[ಹದಿನೇಳನೆಯ ಅಧ್ಯಾಯ]
ಭಾಗಸೂಚನಾ
ಚಿತ್ರಕೇತುವಿಗೆ ಪಾರ್ವತೀದೇವಿಯ ಶಾಪ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಯತಶ್ಚಾಂತರ್ಹಿತೋನಂತಸ್ತಸ್ಯೈ ಕೃತ್ವಾ ದಿಶೇ ನಮಃ ।
ವಿದ್ಯಾಧರಶ್ಚಿತ್ರಕೇತುಶ್ಚಚಾರ ಗಗನೇಚರಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಿದ್ಯಾಧರ ಚಿತ್ರಕೇತುವು ಸಂಕರ್ಷಣ ಭಗವಂತನು ಅಂತರ್ಧಾನ ಹೊಂದಿದ ದಿಕ್ಕಿನ ಕಡೆಗೆ ನಮಸ್ಕಾರ ಮಾಡಿ ಆಕಾಶಮಾರ್ಗದಲ್ಲಿ ಯಥೇಚ್ಛವಾಗಿ ಸಂಚರಿಸತೊಡಗಿದನು. ॥1॥
(ಶ್ಲೋಕ-2)
ಮೂಲಮ್
ಸ ಲಕ್ಷಂ ವರ್ಷಲಕ್ಷಾಣಾಮವ್ಯಾಹತಬಲೇಂದ್ರಿಯಃ ।
ಸ್ತೂಯಮಾನೋ ಮಹಾಯೋಗೀ ಮುನಿಭಿಃ ಸಿದ್ಧಚಾರಣೈಃ ॥
(ಶ್ಲೋಕ-3)
ಮೂಲಮ್
ಕುಲಾಚಲೇಂದ್ರದ್ರೋಣೀಷು ನಾನಾಸಂಕಲ್ಪಸಿದ್ಧಿಷು ।
ರೇಮೇ ವಿದ್ಯಾಧರಸೀಭಿರ್ಗಾಪಯನ್ಹರಿಮೀಶ್ವರಮ್ ॥
ಅನುವಾದ
ಮಹಾ ಯೋಗಿಯಾದ ಚಿತ್ರಕೇತುವು ಕೋಟ್ಯಂತರ ವರ್ಷಗಳವರೆಗೆ ಎಲ್ಲ ವಿಧದ ಸಂಕಲ್ಪಗಳನ್ನು ಪೂರ್ಣಗೊಳಿಸುವ ಸುಮೇರು ಪರ್ವತದ ತಪ್ಪಲುಗಳಲ್ಲಿ ವಿಹರಿಸುತ್ತಿದ್ದನು. ಅವನ ದೇಹ ಬಲ ಮತ್ತು ಇಂದ್ರಿಯ ಬಲಗಳು ಎಂದೂ ಕುಂದದೆ ಹಾಗೆಯೇ ಇತ್ತು. ದೊಡ್ಡ-ದೊಡ್ಡ ಮುನಿಗಳೂ, ಸಿದ್ಧರೂ, ಚಾರಣರೂ ಆತನನ್ನು ಸ್ತುತಿಸುತ್ತಿದ್ದರು. ಅವನ ಪ್ರೇರಣೆಯಂತೆ ವಿದ್ಯಾಧರರ ಸೀಯರು ಅವನ ಮುಂದೆ ಸರ್ವಶಕ್ತನಾದ ಭಗವಂತನ ಗುಣಗಳನ್ನೂ ಹಾಗೂ ಲೀಲೆಗಳನ್ನೂ ಗಾನ ಮಾಡುತ್ತಿದ್ದರು. ॥2-3॥
(ಶ್ಲೋಕ-4)
ಮೂಲಮ್
ಏಕದಾ ಸ ವಿಮಾನೇನ ವಿಷ್ಣುದತ್ತೇನ ಭಾಸ್ವತಾ ।
ಗಿರಿಶಂ ದದೃಶೇ ಗಚ್ಛನ್ಪರೀತಂ ಸಿದ್ಧಚಾರಣೈಃ ॥
(ಶ್ಲೋಕ-5)
ಮೂಲಮ್
ಆಲಿಂಗ್ಯಾಂಕೀಕೃತಾಂ ದೇವೀಂ ಬಾಹುನಾ ಮುನಿಸಂಸದಿ ।
ಉವಾಚ ದೇವ್ಯಾಃ ಶೃಣ್ವತ್ಯಾ ಜಹಾಸೋಚ್ಚೈಸ್ತದಂತಿಕೇ ॥
ಅನುವಾದ
ಒಂದುದಿನ ಚಿತ್ರಕೇತುವು ಭಗವಂತನು ಕೊಟ್ಟಿರುವ ತೇಜೋಮಯ ವಿಮಾನದಲ್ಲಿ ಕುಳಿತು ಸಂಚರಿಸುತ್ತಿದ್ದಾಗ ಭಗವಾನ್ ಶಂಕರನನ್ನು ನೋಡಿ ದನು. ಆ ಪರಮೇಶ್ವರನನ್ನು ಸಿದ್ಧ-ಚಾರಣರು ಸುತ್ತುವರಿದು ಸೇವಿಸುತ್ತಿದ್ದರು. ಪರಶಿವನು ದೊಡ್ಡ-ದೊಡ್ಡ ಋಷಿಗಳ ದಿವ್ಯಸಭೆಯಲ್ಲಿ ಕುಳಿತಿದ್ದು , ಭಗವತಿ ಪಾರ್ವತಿಯನ್ನು ತನ್ನ ತೊಡೆಯಲ್ಲಿ ಕುಳ್ಳಿರಿಸಿಕೊಂಡು ಒಂದು ಕೈಯಿಂದ ಆಕೆಯನ್ನು ಅಲಿಂಗಿಸಿದ್ದನು. ಚಿತ್ರಕೇತುವು ಇದನ್ನು ನೋಡಿ ವಿಮಾನದಲ್ಲಿ ಕುಳಿತುಕೊಂಡೇ ಅವನ ಬಳಿಗೆ ಹೋಗಿ ಪಾರ್ವತಿದೇವಿಯು ಕೇಳುವ ಹಾಗೇ ಗಟ್ಟಿಯಾಗಿ ನಗುತ್ತಾ ಇಂತೆಂದನು. ॥4-5॥
(ಶ್ಲೋಕ-6)
ಮೂಲಮ್ (ವಾಚನಮ್)
ಚಿತ್ರಕೇತುರುವಾಚ
ಮೂಲಮ್
ಏಷ ಲೋಕಗುರುಃ ಸಾಕ್ಷಾದ್ಧರ್ಮಂ ವಕ್ತಾ ಶರೀರಿಣಾಮ್ ।
ಆಸ್ತೇ ಮುಖ್ಯಃ ಸಭಾಯಾಂ ವೈ ಮಿಥುನೀಭೂಯ ಭಾರ್ಯಯಾ ॥
ಅನುವಾದ
ಚಿತ್ರಕೇತುವು ಹೇಳುತ್ತಾನೆ — ಆಹಾ! ಈತನು ಜಗತ್ತಿನ ಎಲ್ಲ ಜೀವಿಗಳಿಗೂ ಧರ್ಮವನ್ನು ಬೋಧಿಸುವ ಜಗದ್ಗುರುವು. ಸರ್ವಪ್ರಾಣಿಗಳಲ್ಲಿಯೂ ಶ್ರೇಷ್ಠನಾದವನು. ಆದರೂ ತುಂಬಿದ ಸಭೆಯಲ್ಲಿ ಪತ್ನಿಯನ್ನು ಜೊತೆಗೂಡಿ ಕುಳಿತಿರುವನು. ॥6॥
(ಶ್ಲೋಕ-7)
ಮೂಲಮ್
ಜಟಾಧರಸ್ತೀವ್ರತಪಾ ಬ್ರಹ್ಮವಾದಿಸಭಾಪತಿಃ ।
ಅಂಕೀಕೃತ್ಯ ಸಿಯಂ ಚಾಸ್ತೇ ಗತಹ್ರೀಃ ಪ್ರಾಕೃತೋ ಯಥಾ ॥
ಅನುವಾದ
ಜಟೆಯನ್ನು ಧರಿಸಿದ್ದಾನೆ. ಬಹಳ ದೊಡ್ಡ ತಪಸ್ವೀಯಾಗಿದ್ದಾನೆ. ಬ್ರಹ್ಮವಾದಿಗಳ ಸಭೆಗೆ ಅಧಿಪತಿಯಾಗಿಯೂ ಸಾಧಾರಣ ಮನುಷ್ಯನಂತೆ ನಿರ್ಲಜ್ಜನಾಗಿ ತೊಡೆಯಲ್ಲಿ ಹೆಂಡತಿಯನ್ನು ಕುಳ್ಳಿರಿಸಿಕೊಂಡಿರುವನು. ॥7॥
(ಶ್ಲೋಕ-8)
ಮೂಲಮ್
ಪ್ರಾಯಶಃ ಪ್ರಾಕೃತಾಶ್ಚಾಪಿ ಸಿಯಂ ರಹಸಿ ಬಿಭ್ರತಿ ।
ಅಯಂ ಮಹಾವ್ರತಧರೋ ಬಿಭರ್ತಿ ಸದಸಿ ಸಿಯಮ್ ॥
ಅನುವಾದ
ಸಾಮಾನ್ಯವಾಗಿ ಸಾಧಾರಣ ಮನುಷ್ಯರು ಏಕಾಂತದಲ್ಲೇ ಸ್ತ್ರೀಯರೊಂದಿಗೆ ಎದ್ದು-ಕುಳಿತಿರುತ್ತಾರೆ. ಆದರೆ ಇವನು ಇಷ್ಟು ದೊಡ್ಡ ವ್ರತಧಾರಿ ಯಾಗಿದ್ದರೂ ತುಂಬಿದ ಸಭೆಯಲ್ಲಿ ಈಕೆಯನ್ನು ಧರಿಸಿ ಕುಳಿತಿರುವನಲ್ಲ! ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಭಗವಾನಪಿ ತಚ್ಛ್ರುತ್ವಾ ಪ್ರಹಸ್ಯಾಗಾಧಧೀರ್ನೃಪ ।
ತೂಷ್ಣೀಂ ಬಭೂವ ಸದಸಿ ಸಭ್ಯಾಶ್ಚ ತದನುವ್ರತಾಃ ॥
(ಶ್ಲೋಕ-10)
ಮೂಲಮ್
ಇತ್ಯತದ್ವೀರ್ಯವಿದುಷಿ ಬ್ರುವಾಣೇ ಬಹ್ವಶೋಭನಮ್ ।
ರುಷಾಹ ದೇವೀ ಧೃಷ್ಟಾಯ ನಿರ್ಜಿತಾತ್ಮಾಭಿಮಾನಿನೇ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಭಗವಾನ್ ಶಂಕರನ ಬುದ್ಧಿಯು ಅಗಾಧವಾದುದು. ಚಿತ್ರಕೇತುವಿನ ಈ ಕುಚೋದ್ಯದ ಮಾತನ್ನು ಕೇಳಿಯೂ ಅವನು ನಕ್ಕು ಸುಮ್ಮನಾದನು. ಆ ಸಭೆಯಲ್ಲಿ ಕುಳಿತಿರುವ ಅವನ ಅನುಯಾಯಿ ಸದಸ್ಯರೂ ಮೌನವಾಗಿದ್ದರು. ಚಿತ್ರಕೇತುವಿಗೆ ಭಗವಾನ್ ಶಂಕರನ ಮಹಿಮೆ ತಿಳಿದಿರಲಿಲ್ಲ. ಅದರಿಂದ ಅವನು ಶಿವನಕುರಿತು ತೋಚಿದಂತೆಗಳಹುತ್ತಿದ್ದನು. ಅವನಲ್ಲಿ ‘ನಾನು ಜಿತೇಂದ್ರಿಯನಾಗಿದ್ದೇನೆ’ ಎಂಬುದರ ದುರಹಂಕಾರವುಂಟಾಗಿತ್ತು. ಪಾರ್ವತೀ ದೇವಿಯು ಅವನ ಉದ್ಧಟತನವನ್ನು ಕಂಡು ಕ್ರೋಧಗೊಂಡು ಹೀಗೆಂದಳು. ॥9-10॥
(ಶ್ಲೋಕ-11)
ಮೂಲಮ್ (ವಾಚನಮ್)
ಪಾರ್ವತ್ಯುವಾಚ
ಮೂಲಮ್
ಅಯಂ ಕಿಮಧುನಾ ಲೋಕೇ ಶಾಸ್ತಾ ದಂಡಧರಃ ಪ್ರಭುಃ ।
ಅಸ್ಮದ್ವಿಧಾನಾಂ ದುಷ್ಟಾನಾಂ ನಿರ್ಲಜ್ಜಾನಾಂ ಚ ವಿಪ್ರಕೃತ್ ॥
ಅನುವಾದ
ಪಾರ್ವತೀದೇವಿಯು ಹೇಳಿದಳು — ಆಹಾ!ನಮ್ಮಂತಹ ದುಷ್ಟರೂ, ನಾಚಿಕೆಗೆಟ್ಟವರೂ ಆದ ಜನರ ಮೇಲೆ ದಂಡಾಧಿಕಾರಿಗಳಾಗಿ ಶಾಸನ ಮತ್ತು ತಿರಸ್ಕಾರವನ್ನು ಮಾಡುವ ಮಹಾಪ್ರಭುಗಳು ಈ ಜಗತ್ತಿನಲ್ಲಿ ಇವರೊಬ್ಬರೇ ಎಂದು ಕಾಣುತ್ತದೆ.॥11॥
ಮೂಲಮ್
(ಶ್ಲೋಕ-12)
ನ ವೇದ ಧರ್ಮಂ ಕಿಲ ಪದ್ಮಯೋನಿ-
ರ್ನ ಬ್ರಹ್ಮಪುತ್ರಾ ಭೃಗುನಾರದಾದ್ಯಾಃ ।
ನ ವೈ ಕುಮಾರಃ ಕಪಿಲೋ ಮನುಶ್ಚ
ಯೇ ನೋ ನಿಷೇಧಂತ್ಯತಿವರ್ತಿನಂ ಹರಮ್ ॥
ಅನುವಾದ
ಅಯ್ಯೋ ಪಾಪ! ಬ್ರಹ್ಮದೇವರಿಗೆ, ಭೃಗು-ನಾರದರು, ಸನಕರೇ ಮುಂತಾದ ಬ್ರಹ್ಮಪುತ್ರರಿಗೆ, ಪರಮಋಷಿಗಳಿಗೆ, ಕಪಿಲರು ಮತ್ತು ಮನು ಮುಂತಾದ ಮಹಾಪುರುಷರಿಗೆ ಧರ್ಮರಹಸ್ಯವು ಗೊತ್ತೇ ಇಲ್ಲ. ಅದಕ್ಕೆ ಅವರು ಧರ್ಮಮರ್ಯಾದೆಯನ್ನು ಮೀರಿ ನಡೆದಿರುವ ಭಗವಾನ್ ಶಿವನನ್ನು ಈ ಕಾರ್ಯದಿಂದ ತಡೆಯುತ್ತಿಲ್ಲ. ॥12॥
(ಶ್ಲೋಕ-13)
ಮೂಲಮ್
ಏಷಾಮನುಧ್ಯೇಯಪದಾಬ್ಜ ಯುಗ್ಮಂ
ಜಗದ್ಗುರುಂ ಮಂಗಲಮಂಗಲಂ ಸ್ವಯಮ್ ।
ಯಃ ಕ್ಷತ್ರಬಂಧುಃ ಪರಿಭೂಯ ಸೂರೀನ್
ಪ್ರಶಾಸ್ತಿ ಧೃಷ್ಟಸ್ತದಯಂ ಹಿ ದಂಡ್ಯಃ ॥
ಅನುವಾದ
ಈ ಮಹಾತ್ಮರೆಲ್ಲರೂ ಧ್ಯಾನಮಾಡಲು ಯೋಗ್ಯವಾದ ಅಡಿದಾವರೆಗಳುಳ್ಳವನಾಗಿ, ಮಂಗಳಗಳಿಗೂ ಮಂಗಳವನ್ನುಂಟುಮಾಡುವ ಜಗದ್ಗುರುವಾದ ಭಗವಾನ್ ಶಂಕರ ನನ್ನೂ ಹಾಗೂ ಅವನ ಅನುಯಾಯಿಗಳಾದ ಮಹಾತ್ಮರನ್ನೂ ಈ ಕ್ಷತ್ರಿಯಾಧಮನು ತಿರಸ್ಕರಿಸಿ ಅವರ ಮೇಲೆ ಶಾಸನವನ್ನು ಮಾಡಲು ಪ್ರಯತ್ನಿಸಿದ್ದಾನೆ. ಅದರಿಂದ ಈ ದುರುಳನು ದಂಡನೆಗೆ ಯೋಗ್ಯನು.॥13॥
(ಶ್ಲೋಕ-14)
ಮೂಲಮ್
ನಾಯಮರ್ಹತಿ ವೈಕುಂಠಪಾದಮೂಲೋಪಸರ್ಪಣಮ್ ।
ಸಂಭಾವಿತಮತಿಃ ಸ್ತಬ್ಧಃ ಸಾಧುಭಿಃ ಪರ್ಯುಪಾಸಿತಮ್ ॥
ಅನುವಾದ
ತಾನು ಬಹಳ ದೊಡ್ಡವನೆಂದು ತಿಳಿದಿರುವ ಈ ದುರಹಂಕಾರಿಯಾದ ಮೂರ್ಖನು ಸಾಧುಶ್ರೇಷ್ಠರೆಲ್ಲರೂ ಉಪಾಸಿಸುತ್ತಿರುವ ಭಗವಾನ್ ಶ್ರೀಹರಿಯ ಪಾದಾರವಿಂದಗಳಲ್ಲಿ ಇರಲು ಯೋಗ್ಯನಲ್ಲ.॥14॥
(ಶ್ಲೋಕ-15)
ಮೂಲಮ್
ಅತಃ ಪಾಪೀಯಸೀಂ
ಯೋನಿಮಾಸುರೀಂಯಾಹಿದುರ್ಮತೇ ।
ಯಥೇಹ ಭೂಯೋ ಮಹತಾಂ
ನ ಕರ್ತಾ ಪುತ್ರ ಕಿಲ್ಬಿಷಮ್ ॥
ಅನುವಾದ
ಎಲವೋ ದುರ್ಬುದ್ಧಿ ಯವನೇ! ನೀನು ಪಾಪಮಯ ಅಸುರಯೋನಿಯಲ್ಲಿ ಹೋಗಿಬೀಳು. ಹೀಗಾದರೆ ನೀನು ಮತ್ತೆ ಹೀಗೆ ಮಹಾ ಪುರುಷರಲ್ಲಿ ಅಪರಾಧವನ್ನು ಮಾಡಲಾರೆ. ॥15॥
(ಶ್ಲೋಕ-16)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಶಪ್ತಶ್ಚಿತ್ರಕೇತುರ್ವಿಮಾನಾದವರುಹ್ಯ ಸಃ ।
ಪ್ರಸಾದಯಾಮಾಸ ಸತೀಂ ಮೂರ್ಧ್ನಾ ನಮ್ರೇಣ ಭಾರತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜನೇ! ಪಾರ್ವತೀದೇವಿಯು ಹೀಗೆ ಶಾಪವನ್ನು ಕೊಟ್ಟಾಗ ಚಿತ್ರಕೇತುವು ಒಡನೆಯೇ ವಿಮಾನದಿಂದಿಳಿದು ತಲೆತಗ್ಗಿಸಿ, ನಮಸ್ಕರಿಸುತ್ತಾ ಆಕೆಯನ್ನು ಪ್ರಸನ್ನಗೊಳಿಸಲು ತೊಡಗಿದನು.॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಚಿತ್ರಕೇತುರುವಾಚ
ಮೂಲಮ್
ಪ್ರತಿಗೃಹ್ಣಾಮಿ ತೇ ಶಾಪಮಾತ್ಮನೋಂಜಲಿನಾಂಬಿಕೇ ।
ದೇವೈರ್ಮರ್ತ್ಯಾಯ ಯತ್ಪ್ರೋಕ್ತಂ ಪೂರ್ವದಿಷ್ಟಂ ಹಿ ತಸ್ಯ ತತ್ ॥
ಅನುವಾದ
ಚಿತ್ರಕೇತುವು ಹೇಳಿದನು — ಓ ಜಗನ್ಮಾತೆಯೇ! ನಿನ್ನ ಈ ಶಾಪವನ್ನು ನಾನು ಕೈಜೋಡಿಸಿಕೊಂಡು ವಿನಯದಿಂದ ಸ್ವೀಕರಿಸುತ್ತೇನೆ. ಏಕೆಂದರೆ, ದೇವತೆಗಳು ಮನುಷ್ಯರಿಗೆ ಏನಾದರೂ ನುಡಿದರೆ ಅದು ಅವರ ಪ್ರಾರಬ್ಧಕ್ಕನುಗುಣ ವಾಗಿ ಸಿಕ್ಕುವ ಫಲದ ಪೂರ್ವಸೂಚನೆ ಮಾತ್ರವಾಗಿರುತ್ತದೆ. ॥17॥
(ಶ್ಲೋಕ-18)
ಮೂಲಮ್
ಸಂಸಾರಚಕ್ರ ಏತಸ್ಮಿನ್ಜಂತುರಜ್ಞಾನಮೋಹಿತಃ ।
ಭ್ರಾಮ್ಯನ್ಸುಖಂ ಚ ದುಃಖಂ ಚ ಭುಂಕ್ತೇ ಸರ್ವತ್ರ ಸರ್ವದಾ ॥
ಅನುವಾದ
ದೇವಿ! ಈ ಜೀವನು ಅಜ್ಞಾನದಿಂದ ಮೋಹಿತನಾದ್ದರಿಂದಲೇ ಈ ಸಂಸಾರಚಕ್ರದಲ್ಲಿ ಅಲೆದಾಡುತ್ತಾ ಸುಖ ಮತ್ತು ದುಃಖಗಳನ್ನು ಭೋಗಿಸುತ್ತಾ ಇರುತ್ತಾನೆ. ॥18॥
(ಶ್ಲೋಕ-19)
ಮೂಲಮ್
ನೈವಾತ್ಮಾ ನ ಪರಶ್ಚಾಪಿ ಕರ್ತಾ ಸ್ಯಾತ್ಸುಖದುಃಖಯೋಃ ।
ಕರ್ತಾರಂ ಮನ್ಯತೇಪ್ರಾಜ್ಞ ಆತ್ಮಾನಂ ಪರಮೇವ ಚ ॥
ಅನುವಾದ
ತಾಯೇ! ಸುಖವನ್ನು ಮತ್ತು ದುಃಖವನ್ನು ಕೊಡುವವನು ತಾನೂ ಅಲ್ಲ, ಇತರರೂ ಅಲ್ಲ. ಅಜ್ಞಾನಿಗಳಾದ ವರೇ ತನ್ನನ್ನು ಅಥವಾ ಇತರರನ್ನು ಸುಖ-ದುಃಖದ ಕರ್ತೃಗಳೆಂದು ತಿಳಿಯುತ್ತಾರೆ. ॥19॥
(ಶ್ಲೋಕ-20)
ಮೂಲಮ್
ಗುಣಪ್ರವಾಹ ಏತಸ್ಮಿನ್ಕಃ ಶಾಪಃ ಕೋ ನ್ವನುಗ್ರಹಃ ।
ಕಃ ಸ್ವರ್ಗೋ ನರಕಃ ಕೋ ವಾ ಕಿಂ ಸುಖಂ ದುಃಖಮೇವ ವಾ ॥
ಅನುವಾದ
ಈ ಜಗತ್ತು ಸತ್ತ್ವ, ರಜ, ತಮಗಳೆಂಬ ತ್ರಿಗುಣಗಳ ಸ್ವಾಭಾವಿಕ ಪ್ರವಾಹವೇ ಆಗಿದೆ. ಇದರಲ್ಲಿ ಶಾಪವೇನು? ಅನುಗ್ರಹವೇನು? ಸ್ವರ್ಗವೇನು? ನರಕವೇನು? ಸುಖವೇನು? ದುಃಖ ವೇನು? ॥20॥
(ಶ್ಲೋಕ-21)
ಮೂಲಮ್
ಏಕಃ ಸೃಜತಿ ಭೂತಾನಿ ಭಗವಾನಾತ್ಮಮಾಯಯಾ ।
ಏಷಾಂ ಬಂಧಂ ಚ ಮೋಕ್ಷಂ ಚ ಸುಖಂ ದುಃಖಂ ಚ ನಿಷ್ಕಲಃ ॥
ಅನುವಾದ
ಪರಿಪೂರ್ಣನಾದ ಪರಮಾತ್ಮನೇ ಬೇರೆ ಯಾರ ಸಹಾಯವೂ ಇಲ್ಲದೆ ತನ್ನ ಆತ್ಮಸ್ವರೂಪಿಣಿಯಾದ ಮಾಯಾಶಕ್ತಿಯಿಂದ ಸಮಸ್ತ ಪ್ರಾಣಿಗಳನ್ನು ಹಾಗೂ ಅವರ ಬಂಧನ, ಮೋಕ್ಷ, ಸುಖ, ದುಃಖ ಇವುಗಳನ್ನು ರಚಿಸುತ್ತಾನೆ. ॥21॥
(ಶ್ಲೋಕ-22)
ಮೂಲಮ್
ನ ತಸ್ಯ ಕಶ್ಚಿದ್ದಯಿತಃ ಪ್ರತೀಪೋ
ನ ಜ್ಞಾತಿಬಂಧುರ್ನ ಪರೋ ನ ಚ ಸ್ವಃ ।
ಸಮಸ್ಯ ಸರ್ವತ್ರ ನಿರಂಜನಸ್ಯ
ಸುಖೇ ನ ರಾಗಃ ಕುತ ಏವ ರೋಷಃ ॥
ಅನುವಾದ
ಅಮ್ಮಾ! ಭಗವಾನ್ ಶ್ರೀಹರಿಯು ಎಲ್ಲ ದರಲ್ಲಿ ಸಮನೂ ಮತ್ತು ಮಾಯೆಯ ಮಲದ ಸೋಂಕು ಇಲ್ಲದವನು. ಅವನಿಗೆ ಯಾರೂ ಪ್ರಿಯನೂ ಇಲ್ಲ , ಅಪ್ರಿಯನೂ ಇಲ್ಲ. ಜ್ಞಾತಿ-ಬಂಧು, ತನ್ನವರು-ಪರರೂ ಎಂಬುದೂ ಇಲ್ಲ. ಸುಖದಲ್ಲಿ ಪ್ರೀತಿಯಿಲ್ಲ. ರೋಷ ವಾದರೂ ಎಲ್ಲಿಂದ ಬಂದೀತು? ॥22॥
(ಶ್ಲೋಕ-23)
ಮೂಲಮ್
ತಥಾಪಿ ತಚ್ಛಕ್ತಿವಿಸರ್ಗ ಏಷಾಂ
ಸುಖಾಯ ದುಃಖಾಯ ಹಿತಾಹಿತಾಯ ।
ಬಂಧಾಯ ಮೋಕ್ಷಾಯ ಚ ಮೃತ್ಯುಜನ್ಮನೋಃ
ಶರೀರಿಣಾಂ ಸಂಸೃತಯೇವಕಲ್ಪತೇ ॥
ಅನುವಾದ
ಆದರೂ ಅವನ ಮಾಯಾಶಕ್ತಿಯ ಕಾರ್ಯಗಳಿಂದ ಪಾಪ-ಪುಣ್ಯಗಳೇ ಪ್ರಾಣಿ ಗಳ ಸುಖ-ದುಃಖ, ಹಿತ-ಅಹಿತ, ಬಂಧ-ಮೋಕ್ಷ, ಜನ್ಮ- ಮೃತ್ಯು ಮತ್ತು ಸಂಸಾರದಲ್ಲಿ ಬಂದುಹೋಗಲು ಕಾರಣ ವಾಗುತ್ತವೆ. ॥23॥
(ಶ್ಲೋಕ-24)
ಮೂಲಮ್
ಅಥ ಪ್ರಸಾದಯೇ ನ ತ್ವಾಂ ಶಾಪಮೋಕ್ಷಾಯ ಭಾಮಿನಿ ।
ಯನ್ಮನ್ಯಸೇ ಅಸಾಧೂಕ್ತಂ ಮಮ ತತ್ಕ್ಷಮ್ಯತಾಂ ಸತಿ ॥
ಅನುವಾದ
ಓ ಪತಿಪ್ರಾಣೆಯಾದ ದೇವಿಯೇ! ನನ್ನನ್ನು ಶಾಪದಿಂದ ಬಿಡುಗಡೆ ಮಾಡು’ ಎಂದು ನಿನ್ನನ್ನು ಬೇಡುತ್ತಿಲ್ಲ. ಕೆಟ್ಟದ್ದೆಂದು ನಿನಗೆ ಅನಿಸಿರುವ ನನ್ನ ಮಾತುಗಳನ್ನು ಕೃಪೆಯಿಟ್ಟು ಕ್ಷಮಿಸಬೇಕೆಂದೇ ನಾನು ಬಯಸುತ್ತೇನೆ. ॥24॥
(ಶ್ಲೋಕ-25)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಪ್ರಸಾದ್ಯ ಗಿರಿಶೌ ಚಿತ್ರಕೇತುರರಿಂದಮ ।
ಜಗಾಮ ಸ್ವವಿಮಾನೇನ ಪಶ್ಯತೋಃ ಸ್ಮಯತೋಸ್ತಯೋಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಶತ್ರು ಹಂತಕನೇ! ಚಿತ್ರಕೇತುವು ಹೀಗೆ ಪಾರ್ವತೀ-ಪರಮೇಶ್ವರರನ್ನು ಪ್ರಸನ್ನಗೊಳಿಸಿ ಅವರು ನಸುನಗುತ್ತಾ ನೋಡುತ್ತಿರುವಂತೆಯೇ ತನ್ನ ವಿಮಾನವನ್ನೇರಿ ಹೊರಟುಹೋದನು. ॥25॥
(ಶ್ಲೋಕ-26)
ಮೂಲಮ್
ತತಸ್ತು ಭಗವಾನ್ರುದ್ರೋ ರುದ್ರಾಣೀಮಿದಮಬ್ರವೀತ್ ।
ದೇವರ್ಷಿದೈತ್ಯಸಿದ್ಧಾನಾಂ ಪಾರ್ಷದಾನಾಂ ಚ ಶೃಣ್ವತಾಮ್ ॥
ಅನುವಾದ
ಆಗ ಭಗವಾನ್ ರುದ್ರದೇವರು ದೇವತೆಗಳು, ಋಷಿಗಳು, ದೈತ್ಯರು, ಸಿದ್ಧರು ಮತ್ತು ಪಾರ್ಷದರ ಮುಂದೆಯೇ ಭಗವತೀ ಪಾರ್ವತಿಗೆ ಹೀಗೆಂದರು. ॥26॥
(ಶ್ಲೋಕ-27)
ಮೂಲಮ್ (ವಾಚನಮ್)
ಶ್ರೀರುದ್ರ ಉವಾಚ
ಮೂಲಮ್
ದೃಷ್ಟವತ್ಯಸಿ ಸುಶ್ರೋಣಿ ಹರೇರದ್ಭುತಕರ್ಮಣಃ ।
ಮಾಹಾತ್ಮ್ಯಂ ಭೃತ್ಯಭೃತ್ಯಾನಾಂ ನಿಃಸ್ಪೃಹಾಣಾಂ ಮಹಾತ್ಮನಾಮ್ ॥
ಅನುವಾದ
ಭಗವಾನ್ ಶಂಕರನು ಹೇಳಿದನು — ಎಲೈ ಸುಂದರಿಯೇ! ದಿವ್ಯಲೀಲಾವಿಹಾರೀ ಭಗವಂತನ ನಿಃಸ್ಪೃಹರೂ, ಉದಾರ ಹೃದಯರೂ ಆದ ದಾಸಾನುದಾಸರ ಮಹಿಮೆಯನ್ನು ನೀನು ಕಣ್ಣಾರೆ ನೋಡಿದೆಯಲ್ಲ. ॥27॥
(ಶ್ಲೋಕ-28)
ಮೂಲಮ್
ನಾರಾಯಣಪರಾಃ ಸರ್ವೇ ನ ಕುತಶ್ಚನ ಬಿಭ್ಯತಿ ।
ಸ್ವರ್ಗಾಪವರ್ಗನರಕೇಷ್ವಪಿ ತುಲ್ಯಾರ್ಥದರ್ಶಿನಃ ॥
ಅನುವಾದ
ಭಗವಂತನಿಗೆ ಶರಣಾದ ಜನರು ಯಾರಿಗೂ ಹೆದರುವುದಿಲ್ಲ. ಏಕೆಂದರೆ, ಅವರಿಗೆ ಸ್ವರ್ಗ, ಮೋಕ್ಷ, ನರಕದಲ್ಲಿಯೂ ಕೂಡ ಕೇವಲ ಶ್ರೀಭಗವಂತನೊಬ್ಬನದೇ ಸಮಾನ ಭಾವದಿಂದ ದರ್ಶನವಾಗುತ್ತಾ ಇರುತ್ತದೆ. ॥28॥
(ಶ್ಲೋಕ-29)
ಮೂಲಮ್
ದೇಹಿನಾಂ ದೇಹಸಂಯೋಗಾದ್ದ್ವಂದ್ವಾನೀಶ್ವರಲೀಲಯಾ ।
ಸುಖಂ ದುಃಖಂ ಮೃತಿರ್ಜನ್ಮ ಶಾಪೋನುಗ್ರಹ ಏವ ಚ ॥
ಅನುವಾದ
ಜೀವಿಗಳಿಗೆ ಭಗವಂತನ ಲೀಲೆಯಿಂದಲೇ ದೇಹದ ಸಂಯೋಗ ಉಂಟಾದ ಕಾರಣದಿಂದಲೇ ಸುಖ-ದುಃಖ, ಜನ್ಮ-ಮರಣ, ಶಾಪ-ಅನುಗ್ರಹ ಮುಂತಾದ ದ್ವಂದ್ವಗಳು ದೊರೆಯುತ್ತವೆ. ॥29॥
(ಶ್ಲೋಕ-30)
ಮೂಲಮ್
ಅವಿವೇಕಕೃತಃ ಪುಂಸೋ ಹ್ಯರ್ಥಭೇದ ಇವಾತ್ಮನಿ ।
ಗುಣದೋಷವಿಕಲ್ಪಶ್ಚ ಭಿದೇವ ಸ್ರಜಿವತ್ಕೃತಃ ॥
ಅನುವಾದ
ಸ್ವಪ್ನದಲ್ಲಿ ಭೇದ-ಭ್ರಮೆಯಿಂದ ಸುಖ-ದುಃಖಾದಿಗಳು ಕಂಡು ಬರುತ್ತವೆ ಮತ್ತು ಜಾಗ್ರತ್ ಅವಸ್ಥೆಯಲ್ಲಿ ಭ್ರಮೆಯಿಂದ ಮಾಲೆಯಲ್ಲಿಯೂ ಸರ್ಪಬುದ್ಧಿ ಉಂಟಾಗುತ್ತದೆ. ಹಾಗೆಯೇ ಮನುಷ್ಯನು ಅಜ್ಞಾನದಿಂದಲೇ ಆತ್ಮನಲ್ಲಿ ದೇವತೆಗಳು, ಮನುಷ್ಯರು ಮುಂತಾದ ಭೇದ ಹಾಗೂ ಗುಣ-ದೋಷಾದಿ ಕಲ್ಪನೆ ಮಾಡುತ್ತಾನೆ. ॥30॥
(ಶ್ಲೋಕ-31)
ಮೂಲಮ್
ವಾಸುದೇವೇ ಭಗವತಿ ಭಕ್ತಿಮುದ್ವಹತಾಂ ನೃಣಾಮ್ ।
ಜ್ಞಾನವೈರಾಗ್ಯವೀರ್ಯಾಣಾಂ ನೇಹ ಕಶ್ಚಿದ್ವ್ಯಪಾಶ್ರಯಃ ॥
ಅನುವಾದ
ಜ್ಞಾನ ಮತ್ತು ವೈರಾಗ್ಯದ ಬಲವಿರುವವರಿಗೆ ಮತ್ತು ಭಗವಾನ್ ಶ್ರೀವಾಸುದೇವನ ಚರಣಗಳಲ್ಲಿ ಭಕ್ತಿಭಾವವಿರಿಸಿದವರಿಗೆ ಈ ಜಗತ್ತಿನಲ್ಲಿ ಇದು ಹೇಯ, ಇದು ಉಪಾದೇಯ ಎಂಬ ರಾಗ-ದ್ವೇಷ ಮಾಡುವಂತಹ ಯಾವುದೇ ವಸ್ತು ಇರುವುದಿಲ್ಲ. ॥31॥
(ಶ್ಲೋಕ-32)
ಮೂಲಮ್
ನಾಹಂ ವಿರಿಂಚೋ ನ ಕುಮಾರನಾರದೌ
ನ ಬ್ರಹ್ಮಪುತ್ರಾ ಮುನಯಃ ಸುರೇಶಾಃ ।
ವಿದಾಮ ಯಸ್ಯೇಹಿತಮಂಶಕಾಂಶಕಾ
ನ ತತ್ಸ್ವರೂಪಂ ಪೃಥಗೀಶಮಾನಿನಃ ॥
ಅನುವಾದ
ನಾನು, ಬ್ರಹ್ಮದೇವರು, ಸನಕಾದಿಗಳು, ನಾರದರು, ಬ್ರಹ್ಮ ಪುತ್ರರಾದ ಭೃಗು ಮುಂತಾದ ಮುನಿಗಳು ಮತ್ತು ದೊಡ್ಡ-ದೊಡ್ಡ ದೇವತೆಗಳು ಯಾರೂ ಭಗವಂತನ ಲೀಲೆಯ ರಹಸ್ಯವನ್ನು ತಿಳಿಯಲಾರೆವು. ಇಂತಹ ಸ್ಥಿತಿಯಲ್ಲಿ ಅವನ ಅಂಶಾಂಶರು ಮತ್ತು ತನ್ನನ್ನು ಅವನಿಂದ ಬೇರೆ ಈಶ್ವರನೆಂದು ತಿಳಿದವರು ಅವನ ಸ್ವರೂಪವನ್ನು ಹೇಗೆ ತಿಳಿಯ ಬಲ್ಲರು? ॥32॥
(ಶ್ಲೋಕ-33)
ಮೂಲಮ್
ನ ಹ್ಯಸ್ಯಾಸ್ತಿ ಪ್ರಿಯಃ ಕಶ್ಚಿನ್ನಾಪ್ರಿಯಃ ಸ್ವಃ ಪರೋಪಿ ವಾ ।
ಆತ್ಮತ್ವಾತ್ಸರ್ವಭೂತಾನಾಂ ಸರ್ವಭೂತಪ್ರಿಯೋಹರಿಃ ॥
ಅನುವಾದ
ಭಗವಂತನಿಗೆ ಪ್ರಿಯರಾಗಲೀ, ಅಪ್ರಿಯರಾಗಲೀ ಯಾರೂ ಇಲ್ಲ. ಅವನಿಗೆ ಸ್ವಕೀಯನೂ, ಪರಕೀಯನೂ ಯಾರೂ ಇಲ್ಲ. ಅವನು ಎಲ್ಲ ಪ್ರಾಣಿಗಳ ಆತ್ಮನಾಗಿರುವನು, ಆದ್ದರಿಂದ ಎಲ್ಲ ಪ್ರಾಣಿಗಳ ಪ್ರಿಯತಮನಾಗಿರುವನು. ॥33॥
(ಶ್ಲೋಕ-34)
ಮೂಲಮ್
ತಸ್ಯ ಚಾಯಂ ಮಹಾಭಾಗಶ್ಚಿತ್ರಕೇತುಃ ಪ್ರಿಯೋನುಗಃ ।
ಸರ್ವತ್ರ ಸಮದೃಕ್ ಶಾಂತೋ ಹ್ಯಹಂ ಚೈವಾಚ್ಯುತಪ್ರಿಯಃ ॥
ಅನುವಾದ
ಪ್ರಿಯೇ! ಈ ಪರಮಭಾಗ್ಯವಂತ ನಾದ ಚಿತ್ರಕೇತುವು ಆ ಭಗವಂತನಿಗೆ ಪ್ರಿಯನಾದ ಅನುಚರನೂ, ಶಾಂತನೂ, ಸಮದರ್ಶಿಯೂ ಆಗಿದ್ದಾನೆ. ನಾನೂ ಕೂಡ ಭಗವಾನ್ ಶ್ರೀಹರಿಗೆ ಪ್ರಿಯನಾಗಿದ್ದೇನೆ. ॥34॥
(ಶ್ಲೋಕ-35)
ಮೂಲಮ್
ತಸ್ಮಾನ್ನ ವಿಸ್ಮಯಃ ಕಾರ್ಯಃ ಪುರುಷೇಷು ಮಹಾತ್ಮಸು ।
ಮಹಾಪುರುಷಭಕ್ತೇಷು ಶಾಂತೇಷು ಸಮದರ್ಶಿಷು ॥
ಅನುವಾದ
ಅದಕ್ಕಾಗಿ ಭಗವಂತನ ಪ್ರಿಯಭಕ್ತರೂ, ಶಾಂತರೂ, ಸಮ ದರ್ಶಿಗಳೂ, ಮಹಾತ್ಮರೂ ಆದವರ ವಿಷಯದಲ್ಲಿ ನೀನು ಯಾವರೀತಿಯಿಂದಲೂ ಆಶ್ಚರ್ಯಪಡಬಾರದು. ॥35॥
(ಶ್ಲೋಕ-36)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಶ್ರುತ್ವಾ ಭಗವತಃ ಶಿವಸ್ಯೋಮಾಭಿಭಾಷಿತಮ್ ।
ಬಭೂವ ಶಾಂತಧೀ ರಾಜನ್ ದೇವೀ ವಿಗತವಿಸ್ಮಯಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶಂಕರನ ಈ ಭಾಷಣವನ್ನು ಕೇಳಿ ಭಗವತಿ ಪಾರ್ವತಿಯ ಚಿತ್ತವೃತ್ತಿಯು ಶಾಂತವಾಯಿತು ಹಾಗೂ ಆಕೆಯು ಆಶ್ಚರ್ಯರಹಿತಳಾದಳು. ॥36॥
(ಶ್ಲೋಕ-37)
ಮೂಲಮ್
ಇತಿ ಭಾಗವತೋ ದೇವ್ಯಾಃ ಪ್ರತಿಶಪ್ತುಮಲಂತಮಃ ।
ಮೂರ್ಧ್ನಾ ಸಂಜಗೃಹೇ ಶಾಪಮೇತಾವತ್ಸಾಧುಲಕ್ಷಣಮ್ ॥
ಅನುವಾದ
ಭಾಗವ ತೋತ್ತಮನಾದ ಚಿತ್ರಕೇತುವು ಕೂಡ ಭಗವತೀ ಪಾರ್ವತಿಗೆ ಪ್ರತಿಶಾಪವನ್ನು ಕೊಡಲು ಸಮರ್ಥನಾಗಿದ್ದರೂ ಅವನು ಆಕೆಗೆ ಶಾಪವನ್ನು ಕೊಡದೆ ಅವಳ ಶಾಪವನ್ನು ಶಿರಸಾವಹಿಸಿ ಕೊಂಡನು. ಇದೇ ತಾನೇ ಸಾಧು-ಸಜ್ಜನರ ಲಕ್ಷಣವು! ॥37॥
(ಶ್ಲೋಕ-38)
ಮೂಲಮ್
ಜಜ್ಞೇ ತ್ವಷ್ಟುರ್ದಕ್ಷಿಣಾಗ್ನೌ ದಾನವೀಂ ಯೋನಿಮಾಶ್ರಿತಃ ।
ವೃತ್ರ ಇತ್ಯಭಿವಿಖ್ಯಾತೋ ಜ್ಞಾನವಿಜ್ಞಾನಸಂಯುತಃ ॥
ಅನುವಾದ
ಇದೇ ವಿದ್ಯಾಧರ ಚಿತ್ರಕೇತುವು ದಾನವ ಯೋನಿಯನ್ನು ಆಶ್ರಯಿಸಿ ತ್ವಷ್ಟನ ದಕ್ಷಿಣಾಗ್ನಿಯಿಂದ ಹುಟ್ಟಿ, ವೃತ್ರಾಸುರ ನೆಂಬ ಹೆಸರಿನಿಂದ ಖ್ಯಾತನಾದನು. ಅಲ್ಲಿಯೂ ಅವನು ಭಗವತ್ ಸ್ವರೂಪದ ಜ್ಞಾನದಿಂದಲೂ, ಭಕ್ತಿಯಿಂದಲೂ ಪರಿಪೂರ್ಣನಾಗಿದ್ದನು. ॥ 38 ॥
(ಶ್ಲೋಕ-39)
ಮೂಲಮ್
ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಛಸಿ ।
ವೃತ್ರಸ್ಯಾಸುರಜಾತೇಶ್ಚ ಕಾರಣಂ ಭಗವನ್ಮತೇಃ ॥
ಅನುವಾದ
ವೃತ್ರಾಸುರನು ದೈತ್ಯ ಯೋನಿಯಲ್ಲಿ ಏಕೆ ಜನಿಸಿದನು? ಆ ಯೋನಿಯಲ್ಲಿಯೂ ಅವನಿಗೆ ಭಗವಂತನ ಅಂತಹ ಭಕ್ತಿಯು ಹೇಗೆ ದೊರೆಯಿತು? ಎಂದು ನೀನು ಪ್ರಶ್ನೆ ಮಾಡಿದ್ದೆ. ಅದಕ್ಕೆ ವಿವರವಾದ ಉತ್ತರವನ್ನು ನಾನು ಕೊಟ್ಟಾಯಿತು. ॥39॥
(ಶ್ಲೋಕ-40)
ಮೂಲಮ್
ಇತಿಹಾಸಮಿಮಂ ಪುಣ್ಯಂ ಚಿತ್ರಕೇತೋರ್ಮಹಾತ್ಮನಃ ।
ಮಾಹಾತ್ಮ್ಯಂ ವಿಷ್ಣುಭಕ್ತಾನಾಂ ಶ್ರುತ್ವಾ ಬಂಧಾದ್ವಿಮುಚ್ಯತೇ ॥
ಅನುವಾದ
ಮಹಾತ್ಮಾ ಚಿತ್ರಕೇತುವಿನ ಈ ಪವಿತ್ರ ಇತಿಹಾಸವು ಕೇವಲ ಅವನಷ್ಟೇ ಅಲ್ಲ, ಸಮಸ್ತ ವಿಷ್ಣುಭಕ್ತರ ಮಹಾತ್ಮ್ಯವಾಗಿದೆ. ಇದನ್ನು ಕೇಳುವವನು ಎಲ್ಲ ಬಂಧನಗಳಿಂದ ಮುಕ್ತನಾಗಿ ಹೋಗುತ್ತಾನೆ. ॥40॥
(ಶ್ಲೋಕ-41)
ಮೂಲಮ್
ಯ ಏತತ್ಪ್ರಾತರುತ್ಥಾಯ ಶ್ರದ್ಧಯಾ ವಾಗ್ಯತಃ ಪಠೇತ್ ।
ಇತಿಹಾಸಂ ಹರಿಂ ಸ್ಮೃತ್ವಾ ಸ ಯಾತಿ ಪರಮಾಂ ಗತಿಮ್ ॥
ಅನುವಾದ
ಪ್ರಾತಃಕಾಲದಲ್ಲಿ ಎದ್ದು ಮೌನದಿಂದಿದ್ದು, ಶ್ರದ್ಧೆಯಿಂದ ಭಗವಂತನ ಸ್ಮರಣೆ ಮಾಡುತ್ತಾ ಈ ಇತಿಹಾಸವನ್ನು ಓದುವವನು ಪರಮಗತಿಯನ್ನು ಹೊಂದುವನು.॥41॥
ಅನುವಾದ (ಸಮಾಪ್ತಿಃ)
ಹದಿನೇಳನೆಯ ಅಧ್ಯಾಯವು ಮುಗಿಯಿತು. ॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ
ಚಿತ್ರಕೇತುಶಾಪೋ ನಾಮ ಸಪ್ತದಶೋಽಧ್ಯಾಯಃ ॥17॥