[ಹತ್ತನೆಯ ಅಧ್ಯಾಯ]
ಭಾಗಸೂಚನಾ
ದೇವತೆಗಳು ದಧೀಚಿ ಮಹರ್ಷಿಗಳ ಅಸ್ಥಿಗಳಿಂದ ವಜ್ರಾಯುಧವನ್ನು ನಿರ್ಮಿಸಿಕೊಂಡು ವೃತ್ರನ ಸೇನೆಯನ್ನು ಆಕ್ರಮಿಸಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇಂದ್ರಮೇವಂ ಸಮಾದಿಶ್ಯ ಭಗವಾನ್ ವಿಶ್ವಭಾವನಃ ।
ಪಶ್ಯತಾಮನಿಮೇಷಾಣಾಂ ತತ್ರೈವಾಂತರ್ದಧೇ ಹರಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ವಿಶ್ವದ ಜೀವನದಾತನಾದ ಶ್ರೀಹರಿಯು ಇಂದ್ರನಿಗೆ ಹೀಗೆ ಆದೇಶವನ್ನು ಕೊಟ್ಟು, ದೇವತೆಗಳ ಎದುರಿನಲ್ಲೇ ಅಂತರ್ಧಾನ ಹೊಂದಿದನು.॥1॥
(ಶ್ಲೋಕ-2)
ಮೂಲಮ್
ತಥಾಭಿಯಾಚಿತೋ ದೇವೈರ್ಋಷಿರಾಥರ್ವಣೋ ಮಹಾನ್ ।
ಮೋದಮಾನ ಉವಾಚೇದಂ ಪ್ರಹಸನ್ನಿವ ಭಾರತ ॥
ಅನುವಾದ
ಅನಂತರ ದೇವತೆಗಳು ಉದಾರ ಶಿರೋಮಣಿ ಅಥರ್ವವೇದಿಯಾದ ದಧೀಚಿಯ ಬಳಿಗೆಹೋಗಿ ಭಗವಂತನ ಆಜ್ಞಾನುಸಾರವಾಗಿ ಬೇಡಿ ಕೊಂಡರು. ದೇವತೆಗಳ ಬೇಡಿಕೆಯನ್ನು ಕೇಳಿ ದಧೀಚಿಗಳಿಗೆ ಬಹಳ ಆನಂದವಾಯಿತು. ಅವರು ನಗುತ್ತಾ ದೇವತೆಗಳಲ್ಲಿ ಹೇಳಿದರು.॥2॥
(ಶ್ಲೋಕ-3)
ಮೂಲಮ್
ಅಪಿ ವೃಂದಾರಕಾ ಯೂಯಂ ನ ಜಾನೀಥ ಶರೀರಿಣಾಮ್ ।
ಸಂಸ್ಥಾಯಾಂ ಯಸ್ತ್ವಭಿದ್ರೋಹೋ ದುಃಸಹಶ್ಚೇತನಾಪಹಃ ॥
ಅನುವಾದ
ದೇವತೆಗಳಿರಾ! ಪ್ರಾಣಿಗಳಿಗೆ ಸಾಯು ವಾಗ ಎಷ್ಟು ಕಷ್ಟವಾಗುತ್ತದೆ? ಎಂಬುದು ಬಹುಶಃ ನಿಮಗೆ ಗೊತ್ತಿಲ್ಲವೆಂದು ಕಾಣುತ್ತದೆ. ಪ್ರಜ್ಞೆ ಇರುವವರೆಗೆ ಅವರಿಗೆ ಅಸಹ್ಯ ಪೀಡೆಯನ್ನು ಸಹಿಸಬೇಕಾಗುತ್ತದೆ ಮತ್ತು ಕೊನೆಗೆ ಅವು ಮೂರ್ಛಿತರಾಗುತ್ತಾರೆ. ॥3॥
(ಶ್ಲೋಕ-4)
ಮೂಲಮ್
ಜಿಜೀವಿಷೂಣಾಂ ಜೀವಾನಾಮಾತ್ಮಾ ಪ್ರೇಷ್ಠ ಇಹೇಪ್ಸಿತಃ ।
ಕ ಉತ್ಸಹೇತ ತಂ ದಾತುಂ ಭಿಕ್ಷಮಾಣಾಯ ವಿಷ್ಣವೇ ॥
ಅನುವಾದ
ಜಗತ್ತಿನಲ್ಲಿ ಬದುಕಿರ ಬೇಕೆಂದು ಬಯಸುವ ಜೀವಿಗೆ ಶರೀರವು ತುಂಬಾ ಅಮೂಲ್ಯವೂ, ಪ್ರಿಯವೂ, ಇಷ್ಟವಾದ ವಸ್ತು ಆಗಿದೆ. ಇಂತಹ ಸ್ಥಿತಿಯಲ್ಲಿ ಸ್ವತಃ ಭಗವಾನ್ ವಿಷ್ಣುವೇ ಜೀವಿಯಲ್ಲಿ ಅವರ ಶರೀರ ವನ್ನು ಕೇಳಿದರೂ ಕೊಡುವ ಸಾಹಸವನ್ನು ಯಾರು ತಾನೇ ಮಾಡಿಯಾರು? ॥4॥
(ಶ್ಲೋಕ-5)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ಕಿಂ ನು ತದ್ದುಸ್ತ್ಯಜಂ ಬ್ರಹ್ಮನ್ಪುಂಸಾಂ ಭೂತಾನುಕಂಪಿನಾಮ್ ।
ಭವದ್ವಿಧಾನಾಂ ಮಹತಾಂ ಪುಣ್ಯಶ್ಲೋಕೇಡ್ಯಕರ್ಮಣಾಮ್ ॥
ಅನುವಾದ
ದೇವತೆಗಳೆಂದರು — ಬ್ರಾಹ್ಮಣೋತ್ತಮರೇ! ನಿಮ್ಮಂತಹ ಉದಾರರೂ ಮತ್ತು ಪ್ರಾಣಿಗಳ ಮೇಲೆ ದಯೆತೋರುವ ಮಹಾ ಪುರುಷರಾದ ನಿಮ್ಮನ್ನು ದೊಡ್ಡ-ದೊಡ್ಡ ಮಹಾನು ಭಾವರೂ ಪ್ರಶಂಸೆ ಮಾಡುತ್ತಾರೆ. ನಿಮ್ಮಂತಹವರಲ್ಲಿ ಪ್ರಾಣಿಗಳ ಒಳಿತಿಗಾಗಿ ಕೊಡದಿರುವ ಯಾವ ವಸ್ತುವಿದೆ? ॥5॥
(ಶ್ಲೋಕ-6)
ಮೂಲಮ್
ನನು ಸ್ವಾರ್ಥಪರೋ ಲೋಕೋ ನ ವೇದ ಪರಸಂಕಟಮ್ ।
ಯದಿ ವೇದ ನ ಯಾಚೇತ ನೇತಿ ನಾಹ ಯದೀಶ್ವರಃ ॥
ಅನುವಾದ
ಪೂಜ್ಯರೇ! ಬೇಡುವವರು ಸ್ವಾರ್ಥಿಗಳಾಗಿರುತ್ತಾರೆ. ಇದರಲ್ಲಿ ಸಂದೇಹವೇ ಇಲ್ಲ. ಅವರಲ್ಲಿ ಕೊಡುವವನ ಕಷ್ಟವನ್ನು ತಿಳಿಯುವ ಬುದ್ಧಿಯೇ ಇರುವುದಿಲ್ಲ. ಅವರಲ್ಲಿ ಅಷ್ಟು ತಿಳುವಳಿಕೆ ಇದ್ದರೆ ಅವರೇಕೆ ಬೇಡುತ್ತಿದ್ದರು? ಹೀಗೆಯೇ ದಾತೃವಾದವನೂ ಬೇಡುವವರ ವಿಪತ್ತನ್ನು ಅರಿಯನು. ಇಲ್ಲದಿದ್ದರೆ ‘ಇಲ್ಲ’ ಎಂಬುದು ಅವನ ಬಾಯಿಂದ ಎಂದಿಗೂ ಬರುತ್ತಿರಲೇ ಇಲ್ಲ. (ಆದ್ದರಿಂದ ತಾವು ನಮ್ಮ ವಿಪತ್ತನ್ನು ಮನಗಂಡು ನಮ್ಮ ಬೇಡಿಕೆಯನ್ನು ಪೂರ್ಣಗೊಳಿಸಿರಿ.) ॥6॥
(ಶ್ಲೋಕ-7)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ಧರ್ಮಂ ವಃ ಶ್ರೋತುಕಾಮೇನ ಯೂಯಂ ಮೇ ಪ್ರತ್ಯುದಾಹೃತಾಃ ।
ಏಷ ವಃ ಪ್ರಿಯಮಾತ್ಮಾನಂ ತ್ಯಜಂತಂ ಸಂತ್ಯಜಾಮ್ಯಹಮ್ ॥
ಅನುವಾದ
ದಧೀಚಿ ಋಷಿಗಳು ಹೇಳಿದರು — ದೇವತೆಗಳಿರಾ! ನಿಮ್ಮ ಬಾಯಿಂದ ಧರ್ಮದ ಮಾತುಗಳನ್ನು ಕೇಳಲಿಕ್ಕಾಗಿಯೇ ನಾನು ನಿಮ್ಮ ಬೇಡಿಕೆಯನ್ನು ಉಪೇಕ್ಷೆಮಾಡಿದ್ದು. ಇದೋ ತೆಗೆದುಕೊಳ್ಳಿರಿ. ನಾನು ನನ್ನ ಪ್ರಿಯವಾದ ಶರೀರವನ್ನು ನಿಮಗಾಗಿ ಈಗಲೇ ಬಿಟ್ಟು ಬಿಡುತ್ತೇನೆ. ಏಕೆಂದರೆ, ಒಂದಲ್ಲ ಒಂದು ದಿನ ಇದು ತಾನಾಗಿ ನನ್ನನ್ನು ಬಿಟ್ಟು ಹೋಗುವಂತಹುದು. ॥7॥
(ಶ್ಲೋಕ-8)
ಮೂಲಮ್
ಯೋಧ್ರುವೇಣಾತ್ಮನಾ ನಾಥಾ ನ ಧರ್ಮಂ ನ ಯಶಃ ಪುಮಾನ್ ।
ಈಹೇತ ಭೂತದಯಯಾ ಸ ಶೋಚ್ಯಃ ಸ್ಥಾವರೈರಪಿ ॥
ಅನುವಾದ
ದೇವಶಿರೋಮಣಿಗಳೇ! ಈ ವಿನಾಶಿಯಾದ ಶರೀರದಿಂದ ದುಃಖಿತರಾದ ಪ್ರಾಣಿಗಳ ಮೇಲೆ ದಯೆಗೈದು ಮುಖ್ಯವಾಗಿ ಧರ್ಮವನ್ನು ಹಾಗೂ ಗೌಣವಾಗಿ ಕೀರ್ತಿಯನ್ನು ಸಂಪಾದಿಸದಿರುವವನು ಜಡ ವಾದ ಗಿಡ-ಮರಗಳಿಂದಲೂ ಕೀಳುಮಟ್ಟದವನು. ॥8॥
(ಶ್ಲೋಕ-9)
ಮೂಲಮ್
ಏತಾವಾನವ್ಯಯೋ ಧರ್ಮಃ ಪುಣ್ಯಶ್ಲೋಕೈರುಪಾಸಿತಃ ।
ಯೋ ಭೂತಶೋಕಹರ್ಷಾಭ್ಯಾಮಾತ್ಮಾ ಶೋಚತಿ ಹೃಷ್ಯತಿ ॥
ಅನುವಾದ
ದೊಡ್ಡ-ದೊಡ್ಡ ಮಹಾತ್ಮರು ಈ ಅವಿನಾಶಿಯಾದ ಧರ್ಮವನ್ನು ಉಪಾಸನೆ ಮಾಡಿರುವರು. ಅದರ ಸ್ವರೂಪವು ಮನುಷ್ಯನು ಯಾವುದೇ ಪ್ರಾಣಿಯ ದುಃಖದಲ್ಲಿ ದುಃಖವನ್ನೂ, ಸುಖದಲ್ಲಿ ಸುಖವನ್ನು ಅನುಭವಿಸುವುದಿಷ್ಟೇ ಆಗಿದೆ. ॥9॥
(ಶ್ಲೋಕ-10)
ಮೂಲಮ್
ಅಹೋ ದೈನ್ಯಮಹೋ ಕಷ್ಟಂ ಪಾರಕ್ಯೈಃ ಕ್ಷಣಭಂಗುರೈಃ ।
ಯನ್ನೋಪಕುರ್ಯಾದಸ್ವಾರ್ಥೈರ್ಮರ್ತ್ಯಃ ಸ್ವಜ್ಞಾತಿವಿಗ್ರಹೈಃ ॥
ಅನುವಾದ
ಜಗತ್ತಿನಲ್ಲಿರುವ ಹಣ, ಜನ, ಶರೀರ ಮುಂತಾದ ಪದಾರ್ಥಗಳು ಕ್ಷಣಭಂಗುರವಾಗಿವೆ. ಇವು ನಮಗೆ ಯಾವ ಉಪಯೋಗಕ್ಕೂ ಬರುವುದಿಲ್ಲ. ಕೊನೆಗೆ ಬೇರೆಯವರಿಗೇ ಉಪಯೋಗಿಯಾಗಿವೆ. ಆದರೂ ಅಯ್ಯೋ! ಈ ಮರಣಧರ್ಮವುಳ್ಳ ಮನುಷ್ಯನು ಇವುಗಳ ಮೂಲಕ ಬೇರೆ ಯವರಿಗೆ ಉಪಕಾರ ಮಾಡುವುದಿಲ್ಲವಲ್ಲ! ಇದೆಂತಹ ಕಾರ್ಪಣ್ಯ! ಎಷ್ಟು ದುಃಖದ ಮಾತಾಗಿದೆ!॥10॥
(ಶ್ಲೋಕ-11)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಕೃತವ್ಯವಸಿತೋ ದಧ್ಯಙ್ ಆಥರ್ವಣಸ್ತನುಮ್ ।
ಪರೇ ಭಗವತಿ ಬ್ರಹ್ಮಣ್ಯಾತ್ಮಾನಂ ಸನ್ನಯಂಜಹೌ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಅಥರ್ವವೇದಿಯಾದ ಮಹರ್ಷಿ ದಧೀಚಿಯು ಹೀಗೆ ನಿಶ್ಚಯಿಸಿಕೊಂಡು ತನ್ನನ್ನು ಪರಬ್ರಹ್ಮ ಪರಮಾತ್ಮನಾದ ಭಗವಂತನಲ್ಲಿ ಲೀನಗೊಳಿಸಿ ತನ್ನ ಸ್ಥೂಲಶರೀರವನ್ನು, ತ್ಯಜಿಸಿಬಿಟ್ಟರು.॥11॥
(ಶ್ಲೋಕ-12)
ಮೂಲಮ್
ಯತಾಕ್ಷಾಸುಮನೋಬುದ್ಧಿಸ್ತತ್ತ್ವದೃಗ್ ಧ್ವಸ್ತಬಂಧನಃ ।
ಆಸ್ಥಿತಃ ಪರಮಂ ಯೋಗಂ ನ ದೇಹಂ ಬುಬುಧೇ ಗತಮ್ ॥
ಅನುವಾದ
ಅವರ ಇಂದ್ರಿಯಗಳು, ಪ್ರಾಣಗಳು, ಮನಸ್ಸು, ಬುದ್ಧಿ ಸಂಯಮಿತವಾಗಿತ್ತು, ದೃಷ್ಟಿ ತತ್ತ್ವಮಯವಾಗಿತ್ತು. ಅವರ ಎಲ್ಲ ಬಂಧನಗಳು ಕಡಿದು ಹೋಗಿ ದ್ದವು. ಆದ್ದರಿಂದ ಅವರು ಭಗವಂತನ ಚಿಂತನೆ ಮಾಡುತ್ತಾ ಸಮಾಧಿಸ್ಥರಾಗಿ ಶರೀರವನ್ನು ತ್ಯಜಿಸಿದರು. ಅದು ಬಿಟ್ಟು ಹೋದುದು ಅವರಿಗೆ ಅರಿವಾಗಲೇ ಇಲ್ಲ. ॥12॥
(ಶ್ಲೋಕ-13)
ಮೂಲಮ್
ಅಥೇಂದ್ರೋ ವಜ್ರಮುದ್ಯಮ್ಯ ನಿರ್ಮಿತಂ ವಿಶ್ವಕರ್ಮಣಾ ।
ಮುನೇಃ ಶುಕ್ತಿಭಿರುತ್ಸಿಕ್ತೋ ಭಗವತ್ತೇಜಸಾನ್ವಿತಃ ॥
(ಶ್ಲೋಕ-14)
ಮೂಲಮ್
ವೃತೋ ದೇವಗಣೈಃ ಸರ್ವೈರ್ಗಜೇಂದ್ರೋಪರ್ಯಶೋಭತ ।
ಸ್ತೂಯಮಾನೋ ಮುನಿಗಣೈಸೈಲೋಕ್ಯಂ ಹರ್ಷಯನ್ನಿವ ॥
(ಶ್ಲೋಕ-15)
ಮೂಲಮ್
ವೃತ್ರಮಭ್ಯದ್ರವಚ್ಛೇತ್ತುಮಸುರಾನೀಕಯೂಥಪೈಃ ।
ಪರ್ಯಸ್ತಮೋಜಸಾ ರಾಜನ್ಕ್ರುದ್ಧೋ ರುದ್ರ ಇವಾಂತಕಮ್ ॥
ಅನುವಾದ
ಭಗವಂತನ ಶಕ್ತಿಯನ್ನು ಪಡೆದ ಇಂದ್ರನು ಬಲ-ಪೌರುಷಗಳ ಪರಮಾವಧಿಯನ್ನು ಏರಿದನು. ಆಗ ವಿಶ್ವ ಕರ್ಮನು ದಧೀಚಿ ಋಷಿಯ ಅಸ್ಥಿಗಳಿಂದ ವಜ್ರಾಯುಧ ವನ್ನು ನಿರ್ಮಿಸಿ ಇಂದ್ರನಿಗೆ ಕೊಟ್ಟನು. ಅದನ್ನು ಕೈಯಲ್ಲಿ ಹಿಡಿದುಕೊಂಡು ಮಹೇಂದ್ರನು ಐರಾವತವನ್ನು ಏರಿದನು. ಅವನೊಡನೆ ಇತರ ದೇವತೆಗಳೂ ಯುದ್ಧಕ್ಕೆ ಸನ್ನದ್ಧರಾದರು. ದೊಡ್ಡ-ದೊಡ್ಡ ಋಷಿ-ಮುನಿಗಳು ಇಂದ್ರನನ್ನು ಸ್ತುತಿಸ ತೊಡಗಿದರು. ಆಗ ಅವನು ಮೂರು ಲೋಕವನ್ನು ಸಂತೋಷ ಪಡಿಸುತ್ತಾ ವೃತ್ರಾಸುರನನ್ನು ಸಂಹಾರಮಾಡುವುದಕ್ಕಾಗಿ ತನ್ನ ಸರ್ವಶಕ್ತಿಯನ್ನು ತೊಡಗಿಸಿ ಕ್ರುದ್ಧನಾದ ಭಗವಾನ್ ರುದ್ರನು ಅಂತಕನ ಮೇಲೆ ಎರಗುವಂತೆ ವೃತ್ರಾಸುರನ ಮೇಲೆ ಮುತ್ತಿಗೆ ಹಾಕಿದನು. ಪರೀಕ್ಷಿತನೇ! ವೃತ್ರಾಸುರನೂ ಕೂಡ ದೈತ್ಯ ಸೇನಾಪತಿಗಳ ದೊಡ್ಡ ಸೈನ್ಯದೊಡನೆ ಯುದ್ಧಕ್ಕಾಗಿ ಶತ್ರುವನ್ನು ಎದುರಿಸಿ ನಿಂತನು. ॥13-15॥
(ಶ್ಲೋಕ-16)
ಮೂಲಮ್
ತತಃ ಸುರಾಣಾಮಸುರೈ ರಣಃ ಪರಮದಾರುಣಃ ।
ತ್ರೇತಾಮುಖೇ ನರ್ಮದಾಯಾಮಭವತ್ಪ್ರಥಮೇ ಯುಗೇ ॥
ಅನುವಾದ
ಆ ಸಮಯದಲ್ಲಿ ನಡೆಯುತ್ತಿದ್ದ ವೈವಸ್ವತ ಮನ್ವಂತರದ ಮೊದಲನೇ ಚತುರ್ಯುಗದ ತ್ರೇತಾಯುಗವು ಆಗಲೇ ಪ್ರಾರಂಭಗೊಂಡಿತ್ತು. ಅದೇ ಸಮಯದಲ್ಲಿ ನರ್ಮದಾ ನದಿಯ ದಡದಲ್ಲಿ ದೇವಾಸುರರ ಈ ಭಯಂಕರ ಸಂಗ್ರಾಮವು ನಡೆಯಿತು. ॥16॥
(ಶ್ಲೋಕ-17)
ಮೂಲಮ್
ರುದ್ರೈರ್ವಸುಭಿರಾದಿತ್ಯೈರಶ್ವಿಭ್ಯಾಂ ಪಿತೃವಹ್ನಿಭಿಃ ।
ಮರುದ್ಭಿರ್ಋಭುಭಿಃ ಸಾಧ್ಯೈರ್ವಿಶ್ವೇದೇವೈರ್ಮರುತ್ಪತಿಮ್ ॥
(ಶ್ಲೋಕ-18)
ಮೂಲಮ್
ದೃಷ್ಟ್ವಾ ವಜ್ರಧರಂ ಶಕ್ರಂ ರೋಚಮಾನಂ ಸ್ವಯಾ ಶ್ರಿಯಾ ।
ನಾಮೃಷ್ಯನ್ನಸುರಾ ರಾಜನ್ಮೃಧೇ ವೃತ್ರಪುರಃಸರಾಃ ॥
ಅನುವಾದ
ಆಗ ದೇವೇಂದ್ರನು ಕೈಯಲ್ಲಿ ವಜ್ರಾಯುಧವನ್ನು ಧರಿಸಿಕೊಂಡು ರುದ್ರ, ವಸುಗಳು, ಆದಿತ್ಯರು, ಅಶ್ವಿನೀಕುಮಾರರಿಬ್ಬರು, ಪಿತೃಗಣರು, ಅಗ್ನಿ, ಮರುದ್ಗಣರು, ಋಭುಗಣರು, ಸಾಧ್ಯಗಣರು, ವಿಶ್ವೇದೇವ ಮುಂತಾದವರೊಡನೆ ತನ್ನ ಕಾಂತಿಯಿಂದ ಶೋಭಾಯಮಾನನಾಗಿದ್ದನು. ವೃತ್ರಾಸುರರೇ ಮುಂತಾದ ದೈತ್ಯರು ಅವರು ಮುಂದೆ ಬಂದಿರುವುದನ್ನು ನೋಡಿ ಉರಿದುಬಿದ್ದನು. ॥17-18॥
(ಶ್ಲೋಕ-19)
ಮೂಲಮ್
ನಮುಚಿಃ ಶಂಬರೋನರ್ವಾ ದ್ವಿಮೂರ್ಧಾ ಋಷಭೋಂಬರಃ ।
ಹಯಗ್ರೀವಃ ಶಂಕುಶಿರಾ ವಿಪ್ರಚಿತ್ತಿರಯೋಮುಖಃ ॥
(ಶ್ಲೋಕ-20)
ಮೂಲಮ್
ಪುಲೋಮಾ ವೃಷಪರ್ವಾ ಚ ಪ್ರಹೇತಿರ್ಹೇತಿರುತ್ಕಲಃ ।
ದೈತೇಯಾ ದಾನವಾ ಯಕ್ಷಾ ರಕ್ಷಾಂಸಿ ಚ ಸಹಸ್ರಶಃ ॥
(ಶ್ಲೋಕ-21)
ಮೂಲಮ್
ಸುಮಾಲಿಮಾಲಿಪ್ರಮುಖಾಃ ಕಾರ್ತಸ್ವರಪರಿಚ್ಛದಾಃ ।
ಪ್ರತಿಷಿಧ್ಯೇಂದ್ರಸೇನಾಗ್ರಂ ಮೃತ್ಯೋರಪಿ ದುರಾಸದಮ್ ॥
ಅನುವಾದ
ಆ ನಮೂಚಿ, ಶಂಬರ, ಅನರ್ವಾ, ದ್ವಿಮೂರ್ಧಾ, ಋಷಭ, ಅಂಬರ, ಹಯಗ್ರೀವ, ಶಂಕುಶಿರ, ವಿಪ್ರಚಿತ್ತಿ, ಅಯೋಮುಖ, ಪುಲೋಮಾ, ವೃಷಪರ್ವಾ, ಪ್ರಹೇತಿ, ಹೇತಿ, ಉತ್ಕಲ, ಸುಮಾಲಿ, ಮಾಲಿ ಮುಂತಾದ ಸಾವಿರಾರು ದೈತ್ಯ-ದಾನವರು ಹಾಗೂ ಯಕ್ಷ-ರಾಕ್ಷಸರು ಸ್ವರ್ಣಾಭರಣ ಉಪಕರಣಗಳಿಂದ ಸುಸಜ್ಜಿತರಾಗಿ ದೇವರಾಜ ಇಂದ್ರನ ಸೇನೆಯನ್ನು ಮುಂದೆ ಬರದಂತೆ ತಡೆದರು. ಪರೀಕ್ಷಿತನೇ! ಆಗ ದೇವತೆಗಳ ಸೇನೆಯು ಸ್ವತಃ ಮೃತ್ಯುವಿಗೂ ಕೂಡ ಅಜೇಯವಾಗಿತ್ತು. ॥19-21॥
(ಶ್ಲೋಕ-22)
ಮೂಲಮ್
ಅಭ್ಯರ್ದಯನ್ನಸಂಭ್ರಾಂತಾಃ ಸಿಂಹನಾದೇನ ದುರ್ಮದಾಃ ।
ಗದಾಭಿಃ ಪರಿಘೈರ್ಬಾಣೈಃ ಪ್ರಾಸಮುದ್ಗರತೋಮರೈಃ ॥
(ಶ್ಲೋಕ-23)
ಮೂಲಮ್
ಶೂಲೈಃ ಪರಶ್ವಧೈಃ ಖಡ್ಗೈಃ ಶತಘ್ನೀಭಿರ್ಭುಶುಂಡಿಭಿಃ ।
ಸರ್ವತೋವಾಕಿರನ್ ಶಸೈರಸೈಶ್ಚ ವಿಬುಧರ್ಷಭಾನ್ ॥
ಅನುವಾದ
ಆ ದುರಹಂಕಾರಿಗಳಾದ ಅಸುರರು ಸಿಂಹನಾದವನ್ನು ಮಾಡುತ್ತಾ ಬಹು ಎಚ್ಚರಿಕೆಯಿಂದ ದೇವ ಸೇನೆಯನ್ನು ಪ್ರಹರಿಸ ತೊಡಗಿದರು. ಅವರೆಲ್ಲರು ಗದೆ, ಪರಿಘ, ಬಾಣ, ಪ್ರಾಸ, ಮುದ್ಗರ, ತೋಮರ, ಶೂಲ, ಪರಶು, ಖಡ್ಗ, ಶತಘ್ನಿ (ತೋಪು), ಭಶುಂಡೀ ಮುಂತಾದ ಅಸ್ತ್ರ-ಶಸ್ತ್ರಗಳ ಮಳೆಯಿಂದ ದೇವತೆಗಳನ್ನು ಎಲ್ಲ ಕಡೆಗಳಿಂದ ಮುಚ್ಚಿಬಿಟ್ಟರು. ॥22-23॥
(ಶ್ಲೋಕ-24)
ಮೂಲಮ್
ನ ತೇದೃಶ್ಯಂತ ಸಂಛನ್ನಾಃ ಶರಜಾಲೈಃ ಸಮಂತತಃ ।
ಪುಂಖಾನುಪುಂಖಪತಿತೈರ್ಜ್ಯೋತೀಂಷೀವ ನಭೋಘನೈಃ ॥
ಅನುವಾದ
ಮೋಡಗಳು ಮುಚ್ಚಿದಾಗ ಆಕಾಶದ ನಕ್ಷತ್ರಗಳು ಕಾಣದೇ ಇರುವಂತೆಯೇ ನಾಲ್ಕೂ ಕಡೆಗಳಿಂದಲೂ ಒಂದರ ಮೇಲೊಂದರಂತೆ ಪ್ರಯೋಗಿಸಿದ ಬಾಣಗಳ ಸುರಿಮಳೆಯಿಂದ ಮುಚ್ಚಿಹೋದ ದೇವತೆಗಳು ಕಾಣದೇ ಹೋದರು.॥24॥
(ಶ್ಲೋಕ-25)
ಮೂಲಮ್
ನ ತೇ ಶಸಾಸವರ್ಷೌಘಾ ಹ್ಯಾಸೇದುಃ ಸುರಸೈನಿಕಾನ್ ।
ಛಿನ್ನಾಃ ಸಿದ್ಧಪಥೇ ದೇವೈರ್ಲಘುಹಸ್ತೈಃ ಸಹಸ್ರಧಾ ॥
ಅನುವಾದ
ಪರೀಕ್ಷಿತನೇ! ಆದರೆ ಅಸ್ತ್ರ-ಶಸ್ತ್ರಗಳ ಮಳೆಯು ದೇವತೆಗಳನ್ನು ಮುಟ್ಟಲು ಸಾಧ್ಯವೇ ಆಗಲಿಲ್ಲ. ಏಕೆಂದರೆ, ಅವರು ತಮ್ಮ ಕೈಚಳಕದಿಂದ ಅವುಗಳನ್ನು ಆಕಾಶದಲ್ಲಿಯೇ ಸಾವಿರಾರು ತುಂಡುಗಳಾಗುವಂತೆ ಕತ್ತರಿಸಿಬಿಟ್ಟರು. ॥25॥
(ಶ್ಲೋಕ-26)
ಮೂಲಮ್
ಅಥ ಕ್ಷೀಣಾಸಶಸೌಘಾ ಗಿರಿಶೃಂಗದ್ರುಮೋಪಲೈಃ ।
ಅಭ್ಯವರ್ಷನ್ಸುರಬಲಂ ಚಿಚ್ಛಿದುಸ್ತಾಂಶ್ಚ ಪೂರ್ವವತ್ ॥
ಅನುವಾದ
ಅಸುರರ ಶಸ್ತ್ರಾಸ್ತ್ರಗಳು ಮುಗಿದುಹೋದಾಗ ಅವರು ದೇವತೆಗಳ ಸೈನ್ಯದ ಮೇಲೆ ಪರ್ವತ ಶಿಖರಗಳನ್ನು, ವೃಕ್ಷಗಳನ್ನು, ಕಲ್ಲುಬಂಡೆಗಳನ್ನು ಮಳೆಗರೆದರು. ಆದರೆ ದೇವತೆಗಳು ಅವನ್ನು ಮೊದಲಿನಂತೆ ತುಂಡರಿಸಿ ಹಾಕಿದರು.॥26॥
(ಶ್ಲೋಕ-27)
ಮೂಲಮ್
ತಾನಕ್ಷತಾನ್ ಸ್ವಸ್ತಿಮತೋ ನಿಶಾಮ್ಯ
ಶಸಾಸಪೂಗೈರಥ ವೃತ್ರನಾಥಾಃ ।
ದ್ರುಮೈರ್ದೃಷದ್ಭಿರ್ವಿವಿಧಾದ್ರಿಶೃಂಗೈ-
ರವಿಕ್ಷತಾಂಸ್ತತ್ರಸುರಿಂದ್ರಸೈನಿಕಾನ್ ॥
(ಶ್ಲೋಕ-28)
ಮೂಲಮ್
ಸರ್ವೇ ಪ್ರಯಾಸಾ ಅಭವನ್ವಿಮೋಘಾಃ
ಕೃತಾಃ ಕೃತಾ ದೇವಗಣೇಷು ದೈತ್ಯೈಃ ।
ಕೃಷ್ಣಾನುಕೂಲೇಷು ಯಥಾ ಮಹತ್ಸು
ಕ್ಷುದ್ರೈಃ ಪ್ರಯುಕ್ತಾ ರುಶತೀ ರೂಕ್ಷವಾಚಃ ॥
ಅನುವಾದ
ಪರೀಕ್ಷಿದ್ರಾಜನೇ! ತಮ್ಮ ಅಸಂಖ್ಯ ಶಸ್ತ್ರಾಸ್ತ್ರಗಳೂ ಕೂಡ ದೇವತೆಗಳ ಸೈನ್ಯಕ್ಕೆ ಏನೂ ತೊಂದರೆಯನ್ನು ಮಾಡಲಾಗದೇ ಇರುವುದನ್ನೂ, ಮರ ಬಂಡೆಗಳು, ಪರ್ವತಗಳ ದೊಡ್ಡ-ದೊಡ್ಡ ಶಿಖರಗಳಿಂದಲೂ ದೇವತೆಗಳ ಶರೀರದ ಮೇಲೆ ಗಾಯದ ಗೆರೆಯೂ ಆಗದೇ ಕುಶಲರೇ ಆಗಿ ಇರುವುದನ್ನು ಕಂಡು ಅವರೆಲ್ಲರಿಗೂ ತುಂಬಾ ಭಯವಾಯಿತು. ಕ್ಷುದ್ರ ಮನುಷ್ಯರು ಪ್ರಯೋಗಿಸುವ ಕಠೋರವೂ, ಅಮಂಗಳ ಕರವೂ ಆದ ಕೆಟ್ಟ ಮಾತುಗಳು ಶ್ರೀಕೃಷ್ಣಪರಮಾತ್ಮನಿಂದ ಸಂರಕ್ಷಿತರಾದ ಭಕ್ತರ ಮೇಲೆ ಎಳ್ಳಷ್ಟು ಪ್ರಭಾವವು ಬೀಳದಂತೆಯೇ ದೈತ್ಯರು ದೇವತೆಗಳನ್ನು ಸೋಲಿಸಲಿಕ್ಕಾಗಿ ಮಾಡಿದ ಪ್ರಯತ್ನಗಳೆಲ್ಲವೂ ನಿಷ್ಫಲವಾದುವು. ॥27-28॥
(ಶ್ಲೋಕ-29)
ಮೂಲಮ್
ತೇ ಸ್ವಪ್ರಯಾಸಂ ವಿತಥಂ ನಿರೀಕ್ಷ್ಯ
ಹರಾವಭಕ್ತಾ ಹತಯುದ್ಧದರ್ಪಾಃ ।
ಪಲಾಯನಾಯಾಜಿಮುಖೇ ವಿಸೃಜ್ಯ
ಪತಿಂ ಮನಸ್ತೇ ದಧುರಾತ್ತಸಾರಾಃ ॥
ಅನುವಾದ
ಭಗವದ್ವಿಮುಖರಾದ ಅಸುರರು ತಮ್ಮ ಪ್ರಯತ್ನವು ವ್ಯರ್ಥವಾದುದನ್ನು ಕಂಡು ಉತ್ಸಾಹಗುಂದಿದರು. ಅವರ ಪರಾಕ್ರಮದ ಗರ್ವವು ನುಚ್ಚುನೂರಾಯಿತು. ಆಗ ಅವರು ತಮ್ಮ ಅಧಿಪತಿಯಾದ ವೃತ್ರಾಸುರನನ್ನು ಯುದ್ಧಭೂಮಿಯಲ್ಲೇ ಬಿಟ್ಟು ಪಲಾಯನ ಮಾಡಿದರು. ಏಕೆಂದರೆ ದೇವತೆಗಳು ಅವರ ಬಲ-ಪೌರುಷಗಳೆಲ್ಲವನ್ನು ಸೆಳೆದು ಕೊಂಡಿದ್ದರು.॥29॥
(ಶ್ಲೋಕ-30)
ಮೂಲಮ್
ವೃತ್ರೋಸುರಾಂಸ್ತಾನನುಗಾನ್ಮನಸ್ವೀ
ಪ್ರಧಾವತಃ ಪ್ರೇಕ್ಷ್ಯ ಬಭಾಷ ಏತತ್ ।
ಪಲಾಯಿತಂ ಪ್ರೇಕ್ಷ್ಯ ಬಲಂ ಚ ಭಗ್ನಂ
ಭಯೇನ ತೀವ್ರೇಣ ವಿಹಸ್ಯ ವೀರಃ ॥
ಅನುವಾದ
ತನ್ನ ಅನುಯಾಯಿಗಳಾದ ದೈತ್ಯವೀರರು ಭಯಗೊಂಡು ಓಡಿಹೋಗುತ್ತಿರುವುದನ್ನೂ, ತನ್ನ ಸೈನ್ಯವು ಚೆಲ್ಲಾಪಿಲ್ಲಿ ಯಾಗುತ್ತಿರುವುದನ್ನು ಕಂಡು ಧೀರ-ವೀರನಾದ ವೃತ್ರಾಸುರನಿಗೆ ನಗುಬಂತು. ॥30॥
(ಶ್ಲೋಕ-31)
ಮೂಲಮ್
ಕಾಲೋಪಪನ್ನಾಂ ರುಚಿರಾಂ ಮನಸ್ವಿನಾ-
ಮುವಾಚ ವಾಚಂ ಪುರುಷಪ್ರವೀರಃ ।
ಹೇ ವಿಪ್ರಚಿತ್ತೇ ನಮುಚೇ ಪುಲೋಮನ್
ಮಯಾನರ್ವಂಛಂಬರ ಮೇ ಶೃಣುಧ್ವಮ್ ॥
ಅನುವಾದ
ವೀರಶಿರೋಮಣಿ ವೃತ್ರಾ ಸುರನು ಸಮಯಕ್ಕೆ ಸರಿಯಾಗಿ ವೀರೋಚಿತ ವಾಣಿಯಿಂದ ವಿಪ್ರಚಿತ್ತಿ, ನಮುಚಿ, ಪುಲೋಮಾ, ಮಯ, ಅನರ್ವಾ, ಶಂಬರ ಮುಂತಾದ ದೈತ್ಯರನ್ನು ಸಂಬೋಧಿಸುತ್ತಾ ಅಸುರರೇ! ಓಡಬೇಡಿರಿ. ನನ್ನ ಒಂದು ಮಾತನ್ನು ಕೇಳಿಕೊಳ್ಳಿರಿ ॥31॥
(ಶ್ಲೋಕ-32)
ಮೂಲಮ್
ಜಾತಸ್ಯ ಮೃತ್ಯುರ್ಧ್ರುವ ಏಷ ಸರ್ವತಃ
ಪ್ರತಿಕ್ರಿಯಾ ಯಸ್ಯ ನ ಚೇಹ ಕ್ಲೃಪ್ತಾ ।
ಲೋಕೋ ಯಶಶ್ಚಾಥ ತತೋ ಯದಿ ಹ್ಯಮುಂ
ಕೋ ನಾಮ ಮೃತ್ಯುಂ ನ ವೃಣೀತ ಯುಕ್ತಮ್ ॥
ಅನುವಾದ
ಹುಟ್ಟಿದವನು ಒಂದಲ್ಲ ಒಂದುದಿನ ಅವಶ್ಯವಾಗಿ ಸಾಯಲೇಬೇಕು. ಇದರಲ್ಲಿ ಸಂದೇಹವೇ ಇಲ್ಲ. ಈ ಜಗತ್ತಿನಲ್ಲಿ ವಿಧಾತನು ಮೃತ್ಯುವಿನಿಂದ ತಪ್ಪಿಸಿ ಕೊಳ್ಳುವ ಯಾವ ಉಪಾಯವನ್ನೂ ತಿಳಿಸಿಲ್ಲ. ಇಂತಹ ಸ್ಥಿತಿಯಲ್ಲಿ ಮೃತ್ಯುವಿನ ಮೂಲಕ ಸ್ವರ್ಗಾದಿ ಲೋಕಗಳು, ಕೀರ್ತಿಯು ಸಿಗುವುದಾದರೆ ಅಂತಹ ಮೃತ್ಯುವನ್ನು ಯಾವ ಬುದ್ಧಿವಂತನು ತಾನೇ ಸ್ವಾಗತಿಸುವುದಿಲ್ಲ? ॥32॥
(ಶ್ಲೋಕ-33)
ಮೂಲಮ್
ದ್ವೌ ಸಂಮತಾವಿಹ ಮೃತ್ಯೂ ದುರಾಪೌ
ಯದ್ಬ್ರಹ್ಮಸಂಧಾರಣಯಾ ಜಿತಾಸುಃ ।
ಕಲೇವರಂ ಯೋಗರತೋ ವಿಜಹ್ಯಾದ್
ಯದಗ್ರಣೀರ್ವೀರಶಯೇನಿವೃತ್ತಃ ॥
ಅನುವಾದ
ಪ್ರಪಂಚದಲ್ಲಿ ಎರಡು ವಿಧದಿಂದ ಮೃತ್ಯುವನ್ನು ಪಡೆಯು ವುದು ಪರಮ ದುರ್ಲಭ ಮತ್ತು ಶ್ರೇಷ್ಠವೆಂದು ತಿಳಿಯ ಲಾಗಿದೆ. ಒಂದು ಯೋಗಿಗಳು ತಮ್ಮ ಪ್ರಾಣಗಳನ್ನು ವಶಪಡಿಸಿಕೊಂಡು ಬ್ರಹ್ಮಚಿಂತನೆಯಿಂದ ಶರೀರವನ್ನು ತ್ಯಜಿಸುವುದು. ಮತ್ತೊಂದು ಯುದ್ಧಭೂಮಿಯಲ್ಲಿ ಬೆನ್ನು ತೋರಿಸದೆ ಶತ್ರುವಿನ ಮುಂದೆ ನಿಂತು ಹೋರಾಡುತ್ತಾ ಮಡಿಯುವುದು. ಇಂತಹ ಒಳ್ಳೆಯ ಅವಕಾಶವನ್ನು ನೀವು ಏಕೆ ಕಳೆದುಕೊಳ್ಳುತ್ತಿರುವಿರಿ? ॥33॥
ಅನುವಾದ (ಸಮಾಪ್ತಿಃ)
ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಇಂದ್ರ-ವೃತ್ರಾಸುರ ಯುದ್ಧವರ್ಣನಂ ನಾಮ ದಶಮೋಽಧ್ಯಾಯಃ ॥10॥