ಕೂಡ ಭಗವಾನ್ ಶಿವನು ಆತನ ನಗರವನ್ನು ರಕ್ಷಿಸಲಿಕ್ಕಾಗಿ ಆತನ ಬಳಿಯಲ್ಲೇ ಇರುತ್ತಾನೆ. ॥18॥

(ಶ್ಲೋಕ-19)

ಮೂಲಮ್

ಮರುತಶ್ಚ ದಿತೇಃ ಪುತ್ರಾಶ್ಚತ್ವಾರಿಂಶನ್ನವಾಧಿಕಾಃ ।
ತ ಆಸನ್ನಪ್ರಜಾಃ ಸರ್ವೇ ನೀತಾ ಇಂದ್ರೇಣ ಸಾತ್ಮತಾಮ್ ॥

ಅನುವಾದ

ದಿತಿಗೆ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಲ್ಲದೆ ಇನ್ನೂ ನಲವತ್ತೊಂಭತ್ತು ಮಂದಿ ಪುತ್ರರಿದ್ದರು. ಅವರನ್ನು ಮರುದ್ಗಣರೆಂದು ಕರೆಯುತ್ತಾರೆ. ಅವರೆಲ್ಲರೂ ಸಂತಾನ ಹೀನರಾಗಿದ್ದರು. ದೇವೇಂದ್ರನು ಅವರನ್ನು ತನ್ನಂತೆಯೇ ದೇವತೆಗಳನ್ನಾಗಿ ಮಾಡಿಕೊಂಡನು. ॥19॥

ಮೂಲಮ್

(ಶ್ಲೋಕ-20)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಕಥಂ ತ ಆಸುರಂ ಭಾವಮಪೋಹ್ಯೌತ್ಪತ್ತಿಕಂ ಗುರೋ
ಇಂದ್ರೇಣ ಪ್ರಾಪಿತಾಃ ಸಾತ್ಮ್ಯಂ ಕಿಂ ತತ್ಸಾಧು ಕೃತಂ ಹಿ ತೈಃ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹಾತ್ಮರೇ! ಮರುದ್ಗಣರು ತಮಗೆ ಹುಟ್ಟಿನಿಂದಲೇ ಬಂದಿದ್ದ ಅಸುರೋಚಿತವಾದ ಭಾವ ವನ್ನು ಬಿಟ್ಟು ದೇವೇಂದ್ರನಿಂದ ದೇವತೆಗಳು ಹೇಗಾದರು? ಅವರು ಅದಕ್ಕಾಗಿ ಯಾವ ಪುಣ್ಯವನ್ನು ಆಚರಿಸಿದರು? ॥20॥

(ಶ್ಲೋಕ-21)

ಮೂಲಮ್

ಇಮೇ ಶ್ರದ್ದಧತೇ ಬ್ರಹ್ಮನ್ನೃಷಯೋ ಹಿ ಮಯಾ ಸಹ ।
ಪರಿಜ್ಞಾನಾಯ ಭಗವಂಸ್ತನ್ನೋ ವ್ಯಾಖ್ಯಾತುಮರ್ಹಸಿ ॥

ಅನುವಾದ

ಬ್ರಾಹ್ಮಣೋತ್ತಮರೇ! ಈ ವಿಷಯವನ್ನು ತಿಳಿದುಕೊಳ್ಳಬೇಕೆಂದುನಾನಲ್ಲದೆ ಇಲ್ಲಿರುವ ಇತರ ಋಷಿಗಳ ಮಂಡಲಿಯೇ ಕುತೂಹಲಗೊಂಡಿದೆ. ದಯವಿಟ್ಟು ಆ ವೃತ್ತಾಂತವನ್ನು ವಿಸ್ತಾರವಾಗಿ ತಿಳಿಸಿರಿ. ॥21॥

(ಶ್ಲೋಕ-22)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ತದ್ವಿಷ್ಣುರಾತಸ್ಯ ಸ ಬಾದರಾಯಣಿ-
ರ್ವಚೋ ನಿಶಮ್ಯಾದೃತಮಲ್ಪಮರ್ಥವತ್ ।
ಸಭಾಜಯನ್ಸಂನಿಭೃತೇನ ಚೇತಸಾ
ಜಗಾದ ಸತ್ರಾಯಣ ಸರ್ವದರ್ಶನಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿಗಳೇ! ಪರೀಕ್ಷಿದ್ರಾಜನು ಅತ್ಯಾದರದಿಂದ ಕೇಳಿದ ಈ ಸಾರಗರ್ಭಿತವಾದ ಪ್ರಶ್ನೆಯನ್ನು ಕೇಳಿ ಸರ್ವಜ್ಞರಾದ ಶ್ರೀಶುಕಮಹರ್ಷಿಗಳು ಪ್ರಸನ್ನವಾದ ಚಿತ್ತದಿಂದ ಅವನನ್ನು ಅಭಿನಂದಿಸಿ ಹೀಗೆಂದರು. ॥22॥

(ಶ್ಲೋಕ-23)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಹತಪುತ್ರಾ ದಿತಿಃ ಶಕ್ರಪಾರ್ಷ್ಣಿಗ್ರಾಹೇಣ ವಿಷ್ಣುನಾ ।
ಮನ್ಯುನಾ ಶೋಕದೀಪ್ತೇನ ಜ್ವಲಂತೀ ಪರ್ಯಚಿಂತಯತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಮಹಾವಿಷ್ಣುವು ಇಂದ್ರನ ಪಕ್ಷವನ್ನುವಹಿಸಿ ದಿತಿಯ ಪುತ್ರರಾದ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಿಬ್ಬರನ್ನೂ ಸಂಹರಿಸಿದನು. ಇದರಿಂದ ದಿತಿಯು ಶೋಕಾಗ್ನಿಯಿಂದ ಉರಿದೆದ್ದು ಕ್ರೋಧದಿಂದ ಹೀಗೆ ಯೋಚಿಸ ತೊಡಗಿದಳು. ॥23॥

(ಶ್ಲೋಕ-24)

ಮೂಲಮ್

ಕದಾ ನು ಭ್ರಾತೃಹಂತಾರಮಿಂದ್ರಿಯಾರಾಮಮುಲ್ಬಣಮ್ ।
ಅಕ್ಲಿನ್ನ ಹೃದಯಂ ಪಾಪಂ ಘಾತಯಿತ್ವಾ ಶಯೇ ಸುಖಮ್ ॥

ಅನುವಾದ

ಈ ಇಂದ್ರನು ನಿಜವಾಗಿ ಭಾರೀ ವಿಷಯಿಯೂ, ಕ್ರೂರಿಯೂ, ನಿರ್ದಯಿಯೂ ಆಗಿದ್ದಾನೆ. ರಾಮ! ರಾಮಾ! ಅವನು ತನ್ನ ಸೋದರರನ್ನೇ ಕೊಲ್ಲಿಸಿ ಬಿಟ್ಟನು. ನಾನೂ ಆ ಪಾಪಿಯನ್ನು ಕೊಲ್ಲಿಸಿಯೇ ಸುಖವಾಗಿ ನಿದ್ರೆಮಾಡುವ ಕಾಲ ಎಂದು ಬರುವುದೋ? ॥24॥

(ಶ್ಲೋಕ-25)

ಮೂಲಮ್

ಕೃಮಿವಿಡ್ಭಸ್ಮಸಂಜ್ಞಾಸೀದ್ಯಸ್ಯೇಶಾಭಿಹಿತಸ್ಯ ಚ ।
ಭೂತಧ್ರುಕ್ತತ್ಕೃತೇ ಸ್ವಾರ್ಥಂ ಕಿಂ ವೇದ ನಿರಯೋ ಯತಃ ॥

ಅನುವಾದ

ಜನರು ರಾಜರ ಮತ್ತು ದೇವತೆಗಳ ಶರೀರವನ್ನು ಪ್ರಭು ಎಂದು ಹೇಳಿ ಕರೆಯುತ್ತಾರೆ. ಆದರೆ ಒಂದುದಿನ ಅದು ಹುಳು, ಮಲ ಅಥವಾ ಬೂದಿಯ ರಾಶಿಯಾಗಿ ಬಿಡುವುದು. ಆದುದರಿಂದ ಇತರ ಪ್ರಾಣಿಗಳನ್ನು ಗೋಳುಹೊಯ್ದುಕೊಳ್ಳುವವನಿಗೆ ತನ್ನ ನಿಜವಾದ ಸ್ವಾರ್ಥ ಅಥವಾ ಪರಮಾರ್ಥ ಯಾವುದೆಂಬುದು ಅರಿವಿರುವುದಿಲ್ಲ. ಆತನು ನರಕಕ್ಕೆ ಹೋಗಿಬೀಳುವನು. ॥25॥

(ಶ್ಲೋಕ-26)

ಮೂಲಮ್

ಆಶಾಸಾನಸ್ಯ ತಸ್ಯೇದಂ ಧ್ರುವಮುನ್ನದ್ಧಚೇತಸಃ ।
ಮದಶೋಷಕ ಇಂದ್ರಸ್ಯ ಭೂಯಾದ್ಯೇನ ಸುತೋ ಹಿ ಮೇ ॥

ಅನುವಾದ

ಇಂದ್ರನು ತನ್ನ ಶರೀರವನ್ನು ನಿತ್ಯವೆಂದು ತಿಳಿದು ಉನ್ಮತ್ತನಾಗಿರುವಂತೆ ನನಗೆ ಅನಿಸುತ್ತದೆ. ತನ್ನ ವಿನಾಶದ ಅರಿವೇ ಆತನಿಗೆ ಇಲ್ಲವಾಗಿದೆ. ಈಗ ನಾನು ಅವನ ಅಹಂಕಾರವನ್ನು ಮುರಿದು ಹಾಕುವಂತಹ ಪುತ್ರನನ್ನು ಪಡೆಯುವ ಉಪಾಯವನ್ನು ಮಾಡುವೆನು. ॥26॥

(ಶ್ಲೋಕ-27)

ಮೂಲಮ್

ಇತಿ ಭಾವೇನ ಸಾ ಭರ್ತುರಾಚಚಾರಾಸಕೃತ್ಪ್ರಿಯಮ್ ।
ಶುಶ್ರೂಷಯಾನುರಾಗೇಣ ಪ್ರಶ್ರಯೇಣ ದಮೇನ ಚ ॥

ಅನುವಾದ

ದಿತಿಯು ಮನಸ್ಸಿನಲ್ಲಿ ಹೀಗೆ ಯೋಚಿಸಿ, ಸೇವೆ, ಶುಶ್ರೂಷೆ, ನಯ, ವಿನಯ, ಪ್ರೇಮ ಮತ್ತು ಜಿತೇಂದ್ರಿಯತ್ವ ಮುಂತಾ ದವುಗಳ ಮೂಲಕ ನಿರಂತರ ತನ್ನ ಪತಿದೇವರಾದ ಕಶ್ಯಪರನ್ನು ಪ್ರಸನ್ನಗೊಳಿಸತೊಡಗಿದಳು. ॥27॥

(ಶ್ಲೋಕ-28)

ಮೂಲಮ್

ಭಕ್ತ್ಯಾ ಪರಮಯಾ ರಾಜನ್ಮನೋಜ್ಞೈರ್ವಲ್ಗುಭಾಷಿತೈಃ ।
ಮನೋ ಜಗ್ರಾಹ ಭಾವಜ್ಞಾ ಸುಸ್ಮಿತಾಪಾಂಗವೀಕ್ಷಣೈಃ ॥

ಅನುವಾದ

ಆಕೆಯು ಪತಿಯ ಹೃದಯದ ಒಂದೊಂದು ಭಾವವನ್ನೂ ಅರ್ಥ ಮಾಡಿಕೊಂಡು ಪರಮಪ್ರೇಮಭಾವದಿಂದಲೂ, ಸವಿಮಾತುಗಳಿಂದಲೂ, ಕಿರುನಗೆಯಿಂದ ಕೂಡಿದ ಕಡೆಗಣ್ಣ ನೋಟಗಳಿಂದಲೂ ಅವನ ಮನಸ್ಸನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದಳು. ॥28॥

(ಶ್ಲೋಕ-29)

ಮೂಲಮ್

ಏವಂ ಸಿಯಾ ಜಡೀಭೂತೋ ವಿದ್ವಾನಪಿ ವಿದಗ್ಧಯಾ ।
ಬಾಢಮಿತ್ಯಾಹ ವಿವಶೋ ನ ತಚ್ಚಿತ್ರಂ ಹಿ ಯೋಷಿತಿ ॥

ಅನುವಾದ

ಕಶ್ಯಪ ಮಹರ್ಷಿಗಳು ಮಹಾವಿದ್ವಾಂಸರೂ, ವಿಚಾರವಂತರೂ ಆಗಿದ್ದರೂ ಚತುರೆಯಾದ ದಿತಿಯ ಸೇವೆ-ಶುಶ್ರೂಷೆಯಿಂದ ಮೋಹಿತರಾಗಿ ನಿನ್ನ ಇಚ್ಛೆಯನ್ನು ನಾನು ಈಡೇರಿಸುವೆನು’ ಎಂದು ಮಾತುಕೊಟ್ಟರು. ಹೆಂಗಸರು ಹೀಗೆಲ್ಲ ಪತಿಯನ್ನು ಮೋಹಗೊಳಿಸಿ ವಶಪಡಿಸಿಕೊಳ್ಳುವುದು ಆಶ್ಚರ್ಯವೇನೂ ಅಲ್ಲ. ॥29॥

(ಶ್ಲೋಕ-30)

ಮೂಲಮ್

ವಿಲೋಕ್ಯೈಕಾಂತಭೂತಾನಿ ಭೂತಾನ್ಯಾದೌ ಪ್ರಜಾಪತಿಃ ।
ಸಿಯಂ ಚಕ್ರೇ ಸ್ವದೇಹಾರ್ಧಂ ಯಯಾ ಪುಂಸಾಂ ಮತಿರ್ಹೃತಾ ॥

ಅನುವಾದ

ಸೃಷ್ಟಿಯ ಪ್ರಾರಂಭದಲ್ಲಿ ಬ್ರಹ್ಮದೇವರು ಎಲ್ಲ ಜೀವರು ಅಸಂಗರಾಗುತ್ತಿದ್ದಾರಲ್ಲ ಎಂದು ನೋಡಿದಾಗ, ಅವರು ತಮ್ಮ ಅರ್ಧ ಶರೀರದಿಂದ ಸ್ತ್ರೀಯರನ್ನು ಸೃಷ್ಟಿಸಿದನು. ಆ ಸ್ತ್ರೀಯರು ಪುರುಷರ ಮತಿಯನ್ನು ತಮ್ಮ ಕಡೆಗೆ ಆಕರ್ಷಿಸಿಕೊಂಡರು. ॥30॥

(ಶ್ಲೋಕ-31)

ಮೂಲಮ್

ಏವಂ ಶುಶ್ರೂಷಿತಸ್ತಾತ ಭಗವಾನ್ಕಶ್ಯಪಃ ಸಿಯಾ ।
ಪ್ರಹಸ್ಯ ಪರಮಪ್ರೀತೋ ದಿತಿಮಾಹಾಭಿನಂದ್ಯ ಚ ॥

ಅನುವಾದ

ಇರಲಿ, ಅಯ್ಯಾ! ದಿತಿಯು ಭಗವಾನ್ ಕಶ್ಯಪರ ಸೇವೆಯನ್ನು ಚೆನ್ನಾಗಿ ಮಾಡಿದಳು ಎಂದು ಹೇಳುತ್ತಿದ್ದೆನಲ್ಲ! ಇದರಿಂದ ಅವರು ತುಂಬಾ ಪ್ರಸನ್ನರಾದರು. ಅವರು ದಿತಿಯನ್ನು ಅಭಿನಂದಿಸುತ್ತಾ ಮುಗುಳ್ನಗುತ್ತಾ ಇಂತೆಂದರು ॥31॥

(ಶ್ಲೋಕ-32)

ಮೂಲಮ್ (ವಾಚನಮ್)

ಕಶ್ಯಪ ಉವಾಚ

ಮೂಲಮ್

ವರಂ ವರಯ ವಾಮೋರು ಪ್ರೀತಸ್ತೇಹಮನಿಂದಿತೇ ।
ಸಿಯಾ ಭರ್ತರಿ ಸುಪ್ರೀತೇ ಕಃ ಕಾಮ ಇಹ ಚಾಗಮಃ ॥

ಅನುವಾದ

ಕಶ್ಯಪರು ಹೇಳಿದರು — ಎಲೈ ಸುಂದರಿಯೇ! ಅನಿಂದ್ಯ ರೂಪಗುಣಸಂಪನ್ನೆಯೇ! ನಾನು ನಿನ್ನಲ್ಲಿ ಅತ್ಯಂತ ಸಂತುಷ್ಟ ನಾಗಿದ್ದೇನೆ. ನಿನಗೆ ಇಷ್ಟಬಂದ ವರವನ್ನು ಕೇಳಿಕೋ. ಪತಿಯು ಪ್ರಸನ್ನನಾದಾಗ ಪತ್ನಿಗೆ ಈ ಲೋಕ ಮತ್ತು ಪರಲೋಕದಲ್ಲಿ ಯಾವುದೇ ಅಭೀಷ್ಟ ವಸ್ತುವು ದುರ್ಲಭವಾಗುವುದಿಲ್ಲ. ॥32॥

(ಶ್ಲೋಕ-33)

ಮೂಲಮ್

ಪತಿರೇವ ಹಿ ನಾರೀಣಾಂ ದೈವತಂ ಪರಮಂ ಸ್ಮೃತಮ್ ।
ಮಾನಸಃ ಸರ್ವಭೂತಾನಾಂ ವಾಸುದೇವಃ ಶ್ರಿಯಃ ಪತಿಃ ॥

ಅನುವಾದ

‘ಪತಿಯೇ ಸ್ತ್ರೀಯರಿಗೆ ಪರಮಾರಾಧ್ಯ ಇಷ್ಟದೇವರಾಗಿದ್ದಾನೆ’ ಎಂಬುದು ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಪ್ರಿಯೇ! ಲಕ್ಷ್ಮೀಪತಿಯಾದ ಭಗವಾನ್ ಶ್ರೀವಾಸುದೇವನೇ ಸಮಸ್ತ ಪ್ರಾಣಿಗಳ ಹೃದಯಗಳಲ್ಲಿ ಬೆಳಗುತ್ತಿರುವನು.॥33॥

(ಶ್ಲೋಕ-34)

ಮೂಲಮ್

ಸ ಏವ ದೇವತಾಲಿಂಗೈರ್ನಾಮರೂಪವಿಕಲ್ಪಿತೈಃ ।
ಇಜ್ಯತೇ ಭಗವಾನ್ಪುಂಭಿಃ ಸೀಭಿಶ್ಚ ಪತಿರೂಪಧೃಕ್ ॥

ಅನುವಾದ

ಆತನೇ ಬೇರೆ-ಬೇರೆ ದೇವತೆಗಳ ನಾಮಗಳಿಂದಲೂ, ರೂಪಗಳಿಂದಲೂ ಉಪಾಸಿಸಲ್ಪಡುತ್ತಾನೆ. ಎಲ್ಲ ಪುರುಷರೂ ಯಾವುದೇ ದೇವತೆಯನ್ನು ಉಪಾಸನೆ ಮಾಡಿದರೂ ಅದು ಭಗವಂತನದೇ ಉಪಾಸನೆಯಾಗಿದೆ. ಹಾಗೆಯೇ ಸ್ತ್ರೀಯರಿಗಾಗಿ ಭಗವಂತನು ಪತಿಯ ರೂಪವನ್ನು ಧರಿಸಿರುವನು. ಅವರು ಅವನನ್ನು ಅದೇ ರೂಪದಲ್ಲಿ ಪೂಜೆ ಮಾಡುತ್ತಾರೆ. ॥34॥

(ಶ್ಲೋಕ-35)

ಮೂಲಮ್

ತಸ್ಮಾತ್ಪತಿವ್ರತಾ ನಾರ್ಯಃ ಶ್ರೇಯಸ್ಕಾಮಾಃ ಸುಮಧ್ಯಮೇ ।
ಯಜಂತೇನನ್ಯಭಾವೇನ ಪತಿಮಾತ್ಮಾನಮೀಶ್ವರಮ್ ॥

ಅನುವಾದ

ಅದಕ್ಕಾಗಿ ಪ್ರಿಯೇ! ತಮ್ಮ ಕಲ್ಯಾಣವನ್ನು ಬಯಸುವ ಪತಿವ್ರತಾ ಸ್ತ್ರೀಯರು ಅನನ್ಯ ಪ್ರೇಮಭಾವದಿಂದ ತಮ್ಮ ಪತಿದೇವನನ್ನೇ ಪೂಜಿಸುತ್ತಾರೆ. ಏಕೆಂದರೆ, ಪತಿದೇವನೇ ಅವರಿಗೆ ಪರಮ ಪ್ರಿಯತಮ ಆತ್ಮಾ ಮತ್ತು ಈಶ್ವರನಾಗಿರುವನು. ॥35॥

(ಶ್ಲೋಕ-36)

ಮೂಲಮ್

ಸೋಹಂ ತ್ವಯಾರ್ಚಿತೋ ಭದ್ರೇ ಈದೃಗ್ಭಾವೇನ ಭಕ್ತಿತಃ ।
ತತ್ತೇ ಸಂಪಾದಯೇ ಕಾಮಮಸತೀನಾಂ ಸುದುರ್ಲಭಮ್ ॥

ಅನುವಾದ

ಎಲೈ ಮಂಗಳಾಂಗಿಯೇ! ನೀನು ಅತ್ಯಂತ ಪ್ರೇಮಭಾವದಿಂದ, ಭಕ್ತಿಯಿಂದ ನನ್ನನ್ನು ಹಾಗೆಯೇ ಆರಾಧಿಸಿದ್ದೀಯೆ. ಈಗ ನಾನು ನಿನ್ನ ಎಲ್ಲ ಅಭಿಲಾಷೆಗಳನ್ನು ಪೂರ್ಣಗೊಳಿಸುವೆನು. ಗರತಿಯರಲ್ಲದವರಿಗೆ ಇಂತಹ ಭಾಗ್ಯವು ಸಿಗುವುದುದುರ್ಲಭವೇ. ॥36॥

(ಶ್ಲೋಕ-37)

ಮೂಲಮ್ (ವಾಚನಮ್)

ದಿತಿರುವಾಚ

ಮೂಲಮ್

ವರದೋ ಯದಿ ಮೇ ಬ್ರಹ್ಮನ್ಪುತ್ರಮಿಂದ್ರಹಣಂ ವೃಣೇ ।
ಅಮೃತ್ಯುಂ ಮೃತಪುತ್ರಾಹಂ ಯೇನ ಮೇ ಘಾತಿತೌ ಸುತೌ ॥

ಅನುವಾದ

ದಿತಿಯು ಹೇಳಿದಳು — ಬ್ರಾಹ್ಮಣೋತ್ತಮರೇ! ಇಂದ್ರನು ವಿಷ್ಣುವಿನ ಕೈಯಿಂದ ನನ್ನ ಇಬ್ಬರೂ ಪುತ್ರರನ್ನು ಕೊಲ್ಲಿಸಿ ನನ್ನನ್ನು ಪುತ್ರಹೀನೆಯನ್ನಾಗಿ ಮಾಡಿದ್ದಾನೆ. ಅದಕ್ಕಾಗಿ ನೀವು ನನಗೆ ಅಭೀಷ್ಟವಾದ ವರವನ್ನು ಕೊಡು ವುದಾದರೆ ಇಂದ್ರನನ್ನು ಸಂಹರಿಸುವಂತಹ ಅಮರ ಪುತ್ರನನ್ನು ನನಗೆ ಅನುಗ್ರಹಿಸಿರಿ. ॥37॥

(ಶ್ಲೋಕ-38)

ಮೂಲಮ್

ನಿಶಮ್ಯ ತದ್ವಚೋ ವಿಪ್ರೋ ವಿಮನಾಃ ಪರ್ಯತಪ್ಯತ ।
ಅಹೋ ಅಧರ್ಮಃ ಸುಮಹಾನದ್ಯ ಮೇ ಸಮುಪಸ್ಥಿತಃ ॥

ಅನುವಾದ

ಪರೀಕ್ಷಿತನೇ! ದಿತಿಯ ಮಾತನ್ನು ಕೇಳಿ ಕಶ್ಯಪರು ಖಿನ್ನರಾಗಿ ಮನಸ್ಸಿನಲ್ಲೇ ಪಶ್ಚಾತ್ತಾಪಪಡತೊಡಗಿದರು. ಅಯ್ಯೋ! ಶಿವನೇ! ಇಂದು ನನ್ನ ಜೀವನದಲ್ಲಿ ಅತಿದೊಡ್ಡ ಅಧರ್ಮದ ಪ್ರಸಂಗವು ಒದಗಿತಲ್ಲ! ॥38॥

(ಶ್ಲೋಕ-39)

ಮೂಲಮ್

ಅಹೋ ಅದ್ಯೇಂದ್ರಿಯಾರಾಮೋ
ಯೋಷಿನ್ಮಯ್ಯೇಹ ಮಾಯಯಾ ।
ಗೃಹೀತಚೇತಾಃ ಕೃಪಣಃ
ಪತಿಷ್ಯೇ ನರಕೇ ಧ್ರುವಮ್ ॥

ಅನುವಾದ

ಇಂದ್ರಿಯ ವಿಷಯಗಳಲ್ಲಿಯೇ ರಮಿಸತೊಡಗಿದ ನನ್ನ ಮನಸ್ಸನ್ನು ಈ ಸೀರೂಪಿಣಿ ಯಾದ ಮಾಯೆಯು ತನ್ನ ವಶಪಡಿಸಿಕೊಂಡಿತಲ್ಲ! ಅಯ್ಯೋ! ಇಂದು ನಾನು ಎಂತಹ ದೀನ-ಹೀನ ಅವಸ್ಥೆಯಲ್ಲಿದ್ದೇನೆ. ಈಗ ನನಗೆ ಖಂಡಿತವಾಗಿ ನರಕಕ್ಕೆ ಬೀಳ ಬೇಕಾದೀತು. ॥39॥

(ಶ್ಲೋಕ-40)

ಮೂಲಮ್

ಕೋತಿಕ್ರಮೋನುವರ್ತಂತ್ಯಾಃ ಸ್ವಭಾವಮಿಹ ಯೋಷಿತಃ ।
ಧಿಙ್ಮಾಂ ಬತಾಬುಧಂ ಸ್ವಾರ್ಥೇ ಯದಹಂ ತ್ವಜಿತೇಂದ್ರಿಯಃ ॥

ಅನುವಾದ

ಆದರೆ ಈ ಹೆಂಗಸಿನಲ್ಲಿ ಯಾವ ದೋಷವೂ ಇಲ್ಲ. ಈಕೆಯು ತನ್ನ ಹುಟ್ಟಿನ ಸ್ವಭಾವವನ್ನೇ ಅನುಸ ರಿಸಿದ್ದಾಳೆ. ದೋಷವಾದರೋ ನನ್ನದೇ ಆಗಿದೆ. ನಾನು ನನ್ನ ಇಂದ್ರಿಯಗಳನ್ನು ವಶದಲ್ಲಿ ಇಟ್ಟುಕೊಳ್ಳಲಾರದೇ ಹೋದೆನು. ನನ್ನ ನಿಜವಾದ ಸ್ವಾರ್ಥ ಮತ್ತು ಪರಮಾರ್ಥವನ್ನು ಅರಿಯದೇ ಹೋದೆ. ಇಂತಹ ಮೂಢನಾದ ನನಗೆ ಧಿಕ್ಕಾರವಿರಲಿ. ॥40॥

(ಶ್ಲೋಕ-41)

ಮೂಲಮ್

ಶರತ್ಪದ್ಮೋತ್ಸವಂ ವಕಂ ವಚಶ್ಚ ಶ್ರವಣಾಮೃತಮ್ ।
ಹೃದಯಂ ಕ್ಷುರಧಾರಾಭಂ ಸೀಣಾಂ ಕೋ ವೇದ ಚೇಷ್ಟಿತಮ್ ॥

ಅನುವಾದ

ಸ್ತ್ರೀಯರ ನಡೆವಳಿಕೆಯು ಯಾರಿಗೆ ತಾನೇ ಅರ್ಥವಾದೀತು? ಇವರ ಮುಖವು ಶರತ್ಕಾಲದ ಕಮಲ ದಂತೆ ಅರಳಿರುವುದು. ಮಾತು ಅಮೃತದಂತೆ ಸವಿಯಾಗಿರುವುದು. ಆದರೆ ಹೃದಯವು ಮಾತ್ರ ಕತ್ತಿಯ ಅಲಗಿನಂತೆ ಕಡುಹರಿತವಾದುದು. ॥41॥

(ಶ್ಲೋಕ-42)

ಮೂಲಮ್

ನ ಹಿ ಕಶ್ಚಿತ್ಪ್ರಿಯಃ ಸೀಣಾಮಂಜಸಾ ಸ್ವಾಶಿಷಾತ್ಮನಾಮ್ ।
ಪತಿಂ ಪುತ್ರಂ ಭ್ರಾತರಂ ವಾ ಘ್ನಂತ್ಯರ್ಥೇ ಘಾತಯಂತಿ ಚ ॥

ಅನುವಾದ

ಸ್ತ್ರೀಯರು ತಮ್ಮ ಅಭಿಲಾಷೆಗಳ ಕೈಗೊಂಬೆಯಾಗಿರುತ್ತಾರೆ. ನಿಜ ಹೇಳುವುದಾದರೆ ಇವರಿಗೆ ಯಾರಲ್ಲಿಯೂ ಪ್ರೀತಿ ಇರುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಇವರು ತನ್ನ ಪತಿ, ಪುತ್ರ, ಸಹೋದರ ಇವರನ್ನು ಕೊಲ್ಲಬಲ್ಲಳು, ಕೊಲ್ಲಿಸಬಲ್ಲಳು; ಇದರಲ್ಲಿ ಸಂದೇಹವೇ ಇಲ್ಲ. ॥42॥

(ಶ್ಲೋಕ-43)

ಮೂಲಮ್

ಪ್ರತಿಶ್ರುತಂ ದದಾಮೀತಿ ವಚಸ್ತನ್ನ ಮೃಷಾ ಭವೇತ್ ।
ವಧಂ ನಾರ್ಹತಿ ಚೇಂದ್ರೋಪಿ ತತ್ರೇದಮುಪಕಲ್ಪತೇ ॥

ಅನುವಾದ

ಆದರೆ ನಾನು ಈಕೆಗೆ ‘ನಿನ್ನ ಇಷ್ಟಾರ್ಥವನ್ನು ಈಡೇರಿಸುತ್ತೇನೆ’ ಎಂದು ಮಾತು ಕೊಟ್ಟಾಗಿದೆ. ಕೊಟ್ಟ ಮಾತು ಸುಳ್ಳಾಗಿಸಬಾರದು. ಆದರೆ ಇಂದ್ರನೂ ವಧಿಸಲ್ಪಡಬಾರದು. ಇರಲಿ; ಈಗ ಈ ವಿಷಯದಲ್ಲಿ ನಾನೊಂದು ಯುಕ್ತಿಯನ್ನು ಮಾಡುವೆ. ॥43॥

(ಶ್ಲೋಕ-44)

ಮೂಲಮ್

ಇತಿ ಸಂಚಿಂತ್ಯ ಭಗವಾನ್ಮಾರೀಚಃ ಕುರುನಂದನ ।
ಉವಾಚ ಕಿಂಚಿತ್ಕುಪಿತ ಆತ್ಮಾನಂ ಚ ವಿಗರ್ಹಯನ್ ॥

ಅನುವಾದ

ಪ್ರಿಯ ಪರೀಕ್ಷಿತನೇ! ಸರ್ವಸಮರ್ಥರಾದ ಕಶ್ಯಪರು ಹೀಗೆ ಮನಸ್ಸಿನಲ್ಲೇ ತನ್ನನ್ನು ಹಳಿದುಕೊಂಡು, ಎರಡೂ ಮಾತುಗಳು ನೆರವೇರುವಂತಹ ಉಪಾಯವನ್ನು ಯೋಚಿಸಿ, ಮತ್ತೆ ಸ್ವಲ್ಪ ಕೋಪಗೊಂಡವರಾಗಿ ದಿತಿಯಲ್ಲಿ ಹೀಗೆ ಹೇಳಿದರು ॥44॥

(ಶ್ಲೋಕ-45)

ಮೂಲಮ್ (ವಾಚನಮ್)

ಕಶ್ಯಪ ಉವಾಚ

ಮೂಲಮ್

ಪುತ್ರಸ್ತೇ ಭವಿತಾ ಭದ್ರೇ ಇಂದ್ರಹಾ ದೇವಬಾಂಧವಃ ।
ಸಂವತ್ಸರಂ ವ್ರತಮಿದಂ ಯದ್ಯಂಜೋ ಧಾರಯಿಷ್ಯಸಿ ॥

ಅನುವಾದ

ಕಶ್ಯಪರು ಹೇಳಿದರು — ಭದ್ರೇ! ನಾನು ಹೇಳುವ ಒಂದು ವ್ರತವನ್ನು ಒಂದು ವರ್ಷದವರೆಗೆ ವಿಧಿಪೂರ್ವಕವಾಗಿ ಪಾಲಿಸಿದರೆ, ನಿನಗೆ ಇಂದ್ರನನ್ನು ಕೊಲ್ಲುವಂತಹ ಪುತ್ರನು ಜನಿಸುವನು. ಆದರೆ ಯಾವುದೇ ವಿಧದಿಂದ ವ್ರತ ನಿಯಮಗಳಲ್ಲಿ ಕುಂದು-ಕೊರತೆಗಳುಂಟಾದರೆ ಅವನು ದೇವತೆಗಳ ಮಿತ್ರನಾಗುವನು. ॥45॥

(ಶ್ಲೋಕ-46)

ಮೂಲಮ್ (ವಾಚನಮ್)

ದಿತಿರುವಾಚ

ಮೂಲಮ್

ಧಾರಯಿಷ್ಯೇ ವ್ರತಂ ಬ್ರಹ್ಮನ್ ಬ್ರೂಹಿ ಕಾರ್ಯಾಣಿ ಯಾನಿ ಮೇ ।
ಯಾನಿ ಚೇಹ ನಿಷಿದ್ಧಾನಿ ನ ವ್ರತಂ ಘ್ನಂತಿ ಯಾನಿ ತು ॥

ಅನುವಾದ

ದಿತಿಯು ಹೇಳಿದಳು — ಬ್ರಾಹ್ಮಣೋತ್ತಮರೇ! ನಾನು ಆ ವ್ರತವನ್ನು ನಿಷ್ಠೆಯಿಂದ ಪಾಲಿಸುವೆನು. ವ್ರತದಲ್ಲಿ ನಾನೇನು ಮಾಡಬೇಕು? ವ್ರತದಲ್ಲಿ ಏನೇನನ್ನು ಮಾಡಬಾರದು? ಎಂಬುದನ್ನು ತಿಳಿಸಿರಿ; ಎಂದು ಪ್ರಾರ್ಥಿಸಿಕೊಂಡಳು. ॥46॥

(ಶ್ಲೋಕ-47)

ಮೂಲಮ್ (ವಾಚನಮ್)

ಕಶ್ಯಪ ಉವಾಚ

ಮೂಲಮ್

ನ ಹಿಂಸ್ಯಾದ್ಭೂತಜಾತಾನಿ ನ ಶಪೇನ್ನಾನೃತಂ ವದೇತ್ ।
ನಚ್ಛಿಂದ್ಯಾನ್ನಖರೋಮಾಣಿ ನ ಸ್ಪೃಶೇದ್ಯದಮಂಗಲಮ್ ॥

ಅನುವಾದ

ಕಶ್ಯಪರು ಹೇಳಿದರು — ಪ್ರಿಯೇ! ಈ ವ್ರತದಲ್ಲಿ ಯಾವುದೇ ಪ್ರಾಣಿಯನ್ನು ಮನಸ್ಸು, ಮಾತು ಅಥವಾ ಕ್ರಿಯೆಯಿಂದ ಹಿಂಸಿಸಬಾರದು. ಯಾರನ್ನೂ ಶಪಿಸಬಾರದು, ಬಯ್ಯಬಾರದು, ಸುಳ್ಳುಹೇಳಬಾರದು. ಶರೀರದ ಉಗುರುಗಳನ್ನಾಗಲೀ, ಕೂದಲುಗಳನ್ನಾಗಲೀ ಕತ್ತರಿಸಬಾರದು. ಯಾವುದೇ ಅಮಂಗಳ ವಸ್ತುವನ್ನು ಸ್ಪರ್ಶಿಸಬಾರದು. ॥47॥

(ಶ್ಲೋಕ-48)

ಮೂಲಮ್

ನಾಪ್ಸು ಸ್ನಾಯಾನ್ನ ಕುಪ್ಯೇತ ನ ಸಂಭಾಷೇತ ದುರ್ಜನೈಃ ।
ನ ವಸೀತಾಧೌತವಾಸಃ ಸ್ರಜಂ ಚ ವಿಧೃತಾಂ ಕ್ವಚಿತ್ ॥

ಅನುವಾದ

ನೀರಿನೊಳಗೆ ಮುಳುಗಿ ಸ್ನಾನಮಾಡಬಾರದು. ಸಿಟ್ಟಾಗಬಾರದು. ದುರ್ಜನರಲ್ಲಿ ಮಾತಾಡಬಾರದು. ತೊಳೆಯದಿರುವ ಬಟ್ಟೆಯನ್ನು ಧರಿಸಬಾರದು, ಬೇರೊಬ್ಬರು ಧರಿಸಿದ ಮಾಲೆಯನ್ನು ಧರಿಸಬಾರದು. ॥48॥

(ಶ್ಲೋಕ-49)

ಮೂಲಮ್

ನೋಚ್ಛಿಷ್ಟಂ ಚಂಡಿಕಾನ್ನಂ ಚ ಸಾಮಿಷಂ ವೃಷಲಾಹೃತಮ್ ।
ಭುಂಜೀತೋದಕ್ಯಯಾ ದೃಷ್ಟಂ ಪಿಬೇದಂಜಲಿನಾ ತ್ವಪಃ ॥

ಅನುವಾದ

ಎಂಜಲನ್ನು ತಿನ್ನಬಾರದು, ಭದ್ರಕಾಳಿಯ ಪ್ರಸಾದ ಅಥವಾ ಮಾಂಸ ಸೇರಿದ ಅನ್ನವನ್ನು ತಿನ್ನಬಾರದು. ಶೂದ್ರನು ತಂದಿರುವ ಅಥವಾ ರಜಸ್ವಲೆಯು ನೋಡಿದ ಅನ್ನವನ್ನು ಉಣ್ಣಬಾರದು. ಬೊಗಸೆಯಿಂದ ನೀರನ್ನು ಕುಡಿಯಬಾರದು.॥49॥

(ಶ್ಲೋಕ-50)

ಮೂಲಮ್

ನೋಚ್ಛಿಷ್ಟಾಸ್ಪೃಷ್ಟಸಲಿಲಾ ಸಂಧ್ಯಾಯಾಂ ಮುಕ್ತಮೂರ್ಧಜಾ ।
ಅನರ್ಚಿತಾಸಂಯತವಾಙ್ನಾ ಸಂವೀತಾ ಬಹಿಶ್ಚರೇತ್ ॥

ಅನುವಾದ

ಎಂಜಲುಬಾಯಿಂದ, ಆಚಮನ ಮಾಡದೆ, ಸಂಧ್ಯಾಸಮಯದಲ್ಲಿ, ಕೆದರಿದ ಕೂದಲಿನಿಂದ, ಶೃಂಗಾರವಿಲ್ಲದೆ, ಮಾತಿನ ಸಂಯಮವಿಲ್ಲದೆ, ಉತ್ತರೀಯವನ್ನು ಹೊದೆಯದೆ ಮನೆಯಿಂದ ಹೊರಗೆ ಹೋಗಬಾರದು. ॥50॥

(ಶ್ಲೋಕ-51)

ಮೂಲಮ್

ನಾಧೌತಪಾದಾಪ್ರಯತಾ ನಾರ್ದ್ರಪಾನ್ನೋ ಉದಕ್ಶಿರಾಃ ।
ಶಯೀತ ನಾಪರಾಙ್ನಾನ್ಯೈರ್ನ ನಗ್ನಾ ನ ಚ ಸಂಧ್ಯಯೋಃ ॥

ಅನುವಾದ

ಕಾಲು ತೊಳೆಯದೆ, ಅಪವಿತ್ರ ಸ್ಥಿತಿಯಲ್ಲಿ, ಒದ್ದೆಕಾಲುಗಳಿಂದ, ಉತ್ತರ ಅಥವಾ ಪಶ್ಚಿಮದ ಕಡೆ ತಲೆಹಾಕಿ, ಬೇರೊಬ್ಬರ ಜೊತೆಗೆ, ಬೆತ್ತಲೆಯಾಗಿ ಹಾಗೂ ಬೆಳಿಗ್ಗೆ-ಸಂಜೆ ಮಲಗಬಾರದು. ॥51॥

(ಶ್ಲೋಕ-52)

ಮೂಲಮ್

ಧೌತವಾಸಾಃ ಶುಚಿರ್ನಿತ್ಯಂ ಸರ್ವಮಂಗಲಸಂಯುತಾ ।
ಪೂಜಯೇತ್ಪ್ರಾತರಾಶಾತ್ಪ್ರಾಗ್ಗೋವಿಪ್ರಾಂಛ್ರಿಯಮಚ್ಯುತಮ್ ॥

ಅನುವಾದ

ಹೀಗೆ ಈ ನಿಷಿದ್ಧ ಕರ್ಮಗಳನ್ನು ತ್ಯಜಿಸಿ, ಸದಾಕಾಲ ಪವಿತ್ರವಾಗಿರಬೇಕು. ಮಡಿಮಾಡಿದ ಬಟ್ಟೆಯನ್ನೇ ಧರಿಸಬೇಕು ಮತ್ತು ಎಲ್ಲ ಮಂಗಳಚಿಹ್ನೆಗಳಿಂದ ಸುಸಜ್ಜಿತವಾಗಿರಬೇಕು. ಪ್ರಾತಃಕಾಲದಲ್ಲಿ ಉಪಹಾರವನ್ನು ಸೇವಿಸುವ ಮೊದಲೇ ಗೋವು, ಬ್ರಾಹ್ಮಣ, ಲಕ್ಷ್ಮೀದೇವಿ, ಭಗವಾನ್ ಶ್ರೀನಾರಾಯಣ ಇವರನ್ನು ಪೂಜಿಸಬೇಕು. ॥52॥

(ಶ್ಲೋಕ-53)

ಮೂಲಮ್

ಸಿಯೋ ವೀರವತೀಶ್ಚಾರ್ಚೇತ್ಸ್ರಗ್ಗಂಧಬಲಿಮಂಡನೈಃ ।
ಪತಿಂ ಚಾರ್ಚ್ಯೋಪತಿಷ್ಠೇತ ಧ್ಯಾಯೇತ್ಕೋಷ್ಠ ಗತಂ ಚ ತಮ್ ॥

ಅನುವಾದ

ಅನಂತರ ಹೂವಿನಮಾಲೆ, ಶ್ರೀಗಂಧವೇ ಮುಂತಾದ ಸುಗಂಧದ್ರವ್ಯಗಳೂ, ನೈವೇದ್ಯ ಮತ್ತು ಆಭರಣ ಮುಂತಾದವುಗಳಿಂದ ಸುವಾಸಿನೀ-ಸುಮಂಗಲಿಯರನ್ನು ಪೂಜಿಸಬೇಕು ಮತ್ತು ಪತಿಯ ಪೂಜೆಮಾಡಿ ಅವನ ಸೇವೆಯಲ್ಲೇ ಆಸಕ್ತಳಾಗಿರಬೇಕು. ಪತಿಯ ತೇಜಸ್ಸು, ತನ್ನ ಗರ್ಭದಲ್ಲಿದೆ ಎಂಬುದನ್ನು ಭಾವಿಸುತ್ತಾ ಇರಬೇಕು. ॥53॥

(ಶ್ಲೋಕ-54)

ಮೂಲಮ್

ಸಾಂವತ್ಸರಂ ಪುಂಸವನಂ ವ್ರತಮೇತದವಿಪ್ಲುತಮ್ ।
ಧಾರಯಿಷ್ಯಸಿ ಚೇತ್ತುಭ್ಯಂ ಶಕ್ರಹಾ ಭವಿತಾ ಸುತಃ ॥

ಅನುವಾದ

ಪ್ರಿಯೇ! ಈ ವ್ರತದ ಹೆಸರು ‘ಪುಂಸವನ’ ಎಂದಾಗಿದೆ. ಒಂದು ವರ್ಷದವರೆಗೆ ನೀನು ಯಾವುದೇ ಕುಂದುಕೊರತೆಯಿಲ್ಲದೆ ಇದನ್ನು ಪಾಲಿಸಿದರೆ ನಿನ್ನ ಗರ್ಭದಿಂದ ಇಂದ್ರನನ್ನು ಸಂಹರಿಸುವಂತಹ ಪುತ್ರನು ಜನಿಸುವನು.॥54॥

(ಶ್ಲೋಕ-55)

ಮೂಲಮ್

ಬಾಢಮಿತ್ಯಭಿಪ್ರೇತ್ಯಾಥ ದಿತೀ ರಾಜನ್ಮಹಾಮನಾಃ ।
ಕಾಶ್ಯಪಂ ಗರ್ಭಮಾಧತ್ತ ವ್ರತಂ ಚಾಂಜೋ ದಧಾರ ಸಾ ॥

ಅನುವಾದ

ಪರೀಕ್ಷಿತನೇ! ದೃಢನಿಶ್ಚಯವನ್ನು ಹೊಂದಿದ್ದ ದಿತಿದೇವಿಯು ‘ಹಾಗೆಯೇ ಆಗಲೀ’ ಎಂದು ಪತಿಯ ಆಜ್ಞೆಯನ್ನು ಶಿರಸಾವಹಿಸಿದಳು. ಆಕೆಯ ಮನೋಬಲವು ಅದ್ಭುತವಾಗಿತ್ತು. ಆಕೆಯು ತನ್ನ ಗರ್ಭದಲ್ಲಿ ಕಶ್ಯಪರ ವೀರ್ಯವನ್ನೂ, ಜೀವನದಲ್ಲಿ ಅವರು ಉಪದೇಶಿಸಿದ ವ್ರತವನ್ನೂ ಧರಿಸಿಕೊಂಡು ಅನಾಯಾಸವಾಗಿಯೇ ನಿಯಮಗಳನ್ನು ಪಾಲಿಸತೊಡಗಿದಳು. ॥55॥

(ಶ್ಲೋಕ-56)

ಮೂಲಮ್

ಮಾತೃಷ್ವಸುರಭಿಪ್ರಾಯಮಿಂದ್ರ ಆಜ್ಞಾಯ ಮಾನದ ।
ಶುಶ್ರೂಷಣೇನಾಶ್ರಮಸ್ಥಾಂ ದಿತಿಂ ಪರ್ಯಚರತ್ಕವಿಃ ॥

ಅನುವಾದ

ಪ್ರಿಯ ಪರೀಕ್ಷಿತನೇ! ದೇವರಾಜ ಇಂದ್ರನಿಗೆ ತನ್ನ ದೊಡ್ಡಮ್ಮಳಾದ ದಿತಿಯ ಆಶಯವು ತಿಳಿಯಿತು. ಅವನು ಬಹಳ ಬುದ್ಧಿವಂತಿಕೆಯಿಂದ ವೇಷವನ್ನು ಮರೆಸಿಕೊಂಡು ಆಶ್ರಮಕ್ಕೆ ಬಂದು ಅವಳ ಸೇವೆಯನ್ನು ಮಾಡತೊಡಗಿದನು. ॥56॥

(ಶ್ಲೋಕ-57)

ಮೂಲಮ್

ನಿತ್ಯಂ ವನಾತ್ಸುಮನಸಃ ಲಮೂಲಸಮಿತ್ಕುಶಾನ್ ।
ಪತ್ರಾಂಕುರಮೃದೋಪಶ್ಚ ಕಾಲೇ ಕಾಲ ಉಪಾಹರತ್ ॥

ಅನುವಾದ

ಅವನು ಆಕೆಗೋಸ್ಕರ ಪ್ರತಿದಿನವೂ ಕಾಲಕಾಲಗಳಲ್ಲಿ ಕಾಡಿನಿಂದ ಹೂವು, ಹಣ್ಣು, ಗೆಡ್ಡೆ-ಗೆಣಸು, ಸಮಿತ್ತು, ದರ್ಭೆ, ಪತ್ರೆ, ಗರಿಕೆ, ಮಣ್ಣು ಮತ್ತು ನೀರನ್ನು ತಂದು ಒದಗಿಸುತ್ತಾ ಸೇವೆಮಾಡುತ್ತಿದ್ದನು.॥57॥

(ಶ್ಲೋಕ-58)

ಮೂಲಮ್

ಏವಂ ತಸ್ಯಾ ವ್ರತಸ್ಥಾಯಾ ವ್ರತಚ್ಛಿದ್ರಂ ಹರಿರ್ನೃಪ ।
ಪ್ರೇಪ್ಸುಃ ಪರ್ಯಚರಜ್ಜಿಹ್ಮೋ ಮೃಗಹೇವ ಮೃಗಾಕೃತಿಃ ॥

ಅನುವಾದ

ರಾಜನೇ! ಕಪಟಿಗಳಾದ ಬೇಟೆಗಾರರು ಜಿಂಕೆಯನ್ನು ಕೊಲ್ಲುವುದಕ್ಕಾಗಿ ಜಿಂಕೆಯಂತೆ ರೂಪವನ್ನು ಧರಿಸಿ ಅದರ ಬಳಿಗೆ ಹೋಗುವಂತೆ ದೇವರಾಜನು ಕಪಟವೇಶವನ್ನು ಧರಿಸಿ ದಿತಿಯ ಬಳಿಗೆ ಹೋಗಿ ವ್ರತ ಪರಾಯಣೆಯಾಗಿದ್ದ ಆಕೆಯ ವ್ರತದಲ್ಲಿ ಛಿದ್ರವನ್ನು ಹುಡುಕುವುದಕ್ಕಾಗಿ ಸೇವೆ ಮಾಡುತ್ತಿದ್ದನು.॥58॥

(ಶ್ಲೋಕ-59)

ಮೂಲಮ್

ನಾಧ್ಯಗಚ್ಛದ್ವ್ರತಚ್ಛಿದ್ರಂ ತತ್ಪರೋಥ ಮಹೀಪತೇ ।
ಚಿಂತಾಂ ತೀವ್ರಾಂ ಗತಃ ಶಕ್ರಃ ಕೇನ ಮೇ ಸ್ಯಾಚ್ಛಿವಂ ತ್ವಿಹ ॥

ಅನುವಾದ

ಸದಾ ಸೂಕ್ಷ್ಮವಾಗಿ ಗಮನಿಸುತ್ತಿದ್ದರೂ ಆಕೆಯಲ್ಲಿ ಯಾವ ಛಿದ್ರವೂ ಅವನಿಗೆ ಕಂಡು ಬರಲಿಲ್ಲ. ಅದರಿಂದ ಇಂದ್ರನಿಗೆ ತುಂಬಾ ಚಿಂತೆಯುಂಟಾಯಿತು. ‘ಯಾವ ಉಪಾಯ ಮಾಡಿದರೆ ತನಗೆ ಒಳ್ಳೆಯದಾಗುವುದು?’ ಎಂಬುದನ್ನು ಅವನು ಯೋಚಿಸುತ್ತಿದ್ದನು.॥59॥

(ಶ್ಲೋಕ-60)

ಮೂಲಮ್

ಏಕದಾ ಸಾ ತು ಸಂಧ್ಯಾಯಾಮುಚ್ಛಿಷ್ಟಾ ವ್ರತಕರ್ಶಿತಾ ।
ಅಸ್ಪೃಷ್ಟವಾರ್ಯಧೌತಾಂಘ್ರಿಃ ಸುಷ್ವಾಪ ವಿಧಿಮೋಹಿತಾ ॥

ಅನುವಾದ

ದಿತಿಯು ವ್ರತನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಹಳ ದುರ್ಬಲಳಾಗಿದ್ದಳು. ವಿಧಿಯ ಮೋಹಕ್ಕೆ ಒಳಗಾಗಿ ಆಕೆಯು ಒಂದುದಿನ ಸಂಧ್ಯಾಸಮಯದಲ್ಲಿ ಬಾಯಿ ಮುಕ್ಕಳಿಸದೆ ಎಂಜಲು ಬಾಯಿಂದ, ಆಚಮನ ಮಾಡದೆ, ಕಾಲು ತೊಳೆಯದೆ ಹಾಗೆಯೇ ಮಲಗಿಬಿಟ್ಟಳು. ॥60॥

(ಶ್ಲೋಕ-61)

ಮೂಲಮ್

ಲಬ್ಧ್ವಾ ತದಂತರಂ ಶಕ್ರೋ ನಿದ್ರಾಪಹೃತಚೇತಸಃ ।
ದಿತೇಃ ಪ್ರವಿಷ್ಟ ಉದರಂ ಯೋಗೇಶೋ ಯೋಗಮಾಯಯಾ ॥

ಅನುವಾದ

ತನ್ನ ಕಾರ್ಯವನ್ನು ಸಾಧಿಸಲು ಇದೇ ಒಳ್ಳೆಯ ಸಮಯವೆಂದು ಯೋಗೇಶ್ವರ ಇಂದ್ರನು ನೋಡಿದನು. ಕೂಡಲೇ ಅವನು ಯೋಗಬಲದಿಂದ ಮಲಗಿದ್ದ ದಿತಿಯ ಗರ್ಭವನ್ನು ಪ್ರವೇಶಿಸಿದನು. ॥61॥

(ಶ್ಲೋಕ-62)

ಮೂಲಮ್

ಚಕರ್ತ ಸಪ್ತಧಾ ಗರ್ಭಂ ವಜ್ರೇಣ ಕನಕಪ್ರಭಮ್ ।
ರುದಂತಂ ಸಪ್ತಧೈಕೈಕಂ ಮಾ ರೋದೀರಿತಿ ತಾನ್ಪುನಃ ॥

ಅನುವಾದ

ಅವನು ಅಲ್ಲಿಗೆ ಹೋಗಿ ಭಂಗಾರದಂತೆ ಹೊಳೆಯುತ್ತಿರುವ ಗರ್ಭವನ್ನು ಏಳು ತುಂಡುಗಳಾಗಿ ಕತ್ತರಿಸಿದನು. ಆಗ ಆ ಗರ್ಭವು ಅಳತೊಡಗಿದಾಗ ‘ಅಳಬೇಡ-ಅಳಬೇಡ’ ಎಂದು ಹೇಳುತ್ತಾ ಏಳೂ ತುಂಡುಗಳಲ್ಲಿ ಮತ್ತೆ ಒಂದೊಂದನ್ನು ಏಳು-ಏಳಾಗಿ ತುಂಡರಿಸಿದನು. ॥62॥

(ಶ್ಲೋಕ-63)

ಮೂಲಮ್

ತೇ ತಮೂಚುಃ ಪಾಟ್ಯಮಾನಾಃ ಸರ್ವೇ ಪ್ರಾಂಜಲಯೋ ನೃಪ ।
ನೋ ಜಿಘಾಂಸಸಿ ಕಿಮಿಂದ್ರ ಭ್ರಾತರೋ ಮರುತಸ್ತವ ॥

ಅನುವಾದ

ಇಂದ್ರನು ತುಂಡರಿಸತೊಡಗಿದಾಗ ಅವೆಲ್ಲವೂ ಕೈಜೋಡಿಸಿಕೊಂಡು ಇಂದ್ರನಲ್ಲಿ ಹೇಳಿದವು ದೇವರಾಜಾ! ನೀನು ನಮ್ಮನ್ನು ಏಕೆ ಕೊಲ್ಲುತ್ತಿರುವೆ? ನಾವಾದರೋ ನಿನ್ನ ತಮ್ಮಂದಿರಾದ ಮರುದ್ಗಣರಾಗಿದ್ದೇವಲ್ಲ.॥63॥

(ಶ್ಲೋಕ-64)

ಮೂಲಮ್

ಮಾ ಭೈಷ್ಟ ಭ್ರಾತರೋ ಮಹ್ಯಂ ಯೂಯಮಿತ್ಯಾಹ ಕೌಶಿಕಃ ।
ಅನನ್ಯಭಾವಾನ್ಪಾರ್ಷದಾನಾತ್ಮನೋ ಮರುತಾಂ ಗಣಾನ್ ॥

ಅನುವಾದ

ಆಗ ಇಂದ್ರನು ಮುಂದೆ ತನ್ನಲ್ಲಿ ಅನನ್ಯ ಪ್ರೇಮದಿಂದ ಕೂಡಿದ ಪಾರ್ಷದರಾದ ಆ ಮರುದ್ಗಣಗಳಿಗೆ ಒಳ್ಳೆಯದು! ನೀವು ನನಗೆ ತಮ್ಮಂದಿರಾದಿರಿ. ಇನ್ನು ಹೆದರಬೇಡಿರಿ ಎಂದು ಅಭಯವಿತ್ತನು. ॥64॥

(ಶ್ಲೋಕ-65)

ಮೂಲಮ್

ನ ಮಮಾರ ದಿತೇರ್ಗರ್ಭಃ ಶ್ರೀನಿವಾಸಾನುಕಂಪಯಾ ।
ಬಹುಧಾ ಕುಲಿಶಕ್ಷುಣ್ಣೋ ದ್ರೌಣ್ಯಸೇಣ ಯಥಾ ಭವಾನ್ ॥

ಅನುವಾದ

ಪರೀಕ್ಷಿತನೇ! ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದ ನಿನಗೆ ಯಾವುದೇ ಅನಿಷ್ಟವಾಗಲಿಲ್ಲ. ಹಾಗೆಯೇ ಭಗವಾನ್ ಶ್ರೀಹರಿಯ ಕೃಪೆಯಿಂದ ದಿತಿಯ ಆ ಗರ್ಭವು ವಜ್ರಾಯುಧದಿಂದ ತುಂಡು-ತುಂಡಾದರೂ ಸತ್ತಿಲ್ಲ. ॥65॥

(ಶ್ಲೋಕ-66)

ಮೂಲಮ್

ಸಕೃದಿಷ್ಟ್ವಾದಿಪುರುಷಂ ಪುರುಷೋ ಯಾತಿ ಸಾಮ್ಯತಾಮ್ ।
ಸಂವತ್ಸರಂ ಕಿಂಚಿದೂನಂ ದಿತ್ಯಾ ಯದ್ಧರಿರರ್ಚಿತಃ ॥

ಅನುವಾದ

ಇದರಲ್ಲಿ ಸ್ವಲ್ಪವೂ ಆಶ್ಚರ್ಯವಿಲ್ಲ. ಏಕೆಂದರೆ, ಒಂದೇ ಬಾರಿಯಾದರೂ ಆದಿಪುರುಷನಾದ ಶ್ರೀಮನ್ನಾರಾಯಣನ ಆರಾಧನೆಯನ್ನು ಮಾಡುವವನು ಆತನ ಸಾಮ್ಯವನ್ನೇ ಪಡೆಯುವನು. ಹೀಗಿರುವಾಗ ದಿತಿಯು ಕೆಲವೇ ದಿನಗಳು ಕಡಿಮೆ ಒಂದು ವರ್ಷದವರೆಗೆ ಭಗವಂತನನ್ನು ಆರಾಧಿಸಿದ್ದಳು. ॥66॥

(ಶ್ಲೋಕ-67)

ಮೂಲಮ್

ಸಜೂರಿಂದ್ರೇಣ ಪಂಚಾಶದ್ದೇವಾಸ್ತೇ ಮರುತೋಭವನ್ ।
ವ್ಯಪೋಹ್ಯ ಮಾತೃದೋಷಂ ತೇ ಹರಿಣಾ ಸೋಮಪಾಃ ಕೃತಾಃ ॥

ಅನುವಾದ

ಈಗ ಆ ನಲವತ್ತೊಂಭತ್ತು ಮರುದ್ಗಣರು ಇಂದ್ರನೊಡನೆ ಸೇರಿ ಐವತ್ತಾದರು. ಇಂದ್ರನೂ ಕೂಡ ಬಲತಾಯಿ ಪುತ್ರರೊಂದಿಗೆ ಶತ್ರುಭಾವವನ್ನಿರಿಸದೆ ಅವರನ್ನೂ ಸೋಮಪಾನ ಮಾಡುವ ದೇವತೆಗಳನ್ನಾಗಿಸಿದನು. ॥67॥

(ಶ್ಲೋಕ-68)

ಮೂಲಮ್

ದಿತಿರುತ್ಥಾಯ ದದೃಶೇ ಕುಮಾರಾನನಲಪ್ರಭಾನ್ ।
ಇಂದ್ರೇಣ ಸಹಿತಾನ್ದೇವೀ ಪರ್ಯತುಷ್ಯದನಿಂದಿತಾ ॥

ಅನುವಾದ

ದಿತಿಯು ಕಣ್ಣು ತೆರೆದು ನೋಡಿದಾಗ ಅಗ್ನಿಯಂತೆ ಹೊಳೆಯುತ್ತಿರುವ ತನ್ನ ನಲವತ್ತೊಂಭತ್ತು ಮಂದಿ ಬಾಲಕರು ಇಂದ್ರನೊಡ ನಿರುವುದನ್ನು ಕಂಡಳು. ಇದರಿಂದ ಅನಿಂದ್ಯವಾದ ಸ್ವಭಾವವುಳ್ಳ ದಿತಿಗೆ ತುಂಬಾ ಸಂತೋಷವಾಯಿತು. ॥68॥

(ಶ್ಲೋಕ-69)

ಮೂಲಮ್

ಅಥೇಂದ್ರಮಾಹ ತಾತಾಹಮಾದಿತ್ಯಾನಾಂ ಭಯಾವಹಮ್ ।
ಅಪತ್ಯಮಿಚ್ಛಂತ್ಯಚರಂ ವ್ರತಮೇತತ್ಸುದುಷ್ಕರಮ್ ॥

ಅನುವಾದ

ಆಕೆಯು ಇಂದ್ರನನ್ನು ಸಂಬೋಧಿಸುತ್ತಾ ಮಗನೇ! ನಾನು ‘ಅದಿತಿಯ ಪುತ್ರರಾದ ನಿಮಗೆ ಭಯವನ್ನುಂಟು ಮಾಡುವ ಒಬ್ಬ ಪುತ್ರನು ಹುಟ್ಟಲಿ ಎಂದು ಈ ಅತ್ಯಂತ ಕಠಿಣವಾದ ವ್ರತವನ್ನು ಪಾಲಿಸುತ್ತಿದ್ದೆ. ॥69॥

(ಶ್ಲೋಕ-70)

ಮೂಲಮ್

ಏಕಃ ಸಂಕಲ್ಪಿತಃ ಪುತ್ರಃ ಸಪ್ತ ಸಪ್ತಾಭವನ್ಕಥಮ್ ।
ಯದಿ ತೇ ವಿದಿತಂ ಪುತ್ರ ಸತ್ಯಂ ಕಥಯ ಮಾ ಮೃಷಾ ॥

ಅನುವಾದ

ನಾನು ಕೇವಲ ಒಬ್ಬನೇ ಪುತ್ರನಿಗಾಗಿ ಸಂಕಲ್ಪ ಮಾಡಿದ್ದೆ. ಹೀಗಿದ್ದರೂ ಈ ನಲವತ್ತೊಂಭತ್ತು ಪುತ್ರರು ಹೇಗಾದರು? ಮಗು ಇಂದ್ರನೇ! ನಿನಗೆ ಇದರ ರಹಸ್ಯ ತಿಳಿದಿದ್ದರೆ ನಿಜವನ್ನೇ ಹೇಳು. ಸುಳ್ಳನ್ನಾಡಬೇಡ’ ಎಂದು ಕೇಳಿದಳು. ॥70॥

(ಶ್ಲೋಕ-71)

ಮೂಲಮ್ (ವಾಚನಮ್)

ಇಂದ್ರ ಉವಾಚ

ಮೂಲಮ್

ಅಂಬ ತೇಹಂ ವ್ಯವಸಿತಮುಪಧಾರ್ಯಾಗತೋಂತಿಕಮ್ ।
ಲಬ್ಧಾಂತರೋಚ್ಛಿದಂ ಗರ್ಭಮರ್ಥಬುದ್ಧಿರ್ನ ಧರ್ಮವಿತ್ ॥

ಅನುವಾದ

ಇಂದ್ರನು ಹೇಳಿದನು — ಅಮ್ಮಾ! ನೀನು ಯಾವ ಉದ್ದೇಶದಿಂದ ವ್ರತವನ್ನು ಆಚರಿಸುತ್ತಿದ್ದೆ ಎಂಬುದು ನನಗೆ ತಿಳಿದು ಹೋಯಿತು. ಅದಕ್ಕಾಗಿ ಸ್ವಾರ್ಥ ಸಾಧನೆಗಾಗಿ ನಾನು ಸ್ವರ್ಗವನ್ನು ಬಿಟ್ಟು ನಿನ್ನ ಬಳಿಗೆ ಬಂದಿರುವೆನು. ನನ್ನ ಮನಸ್ಸಿನಲ್ಲಿ ಸ್ವಲ್ಪವೂ ಧರ್ಮಭಾವನೆ ಇರಲಿಲ್ಲ. ಇದರಿಂದ ನಿನ್ನ ವ್ರತದಲ್ಲಿ ಉಂಟಾದ ಕೊರತೆಯನ್ನು ಕಂಡು ನಾನು ಆ ಗರ್ಭವನ್ನು ತುಂಡು-ತುಂಡಾಗಿಸಿದೆನು. ॥71॥

(ಶ್ಲೋಕ-72)

ಮೂಲಮ್

ಕೃತ್ತೋ ಮೇ ಸಪ್ತಧಾ ಗರ್ಭ ಆಸನ್ಸಪ್ತ ಕುಮಾರಕಾಃ ।
ತೇಪಿ ಚೈಕೈಕಶೋ ವೃಕ್ಣಾಃ ಸಪ್ತಧಾ ನಾಪಿ ಮಮ್ರಿರೇ ॥

ಅನುವಾದ

ಮೊದಲಿಗೆ ನಾನು ಅದನ್ನು ಏಳು ತುಂಡುಗಳಾಗಿಸಿದೆ. ಇದಾದ ಬಳಿಕ ನಾನು ಪುನಃ ಒಂದೊಂದನ್ನು ಏಳು-ಏಳಾಗಿ ತುಂಡು ಮಾಡಿದೆ. ಆಗಲೂ ಅದು ಸಾಯದೆ ನಲವ ತ್ತೊಂಭತ್ತಾಯಿತು. ॥72॥

(ಶ್ಲೋಕ-73)

ಮೂಲಮ್

ತತಸ್ತತ್ಪರಮಾಶ್ಚರ್ಯಂ ವೀಕ್ಷ್ಯಾಧ್ಯವಸಿತಂ ಮಯಾ ।
ಮಹಾಪುರುಷಪೂಜಾಯಾಃ ಸಿದ್ಧಿಃ ಕಾಪ್ಯನುಷಂಗಿಣೀ ॥

ಅನುವಾದ

ಇಂತಹ ಪರಮಾಶ್ಚರ್ಯಮಯ ಘಟನೆಯನ್ನು ಕಂಡು ‘ಇದು ಪರಮಪುರುಷ ಭಗವಂತನ ಉಪಾಸನೆಯ ಯಾವುದೋ ಸಿದ್ಧಿಯಾಗಿದೆ’ ಎಂದು ನಾನು ನಿಶ್ಚಯಿಸಿದೆನು. ॥73॥

(ಶ್ಲೋಕ-74)

ಮೂಲಮ್

ಆರಾಧನಂ ಭಗವತ ಈಹಮಾನಾ ನಿರಾಶಿಷಃ ।
ಯೇ ತು ನೇಚ್ಛಂತ್ಯಪಿ ಪರಂ ತೇ ಸ್ವಾರ್ಥಕುಶಲಾಃ ಸ್ಮೃತಾಃ ॥

ಅನುವಾದ

ನಿಷ್ಕಾಮಭಾವದಿಂದ ಭಗವಂತನನ್ನು ಆರಾಧಿಸುವವರು, ಬೇರೆ ವಸ್ತುವೇನು, ಮೋಕ್ಷವನ್ನೂ ಕೂಡ ಬಯಸದಿರುವವರೇ ತಮ್ಮ ಸ್ವಾರ್ಥ ಮತ್ತು ಪರಮಾರ್ಥದಲ್ಲಿ ನಿಪುಣರಾಗಿರುತ್ತಾರೆ. ॥74॥

(ಶ್ಲೋಕ-75)

ಮೂಲಮ್

ಆರಾಧ್ಯಾತ್ಮಪ್ರದಂ ದೇವಂ ಸ್ವಾತ್ಮಾನಂ ಜಗದೀಶ್ವರಮ್ ।
ಕೋ ವೃಣೀತೇ ಗುಣಸ್ಪರ್ಶಂ ಬುಧಃ ಸ್ಯಾನ್ನರಕೇಪಿ ಯತ್ ॥

ಅನುವಾದ

ಭಗವಾನ್ ಜಗದೀಶ್ವರನು ಎಲ್ಲರಿಗೂ ಆರಾಧ್ಯದೇವನಾಗಿದ್ದು, ಎಲ್ಲರ ಆತ್ಮನಾಗಿರುವನು. ಅವನು ಪ್ರಸನ್ನನಾದರೆ ಭಕ್ತರಿಗೆ ತನ್ನನ್ನೇ ಕೊಟ್ಟುಕೊಳ್ಳುವನು. ಹೀಗಿರುವಾಗ ಯಾವ ವಿವೇಕಿಯು ತಾನೇ ಆತನನ್ನು ಆರಾಧಿಸಿ ವಿಷಯ ಭೋಗಗಳನ್ನು ವರವನ್ನಾಗಿ ಬೇಡಿಕೊಳ್ಳುವನು? ಅಮ್ಮಾ! ಈ ವಿಷಯ ಭೋಗಗಳಾದರೋ ನರಕದಲ್ಲಿಯೂ ದೊರೆಯಬಲ್ಲವು. ॥75॥

(ಶ್ಲೋಕ-76)

ಮೂಲಮ್

ತದಿದಂ ಮಮ ದೌರ್ಜನ್ಯಂ ಬಾಲಿಶಸ್ಯ ಮಹೀಯಸಿ ।
ಕ್ಷಂತುಮರ್ಹಸಿ ಮಾತಸ್ತ್ವಂ ದಿಷ್ಟ್ಯಾ ಗರ್ಭೋ ಮೃತೋತ್ಥಿತಃ ॥

ಅನುವಾದ

ವಾತ್ಸಲ್ಯಪೂರ್ಣೆಯಾದ ತಾಯೇ! ನೀನು ಎಲ್ಲ ವಿಧದಿಂದಲೂ ನನಗೆ ಪೂಜ್ಯಳಾಗಿರುವೆ. ನಾನು ಮೂರ್ಖತೆಯಿಂದ ಭಾರೀ ದುಷ್ಟತೆಯ ಕೆಲಸವನ್ನು ಮಾಡಿದೆನು. ನೀನು ನನ್ನ ಅಪರಾಧವನ್ನು ಕ್ಷಮಿಸಿಬಿಡು. ನಿನ್ನ ಗರ್ಭವು ಖಂಡ-ಖಂಡವಾಗಿ ಒಂದು ವಿಧದಿಂದ ಸತ್ತುಹೋದರೂ ಪುನಃ ಜೀವಿತವಾಯಿತು. ಇದು ದೊಡ್ಡ ಸೌಭಾಗ್ಯದ ಮಾತೇ ಆಗಿದೆ. ॥76॥

(ಶ್ಲೋಕ-77)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇಂದ್ರಸ್ತಯಾಭ್ಯನುಜ್ಞಾತಃ ಶುದ್ಧಭಾವೇನ ತುಷ್ಟಯಾ ।
ಮರುದ್ಭಿಃ ಸಹ ತಾಂ ನತ್ವಾ ಜಗಾಮ ತ್ರಿದಿವಂ ಪ್ರಭುಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೇವರಾಜ ಇಂದ್ರನ ಈ ಶುದ್ಧಭಾವದಿಂದ ದಿತಿಯು ಸಂತೋಷಗೊಂಡಳು. ಅವಳಿಂದ ಅಪ್ಪಣೆ ಪಡೆದು, ಇಂದ್ರನು ಮರುದ್ಗಣರೊಂದಿಗೆ ಆಕೆಗೆ ವಂದಿಸಿಕೊಂಡು ಸ್ವರ್ಗಕ್ಕೆ ಹೊರಟು ಹೋದನು. ॥77॥

(ಶ್ಲೋಕ-78)

ಮೂಲಮ್

ಏವಂ ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಛಸಿ ।
ಮಂಗಲಂ ಮರುತಾಂ ಜನ್ಮ ಕಿಂ ಭೂಯಃ ಕಥಯಾಮಿ ತೇ ॥

ಅನುವಾದ

ರಾಜೇಂದ್ರನೇ! ನೀನು ಕೇಳಿದಂತೆ ಮರುದ್ಗಣಗಳ ಮಂಗಳಮಯ ಜನ್ಮ ವೃತ್ತಾಂತವನ್ನು ನಿನಗೆ ಸಮಗ್ರವಾಗಿ ತಿಳಿಸಿರುವೆನು. ಇನ್ನೇನು ಕೇಳಲು ನೀನು ಬಯಸುತ್ತಿರುವೆ? ॥78॥

ಅನುವಾದ (ಸಮಾಪ್ತಿಃ)

ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಮರುದುತ್ಪತ್ತಿಕಥನಂ ನಾಮಾಷ್ಟಾದಶೋಽಧ್ಯಾಯಃ ॥18॥