೦೩

[ಮೂರನೆಯ ಅಧ್ಯಾಯ]

ಭಾಗಸೂಚನಾ

ಯಮ ಮತ್ತು ಯಮದೂತರ ಸಂವಾದ

(ಶ್ಲೋಕ-1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ನಿಶಮ್ಯ ದೇವಃ ಸ್ವಭಟೋಪವರ್ಣಿತಂ
ಪ್ರತ್ಯಾಹ ಕಿಂ ತಾನ್ಪ್ರತಿ ಧರ್ಮರಾಜಃ ।
ಏವಂ ಹತಾಜ್ಞೋ ವಿಹತಾನ್ಮುರಾರೇ-
ರ್ನೈರ್ದೇಶಿಕೈರ್ಯಸ್ಯ ವಶೇ ಜನೋಯಮ್ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹರ್ಷಿಗಳೇ! ದೇವ ದೇವನಾದ ಯಮಧರ್ಮರಾಜನ ವಶದಲ್ಲಿ ಎಲ್ಲ ಜೀವರು ಇರುವರು ಮತ್ತು ಭಗವಂತನ ಪಾರ್ಷದರು ಅವನ ಆಜ್ಞೆ ಯನ್ನು ಭಂಗಗೊಳಿಸಿದರು. ಅವನ ದೂತರನ್ನು ಅಪಮಾನ ಮಾಡಿದರು. ಯಮದೂತರು ಯಮಪುರಕ್ಕೆ ಹೋಗಿ ಅವನಲ್ಲಿ ಅಜಾಮಿಳನ ವೃತ್ತಾಂತವನ್ನು ಅರುಹಿದಾಗ ಎಲ್ಲ ವನ್ನು ಕೇಳಿ ಅವನು ತನ್ನ ದೂತರಿಗೆ ಏನು ಹೇಳಿದನು. ॥1॥

(ಶ್ಲೋಕ-2)

ಮೂಲಮ್

ಯಮಸ್ಯ ದೇವಸ್ಯ ನ ದಂಡ ಭಂಗಃ
ಕುತಶ್ಚನರ್ಷೇ ಶ್ರುತಪೂರ್ವ ಆಸೀತ್ ।
ಏತನ್ಮುನೇ ವೃಶ್ಚತಿ ಲೋಕಸಂಶಯಂ
ನ ಹಿ ತ್ವದನ್ಯ ಇತಿ ಮೇ ವಿನಿಶ್ಚಿತಮ್ ॥

ಅನುವಾದ

ಋಷಿವರ್ಯರೇ! ಯಾರು ಎಂದಿಗೂ ಯಾವುದೇ ಕಾರಣದಿಂದ ಧರ್ಮರಾಜನ ಶಾಸನವನ್ನು ಉಲ್ಲಂಘಿಸಿದ ಮಾತನ್ನು ನಾನು ಮೊದಲು ಎಂದೂ ಕೇಳಿರಲಿಲ್ಲ. ಪೂಜ್ಯರೇ! ಈ ವಿಷಯದಲ್ಲಿ ಜನರು ತುಂಬಾ ಸಂದೇಹ ಪಡುವರು. ಅದನ್ನು ನಿವಾರಿಸುವವರು ನೀವಲ್ಲದೆ ಬೇರೆ ಯಾರೂ ಇರಲಾರದೆಂದೇ ನನ್ನ ನಿಶ್ಚಯವು. ॥2॥

(ಶ್ಲೋಕ-3)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಭಗವತ್ಪುರುಷೈ ರಾಜನ್ ಯಾಮ್ಯಾಃ ಪ್ರತಿಹತೋದ್ಯಮಾಃ ।
ಪತಿಂ ವಿಜ್ಞಾಪಯಾಮಾಸುರ್ಯಮಂ ಸಂಯಮನೀಪತಿಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಭಗವಂತನ ಪಾರ್ಷದರು ಯಮದೂತರ ಪ್ರಯತ್ನವನ್ನು ವಿಫಲಗೊಳಿಸಿದಾಗ ಅವರು ಸಂಯಮಿನಿಪುರದೊಡೆಯನೂ, ತಮ್ಮ ಶಾಸಕನೂ ಆದ ಯಮರಾಜನ ಬಳಿಗೆ ಹೋಗಿ ಹೀಗೆ ನಿವೇದಿಸಿಕೊಂಡರು. ॥3॥

(ಶ್ಲೋಕ-4)

ಮೂಲಮ್ (ವಾಚನಮ್)

ಯಮದೂತಾ ಊಚುಃ

ಮೂಲಮ್

ಕತಿ ಸಂತೀಹ ಶಾಸ್ತಾರೋ ಜೀವಲೋಕಸ್ಯ ವೈ ಪ್ರಭೋ ।
ತ್ರೈವಿಧ್ಯಂ ಕುರ್ವತಃ ಕರ್ಮ ಲಾಭಿವ್ಯಕ್ತಿಹೇತವಃ ॥

ಅನುವಾದ

ಯಮದೂತರು ಹೇಳಿದರು — ಸ್ವಾಮಿ! ಪ್ರಪಂಚದ ಜೀವರು ಪಾಪ, ಪುಣ್ಯ ಅಥವಾ ಎರಡರಿಂದಲೂ ಮಿಶ್ರ ವಾದ ಮೂರು ರೀತಿಯ ಕರ್ಮಗಳನ್ನು ಮಾಡುತ್ತಿದ್ದಾರೆ. ಈ ಜೀವಿಗಳಿಗೆ ಆ ಕರ್ಮಗಳ ಫಲವನ್ನು ಕೊಡುವ ಶಾಸಕರು ಪ್ರಪಂಚದಲ್ಲಿ ಎಷ್ಟು ಜನರಿದ್ದಾರೆ? ॥4॥

(ಶ್ಲೋಕ-5)

ಮೂಲಮ್

ಯದಿ ಸ್ಯುರ್ಬಹವೋ ಲೋಕೇ ಶಾಸ್ತಾರೋ ದಂಡಧಾರಿಣಃ ।
ಕಸ್ಯ ಸ್ಯಾತಾಂ ನ ವಾ ಕಸ್ಯ ಮೃತ್ಯುಶ್ಚಾಮೃತಮೇವ ವಾ ॥

ಅನುವಾದ

ಜಗತ್ತಿನಲ್ಲಿ ದಂಡನೆ ಕೊಡುವವರು ಬಹಳಷ್ಟು ಶಾಸಕರು ಇರುವುದಾದರೆ ಯಾರಿಗೆ ಸುಖ ಸಿಗುವುದು, ಯಾರಿಗೆ ದುಃಖ ಇದರ ವ್ಯವಸ್ಥೆ ಒಂದೇ ರೀತಿಯಾಗಿರಲಾರದು. ॥5॥

(ಶ್ಲೋಕ-6)

ಮೂಲಮ್

ಕಿಂತು ಶಾಸ್ತೃಬಹುತ್ವೇ ಸ್ಯಾದ್ಬಹೂನಾಮಿಹ ಕರ್ಮಿಣಾಮ್ ।
ಶಾಸ್ತೃತ್ವಮುಪಚಾರೋ ಹಿ ಯಥಾ ಮಂಡಲವರ್ತಿನಾಮ್ ॥

ಅನುವಾದ

ಪ್ರಪಂಚದಲ್ಲಿ ಕರ್ಮಮಾಡುವವರು ಅನೇಕರಿರುವ ಕಾರಣ, ಅವರ ಶಾಸಕರೂ ಅನೇಕರಾದರೆ ಆ ಶಾಸಕರ ಶಾಸನವು ಹೆಸರಿಗಷ್ಟೇ ಆಗುವುದು. ಒಬ್ಬ ಸಾಮ್ರಾಟನ ಅಧೀನದಲ್ಲಿ ಬಹಳಷ್ಟು ಜನರು ಹೆಸರಿಗಷ್ಟೇ ಸಾಮಂತರಿರುವಂತೆಯೇ ಆದೀತು. ॥6॥

(ಶ್ಲೋಕ-7)

ಮೂಲಮ್

ಅತಸ್ತ್ವಮೇಕೋ ಭೂತಾನಾಂ ಸೇಶ್ವರಾಣಾಮಧೀಶ್ವರಃ ।
ಶಾಸ್ತಾ ದಂಡಧರೋ ನೃಣಾಂ ಶುಭಾಶುಭವಿವೇಚನಃ ॥

ಅನುವಾದ

ಆದರೆ ನೀವೊಬ್ಬರೇ ಸಮಸ್ತ ಪ್ರಾಣಿಗಳಿಗೆ ಮತ್ತು ಅವರ ಒಡೆಯರಿಗೆ ಅಧೀಶ್ವರರಾಗಿರುವಿರಿ ಎಂದು ನಾವು ತಿಳಿಯುತ್ತೇವೆ. ನೀವೇ ಮನುಷ್ಯರ ಪಾಪ ಮತ್ತು ಪುಣ್ಯಗಳ ನಿರ್ಣಾಯಕ ದಂಡವನ್ನು ಕೊಡುವವರು ಹಾಗೂ ಶಾಸಕರೂ ಆಗಿರುವಿರಿ. ॥7॥

(ಶ್ಲೋಕ-8)

ಮೂಲಮ್

ತಸ್ಯ ತೇ ವಿಹತೋ ದಂಡೋ ನ ಲೋಕೇ ವರ್ತತೇಧುನಾ ।
ಚತುರ್ಭಿರದ್ಭುತೈಃ ಸಿದ್ಧೈರಾಜ್ಞಾ ತೇ ವಿಪ್ರಲಂಭಿತಾ ॥

ಅನುವಾದ

ಪ್ರಭುಗಳೇ! ಪ್ರಪಂಚದಲ್ಲಿ ಇಂದಿನವರೆಗೆ ಎಲ್ಲಿಯೂ ತಾವು ನಿಯಮಿಸಿದ ದಂಡನೆಯನ್ನು ಯಾರೂ ಅವಹೇಳನೆ ಮಾಡಿರಲಿಲ್ಲ. ಆದರೆ ಈಗ ನಾಲ್ವರು ಅದ್ಭುತ ಸಿದ್ಧರು ನಿಮ್ಮ ಆಜ್ಞೆಯನ್ನು ಉಲ್ಲಂಘಿಸಿರುವರು. ॥8॥

(ಶ್ಲೋಕ-9)

ಮೂಲಮ್

ನೀಯಮಾನಂ ತವಾದೇಶಾದಸ್ಮಾಭಿರ್ಯಾತನಾಗೃಹಾನ್ ।
ವ್ಯಮೋಚಯನ್ಪಾತಕಿನಂ ಛಿತ್ತ್ವಾ ಪಾಶಾನ್ ಪ್ರಸಹ್ಯ ತೇ ॥

ಅನುವಾದ

ಸ್ವಾಮಿ! ನಿಮ್ಮ ಅಪ್ಪಣೆಯಂತೆ ನಾವು ಒಬ್ಬ ಪಾಪಿಯನ್ನು ಯಾತನಾಗೃಹ ವಾದ ನರಕಕ್ಕೆ ಕೊಂಡುಹೋಗುತ್ತಿದ್ದೆವು. ಆದರೆ ಅವರು ಬಲವಂತವಾಗಿ ನಿಮ್ಮ ಪಾಶವನ್ನು ತುಂಡರಿಸಿ ಅವನನ್ನು ಬಿಡಿಸಿದರು. ॥9॥

(ಶ್ಲೋಕ-10)

ಮೂಲಮ್

ತಾಂಸ್ತೇ ವೇದಿತುಮಿಚ್ಛಾಮೋ
ಯದಿ ನೋ ಮನ್ಯಸೇ ಕ್ಷಮಮ್ ।
ನಾರಾಯಣೇತ್ಯಭಿಹಿತೇ
ಮಾ ಭೈರಿತ್ಯಾಯಯುರ್ದ್ರುತಮ್ ॥

ಅನುವಾದ

ಇದರ ರಹಸ್ಯವನ್ನು ನಾವು ನಿಮ್ಮಿಂದ ತಿಳಿಯಲು ಇಚ್ಛಿಸುವೆವು. ನೀವು ನಮ್ಮನ್ನು ಕೇಳುವ ಅಧಿಕಾರಿಗಳೆಂದು ತಿಳಿದರೆ ಹೇಳಿರಿ. ಪ್ರಭೋ! ಅಜಾಮಿಳನ ಬಾಯಿಂದ ‘ನಾರಾಯಣ’ ಎಂಬ ಶಬ್ದ ಹೊರಡುತ್ತಲೇ ಅತ್ತಕಡೆಯಿಂದ ಅವರು ‘ಹೆದರಬೇಡ! ಹೆದರ ಬೇಡ!’ ಎಂದು ಹೇಳುತ್ತಾ ಅಲ್ಲಿಗೆ ಬಂದುಬಿಟ್ಟರು. ಎಂತಹ ಆಶ್ಚರ್ಯವಿದು! ॥10॥

(ಶ್ಲೋಕ-11)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ದೇವಃ ಸ ಆಪೃಷ್ಟಃ ಪ್ರಜಾಸಂಯಮನೋ ಯಮಃ ।
ಪ್ರೀತಃ ಸ್ವದೂತಾನ್ ಪ್ರತ್ಯಾಹ ಸ್ಮರನ್ಪಾದಾಂಬುಜಂ ಹರೇಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ದೂತರು ಹೀಗೆ ಪ್ರಶ್ನಿಸಿದಾಗ ದೇವಶಿರೋಮಣಿ ಪ್ರಜಾಶಾಸಕನಾದ ಭಗವಾನ್ ಯಮಧರ್ಮನು ಪ್ರಸನ್ನನಾಗಿ ಶ್ರೀಹರಿಯ ಚರಣಕಮಲಗಳನ್ನು ಸ್ಮರಿಸುತ್ತಾ ಅವರಿಗೆ ಹೀಗೆಂದನು ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ಯಮ ಉವಾಚ

ಮೂಲಮ್

ಪರೋ ಮದನ್ಯೋ ಜಗತಸ್ತಸ್ಥುಷಶ್ಚ
ಓತಂ ಪ್ರೋತಂ ಪಟವದ್ಯತ್ರ ವಿಶ್ವಮ್ ।
ಯದಂಶತೋಸ್ಯ ಸ್ಥಿತಿಜನ್ಮನಾಶಾ
ನಸ್ಯೋತವದ್ಯಸ್ಯ ವಶೇ ಚ ಲೋಕಃ ॥

ಅನುವಾದ

ಯಮಧರ್ಮರಾಜನು ಹೇಳುತ್ತಾನೆ — ಎಲೈ ದೂತರೇ! ಈ ಚರಾಚರ ಜಗತ್ತಿಗೆಲ್ಲಾ ಮಹಾಪ್ರಭುವಾದವನು ನನಗಿಂತಲೂ ಬೇರೊಬ್ಬನಿದ್ದಾನೆ. ಅವನಲ್ಲಿಯೇ ಈ ಇಡೀ ಜಗತ್ತು ವಸ್ತ್ರದಲ್ಲಿ ನೂಲು ಹಾಸು-ಹೊಕ್ಕಾಗಿರುವಂತೆ ಪೋಣಿಸಲ್ಪಟ್ಟಿದೆ. ಅವನ ಅಂಶರೇ ಆದ ಬ್ರಹ್ಮಾ, ವಿಷ್ಣು, ಮಹೇಶ್ವರ ಇವರು ಈ ಜಗತ್ತಿನ ಉತ್ಪತ್ತಿ, ಸ್ಥಿತಿ, ಪ್ರಳಯವನ್ನು ಮಾಡುತ್ತಾರೆ. ಅವನೇ ಈ ಇಡೀ ಜಗತ್ತನ್ನು ಮೂಗುದಾರ ಹಾಕಿದ ಎತ್ತಿನಂತೆ ತನ್ನ ಅಧೀನದಲ್ಲಿರಿಸಿ ಕೊಂಡಿರುವನು. ॥12॥

(ಶ್ಲೋಕ-13)

ಮೂಲಮ್

ಯೋ ನಾಮಭಿರ್ವಾಚಿ ಜನಾನ್ನಿಜಾಯಾಂ
ಬಧ್ನಾತಿ ತಂತ್ಯಾಮಿವ ದಾಮಭಿರ್ಗಾಃ ।
ಯಸ್ಮೈ ಬಲಿಂ ತ ಇಮೇ ನಾಮಕರ್ಮ-
ನಿಬಂಧಬದ್ಧಾಶ್ಚಕಿತಾ ವಹಂತಿ ॥

ಅನುವಾದ

ನನ್ನ ಪ್ರೀತಿಯ ದೂತರೇ! ರೈತನು ತನ್ನ ಎತ್ತುಗಳನ್ನು ಮೊದಲು ಸಣ್ಣ-ಸಣ್ಣ ಹಗ್ಗಗಳಲ್ಲಿ ಕಟ್ಟಿ, ಆ ಹಗ್ಗಗಳನ್ನು ಒಂದು ದೊಡ್ಡ ಹಗ್ಗಕ್ಕೆ ಕಟ್ಟುವಂತೆಯೇ ಜಗದೀಶನಾದ ಭಗವಂತನೂ ಕೂಡ ಬ್ರಾಹ್ಮಣಾದಿ ವರ್ಣಗಳು, ಬ್ರಹ್ಮ ಚರ್ಯಾದಿ ಆಶ್ರಮಗಳೆಂಬ ಸಣ್ಣ-ಸಣ್ಣ ನಾಮ ಗಳೆಂಬ ಹಗ್ಗಗಳಿಂದ ಕಟ್ಟಿ ಮತ್ತೆ ಎಲ್ಲ ನಾಮಗಳನ್ನು ವೇದ ರೂಪವಾದ ದೊಡ್ಡ ಹಗ್ಗದಲ್ಲಿ ಕಟ್ಟಿ ಇಟ್ಟಿರುವನು. ಹೀಗೆ ಎಲ್ಲ ಜೀವರು ನಾಮ ಮತ್ತು ಕರ್ಮರೂಪವಾದ ಬಂಧನದಲ್ಲಿ ಬಿಗಿಯಲ್ಪಟ್ಟು ,ಭಯಗೊಂಡು, ಅವನಿಗೆ ತಮ್ಮ ಸರ್ವಸ್ವ ವನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ॥13॥

(ಶ್ಲೋಕ-14)

ಮೂಲಮ್

ಅಹಂ ಮಹೇಂದ್ರೋ ನಿರ್ಋತಿಃ ಪ್ರಚೇತಾಃ
ಸೋಮೋಗ್ನಿರೀಶಃ ಪವನೋರ್ಕೋ ವಿರಿಂಚಃ ।
ಆದಿತ್ಯವಿಶ್ವೇ ವಸವೋಥ ಸಾಧ್ಯಾ
ಮರುದ್ಗಣಾ ರುದ್ರಗಣಾಃ ಸಸಿದ್ಧಾಃ ॥

(ಶ್ಲೋಕ-15)

ಮೂಲಮ್

ಅನ್ಯೇ ಚ ಯೇ ವಿಶ್ವಸೃಜೋಮರೇಶಾ
ಭೃಗ್ವಾದಯೋಸ್ಪೃಷ್ಟರಜಸ್ತಮಸ್ಕಾಃ ।
ಯಸ್ಯೇಹಿತಂ ನ ವಿದುಃ ಸ್ಪೃಷ್ಟಮಾಯಾಃ
ಸತ್ತ್ವಪ್ರಧಾನಾ ಅಪಿ ಕಿಂ ತತೋನ್ಯೇ ॥

ಅನುವಾದ

ದೂತರೇ! ನಾನು, ಇಂದ್ರ, ನಿರ್ಋತಿ, ವರುಣ, ಚಂದ್ರ, ಅಗ್ನಿ, ಶಂಕರ, ವಾಯು, ಸೂರ್ಯ, ಬ್ರಹ್ಮಾ, ಹನ್ನೆರಡು ಆದಿತ್ಯರು, ವಿಶ್ವೇ ದೇವತೆಗಳು, ಎಂಟು ವಸುಗಳು, ಸಾಧ್ಯರು, ನಲವತ್ತೊಂಭತ್ತು ಮರುದ್ದೇವತೆಗಳು, ಸಿದ್ಧರು, ಹನ್ನೊಂದು ರುದ್ರರು, ರಜೋ ಗುಣ ಹಾಗೂ ತಮೋಗುಣಗಳಿಂದ ರಹಿತರಾದ ಭೃಗುವೇ ಮುಂತಾದ ಪ್ರಜಾಪತಿಗಳು, ದೊಡ್ಡ-ದೊಡ್ಡ ದೇವತೆಗಳು ಹೀಗೆ ಎಲ್ಲರೂ ಸತ್ತ್ವಪ್ರಧಾನರಾಗಿದ್ದರೂ ಅವನ ಮಾಯೆಗೆ ಅಧೀನರಾಗಿದ್ದಾರೆ. ಭಗವಂತನು ಎಂದು ಏನು ಮಾಡಲು ಬಯಸುವನೋ ಇದನ್ನು ತಿಳಿಯಲಾರರು. ಹಾಗಿರುವಾಗ ಬೇರೆಯವರ ಮಾತಾದರೂ ಏನಿದೆ? ॥14-15॥

(ಶ್ಲೋಕ-16)

ಮೂಲಮ್

ಯಂ ವೈ ನ ಗೋಭಿರ್ಮನಸಾಸುಭಿರ್ವಾ
ಹೃದಾ ಗಿರಾ ವಾಸುಭೃತೋ ವಿಚಕ್ಷತೇ ।
ಆತ್ಮಾನಮಂತರ್ಹೃದಿ ಸಂತಮಾತ್ಮನಾಂ
ಚಕ್ಷುರ್ಯಥೈ ವಾಕೃತಯಸ್ತತಃ ಪರಮ್ ॥

ಅನುವಾದ

ದೂತರೇ! ಮಡಿಕೆ, ಕುಡಿಕೆ, ಬಟ್ಟೆಗಳೇ ಮುಂತಾದ ರೂಪ ವುಳ್ಳ ಪದಾರ್ಥಗಳು ತನ್ನ ಪ್ರಕಾಶಕವಾದ ಕಣ್ಣನ್ನು ನೋಡಲಾರವೋ ಹಾಗೆಯೇ ಅಂತಃಕರಣದಲ್ಲಿ ತನಗೆ ಸಾಕ್ಷಿ ರೂಪ ನಾಗಿರುವ ಪರಮಾತ್ಮನನ್ನು ಯಾವುದೇ ಪ್ರಾಣಿಯು ಇಂದ್ರಿಯ, ಮನ, ಪ್ರಾಣ, ಹೃದಯ ಅಥವಾ ವಾಣಿ ಮುಂತಾದಯಾವುದೇ ಸಾಧನೆಯಿಂದ ತಿಳಿಯಲಾರರು. ॥16॥

(ಶ್ಲೋಕ-17)

ಮೂಲಮ್

ತಸ್ಯಾತ್ಮತಂತ್ರಸ್ಯ ಹರೇರಧೀಶಿತುಃ
ಪರಸ್ಯ ಮಾಯಾಧಿಪತೇರ್ಮಹಾತ್ಮನಃ ।
ಪ್ರಾಯೇಣ ದೂತಾ ಇಹ ವೈ ಮನೋಹರಾ-
ಶ್ಚರಂತಿ ತದ್ರೂಪಗುಣಸ್ವಭಾವಾಃ ॥

ಅನುವಾದ

ಆ ಪ್ರಭುವು ಎಲ್ಲರ ಸ್ವಾಮಿ ಹಾಗೂ ಸ್ವತಃ ಪರಮ ಸ್ವತಂತ್ರನಾಗಿದ್ದಾನೆ. ಅದೇ ಮಾಯಾಪತಿ ಪುರಷೋತ್ತಮನ ದೂತರು ಅವನಂತೆಯೇ ಪರಮ ಮನೋಹರ ರೂಪ, ಗುಣ, ಮತ್ತು ಸ್ವಭಾವದಿಂದ ಸಂಪನ್ನರಾಗಿ ಈ ಲೋಕದಲ್ಲಿ ಸಾಮಾನ್ಯವಾಗಿ ವಿಚರಿಸುತ್ತಿರುವರು. ॥17॥

(ಶ್ಲೋಕ-18)

ಮೂಲಮ್

ಭೂತಾನಿ ವಿಷ್ಣೋಃ ಸುರಪೂಜಿತಾನಿ
ದುರ್ದರ್ಶಲಿಂಗಾನಿ ಮಹಾದ್ಭುತಾನಿ ।
ರಕ್ಷಂತಿ ತದ್ಭಕ್ತಿಮತಃ ಪರೇಭ್ಯೋ
ಮತ್ತಶ್ಚ ಮರ್ತ್ಯಾನಥ ಸರ್ವತಶ್ಚ ॥

ಅನುವಾದ

ಭಗವಾನ್ ವಿಷ್ಣುವಿನ ಸುರಪೂಜಿತ ಹಾಗೂ ಪರಮ ಅಲೌಕಿಕ ಪಾರ್ಷ ದರ ದರ್ಶನವೂ ತುಂಬಾ ದುರ್ಲಭವಾಗಿದೆ. ಅವರು ಭಗವಂತನ ಭಕ್ತರನ್ನು ಅವರ ಶತ್ರುಗಳಿಂದ, ನನ್ನಿಂದ ಮತ್ತು ಅಗ್ನಿಯೇ ಮುಂತಾದ ಎಲ್ಲ ಆಪತ್ತುಗಳಿಂದ ಸದಾಕಾಲ ಸುರಕ್ಷಿತವಾಗಿಡುತ್ತಾರೆ. ॥18॥

(ಶ್ಲೋಕ-19)

ಮೂಲಮ್

ಧರ್ಮಂ ತು ಸಾಕ್ಷಾದ್ಭಗವತ್ಪ್ರಣೀತಂ
ನ ವೈ ವಿದುರ್ಋಷಯೋ ನಾಪಿ ದೇವಾಃ ।
ನ ಸಿದ್ಧಮುಖ್ಯಾ ಅಸುರಾ ಮನುಷ್ಯಾಃ
ಕುತಶ್ಚ ವಿದ್ಯಾಧರಚಾರಣಾದಯಃ ॥

ಅನುವಾದ

ಸಾಕ್ಷಾತ್ ಭಗವಂತನೇ ನಿರ್ಮಾಣಮಾಡಿದ ಧರ್ಮದ ಮರ್ಯಾದೆಯನ್ನು ಋಷಿಗಳಾಗಲೀ, ದೇವತೆಗಳಾಗಲೀ, ಸಿದ್ಧರಾಗಲೀ ಯಾರೂ ಅರಿಯಲಾರರು. ಹೀಗಿರುವಾಗ ಮನುಷ್ಯರು, ವಿದ್ಯಾಧರರೂ, ಚಾರಣರು ಮತ್ತು ಅಸುರರೇ ಮುಂತಾದವರು ಹೇಗೆ ಅರಿಯಬಲ್ಲರು? ॥19॥

(ಶ್ಲೋಕ-20)

ಮೂಲಮ್

ಸ್ವಯಂಭೂರ್ನಾರದಃ ಶಂಭುಃ ಕುಮಾರಃ ಕಪಿಲೋ ಮನುಃ ।
ಪ್ರಹ್ರಾದೋ ಜನಕೋ ಭೀಷ್ಮೋ ಬಲಿರ್ವೈಯಾಸಕಿರ್ವಯಮ್ ॥

(ಶ್ಲೋಕ-21)

ಮೂಲಮ್

ದ್ವಾದಶೈತೇ ವಿಜಾನೀಮೋ ಧರ್ಮಂ ಭಾಗವತಂ ಭಟಾಃ ।
ಗುಹ್ಯಂ ವಿಶುದ್ಧಂ ದುರ್ಬೋಧಂ ಯಂ ಜ್ಞಾತ್ವಾಮೃತಮಶ್ನುತೇ ॥

ಅನುವಾದ

ಭಗವಂತನಿಂದ ನಿರ್ಮಿತವಾದ ಭಾಗವತ ಧರ್ಮವು ಪರಮಶುದ್ಧವೂ, ಅತ್ಯಂತ ಗೋಪ್ಯವೂ ಆಗಿದೆ. ಅದನ್ನು ತಿಳಿಯುವುದು ಅತಿಕಷ್ಟವಾಗಿದೆ. ಅದನ್ನು ತಿಳಿದವನು ಭಗವತ್ಸ್ವರೂಪವನ್ನು ಹೊಂದುವನು. ದೂತರೇ! ಭಾಗವತ ಧರ್ಮದ ರಹಸ್ಯವನ್ನು ಬ್ರಹ್ಮದೇವರು, ದೇವರ್ಷಿ ನಾರದರು, ಭಗವಾನ್ ಶಂಕರನು, ಸನತ್ಕುಮಾರನು, ಕಪಿಲದೇವರು, ಸ್ವಾಯಂಭುವ ಮನು, ಪ್ರಹ್ಲಾದನು, ಜನಕ ಮಹಾರಾಜನು, ಭೀಷ್ಮಪಿತಾಮಹರು, ಬಲಿಚಕ್ರ ವರ್ತಿಯೂ, ಶುಕಮಹರ್ಷಿಗಳು ಮತ್ತು ಯಮಧರ್ಮನಾದ ನಾನು ಹೀಗೆ ಈ ಹನ್ನೆರಡು ಮಂದಿ ಮಾತ್ರವೇ ತಿಳಿದಿರುವೆವು. ॥20-21॥

(ಶ್ಲೋಕ-22)

ಮೂಲಮ್

ಏತಾವಾನೇವ ಲೋಕೇಸ್ಮಿನ್ ಪುಂಸಾಂ ಧರ್ಮಃ ಪರಃ ಸ್ಮೃತಃ ।
ಭಕ್ತಿಯೋಗೋ ಭಗವತಿ ತನ್ನಾಮಗ್ರಹಣಾದಿಭಿಃ ॥

ಅನುವಾದ

ಈ ಜಗತ್ತಿನಲ್ಲಿ ಜೀವರಿ ಗಾಗಿ ನಾಮ-ಕೀರ್ತನಾದಿ ಉಪಾಯಗಳಿಂದ ಭಗವಂತನ ಚರಣಗಳಲ್ಲಿ ಭಕ್ತಿಭಾವವನ್ನು ಪಡೆದುಕೊಳ್ಳುವುದೇ ಎಲ್ಲಕ್ಕಿಂತ ದೊಡ್ಡ ಕರ್ತವ್ಯವೂ, ಪರಮಧರ್ಮವೂ ಆಗಿದೆ. ॥22॥

(ಶ್ಲೋಕ-23)

ಮೂಲಮ್

ನಾಮೋಚ್ಚಾರಣಮಾಹಾತ್ಮ್ಯಂ ಹರೇಃ ಪಶ್ಯತ ಪುತ್ರಕಾಃ ।
ಅಜಾಮಿಲೋಪಿ ಯೇನೈವ ಮೃತ್ಯುಪಾಶಾದಮುಚ್ಯತ ॥

ಅನುವಾದ

ಪ್ರಿಯದೂತರೇ! ಭಗವಂತನ ನಾಮೋಚ್ಚಾರಣೆಯ ಮಹಿಮೆಯನ್ನಾದರೋ ನೋಡಿರಿ! ಅಜಾಮಿಳನಂತಹ ಪಾಪಿಯು ಒಂದು ಬಾರಿ ನಾಮೋಚ್ಚಾರಣೆ ಮಾಡಿದಷ್ಟ ರಿಂದಲೇ ಮೃತ್ಯುಪಾಶದಿಂದ ಬಿಡುಗಡೆ ಹೊಂದಿದನು. ॥23॥

(ಶ್ಲೋಕ-24)

ಮೂಲಮ್

ಏತಾವತಾಲಮಘನಿರ್ಹರಣಾಯ ಪುಂಸಾಂ
ಸಂಕೀರ್ತನಂ ಭಗವತೋ ಗುಣಕರ್ಮನಾಮ್ನಾಮ್ ।
ವಿಕ್ರುಶ್ಯ ಪುತ್ರಮಘವಾನ್ಯದಜಾಮಿಲೋಪಿ
ನಾರಾಯಣೇತಿ ಮ್ರಿಯಮಾಣ ಇಯಾಯ ಮುಕ್ತಿಮ್ ॥

ಅನುವಾದ

ಭಗವಂತನ ಗುಣ, ಲೀಲೆ ಮತ್ತು ನಾಮಗಳ ಚೆನ್ನಾದ ಕೀರ್ತನೆಯು ಮನುಷ್ಯರ ಪಾಪಗಳನ್ನು ಪೂರ್ಣ ವಾಗಿ ನಾಶಮಾಡುವುದು ಇದೇನೋ ಅದರ ಬಹುದೊಡ್ಡ ಫಲವಲ್ಲ. ಏಕೆಂದರೆ, ಅತ್ಯಂತ ಪಾಪಿಯಾದ ಅಜಾಮಿಳನು ಮರಣಕಾಲದಲ್ಲಿ ಚಂಚಲಚಿತ್ತದಿಂದ ತನ್ನ ಮಗನ ಹೆಸರು ‘ನಾರಾಯಣ’ ಎಂದು ಉಚ್ಚರಿಸಿದನು. ಈ ನಾಮಾಭಾಸ ಮಾತ್ರದಿಂದಲೇ ಅವನ ಎಲ್ಲ ಪಾಪಗಳು ಕ್ಷೀಣಿಸಿ, ಆತನು ಮೋಕ್ಷವನ್ನೇ ಪಡೆದುಕೊಂಡನು. ॥24॥

(ಶ್ಲೋಕ-25)

ಮೂಲಮ್

ಪ್ರಾಯೇಣ ವೇದ ತದಿದಂ ನ ಮಹಾಜನೋಯಂ
ದೇವ್ಯಾವಿಮೋಹಿತಮತಿರ್ಬತಮಾಯಯಾಲಮ್ ।
ತ್ರಯ್ಯಾಂ ಜಡೀಕೃತಮತಿರ್ಮಧುಪುಷ್ಪಿತಾಯಾಂ
ವೈತಾನಿಕೇ ಮಹತಿ ಕರ್ಮಣಿ ಯುಜ್ಯಮಾನಃ ॥

ಅನುವಾದ

ದೊಡ್ಡ-ದೊಡ್ಡ ವಿದ್ವಾಂಸರ ಬುದ್ಧಿಯೂ ಕೆಲವೊಮ್ಮೆ ಭಗವಂತನ ಮಾಯೆಯಿಂದ ಮೋಹಿತವಾಗುತ್ತದೆ. ಅವರು ಕರ್ಮಗಳ ಸಿಹಿಯಾದ ಫಲಗಳನ್ನು ವರ್ಣಿಸುವ ಅರ್ಥರೂಪವಾದ ವೇದವಾಣಿಯಲ್ಲೇ ಮೋಹಿತರಾಗುತ್ತಾರೆ ಮತ್ತು ಯಜ್ಞ-ಯಾಗಾದಿ ದೊಡ್ಡ-ದೊಡ್ಡ ಕರ್ಮಗಳಲ್ಲೇ ಮುಳುಗಿರುತ್ತಾರೆ. ಈ ಅತಿಸುಗಮವಾದ ಭಗವನ್ನಾಮದ ಮಹಿಮೆಯನ್ನು ತಿಳಿಯುವುದೇ ಇಲ್ಲ. ಇದು ಎಂತಹ ಖೇದದ ವಿಷಯ? ॥25॥

(ಶ್ಲೋಕ-26)

ಮೂಲಮ್

ಏವಂ ವಿಮೃಶ್ಯ ಸುಧಿಯೋ ಭಗವತ್ಯನಂತೇ
ಸರ್ವಾತ್ಮನಾ ವಿದಧತೇ ಖಲು ಭಾವಯೋಗಮ್ ।
ತೇ ಮೇ ನ ದಂಡ ಮರ್ಹಂತ್ಯಥ ಯದ್ಯಮೀಷಾಂ
ಸ್ಯಾತ್ಪಾತಕಂ ತದಪಿ ಹಂತ್ಯುರುಗಾಯವಾದಃ ॥

ಅನುವಾದ

ಪ್ರಿಯದೂತರೇ! ಬುದ್ಧಿವಂತರಾದ ಮನುಷ್ಯರು ಹೀಗೆ ವಿಚಾರಮಾಡಿ ಭಗವಾನ್ ಅನಂತನಲ್ಲೇ ಪೂರ್ಣ ಅಂತಃ ಕರಣದಿಂದ ತಮ್ಮ ಭಕ್ತಿಭಾವವನ್ನು ನೆಲೆಗೊಳಿಸುವರು. ಅವರು ನನ್ನ ದಂಡನೆಗೆ ಪಾತ್ರರಾಗುವುದಿಲ್ಲ. ಅಂತಹವರು ಪಾಪವನ್ನು ಮಾಡುವುದೇ ಇಲ್ಲ. ಆದರೂ ಕೆಲವು ವೇಳೆ ಆಕಸ್ಮಾತ್ತಾಗಿ ಯಾವುದಾದರೂ ಪಾಪವು ನಡೆದರೂ, ಅದನ್ನು ಭಗವಂತನ ಗುಣಗಾನದಿಂದ ಒಡನೆಯೇ ನಾಶ ಮಾಡಿ ಬಿಡುವರು. ॥26॥

(ಶ್ಲೋಕ-27)

ಮೂಲಮ್

ತೇ ದೇವಸಿದ್ಧಪರಿಗೀತಪವಿತ್ರಗಾಥಾ
ಯೇ ಸಾಧವಃ ಸಮದೃಶೋ ಭಗವತ್ಪ್ರಪನ್ನಾಃ ।
ತಾನ್ ನೋಪಸೀದತ ಹರೇರ್ಗದಯಾಭಿಗುಪ್ತಾನ್
ನೈಷಾಂ ವಯಂ ನ ಚ ವಯಃ ಪ್ರಭವಾಮ ದಂಡೇ ॥

ಅನುವಾದ

ಸಮದರ್ಶಿ ಸಾಧುಗಳು ಭಗವಂತನನ್ನೇ ತಮ್ಮ ಸಾಧ್ಯ ಮತ್ತು ಸಾಧನೆ ಎಂದು ತಿಳಿದು ಕೊಂಡು ಅವನನ್ನೇ ಅವಲಂಬಿಸಿ ಇರುತ್ತಾರೆ. ದೊಡ್ಡ-ದೊಡ್ಡ ದೇವತೆಗಳೂ, ಸಿದ್ಧರೂ ಕೂಡ ಅವರ ಪವಿತ್ರ ಚರಿತ್ರೆಯನ್ನು ಪ್ರೇಮದಿಂದ ಹಾಡುತ್ತಾ ಇರುತ್ತಾರೆ. ನನ್ನ ದೂತರಿರಾ! ಭಗವಂತನ ಗದೆಯು ಅವರನ್ನು ಸದಾಕಾಲ ರಕ್ಷಿಸುತ್ತಾ ಇರುತ್ತದೆ. ಇಂತಹವರ ಬಳಿಗೆ ನೀವು ಎಂದಿಗೂ ಸುಳಿಯಬೇಡಿರಿ. ಇಂತಹವರನ್ನು ದಂಡಿಸುವ ಶಕ್ತಿಯು ನನ್ನಲ್ಲಾಗಲೀ, ಸಾಕ್ಷಾತ್ ಕಾಲನಲ್ಲಾಗಲೀ ಇಲ್ಲವೇ ಇಲ್ಲ. ॥27॥

(ಶ್ಲೋಕ-28)

ಮೂಲಮ್

ತಾನಾನಯಧ್ವಮಸತೋ ವಿಮುಖಾನ್ಮುಕುಂದ-
ಪಾದಾರವಿಂದಮಕರಂದರಸಾದಜಸ್ರಮ್ ।
ನಿಷ್ಕಿಂಚನೈಃ ಪರಮಹಂಸಕುಲೈ ರಸಜ್ಞೈ-
ರ್ಜುಷ್ಟಾದ್ಗೃಹೇ ನಿರಯವರ್ತ್ಮನಿ ಬದ್ಧತೃಷ್ಣಾನ್ ॥

ಅನುವಾದ

ಮಹಾಪರಮಹಂಸರು ಇಡೀ ಜಗತ್ತಿನ ಮತ್ತು ತಮ್ಮ ಶರೀರದ ವಿಷಯದಲ್ಲಿ ಅಹಂಕಾರ-ಮಮಕಾರಗಳನ್ನು ತೊರೆದು, ಅಕಿಂಚನರಾಗಿ ದಿವ್ಯರಸವನ್ನು ಸವಿಯುವ ಲೋಭದಿಂದ ನಿರಂತರವಾಗಿ ಮುಕುಂದನ ಅಡಿದಾವರೆಗಳ ಮಕರಂದರಸವನ್ನು ಪಾನಮಾಡುತ್ತಾ ಇರುತ್ತಾರೆ. ಆ ದಿವ್ಯರಸಕ್ಕೆ ವಿಮುಖರಾದ ದುಷ್ಟರು ನರಕದ ದ್ವಾರವಾದ ಮನೆವಾರ್ತೆಯ ತೃಷ್ಣೆಯ ಹೊರೆಯನ್ನು ಹೊತ್ತಿರುತ್ತಾರೆ. ಅವರನ್ನು ನನ್ನ ಬಳಿಗೆ ಪದೇ-ಪದೇ ಕರೆದುಕೊಂಡು ಬನ್ನಿರಿ.॥28॥

(ಶ್ಲೋಕ-29)

ಮೂಲಮ್

ಜಿಹ್ವಾ ನ ವಕ್ತಿ ಭಗವದ್ಗುಣನಾಮಧೇಯಂ
ಚೇತಶ್ಚ ನ ಸ್ಮರತಿ ತಚ್ಚರಣಾರವಿಂದಮ್ ।
ಕೃಷ್ಣಾಯ ನೋ ನಮತಿ ಯಚ್ಛಿರ ಏಕದಾಪಿ
ತಾನಾನಯಧ್ವಮಸತೋಕೃತವಿಷ್ಣುಕೃತ್ಯಾನ್ ॥

ಅನುವಾದ

ಯಾರ ನಾಲಿಗೆ ಭಗವಂತನ ನಾಮಗಳನ್ನು ಗುಣಗಳನ್ನು ಕೊಂಡಾಡುವುದಿಲ್ಲವೋ, ಯಾರ ಚಿತ್ತವು ಅವನ ಚರಣಾರವಿಂದಗಳನ್ನು ಚಿಂತಿಸುವುದಿಲ್ಲವೋ, ಯಾರ ತಲೆಯು ಒಮ್ಮೆಯೂ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ಬಾಗುವುದಿಲ್ಲವೋ, ಅಂತಹ ಭಗವತ್ಸೇವಾ ವಿಮುಖರಾದ ಪಾಪಿಗಳನ್ನೇ ನನ್ನ ಬಳಿಗೆ ಕರೆದುತನ್ನಿರಿ. ॥29॥

(ಶ್ಲೋಕ-30)

ಮೂಲಮ್

ತತ್ಕ್ಷಮ್ಯತಾಂ ಸ ಭಗವಾನ್ಪುರುಷಃ ಪುರಾಣೋ
ನಾರಾಯಣಃ ಸ್ವಪುರುಷೈರ್ಯದಸತ್ಕೃತಂ ನಃ ।
ಸ್ವಾನಾಮಹೋ ನ ವಿದುಷಾಂ ರಚಿತಾಂಜಲೀನಾಂ
ಕ್ಷಾಂತಿರ್ಗರೀಯಸಿ ನಮಃ ಪುರುಷಾಯ ಭೂಮ್ನೇ ॥

ಅನುವಾದ

ಇಂದು ನನ್ನ ದೂತರು ಭಗವಂತನ ಪಾರ್ಷದರ ಅಪರಾಧವನ್ನು ಮಾಡಿ, ಸಾಕ್ಷಾತ್ ಭಗವಂತನನ್ನು ತಿರಸ್ಕಾರ ಮಾಡಿರುವರು. ಈ ಅಪರಾಧವು ನನ್ನದೂ ಆಗಿದೆ. ಪುರಾಣಪುರುಷ ಭಗವಾನ್ ಶ್ರೀಮನ್ನಾರಾಯಣನು ನಮ್ಮಗಳ ಅಪರಾಧವನ್ನು ಕ್ಷಮಿಸಲಿ. ನಾವು ಅಜ್ಞಾನಿಗಳಾಗಿದ್ದರೂ ಅವನ ಸೇವಕರೇ ಆಗಿದ್ದೇವಲ್ಲ! ಅವನ ಅಪ್ಪಣೆಯನ್ನು ಪಡೆಯಲಿಕ್ಕಾಗಿ ಕೈ ಜೋಡಿಸಿಕೊಂಡು ಸದಾಉತ್ಸುಕರಾಗಿರುತ್ತೇವೆ. ಆದ್ದರಿಂದ ಅಪಾರ ಮಹಿಮೆಯುಳ್ಳ ಭಗವಂತನಿಗೆ ನಮ್ಮನ್ನು ಕ್ಷಮಿಸುವುದೇ ಯೋಗ್ಯವಾಗಿದೆ. ಆ ಸರ್ವಾಂತರ್ಯಾಮಿ ಏಕರಸ ಅನಂತನಾದ ಪ್ರಭುವನ್ನು ನಾವು ನಮಸ್ಕರಿಸುತ್ತೇವೆ. ॥30॥

(ಶ್ಲೋಕ-31)

ಮೂಲಮ್

ತಸ್ಮಾತ್ ಸಂಕೀರ್ತನಂ ವಿಷ್ಣೋರ್ಜಗನ್ಮಂಗಲಮಂಹಸಾಮ್ ।
ಮಹತಾಮಪಿ ಕೌರವ್ಯ ವಿದ್ಧ್ಯೈಕಾಂತಿಕನಿಷ್ಕೃತಿಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಶ್ರೀಭಗವಂತನ ಗುಣಗಳನ್ನೂ, ಲೀಲೆಗಳನ್ನೂ, ನಾಮಗಳನ್ನೂ ಕೀರ್ತನೆ ಮಾಡುತ್ತಿರುವುದೇ ಸಮಸ್ತ ಮಹಾಪಾತಕಗಳಿಗೂ ಸರ್ವೋತ್ತಮವಾದ ಪ್ರಾಯಶ್ಚಿತ್ತವು. ಸಮಸ್ತ ಪಾಪವಾಸನೆಗಳನ್ನು ನಿರ್ಮೂಲಗೊಳಿಸುವ ಕಟ್ಟಕಡೆಯ ಪ್ರಾಯಶ್ಚಿತ್ತವು. ಅದರಿಂದಲೇ ಸಮಸ್ತ ಜಗತ್ತಿಗೆ ಕಲ್ಯಾಣವುಂಟಾಗುವುದು.॥31॥

(ಶ್ಲೋಕ-32)

ಮೂಲಮ್

ಶೃಣ್ವತಾಂ ಗೃಣತಾಂ ವೀರ್ಯಾಣ್ಯುದ್ದಾಮಾನಿ ಹರೇರ್ಮುಹುಃ ।
ಯಥಾ ಸುಜಾತಯಾ ಭಕ್ತ್ಯಾ ಶುದ್ಧ್ಯೇನ್ನಾತ್ಮಾ ವ್ರತಾದಿಭಿಃ ॥

ಅನುವಾದ

ಶ್ರೀಭಗವಂತನ ಉದಾರವೂ, ಕೃಪಾಪೂರ್ಣವೂ ಆದ ಚರಿತ್ರೆಗಳ ಶ್ರವಣ-ಕೀರ್ತನೆಗಳನ್ನು ಮತ್ತೆ-ಮತ್ತೆ ಮಾಡುತ್ತಿರುವ ಮಹಾತ್ಮರ ಹೃದಯದಲ್ಲಿ ಪ್ರೇಮಮಯ ಭಕ್ತಿಯು ಉದಯಿಸುವುದು. ಆ ಭಕ್ತಿಯಿಂದ ಉಂಟಾಗುವಷ್ಟು ಆತ್ಮ ಶುದ್ಧಿಯು ಕೃಚ್ಛ್ರ-ಚಾಂದ್ರಾಯಣಗಳೇ ಮುಂತಾದ ವ್ರತಗಳಿಂದಲೂ ಉಂಟಾಗುವುದಿಲ್ಲ. ॥32॥

(ಶ್ಲೋಕ-33)

ಮೂಲಮ್

ಕೃಷ್ಣಾಂಘ್ರಿಪದ್ಮಮಧುಲಿಣ್ ನ ಪುನರ್ವಿಸೃಷ್ಟ-
ಮಾಯಾಗುಣೇಷು ರಮತೇ ವೃಜಿನಾವಹೇಷು ।
ಅನ್ಯಸ್ತು ಕಾಮಹತ ಆತ್ಮರಜಃ ಪ್ರಮಾರ್ಷ್ಟು-
ಮೀಹೇತ ಕರ್ಮ ಯತ ಏವ ರಜಃ ಪುನಃ ಸ್ಯಾತ್ ॥

ಅನುವಾದ

ಭಗವಾನ್ ಶ್ರೀಕೃಷ್ಣಚಂದ್ರನ ಚರಣಾರವಿಂದ-ಮಕರಂದ ರಸದ ಲೋಭಿಯಾದ ಭ್ರಮರದಂತೆ ಇರುವ ಜನರು ಆರಂಭದಲ್ಲಿ ಮಾತ್ರ ರಮಣೀಯವಾಗಿ, ಅನಂತರ ದುಃಖವನ್ನೇ ಉಂಟುಮಾಡುವ ವಿಷಯಗಳಲ್ಲಿ ರಮಿಸಲು ಮರಳಿ ಬರುವುದಿಲ್ಲ. ಆದರೆ ಆ ರಸದಿಂದ ವಿಮುಖರಾಗಿ ಕಾಮನೆಗಳಿಂದ ವಿವೇಕಬುದ್ಧಿಯನ್ನು ಕಳೆದುಕೊಂಡಿರುವ ಜನರು ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಪುನಃ ಪ್ರಾಯಶ್ಚಿತ್ತ ರೂಪ ವಾದ ಕರ್ಮಗಳನ್ನೇ ಆಚರಿಸುತ್ತಾರೆ. ಇದರಿಂದ ಅವರ ಕರ್ಮ ವಾಸನೆಯು ಅಳಿಯುವುದಿಲ್ಲ ಹಾಗೂ ಅವರು ಪುನಃ ಅಂತಹ ದೋಷಗಳನ್ನೇ ಮಾಡುತ್ತಿರುತ್ತಾರೆ. ॥33॥

(ಶ್ಲೋಕ-34)

ಮೂಲಮ್

ಇತ್ಥಂ ಸ್ವಭರ್ತೃಗದಿತಂ ಭಗವನ್ಮಹಿತ್ವಂ
ಸಂಸ್ಮೃತ್ಯ ವಿಸ್ಮಿತಧಿಯೋ ಯಮಕಿಂಕರಾಸ್ತೇ ।
ನೈವಾಚ್ಯುತಾಶ್ರಯಜನಂ ಪ್ರತಿಶಂಕಮಾನಾ
ದ್ರಷ್ಟುಂ ಚ ಬಿಭ್ಯತಿ ತತಃ ಪ್ರಭೃತಿ ಸ್ಮ ರಾಜನ್ ॥

ಅನುವಾದ

ಪರೀಕ್ಷಿತನೇ! ಯಮದೂತರು ತಮ್ಮ ಒಡೆಯನಾದ ಯಮಧರ್ಮನ ಮುಖದಿಂದ ಹೀಗೆ ಭಗವಂತನ ಮಹಿಮೆ ಯನ್ನು ಕೇಳಿ, ಅದನ್ನು ಸ್ಮರಿಸುತ್ತಿರುವಾಗ ಅವರಿಗೆ ಎಣೆಯಿಲ್ಲದ ಆಶ್ಚರ್ಯವುಂಟಾಯಿತು. ಅಂದಿನಿಂದ ಅವರು ಯಮಧರ್ಮನ ಮಾತಿನಲ್ಲಿ ವಿಶ್ವಾಸವಿರಿಸಿ ತಮ್ಮ ನಾಶದ ಅಂಜಿಕೆಯಿಂದ ಭಗವಂತನ ಆಶ್ರಿತರಾದ ಭಕ್ತರ ಬಳಿಗೆ ಸುಳಿಯುವುದಿಲ್ಲ. ಹೆಚ್ಚೇನು ಅವರು ಭಕ್ತರ ಕಡೆಗೆ ಕಣ್ಣೆತ್ತಿ ನೋಡಲೂ ಭಯಪಡುವರು.॥34॥

(ಶ್ಲೋಕ-35)

ಮೂಲಮ್

ಇತಿಹಾಸಮಿಮಂ ಗುಹ್ಯಂ ಭಗವಾನ್ ಕುಂಭಸಂಭವಃ ।
ಕಥಯಾಮಾಸ ಮಲಯ ಆಸೀನೋ ಹರಿಮರ್ಚಯನ್ ॥

ಅನುವಾದ

ಪ್ರಿಯ ಪರೀಕ್ಷಿತನೇ! ಈ ಇತಿಹಾಸವು ಪರಮ ಗೋಪ್ಯವೂ, ಅತ್ಯಂತ ರಹಸ್ಯವೂ ಆಗಿದೆ. ಮಲಯಪರ್ವತದಲ್ಲಿ ವಿರಾಜಮಾನರಾದ ಪೂಜ್ಯರಾದ ಅಗಸ್ತ್ಯರು ಶ್ರೀಹರಿಯನ್ನು ಪೂಜಿಸುವಾಗ ನನಗೆ ಇದನ್ನು ಹೇಳಿದ್ದರು. ॥35॥

ಅನುವಾದ (ಸಮಾಪ್ತಿಃ)

ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಯಮಪುರುಷಸಂವಾದೇ ತೃತೀಯೋಽಧ್ಯಾಯಃ ॥3॥