[ಹನ್ನೊಂದನೆಯ ಅಧ್ಯಾಯ]
ಭಾಗಸೂಚನಾ
ವೃತ್ರಾಸುರನ ವೀರವಾಣಿ ಮತ್ತು ಅವನು ಮಾಡಿದ ಭಗವತ್ ಸ್ತುತಿ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತ ಏವಂ ಶಂಸತೋ ಧರ್ಮಂ ವಚಃ ಪತ್ಯುರಚೇತಸಃ ।
ನೈವಾಗೃಹ್ಣನ್ಭಯತ್ರಸ್ತಾಃ ಪಲಾಯನಪರಾ ನೃಪ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಎಲೈ ರಾಜೇಂದ್ರನೇ! ಅಸುರರ ಸೈನ್ಯವು ಭಯಗೊಂಡು ಪಲಾಯನ ಮಾಡುತ್ತಿತ್ತು. ತನ್ನ ಒಡೆಯನ ಧರ್ಮಾನುಕೂಲ ವಚನಗಳ ಕಡೆಗೆ ಗಮನ ಕೊಡದಷ್ಟು ಅವರು ವಿವೇಕಪ್ರಜ್ಞೆ ಕಳೆದುಕೊಂಡಿದ್ದರು. ॥1॥
(ಶ್ಲೋಕ-2)
ಮೂಲಮ್
ವಿಶೀರ್ಯಮಾಣಾಂ ಪೃತನಾಮಾಸುರೀಮಸುರರ್ಷಭಃ ।
ಕಾಲಾನುಕೂಲೈಸಿದಶೈಃ ಕಾಲ್ಯಮಾನಾಮನಾಥವತ್ ॥
(ಶ್ಲೋಕ-3)
ಮೂಲಮ್
ದೃಷ್ಟ್ವಾತಪ್ಯತ ಸಂಕ್ರುದ್ಧ ಇಂದ್ರಶತ್ರುರಮರ್ಷಿತಃ ।
ತಾನ್ನಿವಾರ್ಯೌಜಸಾ ರಾಜನ್ನಿರ್ಭರ್ತ್ಸ್ಯೇದಮುವಾಚ ಹ ॥
ಅನುವಾದ
ದೇವತೆಗಳಿಗೆ ಕಾಲವು ಅನುಕೂಲವಾದ್ದರಿಂದ ಅವರು ಅಸುರರ ಸೇನೆಯನ್ನು ಧ್ವಂಸ ಮಾಡುತ್ತಿದ್ದಾರೆ ಮತ್ತು ಅಸುರ ಸೈನ್ಯವು ಅನಾಯಕವಾದಂತೆ ಚೆಲ್ಲಾ-ಪಿಲ್ಲಿ ಯಾಗುತ್ತಿದೆ ಎಂಬುದನ್ನು ಕಂಡು ವೃತ್ರಾಸುರನಿಗೆ ಮಿತಿ ಮೀರಿದ ಕ್ರೋಧವು ಉಂಟಾಯಿತು. ರಾಜನೇ! ಆತನಿಗೆ ದೇವತೆಗಳ ಉತ್ಸಾಹವನ್ನೂ ತನ್ನ ಸೈನ್ಯದ ದೈನ್ಯವನ್ನೂ ತಡೆದುಕೊಳ್ಳಲಾಗಲಿಲ್ಲ. ಆಗ ಅವನು ಬಲಾತ್ಕಾರದಿಂದ ದೇವಸೇನೆಯನ್ನು ಮುನ್ನುಗ್ಗದಂತೆ ತಡೆದು, ಗದರಿಸುತ್ತಾ ಹೀಗೆಂದನು. ॥2-3॥
(ಶ್ಲೋಕ-4)
ಮೂಲಮ್
ಕಿಂ ವ ಉಚ್ಚರಿತೈರ್ಮಾತುರ್ಧಾವದ್ಭಿಃ ಪೃಷ್ಠತೋ ಹತೈಃ ।
ನ ಹಿ ಭೀತವಧಃ ಶ್ಲಾಘ್ಯೋ ನ ಸ್ವರ್ಗ್ಯಃ ಶೂರಮಾನಿನಾಮ್ ॥
ಅನುವಾದ
ಕ್ಷುದ್ರರಾದ ದೇವತೆಗಳಿರಾ! ರಣಭೂಮಿಯಲ್ಲಿ ಬೆನ್ನುತೋರಿಸಿ ಓಡಿಹೋಗುತ್ತಿರುವ ಹೇಡಿಗಳ ಮೇಲೆ ಹಿಂದುಗಡೆಯಿಂದ ಪ್ರಹಾರ ಮಾಡು ವುದರಿಂದ ಏನು ಲಾಭ? ಅಂಜುಬುರುಕರು ಒಳ್ಳೆಯ ತಂದೆ-ತಾಯಿಗಳ ಮಕ್ಕಳೇ ಅಲ್ಲ. ಅವರ ದೇಹದಿಂದ ಹೊರಹಾಕಲ್ಪಟ್ಟ ಮಲ-ಮೂತ್ರಗಳಿಗೆ ಸಮಾನರು. ಆದರೆ ತಮ್ಮನ್ನು ಶೂರ ವೀರರೆಂದು ತಿಳಿದಿರುವ ನಿಮ್ಮಂತಹವರಿಗೂ ಹೇಡಿಗಳನ್ನು ಹೊಡೆಯುವುದು ಪ್ರಶಂಸಾರ್ಹ ಮಾತಲ್ಲ. ಇದರಿಂದ ನಿಮಗೆ ಸ್ವರ್ಗವೂ ದೊರೆಯಲಾರದು. ॥4॥
(ಶ್ಲೋಕ-5)
ಮೂಲಮ್
ಯದಿ ವಃ ಪ್ರಧನೇ ಶ್ರದ್ಧಾ ಸಾರಂ ವಾ ಕ್ಷುಲ್ಲಕಾ ಹೃದಿ ।
ಅಗ್ರೇ ತಿಷ್ಠತ ಮಾತ್ರಂ ಮೇ ನ ಚೇದ್ಗ್ರಾಮ್ಯಸುಖೇ ಸ್ಪೃಹಾ ॥
ಅನುವಾದ
ನಿಮ್ಮ ಮನಸ್ಸಿನಲ್ಲಿ ಯುದ್ಧಮಾಡ ಬೇಕೆಂಬ ಶಕ್ತಿ, ಉತ್ಸಾಹ ವಿದ್ದರೆ, ಇನ್ನು ಬದುಕುಳಿದು ವಿಷಯಸುಖವನ್ನು ಭೋಗಿ ಸುವ ಆಸೆ ಇಲ್ಲದಿದ್ದರೆ ಸ್ವಲ್ಪಹೊತ್ತು ನನ್ನ ಮುಂದೆ ನಿಲ್ಲಿರಿ. ಯುದ್ಧದ ರುಚಿಯನ್ನು ಸವಿಯುವಿರಂತೆ. ॥5॥
(ಶ್ಲೋಕ-6)
ಮೂಲಮ್
ಏವಂ ಸುರಗಣಾನ್ಕ್ರುದ್ಧೋ ಭೀಷಯನ್ವಪುಷಾ ರಿಪೂನ್ ।
ವ್ಯನದತ್ಸುಮಹಾಪ್ರಾಣೋ ಯೇನ ಲೋಕಾ ವಿಚೇತಸಃ ॥
ಅನುವಾದ
ಪರೀಕ್ಷಿತನೇ! ಮಹಾವೀರಾಗ್ರಣಿಯಾದ ವೃತ್ರಾಸುರನು ಕ್ರೋಧದಿಂದ ಬೆಂಕಿಯ ಕಿಡಿಯನ್ನು ಕಾರುತ್ತಾ ತನ್ನ ಭೀಕರ ರೂಪದಿಂದಲೂ, ವೀರವಾಣಿಯಿಂದಲೂ ದೇವತೆಗಳನ್ನು ಹೆದರಿಸುತ್ತಾ ಗಟ್ಟಿಯಾಗಿ ಸಿಂಹನಾದವನ್ನು ಮಾಡಿದನು. ಅದನ್ನು ಕೇಳಿದ ಅನೇಕ ಜನರು ಮೂರ್ಛಿತರಾದರು. ॥6॥
(ಶ್ಲೋಕ-7)
ಮೂಲಮ್
ತೇನ ದೇವಗಣಾಃ ಸರ್ವೇ ವೃತ್ರವಿಸ್ಫೋಟನೇನ ವೈ ।
ನಿಪೇತುರ್ಮೂರ್ಚ್ಛಿತಾ ಭೂವೌ ಯಥೈವಾಶನಿನಾ ಹತಾಃ ॥
ಅನುವಾದ
ವೃತ್ರಾಸುರನ ಆ ಭಯಂಕರ ಗರ್ಜನೆಯಿಂದ ಎಲ್ಲ ದೇವತೆಗಳು ಸಿಡಿಲುಹೊಡೆದಂತೆ ಮೂರ್ಛಿತರಾಗಿ ನೆಲಕ್ಕುರುಳಿದರು. ॥7॥
(ಶ್ಲೋಕ-8)
ಮೂಲಮ್
ಮಮರ್ದ ಪದ್ಭ್ಯಾಂ ಸುರಸೈನ್ಯಮಾತುರಂ
ನಿಮೀಲಿತಾಕ್ಷಂ ರಣರಂಗದುರ್ಮದಃ ।
ಗಾಂ ಕಂಪಯನ್ನುದ್ಯತಶೂಲ ಓಜಸಾ
ನಾಲಂ ವನಂ ಯೂಥಪತಿರ್ಯಥೋನ್ಮದಃ ॥
ಅನುವಾದ
ಮತ್ತೇರಿದ ಗಜರಾಜನು ಜೊಂಡು ಹುಲ್ಲಿನ ಕಾಡನ್ನು ತುಳಿದು ಹಾಕುವಂತೆ ಯುದ್ಧೋತ್ಸಾಹದಿಂದ ಕೊಬ್ಬಿದ ಆ ವೃತ್ರಾಸುರನು ಕೈಯಲ್ಲಿ ತ್ರಿಶೂಲವನ್ನು ಎತ್ತಿಕೊಂಡು, ಕಣ್ಣುಮುಚ್ಚಿ ಮೂರ್ಛಿತರಾಗಿ ಬಿದ್ದಿದ್ದ ದೇವತೆಗಳ ಸೈನ್ಯವನ್ನು ಕಾಲಿನಿಂದ ಮೆಟ್ಟಿ ಮಡುಹಿದನು. ಆತನ ವೇಗಕ್ಕೆ ಭೂಮಿಯು ನಡುಗ ತೊಡಗಿತು. ॥8॥
(ಶ್ಲೋಕ-9)
ಮೂಲಮ್
ವಿಲೋಕ್ಯ ತಂ ವಜ್ರಧರೋತ್ಯಮರ್ಷಿತಃ
ಸ್ವಶತ್ರವೇಭಿದ್ರವತೇ ಮಹಾಗದಾಮ್ ।
ಚಿಕ್ಷೇಪ ತಾಮಾಪತತೀಂ ಸುದುಃಸಹಾಂ
ಜಗ್ರಾಹ ವಾಮೇನ ಕರೇಣ ಲೀಲಯಾ ॥
ಅನುವಾದ
ವಜ್ರಪಾಣಿಯಾದ ದೇವೇಂದ್ರನಿಗೆ ಅದನ್ನುಸಹಿಸಲಾಗಲಿಲ್ಲ. ಅವನು ತನ್ನತ್ತ ನುಗ್ಗಿ ಬಂದಾಗ ಇಂದ್ರನು ಇನ್ನೂ ಕ್ರುದ್ಧನಾಗಿ ಶತ್ರುವಿನ ಮೇಲೆ ದೊಡ್ಡ ದೊಂದು ಗದೆಯನ್ನು ಬೀಸಿ ಒಗೆದನು. ಆದರೆ ಆ ವೃತ್ರಾಸುರನು ಅದು ತನ್ನ ಬಳಿಗೆ ಬರುವ ಮೊದಲೇ ಅದನ್ನು ಲೀಲಾಜಾಲವಾಗಿ ಎಡಗೈಯಿಂದ ಹಿಡಿದುಬಿಟ್ಟನು. ॥9॥
(ಶ್ಲೋಕ-10)
ಮೂಲಮ್
ಸ ಇಂದ್ರಶತ್ರುಃ ಕುಪಿತೋ ಭೃಶಂ ತಯಾ
ಮಹೇಂದ್ರವಾಹಂ ಗದಯೋಗ್ರವಿಕ್ರಮಃ ।
ಜಘಾನ ಕುಂಭಸ್ಥಲ ಉನ್ನದನ್ಮೃಧೇ
ತತ್ಕರ್ಮ ಸರ್ವೇ ಸಮಪೂಜಯನ್ನೃಪ ॥
ಅನುವಾದ
ರಾಜನೇ! ಪರಮ ಪರಾಕ್ರಮಿ ವೃತ್ರಾಸುರನು ಕೋಪದಿಂದ ಕಿಡಿ-ಕಿಡಿಯಾಗಿ ಘೋರವಾಗಿ ಗರ್ಜಿಸುತ್ತಾ ಅದೇ ಗದೆಯಿಂದ ಇಂದ್ರನ ವಾಹನ ಐರಾವತದ ಮಸ್ತಕದ ಮೇಲೆ ಬಿರುಸಿನಿಂದ ಬಡಿದನು. ಆತನ ಆ ಶೌರ್ಯವನ್ನು ಎಲ್ಲರೂ ‘ಭಲೇ!’ ಎಂದು ಹೊಗಳತೊಡಗಿದರು.॥10॥
(ಶ್ಲೋಕ-11)
ಮೂಲಮ್
ಐರಾವತೋ ವೃತ್ರಗದಾಭಿಮೃಷ್ಟೋ
ವಿಘೂರ್ಣಿತೋದ್ರಿಃ ಕುಲಿಶಾಹತೋ ಯಥಾ ।
ಅಪಾಸರದ್ಭಿನ್ನಮುಖಃ ಸಹೇಂದ್ರೋ
ಮುಂಚನ್ನಸೃಕ್ಸಪ್ತಧನುರ್ಭೃಶಾರ್ತಃ ॥
ಅನುವಾದ
ವೃತ್ರಾ ಸುರನು ಬೀಸಿದ ಗದೆಯ ಏಟಿನಿಂದ ಐರಾವತವು ವಜ್ರದಿಂದ ಹೊಡೆಯಲ್ಪಟ್ಟ ಪರ್ವತದಂತೆ ಘಾಸಿಗೊಂಡು ಒದ್ಡಾಡ ತೊಡಗಿತು. ತಲೆಯು ಒಡೆದು ಹೋದುದರಿಂದ ರಕ್ತವನ್ನು ಕಾರುತ್ತಾ, ನೋವಿನಿಂದ ನರಳುತ್ತಾ ಆ ಇಂದ್ರ ವಾಹನವು ತನ್ನ ಮೇಲೆ ಕುಳಿತಿದ್ದ ಪ್ರಭುವಿನೊಡನೆ ಇಪ್ಪತ್ತೆಂಟು ಕೈಗಳಷ್ಟು ಹಿಂದೆ ಸರಿಯಿತು. ॥11॥
(ಶ್ಲೋಕ-12)
ಮೂಲಮ್
ನ ಸನ್ನವಾಹಾಯ ವಿಷಣ್ಣಚೇತಸೇ
ಪ್ರಾಯುಂಕ್ತಭೂಯಃ ಸ ಗದಾಂ ಮಹಾತ್ಮಾ ।
ಇಂದ್ರೋಮೃತಸ್ಯಂದಿಕರಾಭಿಮರ್ಶ-
ವೀತವ್ಯಥಕ್ಷತವಾಹೋವತಸ್ಥೇ ॥
ಅನುವಾದ
ತನ್ನ ದಿವ್ಯವಾಹನವು ಮೂರ್ಛೆಗೊಂಡಿದ್ದನ್ನು ಕಂಡು ಇಂದ್ರನಿಗೆ ಮತ್ತಷ್ಟು ಕಳವಳ ವಾಯಿತು. ಯುದ್ಧಧರ್ಮವನ್ನು ಅರಿತಿದ್ದ ಅಸುರೇಂದ್ರನು ಇದನ್ನು ಕಂಡು ಅವನ ಮೇಲೆ ಮತ್ತೆ ಗದೆಯನ್ನು ಪ್ರಯೋಗಿಸಲಿಲ್ಲ. ಆ ವೇಳೆಗೆ ಇಂದ್ರನು ಅಮೃತವು ಸೂಸುತ್ತಿದ್ದ ತನ್ನ ಹಸ್ತದ ಸ್ಪರ್ಶದಿಂದ ಗಾಯಗೊಂಡ ಐರಾವತದ ನೋವನ್ನು ಗುಣಪಡಿಸಿ, ಮತ್ತೆ ಯುದ್ಧಭೂಮಿಗೆ ಬಂದು ಶತ್ರುವನ್ನೆದುರಿಸಿದನು.॥12॥
ಮೂಲಮ್
(ಶ್ಲೋಕ-13)
ಮೂಲಮ್
ಸ ತಂ ನೃಪೇಂದ್ರಾಹವಕಾಮ್ಯಯಾ ರಿಪುಂ
ವಜ್ರಾಯುಧಂ ಭ್ರಾತೃಹಣಂ ವಿಲೋಕ್ಯ ।
ಸ್ಮರಂಶ್ಚ ತತ್ಕರ್ಮ ನೃಶಂಸಮಂಹಃ
ಶೋಕೇನ ಮೋಹೇನ ಹಸಂಜಗಾದ ॥
ಅನುವಾದ
ಪರೀಕ್ಷಿತನೇ! ತನ್ನ ಅಣ್ಣನಾದ ವಿಶ್ವರೂಪನನ್ನು ವಧಿಸಿದ ಶತ್ರುವಾದ ಇಂದ್ರನು ಯುದ್ಧಕ್ಕಾಗಿ ಕೈಯಲ್ಲಿ ವಜ್ರವನ್ನು ಧರಿಸಿಕೊಂಡು ಪುನಃ ಮುಂದೆ ಬಂದಿರುವುದನ್ನು ವೃತ್ರಾಸುರನು ನೋಡಿದಾಗ ಅವನಿಗೆ ಅವನ ಕ್ರೂರ ಪಾಪಕರ್ಮವು ನೆನಪಾಗಿ, ಶೋಕ-ಮೋಹದಿಂದ ಕೂಡಿದವನಾಗಿ ನಗುತ್ತಾ ಅವನಲ್ಲಿ ಇಂತೆಂದನು. ॥13॥
(ಶ್ಲೋಕ-14)
ಮೂಲಮ್ (ವಾಚನಮ್)
ವೃತ್ರ ಉವಾಚ
ಮೂಲಮ್
ದಿಷ್ಟ್ಯಾ ಭವಾನ್ಮೇ ಸಮವಸ್ಥಿತೋ ರಿಪು-
ರ್ಯೋ ಬ್ರಹ್ಮಹಾ ಗುರುಹಾ ಭ್ರಾತೃಹಾ ಚ ।
ದಿಷ್ಟ್ಯಾನೃಣೋದ್ಯಾಹಮಸತ್ತಮ ತ್ವಯಾ
ಮಚ್ಛೂಲನಿರ್ಭಿನ್ನದೃಷದ್ಧೃದಾಚಿರಾತ್ ॥
ಅನುವಾದ
ವೃತ್ರಾಸುರನು ಹೇಳಿದನು — ಎಲೈ ದುರಾತ್ಮನೇ! ಬ್ರಾಹ್ಮಣನೂ, ನಿನಗೆ ಗುರುವೂ, ನನಗೆ ಅಣ್ಣನೂ ಆದ ವಿಶ್ವರೂಪನನ್ನು ಹತ್ಯೆಮಾಡಿದ ಕೊಲೆಪಾತಕಿಯೂ, ಶತ್ರುವೂ ಆದ ನೀನು ನನ್ನ ಎದುರಿಗೆ ಸಿಕ್ಕಿರುವುದು ನನ್ನ ಭಾಗ್ಯೋದಯವೇ ಸರಿ. ಎಲವೋ ದುಷ್ಟನೇ! ಈಗ ಶೀಘ್ರಾತಿಶೀಘ್ರವಾಗಿ ನಾನು ಕಲ್ಲಿನಂತಿರುವ ನಿನ್ನ ಕಠೋರ ಹೃದಯವನ್ನು ಈ ಶೂಲದಿಂದ ಸೀಳಿಹಾಕಿ ಅಣ್ಣನ ಋಣ ದಿಂದ ಮುಕ್ತನಾಗುವೆ. ಆಹಾ! ಇದು ನನಗೆ ಎಂತಹ ಆನಂದದ ಮಾತಾಗಿದೆ! ॥14॥
(ಶ್ಲೋಕ-15)
ಮೂಲಮ್
ಯೋ ನೋಗ್ರಜಸ್ಯಾತ್ಮವಿದೋ ದ್ವಿಜಾತೇ-
ರ್ಗುರೋರಪಾಪಸ್ಯ ಚ ದೀಕ್ಷಿತಸ್ಯ ।
ವಿಶ್ರಭ್ಯ ಖಡ್ಗೇನ ಶಿರಾಂಸ್ಯವೃಶ್ಚತ್
ಪಶೋರಿವಾಕರುಣಃ ಸ್ವರ್ಗಕಾಮಃ ॥
ಅನುವಾದ
ಎಲವೋ ಇಂದ್ರನೇ! ಬ್ರಾಹ್ಮಣನಾಗಿರುವುದರ ಜೊತೆಗೆ ಯಜ್ಞದಲ್ಲಿ ದೀಕ್ಷಿತನೂ ಆಗಿದ್ದು, ನಿನಗೆ ಗುರುವಾಗಿದ್ದ; ಆತ್ಮಜ್ಞಾನಿಯೂ, ಪಾಪ ರಹಿತನೂ ಆಗಿದ್ದ ನನ್ನಣ್ಣನಿಗೆ ನಂಬಿಕೆತೋರಿಸಿ ಸ್ವರ್ಗವನ್ನು ಬಯಸುವವನು ಯಜ್ಞದಲ್ಲಿ ಪಶುವಿನ ತಲೆಯನ್ನು ಕತ್ತರಿಸುವಂತೆ ನೀನು ಖಡ್ಗದಿಂದ ಆತನ ಮೂರೂ ತಲೆಗಳನ್ನು ಕತ್ತರಿಸಿಬಿಟ್ಟಿರುವೆ. ॥15॥
(ಶ್ಲೋಕ-16)
ಮೂಲಮ್
ಹ್ರೀಶ್ರೀದಯಾಕೀರ್ತಿಭಿರುಜ್ಝಿತಂ ತ್ವಾಂ
ಸ್ವಕರ್ಮಣಾ ಪುರುಷಾದೈಶ್ಚ ಗರ್ಹ್ಯಮ್ ।
ಕೃಚ್ಛ್ರೇಣ ಮಚ್ಛೂಲವಿಭಿನ್ನದೇಹ-
ಮಸ್ಪೃಷ್ಟವಹ್ನಿಂ ಸಮದಂತಿ ಗೃಧ್ರಾಃ ॥
ಅನುವಾದ
ದಯೆ, ಲಜ್ಜೆ, ಲಕ್ಷ್ಮೀ ಮತ್ತು ಕೀರ್ತಿ ಇವುಗಳು ನಿನ್ನಿಂದ ಬಿಟ್ಟುಹೋಗಿವೆ. ನೀನು ಮಾಡಿದ ಅತಿನೀಚ ಕಾರ್ಯವನ್ನು ಮನುಷ್ಯರೇನು, ರಾಕ್ಷಸರೂ ಕೂಡ ನಿಂದಿಸುತ್ತಿದ್ದಾರೆ. ಇಂದು ನಿನ್ನ ಶರೀರವು ನನ್ನ ತ್ರಿಶೂಲದಿಂದ ಹೋಳು-ಹೋಳಾಗಿ ಹೋಗುವುದು. ಅತಿ ಕಷ್ಟವಾದ ಮೃತ್ಯುವು ನಿನಗೆ ಒದಗೀತು. ನಿನ್ನಂತಹ ಪಾಪಿಯನ್ನು ಬೆಂಕಿಯೂ ಮುಟ್ಟದು. ನಿನ್ನನ್ನಾದರೋ ರಣಹದ್ದುಗಳು ಚುಚ್ಚಿ-ಚುಚ್ಚಿ ತಿಂದುಬಿಡುವವು. ॥16॥
(ಶ್ಲೋಕ-17)
ಮೂಲಮ್
ಅನ್ಯೇನು ಯೇ ತ್ವೇಹ ನೃಶಂಸಮಜ್ಞಾ
ಯೇ ಹ್ಯುದ್ಯತಾಸಾಃ ಪ್ರಹರಂತಿ ಮಹ್ಯಮ್ ।
ತೈರ್ಭೂತನಾಥಾನ್ಸಗಣಾನ್ನಿಶಾತ-
ತ್ರಿಶೂಲನಿರ್ಭಿನ್ನಗಲೈರ್ಯಜಾಮಿ ॥
ಅನುವಾದ
ಈ ಅಜ್ಞಾನಿಗಳಾದ ದೇವತೆಗಳು ನಿನ್ನಂತಹ ನೀಚನೂ, ಕ್ರೂರಿಯೂ ಆದವನಿಗೆ ಅನುಯಾಯಿಗಳಾಗಿ ನನ್ನ ಮೇಲೆ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ನಾನು ನನ್ನ ಹರಿತ ವಾದ ತ್ರಿಶೂಲದಿಂದ ಅವರ ಕತ್ತನ್ನು ಕತ್ತರಿಸಿಬಿಡುವೆನು. ಅದರ ಮೂಲಕ ಗಣಗಳ ಸಹಿತ ಭೈರವಾದಿ ಭೂತನಾಥರಿಗೆ ಬಲಿಯನ್ನು ಅರ್ಪಿಸುವೆನು.॥17॥
(ಶ್ಲೋಕ-18)
ಮೂಲಮ್
ಅಥೋ ಹರೇ ಮೇ ಕುಲಿಶೇನ ವೀರ
ಹರ್ತಾ ಪ್ರಮಥ್ಯೈವ ಶಿರೋ ಯದೀಹ ।
ತತ್ರಾನೃಣೋ ಭೂತಬಲಿಂ ವಿಧಾಯ
ಮನಸ್ವಿನಾಂ ಪಾದರಜಃ ಪ್ರಪತ್ಸ್ಯೇ ॥
ಅನುವಾದ
ವೀರನೇ! ಇದರ ಬದಲಿಗೆ ನೀನೇ ನನ್ನ ಸೈನ್ಯವನ್ನು ಕತ್ತರಿಸಿಹಾಕಿ ನಿನ್ನ ವಜ್ರಾಯುಧದಿಂದ ನನ್ನ ತಲೆಯನ್ನು ಕತ್ತರಿಸಿಹಾಕುವ ಸಂಭವವೂ ಇದೆ. ಆಗಲಾದರೋ ನಾನು ನನ್ನ ಶರೀರವನ್ನು ಪಶು-ಪಕ್ಷಿಗಳಿಗೆ ಬಲಿಕೊಟ್ಟು, ಕರ್ಮಗಳ ಬಂಧನದಿಂದ ಬಿಡುಗಡೆ ಹೊಂದಿ, ಮಹಾಪುರುಷರ ಪಾದಧೂಳಿಯನ್ನು ಆಶ್ರಯಿಸುವೆನು. ಮಹಾಪುರುಷರು ಹೋಗುವ ಉತ್ತಮೋತ್ತಮವಾದ ಲೋಕಕ್ಕೆ ಹೋಗುವೆನು. ॥18॥
ಮೂಲಮ್
(ಶ್ಲೋಕ-19)
ಸುರೇಶ ಕಸ್ಮಾನ್ನ ಹಿನೋಷಿ ವಜ್ರಂ
ಪುರಃ ಸ್ಥಿತೇ ವೈರಿಣಿ ಮಯ್ಯಮೋಘಮ್ ।
ಮಾ ಸಂಶಯಿಷ್ಠಾ ನ ಗದೇವ ವಜ್ರಂ
ಸ್ಯಾನ್ನಿಷ್ಫಲಂ ಕೃಪಣಾರ್ಥೇವ ಯಾಚ್ಞಾ ॥
ಅನುವಾದ
ದೇವ ರಾಜನೇ! ಶತ್ರುವಾದ ನಾನು ನಿನ್ನ ಮುಂದೆಯೇ ನಿಂತಿರುವೆನು. ಈಗ ನೀನು ನನ್ನ ಮೇಲೆ ಅಮೋಘವಾದ ವಜ್ರಾ ಯುಧವನ್ನು ಏಕೆ ಪ್ರಯೋಗಿಸುತ್ತಿಲ್ಲ? ನಿನ್ನ ಗದೆಯು ನಿಷ್ಫಲವಾಯಿತು. ಕೃಪಣನಲ್ಲಿ ಗೈದ ಯಾಚನೆಯು ನಿಷ್ಫಲವಾಗುವಂತೆಯೇ ಈ ವಜ್ರವು ನಿಷ್ಫಲವಾದೀತು ಎಂದು ಸಂದೇಹಪಡಬೇಡ. ॥19॥
(ಶ್ಲೋಕ-20)
ಮೂಲಮ್
ನನ್ವೇಷ ವಜ್ರಸ್ತವ ಶಕ್ರ ತೇಜಸಾ
ಹರೇರ್ದಧೀಚೇಸ್ತಪಸಾ ಚ ತೇಜಿತಃ ।
ತೇನೈವ ಶತ್ರುಂ ಜಹಿ ವಿಷ್ಣುಯಂತ್ರಿತೋ
ಯತೋ ಹರಿರ್ವಿಜಯಃ ಶ್ರೀರ್ಗುಣಾಸ್ತತಃ ॥
ಅನುವಾದ
ಇಂದ್ರನೇ! ನಿನ್ನ ಈ ವಜ್ರವು ಶ್ರೀಹರಿಯ ತೇಜ ಮತ್ತು ದಧೀಚಿ ಋಷಿಯ ತಪಸ್ಸಿನಿಂದ ಶಕ್ತಿಶಾಲಿಯಾಗಿದೆ. ಭಗವಾನ್ ವಿಷ್ಣುವು ನನ್ನನ್ನು ಕೊಲ್ಲಲಿಕ್ಕಾಗಿ ನಿನಗೆ ಆಜ್ಞೆ ಯನ್ನು ಕೊಟ್ಟಿರುವನು. ಅದಕ್ಕಾಗಿ ಈಗ ನೀನು ಅದೇ ವಜ್ರದಿಂದ ನನ್ನನ್ನು ಕೊಂದುಬಿಡು. ಏಕೆಂದರೆ, ಭಗವಾನ್ ಶ್ರೀಹರಿಯು ಇರುವ ಪಕ್ಷದಲ್ಲೇ ವಿಜಯ, ಲಕ್ಷ್ಮೀ ಹಾಗೂ ಎಲ್ಲ ಗುಣಗಳು ವಾಸಿಸುತ್ತವೆ. ॥20॥
(ಶ್ಲೋಕ-21)
ಮೂಲಮ್
ಅಹಂ ಸಮಾಧಾಯ ಮನೋ ಯಥಾಹ
ಸಂಕರ್ಷಣಸ್ತಚ್ಚರಣಾರವಿಂದೇ ।
ತ್ವದ್ವಜ್ರರಂಹೋಲುಲಿತಗ್ರಾಮ್ಯಪಾಶೋ
ಗತಿಂ ಮುನೇರ್ಯಾಮ್ಯಪವಿದ್ಧಲೋಕಃ ॥
ಅನುವಾದ
ಎಲೈ ದೇವರಾಜನೇ! ಭಗವಾನ್ ಶ್ರೀಸಂಕರ್ಷಣನ ಆಣತಿಯಂತೆ ನಾನು ನನ್ನ ಮನಸ್ಸನ್ನು ಆತನ ಅಡಿದಾವರೆಗಳಲ್ಲಿ ಲಯಗೊಳಿಸುವೆನು. ನಿನ್ನ ವಜ್ರವು ನನ್ನ ದೇಹವನ್ನು ಮಾತ್ರವಲ್ಲದೆ ವಿಷಯಭೋಗ ರೂಪವಾದ ನನ್ನ ಬಲೆಯನ್ನೂ ಕತ್ತರಿಸಿಬಿಡುವುದು. ಆಗ ನಾನು ಈ ಶರೀರವನ್ನು ತ್ಯಜಿಸಿ ಮುನಿಗಳಿಗೆ ಉಚಿತವಾದ ಗತಿಯನ್ನು ಪಡೆಯುವೆನು. ॥21॥
ಮೂಲಮ್
(ಶ್ಲೋಕ-22)
ಪುಂಸಾಂ ಕಿಲೈಕಾಂತಧಿಯಾಂ ಸ್ವಕಾನಾಂ
ಯಾಃ ಸಂಪದೋ ದಿವಿ ಭೂವೌ ರಸಾಯಾಮ್ ।
ನ ರಾತಿ ಯದ್ದ್ವೇಷ ಉದ್ವೇಗ ಆಧಿ-
ರ್ಮದಃ ಕಲಿರ್ವ್ಯಸನಂ ಸಂಪ್ರಯಾಸಃ ॥
ಅನುವಾದ
ಶ್ರೀಭಗವಂತನನ್ನು ಅನನ್ಯಭಾವದಿಂದ ಪ್ರೀತಿಸುತ್ತಿರುವ ಅವನ ಸ್ವಜನರಾದ ಭಕ್ತರಿಗೆ ಅವನು ಸ್ವರ್ಗ, ಭೂಮಿ ಅಥವಾ ಪಾತಾಳ ಲೋಕದ ಸಂಪತ್ತನ್ನು ಕೊಡುವುದಿಲ್ಲ. ಏಕೆಂದರೆ, ಅವುಗಳಿಂದ ಪರಮಾನಂದವು ದೊರೆಯುವುದೇ ಇಲ್ಲ. ಬದಲಾಗಿ ದ್ವೇಷ, ಉದ್ವೇಗ, ಅಹಂಕಾರ, ಮಾನಸಿಕಪೀಡೆಗಳು, ಕಲಹ, ದುಃಖ ಮತ್ತು ಆಯಾಸಗಳೇ ಬಂದು ಸೇರುವುವು. ॥22॥
(ಶ್ಲೋಕ-23)
ಮೂಲಮ್
ತ್ರೈವರ್ಗಿಕಾಯಾಸವಿಘಾತಮಸ್ಮತ್
ಪತಿರ್ವಿಧತ್ತೇ ಪುರುಷಸ್ಯ ಶಕ್ರ ।
ತತೋನುಮೇಯೋ ಭಗವತ್ಪ್ರಸಾದೋ
ಯೋ ದುರ್ಲಭೋಕಿಂಚನಗೋಚರೋನ್ಯೈಃ ॥
ಅನುವಾದ
ಎಲೈ ಇಂದ್ರನೇ! ನಮ್ಮ ಪ್ರಭುವು ತನ್ನ ಭಕ್ತರ ಧರ್ಮ, ಅರ್ಥ, ಕಾಮ ಸಂಬಂಧವಾದ ಪ್ರಯಾಸಗಳನ್ನು ವ್ಯರ್ಥಗೊಳಿಸಿ ಬಿಡುತ್ತಾನೆ. ನಿಜವಾಗಿ ವಿಚಾರಮಾಡಿನೋಡಿದರೆ ಇದರಿಂದ ಶ್ರೀಭಗವಂತನ ಕೃಪೆಯೇ ಸೂಚಿತವಾಗುತ್ತದೆ. ಏಕೆಂದರೆ, ಆತನ ಇಂತಹ ಕೃಪಾ ಪ್ರಸಾದವು ಭೌತಿಕವಾಗಿ ದೀನ-ದರಿದ್ರರಾದ ಆತನ ಭಕ್ತರ ಅನುಭವಕ್ಕೆ ಮಾತ್ರ ಗೋಚರವಾಗುವುದು. ಇತರರಿಗೆ ಅದು ಅತ್ಯಂತ ದುರ್ಲಭವೇ ಆಗಿದೆ. ॥23॥
(ಶ್ಲೋಕ-24)
ಮೂಲಮ್
ಅಹಂ ಹರೇ ತವ ಪಾದೈಕಮೂಲ-
ದಾಸಾನುದಾಸೋ ಭವಿತಾಸ್ಮಿ ಭೂಯಃ ।
ಮನಃ ಸ್ಮರೇತಾಸುಪತೇರ್ಗುಣಾಂಸ್ತೇ
ಗೃಣೀತ ವಾಕ್ಕರ್ಮ ಕರೋತು ಕಾಯಃ ॥
ಅನುವಾದ
ಭಗವಂತನನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತಾ ವೃತ್ರಾಸುರನು ಅವನಲ್ಲಿ ಹೀಗೆ ಪ್ರಾರ್ಥಿಸಿದನು ಪ್ರಭೋ! ಹರಿಯೇ! ಅನನ್ಯ ಭಾವದಿಂದ ನಿನ್ನ ಚರಣಕಮಲಗಳ ಅಶ್ರಿತ ಸೇವಕರ ಸೇವೆಯನ್ನು ಮಾಡುವ ಅವಕಾಶವನ್ನು ನನಗೆ ಮುಂದಿನ ಜನ್ಮದಲ್ಲಿಯೂ ದೊರೆಯುವಂತೆ ನನ್ನ ಮೇಲೆ ಕೃಪೆಮಾಡು. ಪ್ರಾಣವಲ್ಲಭನೇ! ನನ್ನ ಮನಸ್ಸು ನಿನ್ನ ಮಂಗಲಮಯ ಗುಣಗಳನ್ನು ಸ್ಮರಿಸುತ್ತಾ ಇರಲಿ. ನನ್ನ ವಾಣಿಯು ಅದನ್ನೇ ಗುಣಗಾನಮಾಡುತ್ತಾ, ಶರೀರವು ನಿನ್ನ ಸೇವೆಯಲ್ಲೇ ಆಸಕ್ತ ವಾಗಿರಲಿ. ॥24॥
(ಶ್ಲೋಕ-25)
ಮೂಲಮ್
ನ ನಾಕಪೃಷ್ಠಂ ನ ಚ ಪಾರಮೇಷ್ಠ್ಯಂ
ನ ಸಾರ್ವಭೌಮಂ ನ ರಸಾಧಿಪತ್ಯಮ್ ।
ನ ಯೋಗಸಿದ್ಧೀರಪುನರ್ಭವಂ ವಾ
ಸಮಂಜಸ ತ್ವಾ ವಿರಹಯ್ಯ ಕಾಂಕ್ಷೇ ॥
ಅನುವಾದ
ಎಲೈ ಸಕಲ ಸೌಭಾಗ್ಯ ನಿಧಿಯೇ! ನಾನು ನಿನ್ನನ್ನು ಬಿಟ್ಟು ಸ್ವರ್ಗವನ್ನಾಗಲೀ, ಬ್ರಹ್ಮ ಲೋಕದ ಆಧಿಪತ್ಯವನ್ನಾಗಲೀ, ಭೂಮಂಡಲದ ಸಾಮ್ರಾಜ್ಯವನ್ನಾಗಲೀ, ರಸಾತಲದ ಏಕಚ್ಛತ್ರಾಧಿಪತ್ಯವನ್ನಾಗಲೀ, ಯೋಗಸಿದ್ಧಿಗಳಾ ಗಲೀ ಯಾವುದನ್ನೂ ಬಯಸೆನು; ಹೆಚ್ಚೇನು ಮೋಕ್ಷವನ್ನೂ ಕೂಡ ಬಯಸುವುದಿಲ್ಲ. ॥25॥
(ಶ್ಲೋಕ-26)
ಮೂಲಮ್
ಅಜಾತಪಕ್ಷಾ ಇವ ಮಾತರಂ ಖಗಾಃ
ಸ್ತನ್ಯಂ ಯಥಾ ವತ್ಸತರಾಃ ಕ್ಷುಧಾರ್ತಾಃ ।
ಪ್ರಿಯಂ ಪ್ರಿಯೇವ ವ್ಯಷಿತಂ ವಿಷಣ್ಣಾ
ಮನೋರವಿಂದಾಕ್ಷ ದಿದೃಕ್ಷತೇ ತ್ವಾಮ್ ॥
ಅನುವಾದ
ಓ ಪುಂಡರೀಕಾಕ್ಷನೇ! ರೆಕ್ಕೆ ಹುಟ್ಟದೇ ಇರುವ ಹಕ್ಕಿಯ ಮರಿಗಳು ತಮ್ಮ ತಾಯಿ ಯನ್ನೇ ಎದುರು ನೋಡುತ್ತಿರುವಂತೆಯೇ, ಹಸಿದ ಕರು ಗಳು ತಮ್ಮ ತಾಯಿಯ ಸ್ತನ್ಯವನ್ನು ಕುಡಿಯಲು ಆತುರ ಪಡುತ್ತಿರುವಂತೆಯೇ, ಮತ್ತು ಪತಿಯನ್ನು ಅಗಲಿದ ರಮಣಿ ಯರು ತಮ್ಮ ಪ್ರಿಯತಮನ ಸಮಾಗಮಕ್ಕಾಗಿ ಹಾತೊರೆ ಯುತ್ತಿರುವಂತೆಯೇ, ನನ್ನ ಮನಸ್ಸು ನಿನ್ನ ದರ್ಶನಕ್ಕಾಗಿ ಹಂಬಲಿಸುತ್ತಾ ಇದೆ. ॥26॥
(ಶ್ಲೋಕ-27)
ಮೂಲಮ್
ಮಮೋತ್ತಮಶ್ಲೋಕಜನೇಷು ಸಖ್ಯಂ
ಸಂಸಾರಚಕ್ರೇ ಭ್ರಮತಃ ಸ್ವಕರ್ಮಭಿಃ ।
ತ್ವನ್ಮಾಯಯಾತ್ಮಾತ್ಮಜದಾರಗೇಹೇ-
ಷ್ವಾಸಕ್ತಚಿತ್ತಸ್ಯ ನ ನಾಥ ಭೂಯಾತ್ ॥
ಅನುವಾದ
ಮಹಾಪ್ರಭೋ! ನಾನು ಮುಕ್ತಿಯನ್ನು ಬಯಸುತ್ತಿಲ್ಲ. ಕರ್ಮಗಳ ಫಲವಾಗಿ ಸಂಸಾರದ ಚಕ್ರದಲ್ಲಿ ಅಲೆದಾಡುತ್ತಿರುವ ನನಗೆ ಉತ್ತಮ ಕೀರ್ತಿಯುಳ್ಳ ನಿನ್ನ ಪ್ರಿಯರಾದ ಭಕ್ತರೊಡನೆ ಸದಾ ಗೆಳೆತನವಿರಲಿ. ನಿನ್ನ ಮಾಯೆಯಿಂದ ದೇಹ, ಮನೆ, ಪತ್ನೀ-ಪುತ್ರರು ಮುಂತಾದವರಲ್ಲೇ ಆಸಕ್ತರಾದವರೊಡನೆ ನನಗೆ ಯಾವ ರೀತಿಯ ಸಂಬಂಧವೂ ಉಂಟಾಗದಿರಲಿ ಎಂಬಷ್ಟೇ ನಾನು ಬಯಸುತ್ತಿರುವುದು. ॥27॥
ಅನುವಾದ (ಸಮಾಪ್ತಿಃ)
ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ವೃತ್ರಸ್ಯೇಂದ್ರೋಪದೇಶೋ ನಾಮೈಕಾದಶೋಽಧ್ಯಾಯಃ ॥11॥