೧೩

[ಹದಿಮೂರನೆಯ ಅಧ್ಯಾಯ]

ಭಾಗಸೂಚನಾ

ಇಂದ್ರನನ್ನು ಬ್ರಹ್ಮಹತ್ಯೆಯು ಆವರಿಸಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ವೃತ್ರೇ ಹತೇ ತ್ರಯೋ ಲೋಕಾ ವಿನಾ ಶಕ್ರೇಣ ಭೂರಿದ ।
ಸಪಾಲಾ ಹ್ಯಭವನ್ಸದ್ಯೋ ವಿಜ್ವರಾ ನಿರ್ವೃತೇಂದ್ರಿಯಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹಾದಾನಿ ಯಾದ ಪರೀಕ್ಷಿತನೇ! ವೃತ್ರಾಸುರನ ಮೃತ್ಯುವಿನಿಂದ ಇಂದ್ರನನ್ನು ಬಿಟ್ಟು ಮೂರುಲೋಕಗಳೂ, ಲೋಕಪಾಲರೂ ಒಡನೆಯೇ ಪರಮಸಂತೋಷಭರಿತರಾದರು. ಅವರ ಭಯ, ಚಿಂತೆ ಎಲ್ಲವೂ ಹೊರಟುಹೋಯಿತು. ॥1॥

(ಶ್ಲೋಕ-2)

ಮೂಲಮ್

ದೇವರ್ಷಿಪಿತೃಭೂತಾನಿ ದೈತ್ಯಾ ದೇವಾನುಗಾಃ ಸ್ವಯಮ್ ।
ಪ್ರತಿಜಗ್ಮುಃ ಸ್ವಧಿಷ್ಣ್ಯಾನಿ ಬ್ರಹ್ಮೇಶೇಂದ್ರಾದಯಸ್ತತಃ ॥

ಅನುವಾದ

ಆ ಯುದ್ಧವು ಮುಗಿಯಲು ದೇವತೆಗಳೂ, ಋಷಿಗಳೂ, ಪಿತೃಗಳೂ, ಭೂತರೂ, ದೈತ್ಯರೂ, ದೇವತೆಗಳ ಅನುಚರ ರಾದ ಗಂಧರ್ವರೂ ಮುಂತಾದವರೆಲ್ಲರೂ ತಮ್ಮ-ತಮ್ಮ ಲೋಕಗಳಿಗೆ ಹೊರಟುಹೋದರು. ಅನಂತರ ಬ್ರಹ್ಮ ದೇವರು, ರುದ್ರದೇವರು, ಇಂದ್ರನು ಎಲ್ಲರೂ ಹೊರಟುಹೋದರು. ॥2॥

(ಶ್ಲೋಕ-3)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಇಂದ್ರಸ್ಯಾನಿರ್ವೃತೇರ್ಹೇತುಂ ಶ್ರೋತುಮಿಚ್ಛಾಮಿ ಭೋ ಮುನೇ ।
ಯೇನಾಸನ್ಸುಖಿನೋ ದೇವಾ ಹರೇರ್ದುಃಖಂ ಕುತೋಭವತ್ ॥
ಪರೀಕ್ಷಿತನು ಕೇಳಿದನು — ಮುನಿವರ್ಯರೇ! ಇಂದ್ರನೊಬ್ಬನಿಗೆ ಮಾತ್ರ ಆಗ ಅಪ್ರಸನ್ನತೆಯುಂಟಾಗಲು ಕಾರಣವೇನು? ವೃತ್ರಾಸುರನ ವಧೆಯಿಂದ ಎಲ್ಲ ದೇವತೆಗಳು ಸುಖಪಟ್ಟಿರುವಾಗ ಇಂದ್ರನೊಬ್ಬನಿಗೆ ಏಕೆ ದುಃಖವುಂಟಾಯಿತು? ಇದನ್ನು ಕೇಳಲು ನಾನು ಬಯಸುವೆನು. ದಯವಿಟ್ಟು ತಿಳಿಸಬೇಕು. ॥3॥

(ಶ್ಲೋಕ-4)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ವೃತ್ರವಿಕ್ರಮಸಂವಿಗ್ನಾಃ ಸರ್ವೇ ದೇವಾಃ ಸಹರ್ಷಿಭಿಃ ।
ತದ್ವಧಾಯಾರ್ಥಯನ್ನಿಂದ್ರಂ ನೈಚ್ಛದ್ಭೀತೋ ಬೃಹದ್ವಧಾತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ರಾಜೇಂದ್ರನೇ! ವೃತ್ರಾಸುರನ ಪರಾಕ್ರಮದಿಂದ ಎಲ್ಲ ದೇವತೆಗಳೂ ಮತ್ತು ಋಷಿ-ಮಹರ್ಷಿಗಳೂ ಅತ್ಯಂತ ಭಯಗೊಂಡಾಗ, ಅವರೆಲ್ಲರೂ ಅಸುರನ ವಧೆಗಾಗಿ ಇಂದ್ರ ನಲ್ಲಿ ಪ್ರಾರ್ಥಿಸಿದ್ದರು. ಆದರೂ ಅವನು ಬ್ರಹ್ಮಹತ್ಯೆಯ ಭಯದಿಂದ ಅವನನ್ನು ಕೊಲ್ಲಲು ಬಯಸುತ್ತಿರಲಿಲ್ಲ.॥4॥

(ಶ್ಲೋಕ-5)

ಮೂಲಮ್ (ವಾಚನಮ್)

ಇಂದ್ರ ಉವಾಚ

ಮೂಲಮ್

ಸೀಭೂಜಲದ್ರುಮೈರೇನೋ ವಿಶ್ವರೂಪವಧೋದ್ಭವಮ್ ।
ವಿಭಕ್ತಮನುಗೃಹ್ಣದ್ಭಿರ್ವೃತ್ರಹತ್ಯಾಂ ಕ್ವ ಮಾರ್ಜ್ಮ್ಯಹಮ್ ॥

ಅನುವಾದ

ದೇವೇಂದ್ರನು ಅವರಲ್ಲಿ ಹೇಳಿದನು — ಎಲೈ ದೇವತೆಗಳಿರಾ! ಋಷಿಗಳಿರಾ! ಹಿಂದೆ ವಿಶ್ವರೂಪನ ವಧೆಯಿಂದ ನನಗೆ ಹತ್ತಿಕೊಂಡಿದ್ದ ಬ್ರಹ್ಮಹತ್ಯೆಯನ್ನೇನೋ ಸ್ತ್ರೀಯರು, ಪೃಥಿವಿ, ಜಲ, ವೃಕ್ಷಗಳು ತಮ್ಮಲ್ಲಿ ಹಂಚಿಕೊಂಡು ಸ್ವೀಕರಿಸಿದ್ದರು. ಈಗ ನಾನು ವೃತ್ರನನ್ನು ವಧಿಸಿದ ಬ್ರಹ್ಮಹತ್ಯೆಯಿಂದ ನನ್ನ ಬಿಡುಗಡೆ ಹೇಗಾದೀತು? ॥5॥

(ಶ್ಲೋಕ-6)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಋಷಯಸ್ತದುಪಾಕರ್ಣ್ಯ ಮಹೇಂದ್ರಮಿದಮಬ್ರುವನ್ ।
ಯಾಜಯಿಷ್ಯಾಮ ಭದ್ರಂ ತೇ ಹಯಮೇಧೇನ ಮಾ ಸ್ಮ ಭೈಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹೇಂದ್ರನ ಮಾತನ್ನು ಕೇಳಿದ ಋಷಿಗಳು ಅವನಲ್ಲಿ ಹೇಳಿದರು ಎಲೈ ದೇವೇಂದ್ರನೇ! ನಿನಗೆ ಮಂಗಳವುಂಟಾಗಲೀ. ನೀನು ಕಿಂಚಿತ್ತಾದರೂ ಭಯಪಡಬೇಡ. ಏಕೆಂದರೆ, ನಾವು ನಿನ್ನಿಂದ ಅಶ್ವಮೇಧ ಯಜ್ಞವನ್ನು ಮಾಡಿಸಿ ಎಲ್ಲ ಪಾಪಗಳಿಂದ ಬಿಡುಗಡೆಗೊಳಿಸುವೆವು. ॥6॥

(ಶ್ಲೋಕ-7)

ಮೂಲಮ್

ಹಯಮೇಧೇನ ಪುರುಷಂ ಪರಮಾತ್ಮಾನಮೀಶ್ವರಮ್ ।
ಇಷ್ಟ್ವಾ ನಾರಾಯಣಂ ದೇವಂ ಮೋಕ್ಷ್ಯಸೇಪಿ ಜಗದ್ವಧಾತ್ ॥

ಅನುವಾದ

ಅಶ್ವಮೇಧಯಜ್ಞದ ಮೂಲಕ ಸರ್ವಾಂತರ್ಯಾಮಿ, ಸರ್ವಶಕ್ತಿಸಂಪನ್ನ ಪರಮಾತ್ಮನಾದ ಶ್ರೀಮನ್ನಾರಾಯಣನ ಆರಾಧನೆಯನ್ನು ಮಾಡಿ ನೀನು ಸಮಸ್ತ ಜಗತ್ತನ್ನು ವಧಿಸುವುದರಿಂದ ಉಂಟಾದ ಪಾಪದಿಂದಲೂ ಮುಕ್ತನಾಗುವೆ. ಹಾಗಿರುವಾಗ ವೃತ್ರಾಸುರನ ವಧೆಯ ಮಾತಾದರೂ ಏನಿದೆ? ॥7॥

(ಶ್ಲೋಕ-8)

ಮೂಲಮ್

ಬ್ರಹ್ಮಹಾ ಪಿತೃಹಾ ಗೋಘ್ನೋ
ಮಾತೃಹಾಚಾರ್ಯಹಾಘವಾನ್ ।
ಶ್ವಾದಃ ಪುಲ್ಕಸಕೋ ವಾಪಿ
ಶುದ್ಧ್ಯೇರನ್ಯಸ್ಯ ಕೀರ್ತನಾತ್ ॥

ಅನುವಾದ

ದೇವರಾಜಾ! ಭಗವಂತನ ನಾಮ-ಸಂಕೀರ್ತನ ಮಾತ್ರದಿಂದಲೇ ಬ್ರಾಹ್ಮಣ, ತಂದೆ, ಗೋವು, ತಾಯಿ, ಆಚಾರ್ಯ ಮುಂತಾದವರ ಹತ್ಯೆಯನ್ನು ಮಾಡುವ ಮಹಾಪಾಪಿಯೂ, ಚಾಂಡಾಲನೂ, ಕಟುಕನೂ ಇಂತಹವರೂ ಕೂಡ ಶುದ್ಧರಾಗಿ ಬಿಡುತ್ತಾರೆ. ॥8॥

(ಶ್ಲೋಕ-9)

ಮೂಲಮ್

ತಮಶ್ವಮೇಧೇನ ಮಹಾಮಖೇನ
ಶ್ರದ್ಧಾನ್ವಿತೋಸ್ಮಾಭಿರನುಷ್ಠಿ ತೇನ ।
ಹತ್ವಾಪಿ ಸಬ್ರಹ್ಮ ಚರಾಚರಂ ತ್ವಂ
ನ ಲಿಪ್ಯಸೇ ಕಿಂ ಖಲನಿಗ್ರಹೇಣ ॥

ಅನುವಾದ

ನಾವುಗಳು ನಿನಗಾಗಿ ‘ಅಶ್ವಮೇಧ’ ಎಂಬ ಮಹಾಯಜ್ಞದ ಅನುಷ್ಠಾನ ಮಾಡುವೆವು. ಇದರ ಮೂಲಕ ಶ್ರದ್ಧೆಯಿಂದ ಭಗವಂತನನ್ನು ಆರಾಧಿಸಿ ನೀನು ಬ್ರಹ್ಮನವರೆಗಿನ ಇಡೀ ಚರಾಚರ ಜಗತ್ತನ್ನು ಹತ್ಯೆಮಾಡಿದರೆ ಬರುವ ಪಾತಕವೂ ನಿನಗೆ ಅಂಟಲಾರದು. ಹಾಗಿರುವಾಗ ಈ ದುಷ್ಟನಿಗೆ ದಂಡವನ್ನು ವಿಧಿಸಿದ ಪಾಪದಿಂದ ಬಿಡುಗಡೆಹೊಂದುವ ಮಾತಾದರೂ ಏನಿದೆ? ॥9॥

ಮೂಲಮ್

(ಶ್ಲೋಕ-10)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಸಂಚೋದಿತೋ ವಿಪ್ರೈರ್ಮರುತ್ವಾನಹನದ್ರಿಪುಮ್ ।
ಬ್ರಹ್ಮಹತ್ಯಾ ಹತೇ ತಸ್ಮಿನ್ನಾಸಸಾದ ವೃಷಾಕಪಿಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಹೀಗೆ ಬ್ರಾಹ್ಮಣರಿಂದ ಪ್ರೇರಿತನಾಗಿ ದೇವೇಂದ್ರನು ವೃತ್ರಾಸುರನನ್ನು ವಧಿಸಿದ್ದನು. ಈಗ ಅವನನ್ನು ಸಂಹರಿಸಿದ್ದರಿಂದ ಬ್ರಹ್ಮಹತ್ಯೆಯು ಇಂದ್ರನ ಬಳಿಗೆ ಬಂದಿತು. ॥10॥

(ಶ್ಲೋಕ-11)

ಮೂಲಮ್

ತಯೇಂದ್ರಃ ಸ್ಮಾಸಹತ್ತಾಪಂ
ನಿರ್ವೃತಿರ್ನಾಮುಮಾವಿಶತ್ ।
ಹ್ರೀಮಂತಂ ವಾಚ್ಯತಾಂ ಪ್ರಾಪ್ತಂ
ಸುಖಯಂತ್ಯಪಿ ನೋ ಗುಣಾಃ ॥

ಅನುವಾದ

ಅದರ ಕಾರಣದಿಂದ ಇಂದ್ರನಿಗೆ ತುಂಬಾ ಕ್ಲೇಶವಾಯಿತು. ಮಹಾಸಂತಾಪವನ್ನು ಸಹಿಸಬೇಕಾಯಿತು. ಅವನಿಗೆ ಒಂದು ಕ್ಷಣವೂ ನೆಮ್ಮದಿ ಇಲ್ಲವಾಯಿತು. ನಾಚಿಕೆ-ಸಂಕೋಚವುಳ್ಳ ಸತ್ಪುರುಷನಿಗೆ ಕಳಂಕವು ತಗುಲಿದರೆ ಆಗ ಅವನ ಧೈರ್ಯವೇ ಮುಂತಾದ ಗುಣಗಳೂ ಆತನಿಗೆ ಸುಖವನ್ನುಂಟುಮಾಡಲಾರವು. ॥11॥

(ಶ್ಲೋಕ-12)

ಮೂಲಮ್

ತಾಂ ದದರ್ಶಾನುಧಾವಂತೀಂ
ಚಾಂಡಾಲೀಮಿವ ರೂಪಿಣೀಮ್ ।
ಜರಯಾ ವೇಪಮಾನಾಂಗೀಂ
ಯಕ್ಷ್ಮಗ್ರಸ್ತಾಮಸೃಕ್ಪಟಾಮ್ ॥

ಅನುವಾದ

ಆ ಬ್ರಹ್ಮಹತ್ಯೆಯು ಸಾಕ್ಷಾತ್ ಚಾಂಡಾಲಿನಿಯಂತೆ ತನ್ನ ಹಿಂದೆಯೇ ಬೆನ್ನಟ್ಟಿ ಬರುತ್ತಿರುವುದು ಇಂದ್ರನಿಗೆ ಕಾಣಿಸಿತು. ಅವಳು ಮುದುಕಿಯಾದ್ದರಿಂದ ಅಂಗಾಂಗಗಳು ನಡುಗುತ್ತಾ ಇವೆ. ಜೊತೆಗೆ ಕ್ಷಯ ರೋಗವೂ ಅದನ್ನು ಪೀಡಿಸುತ್ತಿದೆ. ಅದರ ಬಟ್ಟೆಗಳೆಲ್ಲ ರಕ್ತ ದಿಂದ ತೊಯ್ದುಹೋಗಿವೆ. ॥12॥

(ಶ್ಲೋಕ-13)

ಮೂಲಮ್

ವಿಕೀರ್ಯ ಪಲಿತಾನ್ಕೇಶಾಂಸ್ತಿಷ್ಠ
ತಿಷ್ಠೇತಿ ಭಾಷಿಣೀಮ್ ।
ಮೀನಗಂಧ್ಯಸುಗಂಧೇನ ಕುರ್ವತೀಂ
ಮಾರ್ಗದೂಷಣಮ್ ॥

ಅನುವಾದ

ಅದು ತನ್ನ ಬಿಳಿಯ ಕೂದಲುಗಳನ್ನು ಕೆದರಿಕೊಂಡು ನಿಲ್ಲು! ನಿಲ್ಲು! ಎಂದು ಕಿರುಚುತ್ತಾ ಬರುತ್ತಿದೆ. ಅದರ ಉಸಿರಿನಿಂದ ಮೀನಿನಂತಹ ದುರ್ಗಂಧವು ಹೊರ ಹೊಮ್ಮುತ್ತಿದೆ. ಅದರಿಂದ ದಾರಿಯೆಲ್ಲವೂ ದೂಷಿತವಾಗುತ್ತಿದೆ. ॥13॥

ಮೂಲಮ್

(ಶ್ಲೋಕ-14)
ನಭೋ ಗತೋ ದಿಶಃ ಸರ್ವಾಃ
ಸಹಸ್ರಾಕ್ಷೋ ವಿಶಾಂಪತೇ ।
ಪ್ರಾಗುದೀಚೀಂ ದಿಶಂ ತೂರ್ಣಂ ಪ್ರವಿಷ್ಟೋ
ನೃಪ ಮಾನಸಮ್ ॥

ಅನುವಾದ

ರಾಜನೇ! ದೇವೇಂದ್ರನು ಅದರ ಭಯದಿಂದ ದಿಕ್ಕು-ವಿದಿಕ್ಕುಗಳಿಗೂ, ಆಕಾಶಕ್ಕೂ ಓಡುತ್ತಾ ಅಲೆದಾಡಿದನು. ಕೊನೆಗೆ ಎಲ್ಲಿಯೂ ಆಸರೆ ಸಿಕ್ಕದೆ ಅವನು ಈಶಾನ್ಯದಿಕ್ಕಿನಲ್ಲಿರುವ ಮಾನಸ ಸರೋವರದೊಳಗೆ ಬೇಗನೇ ಪ್ರವೇಶಿಸಿಬಿಟ್ಟನು. ॥14॥

(ಶ್ಲೋಕ-15)

ಮೂಲಮ್

ಸ ಆವಸತ್ಪುಷ್ಕರನಾಲತಂತೂ-
ನಲಬ್ಧಭೋಗೋ ಯದಿಹಾಗ್ನಿದೂತಃ ।
ವರ್ಷಾಣಿ ಸಾಹಸ್ರಮಲಕ್ಷಿತೋಂತಃ
ಸ ಚಿಂತಯನ್ ಬ್ರಹ್ಮವಧಾದ್ವಿಮೋಕ್ಷಮ್ ॥

ಅನುವಾದ

ಮಹೇಂದ್ರನು ಮಾನಸಸರೋವರದ ಕಮಲದ ದಂಟಿನ ನೂಲುಗಳೊಳಗೆ ಒಂದು ಸಾವಿರವರ್ಷ ಕಾಲ ಅವಿತಿದ್ದು ‘ಬ್ರಹ್ಮಹತ್ಯೆಯಿಂದ ತನಗೆ ಹೇಗೆ ಬಿಡುಗಡೆಯಾದೀತು?’ ಎಂಬುದನ್ನು ಯೋಚಿಸುತ್ತಿದ್ದನು. ಅಷ್ಟುಕಾಲದವರೆಗೂ ಅವನಿಗೆ ತಿನ್ನುವುದಕ್ಕೂ ಏನೂ ದೊರೆಯಲಿಲ್ಲ. ಏಕೆಂದರೆ, ಅವನು ಅಗ್ನಿದೇವನ ಮುಖದಿಂದಲೇ ಊಟಮಾಡುವುದು. ಆದರೆ ಅಗ್ನಿದೇವನಿಗೆ ನೀರಿನೊಳಗಿನ ತಾವರೆಯ ದಂಟಿನ ದಾರದೊಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ॥15॥

(ಶ್ಲೋಕ-16)

ಮೂಲಮ್

ತಾವತಿಣಾಕಂ ನಹುಷಃ ಶಶಾಸ
ವಿದ್ಯಾತಪೋಯೋಗಬಲಾನುಭಾವಃ ।
ಸ ಸಂಪದೈಶ್ವರ್ಯಮದಾಂಧಬುದ್ಧಿ-
ರ್ನೀತಸ್ತಿರಶ್ಚಾಂ ಗತಿಮಿಂದ್ರಪತ್ನ್ಯಾ ॥

ಅನುವಾದ

ಹೀಗೆ ದೇವೇಂದ್ರನು ಕಮಲದ ದಂಟಿನ ದಾರದೊಳಗೆ ಅಡಗಿರುವಷ್ಟು ಕಾಲವು ರಾಜಾ ನಹುಷನು ತನ್ನ ವಿದ್ಯೆ, ತಪಸ್ಸು ಮತ್ತು ಯೋಗಬಲಗಳಿಂದ ಸ್ವರ್ಗವನ್ನು ಆಳುತ್ತಿದ್ದನು. ಆದರೆ ಆತನು ಸಂಪತ್ತು-ಅಧಿಕಾರಗಳ ಮದದಿಂದ ಕುರುಡನಾಗಿ ಇಂದ್ರಪತ್ನೀ ಶಚೀದೇವಿಯೊಂದಿಗೆ ಅಪಚಾರವನ್ನು ಮಾಡಲು ಬಯಸಿದನು. ಆಗ ಆಕೆಯು ಆತನು ಮಹರ್ಷಿಗಳಲ್ಲಿ ಅಪರಾಧವನ್ನು ಆಚರಿಸುವಂತೆ ಮಾಡಿದಳು. ಅದರಿಂದ ಅವನು ಶಾಪಗ್ರಸ್ತನಾಗಿ ಹೆಬ್ಬಾವಿನ ರೂಪವನ್ನು ತಳೆದನು. ॥16॥

(ಶ್ಲೋಕ-17)

ಮೂಲಮ್

ತತೋ ಗತೋ ಬ್ರಹ್ಮಗಿರೋಪಹೂತ
ಋತಂಭರಧ್ಯಾನನಿವಾರಿತಾಘಃ ।
ಪಾಪಸ್ತು ದಿಗ್ದೇವತಯಾ ಹತೌಜಾ-
ಸ್ತಂ ನಾಭ್ಯಭೂದವಿತಂ ವಿಷ್ಣುಪತ್ನ್ಯಾ ॥

ಅನುವಾದ

ಅನಂತರ ಸತ್ಯಕ್ಕೆ ಪರಮಪೋಷಕನಾಗಿರುವ ಶ್ರೀಭಗವಂತನನ್ನು ಚೆನ್ನಾಗಿ ಧ್ಯಾನ ಮಾಡಿದ್ದರಿಂದ ಇಂದ್ರನ ಪಾಪವು ನಾಶವಾಗಿ ಹೋಯಿತು. ಬ್ರಾಹ್ಮಣರ ಕರೆಯಂತೆ ಅನಂತರ ಅವನು ಸ್ವರ್ಗಕ್ಕೆ ಹಿಂದಿರುಗಿದನು. ಕಮಲವನದಲ್ಲಿ ವಿಹರಿಸುವ ವಿಷ್ಣುಪತ್ನಿಯಾದ ಶ್ರೀಲಕ್ಷ್ಮೀ ದೇವಿಯು ಇಂದ್ರನನ್ನು ರಕ್ಷಿಸುತ್ತಿದ್ದಳು ಮತ್ತು ಈಶಾನ್ಯ ದಿಕ್ಕಿಗೆ ಅಧಿಪತಿಯಾದ ರುದ್ರದೇವರು ಪಾಪದ ತೇಜಸ್ಸನ್ನು ನಿಗ್ರಹಿಸಿದ್ದರಿಂದ ಬ್ರಹ್ಮಹತ್ಯೆಯು ಇಂದ್ರನನ್ನು ಆಕ್ರಮಿಸಲಾರದೆ ಹೋಯಿತು. ॥17॥

(ಶ್ಲೋಕ-18)

ಮೂಲಮ್

ತಂ ಚ ಬ್ರಹ್ಮರ್ಷಯೋಭ್ಯೇತ್ಯ ಹಯಮೇಧೇನ ಭಾರತ ।
ಯಥಾವದ್ದೀಕ್ಷಯಾಂಚಕ್ರುಃ ಪುರುಷಾರಾಧನೇನ ಹ ॥

ಅನುವಾದ

ಪರೀಕ್ಷಿತನೇ! ಇಂದ್ರನು ಸ್ವರ್ಗಕ್ಕೆ ಹಿಂದಿರುಗಿದಾಗ ಬ್ರಹ್ಮರ್ಷಿಗಳು ಅಲ್ಲಿಗೆ ಬಂದು ಭಗವಂತನ ಆರಾಧನೆಗಾಗಿ ಇಂದ್ರನಿಗೆ ಅಶ್ವಮೇಧ ಯಜ್ಞದ ದೀಕ್ಷೆಕೊಟ್ಟು, ಅವನಿಂದ ಅಶ್ವಮೇಧ ಯಜ್ಞವನ್ನು ಮಾಡಿಸಿದರು. ॥18॥

(ಶ್ಲೋಕ-19)

ಮೂಲಮ್

ಅಥೇಜ್ಯಮಾನೇ ಪುರುಷೇ ಸರ್ವದೇವಮಯಾತ್ಮನಿ ।
ಅಶ್ವಮೇಧೇ ಮಹೇಂದ್ರೇಣ ವಿತತೇ ಬ್ರಹ್ಮವಾದಿಭಿಃ ॥

(ಶ್ಲೋಕ-20)

ಮೂಲಮ್

ಸ ವೈ ತ್ವಾಷ್ಟ್ರ ವಧೋ ಭೂಯಾನಪಿ ಪಾಪಚಯೋ ನೃಪ ।
ನೀತಸ್ತೇನೈವ ಶೂನ್ಯಾಯ ನೀಹಾರ ಇವ ಭಾನುನಾ ॥

ಅನುವಾದ

ವೇದವಾದಿಗಳಾದ ಬ್ರಾಹ್ಮಣರು ಅವನಿಂದ ಅಶ್ವಮೇಧ ಯಜ್ಞವನ್ನು ಮಾಡಿಸಿ, ದೇವೇಂದ್ರನು ಆ ಯಜ್ಞದ ಮೂಲಕ ಸರ್ವ ದೇವಸ್ವರೂಪನಾದ ಭಗವಾನ್ ಪುರುಷೋತ್ತಮನ ಆರಾಧನೆಯನ್ನು ಮಾಡಿದಾಗ ಭಗವಂತನ ಆರಾಧನೆಯ ಪ್ರಭಾವದಿಂದ ವೃತ್ರಾಸುರನ ವಧೆಯ ಆ ದೊಡ್ಡ ಪಾಪ ರಾಶಿಯು ಸೂರ್ಯೋದಯವಾಗುತ್ತಲೇ ಮಂಜು ಕರಗಿ ಹೋಗುವಂತೆ ಭಸ್ಮವಾಗಿ ಹೋಯಿತು. ॥19-20॥

(ಶ್ಲೋಕ-21)

ಮೂಲಮ್

ಸ ವಾಜಿಮೇಧೇನ ಯಥೋದಿತೇನ
ವಿತಾಯಮಾನೇನ ಮರೀಚಿಮಿಶ್ರೈಃ ।
ಇಷ್ಟ್ವಾಧಿಯಜ್ಞಂ ಪುರುಷಂ ಪುರಾಣ-
ಮಿಂದ್ರೋ ಮಹಾನಾಸ ವಿಧೂತಪಾಪಃ ॥

ಅನುವಾದ

ಮರೀಚಿಯೇ ಮುಂತಾದ ಮುನೀಶ್ವರರು ಅವನಿಂದ ವಿಧಿವತ್ತಾಗಿ ಅಶ್ವಮೇಧ ಯಜ್ಞವನ್ನು ಮಾಡಿಸಿದಾಗ ಅದರ ಮೂಲಕ ಸನಾತನ ಪುರುಷನೂ, ಯಜ್ಞಪತಿಯೂ ಆದ ಭಗವಂತನನ್ನು ಆರಾಧಿಸಿ ಇಂದ್ರನು ಎಲ್ಲ ಪಾಪಗಳಿಂದ ಬಿಡುಗಡೆಹೊಂದಿ, ಹಿಂದಿನಂತೆಯೇ ಲೋಕಪೂಜ್ಯನಾದನು. ॥21॥

ಮೂಲಮ್

(ಶ್ಲೋಕ-22)

ಮೂಲಮ್

ಇದಂ ಮಹಾಖ್ಯಾನಮಶೇಷಪಾಪ್ಮನಾಂ
ಪ್ರಕ್ಷಾಲನಂ ತೀರ್ಥಪದಾನುಕೀರ್ತನಮ್ ।
ಭಕ್ತ್ಯುಚ್ಛ್ರಯಂ ಭಕ್ತಜನಾನುವರ್ಣನಂ
ಮಹೇಂದ್ರಮೋಕ್ಷಂ ವಿಜಯಂ ಮರುತ್ವತಃ ॥

ಅನುವಾದ

ಪರೀಕ್ಷಿತನೇ! ಈ ಶ್ರೇಷ್ಠವಾದ ಆಖ್ಯಾನದಲ್ಲಿ ಇಂದ್ರನ ವಿಜಯ, ಪಾಪಗಳಿಂದ ಅವನ ಮುಕ್ತಿ ಮತ್ತು ಭಗವಂತನ ಪ್ರಿಯ ಭಕ್ತ ವೃತ್ರಾಸುರನ ವರ್ಣನೆ ನಡೆದಿದೆ. ಇದರಲ್ಲಿ ತೀರ್ಥಗಳಿಗೂ ತೀರ್ಥಸ್ವರೂಪವಾದ ಭಗವಂತನ ಅನುಗ್ರಹವೇ ಮುಂತಾದ ಗುಣಗಳ ಸಂಕೀರ್ತನೆ ಇದೆ. ಇದು ಎಲ್ಲ ಪಾಪಗಳನ್ನು ತೊಳೆದು ಹಾಕಿ, ಭಕ್ತಿಯನ್ನು ವೃದ್ಧಿಪಡಿಸುತ್ತದೆ. ॥22॥

(ಶ್ಲೋಕ-23)

ಮೂಲಮ್

ಪಠೇಯುರಾಖ್ಯಾನಮಿದಂ ಸದಾ ಬುಧಾಃ
ಶೃಣ್ವಂತ್ಯಥೋ ಪರ್ವಣಿ ಪರ್ವಣೀಂದ್ರಿಯಮ್ ।
ಧನ್ಯಂ ಯಶಸ್ಯಂ ನಿಖಿಲಾಘಮೋಚನಂ
ರಿಪುಂಜಯಂ ಸ್ವಸ್ತ್ಯಯನಂ ತಥಾಯುಷಮ್ ॥

ಅನುವಾದ

ಬುದ್ಧಿವಂತನಾದ ಮನುಷ್ಯನು ಈ ಇಂದ್ರ ಸಂಬಂಧೀ ಆಖ್ಯಾನವನ್ನು ಸದಾಕಾಲ ಪಠಿಸುತ್ತಾ, ಶ್ರವಣಿಸುತ್ತಾ ಇರಬೇಕು. ವಿಶೇಷವಾಗಿ ಪರ್ವದಿನಗಳಲ್ಲಿ ಅವಶ್ಯವಾಗಿ ಸೇವಿಸಬೇಕು. ಇದು ಧನವನ್ನೂ, ಕೀರ್ತಿಯನ್ನೂ ವೃದ್ಧಿಪಡಿಸಿ, ಎಲ್ಲ ಪಾಪಗಳಿಂದ ಬಿಡುಗಡೆಗೊಳಿಸುತ್ತದೆ. ಶತ್ರುಗಳ ಮೇಲೆ ವಿಜಯವನ್ನು ತಂದುಕೊಟ್ಟು ಆಯುಸ್ಸನ್ನೂ, ಮಂಗಳವನ್ನೂ ವೃದ್ಧಿಪಡಿಸುವುದು. ॥23॥

ಅನುವಾದ (ಸಮಾಪ್ತಿಃ)

ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಇಂದ್ರವಿಜಯೋ ನಾಮ ತ್ರಯೋದಶೋಽಧ್ಯಾಯಃ ॥13॥