[ಹದಿನೈದನೆಯ ಅಧ್ಯಾಯ]
ಭಾಗಸೂಚನಾ
ಚಿತ್ರಕೇತುವಿಗೆ ಅಂಗೀರಸರಿಂದ ಮತ್ತು ನಾರದಮಹರ್ಷಿಗಳಿಂದ ಉಪದೇಶ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಊಚತುರ್ಮೃತಕೋಪಾಂತೇ ಪತಿತಂ ಮೃತಕೋಪಮಮ್ ।
ಶೋಕಾಭಿಭೂತಂ ರಾಜಾನಂ ಬೋಧಯಂತೌ ಸದುಕ್ತಿಭಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಚಿತ್ರಕೇತು ಮಹಾರಾಜನು ಶೋಕಗ್ರಸ್ತನಾಗಿ ಹೆಣದಂತೆ ತನ್ನ ಸತ್ತಿರುವ ಪುತ್ರನ ಬಳಿಯಲ್ಲೇ ಬಿದ್ದಿದ್ದನು. ಆಗ ಅಂಗಿರಾ ಮಹರ್ಷಿಗಳೂ ಹಾಗೂ ನಾರದಮಹರ್ಷಿಗಳೂ ಅವನಿಗೆ ಒಳ್ಳೆಯ ಮಾತುಗಳಿಂದ ತಿಳಿವಳಿಕೆ ನೀಡುತ್ತಾ ಹೀಗೆಂದರು. ॥1॥
(ಶ್ಲೋಕ-2)
ಮೂಲಮ್
ಕೋಯಂ ಸ್ಯಾತ್ತವ ರಾಜೇಂದ್ರ ಭವಾನ್ಯಮನುಶೋಚತಿ ।
ತ್ವಂ ಚಾಸ್ಯ ಕತಮಃ ಸೃಷ್ಟೌ ಪುರೇದಾನೀಮತಃ ಪರಮ್ ॥
ಅನುವಾದ
ಎಲೈ ರಾಜೇಂದ್ರಾ! ಯಾರಿಗಾಗಿ ನೀನು ಇಷ್ಟು ಶೋಕಿಸುತ್ತಿರುವೆಯೋ ಆ ಬಾಲಕನು ಈ ಜನ್ಮದಲ್ಲಿ ಮತ್ತು ಹಿಂದಿನ ಜನ್ಮದಲ್ಲಿ ನಿನಗೇನಾಗಬೇಕು? ಅವನಿಗೆ ನೀನು ಏನಾಗಬೇಕು? ಮುಂದಿನ ಜನ್ಮದಲ್ಲಿಯೂ ಅವನೊಂದಿಗೆ ಯಾವ ಸಂಬಂಧ ಉಳಿದೀತು? ॥2॥
(ಶ್ಲೋಕ-3)
ಮೂಲಮ್
ಯಥಾ ಪ್ರಯಾಂತಿ ಸಂಯಾಂತಿ ಸ್ರೋತೋವೇಗೇನ ವಾಲುಕಾಃ ।
ಸಂಯುಜ್ಯಂತೇ ವಿಯುಜ್ಯಂತೇ ತಥಾ ಕಾಲೇನ ದೇಹಿನಃ ॥
ಅನುವಾದ
ನೀರಿನ ಪ್ರವಾಹದಿಂದ ಮರಳ ಕಣಗಳು ಒಂದು ಮತ್ತೊಂದರ ಜೊತೆಗೂಡುತ್ತವೆ ಹಾಗೂ ಅಗಲುತ್ತವೆ. ಹಾಗೆಯೇ ಸಮಯದ ಪ್ರವಾಹದಲ್ಲಿ ಪ್ರಾಣಿಗಳೂ ಕೂಡ ಒಂದಾಗುತ್ತಾರೆ ಮತ್ತು ಅಗಲುತ್ತಾ ಇರುತ್ತಾರೆ. ॥3॥
(ಶ್ಲೋಕ-4)
ಮೂಲಮ್
ಯಥಾ ಧಾನಾಸು ವೈ ಧಾನಾ ಭವಂತಿ ನ ಭವಂತಿ ಚ ।
ಏವಂ ಭೂತೇಷು ಭೂತಾನಿ ಚೋದಿತಾನೀಶಮಾಯಯಾ ॥
ಅನುವಾದ
ರಾಜನೇ! ಕೆಲವು ಬೀಜಗಳಿಂದ ಬೇರೆ ಬೀಜಗಳು ಉತ್ಪನ್ನ ವಾಗುತ್ತವೆ ಮತ್ತು ನಾಶವಾಗಿಹೋಗುತ್ತವೆ. ಹಾಗೆಯೇ ಭಗವಂತನ ಮಾಯೆಯಿಂದ ಪ್ರೇರಿತರಾಗಿ ಪ್ರಾಣಿಗಳಿಂದ ಬೇರೆ ಪ್ರಾಣಿಗಳು ಹುಟ್ಟುತ್ತವೆ ಹಾಗೂ ಸಾಯುತ್ತವೆ. ॥4॥
(ಶ್ಲೋಕ-5)
ಮೂಲಮ್
ವಯಂ ಚ ತ್ವಂ ಚ ಯೇ ಚೇಮೇ ತುಲ್ಯಕಾಲಾಶ್ಚರಾಚರಾಃ ।
ಜನ್ಮಮೃತ್ಯೋರ್ಯಥಾ ಪಶ್ಚಾತ್ಪ್ರಾಙ್ನೆವಮಧುನಾಪಿ ಭೋಃ ॥
ಅನುವಾದ
ಎಲೈ ರಾಜಾ! ನಾವು, ನೀನು ಮತ್ತು ನಮ್ಮೊಂದಿಗೆ ಈ ಜಗತ್ತಿನಲ್ಲಿ ಎಷ್ಟು ಚರಾಚರ ಪ್ರಾಣಿಗಳು ವರ್ತ ಮಾನದಲ್ಲಿವೆಯೋ, ಅವೆಲ್ಲವೂ ತಮ್ಮ ಜನ್ಮದ ಮೊದಲು ಇರಲಿಲ್ಲ ಮತ್ತು ಮೃತ್ಯುವಿನ ನಂತರ ಇರಲಾರರು. ಇದರಿಂದ ಅವರ ಅಸ್ತಿತ್ವ ವಿಲ್ಲವೆಂಬುದು ಸಿದ್ಧವಾಗುತ್ತದೆ. ಏಕೆಂದರೆ, ಸತ್ಯವಸ್ತುವಾದರೋ ಎಲ್ಲ ಸಮಯದಲ್ಲಿ ಒಂದೇ ರೀತಿಯಾಗಿ ಇರುತ್ತದೆ. ॥5॥
(ಶ್ಲೋಕ-6)
ಮೂಲಮ್
ಭೂತೈರ್ಭೂತಾನಿ ಭೂತೇಶಃ ಸೃಜತ್ಯವತಿ ಹಂತ್ಯಜಃ ।
ಆತ್ಮಸೃಷ್ಟೈರಸ್ವತಂತ್ರೈರನಪೇಕ್ಷೋಪಿ ಬಾಲವತ್ ॥
ಅನುವಾದ
ಭಗವಂತನೇ ಸಮಸ್ತ ಪ್ರಾಣಿಗಳ ಅಧಿಪತಿಯಾಗಿದ್ದಾನೆ. ಅವನಲ್ಲಿ ಜನ್ಮ-ಮೃತ್ಯು ಮುಂತಾದ ವಿಕಾರಗಳು ಖಂಡಿತವಾಗಿಯೂ ಇಲ್ಲ. ಅವನಿಗೆ ಯಾವುದೇ ಇಚ್ಛೆಯಾಗಲೀ, ಅಪೇಕ್ಷೆಯಾಗಲೀ ಇಲ್ಲ. ಮಕ್ಕಳು ವಿನೋದಕ್ಕಾಗಿ ಆಟದ ವಸ್ತುಗಳಿಂದ ಮನೆ-ಮಠ ಮುಂತಾದವುಗಳನ್ನು ರಚಿಸುತ್ತಾ ಕೆಡಿಸುತ್ತಾ ಇರು ವಂತೆಯೇ ಅವನು ತಾನೇ ತಾನಾಗಿ ಪರತಂತ್ರ ಪ್ರಾಣಿಗಳನ್ನು ಸೃಷ್ಟಿಸುತ್ತಾನೆ ಮತ್ತು ಅವರ ಮೂಲಕ ಬೇರೆ ಪ್ರಾಣಿಗಳನ್ನು ರಚಿಸುತ್ತಾನೆ, ಪಾಲಿಸುತ್ತಾನೆ, ಸಂಹರಿಸುತ್ತಾನೆ. ॥6॥
(ಶ್ಲೋಕ-7)
ಮೂಲಮ್
ದೇಹೇನ ದೇಹಿನೋ ರಾಜನ್ದೇಹಾದ್ದೇಹೋಭಿಜಾಯತೇ ।
ಬೀಜಾದೇವ ಯಥಾ ಬೀಜಂ ದೇಹ್ಯರ್ಥ ಇವ ಶಾಶ್ವತಃ ॥
ಅನುವಾದ
ಒಂದು ಬೀಜದಿಂದ ಇನ್ನೊಂದು ಬೀಜವು ಹುಟ್ಟುವಂತೆಯೇ ತಂದೆಯ ದೇಹದ ಮೂಲಕ ತಾಯಿಯ ದೇಹದಿಂದ ಮಗನದೇಹ ಹುಟ್ಟುತ್ತದೆ. ತಂದೆ-ತಾಯಿ-ಮಗ ಜೀವ ರೂಪದಲ್ಲಿ ದೇಹಿಯಾಗಿದ್ದಾನೆ ಹಾಗೂ ಬಾಹ್ಯದೃಷ್ಟಿಯಿಂದ ಕೇವಲ ಶರೀರವಾಗಿದ್ದಾನೆ. ಅವರಲ್ಲಿ ದೇಹಿಯಾದ ಜೀವನು ಘಟವೇ ಮುಂತಾದ ಕಾರ್ಯಗಳಲ್ಲಿ ಪೃಥಿವಿಯಂತೆ ನಿತ್ಯನಾಗಿದ್ದಾನೆ.* ॥7॥
ಟಿಪ್ಪನೀ
- ಅನಿತ್ಯವಾದ್ದರಿಂದ ಶರೀರವು ಅಸತ್ಯವಾಗಿದೆ. ಶರೀರವು ಅಸತ್ಯವಾದ ಕಾರಣದಿಂದ ಅದರ ಬೇರೆ-ಬೇರೆ ಅಭಿಮಾನಿಗಳೂ ಕೂಡ ಅಸತ್ಯವೇ ಆಗಿವೆ. ತ್ರಿಕಾಲಾಬಾಧಿತ ಸತ್ಯವಾದರೋ ಏಕಮಾತ್ರ ಪರಮಾತ್ಮನೇ ಆಗಿದ್ದಾನೆ. ಆದ್ದರಿಂದ ಶೋಕಿಸುವುದು ಯಾವ ವಿಧದಿಂದಲೂ ಉಚಿತವಲ್ಲ.
(ಶ್ಲೋಕ-8)
ಮೂಲಮ್
ದೇಹದೇಹಿವಿಭಾಗೋಯಮವಿವೇಕಕೃತಃ ಪುರಾ ।
ಜಾತಿವ್ಯಕ್ತಿ ವಿಭಾಗೋಯಂ ಯಥಾ ವಸ್ತುನಿ ಕಲ್ಪಿತಃ ॥
ಅನುವಾದ
ರಾಜನೇ! ಒಂದೇ ಮಣ್ಣಿನ ರೂಪವಾದ ಗಡಿಗೆಯೇ ಮುಂತಾದ ಜಾತಿ ಮತ್ತು ಘಟಾದಿ ವ್ಯಕ್ತಿಗಳ ವಿಭಾಗವು ಕೇವಲ ಕಲ್ಪನೆಯೇ ಆಗಿದೆ. ಹಾಗೆಯೇ ಈ ದೇಹಿ ಮತ್ತು ದೇಹದ ವಿಭಾಗವೂ ಅನಾದಿ ಹಾಗೂ ಅವಿದ್ಯಾ ಕಲ್ಪಿತವಾಗಿದೆ. ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಮಾಶ್ವಾಸಿತೋ ರಾಜಾ ಚಿತ್ರಕೇತುರ್ದ್ವಿಜೋಕ್ತಿಭಿಃ ।
ಪ್ರಮೃಜ್ಯ ಪಾಣಿನಾ ವಕಮಾಧಿಮ್ಲಾನಮಭಾಷತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಅಂಗಿರಾಮಹರ್ಷಿಗಳು ಮತ್ತು ಮಹರ್ಷಿ ನಾರದರು ಹೀಗೆ ಚಿತ್ರ ಕೇತು ರಾಜನನ್ನು ಸಮಾಧಾಪಡಿಸಿದಾಗ ಅವನು ಸ್ವಲ್ಪ ಧೈರ್ಯ ತಂದುಕೊಂಡು, ಶೋಕದಿಂದ ಬಾಡಿದ ಮುಖವನ್ನು ಕೈಯಿಂದ ಒರೆಸಿಕೊಂಡು, ಅವರಲ್ಲಿ ಇಂತೆಂದನು ॥9॥
(ಶ್ಲೋಕ-10)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕೌ ಯುವಾಂ ಜ್ಞಾನಸಂಪನ್ನೌ
ಮಹಿಷ್ಠೌ ಚ ಮಹೀಯಸಾಮ್ ।
ಅವಧೂತೇನ ವೇಷೇಣ
ಗೂಢಾವಿಹ ಸಮಾಗತೌ ॥
ಅನುವಾದ
ಚಿತ್ರಕೇತುರಾಜನು ಹೇಳಿದನು — ಎಲೈ ಮಹಾತ್ಮರೇ! ಪರಮ ಜ್ಞಾನಸಂಪನ್ನರಾಗಿ, ಉತ್ತಮರಲ್ಲಿಯೂ ಮಹೋತ್ತಮರಾಗಿ ಅವಧೂತವೇಷದಿಂದ ಮಹಿಮೆಯನ್ನು ಮರೆಸಿಕೊಂಡು ಇಲ್ಲಿಗೆ ಬಂದಿರುವ ನೀವಿಬ್ಬರೂ ಯಾರು? ಕೃಪೆಯಿಟ್ಟು ತಿಳಿಸಿರಿ.॥10॥
(ಶ್ಲೋಕ-11)
ಮೂಲಮ್
ಚರಂತಿ ಹ್ಯವನೌ ಕಾಮಂ
ಬ್ರಾಹ್ಮಣಾ ಭಗವತ್ಪ್ರಿಯಾಃ ।
ಮಾದೃಶಾಂ ಗ್ರಾಮ್ಯಬುದ್ಧೀನಾಂ
ಬೋಧಾಯೋನ್ಮತ್ತಲಿಂಗಿನಃ ॥
ಅನುವಾದ
ಬ್ರಹ್ಮಜ್ಞಾನಿಗಳಾಗಿ ಶ್ರೀಭಗವಂತನಿಗೆ ಪ್ರಿಯರಾಗಿರುವ ಹಲವಾರು ಮಂದಿ ಭಾಗವತೋತ್ತಮರು ನನ್ನಂತಹ ಪಶುಬುದ್ಧಿಯುಳ್ಳ ಪ್ರಾಣಿಗಳಿಗೆ ಉಪದೇಶ ಮಾಡಲಿಕ್ಕಾಗಿ ಹುಚ್ಚರಂತೆ ವೇಷವನ್ನು ಧರಿಸಿಕೊಂಡು ಭೂಮಿಯ ಮೇಲೆ ಸಂಚರಿಸುತ್ತಿರುವುದುಂಟು. ಅಂತಹ ವರಲ್ಲಿ ನೀವು ಯಾರು? ॥11॥
(ಶ್ಲೋಕ-12)
ಮೂಲಮ್ (ವಾಚನಮ್)
ಕುಮಾರೋ ನಾರದ
ಮೂಲಮ್
ಋಭುರಂಗಿರಾ ದೇವಲೋಸಿತಃ ।
ಅಪಾಂತರತಮೋ ವ್ಯಾಸೋ
ಮಾರ್ಕಂಡೇಯೋಥಗೌತಮಃ ॥
(ಶ್ಲೋಕ-13)
ಮೂಲಮ್
ವಸಿಷ್ಠೋ ಭಗವಾನ್ ರಾಮಃ ಕಪಿಲೋ ಬಾದರಾಯಣಿಃ ।
ದುರ್ವಾಸಾ ಯಾಜ್ಞವಲ್ಕ್ಯಶ್ಚ ಜಾತೂಕರ್ಣ್ಯಸ್ತಥಾರುಣಿಃ ॥
(ಶ್ಲೋಕ-14)
ಮೂಲಮ್
ರೋಮಶಶ್ಚ್ಯವನೋ ದತ್ತ ಆಸುರಿಃ ಸಪತಂಜಲಿಃ ।
ಋಷಿರ್ವೇದಶಿರಾ ಬೋಧ್ಯೋ ಮುನಿಃ ಪಂಚಶಿರಾಸ್ತಥಾ ॥
(ಶ್ಲೋಕ-15)
ಮೂಲಮ್
ಹಿರಣ್ಯನಾಭಃ ಕೌಸಲ್ಯಃ ಶ್ರುತದೇವ ಋತಧ್ವಜಃ ।
ಏತೇ ಪರೇ ಚ ಸಿದ್ಧೇಶಾಶ್ಚರಂತಿ ಜ್ಞಾನಹೇತವಃ ॥
ಅನುವಾದ
ಸನತ್ಕುಮಾರರು, ನಾರದರು, ಋಭುಗಳು, ಅಂಗಿರಸರು, ದೇವಲರು, ಅಸಿತರು, ಅಪಾಂತರತಮರು, ವ್ಯಾಸರು, ಮಾರ್ಕಂಡೇಯರು, ಗೌತಮರು, ವಸಿಷ್ಠರು, ಭಗವಾನ್ ಪರಶುರಾಮರು, ಕಪಿಲ ಮಹಾಮುನಿಗಳು, ಶುಕಮುನಿಗಳು, ದುರ್ವಾಸರು, ಯಾಜ್ಞವಲ್ಕ್ಯರು, ಜಾತಕರ್ಣರು, ಆರುಣಿಗಳೂ, ರೋಮ ಶರು, ಚ್ಯವನರು, ದತ್ತಾತ್ರೇಯರು, ಆಸುರಿಮಹರ್ಷಿಗಳು, ಪತಂಜಲಿಯವರು, ವೇದಶಿರಾರವರು, ಬೋಧಾಯನ ಮುನಿಗಳು, ಪಂಚಶಿರಸರು, ಹಿರಣ್ಯನಾಭರು, ಕೌಸಲ್ಯರು, ಶ್ರುತದೇವರು ಮತ್ತು ಋತಧ್ವಜರು ಇವರೇ ಅಲ್ಲದೆ ಬೇರೆ ಸಿದ್ಧೇಶ್ವರರಾದ ಋಷಿ-ಮುನಿಗಳು ಜ್ಞಾನ ದಾನ ಮಾಡುವುದಕ್ಕಾಗಿ, ಭೂಮಿಯ ಮೇಲೆ ಸಂಚರಿಸುತ್ತಾ ಇರುತ್ತಾರೆ. ॥12-15॥
(ಶ್ಲೋಕ-16)
ಮೂಲಮ್
ತಸ್ಮಾದ್ಯುವಾಂ ಗ್ರಾಮ್ಯಪಶೋರ್ಮಮ ಮೂಢಧಿಯಃ ಪ್ರಭೂ ।
ಅಂಧೇ ತಮಸಿ ಮಗ್ನಸ್ಯ ಜ್ಞಾನದೀಪ ಉದೀರ್ಯತಾಮ್ ॥
ಅನುವಾದ
ಓ ಸ್ವಾಮಿಗಳೇ! ವಿಷಯ ಭೋಗಗಳಲ್ಲಿ ಸಿಕ್ಕಿಕೊಂಡಿರುವ ಮೂಢಬುದ್ಧಿಯುಳ್ಳ ನಾನು ಗ್ರಾಮ್ಯ ಪಶುವಿನಂತೆ ಅಜ್ಞಾನದ ಘೋರವಾದ ಅಂಧಕಾರದಲ್ಲಿ ಮುಳುಗಿರುವವನು. ತಾವು ನನಗೆ ಜ್ಞಾನ ಜ್ಯೋತಿಯನ್ನು ತೋರಿ ಪ್ರಕಾಶದ ಕೇಂದ್ರಕ್ಕೆ ಕೊಂಡೊಯ್ಯಿರಿ. ॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಅಂಗಿರಾ ಉವಾಚ
ಮೂಲಮ್
ಅಹಂ ತೇ ಪುತ್ರಕಾಮಸ್ಯ ಪುತ್ರದೋಸ್ಮ್ಯಂಗಿರಾ ನೃಪ ।
ಏಷ ಬ್ರಹ್ಮಸುತಃ ಸಾಕ್ಷಾನ್ನಾರದೋ ಭಗವಾನೃಷಿಃ ॥
ಅನುವಾದ
ಅಂಗಿರಸ ಮಹರ್ಷಿಗಳು ಹೇಳಿದರು — ರಾಜನೇ! ನೀನು ಪುತ್ರಕಾಮನಾಗಿದ್ದಾಗ ನಿನಗೆ ಪುತ್ರನನ್ನು ಕರುಣಿಸಿದ ಅಂಗಿರಸ ಮಹರ್ಷಿಯೇ ನಾನು. ಕಣ್ಣೆದುರಿಗೆ ಕಾಣುತ್ತಿರುವ ಇವರು ಬ್ರಹ್ಮ ದೇವರ ಪುತ್ರರಾದ ಭಗವಾನ್ ನಾರದ ಮಹರ್ಷಿಗಳು. ॥17॥
(ಶ್ಲೋಕ-18)
ಮೂಲಮ್
ಇತ್ಥಂ ತ್ವಾಂ ಪುತ್ರಶೋಕೇನ ಮಗ್ನಂ ತಮಸಿ ದುಸ್ತರೇ ।
ಅತದರ್ಹಮನುಸ್ಮೃತ್ಯ ಮಹಾಪುರುಷಗೋಚರಮ್ ॥
(ಶ್ಲೋಕ-19)
ಮೂಲಮ್
ಅನುಗ್ರಹಾಯ ಭವತಃ ಪ್ರಾಪ್ತಾವಾವಾಮಿಹ ಪ್ರಭೋ ।
ಬ್ರಹ್ಮಣ್ಯೋ ಭಗವದ್ಭಕ್ತೋ ನಾವಸೀದಿತುಮರ್ಹತಿ ॥
ಅನುವಾದ
ನೀನು ಪುತ್ರಶೋಕದಿಂದ ಗಾಢವಾದ ಅಜ್ಞಾನಾಂಧಕಾರದಲ್ಲಿ ಮುಳುಗಿದ್ದುದನ್ನು ನಾವು ನೋಡಿ ನೀನು ಭಗವಂತನ ಭಕ್ತನಾಗಿದ್ದು, ಶೋಕಿಸುವುದು ಉಚಿತವಲ್ಲ ಎಂದು ಯೋಚಿಸಿ ನಿನಗೆ ಅನುಗ್ರಹವನ್ನು ತೋರಲೆಂದೇ ನಾವಿಬ್ಬರೂ ಇಲ್ಲಿಗೆ ಬಂದಿರುವೆವು. ರಾಜನೇ! ಶ್ರೀಭಗವಂತನಲ್ಲಿಯೂ, ಬ್ರಾಹ್ಮಣರಲ್ಲಿಯೂ ಭಕ್ತಿಯುಳ್ಳವನು ನಿಜವಾಗಿಯೂ ಯಾವುದೇ ಸ್ಥಿತಿಯಲ್ಲಿಯೂ ಶೋಕ ಪಡಬಾರದು. ॥18-19॥
(ಶ್ಲೋಕ-20)
ಮೂಲಮ್
ತದೈವ ತೇ ಪರಂ ಜ್ಞಾನಂ ದದಾಮಿ ಗೃಹಮಾಗತಃ ।
ಜ್ಞಾತ್ವಾನ್ಯಾಭಿನಿವೇಶಂ ತೇ ಪುತ್ರಮೇವ ದದಾವಹಮ್ ॥
ಅನುವಾದ
ನಿನ್ನ ಮನೆಗೆ ನಾನು ಮೊದಲು ಬಂದಿದ್ದಾಗಲೇ ನಿನಗೆ ಪರಮ ಜ್ಞಾನವನ್ನು ಉಪದೇಶ ಮಾಡಬಹುದಾಗಿತ್ತು. ಆದರೆ ಇನ್ನೂ ನಿನ್ನ ಹೃದಯದಲ್ಲಿ ಪುತ್ರನ ಕುರಿತು ಉತ್ಕಟವಾದ ಅಭಿಲಾಷೆಯು ತುಂಬಿದೆ ಎಂಬುದನ್ನು ಗಮನಿಸಿ, ನಾನು ನಿನಗೆ ಆಗ ಜ್ಞಾನವನ್ನು ಕೊಡದೆ ಪುತ್ರನನ್ನೇ ಕೊಟ್ಟೆನು. ॥20॥
(ಶ್ಲೋಕ-21)
ಮೂಲಮ್
ಅಧುನಾ ಪುತ್ರಿಣಾಂ ತಾಪೋ ಭವತೈವಾನುಭೂಯತೇ ।
ಏವಂ ದಾರಾ ಗೃಹಾ ರಾಯೋ ವಿವಿಧೈಶ್ವರ್ಯಸಂಪದಃ ॥
(ಶ್ಲೋಕ-22)
ಮೂಲಮ್
ಶಬ್ದಾದಯಶ್ಚ ವಿಷಯಾಶ್ಚಲಾ ರಾಜ್ಯ ವಿಭೂತಯಃ ।
ಮಹೀ ರಾಜ್ಯಂ ಬಲಂ ಕೋಶೋ ಭೃತ್ಯಾಮಾತ್ಯಾಃ ಸುಹೃಜ್ಜನಾಃ ॥
ಅನುವಾದ
ಪುತ್ರವಂತರಿಗೆ ಎಷ್ಟು ದುಃಖವುಂಟಾಗುತ್ತದೆ? ಎಂಬುದು ಈಗ ನಿನಗೆ ಸ್ವತಃ ಅನುಭವಕ್ಕೆ ಬಂದಿದೆ. ಹೆಂಡತಿ, ಮನೆ, ಮಠ, ಹಣ, ಬಗೆ-ಬಗೆಯ ಅಧಿಕಾರ, ಐಶ್ವರ್ಯಗಳು, ಸಂಪತ್ತುಗಳು, ಶಬ್ದ-ರೂಪ-ರಸ ಮುಂತಾದ ವಿಷಯಗಳು, ರಾಜ್ಯವೈಭವ, ಭೂಮಿ, ರಾಜ್ಯ, ಸೈನ್ಯ, ಭಂಡಾರ, ಸೇವಕರು, ಅಮಾತ್ಯರು, ನೆಂಟರು, ಇಷ್ಟರು ಇವೆಲ್ಲಕ್ಕೂ ಇದೇ ಮಾತು ಅನ್ವಯಿಸುತ್ತದೆ. ಏಕೆಂದರೆ ಇವೆಲ್ಲವೂ ಅನಿತ್ಯವೇ ಆಗಿವೆ. ॥21-22॥
(ಶ್ಲೋಕ-23)
ಮೂಲಮ್
ಸರ್ವೇಪಿ ಶೂರಸೇನೇಮೇ ಶೋಕಮೋಹಭಯಾರ್ತಿದಾಃ ।
ಗಂಧರ್ವನಗರಪ್ರಖ್ಯಾಃ ಸ್ವಪ್ನಮಾಯಾಮನೋರಥಾಃ ॥
(ಶ್ಲೋಕ-24)
ಮೂಲಮ್
ದೃಶ್ಯಮಾನಾ ವಿನಾರ್ಥೇನ ನ ದೃಶ್ಯಂತೇ ಮನೋಭವಾಃ ।
ಕರ್ಮಭಿರ್ಧ್ಯಾಯತೋ ನಾನಾಕರ್ಮಾಣಿ ಮನಸೋಭವನ್ ॥
ಅನುವಾದ
ಶೂರಸೇನನೇ! ಆದ್ದರಿಂದ ಇವೆಲ್ಲವೂ ಶೋಕ, ಮೋಹ, ಭಯ, ದುಃಖ ಇವುಗಳಿಗೆ ಕಾರಣವಾಗಿವೆ, ಮನೋ ವಿನೋದ ವಾಗಿವೆ, ಪೂರ್ಣವಾಗಿ ಕಲ್ಪಿತ ಮತ್ತು ಮಿಥ್ಯೆಗಳಾಗಿವೆ, ಏಕೆಂದರೆ, ಇವೆಲ್ಲವೂ ಇಲ್ಲದೆಯೇ ಕಂಡು ಬರುತ್ತವೆ. ಇದರಿಂದಲೇ ಇವು ಒಂದು ಕ್ಷಣದಲ್ಲಿ ಕಾಣಿಸಿದರೂ ಮರುಕ್ಷಣದಲ್ಲೇ ಕಣ್ಮರೆಯಾಗುತ್ತವೆ. ಇವು ಗಂಧರ್ವ ನಗರದಂತೆ, ಸ್ವಪ್ನದಂತೆ, ಇಂದ್ರಜಾಲದಂತೆ, ಮನೋರಥದ ವಸ್ತುಗಳಂತೆ ಸರ್ವಥಾ ಅಸತ್ಯವಾಗಿವೆ. ಕರ್ಮವಾಸನೆಗಳಿಂದ ಪ್ರೇರಿತರಾಗಿ ವಿಷಯಗಳನ್ನು ಚಿಂತಿಸುತ್ತಲೇ ಇರುವ ಜನರ ಮನಸ್ಸು ಅನೇಕ ಪ್ರಕಾರದ ಕರ್ಮಗಳನ್ನು ಸೃಷ್ಟಿಸುತ್ತಾ ಇರುತ್ತದೆ. ॥23-24॥
(ಶ್ಲೋಕ-25)
ಮೂಲಮ್
ಅಯಂ ಹಿ ದೇಹಿನೋ ದೇಹೋ ದ್ರವ್ಯಜ್ಞಾನಕ್ರಿಯಾತ್ಮಕಃ ।
ದೇಹಿನೋ ವಿವಿಧಕ್ಲೇಶಸಂತಾಪಕೃದುದಾಹೃತಃ ॥
ಅನುವಾದ
ಪಂಚಭೂತ, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳ ಸಂಘಾತ ವಾದ ಜೀವಾತ್ಮನ ಈ ದೇಹವು ಜೀವಿಗೆ ಅನೇಕ ವಿಧದ ಕ್ಲೇಶಗಳನ್ನೂ, ಸಂತಾಪಗಳನ್ನೂ ಕೊಡುವಂತಹುದು ಎಂದು ಹೇಳಲಾಗಿದೆ. ॥25॥
(ಶ್ಲೋಕ-26)
ಮೂಲಮ್
ತಸ್ಮಾತ್ಸ್ವಸ್ಥೇನ ಮನಸಾ ವಿಮೃಶ್ಯ ಗತಿಮಾತ್ಮನಃ ।
ದ್ವೈತೇ ಧ್ರುವಾರ್ಥವಿಶ್ರಂಭಂ ತ್ಯಜೋಪಶಮಮಾವಿಶ ॥
ಅನುವಾದ
ಅದಕ್ಕಾಗಿ ನೀನು ವಿಷಯಗಳಲ್ಲಿ ಅಲೆಯುತ್ತಿರುವ ಮನಸ್ಸನ್ನು ತಡೆದು ಶಾಂತಗೊಳಿಸು, ಸ್ವಸ್ಥ ಗೊಳಿಸು. ಮತ್ತೆ ಆ ಮನಸ್ಸಿನಿಂದ ನಿನ್ನ ನಿಜವಾದ ಸ್ವರೂಪದ ಕುರಿತು ವಿಚಾರಮಾಡು. ಈ ದ್ವೈತ ಭ್ರಮೆಯಲ್ಲಿರುವ ನಿತ್ಯತ್ವದ ಬುದ್ಧಿಯನ್ನು ಬಿಟ್ಟು, ಪರಮಶಾಂತಿಸ್ವರೂಪ ನಾದ ಪರಮಾತ್ಮನಲ್ಲಿ ನೆಲೆಯಾಗಿ ನಿಲ್ಲು. ॥26॥
(ಶ್ಲೋಕ-27)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಏತಾಂ ಮಂತ್ರೋಪನಿಷದಂ ಪ್ರತೀಚ್ಛ ಪ್ರಯತೋ ಮಮ ।
ಯಾಂ ಧಾರಯನ್ಸಪ್ತರಾತ್ರಾದ್ದ್ರಷ್ಟಾ ಸಂಕರ್ಷಣಂ ಪ್ರಭುಮ್ ॥
ಅನುವಾದ
ದೇವರ್ಷಿನಾರದರು ಹೇಳಿದರು — ರಾಜೇಂದ್ರಾ! ನೀನು ಏಕಾಗ್ರಚಿತ್ತದಿಂದ ನಾನು ಉಪದೇಶಿಸುವ ಈ ಮಂತ್ರೋಪನಿಷತ್ತನ್ನು ಗ್ರಹಿಸುವವನಾಗು. ಇದನ್ನು ಜಪಿಸು ವುದರಿಂದ ಏಳು ರಾತ್ರಿಗಳಲ್ಲಿ ಭಗವಾನ್ ಸಂಕರ್ಷಣನ ದರ್ಶನವಾಗುವುದು. ॥27॥
(ಶ್ಲೋಕ-28)
ಮೂಲಮ್
ಯತ್ಪಾದಮೂಲಮುಪಸೃತ್ಯ ನರೇಂದ್ರ ಪೂರ್ವೇ
ಶರ್ವಾದಯೋ ಭ್ರಮಮಿಮಂ ದ್ವಿತಯಂ ವಿಸೃಜ್ಯ ।
ಸದ್ಯಸ್ತದೀಯಮತುಲಾನಧಿಕಂ ಮಹಿತ್ವಂ
ಪ್ರಾಪುರ್ಭವಾನಪಿ ಪರಂ ನಚಿರಾದುಪೈತಿ ॥
ಅನುವಾದ
ನರೇಂದ್ರನೇ! ಹಿಂದಿನ ಕಾಲದಲ್ಲಿ ಭಗವಾನ್ ಶಂಕರನೇ ಮುಂತಾದವರು ಶ್ರೀಸಂಕರ್ಷಣ ದೇವರ ಚರಣಕಮಲಗಳನ್ನೇ ಆಶ್ರಯಿಸಿದ್ದರು. ಇದರಿಂದ ಅವರು ದ್ವೈತಭ್ರಮೆಯನ್ನು ತ್ಯಾಗಗೈದು, ಅವನ ಆ ಮಹಿಮೆಯನ್ನು ಪಡೆದುಕೊಂಡರು. ಅದರಿಂದ ಮಿಗಿಲಾದುದು ಯಾವುದೂ ಇಲ್ಲ, ಅದಕ್ಕೆ ಸಮಾನವಾದುದೂ ಇಲ್ಲ. ನೀನೂ ಕೂಡ ಬಹುಬೇಗನೇ ಭಗವಂತನ ಅದೇ ಪರಮಪದವನ್ನು ಪಡೆದುಕೊಳ್ಳುವೆ. ॥28॥
ಅನುವಾದ (ಸಮಾಪ್ತಿಃ)
ಹದಿನೈದನೆಯ ಅಧ್ಯಾಯವು ಮುಗಿಯಿತು. ॥15॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಚಿತ್ರಕೇತುಸಾಂತ್ವನಂ ನಾಮ ಪಂಚದಶೋಽಧ್ಯಾಯಃ ॥15॥