೧೬

[ಹದಿನಾರನೆಯ ಅಧ್ಯಾಯ]

ಭಾಗಸೂಚನಾ

ಚಿತ್ರಕೇತುವಿನ ವೈರಾಗ್ಯ ಮತ್ತು ಸಂಕರ್ಷಣಸ್ವಾಮಿಯ ದರ್ಶನ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಥ ದೇವಋಷೀ ರಾಜನ್ಸಂಪರೇತಂ ನೃಪಾತ್ಮಜಮ್ ।
ದರ್ಶಯಿತ್ವೇತಿ ಹೋವಾಚ ಜ್ಞಾತೀನಾಮನುಶೋಚತಾಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಅನಂತರ ದೇವರ್ಷಿ ನಾರದರು ತಮ್ಮ ಯೋಗಬಲದಿಂದ ಮೃತನಾದ ರಾಜಕುಮಾರನ ಜೀವಾತ್ಮನನ್ನು ಶೋಕಪಡುತ್ತಿದ್ದ ನೆಂಟರಿಷ್ಟರ ಮುಂದೆ ಪ್ರತ್ಯಕ್ಷವಾಗುವಂತೆ ಮಾಡಿ ಅವನಲ್ಲಿ ಕೇಳಿದರು ॥1॥

(ಶ್ಲೋಕ-2)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಜೀವಾತ್ಮನ್ಪಶ್ಯ ಭದ್ರಂ ತೇ ಮಾತರಂ ಪಿತರಂ ಚ ತೇ ।
ಸುಹೃದೋ ಬಾಂಧವಾಸ್ತಪ್ತಾಃ ಶುಚಾ ತ್ವತ್ಕೃತಯಾ ಭೃಶಮ್ ॥

ಅನುವಾದ

ದೇವಋಷಿ ನಾರದರು ಹೇಳಿದರು — ಎಲೈ ಜೀವಾತ್ಮನೇ! ನಿನಗೆ ಮಂಗಳವಾಗಲಿ. ಇಲ್ಲಿ ನೋಡು. ನಿನ್ನ ತಂದೆ- ತಾಯಿ, ಬಂಧು-ಮಿತ್ರರು ನಿನ್ನ ಅಗಲಿಕೆಯಿಂದ ಅತ್ಯಂತ ಶೋಕತಪ್ತರಾಗಿದ್ದಾರೆ. ॥2॥

(ಶ್ಲೋಕ-3)

ಮೂಲಮ್

ಕಲೇವರಂ ಸ್ವಮಾವಿಶ್ಯ ಶೇಷಮಾಯುಃ ಸುಹೃದ್ವ ತಃ ।
ಭುಂಕ್ಷ್ವ ಭೋಗಾನ್ ಪಿತೃಪ್ರತ್ತಾನಧಿತಿಷ್ಠ ನೃಪಾಸನಮ್ ॥

ಅನುವಾದ

ಅದಕ್ಕಾಗಿ ನೀನು ನಿನ್ನ ಶರೀರದೊಳಗೆ ಪ್ರವೇಶಿಸಿ ಉಳಿದ ಆಯುಸ್ಸನ್ನು ನಿನ್ನ ನೆಂಟರಿಷ್ಟರ ಜೊತೆಯಲ್ಲಿ ಇದ್ದು ಕಳೆಯುವವನಾಗು. ನಿನ್ನ ತಂದೆಯು ಕೊಡುವ ಭೋಗಗಳನ್ನು ಅನುಭವಿಸುತ್ತಾ, ರಾಜ್ಯಸಿಂಹಾಸನದ ಮೇಲೆ ಕುಳಿತುಕೋ. ॥3॥

(ಶ್ಲೋಕ-4)

ಮೂಲಮ್ (ವಾಚನಮ್)

ಜೀವ ಉವಾಚ

ಮೂಲಮ್

ಕಸ್ಮಿನ್ಜನ್ಮನ್ಯಮೀ ಮಹ್ಯಂ ಪಿತರೋ ಮಾತರೋಭವನ್ ।
ಕರ್ಮಭಿರ್ಭ್ರಾಮ್ಯಮಾಣಸ್ಯ ದೇವತಿರ್ಯಂಗ್ನೃಯೋನಿಷು ॥

ಅನುವಾದ

ಜೀವಾತ್ಮನು ಹೇಳಿದನು — ದೇವರ್ಷಿಗಳೇ! ನಾನು ನನ್ನ ಕರ್ಮಾನುಸಾರವಾಗಿ ದೇವತೆಗಳು, ಮನುಷ್ಯರು, ಪಶು-ಪಕ್ಷಿ ಮುಂತಾದ ಯೋನಿಗಳಲ್ಲಿ ಎಷ್ಟು ಜನ್ಮಗಳಿಂದ ಅಲೆಯುತ್ತಿರುವೆನೋ ತಿಳಿಯದು. ಅವುಗಳಲ್ಲಿ ಯಾವ-ಯಾವ ಜನ್ಮಗಳಲ್ಲಿ ಇವರು ತಂದೆ-ತಾಯಿಗಳಾಗಿದ್ದರು? ॥4॥

(ಶ್ಲೋಕ-5)

ಮೂಲಮ್

ಬಂಧುಜ್ಞಾತ್ಯರಿಮಧ್ಯಸ್ಥಮಿಶ್ರೋದಾಸೀನವಿದ್ವಿಷಃ ।
ಸರ್ವ ಏವ ಹಿ ಸರ್ವೇಷಾಂ ಭವಂತಿ ಕ್ರಮಶೋ ಮಿಥಃ ॥

ಅನುವಾದ

ಬೇರೆ-ಬೇರೆ ಜನ್ಮಗಳಲ್ಲಿ ಎಲ್ಲರೂ ಒಬ್ಬರಿಗೊಬ್ಬರು ನೆಂಟರಿಷ್ಟರೋ, ಶತ್ರು-ಮಿತ್ರರೋ, ಮಧ್ಯಸ್ಥರೋ, ಉದಾಸೀನರೋ, ದ್ವೇಷಿಗಳೋ, ಆಗುತ್ತಾ ಇರುತ್ತಾರೆ. ॥5॥

(ಶ್ಲೋಕ-6)

ಮೂಲಮ್

ಯಥಾ ವಸ್ತೂನಿ ಪಣ್ಯಾನಿ ಹೇಮಾದೀನಿ ತತಸ್ತತಃ ।
ಪರ್ಯಟಂತಿ ನರೇಷ್ವೇವಂ ಜೀವೋ ಯೋನಿಷು ಕರ್ತೃಷು ॥

ಅನುವಾದ

ಚಿನ್ನವೇ ಮುಂತಾದ ಕ್ರಯ-ವಿಕ್ರಯದ ವಸ್ತುಗಳು ಒಬ್ಬ ವ್ಯಾಪಾರಿಯಿಂದ ಮತ್ತೊಬ್ಬರ ಬಳಿಗೆ ಹೋಗುತ್ತಾ-ಬರುತ್ತಾ ಇರು ವಂತೆಯೇ ಜೀವಿಯೂ ಬೇರೆ-ಬೇರೆ ಯೋನಿಗಳಲ್ಲಿ ಹೋಗುತ್ತಾ-ಬರುತ್ತಾ ಇರುತ್ತಾನೆ. ॥6॥

(ಶ್ಲೋಕ-7)

ಮೂಲಮ್

ನಿತ್ಯಸ್ಯಾರ್ಥಸ್ಯ ಸಂಬಂಧೋ ಹ್ಯನಿತ್ಯೋ ದೃಶ್ಯತೇ ನೃಷು ।
ಯಾವದ್ಯಸ್ಯ ಹಿ ಸಂಬಂಧೋ ಮಮತ್ವಂ ತಾವದೇವ ಹಿ ॥

ಅನುವಾದ

ಹೀಗೆ ವಿಚಾರ ಮಾಡಿದರೆ ಮನುಷ್ಯರಿಂದ ಹೆಚ್ಚುದಿನ ಬಾಳುವಂತಹ ಚಿನ್ನವೇ ಮುಂತಾದ ಪದಾರ್ಥಗಳ ಸಂಬಂಧವೂ ಕೂಡ ಮನುಷ್ಯರೊಂದಿಗೆ ಸ್ಥಾಯಿಯಾಗಿಲ್ಲ, ಕ್ಷಣಿಕವೇ ಇರುತ್ತದೆ. ವಸ್ತುವಿನ ಸಂಬಂಧ ಇರುವತನಕ ಮನುಷ್ಯನಿಗೆ ಆ ವಸ್ತುವಿನಲ್ಲಿ ಮಮತೆಯೇ ಇರುತ್ತದೆ. ॥7॥

(ಶ್ಲೋಕ-8)

ಮೂಲಮ್

ಏವಂ ಯೋನಿಗತೋ ಜೀವಃ ಸ ನಿತ್ಯೋ ನಿರಹಂಕೃತಃ ।
ಯಾವದ್ಯತ್ರೋಪಲಭ್ಯೇತ ತಾವತ್ಸ್ವತ್ವಂ ಹಿ ತಸ್ಯ ತತ್ ॥

ಅನುವಾದ

ಜೀವನು ನಿತ್ಯನೂ, ಅಹಂಕಾರ ರಹಿತನೂ ಆಗಿರುವನು. ಅವನು ಗರ್ಭವನ್ನು ಪ್ರವೇಶಿಸಿ ಆ ಶರೀರದಲ್ಲಿ ಇರುವ ತನಕ ಆ ಶರೀರವನ್ನು ತನ್ನದೆಂದು ತಿಳಿಯುತ್ತಾನೆ. ॥8॥

(ಶ್ಲೋಕ-9)

ಮೂಲಮ್

ಏಷ ನಿತ್ಯೋವ್ಯಯಃ ಸೂಕ್ಷ್ಮ ಏಷ ಸರ್ವಾಶ್ರಯಃ ಸ್ವದೃಕ್ ।
ಆತ್ಮಮಾಯಾಗುಣೈರ್ವಿಶ್ವಮಾತ್ಮಾನಂ ಸೃಜತಿ ಪ್ರಭುಃ ॥

ಅನುವಾದ

ಈ ಜೀವನು ನಿತ್ಯನೂ ಅವಿನಾಶಿಯೂ, ಸೂಕ್ಷ್ಮನೂ, ಜನ್ಮಾದಿ ರಹಿತನೂ, ಎಲ್ಲರ ಆಶ್ರಯನೂ, ಸ್ವಯಂಪ್ರಕಾಶನೂ ಆಗಿರುವನು. ಅವನಿಗೆ ಸ್ವರೂಪದಿಂದ ಹುಟ್ಟು-ಸಾವು ಗಳಾವುವೂ ಇಲ್ಲ. ಹೀಗಿದ್ದರೂ ಇವನು ಈಶ್ವರರೂಪನೇ ಇರುವುದರಿಂದ ತನ್ನ ಮಾಯೆಯ ಗುಣಗಳಿಂದಲೇ ತಾನೇ-ತನ್ನನ್ನು ವಿಶ್ವದರೂಪದಲ್ಲಿ ಪ್ರಕಟಿಸಿಕೊಳ್ಳುವನು. ॥9॥

(ಶ್ಲೋಕ-10)

ಮೂಲಮ್

ನ ಹ್ಯಸ್ಯಾತಿಪ್ರಿಯಃ ಕಶ್ಚಿನ್ನಾಪ್ರಿಯಃ ಸ್ವಃ ಪರೋಪಿ ವಾ ।
ಏಕಃ ಸರ್ವಧಿಯಾಂ ದ್ರಷ್ಟಾ ಕರ್ತೃಣಾಂ ಗುಣದೋಷಯೋಃ ॥

ಅನುವಾದ

ಇವನಿಗೆ ಅತ್ಯಂತ ಪ್ರಿಯರಾಗಲೀ, ಅಪ್ರಿಯ ರಾಗಲೀ ಯಾರೂ ಇಲ್ಲ. ತನ್ನವರು-ಇತರರು ಎಂಬುದೂ ಇಲ್ಲ. ಏಕೆಂದರೆ, ಗುಣ-ದೋಷ (ಹಿತ-ಅಹಿತ)ಗಳನ್ನುಂಟು ಮಾಡುವ ಶತ್ರುತ್ವ-ಮಿತ್ರತ್ವ ಮುಂತಾದ ಬೇರೆ-ಬೇರೆ ಬುದ್ಧಿಗಳ ವೃತ್ತಿಗಳಿಗೆ ಇವನೊಬ್ಬನೇ ಸಾಕ್ಷಿಯಾಗಿದ್ದು, ನಿಜವಾಗಿ ಇವನು ಅದ್ವಿತೀಯನಾಗಿದ್ದಾನೆ. ॥10॥

(ಶ್ಲೋಕ-11)

ಮೂಲಮ್

ನಾದತ್ತ ಆತ್ಮಾ ಹಿ ಗುಣಂ ನ ದೋಷಂ ನ ಕ್ರಿಯಾಲಮ್ ।
ಉದಾಸೀನವದಾಸೀನಃ ಪರಾವರದೃಗೀಶ್ವರಃ ॥

ಅನುವಾದ

ಈ ಆತ್ಮನು ಕಾರ್ಯ-ಕಾರಣಗಳ ಸಾಕ್ಷಿ ಮತ್ತು ಸ್ವತಂತ್ರನಾಗಿದ್ದಾನೆ. ಅದಕ್ಕಾಗಿ ಇವನು ಶರೀರಾದಿಗಳ ಗುಣ-ದೋಷ ಗಳನ್ನು ಅಥವಾ ಕರ್ಮಫಲವನ್ನು ಸ್ವೀಕರಿಸುವುದಿಲ್ಲ, ಸದಾ ಉದಾಸೀನ ಭಾವದಿಂದಲೇ ಇರುತ್ತಾನೆ. ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುದೀರ್ಯ ಗತೋ ಜೀವೋ ಜ್ಞಾತಯಸ್ತಸ್ಯ ತೇ ತದಾ ।
ವಿಸ್ಮಿತಾ ಮುಮುಚುಃ ಶೋಕಂ ಛಿತ್ತ್ವಾತ್ಮಸ್ನೇಹಶೃಂಖಲಾಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಹೀಗೆ ಹೇಳಿ ಆ ಜೀವಾತ್ಮನು ಹೊರಟುಹೋದನು. ಅವನ ಮಾತನ್ನು ಕೇಳಿ ನೆಂಟರಿಷ್ಟರು ಅತ್ಯಂತ ವಿಸ್ಮಿತರಾದರು. ಅವರ ಸ್ನೇಹ-ಬಂಧನ ಕಡಿದುಹೋಯಿತು ಮತ್ತು ಅವನು ಸತ್ತಿರುವ ದುಃಖವೂ ದೂರವಾಯಿತು. ॥12॥

ಮೂಲಮ್

(ಶ್ಲೋಕ-13)
ನಿರ್ಹೃತ್ಯ ಜ್ಞಾತಯೋ ಜ್ಞಾತೇರ್ದೇಹಂ ಕೃತ್ವೋಚಿತಾಃ ಕ್ರಿಯಾಃ ।
ತತ್ಯಜುರ್ದುಸ್ತ್ಯಜಂ ಸ್ನೇಹಂ ಶೋಕಮೋಹಭಯಾರ್ತಿದಮ್ ॥

ಅನುವಾದ

ಇದಾದ ಬಳಿಕ ಜ್ಞಾತಿ ಬಂಧುಗಳು ಬಾಲಕನ ಶವವನ್ನು ಎತ್ತಿಕೊಂಡು ಹೋಗಿ ಅದಕ್ಕೆ ಕಾಲೋಚಿತ ಸಂಸ್ಕಾರಗಳನ್ನೂ, ಮರಣಾ ನಂತರದ ಕ್ರಿಯೆಗಳನ್ನು ಮಾಡಿ ಮುಗಿಸಿದರು. ಶೋಕ, ಮೋಹ, ಭಯ, ದುಃಖಗಳಿಗೆ ಕಾರಣವಾಗುವ ಸ್ನೇಹ- ಮಮತೆಗಳನ್ನೂ ತೊರೆದರು. ॥13॥

(ಶ್ಲೋಕ-14)

ಮೂಲಮ್

ಬಾಲಘ್ನ್ಯೋ ವ್ರೀಡಿತಾಸ್ತತ್ರ ಬಾಲಹತ್ಯಾಹತಪ್ರಭಾಃ
ಬಾಲಹತ್ಯಾವ್ರತಂ ಚೇರುರ್ಬ್ರಾಹ್ಮಣೈರ್ಯನ್ನಿರೂಪಿತಮ್ ।
ಯಮುನಾಯಾಂ ಮಹಾರಾಜ ಸ್ಮರಂತ್ಯೋ ದ್ವಿಜಭಾಷಿತಮ್ ॥

ಅನುವಾದ

ಪರೀಕ್ಷಿತನೇ! ಆ ಮಗುವಿಗೆ ವಿಷವನ್ನಿಟ್ಟು ಸಾವಿಗೆ ಕಾರಣರಾದ ರಾಣಿಯರ ಮುಖವು ಬಾಲಹತ್ಯೆಯಿಂದ ಕಾಂತಿಹೀನವಾಗಿತ್ತು ಮತ್ತು ನಾಚಿಕೆಯಿಂದ ಕಣ್ಣೆತ್ತಿಯೂ ನೋಡದಾದರು. ಅವರು ಅಂಗಿರಾ ಋಷಿಯ ಉಪದೇಶವನ್ನು ನೆನೆದು ಮಾತ್ಸರ್ಯ ರಹಿತರಾಗಿ ಯಮುನಾತೀರದಲ್ಲಿ ಬ್ರಾಹ್ಮಣರ ಆದೇಶದಂತೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡರು. ॥14॥

(ಶ್ಲೋಕ-15)

ಮೂಲಮ್

ಸ ಇತ್ಥಂ ಪ್ರತಿಬುದ್ಧಾತ್ಮಾ ಚಿತ್ರಕೇತುರ್ದ್ವಿಜೋಕ್ತಿಭಿಃ ।
ಗೃಹಾಂಧ ಕೂಪಾನ್ನಿಷ್ಕ್ರಾಂತಃ ಸರಃಪಂಕಾದಿವ ದ್ವಿಪಃ ॥

ಅನುವಾದ

ಹೀಗೆ ಅಂಗಿರಸ ಮತ್ತು ನಾರದ ಮಹರ್ಷಿಗಳ ಉಪದೇಶಗಳಿಂದ ಚಿತ್ರಕೇತುವಿನ ವಿವೇಕ ಬುದ್ಧಿಯು ಎಚ್ಚರಗೊಂಡಿತು. ಇದರಿಂದ ಅವನು ಸಲಗವು ಕೆರೆಯ ಕೆಸರಿನಿಂದ ಮೇಲೆದ್ದು ಬರುವಂತೆ ಮನೆ-ವಾರ್ತೆಗಳ ಕಗ್ಗತ್ತಲೆಯ ಕೂಪದಿಂದ ಹೊರಬಂದನು.॥15॥

(ಶ್ಲೋಕ-16)

ಮೂಲಮ್

ಕಾಲಿಂದ್ಯಾಂ ವಿಧಿವತ್ಸ್ನಾತ್ವಾ ಕೃತಪುಣ್ಯಜಲಕ್ರಿಯಃ ।
ವೌನೇನ ಸಂಯತಪ್ರಾಣೋ ಬ್ರಹ್ಮಪುತ್ರಾವವಂದತ ॥

ಅನುವಾದ

ಅವನು ಯಮುನಾ ನದಿಯಲ್ಲಿ ವಿಧಿವತ್ತಾಗಿ ಸ್ನಾನಮಾಡಿ, ತರ್ಪಣಾದಿ ಧಾರ್ಮಿಕ ಕ್ರಿಯೆಗಳನ್ನು ಪೂರೈಸಿದನು. ಅನಂತರ ಇಂದ್ರಿಯ ಸಂಯಮದಿಂದ ಕೂಡಿ, ಮೌನವಾಗಿ ಅವನು ದೇವರ್ಷಿನಾರದರ ಹಾಗೂ ಮಹರ್ಷಿ ಅಂಗಿರಸರ ಚರಣಗಳಲ್ಲಿ ವಂದಿಸಿ ಕೊಂಡನು. ॥16॥

(ಶ್ಲೋಕ-17)

ಮೂಲಮ್

ಅಥ ತಸ್ಮೈ ಪ್ರಪನ್ನಾಯ ಭಕ್ತಾಯ ಪ್ರಯುತಾತ್ಮನೇ ।
ಭಗವಾನ್ನಾರದಃ ಪ್ರೀತೋ ವಿದ್ಯಾಮೇತಾಮುವಾಚ ಹ ॥

ಅನುವಾದ

ಚಿತ್ರಕೇತುವು ಜಿತೇಂದ್ರಿಯನೂ, ಭಗವದ್ಭಕ್ತನೂ, ಶರಣಾಗತನೂ ಆಗಿದ್ದಾನೆಂದು ನಾರದರು ನೋಡಿ, ಅವರು ತುಂಬಾ ಪ್ರಸನ್ನರಾಗಿ ಅವನಿಗೆ ಈ ಸಂಕರ್ಷಣ ವಿದ್ಯೆಯನ್ನು ಉಪದೇಶಮಾಡಿದರು. ॥17॥

(ಶ್ಲೋಕ-18)

ಮೂಲಮ್

ಓಂ ನಮಸ್ತುಭ್ಯಂ ಭಗವತೇ ವಾಸುದೇವಾಯ ಧೀಮಹಿ ।
ಪ್ರದ್ಯುಮ್ನಾಯಾನಿರುದ್ಧಾಯ ನಮಃ ಸಂಕರ್ಷಣಾಯ ಚ ॥

ಅನುವಾದ

ಓಂಕಾರಸ್ವರೂಪನಾದ ಭಗವಂತಾ! ನೀನು ವಾಸುದೇವ, ಪ್ರದ್ಯುಮ್ನ, ಅನಿರುದ್ಧ, ಸಂಕರ್ಷಣ ಈ ರೂಪಗಳಿಂದ ಕ್ರಮವಾಗಿ ಚಿತ್ತ, ಬುದ್ಧಿ, ಮನಸ್ಸು ಮತ್ತು ಅಹಂಕಾರಗಳಿಗೆ ಅಧಿಷ್ಠಾನನಾಗಿರುವೆ. ನಾನು ನಿನ್ನ ಈ ಚತುರ್ವ್ಯೆಹರೂಪವನ್ನು ಮತ್ತೆ-ಮತ್ತೆ ನಮಸ್ಕಾರ ಪೂರ್ವಕವಾಗಿ ಧ್ಯಾನಿಸುತ್ತೇನೆ. ॥18॥

(ಶ್ಲೋಕ-19)

ಮೂಲಮ್

ನಮೋ ವಿಜ್ಞಾನಮಾತ್ರಾಯ ಪರಮಾನಂದಮೂರ್ತಯೇ ।
ಆತ್ಮಾರಾಮಾಯ ಶಾಂತಾಯ ನಿವೃತ್ತದ್ವೈತದೃಷ್ಟಯೇ ॥

ಅನುವಾದ

ನೀನು ವಿಶುದ್ಧ ವಿಜ್ಞಾನಸ್ವರೂಪನಾಗಿರುವೆ. ನಿನ್ನ ಮೂರ್ತಿಯು ಪರಮಾ ನಂದ ಮಯವಾಗಿದೆ. ನೀನು ನಿನ್ನ ಸ್ವರೂಪಭೂತ ಆನಂದ ದಲ್ಲೇ ಮಗ್ನನಾಗಿದ್ದು, ಪರಮಶಾಂತನಾಗಿರುವೆ. ದ್ವೈತ ದೃಷ್ಟಿಯು ನಿನ್ನನ್ನು ಸ್ಪರ್ಶಿಸಲಾರದು. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥19॥

(ಶ್ಲೋಕ-20)

ಮೂಲಮ್

ಆತ್ಮಾನಂದಾನುಭೂತ್ಯೈವ ನ್ಯಸ್ತಶಕ್ತ್ಯೂರ್ಮಯೇ ನಮಃ ।
ಹೃಷೀಕೇಶಾಯ ಮಹತೇ ನಮಸ್ತೇ ವಿಶ್ವಮೂರ್ತಯೇ ॥

ಅನುವಾದ

ಸ್ವರೂಪಭೂತವಾದ ಆನಂದದ ಅನುಭವದಿಂದಲೇ ಮಾಯೆಯಿಂದುಂಟಾದ ರಾಗ- ದ್ವೇಷಾದಿ ದೋಷಗಳನ್ನು ತಿರಸ್ಕರಿಸಿದವನಿಗೆ ನಮಸ್ಕಾರವು. ಇಂದ್ರಿಯಗಳಿಗೆ ಅಧಿಪತಿಯೂ, ಮಹತ್ಸ್ವರೂಪನೂ, ವಿಶ್ವಮೂರ್ತಿಯೂ ಆಗಿರುವ ನಿನಗೆ ನಮಸ್ಕಾರವು. ॥20॥

(ಶ್ಲೋಕ-21)

ಮೂಲಮ್

ವಚಸ್ಯುಪರತೇಪ್ರಾಪ್ಯ ಯ ಏಕೋ ಮನಸಾ ಸಹ ।
ಅನಾಮರೂಪಶ್ಚಿನ್ಮಾತ್ರಃ ಸೋವ್ಯಾನ್ನಃ ಸದಸತ್ಪರಃ ॥

ಅನುವಾದ

ಮನಸ್ಸುಸಹಿತ ವಾಣಿಯು ನಿನ್ನವರೆಗೆ ತಲುಪದೆ ಅದು ಮರಳುತ್ತದೆ. ಅದು ಉಪರತವಾದಾಗ ಉಳಿಯುವ ಅದ್ವಿ ತೀಯವೂ, ನಾಮ-ರೂಪರಹಿತವೂ, ಚೇತನ ಮಾತ್ರವೂ, ಕಾರ್ಯಕಾರಣಗಳಿಂದ ಅತೀತವೂ ಆದ ಆ ಪರತತ್ತ್ವ ವಾದ ಪರಮಾತ್ಮನು ನಮ್ಮನ್ನು ರಕ್ಷಿಸಲಿ. ॥21॥

(ಶ್ಲೋಕ-22)

ಮೂಲಮ್

ಯಸ್ಮಿನ್ನಿದಂ ಯತಶ್ಚೇದಂ ತಿಷ್ಠತ್ಯಪ್ಯೇತಿ ಜಾಯತೇ ।
ಮೃಣ್ಮಯೇಷ್ವಿವ ಮೃಜ್ಜಾತಿಸ್ತಸ್ಮೈ ತೇ ಬ್ರಹ್ಮಣೇ ನಮಃ ॥

ಅನುವಾದ

ಈ ಕಾರ್ಯಕಾರಣರೂಪವಾದ ಜಗತ್ತು ಯಾವನಿಂದ ಉತ್ಪನ್ನವಾಗುತ್ತದೋ, ಯಾವನಲ್ಲಿ ನೆಲೆಸುತ್ತದೋ, ಯಾವ ನಲ್ಲಿ ಲೀನವಾಗುತ್ತದೋ ಹಾಗೂ ಮಣ್ಣಿನ ವಸ್ತುಗಳಲ್ಲಿ ವ್ಯಾಪ್ತವಾದ ಮಣ್ಣಿನಂತೆ ಎಲ್ಲದರಲ್ಲಿ ಹಾಸು-ಹೊಕ್ಕಾಗಿ ವ್ಯಾಪಿಸಲ್ಪಟ್ಟಿದೆಯೋ ಆ ಪರಬ್ರಹ್ಮಸ್ವರೂಪನಾದ ನಿನಗೆ ನಾನು ನಮಸ್ಕರಿಸುತ್ತಿದ್ದೇನೆ. ॥22॥

(ಶ್ಲೋಕ-23)

ಮೂಲಮ್

ಯನ್ನ ಸ್ಪೃಶಂತಿ ನ ವಿದುರ್ಮನೋಬುದ್ಧೀಂದ್ರಿಯಾಸವಃ ।
ಅಂತರ್ಬಹಿಶ್ಚ ವಿತತಂ ವ್ಯೋಮವತ್ತನ್ನತೋಸ್ಮ್ಯಹಮ್ ॥

ಅನುವಾದ

ನೀನು ಆಕಾಶದಂತೆ ಒಳ-ಹೊರಗೆ ಏಕರಸವಾಗಿ ವ್ಯಾಪಿಸಿಕೊಂಡಿದ್ದರೂ, ನಿನ್ನನ್ನು ಮನಸ್ಸು, ಬುದ್ಧಿ ಮತ್ತು ಜ್ಞಾನೇಂದ್ರಿಯಗಳು ತಮ್ಮ ಜ್ಞಾನಶಕ್ತಿಯಿಂದ ಅರಿಯಲಾರರು. ಪ್ರಾಣ ಹಾಗೂ ಕರ್ಮೇಂದ್ರಿಯಗಳು ತಮ್ಮ ಕ್ರಿಯಾರೂಪವಾದ ಶಕ್ತಿಯಿಂದ ನಿನ್ನನ್ನು ಸ್ಪರ್ಶಿಸಲಾರವು. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥23॥

(ಶ್ಲೋಕ-24)

ಮೂಲಮ್

ದೇಹೇಂದ್ರಿಯಪ್ರಾಣಮನೋಧಿಯೋಮೀ
ಯದಂಶವಿದ್ಧಾಃ ಪ್ರಚರಂತಿ ಕರ್ಮಸು ।
ನೈವಾನ್ಯದಾ ಲೋಹಮಿವಾಪ್ರತಪ್ತಂ
ಸ್ಥಾನೇಷು ತದ್ದ್ರಷ್ಟ್ರಪದೇಶಮೇತಿ ॥

ಅನುವಾದ

ಶರೀರ, ಇಂದ್ರಿಯಗಳು, ಪ್ರಾಣಗಳು, ಮನಸ್ಸು, ಬುದ್ಧಿ ಇವುಗಳು ಜಾಗ್ರತ್ ಹಾಗೂ ಸ್ವಪ್ನಾವಸ್ಥೆಗಳಲ್ಲಿ ನಿನ್ನ ಚೈತನ್ಯಾಂಶವನ್ನು ಕೂಡಿಕೊಂಡೇ ತಮ್ಮ-ತಮ್ಮ ಕೆಲಸಗಳನ್ನು ಮಾಡುತ್ತವೆ. ಸುಷುಪ್ತಿ ಮತ್ತು ಮೂರ್ಛೆಯ ಅವಸ್ಥೆಗಳಲ್ಲಿ ನಿನ್ನ ಚೈತನ್ಯಾಂಶದಿಂದ ಕೂಡದೇ ಇರುವುದರಿಂದ ತಮ್ಮ-ತಮ್ಮ ಕೆಲಸಗಳನ್ನು ಮಾಡಲು ಅಸಮರ್ಥವಾಗುತ್ತವೆ. ಹಾಗೆಯೇ ಕಬ್ಬಿಣವು ಬೆಂಕಿಯಲ್ಲಿ ಕಾದಾಗ ಸುಡಬಲ್ಲದು, ಇಲ್ಲದಿದ್ದರೆ ಇಲ್ಲ. ಯಾವುದನ್ನು ದ್ರಷ್ಟಾ ಎಂದು ಹೇಳುವರೋ ಅದೂ ನೀನೇ ಆಗಿರುವೆ. ಜಾಗ್ರತ್ ಮುಂತಾದ ಅವಸ್ಥೆಗಳಲ್ಲಿ ನೀನು ಅದನ್ನು ಸ್ವೀಕರಿಸುತ್ತೀಯೆ. ನಿಜವಾಗಿ ನಿನ್ನಿಂದ ಹೊರತು ಅವುಗಳಿಗೆ ಯಾವುದೇ ಅಸ್ತಿತ್ವವೂ ಇಲ್ಲ. ॥24॥

(ಶ್ಲೋಕ-25)

ಮೂಲಮ್

ಓಂ ನಮೋ ಭಗವತೇ ಮಹಾಪುರುಷಾಯ ಮಹಾ- ನುಭಾವಾಯ ಮಹಾವಿಭೂತಿಪತಯೇ ಸಕಲಸಾತ್ವತ ಪರಿವೃಢನಿಕರಕರಕಮಲಕುಡ್ಮಲೋಪಲಾಲಿತಚರಣಾರವಿಂದ ಯುಗಲ ಪರಮಪರಮೇಷ್ಠಿನ್ನಮಸ್ತೇ ॥

ಅನುವಾದ

ಓಂಕಾರಸ್ವರೂಪಿಯೂ, ಮಹಾಪುರುಷನೂ, ಮಹಾನುಭಾವನೂ, ಮಹಾವಿಭೂತಿ ಯುಳ್ಳವನೂ ಆದ ಭಗವಾನ್ ಸಂಕರ್ಷಣದೇವನಿಗೆ ನಮಸ್ಕಾರವು. ಶ್ರೇಷ್ಠ ತಮರಾದ ಎಲ್ಲ ಭಕ್ತರ ಸಮೂಹಗಳೂ ಮೊಗ್ಗಿನಂತೆ ಜೋಡಿಸಿದ ತಮ್ಮ ಕರಕಮಲಗಳಿಂದ ನಿನ್ನ ಸೇವೆ ಮಾಡುವುದರಲ್ಲಿ ಆಸಕ್ತವಾಗಿವೆ. ನೀನೇ ಸರ್ವಶ್ರೇಷ್ಠನು. ಓ ಮಹಾಪ್ರಭುವೇ ನಿನಗೆ ಮತ್ತೆ-ಮತ್ತೆ ನಮಸ್ಕಾರಗಳು. ॥25॥

(ಶ್ಲೋಕ-26)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಭಕ್ತಾಯೈತಾಂ ಪ್ರಪನ್ನಾಯ ವಿದ್ಯಾಮಾದಿಶ್ಯ ನಾರದಃ ।
ಯಯಾವಂಗಿರಸಾ ಸಾಕಂ ಧಾಮ ಸ್ವಾಯಂಭುವಂ ಪ್ರಭೋ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ದೇವರ್ಷಿನಾರದರು ತಮ್ಮಲ್ಲಿ ಶರಣಾಗತನಾಗಿದ್ದ ಭಕ್ತನಾದ ಚಿತ್ರಕೇತುವಿಗೆ ಈ ವಿದ್ಯೆಯನ್ನು ಉಪದೇಶಿಸಿ, ಅಂಗಿರಸ ಮಹರ್ಷಿಗಳೊಡನೆ ಬ್ರಹ್ಮಲೋಕಕ್ಕೆ ತೆರಳಿದರು. ॥26॥

(ಶ್ಲೋಕ-27)

ಮೂಲಮ್

ಚಿತ್ರಕೇತುಸ್ತು ವಿದ್ಯಾಂ ತಾಂ ಯಥಾ ನಾರದಭಾಷಿತಾಮ್ ।
ಧಾರಯಾಮಾಸ ಸಪ್ತಾಹಮಬ್ಭಕ್ಷಃ ಸುಸಮಾಹಿತಃ ॥

ಅನುವಾದ

ಚಿತ್ರಕೇತುರಾಜನು ದೇವರ್ಷಿನಾರದರು ಉಪದೇಶ ಮಾಡಿದ್ದ ವಿದ್ಯೆಯನ್ನು ಅವರ ಆದೇಶದಂತೆ ಏಳು ದಿವಸಗಳ ಕಾಲ ಕೇವಲ ಜಲಾಹಾರದಿಂದಿದ್ದು ಏಕಾಗ್ರತೆಯಿಂದ ಅನುಷ್ಠಾನಮಾಡಿದನು. ॥27॥

(ಶ್ಲೋಕ-28)

ಮೂಲಮ್

ತತಶ್ಚ ಸಪ್ತರಾತ್ರಾಂತೇ ವಿದ್ಯಯಾ ಧಾರ್ಯಮಾಣಯಾ ।
ವಿದ್ಯಾಧರಾಧಿಪತ್ಯಂ ಸ ಲೇಭೇಪ್ರತಿಹತಂ ನೃಪಃ ॥

ಅನುವಾದ

ಅನಂತರ ಆ ವಿದ್ಯೆಯ ಅನುಷ್ಠಾನದಿಂದ ಏಳು ರಾತ್ರಿಯ ಬಳಿಕ ರಾಜಾಚಿತ್ರ ಕೇತುವಿಗೆ ವಿದ್ಯಾಧರರ ಅಖಂಡ ಆಧಿಪತ್ಯವು ಪ್ರಾಪ್ತವಾಯಿತು. ॥28॥

(ಶ್ಲೋಕ-29)

ಮೂಲಮ್

ತತಃ ಕತಿಪಯಾಹೋಭಿರ್ವಿದ್ಯಯೇದ್ಧಮನೋಗತಿಃ ।
ಜಗಾಮ ದೇವದೇವಸ್ಯ ಶೇಷಸ್ಯ ಚರಣಾಂತಿಕಮ್ ॥

ಅನುವಾದ

ಮತ್ತೆ ಕೆಲವೇ ದಿನಗಳಲ್ಲಿ ಆ ವಿದ್ಯೆಯ ಪ್ರಭಾವದಿಂದ ಅವನ ಮನಸ್ಸು ಮತ್ತೂ ಶುದ್ಧವಾಯಿತು. ಈಗ ಅವನು ದೇವಾಧಿದೇವ ಭಗವಾನ್ ಆದಿಶೇಷನ ಬಳಿಗೆ ತಲುಪಿದನು. ॥29॥

ಮೂಲಮ್

(ಶ್ಲೋಕ-30)
ಮೃಣಾಲಗೌರಂ ಶಿತಿವಾಸಸಂ ಸ್ಫುರತ್
ಕಿರೀಟಕೇಯೂರಕಟಿತ್ರಕಂಕಣಮ್ ।
ಪ್ರಸನ್ನವಕಾರುಣಲೋಚನಂ ವೃತಂ
ದದರ್ಶ ಸಿದ್ಧೇಶ್ವರಮಂಡಲೈಃ ಪ್ರಭುಮ್ ॥

ಅನುವಾದ

ಅಲ್ಲಿ ಭಗವಾನ್ ಆದಿಶೇಷನು ಸಿದ್ಧೇಶ್ವರರ ಮಧ್ಯದಲ್ಲಿ ವಿರಾಜಮಾನವಾಗಿರುವುದನ್ನು ಅವನು ನೋಡಿದನು. ಅವನ ದಿವ್ಯಮಂಗಳ ದೇಹವು ಕಮಲದ ದಂಟಿನಂತೆ ಬೆಳ್ಳಗೆ ಹೊಳೆಯುತ್ತಿತ್ತು. ಅದರ ಮೇಲೆ ನೀಲಿಬಣ್ಣದ ವಸ್ತ್ರಗಳು ರಾರಾಜಿಸುತ್ತಿದ್ದುವು. ತಲೆಯ ಮೇಲೆ ಕಿರೀಟ, ಬಾಹುಗಳಲ್ಲಿ ತೋಳ್ಬಂದಿಗಳೂ, ಕಟಿಯಲ್ಲಿ ಉಡಿದಾರವೂ, ಕೈಯಲ್ಲಿ ಕಂಕಣಗಳೂ ಕಳಕಳಿಸುತ್ತಿದ್ದವು. ನಸುಗೆಂಪಾದ ಕಣ್ಣುಗಳಿಂದಲೂ ಮುಖದಲ್ಲಿ ಪ್ರಸನ್ನತೆ ಶೋಭಿಸುತ್ತಿತ್ತು. ॥30॥

(ಶ್ಲೋಕ-31)

ಮೂಲಮ್

ತದ್ದರ್ಶನಧ್ವಸ್ತಸಮಸ್ತಕಿಲ್ಬಿಷಃ
ಸ್ವಚ್ಛಾಮಲಾಂತಃಕರಣೋಭ್ಯಯಾನ್ಮುನಿಃ ।
ಪ್ರವೃದ್ಧಭಕ್ತ್ಯಾ ಪ್ರಣಯಾಶ್ರುಲೋಚನಃ
ಪ್ರಹೃಷ್ಟ ರೋಮಾನಮದಾದಿಪೂರುಷಮ್ ॥

ಅನುವಾದ

ಭಗವಾನ್ ಆದಿಶೇಷನ ದರ್ಶನಮಾಡುತ್ತಲೇ ರಾಜರ್ಷಿ ಚಿತ್ರಕೇತುವಿನ ಎಲ್ಲ ಪಾಪಗಳೂ ನಾಶವಾದವು. ಅವನ ಅಂತಃ ಕರಣ ಸ್ವಚ್ಛವೂ, ನಿರ್ಮಲವೂ ಆಯಿತು. ಹೃದಯದಲ್ಲಿ ಭಕ್ತಿ ಪ್ರವಾಹವು ಉಕ್ಕಿ ಹರಿಯಿತು. ಕಣ್ಣುಗಳಲ್ಲಿ ಪ್ರೇಮಾಶ್ರುಗಳು ಉಮ್ಮಳಿಸಿದವು. ಮೈಪುಳಕದಿಂದ ಅರಳಿತು. ಅವನು ಅಂತಹ ಸ್ಥಿತಿ ಯಲ್ಲೇ ಆದಿಪುರುಷ ಭಗವಾನ್ ಶೇಷದೇವರಿಗೆ ನಮಸ್ಕರಿಸಿದನು. ॥31॥

(ಶ್ಲೋಕ-32)

ಮೂಲಮ್

ಸ ಉತ್ತಮಶ್ಲೋಕಪದಾಬ್ಜವಿಷ್ಟರಂ
ಪ್ರೇಮಾಶ್ರುಲೇಶೈರುಪಮೇಹಯನ್ಮುಹುಃ ।
ಪ್ರೇಮೋಪರುದ್ಧಾಖಿಲವರ್ಣನಿರ್ಗಮೋ
ನೈವಾಶಕತ್ತಂ ಪ್ರಸಮೀಡಿತುಂ ಚಿರಮ್ ॥

ಅನುವಾದ

ಅವನ ಕಣ್ಣುಗಳಿಂದ ತೊಟ್ಟಿಕ್ಕುತ್ತಿದ್ದ ಆನಂದಬಾಷ್ಪಗಳಿಂದ ಭಗವಾನ್ ಶೇಷನ ಪಾದಪೀಠವು ನೆನೆಯಿತು. ಪ್ರೇಮೋದ್ರೇಕದಿಂದ ಅವನ ಬಾಯಿಂದ ಒಂದಕ್ಷರವೂ ಹೊರಡಲಿಲ್ಲ. ಅವನು ಬಹಳ ಹೊತ್ತಿನವರೆಗೆ ಶೇಷದೇವರನ್ನು ಸ್ತುತಿಸಲಿಕ್ಕೆ ಆಗಲಿಲ್ಲ. ॥32॥

(ಶ್ಲೋಕ-33)

ಮೂಲಮ್

ತತಃ ಸಮಾಧಾಯ ಮನೋ ಮನೀಷಯಾ
ಬಭಾಷ ಏತತ್ಪ್ರ ತಿಲಬ್ಧವಾಗಸೌ ।
ನಿಯಮ್ಯ ಸರ್ವೇಂದ್ರಿಯಬಾಹ್ಯವರ್ತನಂ
ಜಗದ್ಗುರುಂ ಸಾತ್ವತಶಾಸ ವಿಗ್ರಹಮ್ ॥

ಅನುವಾದ

ಸ್ವಲ್ಪ ಹೊತ್ತಿನ ಬಳಿಕ ಅವನಿಗೆ ಮಾತಾಡುವ ಅಲ್ಪ-ಸ್ವಲ್ಪ ಶಕ್ತಿ ಯುಂಟಾಯಿತು. ಅವನು ವಿವೇಕದಿಂದ ಬುದ್ಧಿಯನ್ನು ಸ್ತಿಮಿತಕ್ಕೆ ತಂದುಕೊಂಡು, ಇಂದ್ರಿಯಗಳ ಬಾಹ್ಯವೃತ್ತಿಗಳನ್ನು ತಡೆಗಟ್ಟಿದನು. ಅನಂತರ ಪಾಂಚರಾತ್ರವೇ ಮುಂತಾದ ಭಕ್ತಿಶಾಸ್ತ್ರಗಳಲ್ಲಿ ವರ್ಣಿತವಾಗಿರುವ ದಿವ್ಯಸ್ವರೂಪವುಳ್ಳ ಆ ಜಗದ್ಗುರುವನ್ನು ಹೀಗೆ ಸ್ತೋತ್ರ ಮಾಡಿದನು. ॥33॥

(ಶ್ಲೋಕ-34)

ಮೂಲಮ್ (ವಾಚನಮ್)

ಚಿತ್ರಕೇತುರುವಾಚ

ಮೂಲಮ್

ಅಜಿತ ಜಿತಃ ಸಮಮತಿಭಿಃ
ಸಾಧುಭಿರ್ಭವಾನ್ ಜಿತಾತ್ಮಭಿರ್ಭವತಾ ।
ವಿಜಿತಾಸ್ತೇಪಿ ಚ ಭಜತಾ-
ಮಕಾಮಾತ್ಮನಾಂ ಯ ಆತ್ಮದೋತಿಕರುಣಃ ॥

ಅನುವಾದ

ಚಿತ್ರಕೇತುವು ಹೇಳಿದನು — ಓ ಅಜಿತನೇ! ನೀನು ಅಜಿತನಾಗಿ ಯಾರಿಂದಲೂ ಗೆಲ್ಲಲ್ಪಡದವನಾಗಿದ್ದರೂ ಸಮದರ್ಶಿಗಳೂ, ಜಿತೇಂದ್ರಿಯರೂ ಆದ ಸಾಧುಗಳು ನಿನ್ನನ್ನು ಭಕ್ತಿಯಿಂದ ಗೆದ್ದು ಕೊಂಡಿರುವರು. ನೀನು ನಿನ್ನ ಸೌಂದರ್ಯ, ಮಾಧುರ್ಯ, ಕಾರುಣ್ಯಗಳೇ ಮುಂತಾದ ಗುಣಗಳಿಂದ ಅವರನ್ನು ಗೆದ್ದು ವಶಪಡಿಸಿಕೊಳ್ಳುವೆ. ಆಹಾ! ನೀನು ಧನ್ಯನಾಗಿರುವೆ. ಏಕೆಂದರೆ, ನಿಷ್ಕಾಮ ಭಾವದಿಂದ ನಿನ್ನನ್ನು ಭಜಿಸುವವರಿಗೆ ನೀನು ಕರುಣಾ ವಶನಾಗಿ ನಿನ್ನನ್ನೇ ಕೊಟ್ಟುಕೊಳ್ಳುವೆ. ॥34॥

(ಶ್ಲೋಕ-35)

ಮೂಲಮ್

ತವ ವಿಭವಃ ಖಲು ಭಗವನ್
ಜಗದುದಯಸ್ಥಿತಿಲಯಾದೀನಿ ।
ವಿಶ್ವಸೃಜಸ್ತೇಂಶಾಂಶಾ-
ಸ್ತತ್ರ ಮೃಷಾ ಸ್ಪರ್ಧಂತೇ ಪೃಥಗಭಿಮತ್ಯಾ ॥

ಅನುವಾದ

ಓ ಭಗವಂತಾ! ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ಪ್ರಳಯಗಳು ನಿನ್ನ ಲೀಲಾವಿಲಾಸವಾಗಿದೆ. ಜಗತ್ತಿನ ಸೃಷ್ಟಿಕರ್ತರಾದ ಬ್ರಹ್ಮ ದೇವರೇ ಮುಂತಾದವರು ನಿನ್ನ ಅಂಶದ ಅಂಶಭೂತರಾದವರು. ಹೀಗಿದ್ದರೂ ಅವರು ಬೇರೆ-ಬೇರೆಯಾಗಿ ತಮ್ಮನ್ನು ಜಗತ್ಕರ್ತರು ಎಂದು ತಿಳಿದುಕೊಂಡು ವ್ಯರ್ಥವಾದ ಅಭಿಮಾನದಿಂದ ಸ್ಪರ್ಧಿಸುತ್ತಾರೆ. ॥35॥

(ಶ್ಲೋಕ-36)

ಮೂಲಮ್

ಪರಮಾಣುಪರಮಮಹತೋ-
ಸ್ತ್ವಮಾದ್ಯಂತಾಂತರವರ್ತೀ ತ್ರಯವಿಧುರಃ ।
ಆದಾವಂತೇಪಿ ಚ ಸತ್ತ್ವಾನಾಂ
ಯದ್ಧ್ರುವಂ ತದೇವಾಂತರಾಲೇಪಿ ॥

ಅನುವಾದ

ಪರ ಮಾಣುಗಳಿಂದ ಹಿಡಿದು ಪರಮ ಮಹತ್ತಿನವರೆಗಿನ ಸಮಸ್ತ ವಸ್ತುಗಳ ಆದಿ, ಮಧ್ಯ ಮತ್ತು ಅಂತ್ಯಗಳಲ್ಲಿಯೂ ನೀನೇ ಬೆಳಗುತ್ತಿರುವೆ. ಆದರೆ ನಿನಗೆ ಆದಿ-ಮಧ್ಯ-ಅಂತ್ಯಗಳು ಇಲ್ಲ. ಏಕೆಂದರೆ, ಯಾವುದೇ ಪದಾರ್ಥದ ಆದಿ ಮತ್ತು ಅಂತ್ಯದಲ್ಲಿ ಯಾವ ವಸ್ತು ಇರುತ್ತದೋ ಅದೇ ಮಧ್ಯ ದಲ್ಲಿಯೂ ಇರುತ್ತದೆ. ॥36॥

(ಶ್ಲೋಕ-37)

ಮೂಲಮ್

ಕ್ಷಿತ್ಯಾದಿಭಿರೇಷ ಕಿಲಾವೃತಃ
ಸಪ್ತಭಿರ್ದಶಗುಣೋತ್ತರೈರಾಂಡಕೋಶಃ ।
ಯತ್ರ ಪತತ್ಯಣುಕಲ್ಪಃ
ಸಹಾಂಡಕೋಟಿಕೋಟಿಭಿಸ್ತದನಂತಃ ॥

ಅನುವಾದ

ಈ ಬ್ರಹ್ಮಾಂಡಕೋಶವು ಪೃಥಿವಿಯೇ ಮುಂತಾಗಿ ಒಂದಕ್ಕಿಂತಲೂ ಒಂದು ಹತ್ತರಷ್ಟಿರುವ ಏಳು ಆವರಣಗಳಿಂದ ಸುತ್ತುವರಿದಿದೆ. ತನ್ನಂತೆಯೇ ಇರುವ ಬೇರೆ ಕೋಟಿ-ಕೋಟಿ ಬ್ರಹ್ಮಾಂಡಗಳೊಂದಿಗೆ ನಿನ್ನಲ್ಲಿ ಒಂದು ಪರಮಾಣುವಿನಂತೆ ಸುತ್ತುತ್ತಾ ಇರುತ್ತದೆ. ಹೀಗಿದ್ದರೂ ಅದಕ್ಕೆ ನಿನ್ನ ಎಲ್ಲೆಯು ತಿಳಿಯದು. ಅದಕ್ಕಾಗಿ ನೀನು ಅನಂತನಾಗಿರುವೆ. ॥37॥

(ಶ್ಲೋಕ-38)

ಮೂಲಮ್

ವಿಷಯತೃಷೋ ನರಪಶವೋ
ಯ ಉಪಾಸತೇ ವಿಭೂತೀರ್ನ ಪರಂ ತ್ವಾಮ್ ।
ತೇಷಾಮಾಶಿಷ ಈಶ
ತದನು ವಿನಶ್ಯಂತಿ ಯಥಾ ರಾಜಕುಲಮ್ ॥

ಅನುವಾದ

ವಿಷಯ ಭೋಗಗಳನ್ನೇ ಬಯಸುವ ನರಪಶುಗಳು ನಿನ್ನನ್ನು ಭಜಿಸದೆ ನಿನ್ನ ವಿಭೂತಿ ಸ್ವರೂಪರಾದ ಇಂದ್ರಾದಿ ದೇವತೆಗಳನ್ನು ಉಪಾಸಿಸುತ್ತಾರೆ. ಪ್ರಭೋ! ರಾಜಕುಲವು ನಾಶವಾದ ಬಳಿಕ ಅದರ ಅನುಯಾಯಿಗಳ ಬದುಕೂ ಕೂಡ ನಾಶವಾಗುವಂತೆಯೇ ಕ್ಷುದ್ರ ಉಪಾಸ್ಯ ದೇವತೆಗಳು ಹ್ರಾಸವಾದಾಗ ಅವರು ದಯಪಾಲಿಸಿದ ಭೋಗಗಳೂ ನಷ್ಟವಾಗಿ ಹೋಗುತ್ತವೆ. ॥38॥

(ಶ್ಲೋಕ-39)

ಮೂಲಮ್

ಕಾಮಧಿಯಸ್ತ್ವಯಿ ರಚಿತಾ
ನ ಪರಮ ರೋಹಂತಿ ಯಥಾ ಕರಂಭಬೀಜಾನಿ ।
ಜ್ಞಾನಾತ್ಮನ್ಯಗುಣಮಯೇ
ಗುಣಗಣತೋಸ್ಯ ದ್ವಂದ್ವಜಾಲಾನಿ ॥

ಅನುವಾದ

ಓ ಪರಮಾತ್ಮನೇ! ನೀನು ಜ್ಞಾನ ಸ್ವರೂಪಿಯೂ, ನಿರ್ಗುಣನೂ ಆಗಿರುವೆ. ಅದಕ್ಕಾಗಿ ನಿನ್ನ ಕುರಿತಾಗಿ ಮಾಡಿದ ಸಕಾಮ ಭಾವನೆಯೂ ಕೂಡ ಬೇರೆ-ಬೇರೆ ಕರ್ಮಗಳಂತೆ ಹುರಿದ ಬೀಜಗಳು ಮೊಳೆಯದಂತೆ ಜನನ-ಮರಣರೂಪೀ ಫಲವನ್ನು ಕೊಡಲಾರದು. ಏಕೆಂದರೆ, ಜೀವಿಗೆ ಉಂಟಾಗುವ ಸುಖ-ದುಃಖ ಮುಂತಾದ ದ್ವಂದ್ವಗಳು ಸತ್ತ್ವಾದಿ ಗುಣಗಳಿಂದಲೇ ಉಂಟಾಗುತ್ತವೆ. ನಿರ್ಗುಣದಿಂದಲ್ಲ. ॥39॥

(ಶ್ಲೋಕ-40)

ಮೂಲಮ್

ಜಿತಮಜಿತ ತದಾ ಭವತಾ
ಯದಾಹ ಭಾಗವತಂ ಧರ್ಮಮನವದ್ಯಮ್ ।
ನಿಷ್ಕಿಂಚನಾ ಯೇ ಮುನಯ
ಆತ್ಮಾರಾಮಾ ಯಮುಪಾಸತೇಪವರ್ಗಾಯ ॥

ಅನುವಾದ

ಓ ಅಜಿತನೇ! ನೀನು ಪರಿಶುದ್ಧವಾದ ಭಾಗವತಧರ್ಮವನ್ನು ಉಪದೇಶಿಸಿದಾಗಲೇ ಎಲ್ಲರನ್ನು ಗೆದ್ದುಕೊಂಡಿರುವೆ. ಏಕೆಂದರೆ, ತಮ್ಮಲ್ಲಿ ಯಾವುದೇ ಸಂಗ್ರಹ-ಪರಿಗ್ರಹವನ್ನು ಇಟ್ಟುಕೊಳ್ಳದಿರುವ, ಯಾವುದೇ ವಸ್ತುವಿನಲ್ಲಿ ಅಹಂತೆ- ಮಮತೆಗಳಿಲ್ಲದಿರುವ, ಆತ್ಮಾರಾಮರಾದ ಸನಕಾದಿ ಪರಮ ಮಹರ್ಷಿಗಳೂ ಕೂಡ ಮೋಕ್ಷವನ್ನು ಪಡೆಯುವುದಕ್ಕಾಗಿ ಇದೇ ಭಾಗವತಧರ್ಮವನ್ನು ಆಶ್ರಯಿಸುತ್ತಾರೆ. ॥40॥

(ಶ್ಲೋಕ-41)

ಮೂಲಮ್

ವಿಷಮಮತಿರ್ನ ಯತ್ರ ನೃಣಾಂ
ತ್ವಮಹಮಿತಿ ಮಮ ತವೇತಿ ಚ ಯದನ್ಯತ್ರ ।
ವಿಷಮಧಿಯಾ ರಚಿತೋ ಯಃ
ಸ ಹ್ಯವಿಶುದ್ಧಃ ಕ್ಷಯಿಷ್ಣುರಧರ್ಮಬಹುಲಃ ॥

ಅನುವಾದ

ಈ ಭಾಗವತಧರ್ಮದಲ್ಲಿ ಸಕಾಮಧರ್ಮಗಳಂತೆ ಮನುಷ್ಯ ರಲ್ಲಿ ‘ಇದು ನಾನು, ಇದು ನನ್ನದು; ಇದು ನೀನು, ಇದು ನಿನ್ನದು; ಎಂಬ ವಿಷಮ ಬುದ್ಧಿಯು ಉಂಟಾಗುವುದಿಲ್ಲ. ಹೀಗೆ ನಿಷ್ಕಾಮವಾಗಿ ಅಹಂಕಾರ-ಮಮಕಾರಾದಿ ರಹಿತವಾಗಿರುವ ಭಾಗವತಧರ್ಮವೇ ಶುದ್ಧವಾದ ಧರ್ಮವು. ಇದಕ್ಕೆ ವಿಪರೀತವಾಗಿ ಯಾವ ಧರ್ಮದ ಮೂಲದಲ್ಲೇ ವಿಷಮತೆಯ ಬೀಜವು ಬಿತ್ತಲ್ಪಟ್ಟಿದೆಯೋ ಅದು ಅಶುದ್ಧವೂ, ವಿನಾಶಿಯೂ ಮತ್ತು ಅಧರ್ಮದಿಂದ ತುಂಬಿರುವುದು. ॥41॥

(ಶ್ಲೋಕ-42)

ಮೂಲಮ್

ಕಃ ಕ್ಷೇಮೋ ನಿಜಪರಯೋಃ
ಕಿಯಾನರ್ಥಃ ಸ್ವಪರದ್ರುಹಾ ಧರ್ಮೇಣ ।
ಸ್ವದ್ರೋಹಾತ್ತವ ಕೋಪಃ
ಪರಸಂಪೀಡನಯಾ ಚ ತಥಾಧರ್ಮಃ ॥

ಅನುವಾದ

ಸಕಾಮಧರ್ಮವು ತನ್ನದೂ, ಇತರರದೂ ಅಹಿತವನ್ನೇ ಮಾಡುವುದು. ಅದರಿಂದ ತನ್ನ ಅಥವಾ ಪರರ ಯಾವುದೇ ಪ್ರಯೋಜನ ಹಾಗೂ ಹಿತವು ಸಿದ್ಧಿಸುವುದಿಲ್ಲ. ಆ ಧರ್ಮವನ್ನು ಅನುಷ್ಠಾನ ಮಾಡುವವನ ಚಿತ್ತವು ದುಃಖಿತವಾದಾಗ ನಿನಗೆ ರೋಷವುಂಟಾಗುವುದು. ಇತರ ಚಿತ್ತಕ್ಕೆ ದುಃಖವುಂಟಾದಾಗ ಅದು ಧರ್ಮವೇ ಆಗಿರದೆ ಅಧರ್ಮವೇ ಆಗುವುದು. ॥42॥

(ಶ್ಲೋಕ-43)

ಮೂಲಮ್

ನ ವ್ಯಭಿಚರತಿ ತವೇಕ್ಷಾ
ಯಯಾ ಹ್ಯಭಿಹಿತೋ ಭಾಗವತೋ ಧರ್ಮಃ ।
ಸ್ಥಿರಚರಸತ್ತ್ವಕದಂಬೇ
ಷ್ವಪೃಥಗ್ಧಿಯೋ ಯಮುಪಾಸತೇ ತ್ವಾರ್ಯಾಃ ॥

ಅನುವಾದ

ಓ ಭಗವಂತಾ! ನೀನು ಯಾವ ದೃಷ್ಟಿಯಿಂದ ಭಾಗವತ ಧರ್ಮವನ್ನು ನಿರೂಪಣೆ ಮಾಡಿರುವೆಯೋ ಅದು ಎಂದಿಗೂ ಪರಮಾರ್ಥದಿಂದ ಕದಲುವುದಿಲ್ಲ. ಅದಕ್ಕಾಗಿ ಚರಾಚರ ಸಮಸ್ತ ಪ್ರಾಣಿಗಳಲ್ಲಿ ಸಮದೃಷ್ಟಿ ಯುಳ್ಳ ಸಾಧು-ಸಂತರೇ ಅದನ್ನು ಸೇವಿಸುತ್ತಾರೆ. ॥43॥

(ಶ್ಲೋಕ-44)

ಮೂಲಮ್

ನ ಹಿ ಭಗವನ್ನಘಟಿತಮಿದಂ
ತ್ವದ್ದರ್ಶನಾನ್ನೃಣಾಮಖಿಲಪಾಪಕ್ಷಯಃ ।
ಯನ್ನಾಮಸಕೃಚ್ಛ್ರವಣಾತ್
ಪುಲ್ಕಸಕೋಪಿ ವಿಮುಚ್ಯತೇ ಸಂಸಾರಾತ್ ॥

ಅನುವಾದ

ಭಗವಂತನೇ! ನಿನ್ನ ದರ್ಶನಮಾತ್ರದಿಂದಲೇ ಮನುಷ್ಯನ ಎಲ್ಲ ಪಾಪಗಳು ಕ್ಷಯಹೊಂದುವುದರಲ್ಲಿ ಅಸಂಭವವೇನೂ ಇಲ್ಲ. ಏಕೆಂದರೆ, ಒಂದುಬಾರಿ ನಿನ್ನ ನಾಮವನ್ನು ಕೇಳುವುದರಿಂದಲೇ ನೀಚನಾದ ಚಾಂಡಾಲನೂ ಸಂಸಾರದಿಂದ ಮುಕ್ತನಾಗಿ ಹೋಗುವನು. ॥44॥

(ಶ್ಲೋಕ-45)

ಮೂಲಮ್

ಅಥ ಭಗವನ್ವಯಮಧುನಾ
ತ್ವದವಲೋಕಪರಿಮೃಷ್ಟಾಶಯಮಲಾಃ ।
ಸುರಋಷಿಣಾ ಯದುದಿತಂ
ತಾವಕೇನ ಕಥಮನ್ಯಥಾ ಭವತಿ ॥

ಅನುವಾದ

ಓ ಭಗವಂತಾ! ಈಗ ನಿನ್ನ ದರ್ಶನ ಮಾತ್ರದಿಂದಲೇ ನನ್ನ ಅಂತಃಕರಣದ ಎಲ್ಲ ಮಲವೂ ತೊಳೆದುಹೋಯಿತು. ನಿನ್ನ ಅನನ್ಯ ಭಕ್ತರಾದ ದೇವರ್ಷಿನಾರದರು ಹೇಳಿರುವ ಮಾತು ಹೇಗೆ ಸುಳ್ಳಾದೀತು? ॥45॥

(ಶ್ಲೋಕ-46)

ಮೂಲಮ್

ವಿದಿತಮನಂತ ಸಮಸ್ತಂ
ತವ ಜಗದಾತ್ಮನೋ ಜನೈರಿಹಾಚರಿತಮ್ ।
ವಿಜ್ಞಾಪ್ಯಂ ಪರಮಗುರೋಃ
ಕಿಯದಿವ ಸವಿತುರಿವ ಖದ್ಯೋತೈಃ ॥

ಅನುವಾದ

ಓ ಅನಂತಾ! ನೀನು ಸಮಸ್ತ ಜಗತ್ತಿನ ಆತ್ಮನಾಗಿರುವೆ. ಆದುದರಿಂದ ಜಗತ್ತಿನ ಪ್ರಾಣಿಗಳು ಮಾಡುವುದೆಲ್ಲವನ್ನೂ ನೀನು ತಿಳಿದೇ ಇರುವೆ. ಹೇಗೆ ಮಿಣುಕುಹುಳುವು ಸೂರ್ಯನನ್ನು ಪ್ರಕಾಶಿತ ವಾಗಿಸಲಾರದೋ ಹಾಗೆಯೇ ಪರಮ ಗುರುವಾದ ನಿನ್ನಲ್ಲಿ ಏನೆಂದು ನಿವೇದಿಸಿಕೊಳ್ಳಲಿ? ॥46॥

(ಶ್ಲೋಕ-47)

ಮೂಲಮ್

ನಮಸ್ತುಭ್ಯಂ ಭಗವತೇ
ಸಕಲಜಗತ್ಸ್ಥಿತಿಲಯೋದಯೇಶಾಯ ।
ದುರವಸಿತಾತ್ಮಗತಯೇ
ಕುಯೋಗಿನಾಂ ಭಿದಾ ಪರಮಹಂಸಾಯ ॥

ಅನುವಾದ

ಸಕಲ ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಅಧಿಪತಿಯಾಗಿರುವ ಭಗವಂತನಾದ ನಿನಗೆ ನಮಸ್ಕಾರವು. ಅತ್ಯಂತ ಶುದ್ಧನಾದ ಪರಮಹಂಸನು ನೀನು. ಕುಯೋಗಿಗಳಿಗೆ ಭೇದದೃಷ್ಟಿಯು ಇರುವುದರಿಂದ ಅವರು ನಿನ್ನ ವಾಸ್ತವಿಕ ಸ್ವರೂಪವನ್ನು ತಿಳಿಯಲಾರರು. ॥47॥

(ಶ್ಲೋಕ-48)

ಮೂಲಮ್

ಯಂ ವೈ ಶ್ವಸಂತಮನು ವಿಶ್ವಸೃಜಃ ಶ್ವಸಂತಿ
ಯಂ ಚೇಕಿತಾನಮನು ಚಿತ್ತಯ ಉಚ್ಚಕಂತಿ ।
ಭೂಮಂಡಲಂ ಸರ್ಷಪಾಯತಿ ಯಸ್ಯ ಮೂರ್ಧ್ನಿ
ತಸ್ಮೈ ನಮೋ ಭಗವತೇಸ್ತು ಸಹಸ್ರಮೂರ್ಧ್ನೇ ॥

ಅನುವಾದ

ನಿನ್ನಿಂದಲೇ ಶಕ್ತಿಯನ್ನು ಪಡೆದುಕೊಂಡೇ ಆ ಬ್ರಹ್ಮಾದಿ ಲೋಕಪಾಲರು ತಮ್ಮ-ತಮ್ಮ ವ್ಯಾಪಾರಗಳನ್ನು ಮಾಡಲು ಸಮರ್ಥರಾಗುತ್ತಾರೆ. ನಿನ್ನದೃಷ್ಟಿಯಿಂದ ಚೈತನ್ಯ ವನ್ನು ಪಡೆದೇ ಜ್ಞಾನೇಂದ್ರಿಯಗಳು ತಮ್ಮ-ತಮ್ಮ ವಿಷಯ ಗಳನ್ನು ಗ್ರಹಿಸಲು ಸಮರ್ಥವಾಗುತ್ತವೆ. ಈ ಭೂಮಂಡಲವು ನಿನ್ನ ತಲೆಯಮೇಲೆ ಒಂದು ಸಾಸಿವೆ ಕಾಳಿನಂತೆ ಕಂಡುಬರುತ್ತದೆ. ಅಂತಹ ಸಾವಿರ ತಲೆಗಳುಳ್ಳ ಪರಮಪುರುಷವಾದ ಭಗವಂತನಿಗೆ ಮತ್ತೆ-ಮತ್ತೆ ನಮಸ್ಕಾರಗಳು. ॥48॥

(ಶ್ಲೋಕ-49)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸಂಸ್ತುತೋ ಭಗವಾನೇವಮನಂತಸ್ತಮಭಾಷತ ।
ವಿದ್ಯಾಧರಪತಿಂ ಪ್ರೀತಶ್ಚಿತ್ರಕೇತುಂ ಕುರೂದ್ವಹ ॥

ಅನುವಾದ

ಶ್ರೀಶುಕ ಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಿದ್ಯಾಧರರ ಅಧಿಪತಿಯಾದ ಚಿತ್ರಕೇತುವು ಹೀಗೆ ಭಗವಾನ್ ಅನಂತನನ್ನು ಸ್ತುತಿಸಿದಾಗ ಶ್ರೀಭಗವಂತನು ಪ್ರಸನ್ನನಾಗಿ ಅವನಲ್ಲಿ ಹೀಗೆಂದನು. ॥49॥

(ಶ್ಲೋಕ-50)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಯನ್ನಾರದಾಂಗಿರೋಭ್ಯಾಂ ತೇ ವ್ಯಾಹೃತಂ ಮೇನುಶಾಸನಮ್ ।
ಸಂಸಿದ್ಧೋಸಿ ತಯಾ ರಾಜನ್ವಿದ್ಯಯಾ ದರ್ಶನಾಚ್ಚ ಮೇ ॥

ಅನುವಾದ

ಶ್ರೀಭಗವಂತನು ಹೇಳಿದನು — ಎಲೈರಾಜನೇ! ದೇವರ್ಷಿನಾರದರು ಮತ್ತು ಅಂಗಿರಸ ಮಹರ್ಷಿಗಳು ನಿನಗೆ ನನ್ನ ಕುರಿತಾದ ವಿದ್ಯೆಯನ್ನು ಉಪದೇಶಿಸಿರುವರೋ, ಅದರಿಂದ ಹಾಗೂ ನನ್ನ ದರ್ಶನದಿಂದ ನೀನು ಸಂಸಿದ್ಧಿಯನ್ನು ಪಡೆದಿರುವೆ. ॥50॥

(ಶ್ಲೋಕ-51)

ಮೂಲಮ್

ಅಹಂ ವೈ ಸರ್ವಭೂತಾನಿ ಭೂತಾತ್ಮಾ ಭೂತಭಾವನಃ ।
ಶಬ್ದಬ್ರಹ್ಮ ಪರಂ ಬ್ರಹ್ಮ ಮಮೋಭೇ ಶಾಶ್ವತೀ ತನೂ ॥

ಅನುವಾದ

ನಾನೇ ಸಮಸ್ತ ಪ್ರಾಣಿಗಳ ರೂಪದಲ್ಲಿದ್ದೇನೆ. ನಾನೇ ಅವರ ಆತ್ಮನಾಗಿರುವೆನು. ಅವರನ್ನು ಪಾಲಿಸುವವನೂ ನಾನೇ. ಶಬ್ದಬ್ರಹ್ಮ (ವೇದ) ಮತ್ತು ಪರಬ್ರಹ್ಮ ಎರಡೂ ನನ್ನ ಸನಾತನ ರೂಪವಾಗಿವೆ. ॥51॥

(ಶ್ಲೋಕ-52)

ಮೂಲಮ್

ಲೋಕೇ ವಿತತಮಾತ್ಮಾನಂ ಲೋಕಂ ಚಾತ್ಮನಿ ಸಂತತಮ್ ।
ಉಭಯಂ ಚ ಮಯಾ ವ್ಯಾಪ್ತಂ ಮಯಿ ಚೈವೋಭಯಂ ಕೃತಮ್ ॥

ಅನುವಾದ

ಆತ್ಮನು ಕಾರ್ಯಕಾರಣಾತ್ಮಕ ಜಗತ್ತಿನಲ್ಲಿ ವ್ಯಾಪ್ತನಾಗಿದ್ದಾನೆ. ಕಾರ್ಯ-ಕಾರಣಾತ್ಮಕವಾದ ಜಗತ್ತು ಆತ್ಮನಲ್ಲಿ ನೆಲೆಸಿದೆ ಹಾಗೂ ಇವೆರಡರಲ್ಲಿಯೂ ನಾನು ಅಧಿಷ್ಠಾನರೂಪದಿಂದ ವ್ಯಾಪ್ತನಾಗಿದ್ದೇನೆ ಮತ್ತು ಇವೆರಡೂ ನನ್ನಲ್ಲಿ ಕಲ್ಪಿತವಾಗಿವೆ. ॥52॥

(ಶ್ಲೋಕ-53)

ಮೂಲಮ್

ಯಥಾ ಸುಷುಪ್ತಃ ಪುರುಷೋ ವಿಶ್ವಂ ಪಶ್ಯತಿ ಚಾತ್ಮನಿ ।
ಆತ್ಮಾನಮೇಕದೇಶಸ್ಥಂ ಮನ್ಯತೇ ಸ್ವಪ್ನ ಉತ್ಥಿತಃ ॥

(ಶ್ಲೋಕ-54)

ಮೂಲಮ್

ಏವಂ ಜಾಗರಣಾದೀನಿ ಜೀವಸ್ಥಾನಾನಿ ಚಾತ್ಮನಃ ।
ಮಾಯಾಮಾತ್ರಾಣಿ ವಿಜ್ಞಾಯ ತದ್ದ್ರಷ್ಟಾರಂ ಪರಂ ಸ್ಮರೇತ್ ॥

ಅನುವಾದ

ಸ್ವಪ್ನದಲ್ಲಿ ಮಲಗಿರುವ ಮನುಷ್ಯನು ಸ್ವಪ್ನಾಂತರ (ಮತ್ತೊಂದು ಕನಸುಕಾಣುವಾಗ)ವಾದಾಗ ಸಮಸ್ತ ಜಗತ್ತನ್ನು ತನ್ನಲ್ಲಿಯೇ ನೋಡುತ್ತಾನೆ ಮತ್ತು ಸ್ವಪ್ನಾಂತರ ಮುಗಿದು ಹೋದಾಗ ಸ್ವಪ್ನದಲ್ಲೇ ಎಚ್ಚರಗೊಳ್ಳುವನು. ತನ್ನನ್ನು ಜಗತ್ತಿನ ಒಂದು ಮೂಲೆಯಲ್ಲಿ ಇರುವಂತೆ ಕಾಣುವನು. ಆದರೆ ವಾಸ್ತವವಾಗಿ ಅದೂ ಸ್ವಪ್ನವೇ ಆಗಿದೆ. ಹಾಗೆಯೇ ಜೀವಿಯು ಜಾಗ್ರತ್ ಮುಂತಾದ ಅವಸ್ಥೆಗಳೂ ಕೂಡ ಪರಮೇಶ್ವರನ ಮಾಯೆಯೇ ಆಗಿದೆ. ಹೀಗೆ ತಿಳಿದು ಕೊಂಡು ಎಲ್ಲರ ಸಾಕ್ಷಿ, ಮಾಯಾತೀತ, ಪರಮಾತ್ಮನನ್ನೇ ಸ್ಮರಿಸಬೇಕು. ॥53-54॥

(ಶ್ಲೋಕ-55)

ಮೂಲಮ್

ಯೇನ ಪ್ರಸುಪ್ತಃ ಪುರುಷಃ ಸ್ವಾಪಂ ವೇದಾತ್ಮನಸ್ತದಾ ।
ಸುಖಂ ಚ ನಿರ್ಗುಣಂ ಬ್ರಹ್ಮ ತಮಾತ್ಮಾನಮವೇಹಿ ಮಾಮ್ ॥

ಅನುವಾದ

ಮಲಗಿರುವ ಮನುಷ್ಯನು ಯಾವುದರ ಸಹಾಯದಿಂದ ತನ್ನ ನಿದ್ರೆಯನ್ನು ಮತ್ತು ಅದರ ಅತೀಂದ್ರಿಯ ಸುಖವನ್ನು ಅನು ಭವಿಸುವನೋ ಆ ಬ್ರಹ್ಮವೂ ನಾನೇ ಆಗಿದ್ದೇನೆ. ಅದನ್ನು ನೀನು ನಿನ್ನ ಆತ್ಮವೆಂದು ತಿಳಿ. ॥55॥

(ಶ್ಲೋಕ-56)

ಮೂಲಮ್

ಉಭಯಂ ಸ್ಮರತಃ ಪುಂಸಃ ಪ್ರಸ್ವಾಪಪ್ರತಿಬೋಧಯೋಃ ।
ಅನ್ವೇತಿ ವ್ಯತಿರಿಚ್ಯೇತ ತಜ್ಜ್ಞಾನಂ ಬ್ರಹ್ಮ ತತ್ಪರಮ್ ॥

ಅನುವಾದ

ಪುರುಷನು ನಿದ್ರೆ ಮತ್ತು ಎಚ್ಚರ ಇವೆರಡು ಅವಸ್ಥೆಗಳನ್ನೂ ಅನುಭವಿಸುತ್ತಾನೆ. ಅವನು ಆ ಅವಸ್ಥೆಗಳಲ್ಲಿ ಅನುಗತನಾಗಿದ್ದರೂ ವಾಸ್ತವವಾಗಿ ಅವುಗಳಿಂದ ಬೇರೆಯೇ ಆಗಿದ್ದಾನೆ. ಅವನ ಎಲ್ಲ ಅವಸ್ಥೆಗಳಲ್ಲಿ ಇರುವ ಅಖಂಡ ಏಕರಸ ಜ್ಞಾನವೇ ಬ್ರಹ್ಮವಾಗಿದೆ. ಅದೇ ಪರಬ್ರಹ್ಮವಾಗಿದೆ. ॥56॥

(ಶ್ಲೋಕ-57)

ಮೂಲಮ್

ಯದೇತದ್ವಿಸ್ಮೃತಂ ಪುಂಸೋ ಮದ್ಭಾವಂ ಭಿನ್ನಮಾತ್ಮನಃ ।
ತತಃ ಸಂಸಾರ ಏತಸ್ಯ ದೇಹಾದ್ದೇಹೋ ಮೃತೇರ್ಮೃತಿಃ ॥

ಅನುವಾದ

ಜೀವನು ನನ್ನ ಸ್ವರೂಪವನ್ನು ಮರೆತುಹೋದಾಗ ಅವನು ತನ್ನನ್ನು ಬೇರೆ ಎಂದು ತಿಳಿದುಕೊಳ್ಳುವನು. ಅದರಿಂದಲೇ ಅವನಿಗೆ ಸಂಸಾರ ಚಕ್ರದಲ್ಲಿ ಬೀಳಬೇಕಾಗುತ್ತದೆ ಮತ್ತು ಹುಟ್ಟಿನ ನಂತರ ಸಾವು, ಸಾವಿನನಂತರ ಹುಟ್ಟು ಅವನಿಗೆ ಉಂಟಾಗುವುದು. ॥57॥

(ಶ್ಲೋಕ-58)

ಮೂಲಮ್

ಲಬ್ಧ್ವೇಹ ಮಾನುಷೀಂ ಯೋನಿಂ ಜ್ಞಾನವಿಜ್ಞಾನಸಂಭವಾಮ್ ।
ಆತ್ಮಾನಂ ಯೋ ನ ಬುದ್ಧ್ಯೇತ ನ ಕ್ವಚಿಚ್ಛಮಮಾಪ್ನುಯಾತ್ ॥

ಅನುವಾದ

ಈ ಮನುಷ್ಯಯೋನಿಯು ಜ್ಞಾನ ಮತ್ತು ವಿಜ್ಞಾನದ ಮೂಲ ಸ್ರೋತಸ್ಸಾಗಿದೆ. ಇದನ್ನು ಪಡೆದು ಕೊಂಡರೂ ತನ್ನ ಆತ್ಮಸ್ವರೂಪನಾದ ಪರಮಾತ್ಮನನ್ನು ತಿಳಿದುಕೊಳ್ಳದಿರುವವನಿಗೆ ಎಲ್ಲಿಯೂ, ಯಾವುದೇ ಯೋನಿಯಲ್ಲಿ ಶಾಂತಿಯು ಸಿಗಲಾರದು. ॥58॥

(ಶ್ಲೋಕ-59)

ಮೂಲಮ್

ಸ್ಮೃತ್ವೇಹಾಯಾಂ ಪರಿಕ್ಲೇಶಂ ತತಃ ಲವಿಪರ್ಯಯಮ್ ।
ಅಭಯಂ ಚಾಪ್ಯನೀಹಾಯಾಂ ಸಂಕಲ್ಪಾದ್ವಿರಮೇತ್ಕವಿಃ ॥

ಅನುವಾದ

ರಾಜನೇ! ಸಾಂಸಾರಿಕ ಸುಖಕ್ಕಾಗಿ ಮಾಡಲಾದ ಪ್ರಯತ್ನಗಳಲ್ಲಿ ಶ್ರಮವಿದೆ, ಕ್ಲೇಶವಿದೆ, ಪರಮ ಸುಖದ ಉದ್ದೇಶದಿಂದ ಮಾಡಲಾಗುವ ಕರ್ಮದಲ್ಲಿ ಅದಕ್ಕೆ ವಿರುದ್ಧವಾಗಿ ಪರಮ ದುಃಖವನ್ನೇ ಅವು ಕೊಡುವುವು. ಆದರೆ ಕರ್ಮಗಳಿಂದ ನಿವೃತ್ತನಾಗಿ ಹೋಗುವುದರಲ್ಲಿ ಯಾವುದೇ ಭಯವಿಲ್ಲ ಹೀಗೆ ಯೋಚಿಸಿ ಬುದ್ಧಿವಂತನು ಯಾವುದೇ ಪ್ರಕಾರದ ಕರ್ಮ ಅಥವಾ ಅವುಗಳ ಫಲಗಳ ಸಂಕಲ್ಪವನ್ನು ಮಾಡಬಾರದು. ॥59॥

(ಶ್ಲೋಕ-60)

ಮೂಲಮ್

ಸುಖಾಯ ದುಃಖಮೋಕ್ಷಾಯ ಕುರ್ವಾತೇ ದಂಪತೀ ಕ್ರಿಯಾಃ ।
ತತೋನಿವೃತ್ತಿರಪ್ರಾಪ್ತಿರ್ದುಃಖಸ್ಯ ಚ ಸುಖಸ್ಯ ಚ ॥

ಅನುವಾದ

ಜಗತ್ತಿನ ಎಲ್ಲ ಸ್ತ್ರೀ-ಪುರುಷರು ತಮಗೆ ಸುಖಸಿಗಲಿ ಮತ್ತು ದುಃಖದಿಂದ ಬಿಡುಗಡೆ ಆಗಲಿ ಎಂದೇ ಕರ್ಮಗಳನ್ನು ಮಾಡುತ್ತಾರೆ. ಆದರೆ ಆ ಕರ್ಮಗಳಿಂದ ಅವರ ದುಃಖವು ದೂರವಾಗು ವುದಿಲ್ಲ ಮತ್ತು ಅವರಿಗೆ ಸುಖವೂ ದೊರೆಯುವುದಿಲ್ಲ. ॥60॥

(ಶ್ಲೋಕ-61)

ಮೂಲಮ್

ಏವಂ ವಿಪರ್ಯಯಂ ಬುದ್ಧ್ವಾ ನೃಣಾಂ ವಿಜ್ಞಾಭಿಮಾನಿನಾಮ್ ।
ಆತ್ಮನಶ್ಚ ಗತಿಂ ಸೂಕ್ಷ್ಮಾಂ ಸ್ಥಾನತ್ರಯವಿಲಕ್ಷಣಾಮ್ ॥

ಅನುವಾದ

ತನ್ನನ್ನು ಬಹಳ ಬುದ್ಧಿವಂತನೆಂದು ತಿಳಿದು ಕರ್ಮದ ಹಿಡಿತದಲ್ಲಿ ಸಿಕ್ಕಿರುವವರಿಗೆ ವಿಪರೀತ ಫಲವೇ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಜೊತೆಗೆ ಆತ್ಮನ ಸ್ವರೂಪವು ಅತ್ಯಂತ ಸೂಕ್ಷ್ಮವಾಗಿದೆ. ಜಾಗ್ರತ್, ಸ್ವಪ್ನ, ಸುಷುಪ್ತಿಗಳೆಂಬ ಮೂರು ಅವಸ್ಥೆಗಳಿಂದ ಹಾಗೂ ಅವುಗಳ ಅಭಿಮಾನಿಗಳಿಂದಲೂ ವಿಲಕ್ಷಣವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ॥61॥

(ಶ್ಲೋಕ-62)

ಮೂಲಮ್

ದೃಷ್ಟ ಶ್ರುತಾಭಿರ್ಮಾತ್ರಾಭಿರ್ನಿರ್ಮುಕ್ತಃ ಸ್ವೇನ ತೇಜಸಾ ।
ಜ್ಞಾನವಿಜ್ಞಾನಸಂತುಷ್ಟೋ ಮದ್ಭಕ್ತಃ ಪುರುಷೋ ಭವೇತ್ ॥

ಅನುವಾದ

ಇದನ್ನು ಅರಿತುಕೊಂಡು ಈ ಲೋಕದಲ್ಲಿ ನೋಡಿದ ಮತ್ತು ಪರಲೋಕದ ಕೇಳಿರುವ ವಿಷಯ ಭೋಗಗಳಿಂದ ವಿವೇಕ ಬುದ್ಧಿಯಿಂದ ಬಿಡಿಸಿಕೊಂಡು ಜ್ಞಾನ ಮತ್ತು ವಿಜ್ಞಾನದಲ್ಲೇ ಸಂತುಷ್ಟನಾಗಿ ನನ್ನ ಭಕ್ತನಾಗಬೇಕು. ॥62॥

(ಶ್ಲೋಕ-63)

ಮೂಲಮ್

ಏತಾವಾನೇವ ಮನುಜೈರ್ಯೋಗನೈಪುಣಬುದ್ಧಿಭಿಃ ।
ಸ್ವಾರ್ಥಃ ಸರ್ವಾತ್ಮನಾ ಜ್ಞೇಯೋ ಯತ್ಪರಾತ್ಮೈಕದರ್ಶನಮ್ ॥

ಅನುವಾದ

ಯೋಗಮಾರ್ಗದ ತತ್ತ್ವವನ್ನು ತಿಳಿಯುವುದರಲ್ಲಿ ನಿಪುಣನಿಗೆ ಜೀವಿಗೆ ಎಲ್ಲಕ್ಕಿಂತ ದೊಡ್ಡ ಸ್ವಾರ್ಥ ಮತ್ತು ಪರಮಾರ್ಥ ಕೇವಲ ಬ್ರಹ್ಮ ಮತ್ತು ಆತ್ಮನ ಏಕತೆ ಯನ್ನು ಅನುಭವಿಸುವುದೇ ಆಗಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ॥63॥

(ಶ್ಲೋಕ-64)

ಮೂಲಮ್

ತ್ವಮೇತಚ್ಛ್ರದ್ಧಯಾ ರಾಜನ್ನಪ್ರಮತ್ತೋ ವಚೋ ಮಮ ।
ಜ್ಞಾನವಿಜ್ಞಾನಸಂಪನ್ನೋ ಧಾರಯನ್ನಾಶು ಸಿಧ್ಯಸಿ ॥

ಅನುವಾದ

ರಾಜನೇ! ನೀನು ನನ್ನ ಈ ಉಪದೇಶವನ್ನು ಸಾವಧಾನವಾಗಿ ಶ್ರದ್ಧಾಭಾವದಿಂದ ಧರಿಸಿಕೊಂಡರೆ ಜ್ಞಾನ ಹಾಗೂ ವಿಜ್ಞಾನಗಳಿಂದ ಸಂಪನ್ನನಾಗಿ ಬೇಗನೇ ಸಿದ್ಧನಾಗಿ ಹೋಗುವೆ. ॥64॥

(ಶ್ಲೋಕ-65)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಆಶ್ವಾಸ್ಯ ಭಗವಾನಿತ್ಥಂ ಚಿತ್ರಕೇತುಂ ಜಗದ್ಗುರುಃ ।
ಪಶ್ಯತಸ್ತಸ್ಯ ವಿಶ್ವಾತ್ಮಾ ತತಶ್ಚಾಂತರ್ದಧೇ ಹರಿಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಜಗದ್ಗುರು ವಿಶ್ವಾತ್ಮಾ ಭಗವಾನ್ ಶ್ರೀಹರಿಯು ಚಿತ್ರಕೇತು ವಿಗೆ ಹೀಗೆ ತಿಳಿಹೇಳಿ ಅವನ ಮುಂದೆಯೇ ಅಲ್ಲಿಂದ ಅಂತರ್ಧಾನನಾದನು. ॥65॥

ಅನುವಾದ (ಸಮಾಪ್ತಿಃ)

ಹದಿನಾರನೆಯ ಅಧ್ಯಾಯವು ಮುಗಿಯಿತು. ॥16॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಚಿತ್ರಕೇತೋಃ ಪರಮಾತ್ಮದರ್ಶನಂ ನಾಮ ಷೋಡಶೋಽಧ್ಯಾಯಃ ॥16॥