[ಒಂಭತ್ತನೆಯ ಅಧ್ಯಾಯ]
ಭಾಗಸೂಚನಾ
ವಿಶ್ವರೂಪನ ವಧೆ, ವೃತ್ರಾಸುರನು ದೇವತೆಗಳನ್ನು ಸೋಲಿಸಿದುದು ಮತ್ತು ಭಗವಂತನ ಪ್ರೇರಣೆಯಂತೆ ದೇವತೆಗಳು ದಧೀಚಿಋಷಿಗಳ ಬಳಿಗೆ ಹೋದುದು
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತಸ್ಯಾಸನ್ ವಿಶ್ವರೂಪಸ್ಯ ಶಿರಾಂಸಿ ತ್ರೀಣಿ ಭಾರತ ।
ಸೋಮಪೀಥಂ ಸುರಾಪೀಥಮನ್ನಾದಮಿತಿ ಶುಶ್ರುಮ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಭರತ ಕುಲಮಣಿಯೇ! ವಿಶ್ವರೂಪನಿಗೆ ಮೂರು ತಲೆಗಳಿದ್ದುವು. ಅವನು ಒಂದು ಮುಖದಿಂದ ಸೋಮರಸವನ್ನು ಮತ್ತೊಂದರಿಂದ ಸುರೆಯನ್ನು ಕುಡಿಯುತ್ತಿದ್ದನು. ಮೂರನೆಯ ಮುಖದಿಂದ ಅನ್ನ ತಿನ್ನುತ್ತಿದ್ದನು ಎಂದು ನಾವು ಕೇಳಿದ್ದೇವೆ. ॥1॥
(ಶ್ಲೋಕ-2)
ಮೂಲಮ್
ಸ ವೈ ಬರ್ಹಿಷಿ ದೇವೇಭ್ಯೋ ಭಾಗಂ ಪ್ರತ್ಯಕ್ಷಮುಚ್ಚಕೈಃ ।
ಅವದದ್ಯಸ್ಯ ಪಿತರೋ ದೇವಾಃ ಸಪ್ರಶ್ರಯಂ ನೃಪ ॥
ಅನುವಾದ
ಅವನ ತಂದೆಯಾದ ತ್ವಷ್ಟಾನು ದ್ವಾದಶಾದಿತ್ಯರಲ್ಲಿ ಒಬ್ಬನಾದ್ದರಿಂದ ವಿಶ್ವರೂಪನು ಯಜ್ಞವನ್ನು ಮಾಡುವಾಗ ಪ್ರತ್ಯಕ್ಷವಾಗಿ ಉಚ್ಚ-ಸ್ವರದಲ್ಲಿ ಮಂತ್ರಗಳನ್ನು ಹೇಳಿ ದೇವತೆಗಳಿಗೆ ಅತ್ಯಂತ ವಿನಯದಿಂದ ಆಹುತಿಗಳನ್ನು ಅರ್ಪಿಸುತ್ತಿದ್ದನು. ॥2॥
(ಶ್ಲೋಕ-3)
ಮೂಲಮ್
ಸ ಏವ ಹಿ ದದೌ ಭಾಗಂ ಪರೋಕ್ಷಮಸುರಾನ್ ಪ್ರತಿ ।
ಯಜಮಾನೋವಹದ್ಭಾಗಂ ಮಾತೃಸ್ನೇಹವಶಾನುಗಃ ॥
ಅನುವಾದ
ಜೊತೆ-ಜೊತೆಗೆ ಯಾರಿಗೂ ತಿಳಿಯದಂತೆ ಅಸುರರಿಗೂ ಆಹುತಿಗಳನ್ನು ಕೊಡುತ್ತಿದ್ದನು. ಅವನ ತಾಯಿ ಅಸುರಕುಲದವಳಾದ್ದರಿಂದ ಅವನು ಮಾತೃಸ್ನೇಹಕ್ಕೆ ವಶನಾಗಿ ಯಜ್ಞಮಾಡುವಾಗ ಹೀಗೆ ಅಸುರರಿಗೂ ಯಜ್ಞ ಭಾಗವನ್ನು ತಲುಪಿಸುತ್ತಿದ್ದನು. ॥3॥
(ಶ್ಲೋಕ-4)
ಮೂಲಮ್
ತದ್ದೇವಹೇಲನಂ ತಸ್ಯ ಧರ್ಮಾಲೀಕಂ ಸುರೇಶ್ವರಃ ।
ಆಲಕ್ಷ್ಯ ತರಸಾ ಭೀತಸ್ತಚ್ಛೀರ್ಷಾಣ್ಯಚ್ಛಿನದ್ರುಷಾ ॥
ಅನುವಾದ
ಹೀಗೆ ಅವನು ದೇವತೆಗಳಿಗೆ ಅಪರಾಧವನ್ನೂ ಹಾಗೂ ಧರ್ಮದ ಮರೆಯಲ್ಲಿ ಕಪಟವನ್ನು ಮಾಡುತ್ತಿರುವುದನ್ನು ನೋಡಿದ ದೇವೇಂದ್ರನು ಅದಕ್ಕೆ ಹೆದರಿ, ಕೋಪಗೊಂಡು ಅತಿವೇಗದಿಂದ ಅವನ ಮೂರೂ ತಲೆಗಳನ್ನು ಕತ್ತರಿಸಿ ಹಾಕಿದನು.॥4॥
(ಶ್ಲೋಕ-5)
ಮೂಲಮ್
ಸೋಮಪೀಥಂ ತು ಯತ್ತಸ್ಯ ಶಿರ ಆಸೀತ್ಕಪಿಂಜಲಃ ।
ಕಲವಿಂಕಃ ಸುರಾಪೀಥಮನ್ನಾದಂ ಯತ್ ಸ ತಿತ್ತಿರಿಃ ॥
ಅನುವಾದ
ವಿಶ್ವರೂಪನ ಕತ್ತರಿಸಲ್ಪಟ್ಟ ತಲೆಗಳಲ್ಲಿ ಸೋಮರಸವನ್ನು ಪಾನಮಾಡುತ್ತಿದ್ದ ತಲೆಯು ಕಪಿಂಜಲ ಪಕ್ಷಿಯಾಗಿ, ಸುರಾಪಾನ ಮಾಡುತ್ತಿದ್ದ ತಲೆಯು ಕಲವಿಂಕ (ಗುಬ್ಬಚ್ಚಿ)ಯಾಗಿಯೂ, ಅನ್ನವನ್ನು ಉಣ್ಣುತ್ತಿದ್ದ ತಲೆಯು ತಿತ್ತಿರಿ ಪಕ್ಷಿಯಾಗಿ ರೂಪತಾಳಿದವು. ॥5॥
(ಶ್ಲೋಕ-6)
ಮೂಲಮ್
ಬ್ರಹ್ಮಹತ್ಯಾಮಂಜಲಿನಾ ಜಗ್ರಾಹ ಯದಪೀಶ್ವರಃ ।
ಸಂವತ್ಸರಾಂತೇ ತದಘಂ ಭೂತಾನಾಂ ಸ ವಿಶುದ್ಧಯೇ ।
ಭೂಮ್ಯಂಬುದ್ರುಮಯೋಷಿದ್ಭ್ಯಶ್ಚತುರ್ಧಾ ವ್ಯಭಜದ್ಧರಿಃ ॥
ಅನುವಾದ
ವಿಶ್ವರೂಪನ ವಧೆಯಿಂದ ತಗುಲಿದ್ದ ಬ್ರಹ್ಮಹತ್ಯೆಯ ದೋಷವನ್ನು ದೇವೇಂದ್ರನು ಬಯಸಿದ್ದರೆ ದೂರಮಾಡಿಕೊಳ್ಳಬಲ್ಲವ ನಾಗಿದ್ದನು. ಆದರೆ ಹೀಗೆ ಮಾಡುವುದು ಅನುಚಿತವೆಂದು ತಿಳಿದು, ಕೈ ಜೋಡಿಸಿಕೊಂಡು ಅದನ್ನು ಸ್ವೀಕರಿಸಿದನು. ಒಂದು ವರ್ಷದವರೆಗೆ ಅದರಿಂದ ಬಿಡುಗಡೆ ಹೊಂದುವ ಯಾವ ಉಪಾಯವನ್ನೂ ಮಾಡಲಿಲ್ಲ. ಅನಂತರ ಎಲ್ಲ ಜನರ ಮುಂದೆ ಪರಿಶುದ್ಧಿಯನ್ನು ಪಡೆಯಲಿಕ್ಕಾಗಿ ಆತನು ತನಗೆ ತಗುಲಿದ್ದ ಬ್ರಹ್ಮಹತ್ಯೆಯನ್ನು ನಾಲ್ಕು ಪಾಲಾಗಿ ವಿಂಗಡಿಸಿ ಅದನ್ನು ಭೂಮಿಗೆ, ಜಲಕ್ಕೆ, ವೃಕ್ಷಕ್ಕೆ ಮತ್ತು ಸ್ತ್ರೀಯರಿಗೆ ಹಂಚಿ ಬಿಟ್ಟನು.॥6॥
(ಶ್ಲೋಕ-7)
ಮೂಲಮ್
ಭೂಮಿಸ್ತುರೀಯಂ ಜಗ್ರಾಹ ಖಾತಪೂರವರೇಣ ವೈ ।
ಈರಿಣಂ ಬ್ರಹ್ಮಹತ್ಯಾಯಾ ರೂಪಂ ಭೂವೌ ಪ್ರದೃಶ್ಯತೇ ॥
ಅನುವಾದ
ಪರೀಕ್ಷಿತನೇ! ಭೂಮಿಯು-ಎಲ್ಲಾದರೂ ನನ್ನಲ್ಲಿ ಹಳ್ಳ-ಕೊಳ್ಳಗಳಾದರೆ ಅದು ಕಾಲ-ಕಾಲದಲ್ಲಿ ಭರ್ತಿಯಾಗಲಿ ಎಂಬ ವರವನ್ನು ಪಡೆದು ಭೂಮಿಯು ಬ್ರಹ್ಮಹತ್ಯೆಯ ನಾಲ್ಕನೆಯ ಒಂದಂಶವನ್ನು ಸ್ವೀಕರಿಸಿತು. ಅದೇ ಬ್ರಹ್ಮಹತ್ಯೆಯು ಭೂಮಿಯಲ್ಲಿ ಕೆಲವೆಡೆ ಮರುಭೂಮಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ॥7॥
(ಶ್ಲೋಕ-8)
ಮೂಲಮ್
ತುರ್ಯಂ ಛೇದವಿರೋಹೇಣ ವರೇಣ ಜಗೃಹುರ್ದ್ರುಮಾಃ ।
ತೇಷಾಂ ನಿರ್ಯಾಸರೂಪೇಣ ಬ್ರಹ್ಮಹತ್ಯಾ ಪ್ರದೃಶ್ಯತೇ ॥
ಅನುವಾದ
ಮತ್ತೊಂದು ಚತುರ್ಥಾಂಶವನ್ನು ವೃಕ್ಷಗಳು ಸ್ವೀಕರಿಸಿದುವು. ‘ನಮ್ಮಲ್ಲಿ ಕಡಿದುಹೋದ ಭಾಗಗಳು ತಾವಾಗಿಯೇ ಮತ್ತೆ ಬೆಳೆದುಕೊಳ್ಳಲಿ’ ಎಂಬ ವರವನ್ನು ಇಂದ್ರನಿಂದ ಪಡೆದುಕೊಂಡವು. ವೃಕ್ಷಗಳಲ್ಲಿ ಈಗಲೂ ಅಂಟಿನ ರೂಪದಲ್ಲಿ ಆ ಬ್ರಹ್ಮಹತ್ಯೆಯು ಕಾಣಸಿಗುತ್ತದೆ. ॥8॥
(ಶ್ಲೋಕ-9)
ಮೂಲಮ್
ಶಶ್ವತ್ಕಾಮವರೇಣಾಂಹಸ್ತುರೀಯಂ ಜಗೃಹುಃ ಸಿಯಃ ।
ರಜೋರೂಪೇಣ ತಾಸ್ವಂಹೋ ಮಾಸಿ ಮಾಸಿ ಪ್ರದೃಶ್ಯತೇ ॥
ಅನುವಾದ
ಹಾಗೆಯೇ ಸ್ತ್ರೀಯರು ‘ನಮಗೆ ಸದಾಕಾಲ ಪುರುಷರ ಸಹವಾಸ ದೊರೆಯುತ್ತಿರಲಿ’ ಎಂಬ ವರವನ್ನು ಪಡೆದು ಮೂರನೇ ಚತುರ್ಥಾಂಶವನ್ನು ಸ್ವೀಕರಿಸಿದರು. ಅವರಲ್ಲಿರುವ ಬ್ರಹ್ಮ ಹತ್ಯೆಯು ಪ್ರತಿತಿಂಗಳಲ್ಲಿ ರಜೋದರ್ಶನದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ॥9॥
(ಶ್ಲೋಕ-10)
ಮೂಲಮ್
ದ್ರವ್ಯಭೂಯೋವರೇಣಾಪಸ್ತುರೀಯಂ ಜಗೃಹುರ್ಮಲಮ್ ।
ತಾಸು ಬುದ್ಬುದೇನಾಭ್ಯಾಂ ದೃಷ್ಟಂ ತದ್ಧರತಿ ಕ್ಷಿಪನ್ ॥
ಅನುವಾದ
ಹಾಗೆಯೇ ಜಲವು ‘ನಾನು ವ್ಯಯವಾಗುತ್ತಿದ್ದರೂ ಪ್ರವಾಹಾದಿರೂಪಗಳಲ್ಲಿ ನನ್ನ ವೃದ್ಧಿಯು ಆಗುತ್ತಾ ಇರಲಿ’ ಎಂಬ ವರವನ್ನು ಪಡೆದು ಬ್ರಹ್ಮಹತ್ಯೆಯ ಉಳಿದ ನಾಲ್ಕನೆಯ ಒಂದಂಶವನ್ನು ಸ್ವೀಕರಿಸಿತು. ಈಗಲೂ ನೀರಿನಲ್ಲಿ ನೊರೆ, ಗುಳ್ಳೆ ಮುಂತಾದ ರೂಪಗಳಲ್ಲಿ ಆ ಬ್ರಹ್ಮಹತ್ಯೆಯು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮನುಷ್ಯರು ಅದನ್ನು ದೂರತಳ್ಳಿ ನೀರನ್ನು ಸೇವಿಸುತ್ತಾರೆ. ॥10॥
(ಶ್ಲೋಕ-11)
ಮೂಲಮ್
ಹತಪುತ್ರಸ್ತತಸ್ತ್ವಷ್ಟಾ ಜುಹಾವೇಂದ್ರಾಯ ಶತ್ರವೇ ।
ಇಂದ್ರಶತ್ರೋ ವಿವರ್ಧಸ್ವ ಮಾಚಿರಂ ಜಹಿ ವಿದ್ವಿಷಮ್ ॥
ಅನುವಾದ
ವಿಶ್ವರೂಪನ ತಂದೆಯಾದ ತ್ವಷ್ಟಾನಿಗೆ ಪುತ್ರನ ಮರಣದಿಂದಾಗಿ ಮಿತಿಮೀರಿದ ಕ್ರೋಧವು ಉಂಟಾಯಿತು. ಆಗ ಅವನು ಇಂದ್ರನ ಶತ್ರುವಾಗಿ ಇಂದ್ರನನ್ನು ಸಂಹರಿಸುವಂತಹ ಪುತ್ರನು ಉಂಟಾಗಲಿ ಎಂಬ ಆಶಯದಿಂದ ‘ಎಲೈ ಇಂದ್ರ ಶತ್ರುವೇ! ನಿನ್ನ ಅಭಿವೃದ್ಧಿ ಉಂಟಾಗಲೀ. ಶೀಘ್ರಾತಿ ಶೀಘ್ರವಾಗಿ ಶತ್ರುವನ್ನು ಸಂಹರಿಸು’ ಎಂಬ ಮಂತ್ರದಿಂದ ಅಗ್ನಿಯಲ್ಲಿ ಹೋಮ ಮಾಡಿದನು. ॥11॥
(ಶ್ಲೋಕ-12)
ಮೂಲಮ್
ಅಥಾನ್ವಾಹಾರ್ಯಪಚನಾದುತ್ಥಿತೋ ಘೋರದರ್ಶನಃ ।
ಕೃತಾಂತ ಇವ ಲೋಕಾನಾಂ ಯುಗಾಂತಸಮಯೇ ಯಥಾ ॥
ಅನುವಾದ
ಯಜ್ಞವು ಸಮಾಪ್ತವಾಗುತ್ತಿದ್ದಂತೆ ಅನ್ವಹಾರ್ಯ ಪಚನವೆಂಬ ಅಗ್ನಿ (ದಕ್ಷಿಣಾಗ್ನಿ)ಯಿಂದ ಅತಿಭಯಂಕರ ರೂಪದ ಒಬ್ಬ ದೈತ್ಯನು ಮೇಲೆದ್ದು ಬಂದನು. ಲೋಕಗಳನ್ನು ನಾಶಪಡಿಸಲಿಕ್ಕಾಗಿ ಪ್ರಕಟಗೊಂಡಿರುವ ಕಾಲ ಮೃತ್ಯುವಿನಂತೆಯೇ ಅವನು ಕಾಣುತ್ತಿದ್ದನು. ॥12॥
(ಶ್ಲೋಕ-13)
ಮೂಲಮ್
ವಿಷ್ವಗ್ವಿವರ್ಧಮಾನಂ ತಮಿಷುಮಾತ್ರಂ ದಿನೇ ದಿನೇ ।
ದಗ್ಧ ಶೈಲಪ್ರತೀಕಾಶಂ ಸಂಧ್ಯಾಭ್ರಾನೀಕವರ್ಚಸಮ್ ॥
ಅನುವಾದ
ಪರೀಕ್ಷಿತನೇ! ಅವನು ಪ್ರತಿದಿನವೂ ತನ್ನ ದೇಹದ ಎಲ್ಲೆಡೆ ಬಾಣದಂತೆ ಬೆಳೆಯುತ್ತಾ, ಉರಿಯುತ್ತಿರುವ ಅಗ್ನಿಪರ್ವತದಂತೆ ಭೀಕರಾಕಾರ ವಿಕ್ರಮನಾಗಿ ಮೆರೆದನು. ಸಂಜೆಗಾಲದ ಮೋಡಗಳ ತಂಡದಂತೆ ಬೆಳಗತೊಡಗಿದನು. ॥13॥
(ಶ್ಲೋಕ-14)
ಮೂಲಮ್
ತಪ್ತತಾಮ್ರಶಿಖಾಶ್ಮಶ್ರುಂ ಮಧ್ಯಾಹ್ನಾರ್ಕೋಗ್ರಲೋಚನಮ್ ॥
ಅನುವಾದ
ಕೆಂಪಗೆ ಕಾದಿರುವ ತಾಮ್ರದಂತೆ ಹೋಲುವ ತಲೆಗೂದಲು, ಗಡ್ಡ-ಮೀಸೆಗಳಿಂದಲೂ, ನಡುಹಗಲಿನ ಸೂರ್ಯನಂತಹ ಕಣ್ಣುಗಳಿಂದ ಅವನು ಪ್ರಚಂಡನಾಗಿದ್ದನು. ॥14॥
(ಶ್ಲೋಕ-15)
ಮೂಲಮ್
ದೇದೀಪ್ಯಮಾನೇ ತ್ರಿಶಿಖೇ ಶೂಲ ಆರೋಪ್ಯ ರೋದಸೀ ।
ನೃತ್ಯಂತಮುನ್ನದಂತಂ ಚ ಚಾಲಯಂತಂ ಪದಾ ಮಹೀಮ್ ॥
ಅನುವಾದ
ಆ ಉಗ್ರಮೂರ್ತಿಯು ಥಳ-ಥಳಿಸುತ್ತಿದ್ದ ಮೂರು ಅಲಗುಗಳುಳ್ಳ ತ್ರಿಶೂಲವನ್ನು ಎತ್ತಿಕೊಂಡು, ಕುಣಿಯುತ್ತಾ, ಕುಪ್ಪಳಿಸುತ್ತಾ, ವಿಕಟಾಟ್ಟಹಾಸದೊಡನೆ ಅಬ್ಬರಿಸುತ್ತಾ ಭೂಮಿಯನ್ನು ಮೆಟ್ಟಿ ನಡುಗಿಸುತ್ತಿದ್ದವು. ಆ ತ್ರಿಶೂಲದ ಮೇಲೆ ಅವನು ಅಂತರಿಕ್ಷವನ್ನೇ ಎತ್ತಿ ಹಿಡಿದಿರುವನೋ ಎಂಬಂತೆ ಕಾಣುತ್ತಿತ್ತು. ॥15॥
(ಶ್ಲೋಕ-16)
ಮೂಲಮ್
ದರೀಗಂಭೀರವಕೇಣ ಪಿಬತಾ ಚ ನಭಸ್ತಲಮ್ ।
ಲಿಹತಾ ಜಿಹ್ವಯರ್ಕ್ಷಾಣಿ ಗ್ರಸತಾ ಭುವನತ್ರಯಮ್ ॥
(ಶ್ಲೋಕ-17)
ಮೂಲಮ್
ಮಹತಾ ರೌದ್ರದಂಷ್ಟ್ರೇಣ ಜೃಂಭಮಾಣಂ ಮುಹುರ್ಮುಹುಃ ।
ವಿತ್ರಸ್ತಾ ದುದ್ರುವುರ್ಲೋಕಾ ವೀಕ್ಷ್ಯ ಸರ್ವೇದಿಶೋ ದಶ ॥
ಅನುವಾದ
ಗುಹೆಯಂತೆ ಆಳವಾಗಿ ತೆರೆದ ಬಾಯಿಂದ ಇಡೀ ಅಂತರಿಕ್ಷವನ್ನೇ ಕುಡಿಯುವಂತೆಯೂ, ಅತಿವಿಶಾಲವಾಗಿದ್ದ ನಾಲಿಗೆಯಿಂದ ನಕ್ಷತ್ರ ಮಂಡಲವನ್ನೇ ನೆಕ್ಕುತ್ತಿರುವಂತೆಯೂ, ಮೂರುಲೋಕಗಳನ್ನು ನುಂಗಿ ಹಾಕುತ್ತಿರುವಂತೆಯೂ, ತನ್ನ ಭಯಂಕರ ಕೋರೆದಾಡೆಗಳನ್ನು ಪ್ರಕಟಿಸುತ್ತಾ ಅಡಿಗಡಿಗೆ ಆಕಳಿಸುತ್ತಿದ್ದನು. ಅವನ ಭೀಷಣರೂಪವನ್ನು ಕಂಡು ಎಲ್ಲ ಜನರು ಭಯದಿಂದ ಎಲ್ಲೆಡೆ ಓಡತೊಡಗಿದರು. ॥16-17॥
(ಶ್ಲೋಕ-18)
ಮೂಲಮ್
ಯೇನಾವೃತಾ ಇಮೇ ಲೋಕಾಸ್ತಮಸಾ ತ್ವಾಷ್ಟ್ರ ಮೂರ್ತಿನಾ ।
ಸ ವೈ ವೃತ್ರ ಇತಿ ಪ್ರೋಕ್ತಃ ಪಾಪಃ ಪರಮದಾರುಣಃ ॥
ಅನುವಾದ
ಪರೀಕ್ಷಿದ್ರಾಜನೇ! ತ್ವಷ್ಟಾನ ತಮೋಗುಣೀ ಆ ಪುತ್ರನು ಎಲ್ಲ ಲೋಕಗಳನ್ನು ಆವರಿಸಿಕೊಂಡಿದ್ದನು. ಇದರಿಂದ ಆ ಪಾಪಿಯೂ, ಅತ್ಯಂತ ಕ್ರೂರನೂ ಆದ ಆ ಪುರುಷನ ಹೆಸರು ‘ವೃತ್ರಾಸುರ’ ಎಂದಾಯಿತು. ॥18॥
(ಶ್ಲೋಕ-19)
ಮೂಲಮ್
ತಂ ನಿಜಘ್ನುರಭಿದ್ರುತ್ಯ ಸಗಣಾ ವಿಬುಧರ್ಷಭಾಃ ।
ಸ್ವೈಃ ಸ್ವೈರ್ದಿವ್ಯಾಸಶಸೌಘೈಃ ಸೋಗ್ರಸತ್ತಾನಿ ಕೃತ್ಸ್ನಶಃ ॥
ಅನುವಾದ
ದೊಡ್ಡ-ದೊಡ್ಡ ದೇವತೆಗಳು ತಮ್ಮ-ತಮ್ಮ ಅನುಯಾಯಿಗಳೊಂದಿಗೆ ಒಟ್ಟಿಗೆ ಅವನ ಮೇಲೆ ಮುಗಿಬಿದ್ದರು ಮತ್ತು ತಮ್ಮ-ತಮ್ಮ ದಿವ್ಯ ಅಸ್ತ್ರಗಳಿಂದ ಹೊಡೆಯ ತೊಡಗಿದರು. ಆದರೆ ವೃತ್ರಾಸುರನು ಅವರ ಎಲ್ಲ ಶಸ್ತ್ರಾಸ್ತ್ರಗಳನ್ನು ನುಂಗಿಹಾಕಿದನು. ॥19॥
(ಶ್ಲೋಕ-20)
ಮೂಲಮ್
ತತಸ್ತೇ ವಿಸ್ಮಿತಾಃ ಸರ್ವೇ ವಿಷಣ್ಣಾ ಗ್ರಸ್ತತೇಜಸಃ ।
ಪ್ರತ್ಯಂಚಮಾದಿಪುರುಷಮುಪತಸ್ಥುಃ ಸಮಾಹಿತಾಃ ॥
ಅನುವಾದ
ಆಗ ದೇವತೆಗಳಿಗೆ ಮಹದಾಶ್ಚರ್ಯವಾಯಿತು. ಅವರ ತೇಜಸ್ಸೆಲ್ಲವೂ ಉಡುಗಿ ಹೋಯಿತು. ಅವರೆಲ್ಲರೂ ದೀನ, ಹೀನರಾಗಿ ಕಳವಳಗೊಂಡು ಏಕಾಗ್ರಚಿತ್ತದಿಂದ ತಮ್ಮ ಹೃದಯದಲ್ಲಿ ವಿರಾಜಿಸುತ್ತಿರುವ ಆದಿಪುರುಷ ಶ್ರೀನಾರಾಯಣನಲ್ಲಿ ಶರಣಾಗಿ ಹೀಗೆ ಪ್ರಾರ್ಥಿಸಿದರು ॥20॥
(ಶ್ಲೋಕ-21)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ವಾಯ್ವಂಬರಾಗ್ನ್ಯಪ್ಕ್ಷಿತಯಸಿಲೋಕಾ ।
ಬ್ರಹ್ಮಾದಯೋ ಯೇ ವಯಮುದ್ವಿಜಂತಃ
ಹರಾಮ ಯಸ್ಮೈ ಬಲಿಮಂತಕೋಸೌ
ಬಿಭೇತಿ ಯಸ್ಮಾದರಣಂ ತತೋ ನಃ ॥
ಅನುವಾದ
ದೇವತೆಗಳು ಭಗವಂತನಲ್ಲಿ ಪ್ರಾರ್ಥಿಸುತ್ತಾರೆವಾಯು, ಆಕಾಶ, ಅಗ್ನಿ, ಜಲ, ಪೃಥಿವಿಗಳೆಂಬ ಪಂಚಭೂತಗಳೂ ಅವು ಗಳಿಂದ ನಿರ್ಮಿತವಾದ ಮೂರು ಲೋಕಗಳೂ, ಅವುಗಳಿಗೆ ಅಧಿಪತಿಗಳಾದ ಬ್ರಹ್ಮಾದಿಗಳೂ ಮತ್ತು ನಾವು ಯಾವನಿಗೆ ಹೆದರಿ ಕಾಣಿಕೆಗಳನ್ನು ಸಮರ್ಪಿಸುತ್ತಿದ್ದೇವೆಯೋ ಅಂತಹ ಕಾಲ ಪುರುಷನೂ ಕೂಡ ಭಗವಂತನಿಗೆ ಭಯಪಟ್ಟು ನಡೆಯುವನು. ಅದಕ್ಕಾಗಿ ಭಗವಂತನೇ ಈಗ ನಮ್ಮ ರಕ್ಷಕನಾಗಿದ್ದಾನೆ. ॥21॥
(ಶ್ಲೋಕ-22)
ಮೂಲಮ್
ಅವಿಸ್ಮಿತಂ ತಂ ಪರಿಪೂರ್ಣಕಾಮಂ
ಸ್ವೇನೈವ ಲಾಭೇನ ಸಮಂ ಪ್ರಶಾಂತಮ್ ।
ವಿನೋಪಸರ್ಪತ್ಯಪರಂ ಹಿ ಬಾಲಿಶಃ
ಶ್ವಲಾಂಗುಲೇನಾತಿತಿತರ್ತಿ ಸಿಂಧುಮ್ ॥
ಅನುವಾದ
ಪ್ರಭೋ! ನಿನಗಾಗಿ ಯಾವುದೇ ಹೊಸ ಮಾತಲ್ಲ, ಅದರಿಂದ ಏನನ್ನು ನೋಡಿದರೂ ನೀನು ವಿಸ್ಮಿತನಾಗು ವುದಿಲ್ಲ. ನೀನು ನಿನ್ನ ಸ್ವರೂಪದ ಸಾಕ್ಷಾತ್ಕಾರದಿಂದಲೇ ಪೂರ್ಣಕಾಮನೂ, ಸಮನೂ, ಶಾಂತನೂ ಆಗಿರುವೆ. ಅಂತಹ ನಿನ್ನನ್ನು ಬಿಟ್ಟು ಬೇರೆಯವರಿಗೆ ಶರಣಾಗುವವನು ಮೂರ್ಖನೇ ಸರಿ. ಅವನು ನಾಯಿಯ ಬಾಲವನ್ನು ಹಿಡಿದುಕೊಂಡು ಸಮುದ್ರವನ್ನು ದಾಟಲು ಬಯಸು ವಂತಹ ಗಾಂಪನೇ ಆಗಿದ್ದಾನೆ. ॥22॥
(ಶ್ಲೋಕ-23)
ಮೂಲಮ್
ಯಸ್ಯೋರುಶೃಂಗೇ ಜಗತೀಂ ಸ್ವನಾವಂ
ಮನುರ್ಯಥಾಬಧ್ಯ ತತಾರ ದುರ್ಗಮ್ ।
ಸ ಏವ ನಸ್ತ್ವಾಷ್ಟ್ರಭಯಾದ್ ದುರಂತಾತ್
ತ್ರಾತಾಶ್ರಿತಾನ್ವಾರಿಚರೋಪಿ ನೂನಮ್ ॥
ಅನುವಾದ
ನೀರಿನಲ್ಲಿ ಸಂಚರಿಸುತ್ತಿರುವ ಮೀನಿನ ಆಕಾರದಲ್ಲಿದ್ದರೂ ನೀನು ಆಶ್ರಿತರಕ್ಷಕನು. ವೈವಸ್ವತ ಮನುವು ಆತನ ವಿಶಾಲವಾದ ಶೃಂಗಕ್ಕೆ ಭೂಮಿಯೆಂಬ ನಾವೆಯನ್ನು ಕಟ್ಟಿ ಅನಾಯಾಸ ವಾಗಿಯೇ ಪ್ರಳಯಕಾಲದ ಪರಮ ಸಂಕಟವನ್ನು ದಾಟಿ ಬಿಟ್ಟನು. ಆ ಮಹಾಪುರುಷನೇ ಶರಣಾಗತರಾಗಿರುವ ನಮ್ಮನ್ನು ವೃತ್ರಾಸುರನ ದೆಸೆಯಿಂದ ಉಂಟಾಗಿರುವ ಭಯದಿಂದ ಖಂಡಿತವಾಗಿ ದಾಟಿಸುವನು. ॥23॥
(ಶ್ಲೋಕ-24)
ಮೂಲಮ್
ಪುರಾ ಸ್ವಯಂಭೂರಪಿ ಸಂಯಮಾಂಭ-
ಸ್ಯುದೀರ್ಣವಾತೋರ್ಮಿರವೈಃ ಕರಾಲೇ ।
ಏಕೋರವಿಂದಾತ್ಪತಿತಸ್ತತಾರ
ತಸ್ಮಾದ್ಭಯಾದ್ಯೇನ ಸ ನೋಸ್ತು ಪಾರಃ ॥
ಅನುವಾದ
ಹಿಂದೆ ಬ್ರಹ್ಮದೇವರು ತಾವು ಕುಳಿತಿದ್ದ ಪದ್ಮಪೀಠದಿಂದ ಭೀಕರವಾದ ಬಿರುಗಾಳಿಯ ಹೊಡೆತದಿಂದ ಮೇಲೆದ್ದು ಮಹಾತರಂಗಗಳಿಂದ ಭೋರ್ಗರೆಯುತ್ತಿದ್ದ ಪ್ರಳಯಸಾಗರದ ಜಲದಲ್ಲಿ ಬಿದ್ದುಬಿಟ್ಟರು. ಆಗ ಏಕಾಕಿಯಾಗಿ ಅಸಹಾಯಕರಾಗಿದ್ದ ಅವರನ್ನು ಆ ಮಹಾಭಯದಿಂದ ಯಾರು ಪಾರು ಮಾಡಿದನೋ, ಅವನೇ ಈಗ ನಮ್ಮನ್ನು ಪಾರು ಮಾಡಿಸಲಿ. ॥24॥
(ಶ್ಲೋಕ-25)
ಮೂಲಮ್
ಯ ಏಕ ಈಶೋ ನಿಜಮಾಯಯಾ ನಃ
ಸಸರ್ಜ ಯೇನಾನು ಸೃಜಾಮ ವಿಶ್ವಮ್ ।
ವಯಂ ನ ಯಸ್ಯಾಪಿ ಪುರಃ ಸಮೀಹತಃ
ಪಶ್ಯಾಮ ಲಿಂಗಂ ಪೃಥಗೀಶಮಾನಿನಃ ॥
ಅನುವಾದ
ಆ ಅದ್ವಿತೀಯ ಪರಮ ಪ್ರಭುವೇ ತನ್ನ ಮಾಯಾ ಶಕ್ತಿಯಿಂದ ನಮ್ಮನ್ನು ಸೃಷ್ಟಿಮಾಡಿದ್ದಾನೆ. ಅವನ ಅನುಗ್ರಹದಿಂದಲೇ ನಾವು ಸೃಷ್ಟಿಕಾರ್ಯವನ್ನು ನಡೆಸುತ್ತಿದ್ದೇವೆ. ನಾವು ಅವನ ಮುಂದೆಯೇ ಇದ್ದು ಅವನ ದಿವ್ಯವ್ಯಾಪಾರಗಳನ್ನು ನೋಡುತ್ತಿದ್ದೇವೆ. ಆದರೆ ‘ನಾವೇ ಸ್ವತಂತ್ರರಾದ ಈಶ್ವರರು’ ಎಂಬ ಅಹಂಕಾರದಿಂದ ನಾವು ಅವನ ಸ್ವರೂಪವನ್ನು ಕಾಣಲಾರದೇ ಇದ್ದೇವೆ. ॥25॥
(ಶ್ಲೋಕ-26)
ಮೂಲಮ್
ಯೋ ನಃ ಸಪತ್ನೈರ್ಭೃಶಮರ್ದ್ಯಮಾನಾನ್-
ದೇವರ್ಷಿತಿರ್ಯಙ್ನೃಷು ನಿತ್ಯ ಏವ ।
ಕೃತಾವತಾರಸ್ತನುಭಿಃ ಸ್ವಮಾಯಯಾ
ಕೃತ್ವಾತ್ಮಸಾತ್ಪಾತಿ ಯುಗೇ ಯುಗೇ ಚ ॥
ಅನುವಾದ
ದೇವತೆಗಳು ತಮ್ಮ ಶತ್ರುಗಳಿಂದ ಬಹಳ ಪೀಡಿತರಾಗಿದ್ದಾರೆ ಎಂದು ಆ ಪ್ರಭುವು ನೋಡಿದಾಗ ಅವನು ನಿಜವಾಗಿ ನಿರ್ವಿಕಾರನಾಗಿದ್ದರೂ ತನ್ನ ಮಾಯೆಯನ್ನು ಆಶ್ರಯಿಸಿ ದೇವತೆ, ಋಷಿ, ಪಶು-ಪಕ್ಷಿ ಮತ್ತು ಮನುಷ್ಯಾದಿ ರೂಪದಲ್ಲಿ ಅವತರಿಸುವನು ಹಾಗೂ ಯುಗ-ಯುಗಗಳಲ್ಲಿ ನಮ್ಮನ್ನು ತಮ್ಮವರೆಂದು ತಿಳಿದು ರಕ್ಷಿಸುತ್ತಿರುವನು. ॥26॥
(ಶ್ಲೋಕ-27)
ಮೂಲಮ್
ತಮೇವ ದೇವಂ ವಯಮಾತ್ಮದೈವತಂ
ಪರಂ ಪ್ರಧಾನಂ ಪುರುಷಂ ವಿಶ್ವಮನ್ಯಮ್ ।
ವ್ರಜಾಮ ಸರ್ವೇ ಶರಣಂ ಶರಣ್ಯಂ
ಸ್ವಾನಾಂ ಸ ನೋ ಧಾಸ್ಯತಿ ಶಂ ಮಹಾತ್ಮಾ ॥
ಅನುವಾದ
ಅವನೇ ಎಲ್ಲರ ಆತ್ಮನೂ, ಪರ ಮಾರಾಧ್ಯದೇವನೂ ಆಗಿರುವನು. ಅವನೇ ಪ್ರಕೃತಿ ಮತ್ತು ಪುರುಷ ರೂಪದಿಂದ ವಿಶ್ವದ ಕಾರಣನಾಗಿದ್ದಾನೆ. ಅವನು ವಿಶ್ವದಿಂದ ಬೇರೆಯಾಗಿಯೂ ಇದ್ದಾನೆ ಹಾಗೂ ವಿಶ್ವರೂಪನೂ ಆಗಿದ್ದಾನೆ. ನಾವೆಲ್ಲರೂ ಆ ಶರಣಾಗತವತ್ಸಲ ಭಗವಾನ್ ಶ್ರೀಹರಿಯಲ್ಲಿ ಶರಣಾಗತರಾಗಿದ್ದೇವೆ. ಉದಾರ ಶಿರೋಮಣಿಯಾದ ಪ್ರಭುವು ಖಂಡಿತವಾಗಿ ತನ್ನವರೇ ಆಗಿರುವ ನಮಗೆ ಮಂಗಳವನ್ನುಂಟು ಮಾಡುವನು. ॥27॥
(ಶ್ಲೋಕ-28)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ತೇಷಾಂ ಮಹಾರಾಜ ಸುರಾಣಾಮುಪತಿಷ್ಠತಾಮ್ ।
ಪ್ರತೀಚ್ಯಾಂ ದಿಶ್ಯಭೂದಾವಿಃ ಶಂಖಚಕ್ರಗದಾಧರಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ದೇವತೆಗಳು ಹೀಗೆ ಭಗವಂತನನ್ನು ಪ್ರಾರ್ಥಿಸಿದಾಗ ಸ್ವಯಂ ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ ಭಗವಂತನು ಅವರ ಮುಂದೆ ಪ್ರಕಟನಾದನು. ॥28॥
(ಶ್ಲೋಕ-29)
ಮೂಲಮ್
ಆತ್ಮತುಲ್ಯೈಃ ಷೋಡಶಭಿರ್ವಿನಾ ಶ್ರೀವತ್ಸಕೌಸ್ತುಭೌ ।
ಪರ್ಯುಪಾಸಿತಮುನ್ನಿದ್ರಶರದಂಬುರುಹೇಕ್ಷಣಮ್ ॥
ಅನುವಾದ
ಭಗವಂತನ ನೇತ್ರಗಳು ಶರತ್ಕಾಲದ ಕಮಲದಂತೆ ಅರಳಿದ್ದವು. ಅವನೊಡನೆ ಹದಿನಾರು ಪಾರ್ಷದರು ಅವನ ಸೇವೆಯಲ್ಲಿ ತೊಡಗಿದ್ದರು. ಅವರು ಎಲ್ಲ ವಿಧದಿಂದ ಭಗವಂತನಂತೆಯೇ ಕಾಣುತ್ತಿದ್ದರು. ಕೇವಲ ಅವರ ವಕ್ಷಃಸ್ಥಳದಲ್ಲಿ ಶ್ರೀವತ್ಸಲಾಂಛನ ಮತ್ತು ಕೊರಳಲ್ಲಿ ಕೌಸ್ತುಭ ಮಣಿಯು ಇರಲಿಲ್ಲ. ॥29॥
(ಶ್ಲೋಕ-30)
ಮೂಲಮ್
ದೃಷ್ಟ್ವಾ ತಮವನೌ ಸರ್ವ ಈಕ್ಷಣಾಹ್ಲಾದವಿಕ್ಲವಾಃ ।
ದಂಡವತ್ಪತಿತಾ ರಾಜನ್ ಶನೈರುತ್ಥಾಯ ತುಷ್ಟುವುಃ ॥
ಅನುವಾದ
ಮಹಾರಾಜನೇ! ಭಗವಂತನ ದರ್ಶನ ಪಡೆದು ಎಲ್ಲ ದೇವತೆಗಳು ಆನಂದಮಗ್ನರಾದರು. ಅವರು ಭೂಮಿಯಲ್ಲಿ ಹೊರಳಾಡುತ್ತಾ ಸಾಷ್ಟಾಂಗ ನಮಸ್ಕಾರ ಮಾಡಿ, ಮತ್ತೆ ನಿಧಾನವಾಗಿ ಮೇಲೆದ್ದು ಆ ಭಗವಂತನನ್ನು ಸ್ತುತಿಸ ತೊಡಗಿದರು. ॥30॥
(ಶ್ಲೋಕ-31)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ನಮಸ್ತೇ ಯಜ್ಞವೀರ್ಯಾಯ ವಯಸೇ ಉತ ತೇ ನಮಃ ।
ನಮಸ್ತೇ ಹ್ಯಸ್ತಚಕ್ರಾಯ ನಮಃ ಸುಪುರುಹೂತಯೇ ॥
ಅನುವಾದ
ದೇವತೆಗಳೆಂದರು — ಓ ಭಗವಂತಾ! ಯಜ್ಞಗಳ ಫಲವನ್ನು ಕೊಡುವ ಯಜ್ಞಶಕ್ತಿಯುಳ್ಳವನೂ, ಅದರ ಫಲದ ಎಲ್ಲೆಯನ್ನು ನಿರ್ಧರಿಸುವ ಕಾಲಸ್ವರೂಪನೂ ಆಗಿರುವ ನಿನಗೆ ನಮೋ ನಮಃ ಅಸುರರ ಮೇಲೆ ಸುದರ್ಶನ ಚಕ್ರವನ್ನು ಪ್ರಯೋಗಿಸುವವನೂ, ಅನಂತ ನಾಮಗಳುಳ್ಳವನೂ ಆದ ನಿನಗೆ ನಮೋ ನಮಃ. ॥31॥
(ಶ್ಲೋಕ-32)
ಮೂಲಮ್
ಯತ್ತೇ ಗತೀನಾಂ ತಿಸೃಣಾಮೀಶಿತುಃ ಪರಮಂ ಪದಮ್ ।
ನಾರ್ವಾಚೀನೋ ವಿಸರ್ಗಸ್ಯ ಧಾತರ್ವೇದಿತುಮರ್ಹತಿ ॥
ಅನುವಾದ
ಓ ವಿಧಾತನೇ! ಸತ್ತ್ವ, ರಜ, ತಮ ಎಂಬ ಈ ತ್ರಿಗುಣಗಳನ್ನು ಸಾರವಾಗಿ ಉಂಟಾಗುವ ಉತ್ತಮ, ಮಧ್ಯಮ, ಅಧಮವೆಂಬ ಗತಿಗಳ ನಿಯಾಮಕನು ನೀನೇ ಆಗಿರುವೆ. ನಿನ್ನ ಪರಮಪದದ ವಾಸ್ತವಿಕ ಸ್ವರೂಪವನ್ನು ಈ ಕಾರ್ಯ-ಕಾರಣ ರೂಪವಾದ ಜಗತ್ತಿನ ಯಾವುದೇ ಪ್ರಾಣಿಗಳು ತಿಳಿಯಲಾರವು. ॥32॥
(ಶ್ಲೋಕ-33)
ಮೂಲಮ್
ಓಂ ನಮಸ್ತೇಸ್ತು ಭಗವನ್ನಾರಾಯಣ ವಾಸುದೇವಾದಿ- ಪುರುಷ ಮಹಾಪುರುಷ ಮಹಾನುಭಾವ ಪರಮಮಂಗಲ ಪರಮಕಲ್ಯಾಣ ಪರಮಕಾರುಣಿಕ ಕೇವಲ ಜಗದಾಧಾರ ಲೋಕೈಕನಾಥ ಸರ್ವೇಶ್ವರ ಲಕ್ಷ್ಮೀನಾಥ ಪರಮಹಂಸ- ಪರಿವ್ರಾಜಕೈಃ ಪರಮೇಣಾತ್ಮ ಯೋಗ ಸಮಾಧಿನಾ ಪರಿ- ಭಾವಿತಪರಿಸ್ಫುಟಪಾರಮಹಂಸ್ಯಧರ್ಮೇಣೋದ್ಘಾಟಿತ- ತಮಃಕಪಾಟದ್ವಾರೇ ಚಿತ್ತೇಪಾವೃತ ಆತ್ಮಲೋಕೇ ಸ್ವಯ- ಮುಪಲಬ್ಧ ನಿಜಸುಖಾನುಭವೋ ಭವಾನ್ ॥
ಅನುವಾದ
ಓಂ ನಿನಗೆ ನಮಸ್ಕಾರವಿರಲಿ. ಶ್ರೀಭಗವಂತನಾದ ನಾರಾಯಣನೇ! ವಾಸುದೇವನೇ! ಆದಿಪುರುಷನೇ! ಮಹಾಪುರುಷನೇ! ಮಹಾನುಭಾವನೇ! ಪರಮ ಮಂಗಳನೇ! ಪರಮಕಲ್ಯಾಣನೇ! ಪರಮಕಾರುಣಿಕನೇ! ಕೇವಲನೇ! ಜಗದಾಧಾರನೇ! ಲೋಕೈಕನಾಥನೇ! ಸರ್ವೇಶ್ವರನೇ! ಲಕ್ಷ್ಮೀಪತಿಯೇ! ಪರಮಹಂಸ ಪರಿ ವ್ರಾಜಕರು ಪರಮಹಂಸ ಧರ್ಮವನ್ನು ಚೆನ್ನಾಗಿ ಸ್ಪಷ್ಟವಾಗಿ ಭಾವಿಸಿಕೊಳ್ಳುವಂತಹ ಪರಮ ಶ್ರೇಷ್ಠವಾದ ಆತ್ಮಯೋಗ ಸಮಾಧಿಯಿಂದ ಹೃದಯದ ಅಜ್ಞಾನವೆಂಬ ಬಾಗಿಲನ್ನು ತೆರೆದು ಕೊಂಡಾಗ ಅವರ ಆತ್ಮಲೋಕದಲ್ಲಿ, ಆತ್ಮಾನಂದ ರೂಪದಲ್ಲಿ ಯಾವ ಆವರಣವೂ ಇಲ್ಲದೆ ಪ್ರಕಟಗೊಳ್ಳು ವವನೂ, ಆತ್ಮಸುಖಾನು ಭವವನ್ನು ಸಹಜವಾಗಿಯೇ ಪಡೆದಿರುವವನೂ ಆದ ನಿನಗೆ ನಮೋ ನಮಃ. ॥33॥
(ಶ್ಲೋಕ-34)
ಮೂಲಮ್
ದುರವಬೋಧ ಇವ ತವಾಯಂ ವಿಹಾರಯೋಗೋ ಯದಶರಣೋಶರೀರ ಇದಮನವೇಕ್ಷಿತಾ ಸ್ಮತ್ಸಮವಾಯ ಆತ್ಮನೈವಾವಿಕ್ರಿಯಮಾಣೇನ ಸಗುಣಮಗುಣಃ ಸೃಜಸಿ ಪಾಸಿ ಹರಸಿ ॥
ಅನುವಾದ
ಓ ಭಗವಂತಾ! ನಿನ್ನ ಲೀಲೆಯ ರಹಸ್ಯವನ್ನು ತಿಳಿಯುವುದು ಅತಿಕಷ್ಟ. ಏಕೆಂದರೆ, ನೀನು ಯಾವ ಆಶ್ರಯವೂ ಇಲ್ಲದೆ, ಪ್ರಾಕೃತ ಶರೀರವೂ ಇಲ್ಲದೆ, ಬೇರೆ ಯಾವ ಸಹಯೋಗವನ್ನೂ ಅಪೇಕ್ಷಿಸದೆ, ನಿರ್ಗುಣನೂ ನಿರ್ವಿಕಾರನೂ ಆಗಿದ್ದರೂ ತಾನಾಗಿಯೇ ಈ ಸಗುಣವಾದ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುತ್ತಿರುವೆ. ॥34॥
(ಶ್ಲೋಕ-35)
ಮೂಲಮ್
ಅಥ ತತ್ರ ಭವಾನ್ ಕಿಂ ದೇವದತ್ತವದಿಹ ಗುಣವಿಸರ್ಗಪತಿತಃ ಪಾರತಂತ್ರ್ಯೇಣ ಸ್ವಕೃತಕುಶಲಾಕುಶಲಂ ಲಮುಪಾದದಾತ್ಯಾಹೋಸ್ವಿದಾತ್ಮಾರಾಮ ಉಪಶಮ- ಶೀಲಃ ಸಮಂಜಸ ದರ್ಶನ ಉದಾಸ್ತ ಇತಿ ಹ ವಾವ ನ ವಿದಾಮಃ ॥
ಅನುವಾದ
ಓ ಭಗವಂತನೇ! ಸೃಷ್ಟಿಯೆಂಬ ಕಾರ್ಯದಲ್ಲಿ ನೀನು ದೇವದತ್ತನೇ ಮುಂತಾದ ಪ್ರಾಕೃತ ಜೀವರಂತೆ ಗುಣಗಳ ಕಾರ್ಯ ರೂಪವಾದ ಈ ಜಗತ್ತಿನಲ್ಲಿ ಪ್ರಕಟಗೊಂಡು ಕರ್ಮಾಧೀನ ನಾಗಿ ಪಾಪ-ಪುಣ್ಯಗಳ ಫಲವನ್ನು ಭೋಗಿಸುವವನೋ ಅಥವಾ ಆತ್ಮಾರಾಮನಾಗಿ, ಶಾಂತಸ್ವಭಾವವುಳ್ಳವನಾಗಿ, ವಿಷಯಗಳಲ್ಲಿ ಉದಾಸೀನನಾಗಿ ಸಾಕ್ಷಿಯಾಗಿ ಮಾತ್ರ ಇರುವವನೋ ಎಂಬುದೂ ಕೂಡ ನಮಗೆ ತಿಳಿಯದು. ॥35॥
(ಶ್ಲೋಕ-36)
ಮೂಲಮ್
ನ ಹಿ ವಿರೋಧ ಉಭಯಂ ಭಗವತ್ಯಪರಿಗಣಿತಗುಣಗಣೇ ಈಶ್ವರೇನವಗಾಹ್ಯ-ಮಾಹಾತ್ಮ್ಯೇರ್ವಾಚೀನವಿಕಲ್ಪವಿತರ್ಕವಿಚಾರಪ್ರಮಾಣಾಭಾಸಕುತರ್ಕಶಾಸಕಲಿಲಾಂತಃಕರಣಾ ಶ್ರಯದುರವಗ್ರಹವಾದಿನಾಂ ವಿವಾದಾನವಸರ ಉಪರತಸಮಸ್ತ ಮಾಯಾಮಯೇ ಕೇವಲ ಏವಾತ್ಮಮಾಯಾಮಂತರ್ಧಾಯ ಕೋನ್ವರ್ಥೋ ದುರ್ಘಟ ಇವ ಭವತಿ ಸ್ವರೂಪದ್ವಯಾಭಾವಾತ್ ॥
ಅನುವಾದ
ಇವೆರಡೂ ನಿನ್ನಲ್ಲಿದ್ದರೂ ಅದರಲ್ಲಿ ವಿರೋಧವೇನಿಲ್ಲ. ಏಕೆಂದರೆ, ನೀನು ಸ್ವಯಂ ಭಗವಂತನೇ ಆಗಿರುವೆ. ನಿನ್ನ ಗುಣಗಳು ಅಗಣಿತವಾಗಿವೆ ಮತ್ತು ಮಹಿಮೆಯು ಅಗಾಧವಾಗಿದೆ. ನೀನು ಸರ್ವಶಕ್ತಿಸಂಪನ್ನನು. ಆಧುನಿಕರು ಅನೇಕ ಪ್ರಕಾರವಾದ ವಿಕಲ್ಪ, ವಿತರ್ಕ, ವಿಚಾರ, ಸುಳ್ಳುಪ್ರಮಾಣಗಳು ಹಾಗೂ ಕುತರ್ಕ ಪೂರ್ಣವಾದ ಶಾಸ್ತ್ರಗಳನ್ನು ಅಧ್ಯಯನಮಾಡಿ ತಮ್ಮ ಹೃದಯವನ್ನು ಮಲಿನವಾಗಿಸಿಕೊಳ್ಳುವರು. ಅವರು ದುರಾಗ್ರಹಿಗಳಾಗಿರುವುದಕ್ಕೂ ಇದೇ ಕಾರಣವು. ನಿನ್ನಲ್ಲಿ ಅವರ ಈ ವಾದ-ವಿವಾದಗಳಿಗೆ ಸಂದರ್ಭವೇ ಇಲ್ಲ. ನಿನ್ನ ವಾಸ್ತವಿಕ ಸ್ವರೂಪವಾದರೋ ಸಮಸ್ತ ಮಾಯಾ ಪದಾರ್ಥಗಳನ್ನೂ ಮೀರಿ ಕೇವಲನಾಗಿ ರುವುದು. ಅದರಲ್ಲೇ ನೀನು ನಿನ್ನ ಮಾಯಾಶಕ್ತಿಯನ್ನು ಅಡಗಿಸಿಕೊಂಡೆಯಾದರೆ ನಿನ್ನಲ್ಲಿ ಯಾವುದು ತಾನೇ ಇರಲಾರದು? ಆದ್ದರಿಂದ ನೀನು ಸಾಮಾನ್ಯಮನುಷ್ಯರಂತೆ ಕರ್ತೃತ್ವ-ಭೋಕ್ತೃತ್ವಗಳು ಉಳ್ಳವನೂ ಆಗಿರಬಹುದು ಮತ್ತು ಮಹಾಪುರುಷರಂತೆ ಉದಾಸೀನನೂ ಆಗಿರ ಬಹುದು. ನೀನಾದರೋ ಇವೆರಡರಿಂದಲೂ ವಿಲಕ್ಷಣ, ಅನಿರ್ವಚನೀಯನಾಗಿರುವೆ. ॥36॥
(ಶ್ಲೋಕ-37)
ಮೂಲಮ್
ಸಮವಿಷಮಮತೀನಾಂ ಮತಮನು ಸರಸಿ ಯಥಾ ರಜ್ಜುಖಂಡಃ ಸರ್ಪಾದಿಧಿಯಾಮ್ ॥
ಅನುವಾದ
ಒಂದು ಹಗ್ಗದ ತುಂಡು ಭ್ರಾಂತಿಯುಳ್ಳವರಿಗೆ ಹಾವಾಗಿ ಕಂಡುಬಂದೀತು. ಆದರೆ ಭ್ರಾಂತಿಯಲ್ಲಿ ತಿಳುವಳಿಕೆಯುಳ್ಳವರಿಗೆ ಹಗ್ಗ ವಾಗಿಯೇ ಕಾಣುತ್ತದೆ. ಹಾಗೆಯೇ ನೀನೂ ಕೂಡ ಭ್ರಾಂತಬುದ್ಧಿಯುಳ್ಳವರಿಗೆ ಕರ್ತಾ, ಭೋಕ್ತಾ ಮುಂತಾದ ಅನೇಕ ರೂಪಗಳಲ್ಲಿ ಕಾಣುತ್ತೀಯೆ ಹಾಗೂ ಜ್ಞಾನಿಗಳಿಗೆ ಶುದ್ಧ ಸಚ್ಚಿದಾನಂದ ರೂಪದಲ್ಲಿ ಕಾಣುವೆ. ನೀನು ಎಲ್ಲರ ಬುದ್ಧಿಯನ್ನು ಅನುಸರಿಸುತ್ತಿರುವೆ. ॥37॥
ಮೂಲಮ್
(ಶ್ಲೋಕ-38)
ಸ ಏವ ಹಿ ಪುನಃ ಸರ್ವವಸ್ತುನಿ ವಸ್ತುಸ್ವರೂಪಃ ಸರ್ವೇಶ್ವರಃ ಸಕಲಜಗತ್ಕಾರಣ- ಕಾರಣಭೂತಃಸರ್ವಪ್ರತ್ಯಗಾತ್ಮತ್ವಾತ್ಸರ್ವ ಗುಣಾಭಾಸೋ- ಪಲಕ್ಷಿತ ಏಕ ಏವ ಪರ್ಯವ ಶೇಷಿತಃ ॥
ಅನುವಾದ
ವಿಚಾರ ಪೂರ್ವಕವಾಗಿ ನೋಡಿದರೆ ನೀನೇ ಸಮಸ್ತ ವಸ್ತುಗಳಲ್ಲಿ ವಸ್ತುತ್ವದ ರೂಪದಲ್ಲಿ ವಿರಾಜಮಾನನಾಗಿರುವೆ. ಎಲ್ಲರ ಸ್ವಾಮಿಯಾಗಿದ್ದು, ಸಮಸ್ತ ಜಗತ್ತಿಗೆ ಕಾರಣರಾದ ಬ್ರಹ್ಮಾ, ಪ್ರಕೃತಿ ಮುಂತಾದವರಿಗೂ ಕಾರಣನಾಗಿರುವೆ. ನೀನೇ ಎಲ್ಲರ ಅಂತರ್ಯಾಮಿ, ಅಂತರಾತ್ಮನಾಗಿರುವೆ. ಅದಕ್ಕಾಗಿ ಜಗತ್ತಿನಲ್ಲಿ ಕಂಡುಬರುವ ಗುಣ-ದೋಷಗಳೆಲ್ಲದರ ಪ್ರತೀತಿಗಳು ತನ್ನ ಅಧಿಷ್ಠಾನಸ್ವರೂಪನಾದ ನಿನ್ನನ್ನೇ ಸಂಕೇತ ಮಾಡುತ್ತಿವೆ. ಶ್ರುತಿಗಳು ಸಮಸ್ತ ಪದಾರ್ಥಗಳನ್ನು ನಿಷೇಧ ಗೈದು ಕೊನೆಗೆ ನಿಷೇಧದ ಅವಧಿಯ ರೂಪದಲ್ಲಿ ಕೇವಲ ನಿನ್ನನ್ನೇ ಶೇಷವಾಗಿ ಇರಿಸಿದೆ. ॥38॥
ಮೂಲಮ್
(ಶ್ಲೋಕ-39)
ಅಥ ಹ ವಾವ ತವ ಮಹಿಮಾಮೃತರಸ- ಸಮುದ್ರವಿಪ್ರುಷಾ ಸಕೃದವಲೀಢಯಾ ಸ್ವಮನಸಿ ನಿಷ್ಯಂದ- ಮಾನಾನವರತಸುಖೇನ ವಿಸ್ಮಾರಿತದೃಷ್ಟಶ್ರುತವಿಷಯ- ಸುಖಲೇಶಾಭಾಸಾಃ ಪರಮಭಾಗವತಾ ಏಕಾಂತಿನೋ ಭಗವತಿ ಸರ್ವಭೂತಪ್ರಿಯಸುಹೃದಿ ಸರ್ವಾತ್ಮನಿ ನಿತರಾಂ ನಿರಂತರಂ ನಿರ್ವೃತಮನಸಃ ಕಥಮು ಹ ವಾ ಏತೇ ಮಧುಮಥನ ಪುನಃ ಸ್ವಾರ್ಥಕುಶಲಾ ಹ್ಯಾತ್ಮಪ್ರಿಯಸುಹೃದಃ ಸಾಧವಸ್ತ್ವಚ್ಚರಣಾಂಬುಜಾನುಸೇವಾಂ ವಿಸೃಜಂತಿ ನ
ಯತ್ರ ಪುನರಯಂ ಸಂಸಾರ ಪರ್ಯಾವರ್ತಃ ॥
ಅನುವಾದ
ಓ ಮಧುಸೂದನಾ! ನಿನ್ನ ಮಹಿಮೆಯೆಂಬುದು ಅಮೃತರಸದ ಅನಂತಸಾಗರ ವಾಗಿದೆ. ಅದರ ಒಂದು ತೊಟ್ಟನ್ನಾದರೂ ಒಮ್ಮೆ ಸವಿದರೆ ಹೃದಯದಲ್ಲಿ ನಿತ್ಯನಿರಂತರ ಪರಮಾನಂದದ ಪ್ರವಾಹವೇ ಹರಿಯತೊಡಗುತ್ತದೆ. ಆದುದರಿಂದ ನಿನ್ನ ಆ ಅನನ್ಯ ಪ್ರೇಮಿಗಳಾದ ಭಕ್ತಶ್ರೇಷ್ಠರು ಜಗತ್ತಿನ ವಿಷಯೋಪ ಭೋಗಗಳ ಸುಖವು ಲೇಶಮಾತ್ರ ಅನುಭವಕ್ಕೆ ಬಂದಿದ್ದರೂ ಅಥವಾ ಆ ಸುಖವು ತೋರಿಕೆಯ ಸುಖವೆಂದು ಅನು ಭವಕ್ಕೆ ಬಂದಿದ್ದರೂ ಅವುಗಳನ್ನು ಮತ್ತು ಪರಲೋಕವೇ ಮುಂತಾದವುಗಳಲ್ಲಿ ಇರುವುದಾಗಿ ಕೇಳಿಬಂದಿರುವ ಸುಖ ವೆಲ್ಲವನ್ನೂ ಮರೆತು ಬಿಡುವರು. ಅವರು ಸಮಸ್ತ ಪ್ರಾಣಿ ಗಳಿಗೂ ಪರಮಪ್ರಿಯತಮನೂ, ಹಿತೈಷಿಯೂ, ಸ್ನೇಹಿತನೂ, ಸರ್ವಾತ್ಮನೂ, ಐಶ್ವರ್ಯಗಳ ನಿಧಿಯೂ ಆದ ಪರಮಾತ್ಮ ನಲ್ಲಿ ತಮ್ಮ ಮನಸ್ಸನ್ನು ನಿರಂತರವಾಗಿ ನೆಲೆಗೊಳಿಸಿ ಆತನ ಚಿಂತನೆಯ ಸುಖವನ್ನೇ ಸೂರೆಗೊಳ್ಳುವರು. ಅಂತಹ ಮನುಷ್ಯರೇ ಸ್ವಾರ್ಥಸಾಧನೆ ಮತ್ತು ಪರಮಾರ್ಥ ಸಾಧನೆ ಎರಡರಲ್ಲೂ ನಿಪುಣರೆಂದು ತಿಳಿಯಬೇಕು. ಓ ಮಧುಸೂದನಾ! ಜನನ-ಮರಣರೂಪವಾದ ಸಂಸಾರಚಕ್ರದಿಂದ ಬಿಡುಗಡೆಹೊಂದುವಂತಹ ನಿನ್ನ ಅಡಿದಾವರೆಗಳ ಸೇವೆಯನ್ನು ನಿನಗೆ ಅತ್ಯಂತ ಪ್ರಿಯರೂ, ಮಿತ್ರರೂ, ಆಗಿರುವ ಭಕ್ತಜನರು ಹೇಗೆ ತಾನೇ ಬಿಡಬಲ್ಲರು? ॥39॥
(ಶ್ಲೋಕ-40)
ಮೂಲಮ್
ತ್ರಿಭುವನಾತ್ಮಭವನ ತ್ರಿವಿಕ್ರಮ ತ್ರಿನಯನ ತ್ರಿಲೋಕಮ- ನೋಹರಾನುಭಾವ ತವೈವ ವಿಭೂತಯೋ ದಿತಿಜದನು- ಜಾದಯಶ್ಚಾಪಿ ತೇಷಾಮನುಪಕ್ರಮಸಮಯೋಯಮಿತಿ ಸ್ವಾತ್ಮಮಾಯಯಾ ಸುರನರ ಮೃಗಮಿಶ್ರಿತಜಲಚರಾಕೃತಿ- ಭಿರ್ಯಥಾಪರಾಧಂ ದಂಡಂ ದಂಡಧರ ದಧರ್ಥ ಏವಮೇನಮಪಿ ಭಗವನ್ಜಹಿ ತ್ವಾಷ್ಟ್ರಮುತ ಯದಿ ಮನ್ಯಸೇ ॥
ಅನುವಾದ
ಪ್ರಭುವೇ! ನೀನು ಮೂರು ಲೋಕಗಳಿಗೂ ಆತ್ಮನೂ, ಆಶ್ರಯನೂ ಆಗಿರುವೆ. ಮೂರು ಲೋಕಗಳನ್ನು ನಿನ್ನ ಮೂರು ಹೆಜ್ಜೆಗಳಿಂದ ಅಳೆದವನೂ ನೀನೇ. ಮೂರು ಲೋಕಗಳ ಸಂಚಾಲಕನೂ ನೀನೇ ಆಗಿರುವೆ. ನಿನ್ನ ಮಹಿಮೆಯು ಮೂರುಲೋಕಗಳ ಮನಸ್ಸನ್ನೂ ಸೂರೆ ಗೊಳ್ಳುವುದಾಗಿದೆ. ದೈತ್ಯರು, ದಾನವರು ಮುಂತಾದ ಅಸುರರೂ ಕೂಡ ನಿನ್ನದೇ ವಿಭೂತಿಗಳಾಗಿವೆ. ಇದರಲ್ಲಿ ಸಂದೇಹವೇ ಇಲ್ಲ. ಆದರೂ ಇದು ಅವರ ಉನ್ನತಿಯ ಕಾಲವಲ್ಲ ಎಂದು ಯೋಚಿಸಿ ನೀನು ನಿನ್ನ ಯೋಗಮಾಯೆ ಯಿಂದ ಸುರ, ನರ, ಪಶು, ನರ-ಮೃಗ ಮಿಶ್ರಣವಾದ ನಾರಸಿಂಹ, ಜಲಚರ ಮತ್ಸ್ಯಾದಿ ರೂಪಗಳಲ್ಲಿ ಅವತರಿಸಿ ಆ ದೈತ್ಯ-ದಾನವಾದಿಗಳಿಗೆ ಅವರ ಅಪರಾಧಕ್ಕೆ ತಕ್ಕ ದಂಡನೆ ಯನ್ನು ಕೊಡುತ್ತೀಯೆ. ದಂಡಧಾರಿಯಾದ ಪ್ರಭುವೇ! ನಿನಗೆ ಸರಿಯೆನಿಸಿದರೆ ಆ ಅಸುರರನ್ನು ಸಂಹರಿಸಿದಂತೆ ಈ ವೃತ್ರಾಸುರನನ್ನೂ ಸಂಹರಿಸುವವನಾಗು. ॥40॥
(ಶ್ಲೋಕ-41)
ಮೂಲಮ್
ಅಸ್ಮಾಕಂ ತಾವಕಾನಾಂ ತವ ನತಾನಾಂ ತತ ತತಾಮಹ ತವ ಚರಣನಲಿನಯುಗಲಧ್ಯಾನಾನಬದ್ಧಹೃದಯನಿಗಡಾನಾಂ ಸ್ವಲಿಂಗವಿರವರ್ಣೇನಾತ್ಮಸಾತ್ಕೃತಾನಾಮನುಕಂಪಾನುರಂಜಿತವಿಶದರುಚಿರಶಿಶಿರಸ್ಮಿತಾವಲೋಕೇನ ವಿಗಲಿತ ಮಧುರ ಮುಖರಸಾಮೃತ ಕಲಯಾ ಚಾಂತಸ್ತಾಪ ಮನಘಾರ್ಹಸಿ ಶಮಯಿತುಮ್ ॥
ಅನುವಾದ
ಓ ಭಗವಂತನೇ! ನೀನು ನಮಗೆ ತಂದೆ-ತಾತ ಎಲ್ಲವೂ ಆಗಿರುವೆ. ನಾವು ನಿನ್ನ ಸ್ವಜನರು. ನಿರಂತರವಾಗಿ ನಿನ್ನ ಮುಂದೆ ವಿನಯದಿಂದ ತಲೆತಗ್ಗಿಸಿ ಕೊಂಡಿರುವವರು. ನಿನ್ನ ಚರಣಕಮಲಗಳನ್ನು ಧ್ಯಾನ ಮಾಡುತ್ತಾ-ಮಾಡುತ್ತಾ ನಮ್ಮ ಹೃದಯವು ಅವು ಗಳೊಡನೆ ಪ್ರೇಮಬಂಧನದಲ್ಲಿ ಬಿಗಿಯಲ್ಪಟ್ಟಿದೆ. ನೀನು ನಮ್ಮ ಮುಂದೆ ನಿನ್ನ ದಿವ್ಯಗುಣಗಳಿಂದ ಕೂಡಿದ ಸಾಕಾರ ವಿಗ್ರಹವನ್ನು ಪ್ರಕಟಪಡಿಸಿ ನಮ್ಮನ್ನು ನಿನ್ನವರಾಗಿಸಿಕೊಂಡಿರುವೆ. ಅದಕ್ಕಾಗಿ ಪ್ರಭೋ! ನಿನ್ನ ದಯಾಪೂರ್ಣವೂ, ಪರಿಶುದ್ಧವೂ, ಸುಂದರವೂ, ಶೀತಲವೂ ಆದ ಕಿರು ನಗೆಯಿಂದ ಕೂಡಿದ ಚೆನ್ನೋಟದಿಂದಲೂ ಮತ್ತು ಮುಖಕಮಲದಿಂದ ತೊಟ್ಟಿಕ್ಕುತ್ತಿರುವ ವಾಣಿಯೆಂಬ ಸುಮ ಧುರವಾದ ಅಮೃತ ಬಿಂದುಗಳಿಂದ ನಮ್ಮ ಹೃದಯದ ತಾಪವನ್ನು ಶಮನಗೊಳಿಸು. ॥41॥
ಮೂಲಮ್
(ಶ್ಲೋಕ-42)
ಅಥ ಭಗವಂಸ್ತವಾಸ್ಮಾಭಿರಖಿಲ ಜಗದುತ್ಪತ್ತಿಸ್ಥಿತಿಲಯ ನಿಮಿತ್ತಾಯಮಾನ ದಿವ್ಯಮಾಯಾವಿನೋದಸ್ಯ ಸಕಲ ಜೀವನಿಕಾಯಾನಾಮಂತರ್ಹೃದಯೇಷು ಬಹಿರಪಿ ಚ ಬ್ರಹ್ಮಪ್ರತ್ಯಗಾತ್ಮಸ್ವರೂಪೇಣ ಪ್ರಧಾನರೂಪೇಣ ಚ ಯಥಾದೇಶಕಾಲದೇಹಾವಸ್ಥಾನವಿಶೇಷಂ ತದುಪಾದಾನೋಪಲಂಭಕತಯಾನುಭವತಃ ಸರ್ವಪ್ರತ್ಯಯಸಾಕ್ಷಿಣ ಆಕಾಶಶರೀರಸ್ಯ ಸಾಕ್ಷಾತ್ಪರಬ್ರಹ್ಮಣಃ ಪರಮಾತ್ಮನಃ ಕಿಯಾನಿಹ ವಾ ಅರ್ಥವಿಶೇಷೋ ವಿಜ್ಞಾಪನೀಯಃ ಸ್ಯಾದ್
ವಿಸ್ಫುಲಿಂಗಾದಿಭಿರಿವ ಹಿರಣ್ಯರೇತಸಃ ॥
ಅನುವಾದ
ಪ್ರಭೋ! ಅಗ್ನಿಯ ಅಂಶಭೂತ ಕಿಡಿಗಳೇ ಮುಂತಾದವುಗಳು ಅಗ್ನಿಯನ್ನು ಪ್ರಕಾಶಪಡಿಸಲು ಅಸಮರ್ಥವಾಗಿರುವಂತೆಯೇ ನಾವೂ ಕೂಡ ನಿನ್ನಲ್ಲಿ ನಮ್ಮದಾದ ಯಾವುದೇ ಸ್ವಾರ್ಥ-ಪರಮಾರ್ಥಗಳನ್ನು ನಿವೇದಿಸಿಕೊಳ್ಳಲು ಅಸಮರ್ಥರಾಗಿದ್ದೇವೆ. ನಿನ್ನಲ್ಲಿ ಅರಿಕೆ ಮಾಡುವುದಾದರೂ ಏನಿದೆ? ಏಕೆಂದರೆ, ನೀನೇ ಸಮಸ್ತ ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯ ಮಾಡುವಂತಹ ದಿವ್ಯಮಾಯೆಯೊಡನೆ ವಿನೋದವಾಡುತ್ತಿರುವೆ ಹಾಗೂ ಎಲ್ಲ ಜೀವರ ಅಂತಃಕರಣದಲ್ಲಿ ಬ್ರಹ್ಮ ಮತ್ತು ಅಂತರ್ಯಾಮಿಯ ರೂಪದಲ್ಲಿ ವಿರಾಜಮಾನನಾಗಿರುವೆ. ಇಷ್ಟೇ ಅಲ್ಲದೆ ಅವುಗಳ ಹೊರಗಡೆಯಲ್ಲಿಯೂ ಪ್ರಕೃತಿಯ ರೂಪದಲ್ಲಿ ನೀನೇ ವಿರಾಜಮಾನನಾಗಿರುವೆ. ಜಗತ್ತಿನಲ್ಲಿ ಎಷ್ಟೆಲ್ಲಾ ದೇಶ, ಕಾಲ, ಶರೀರ ಮುಂತಾದವುಗಳು ಇವೆಯೋ ಅವುಗಳಿಗೆ ಉಪಾದಾನವೂ ಮತ್ತು ಅವುಗಳನ್ನು ಪ್ರಕಾಶಪಡಿಸುವವನೂ ಆಗಿ ಆ ರೂಪದಲ್ಲಿ ಅವುಗಳನ್ನು ನೀನು ಅನುಭವಿಸುತ್ತಿರುವೆ. ನೀನೇ ಎಲ್ಲ ವೃತ್ತಿಗಳಿಗೂ ಸಾಕ್ಷಿಗಿರುವೆ. ನೀನು ಆಕಾಶದಂತೆ ಸರ್ವಗತನೂ, ನಿರ್ಲಿಪ್ತನೂ ಆಗಿರುವೆ. ನೀನು ಸ್ವತಃ ಪರಬ್ರಹ್ಮ ಪರಮಾತ್ಮನಾಗಿರುವೆ. ॥42॥
ಮೂಲಮ್
(ಶ್ಲೋಕ-43)
ಅತ ಏವ ಸ್ವ.ಯಂ ತದುಪಕಲ್ಪಯಾಸ್ಮಾಕಂ ಭಗವತಃ
ಪರಮ ಗುರೋಸ್ತವ ಚರಣಶತಪಲಾಶಚ್ಛಾಯಾಂ ।
ವಿವಿಧ ವೃಜಿನಸಂಸಾರಪರಿಶ್ರಮೋಪಶಮನೀಮುಪ-
ಸೃತಾನಾಂ ವಯಂ ಯತ್ಕಾಮೇನೋಪಸಾದಿತಾಃ ॥
ಅನುವಾದ
ಆದುದರಿಂದ ‘ಇವರು ತಮ್ಮ ಅಭಿಪ್ರಾಯಗಳನ್ನು ಅರಿಕೆಮಾಡಿಕೊಳ್ಳಲಿ’ ಎಂಬುದನ್ನು ನಿರೀಕ್ಷಿಸದೆ ಯಾವ ಅಭಿಲಾಷೆಯಿಂದ ನಾವು ಇಲ್ಲಿಗೆ ಬಂದಿರುವೆವೋ, ಅದನ್ನು ಪೂರ್ಣಗೊಳಿಸು. ನೀನು ಅಚಿಂತ್ಯನೂ, ಐಶ್ವರ್ಯಸಂಪನ್ನನೂ, ಜಗತ್ತಿಗೆ ಪರಮ ಗುರುವೂ ಆಗಿರುವೆ. ವಿವಿಧ ಪಾಪಗಳ ಫಲಸ್ವರೂಪ ಜನ್ಮ-ಮೃತ್ಯು ರೂಪವಾದ ಸಂಸಾರದಲ್ಲಿ ಅಲೆಯುವ ಬಳಲಿಕೆಯನ್ನು ಅಳಿಸಿಹಾಕುವಂತಹ ನಿನ್ನ ಚರಣಕಮಲಗಳ ಛತ್ರಛಾಯೆಯಲ್ಲಿ ನಾವು ಆಸರೆ ಪಡೆದಿದ್ದೇವೆ. ॥43॥
(ಶ್ಲೋಕ-44)
ಮೂಲಮ್
ಅಥೋ ಈಶ ಜಹಿ ತ್ವಾಷ್ಟ್ರಂ ಗ್ರಸಂತಂ ಭುವನತ್ರಯಮ್ ।
ಗ್ರಸ್ತಾನಿ ಯೇನ ನಃ ಕೃಷ್ಣ ತೇಜಾಂಸ್ಯಸಾಯುಧಾನಿ ಚ ॥
ಅನುವಾದ
ಸರ್ವಶಕ್ತನಾದ ಶ್ರೀಕೃಷ್ಣನೇ! ವೃತ್ರಾಸುರನು ನಮ್ಮ ಪ್ರಭಾವವನ್ನೂ, ಶಸ್ತ್ರಾಸ್ತ್ರಗಳನ್ನೂ ನುಂಗಿ ಹಾಕಿರುವನು. ಈಗ ಅವನು ಮೂರು ಲೋಕಗಳನ್ನೂ ನುಂಗುತ್ತಿದ್ದಾನೆ. ನೀನು ಅವನನ್ನು ಸಂಹರಿಸಿಬಿಡು. ॥44॥
(ಶ್ಲೋಕ-45)
ಮೂಲಮ್
ಹಂಸಾಯ ದಹ್ರನಿಲಯಾಯ ನಿರೀಕ್ಷಕಾಯ
ಕೃಷ್ಣಾಯ ಮೃಷ್ಟ ಯಶಸೇ ನಿರುಪಕ್ರಮಾಯ ।
ಸತ್ಸಂಗ್ರಹಾಯ ಭವಪಾಂಥನಿಜಾಶ್ರಮಾಪ್ತಾ-
ವಂತೇ ಪರೀಷ್ಟಗತಯೇ ಹರಯೇ ನಮಸ್ತೇ ॥
ಅನುವಾದ
ಪ್ರಭುವೇ! ನೀನು ಶುದ್ಧ ಹಂಸ ಸ್ವರೂಪನೂ, ಹೃದಯದಲ್ಲಿ ಶುದ್ಧವಾಗಿ ಬೆಳಗುತ್ತಿರುವ ಆಕಾಶಸ್ವರೂಪನೂ, ಎಲ್ಲರ ಸಾಕ್ಷಿಯೂ, ಅನಾದಿಯೂ, ಅನಂತನೂ, ಉಜ್ವಲಕೀರ್ತಿ ಸಂಪನ್ನನೂ ಆಗಿರುವೆ. ಸತ್ಪುರು ಷರು ನಿನ್ನನ್ನೇ ಸಂಗ್ರಹಿಸುತ್ತಾರೆ. ಈ ಸಂಸಾರದ ಯಾತ್ರಿಕರು ಅಲೆಯುತ್ತಾ-ಅಲೆಯುತ್ತಾ ನಿನಗೆ ಶರಣಾದಾಗ ಕೊನೆಗೆ ನೀನೇ ಅವರಿಗೆ ಪರಮಾನಂದ ಸ್ವರೂಪವಾದ ಅಭೀಷ್ಟ ಫಲವನ್ನು ಕೊಡುವೆ ಮತ್ತು ಈ ವಿಧದಿಂದ ಅವರ ಜನ್ಮ-ಜನ್ಮಾಂತರದ ಕಷ್ಟಗಳನ್ನು ಪರಿಹರಿಸುವೆ. ಸ್ವಾಮಿ! ನಿನಗೆ ನಾವು ನಮಸ್ಕರಿಸುತ್ತಿದ್ದೇವೆ. ॥45॥
(ಶ್ಲೋಕ-46)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥೈವಮೀಡಿತೋ ರಾಜನ್ಸಾದರಂ ತ್ರಿದಶೈರ್ಹರಿಃ ।
ಸ್ವಮುಪಸ್ಥಾನಮಾಕರ್ಣ್ಯ ಪ್ರಾಹ ತಾನಭಿನಂದಿತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ದೇವತೆಗಳು ಅತ್ಯಂತ ಆದರದಿಂದ ಹೀಗೆ ಭಗವಂತನನ್ನು ಸ್ತುತಿಸಿದಾಗ ಅವನು ಅದರಿಂದ ಬಹಳ ಪ್ರಸನ್ನನಾಗಿ ಅವರಿಗೆ ಇಂತೆಂದನು ॥46॥
(ಶ್ಲೋಕ-47)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಪ್ರೀತೋಹಂ ವಃ ಸುರಶ್ರೇಷ್ಠಾ ಮದುಪಸ್ಥಾನವಿದ್ಯಯಾ ।
ಆತ್ಮೈಶ್ವರ್ಯಸ್ಮೃತಿಃ ಪುಂಸಾಂ ಭಕ್ತಿಶ್ಚೈವ ಯಯಾ ಮಯಿ ॥
ಅನುವಾದ
ಶ್ರೀಭಗವಂತನು ಹೇಳಿದನು — ಎಲೈ ದೇವಶ್ರೇಷ್ಠರೇ! ನೀವೆಲ್ಲರೂ ಸ್ತುತಿಯಿಂದ ಕೂಡಿದ ಭಕ್ತಿ-ಜ್ಞಾನದಿಂದ ನನ್ನನ್ನು ಉಪಾಸನೆ ಮಾಡಿದ್ದೀರಿ. ಇದರಿಂದ ನಾನು ನಿಮ್ಮ ಮೇಲೆ ಪ್ರಸನ್ನನಾಗಿರುವೆನು. ಈ ಸ್ತುತಿಯ ಮೂಲಕ ಜೀವರಿಗೆ ತಮ್ಮ ವಾಸ್ತವಿಕ ಸ್ವರೂಪದ ಸ್ಮೃತಿ ಉಂಟಾಗಿ, ನನ್ನ ಭಕ್ತಿಯೂ ದೊರೆಯುವುದು. ॥47॥
(ಶ್ಲೋಕ-48)
ಮೂಲಮ್
ಕಿಂ ದುರಾಪಂ ಮಯಿ ಪ್ರೀತೇ ತಥಾಪಿ ವಿಬುಧರ್ಷಭಾಃ ।
ಮಯ್ಯೇಕಾಂತಮತಿರ್ನಾನ್ಯನ್ಮತ್ತೋ ವಾಂಛತಿ ತತ್ತ್ವವಿತ್ ॥
ಅನುವಾದ
ದೇವಶಿರೋ ಮಣಿಗಳೇ! ನಾನು ಪ್ರಸನ್ನನಾದ ಮೇಲೆ ಯಾವುದೇ ವಸ್ತುವು ದುರ್ಲಭವಾಗಿ ಇರುವುದಿಲ್ಲ. ಆದರೂ ನನ್ನ ಅನನ್ಯ ಪ್ರೇಮಿ, ತತ್ತ್ವವೇತ್ತರಾದ ಭಕ್ತರು ನನ್ನನ್ನಲ್ಲದೆ ಬೇರೆ ಏನನ್ನೂ ನನ್ನಿಂದ ಬಯಸುವುದಿಲ್ಲ. ॥48॥
(ಶ್ಲೋಕ-49)
ಮೂಲಮ್
ನ ವೇದ ಕೃಪಣಃ ಶ್ರೇಯ ಆತ್ಮನೋ ಗುಣವಸ್ತುದೃಕ್ ।
ತಸ್ಯ ತಾನಿಚ್ಛತೋ ಯಚ್ಛೇದ್ಯದಿ ಸೋಪಿ ತಥಾವಿಧಃ ॥
ಅನುವಾದ
ಜಗತ್ತಿನ ವಿಷಯಗಳನ್ನು ಸತ್ಯವೆಂದು ತಿಳಿದವನು ಮೂರ್ಖನಾಗಿದ್ದು ತನ್ನ ನಿಜವಾದ ಶ್ರೇಯಸ್ಸನ್ನು ಅರಿಯಲಾರನು. ಏಕೆಂದರೆ, ಅವನು ವಿಷಯಗಳನ್ನು ಬಯಸುತ್ತಿರುವನು. ಆದರೆ ಯಾರಾದರೂ ತಿಳಿವಳಿಕೆಯುಳ್ಳವನು ಅವನಿಗೆ ಅವನು ಇಚ್ಛಿಸಿದ ವಸ್ತುಗಳನ್ನು ಕೊಟ್ಟರೆ ಅವನೂ ಅವನಂತೆಯೇ ಮೂರ್ಖನಾಗಿದ್ದಾನೆ. ॥49॥
(ಶ್ಲೋಕ-50)
ಮೂಲಮ್
ಸ್ವಯಂ ನಿಃಶ್ರೇಯಸಂ ವಿದ್ವಾನ್ನ ವಕ್ತ್ಯಜ್ಞಾಯ ಕರ್ಮ ಹಿ ।
ನ ರಾತಿ ರೋಗಿಣೋಪಥ್ಯಂ ವಾಂಛತೋ ಹಿ ಭಿಷಕ್ತಮಃ ॥
ಅನುವಾದ
ಮುಕ್ತಿಯ ಸ್ವರೂಪವನ್ನು ತಿಳಿದ ಜ್ಞಾನಿಯು ರೋಗಿಯು ಬಯಸಿದರೂ ಸದ್ವೈದ್ಯನು ಅವನಿಗೆ ಅಪಥ್ಯವಾದುದನ್ನು ಕೊಡದಿರುವಂತೆಯೇ ಅಜ್ಞಾನಿಗಳಿಗೆ ಕರ್ಮಗಳಲ್ಲಿ ಸಿಕ್ಕಿಕೊಳ್ಳುವಂತಹ ಉಪದೇಶಗಳನ್ನು ಮಾಡುವುದಿಲ್ಲ.॥50॥
(ಶ್ಲೋಕ-51)
ಮೂಲಮ್
ಮಘವನ್ಯಾತ ಭದ್ರಂ ವೋ ದಧ್ಯಂಚಮೃಷಿಸತ್ತಮಮ್ ।
ವಿದ್ಯಾವ್ರತತಪಃಸಾರಂ ಗಾತ್ರಂ ಯಾಚತ ಮಾ ಚಿರಮ್ ॥
ಅನುವಾದ
ದೇವೇಂದ್ರನೇ! ನಿಮಗೆ ಮಂಗಳವಾಗಲಿ. ಈಗ ತಡಮಾಡದೆ ಋಷಿ ಶಿರೋಮಣಿ ದಧೀಚಿಯ ಬಳಿಗೆ ಹೋಗಿರಿ. ಉಪಾಸನೆ, ವ್ರತ ಮತ್ತು ತಪಸ್ಸಿನಿಂದಾಗಿ ಅವರ ಶರೀರವು ಅತ್ಯಂತ ಸದೃಢಗೊಂಡಿದೆ. ಅದನ್ನೇ ಕೇಳಿಕೊಳ್ಳಿ. ॥51॥
(ಶ್ಲೋಕ-52)
ಮೂಲಮ್
ಸ ವಾ ಅಧಿಗತೋ ದಧ್ಯಙ್ಅಶ್ವಿಭ್ಯಾಂ ಬ್ರಹ್ಮ ನಿಷ್ಕಲಮ್ ।
ಯದ್ವಾ ಅಶ್ವಶಿರೋ ನಾಮ ತಯೋರಮರತಾಂ ವ್ಯಧಾತ್ ॥
ಅನುವಾದ
ದಧೀಚಿ ಋಷಿಗಳಿಗೆ ಶುದ್ಧಬ್ರಹ್ಮನ ಜ್ಞಾನವಿದೆ. ಅಶ್ವಿನೀ ಕುಮಾರರಿಗೆ ಕುದುರೆಯ ತಲೆಯಿಂದ ಉಪದೇಶಮಾಡಿದ ಕಾರಣ ಇವರಿಗೆ ‘ಅಶ್ವಶಿರ’* ಎಂದೂ ಹೆಸರಿದೆ. ಅವರು ಉಪ ದೇಶಿಸಿದ ಆತ್ಮವಿದ್ಯೆಯ ಪ್ರಭಾವದಿಂದಲೇ ಅಶ್ವಿನೀ ಕುಮಾರರಿಬ್ಬರೂ ಜೀವನ್ಮುಕ್ತರಾದರು. ॥52॥
ಟಿಪ್ಪನೀ
- ದಧೀಚಿ ಮಹರ್ಷಿಗಳು ಪ್ರವರ್ಗ್ಯವೆಂಬ ಯಜ್ಞಕರ್ಮದಲ್ಲಿಯೂ ಮತ್ತು ಬ್ರಹ್ಮವಿದ್ಯೆಯಲ್ಲಿ ಪಾರಂಗತರಾಗಿದ್ದರು. ಅದನ್ನು ತಿಳಿದ ಅಶ್ವಿನೀಕುಮಾರರು ಒಮ್ಮೆ ಅವರ ಬಳಿಗೆ ಬಂದು ತಮಗೆ ಆ ವಿದ್ಯೆಯನ್ನು ದಯಪಾಲಿಸಬೇಕೆಂದು ಪ್ರಾರ್ಥಿಸಿದರು. ದಧೀಚಿಮುನಿಗಳು ‘ಈಗ ನನಗೆ ಬೇರೆ ಕೆಲಸವಿದೆ, ಮತ್ತೊಮ್ಮೆ ಬನ್ನಿರಿ’ ಎಂದು ಹೇಳಿ ಅವರನ್ನು ಕಳಿಸಿದರು. ಆಗ ಇಂದ್ರನು ಅವರ ಬಳಿಗೆ ಬಂದು ‘ಅಶ್ವಿನೀಕುಮಾರರು ವೈದ್ಯರಾಗಿದ್ದಾರೆ. ಅವರಿಗೆ ನೀವು ಆ ವಿದ್ಯೆಯನ್ನು ಉಪದೇಶಮಾಡಕೂಡದು. ನನ್ನ ಮಾತಿಗೆ ವಿರುದ್ಧವಾಗಿ ನಡೆದರೆ ನಿಮ್ಮ ತಲೆಯನ್ನು ಕತ್ತರಿಸಿಹಾಕುವೆನು’ ಎಂದು ಎಚ್ಚರಿಕೆ ನೀಡಿ ಇಂದ್ರನು ಹೊರಟುಹೋದನು. ಅಶ್ವಿನೀಕುಮಾರರು ಮರಳಿ ಮಹರ್ಷಿಗಳ ಬಳಿಗೆ ಬಂದು ವಿದ್ಯೆಯನ್ನು ಬೇಡಿದಾಗ ಅವರು ಇಂದ್ರನು ಬಂದು ಹೇಳಿದ್ದ ವೃತ್ತಾಂತವನ್ನು ಅವರಿಗೆ ತಿಳಿಸಿದರು. ಅವರು ಮಹರ್ಷಿಗಳೇ! ನಾವು ನಿಮ್ಮ ತಲೆಯನ್ನು ಕತ್ತರಿಸಿ ಅದರ ಜಾಗದಲ್ಲಿ ಕುದುರೆಯ ತಲೆಯನ್ನು ಜೋಡಿಸುವೆವು ಎಂಬ ಸಲಹೆ ನೀಡಿದರು,. ಮುನಿಯು ಮಿಥ್ಯಾಭಾಷಣದ ದೋಷಕ್ಕೆ ಹೆದರಿ ಅವರ ಮಾತನ್ನು ಒಪ್ಪಿಕೊಂಡರು. ಹೀಗೆ ಕುದುರೆಯ ಮುಖದಿಂದ ಅಶ್ವಿನೀದೇವತೆಗಳಿಗೆ ಬ್ರಹ್ಮವಿದ್ಯೆಯನ್ನು ಉಪದೇಶಿಸಿದರು. ಹೀಗೆ ಅಶ್ವಮುಖದಿಂದ ಉಪದೇಶಿಸಲಾದ ಬ್ರಹ್ಮವಿದ್ಯೆಯ ಹೆಸರು ‘ಅಶ್ವಶಿರಾ’ ಎಂದಾಯಿತು. ಅವರು ಅದೇ ಹೆಸರಿನಿಂದ ಖ್ಯಾತರಾದರು.
(ಶ್ಲೋಕ-53)
ಮೂಲಮ್
ದಧ್ಯಙ್ ಆಥರ್ವಣಸ್ತ್ವಷ್ಟ್ರೇ ವರ್ಮಾಭೇದ್ಯಂ ಮದಾತ್ಮಕಮ್ ।
ವಿಶ್ವರೂಪಾಯ ಯತ್ಪ್ರಾದಾತ್ತ್ವಷ್ಟಾ ಯತ್ತ್ವಮಧಾಸ್ತತಃ ॥
ಅನುವಾದ
ಅಥರ್ವ ವೇದೀ ದಧೀಚಿ ಋಷಿಯೇ ಮೊಟ್ಟಮೊದಲು ನನ್ನ ಸ್ವರೂಪ ಭೂತವಾದ ಅಭೇದ್ಯ ನಾರಾಯಣ ಕವಚವನ್ನು ತ್ವಷ್ಟಾನಿಗೆ ಉಪದೇಶಿಸಿದನು. ತ್ವಷ್ಟಾನು ವಿಶ್ವರೂಪನಿಗೆ ಉಪದೇಶಿಸಿದನು, ಅವರು ನಿಮಗೆ ಕರುಣಿಸಿದರು. ॥53॥
(ಶ್ಲೋಕ-54)
ಮೂಲಮ್
ಯುಷ್ಮಭ್ಯಂ ಯಾಚಿತೋಶ್ವಿಭ್ಯಾಂ ಧರ್ಮಜ್ಞೋಂಗಾನಿ ದಾಸ್ಯತಿ
ತತಸ್ತೈರಾಯುಧಶ್ರೇಷ್ಠೋ ವಿಶ್ವಕರ್ಮವಿನಿರ್ಮಿತಃ ।
ಯೇನ ವೃತ್ರಶಿರೋ ಹರ್ತಾ ಮತ್ತೇಜ ಉಪಬೃಂಹಿತಃ ॥
ಅನುವಾದ
ದಧೀಚಿ ಋಷಿಯು ಧರ್ಮದ ಪರಮ ಮರ್ಮಜ್ಞರಾಗಿದ್ದಾರೆ. ಅಶ್ವಿನೀದೇವತೆಗಳು ಪ್ರಾರ್ಥನೆ ಮಾಡಿದರೆ ನಿಮಗೆ ಅವರು ತಮ್ಮ ಶರೀರದ ಅಂಗಾಂಗಗಳನ್ನು ಖಂಡಿತವಾಗಿ ಕೊಡುವರು. ಅನಂತರ ವಿಶ್ವಕರ್ಮನಿಂದ ಆ ಅಂಗಾಂಗಗಳ ಮೂಳೆಗಳಿಂದ ಒಂದು ಶ್ರೇಷ್ಠವಾದ ಆಯುಧವನ್ನು ರಚಿಸಿಕೊಳ್ಳಿರಿ. ದೇವೇಂದ್ರಾ! ನನ್ನ ಶಕ್ತಿಯಿಂದ ಒಡಗೊಂಡು ನೀವು ಅದೇ ಶಸ್ತ್ರದಿಂದ ವೃತ್ರಾಸುರನ ತಲೆಯನ್ನು ಕತ್ತರಿಸ ಬಲ್ಲಿರಿ. ॥54॥
(ಶ್ಲೋಕ-55)
ಮೂಲಮ್
ತಸ್ಮಿನ್ವಿನಿಹತೇ ಯೂಯಂ ತೇಜೋಸಾಯುಧಸಂಪದಃ ।
ಭೂಯಃ ಪ್ರಾಪ್ಸ್ಯಥ ಭದ್ರಂ ವೋ ನ ಹಿಂಸಂತಿ ಚ ಮತ್ಪರಾನ್ ॥
ಅನುವಾದ
ದೇವತೆಗಳಿರಾ! ವೃತ್ರಾಸುರನ ವಧೆಯಾದ ಬಳಿಕ ನಿಮಗೆ ಪುನಃ ತೇಜಸ್ಸು, ಅಸ್ತ್ರ-ಶಸ್ತ್ರಗಳು, ಎಲ್ಲ ಸಂಪತ್ತೂ ದೊರೆಯುವುದು. ನಿಮಗೆ ಅವಶ್ಯವಾಗಿ ಮಂಗಳ ಉಂಟಾಗುವುದು. ಏಕೆಂದರೆ, ನನ್ನಲ್ಲಿ ಶರಣಾಗತರಾದವರನ್ನು ಯಾರೂ ಹಿಂಸೆಪಡಿಸಲಾರರು. ॥55॥
ಅನುವಾದ (ಸಮಾಪ್ತಿಃ)
ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥9॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ನವಮೋಽಧ್ಯಾಯಃ ॥9॥