[ಏಳನೆಯ ಅಧ್ಯಾಯ]
ಭಾಗಸೂಚನಾ
ಬೃಹಸ್ಪತಿಯು ದೇವತೆಗಳನ್ನು ತೊರೆದುದು ಮತ್ತು ವಿಶ್ವರೂಪನನ್ನು ದೇವಗುರುವಾಗಿ ವರಣಮಾಡಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕಸ್ಯ ಹೇತೋಃ ಪರಿತ್ಯಕ್ತಾ ಆಚಾರ್ಯೇಣಾತ್ಮನಃ ಸುರಾಃ ।
ಏತದಾಚಕ್ಷ್ವ ಭಗವನ್ ಶಿಷ್ಯಾಣಾಮಕ್ರಮಂ ಗುರೌ ॥
ಅನುವಾದ
ಪರೀಕ್ಷಿತಮಹಾರಾಜನು ಕೇಳಿದನು — ಮಹಾತ್ಮರೇ! ದೇವತೆಗಳ ಆಚಾರ್ಯರಾದ ಬೃಹಸ್ಪತಿಯವರು ತಮ್ಮ ಪ್ರಿಯಶಿಷ್ಯರಾದ ದೇವತೆಗಳನ್ನು ಏಕೆ ತೊರೆದರು? ದೇವತೆ ಗಳು ತಮ್ಮ ಆಚಾರ್ಯರಿಗೆ ಅಂತಹ ಯಾವ ಅಪರಾಧ ಮಾಡಿದ್ದರು? ಕೃಪೆಯಿಟ್ಟು ತಿಳಿಸಿರಿ. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇಂದ್ರಸಿಭುವನೈಶ್ವರ್ಯಮದೋಲ್ಲಂಘಿತಸತ್ಪಥಃ ।
ಮರುದ್ಭಿರ್ವಸುಭೀ ರುದ್ರೈರಾದಿತ್ಯೈರ್ಋಭುಭಿರ್ನೃಪ ॥
(ಶ್ಲೋಕ-3)
ಮೂಲಮ್
ವಿಶ್ವೇದೇವೈಶ್ಚ ಸಾಧ್ಯೈಶ್ಚ ನಾಸತ್ಯಾಭ್ಯಾಂ ಪರಿಶ್ರಿತಃ ।
ಸಿದ್ಧಚಾರಣಗಂಧರ್ವೈರ್ಮುನಿಭಿರ್ಬ್ರಹ್ಮವಾದಿಭಿಃ ॥
(ಶ್ಲೋಕ-4)
ಮೂಲಮ್
ವಿದ್ಯಾಧರಾಪ್ಸರೋಭಿಶ್ಚ ಕಿನ್ನರೈಃ ಪತಗೋರಗೈಃ ।
ನಿಷೇವ್ಯಮಾಣೋ ಮಘವಾನ್ ಸ್ತೂಯಮಾನಶ್ಚ ಭಾರತ ॥
(ಶ್ಲೋಕ-5)
ಮೂಲಮ್
ಉಪಗೀಯಮಾನೋ ಲಲಿತಮಾಸ್ಥಾನಾಧ್ಯಾಸನಾಶ್ರಿತಃ ।
ಪಾಂಡುರೇಣಾತಪತ್ರೇಣ ಚಂದ್ರಮಂಡಲಚಾರುಣಾ ॥
(ಶ್ಲೋಕ-6)
ಮೂಲಮ್
ಯುಕ್ತಶ್ಚಾನ್ಯೈಃ ಪಾರಮೇಷ್ಠ್ಯೈಶ್ಚಾಮರವ್ಯಜನಾದಿಭಿಃ ।
ವಿರಾಜಮಾನಃ ಪೌಲೋಮ್ಯಾ ಸಹಾರ್ಧಾಸನಯಾ ಭೃಶಮ್ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಎಲೈ ರಾಜೇಂದ್ರಾ! ಮೂರುಲೋಕಗಳ ಐಶ್ವರ್ಯವನ್ನು ಪಡೆದು ಇಂದ್ರನು ಗರ್ವಾಂಧನಾಗಿದ್ದನು. ಈ ಅಹಂಕಾರದಿಂದ ಅವನು ಧರ್ಮ ಮರ್ಯಾದೆ ಸದಾಚಾರಗಳನ್ನು ಮೀರಿ ನಡೆಯ ತೊಡಗಿದ್ದನು. ಒಂದುದಿನ ಈ ಘಟನೆ ನಡೆಯಿತು ಮಹೇಂದ್ರನು ತುಂಬಿದ ಸಭೆಯಲ್ಲಿ ಪತ್ನಿಯಾದ ಶಚಿದೇವಿ ಯೊಂದಿಗೆ ಉನ್ನತವಾದ ಸಿಂಹಾಸನದಲ್ಲಿ ಕುಳಿತಿದ್ದನು. ಆಗ ನಲವತ್ತೊಂಭತ್ತು ಮಂದಿಮರುದ್ದೇವತೆಗಳು, ಅಷ್ಟವಸುಗಳು, ಏಕಾದಶರುದ್ರರು, ದ್ವಾದಶಾದಿತ್ಯರು, ಋಭುಗಣಗಳು, ವಿಶ್ವೇದೇವತೆಗಳು, ಸಾಧ್ಯಗಣಗಳು, ಇಬ್ಬರು ಅಶ್ವಿನೀ ದೇವತೆಗಳು ಒಡ್ಡೋಲಗದಲ್ಲಿ ಉಪಸ್ಥಿತರಿದ್ದು, ಆತನ ಸೇವೆ ಮಾಡುತ್ತಿದ್ದರು. ಸಿದ್ಧರೂ, ಚಾರಣರೂ, ಗಂಧರ್ವರೂ, ಬ್ರಹ್ಮವಾದಿಗಳಾದ ಮುನಿಗಳು, ವಿದ್ಯಾಧರರು, ಅಪ್ಸರೆ ಯರೂ, ಕಿನ್ನರರೂ, ಪಕ್ಷಿಗಳೂ, ನಾಗಗಳೂ, ಅವನನ್ನು ಸ್ತುತಿ ಸುತ್ತಾ ಸೇವಿಸುತ್ತಿದ್ದರು. ಎಲ್ಲೆಡೆಗಳಲ್ಲಿ ಲಲಿತ ಸ್ವರದಿಂದ ದೇವೇಂದ್ರನ ಕೀರ್ತಿಯ ಗುಣಗಾನ ನಡೆಯುತ್ತಿತ್ತು. ಸಿಂಹಾಸನದ ಮೇಲ್ಗಡೆ ಚಂದ್ರಮಂಡಲದಂತೆ ಶುಭ್ರವೂ, ಸುಂದರವೂ ಆದ ಬೆಳ್ಗೊಡೆಯು ಶೋಭಿಸುತ್ತಿತ್ತು. ಚಾಮರ, ಬೀಸಣಿಗೆ ಮುಂತಾದ ಮಹಾರಾಜೋಚಿತವಾದ ಪದಾರ್ಥಗಳು ಆಯಾಯಾ ಜಾಗಗಳಲ್ಲಿ ಸುಸಜ್ಜಿತವಾಗಿದ್ದುವು. ಈ ದಿವ್ಯವಾದ ಸಭೆಯಲ್ಲಿ ದೇವರಾಜನಾದ ಮಹೇಂದ್ರನು ಮಂಡಿಸಿ ರಾರಾಜಿಸುತ್ತಿದ್ದನು. ॥2-6॥
(ಶ್ಲೋಕ-7)
ಮೂಲಮ್
ಸ ಯದಾ ಪರಮಾಚಾರ್ಯಂ ದೇವಾನಾಮಾತ್ಮನಶ್ಚ ಹ ।
ನಾಭ್ಯನಂದತ ಸಂಪ್ರಾಪ್ತಂ ಪ್ರತ್ಯುತ್ಥಾನಾಸನಾದಿಭಿಃ ॥
(ಶ್ಲೋಕ-8)
ಮೂಲಮ್
ವಾಚಸ್ಪತಿಂ ಮುನಿವರಂ ಸುರಾಸುರನಮಸ್ಕೃತಮ್ ।
ನೋಚ್ಚಚಾಲಾಸನಾದಿಂದ್ರಃ ಪಶ್ಯನ್ನಪಿ ಸಭಾಗತಮ್ ॥
ಅನುವಾದ
ಅದೇ ಸಮಯಕ್ಕೆ ಸರಿಯಾಗಿ ದೇವೇಂದ್ರನಿಗೂ, ಸಮಸ್ತ ದೇವತೆಗಳಿಗೂ ಪರಮಾಚಾರ್ಯರಾದ ಬೃಹಸ್ಪತಿಯವರು ಅಲ್ಲಿಗೆ ಬಿಜಯಂಗೈದರು. ಸುರರು, ಅಸುರರು ಎಲ್ಲರಿಂದ ನಮಸ್ಕರಿಸಲ್ಪಡುವ ಪೂಜ್ಯರಾದ ಆಚಾರ್ಯರು ಅವರು. ಅವರು ಸಭೆಗೆ ಬಂದಿರುವುದನ್ನು ಇಂದ್ರನು ನೋಡಿದರೂ, ಅವನು ಎದ್ದು ನಿಲ್ಲಲಿಲ್ಲ. ಅವರಿಗೆ ನಮಸ್ಕಾರವೇ ಮುಂತಾದ ಸತ್ಕಾರಗಳನ್ನು ಮಾಡಲಿಲ್ಲ. ಆಸನದಿಂದ ಕೂಡ ಅಲ್ಲಾಡಲಿಲ್ಲ. ॥7-8॥
ಮೂಲಮ್
(ಶ್ಲೋಕ-9)
ತತೋ ನಿರ್ಗತ್ಯ ಸಹಸಾ ಕವಿರಾಂಗಿರಸಃ ಪ್ರಭುಃ ।
ಆಯಯೌ ಸ್ವಗೃಹಂ ತೂಷ್ಣೀಂ ವಿದ್ವಾನ್ ಶ್ರೀಮದವಿಕ್ರಿಯಾಮ್ ॥
ಅನುವಾದ
ತ್ರಿಕಾಲದರ್ಶಿಗಳಾದ ಬೃಹಸ್ಪತ್ಯಾಚಾರ್ಯರು ‘ಐಶ್ವರ್ಯಮದವೇ ಈ ಅಸಭ್ಯತೆಗೆ ಕಾರಣವಾಗಿದೆ’ ಎಂದು ನೋಡಿ ಅವರು ಅಲ್ಲಿಂದ ಕೂಡಲೇ ಸುಮ್ಮನೆ ತಮ್ಮ ಮನೆಗೆ ಹೊರಟುಹೋದರು.॥9॥
(ಶ್ಲೋಕ-10)
ಮೂಲಮ್
ತರ್ಹ್ಯೇವ ಪ್ರತಿಬುದ್ಧ್ಯೇಂದ್ರೋ ಗುರುಹೇಲನಮಾತ್ಮನಃ ।
ಗರ್ಹಯಾಮಾಸ ಸದಸಿ ಸ್ವಯಮಾತ್ಮಾನಮಾತ್ಮನಾ ॥
ಅನುವಾದ
ಪರೀಕ್ಷಿದ್ರಾಜನೇ! ಆಗಲೇ ದೇವೇಂದ್ರನಿಗೆ ‘ನಾನು ನಮ್ಮ ಗುರುಗಳಿಗೆ ಎಂತಹ ಅವಹೇಳನ ಮಾಡಿದೆ?’ ಎಂಬುದು ಅರಿವಾಯಿತು. ಅವನು ತುಂಬಿದ ಸಭೆಯಲ್ಲಿ ತನ್ನನ್ನು ಹೀಗೆ ನಿಂದಿಸಿಕೊಂಡನು.॥10॥
(ಶ್ಲೋಕ-11)
ಮೂಲಮ್
ಅಹೋ ಬತ ಮಮಾಸಾಧು ಕೃತಂ ವೈ ದಭ್ರಬುದ್ಧಿನಾ ।
ಯನ್ಮಯೈಶ್ವರ್ಯಮತ್ತೇನ ಗುರುಃ ಸದಸಿ ಕಾತ್ಕೃತಃ ॥
ಅನುವಾದ
ಅಯ್ಯೋ! ನಾನು ಎಂತಹ ಅನ್ಯಾಯ ಮಾಡಿದೆನು? ಮೂರ್ಖತನದಿಂದ ಐಶ್ವರ್ಯದ ಮತ್ತೇರಿದವನಾಗಿ ತುಂಬಿದ ಸಭೆಯಲ್ಲಿ ಗುರುದೇವರಿಗೆ ತಿರಸ್ಕಾರ ಮಾಡಿದೆನಲ್ಲ? ನಿಜವಾಗಿಯೂ ಇದು ಅತ್ಯಂತ ನಿಂದನೀಯ ಕಾರ್ಯವಾಗಿದೆ. ॥11॥
(ಶ್ಲೋಕ-12)
ಮೂಲಮ್
ಕೋ ಗೃಧ್ಯೇತ್ಪಂಡಿತೋ ಲಕ್ಷ್ಮೀಂ ತ್ರಿವಿಷ್ಟಪಪತೇರಪಿ ।
ಯಯಾಹಮಾಸುರಂ ಭಾವಂ ನೀತೋದ್ಯ ವಿಬುಧೇಶ್ವರಃ ॥
ಅನುವಾದ
ಈ ಸ್ವರ್ಗದ ರಾಜ್ಯಲಕ್ಷ್ಮಿಯನ್ನು ಯಾವ ವಿವೇಕಿಯು ಪಡೆಯಲು ಬಯಸುವನು? ಇಂದು ಇದರಿಂದಲೇ ದೇವ ರಾಜನಾದ ನನ್ನಲ್ಲಿಯೂ ಅಸುರರ ರಜೋಗುಣಭಾವವು ತುಂಬಿ ಹೋಯಿತಲ್ಲ! ॥12॥
(ಶ್ಲೋಕ-13)
ಮೂಲಮ್
ಯೇ ಪಾರಮೇಷ್ಠ್ಯಂ ಧಿಷಣಮಧಿತಿಷ್ಠನ್ನ ಕಂಚನ ।
ಪ್ರತ್ಯುತ್ತಿಷ್ಠೇದಿತಿ ಬ್ರೂಯುರ್ಧರ್ಮಂ ತೇ ನ ಪರಂ ವಿದುಃ ॥
ಅನುವಾದ
‘ಸಾರ್ವಭೌಮ ಸಿಂಹಾಸನದಲ್ಲಿ ಕುಳಿತಿರುವ ಸಾಮ್ರಾಟನು ಯಾರು ಬಂದರೂ ಸಿಂಹಾಸನದಿಂದ ಏಳಬಾರದು’ ಎಂದು ಹೇಳುವವರು ಧರ್ಮದ ನಿಜವಾದ ಸ್ವರೂಪವನ್ನು ಅರಿಯರು. ॥13॥
(ಶ್ಲೋಕ-14)
ಮೂಲಮ್
ತೇಷಾಂ ಕುಪಥದೇಷ್ಟೃಣಾಂ ಪತತಾಂ ತಮಸಿ ಹ್ಯಧಃ ।
ಯೇ ಶ್ರದ್ದಧ್ಯುರ್ವಚಸ್ತೇ ವೈ ಮಜ್ಜಂತ್ಯಶ್ಮಪ್ಲವಾ ಇವ ॥
ಅನುವಾದ
ಇಂತಹ ಉಪದೇಶ ಮಾಡುವವರು ಕೆಟ್ಟದಾರಿಗೆ ಕೊಂಡೊಯ್ಯುವವರಾಗಿದ್ದಾರೆ. ಅವರು ಸ್ವತಃ ನರಕಕ್ಕೆ ಸಲ್ಲುವವರು. ಅವರ ಮಾತಿನಲ್ಲಿ ವಿಶ್ವಾಸವಿಡುವವರು ಕಲ್ಲಿನ ದೋಣಿಯಿಂದ ನದಿದಾಟುವವರಂತೆ ಮುಳುಗಿಹೋಗುತ್ತಾರೆ. ॥14॥
(ಶ್ಲೋಕ-15)
ಮೂಲಮ್
ಅಥಾಹಮಮರಾಚಾರ್ಯಮಗಾಧಧಿಷಣಂ ದ್ವಿಜಮ್ ।
ಪ್ರಸಾದಯಿಷ್ಯೇ ನಿಶಠಃ ಶೀರ್ಷ್ಣಾ ತಚ್ಚರಣಂ ಸ್ಪೃಶನ್ ॥
ಅನುವಾದ
ನನ್ನ ಗುರುಗಳಾದ ಬೃಹಸ್ಪತ್ಯಾಚಾರ್ಯರಾದರೋ ಆಳವಾದ ಜ್ಞಾನದ ಸಮುದ್ರರಾಗಿದ್ದಾರೆ. ಅವರಲ್ಲಿ ಕಪಟವನ್ನೂ, ಅವಿನಯವನ್ನೂ ತೋರಿದ ನಾನು ಈಗ ಅವರ ಚರಣಗಳಲ್ಲಿ ತಲೆಯನ್ನಿಟ್ಟು ಅವರನ್ನು ಪ್ರಸನ್ನಗೊಳಿಸುವೆನು. ॥15॥
(ಶ್ಲೋಕ-16)
ಮೂಲಮ್
ಏವಂ ಚಿಂತಯತಸ್ತಸ್ಯ ಮಘೋನೋ ಭಗವಾನ್ಗೃಹಾತ್ ।
ಬೃಹಸ್ಪತಿರ್ಗತೋದೃಷ್ಟಾಂ ಗತಿಮಧ್ಯಾತ್ಮಮಾಯಯಾ ॥
ಅನುವಾದ
ಪರೀಕ್ಷಿತನೇ! ದೇವರಾಜ ಇಂದ್ರನು ಹೀಗೆ ಯೋಚಿಸುತ್ತಿರುವಾಗಲೇ ಭಗವಂತರಾದ ಬೃಹಸ್ಪತ್ಯಾಚಾರ್ಯರು ತಮ್ಮ ಮನೆಯಿಂದ ಹೊರಬಿದ್ದು, ಯೋಗಬಲದಿಂದ ಅಂತರ್ಧಾನ ಹೊಂದಿದರು. ॥6॥
(ಶ್ಲೋಕ-17)
ಮೂಲಮ್
ಗುರೋರ್ನಾಧಿಗತಃ ಸಂಜ್ಞಾಂ ಪರೀಕ್ಷನ್ ಭಗವಾನ್ ಸ್ವ ರಾಟ್ ।
ಧ್ಯಾಯನ್ ಧಿಯಾ ಸುರೈರ್ಯುಕ್ತಃ ಶರ್ಮನಾಲಭತಾತ್ಮನಃ ॥
ಅನುವಾದ
ದೇವೇಂದ್ರನು ತಮ್ಮ ಗುರುಗಳನ್ನು ಬಹಳವಾಗಿ ಹುಡುಕಿದನು, ಹುಡುಕಿಸಿದನು. ಆದರೆ ಎಲ್ಲಿಯೂ ಅವರ ಸುಳಿವು ಸಿಗಲಿಲ್ಲ. ಆಗ ಅವನು ಗುರುವಿಲ್ಲದೆ ತಾನು ಸುರಕ್ಷಿತನಲ್ಲವೆಂದು ತಿಳಿದು, ದೇವತೆಗಳೊಂದಿಗೆ, ತನ್ನ ಬುದ್ಧಿಗನುಸಾರ ಸ್ವರ್ಗದ ರಕ್ಷಣೆಯ ಉಪಾಯವನ್ನು ಯೋಚಿಸತೊಡಗಿದನು. ಆದರೂ ಅವನು ಏನನ್ನೂ ನಿಶ್ಚಯಿಸದಾದನು. ಅವನ ಚಿತ್ತವು ಅಶಾಂತವೇ ಆಗಿ ಉಳಿಯಿತು. ॥17॥
(ಶ್ಲೋಕ-18)
ಮೂಲಮ್
ತಚ್ಛ್ರುತ್ವೈವಾಸುರಾಃ ಸರ್ವ ಆಶ್ರಿತ್ಯೌಶನಸಂ ಮತಮ್ ।
ದೇವಾನ್ ಪ್ರತ್ಯುದ್ಯಮಂ ಚಕ್ರುರ್ದುರ್ಮದಾ ಆತತಾಯಿನಃ ॥
ಅನುವಾದ
ರಾಜೇಂದ್ರಾ! ದೇವಗುರು ಬೃಹಸ್ಪತಿಯವರ ಮೇಲೆ ದೇವೇಂದ್ರನಿಗೆ ಉಂಟಾಗಿದ್ದ ಮನೋಮಾಲಿನ್ಯದ ಸುಳಿವು ದೈತ್ಯರಿಗೆ ಸಿಕ್ಕಿತು. ಆಗ ಆ ಮದೋನ್ಮತ್ತ, ಆತತಾಯಿಗಳಾದ ಅಸುರರು ತಮ್ಮ ಗುರುಗಳಾದ ಶುಕ್ರಾಚಾರ್ಯರ ಆದೇಶದಂತೆ ದೇವತೆಗಳ ಮೇಲೆ ವಿಜಯವನ್ನು ಸಾಧಿಸಲು ಯುದ್ಧವನ್ನು ಸಾರಿದರು. ॥18॥
(ಶ್ಲೋಕ-19)
ಮೂಲಮ್
ತೈರ್ವಿಸೃಷ್ಟೇಷುಭಿಸ್ತೀಕ್ಷ್ಣೈರ್ನಿರ್ಭಿನ್ನಾಂಗೋರುಬಾಹವಃ ।
ಬ್ರಹ್ಮಾಣಂ ಶರಣಂ ಜಗ್ಮುಃ ಸಹೇಂದ್ರಾ ನತಕಂಧರಾಃ ॥
ಅನುವಾದ
ಅವರು ದೇವತೆಗಳ ಮೇಲೆ ಹರಿತವಾದ ಬಾಣಗಳನ್ನು ಮಳೆಗರೆದರು. ಅದರಿಂದ ಅವರ ಅಂಗಾಂಗಗಳು ಛಿದ್ರ-ಛಿದ್ರವಾಗಿ ಕಳಚಿ ಬೀಳತೊಡಗಿದುವು. ಆಗ ದೇವೇಂದ್ರನೊಂದಿಗೆ ಎಲ್ಲ ದೇವತೆಗಳೂ ಸೇರಿ ಬ್ರಹ್ಮದೇವರ ಬಳಿಗೆ ಸಾರಿ ನತಮಸ್ತಕರಾಗಿ ಅವರಿಗೆ ಶರಣಾದರು. ॥19॥
(ಶ್ಲೋಕ-20)
ಮೂಲಮ್
ತಾಂಸ್ತಥಾಭ್ಯರ್ದಿತಾನ್ವೀಕ್ಷ್ಯ ಭಗವಾನಾತ್ಮಭೂರಜಃ ।
ಕೃಪಯಾ ಪರಯಾ ದೇವ ಉವಾಚ ಪರಿಸಾಂತ್ವಯನ್ ॥
ಅನುವಾದ
ಸ್ವಯಂಭುವೂ, ಸರ್ವಸಮರ್ಥರೂ ಆದ ಬ್ರಹ್ಮ ದೇವರಿಗೆ ‘ದೇವತೆಗಳಿಗೆ ನಿಜವಾದ ದುರ್ದಶೆ ಉಂಟಾಗಿದೆ’ ಎಂದು ಅರಿವಾಗಿ ಅವರ ಹೃದಯ ಅತ್ಯಂತ ಕರುಣೆಯಿಂದ ತುಂಬಿಹೋಯಿತು. ಅವರು ದೇವತೆಗಳಿಗೆ ಧೈರ್ಯವನ್ನು ತುಂಬುತ್ತಾ ಹೀಗೆ ನುಡಿದರು.॥20॥
(ಶ್ಲೋಕ-21)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ಅಹೋ ಬತ ಸುರಶ್ರೇಷ್ಠಾ ಹ್ಯಭದ್ರಂ ವಃ ಕೃತಂ ಮಹತ್ ।
ಬ್ರಹ್ಮಿಷ್ಠಂ ಬ್ರಾಹ್ಮಣಂ ದಾಂತಮೈಶ್ವರ್ಯಾನ್ನಾಭ್ಯನಂದತ ॥
ಅನುವಾದ
ಬ್ರಹ್ಮದೇವರು ಹೇಳುತ್ತಾರೆ — ಎಲೈ ದೇವಶ್ರೇಷ್ಠರಿರಾ! ನೀವು ಎಂತಹ ಕೆಲಸವನ್ನು ಮಾಡಿಬಿಟ್ಟಿರಿ? ಅಯ್ಯೋ! ಶಿವ-ಶಿವಾ! ನೀವು ಐಶ್ವರ್ಯಮದದಿಂದ ಕುರುಡರಾಗಿ ಬ್ರಹ್ಮಜ್ಞಾನಿಗಳೂ, ವೇದಜ್ಞರೂ, ಸಂಯಮಿಯೂ ಆದ ಬ್ರಾಹ್ಮಣನನ್ನು ಸತ್ಕರಿಸಲಿಲ್ಲವಲ್ಲ! ॥21॥
(ಶ್ಲೋಕ-22)
ಮೂಲಮ್
ತಸ್ಯಾಯಮನಯಸ್ಯಾಸೀತ್ಪರೇಭ್ಯೋ ವಃ ಪರಾಭವಃ ।
ಪ್ರಕ್ಷೀಣೇಭ್ಯಃ ಸ್ವವೈರಿಭ್ಯಃ ಸಮೃದ್ಧಾನಾಂ ಚ ಯತ್ಸುರಾಃ ॥
ಅನುವಾದ
ದೇವತೆಗಳಿರಾ! ಇಂದು ನೀವು ಸಮೃದ್ಧಶಾಲಿಗಳಾಗಿದ್ದರೂ ನಿಮ್ಮ ನಿರ್ಬಲರಾದ ಶತ್ರುಗಳ ಮುಂದೆ ತಲೆತಗ್ಗಿಸ ಬೇಕಾಯಿತಲ್ಲ! ಇದು ನೀವು ಗೈದ ಅನೀತಿಯ ಫಲವೇ ಆಗಿದೆ. ॥22॥
(ಶ್ಲೋಕ-23)
ಮೂಲಮ್
ಮಘವಂದ್ವಿಷತಃ ಪಶ್ಯ ಪ್ರಕ್ಷೀಣಾನ್ ಗುರ್ವತಿಕ್ರಮಾತ್ ।
ಸಂಪ್ರತ್ಯುಪಚಿತಾನ್ಭೂಯಃ ಕಾವ್ಯಮಾರಾಧ್ಯ ಭಕ್ತಿತಃ ।
ಆದದೀರನ್ನಿಲಯನಂ ಮಮಾಪಿ ಭೃಗುದೇವತಾಃ ॥
ಅನುವಾದ
ದೇವೇಂದ್ರಾ! ನೋಡು! ನಿಮ್ಮ ಶತ್ರುಗಳೂ ಕೂಡ ಹಿಂದೆ ತಮ್ಮ ಗುರುಗಳಾದ ಶುಕ್ರಾಚಾರ್ಯರನ್ನು ತಿರಸ್ಕರಿಸಿದ್ದರಿಂದ ಅತ್ಯಂತ ನಿರ್ಬಲರಾಗಿದ್ದರು. ಆದರೆ ಈಗ ಭಕ್ತಿಭಾವದಿಂದ ಅವರನ್ನು ಆರಾಧಿಸಿ ದೈತ್ಯರು ಪುನಃ ಧನ, ಜನ, ಬಲದಿಂದ ಸಂಪನ್ನರಾಗಿರುವರು. ಶುಕ್ರಾಚಾರ್ಯರನ್ನು ತಮ್ಮ ಆರಾಧ್ಯದೇವರೆಂದು ತಿಳಿದ ಈ ದೈತ್ಯರು ಕೆಲವೇ ದಿನಗಳಲ್ಲಿ ನನ್ನ ಈ ಬ್ರಹ್ಮಲೋಕವನ್ನೂ ಕಸಿದುಕೊಳ್ಳು ವರೋ ಎಂದು ನನಗೆ ಅನಿಸುತ್ತದೆ. ॥23॥
(ಶ್ಲೋಕ-24)
ಮೂಲಮ್
ತ್ರಿವಿಷ್ಟಪಂ ಕಿಂ ಗಣಯಂತ್ಯಭೇದ್ಯ-
ಮಂತ್ರಾ ಭೃಗೂಣಾಮನುಶಿಕ್ಷಿತಾರ್ಥಾಃ ।
ನ ವಿಪ್ರಗೋವಿಂದಗವೀಶ್ವರಾಣಾಂ
ಭವಂತ್ಯಭದ್ರಾಣಿ ನರೇಶ್ವರಾಣಾಮ್ ॥
ಅನುವಾದ
ಭೃಗುವಂಶೀಯರು ಇವರಿಗೆ ಅರ್ಥಶಾಸ್ತ್ರದ ಸಮಗ್ರ ಶಿಕ್ಷಣ ಕೊಟ್ಟಿರುವರು. ಇವರು ಏನು ಮಾಡಬೇಕೆಂದು ಬಯಸುವರೋ ಅದರ ಸುಳಿವು ನಿಮಗೆ ತಿಳಿಯದು. ಅವರ ಸಲಹೆ ಅತಿಗುಪ್ತವಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಬರೇ ಈ ಸ್ವರ್ಗವೇನು, ಅವರು ಬಯಸಿದರೆ ಯಾವ ಲೋಕವನ್ನಾದರೂ ಗೆಲ್ಲಬಲ್ಲರು. ಯಾವ ರಾಜರು ಬ್ರಾಹ್ಮಣರು, ಗೋವಿಂದ ಮತ್ತು ಗೋವು ಇವರನ್ನು ತಮ್ಮ ಸರ್ವಸ್ವವೆಂದು ಭಾವಿಸುತ್ತಾ ಅವರ ಕೃಪೆಗೆ ಪಾತ್ರರಾಗಿದ್ದಾರೋ ಅವರಿಗೆ ಎಂದೂ ಅಮಂಗಲ ಉಂಟಾಗುವುದಿಲ್ಲ ಎಂಬುದು ನಿಜವಾಗಿದೆ. ॥24॥
(ಶ್ಲೋಕ-25)
ಮೂಲಮ್
ತದ್ ವಿಶ್ವರೂಪಂ ಭಜತಾಶು ವಿಪ್ರಂ
ತಪಸ್ವಿನಂ ತ್ವಾಷ್ಟ್ರಮಥಾತ್ಮವಂತಮ್ ।
ಸಭಾಜಿತೋರ್ಥಾನ್ ಸವಿಧಾಸ್ಯತೇ ವೋ
ಯದಿ ಕ್ಷಮಿಷ್ಯಧ್ವಮುತಾಸ್ಯ ಕರ್ಮ ॥
ಅನುವಾದ
ಅದಕ್ಕಾಗಿ ಈಗ ನೀವು ಬೇಗನೇ ತ್ವಷ್ಟಾನ ಪುತ್ರನಾದ ವಿಶ್ವರೂಪರ ಬಳಿಗೆ ಹೋಗಿ, ಅವರ ಸೇವೆ ಮಾಡಿರಿ. ಅವರು ನಿಜವಾದ ಬ್ರಾಹ್ಮಣರಾಗಿದ್ದು ತಪಸ್ವಿಗಳೂ, ಸಂಯಮಿಗಳೂ ಆಗಿದ್ದಾರೆ. ಅವರಲ್ಲಿರುವ ಅಸುರರ ಕುರಿತು ಪ್ರೀತಿಯನ್ನು ಕ್ಷಮಿಸಿ, ಅವರನ್ನೂ ಸಮ್ಮಾನಿಸಿದರೆ ಅವರು ನಿಮ್ಮ ಕೆಲಸವನ್ನು ನೆರವೇರಿಸಿಕೊಡುವರು. ॥25॥
(ಶ್ಲೋಕ-26)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತ ಏವಮುದಿತಾ ರಾಜನ್ ಬ್ರಹ್ಮಣಾ ವಿಗತಜ್ವರಾಃ ।
ಋಷಿಂ ತ್ವಾಷ್ಟ್ರಮುಪವ್ರಜ್ಯ ಪರಿಷ್ವಜ್ಯೇದಮಬ್ರುವನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಬ್ರಹ್ಮದೇವರು ಹೀಗೆ ಹೇಳಲು ದೇವತೆಗಳ ಚಿಂತಾಜ್ವರವು ದೂರವಾಗಿ, ಅವರು ತ್ವಷ್ಟಾನ ಪುತ್ರನಾದ ವಿಶ್ವರೂಪನ ಬಳಿಗೆ ಹೋಗಿ ಅವನನ್ನು ಆಲಿಂಗಿಸಿಕೊಂಡು ಹೀಗೆ ಪ್ರಾರ್ಥಿಸಿದರು.॥26॥
(ಶ್ಲೋಕ-27)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ವಯಂ ತೇತಿಥಯಃ ಪ್ರಾಪ್ತಾ ಆಶ್ರಮಂ ಭದ್ರಮಸ್ತು ತೇ ।
ಕಾಮಃ ಸಂಪಾದ್ಯತಾಂ ತಾತ ಪಿತೃಣಾಂ ಸಮಯೋಚಿತಃ ॥
ಅನುವಾದ
ದೇವತೆಗಳೆಂದರು ಮಗು ವಿಶ್ವರೂಪ! ನಿನಗೆ ಮಂಗಳವಾಗಲಿ. ನಾವು ಅತಿಥಿಗಳಾಗಿ ನಿನ್ನ ಆಶ್ರಮಕ್ಕೆ ಬಂದಿರುವೆವು. ನಾವು ಒಂದು ರೀತಿಯಲ್ಲಿ ನಿನ್ನ ತಂದೆಯ ಸ್ಥಾನದಲ್ಲಿರುವೆವು. ಅದಕ್ಕಾಗಿ ನೀನು ನಮ್ಮಗಳ ಸಮಯೋಚಿತ ವಾದ ಅಭಿಲಾಷೆಯನ್ನು ಈಡೇರಿಸಬೇಕು. ॥27॥
(ಶ್ಲೋಕ-28)
ಮೂಲಮ್
ಪುತ್ರಾಣಾಂ ಹಿ ಪರೋ ಧರ್ಮಃ ಪಿತೃಶುಶ್ರೂಷಣಂ ಸತಾಮ್ ।
ಅಪಿ ಪುತ್ರವತಾಂ ಬ್ರಹ್ಮನ್ ಕಿಮುತ ಬ್ರಹ್ಮಚಾರಿಣಾಮ್ ॥
ಅನುವಾದ
ಎಲೈ ಬ್ರಾಹ್ಮಣೋತ್ತಮಾ! ತಂದೆಯ ಮತ್ತು ಗುರುಹಿರಿಯರ ಸೇವೆಮಾಡುವುದು ಸತ್ಪುತ್ರರಿಗೆ ಪರಮಧರ್ಮವೇ ಆಗಿದೆ. ಹೀಗಿರುವಾಗ ಬ್ರಹ್ಮಚಾರಿಗಳಿಗೆ ಹೇಳುವುದೇನಿದೆ? ॥28॥
(ಶ್ಲೋಕ-29)
ಮೂಲಮ್
ಆಚಾರ್ಯೋ ಬ್ರಹ್ಮಣೋ ಮೂರ್ತಿಃ ಪಿತಾ ಮೂರ್ತಿಃ ಪ್ರಜಾಪತೇಃ ।
ಭ್ರಾತಾ ಮರುತ್ಪತೇರ್ಮೂರ್ತಿರ್ಮಾತಾ ಸಾಕ್ಷಾತ್ ಕ್ಷಿತೇಸ್ತನುಃ ॥
ಅನುವಾದ
ವತ್ಸ! ಆಚಾರ್ಯನು ವೇದದ, ತಂದೆಯು ಬ್ರಹ್ಮದೇವರ, ಅಣ್ಣನು ಇಂದ್ರನ ಮತ್ತು ತಾಯಿಯು ಸಾಕ್ಷಾತ್ ಪೃಥಿವಿಯ ಮೂರ್ತಿಯೇ ಆಗಿದ್ದಾರೆ. ॥29॥
(ಶ್ಲೋಕ-30)
ಮೂಲಮ್
ದಯಾಯಾ ಭಗಿನೀ ಮೂರ್ತಿರ್ಧರ್ಮಸ್ಯಾತ್ಮಾತಿಥಿಃ ಸ್ವಯಮ್ ।
ಆಗ್ನೇರಭ್ಯಾಗತೋ ಮೂರ್ತಿಃ ಸರ್ವಭೂತಾನಿ ಚಾತ್ಮನಃ ॥
ಅನುವಾದ
ಹಾಗೆಯೇ ಸಹೋ ದರಿಯು ದಯೆಯ, ಅತಿಥಿ ಧರ್ಮದ, ಅಭ್ಯಾಗತರು ಅಗ್ನಿಯ ಮತ್ತು ಜಗತ್ತಿನ ಎಲ್ಲ ಪ್ರಾಣಿಗಳು ತನ್ನ ಆತ್ಮನ ಮೂರ್ತಿ-ಆತ್ಮಸ್ವರೂಪರಾಗಿದ್ದಾರೆ. ॥30॥
(ಶ್ಲೋಕ-31)
ಮೂಲಮ್
ತಸ್ಮಾತ್ ಪಿತೃಣಾಮಾರ್ತಾನಾಮಾರ್ತಿಂ ಪರಪರಾಭವಮ್ ।
ತಪಸಾಪನಯನ್ಸ್ತಾತ ಸಂದೇಶಂ ಕರ್ತುಮರ್ಹಸಿ ॥
ಅನುವಾದ
ಎಲೈ ಪುತ್ರನೇ! ನಾವು ನಿನ್ನ ತಂದೆಯ ಸ್ಥಾನದಲ್ಲಿದ್ದೇವೆ. ಇಂತಹ ಪೂಜ್ಯಸ್ಥಾನದಲ್ಲಿರುವ ನಾವು ಶತ್ರುಗಳಿಂದ ಪರಾಜಿತರಾಗಿ ಬಹಳ ದುಃಖದಲ್ಲಿದ್ದೇವೆ. ನೀನು ನಿನ್ನ ತಪೋಬಲದಿಂದ ನಮ್ಮ ಈ ದುಃಖ, ದಾರಿದ್ರ್ಯ, ಪರಾಜಯಗಳನ್ನು ಹೋಗಲಾಡಿಸು. ನಮ್ಮ ಈ ಆಜ್ಞೆಯನ್ನು ನೀನು ನಡೆಸಿಕೊಡಬೇಕು. ॥31॥
(ಶ್ಲೋಕ-32)
ಮೂಲಮ್
ವೃಣೀಮಹೇ ತ್ವೋಪಾಧ್ಯಾಯಂ
ಬ್ರಹ್ಮಿಷ್ಠಂ ಬ್ರಾಹ್ಮಣಂ ಗುರುಮ್ ।
ಯಥಾಂಜಸಾ ವಿಜೇಷ್ಯಾಮಃ
ಸಪತ್ನಾಂಸ್ತವ ತೇಜಸಾ ॥
ಅನುವಾದ
ನೀನು ಬ್ರಹ್ಮನಿಷ್ಠ ಬ್ರಾಹ್ಮಣನಾಗಿರುವುದರಿಂದ ಹುಟ್ಟಿನಿಂದಲೇ ನಮಗೆ ಗುರುವಾಗಿರುವೆ. ನಾವು ನಿನ್ನನ್ನು ಆಚಾರ್ಯನನ್ನಾಗಿ ವರಣಮಾಡಿ ನಿನ್ನ ಶಕ್ತಿಯಿಂದ ಅನಾಯಾಸವಾಗಿಯೇ ಶತ್ರುಗಳ ಮೇಲೆ ಜಯಗಳಿಸುವೆವು. ॥32॥
(ಶ್ಲೋಕ-33)
ಮೂಲಮ್
ನ ಗರ್ಹಯಂತಿ ಹ್ಯರ್ಥೇಷು ಯವಿಷ್ಠಾಂಘ್ರ್ಯಭಿವಾದನಮ್ ।
ಛಂದೋಭ್ಯೋನ್ಯತ್ರ ನ ಬ್ರಹ್ಮನ್ವಯೋ ಜ್ಯೈಷ್ಠ್ಯಸ್ಯ ಕಾರಣಮ್ ॥
ಅನುವಾದ
ಬ್ರಾಹ್ಮಣೋತ್ತಮಾ! ಆವಶ್ಯಕತೆ ಒದಗಿದಾಗ ವಯಸ್ಸಿನಲ್ಲಿ ಚಿಕ್ಕವರಾದವರಿಗೆ ನಮಸ್ಕರಿಸುವುದು ನಿಂದ್ಯವಾಗುವುದಿಲ್ಲ. ಹಿರಿತನಕ್ಕೆ ವೇದಗಳ ಜ್ಞಾನವೇ ಹೊರತು ವಯಸ್ಸು ಕಾರಣವಲ್ಲ. ॥33॥
(ಶ್ಲೋಕ-34)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ಅಭ್ಯರ್ಥಿತಃ ಸುರಗಣೈಃ ಪೌರೋಹಿತ್ಯೇ ಮಹಾತಪಾಃ ।
ಸ ವಿಶ್ವರೂಪಸ್ತಾನಾಹ ಪ್ರಸನ್ನಃ ಶ್ಲಕ್ಷ್ಣಯಾ ಗಿರಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ದೇವತೆಗಳು ಹೀಗೆ ವಿಶ್ವರೂಪನನ್ನು ತಮ್ಮ ಪೌರೋಹಿತ್ಯ ವನ್ನು ವಹಿಸಿಕೊಳ್ಳಲು ಪ್ರಾರ್ಥಿಸಿದಾಗ ಪರಮತಪಸ್ವೀ ವಿಶ್ವರೂಪನು ಪ್ರಸನ್ನನಾಗಿ ಅತ್ಯಂತ ಪ್ರಿಯವೂ, ಮಧುರವೂ ಆದ ಮಾತುಗಳಿಂದ ಹೀಗೆಂದನು ॥34॥
(ಶ್ಲೋಕ-35)
ಮೂಲಮ್ (ವಾಚನಮ್)
ವಿಶ್ವರೂಪ ಉವಾಚ
ಮೂಲಮ್
ವಿಗರ್ಹಿತಂ ಧರ್ಮಶೀಲೈರ್ಬ್ರಹ್ಮವರ್ಚಉಪವ್ಯಯಮ್ ।
ಕಥಂ ನು ಮದ್ವಿಧೋ ನಾಥಾ ಲೋಕೇಶೈರಭಿಯಾಚಿತಮ್ ।
ಪ್ರತ್ಯಾಖ್ಯಾಸ್ಯತಿ ತಚ್ಛಿಷ್ಯಃ ಸ ಏವ ಸ್ವಾರ್ಥ ಉಚ್ಯತೇ ॥
ಅನುವಾದ
ವಿಶ್ವರೂಪನು ಹೇಳಿದನು — ಧರ್ಮಶೀಲರಾದ ಮಹಾತ್ಮರು ಪೌರೋಹಿತ್ಯವೃತ್ತಿಯನ್ನು ನಿಂದಿಸುತ್ತಾರೆ. ಏಕೆಂದರೆ ಅದರಿಂದ ಬ್ರಹ್ಮವರ್ಚಸ್ಸು ಕ್ಷಯಹೊಂದುತ್ತದೆ. ಆದರೆ ನೀವು ನನಗೆ ಒಡೆಯರಾಗಿ ಲೋಕೇಶ್ವರರಾಗಿ ಅದನ್ನು ವಹಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೀರಿ. ಇಂತಹ ಸ್ಥಿತಿಯಲ್ಲಿ ನನ್ನಂತಹವನು ನಿಮ್ಮಗಳ ಮಾತನ್ನು ಹೇಗೆ ಮೀರ ಬಲ್ಲನು? ನಾನಾದರೋ ನಿಮ್ಮ ಸೇವಕನಾಗಿರುವೆನು. ನಿಮ್ಮ ಆಜ್ಞೆಯನ್ನು ಪಾಲಿಸುವುದೇ ನನ್ನ ಧರ್ಮವೂ ಆಗಿದೆ. ॥35॥
(ಶ್ಲೋಕ-36)
ಮೂಲಮ್
ಅಕಿಂಚನಾನಾಂ ಹಿ ಧನಂ ಶಿಲೋಂಛನಂ
ತೇನೇಹ ನಿರ್ವರ್ತಿತಸಾಧುಸತ್ಕ್ರಿಯಃ ।
ಕಥಂ ವಿಗರ್ಹ್ಯಂ ನು ಕರೋಮ್ಯಧೀಶ್ವರಾಃ
ಪೌರೋಧಸಂ ಹೃಷ್ಯತಿ ಯೇನ ದುರ್ಮತಿಃ ॥
ಅನುವಾದ
ದೇವತೆಗಳಿರಾ! ವಿರಕ್ತರಾದ ದರಿದ್ರರಿಗೆ ಶಿಲೋಂಛ ವೃತ್ತಿಗಳೇ ಜೀವನಧನವು. ಆ ವೃತ್ತಿಗಳಿಂದ ದೇವ ಕಾರ್ಯ-ಪಿತೃಕಾರ್ಯ ಮುಂತಾದ ಧರ್ಮಕಾರ್ಯಗಳನ್ನು ನೆರವೇರಿಸುತ್ತಿರುವ ನಾನು ನಿಂದೆಗೆ ಯೋಗ್ಯವಾದ ಪುರೋಹಿತ ವೃತ್ತಿಯನ್ನು ಏಕೆ ಮಾಡಲಿ? ಬುದ್ಧಿ ಕೆಟ್ಟು ಹೋದವರು ತಾನೇ ಈ ವೃತ್ತಿಯಿಂದ ಪ್ರಸನ್ನರಾಗುವರು. ॥36॥
(ಶ್ಲೋಕ-37)
ಮೂಲಮ್
ತಥಾಪಿ ನ ಪ್ರತಿಬ್ರೂಯಾಂ ಗುರುಭಿಃ ಪ್ರಾರ್ಥಿತಂ ಕಿಯತ್ ।
ಭವತಾಂ ಪ್ರಾರ್ಥಿತಂ ಸರ್ವಂ ಪ್ರಾಣೈರರ್ಥೈಶ್ಚ ಸಾಧಯೇ ॥
ಅನುವಾದ
ನೀವು ನನ್ನಿಂದ ಏನನ್ನು ಬಯಸುವಿರೋ ಅದಕ್ಕೇ ಎದುರಾಡುವುದಿಲ್ಲ ಮತ್ತು ಗುರು-ಹಿರಿಯರಾದ ನಿಮ್ಮ ಪ್ರಾರ್ಥನೆಯನ್ನು ತಳ್ಳಿಹಾಕುವುದಿಲ್ಲ. ಅದಕ್ಕೆ ಎದುರಾಡುವುದಿಲ್ಲ. ನನ್ನ ತನು-ಮನ-ಧನಗಳಿಂದಲೂ ನೀವು ಹೇಳಿ ದುದನ್ನು ನಡೆಸಿಕೊಡುವೆನು. ॥37॥
(ಶ್ಲೋಕ-38)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತೇಭ್ಯ ಏವಂ ಪ್ರತಿಶ್ರುತ್ಯ ವಿಶ್ವರೂಪೋ ಮಹಾತಪಾಃ ।
ಪೌರೋಹಿತ್ಯಂ ವೃತಶ್ಚಕ್ರೇ ಪರಮೇಣ ಸಮಾಧಿನಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜೇಂದ್ರನೇ! ಮಹಾತಪಸ್ವಿಯಾದ ಆ ವಿಶ್ವರೂಪನು ದೇವತೆಗಳ ಮುಂದೆ ಹೀಗೆ ಪ್ರತಿಜ್ಞೆಮಾಡಿ ಅವರಿಂದ ಪೌರೋಹಿತ್ಯಕ್ಕಾಗಿ ವರಿಸಲ್ಪಟ್ಟು ಆ ಕಾರ್ಯವನ್ನು ಅತ್ಯಂತ ಶ್ರದ್ಧಾಸಕ್ತಿಗಳಿಂದ ನಡೆಸತೊಡಗಿದನು. ॥38॥
(ಶ್ಲೋಕ-39)
ಮೂಲಮ್
ಸುರದ್ವಿಷಾಂ ಶ್ರಿಯಂ ಗುಪ್ತಾವೌಶನಸ್ಯಾಪಿ ವಿದ್ಯಯಾ ।
ಆಚ್ಛಿದ್ಯಾದಾನ್ಮಹೇಂದ್ರಾಯ ವೈಷ್ಣವ್ಯಾ ವಿದ್ಯಯಾ ವಿಭುಃ ॥
ಅನುವಾದ
ಶುಕ್ರಾಚಾರ್ಯರು ತಮ್ಮ ವಿದ್ಯಾಬಲದಿಂದ ಅಸುರರ ಸಂಪತ್ತನ್ನು ಸುರಕ್ಷಿತಗೊಳಿಸಿದ್ದರು. ಸಮರ್ಥನಾದ ವಿಶ್ವರೂಪನು ವೈಷ್ಣವೀ ವಿದ್ಯೆಯ ಬಲದಿಂದ ಆ ಸಂಪತ್ತನ್ನು ಕಿತ್ತುಕೊಂಡು ದೇವೇಂದ್ರನಿಗೆ ಕೊಡಿಸಿದನು. ॥39॥
(ಶ್ಲೋಕ-40)
ಮೂಲಮ್
ಯಯಾ ಗುಪ್ತಃ ಸಹಸ್ರಾಕ್ಷೋ ಜಿಗ್ಯೇಸುರಚಮೂರ್ವಿಭುಃ ।
ತಾಂ ಪ್ರಾಹ ಸ ಮಹೇಂದ್ರಾಯ ವಿಶ್ವರೂಪ ಉದಾರಧೀಃ ॥
ಅನುವಾದ
ರಾಜನೇ! ಯಾವ ವಿದ್ಯೆಯ ಬಲದಿಂದ ಇಂದ್ರನು ಸಂರಕ್ಷಿತನಾಗಿ ಅಸುರರ ಸಮೂಹವನ್ನು ಗೆದ್ದು ವಿಜಯವನ್ನು ಗಳಿಸಿದನೋ ಆ ವೈಷ್ಣವೀ ವಿದ್ಯೆಯನ್ನು ಉದಾರ ಬುದ್ಧಿಯುಳ್ಳ ವಿಶ್ವರೂಪನೇ ಇಂದ್ರನಿಗೆ ಉಪದೇಶ ಮಾಡಿದ್ದನು. ॥40॥
ಅನುವಾದ (ಸಮಾಪ್ತಿಃ)
ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಸಪ್ತಮೋಽಧ್ಯಾಯಃ ॥7॥