[ಹದಿನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ವೃತ್ರಾಸುರನ ಪೂರ್ವಚರಿತ್ರೆ
(ಶ್ಲೋಕ-1)
ಮೂಲಮ್ (ವಾಚನಮ್)
ಪರೀಕ್ಷಿದುವಾಚ
ಮೂಲಮ್
ರಜಸ್ತಮಃಸ್ವಭಾವಸ್ಯ ಬ್ರಹ್ಮನ್ವೃತ್ರಸ್ಯ ಪಾಪ್ಮನಃ ।
ನಾರಾಯಣೇ ಭಗವತಿ ಕಥಮಾಸೀದ್ದೃಢಾ ಮತಿಃ ॥
ಅನುವಾದ
ಪರೀಕ್ಷಿತನು ಕೇಳಿದನು — ಮಹಾತ್ಮರೇ! ವೃತ್ರಾಸುರನಾದರೋ ರಜೋಗುಣ-ತಮೋಗುಣ ಪ್ರಕೃತಿಯುಳ್ಳ ಅಸುರನು, ಪಾಪ ಕರ್ಮಿಯು. ಅಂತಹವನಿಗೆ ಭಗವಾನ್ ಶ್ರೀನಾರಾಯಣನ ಚರಣಗಳಲ್ಲಿ ದೃಢವಾದ ಭಕ್ತಿಯು ಹೇಗೆ ಉಂಟಾಯಿತು? ॥1॥
(ಶ್ಲೋಕ-2)
ಮೂಲಮ್
ದೇವಾನಾಂ ಶುದ್ಧಸತ್ತ್ವಾನಾಮೃಷೀಣಾಂ ಚಾಮಲಾತ್ಮನಾಮ್ ।
ಭಕ್ತಿರ್ಮುಕುಂದಚರಣೇ ನ ಪ್ರಾಯೇಣೋಪಜಾಯತೇ ॥
ಅನುವಾದ
ಸಾಮಾನ್ಯವಾಗಿ ಶುದ್ಧ ಸತ್ತ್ವಮಯರಾದ ದೇವತೆಗಳೂ, ಪವಿತ್ರ ಹೃದಯವುಳ್ಳ ಮಹರ್ಷಿಗಳೂ, ಭಗವಾನ್ ಮುಕುಂದನ ಪರಮ ಪ್ರೇಮ ಮಯ ಅನನ್ಯ ಭಕ್ತಿಯಿಂದ ವಂಚಿತರೇ ಆಗಿರುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ನಿಜವಾಗಿಯೂ ಭಗವಂತನ ಭಕ್ತಿಯು ಅತಿ ದುರ್ಲಭವಾಗಿದೆ. ॥2॥
(ಶ್ಲೋಕ-3)
ಮೂಲಮ್
ರಜೋಭೀಃ ಸಮಸಂಖ್ಯಾತಾಃ ಪಾರ್ಥಿವೈರಿಹ ಜಂತವಃ ।
ತೇಷಾಂ ಯೇ ಕೇಚನೇಹಂತೇ ಶ್ರೇಯೋ ವೈ ಮನುಜಾದಯಃ ॥
ಅನುವಾದ
ಪೂಜ್ಯರೇ! ಈ ಜಗತ್ತಿನಲ್ಲಿ ಭೂಮಿಯಲ್ಲಿರುವ ಧೂಳಿನ ಕಣಗಳಂತೆ ಜೀವಿಗಳು ಅಸಂಖ್ಯಾತರಾಗಿದ್ದಾರೆ. ಅವರಲ್ಲಿಯೂ ಮನುಷ್ಯರೇ ಮುಂತಾದ ಶ್ರೇಷ್ಠ ಜೀವರೇ ತಮ್ಮ ಶ್ರೇಯಸ್ಸಿಗಾಗಿ ಪ್ರಯತ್ನಿಸುತ್ತಾರೆ. ॥3॥
(ಶ್ಲೋಕ-4)
ಮೂಲಮ್
ಪ್ರಾಯೋ ಮುಮುಕ್ಷವಸ್ತೇಷಾಂ ಕೇಚನೈವ ದ್ವಿಜೋತ್ತಮ ।
ಮುಮುಕ್ಷೂಣಾಂ ಸಹಸ್ರೇಷು ಕಶ್ಚಿನ್ಮುಚ್ಯೇತ ಸಿಧ್ಯತಿ ॥
ಅನುವಾದ
ಬ್ರಾಹ್ಮಣೋತ್ತಮರೇ! ಅವರಲ್ಲಿಯೂ ಸಂಸಾರದಿಂದ ಮುಕ್ತಿಯನ್ನು ಬಯಸುವವರು ವಿರಳರೇ ಆಗಿದ್ದಾರೆ. ಅವರಲ್ಲಿ ಮೋಕ್ಷವನ್ನು ಬಯಸುವವರಲ್ಲಿಯೂ ಯಾರೋ ಸಾವಿರಕ್ಕೆ ಒಬ್ಬನು ಮುಕ್ತಿಯ ಸಿದ್ಧಿಲಾಭವನ್ನು ಪಡೆಯುತ್ತಾನೆ. ॥4॥
(ಶ್ಲೋಕ-5)
ಮೂಲಮ್
ಮುಕ್ತಾನಾಮಪಿ ಸಿದ್ಧಾನಾಂ ನಾರಾಯಣಪರಾಯಣಃ ।
ಸುದುರ್ಲಭಃ ಪ್ರಶಾಂತಾತ್ಮಾ ಕೋಟಿಷ್ವಪಿ ಮಹಾಮುನೇ ॥
ಅನುವಾದ
ಮಹಾಮುನಿಗಳೇ! ಕೋಟ್ಯಾವಧಿ ಸಿದ್ಧರಲ್ಲಿ ಹಾಗೂ ಮುಕ್ತರಲ್ಲಿಯೂ ಏಕಮಾತ್ರ ಭಗವಂತನಲ್ಲೇ ಪರಾಯಣರಾದ ಶಾಂತಚಿತ್ತರಾದ ಮಹಾಪುರುಷರು ದೊರೆಯುವುದು ತುಂಬಾ ಕಠಿಣವಾಗಿದೆ. ॥5॥
(ಶ್ಲೋಕ-6)
ಮೂಲಮ್
ವೃತ್ರಸ್ತು ಸ ಕಥಂ ಪಾಪಃ ಸರ್ವಲೋಕೋಪತಾಪನಃ ।
ಇತ್ಥಂ ದೃಢಮತಿಃ ಕೃಷ್ಣ ಆಸೀತ್ಸಂಗ್ರಾಮ ಉಲ್ಬಣೇ ॥
ಅನುವಾದ
ಇಂತಹ ಸ್ಥಿತಿಯಲ್ಲಿ ಎಲ್ಲರಿಗೂ ಸತಾಯಿಸುತ್ತಿದ್ದ ದೊಡ್ಡ ಪಾಪಿಯಾದ ಆ ವೃತ್ರಾಸುರನು ಭಯಂಕರ ಯುದ್ಧದ ಸಮಯದಲ್ಲಿಯೂ ಭಗವಾನ್ ಶ್ರೀಕೃಷ್ಣನಲ್ಲಿ ತನ್ನ ವೃತ್ತಿಗಳನ್ನು ದೃಢವಾಗಿ ಹೇಗೆ ತೊಡಗಿಸಿ ದನು? ಇದರ ಕಾರಣವೇನು? ॥6॥
(ಶ್ಲೋಕ-7)
ಮೂಲಮ್
ಅತ್ರ ನಃ ಸಂಶಯೋ ಭೂಯಾಞ್ಛ್ರೋತುಂ ಕೌತೂಹಲಂ ಪ್ರಭೋ ।
ಯಃ ಪೌರುಷೇಣ ಸಮರೇ ಸಹಸ್ರಾಕ್ಷಮತೋಷಯತ್ ॥
ಅನುವಾದ
ಪ್ರಭೋ! ಈ ವಿಷಯದಲ್ಲಿ ನಮಗೆ ಸಂದೇಹ ಉಂಟಾಗಿದೆ ಮತ್ತು ಕೇಳಲು ಬಹಳ ಕುತೂಹಲವೂ ಇದೆ. ಆಹಾ! ವೃತ್ರಾಸುರನು ರಣ ಭೂಮಿಯಲ್ಲಿ ದೇವರಾಜ ಇಂದ್ರನನ್ನೂ ಸಂತೋಷಗೊಳಿಸಿದ ಅವನ ಬಲ-ಪರಾಕ್ರಮಗಳು ಎಷ್ಟು ಮಹತ್ತರವಾಗಿದ್ದವು.॥7॥
ಮೂಲಮ್
(ಶ್ಲೋಕ-8)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಪರೀಕ್ಷಿತೋಥ ಸಂಪ್ರಶ್ನಂ ಭಗವಾನ್ ಬಾದರಾಯಣಿಃ ।
ನಿಶಮ್ಯ ಶ್ರದ್ದಧಾನಸ್ಯ ಪ್ರತಿನಂದ್ಯ ವಚೋಬ್ರವೀತ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳಿರಾಘಿ! ಭಗವಂತರಾದ ಶ್ರೀಶುಕಮಹಾಮುನಿಗಳು ಶ್ರದ್ಧಾವಂತನಾದ ಪರೀಕ್ಷಿದ್ರಾಜನ ಆ ಶ್ರೇಷ್ಠವಾದ ಪ್ರಶ್ನೆಯನ್ನು ಕೇಳಿ, ಅವನನ್ನು ಅಭಿನಂದಿಸುತ್ತಾ ಹೀಗೆ ಉತ್ತರಿಸಿದರು. ॥8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಶೃಣುಷ್ವಾವಹಿತೋ ರಾಜನ್ನಿತಿಹಾಸಮಿಮಂ ಯಥಾ ।
ಶ್ರುತಂ ದ್ವೈಪಾಯನಮುಖಾನ್ನಾರದಾದ್ದೇವಲಾದಪಿ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ನೃಪಶ್ರೇಷ್ಠನೇ! ನೀನು ಸಾವಧಾನವಾಗಿ ಈ ಇತಿಹಾಸವನ್ನು ಕೇಳು. ನಾನು ಇದನ್ನು ನನ್ನ ತೀರ್ಥರೂಪರಾದ ವೇದವ್ಯಾಸರು, ದೇವರ್ಷಿ ನಾರದರು ಮತ್ತು ಮಹರ್ಷಿ ದೇವಲ ಇವರ ಬಾಯಿಂದ ವಿಧಿಪೂರ್ವಕವಾಗಿ ಕೇಳಿದ್ದೇನೆ. ॥9॥
(ಶ್ಲೋಕ-10)
ಮೂಲಮ್
ಆಸೀದ್ರಾಜಾ ಸಾರ್ವಭೌಮಃ ಶೂರಸೇನೇಷು ವೈ ನೃಪ ।
ಚಿತ್ರಕೇತುರಿತಿ ಖ್ಯಾತೋ ಯಸ್ಯಾಸೀತ್ಕಾಮಧುಙ್ಮಹೀ ॥
ಅನುವಾದ
ಬಹಳ ಹಿಂದಿನ ಕಾಲದ ಚರಿತ್ರೆ. ಶೂರಸೇನ ದೇಶದಲ್ಲಿ ಚಿತ್ರಕೇತು ಎಂಬ ಪ್ರಸಿದ್ಧನಾದ ಒಬ್ಬ ಸಾರ್ವಭೌಮನಿದ್ದನು. ಅವನ ರಾಜ್ಯದಲ್ಲಿ ಭೂಮಿಯು ಕಾಮಧೇನುವಿನಂತೆ ಪ್ರಜೆಗಳ ಇಚ್ಛೆಗನುಸಾರವಾಗಿ ಅನ್ನ-ರಸಾದಿಗಳನ್ನು ಕೊಡುತ್ತಿದ್ದಳು. ॥10॥
(ಶ್ಲೋಕ-11)
ಮೂಲಮ್
ತಸ್ಯ ಭಾರ್ಯಾಸಹಸ್ರಾಣಾಂ ಸಹಸ್ರಾಣಿ ದಶಾಭವನ್ ।
ಸಾಂತಾನಿಕಶ್ಚಾಪಿ ನೃಪೋ ನ ಲೇಭೇ ತಾಸು ಸಂತತಿಮ್ ॥
ಅನುವಾದ
ಅವನಿಗೆ ಒಂದು ಕೋಟಿ ರಾಣಿಯರಿದ್ದು, ಅವನು ಸ್ವತಃ ಸಂತಾನವನ್ನು ಉತ್ಪನ್ನಗೊಳಿಸಲು ಸಮರ್ಥನೂ ಆಗಿದ್ದನು. ಆದರೆ ಅವರಲ್ಲಿ ಯಾರಲ್ಲಿಯೂ ಸಂತಾನವಿರಲಿಲ್ಲ. ॥11॥
(ಶ್ಲೋಕ-12)
ಮೂಲಮ್
ರೂಪೌದಾರ್ಯವಯೋಜನ್ಮವಿದ್ಯೈಶ್ವರ್ಯಶ್ರಿಯಾದಿಭಿಃ ।
ಸಂಪನ್ನಸ್ಯ ಗುಣೈಃ ಸರ್ವೈಶ್ಚಿಂತಾ ವಂಧ್ಯಾಪತೇರಭೂತ್ ॥
ಅನುವಾದ
ಈ ಮಹಾರಾಜಾ ಚಿತ್ರಕೇತುವಿನಲ್ಲಿ ಯಾವುದೇ ಕೊರತೆ ಇರಲಿಲ್ಲ. ಸುಂದರತೆ, ಔದಾರ್ಯ, ಯೌವನ, ಕುಲೀನತೆ, ವಿದ್ಯೆ, ಐಶ್ವರ್ಯ, ಸಂಪತ್ತು ಮುಂತಾದ ಎಲ್ಲ ಗುಣಗಳಿಂದ ಸಂಪನ್ನನಾಗಿದ್ದನು. ಹೀಗಿದ್ದರೂ ಅವನ ಪತ್ನಿಯರು ಬಂಜೆಯ ರಾಗಿಯೇ ಇದ್ದರು. ಇದರಿಂದ ಅವನಿಗೆ ದೊಡ್ಡ ಚಿಂತೆಯೇ ಇಟ್ಟುಕೊಂಡಿತ್ತು. ॥12॥
(ಶ್ಲೋಕ-13)
ಮೂಲಮ್
ನ ತಸ್ಯ ಸಂಪದಃ ಸರ್ವಾ ಮಹಿಷ್ಯೋ ವಾಮಲೋಚನಾಃ ।
ಸಾರ್ವಭೌಮಸ್ಯ ಭೂಶ್ಚೇಯಮಭವನ್ ಪ್ರೀತಿಹೇತವಃ ॥
ಅನುವಾದ
ಅವನು ಇಡೀ ಪೃಥಿವಿಯ ಏಕಛತ್ರ ಸಾಮ್ರಾಟನಾಗಿದ್ದನು. ಅನೇಕ ಸುಂದರ ರಾಣಿ ಯರಿದ್ದರು. ಸಮಸ್ತ ಪೃಥಿವಿಯು ಅವನ ವಶದಲ್ಲಿತ್ತು. ಎಲ್ಲ ರೀತಿಯ ಸಂಪತ್ತುಗಳು ಅವನ ಸೇವೆಗೆ ಸಿದ್ಧವಿದ್ದರೂ ಇವೆಲ್ಲ ವಸ್ತುಗಳು ಅವನನ್ನು ಸುಖಿಯಾಗಿಸಲು ಅಸಮರ್ಥವಾದುವು. ॥13॥
(ಶ್ಲೋಕ-14)
ಮೂಲಮ್
ತಸ್ಯೈಕದಾ ತು ಭವನಮಂಗಿರಾ ಭಗವಾನೃಷಿಃ ।
ಲೋಕಾನನುಚರನ್ನೇತಾನುಪಾಗಚ್ಛದ್ಯದೃಚ್ಛಯಾ ॥
ಅನುವಾದ
ಒಂದು ದಿನ ಶಾಪಾನುಗ್ರಹಸಮರ್ಥ ರಾದ ಅಂಗಿರಾ ಎಂಬ ಋಷಿಗಳು ಯಥೇಚ್ಛವಾಗಿ ವಿವಿಧ ಲೋಕಗಳಲ್ಲಿ ಸಂಚರಿಸುತ್ತಾ ಚಿತ್ರಕೇತು ಮಹಾರಾಜನ ಅರಮನೆಗೆ ದಯಮಾಡಿಸಿದರು. ॥14॥
(ಶ್ಲೋಕ-15)
ಮೂಲಮ್
ತಂ ಪೂಜಯಿತ್ವಾ ವಿಧಿವತ್ಪ್ರತ್ಯುತ್ಥಾನಾರ್ಹಣಾದಿಭಿಃ ।
ಕೃತಾತಿಥ್ಯಮುಪಾಸೀದತ್ಸುಖಾಸೀನಂ ಸಮಾಹಿತಃ ॥
ಅನುವಾದ
ರಾಜನು ಎದ್ದು ನಿಂತು ಅವರನ್ನು ಅರ್ಘ್ಯ-ಪಾದ್ಯಾದಿಗಳಿಂದ ವಿಧಿವತ್ತಾಗಿ ಪೂಜಿಸಿದನು. ಆತಿಥ್ಯವನ್ನು ಸ್ವೀಕರಿಸಿ ಅಂಗಿರಾ ಋಷಿಗಳು ಸುಖಾಸೀನರಾಗಿ ಮಂಡಿಸಿದಾಗ, ಚಿತ್ರಕೇತುರಾಜನೂ ಕೂಡ ಶಾಂತಭಾವದಿಂದ ಅವರ ಬಳಿ ಕುಳಿತುಕೊಂಡನು. ॥15॥
(ಶ್ಲೋಕ-16)
ಮೂಲಮ್
ಮಹರ್ಷಿಸ್ತಮುಪಾಸೀನಂ ಪ್ರಶ್ರಯಾವನತಂ ಕ್ಷಿತೌ ।
ಪ್ರತಿಪೂಜ್ಯ ಮಹಾರಾಜ ಸಮಾಭಾಷ್ಯೇದಮಬ್ರವೀತ್ ॥
ಅನುವಾದ
ಮಹಾರಾಜನೇ! ರಾಜನು ಅತ್ಯಂತ ವಿನಯಶಾಲಿಯಾಗಿದ್ದು, ತಮ್ಮ ಬಳಿಯಲ್ಲಿ ನೆಲದ ಮೇಲೆಯೇ ಕುಳಿತು ಭಕ್ತ್ಯಾದರಗಳನ್ನು ತೋರಿಸಿದ್ದನ್ನು ಗಮನಿಸಿದ ಅಂಗಿರಾ ಮಹರ್ಷಿಗಳು ಆತನನ್ನು ಆದರಿಸಿ ಕುಶಲ ಪ್ರಶ್ನೆಮಾಡುತ್ತಾ ಹೀಗೆಂದನು ॥16॥
(ಶ್ಲೋಕ-17)
ಮೂಲಮ್ (ವಾಚನಮ್)
ಅಂಗಿರಾ ಉವಾಚ
ಮೂಲಮ್
ಅಪಿ ತೇನಾಮಯಂ ಸ್ವಸ್ತಿ ಪ್ರಕೃತೀನಾಂ ತಥಾತ್ಮನಃ ।
ಯಥಾ ಪ್ರಕೃತಿಭಿರ್ಗುಪ್ತಃ ಪುಮಾನ್ರಾಜಾಪಿ ಸಪ್ತಭಿಃ ॥
ಅನುವಾದ
ಅಂಗಿರಾ ಋಷಿಯು ಹೇಳಿದನು — ರಾಜಾ ಚಿತ್ರಕೇತುವೇ! ನೀನು ನಿನ್ನ ಗುರು, ಮಂತ್ರಿ, ರಾಷ್ಟ್ರ, ದುರ್ಗ, ಸೈನ್ಯ, ಮಿತ್ರರೇ ಮುಂತಾದ ಪ್ರಕೃತಿಗಳೊಡನೆ ಸುಖವಾಗಿರುವೆಯಾ? ಜೀವನು ಮಹತ್ತತ್ತ್ವಾದಿ ಏಳು ಆವರಣಗಳಿಂದ ಸುತ್ತು ವರಿಯಲ್ಪಟ್ಟಿರುವಂತೆಯೇ ರಾಜನೂ ಕೂಡ ಈ ಏಳು ಪ್ರಕೃತಿಗಳಿಂದ ಸುತ್ತುವರಿಯಲ್ಪಡುತ್ತಾನೆ. ಅವುಗಳು ಕುಶಲವಾಗಿದ್ದರೆ ರಾಜನು ಕುಶಲನಾಗಿರುತ್ತಾನೆ. ॥17॥
(ಶ್ಲೋಕ-18)
ಮೂಲಮ್
ಆತ್ಮಾನಂ ಪ್ರಕೃತಿಷ್ವದ್ಧಾ ನಿಧಾಯ ಶ್ರೇಯ ಆಪ್ನುಯಾತ್ ।
ರಾಜ್ಞಾ ತಥಾ ಪ್ರಕೃತಯೋ ನರದೇವಾಹಿತಾಧಯಃ ॥
ಅನುವಾದ
ನರೇಂದ್ರ! ಮೇಲೆ ಹೇಳಿದ ಪ್ರಕೃತಿಗಳು ಅನುಕೂಲವಾಗಿದ್ದರೇನೇ ರಾಜನು ರಾಜ್ಯಸುಖವನ್ನು ಅನುಭವಿಸ ಬಲ್ಲನು. ಹಾಗೆಯೇ ಪ್ರಕೃತಿಗಳೂ ಕೂಡ ತಮ್ಮ ರಕ್ಷಣೆಯ ಹೊಣೆಯನ್ನು ರಾಜನ ಮೇಲೆ ಬಿಟ್ಟು ಸುಖ-ಸಮೃದ್ಧಿಗಳನ್ನು ಅನುಭವಿಸಬಲ್ಲರು. ॥18॥
(ಶ್ಲೋಕ-19)
ಮೂಲಮ್
ಅಪಿ ದಾರಾಃ ಪ್ರಜಾಮಾತ್ಯಾ ಭೃತ್ಯಾಃ ಶ್ರೇಣ್ಯೋಥ ಮಂತ್ರಿಣಃ ।
ಪೌರಾ ಜಾನಪದಾ ಭೂಪಾ ಆತ್ಮಜಾ ವಶವರ್ತಿನಃ ॥
ಅನುವಾದ
ರಾಜನೇ! ನಿನ್ನ ರಾಣಿಯರು, ಪ್ರಜೆ, ಮಂತ್ರಿಗಳು, ಸೇವಕರು, ವ್ಯಾಪಾರಿಗಳು, ಅಮಾತ್ಯರು, ನಾಗರಿಕರು, ದೇಶವಾಸಿಗಳು, ಸಾಮಂತರಾಜರು ಮತ್ತು ಮಕ್ಕಳು ನಿನ್ನ ವಶದಲ್ಲೇ ಇರುವರಲ್ಲ? ॥19॥
(ಶ್ಲೋಕ-20)
ಮೂಲಮ್
ಯಸ್ಯಾತ್ಮಾನುವಶಶ್ಚೇತ್ಸ್ಯಾತ್ಸರ್ವೇ ತದ್ವಶಗಾ ಇಮೇ ।
ಲೋಕಾಃ ಸಪಾಲಾ ಯಚ್ಛಂತಿ ಸರ್ವೇ ಬಲಿಮತಂದ್ರಿತಾಃ ॥
ಅನುವಾದ
ಯಾರ ಮನಸ್ಸು ತನ್ನ ವಶದಲ್ಲಿ ಇರುತ್ತದೋ, ಅವನಿಗೇ ಇವರೆಲ್ಲರೂ ವಶವಾಗಿರುತ್ತಾರೆ; ಇದು ನಿಜವಾದ ಮಾತಾಗಿದೆ, ಇಷ್ಟೇ ಅಲ್ಲ, ಎಲ್ಲ ಲೋಕಗಳು ಮತ್ತು ಲೋಕಪಾಲರೂ ಕೂಡ ತುಂಬಾ ಸಾವಧಾನದಿಂದ ಅವನಿಗೆ ಕಪ್ಪ-ಕಾಣಿಕೆಗಳನ್ನು ಅರ್ಪಿಸುತ್ತಾ ಅವನ ಪ್ರಸನ್ನತೆಯನ್ನು ಬಯಸುತ್ತಾರೆ. ॥20॥
(ಶ್ಲೋಕ-21)
ಮೂಲಮ್
ಆತ್ಮನಃ ಪ್ರೀಯತೇ ನಾತ್ಮಾ ಪರತಃ ಸ್ವತ ಏವ ವಾ ।
ಲಕ್ಷಯೇಲಬ್ಧಕಾಮಂ ತ್ವಾಂ ಚಿಂತಯಾ ಶಬಲಂ ಮುಖಮ್ ॥
ಅನುವಾದ
ಆದರೆ ನೀನು ಸ್ವತಃ ಸಂತುಷ್ಟನಾಗಿಲ್ಲ. ನಿನ್ನ ಯಾವುದೋ ಕಾಮನೆ ಅಪೂರ್ಣವಾಗಿದೆ ಎಂದು ನನಗೆ ಅನಿಸುತ್ತದೆ. ನಿನ್ನ ಮುಖದಲ್ಲಿ ಯಾವುದೋ ಆಂತರಿಕ ಚಿಂತೆಯ ಚಿಹ್ನೆ ಗೋಚರಿಸುತ್ತಿದೆ. ನಿನ್ನ ಈ ಅಸಂತೋಷದ ಕಾರಣ ಸ್ವತಃ ನೀನೇ ಆಗಿರುವೆಯಾ ಅಥವಾ ಬೇರೆ ಏನಾದರೂ ಕಾರಣವಿದೆಯೇ? ॥21॥
(ಶ್ಲೋಕ-22)
ಮೂಲಮ್
ಏವಂ ವಿಕಲ್ಪಿತೋ ರಾಜನ್ವಿದುಷಾ ಮುನಿನಾಪಿ ಸಃ ।
ಪ್ರಶ್ರಯಾವನತೋಭ್ಯಾಹ ಪ್ರಜಾಕಾಮಸ್ತತೋ ಮುನಿಮ್ ॥
ಅನುವಾದ
ಪರೀಕ್ಷಿದ್ರಾಜನೇ! ರಾಜನು ಮನಸ್ಸಿನಲ್ಲಿ ಯಾವುದನ್ನು ಚಿಂತಿಸುತ್ತಿದ್ದಾನೆ ಎಂಬುದನ್ನು ಅಂಗಿರಾ ಮಹರ್ಷಿಗಳು ಅರಿತಿದ್ದರೂ, ಅವರು ಅವನ ಚಿಂತೆಯ ವಿಷಯದಲ್ಲಿ ಅನೇಕ ಪ್ರಶ್ನೆಗಳನ್ನು ಮಾಡಿದ್ದರು. ಚಿತ್ರಕೇತುವಿಗೆ ಸಂತಾನದ ಕಾಮನೆಯಿತ್ತು. ಆದ್ದರಿಂದ ಮಹರ್ಷಿಗಳು ಕೇಳಿದಾಗ ಅವನು ವಿನಯದಿಂದ ತಲೆತಗ್ಗಿಸಿ ನಿವೇದಿಸಿಕೊಂಡನು.॥22॥
(ಶ್ಲೋಕ-23)
ಮೂಲಮ್ (ವಾಚನಮ್)
ಚಿತ್ರಕೇತುರುವಾಚ
ಮೂಲಮ್
ಭಗವನ್ಕಿಂ ನ ವಿದಿತಂ ತಪೋಜ್ಞಾನಸಮಾಧಿಭಿಃ ।
ಯೋಗಿನಾಂ ಧ್ವಸ್ತಪಾಪಾನಾಂ ಬಹಿರಂತಃ ಶರೀರಿಷು ॥
ಅನುವಾದ
ಸಾಮ್ರಾಟ ಚಿತ್ರಕೇತುವು ಹೇಳಿದನು — ಪೂಜ್ಯರೇ! ತಪೋ ಜ್ಞಾನಸಮಾಧಿಗಳಿಂದ ಪಾಪಗಳನ್ನು ಕಳೆದುಕೊಂಡಿರುವ ಯೋಗಿಗಳಿಗೆ ಪ್ರಾಣಿಗಳ ಹೊರಗಾಗಲೀ, ಒಳಗಾಗಲೀ ಯಾವುದೂ ತಿಳಿಯದ ವಿಷಯವಿಲ್ಲ. ॥23॥
(ಶ್ಲೋಕ-24)
ಮೂಲಮ್
ತಥಾಪಿ ಪೃಚ್ಛತೋ ಬ್ರೂಯಾಂ ಬ್ರಹ್ಮನ್ನಾತ್ಮನಿ ಚಿಂತಿತಮ್ ।
ಭವತೋ ವಿದುಷಶ್ಚಾಪಿ ಚೋದಿತಸ್ತ್ವದನುಜ್ಞಯಾ ॥
ಅನುವಾದ
ಹೀಗೆ ಎಲ್ಲವನ್ನೂ ತಿಳಿದುಕೊಂಡಿದ್ದರೂ ನೀವು ನನ್ನ ಚಿಂತೆಗೆ ಕಾರಣ ವೇನೆಂಬುದನ್ನು ನನ್ನಲ್ಲಿ ಕೇಳುತ್ತಿದ್ದೀರಿ. ಆದ್ದರಿಂದ ತಮ್ಮ ಆಜ್ಞೆ ಮತ್ತು ಪ್ರೇರಣೆಯಂತೆ ನನ್ನ ಚಿಂತೆಯನ್ನು ತಮ್ಮಲ್ಲಿ ನಿವೇದಿಸಿಕೊಳ್ಳುವೆನು. ॥24॥
(ಶ್ಲೋಕ-25)
ಮೂಲಮ್
ಲೋಕಪಾಲೈರಪಿ ಪ್ರಾರ್ಥ್ಯಾಃ ಸಾಮ್ರಾಜ್ಯೈಶ್ವರ್ಯಸಂಪದಃ ।
ನ ನಂದಯಂತ್ಯಪ್ರಜಂ ಮಾಂ ಕ್ಷುತ್ತೃಟ್ಕಾಮಮಿವಾಪರೇ ॥
ಅನುವಾದ
ಲೋಕಪಾಲರೂ ಕೂಡ ಆಸೆಪಡುತ್ತಿರುವ ಪೃಥಿವಿಯ ಸಾಮ್ರಾಜ್ಯ, ಐಶ್ವರ್ಯ ಮತ್ತು ಸಂಪತ್ತುಗಳು ನನಗೆ ದೊರೆತಿವೆ. ಆದರೆ ಸಂತಾನವಿಲ್ಲದ ಕಾರಣ ನನಗೆ ಈ ಸುಖ-ಭೋಗಗಳಿಂದಹಸಿದಿರುವ ಪ್ರಾಣಿಗಳಿಗೆ ಅನ್ನ-ನೀರಿಲ್ಲದೆ ಬೇರೆ ಭೋಗಗಳಿಂದ ತೃಪ್ತಿಯು ಉಂಟಾಗದಿರುವಂತೆಯೇ ನನಗೆ ಸ್ವಲ್ಪವಾದರೂ ಶಾಂತಿಯು ಸಿಗುತ್ತಿಲ್ಲ. ॥25॥
(ಶ್ಲೋಕ-26)
ಮೂಲಮ್
ತತಃ ಪಾಹಿ ಮಹಾಭಾಗ ಪೂರ್ವೈಃ ಸಹ ಗತಂ ತಮಃ ।
ಯಥಾ ತರೇಮ ದುಸ್ತಾರಂ ಪ್ರಜಯಾ ತದ್ವಿಧೇಹಿ ನಃ ॥
ಅನುವಾದ
ಮಹಾತ್ಮರೇ! ನಾನು ದುಃಖಿತನಾಗಿರುವುದು ಮಾತ್ರವಲ್ಲದೆ ‘ಪಿಂಡದಾನವು ಮುಂದೆ ಸಿಗುವುದಿಲ್ಲವಲ್ಲಾ’ ಎಂದು ನನ್ನ ಪಿತೃಗಳೂ ದುಃಖಪಡುತ್ತಿದ್ದಾರೆ. ಈಗ ತಾವು ನನಗೆ ಸಂತಾನಭಾಗ್ಯವನ್ನು ದಯಪಾಲಿಸಿ, ಪರಲೋಕದಲ್ಲಿ ದೊರೆಯುವ ಘೋರ ನರಕದಿಂದಲೂ ಉದ್ಧರಿಸಿರಿ ಮತ್ತು ನಾನು ಇಹ-ಪರಲೋಕಗಳಲ್ಲಿ ಎಲ್ಲ ದುಃಖಗಳಿಂದ ಬಿಡುಗಡೆಹೊಂದುವಂತಹ ವ್ಯವಸ್ಥೆಯನ್ನು ಮಾಡಿರಿ. ॥26॥
(ಶ್ಲೋಕ-27)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯರ್ಥಿತಃ ಸ ಭಗವಾನ್ಕೃಪಾಲುರ್ಬ್ರಹ್ಮಣಃ ಸುತಃ ।
ಶ್ರಪಯಿತ್ವಾ ಚರುಂ ತ್ವಾಷ್ಟ್ರಂ ತ್ವಷ್ಟಾರಮಯಜದ್ವಿಭುಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಚಿತ್ರಕೇತುರಾಜನು ಹೀಗೆ ಪ್ರಾರ್ಥಿಸಿದಾಗ ಸರ್ವ ಸಮರ್ಥರೂ, ಪರಮ ಕೃಪಾಳುಗಳೂ, ಬ್ರಹ್ಮಪುತ್ರರೂ ಆದ ಭಗವಾನ್ ಅಂಗಿರಾರವರು ತ್ವಷ್ಟಾದೇವತೆಗೆ ಯೋಗ್ಯವಾದ ಚರುವನ್ನು ನಿರ್ಮಿಸಿ ಅದರಿಂದ ಆ ದೇವತೆಯನ್ನು ಪೂಜಿಸಿದರು. ॥27॥
(ಶ್ಲೋಕ-28)
ಮೂಲಮ್
ಜ್ಯೇಷ್ಠಾ ಶ್ರೇಷ್ಠಾ ಚ ಯಾ ರಾಜ್ಞೋ ಮಹಿಷೀಣಾಂ ಚ ಭಾರತ ।
ನಾಮ್ನಾ ಕೃತದ್ಯುತಿಸ್ತಸ್ಯೈ ಯಜ್ಞೋಚ್ಛಿಷ್ಟಮದಾದ್ವಜಃ ॥
ಅನುವಾದ
ಪರೀಕ್ಷಿದ್ರಾಜಾ! ಚಿತ್ರಕೇತು ಮಹಾರಾಜನ ರಾಣಿಯರಲ್ಲಿ ಹಿರಿಯಳೂ, ಗುಣ ಸಂಪನ್ನೆಯೂ ಆದ ‘ಕೃತದ್ಯುತಿ’ ಎಂಬಾಕೆಗೆ ಅಂಗಿರಾ ಮಹರ್ಷಿಗಳು ಯಜ್ಞದ ಅವಶೇಷ ಪ್ರಸಾದವನ್ನು ಕರುಣಿಸಿದರು. ॥28॥
(ಶ್ಲೋಕ-29)
ಮೂಲಮ್
ಅಥಾಹ ನೃಪತಿಂ ರಾಜನ್ಭವಿತೈಕಸ್ತವಾತ್ಮಜಃ ।
ಹರ್ಷಶೋಕಪ್ರದಸ್ತುಭ್ಯಮಿತಿ ಬ್ರಹ್ಮಸುತೋ ಯಯೌ ॥
ಅನುವಾದ
ಚಿತ್ರಕೇತುವನ್ನು ಕುರಿತು ‘ರಾಜನೇ! ನಿನ್ನ ಪತ್ನಿಯ ಗರ್ಭದಲ್ಲಿ ಓರ್ವ ಪುತ್ರನು ಹುಟ್ಟುವನು. ಅವನು ನಿನಗೆ ಹರ್ಷವನ್ನೂ-ಶೋಕವನ್ನೂ ಎರಡನ್ನೂ ಕೊಡುವನು’ ಎಂದು ಹೇಳಿ ಅಂಗಿರಾಋಷಿಗಳು ಹೊರಟುಹೋದರು. ॥29॥
(ಶ್ಲೋಕ-30)
ಮೂಲಮ್
ಸಾಪಿ ತತ್ಪ್ರಾಶನಾದೇವ ಚಿತ್ರಕೇತೋರಧಾರಯತ್ ।
ಗರ್ಭಂ ಕೃತದ್ಯುತಿರ್ದೇವೀ ಕೃತ್ತಿಕಾಗ್ನೇರಿವಾತ್ಮಜಮ್ ॥
ಅನುವಾದ
ಅದರಂತೆಯೇ ಯಜ್ಞಪ್ರಸಾದವನ್ನು ಸೇವಿಸಿದ ಕೃತದ್ಯುತಿಯು ಕೃತ್ತಿಕೆಯು ತನ್ನ ಗರ್ಭದಲ್ಲಿ ಅಗ್ನಿಕುಮಾರ ನನ್ನು ಧರಿಸಿದಂತೆಮಹಾರಾಜಾ ಚಿತ್ರಕೇತುವಿನಿಂದ ಗರ್ಭವನ್ನು ಧರಿಸಿದಳು. ॥30॥
(ಶ್ಲೋಕ-31)
ಮೂಲಮ್
ತಸ್ಯಾ ಅನುದಿನಂ ಗರ್ಭಃ ಶುಕ್ಲಪಕ್ಷ ಇವೋಡುಪಃ ।
ವವೃಧೇ ಶೂರಸೇನೇಶತೇಜಸಾ ಶನಕೈರ್ನೃಪ ॥
ಅನುವಾದ
ರಾಜನೇ! ಶೂರಸೇನ ದೇಶದ ರಾಜಾ ಚಿತ್ರಕೇತುವಿನ ನೋಟದಿಂದ ಕೃತದ್ಯುತಿಯ ಗರ್ಭವು ಶುಕ್ಲ ಪಕ್ಷದ ಚಂದ್ರನಂತೆ ದಿನೇ-ದಿನೇ ಕ್ರಮವಾಗಿ ವೃದ್ಧಿಹೊಂದತೊಡಗಿತು. ॥31॥
(ಶ್ಲೋಕ-32)
ಮೂಲಮ್
ಅಥ ಕಾಲ ಉಪಾವೃತ್ತೇ ಕುಮಾರಃ ಸಮಾಜಾಯತ ।
ಜನಯನ್ ಶೂರಸೇನಾನಾಂ ಶ್ವಣ್ವತಾಂ ಪರಮಾಂ ಮುದಮ್ ॥
ಅನುವಾದ
ಅನಂತರ ಸಕಾಲದಲ್ಲಿ ಆಕೆಯ ಗರ್ಭದಿಂದ ಒಬ್ಬ ಪರಮಸುಂದರ ಪುತ್ರನು ಜನಿಸಿದನು. ಅವನು ಹುಟ್ಟಿದ ಸಮಾಚಾರ ತಿಳಿದ ಶೂರಸೇನ ದೇಶದ ಪ್ರಜಾಜನರಿಗೆ ಬಹಳ ಆನಂದವಾಯಿತು. ॥32॥
(ಶ್ಲೋಕ-33)
ಮೂಲಮ್
ಹೃಷ್ಟೋ ರಾಜಾ ಕುಮಾರಸ್ಯ ಸ್ನಾತಃ ಶುಚಿರಲಂಕೃತಃ ।
ವಾಚಯಿತ್ವಾಶಿಷೋ ವಿಪ್ರೈಃ ಕಾರಯಾಮಾಸ ಜಾತಕಮ್ ॥
ಅನುವಾದ
ಚಕ್ರವರ್ತಿ ಚಿತ್ರಕೇತುವಿನ ಆನಂದಕ್ಕೆ ಪಾರವೇ ಇರಲಿಲ್ಲ. ಅವನು ಸ್ನಾನಮಾಡಿ ಪವಿತ್ರನಾಗಿ, ವಸ್ತ್ರಾಭೂಷಣಗಳಿಂದ ಅಲಂಕೃತನಾಗಿ ಬ್ರಾಹ್ಮಣರಿಂದ ಸ್ವಸ್ತಿವಾಚನವನ್ನು ಮಾಡಿಸಿ, ಆಶೀರ್ವಾದವನ್ನು ಪಡೆದು ಮಗುವಿಗೆ ಜಾತಕರ್ಮ ಸಂಸ್ಕಾರವನ್ನು ಮಾಡಿದನು. ॥33॥
(ಶ್ಲೋಕ-34)
ಮೂಲಮ್
ತೇಭ್ಯೋ ಹಿರಣ್ಯಂ ರಜತಂ ವಾಸಾಂಸ್ಯಾಭರಣಾನಿ ಚ ।
ಗ್ರಾಮಾನ್ಹಯಾನ್ಗಜಾನ್ಪ್ರಾದಾದ್ಧೇನೂನಾಮರ್ಬುದಾನಿ ಷಟ್ ॥
ಅನುವಾದ
ಅವನು ಆ ಬ್ರಾಹ್ಮಣರಿಗೆ ಚಿನ್ನ, ಬೆಳ್ಳಿ, ವಸ್ತ್ರ, ಒಡವೆ, ಗ್ರಾಮಗಳು, ಕುದುರೆಗಳು, ಆನೆಗಳು ಮತ್ತು ಆರು ಅರ್ಬುದಗಳಷ್ಟು ಗೋವುಗಳನ್ನು ದಾನಮಾಡಿದನು. ॥34॥
(ಶ್ಲೋಕ-35)
ಮೂಲಮ್
ವವರ್ಷ ಕಾಮಮನ್ಯೇಷಾಂ ಪರ್ಜನ್ಯ ಇವ ದೇಹಿನಾಮ್ ।
ಧನ್ಯಂ ಯಶಸ್ಯಮಾಯುಷ್ಯಂ ಕುಮಾರಸ್ಯ ಮಹಾಮನಾಃ ॥
ಅನುವಾದ
ಉದಾರ ಶಿರೋಮಣಿಯಾದ ಚಿತ್ರಕೇತು ಸಾರ್ವಭೌಮನು ಪುತ್ರನಿಗೆ ಧನ, ಕೀರ್ತಿ, ಆಯುಸ್ಸುಗಳು ಅಭಿವೃದ್ಧಿಯಾಗಲೆಂದು ಮೋಡವು ಎಲ್ಲ ಜೀವಗಳ ಮನೋರಥವನ್ನು ಈಡೇರಿಸುವಂತೆ ಇತರರಿಗೂ ಅವರು ಬೇಡಿದ ವಸ್ತುಗಳೆಲ್ಲವನ್ನು ಕೊಡುಗೈಯಿಂದ ನೀಡಿದನು. ॥35॥
(ಶ್ಲೋಕ-36)
ಮೂಲಮ್
ಕೃಚ್ಛ್ರಲಬ್ಧೇಥ ರಾಜರ್ಷೇಸ್ತನಯೇನುದಿನಂ ಪಿತುಃ ।
ಯಥಾ ನಿಃಸ್ವಸ್ಯ ಕೃಚ್ಛ್ರಾಪ್ತೇ ಧನೇ ಸ್ನೇಹೋನ್ವವರ್ಧತ ॥
ಅನುವಾದ
ಪರೀಕ್ಷಿತನೇ! ಕಾಸಿನ ಮುಖವನ್ನೇ ಕಾಣದ ಬಡವನಿಗೆ ಬಹಳ ಕಷ್ಟದಿಂದ ಸ್ವಲ್ಪ ಹಣವು ದೊರಕಿದರೆ ಅವನಿಗೆ ಅದರಲ್ಲಿ ಆಸೆ-ಆಸಕ್ತಿಗಳು ಉಂಟಾಗುವಂತೆಯೇ ಬಹಳ ಕಷ್ಟದಿಂದ ಜನಿಸಿದ ಆ ಪುತ್ರನಲ್ಲಿ ರಾಜರ್ಷಿಚಿತ್ರಕೇತುವಿನ ಸ್ನೇಹ ಸಂಬಂಧವು ದಿನೇ-ದಿನೇ ಬಿಗಿಯಾಗತೊಡಗಿತು. ॥36॥
(ಶ್ಲೋಕ-37)
ಮೂಲಮ್
ಮಾತುಸ್ತ್ವತಿತರಾಂ ಪುತ್ರೇ ಸ್ನೇಹೋ ಮೋಹಸಮುದ್ಭವಃ ।
ಕೃತದ್ಯುತೇಃ ಸಪತ್ನೀನಾಂ ಪ್ರಜಾಕಾಮಜ್ವರೋಭವತ್ ॥
ಅನುವಾದ
ತಾಯಿಯಾದ ಕೃತದ್ಯುತಿಗೂ ಮಗುವಿನ ವಿಷಯದಲ್ಲಿ ಮೋಹದಿಂದ ಸ್ನೇಹ-ಮಮತೆಗಳು ಹೆಚ್ಚಿದವು. ಆದರೆ ಅವಳ ಸವತಿಯರಾಗಿದ್ದ ರಾಣಿಯರ ಮನಸ್ಸಿನಲ್ಲಿ ಪುತ್ರ ಕಾಮನೆಯಿಂದ ಮತ್ತಷ್ಟು ಹೊಟ್ಟೆಯುರಿ ಉಂಟಾಯಿತು. ॥37॥
(ಶ್ಲೋಕ-38)
ಮೂಲಮ್
ಚಿತ್ರಕೇತೋರತಿಪ್ರೀತಿರ್ಯಥಾ ದಾರೇ ಪ್ರಜಾಪತಿ ।
ನ ತಥಾನ್ಯೇಷು ಸಞ್ಜಜ್ಞೇ ಬಾಲಂ ಲಾಲಯತೋನ್ವಹಮ್ ॥
ಅನುವಾದ
ಪ್ರತಿದಿನವು ಮಗುವನ್ನು ಮುದ್ದಿಸಿ, ಪ್ರೀತಿಸುತ್ತಿದ್ದ ಚಿತ್ರಕೇತುವಿಗೆ ಮಗುವಿನ ತಾಯಿಯಾದ ಕೃತದ್ಯುತಿಯಲ್ಲಿ ಇದ್ದಷ್ಟು ಪ್ರೇಮವು ಇತರ ರಾಣಿಯರಲ್ಲಿ ಇಲ್ಲವಾಯಿತು. ॥38॥
(ಶ್ಲೋಕ-39)
ಮೂಲಮ್
ತಾಃ ಪರ್ಯತಪ್ಯನ್ನಾತ್ಮಾನಂ ಗರ್ಹಯಂತ್ಯೋಭ್ಯಸೂಯಯಾ ।
ಆನಪತ್ಯೇನ ದುಃಖೇನ ರಾಜ್ಞಶ್ಚಾನಾದರೇಣ ಚ ॥
ಅನುವಾದ
ಹೀಗೆ ಆ ರಾಣಿಯರಿಗೆ ಸಂತಾನವಿಲ್ಲದ ದುಃಖ ವೊಂದು, ಜೊತೆಗೆ ಚಿತ್ರಕೇತುವು ತಮ್ಮನ್ನು ಉಪೇಕ್ಷಿಸುತ್ತಿದ್ದಾನೆ ಎಂಬ ವಿಷಾದ ಮತ್ತೊಂದು. ಎರಡೂ ಸೇರಿ ಅವರು ಮಾತ್ಸರ್ಯದಿಂದ ತಮ್ಮನ್ನೇ ಧಿಕ್ಕರಿಸಿಕೊಳ್ಳುತ್ತಾ ಮನಸ್ಸಿನಲ್ಲಿಯೇ ಕುದಿಯ ತೊಡಗಿದರು. ॥39॥
(ಶ್ಲೋಕ-40)
ಮೂಲಮ್
ಧಿಗಪ್ರಜಾಂ ಸಿಯಂ ಪಾಪಾಂ ಪತ್ಯುಶ್ಚಾಗೃಹಸಮ್ಮತಾಮ್ ।
ಸುಪ್ರಜಾಭಿಃ ಸಪತ್ನೀಭಿರ್ದಾಸೀಮಿವ ತಿರಸ್ಕೃತಾಮ್ ॥
ಅನುವಾದ
ಅವರು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು ‘ಅಕಟಾ! ತಂಗೀ! ಪುತ್ರಹೀನೆಯಾದ ಸ್ತ್ರೀಯು ತುಂಬಾ ಭಾಗ್ಯಹೀನಳಾಗಿರುವಳು. ಪುತ್ರವತಿಯಾದ ಸವತಿಯರು ಅವರನ್ನು ತಮ್ಮ ದಾಸಿಯರಂತೆ ಕಂಡು ತಿರಸ್ಕರಿಸುವರು. ಇತರ ವಿಷಯ ಹಾಗಿರಲಿ. ಆಕೆಯ ಪತಿಯೇ ಆಕೆಯನ್ನು ಪತ್ನೀ ಎಂದು ಸಂಭಾವಿಸುವುದಿಲ್ಲ. ನಿಜವಾಗಿಯೂ ಪುತ್ರಹೀನೆಯಾದ ಸ್ತ್ರೀಯರ ಸ್ಥಿತಿಯು ಅತ್ಯಂತ ಶೋಚನೀಯವಾದುದು.॥40॥
(ಶ್ಲೋಕ-41)
ಮೂಲಮ್
ದಾಸೀನಾಂ ಕೋ ನು ಸಂತಾಪಃ ಸ್ವಾಮಿನಃ ಪರಿಚರ್ಯಯಾ ।
ಅಭೀಕ್ಷ್ಣಂ ಲಬ್ಧಮಾನಾನಾಂ ದಾಸ್ಯಾ ದಾಸೀವ ದುರ್ಭಗಾಃ ॥
ಅನುವಾದ
ದಾಸಿಯರ ಸ್ಥಿತಿಗಿಂತಲೂ ಹೀನಾಯವಾದ ಸ್ಥಿತಿ ಅವರದು. ಏಕೆಂದರೆ, ದಾಸಿಯರು ತಮ್ಮ ಪ್ರಭುವಿನ ಸೇವೆ ಮಾಡಿ ಅವನಿಂದ ನಿರಂತರವಾಗಿ ಸಮ್ಮಾನವನ್ನೇ ಪಡೆಯುತ್ತಿರುವರು. ಆದರೆ ದುರದೃಷ್ಟಶಾಲಿಗಳಾದ ನಾವು ಅವರಿಗಿಂತಲೂ ಕಡೆಯವರಾಗಿ ದಾಸಿಯರ ದಾಸಿಯರಂತೆ ಪುನಃ ಪುನಃ ತಿರಸ್ಕಾರಕ್ಕೆ ಪಾತ್ರರಾಗುತ್ತೇವೆ.॥41॥
(ಶ್ಲೋಕ-42)
ಮೂಲಮ್
ಏವಂ ಸಂದಹ್ಯಮಾನಾನಾಂ ಸಪತ್ನ್ಯಾಃ ಪುತ್ರಸಂಪದಾ ।
ರಾಜ್ಞೋಸಮ್ಮತವೃತ್ತೀನಾಂ ವಿದ್ವೇಷೋ ಬಲವಾನಭೂತ್ ॥
ಅನುವಾದ
ಪರೀಕ್ಷಿತನೇ! ಆ ರಾಣಿಯರು ತಮ್ಮ ಸವತಿಯ ಪುತ್ರ ಸಂಪತ್ತಿನಿಂದ ಹೊಟ್ಟೆ ಯುರಿಪಟ್ಟುಕೊಳ್ಳುತ್ತಾ ಇರಲು, ರಾಜನೂ ಅವರ ವಿಷಯದಲ್ಲಿ ಉದಾಸೀನನಾದನು. ಅದರ ಫಲವಾಗಿ ಅವರೆಲ್ಲರಿಗೂ ಕೃತದ್ಯುತಿಯ ಕುರಿತು ತಡೆಯಲಾರದ ದ್ವೇಷವುಂಟಾಯಿತು. ॥42॥
(ಶ್ಲೋಕ-43)
ಮೂಲಮ್
ವಿದ್ವೇಷನಷ್ಟಮತಯಃ ಸಿಯೋ ದಾರುಣಚೇತಸಃ ।
ಗರಂ ದದುಃ ಕುಮಾರಾಯ ದುರ್ಮರ್ಷಾ ನೃಪತಿಂ ಪ್ರತಿ ॥
ಅನುವಾದ
ಆ ದ್ವೇಷದಿಂದ ಅವರ ಬುದ್ಧಿ ಕೆಟ್ಟುಹೋಯಿತು. ಕ್ರೌರ್ಯವು ಅವರ ಚಿತ್ತವನ್ನು ತುಂಬಿಕೊಂಡಿತು. ಪತಿಯಾದ ಚಿತ್ರಕೇತುವಿನ ಪುತ್ರಸ್ನೇಹವು ಅವರಿಂದ ಸಹಿಸಲಾಗಲಿಲ್ಲ. ಇದರಿಂದ ಅವರು ಅಸಹನೆಯಿಂದ ಆ ಎಳೆ ವಯಸ್ಸಿನ ರಾಜಕುಮಾರನಿಗೆ ವಿಷವನ್ನು ಉಣಿಸಿದರು. ॥43॥
(ಶ್ಲೋಕ-44)
ಮೂಲಮ್
ಕೃತದ್ಯುತಿರಜಾನಂತೀ ಸಪತ್ನೀನಾಮಘಂ ಮಹತ್ ।
ಸುಪ್ತ ಏವೇತಿ ಸಂಚಿಂತ್ಯ ನಿರೀಕ್ಷ್ಯ ವ್ಯಚರದ್ಗೃಹೇ ॥
ಅನುವಾದ
ಮಹಾರಾಣಿ ಕೃತದ್ಯುತಿಗೆ ತನ್ನ ಸವತಿಯರ ಪಾಪದ ಪಿತೂರಿಯು ಸ್ವಲ್ಪವೂ ತಿಳಿಯಲಿಲ್ಲ. ಆಕೆಯು ದೂರದಿಂದ ನೋಡಿ ಮಗುವು ನಿದ್ದೆ ಮಾಡುತ್ತಿದೆ ಎಂದೇ ಭಾವಿಸಿ, ಅರಮನೆಯಲ್ಲಿ ನಿಶ್ಚಿಂತವಾಗಿ ಅಡ್ಡಾಡುತ್ತಿದ್ದಳು. ॥44॥
(ಶ್ಲೋಕ-45)
ಮೂಲಮ್
ಶಯಾನಂ ಸುಚಿರಂ ಬಾಲಮುಪಧಾರ್ಯ ಮನೀಷಿಣೀ ।
ಪುತ್ರಮಾನಯ ಮೇ ಭದ್ರೇ ಇತಿ ಧಾತ್ರೀಮಚೋದಯತ್ ॥
ಅನುವಾದ
ಬುದ್ಧಿಮತಿ ರಾಣಿಯು ಮಗುವು ಬಹಳ ಹೊತ್ತಾದರೂ ಇನ್ನೂ ಏಳದೇ ಇರುವುದನ್ನು ಗಮನಿಸಿ ದಾಸಿಯನ್ನು ಕರೆದು ‘ಕಲ್ಯಾಣೀ! ನನ್ನ ಕಂದನನ್ನು ಕರೆದುಕೊಂಡು ಬಾ’ ಎಂದು ಆಜ್ಞೆ ಮಾಡಿದಳು. ॥45॥
ಮೂಲಮ್
(ಶ್ಲೋಕ-46)
ಸಾ ಶಯಾನಮುಪವ್ರಜ್ಯ ದೃಷ್ಟ್ವಾ ಚೋತ್ತಾರಲೋಚನಮ್ ।
ಪ್ರಾಣೇಂದ್ರಿಯಾತ್ಮಭಿಸ್ತ್ಯಕ್ತಂ ಹತಾಸ್ಮೀತ್ಯಪತದ್ಭುವಿ ॥
ಅನುವಾದ
ದಾದಿಯು ಮಲಗಿದ್ದ ಮಗುವಿನ ಬಳಿಗೆ ಹೋಗಿ ನೋಡಿದಾಗ ಆಕೆಗೆ ಗಾಬರಿಯುಂಟಾಯಿತು. ‘ಮಗುವಿನ ಕಣ್ಣುಗುಡ್ಡೆಗಳು ತಿರುಗು ಮುರುಗಾಗಿವೆ. ಉಸಿರು ನಿಂತುಹೋಗಿದೆ. ಪ್ರಾಣ, ಇಂದ್ರಿಯಗಳು, ಜೀವಾತ್ಮ ಎಲ್ಲವೂ ಆ ಸುಕುಮಾರನ ದೇಹವನ್ನು ಬಿಟ್ಟು ಹೊರಟುಹೋಗಿವೆ. ಇದನ್ನು ನೋಡಿ ದೊಡನೆಯೇ ‘ಅಯ್ಯೋ! ಸತ್ತೆನು! ಕೆಟ್ಟೆನು!’ ಎಂದು ಕಿರುಚುತ್ತಾ ನೆಲಕ್ಕೆ ಕುಸಿದಳು. ॥46॥
(ಶ್ಲೋಕ-47)
ಮೂಲಮ್
ತಸ್ಯಾಸ್ತದಾಕರ್ಣ್ಯ ಭೃಶಾತುರಂ ಸ್ವರಂ
ಘ್ನಂತ್ಯಾಃ ಕರಾಭ್ಯಾಮುರ ಉಚ್ಚಕೈರಪಿ ।
ಪ್ರವಿಶ್ಯ ರಾಜ್ಞೀ ತ್ವರಯಾತ್ಮಜಾಂತಿಕಂ
ದದರ್ಶ ಬಾಲಂ ಸಹಸಾ ಮೃತಂ ಸುತಮ್ ॥
ಅನುವಾದ
ಆ ದಾಸಿಯು ತನ್ನ ಎರಡು ಕೈಗಳಿಂದಲೂ ಎದೆಯನ್ನು ಬಡಿದುಕೊಳ್ಳುತ್ತಾ ಗಟ್ಟಿಯಾಗಿ ಗೋಳಾಡ ತೊಡಗಿದಳು. ಅವಳ ಅಳುವನ್ನು ಕೇಳಿ ಮಹಾರಾಣಿ ಕೃತದ್ಯುತಿಯು ಲಗುಬಗೆಯಿಂದ ಮಗುವಿನ ಬಳಿಗೆ ಓಡಿದಳು. ತನ್ನ ಕಂದನು ಅಕಸ್ಮಾತ್ತಾಗಿ ಸತ್ತುಹೋಗಿರುವುದನ್ನು ನೋಡಿದಳು. ॥47॥
(ಶ್ಲೋಕ-48)
ಮೂಲಮ್
ಪಪಾತ ಭೂವೌ ಪರಿವೃದ್ಧಯಾ ಶುಚಾ ।
ಮುಮೋಹ ವಿಭ್ರಷ್ಟಶಿರೋರುಹಾಂಬರಾ ॥
ಅನುವಾದ
ಆಗ ಅವಳು ಅತ್ಯಂತ ಶೋಕದಿಂದ ಮೂರ್ಛಿತಳಾಗಿ ನೆಲಕ್ಕೆ ಕುಸಿದುಬಿದ್ದಳು. ಅವಳ ತಲೆಯ ಕೂದಲು ಬಿಚ್ಚಿಹೋಗಿ, ಉಟ್ಟಸೀರೆಯು ಅಸ್ತವ್ಯಸ್ತವಾಗಿದ್ದುದನ್ನು ಗಮನಿಸದೆ ಪ್ರಜ್ಞೆತಪ್ಪಿಬಿದ್ದಳು. ॥48॥
(ಶ್ಲೋಕ-49)
ಮೂಲಮ್
ತತೋ ನೃಪಾಂತಃಪುರವರ್ತಿನೋ ಜನಾ
ನರಾಶ್ಚ ನಾರ್ಯಶ್ಚ ನಿಶಮ್ಯ ರೋದನಮ್ ।
ಆಗತ್ಯ ತುಲ್ಯವ್ಯಸನಾಃ ಸುದುಃಖಿತಾ-
ಸ್ತಾಶ್ಚ ವ್ಯಲೀಕಂ ರುರುದುಃ ಕೃತಾಗಸಃ ॥
ಅನುವಾದ
ಅನಂತರ ಮಹಾರಾಣಿಯ ಕರುಣಕ್ರಂದನವನ್ನು ಕೇಳಿ ಅಂತಃಪುರದ ಎಲ್ಲ ಸ್ತ್ರೀಯರೂ, ಪುರುಷರೂ ಅಲ್ಲಿಗೆ ಓಡಿ ಬಂದರು. ಸಹಾನುಭೂತಿಯಿಂದ ಅವರೂ ದುಃಖಿತರಾಗಿ ಅಳತೊಡಗಿದರು. ಮಗುವನ್ನು ಕೊಂದ ಆ ರಾಣಿಯರೂ ಅಲ್ಲಿಗೆ ಬಂದು ಕಪಟದ ಅಳುವಿನ ನಟನೆಮಾಡಿದರು. ॥49॥
(ಶ್ಲೋಕ-50)
ಮೂಲಮ್
ಶ್ರುತ್ವಾ ಮೃತಂ ಪುತ್ರಮಲಕ್ಷಿತಾಂತಕಂ
ವಿನಷ್ಟ ದೃಷ್ಟಿಃ ಪ್ರಪತನ್ ಸ್ಖಲನ್ ಪಥಿ ।
ಸ್ನೇಹಾನುಬಂಧೈಧಿತಯಾ ಶುಚಾ ಭೃಶಂ
ವಿಮೂರ್ಚ್ಛಿತೋನುಪ್ರಕೃತಿರ್ದ್ವಿಜೈರ್ವೃತಃ ॥
(ಶ್ಲೋಕ-51)
ಮೂಲಮ್
ಪಪಾತ ಬಾಲಸ್ಯ ಸ ಪಾದಮೂಲೇ
ಮೃತಸ್ಯ ವಿಸ್ರಸ್ತಶಿರೋರುಹಾಂಬರಃ ।
ದೀರ್ಘಂ ಶ್ವಸನ್ಬಾಷ್ಪಕಲೋಪರೋಧತೋ
ನಿರುದ್ಧಕಂಠೋ ನ ಶಶಾಕ ಭಾಷಿತುಮ್ ॥
ಅನುವಾದ
ತನ್ನ ಪುತ್ರನು ಅಕಾಲಮೃತ್ಯುವಿಗೆ ತುತ್ತಾಗಿದ್ದಾನೆ ಎಂದು ತಿಳಿದು ರಾಜಾ ಚಿತ್ರಕೇತುವಿಗೆ ಅತ್ಯಂತ ಸ್ನೇಹದಿಂದಾಗಿ ಶೋಕದ ಆವೇಗದಿಂದ ಕಣ್ಣುಕತ್ತಲೆ ಬಂತು. ರಾಜನು ಶೋಕಭಾರದಿಂದ ಎಡವುತ್ತಾ, ಮುಗ್ಗರಿಸುತ್ತಾ ಮೆಲ್ಲ-ಮೆಲ್ಲನೆ ಮಂತ್ರಿ-ಬ್ರಾಹ್ಮಣಾದಿ ಪರಿವಾರ ಸಹಿತನಾಗಿ ಸತ್ತ ಮಗುವಿದ್ದ ಸ್ಥಳಕ್ಕೆ ಬಂದು ದುಃಖವನ್ನು ತಡೆಯಲಾರದೆ ಪ್ರಜ್ಞೆತಪ್ಪಿ ನೆಲಕ್ಕೆ ಉರುಳಿದನು. ಅವನ ತಲೆಕೂದಲು ಕೆದರಿಕೊಂಡು, ವಸ್ತ್ರಗಳು ಅಸ್ತವ್ಯಸ್ತವಾದುವು. ಬಿಸಿ-ಬಿಸಿ ನಿಟ್ಟುಸಿರಿನಿಂದ ಮುಖವು ಒಣಗಿತು. ಉಮ್ಮಳಿಸುವ ಕಣ್ಣೀರಿನ ಧಾರೆಯಿಂದ ಗಂಟಲು ಕಟ್ಟಿಹೋಯಿತು. ಅವನ ಬಾಯಿಂದ ಮಾತೇ ಹೊರಡದಾಯಿತು.॥50-51॥
(ಶ್ಲೋಕ-52)
ಮೂಲಮ್
ಪತಿಂ ನಿರೀಕ್ಷ್ಯೋರುಶುಚಾರ್ಪಿತಂ ತದಾ
ಮೃತಂ ಚ ಬಾಲಂ ಸುತಮೇಕಸಂತತಿಮ್ ।
ಜನಸ್ಯ ರಾಜ್ಞೀ ಪ್ರಕೃತೇಶ್ಚ ಹೃದ್ರುಜಂ
ಸತೀ ದಧಾನಾ ವಿಲಲಾಪ ಚಿತ್ರಧಾ ॥
ಅನುವಾದ
ಸಾಧ್ವಿಮಣಿಯಾದ ಕೃತದ್ಯುತಿಗೆ ತನ್ನ ಪತಿಯು ಹಾಗೆ ದುಃಖದಲ್ಲಿ ಮುಳುಗಿದ್ದುದನ್ನೂ ಇದ್ದ ಒಂದೇ ಮಗುವು ಸಾವಿಗೀಡಾದುದನ್ನೂ ಕಂಡು ಅತಿದೈನ್ಯದಿಂದ ಬಗೆ-ಬಗೆಯಾಗಿ ಗೋಳಾಡತೊಡಗಿದಳು. ಅದನ್ನು ಕಂಡು ಅಲ್ಲಿದ್ದ ಮಂತ್ರಿಯೇ ಮುಂತಾದವರೆಲ್ಲರೂ ಶೋಕಗ್ರಸ್ತರಾದರು.॥52॥
(ಶ್ಲೋಕ-53)
ಮೂಲಮ್
ಸ್ತನದ್ವಯಂ ಕುಂಕುಮಗಂಧಮಂಡಿತಂ
ನಿಷಿಂಚತೀ ಸಾಂಜನಬಾಷ್ಪಬಿಂದುಭಿಃ ।
ವಿಕೀರ್ಯ ಕೇಶಾನ್ವಿಗಲತ್ಸ್ರಜಃ ಸುತಂ
ಶುಶೋಚ ಚಿತ್ರಂ ಕುರರೀವ ಸುಸ್ವರಮ್ ॥
ಅನುವಾದ
ಮಹಾರಾಣಿಯ ಕಣ್ಣುಗಳಿಂದ ಕಣ್ಣೀರಿನ ಕೋಡಿಯೇ ಹರಿದು ಕಣ್ಣುಗಳಿಗೆ ಹಾಕಿ ಕೊಂಡಿದ್ದ ಕಾಡಿಗೆಯು ಕರಗಿ ಕುಂಕುಮ ಕೇಸರಿ ಗಂಧಗಳು ಪೂಸಿದ್ದ ವಕ್ಷಃಸ್ಥಳವೂ ನೆನೆಯತೊಡಗಿತು. ಆಕೆಯ ತಲೆಗೂದಲು ಚೆದುರಿಹೋಗಿ ಮುಡಿದ ಹೂವುಗಳು ಕೆಳಕ್ಕೆ ಬೀಳುತ್ತಿದ್ದವು. ಹೀಗೆ ಆಕೆಯು ಸಹಿಸಲಾರದ ಪುತ್ರಶೋಕದಿಂದ ಕುರರೀ ಹಕ್ಕಿಯಂತೆ ಅತ್ಯಂತ ಕರುಣಾಜನಕವಾಗಿ ಗಟ್ಟಿಯಾದ ದನಿಯಲ್ಲಿ ವಿವಿಧ ಪ್ರಕಾರದಿಂದ ವಿಲಪಿಸುತ್ತಿದ್ದಳು. ॥53॥
(ಶ್ಲೋಕ-54)
ಮೂಲಮ್
ಅಹೋ ವಿಧಾತಸತ್ತ್ವಮತೀವ ಬಾಲಿಶೋ
ಯಸ್ತ್ವಾತ್ಮಸೃಷ್ಟ್ಯಪ್ರತಿರೂಪಮೀಹಸೇ ।
ಪರೇನುಜೀವತ್ಯಪರಸ್ಯ ಯಾ ಮೃತಿ-
ರ್ವಿಪರ್ಯಯಶ್ಚೇತ್ತ್ವಮಸಿ ಧ್ರುವಃ ಪರಃ ॥
ಅನುವಾದ
ಅವಳ ಗೋಳಾಟವು ವರ್ಣನಾತೀತವು, ‘ಅಯ್ಯೋ! ವಿಧಿಯೇ! ನಿಜವಾಗಿಯೂ ನೀನು ಮೂರ್ಖನೇ ಸರಿ! ತನ್ನ ಸೃಷ್ಟಿಗೆ ಪ್ರತಿಕೂಲವಾಗಿ ಕೆಲಸವನ್ನು ಮಾಡುತ್ತಿರುವೆಯಲ್ಲ! ಮುದುಕರು ಬದುಕಿರುವಾಗಲೇ ಬಾಲಕರು ಸಾಯುವುದು ಎಂತಹ ಆಶ್ಚರ್ಯದ ವಿಷಯ! ನಿಜವಾಗಿಯೂ ನಿನ್ನ ಸ್ವಭಾವದಲ್ಲಿ ಇಂತಹ ವಿಪರೀತತೆ ಇದ್ದರೆ ನೀನು ಜೀವಿಗಳ ಶತ್ರುವೇ ಆಗಿರುವೆ! ॥54॥
(ಶ್ಲೋಕ-55)
ಮೂಲಮ್
ನ ಹಿ ಕ್ರಮಶ್ಚೇದಿಹ ಮೃತ್ಯುಜನ್ಮನೋಃ
ಶರೀರಿಣಾಮಸ್ತು ತದಾತ್ಮ ಕರ್ಮಭಿಃ ।
ಯಃ ಸ್ನೇಹಪಾಶೋ ನಿಜಸರ್ಗವೃದ್ಧಯೇ
ಸ್ವಯಂ ಕೃತಸ್ತೇ ತಮಿಮಂ ವಿವೃಶ್ಚಸಿ ॥
ಅನುವಾದ
ಪ್ರಪಂಚದಲ್ಲಿ ಪ್ರಾಣಿಗಳ ಜೀವನ-ಮರಣದ ಯಾವುದೇ ಕ್ರಮವೇ ಇಲ್ಲದಿದ್ದರೆ, ಅವರು ಪ್ರಾರಬ್ಧಕ್ಕನುಸಾರ ಹುಟ್ಟುತ್ತಾ-ಸಾಯುತ್ತಾ ಇರುವರು. ಮತ್ತೆ ನಿನ್ನ ಆವಶ್ಯಕತೆಯಾದರೂ ಏನಿದೆ? ಆದರೆ ನೀನು ಹೀಗೆ ಮಕ್ಕಳನ್ನು ಸಾವಿಗೀಡುಮಾಡಿ ನಿನ್ನ ಸಂಕಲ್ಪವೃಕ್ಷವನ್ನು ನೀನೇ ಕಡಿದುಹಾಕುವೆಯಲ್ಲಾ!’ ॥55॥
(ಶ್ಲೋಕ-56)
ಮೂಲಮ್
ತ್ವಂ ತಾತ ನಾರ್ಹಸಿ ಚ ಮಾಂ ಕೃಪಣಾಮನಾಥಾಂ
ತ್ಯಕ್ತುಂ ವಿಚಕ್ಷ್ವ ಪಿತರಂ ತವ ಶೋಕತಪ್ತಮ್ ।
ಅಂಜಸ್ತರೇಮ ಭವತಾಪ್ರಜದುಸ್ತರಂ ಯದ್
ಧ್ವಾಂತಂ ನ ಯಾಹ್ಯಕರುಣೇನ ಯಮೇನ ದೂರಮ್ ॥
ಅನುವಾದ
ಮತ್ತೆ ಅವಳು ತನ್ನ ಮಗುವಿನ ಕಡೆಗೆ ನೋಡುತ್ತಾ ಹೇಳತೊಡಗಿದಳು ಅಪ್ಪಾ ಮಗು! ನೀನಿಲ್ಲದೆ ನಾನು ಅನಾಥಳೂ, ದೀನಳೂ ಆಗಿರುವೆನು. ನನ್ನನ್ನು ಬಿಟ್ಟು ಹೀಗೆ ಹೊರಟುಹೋಗುವುದು ನಿನಗೆ ಉಚಿತವೆ? ಸ್ವಲ್ಪ ಕಣ್ಣುತೆರೆದು ನೋಡಬಾರದೆ! ನಿನ್ನ ತಂದೆ ಯವರು ನಿನ್ನ ವಿಯೋಗದಲ್ಲಿ ಎಷ್ಟು ಶೋಕಪಡುತ್ತಿದ್ದಾರೆ. ಸಂತಾನಹೀನರಾದ ಪುರುಷರು ಯಾವ ಘೋರ ನರಕವನ್ನು ಕಷ್ಟದಿಂದ ದಾಟಬೇಕಾಗುತ್ತದೋ, ಆ ನರಕವನ್ನು ನಿನ್ನ ಸಹಾಯದಿಂದ ನಾವು ಆಯಾಸವಿಲ್ಲದೆಯೇ ದಾಟಬೇಕಾಗಿದೆ. ಕಂದಾ! ನೀನು ಈ ಯಮರಾಜನ ಜೊತೆಯಲ್ಲಿ ದೂರ ಹೋಗಬೇಡ. ಅವನು ದಯೆ-ದಾಕ್ಷಿಣ್ಯವಿಲ್ಲದವನು. ॥56॥
(ಶ್ಲೋಕ-57)
ಮೂಲಮ್
ಉತ್ತಿಷ್ಠ ತಾತ ತ ಇಮೇ ಶಿಶವೋ ವಯಸ್ಯಾ-
ಸ್ತ್ವಾಮಾಹ್ವಯಂತಿ ನೃಪನಂದನ ಸಂವಿಹರ್ತುಮ್ ।
ಸುಪ್ತಶ್ಚಿರಂ ಹ್ಯಶನಯಾ ಚ ಭವಾನ್ಪರೀತೋ
ಭುಂಕ್ಷ್ವಸ್ತನಂ ಪಿಬ ಶುಚೋ ಹರ ನಃ ಸ್ವಕಾನಾಮ್ ॥
ಅನುವಾದ
ಎನ್ನ ಮುದ್ದಿನ ಮಗನೇ! ಓ ರಾಜಕುಮಾರಾ! ಎದ್ದೇಳು ಮಗು! ಇದೋ ನೋಡು. ನಿನ್ನ ಜೊತೆಯ ಬಾಲಕರು ನಿನ್ನನ್ನು ಆಟಕ್ಕೆ ಕರೆಯುತ್ತಿದ್ದಾರೆ. ನೀನು ಮಲಗಿ ತುಂಬಾ ಹೊತ್ತಾಯಿತು. ಈಗ ನಿನಗೆ ಹಸಿವಾಗಿರಬಹುದು. ಏಳು ಏನನ್ನಾದರೂ ಸ್ವಲ್ಪ ತಿನ್ನುವೆಯಂತೆ. ಬೇರೇನೂ ಇಲ್ಲದಿದ್ದರೆ ನನ್ನ ಹಾಲನ್ನಾದರೂ ಕುಡಿದು, ನೆಂಟರಿಷ್ಟರಾದ ನಮ್ಮ ದುಃಖವನ್ನು ಹೋಗಲಾಡಿಸು. ॥57॥
(ಶ್ಲೋಕ-58)
ಮೂಲಮ್
ನಾಹಂ ತನೂಜ ದದೃಶೇ ಹತಮಂಗಲಾ ತೇ
ಮುಗ್ಧಸ್ಮಿತಂ ಮುದಿತವೀಕ್ಷಣಮಾನನಾಬ್ಜಮ್ ।
ಕಿಂ ವಾ ಗತೋಸ್ಯ ಪುನರನ್ವಯಮನ್ಯಲೋಕಂ
ನೀತೋಘೃಣೇನ ನ ಶೃಣೋಮಿ ಕಲಾ ಗಿರಸ್ತೇ ॥
ಅನುವಾದ
ಪ್ರೀತಿಯ ಕಂದಮ್ಮನೇ! ಇದೇನು ಇಂದು ನಿನ್ನ ಮುಖಾರವಿಂದದಲ್ಲಿ ಎಂದಿನಂತೆ ಮುದ್ದಾದ ಎಳೆ ನಗೆಯೂ, ಆನಂದದಿಂದ ತುಂಬಿದ ಚೆನ್ನೋಟವೂ ಕಾಣುತ್ತಿ ಲ್ಲವಲ್ಲ! ಎಂತಹ ದುರ್ಭಾಗ್ಯಳು ನಾನು! ನಿನ್ನ ತೊದಲು ನುಡಿಗಳೂ, ಮುದ್ದು ಮಾತುಗಳೂ ನನಗೆ ಕೇಳಿಸುತ್ತಿಲ್ಲವಲ್ಲ! ನಿಜವಾಗಿಯೂ ನಿಷ್ಠುರವಾದ ಯಮರಾಜನು ಹಿಂದಕ್ಕೆ ಮರಳಿ ಬರಲಾಗದ ಪರಲೋಕಕ್ಕೆ ನಿನ್ನನ್ನು ಕರೆದುಕೊಂಡು ಹೋಗಿಬಿಟ್ಟನೋ? ಎಂದು ರೋದಿಸಿದಳು. ॥58॥
(ಶ್ಲೋಕ-59)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ವಿಲಪಂತ್ಯಾ ಮೃತಂ ಪುತ್ರಮಿತಿ ಚಿತ್ರವಿಲಾಪನೈಃ ।
ಚಿತ್ರಕೇತುರ್ಭೃಶಂ ತಪ್ತೋ ಮುಕ್ತಕಂಠೋ ರುರೋದ ಹ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ತನ್ನ ರಾಣಿಯು ಮೃತನಾದ ಪುತ್ರನಿಗಾಗಿ ಹೀಗೆ ಬಗೆ-ಬಗೆಯಾಗಿ ವಿಲಪಿಸುತ್ತಿರುವುದನ್ನು ಕಂಡು ಚಿತ್ರಕೇತುವೂ ಅತ್ಯಂತ ಶೋಕಸಂತಪ್ತನಾಗಿ ಬಿಕ್ಕಿ-ಬಿಕ್ಕಿ ಅಳತೊಡಗಿದನು. ॥59॥
(ಶ್ಲೋಕ-60)
ಮೂಲಮ್
ತಯೋರ್ವಿಲಪತೋಃ ಸರ್ವೇ ದಂಪತ್ಯೋಸ್ತದನುವ್ರತಾಃ ।
ರುರುದುಃ ಸ್ಮ ನರಾ ನಾರ್ಯಃ ಸರ್ವಮಾಸೀದಚೇತನಮ್ ॥
ಅನುವಾದ
ರಾಜ-ರಾಣಿಯರು ವಿಲಪಿಸುತ್ತಿರುವುದನ್ನು ಕಂಡು ಅವರ ಅನುಯಾಯಿಗಳಾದ ಗಂಡಸರೂ, ಹೆಂಗಸರೂ ಕೂಡ ದುಃಖಿತರಾಗಿ ಅಳತೊಡಗಿದರು. ಹೀಗೆ ಇಡೀ ನಗರವೇ ಶೋಕದಿಂದ ಜಡವಸ್ತುವಿನಂತಾಯಿತು. ॥60॥
(ಶ್ಲೋಕ-61)
ಮೂಲಮ್
ಏವಂ ಕಶ್ಮಲಮಾಪನ್ನಂ ನಷ್ಟ ಸಂಜ್ಞಮನಾಯಕಮ್ ।
ಜ್ಞಾತ್ವಾಂಗಿರಾ ನಾಮ ಮುನಿರಾಜಗಾಮ ಸನಾರದಃ ॥
ಅನುವಾದ
ರಾಜನೇ! ಚಿತ್ರಕೇತು ಮಹಾರಾಜನು ಹೀಗೆ ಪುತ್ರಶೋಕದಿಂದ ಚೇತನಾರಹಿತ ನಾಗಿಬಿಟ್ಟಿದ್ದಾನೆ. ಆಗ ಅವನಿಗೆ ತಿಳಿವಳಿಕೆ ಕೊಡುವವರೂ ಯಾರೂ ಇಲ್ಲದಿರುವುದನ್ನು ಕಂಡುಕೊಂಡ ಅಂಗೀರಸ ಮಹರ್ಷಿಗಳೂ ಮತ್ತು ನಾರದಮಹರ್ಷಿಗಳೂ ಅವನಿದ್ದೆಡೆಗೆ ದಯಮಾಡಿಸಿದರು. ॥61॥
ಅನುವಾದ (ಸಮಾಪ್ತಿಃ)
ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು. ॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಚಿತ್ರಕೇತುವಿಲಾಪೋ ನಾಮ ಚತುರ್ದಶೋಽಧ್ಯಾಯಃ ॥14॥