೧೨

[ಹನ್ನೆರಡನೆಯ ಅಧ್ಯಾಯ]

ಭಾಗಸೂಚನಾ

ವೃತ್ರಾಸುರನ ವಧೆ

(ಶ್ಲೋಕ-1)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಏವಂ ಜಿಹಾಸುರ್ನೃಪ ದೇಹಮಾಜೌ
ಮೃತ್ಯುಂ ವರಂ ವಿಜಯಾನ್ಮನ್ಯಮಾನಃ ।
ಶೂಲಂ ಪ್ರಗೃಹ್ಯಾಭ್ಯಪತತ್ಸುರೇಂದ್ರಂ
ಯಥಾ ಮಹಾಪುರುಷಂ ಕೈಟಭೋಪ್ಸು ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿ ದ್ರಾಜನೇ! ವೃತ್ರಾಸುರನು ರಣಭೂಮಿಯಲ್ಲಿ ತನ್ನ ಶರೀರವನ್ನು ಬಿಡಲು ಬಯಸುತ್ತಿದ್ದನು. ಏಕೆಂದರೆ, ಅವನ ದೃಷ್ಟಿಯಲ್ಲಿ ಇಂದ್ರನ ಮೇಲೆ ವಿಜಯವನ್ನುಗಳಿಸಿ ಸ್ವರ್ಗವನ್ನು ಪಡೆಯುವುದಕ್ಕಿಂತಲೂ ದೇಹತ್ಯಾಗಮಾಡಿ ಶ್ರೀಭಗವಂತ ನನ್ನು ಪಡೆಯುವುದೇ ಶ್ರೇಷ್ಠವಾಗಿತ್ತು. ಅದಕ್ಕಾಗಿ ಅವನು ಕೈಟಭಾಸುರನು ಹಿಂದೆ ಪ್ರಳಯ ಜಲದಲ್ಲಿ ಭಗವಾನ್ ವಿಷ್ಣುವನ್ನು ಎದುರಿಸಲು ಹೋದಂತೆತ್ರಿಶೂಲವನ್ನೆತ್ತಿಕೊಂಡು ಇಂದ್ರನ ಮೇಲೆ ಎರಗಿದನು. ॥1॥

(ಶ್ಲೋಕ-2)

ಮೂಲಮ್

ತತೋ ಯುಗಾಂತಾಗ್ನಿಕಠೋರಜಿಹ್ವ-
ಮಾವಿಧ್ಯ ಶೂಲಂ ತರಸಾಸುರೇಂದ್ರಃ ।
ಕ್ಷಿಪ್ತ್ವಾ ಮಹೇಂದ್ರಾಯ ವಿನದ್ಯ ವೀರೋ
ಹತೋಸಿ ಪಾಪೇತಿ ರುಷಾ ಜಗಾದ ॥

ಅನುವಾದ

ವೀರನಾದ ವೃತ್ರಾಸುರನು ಪ್ರಳಯಕಾಲದ ಅಗ್ನಿಯ ಜ್ವಾಲೆಗಳಂತೆ ತೀಕ್ಷ್ಣವಾಗಿದ್ದ ತುದಿಗಳುಳ್ಳ ತ್ರಿಶೂಲವನ್ನು ತಿರುಗಿಸುತ್ತಾ ಅತಿರಭಸದಿಂದ ಇಂದ್ರನ ಮೇಲೆ ಬೀಸಿ ಹೊಡೆದನು ಮತ್ತು ಕಡುಸಿಟ್ಟಿನಿಂದ ಸಿಂಹನಾದವನ್ನು ಮಾಡಿ ‘ಎಲವೋ ಪಾಪಿಯೇ! ಈಗ ನೀನು ಬದುಕಲಾರೆ’ ಎಂದು ಅಬ್ಬರಿಸಿದನು. ॥2॥

(ಶ್ಲೋಕ-3)

ಮೂಲಮ್

ಖ ಆಪತತ್ತದ್ವಿಚಲದ್ಗ್ರಹೋಲ್ಕವತ್
ನಿರೀಕ್ಷ್ಯ ದುಷ್ಪ್ರೇಕ್ಷ್ಯಮಜಾತವಿಕ್ಲವಃ ।
ವಜ್ರೇಣ ವಜ್ರೀ ಶತಪರ್ವಣಾಚ್ಛಿನದ್
ಭುಜಂ ಚ ತಸ್ಯೋರಗರಾಜಭೋಗಮ್ ॥

ಅನುವಾದ

ಆ ಭಯಂಕರ ತ್ರಿಶೂಲವು ಗ್ರಹ ಮತ್ತು ಉಲ್ಕೆಗಳಂತೆ ತಿರುಗುತ್ತಾ ಆಕಾಶದಲ್ಲಿ ಬರುತ್ತಿರು ವುದನ್ನು ನೋಡಿಯೂ ಇಂದ್ರನು ಸ್ವಲ್ಪವೂ ಅಳ್ಳೆದೆಯನ್ನು ತೋರಿ ಸಲಿಲ್ಲ. ಅಷ್ಟೇ ಅಲ್ಲದೆ ಆ ತ್ರಿಶೂಲದೊಂದಿಗೆ ವಾಸುಕಿ ನಾಗದಂತೆ ವಿಶಾಲವಾಗಿದ್ದ ವೃತ್ರಾಸುರನ ಭುಜವನ್ನು ನೂರು ಗಿಣ್ಣುಗಳಿಂದ ಬೆಳಗುತ್ತಿದ್ದ ತನ್ನ ವಜ್ರಾಯುಧದಿಂದ ಕತ್ತರಿಸಿ ಹಾಕಿದನು. ॥3॥

(ಶ್ಲೋಕ-4)

ಮೂಲಮ್

ಛಿನ್ನೈಕಬಾಹುಃ ಪರಿಘೇಣ ವೃತ್ರಃ
ಸಂರಬ್ಧ ಆಸಾದ್ಯ ಗೃಹೀತವಜ್ರಮ್ ।
ಹನೌ ತತಾಡೇಂದ್ರಮಥಾಮರೇಭಂ
ವಜ್ರಂ ಚ ಹಸ್ತಾನ್ನ್ಯಪತನ್ಮಘೋನಃ ॥

ಅನುವಾದ

ಒಂದು ತೋಳು ಕತ್ತರಿಸಿ ಹೋದುದರಿಂದ ವೃತ್ರಾಸುರನಿಗೆ ತಡೆಯಲಾರದಷ್ಟು ಕೋಪವುಂಟಾಯಿತು. ಆಗ ಅವನು ವಜ್ರಧಾರಿಯಾಗಿದ್ದ ಇಂದ್ರನ ಬಳಿಗೆ ಹೋಗಿ ಆತನ ಗದ್ದದ ಮೇಲೂ ಮತ್ತು ಐರಾವತದ ಮೇಲೂ ಪರಿಘಾಯುಧದಿಂದ ಬಲವಾಗಿ ಹೊಡೆದನು. ಅದರಿಂದ ಇಂದ್ರನ ಕೈಯಿಂದ ವಜ್ರಾ ಯುಧವು ಜಾರಿ ಬಿದ್ದು ಹೋಯಿತು. ॥4॥

(ಶ್ಲೋಕ-5)

ಮೂಲಮ್

ವೃತ್ರಸ್ಯ ಕರ್ಮಾತಿಮಹಾದ್ಭುತಂ ತತ್
ಸುರಾಸುರಾಶ್ಚಾರಣಸಿದ್ಧಸಂಘಾಃ ।
ಅಪೂಜಯಂಸ್ತತ್ಪುರುಹೂತಸಂಕಟಂ
ನಿರೀಕ್ಷ್ಯ ಹಾ ಹೇತಿ ವಿಚುಕ್ರುಶುರ್ಭೃಶಮ್ ॥

ಅನುವಾದ

ವೃತ್ರಾಸುರನ ಆ ಅದ್ಭುತವಾದ ಕರ್ಮವನ್ನು ಕಂಡು ದೇವತೆಗಳೂ, ಅಸುರರೂ, ಚಾರಣರೂ, ಸಿದ್ಧಗಣರೂ ಮುಂತಾದವರೆಲ್ಲರೂ ಆತನನ್ನು ಪ್ರಶಂಸೆಮಾಡಿದರು. ಆದರೆ ಅವರೇ ಇಂದ್ರನ ಸಂಕಟವನ್ನು ನೋಡಿ ಪದೇ-ಪದೇ ಅಯ್ಯೋ! ಅಯ್ಯೋ! ಎಂದು ಕೂಗಿಕೊಳ್ಳತೊಡಗಿದರು.॥5॥

(ಶ್ಲೋಕ-6)

ಮೂಲಮ್

ಇಂದ್ರೋ ನ ವಜ್ರಂ ಜಗೃಹೇ ವಿಲಜ್ಜಿತ-
ಶ್ಚ್ಯುತಂ ಸ್ವಹಸ್ತಾದರಿಸನ್ನಿಧೌ ಪುನಃ ।
ತಮಾಹ ವೃತ್ರೋ ಹರ ಆತ್ತವಜ್ರೋ
ಜಹಿ ಸ್ವಶತ್ರುಂ ನ ವಿಷಾದಕಾಲಃ ॥

ಅನುವಾದ

ಪರೀಕ್ಷಿತನೇ! ಆ ವಜ್ರಾಯುಧವು ಇಂದ್ರನ ಕೈಯಿಂದ ಜಾರಿ ವೃತ್ರಾಸುರನ ಬಳಿಯಲ್ಲೇ ಬಿದ್ದಿತ್ತು. ಅದರಿಂದ ಮಹೇಂದ್ರನಿಗೆ ಬಹಳ ನಾಚಿಕೆಯಾಗಿ ಅವನು ಅದನ್ನು ಮತ್ತೆ ಎತ್ತಿಕೊಳ್ಳಲಿಲ್ಲ. ಆಗ ವೃತ್ರಾಸುರನು ಹೇಳಿದನು ಇಂದ್ರನೇ! ವಜ್ರವನ್ನು ಎತ್ತಿಕೊಂಡು ನಿನ್ನ ಶತ್ರುವನ್ನು ಸಂಹರಿಸುವವನಾಗು. ಇದು ವಿಷಾದಪಡುವ ಕಾಲವಲ್ಲ.॥6॥

(ಶ್ಲೋಕ-7)

ಮೂಲಮ್

ಯುಯುತ್ಸತಾಂ ಕುತ್ರಚಿದಾತತಾಯಿನಾಂ
ಜಯಃ ಸದೈಕತ್ರ ನ ವೈ ಪರಾತ್ಮನಾಮ್ ।
ವಿನೈಕಮುತ್ಪತ್ತಿಲಯಸ್ಥಿತೀಶ್ವರಂ
ಸರ್ವಜ್ಞಮಾದ್ಯಂ ಪುರುಷಂ ಸನಾತನಮ್ ॥

ಅನುವಾದ

ಸರ್ವಜ್ಞನೂ, ಸನಾತನನೂ, ಜಗತ್ತಿನ ಉತ್ಪತ್ತಿ-ಸ್ಥಿತಿ-ಲಯಗಳಿಗೆ ಕಾರಣನಾಗಿರುವವನೂ ಆದ ಆದಿಪುರುಷನಾದ ಭಗವಂತನೊಬ್ಬನಿಗೇ ಎಂದೆಂದಿಗೂ ಜಯವು. ದೇಹಾಭಿಮಾನಿಗಳೂ, ಯುದ್ಧಕ್ಕಾಗಿ ಉತ್ಸುಕರಾದ ಆತತಾಯಿಗಳಿಗೆ ಯಾವಾಗಲೂ ಜಯವೇ ಸಿಗುತ್ತದೆ ಎಂಬುದಿಲ್ಲ. ಅವರು ಕೆಲವೊಮ್ಮೆ ಗೆದ್ದರೆ, ಕೆಲವೊಮ್ಮೆ ಸೋಲುತ್ತಾರೆ.॥7॥

(ಶ್ಲೋಕ-8)

ಮೂಲಮ್

ಲೋಕಾಃ ಸಪಾಲಾ ಯಸ್ಯೇಮೇ ಶ್ವಸಂತಿ ವಿವಶಾ ವಶೇ ।
ದ್ವಿಜಾ ಇವ ಶಿಚಾ ಬದ್ಧಾಃ ಸ ಕಾಲ ಇಹ ಕಾರಣಮ್ ॥

ಅನುವಾದ

ಈ ಎಲ್ಲ ಲೋಕಗಳೂ ಮತ್ತು ಲೋಕಪಾಲಕರೂ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಪಕ್ಷಿಗಳಂತೆ ಯಾವುದರ ವಶಕ್ಕೆ ಒಳಪಟ್ಟು ಚೇಷ್ಟೆ ಮಾಡು ತ್ತಿರುವರೋ ಆ ಕಾಲವೇ ಎಲ್ಲರ ಜಯ-ಪರಾಜಯಗಳಿಗೂ ಕಾರಣವು.॥8॥

(ಶ್ಲೋಕ-9)

ಮೂಲಮ್

ಓಜಃ ಸಹೋ ಬಲಂ ಪ್ರಾಣಮಮೃತಂ ಮೃತ್ಯುಮೇವ ಚ ।
ತಮಜ್ಞಾಯ ಜನೋ ಹೇತುಮಾತ್ಮಾನಂ ಮನ್ಯತೇ ಜಡಮ್ ॥

ಅನುವಾದ

ಆ ಕಾಲವೇ ಮನುಷ್ಯರ ಮನೋಬಲ, ಇಂದ್ರಿಯಬಲ, ದೇಹಬಲ, ಪ್ರಾಣಗಳು, ಜೀವನ ಮತ್ತು ಮೃತ್ಯುರೂಪವಾಗಿದೆ. ಮನುಷ್ಯನು ಇದನ್ನು ತಿಳಿಯದೆ ಈ ಜಡವಾದ ಶರೀರವೇ ಜಯಾಪಜಯಗಳ ಕಾರಣವೆಂದು ಭಾವಿಸುತ್ತಾನೆ.॥9॥

(ಶ್ಲೋಕ-10)

ಮೂಲಮ್

ಯಥಾ ದಾರುಮಯೀ ನಾರೀ ಯಥಾ ಯಂತ್ರಮಯೋ ಮೃಗಃ ।
ಏವಂ ಭೂತಾನಿ ಮಘವನ್ನೀಶತಂತ್ರಾಣಿ ವಿದ್ಧಿ ಭೋಃ ॥

ಅನುವಾದ

ಇಂದ್ರನೇ! ಮರದ ಬೊಂಬೆ ಮತ್ತು ಯಂತ್ರದ ಜಿಂಕೆಯು ಅವನ್ನು ಕುಣಿಸುವವನ ಕೈಯಲ್ಲಿರುವಂತೆಯೇ ನೀನು ಸಮಸ್ತ ಪ್ರಾಣಿಗಳು ಭಗವಂತನಿಗೆ ಅಧೀನವೆಂದು ತಿಳಿ.॥10॥

(ಶ್ಲೋಕ-11)

ಮೂಲಮ್

ಪುರುಷಃ ಪ್ರಕೃತಿರ್ವ್ಯಕ್ತಮಾತ್ಮಾ ಭೂತೇಂದ್ರಿಯಾಶಯಾಃ ।
ಶಕ್ನುವಂತ್ಯಸ್ಯ ಸರ್ಗಾದೌ ನ ವಿನಾ ಯದನುಗ್ರಹಾತ್ ॥

ಅನುವಾದ

ಶ್ರೀಭಗವಂತನ ಅನುಗ್ರಹವಿಲ್ಲದೇ ಪುರುಷ, ಪ್ರಕೃತಿ, ಮಹತ್ತತ್ತ್ವ, ಅಹಂಕಾರ, ಪಂಚ-ಭೂತಗಳು, ಇಂದ್ರಿಯಗಳು ಮತ್ತು ಅಂತಃಕರಣ ಚತುಷ್ಟಯ ಇವು ಯಾವುವೂ ಈ ವಿಶ್ವದ ಉತ್ಪತ್ತಿಯೇ ಮುಂತಾದವುಗಳನ್ನು ಮಾಡಲು ಸಮರ್ಥವಾಗುವುದಿಲ್ಲ. ॥11॥

(ಶ್ಲೋಕ-12)

ಮೂಲಮ್

ಅವಿದ್ವಾನೇವಮಾತ್ಮಾನಂ ಮನ್ಯತೇನೀಶಮೀಶ್ವರಮ್ ।
ಭೂತೈಃ ಸೃಜತಿ ಭೂತಾನಿ ಗ್ರಸತೇ ತಾನಿ ತೈಃ ಸ್ವಯಮ್ ॥

ಅನುವಾದ

ಭಗವಂತನೇ ಎಲ್ಲವನ್ನೂ ನಿಯಂತ್ರಣ ಮಾಡು ತ್ತಾನೆ ನಿಯಾಮಕನಾಗಿದ್ದಾನೆ ಎಂಬುದನ್ನು ಅರಿಯ ದವನೇ ಈ ಪರತಂತ್ರಜೀವನನ್ನು ಸ್ವತಂತ್ರಕರ್ತಾ ಭೋಕ್ತಾ ಎಂದು ತಿಳಿಯುತ್ತಾನೆ. ವಾಸ್ತವವಾಗಿ ಭಗವಂತನೇ ಪ್ರಾಣಿಗಳ ಮೂಲಕ ಪ್ರಾಣಿಗಳ ಉತ್ಪತ್ತಿಯನ್ನು, ಪ್ರಾಣಿಗಳ ಮೂಲಕವೇ ಪ್ರಾಣಿಗಳ ಸಂಹಾರ ಮಾಡಿಸುತ್ತಾನೆ.॥12॥

(ಶ್ಲೋಕ-13)

ಮೂಲಮ್

ಆಯುಃ ಶ್ರೀಃ ಕೀರ್ತಿರೈಶ್ವರ್ಯಮಾಶಿಷಃ ಪುರುಷಸ್ಯ ಯಾಃ ।
ಭವಂತ್ಯೇವ ಹಿ ತತ್ಕಾಲೇ ಯಥಾನಿಚ್ಛೋರ್ವಿಪರ್ಯಯಾಃ ॥

ಅನುವಾದ

ಸಮಯವು ವಿರುದ್ಧವಾಗಿದ್ದರೆ ಮನುಷ್ಯನು ಬಯಸದೇ ಇದ್ದರೂ ಮೃತ್ಯು ಅಪಕೀರ್ತಿ ಮುಂತಾದವುಗಳು ಅವನಿಗೆ ಒದಗುತ್ತವೆ. ಹಾಗೆಯೇ ಸಮಯವು ಅನುಕೂಲವಾಗಿ ದ್ದಾಗ ಅವನು ಬಯಸದೇ ಇದ್ದರೂ ಆಯಸ್ಸೂ, ಸಂಪತ್ತೂ, ಕೀರ್ತಿ, ಅಧಿಕಾರ ಮುಂತಾದ ಭೋಗಗಳು ಅವನಲ್ಲಿ ಬಂದು ಸೇರುವುವು.॥13॥

(ಶ್ಲೋಕ-14)

ಮೂಲಮ್

ತಸ್ಮಾದಕೀರ್ತಿಯಶಸೋರ್ಜಯಾಪಜಯಯೋರಪಿ ।
ಸಮಃ ಸ್ಯಾತ್ಸುಖದುಃಖಾಭ್ಯಾಂ ಮೃತ್ಯುಜೀವಿತಯೋಸ್ತಥಾ ॥

ಅನುವಾದ

ಆದುದರಿಂದ ಕೀರ್ತಿ-ಅಪಕೀರ್ತಿ, ಜಯ-ಪರಾಜಯ, ಸುಖ-ದುಃಖ, ಜೀವನ-ಮರಣ ಇವುಗಳಲ್ಲಿ ಯಾವುದೇ ಒಂದರ ಇಚ್ಛೆ-ಅನಿಚ್ಛೆ ಇರಿಸದೆ ಎಲ್ಲ ಪರಿಸ್ಥಿತಿಯಲ್ಲಿ ಸಮಭಾವದಿಂದ ಇರಬೇಕು. ಹರ್ಷ-ಶೋಕಗಳಿಗೆ ವಶೀಭೂತನಾಗಬಾರದು.॥14॥

(ಶ್ಲೋಕ-15)

ಮೂಲಮ್

ಸತ್ತ್ವಂ ರಜಸ್ತಮ ಇತಿ ಪ್ರಕೃತೇರ್ನಾತ್ಮನೋ ಗುಣಾಃ ।
ತತ್ರ ಸಾಕ್ಷಿಣಮಾತ್ಮಾನಂ ಯೋ ವೇದ ನ ಸ ಬಧ್ಯತೇ ॥

ಅನುವಾದ

ಸತ್ತ್ವ, ರಜ, ತಮ ಈ ತ್ರಿಗುಣಗಳು ಪ್ರಕೃತಿಯದಾಗಿವೆ. ಆತ್ಮನದಲ್ಲ. ಆದ್ದರಿಂದ ಆತ್ಮವನ್ನು ಅದರ ಸಾಕ್ಷಿ ಮಾತ್ರವೆಂದು ತಿಳಿ ಯುವಮನುಷ್ಯನಿಗೆ ಅವುಗಳ ಗುಣ-ದೋಷಗಳು ಅಂಟಿಕೊಳ್ಳುವುದಿಲ್ಲ. ॥15॥

(ಶ್ಲೋಕ-16)

ಮೂಲಮ್

ಪಶ್ಯ ಮಾಂ ನಿರ್ಜಿತಂ ಶಕ್ರ ವೃಕ್ಣಾಯುಧಭುಜಂ ಮೃಧೇ ।
ಘಟಮಾನಂ ಯಥಾಶಕ್ತಿ ತವ ಪ್ರಾಣಜಿಹೀರ್ಷಯಾ ॥

ಅನುವಾದ

ದೇವೇಂದ್ರನೇ! ನನ್ನನ್ನಾದರೋ ನೋಡು! ನೀನು ನನ್ನ ಕೈಯನ್ನು ಮತ್ತು ಶಸ್ತ್ರವನ್ನು ಕತ್ತರಿಸಿ ಒಂದು ರೀತಿಯಲ್ಲಿ ಸೋಲಿಸಿರುವೆ. ಹೀಗಿದ್ದರೂ ನಾನು ನಿನ್ನ ಪ್ರಾಣಗಳನ್ನು ಅಪಹರಿಸಲು ಯಥಾಶಕ್ತಿ ಪ್ರಯತ್ನವನ್ನು ಮಾಡುತ್ತಲೇ ಇದ್ದೇನೆ.॥16॥

(ಶ್ಲೋಕ-17)

ಮೂಲಮ್

ಪ್ರಾಣಗ್ಲಹೋಯಂ ಸಮರ ಇಷ್ವಕ್ಷೋ ವಾಹನಾಸನಃ ।
ಅತ್ರ ನ ಜ್ಞಾಯತೇಮುಷ್ಯ ಜಯೋಮುಷ್ಯ ಪರಾಜಯಃ ॥

ಅನುವಾದ

ಈ ಯುದ್ಧವು ಒಂದು ಜೂಜಿನ ಆಟವಾಗಿದೆ. ಇದರಲ್ಲಿ ಪ್ರಾಣವನ್ನೇ ಪಣಕ್ಕೆ ಒಡ್ಡಲಾಗುತ್ತದೆ. ಬಾಣಗಳ ದಾಳಗಳು ಎಸೆಯಲ್ಪಡುತ್ತವೆ. ವಾಹನವೇ ಹಾಸು-ಹಲಗೆಯಾಗಿದೆ. ಇದರಲ್ಲಿ ಯಾರು ಗೆಲ್ಲುವರು, ಯಾರು ಸೋಲುವರು ಎಂಬುದು ಮೊದಲಿಗೆ ಗೊತ್ತಾಗುವುದಿಲ್ಲ. ॥17॥

(ಶ್ಲೋಕ-18)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇಂದ್ರೋ ವೃತ್ರವಚಃ ಶ್ರುತ್ವಾ ಗತಾಲೀಕಮಪೂಜಯತ್ ।
ಗೃಹೀತವಜ್ರಃ ಪ್ರಹಸಂಸ್ತಮಾಹ ಗತವಿಸ್ಮಯಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವೃತ್ರಾಸುರನ ಈ ಸತ್ಯವಾದ ಹಾಗೂ ನಿಷ್ಕಪಟವಾದ ವಚನಗಳನ್ನು ಕೇಳಿ ಇಂದ್ರನು ಅವನನ್ನು ಆದರಿಸಿದನು ಮತ್ತು ತನ್ನ ವಜ್ರವನ್ನು ಎತ್ತಿಕೊಂಡನು. ಅನಂತರ ಯಾವುದೇ ಅಚ್ಚರಿಯಿಲ್ಲದೆ ನಸುನಗುತ್ತಾ ಅವನು ಹೇಳತೊಡಗಿದನು. ॥18॥

(ಶ್ಲೋಕ-19)

ಮೂಲಮ್ (ವಾಚನಮ್)

ಇಂದ್ರ ಉವಾಚ

ಮೂಲಮ್

ಅಹೋ ದಾನವ ಸಿದ್ಧೋಸಿ ಯಸ್ಯ ತೇ ಮತಿರೀದೃಶೀ ।
ಭಕ್ತಃ ಸರ್ವಾತ್ಮನಾತ್ಮಾನಂ ಸುಹೃದಂ ಜಗದೀಶ್ವರಮ್ ॥

ಅನುವಾದ

ದೇವೇಂದ್ರನು ಹೇಳಿದನು — ಭಲೇ ದಾನವರಾಜ! ನೀನು ನಿಜವಾಗಿ ಸಿದ್ಧನೇ ಆಗಿರುವೆ. ಅದಕ್ಕೇ ನಿನ್ನಲ್ಲಿ ಧೈರ್ಯ, ನಿಶ್ಚಯ, ಭಗವದ್ಭಾವ ವಿಲಕ್ಷಣವಾಗಿದೆ. ನೀನು ಸಮಸ್ತ ಪ್ರಾಣಿಗಳ ಸುಹೃದನಾದ ಆತ್ಮಸ್ವರೂಪನಾದ ಜಗದೀಶ್ವರನ ಭಕ್ತಿಯನ್ನು ಅನನ್ಯಭಾವದಿಂದ ಮಾಡಿರುವೆ. ॥19॥

(ಶ್ಲೋಕ-20)

ಮೂಲಮ್

ಭವಾನತಾರ್ಷೀನ್ಮಾಯಾಂ ವೈ ವೈಷ್ಣವೀಂ ಜನಮೋಹಿನೀಮ್ ।
ಯದ್ವಿಹಾಯಾಸುರಂ ಭಾವಂ ಮಹಾಪುರುಷತಾಂ ಗತಃ ॥

ಅನುವಾದ

ಖಂಡಿತವಾಗಿಯೂ ನೀನು ಜನರನ್ನು ಮೋಹಿಸು ವಂತಹ ಭಗವಂತನ ಮಾಯೆಯನ್ನು ದಾಟಿಬಿಟ್ಟಿರುವೆ. ಈಗಲಾದರೋ ನೀನು ಆಸುರೀ ಸ್ವಭಾವವನ್ನು ಬಿಟ್ಟು ಮಹಾಪುರುಷನಾಗಿರುವೆ. ॥20॥

(ಶ್ಲೋಕ-21)

ಮೂಲಮ್

ಖಲ್ವಿದಂ ಮಹದಾಶ್ಚರ್ಯಂ ಯದ್ರಜಃಪ್ರಕೃತೇಸ್ತವ ।
ವಾಸುದೇವೇ ಭಗವತಿ ಸತ್ತ್ವಾತ್ಮನಿ ದೃಢಾಮತಿಃ ॥

ಅನುವಾದ

ನೀನು ರಜೋಗುಣ ಪ್ರಕೃತಿಯವನಾಗಿದ್ದರೂ ವಿಶುದ್ಧ ಸತ್ತ್ವಸ್ವರೂಪನಾದ ಭಗವಾನ್ ವಾಸುದೇವನಲ್ಲಿ ನಿನ್ನ ಬುದ್ಧಿಯು ದೃಢವಾಗಿ ತೊಡಗಿದೆ, ಇದು ಖಂಡಿತವಾಗಿ ದೊಡ್ಡ ಆಶ್ಚರ್ಯದ ಮಾತಾಗಿದೆ. ॥21॥

(ಶ್ಲೋಕ-22)

ಮೂಲಮ್

ಯಸ್ಯ ಭಕ್ತಿರ್ಭಗವತಿ ಹರೌ ನಿಃಶ್ರೇಯಸೇಶ್ವರೇ ।
ವಿಕ್ರೀಡತೋಮೃತಾಂಭೋಧೌ ಕಿಂ ಕ್ಷುದ್ರೈಃ ಖಾತಕೋದಕೈಃ ॥

ಅನುವಾದ

ಪರಮ ಕಲ್ಯಾಣದ ಸ್ವಾಮಿಯಾದ ಭಗವಾನ್ ಶ್ರೀಹರಿಯ ಚರಣಗಳಲ್ಲಿ ಪ್ರೇಮಮಯ ಭಕ್ತಿಭಾವವನ್ನು ಇರಿಸುವವನಿಗೆ ಜಗತ್ತಿನ ಭೋಗಗಳ ಆವಶ್ಯಕತೆ ಏನಿದೆ? ಅಮೃತ ಸಮುದ್ರದಲ್ಲಿ ವಿಹರಿಸುವವನಿಗೆ ಕ್ಷುದ್ರವಾದ ಹಳ್ಳ-ಕೊಳ್ಳಗಳ ನೀರಿನಿಂದ ಏನು ಪ್ರಯೋಜನವಿದೆ? ॥22॥

(ಶ್ಲೋಕ-23)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಬ್ರುವಾಣಾವನ್ಯೋನ್ಯಂ ಧರ್ಮಜಿಜ್ಞಾಸಯಾ ನೃಪ ।
ಯುಯುಧಾತೇ ಮಹಾವೀರ್ಯಾವಿಂದ್ರವೃತ್ರೌ ಯುಧಾಂಪತೀ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜೇಂದ್ರ! ಹೀಗೆ ಮಹಾಪರಾಕ್ರಮಿಗಳಾದ, ಯೋಧಶ್ರೇಷ್ಠರಾದ ಇಂದ್ರನು ಮತ್ತು ವೃತ್ರಾಸುರನು ಧರ್ಮವನ್ನು ತಿಳಿಯುವ ಇಚ್ಛೆಯಿಂದ ಪರಸ್ಪರ ಮಾತಾಡುತ್ತಾ ಯುದ್ಧವನ್ನು ಮಾಡ ತೊಡಗಿದರು. ॥23॥

(ಶ್ಲೋಕ-24)

ಮೂಲಮ್

ಆವಿಧ್ಯ ಪರಿಘಂ ವೃತ್ರಃ ಕಾರ್ಷ್ಣಾಯಸಮರಿಂದಮಃ ।
ಇಂದ್ರಾಯ ಪ್ರಾಹಿಣೋದ್ಘೋರಂ ವಾಮಹಸ್ತೇನ ಮಾರಿಷ ॥

ಅನುವಾದ

ರಾಜನೇ! ಶತ್ರುಸಂಹಾರಕನಾದ ವೃತ್ರಾಸುರನು ಉಕ್ಕಿನಿಂದ ಮಾಡಿದ ಭಯಂಕರವಾದ ಒಂದು ಪರಿಘಾಯುಧವನ್ನು ಎಡಗೈಯಲ್ಲಿ ಎತ್ತಿಕೊಂಡು ಆಕಾಶದಲ್ಲಿ ಗಿರ-ಗಿರನೆ ತಿರುಗಿಸುತ್ತಾ ಇಂದ್ರನ ಮೇಲೆ ಎಸೆದನು. ॥24॥

(ಶ್ಲೋಕ-25)

ಮೂಲಮ್

ಸ ತು ವೃತ್ರಸ್ಯ ಪರಿಘಂ ಕರಂ ಚ ಕರಭೋಪಮಮ್ ।
ಚಿಚ್ಛೇದ ಯುಗಪದ್ದೇವೋ ವಜ್ರೇಣ ಶತಪರ್ವಣಾ ॥

ಅನುವಾದ

ಆದರೆ ದೇವೇಂದ್ರನು ವೃತ್ರಾಸುರನ ಆ ಪರಿಘ ಹಾಗೂ ಆನೆಯ ಸೊಂಡಿಲನಂತಿರುವ ಅವನ ಭುಜವನ್ನು ತನ್ನ ನೂರುಗಿಣ್ಣುಗಳಿಂದ ಕೂಡಿದ ವಜ್ರಾಯುಧದಿಂದ ಎರಡನ್ನೂ ಒಟ್ಟಿಗೆ ಕತ್ತರಿಸಿಬಿಟ್ಟನು.॥25॥

(ಶ್ಲೋಕ-26)

ಮೂಲಮ್

ದೋರ್ಭ್ಯಾಮುತ್ಕೃತ್ತಮೂಲಾಭ್ಯಾಂ ಬಭೌ ರಕ್ತಸ್ರವೋಸುರಃ ।
ಛಿನ್ನಪಕ್ಷೋ ಯಥಾ ಗೋತ್ರಃ ಖಾದ್ಭ್ರಷ್ಟೋ ವಜ್ರಿಣಾ ಹತಃ ॥

ಅನುವಾದ

ಹೀಗೆ ಎರಡೂ ತೋಳುಗಳೂ ಬುಡಸಹಿತ ಕತ್ತರಿಸಲ್ಪಡಲು ವೃತ್ರಾಸುರನ ಎಡ-ಬಲ ಹೆಗಲುಗಳಿಂದ ರಕ್ತದ ಧಾರೆ ಹರಿಯ ತೊಡಗಿತು. ಆಗ ಅವನು ಇಂದ್ರನ ವಜ್ರಾಯುಧದ ಏಟಿನಿಂದ ರೆಕ್ಕೆಗಳು ಕತ್ತರಿಸಿ ಹೋಗಿ ಆಕಾಶದಿಂದ ನೆಲಕ್ಕುರುಳಿದ ಮಹಾ ಪರ್ವತವೋ ಎಂಬಂತೆ ಕಾಣುತ್ತಿದ್ದವು. ॥26॥

(ಶ್ಲೋಕ-27)

ಮೂಲಮ್

ಕೃತ್ವಾಧರಾಂ ಹನುಂ ಭೂವೌ ದೈತ್ಯೋ ದಿವ್ಯತ್ತರಾಂ ಹನುಮ್ ।
ನಭೋಗಂಭೀರವಕೇಣ ಲೇಲಿಹೋಲ್ಬಣಜಿಹ್ವಯಾ ॥

(ಶ್ಲೋಕ-28)

ಮೂಲಮ್

ದಂಷ್ಟ್ರಾಭಿಃ ಕಾಲಕಲ್ಪಾಭಿರ್ಗ್ರಸನ್ನಿವ ಜಗತಯಮ್ ।
ಅತಿಮಾತ್ರಮಹಾಕಾಯ ಆಕ್ಷಿಪಂಸ್ತರಸಾ ಗಿರೀನ್ ॥

(ಶ್ಲೋಕ-29)

ಮೂಲಮ್

ಗಿರಿರಾಟ್ಪಾದಚಾರೀವ ಪದ್ಭ್ಯಾಂ ನಿರ್ಜರಯನ್ಮಹೀಮ್ ।
ಜಗ್ರಾಸ ಸ ಸಮಾಸಾದ್ಯ ವಜ್ರಿಣಂ ಸಹವಾಹನಮ್ ॥

(ಶ್ಲೋಕ-30)

ಮೂಲಮ್

ಮಹಾಪ್ರಾಣೋ ಮಹಾವೀರ್ಯೋ ಮಹಾಸರ್ಪ ಇವ ದ್ವಿಪಮ್ ।
ವೃತ್ರಗ್ರಸ್ತಂ ತಮಾಲಕ್ಷ್ಯ ಸಪ್ರಜಾಪತಯಃ ಸುರಾಃ ।
ಹಾ ಕಷ್ಟಮಿತಿ ನಿರ್ವಿಣ್ಣಾಶ್ಚುಕ್ರುಶುಃ ಸಮಹರ್ಷಯಃ ॥

ಅನುವಾದ

ಆಗ ಕಾಲುಗಳಿಂದ ನಡೆದಾಡುವ ಪರ್ವತರಾಜನಂತೆ ಅತಿ ದೀರ್ಘಕಾಯನಾಗಿದ್ದ ಆ ವೃತ್ರಾಸುರನು ತನ್ನ ಕೆಳದವಡೆಯನ್ನು ಭೂಮಿಯಲ್ಲಿಯೂ, ಮೇಲಿನ ದವಡೆಯನ್ನು ಸ್ವರ್ಗಕ್ಕೂ ಚಾಚಿ, ಆಕಾಶದಂತೆ ಆಳವಾಗಿದ್ದ ಬಾಯಿಯು ಸರ್ಪದಂತೆ ಭೀಕರವಾಗಿದ್ದ ನಾಲಿಗೆ ಮತ್ತು ಮೃತ್ಯುವಿಗೆ ಸಮನಾದ ಕೋರೆದಾಡೆಗಳು ಇವುಗಳಿಂದ ಮೂರು ಲೋಕಗಳನ್ನೇ ನುಂಗಿಹಾಕುವನೋ ಎಂಬಂತೆ ತನ್ನ ಕಾಲುಗಳಿಂದ ಭೂಮಿಯನ್ನು ಅಪ್ಪಳಿಸುತ್ತಾ, ಮಹಾವೇಗದಿಂದ ಪರ್ವತಗಳನ್ನು ತಲೆ ಕೆಳಗಾಗಿಸುತ್ತಾ ಇಂದ್ರನ ಬಳಿಗೆ ನುಗ್ಗಿ ಬಂದು ಅತಿಪರಾಕ್ರಮಿಯೂ, ಬಲಶಾಲಿಯೂ ಆದ ರಾಕ್ಷಸ ಕಾಯದ ಹೆಬ್ಬಾವೊಂದು ಆನೆಯನ್ನು ನುಂಗಿಹಾಕುತ್ತಿದೆಯೇ ಎಂಬಂತೆ ಇಂದ್ರನನ್ನು ಅವನ ವಾಹನ ಐರಾವತದೊಂದಿಗೆ ನುಂಗಿ ಬಿಟ್ಟನು. ಹೀಗೆ ವೃತ್ರಾಸುರನು ಇಂದ್ರನನ್ನು ನುಂಗಿದ್ದನ್ನು ಕಂಡು ಪ್ರಜಾಪತಿಗಳೂ, ಮಹರ್ಷಿಗಳೂ, ದೇವತೆಗಳೂ ಕಡುದುಃಖದಿಂದ ಅಯ್ಯೋ! ಅಯ್ಯೋ! ಎಂತಹ ಅನರ್ಥವಾಯಿತು? ಎಂದು ದುಃಖಿಸತೊಡಗಿದ್ದರು. ॥27-30॥

(ಶ್ಲೋಕ-31)

ಮೂಲಮ್

ನಿಗೀರ್ಣೋಪ್ಯಸುರೇಂದ್ರೇಣ ನ ಮಮಾರೋದರಂ ಗತಃ ।
ಮಹಾಪುರುಷಸನ್ನದ್ಧೋ ಯೋಗಮಾಯಾಬಲೇನ ಚ ॥

ಅನುವಾದ

ಆದರೆ ದೇವರಾಜನಿಗೆ ಯಾವ ಅಪಾಯವೂ ಆಗಲಿಲ್ಲ. ನಾರಾಯಣ ಕವಚವೆಂಬ ಮಹಾಪುರುಷ ವಿದ್ಯೆಯು ಆತನನ್ನು ಸಂರಕ್ಷಿಸಿತು. ಯೋಗ ಬಲವೂ ಆತನನ್ನು ಕಾಪಾಡಿತು. ಆದುದರಿಂದ ವೃತ್ರಾಸುರನು ಇಂದ್ರನನ್ನು ನುಂಗಿದ್ದರೂ, ಅವನು ಹೊಟ್ಟೆಯೊಳಗೆ ಸೇರಿದ್ದರೂ ಸಾಯಲಿಲ್ಲ. ॥31॥

(ಶ್ಲೋಕ-32)

ಮೂಲಮ್

ಭಿತ್ತ್ವಾ ವಜ್ರೇಣ ತತ್ಕುಕ್ಷಿಂ ನಿಷ್ಕ್ರಮ್ಯ ಬಲಭಿದ್ವಿಭುಃ ।
ಉಚ್ಚಕರ್ತ ಶಿರಃ ಶತ್ರೋರ್ಗಿರಿಶೃಂಗಮಿವೌಜಸಾ ॥

ಅನುವಾದ

ಅವನು ತನ್ನ ವಜ್ರದಿಂದ ಆತನ ಹೊಟ್ಟೆಯನ್ನು ಸೀಳಿಹಾಕಿ ಹೊರಕ್ಕೆ ಬಂದು ಕಡು ರಭಸದಿಂದ ಪರ್ವತ ಶಿಖರದಂತೆ ಉನ್ನತವಾಗಿದ್ದ ಆತನ ತಲೆಯನ್ನು ಕಡಿದುಹಾಕಿದನು.॥32॥

(ಶ್ಲೋಕ-33)

ಮೂಲಮ್

ವಜ್ರಸ್ತು ತತ್ಕಂಧರಮಾಶುವೇಗಃ
ಕೃಂತನ್ಸಮಂತಾತ್ಪರಿವರ್ತಮಾನಃ ।
ನ್ಯಪಾತಯತ್ತಾವದಹರ್ಗಣೇನ
ಯೋ ಜ್ಯೋತಿಷಾಮಯನೇ ವಾರ್ತ್ರಹತ್ಯೇ ॥

ಅನುವಾದ

ಗ್ರಹಗಳಿಗೆ ಉತ್ತರಾಯಣ-ದಕ್ಷಿಣಾಯನ ಗತಿಗಳಿಗೆ ತಗಲುವಷ್ಟು ಕಾಲದಲ್ಲಿ, ಅಂದರೆ ಒಂದು ವರ್ಷದ ಅವಧಿಯಲ್ಲಿ ವೃತ್ರ ಸಂಹಾರಯೋಗವು ಒದಗಿದಾಗ ತೀವ್ರವೇಗದಿಂದ ಸುತ್ತು ತ್ತಿದ್ದ ವಜ್ರಾಯುಧವು ಆತನ ಕುತ್ತಿಗೆಯನ್ನು ಎಲ್ಲ ಕಡೆ ಗಳಿಂದಲೂ ಕತ್ತರಿಸಿ ಭೂಮಿಯಲ್ಲಿ ಬೀಳಿಸಿತು. ॥33॥

(ಶ್ಲೋಕ-34)

ಮೂಲಮ್

ತದಾ ಚ ಖೇ ದುಂದಭಯೋ ವಿನೇದು-
ರ್ಗಂಧರ್ವಸಿದ್ಧಾಃ ಸಮಹರ್ಷಿಸಂಘಾಃ ।
ವಾರ್ತ್ರಘ್ನಲಿಂಗೈಸ್ತಮಭಿಷ್ಟುವಾನಾ
ಮಂತ್ರೈರ್ಮುದಾ ಕುಸುಮೈರಭ್ಯವರ್ಷನ್ ॥

ಅನುವಾದ

ಆಗ ಆಕಾಶದಲ್ಲಿ ದೇವದುಂದುಭಿಗಳು ಮೊಳಗಿದವು. ಮಹರ್ಷಿಗಳೊಡನೆ ಗಂಧರ್ವರು, ಸಿದ್ಧರು ಮುಂತಾದವರು ಪರಮಾನಂದಭರಿತರಾಗಿ ವೃತ್ರಸಂಹಾರವನ್ನು ಕೊಂಡಾಡುವ ದಿವ್ಯ ಮಂತ್ರಗಳಿಂದ ದೇವರಾಜನನ್ನು ಸ್ತುತಿಸುತ್ತಾ ಹೂಮಳೆಯನ್ನು ಕರೆಯತೊಡಗಿದರು. ॥34॥

(ಶ್ಲೋಕ-35)

ಮೂಲಮ್

ವೃತ್ರಸ್ಯ ದೇಹಾನ್ನಿಷ್ಕ್ರಾಂತಮಾತ್ಮಜ್ಯೋತಿರರಿಂದಮ
ಪಶ್ಯತಾಂ ಸರ್ವಲೋಕಾನಾಮಲೋಕಂ ಸಮಪದ್ಯತ ॥

ಅನುವಾದ

ಶತ್ರು ದಮನ ಪರೀಕ್ಷಿತನೇ! ಆಗ ವೃತ್ರಾಸುರನ ದೇಹದಿಂದ ಆತ್ಮ ಜ್ಯೋತಿಯು ಹೊರಬಂದು ಇಂದ್ರಾದಿ ದೇವತೆಗಳು ನೋಡು-ನೋಡುತ್ತಿರುವಂತೆಯೇ ಸರ್ವಲೋಕಾತೀತ ಭಗವಂತನ ಸ್ವರೂಪದಲ್ಲಿ ಲೀನವಾಗಿ ಹೋಯಿತು.॥35॥

ಅನುವಾದ (ಸಮಾಪ್ತಿಃ)

ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ವೃತ್ರವಧೋನಾಮ ದ್ವಾದಶೋಽಧ್ಯಾಯಃ ॥12॥