೦೪

[ನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ದಕ್ಷನಿಂದ ಭಗವಂತನ ಸ್ತುತಿ ಮತ್ತು ಭಗವಂತನ ಪ್ರಾದುರ್ಭಾವ

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ದೇವಾಸುರನೃಣಾಂ ಸರ್ಗೋ ನಾಗಾನಾಂ ಮೃಗಪಕ್ಷಿಣಾಮ್ ।
ಸಾಮಾಸಿಕಸ್ತ್ವಯಾ ಪ್ರೋಕ್ತೋ ಯಸ್ತು ಸ್ವಾಯಂಭುವೇಂತರೇ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹಾತ್ಮರೇ! ಸ್ವಾಯಂಭುವ ಮನ್ವಂತರದಲ್ಲಿ ದೇವತೆಗಳು, ಅಸುರರು, ಮನುಷ್ಯರು, ಸರ್ಪಗಳು, ಪಶು-ಪಕ್ಷಿ ಮುಂತಾದವುಗಳ ಸೃಷ್ಟಿ ಹೇಗಾಯಿತೆಂಬುದನ್ನು ನೀವು (ಮೂರನೇ ಸ್ಕಂಧದಲ್ಲಿ) ಹಿಂದೆ ಸಂಕ್ಷೇಪವಾಗಿ ವರ್ಣಿಸಿದಿರಿ ॥1॥

(ಶ್ಲೋಕ-2)

ಮೂಲಮ್

ತಸ್ಯೈವ ವ್ಯಾಸಮಿಚ್ಛಾಮಿ ಜ್ಞಾತುಂ ತೇ ಭಗವನ್ಯಥಾ ।
ಅನುಸರ್ಗಂ ಯಯಾ ಶಕ್ತ್ಯಾ ಸಸರ್ಜ ಭಗವಾನ್ ಪರಃ ॥

ಅನುವಾದ

ಈಗ ನಾನು ಅದನ್ನು ವಿಸ್ತಾರವಾಗಿ ತಿಳಿಯಲು ಬಯಸುತ್ತಿದ್ದೇನೆ. ಪ್ರಕೃತಿಯೇ ಮುಂತಾದ ಕಾರಣಗಳಿಗೆ ಪರಮ ಕಾರಣನಾದ ಭಗವಂತನು ತನ್ನ ಯಾವ ಶಕ್ತಿಯಿಂದ, ಯಾವ ರೀತಿಯಲ್ಲಿ ಅನಂತರದ ಸೃಷ್ಟಿಯನ್ನು ಮಾಡಿದನು? ಎಂಬುದನ್ನು ತಿಳಿಯಲೂ ಇಚ್ಛಿಸುತ್ತೇನೆ. ॥2॥

(ಶ್ಲೋಕ-3)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತಿ ಸಂಪ್ರಶ್ನಮಾಕರ್ಣ್ಯ ರಾಜರ್ಷೇರ್ಬಾದರಾಯಣಿಃ ।
ಪ್ರತಿನಂದ್ಯ ಮಹಾಯೋಗೀ ಜಗಾದ ಮುನಿಸತ್ತಮಾಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳಿರಾ! ಪರಮಯೋಗಿಗಳಾದ ವ್ಯಾಸಪುತ್ರ ಶ್ರೀಶುಕಮಹಾಮುನಿಗಳು ರಾಜರ್ಷಿ ಪರೀಕ್ಷಿತನ ಈ ಪ್ರಶ್ನೆಯನ್ನು ಅಭಿನಂದಿಸುತ್ತಾ ಉತ್ತರವಾಗಿ ಹೀಗೆ ಹೇಳಲು ಪಕ್ರಮಿಸಿದರು.॥3॥

(ಶ್ಲೋಕ-4)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಯದಾ ಪ್ರಚೇತಸಃ ಪುತ್ರಾ ದಶ ಪ್ರಾಚೀನಬರ್ಹಿಷಃ ।
ಅಂತಃಸಮುದ್ರಾದುನ್ಮಗ್ನಾ ದದೃಶುರ್ಗಾಂ ದ್ರುಮೈರ್ವೃತಾಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜೇಂದ್ರನೇ! ಪ್ರಾಚೀನಬರ್ಹಿ ಮಹಾರಾಜನ ಹತ್ತು ಮಂದಿ ಪುತ್ರರಾದ ಪ್ರಚೇತಸರು ಸಮುದ್ರದಿಂದ ಹೊರಕ್ಕೆ ಬಂದಾಗ ಇಡೀ ಪೃಥ್ವಿಯನ್ನು ವೃಕ್ಷಗಳು ಆವರಿಸಿಕೊಂಡಿರುವುದನ್ನು ಕಂಡರು.॥4॥

(ಶ್ಲೋಕ-5)

ಮೂಲಮ್

ದ್ರುಮೇಭ್ಯಃ ಕ್ರುಧ್ಯಮಾನಾಸ್ತೇ ತಪೋದೀಪಿತಮನ್ಯವಃ ।
ಮುಖತೋ ವಾಯುಮಗ್ನಿಂ ಚ ಸಸೃಜುಸ್ತದ್ದಿಧಕ್ಷಯಾ ॥

ಅನುವಾದ

ಅವರಿಗೆ ಆ ವೃಕ್ಷಗಳ ಮೇಲೆ ವಿಪರೀತವಾದ ಕೋಪ ಬಂತು. ಅವರ ತಪೋಬಲವು ಆ ಕ್ರೋಧಾಗ್ನಿಯಲ್ಲಿ ತುಪ್ಪ ಎರೆದಂತೆ ಅದನ್ನು ಭುಗಿಲೆಬ್ಬಿಸಿತು. ಒಡನೆಯೇ ಅವರು ಆ ವೃಕ್ಷಗಳನ್ನು ಸುಟ್ಟುಹಾಕುವುದಕ್ಕಾಗಿ ತಮ್ಮ ಬಾಯಿಂದ ಬೆಂಕಿಯನ್ನೂ, ಗಾಳಿಯನ್ನೂ ಸೃಷ್ಟಿಸಿದರು.॥5॥

(ಶ್ಲೋಕ-6)

ಮೂಲಮ್

ತಾಭ್ಯಾಂ ನಿರ್ದಹ್ಯಮಾನಾಂಸ್ತಾನುಪಲಭ್ಯ ಕುರೂದ್ವಹ ।
ರಾಜೋವಾಚ ಮಹಾನ್ ಸೋಮೋ ಮನ್ಯುಂ ಪ್ರಶಮಯನ್ನಿವ ॥

ಅನುವಾದ

ಪರೀಕ್ಷಿತನೇ! ಪ್ರಚೇತಸರು ಬಿಟ್ಟ ಗಾಳಿ ಮತ್ತು ಬೆಂಕಿಯಿಂದ ಆ ವೃಕ್ಷಗಳು ಸುಡತೊಡಗಿದವು. ಆಗ ವೃಕ್ಷಗಳ ರಾಜನಾದ ಚಂದ್ರನು ಅವರ ಕ್ರೋಧವನ್ನು ಶಾಂತಗೊಳಿಸಲಿಕ್ಕಾಗಿ ಇಂತೆಂದನು॥6॥

(ಶ್ಲೋಕ-7)

ಮೂಲಮ್

ಮಾ ದ್ರುಮೇಭ್ಯೋ ಮಹಾಭಾಗಾ
ದೀನೇಭ್ಯೋ ದ್ರೋಗ್ಧುಮರ್ಹಥ ।
ವಿವರ್ಧಯಿಷವೋ ಯೂಯಂ
ಪ್ರಜಾನಾಂಪತಯಃ ಸ್ಮೃತಾಃ ॥

ಅನುವಾದ

ಎಲೈ ಭಾಗ್ಯಶಾಲಿಗಳಾದ ಪ್ರಚೇತಸರೇ! ಈ ವೃಕ್ಷಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವವು. ನೀವುಗಳು ಇವುಗಳೊಂದಿಗೆ ದ್ರೋಹ ಮಾಡಬೇಡಿರಿ. ಏಕೆಂದರೆ, ನೀವಾದರೋ ಪ್ರಜೆಯ ವೃದ್ಧಿಯನ್ನು ಮಾಡಲು ಬಯಸುತ್ತಿರುವಿರಿ. ನೀವು ಪ್ರಜಾಪತಿಗಳಿರುವುದನ್ನು ಎಲ್ಲರೂ ಬಲ್ಲರು. ॥7॥

(ಶ್ಲೋಕ-8)

ಮೂಲಮ್

ಅಹೋ ಪ್ರಜಾಪತಿಪತಿರ್ಭಗವಾನ್ ಹರಿರವ್ಯಯಃ ।
ವನಸ್ಪತೀನೋಷಧೀಶ್ಚ ಸಸರ್ಜೋರ್ಜಮಿಷಂ ವಿಭುಃ ॥

ಅನುವಾದ

ಮಹಾತ್ಮರಾದ ಪ್ರಚೇತಸರೇ! ಪ್ರಜಾಪತಿಗಳ ಅಧಿಪತಿಯಾದ ಭಗವಾನ್ ಶ್ರೀಹರಿಯು ಸಮಸ್ತ ವನಸ್ಪತಿಗಳನ್ನು ಮತ್ತು ಔಷಧಿಗಳನ್ನು ಪ್ರಜೆಗಳ ಹಿತಕ್ಕಾಗಿ, ಅವರ ಆಹಾರಕ್ಕಾಗಿ ಸೃಷ್ಟಿಸಿರುವನು. ॥8॥

(ಶ್ಲೋಕ-9)

ಮೂಲಮ್

ಅನ್ನಂ ಚರಾಣಾಮಚರಾ ಹ್ಯಪದಃ ಪಾದಚಾರಿಣಾಮ್ ।
ಅಹಸ್ತಾ ಹಸ್ತಯುಕ್ತಾನಾಂ ದ್ವಿಪದಾಂ ಚ ಚತುಷ್ಪದಃ ॥

ಅನುವಾದ

ಪ್ರಪಂಚದಲ್ಲಿ ರೆಕ್ಕೆಗಳಿಂದ ಹಾರುವ ಚರಪ್ರಾಣಿಗಳಿಗೆ ಫಲ-ಪುಷ್ಪಾದಿ ಅಚರ ಪದಾರ್ಥಗಳೇ ಆಹಾರವು. ಕಾಲುಗಳಿಂದ ನಡೆದಾಡುವ ಜೀವಿಗಳಿಗೆ ಕಾಲಿಲ್ಲದ ಹುಲ್ಲು-ಸೊಪ್ಪು ಮುಂತಾದವುಗಳು ಆಹಾರವು. ಕೈಗಳುಳ್ಳವರಿಗೆ ಕೈಗಳಿಲ್ಲದ ಲತಾ-ವೃಕ್ಷಗಳೇ ಆಹಾರವು ಮತ್ತು ಎರಡು ಕಾಲುಗಳುಳ್ಳ ಮನುಷ್ಯರಿಗಾಗಿ ಅಕ್ಕಿ-ಗೋಧಿ ಮುಂತಾದ ಅನ್ನ ಪದಾರ್ಥಗಳೇ ಆಹಾರವು. ನಾಲ್ಕು ಕಾಲುಗಳುಳ್ಳ ಎತ್ತು, ಒಂಟೆ ಮುಂತಾದವುಗಳು ಕೃಷಿಯ ಮೂಲಕ ಅನ್ನವನ್ನು ಉತ್ಪಾದಿಸಲು ಸಹಾಯಕವಾಗಿವೆ. ॥9॥

(ಶ್ಲೋಕ-10)

ಮೂಲಮ್

ಯೂಯಂ ಚ ಪಿತ್ರಾನ್ವಾದಿಷ್ಟಾ ದೇವದೇವೇನ ಚಾನಘಾಃ ।
ಪ್ರಜಾಸರ್ಗಾಯ ಹಿ ಕಥಂ ವೃಕ್ಷಾನ್ನಿರ್ದಗ್ಧುಮರ್ಹಥ ॥

ಅನುವಾದ

ಪುಣ್ಯಾತ್ಮರಾದ ಪ್ರಚೇತಸರೇ! ನಿಮ್ಮ ತಂದೆಯವರು ಮತ್ತು ದೇವಾಧಿದೇವನಾದ ಭಗವಂತನು ನಿಮಗೆ ಪ್ರಜೆಗಳನ್ನು ಸೃಷ್ಟಿಸಿರಿ ಎಂದು ಅಪ್ಪಣೆ ಕೊಟ್ಟಿದ್ದರು. ಇಂತಹ ಸ್ಥಿತಿಯಲ್ಲಿ ನೀವು ವೃಕ್ಷಗಳನ್ನು ಸುಟ್ಟು ಹಾಕಿದರೆ ಉಚಿತವಾದೀತೇ? ॥10॥

(ಶ್ಲೋಕ-11)

ಮೂಲಮ್

ಆತಿಷ್ಠತ ಸತಾಂ ಮಾರ್ಗಂ ಕೋಪಂ ಯಚ್ಛತ ದೀಪಿತಮ್ ।
ಪಿತ್ರಾ ಪಿತಾಮಹೇನಾಪಿ ಜುಷ್ಟಂ ವಃ ಪ್ರಪಿತಾಮಹೈಃ ॥

ಅನುವಾದ

ನೀವುಗಳು ನಿಮ್ಮ ಕ್ರೋಧ ವನ್ನು ಶಾಂತಗೊಳಿಸಿಕೊಂಡು ತಂದೆ-ತಾತ-ಮುತ್ತಾತರು ಮುಂತಾದವರು ಸೇವಿಸಿದ ಸತ್ಪುರುಷರ ಮಾರ್ಗವನ್ನು ಅನುಸರಿಸಿರಿ. ॥11॥

(ಶ್ಲೋಕ-12)

ಮೂಲಮ್

ತೋಕಾನಾಂ ಪಿತರೌ ಬಂಧೂ ದೃಶಃ ಪಕ್ಷ್ಮ ಸಿಯಾಃ ಪತಿಃ ।
ಪತಿಃ ಪ್ರಜಾನಾಂ ಭಿಕ್ಷೂಣಾಂ ಗೃಹ್ಯಜ್ಞಾನಾಂ ಬುಧಃ ಸುಹೃತ್ ॥

ಅನುವಾದ

ತಂದೆ-ತಾಯಂದಿರು ಬಾಲಕನನ್ನು, ಕಣ್ಣಿನ ರೆಪ್ಪೆಗಳು ಕಣ್ಣುಗಳನ್ನು, ಪತಿಯು ಪತ್ನಿಯನ್ನು, ಗೃಹಸ್ಥರು ಭಿಕ್ಷುಕರನ್ನು, ಜ್ಞಾನಿಗಳು ಅಜ್ಞಾನಿಗಳನ್ನು ರಕ್ಷಿಸುತ್ತಾ, ಅವರ ಹಿತವನ್ನು ಬಯಸುವಂತೆ, ಪ್ರಜೆಯ ರಕ್ಷಣೆ ಮತ್ತು ಹಿತದ ಉತ್ತರದಾಯಿತ್ವ ರಾಜನ ಮೇಲಿರುತ್ತದೆ. ॥12॥

(ಶ್ಲೋಕ-13)

ಮೂಲಮ್

ಅಂತರ್ದೇಹೇಷು ಭೂತಾನಾಮಾತ್ಮಾಸ್ತೇ ಹರಿರೀಶ್ವರಃ ।
ಸರ್ವಂ ತದ್ಧಿಷ್ಣ್ಯಮೀಕ್ಷಧ್ವಮೇವಂ ವಸ್ತೋಷಿತೋ ಹ್ಯಸೌ ॥

ಅನುವಾದ

ಪ್ರಚೇತಸರೇ! ಸಮಸ್ತ ಪ್ರಾಣಿಗಳ ಹೃದಯದಲ್ಲಿ ಸರ್ವಶಕ್ತನಾದ ಭಗವಂತನು ಆತ್ಮರೂಪದಿಂದ ವಿರಾಜಮಾನನಾಗಿದ್ದಾನೆ. ಅದಕ್ಕಾಗಿ ನೀವುಗಳು ಎಲ್ಲರನ್ನು ಭಗವಂತನ ನಿವಾಸಸ್ಥಾನ ವೆಂದು ತಿಳಿಯಿರಿ. ನೀವು ಹೀಗೆ ಮಾಡಿದರೆ ಭಗವಂತನನ್ನು ಒಲಿಸಿಕೊಳ್ಳಬಹುದು.॥13॥

(ಶ್ಲೋಕ-14)

ಮೂಲಮ್

ಯಃ ಸಮುತ್ಪತಿತಂ ದೇಹ ಆಕಾಶಾನ್ಮನ್ಯುಮುಲ್ಬಣಮ್ ।
ಆತ್ಮಜಿಜ್ಞಾಸಯಾ ಯಚ್ಛೇತ್ ಸಗುಣಾನತಿವರ್ತತೇ ॥

ಅನುವಾದ

ಹೃದಯದಲ್ಲಿ ಉಕ್ಕುತ್ತಿರುವ ಭಯಂಕರ ಕ್ರೋಧವನ್ನು ಆತ್ಮ ವಿಚಾರದ ಮೂಲಕ ಶರೀರದಲ್ಲೇ ಶಾಂತಗೊಳಿಸಿ, ಹೊರ ಹೋಗಲು ಬಿಡದಿರುವವನು ತ್ರಿಗುಣಗಳನ್ನು ದಾಟಿ ಹೋಗಲು ಸಮರ್ಥನಾಗುತ್ತಾನೆ.॥14॥

(ಶ್ಲೋಕ-15)

ಮೂಲಮ್

ಅಲಂ ದಗ್ಧೈರ್ದ್ರುಮೈರ್ದೀನೈಃ ಖಿಲಾನಾಂ ಶಿವಮಸ್ತು ವಃ ।
ವಾರ್ಕ್ಷೀ ಹ್ಯೇಷಾ ವರಾ ಕನ್ಯಾ ಪತ್ನೀತ್ವೇ ಪ್ರತಿಗೃಹ್ಯತಾಮ್ ॥

ಅನುವಾದ

ಪ್ರಚೇತಸರೇ! ಈ ದೀನ-ಹೀನರಾದ ವೃಕ್ಷಗಳನ್ನು ಇನ್ನು ಸುಡಬೇಡಿರಿ. ಉಳಿದಿರುವ ವೃಕ್ಷ ಸಂಪತ್ತನ್ನು ಕಾಪಾಡಿರಿ. ಇದರಿಂದ ನಿಮಗೂ ಶ್ರೇಯಸ್ಸುಂಟಾದೀತು. ಈ ವೃಕ್ಷಗಳು ‘ವಾರ್ಕ್ಷೀ’ ಎಂಬ ಕನ್ಯಾಮಣಿಯನ್ನು ಸಂರಕ್ಷಣೆ ಮಾಡಿವೆ. ನೀವು ಆಕೆಯನ್ನು ಪತ್ನಿಯಾಗಿ ಸ್ವೀಕರಿಸಿರಿ.॥15॥

(ಶ್ಲೋಕ-16)

ಮೂಲಮ್

ಇತ್ಯಾಮಂತ್ರ್ಯ ವರಾರೋಹಾಂ
ಕನ್ಯಾಮಾಪ್ಸರಸೀಂ ನೃಪ ।
ಸೋಮೋ ರಾಜಾ ಯಯೌ
ದತ್ತ್ವಾ ತೇ ಧರ್ಮೇಣೋಪಯೇಮಿರೇ ॥

ಅನುವಾದ

ಪರೀಕ್ಷಿದ್ರಾಜನೇ! ವನಸ್ಪತಿಗಳ ರಾಜನಾದ ಚಂದ್ರನು ಪ್ರಚೇತ ಸರನ್ನು ಈ ರೀತಿಯಾಗಿ ಸಮಾಧಾನಪಡಿಸಿ, ಅವರಿಗೆ ಪ್ರಮ್ಲೋಚಾ ಎಂಬ ಅಪ್ಸರೆಯ ಸುಂದರಿಯಾದ ಕನ್ಯೆಯನ್ನು ಒಪ್ಪಿಸಿ ಅಲ್ಲಿಂದ ಹೊರಟುಹೋದನು. ಪ್ರಚೇತಸರು ಬಳಿಕ ಧರ್ಮಾನುಸಾರ ಆಕೆಯನ್ನು ಪಾಣಿಗ್ರಹಣ ಮಾಡಿಕೊಂಡರು. ॥16॥

(ಶ್ಲೋಕ-17)

ಮೂಲಮ್

ತೇಭ್ಯಸ್ತಸ್ಯಾಂ ಸಮಭವದ್ದಕ್ಷಃ ಪ್ರಾಚೇತಸಃ ಕಿಲ ।
ಯಸ್ಯ ಪ್ರಜಾವಿಸರ್ಗೇಣ ಲೋಕಾ ಆಪೂರಿತಾಸಯಃ ॥

ಅನುವಾದ

ಆ ಪ್ರಚೇತಸರಿಂದ ಆಕೆಯ ಗರ್ಭದಿಂದ ಪ್ರಾಚೇತಸನಾದ ದಕ್ಷನು ಜನಿಸಿದನು. ಮತ್ತೆ ಆ ದಕ್ಷಪ್ರಜಾಪತಿಯ ಪ್ರಜಾಸೃಷ್ಟಿಯಿಂದ ಮೂರು ಲೋಕಗಳೂ ತುಂಬಿ ಹೋದುವು. ॥17॥

(ಶ್ಲೋಕ-18)

ಮೂಲಮ್

ಯಥಾ ಸಸರ್ಜ ಭೂತಾನಿ ದಕ್ಷೋ ದುಹಿತೃವತ್ಸಲಃ ।
ರೇತಸಾ ಮನಸಾ ಚೈವ ತನ್ಮಮಾವಹಿತಃ ಶೃಣು ॥

ಅನುವಾದ

ದಕ್ಷನಿಗೆ ತನ್ನ ಹೆಣ್ಣು ಮಕ್ಕಳ ಮೇಲೆ ಅಪಾರವಾದ ಪ್ರೇಮವಿತ್ತು. ಅವನು ತನ್ನ ಸಂಕಲ್ಪದಿಂದ ಹಾಗೂ ವೀರ್ಯದಿಂದ ವಿವಿಧ ಪ್ರಾಣಿಗಳನ್ನು ಸೃಷ್ಟಿ ಮಾಡಿದುದನ್ನು ನಾನು ನಿನಗೆ ಹೇಳುವೆನು. ಸಾವಧಾನವಾಗಿ ಕೇಳು. ॥18॥

(ಶ್ಲೋಕ-19)

ಮೂಲಮ್

ಮನಸೈವಾಸೃಜತ್ಪೂರ್ವಂ ಪ್ರಜಾಪತಿರಿಮಾಃ ಪ್ರಜಾಃ ।
ದೇವಾಸುರಮನುಷ್ಯಾದೀನ್ನಭಃಸ್ಥಲಜಲೌಕಸಃ ॥

ಅನುವಾದ

ಪರೀಕ್ಷಿತನೇ! ಮೊದಲಿಗೆ ದಕ್ಷಪ್ರಜಾಪತಿಯು ನೆಲ, ಜಲ, ಆಕಾಶಗಳಲ್ಲಿ ವಾಸಿಸುವ ದೇವತೆಗಳು, ಅಸುರರು ಮತ್ತು ಮನುಷ್ಯರು ಮುಂತಾದವರನ್ನು ಸಂಕಲ್ಪಮಾತ್ರ ದಿಂದಲೇ ಸೃಷ್ಟಿಸಿದನು. ॥19॥

(ಶ್ಲೋಕ-20)

ಮೂಲಮ್

ತಮಬೃಂಹಿತಮಾಲೋಕ್ಯ ಪ್ರಜಾಸರ್ಗಂ ಪ್ರಜಾಪತಿಃ ।
ವಿಂಧ್ಯಪಾದಾನುಪವ್ರಜ್ಯ ಸೋಚರದ್ದುಷ್ಕರಂ ತಪಃ ॥

ಅನುವಾದ

ಆ ಸೃಷ್ಟಿಯು ವೃದ್ಧಿ ಹೊಂದದೇ ಇರುವುದನ್ನು ನೋಡಿ ಅವನು ವಿಂಧ್ಯಾಚಲದ ಬಳಿಯಿರುವ ಪರ್ವತಕ್ಕೆ ಹೋಗಿ ತೀವ್ರವಾದ ತಪಸ್ಸನ್ನು ಆಚರಿಸಿದನು. ॥20॥

(ಶ್ಲೋಕ-21)

ಮೂಲಮ್

ತತ್ರಾಘಮರ್ಷಣಂ ನಾಮ ತೀರ್ಥಂ ಪಾಪಹರಂ ಪರಮ್ ।
ಉಪಸ್ಪೃಶ್ಯಾನುಸವನಂ ತಪಸಾತೋಷಯದ್ಧರಿಮ್ ॥

ಅನುವಾದ

ಅಲ್ಲಿ ಅತ್ಯಂತ ಶ್ರೇಷ್ಠವಾದೊಂದು ‘ಅಘಮರ್ಷಣ’ ಎಂಬ ತೀರ್ಥವಿದೆ. ಅದು ಎಲ್ಲ ಪಾಪ ಗಳನ್ನು ತೊಳೆದುಬಿಡುತ್ತದೆ. ದಕ್ಷಪ್ರಜಾಪತಿಯು ಆ ತೀರ್ಥ ದಲ್ಲಿ ತ್ರಿಕಾಲಗಳಲ್ಲಿಯೂ ಸ್ನಾನವನ್ನು ಮಾಡಿ, ತಪಸ್ಸಿನ ಮೂಲಕ ಭಗವಂತನನ್ನು ಆರಾಧಿಸತೊಡಗಿದನು. ॥21॥

(ಶ್ಲೋಕ-22)

ಮೂಲಮ್

ಅಸ್ತೌಷೀದ್ಧಂಸಗುಹ್ಯೇನ ಭಗವಂತಮಧೋಕ್ಷಜಮ್ ।
ತುಭ್ಯಂ ತದಭಿಧಾಸ್ಯಾಮಿ ಕಸ್ಯಾತುಷ್ಯದ್ಯತೋ ಹರಿಃ ॥

ಅನುವಾದ

ದಕ್ಷಪ್ರಜಾಪತಿಯು ಇಂದ್ರಿಯಾತೀತನಾದ ಭಗವಂತನನ್ನು ‘ಹಂಸಗುಹ್ಯ’ ಎಂಬ ಸ್ತೋತ್ರದಿಂದ ಸ್ತುತಿಸಿದನು. ಅದ ರಿಂದಲೇ ಭಗವಂತನು ಅವನ ಮೇಲೆ ಪ್ರಸನ್ನನಾಗಿದ್ದನು. ಆ ಸ್ತುತಿಯನ್ನು ನಿನಗೆ ಹೇಳುವೆನು, ಕೇಳು. ॥22॥

(ಶ್ಲೋಕ-23)

ಮೂಲಮ್ (ವಾಚನಮ್)

ಪ್ರಜಾಪತಿರುವಾಚ

ಮೂಲಮ್

ನಮಃ ಪರಾಯಾವಿತಥಾನುಭೂತಯೇ
ಗುಣತ್ರಯಾಭಾಸನಿಮಿತ್ತ ಬಂಧವೇ ।
ಅದೃಷ್ಟಧಾಮ್ನೇ ಗುಣತತ್ತ್ವಬುದ್ಧಿಭಿ-
ರ್ನಿವೃತ್ತಮಾನಾಯ ದಧೇ ಸ್ವಯಂಭುವೇ ॥

ಅನುವಾದ

ದಕ್ಷಪ್ರಜಾಪತಿಯು ಹೀಗೆ ಸ್ತುತಿಸತೊಡಗಿದನು ಭಗವಂತಾ! ನೀನು ಸತ್ಯವಾದ ಅನುಭವಭೂತಿ ಸ್ವರೂಪನಾಗಿ ಸರ್ವೋತ್ತಮನಾಗಿರುವೆ. ಜೀವನನ್ನೂ, ಪ್ರಕೃತಿಯನ್ನೂ ಮೀರಿದವನಾಗಿ ಅವುಗಳಿಗೆ ಸತ್ತಾ-ಸ್ಫೂರ್ತಿಯನ್ನು ನೀಡುತ್ತಿರುವೆ. ನೀನು ಪ್ರಮಾಣಾತೀತನಾಗಿರುವುದರಿಂದ ತ್ರಿಗುಣಾತ್ಮಕವಾದ ಸೃಷ್ಟಿಯಲ್ಲೇ ತತ್ತ್ವಬುದ್ಧಿಯನ್ನಿಟ್ಟಿರುವ ಜೀವಿಗಳು ನಿನ್ನ ನಿಜ ಸ್ವರೂಪವನ್ನು ಅರಿಯಲಾರರು. ಇಂತಹ ಸ್ವಯಂಪ್ರಕಾಶನೂ, ಪರಾತ್ಪರನೂ ಆದ ನಿನಗೆ ನಮಸ್ಕರಿಸುತ್ತಿದ್ದೇನೆ.॥23॥

(ಶ್ಲೋಕ-24)

ಮೂಲಮ್

ನ ಯಸ್ಯ ಸಖ್ಯಂ ಪುರುಷೋವೈತಿ ಸಖ್ಯುಃ
ಸಖಾ ವಸನ್ ಸಂವಸತಃ ಪುರೇಸ್ಮಿನ್ ।
ಗುಣೋ ಯಥಾ ಗುಣಿನೋ ವ್ಯಕ್ತದೃಷ್ಟೇ-
ಸ್ತಸ್ಮೈ ಮಹೇಶಾಯ ನಮಸ್ಕರೋಮಿ ॥

ಅನುವಾದ

ನೀನಾದರೋ ಜೀವಿಗಳಿಗೆ ಗೆಳೆಯನಾಗಿ, ಇದೇ ಶರೀರದಲ್ಲಿ ಒಟ್ಟಿಗೆ ಇರುತ್ತಿದ್ದರೂ, ಸರ್ವಶಕ್ತಿಯುಳ್ಳ ನಿನ್ನ ಸಖ್ಯಭಾವವನ್ನು ಜೀವಿಗಳು ತಿಳಿಯಲಾರರು. ರೂಪ, ರಸ, ಗಂಧಗಳೇ ಮುಂತಾದ ವಿಷಯಗಳು ಕಣ್ಣು, ನಾಲಿಗೆ, ಮೂಗು ಮುಂತಾದ ಇಂದ್ರಿಯ ವೃತ್ತಿಗಳು ತಮ್ಮನ್ನು ಪ್ರಕಾಶಪಡಿಸುತ್ತಿದ್ದರೂ ಅವುಗಳನ್ನು ತಿಳಿಯಲಾರವೊ, ಅಂತೆಯೇ ಜೀವಿಗಳು ತಮ್ಮನ್ನು ಪ್ರಕಾಶ ಪಡಿಸುತ್ತಿರುವ ಮತ್ತು ಸಾಕ್ಷಿಯಾಗಿರುವ ನಿನ್ನನ್ನು ಕಾಣಲಾರರು. ಅಂತಹ ಮಹೇಶ್ವರನಾದ ನಿನಗೆ ನಮಸ್ಕರಿಸುತ್ತೇನೆ. ॥24॥

(ಶ್ಲೋಕ-25)

ಮೂಲಮ್

ದೇಹೋಸವೋಕ್ಷಾ ಮನವೋ ಭೂತಮಾತ್ರಾ
ನಾತ್ಮಾನಮನ್ಯಂ ಚ ವಿದುಃ ಪರಂ ಯತ್ ।
ಸರ್ವಂ ಪುಮಾನ್ವೇದ ಗುಣಾಂಶ್ಚ ತಜ್ಜ್ಞೋ
ನ ವೇದ ಸರ್ವಜ್ಞಮನಂತಮೀಡೇ ॥

ಅನುವಾದ

ದೇಹ, ಪ್ರಾಣ, ಇಂದ್ರಿಯಗಳು, ಅಂತಃ ಕರಣದ ವೃತ್ತಿಗಳು, ಪಂಚಮಹಾ ಭೂತಗಳು ಮತ್ತು ಅವುಗಳ ತನ್ಮಾತ್ರೆಗಳು ಹೀಗೆ ಇವೆಲ್ಲವೂ ಜಡವಾಗಿದ್ದ ಕಾರಣ ತಮ್ಮನ್ನು ಮತ್ತು ತಮ್ಮಿಂದ ಬೇರೆಯಾದುದನ್ನೂ ತಿಳಿಯಲಾರವು. ಆದರೆ ಜೀವನು ಇವೆಲ್ಲವನ್ನು ಮತ್ತು ಇವುಗಳ ಕಾರಣವಾದ ಸತ್ತ್ವ, ರಜ, ತಮ ಈ ಮೂರು ಗುಣಗಳನ್ನೂ ತಿಳಿಯುವನು. ಆದರೂ ಕೂಡ ಸರ್ವಜ್ಞನೂ, ಅನಂತನೂ ಆಗಿರುವ ನಿನ್ನನ್ನು ತಿಳಿಯಲಾರನು. ಅಂತಹ ನಿನ್ನನ್ನು ಸ್ತುತಿಸುತ್ತೇನೆ.॥25॥

(ಶ್ಲೋಕ-26)

ಮೂಲಮ್

ಯದೋಪರಾಮೋ ಮನಸೋ ನಾಮರೂಪ-
ರೂಪಸ್ಯ ದೃಷ್ಟಸ್ಮೃತಿಸಂಪ್ರಮೋಷಾತ್ ।
ಯ ಈಯತೇ ಕೇವಲಯಾ ಸ್ವಸಂಸ್ಥಯಾ
ಹಂಸಾಯ ತಸ್ಮೈ ಶುಚಿಸದ್ಮನೇ ನಮಃ ॥

ಅನುವಾದ

ಸಮಾಧಿಕಾಲದಲ್ಲಿ ಪ್ರಮಾಣ, ವಿಕಲ್ಪ, ವಿಪರ್ಯಯಗಳೆಂಬ ವಿವಿಧ ಜ್ಞಾನಗಳೂ, ಮತ್ತು ಸ್ಮರಣಶಕ್ತಿಯೂ ಲೋಪವಾಗುವುದರಿಂದ ಈ ನಾಮ- ರೂಪಾತ್ಮಕವಾದ ಜಗತ್ತನ್ನು ನಿರೂಪಿಸುವ ಮನಸ್ಸೂ ಶಾಂತವಾಗಿ ಬಿಡುವುದು. ಹಾಗೇ ಮನಸ್ಸೇ ಲಯಗೊಂಡರೂ ನೀನು ಕೇವಲ ಸ್ವಸ್ವರೂಪದಿಂದ ಪ್ರಕಾಶಿಸುತ್ತಿರುವೆ. ಅಂತಹ ಶುದ್ಧನೂ, ಶುದ್ಧ ಹೃದಯಮಂದಿರನಿವಾಸಿಯೂ ಆದ ನಿನಗೆ ನಮೋ ನಮಃ ॥26॥

(ಶ್ಲೋಕ-27)

ಮೂಲಮ್

ಮನೀಷಿಣೋಂತರ್ಹೃದಿ ಸಂನಿವೇಶಿತಂ
ಸ್ವಶಕ್ತಿಭಿರ್ನವಭಿಶ್ಚತ್ರಿವೃದ್ಭಿಃ ।
ವಹ್ನಿಂ ಯಥಾ ದಾರುಣಿ ಪಾಂಚದಶ್ಯಂ
ಮನೀಷಯಾ ನಿಷ್ಕರ್ಷಂತಿ ಗೂಢಮ್ ॥

ಅನುವಾದ

ಯಾಜ್ಞಿಕರು ಅರಣಿ ಎಂಬ ಕಟ್ಟಿಗೆಯಲ್ಲಿ ಅಡಗಿರುವ ಅಗ್ನಿಯನ್ನು ‘ಸಾಮಿಧೇನೀ’ ಎಂಬ ಹದಿನೈದು ಮಂತ್ರಗಳಿಂದ ಪ್ರಕಟಪಡಿಸುವಂತೆ ಜ್ಞಾನೀಪುರುಷರು ತಮ್ಮ ಇಪ್ಪತ್ತೇಳು ಶಕ್ತಿಗಳ ಒಳಗೆ ಗೂಢವಾಗಿ ಅಡಗಿರುವ ನಿನ್ನನ್ನು ತಮ್ಮ ಶುದ್ಧಬುದ್ಧಿಯಿಂದ ಹೃದಯಲ್ಲೇ ಹುಡುಕಿ ಸಾಕ್ಷ್ಯಾತ್ಕರಿಸಿಕೊಳ್ಳುತ್ತಾರೆ. ॥27॥

(ಶ್ಲೋಕ-28)

ಮೂಲಮ್

ಸ ವೈ ಮಮಾಶೇಷವಿಶೇಷಮಾಯಾ-
ನಿಷೇಧನಿರ್ವಾಣಸುಖಾನುಭೂತಿಃ ।
ಸ ಸರ್ವನಾಮಾ ಸ ಚ ವಿಶ್ವರೂಪಃ
ಪ್ರಸೀದತಾಮನಿರುಕ್ತಾತ್ಮಶಕ್ತಿಃ ॥

ಅನುವಾದ

ಜಗತ್ತಿನಲ್ಲಿ ಕಂಡುಬರುವ ಭಿನ್ನತೆಗಳೆಲ್ಲವೂ ಮಾಯೆಯದ್ದೇ ಆಗಿವೆ. ಮಾಯೆಯನ್ನು ನಿಷೇಧಮಾಡಿದಾಗ ಕೇವಲ ಪರಮ ಸುಖದ ಸಾಕ್ಷಾತ್ಕಾರರೂಪವಾದ ನೀನೇ ಶೇಷವಾಗಿ ಉಳಿಯುವಿ. ಆದರೆ ವಿಚಾರಮಾಡಿದಾಗ ನಿನ್ನ ಸ್ವರೂಪದಲ್ಲಿ ಮಾಯೆಯು ನಿರ್ವಚನವಾಗಲಾರದು. ಅರ್ಥಾತ್ ಮಾಯೆಯೂ ನೀನೇ ಆಗಿರುವೆ. ಆದ್ದರಿಂದ ಎಲ್ಲ ನಾಮ ಮತ್ತು ಎಲ್ಲ ರೂಪಗಳೂ ನಿನ್ನವೇ ಆಗಿವೆ. ಪ್ರಭುವೇ! ನೀನು ನನ್ನ ಮೇಲೆ ಪ್ರಸನ್ನನಾಗು. ನನ್ನನ್ನು ಆತ್ಮ ಪ್ರಸಾದದಿಂದ ಪೂರ್ಣಗೊಳಿಸಿಬಿಡು. ॥28॥

(ಶ್ಲೋಕ-29)

ಮೂಲಮ್

ಯದ್ಯನ್ನಿರುಕ್ತಂ ವಚಸಾ ನಿರೂಪಿತಂ
ಧಿಯಾಕ್ಷಭಿರ್ವಾ ಮನಸಾ ವೋತ ಯಸ್ಯ ।
ಮಾ ಭೂತ್ಸ್ವರೂಪಂ ಗುಣರೂಪಂ ಹಿ ತತ್ತತ್
ಸ ವೈ ಗುಣಾಪಾಯವಿಸರ್ಗಲಕ್ಷಣಃ ॥

ಅನುವಾದ

ಸ್ವಾಮಿ! ವಾಣಿಯಿಂದ ಹೇಳುವುದೆಲ್ಲವೂ ಅಥವಾ ಮನಸ್ಸು, ಬುದ್ಧಿ, ಇಂದ್ರಿಯಗಳಿಂದ ಗ್ರಹಿಸಲಾಗುವುದೆಲ್ಲವೂ ನಿನ್ನ ಸ್ವರೂಪವಲ್ಲ. ಏಕೆಂದರೆ, ಅದೆಲ್ಲವೂ ಗುಣರೂಪ ವಾಗಿದೆ, ನೀನು ಗುಣಗಳ ಉತ್ಪತ್ತಿ ಮತ್ತು ಪ್ರಳಯದ ಅಧಿಷ್ಠಾನನಾಗಿರುವೆ. ನಿನ್ನಲ್ಲಿ ಅದರ ಕೇವಲ ಪ್ರತೀತಿ ಮಾತ್ರವಿದೆ. ॥29॥

(ಶ್ಲೋಕ-30)

ಮೂಲಮ್

ಯಸ್ಮಿನ್ ಯತೋ ಯೇನ ಚ ಯಸ್ಯ ಯಸ್ಮೈ
ಯದ್ ಯೋ ಯಥಾ ಕುರುತೇ ಕಾರ್ಯತೇ ಚ ।
ಪರಾವರೇಷಾಂ ಪರಮಂ ಪ್ರಾಕ್ ಪ್ರಸಿದ್ಧಂ
ತದ್ ಬ್ರಹ್ಮ ತದ್ಧೇತುರನನ್ಯದೇಕಮ್ ॥

ಅನುವಾದ

ಭಗವಂತನೇ! ಈ ಇಡೀ ಜಗತ್ತು ನಿನ್ನಲ್ಲಿ ನೆಲೆಸಿದೆ. ನಿನ್ನಿಂದಲೇ ಉಂಟಾಗಿದೆ. ನೀನು ಬೇರೆ ಯಾವುದರ ಆಸರೆಯಿಲ್ಲದೆ ತನ್ನಿಂದಲೇ ಇದನ್ನು ನಿರ್ಮಿಸಿರುವೆ. ಇದು ನಿನ್ನದೇ ಆಗಿದ್ದು, ನಿನಗಾಗಿಯೇ ಇದೆ. ಈ ರೂಪದಲ್ಲಿ ಉಂಟಾಗುವವನೂ ನೀನೇ ಆಗಿರುವೆ ಮತ್ತು ಉಂಟುಮಾಡುವವನೂ ನೀನೇ ಆಗಿರುವೆ. ಉಂಟಾಗುವ-ಉಂಟು ಮಾಡುವ ವಿಧಿಯೂ ನೀನೇ ಆಗಿರುವೆ. ಎಲ್ಲರಿಂದ ಕಾರ್ಯ ಮಾಡಿಸುವವನೂ ನೀನೇ. ಕಾರ್ಯ-ಕಾರಣ ಭೇದ ಇಲ್ಲದಿರುವಾಗಲೂ ನೀನೇ ಸ್ವಯಂ ಸಿದ್ಧ ಸ್ವರೂಪದಿಂದ ನೆಲೆಗೊಂಡಿದ್ದೆ. ಇದರಿಂದ ಎಲ್ಲದರ ಕಾರಣನು ನೀನೇ ಆಗಿರುವೆ. ನೀನು ಜೀವ-ಜಗತ್ತೆಂಬ ಭೇದದಿಂದ ಮತ್ತು ಸ್ವಗತಭೇದದಿಂದ ಸರ್ವಥಾ ರಹಿತನಾದ ಅದ್ವಿತೀಯ ನಾಗಿರುವೆ. ನೀನು ಸ್ವಯಂ ಬ್ರಹ್ಮನೇ ಆಗಿರುವೆ. ನನ್ನ ಮೇಲೆ ಪ್ರಸನ್ನನಾಗು. ॥30॥

(ಶ್ಲೋಕ-31)

ಮೂಲಮ್

ಯಚ್ಛಕ್ತಯೋ ವದತಾಂ ವಾದಿನಾಂ ವೈ
ವಿವಾದಸಂವಾದಭುವೋ ಭವಂತಿ ।
ಕುರ್ವಂತಿ ಚೈಷಾಂ ಮುಹುರಾತ್ಮಮೋಹಂ
ತಸ್ಮೈ ನಮೋನಂತಗುಣಾಯ ಭೂಮ್ನೇ ॥

ಅನುವಾದ

ಪ್ರಭೋ! ವಾದೀ-ಪ್ರತಿವಾದಿಗಳ ವಿವಾದ ಮತ್ತು ಸಂವಾದ(ಐಕ್ಯಮತ್ಯ)ದ ವಿಷಯವೂ ನಿನ್ನ ಶಕ್ತಿಯೇ ಆಗಿದೆ ಹಾಗೂ ಅವರನ್ನೂ ಪದೇ-ಪದೇ ಮೋಹ ದಲ್ಲಿ ಅದು ಕೆಡವುತ್ತ ಇರುತ್ತದೆ. ನೀನು ಅಪ್ರಾಕೃತ ಅನಂತ ಕಲ್ಯಾಣಗುಣಗಳಿಂದ ಕೂಡಿದ್ದು ಸ್ವತಃ ಅನಂತನೇ ಆಗಿರುವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥31॥

(ಶ್ಲೋಕ-32)

ಮೂಲಮ್

ಅಸ್ತೀತಿ ನಾಸ್ತೀತಿ ಚ ವಸ್ತುನಿಷ್ಠಯೋ-
ರೇಕಸ್ಥಯೋರ್ಭಿನ್ನವಿರುದ್ಧಧರ್ಮಯೋಃ ।
ಅವೇಕ್ಷಿತಂ ಕಿಂಚನ ಯೋಗಸಾಂಖ್ಯಯೋಃ
ಸಮಂ ಪರಂ ಹ್ಯನುಕೂಲಂ ಬೃಹತ್ತತ್ ॥

ಅನುವಾದ

ಭಗವಂತಾ! ನಮ್ಮ ಪ್ರಭುವು ಹಸ್ತ- ಪಾದಾದಿಗಳಿಂದ ಕೂಡಿದ ಸಾಕಾರ-ವಿಗ್ರಹನಾಗಿದ್ದಾನೆ ಎಂದು ಉಪಾಸಕರು ಹೇಳುತ್ತಾರೆ. ಭಗವಂತನು ಹಸ್ತ-ಪಾದಾದಿ ವಿಗ್ರಹದಿಂದ ರಹಿತ-ನಿರಾಕಾರನಾಗಿದ್ದಾನೆಂದು ಸಾಂಖ್ಯರು ಹೇಳುತ್ತಾರೆ. ಹೀಗೆ ಅವರು ಒಂದೇ ವಸ್ತುವನ್ನು ಎರಡು ಪರಸ್ಪರ ವಿರೋಧೀ ಧರ್ಮಗಳನ್ನು ವರ್ಣಿಸುತ್ತಿದ್ದರೂ ಅದರಲ್ಲಿ ವಿರೋಧವಿಲ್ಲ. ಏಕೆಂದರೆ, ಎರಡೂ ಒಂದೇ ಪರಮ ವಸ್ತುವಿನಲ್ಲಿ ಸ್ಥಿತವಾಗಿವೆ. ಆಧಾರವಿಲ್ಲದೆ ಕೈ-ಕಾಲು ಮುಂತಾದವುಗಳು ಇರುವುದು ಸಂಭವವೇ ಇಲ್ಲ ಹಾಗೂ ನಿಷೇಧಕ್ಕೂ ಯಾವುದಾದರೂ ಅವಧಿಯು ಇರಲೇ ಬೇಕಲ್ಲವೇ. ಆ ಆಧಾರ ಮತ್ತು ನಿಷೇಧದ ಅವಧಿಯೂ ನೀನೇ ಆಗಿರುವೆ. ಅದಕ್ಕಾಗಿ ಸಾಕಾರ-ನಿರಾಕಾರ ಎರಡರಿಂದಲೂ ಅವಿರುದ್ಧವಾದ ಸಮಬ್ರಹ್ಮನು ನೀನೇ ಆಗಿರುವೆ. ॥32॥

(ಶ್ಲೋಕ-33)

ಮೂಲಮ್

ಯೋನುಗ್ರಹಾರ್ಥಂ ಭಜತಾಂ ಪಾದಮೂಲ-
ಮನಾಮರೂಪೋ ಭಗವಾನನಂತಃ ।
ನಾಮಾನಿ ರೂಪಾಣಿ ಚ ಜನ್ಮ ಕರ್ಮಭಿ-
ರ್ಭೇಜೇ ಸ ಮಹ್ಯಂ ಪರಮಃ ಪ್ರಸೀದತು ॥

ಅನುವಾದ

ಪ್ರಭೋ! ನೀನು ಅನಂತನಾಗಿರುವೆ. ನಿನಗೆ ಪ್ರಾಕೃತವಾದ ನಾಮವಾಗಲೀ, ರೂಪವಾಗಲೀ ಇಲ್ಲ. ಆದರೂ ನಿನ್ನ ಚರಣಕಮಲಗಳನ್ನು ಭಜಿಸುವವರ ಮೇಲೆ ಅನುಗ್ರಹವನ್ನು ತೋರಲಿಕ್ಕಾಗಿ ನೀನೇ ಅನೇಕ ರೂಪಗಳಲ್ಲಿ ಪ್ರಕಟನಾಗಿ, ಅನೇಕ ಲೀಲೆಗಳನ್ನು ನಡೆಸುವೆ ಹಾಗೂ ಅಯಾಯಾ ರೂಪಗಳಿಗೆ, ಲೀಲೆಗಳಿಗೆ ಅನುಗುಣವಾಗಿ ಅನೇಕ ನಾಮಗಳನ್ನು ಧರಿಸಿಕೊಳ್ಳುವೆ. ಓ ಪರಮಾತ್ಮಾ! ನನಗೆ ಕೃಪಾಪ್ರಸಾದವನ್ನಿತ್ತು ಪ್ರಸನ್ನನಾಗು. ॥33॥

(ಶ್ಲೋಕ-34)

ಮೂಲಮ್

ಯಃ ಪ್ರಾಕೃತೈರ್ಜ್ಞಾನಪಥೈರ್ಜನಾನಾಂ
ಯಥಾಶಯಂ ದೇಹಗತೋ ವಿಭಾತಿ ।
ಯಥಾನಿಲಃ ಪಾರ್ಥಿವಮಾಶ್ರಿತೋ ಗುಣಂ
ಸ ಈಶ್ವರೋ ಮೇ ಕುರುತಾನ್ಮನೋರಥಮ್ ॥

ಅನುವಾದ

ಜನರ ಉಪಾಸನೆಗಳು ಸಾಧಾರಣ ಮಟ್ಟದ್ದಾಗಿರುತ್ತವೆ. ಆದ್ದರಿಂದ ನೀನು ಎಲ್ಲರ ಹೃದಯದಲ್ಲಿ ನೆಲೆಸಿ ಅವರ ಭಾವನೆಗೆ ಅನುಸಾರವಾಗಿ ಬೇರೆ-ಬೇರೆ ದೇವತೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಹಾಗೆಯೇ ಗಂಧವನ್ನು ಆಶ್ರಯಿಸಿದ ಗಾಳಿಯು ಸುಗಂಧಿತನಾಗಿ ಕಂಡುಬರುತ್ತದೆ. ಆದರೆ ಗಾಳಿಯು ನಿಜವಾಗಿ ಸುಗಂಧಿತವಾಗಿರುವುದಿಲ್ಲ. ಹೀಗೆಯೇ ಎಲ್ಲರ ಭಾವನೆ ಗಳನ್ನು ಅನುಸರಿಸುವ ಪ್ರಭುವು ನನ್ನ ಅಭಿಲಾಷೆಯನ್ನು ಪೂರ್ಣಗೊಳಿಸಲಿ.॥34॥

(ಶ್ಲೋಕ-35)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಸ್ತುತಃ ಸಂಸ್ತುವತಃ ಸ ತಸ್ಮಿನ್ನಘಮರ್ಷಣೇ ।
ಆವಿರಾಸೀತ್ಕುರುಶ್ರೇಷ್ಠ ಭಗವಾನ್ ಭಕ್ತವತ್ಸಲಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹಾರಾಜನೇ! ವಿಂಧ್ಯಪರ್ವತದ ಅಘಮರ್ಷಣ ತೀರ್ಥದಲ್ಲಿ ದಕ್ಷಪ್ರಜಾಪತಿಯು ಹೀಗೆ ಸ್ತುತಿಸಿದಾಗ ಭಕ್ತವತ್ಸಲ ಭಗವಂತನು ಅವನ ಮುಂದೆ ಪ್ರಕಟಗೊಂಡನು. ॥35॥

(ಶ್ಲೋಕ-36)

ಮೂಲಮ್

ಕೃತಪಾದಃ ಸುಪರ್ಣಾಂಸೇ ಪ್ರಲಂಬಾಷ್ಟಮಹಾಭುಜಃ ।
ಚಕ್ರಶಂಖಾಸಿಚರ್ಮೇಷುಧನುಃಪಾಶಗದಾಧರಃ ॥

ಅನುವಾದ

ಆಗ ಭಗವಂತನು ಗರುಡನ ಹೆಗಲುಗಳ ಮೇಲೆ ಚರಣಗಳನ್ನಿಟ್ಟಿದ್ದನು. ಹೃಷ್ಟ-ಪುಷ್ಟವಾದ ವಿಶಾಲವಾದ ಎಂಟು ಭುಜಗಳಿಂದ ಶೋಭಿಸುತ್ತಾ ಅವುಗಳಲ್ಲಿ ಚಕ್ರ, ಶಂಖ, ಖಡ್ಗ, ಗುರಾಣಿ, ಬಾಣ, ಧನುಷ್ಯ, ಪಾಶ ಮತ್ತು ಗದೆ ಮುಂತಾದ ದಿವ್ಯಾಯುಧಗಳನ್ನು ಧರಿಸಿದ್ದನು. ॥36॥

(ಶ್ಲೋಕ-37)

ಮೂಲಮ್

ಪೀತವಾಸಾ ಘನಶ್ಯಾಮಃ ಪ್ರಸನ್ನ ವದನೇಕ್ಷಣಃ ।
ವನಮಾಲಾನಿವೀತಾಂಗೋ ಲಸಚ್ಛ್ರೀವತ್ಸಕೌಸ್ತುಭಃ ॥

ಅನುವಾದ

ಮಳೆಗಾಲದ ಮೇಘದಂತೆ ಶ್ಯಾಮಲ ಶರೀರದ ಮೇಲೆ ಪೀತಾಂಬರವು ಪ್ರಕಾಶಿಸುತ್ತಿದೆ. ಮುಖಮಂಡಲವು ಪ್ರಫುಲ್ಲಿತವಾಗಿದ್ದು, ಕಣ್ಣುಗಳಿಂದ ಪ್ರಸಾದದ ಮಳೆಯೇ ಗರೆಯುತ್ತಿತ್ತು. ಮೊಣಕಾಲಿನವರೆಗೆ ವನಮಾಲೆಯು ಜೋತು ಬೀಳುತ್ತಿತ್ತು. ವಕ್ಷಃಸ್ಥಳದಲ್ಲಿ ಶ್ರೀದೇವಿ ಮತ್ತು ಶ್ರೀವತ್ಸಲಾಂಛನ ಹಾಗೂ ಕೊರಳಲ್ಲಿ ಕೌಸ್ತುಭಮಣಿಯು ಹೊಳೆಯುತ್ತಿತ್ತು. ॥37॥

(ಶ್ಲೋಕ-38)

ಮೂಲಮ್

ಮಹಾಕಿರೀಟಕಟಕಃ ಸ್ಫುರನ್ಮಕರಕುಂಡಲಃ ।
ಕಾಂಚ್ಯಂಗುಲೀಯವಲಯನೂಪುರಾಂಗದಭೂಷಿತಃ ॥

ಅನುವಾದ

ಬಹುಮೂಲ್ಯವಾದ ಕಿರೀಟ, ಕಂಕಣ, ಮಕರಾ ಕೃತಿಯ ಕುಂಡಲಗಳು, ಒಡ್ಯಾಣ, ಉಂಗುರ, ತೋಳ್ಬಳೆಗಳು, ಕಾಲಂದುಗೆ, ಭುಜಕೀರ್ತಿಗಳು ತಮ್ಮ-ತಮ್ಮ ಸ್ಥಾನಗಳಲ್ಲಿ ಶೋಭಿಸುತ್ತಿದ್ದುವು. ॥38॥

(ಶ್ಲೋಕ-39)

ಮೂಲಮ್

ತ್ರೈಲೋಕ್ಯಮೋಹನಂ ರೂಪಂ ಬಿಭ್ರತ್ ತ್ರಿಭುವನೇಶ್ವರಃ ।
ವೃತೋ ನಾರದನಂದಾದ್ಯೈಃ ಪಾರ್ಷದೈಃ ಸುರಯೂಥಪೈಃ ॥

(ಶ್ಲೋಕ-40)

ಮೂಲಮ್

ಸ್ತೂಯಮಾನೋನುಗಾಯದ್ಭಿಃ ಸಿದ್ಧಗಂಧರ್ವಚಾರಣೈಃ ।
ರೂಪಂ ತನ್ಮಹದಾಶ್ಚರ್ಯಂ ವಿಚಕ್ಷ್ಯಾಗತಸಾಧ್ವಸಃ ॥

ಅನುವಾದ

ಮೂರು ಲೋಕದೊಡೆಯ ಭಗವಂತನು ತ್ರಿಲೋಕಗಳನ್ನು ಮರುಳು-ಮಾಡುವಂತಹ ರೂಪವನ್ನು ಧರಿಸಿದ್ದನು. ನಾರದ, ನಂದ, ಸುನಂದ ಮುಂತಾದ ಪಾರ್ಷದರು ಅವನ ಸುತ್ತಲೂ ನಿಂತಿದ್ದರು. ಇಂದ್ರಾದಿ ದೇವೇಶ್ವರರು ಸ್ತುತಿಮಾಡುತ್ತಿದ್ದರು. ಸಿದ್ಧರು, ಗಂಧರ್ವರು, ಚಾರಣರು ಭಗವಂತನ ಗುಣಗಳನ್ನು ಕೊಂಡಾಡುತ್ತಿದ್ದರು. ಇಂತಹ ಅತ್ಯಂತ ಆಶ್ಚರ್ಯಮಯವೂ, ಅಲೌಕಿಕವೂ ಆದ ರೂಪವನ್ನು ನೋಡಿ ದಕ್ಷಪ್ರಜಾಪತಿಯು ಸ್ವಲ್ಪ ಭಯಚಕಿತನಾದನು. ॥39-40॥

(ಶ್ಲೋಕ-41)

ಮೂಲಮ್

ನನಾಮ ದಂಡವದ್ಭೂವೌ ಪ್ರಹೃಷ್ಟಾತ್ಮಾ ಪ್ರಜಾಪತಿಃ ।
ನ ಕಿಂಚನೋದೀರಯಿತುಮಶಕತ್ತೀವ್ರಯಾ ಮುದಾ ।
ಆಪೂರಿತಮನೋದ್ವಾರೈರ್ಹ್ರದಿನ್ಯ ಇವ ನಿರ್ಝರೈಃ ॥

ಅನುವಾದ

ದಕ್ಷಪ್ರಜಾ ಪತಿಯು ಆನಂದ ತುಂದಿಲನಾಗಿ ಭಗವಂತನ ಚರಣಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದನು. ಝರಿಗಳ ನೀರಿನಿಂದ ನದಿಗಳು ತುಂಬಿ ಹೋಗುವಂತೆ, ಉಕ್ಕೇರಿಬಂದ ಆನಂದೋ ದ್ರೇಕದಿಂದ ಅವನ ಪ್ರತಿಯೊಂದು ಇಂದ್ರಿಯವೂ ತುಂಬಿ ಹೋಯಿತು. ಆನಂದ ಪರವಶತೆಯಿಂದ ಅವನು ಏನನ್ನು ಮಾತಾಡದಾದನು.॥41॥

(ಶ್ಲೋಕ-42)

ಮೂಲಮ್

ತಂ ತಥಾವನತಂ ಭಕ್ತಂ ಪ್ರಜಾಕಾಮಂ ಪ್ರಜಾಪತಿಮ್ ।
ಚಿತ್ತಜ್ಞಃ ಸರ್ವಭೂತಾನಾಮಿದಮಾಹ ಜನಾರ್ದನಃ ॥

ಅನುವಾದ

ಪರೀಕ್ಷಿತನೇ! ದಕ್ಷಪ್ರಜಾ ಪತಿಯು ಅತ್ಯಂತ ನಮ್ರತೆಯಿಂದ ಬಾಗಿ ಭಗವಂತನ ಎದಿರು ನಿಂತಿದ್ದನು. ಭಗವಂತನು ಎಲ್ಲರ ಹೃದಯದ ಮಾತು ಬಲ್ಲವನಾಗಿದ್ದಾನೆ. ಅವನು ದಕ್ಷಪ್ರಜಾಪತಿಯ ಭಕ್ತಿ ಮತ್ತು ಪ್ರಜಾವೃದ್ಧಿಯ ಕಾಮನೆಯನ್ನು ಅರಿತುಕೊಂಡು ಅವನಲ್ಲಿ ಇಂತೆಂದನು.॥42॥

(ಶ್ಲೋಕ-43)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಪ್ರಾಚೇತಸ ಮಹಾಭಾಗ ಸಂಸಿದ್ಧಸ್ತಪಸಾ ಭವಾನ್ ।
ಯಚ್ಛ್ರದ್ಧಯಾ ಮತ್ಪರಯಾ ಮಯಿ ಭಾವಂ ಪರಂ ಗತಃ ॥

ಅನುವಾದ

ಶ್ರೀಭಗವಂತನು ಹೇಳಿದನು — ಪರಮ ಭಾಗ್ಯಶಾಲಿಯಾದ ದಕ್ಷಪ್ರಜಾಪತಿಯೇ! ಈಗ ನಿನ್ನ ತಪಸ್ಸು ಸಿದ್ಧವಾಯಿತು. ಏಕೆಂದರೆ, ನನ್ನಲ್ಲಿ ಇಟ್ಟ ಶ್ರದ್ಧೆಯಿಂದ ನಿನ್ನ ಹೃದಯದಲ್ಲಿ ನನ್ನ ಕುರಿತು ಪರಮ ಪ್ರೇಮದ ಉದಯವಾಗಿದೆ. ॥43॥

(ಶ್ಲೋಕ-44)

ಮೂಲಮ್

ಪ್ರೀತೋಹಂ ತೇ ಪ್ರಜಾನಾಥ
ಯತ್ತೇಸ್ಯೋದ್ಬೃಂಹಣಂ ತಪಃ ।
ಮಮೈಷ ಕಾಮೋ ಭೂತಾನಾಂ
ಯದ್ ಭೂಯಾಸುರ್ವಿಭೂತಯಃ ॥

ಅನುವಾದ

ಪ್ರಜಾಪತಿಯೇ! ನೀನು ಈ ವಿಶ್ವದ ವೃದ್ಧಿಗಾಗಿ ತಪಸ್ಸನ್ನು ಆಚರಿಸಿದೆ. ಅದಕ್ಕಾಗಿ ನಾನು ನಿನ್ನ ಮೇಲೆ ಪ್ರಸನ್ನನಾಗಿರುವೆನು. ಏಕೆಂದರೆ, ಜಗತ್ತಿನ ಸಮಸ್ತ ಪ್ರಾಣಿಗಳ ಅಭಿವೃದ್ಧಿ ಹಾಗೂ ಸಮೃದ್ಧಿ ಉಂಟಾಗಲೆಂದೇ ನನ್ನ ಬಯಕೆಯೂ ಆಗಿದೆ. ॥44॥

(ಶ್ಲೋಕ-45)

ಮೂಲಮ್

ಬ್ರಹ್ಮಾ ಭವೋಭವಂತಶ್ಚ ಮನವೋ ವಿಬುಧೇಶ್ವರಾಃ ।
ವಿಭೂತಯೋ ಮಮ ಹ್ಯೇತಾ ಭೂತಾನಾಂ ಭೂತಿಹೇತವಃ ॥

ಅನುವಾದ

ಬ್ರಹ್ಮದೇವರು, ಶಂಕರನು, ನಿಮ್ಮಂತಹ ಪ್ರಜಾಪತಿಗಳು, ಸ್ವಾಯಂಭುವ ಮುಂತಾದ ಮನುಗಳು, ಇಂದ್ರಾದಿ ದೇವೇಶ್ವರರು ಇವರೆಲ್ಲರೂ ನನ್ನ ವಿಭೂತಿಗಳೇ ಆಗಿವೆ ಮತ್ತು ಎಲ್ಲರೂ ಪ್ರಾಣಿಗಳ ಅಭಿವೃದ್ಧಿ ಮಾಡುವವರಾಗಿದ್ದಾರೆ. ॥45॥

(ಶ್ಲೋಕ-46)

ಮೂಲಮ್

ತಪೋ ಮೇ ಹೃದಯಂ ಬ್ರಹ್ಮಂಸ್ತನುರ್ವಿದ್ಯಾ ಕ್ರಿಯಾಕೃತಿಃ ।
ಅಂಗಾನಿ ಕ್ರತವೋ ಜಾತಾ ಧರ್ಮ ಆತ್ಮಾಸವಃ ಸುರಾಃ ॥

ಅನುವಾದ

ಬ್ರಾಹ್ಮಣೋತ್ತಮನೇ! ತಪಸ್ಸು ನನ್ನ ಹೃದಯವಾಗಿದೆ. ವಿದ್ಯೆಯು ಶರೀರವಾಗಿದೆ. ಕರ್ಮವು ಆಕೃತಿಯಾಗಿದೆ. ಯಜ್ಞವೇ ಅಂಗಾಂಗಗಳು. ಧರ್ಮ ಮನಸ್ಸು ಮತ್ತು ದೇವತೆಗಳು ಪ್ರಾಣವಾಗಿದ್ದಾರೆ. ॥46॥

(ಶ್ಲೋಕ-47)

ಮೂಲಮ್

ಅಹಮೇವಾಸಮೇವಾಗ್ರೇ ನಾನ್ಯತ್ಕಿಂಚಾಂತರಂ ಬಹಿಃ ।
ಸಂಜ್ಞಾನಮಾತ್ರಮವ್ಯಕ್ತಂ ಪ್ರಸುಪ್ತಮಿವ ವಿಶ್ವತಃ ॥

ಅನುವಾದ

ಈ ಸೃಷ್ಟಿಯು ಇಲ್ಲದಿದ್ದಾಗ ನಿಷ್ಕ್ರಿಯ ರೂಪದಿಂದ ಕೇವಲ ನಾನೇ ಇದ್ದೆ. ಒಳಗೆ-ಹೊರಗೆ ಎಲ್ಲಿಯೂ ಏನೂ ಇರಲಿಲ್ಲ. ದ್ರಷ್ಟಾ ಇರಲೀ, ದೃಶ್ಯವಾಗಲೀ ಇರಲಿಲ್ಲ. ಕೇವಲ ಜ್ಞಾನಸ್ವರೂಪನು ಮತ್ತು ಅವ್ಯಕ್ತನು ನಾನೊಬ್ಬನೇ ಇದ್ದೆ. ಎಲ್ಲ ಕಡೆಗಳಲ್ಲಿಯೂ ಸುಷುಪ್ತಿಯೇ-ಸುಷುಪ್ತಿ ಆವರಿಸಿತ್ತು ಎಂದೇ ತಿಳಿದುಕೋ. ॥47॥

(ಶ್ಲೋಕ-48)

ಮೂಲಮ್

ಮಯ್ಯನಂತಗುಣೇನಂತೇ ಗುಣತೋ ಗುಣವಿಗ್ರಹಃ ।
ಯದಾಸೀತ್ತತ ಏವಾದ್ಯಃ ಸ್ವಯಂಭೂಃ ಸಮಭೂದಜಃ ॥

ಅನುವಾದ

ಪ್ರಿಯ ದಕ್ಷನೇ! ನಾನು ಅನಂತ ಗುಣಗಳ ಆಧಾರನು ಹಾಗೂ ಸ್ವಯಂ ಅನಂತನಾಗಿದ್ದೇನೆ. ಗುಣ ಮಯಿಮಾಯೆಯ ಕ್ಷೋಭದಿಂದ ಈ ಬ್ರಹ್ಮಾಂಡ-ಶರೀರವು ಪ್ರಕಟವಾದಾಗ ಇದರಲ್ಲಿ ಅಯೋನಿಜ ಆದಿಪುರುಷ ಬ್ರಹ್ಮನು ಉತ್ಪನ್ನನಾದನು. ॥48॥

(ಶ್ಲೋಕ-49)

ಮೂಲಮ್

ಸ ವೈ ಯದಾ ಮಹಾದೇವೋ ಮಮ ವೀರ್ಯೋಪಬೃಂಹಿತಃ ।
ಮೇನೇ ಖಿಲಮಿವಾತ್ಮಾನಮುದ್ಯತಃ ಸರ್ಗಕರ್ಮಣಿ ॥

ಅನುವಾದ

ನಾನು ಅವನಲ್ಲಿ ಶಕ್ತಿ ಮತ್ತು ಚೇತನೆಯ ಸಂಚಾರ ಮಾಡಿಸಿದಾಗ ದೇವಶಿರೋಮಣಿ ಬ್ರಹ್ಮದೇವರು ಸೃಷ್ಟಿ ಮಾಡಲು ತೊಡಗಿದನು. ಆದರೆ ಅವನು ತನ್ನನ್ನು ಸೃಷ್ಟಿ ಕಾರ್ಯದಲ್ಲಿ ಅಸಮರ್ಥನೆಂದೇ ತಿಳಿದನು. ॥49॥

(ಶ್ಲೋಕ-50)

ಮೂಲಮ್

ಅಥ ಮೇಭಿಹಿತೋ ದೇವಸ್ತಪೋತಪ್ಯತ ದಾರುಣಮ್ ।
ನವ ವಿಶ್ವಸೃಜೋ ಯುಷ್ಮಾನ್ ಯೇನಾದಾವಸೃಜದ್ವಿಭುಃ ॥

ಅನುವಾದ

ಆಗ ನಾನು ಅವನಿಗೆ ತಪಸ್ಸು ಮಾಡುವಂತೆ ಆಜ್ಞಾಪಿಸಿದೆ. ಅದರಂತೆ ಅವನು ಘೋರ ತಪಸ್ಸು ಮಾಡಿದನು ಮತ್ತು ಆ ತಪಸ್ಸಿನ ಪ್ರಭಾವದಿಂದ ಮೊಟ್ಟ ಮೊದಲಿಗೆ ಒಂಭತ್ತು ಮಂದಿ ಪ್ರಜಾಪತಿಗಳಾದ ನಿಮ್ಮನ್ನು ಸೃಷ್ಟಿಸಿದನು. ॥50॥

(ಶ್ಲೋಕ-51)

ಮೂಲಮ್

ಏಷಾ ಪಂಚಜನಸ್ಯಾಂಗ ದುಹಿತಾ ವೈ ಪ್ರಜಾಪತೇಃ ।
ಅಸಿಕ್ನೀ ನಾಮ ಪತ್ನೀತ್ವೇ ಪ್ರಜೇಶ ಪ್ರತಿಗೃಹ್ಯತಾಮ್ ॥

ಅನುವಾದ

ಪ್ರಿಯ ದಕ್ಷನೇ! ನೋಡು! ಇವಳು ಪಂಚಜನ ಪ್ರಜಾಪತಿಯ ಕನ್ಯೆಯಾದ ಅಸಿಕ್ನಿಯು. ಇವಳನ್ನು ನೀನು ಧರ್ಮಪತ್ನಿಯಾಗಿ ಸ್ವೀಕರಿಸು. ॥51॥

(ಶ್ಲೋಕ-52)

ಮೂಲಮ್

ಮಿಥುನವ್ಯವಾಯಧರ್ಮಸ್ತ್ವಂ ಪ್ರಜಾಸರ್ಗಮಿಮಂ ಪುನಃ ।
ಮಿಥುನವ್ಯವಾಯಧರ್ಮಿಣ್ಯಾಂ ಭೂರಿಶೋ ಭಾವಯಿಷ್ಯಸಿ ॥

ಅನುವಾದ

ಇನ್ನು ನೀನು ಗೃಹಸ್ಥರಿಗೆ ಯೋಗ್ಯವಾದ ಸ್ತ್ರೀ ಸಹವಾಸ ಧರ್ಮವನ್ನು ಸ್ವೀಕರಿಸು. ಈ ಅಸಿಕ್ನಿಯೂ ಅದೇ ಧರ್ಮವನ್ನು ಸ್ವೀಕರಿಸುವಳು. ಆಗ ನೀನು ಇವಳಿಂದ ಅನೇಕ ಪ್ರಜೆಗಳನ್ನು ಉತ್ಪನ್ನ ಮಾಡಬಲ್ಲೆ. ॥52॥

(ಶ್ಲೋಕ-53)

ಮೂಲಮ್

ತ್ವತ್ತೋಧಸ್ತಾತ್ಪ್ರಜಾಃ ಸರ್ವಾ ಮಿಥುನೀಭೂಯ ಮಾಯಯಾ ।
ಮದೀಯಯಾ ಭವಿಷ್ಯಂತಿ ಹರಿಷ್ಯಂತಿ ಚ ಮೇ ಬಲಿಮ್ ॥

ಅನುವಾದ

ಪ್ರಜಾಪತಿಯೇ! ಇಂದಿನ ತನಕವಾದರೋ ಮಾನಸೀ ಸೃಷ್ಟಿಯಾಗುತ್ತಿತ್ತು. ಆದರೆ ಇನ್ನು ನಿನ್ನ ಬಳಿಕ ಎಲ್ಲ ಪ್ರಜೆಯು ನನ್ನ ಮಾಯೆಯಿಂದ ಸ್ತ್ರೀ-ಪುರುಷ ಸಂಯೋಗದಿಂದಲೇ ಉತ್ಪನ್ನರಾಗಿ, ನನ್ನ ಸೇವೆಯಲ್ಲಿ ತತ್ಪರರಾಗಿರುವರು.॥53॥

(ಶ್ಲೋಕ-54)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುಕ್ತ್ವಾ ಮಿಷತಸ್ತಸ್ಯ ಭಗವಾನ್ವಿಶ್ವಭಾವನಃ ।
ಸ್ವಪ್ನೋಪಲಬ್ಧಾರ್ಥ ಇವ ತತ್ರೈವಾಂತರ್ದಧೇ ಹರಿಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ವಿಶ್ವಕ್ಕೆಲ್ಲಾ ಜೀವನಪ್ರದನಾದ ಭಗವಾನ್ ಶ್ರೀಹರಿಯು ಹೀಗೆ ಹೇಳಿ ದಕ್ಷನ ಮುಂದೆಯೇ ಸ್ವಪ್ನದಲ್ಲಿ ನೋಡಿದ ವಸ್ತು ಸ್ವಪ್ನವು ಮುರಿದಾಗ ಕಣ್ಮರೆಯಾಗುವಂತೆ ಅಂತರ್ಧಾನ ಹೊಂದಿದನು. ॥54॥

ಅನುವಾದ (ಸಮಾಪ್ತಿಃ)

ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಚತುರ್ಥೋಽಧ್ಯಾಯಃ ॥4॥