[ಐದನೆಯ ಅಧ್ಯಾಯ]
ಭಾಗಸೂಚನಾ
ಶ್ರೀನಾರದರ ಉಪದೇಶದಂತೆ ದಕ್ಷಪುತ್ರರ ವಿರಕ್ತಿ ಹಾಗೂ ದಕ್ಷನಿಂದ ನಾರದರಿಗೆ ಶಾಪ
(ಶ್ಲೋಕ-1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತಸ್ಯಾಂ ಸ ಪಾಂಚಜನ್ಯಾಂ ವೈ ವಿಷ್ಣುಮಾಯೋಪಬೃಂಹಿತಃ ।
ಹರ್ಯಶ್ವ ಸಂಜ್ಞಾನಯುತಂ ಪುತ್ರಾನಜನಯದ್ ವಿಭುಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಭಗವಂತನ ಅದ್ಭುತ ಶಕ್ತಿಸಂಚಾರದಿಂದ ದಕ್ಷಪ್ರಜಾಪತಿಯು ಪರಮ ಸಮರ್ಥನಾದನು. ಅವನು ಪಂಚಜನಿಯ ಪುತ್ರಿ ಯಾದ ಅಸಿಕ್ನೀದೇವಿಯಲ್ಲಿ ಹರ್ಯಶ್ವರೆಂಬ ಹತ್ತುಸಾವಿರ ಪುತ್ರರನ್ನು ಪಡೆದನು. ॥1॥
(ಶ್ಲೋಕ-2)
ಮೂಲಮ್
ಅಪೃಥಗ್ಧರ್ಮಶೀಲಾಸ್ತೇ ಸರ್ವೇ ದಾಕ್ಷಾಯಣಾ ನೃಪ ।
ಪಿತ್ರಾ ಪ್ರೋಕ್ತಾಃ ಪ್ರಜಾಸರ್ಗೇ ಪ್ರತೀಚೀಂ ಪ್ರಯಯುರ್ದಿಶಮ್ ॥
ಅನುವಾದ
ರಾಜನೇ! ದಕ್ಷನಂದನ ರೆಲ್ಲರೂ ಒಂದೇ ಸ್ವಭಾವ, ಧರ್ಮ, ಆಚರಣೆಗಳುಳ್ಳವರಾಗಿದ್ದರು. ದಕ್ಷನು ಅವರಿಗೆ ‘ಸಂತಾನವನ್ನು ಉಂಟು ಮಾಡಿರಿ’ ಎಂಬ ಅಪ್ಪಣೆಯನ್ನು ಕೊಟ್ಟಾಗ ಅವರೆಲ್ಲರೂ ತಪಸ್ಸಿಗಾಗಿ ಪಶ್ಚಿಮದಿಕ್ಕಿನತ್ತ ನಡೆದರು.॥2॥
(ಶ್ಲೋಕ-3)
ಮೂಲಮ್
ತತ್ರ ನಾರಾಯಣಸರಸ್ತೀರ್ಥಂ ಸಿಂಧು ಸಮುದ್ರಯೋಃ ।
ಸಂಗಮೋ ಯತ್ರ ಸುಮಹನ್ಮುನಿಸಿದ್ಧ ನಿಷೇವಿತಮ್ ॥
ಅನುವಾದ
ಪಶ್ಚಿಮ ದಿಕ್ಕಿನಲ್ಲಿ ಸಿಂಧುನದಿ ಮತ್ತು ಸಮುದ್ರಗಳ ಸಂಗಮ ಸ್ಥಾನದಲ್ಲಿ ನಾರಾಯಣಸರೋವರವೆಂಬ ದೊಡ್ಡ ತೀರ್ಥವಿದೆ. ದೊಡ್ಡ-ದೊಡ್ಡ ಮುನಿಗಳೂ, ಸಿದ್ಧರೂ ಅಲ್ಲಿ ವಾಸಿಸುತ್ತಾರೆ. ॥3॥
(ಶ್ಲೋಕ-4)
ಮೂಲಮ್
ತದುಪಸ್ಪರ್ಶನಾದೇವ ವಿನಿರ್ಧೂತಮಲಾಶಯಾಃ ।
ಧರ್ಮೇ ಪಾರಮಹಂಸ್ಯೇ ಚ ಪ್ರೋತ್ಪನ್ನಮತಯೋಪ್ಯುತ ॥
(ಶ್ಲೋಕ-5)
ಮೂಲಮ್
ತೇಪಿರೇ ತಪ ಏವೋಗ್ರಂ ಪಿತ್ರಾದೇಶೇನ ಯಂತ್ರಿತಾಃ ।
ಪ್ರಜಾವಿವೃದ್ಧಯೇ ಯತ್ತಾನ್ ದೇವರ್ಷಿಸ್ತಾನ್ ದದರ್ಶ ಹ ॥
(ಶ್ಲೋಕ-6)
ಮೂಲಮ್
ಉವಾಚ ಚಾಥ ಹರ್ಯಶ್ವಾಃ ಕಥಂ ಸ್ರಕ್ಷ್ಯಥ ವೈ ಪ್ರಜಾಃ ।
ಅದೃಷ್ಟ್ವಾಂತಂ ಭುವೋ ಯೂಯಂ ಬಾಲಿಶಾ ಬತ ಪಾಲಕಾಃ ॥
ಅನುವಾದ
ಹರ್ಯಶ್ವರು ಆ ನಾರಾಯಣ ಸರೋವರದಲ್ಲಿ ಸ್ನಾನ ಮಾಡುತ್ತಲೇ ಅವರ ಅಂತಃಕರಣಗಳು ಶುದ್ಧ ವಾದುವು. ಅವರ ಬುದ್ಧಿಯು ಭಾಗವತ ಧರ್ಮದಲ್ಲಿ ತೊಡಗಿತು. ಆದರೂ ತಂದೆಯ ಆಜ್ಞೆಗೆ ಒಳಪಟ್ಟಿದ್ದರಿಂದ ಅವರು ಉಗ್ರವಾದ ತಪಸ್ಸು ಮಾಡುತ್ತಿದ್ದರು. ಹೀಗೆ ಭಾಗವತ ಧರ್ಮದಲ್ಲಿ ಅಭಿರುಚಿ ಹೊಂದಿದ್ದರೂ ಇವರು ಪ್ರಜಾವೃದ್ಧಿಗಾಗಿಯೇ ತತ್ಪರರಾಗಿರುವುದು ಕಂಡು ದೇವ ಋಷಿಗಳಾದ ಶ್ರೀನಾರದರು ಅವರ ಬಳಿಗೆ ಬಂದು ಹೀಗೆ ಉಪದೇಶಿಸಿದರು ಎಲೈ ಹರ್ಯಶ್ವರೇ! ನೀವು ಪ್ರಜಾ ಪತಿಗಳಾಗಿದ್ದರೂ ನಿಜವಾಗಿ ಮೂರ್ಖರೇ ಆಗಿದ್ದೀರಲ್ಲ! ಭೂಮಿಯ ಕೊನೆಯನ್ನೇ ಕಾಣದಿರುವ ನೀವು ಸೃಷ್ಟಿಯನ್ನು ಹೇಗೆ ಮಾಡುವಿರಿ? ಹೇಳಿ. ತುಂಬಾ ಆಶ್ಚರ್ಯವಾಗಿದೆ. ॥4-6॥
(ಶ್ಲೋಕ-7)
ಮೂಲಮ್
ತಥೈಕಪುರುಷಂ ರಾಷ್ಟ್ರಂ ಬಿಲಂ ಚಾದೃಷ್ಟ ನಿರ್ಗಮಮ್ ।
ಬಹುರೂಪಾಂ ಸಿಯಂ ಚಾಪಿ ಪುಮಾಂಸಂ ಪುಂಶ್ಚಲೀಪತಿಮ್ ॥
(ಶ್ಲೋಕ-8)
ಮೂಲಮ್
ನದೀಮುಭಯತೋವಾಹಾಂ ಪಂಚಪಂಚಾದ್ಭುತಂ ಗೃಹಮ್ ।
ಕ್ವಚಿದ್ಧಂಸಂ ಚಿತ್ರಕಥಂ ಕ್ಷೌರಪವ್ಯಂ ಸ್ವಯಂ ಭ್ರಮಿಮ್ ॥
(ಶ್ಲೋಕ-9)
ಮೂಲಮ್
ಕಥಂ ಸ್ವಪಿತುರಾದೇಶಮವಿದ್ವಾಂಸೋ ವಿಪಶ್ಚಿತಃ ।
ಅನುರೂಪಮವಿಜ್ಞಾಯ ಅಹೋ ಸರ್ಗಂ ಕರಿಷ್ಯಥ ॥
ಅನುವಾದ
ಒಬ್ಬನೇ ಇರುವ ದೇಶವೊಂದುಂಟು. ಅದರಿಂದ ಹೊರಕ್ಕೆ ಬರಲು ಮಾರ್ಗವೇ ಇಲ್ಲದಿರುವ ಬಿಲವೊಂದುಂಟು. ಅಲ್ಲಿ ಬಹುರೂಪಗಳುಳ್ಳ ಒಬ್ಬ ಸ್ತ್ರೀಯೂ ಇದ್ದಾಳೆ. ಆ ವ್ಯಭಿಚಾರಿಣಿಯಾದ ಹೆಂಗಸಿಗೆ ಪತಿಯಾಗಿರುವ ಪುರುಷನೊಬ್ಬನಿರುವನು. ಹಿಂದೆ-ಮುಂದೆ ಎರಡೂ ಕಡೆ ಹರಿಯುವಂತಹ ಒಂದು ನದಿಯಿದೆ. ಇಪ್ಪತ್ತೈದು ಪದಾರ್ಥಗಳಿಂದ ನಿರ್ಮಿತವಾದ ಒಂದು ವಿಚಿತ್ರವಾದ ಮನೆಯುಂಟು. ಅತಿ ವಿಚಿತ್ರವಾದ ಕಥೆಯುಳ್ಳ ಒಂದು ಹಂಸವೂ ಇದೆ. ಕತ್ತಿ ಮತ್ತು ವಜ್ರ ಇವುಗಳಿಂದ ಮಾಡಲ್ಪಟ್ಟ ತನ್ನಿಂದ-ತಾನೇ ತಿರುಗುತ್ತಿರುವ ಒಂದು ಚಕ್ರವಿದೆ. ಮೂರ್ಖರಾದ ಹರ್ಯಶ್ವರರೇ! ಸರ್ವಜ್ಞನಾದ ನಿಮ್ಮ ತಂದೆಯ ಉಚಿತವಾದ ಆದೇಶವನ್ನು ತಿಳಿದುಕೊಳ್ಳುವ ತನಕ, ಮೇಲೆ ಹೇಳಿದ ವಸ್ತುಗಳನ್ನು ನೋಡುವವರೆಗೂ ಅವನ ಆಜ್ಞೆಯಂತೆ ಸೃಷ್ಟಿಯನ್ನು ಹೇಗೆ ಮಾಡಬಲ್ಲಿರಿ? ॥7-9॥
(ಶ್ಲೋಕ-10)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತನ್ನಿಶಮ್ಯಾಥ ಹರ್ಯಶ್ವಾ ಔತ್ಪತ್ತಿಕಮನೀಷಯಾ ।
ವಾಚಃಕೂಟಂ ತು ದೇವರ್ಷೇಃ ಸ್ವಯಂ ವಿಮಮೃಶುರ್ಧಿಯಾ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಹರ್ಯಶ್ವರು ಹುಟ್ಟಿನಿಂದಲೇ ಬುದ್ಧಿವಂತರಾಗಿದ್ದರು. ಅವರು ದೇವಋಷಿ ನಾರದರ ಈ ಒಗಟಿನಂತಿರುವ ಮಾತನ್ನು ಕೇಳಿ, ತಾವು ತಮ್ಮ ಬುದ್ಧಿಯಿಂದ ವಿಚಾರಮಾಡ ತೊಡಗಿದರು ॥10॥
(ಶ್ಲೋಕ-11)
ಮೂಲಮ್
ಭೂಃ ಕ್ಷೇತ್ರಂ ಜೀವಸಂಜ್ಞಂ ಯದನಾದಿ ನಿಜಬಂಧನಮ್ ।
ಅದೃಷ್ಟ್ವಾ ತಸ್ಯ ನಿರ್ವಾಣಂ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
‘ದೇವರ್ಷಿಗಳಾದ ನಾರದರ ಮಾತು ನಿಜವೇ ಆಗಿದೆ. ಇವರು ಹೇಳಿರುವ ಭೂಮಿಯೆಂಬುದು ಆತ್ಮನಿಗೆ ಅನಾದಿಕಾಲದಿಂದ ಬಂಧನವಾಗಿರುವ ಲಿಂಗಶರೀರವಾಗಿದೆ. ಇದು ನಾಶಹೊಂದುವುದನ್ನು ನೋಡದೆ ಮೋಕ್ಷಕ್ಕೆ ಉಪಯೋಗವಲ್ಲದ ಕರ್ಮಗಳಿಂದ ಏನು ಲಾಭವಿದೆ? ॥11॥
(ಶ್ಲೋಕ-12)
ಮೂಲಮ್
ಏಕ ಏವೇಶ್ವರಸ್ತುರ್ಯೋ ಭಗವಾನ್ ಸ್ವಾಶ್ರಯಃ ಪರಃ ।
ತಮದೃಷ್ಟ್ವಾಭವಂ ಪುಂಸಃ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
ನಿಜವಾಗಿ ಈಶ್ವರನು ಒಬ್ಬನೇ ಆಗಿದ್ದು, ಅವನು ಜಾಗ್ರತ್, ಸ್ವಪ್ನ-ಸುಷುಪ್ತಿಗಳೆಂಬ ಮೂರು ಅವಸ್ಥೆಗಳಿಂದ ಮತ್ತು ಅವುಗಳ ಅಭಿಮಾನೀ ದೇವತೆಗಳಿಂದ ಬೇರೆಯಾಗಿ ಅವುಗಳಿಗೆ ಸಾಕ್ಷಿ ತುರೀಯನಾಗಿದ್ದಾನೆ. ಎಲ್ಲದರ ಆಶ್ರಯನು ಅವನೇ ಆಗಿದ್ದು, ಅವನಿಗೆ ಯಾವ ಆಶ್ರಯವೂ ಇಲ್ಲ. ಅವನೇ ಭಗವಂತ ನಾಗಿದ್ದಾನೆ. ಪ್ರಕೃತಿಯೇ ಮುಂತಾದವುಗಳಿಂದ ಅತೀತ ನಾದ ಆ ನಿತ್ಯಮುಕ್ತ ಪರಮಾತ್ಮನನ್ನು ನೋಡದೆ, ಆ ಭಗವಂತನಿಗೆ ಕರ್ಮಗಳನ್ನು ಅರ್ಪಿಸದೇ ಜೀವನಿಗೆ ಯಾವ ಲಾಭವಿದೆ? ॥12॥
(ಶ್ಲೋಕ-13)
ಮೂಲಮ್
ಪುಮಾನ್ನೈವೈತಿ ಯದ್ಗತ್ವಾ ಬಿಲಸ್ವರ್ಗಂ ಗತೋ ಯಥಾ ।
ಪ್ರತ್ಯಗ್ಧಾಮಾವಿದ ಇಹ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
ಬಿಲರೂಪವಾದ ಪಾತಾಳದಲ್ಲಿ ಹೊಕ್ಕ ಮನುಷ್ಯನು ಅಲ್ಲಿಂದ ಮರಳಲಾರನೋ, ಹಾಗೆಯೇ ಜೀವನುಸ್ವಯಂ ಅಂತರ್ಜ್ಯೋತಿ ಸ್ವರೂಪವನ್ನು ಪಡೆದುಕೊಂಡು ಮತ್ತೆ ಸಂಸಾರಕ್ಕೆ ಮರಳಲಾರನೋ, ಅಂತಹ ಪರಮಾತ್ಮನನ್ನು ತಿಳಿಯದೆ ನಾಶವುಳ್ಳ ಸ್ವರ್ಗಾದಿ ಫಲಗಳನ್ನೀಯುವ ಕರ್ಮಗಳನ್ನು ಮಾಡುವುದರಿಂದ ಏನು ಲಾಭವಿದೆ? ॥13॥
(ಶ್ಲೋಕ-14)
ಮೂಲಮ್
ನಾನಾರೂಪಾತ್ಮನೋ ಬುದ್ಧಿಃ ಸ್ವೈರಿಣೀವ ಗುಣಾನ್ವಿತಾ ।
ತನ್ನಿಷ್ಠಾಮಗತಸ್ಯೇಹ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
ಬಹುರೂಪವುಳ್ಳ, ಸತ್ವ, ರಜ ಮೊದಲಾದ ಗುಣಗಳನ್ನು ಧರಿಸಿದ ಬುದ್ಧಿಯೇ ವ್ಯಭಿಚಾರಿಣಿ ಸೀಯಂತೇ ಇದೆ. ಈ ಜೀವನದಲ್ಲಿ ಇದರ ಅಂತ್ಯವನ್ನು ತಿಳಿಯದೆ, ವಿವೇಕವನ್ನು ಪಡೆಯದೆ, ಅಶಾಂತಿಯನ್ನು ಹೆಚ್ಚೆಚ್ಚು ಬೆಳೆಸುವ ಕರ್ಮಗಳನ್ನು ಮಾಡುವುದರಿಂದ ಪ್ರಯೋಜನವೇನಿದೆ? ॥14॥
(ಶ್ಲೋಕ-15)
ಮೂಲಮ್
ತತ್ಸಂಗಭ್ರಂಶಿತೈಶ್ವರ್ಯಂ ಸಂಸರಂತಂ ಕುಭಾರ್ಯವತ್ ।
ತದ್ಗತೀರಬುಧಸ್ಯೇಹ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
ಈ ಬುದ್ಧಿಯೇ ಕುಲಟೆ ಯಾದ ಹೆಂಗಸಿನಂತೆ ಇದೆ. ಇವಳ ಸಂಗದಿಂದ ಜೀವರೂಪವಾದ ಪುರುಷನ ಐಶ್ವರ್ಯನಾಶವಾಗಿ ಹೋಗಿದೆ ಅಂದರೆ ತನ್ನ ಸ್ವರೂಪದಿಂದ ವಿಮುಖನಾದನು. ಇವಳ ಹಿಂದೆ-ಹಿಂದೆಯೇ ಕುಲಟೆ ಸ್ತ್ರೀಯ ಪತಿಯಂತೆ ಎಲ್ಲೆಲ್ಲಿ ಅಲೆಯುತ್ತಿರುವನೋ ತಿಳಿಯದು. ಇವಳ ಬೇರೆ-ಬೇರೆ ಗತಿಗಳನ್ನು, ತಂತ್ರಗಳನ್ನು ತಿಳಿಯದೆಯೇ ವಿವೇಕರಹಿತವಾದ ಕರ್ಮಗಳಿಂದ ಯಾವ ಸಿದ್ಧಿ ದೊರೆಯಬಲ್ಲದು? ॥15॥
(ಶ್ಲೋಕ-16)
ಮೂಲಮ್
ಸೃಷ್ಟ್ಯಪ್ಯಯಕರೀಂ ಮಾಯಾಂ ವೇಲಾಕೂಲಾಂತವೇಗಿತಾಮ್ ।
ಮತ್ತಸ್ಯ ತಾಮವಿಜ್ಞಸ್ಯ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
ಹಿಂದೆ-ಮುಂದೆ ಹರಿಯುತ್ತಿರುವ ನದಿಯೇ ಮಾಯೆಯಾಗಿದೆ. ಇದು ಸೃಷ್ಟಿ ಮತ್ತು ಪ್ರಳಯ ಎರಡನ್ನೂ ಮಾಡು ತ್ತದೆ. ಇದರಿಂದ ಪಾರಾಗಲು ಜನರು ತಪಸ್ಸು, ವಿದ್ಯೆ ಮುಂತಾದ ದಡಗಳನ್ನು ಆಶ್ರಯಿಸತೊಡಗಿದಾಗ, ಅವರನ್ನು ತಡೆಯಲು ಕ್ರೋಧ, ಅಹಂಕಾರ ಮುಂತಾದ ರೂಪಗಳಿಂದ ಅದು ಇನ್ನೂ ವೇಗವಾಗಿ ಹರಿಯತೊಡಗುತ್ತದೆ. ಆ ಮಾಯೆಯ ವೇಗದಿಂದ ವಿವಶನಾದ ಅಜ್ಞಾನಿಯಾದ ಜೀವಿಯು ಮಾಯಿಕ ಕರ್ಮಗಳಿಂದ ಏನು ಲಾಭಗಳಿಸ ಬಲ್ಲನು? ॥16॥
(ಶ್ಲೋಕ-17)
ಮೂಲಮ್
ಪಂಚವಿಂಶತಿತತ್ತ್ವಾನಾಂ ಪುರುಷೋದ್ಭುತದರ್ಪಣಮ್ ।
ಅಧ್ಯಾತ್ಮಮಬುಧಸ್ಯೇಹ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
ಈ ಶರೀರವು ಇಪ್ಪತ್ತೈದು ತತ್ತ್ವಗಳ ಒಂದು ಅದ್ಭುತಮನೆಯಾಗಿದೆ. ಪುರುಷನೇ ಅದರ ಆಶ್ಚರ್ಯಮಯ ಆಶ್ರಯನಾಗಿದ್ದಾನೆ. ಅವನೇ ಕಾರ್ಯ-ಕಾರಣಾತ್ಮಕ ಸಮಸ್ತ ಜಗತ್ತಿನ ಅಧಿಷ್ಠಾನನಾಗಿದ್ದಾನೆ. ಇದನ್ನು ಅರಿಯದೆ ನಿಜವಾದ ಸ್ವಾತಂತ್ರ್ಯವನ್ನು ಪಡೆಯದೆ ಮಿಥ್ಯಾ ಸ್ವತಂತ್ರತೆಯಿಂದ ಮಾಡಲಾಗುವ ಕರ್ಮಗಳು ವ್ಯರ್ಥವೇ ಆಗಿದೆ.॥17॥
(ಶ್ಲೋಕ-18)
ಮೂಲಮ್
ಐಶ್ವರಂ ಶಾಸಮುತ್ಸೃಜ್ಯ ಬಂಧಮೋಕ್ಷಾನುದರ್ಶನಮ್ ।
ವಿವಿಕ್ತಪದಮಜ್ಞಾಯ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
ಭಗವಂತನ ಸ್ವರೂಪವನ್ನು ಬೋಧಿಸುವ ಶಾಸ್ತ್ರವೇ ಹಂಸದಂತೆ ನೀರ-ಕ್ಷೀರ ವಿವೇಕವಾಗಿದೆ. ಅದು ಬಂಧ-ಮೋಕ್ಷ, ಚೇತನ-ಜಡ ಇವುಗಳನ್ನು ಬೇರೆ-ಬೇರೆಯಾಗಿಸಿ ತೋರಿಸುತ್ತದೆ. ಇಂತಹ ಅಧ್ಯಾತ್ಮಶಾಸ್ತ್ರ ಸ್ವರೂಪವಾದ ಹಂಸನ ಆಶ್ರಯವನ್ನು ಬಿಟ್ಟು, ಅದನ್ನು ಅರಿಯದೆ ಬಹಿರ್ಮುಖಗೊಳಿಸುವ ಕರ್ಮಗಳಿಂದ ಏನು ಲಾಭವಿದೆ? ॥18॥
(ಶ್ಲೋಕ-19)
ಮೂಲಮ್
ಕಾಲಚಕ್ರಂ ಭ್ರಮಿಸ್ತೀಕ್ಷ್ಣಂ ಸರ್ವಂ ನಿಷ್ಕರ್ಷಯಜ್ಜಗತ್ ।
ಸ್ವತಂತ್ರಮಬುಧಸ್ಯೇಹ ಕಿಮಸತ್ಕರ್ಮಭಿರ್ಭವೇತ್ ॥
ಅನುವಾದ
ಈ ಕಾಲವೇ ಒಂದು ಚಕ್ರವಾಗಿದೆ. ಇದು ನಿರಂತರ ತಿರುಗುತ್ತಾ ಇರುತ್ತದೆ. ಚೂರಿ ಮತ್ತು ವಜ್ರದಂತೆ ತೀಕ್ಷ್ಣವಾದ ಅಲಗುಗಳುಳ್ಳ ಈ ಚಕ್ರವು ಇಡೀ ಜಗತ್ತನ್ನು ತನ್ನ ಕಡೆಗೆ ಸೆಳೆಯುತ್ತಿದೆ. ಯಾರಿಂದಲೂ ತಡೆಯಲಾಗದ ಸ್ವತಂತ್ರವಾಗಿ ಸುತ್ತುತ್ತಿರುವ ಚಕ್ರವಿದು. ಇದನ್ನರಿಯದೆ ಕರ್ಮಗಳ ಫಲವನ್ನು ನಿತ್ಯವೆಂದು ತಿಳಿದ ಜನರು ಸಕಾಮ ಭಾವದಿಂದ ಅವನ್ನು ಅನುಷ್ಠಾನ ಮಾಡುತ್ತಾರೆ. ಅವರಿಗೆ ಆ ಅನಿತ್ಯ ಕರ್ಮಗಳಿಂದ ಏನು ಲಾಭವಾದೀತು? ॥19॥
(ಶ್ಲೋಕ-20)
ಮೂಲಮ್
ಶಾಸಸ್ಯ ಪಿತುರಾದೇಶಂ ಯೋ ನ ವೇದ ನಿವರ್ತಕಮ್ ।
ಕಥಂ ತದನುರೂಪಾಯ ಗುಣವಿಶ್ರಂಭ್ಯುಪಕ್ರಮೇತ್ ॥
ಅನುವಾದ
ಶಾಸ್ತ್ರವೇ ತಂದೆಯಾಗಿದೆ. ಏಕೆಂದರೆ ಎರಡನೆಯ ಜನ್ಮವು ಶಾಸ್ತ್ರದ ಮೂಲಕವೇ ಆಗುತ್ತದೆ ಮತ್ತು ಅದರ ಉಪದೇಶವು ಕರ್ಮಗಳಲ್ಲಿ ತೊಡಗಿಸುವುದಲ್ಲ, ಬದಲಿಗೆ ಅದರಿಂದ ನಿವೃತ್ತವಾಗಿಸುವುದಾಗಿದೆ. ಇದನ್ನು ತಿಳಿಯದವನು ಗುಣ ಮಯ ಶಬ್ದಾದಿ ವಿಷಯಗಳಲ್ಲಿ ವಿಶ್ವಾಸವಿರಿಸುತ್ತಾನೆ. ಇಂತಹವನು ಕರ್ಮಗಳಿಂದ ನಿವೃತ್ತಿ ಹೊಂದಬೇಕೆಂಬ ಆಜ್ಞೆಯನ್ನು ಹೇಗೆ ತಾನೇ ಪಾಲಿಸಬಲ್ಲನು? ॥20॥
(ಶ್ಲೋಕ-21)
ಮೂಲಮ್
ಇತಿ ವ್ಯವಸಿತಾ ರಾಜನ್ ಹರ್ಯಶ್ವಾ ಏಕಚೇತಸಃ ।
ಪ್ರಯಯುಸ್ತಂ ಪರಿಕ್ರಮ್ಯ ಪಂಥಾನಮನಿವರ್ತನಮ್ ॥
ಅನುವಾದ
ಪರೀಕ್ಷಿದ್ರಾಜನೇ! ಹರ್ಯಶ್ವರು ಒಮ್ಮತದಿಂದ ಹೀಗೆ ನಿಶ್ಚಯಿಸಿಕೊಂಡು, ನಾರದರಿಗೆ ಪ್ರದಕ್ಷಿಣೆ ಬಂದು, ಎಲ್ಲಿಗೆ ಪ್ರಯಾಣಮಾಡಿದರೆ ಮರಳಿ ಸಂಸಾರಕ್ಕೆ ಬರಬೇಕಾಗಿಲ್ಲವೋ, ಆ ಮೋಕ್ಷಮಾರ್ಗದ ಪಥಿಕರಾಗಿಬಿಟ್ಟರು. ॥21॥
(ಶ್ಲೋಕ-22)
ಮೂಲಮ್
ಸ್ವರಬ್ರಹ್ಮಣಿ ನಿರ್ಭಾತಹೃಷೀಕೇಶಪದಾಂಬುಜೇ ।
ಅಖಂಡಂ ಚಿತ್ತಮಾವೇಶ್ಯ ಲೋಕಾನನುಚರನ್ಮುನಿಃ ॥
ಅನುವಾದ
ಅನಂತರ ದೇವರ್ಷಿನಾರದರು ಸಂಗೀತಲಹರಿಯ ಸ್ವರ ಬ್ರಹ್ಮದಲ್ಲಿ ಅಭಿವ್ಯಕ್ತವಾಗುವ ಭಗವಾನ್ ಶ್ರೀಕೃಷ್ಣನ ಚರಣ ಕಮಲಗಳಲ್ಲಿ ತಮ್ಮ ಚಿತ್ತವನ್ನು ಅಖಂಡರೂಪದಿಂದ ನೆಲೆಗೊಳಿಸಿ ಲೋಕ-ಲೋಕಾಂತರಗಳಲ್ಲಿ ಸಂಚರಿಸತೊಡಗಿದರು.॥22॥
(ಶ್ಲೋಕ-23)
ಮೂಲಮ್
ನಾಶಂ ನಿಶಮ್ಯ ಪುತ್ರಾಣಾಂ ನಾರದಾಚ್ಛೀಲಶಾಲಿನಾಮ್ ।
ಅನ್ವತಪ್ಯತ ಕಃ ಶೋಚನ್ ಸುಪ್ರಜಸ್ತ್ವಂ ಶುಚಾಂ ಪದಮ್ ॥
ಅನುವಾದ
ಮಹಾರಾಜನೇ! ತನ್ನ ಶೀಲಸಂಪನ್ನರಾದ ಪುತ್ರರು ನಾರದರ ಉಪದೇಶದಿಂದ ಕರ್ತವ್ಯಚ್ಯುತರಾಗಿದ್ದಾರೆ ಎಂಬುದನ್ನು ದಕ್ಷಪ್ರಜಾಪತಿಯು ತಿಳಿದಾಗ, ಅವನಿಗೆ ಶೋಕದಿಂದ ವ್ಯಾಕುಲನಾಗಿ ಭಾರೀ ಪಶ್ಚಾತ್ತಾಪವುಂಟಾಯಿತು. ಒಳ್ಳೆಯ ಸಂತಾನವನ್ನು ಪಡೆಯುವುದೂ ಒಂದು ದೃಷ್ಟಿಯಿಂದ ದುಃಖಕ್ಕೆ ಕಾರಣವಾಗಿದೆ.॥23॥
(ಶ್ಲೋಕ-24)
ಮೂಲಮ್
ಸ ಭೂಯಃ ಪಾಂಚಜನ್ಯಾಯಾಮಜೇನ ಪರಿಸಾಂತ್ವಿತಃ ।
ಪುತ್ರಾನಜನಯದ್ದಕ್ಷಃ ಶಬಲಾಶ್ವಾನ್ಸಹಸ್ರಶಃ ॥
ಅನುವಾದ
ಆಗ ಬ್ರಹ್ಮದೇವರು ದಕ್ಷನನ್ನು ಸಮಾಧಾನ ಪಡಿಸಿದಾಗ ಅವನು ಪಂಚ ಜನೀಪುತ್ರಿಯಾದ ಅಸಿಕ್ನಿಯಿಂದ ಮತ್ತೆ ಸಾವಿರಾರು ಪುತ್ರರನ್ನು ಪಡೆದನು. ಅವರ ಹೆಸರು ಶಬಲಾಶ್ವರೆಂದಿತ್ತು. ॥24॥
(ಶ್ಲೋಕ-25)
ಮೂಲಮ್
ತೇಪಿ ಪಿತ್ರಾ ಸಮಾದಿಷ್ಟಾಃ ಪ್ರಜಾಸರ್ಗೇ ಧೃತವ್ರತಾಃ ।
ನಾರಾಯಣಸರೋ ಜಗ್ಮುರ್ಯತ್ರ ಸಿದ್ಧಾಃ ಸ್ವಪೂರ್ವಜಾಃ ॥
ಅನುವಾದ
ಅವರೂ ಕೂಡ ತಮ್ಮ ತಂದೆಯಾದ ದಕ್ಷಪ್ರಜಾಪತಿಯ ಆಜ್ಞೆಯನ್ನು ಪಡೆದು ಪ್ರಜಾಸೃಷ್ಟಿಯ ಉದ್ದೇಶದಿಂದ ತಪಸ್ಸಿಗಾಗಿ ಹಿರಿಯಣ್ಣಂದಿರು ಸಿದ್ಧಿಯನ್ನು ಪಡೆದ ಅದೇ ನಾರಾಯಣ ಸರೋವರಕ್ಕೆ ಹೋದರು. ॥25॥
(ಶ್ಲೋಕ-26)
ಮೂಲಮ್
ತದುಪಸ್ಪರ್ಶನಾದೇವ ವಿನಿರ್ಧೂತಮಲಾಶಯಾಃ ।
ಜಪಂತೋ ಬ್ರಹ್ಮ ಪರಮಂ ತೇಪುಸ್ತೇತ್ರ ಮಹತ್ತಪಃ ॥
ಅನುವಾದ
ಶಬಲಾಶ್ವರೂ ಅಲ್ಲಿಗೆ ಹೋಗಿ ಆ ಸರೋವರದಲ್ಲಿ ಸ್ನಾನ ಮಾಡಿದರು. ಸ್ನಾನಮಾತ್ರದಿಂದಲೇ ಅವರ ಅಂತಃಕರಣದ ಎಲ್ಲ ದೋಷಗಳು ತೊಳೆದು ಹೋದುವು. ಈಗ ಅವರು ಪರಬ್ರಹ್ಮ ಸ್ವರೂಪವಾದ ಪ್ರಣವವನ್ನು ಜಪಿಸುತ್ತಾ ಮಹಾ ತಪಸ್ಸಿಗೆ ತೊಡಗಿದರು. ॥26॥
(ಶ್ಲೋಕ-27)
ಮೂಲಮ್
ಅಬ್ಭಕ್ಷಾಃ ಕತಿಚಿನ್ಮಾಸಾನ್ಕತಿಚಿದ್ವಾಯುಭೋಜನಾಃ ।
ಆರಾಧಯನ್ಮಂತ್ರಮಿಮಮಭ್ಯಸ್ಯಂತ ಇಡಸ್ಪತಿಮ್ ॥
(ಶ್ಲೋಕ-28)
ಮೂಲಮ್
ಓಂ ನಮೋ ನಾರಾಯಣಾಯ ಪುರುಷಾಯ ಮಹಾತ್ಮನೇ ।
ವಿಶುದ್ಧಸತ್ತ್ವಧಿಷ್ಣ್ಯಾಯ ಮಹಾಹಂಸಾಯ ಧೀಮಹಿ ॥
ಅನುವಾದ
ಕೆಲವು ತಿಂಗಳವರೆಗೆ ಕೇವಲ ನೀರನ್ನು ಕುಡಿಯುತ್ತಾ, ಮತ್ತೆ ಕೆಲವು ತಿಂಗಳವರೆಗೆ ಕೇವಲ ಗಾಳಿಯನ್ನೇ ಸೇವಿಸುತ್ತಾ ಅವರು ‘‘ವಿಶುದ್ಧವಾದ ಚಿತ್ತದಲ್ಲಿ ನಿವಾಸ ಮಾಡುವವನೂ, ಸರ್ವಾಂತರ್ಯಾಮಿಯೂ, ಸರ್ವವ್ಯಾಪಕನೂ, ಪರಮ ಹಂಸಸ್ವರೂಪಿಯೂ, ಓಂಕಾರಸ್ವರೂಪನೂ ಆಗಿರುವ ಪರಮ ಪುರುಷನಾದ ನಾರಾಯಣನನ್ನು ನಾವು ನಮಸ್ಕಾರ ಸಹಿತವಾಗಿ ಧ್ಯಾನಮಾಡುವೆವು’’ ಎಂಬ ಮಂತ್ರವನ್ನು ಜಪಿಸುತ್ತಾ ಮಂತ್ರಾಧಿಪತಿ ಭಗವಂತನನ್ನು ಆರಾಧಿಸಿದರು. ॥27-28॥
(ಶ್ಲೋಕ-29)
ಮೂಲಮ್
ಇತಿ ತಾನಪಿ ರಾಜೇಂದ್ರ ಪ್ರತಿಸರ್ಗಧಿಯೋ ಮುನಿಃ ।
ಉಪೇತ್ಯ ನಾರದಃ ಪ್ರಾಹ ವಾಚಃಕೂಟಾನಿ ಪೂರ್ವವತ್ ॥
ಅನುವಾದ
ಪರೀಕ್ಷಿತನೇ! ಹೀಗೆ ದಕ್ಷಪುತ್ರರಾದ ಶಬಲಾಶ್ವರು ತಪಸ್ಸಿನಲ್ಲಿ ಮಗ್ನರಾಗಿದ್ದಾಗ ದೇವರ್ಷಿನಾರದರು ಅವರ ಬಳಿಗೂ ಬಂದು ಹಿಂದಿನಂತೆಯೇ ಒಗಟಿನಂತಿರುವ ಮಾತುಗಳನ್ನು ಹೇಳಿದರು. ॥29॥
(ಶ್ಲೋಕ-30)
ಮೂಲಮ್
ದಾಕ್ಷಾಯಣಾಃ ಸಂಶೃಣುತ ಗದತೋ ನಿಗಮಂ ಮಮ ।
ಅನ್ವಿಚ್ಛತಾನುಪದವೀಂ ಭ್ರಾತೃಣಾಂ ಭ್ರಾತೃವತ್ಸಲಾಃ ॥
ಅನುವಾದ
ಎಲೈ ದಕ್ಷಪ್ರಜಾಪತಿಯ ಪುತ್ರರೇ! ನನ್ನ ಉಪದೇಶವನ್ನು ಕೇಳಿರಿ. ನಿಮಗೆ ನಿಮ್ಮ ಅಣ್ಣಂದಿರ ಮೇಲೆ ತುಂಬಾ ಪ್ರೀತಿ ಇದೆ. ಆದುದರಿಂದ ಅವರ ಮಾರ್ಗವನ್ನೇ ಅನುಸರಿಸಿರಿ. ॥30॥
(ಶ್ಲೋಕ-31)
ಮೂಲಮ್
ಭ್ರಾತೃಣಾಂ ಪ್ರಾಯಣಂ ಭ್ರಾತಾ ಯೋನುತಿಷ್ಠತಿ ಧರ್ಮವಿತ್ ।
ಸ ಪುಣ್ಯಬಂಧುಃ ಪುರುಷೋ ಮರುದ್ಭಿಃ ಸಹ ಮೋದತೇ ॥
ಅನುವಾದ
ತಮ್ಮ ಅಣ್ಣಂದಿರ ಶ್ರೇಷ್ಠಮಾರ್ಗವನ್ನು ಅನುಸರಿಸುವವರೇ ನಿಜವಾದ ಒಡ ಹುಟ್ಟಿದವರು. ಅಂತಹ ಪುಣ್ಯಶಾಲಿಗಳು ಪರಲೋಕದಲ್ಲಿ ಮರುದ್ಗಣರೊಂದಿಗೆ ಆನಂದವನ್ನು ಅನುಭವಿಸುವರು. ॥31॥
(ಶ್ಲೋಕ-32)
ಮೂಲಮ್
ಏತಾವದುಕ್ತ್ವಾ ಪ್ರಯಯೌ ನಾರದೋಮೋಘದರ್ಶನಃ ।
ತೇಪಿ ಚಾನ್ವಗಮನ್ಮಾರ್ಗಂ ಭ್ರಾತೃಣಾಮೇವ ಮಾರಿಷ ॥
ಅನುವಾದ
ಮಹಾರಾಜನೇ! ಶಬಲಾಶ್ವರಿಗೆ ಹೀಗೆ ಉಪದೇಶಮಾಡಿ ನಾರದ ಮಹರ್ಷಿಗಳು ಅಲ್ಲಿಂದ ಹೊರಟು ಹೋದರು. ಅವರೂ ಕೂಡ ತಮ್ಮ ಅಣ್ಣಂದಿರ ದಾರಿಯನ್ನೇ ಹಿಡಿದರು. ಏಕೆಂದರೆ, ನಾರದರ ದರ್ಶನವು ಎಂದಿಗೂ ವ್ಯರ್ಥವಾಗುವುದಿಲ್ಲ. ॥32॥
(ಶ್ಲೋಕ-33)
ಮೂಲಮ್
ಸಧ್ರೀಚೀನಂ ಪ್ರತೀಚೀನಂ ಪರಸ್ಯಾನುಪಥಂ ಗತಾಃ ।
ನಾದ್ಯಾಪಿ ತೇ ನಿವರ್ತಂತೇ ಪಶ್ಚಿಮಾ ಯಾಮಿನೀರಿವ ॥
ಅನುವಾದ
ಅವರು ಅಂತರ್ಮುಖೀ ವೃತ್ತಿಯಿಂದ ದೊರೆಯಬಹುದಾದ ಅತ್ಯಂತ ಸುಂದರ ಹಾಗೂ ಭಗವತ್ಪ್ರಾಪ್ತಿಗೆ ಅನುಕೂಲವಾದ ಆ ಮಾರ್ಗದ ಪಥಿಕರಾದರು. ಅಂತಹ ಪಥದಲ್ಲಿ ಸಾಗಿದವರು ಕಳೆದುಹೋದ ರಾತ್ರಿಯಂತೆ ಆ ಮಾರ್ಗದಿಂದ ಇಂದಿನವರೆಗೆ ಹಿಂದಿರುಗಲಿಲ್ಲ. ಮುಂದೆಯೂ ಮರಳಲಾರರು.॥33॥
(ಶ್ಲೋಕ-34)
ಮೂಲಮ್
ಏತಸ್ಮಿನ್ಕಾಲ ಉತ್ಪಾತಾನ್ ಬಹೂನ್ಪಶ್ಯನ್ ಪ್ರಜಾಪತಿಃ ।
ಪೂರ್ವವನ್ನಾರದಕೃತಂ ಪುತ್ರನಾಶಮುಪಾಶೃಣೋತ್ ॥
ಅನುವಾದ
ಅದೇ ಸಮಯದಲ್ಲಿ ಅನೇಕ ಅಪಶಕುನಗಳಾಗುತ್ತಿರುವುದನ್ನು ದಕ್ಷಪ್ರಜಾಪತಿಯು ನೋಡಿದನು. ಪುತ್ರರ ಕುರಿತು ಅವನ ಚಿತ್ತದಲ್ಲಿ ಅನಿಷ್ಟದ ಆಶಂಕೆ ಮೂಡಿತು. ಅಷ್ಟರಲ್ಲೇ ಅವನಿಗೆ ಮೊದಲಿನಂತೆ ಈಗಲೂ ನಾರದರು ಬಂದು ತನ್ನ ಮಕ್ಕಳನ್ನು ನಿವೃತ್ತಿಮಾರ್ಗಕ್ಕೆ ಹಚ್ಚಿದ ಸಂಗತಿ ತಿಳಿಯಿತು. ॥34॥
(ಶ್ಲೋಕ-35)
ಮೂಲಮ್
ಚುಕ್ರೋಧ ನಾರದಾಯಾಸೌ ಪುತ್ರಶೋಕವಿಮೂರ್ಚ್ಛಿತಃ ।
ದೇವರ್ಷಿಮುಪಲಭ್ಯಾಹ ರೋಷಾದ್ವಿಸ್ಫುರಿತಾಧರಃ ॥
ಅನುವಾದ
ತನ್ನ ಪುತ್ರರು ಕರ್ತವ್ಯಚ್ಯುತರಾದುದನ್ನು ಕಂಡು ಅವನಿಗೆ ಅತ್ಯಂತ ದುಃಖವಾಯಿತು ಹಾಗೂ ನಾರದರ ಕುರಿತು ವಿಪರೀತವಾದ ಸಿಟ್ಟುಬಂತು. ಒಮ್ಮೆ ನಾರದರು ಭೇಟಿಯಾದಾಗ ಕೋಪದಿಂದ ತುಟಿಗಳು ಅದುರುತ್ತಿರಲು ದಕ್ಷನು ಆವೇಶಭರಿತನಾಗಿ ಅವರಿಗೆ ಹೀಗೆಂದನು ॥35॥
(ಶ್ಲೋಕ-36)
ಮೂಲಮ್ (ವಾಚನಮ್)
ದಕ್ಷ ಉವಾಚ
ಮೂಲಮ್
ಅಹೋ ಅಸಾಧೋ ಸಾಧೂನಾಂ ಸಾಧುಲಿಂಗೇನ ನಸ್ತ್ವಯಾ ।
ಅಸಾಧ್ವಕಾರ್ಯರ್ಭಕಾಣಾಂ ಭಿಕ್ಷೋರ್ಮಾರ್ಗಃ ಪ್ರದರ್ಶಿತಃ ॥
ಅನುವಾದ
ದಕ್ಷಪ್ರಜಾಪತಿಯು ಹೇಳಿದನು — ಎಲವೋ ದುಷ್ಟನೇ! ನೀನು ಸುಳ್ಳು-ಸುಳ್ಳೇ ಸಾಧುಗಳ ವೇಷವನ್ನು ಧರಿಸಿರುವೆ. ಸರಳ ಹೃದಯರಾದ ನನ್ನ ಮಕ್ಕಳಿಗೆ ಭಿಕ್ಷುಕರ ದಾರಿಯನ್ನು ತೋರಿ ನನಗೆ ಭಾರೀ ಅಪಕಾರವನ್ನೇ ಮಾಡಿರುವೆ. ॥36॥
(ಶ್ಲೋಕ-37)
ಮೂಲಮ್
ಋಣೈಸಿಭಿರಮುಕ್ತಾನಾಮಮೀಮಾಂಸಿತಕರ್ಮಣಾಮ್ ।
ವಿದ್ಯಾತಃ ಶ್ರೇಯಸಃ ಪಾಪ ಲೋಕಯೋರುಭಯೋಃ ಕೃತಃ ॥
ಅನುವಾದ
ಅವರು ಇನ್ನೂ ಬ್ರಹ್ಮಚರ್ಯದಿಂದ ಋಷಿಋಣವನ್ನೂ, ಯಜ್ಞಗಳಿಂದ ದೇವಋಣವನ್ನೂ, ಪುತ್ರೋತ್ಪತ್ತಿಯಿಂದ ಪಿತೃಋಣವನ್ನೂ ತೀರಿಸಬೇಕಾಗಿತ್ತು. ಅವರಿಗೆ ಇನ್ನೂ ಕರ್ಮಫಲದ ನಶ್ವರತೆಯ ಸಂಬಂಧದಲ್ಲಿ ಯಾವ ವಿಚಾರವೂ ಇರಲಿಲ್ಲ. ಆದರೆ ಪಾಪಿಯಾದ ನೀನು ಅವರ ಎರಡೂ ಲೋಕಗಳ ಸುಖವನ್ನು ನಾಶಪಡಿಸಿ ಬಿಟ್ಟೆ. ॥37॥
(ಶ್ಲೋಕ-38)
ಮೂಲಮ್
ಏವಂ ತ್ವಂ ನಿರನುಕ್ರೋಶೋ ಬಾಲಾನಾಂ ಮತಿಭಿದ್ಧರೇಃ ।
ಪಾರ್ಷದಮಧ್ಯೇ ಚರಸಿ ಯಶೋಹಾ ನಿರಪತ್ರಪಃ ॥
ಅನುವಾದ
ನಿಜವಾಗಿ ನಿನ್ನ ಹೃದಯದಲ್ಲಿ ದಯೆ ಎಂಬುದೇ ಇಲ್ಲ. ನೀನು ಹೀಗೆ ಮಕ್ಕಳ ಬುದ್ಧಿಯನ್ನು ಕೆಡಿಸುತ್ತಾ ಅಲೆಯುತ್ತಿರುವೆ. ನೀನು ಭಗವಂತನ ಪಾರ್ಷದರೊಂದಿಗೆ ಇದ್ದು ಅವರ ಕೀರ್ತಿಗೆ ಕಲಂಕವನ್ನು ಹಚ್ಚಿದೆ. ನೀನು ನಿರ್ಲಜ್ಜನೇ ಆಗಿರುವೆ. ॥38॥
(ಶ್ಲೋಕ-39)
ಮೂಲಮ್
ನನು ಭಾಗವತಾ ನಿತ್ಯಂ ಭೂತಾನುಗ್ರಹಕಾತರಾಃ ।
ಋತೇ ತ್ವಾಂ ಸೌಹೃದಘ್ನಂ ವೈ ವೈರಂಕರಮವೈರಿಣಾಮ್ ॥
ಅನುವಾದ
ಭಗವಂತನ ಪಾರ್ಷದರು ಸದಾಕಾಲ ದುಃಖಿತರಾದ ಪ್ರಾಣಿಗಳ ಮೇಲೆ ದಯೆ ಮಾಡುವುದರಲ್ಲೇ ಆಸಕ್ತರಾಗಿರುತ್ತಾರೆ. ಆದರೆ ನೀನು ಪ್ರೇಮಭಾವವನ್ನು ನಾಶ ಮಾಡುವವನಾಗಿರುವೆ. ಯಾರೊಂದಿಗೂ ವೈರವನ್ನೇ ಮಾಡದಿರುವವರಲ್ಲಿಯೂ ನೀನು ವೈರವನ್ನು ಸಾಧಿಸುತ್ತಿರುವೆ. ॥39॥
(ಶ್ಲೋಕ-40)
ಮೂಲಮ್
ನೇತ್ಥಂ ಪುಂಸಾಂ ವಿರಾಗಃ ಸ್ಯಾತ್ ತ್ವಯಾ ಕೇವಲಿನಾ ಮೃಷಾ ।
ಮನ್ಯಸೇ ಯದ್ಯುಪಶಮಂ ಸ್ನೇಹಪಾಶನಿಕೃಂತನಮ್ ॥
ಅನುವಾದ
ವೈರಾಗ್ಯದಿಂದಲೇ ಸ್ನೇಹಪಾಶ-ವಿಷಯಾಸಕ್ತಿಯ ಬಂಧನ ಕಡಿದುಹೋಗುತ್ತದೆ ಎಂದು ನೀನು ತಿಳಿದಿದ್ದರೆ ನಿನ್ನ ಈ ವಿಚಾರ ಸರಿಯಾದುದಲ್ಲ. ಏಕೆಂದರೆ, ಸುಳ್ಳು-ಸುಳ್ಳೇ ವೈರಾಗ್ಯವಿರುವ ನಿನ್ನಂತಹವರಿಂದ ಯಾರಿಗೂ ವೈರಾಗ್ಯ ಉಂಟಾಗಲಾರದು.॥40॥
(ಶ್ಲೋಕ-41)
ಮೂಲಮ್
ನಾನುಭೂಯ ನ ಜಾನಾತಿ ಪುಮಾನ್ ವಿಷಯತೀಕ್ಷ್ಣ ತಾಮ್ ।
ನಿರ್ವಿದ್ಯೇತ ಸ್ವಯಂ ತಸ್ಮಾನ್ನ ತಥಾ ಭಿನ್ನಧೀಃ ಪರೈಃ ॥
ಅನುವಾದ
ನಾರದಾ! ವಿಷಯಗಳನ್ನು ಭೋಗಿಸದೇ ಮನುಷ್ಯನು ಅವುಗಳ ತೀಕ್ಷ್ಣತೆಯು ಏನೆಂಬುದು ತಿಳಿಯಲಾರನು. ಅದಕ್ಕಾಗಿ ಅವುಗಳ ದುಃಖ ಸ್ವರೂಪದ ಅನುಭವ ಉಂಟಾದಮೇಲೆ ಸ್ವತಃ ಉಂಟಾಗುವಂತಹ ವೈರಾಗ್ಯವು ಬೇರೆಯವರ ಪ್ರಚೋದನೆಯಿಂದ ಉಂಟಾಗುವುದಿಲ್ಲ. ॥41॥
(ಶ್ಲೋಕ-42)
ಮೂಲಮ್
ಯನ್ನಸ್ತ್ವಂ ಕರ್ಮಸಂಧಾನಾಂ ಸಾಧೂನಾಂಗೃಹಮೇಧಿನಾಮ್ ।
ಕೃತವಾನಸಿ ದುರ್ಮರ್ಷಂ ವಿಪ್ರಿಯಂ ತವ ಮರ್ಷಿತಮ್ ॥
ಅನುವಾದ
ನಾವು ಧರ್ಮದ ಮರ್ಯಾದೆಯನ್ನು ಪಾಲಿಸುತ್ತಿರುವ ಸದ್ ಗೃಹಸ್ಥರು. ಹಿಂದೊಮ್ಮೆಯೂ ನೀನು ನಮಗೆ ಭಯಂಕರ ಅಪಕಾರವನ್ನು ಮಾಡಿದ್ದೆ. ಆಗ ನಾವು ಅದನ್ನು ಸಹಿಸಿಕೊಂಡೆವು. ॥42॥
(ಶ್ಲೋಕ-43)
ಮೂಲಮ್
ತಂತುಕೃಂತನ ಯನ್ನಸ್ತ್ವಮಭದ್ರಮಚರಃ ಪುನಃ ।
ತಸ್ಮಾಲ್ಲೋಕೇಷು ತೇ ಮೂಢ ನ ಭವೇದ್ಭ್ರಮತಃ ಪದಮ್ ॥
ಅನುವಾದ
ನೀನಾದರೋ ನಮ್ಮ ವಂಶಪರಂಪರೆಯನ್ನೇ ಕಡಿದುಹಾಕಲೆಂದೇ ದೀಕ್ಷೆಯನ್ನು ತೊಟ್ಟಂತಿದೆ. ನೀನು ಪುನಃ ನಮ್ಮೊಡನೆ ಅದೇ ದುಷ್ಟತೆಯ ವ್ಯವಹಾರ ಮಾಡಿರುವೆ. ಆದುದರಿಂದ ‘ಎಲೈ ಮೂಢನೇ! ತೊಲಗು ಇಲ್ಲಿಂದ. ಲೋಕ-ಲೋಕಾಂತರಗಳಲ್ಲಿ ಅಲೆಯುತ್ತಾ ಇರು. ಎಲ್ಲಿಯೂ ನಿನಗೆ ನೆಲೆಯಾಗಿ ನಿಲ್ಲಲು ಠಾವೇ ಇಲ್ಲದಂತಾಗಲೀ.’ ॥43॥
(ಶ್ಲೋಕ-44)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಪ್ರತಿಜಗ್ರಾಹ ತದ್ಬಾಢಂ ನಾರದಃ ಸಾಧುಸಮ್ಮತಃ ।
ಏತಾವಾನ್ ಸಾಧುವಾದೋ ಹಿ ತಿತಿಕ್ಷೇತೇಶ್ವರಃ ಸ್ವಯಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಸಾಧುಶಿರೋಮಣಿಗಳಾದ ದೇವಋಷಿನಾರದರು ‘ಹಾಗೆಯೇ ಆಗಲಿ’ ಎಂದು ಹೇಳಿ ದಕ್ಷನ ಶಾಪವನ್ನು ಸ್ವೀಕರಿಸಿದರು. ಪ್ರತೀಕಾರ ಸಾಮರ್ಥ್ಯವಿದ್ದರೂ ಬೇರೆಯವರು ಮಾಡಿದ ಅಪಕಾರವನ್ನು ಸಹಿಸುವುದೇ ಪ್ರಪಂಚದಲ್ಲಿ ನಿಜವಾದ ಸಾಧುತನವಾಗಿದೆ. ಅವರೇ ನಿಜವಾದ ಸಂತರು. ॥44॥
ಅನುವಾದ (ಸಮಾಪ್ತಿಃ)
ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ನಾರದಶಾಪೋ ನಾಮ ಪಂಚಮೋಽಧ್ಯಾಯಃ ॥5॥