೦೨

[ಎರಡನೆಯ ಅಧ್ಯಾಯ]

ಭಾಗಸೂಚನಾ

ವಿಷ್ಣುದೂತರಿಂದ ಭಾಗವತ ಧರ್ಮದ ನಿರೂಪಣೆ ಮತ್ತು ಅಜಾಮಿಳನು ಪರಂಧಾಮವನ್ನು ಹೊಂದಿದುದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ತೇ ಭಗವದ್ದೂತಾ ಯಮದೂತಾಭಿಭಾಷಿತಮ್ ।
ಉಪಧಾರ್ಯಾಥ ತಾನ್ರಾಜನ್ಪ್ರತ್ಯಾಹುರ್ನಯಕೋವಿದಾಃ ॥

ಅನುವಾದ

ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತ ರಾಜೇಂದ್ರನೇ! ನೀತಿನಿಪುಣರೂ, ಧರ್ಮದ ಮರ್ಮವನ್ನು ಬಲ್ಲವರೂ ಆದ ಭಗವಂತನ ಪಾರ್ಷದರು ಯಮದೂತರ ಈ ಮಾತುಗಳನ್ನು ಕೇಳಿ ಅವರಲ್ಲಿ ಇಂತೆಂದರು ॥1॥

(ಶ್ಲೋಕ-2)

ಮೂಲಮ್ (ವಾಚನಮ್)

ವಿಷ್ಣುದೂತಾ ಊಚುಃ

ಮೂಲಮ್

ಅಹೋ ಕಷ್ಟಂ ಧರ್ಮದೃಶಾಮಧರ್ಮಃ ಸ್ಪೃಶತೇ ಸಭಾಮ್ ।
ಯತ್ರಾ ದಂಡ್ಯೇಷ್ವಪಾಪೇಷು ದಂಡೋ ಯೈರ್ಧ್ರಿಯತೇ ವೃಥಾ ॥

ಅನುವಾದ

ಭಗವಂತನ ಪಾರ್ಷದರು ಹೇಳುತ್ತಾರೆ — ಎಲೈ ಯಮದೂತರಿರಾ! ಆಹಾ! ಎಂತಹ ಆಶ್ಚರ್ಯದ ಮತ್ತು ಖೇದದ ಮಾತಾಗಿದೆ. ಧರ್ಮಜ್ಞರ ಸಭೆಯಲ್ಲಿ ಅಧರ್ಮವು ಪ್ರವೇಶಿಸುತ್ತಿದೆಯಲ್ಲ! ಏಕೆಂದರೆ, ಅಲ್ಲಿ ನಿರಪರಾಧಿಗಳಾದ, ದಂಡನೆಗೆ ಯೋಗ್ಯರಲ್ಲದ ವ್ಯಕ್ತಿಗಳಿಗೂ ವ್ಯರ್ಥವಾಗಿದಂಡನೆ ಕೊಡಲಾಗುತ್ತದಲ್ಲ! ॥2॥

(ಶ್ಲೋಕ-3)

ಮೂಲಮ್

ಪ್ರಜಾನಾಂ ಪಿತರೋ ಯೇ ಚ ಶಾಸ್ತಾರಃ ಸಾಧವಃ ಸಮಾಃ ।
ಯದಿ ಸ್ಯಾತ್ತೇಷು ವೈಷಮ್ಯಂ ಕಂ ಯಾಂತಿ ಶರಣಂ ಪ್ರಜಾಃ ॥

ಅನುವಾದ

ಪ್ರಜಾರಕ್ಷಕನೂ, ಶಾಸ್ತ್ರಕನೂ, ಸಮದರ್ಶಿಯೂ, ಪರೋಪಕಾರಿಯೂ ಆದವರೇ ಪ್ರಜೆಗಳ ವಿಷಯದಲ್ಲಿ, ವಿಷಮತೆಯ ವ್ಯವಹಾರ ಮಾಡತೊಡಗಿದರೆ ಮತ್ತೆ ಪ್ರಜೆಯು ಯಾರ ಮೊರೆ ಹೋಗಬೇಕು? ॥3॥

(ಶ್ಲೋಕ-4)

ಮೂಲಮ್

ಯದ್ಯದಾಚರತಿ ಶ್ರೇಯಾನಿತರಸ್ತತ್ತದೀಹತೇ ।
ಸ ಯತ್ಪ್ರಮಾಣಮ್ ಕುರುತೇ ಲೋಕಸ್ತದನುವರ್ತತೇ ॥

ಅನುವಾದ

ಸತ್ಪುರುಷರು ಆಚರಿಸಿದಂತೆಯೇ ಸಾಧಾರಣ ಜನರು ಅನುಸರಿಸುತ್ತಾರೆ. ಸಜ್ಜನರು ತಮ್ಮ ಆಚರಣೆಯ ಮೂಲಕ ಯಾವುದನ್ನು ಪ್ರಮಾಣೀಕರಿಸುತ್ತಾರೋ, ಉಳಿದ ಜನರು ಅದನ್ನೇ ಅನುಕರಣಮಾಡತೊಡಗುವರು. ॥4॥

(ಶ್ಲೋಕ-5)

ಮೂಲಮ್

ಯಸ್ಯಾಂಕೇ ಶಿರ ಆಧಾಯ ಲೋಕಃ ಸ್ವಪಿತಿ ನಿರ್ವೃತಃ ।
ಸ್ವಯಂ ಧರ್ಮಮಧರ್ಮಂ ವಾ ನ ಹಿ ವೇದ ಯಥಾ ಪಶುಃ ॥

ಅನುವಾದ

ಸಾಮಾನ್ಯ ಜನರು ಪಶುಗಳಂತೆ ಧರ್ಮ-ಅಧರ್ಮಗಳ ಸ್ವರೂಪವನ್ನು ಅರಿಯದೆ ಯಾರೋ ಸತ್ಪುರುಷರ ಮೇಲೆ ವಿಶ್ವಾಸವಿಟ್ಟು, ಅವರ ತೊಡೆಯಲ್ಲಿ ತಲೆಯನ್ನಿಟ್ಟು ನಿರ್ಭಯರಾಗಿ ನಿಶ್ಚಿಂತರಾಗಿ ಮಲಗಿಬಿಡುತ್ತಾರೆ.॥5॥

(ಶ್ಲೋಕ-6)

ಮೂಲಮ್

ಸ ಕಥಂ ನ್ಯರ್ಪಿತಾತ್ಮಾನಂ ಕೃತಮೈತ್ರಮಚೇತನಮ್ ।
ವಿಶ್ರಂಭಣೀಯೋ ಭೂತಾನಾಂ ಸಘೃಣೋ ದ್ರೋಗ್ಧುಮರ್ಹತಿ ॥

ಅನುವಾದ

ಅಂತಹ ದಯಾಳುಗಳಾದ ಸತ್ಪುರುಷರೇ ಪ್ರಾಣಿಗಳಿಗೆ ಅತ್ಯಂತ ವಿಶ್ವಾಸಪಾತ್ರರಾಗಿದ್ದಾರೆ. ಮೈತ್ರೀ ಭಾವದಿಂದ ತಮ್ಮ ಹಿತೈಷಿಗಳೆಂದು ತಿಳಿದು ಆತ್ಮಸಮರ್ಪಣೆ ಮಾಡಿರುವ ಆ ಅಜ್ಞಾನೀ ಜೀವರೊಂದಿಗೆ ಸಜ್ಜನರು ಹೇಗೆ ವಿಶ್ವಾಸಘಾತ ಮಾಡ ಬಲ್ಲರು? ॥6॥

(ಶ್ಲೋಕ-7)

ಮೂಲಮ್

ಅಯಂ ಹಿ ಕೃತನಿರ್ವೇಶೋ ಜನ್ಮ ಕೋಟ್ಯಂಹಸಾಮಪಿ ।
ಯದ್ವ್ಯಾಜಹಾರ ವಿವಶೋ ನಾಮ ಸ್ವಸ್ತ್ಯಯನಂ ಹರೇಃ ॥

ಅನುವಾದ

ಎಲೈ ಯಮದೂತರೇ! ಈ ಅಜಾಮಿಳನು ಕೋಟಿ-ಕೋಟಿ ಜನ್ಮಗಳಲ್ಲಿ ಮಾಡಿದ್ದ ಪಾಪಗಳಿಗೂ ಪೂರ್ಣವಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿರುವನು. ಏಕೆಂದರೆ, ಬೇರಾವುದೋ ವ್ಯಾಮೋಹದಿಂದಲೇ ಆದರೂ ಇವನು ಶ್ರೀಹರಿಯ ಪರಮಕಲ್ಯಾಣಮಯವಾದ ಮೋಕ್ಷಪ್ರದವಾದ ನಾಮವನ್ನು ಉಚ್ಚರಿಸಿರುವನು. ॥7॥

(ಶ್ಲೋಕ-8)

ಮೂಲಮ್

ಏತೇನೈವ ಹ್ಯಘೋನೋಸ್ಯ ಕೃತಂ ಸ್ಯಾದಘನಿಷ್ಕೃತಮ್ ।
ಯದಾ ನಾರಾಯಣಾಯೇತಿ ಜಗಾದ ಚತುರಕ್ಷರಮ್ ॥

ಅನುವಾದ

ಇವನು ‘ನಾರಾಯಣ’ ಎಂಬ ಈ ನಾಲ್ಕು ಅಕ್ಷರಗಳನ್ನು ಉಚ್ಚರಿಸುವುದರಿಂದಲೇ ಈ ಪಾಪಿಯ ಎಲ್ಲ ಪಾಪಗಳ ಪ್ರಾಯಶ್ಚಿತ್ತವು ಆಗಿಹೋಯಿತು. ॥8॥

(ಶ್ಲೋಕ-9)

ಮೂಲಮ್

ಸ್ತೇನಃ ಸುರಾಪೋ ಮಿತ್ರಧ್ರುಗ್ ಬ್ರಹ್ಮಹಾ ಗುರುತಲ್ಪಗಃ ।
ಸೀರಾಜಪಿತೃಗೋಹಂತಾ ಯೇ ಚ ಪಾತಕಿನೋಪರೇ ॥

(ಶ್ಲೋಕ-10)

ಮೂಲಮ್

ಸರ್ವೇಷಾಮಪ್ಯಘವತಾಮಿದಮೇವ ಸುನಿಷ್ಕೃತಮ್ ।
ನಾಮವ್ಯಾಹರಣಂ ವಿಷ್ಣೋರ್ಯತಸ್ತದ್ವಿಷಯಾ ಮತಿಃ ॥

ಅನುವಾದ

ಕಳ್ಳನಿರಲೀ, ಹೆಂಡಕುಡುಕನಿರಲೀ, ಮಿತ್ರದ್ರೋಹಿಯಾಗಿರಲೀ, ಬ್ರಹ್ಮಹತ್ಯಾ ಪಾತಕಿಯಾಗಿರಲೀ, ಗುರುಪತ್ನೀಗಾಮಿಯಾಗಿರಲೀ, ಸ್ತ್ರೀಹತ್ಯೆ, ರಾಜಹತ್ಯೆ, ಪಿತೃಹತ್ಯೆ, ಗೋಹತ್ಯೆಗಳನ್ನು ಮಾಡಿದವನಾಗಿರಲೀ, ಬೇಕಾದರೆ ಎಷ್ಟೇ ದೊಡ್ಡ ಪಾಪಿಯಾಗಲೀ, ಎಲ್ಲ ಪಾತಕಗಳಿಗೂ ಭಗವಂತನ ನಾರಾಯಣನ ನಾಮವನ್ನು ಉಚ್ಚರಿಸುವುದೇ ದೊಡ್ಡಪ್ರಾಯಶ್ಚಿತ್ತವು.* ಏಕೆಂದರೆ, ಭಗವನ್ನಾಮಗಳನ್ನು ಉಚ್ಚರಿಸುವುದರಿಂದ ಮನುಷ್ಯನ ಬುದ್ಧಿಯು ಭಗವಂತನ ಗುಣ, ಲೀಲೆ, ಸ್ವರೂಪಗಳಲ್ಲಿ ರಮಿಸಿ ಹೋಗುತ್ತದೆ ಹಾಗೂ ಸ್ವಯಂ ಭಗವಂತನ ಕುರಿತು ಆತ್ಮೀಯತೆ ಉಂಟಾಗುತ್ತದೆ. ॥9-10॥

ಟಿಪ್ಪನೀ
  • ಈ ಪ್ರಸಂಗದಲ್ಲಿ ‘ನಾಮ-ವ್ಯಾಹರಣ’ ಇದರ ಅರ್ಥ ನಾಮೋಚ್ಚಾರಣೆ ಮಾತ್ರವಾಗಿದೆ. ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ ‘‘ಯದ್ ಗೋವಿಂದೇತಿ ಚುಕ್ರೋಶ ಕೃಷ್ಣಾ ಮಾಂ ದೂರವಾಸಿನಮ್ ಋಣಮೇತತ್ ಪ್ರವೃದ್ಧಂ ಮೇ ಹೃದಯಾನ್ನಾಪಸರ್ಪತಿ ॥’’ ನಾನು ದೂರ ಇರುವುದರಿಂದ ದ್ರೌಪದಿಯು ಜೋರಾಗಿ ‘ಗೋವಿಂದ-ಗೋವಿಂದ’ ಹೀಗೆ ಕರುಣಕ್ರಂದನ ಮಾಡಿ ನನ್ನನ್ನು ಕರೆದಳು. ಆ ಋಣವು ನನ್ನ ಮೇಲೆ ಬೆಳೆಯಿತು ಮತ್ತು ನನ್ನ ಹೃದಯದಿಂದ ಅದರ ಭಾರವು ಒಂದು ಕ್ಷಣವಾದರೂ ತೊಲಗುವುದಿಲ್ಲ.

(ಶ್ಲೋಕ-11)

ಮೂಲಮ್

ನ ನಿಷ್ಕೃತೈರುದಿತೈರ್ಬ್ರಹ್ಮವಾದಿಭಿ-
ಸ್ತಥಾ ವಿಶುದ್ಧ್ಯತ್ಯಘವಾನ್ ವ್ರತಾದಿಭಿಃ ।
ಯಥಾ ಹರೇರ್ನಾಮಪದೈರುದಾಹೃತೈ-
ಸ್ತದುತ್ತಮಶ್ಲೋಕಗುಣೋಪಲಂಭಕಮ್ ॥

ಅನುವಾದ

ದೊಡ್ಡ-ದೊಡ್ಡ ಬ್ರಹ್ಮವಾದಿ ಋಷಿಗಳು ಪಾತಕಗಳ ಪರಿಹಾರಕ್ಕಾಗಿ ಕೃಚ್ಛ್ರ, ಚಾಂದ್ರಾಯಣ ಮುಂತಾದ ಅನೇಕ ವ್ರತಗಳನ್ನು ವಿಧಿಸಿದ್ದಾರೆ. ಆದರೆ ಭಗವಂತನ ನಾಮಗಳನ್ನು, ಭಗವಂತನ ನಾಮಗಳಿಂದ ಕೂಡಿದ ಪದಗಳನ್ನು** ಉಚ್ಚರಿಸುವುದರಿಂದ ಆ ಪಾಪಗಳು ಎಷ್ಟರ ಮಟ್ಟಿಗೆ ನಿರ್ಮೂಲವಾಗುವವೋ, ಅಷ್ಟರಮಟ್ಟಿಗೆ ಆ ಪ್ರಾಯಶ್ಚಿತ್ತಗಳಿಂದ ಅವು ನಿರ್ಮೂಲವಾಗುವುದಿಲ್ಲ. ಏಕೆಂದರೆ, ಭಗವಂತನ ನಾಮಗಳು ಪವಿತ್ರಕೀರ್ತಿ ಶ್ರೀಹರಿಯ ಗುಣಗಳ ಜ್ಞಾನವನ್ನು ಮಾಡಿಸುತ್ತವೆ. ॥11॥

ಟಿಪ್ಪನೀ

** ‘ನಾಮಪದೈಃ’ ಎಂದು ಹೇಳುವ ಅಭಿಪ್ರಾಯ ಭಗವಂತನ ಕೇವಲ ನಾಮ ‘ರಾಮ-ರಾಮ’, ‘ಕೃಷ್ಣ-ಕೃಷ್ಣ’, ‘ನಾರಾಯಣ- ನಾರಾಯಣ’ ಇವು ಅಂತಃಕರಣದ ಶುದ್ಧಿಗಾಗಿ ಪಾಪಗಳ ನಿವೃತ್ತಿಗಾಗಿ ಸಾಕು. ‘ನಮಃ-ನಮಾಮಿ’ ಮುಂತಾದ ಕ್ರಿಯಾಪದಗಳನ್ನು ಜೋಡಿಸುವ ಆವಶ್ಯಕತೆಯೇ ಇಲ್ಲ. ಭಗವಂತನಿಗೆ ಅನೇಕ ನಾಮಗಳಿವೆ. ಅವುಗಳಲ್ಲಿ ಯಾವುದನ್ನು ಬೇಕಾದರೂ ಸಂಕೀರ್ತನ ಮಾಡಬಹುದು, ಒಂದನ್ನು ಕೊಂಡಾಡಿದರೆ ಎಲ್ಲವನ್ನೂ ಕೊಂಡಾಡಿದಂತೆ ಎಂಬ ಅಭಿಪ್ರಾಯದಿಂದ ನಾಮದ ಜೊತೆಗೆ ಬಹುವಚನ ಪ್ರಯೋಗವಾಗಿದೆ. ಒಬ್ಬ ವ್ಯಕ್ತಿಯು ಎಲ್ಲ ನಾಮಗಳನ್ನು ಉಚ್ಚರಿಸಬೇಕೆಂಬ ಅಭಿಪ್ರಾಯದಿಂದ ಅಲ್ಲ. ಏಕೆಂದರೆ, ಭಗವಂತನ ನಾಮಗಳು ಅನಂತವಾಗಿವೆ. ಎಲ್ಲ ನಾಮಗಳನ್ನು ಉಚ್ಚರಿಸಲೂ ಸಾಧ್ಯವೂ ಇಲ್ಲ. ತಾತ್ಪರ್ಯ ಭಗವಂತನ ಒಂದು ನಾಮವನ್ನು ಉಚ್ಚರಿಸುವುದರಿಂದ ಎಲ್ಲ ಪಾಪಗಳ ನಿವೃತ್ತಿಯಾಗುತ್ತದೆ. ಪೂರ್ಣವಿಶ್ವಾಸವಿಲ್ಲದಿರುವುದು ಮತ್ತು ನಾಮೋಚ್ಚಾರದ ನಂತರವೂ ಪಾಪಗಳನ್ನು ಮಾಡುವುದರಿಂದ ಅದರ ಅನುಭವ ಉಂಟಾಗುವುದಿಲ್ಲ.

(ಶ್ಲೋಕ-12)

ಮೂಲಮ್

ನೈಕಾಂತಿಕಂ ತದ್ಧಿ ಕೃತೇಪಿ ನಿಷ್ಕೃತೇ
ಮನಃ ಪುನರ್ಧಾವತಿ ಚೇದಸತ್ಪಥೇ ।
ತತ್ಕರ್ಮನಿರ್ಹಾರಮಭೀಪ್ಸತಾಂ ಹರೇ-
ರ್ಗುಣಾನುವಾದಃ ಖಲು ಸತ್ತ್ವಭಾವನಃ ॥

ಅನುವಾದ

ಪ್ರಾಯಶ್ಚಿತ್ತವನ್ನು ಮಾಡಿ ಕೊಂಡ ಬಳಿಕವೂ ಮನಸ್ಸು ಮತ್ತೆ ದುರ್ಮಾರ್ಗದ ಕಡೆಗೆ ಓಡುವುದಾದರೆ ಅದು ಹೇಗೆ ಪೂರ್ಣ ಪ್ರಾಯಶ್ಚಿತ್ತವಾಗ ಬಲ್ಲದು? ಆದುದರಿಂದ ಪಾಪಗಳು ಬುಡಸಹಿತ ನಾಶ ಹೊಂದುವಂತಹ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕೆಂಬ ಬಯಕೆ ಇರುವವರು ಶ್ರೀಭಗವಂತನ ಗುಣಗಳನ್ನು ಗಾನ ಮಾಡಬೇಕು. ಅದರಿಂದ ಚಿತ್ತವು ಪೂರ್ಣವಾಗಿ ಶುದ್ಧವಾಗಿ ಹೋಗುತ್ತದೆ.॥12॥

(ಶ್ಲೋಕ-13)

ಮೂಲಮ್

ಅಥೈನಂ ಮಾಪನಯತ ಕೃತಾಶೇಷಾಘನಿಷ್ಕೃತಮ್ ।
ಯದಸೌ ಭಗವನ್ನಾಮ ಮ್ರಿಯಮಾಣಃ ಸಮಗ್ರಹೀತ್ ॥

ಅನುವಾದ

ಆದ್ದರಿಂದ ಯಮದೂತರೇ! ನೀವು ಅಜಾಮಿಳನನ್ನು ಒಯ್ಯ ಬೇಡಿರಿ. ಇವನು ಎಲ್ಲ ಪಾಪಗಳ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿರುನು. ಏಕೆಂದರೆ, ಇವನು ಸಾಯುವಾಗ+ ಭಗವಂತನ ನಾಮವನ್ನು ಉಚ್ಚರಿಸಿರುವನು. ॥13॥

ಟಿಪ್ಪನೀ
  • ಪಾಪದ ನಿವೃತ್ತಿಗಾಗಿ ಭಗವನ್ನಾಮದ ಒಂದು ಅಂಶವು ‘ರಾಮ’ ‘ಮರಾ’ ಎಂಬುದೇ ಸಾಕಾಗುವಷ್ಟಿದೆ. ಇವನಾದರೋ ನಾಮವನ್ನು ಪೂರ್ಣವಾಗಿ ಉಚ್ಚರಿಸಿರುವನು. ಸಾಯುವ ಸಮಯವೆಂದರೆ ಪೂರ್ಣವಾಗಿ ಸಾಯುವ ಕ್ಷಣವಲ್ಲ. ಏಕೆಂದರೆ, ಸಾಯುವ ಕ್ಷಣವು ಕೃಚ್ಛ್ರ-ಚಾಂದ್ರಾಯಣ ಮುಂತಾದವುಗಳನ್ನು ಮಾಡುವ ವಿಧಿ ಆಗಲಾರದೋ ಹಾಗೆಯೇ ನಾಮೋಚ್ಚಾರ ವಿಧಿಯಿಲ್ಲ. ಅದಕ್ಕಾಗಿ ‘ಮ್ರಿಯಮಾಣ’ ಶಬ್ದದ ಅಭಿಪ್ರಾಯ ಇನ್ನು ಮುಂದೆ ಇವನಿಂದ ಯಾವುದೇ ಪಾಪಗಳಾಗುವ ಸಂಭವವಿಲ್ಲ.

(ಶ್ಲೋಕ-14)

ಮೂಲಮ್

ಸಾಂಕೇತ್ಯಂ ಪಾರಿಹಾಸ್ಯಂ ವಾ ಸ್ತೋಭಂ ಹೇಲನಮೇವ ವಾ ।
ವೈಕುಂಠನಾಮಗ್ರಹಣಮಶೇಷಾಘಹರಂ ವಿದುಃ ॥

ಅನುವಾದ

ಸಾಂಕೇತಕ್ಕಾಗಲೀ (ಯಾವುದೇ ಬೇರೆ ಅಭಿಪ್ರಾಯದಿಂದ), ಪರಿಹಾಸ್ಯಕ್ಕಾಗಲೀ, ರಾಗದ ಆಲಾಪನೆ ಯಲ್ಲಾಗಲೀ, ಯಾರ ನ್ನಾದರೂ ಅಣಕಿಸುವುದಕ್ಕಾಗಲೀ, ಯಾರಾದರೂ ಭಗವಂತನ ನಾಮವನ್ನು ಉಚ್ಚರಿಸಿದರೆ ಅವನ ಎಲ್ಲ ಪಾಪಗಳು ನಾಶವಾಗುತ್ತವೆ ಎಂದು ದೊಡ್ಡ-ದೊಡ್ಡ ಮಹಾತ್ಮರು ಇದನ್ನು ತಿಳಿದಿರುತ್ತಾರೆ. ॥14॥

(ಶ್ಲೋಕ-15)

ಮೂಲಮ್

ಪತಿತಃ ಸ್ಖಲಿತೋ ಭಗ್ನಃ ಸಂದಷ್ಟಸ್ತಪ್ತ ಆಹತಃ ।
ಹರಿರಿತ್ಯವಶೇನಾಹ ಪುಮಾನ್ನಾರ್ಹತಿ ಯಾತನಾಮ್ ॥

ಅನುವಾದ

ಬೀಳುವಾಗ, ಕಾಲುಜಾರಿ ಮುಗ್ಗರಿಸಿದಾಗ, ಅಂಗಗಳು ಮುರಿದುಹೋದಾಗ, ಹಾವು ಕಡಿದಾಗ, ಬೆಂಕಿಯಿಂದ ಸುಟ್ಟಾಗ, ಏಟು ಬಿದ್ದಾಗ, ಪರವಶತೆಯಿಂದ ಮನುಷ್ಯನು ‘ಹರಿ-ಹರಿ’ ಎಂದು ಹೇಳಿ ಭಗವಂತನ ನಾಮವನ್ನು ಉಚ್ಚರಿಸುವವನು ಯಮಯಾತನೆಗೆ ಪಾತ್ರನಾಗುವುದಿಲ್ಲ. ॥15॥

(ಶ್ಲೋಕ-16)

ಮೂಲಮ್

ಗುರೂಣಾಂ ಚ ಲಘೂನಾಂ ಚ ಗುರೂಣಿ ಚ ಲಘೂನಿ ಚ ।
ಪ್ರಾಯಶ್ಚಿತ್ತಾನಿ ಪಾಪಾನಾಂ ಜ್ಞಾತ್ವೋಕ್ತಾನಿ ಮಹರ್ಷಿಭಿಃ ॥

ಅನುವಾದ

ಮಹರ್ಷಿಗಳು ಪಾಪದ ಸ್ವರೂಪ ವನ್ನು ಪರಿಶೀಲನೆಮಾಡಿ ದೊಡ್ಡ ಪಾಪಗಳಿಗೆ ದೊಡ್ಡ ಪ್ರಾಯಶ್ಚಿತ್ತವನ್ನು ಚಿಕ್ಕ ಪಾಪಗಳಿಗೆ ಚಿಕ್ಕ ಪ್ರಾಯಶ್ಚಿತ್ತವನ್ನೂ ವಿಧಿಸಿದ್ದಾರೆ. ॥16॥

(ಶ್ಲೋಕ-17)

ಮೂಲಮ್

ತೈಸ್ತಾನ್ಯಘಾನಿ ಪೂಯಂತೇ ತಪೋದಾನಜಪಾದಿಭಿಃ ।
ನಾಧರ್ಮಜಂ ತದ್ಧೃದಯಂ ತದಪೀಶಾಂಘ್ರಿಸೇವಯಾ ॥

ಅನುವಾದ

ತಪಸ್ಸು, ದಾನ, ಜಪ ಮುಂತಾದ ಪ್ರಾಯಶ್ಚಿತ್ತಗಳ ಮೂಲಕ ಆ ಪಾಪಗಳು ನಾಶವಾಗಿ ಹೋಗುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಆ ಪಾಪಗಳಿಂದ ಮಲಿನವಾದ ಹೃದಯವು ಶುದ್ಧವಾಗು ವುದಿಲ್ಲ. ಭಗವಂತನ ಚರಣಗಳ ಸೇವೆಯಿಂದ ಅದೂ ಕೂಡ ಶುದ್ಧವಾಗಿಹೋಗುತ್ತದೆ. ॥17॥

(ಶ್ಲೋಕ-18)

ಮೂಲಮ್

ಅಜ್ಞಾನಾದಥವಾ ಜ್ಞಾನಾದುತ್ತಮಶ್ಲೋಕನಾಮ ಯತ್ ।
ಸಂಕೀರ್ತಿತಮಘಂ ಪುಂಸೋ ದಹೇದೇಧೋ ಯಥಾನಲಃ ॥

ಅನುವಾದ

ಯಮದೂತರೇ! ತಿಳಿದೋ, ತಿಳಿಯದೆಯೋ ಕಟ್ಟಿಗೆಗೆ ಬೆಂಕಿತಗುಲಿದರೆ ಅದನ್ನು ಸುಟ್ಟು ಬೂದಿಮಾಡುವಂತೆಯೇ, ತಿಳಿದೋ, ತಿಳಿಯದೆಯೋ ಭಗವಂತನ ನಾಮಸಂಕೀರ್ತನ ಮಾಡುವುದರಿಂದ ಮನುಷ್ಯನ ಎಲ್ಲ ಪಾಪಗಳು ಭಸ್ಮವಾಗಿ ಹೋಗುವುವು. ॥18॥

(ಶ್ಲೋಕ-19)

ಮೂಲಮ್

ಯಥಾಗದಂ ವೀರ್ಯತಮಮುಪಯುಕ್ತಂ ಯದೃಚ್ಛಯಾ ।
ಅಜಾನತೋಪ್ಯಾತ್ಮಗುಣಂ ಕುರ್ಯಾನ್ಮಂತ್ರೋಪ್ಯುದಾಹೃತಃ ॥

ಅನುವಾದ

ಮಹಾಶಕ್ತಿಶಾಲಿಯಾದ ಅಮೃತವನ್ನು ಅದರ ಗುಣ-ವೀರ್ಯ ತಿಳಿಯದೆಯೇ ಯಾರಾದರೂ ಕುಡಿದರೆ ಅವನನ್ನು ಅಮರನನ್ನಾಗಿಸುವಂತೆಯೇ, ನಾಮದ ಗುಣ-ಶಕ್ತಿ ತಿಳಿಯದೆಯೇ ಉಚ್ಚರಿಸಿದರೂ ಆ ಭಗವಂತನ ನಾಮವು* ತನ್ನ ಫಲವನ್ನು ಕೊಟ್ಟೇ ಕೊಡುವುದು. ವಸ್ತುವಿನ ಶಕ್ತಿಯು ಶ್ರದ್ಧೆಯನ್ನು ಅಪೇಕ್ಷಿಸುವುದಿಲ್ಲ. ॥19॥

ಟಿಪ್ಪನೀ
  • ವಸ್ತುವಿನ ಸ್ವಾಭಾವಿಕ ಶಕ್ತಿಯು ನನ್ನ ಮೇಲೆ ಶ್ರದ್ಧೆ ಇದೆಯೋ, ಇಲ್ಲವೋ ಎಂಬುದನ್ನು ಬೆಂಕಿ ಅಮೃತವು ಗಮನಿಸುವುದಿಲ್ಲ.
    ಹರಿರ್ಹರತಿ ಪಾಪಾನಿ ದುಷ್ಟಚಿತ್ತೈರಪಿ ಸ್ಮೃತಃ । ಅನಿಚ್ಛಯಾಪಿ ಸಂಸ್ಪೃಷ್ಟೋ ದಹತ್ಯೇವ ಹಿ ಪಾವಕಃ ॥
    ದುಷ್ಟಚಿತ್ತನಾದವನ ಮೂಲಕ ಸ್ಮರಿಸಲ್ಪಟ್ಟರೂ ಭಗವಾನ್ ಶ್ರೀಹರಿಯು ಪಾಪಗಳನ್ನು ಕಳೆಯುತ್ತಾನೆ. ತಿಳಿದೋ, ತಿಳಿಯದೆಯೋ ಬೆಂಕಿಯನ್ನು ಮುಟ್ಟಿದರೆ ಸುಡದೆ ಇರುತ್ತದೆಯೇ?
    ಭಗವಂತನ ನಾಮವನ್ನು ಉಚ್ಚರಿಸುವುದು ಕೇವಲ ಪಾಪಗಳನ್ನೇ ಕಳೆಯುತ್ತದೆ. ಇದಕ್ಕೆ ಬೇರೆ ಯಾವುದೇ ಫಲವಿಲ್ಲ ಎಂಬ ಧೋರಣೆ ಭ್ರಮೆಯಿಂದ ಕೂಡಿದೆ. ಏಕೆಂದರೆ, ಶಾಸದಲ್ಲಿ ಹೇಳಿದೆ
    ‘ಸಕೃದುಚ್ಚರಿತಂ ಯೇನ ಹರಿರಿತ್ಯಕ್ಷರದ್ವಯಮ್ । ಬದ್ಧಃ ಪರಿಕರಸ್ತೇನ ಮೋಕ್ಷಾಯ ಗಮನಂ ಪ್ರತಿ ॥’
    ಯಾರು ‘ಹರಿ’ ಎಂಬ ಎರಡು ಅಕ್ಷರಗಳನ್ನು ಒಮ್ಮೆಯಾದರೂ ಉಚ್ಚರಿಸಿರುವನೋ, ಅವನು ಮೋಕ್ಷಪ್ರಾಪ್ತಿಗಾಗಿ ಸೊಂಟಕಟ್ಟಿ ಸಿದ್ಧನಾದಂತೆಯೇ. ಈ ವಚನದಿಂದ ಭಗವನ್ನಾಮವು ಮೋಕ್ಷದ ಸಾಧನೆಯೂ ಆಗಿದೆ, ಎಂಬುದು ಸಿದ್ಧವಾಗುತ್ತದೆ. ಮೋಕ್ಷದೊಂದಿಗೆ ಇದು ಧರ್ಮ, ಅರ್ಥ, ಕಾಮದ ಸಾಧನೆಯೂ ಆಗಿದೆ. ಏಕೆಂದರೆ, ಅದರಲ್ಲಿ ತ್ರಿವರ್ಗ ಸಿದ್ಧಿಗೂ ಕೂಡ ನಾಮವೇ ಕಾರಣವಾಗಿದೆ ಎಂಬ ಅನೇಕ ಪ್ರಮಾಣಗಳು ದೊರೆಯುತ್ತವೆ.
    ನ ಗಂಗಾ ನ ಗಯಾಸೇತುರ್ನ ಕಾಶೀ ನ ಚ ಪುಷ್ಕರಮ್ । ಜಿಹ್ವಾಗ್ರೇ ವರ್ತತೇ ಯಸ್ಯ ಹರಿರಿತ್ಯಕ್ಷರದ್ವಯಮ್ ॥
    ಋಗ್ವೇದೋಥ ಯಜುರ್ವೇದಃ ಸಾಮವೇದೋ ಹ್ಯಥರ್ವಣಃ । ಅಧೀತಾಸ್ತೇನ ಯೇನೋಕ್ತಂ ಹರಿರಿತ್ಯಕ್ಷರದ್ವಯಮ್ ॥
    ಅಶ್ವಮೇಧಾದಿಭಿರ್ಯಜ್ಞೈರ್ನರಮೇಧೈಃ ಸದಕ್ಷಿಣೈಃ । ಯಜಿತಂ ತೇನ ಯೇನೋಕ್ತಂ ಹರಿರಿತ್ಯಕ್ಷರದ್ವಯಮ್ ॥
    ಪ್ರಾಣಪ್ರಯಾಣಪಾಥೇಯಂ ಸಂಸಾರವ್ಯಾಧಿಭೇಷಜಮ್ । ದುಃಖಕ್ಲೇಷಪರಿತ್ರಾಣಂ ಹರಿರಿತ್ಯಕ್ಷರದ್ವಯಮ್ ॥
    ಯಾರ ನಾಲಿಗೆಯ ತುದಿಯಲ್ಲಿ ‘ಹರಿ’ ಎಂಬ ಇವೆರಡು ಅಕ್ಷರಗಳು ನೆಲೆಸಿವೆಯೋ, ಅವನಿಗೆ ಗಂಗೆ, ಗಯಾ, ಸೇತುಬಂಧ ಕಾಶೀ ಮತ್ತು ಪುಷ್ಕರ ಮುಂತಾದ ತೀರ್ಥಕ್ಷೇತ್ರಗಳ ಆವಶ್ಯಕತೆ ಇಲ್ಲ. ಅರ್ಥಾತ್ ಅವುಗಳ ಯಾತ್ರೆಯ, ಸ್ನಾನಾದಿಗಳ ಫಲವು ಭಗವನ್ನಾಮದಿಂದಲೇ ದೊರೆಯುತ್ತದೆ. ‘ಹರಿ’ ಎಂಬ ಎರಡು ಅಕ್ಷರಗಳನ್ನು ಉಚ್ಚರಿಸಿದವನು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಇವುಗಳ ಅಧ್ಯಯನ ಮಾಡಿದಂತೆಯೆ. ‘ಹರಿ’ ಎಂಬ ಇವೆರಡು ಅಕ್ಷರಗಳನ್ನು ಉಚ್ಚರಿಸಿದವನು ದಕ್ಷಿಣೆಸಹಿತ ಅಶ್ವಮೇಧವೇ ಮುಂತಾದ ಯಜ್ಞಗಳಿಂದ ಯಜ್ಞಪುರುಷನನ್ನು ಪೂಜಿಸಿದಂತೆಯೇ. ‘ಹರಿ’ ಎಂಬ ಈ ಎರಡು ಅಕ್ಷರಗಳು ಮೃತ್ಯುವಿನ ಬಳಿಕ ಪರಲೋಕದ ಮಾರ್ಗದಲ್ಲಿ ಪ್ರಯಾಣಿಸುವ ಪ್ರಾಣಿಗೆ ದಾರಿಬುತ್ತಿಯೇ ಆಗಿದೆ. ಸಂಸಾರವೆಂಬ ರೋಗಕ್ಕೆ ಸಿದ್ಧ ಔಷಧವಾಗಿದೆ. ಜೀವನದ ದುಃಖ ಮತ್ತು ಕ್ಲೇಶಗಳು ಪೂರ್ಣವಾಗಿ ಹೊರಟುಹೋಗುವುವು.
    ಈ ವಚನಗಳಿಂದ ಭಗವನ್ನಾಮವು ಧರ್ಮ, ಅರ್ಥ, ಕಾಮ ಎಂಬ ಮೂರು ವರ್ಗಗಳಿಗೂ ಸಾಧನೆಯಾಗಿದೆ ಎಂಬುದು ಸಿದ್ಧವಾಗುತ್ತದೆ. ಈ ಮಾತು ‘ಹರಿ’ ‘ನಾರಾಯಣ’ ಮುಂತಾದ ಕೆಲವು ವಿಶೇಷ ನಾಮಗಳ ಕುರಿತೇ ಆಗಿರದೆ ಎಲ್ಲ ನಾಮಗಳ ಸಂಬಂಧವಾಗಿಯೂ ಇದೆ. ಏಕೆಂದರೆ ಅನಂತನ ನಾಮ, ವಿಷ್ಣುವಿನ ನಾಮ, ಹರಿಯ ನಾಮ ಮುಂತಾದ ಮಾತು ಅಲ್ಲಲ್ಲಿ ಸಾಮಾನ್ಯವಾಗಿ ಹೇಳಲ್ಪಟ್ಟಿದೆ. ಭಗವಂತನ ಎಲ್ಲ ನಾಮಗಳಲ್ಲಿ ಶಕ್ತಿಯು ಒಂದೇ ರೀತಿಯಾಗಿದೆ.
    ನಾಮ ಸಂಕೀರ್ತನಾದಿಗಳಲ್ಲಿ ವರ್ಣ-ಆಶ್ರಮದ ಯಾವ ನಿಯಮವೂ ಇಲ್ಲ.
    ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಸ್ತ್ರಿಯಃ ಶೂದ್ರಾಂತ್ಯಜಾತಯಃ ।
    ಯತ್ರ ತತ್ರಾನುಕುರ್ವಂತಿ ವಿಷ್ಣೋರ್ನಾಮಾನುಕೀರ್ತನಮ್ । ಸರ್ವಪಾಪವಿನಿರ್ಮುಕ್ತಾಸ್ತೇಪಿಯಾಂತಿ ಸನಾತನಮ್ ॥
    ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಸ್ತ್ರೀಯರು, ಶೂದ್ರರು, ಅಂತ್ಯಜರು ಮುಂತಾದವರೆಲ್ಲರೂ ಅಲ್ಲಲ್ಲಿ ಭಗವಾನ್ ವಿಷ್ಣುವಿನ ನಾಮವನ್ನು ಕೀರ್ತಿಸುತ್ತಾ ಇರುತ್ತಾರೆ. ಅವರೂ ಕೂಡ ಸಮಸ್ತ ಪಾಪಗಳಿಂದ ಮುಕ್ತರಾಗಿ ಸನಾತನ ಪರಮಾತ್ಮನನ್ನು ಪಡೆದುಕೊಳ್ಳುವರು.
    ನಾಮ ಸಂಕೀರ್ತನೆಯಲ್ಲಿ ದೇಶಕಾಲ ಮುಂತಾದವುಗಳ ನಿಯಮಗಳೂ ಇಲ್ಲ.
    ನ ದೇಶಕಾಲನಿಯಮಃ ಶೌಚಾಶೌಚವಿನಿರ್ಣಯಃ । ಪರಂ ಸಂಕೀರ್ತನಾದೇವ ರಾಮ ರಾಮೇತಿ ಮುಚ್ಯತೇ ॥
    ನ ದೇಶ ನಿಯಮೋ ರಾಜನ್ ನ ಕಾಲನಿಯಮಸ್ತಥಾ । ವಿದ್ಯತೇ ನಾತ್ರ ಸಂದೇಹೋ ವಿಷ್ಣೋರ್ನಾಮಾನುಕೀರ್ತನೇ ॥
    ಕಾಲೋಸ್ತಿ ಯಜ್ಞೇ ದಾನೇ ವಾ ಸ್ನಾನೇ ಕಾಲೋಸ್ತಿ ಸಜ್ಜಪೇ । ವಿಷ್ಣುಸಂಕೀರ್ತನೇ ಕಾಲೋ ನಾಸ್ತ್ಯತ್ರ ಪೃಥಿವೀಪತೇ ॥
    ಗಚ್ಛನ್ ತ್ತಿಷ್ಠನ್ ಸ್ವಪನ್ ವಾಪಿ ಪಿಬನ್ ಭುಂಜನ್ ಜಪನ್ ಸ್ತಥಾ । ಕೃಷ್ಣ ಕೃಷ್ಣೇತಿ ಸಂಕೀರ್ತ್ಯ ಮುಚ್ಯತೇ ಪಾಪಕಂಚುಕಾತ್ ॥

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ । ಯಃ ಸ್ಮರೇತ್ಪುಂಡರೀಕಾಕ್ಷಂ ಸಬಾಹ್ಯಾಭ್ಯಂತರಃ ಶುಚಿಃ ॥
ನಾಮಸ್ಮರಣೆಯಲ್ಲಿ ದೇಶ-ಕಾಲದ ನಿಯಮವಿಲ್ಲ. ಶೌಚ-ಅಶೌಚ ಮುಂತಾದವುಗಳನ್ನೂ ನಿರ್ಣಯಿಸುವ ಆವಶ್ಯಕತೆಯಿಲ್ಲ. ಕೇವಲ ರಾಮ-ರಾಮ ಈ ಸಂಕೀರ್ತನ ಮಾತ್ರದಿಂದಲೇ ಜೀವನು ಮುಕ್ತನಾಗಿ ಹೋಗುತ್ತಾನೆ.
ಭಗವಂತನ ನಾಮವನ್ನು ಸಂಕೀರ್ತನೆ ಮಾಡುವುದರಲ್ಲಿ ದೇಶದ ಹಾಗೂ ಕಾಲದ ನಿಯಮವಿರುವುದಿಲ್ಲ. ಇದರಲ್ಲಿ ಸಂದೇಹವೇ ಇಲ್ಲ. ಎಲೈ ರಾಜನೇ ! ಯಜ್ಞ, ದಾನ, ತೀರ್ಥಸ್ನಾನ ಅಥವಾ ವಿಧಿಪೂರ್ವಕ ಜಪಕ್ಕಾಗಿ ಶುದ್ಧ ಕಾಲದ ಆವಶ್ಯಕತೆ ಇದೆ. ಆದರೆ ಭಗವಂತನ ನಾಮ ಸಂಕೀರ್ತನೆಯಲ್ಲಿ ಕಾಲ-ಶುದ್ಧಿಯ ಯಾವ ಆವಶ್ಯಕತೆಯೂ ಇಲ್ಲ. ನಡೆವಾಗ, ಓಡಾಡುವಾಗ, ನಿಂತಾಗ, ಮಲಗಿದಾಗ, ಉಂಬಾಗ, ತಿಂಬಾಗ ಮತ್ತು ಜಪ ಮಾಡುವಾಗಲೂ ‘ಕೃಷ್ಣ-ಕೃಷ್ಣ’ ಎಂಬ ಸಂಕೀರ್ತನೆಗೈದು ಮನುಷ್ಯನು ಪಾಪದ ತೆಕ್ಕೆಯಿಂದ ಬಿಡುಗಡೆ ಹೊಂದುವನು. ಅಪವಿತ್ರವಾಗಿರಲೀ, ಪವಿತ್ರವಾಗಿರಲೀ, ಎಲ್ಲ ಅವಸ್ಥೆಗಳಲ್ಲಿಯೂ ಕಮಲನಯನ ಭಗವಂತನ ಸ್ಮರಣೆ ಮಾಡುವವನು ಒಳ-ಹೊರಗೆ ಪವಿತ್ರನಾಗಿ ಹೋಗುವನು.
ಕೃಷ್ಣೇತಿ ಮಂಗಲಂ ನಾಮ ಯಸ್ಯವಾಚಿ ಪ್ರವರ್ತತೇ । ಭಸ್ಮೀಭವಂತಿ ಸದ್ಯಸ್ತು ಮಹಾಪಾತಕಕೋಟಯಃ ॥
ಸರ್ವೇಷಾಮಪಿ ಯಜ್ಞಾನಾಂ ಲಕ್ಷಣಾನಿ ವ್ರತಾನಿ ಚ । ತೀರ್ಥಸ್ನಾನಾನಿ ಸರ್ವಾಣಿ ತಪಾಂಸ್ಯನಶನಾನಿ ಚ ॥
ವೇದಪಾಠಸಹಸ್ರಾಣಿ ಪ್ರಾದಕ್ಷಿಣ್ಯಂ ಭುವಃ ಶತಮ್ । ಕೃಷ್ಣನಾಮ ಜಪಸ್ಯಾಸ್ಯ ಕಲಾಂ ನಾರ್ಹಂತಿ ಷೋಡಶೀಮ್ ॥
ಯಾರ ನಾಲಿಗೆಯಲ್ಲಿ ಕೃಷ್ಣ-ಕೃಷ್ಣ-ಕೃಷ್ಣ ಎಂಬ ಮಂಗಲನಾಮವು ಕುಣಿಯುತ್ತಿರುತ್ತದೋ ಅವನ ಕೋಟಿ-ಕೋಟಿ ಮಹಾಪಾತಕಗಳ ರಾಶಿಯು ಆಗಲೇ ಭಸ್ಮವಾಗಿ ಹೋಗುತ್ತವೆ. ಎಲ್ಲ ಯಜ್ಞಗಳು, ಲಕ್ಷಾಂತರ ವ್ರತಗಳು, ಎಲ್ಲ ತೀರ್ಥಸ್ನಾನ, ತಪಸ್ಸು, ಅನೇಕ ಉಪವಾಸ, ಸಾವಿರಾರು ವೇದಪಾರಾಯಣಗಳು, ನೂರಾರು ಭೂಪ್ರದಕ್ಷಿಣೆಗಳು, ಶ್ರೀಕೃಷ್ಣನ ನಾಮ-ಜಪದ ಹದಿನಾರನೆಯ ಒಂದು ಭಾಗಕ್ಕೂ ಸಾಟಿಯಾಗಲಾರದು.
ಭಗವನ್ನಾಮದ ಕೀರ್ತನೆಯಲ್ಲೇ ಇಂತಹ ಫಲವಿದೆ ಎಂಬ ಮಾತಿಲ್ಲ. ಅದರ ಶ್ರವಣ, ಸ್ಮರಣೆಯಲ್ಲಿಯೂ ಅದೇ ಫಲವಿದೆ. ದಶಮಸ್ಕಂಧದ ಕೊನೆಯಲ್ಲಿ ‘ಕೃಷ್ಣನ ನಾಮದ ಸ್ಮರಣೆ ಮತ್ತು ಉಚ್ಚಾರಣೆ ಅಮಂಗಳಗಳನ್ನು ನಾಶಮಾಡುವಂತಹುದು’ ಎಂದು ಹೇಳಿದೆ. ಶಿವಗೀತಾ ಮತ್ತು ಪದ್ಮಪುರಾಣದಲ್ಲಿಯೂ ಹೇಳಿದೆ
ಆಶ್ಚರ್ಯ ವಾ ಭಯೇ ಶೋಕೇ ಕ್ಷತೇ ವಾ ಮಮನಾಮ ಯಃ । ವ್ಯಾಜೇನ ವಾ ಸ್ಮರೇದ್ಯಸ್ತು ಸ ಯಾತಿ ಪರಮಾಂ ಗತಿಮ್ ॥
ಪ್ರಯಾಣೇ ಚಾಪ್ರಯಾಣೇ ಚ ಯನ್ನಾಮ ಸ್ಮರತಾಂ ನೃಣಾಮ್ । ಸದ್ಯೋ ನಶ್ಯತಿ ಪಾಪೌಘೋ ನಮಸ್ತಸ್ಮೈ ಚಿದಾತ್ಮನೇ ॥
ಭಗವಂತನು ಹೇಳುತ್ತಾನೆ - ಆಶ್ಚರ್ಯ, ಭಯ, ಶೋಕ, ಏಟು ಬೀಳುವುದು ಮುಂತಾದ ಅವಸ್ಥೆಯಲ್ಲಿ ನನ್ನ ನಾಮವನ್ನು ಉಚ್ಚರಿಸುವವನು, ಅಥವಾ ಯಾವುದೋ ನೆಪದಿಂದ ಸ್ಮರಿಸಿದರೂ ಅವನು ಪರಮಗತಿಯನ್ನು ಪಡೆಯುತ್ತಾನೆ. ಬದುಕಿರುವಾಗ, ಸಾಯುವಾಗ, ಬೇಕಾದಾಗ ಭಗವಂತನ ನಾಮವನ್ನು ಸ್ಮರಿಸುವ ಮನುಷ್ಯನ ಪಾಪರಾಶಿಯು ಆಗಲೇ ನಾಶವಾಗಿ ಹೋಗುತ್ತದೆ. ಅಂತಹ ಚಿದಾತ್ಮನಾದ ಭಗವಂತನಿಗೆ ನಮಸ್ಕಾರವು.
ಉತ್ತಮವಾದ ಇತಿಹಾಸದಲ್ಲಿಯೂ ಹೇಳಲಾಗಿದೆ -
ಶ್ರುತ್ವಾ ನಾಮಾನಿ ತತ್ರಸ್ಥಾಸ್ತೇನೋಕ್ತಾನಿ ಹರೇರ್ದ್ವಿಜ । ನಾರಕಾ ನರಕಾನ್ಮುಕ್ತಾಃ ಸದ್ಯ ಏವ ಮಹಾಮುನೇ ॥
ಮಹಾಮುನಿಗಳಾದ ವಿಪ್ರೋತ್ತಮರೇ ! ನರಕದಲ್ಲಿ ವಾಸಿಸುವ ಪ್ರಾಣಿಗಳು ಭಕ್ತರಾಜನ ಮುಖದಿಂದ ಶ್ರೀಹರಿಯ ನಾಮವನ್ನು ಶ್ರವಣಿಸಿ, ಅವರು ಒಡನೆಯೇ ನರಕದಿಂದ ಮುಕ್ತರಾಗಿ ಹೋದರು.
ಯಜ್ಞಯಾಗಾದಿರೂಪವಾದ ಧರ್ಮದ ಅನುಷ್ಠಾನದಲ್ಲಿ ಪವಿತ್ರದೇಶ,ಕಾಲ, ಪಾತ್ರ, ಶಕ್ತಿ, ಸಾಮಗ್ರಿ, ಶ್ರದ್ಧೆ, ಮಂತ್ರ, ದಕ್ಷಿಣೆ ಮುಂತಾದವುಗಳ ಆವಶ್ಯಕತೆ ಇರುತ್ತದೆ. ಈ ಕಲಿಯುಗದಲ್ಲಿ ಅದು ಸಾಂಗವಾಗಿ ನೆರವೇರುವುದು ಅತ್ಯಂತ ಕಷ್ಟವಾಗಿದೆ. ಭಗವನ್ನಾಮ ಸಂಕೀರ್ತನೆಯಿಂದ ಅದರ ಫಲವನ್ನು ಆಯಾಸವಿಲ್ಲದೆ ಪಡೆಯಲಾಗುತ್ತದೆ. ಭಗವಾನ್ ಶಂಕರನು ಪಾರ್ವತಿಗೆ ಹೇಳುತ್ತಾನೆ
ಈಶೋಽಹಂ ಸರ್ವಜಗತಾಂ ನಾಮ್ನಾಂ ವಿಷ್ಣೋರ್ಹಿಜಾಪಕಃ । ಸತ್ಯಂ ಸತ್ಯಂ ವದಾಮ್ಯೇವ ಹರೇರ್ನಾನ್ಯಾ ಗತಿರ್ನೃಣಾಮ್ ॥
ನಾನು ಸಮಸ್ತ ಜಗತ್ತಿಗೆ ಒಡೆಯನಾಗಿದ್ದರೂ ಭಗವಾನ್ ವಿಷ್ಣುವಿನ ನಾಮವನ್ನೇ ಜಪಿಸುತ್ತಾ ಇರುತ್ತೇನೆ. ಭಗವಂತನನ್ನು ಬಿಟ್ಟು ಜೀವಿಗಳಿಗೆ ಈಗ ಕರ್ಮಕಾಂಡವೇ ಮುಂತಾದ ಯಾವ ಗತಿಯೂ ಇಲ್ಲ ಎಂಬುದನ್ನು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ. ಶ್ರೀಮದ್ಭಾಗವತದಲ್ಲಿಯೂ ಇದೇ ಮಾತು ಮುಂದೆ ಬರುವುದಿದೆ. ಕೃತಯುಗದಲ್ಲಿ ಧ್ಯಾನದಿಂದಲೂ, ತ್ರೇತಾಯುಗದಲ್ಲಿ ಯಜ್ಞದಿಂದಲೂ, ದ್ವಾಪರದಲ್ಲಿ ಅರ್ಚನೆಯಿಂದಲೂ ಸಿಗುವ ಫಲವೇ ಕಲಿಯುಗದಲ್ಲಿ ಕೇವಲ ಭಗವನ್ನಾಮ ಕೀರ್ತನೆಯಿಂದ ದೊರೆಯುತ್ತದೆ. ಇಷ್ಟೇ ಅಲ್ಲದೆ ಕಲಿಯುಗವು ದೋಷಗಳ ಭಂಡಾರವಾಗಿದೆ. ಆದರೂ ಇದರಲ್ಲಿ ಮಹತ್ತಮವಾದ ಒಂದು ಗುಣವಿದೆ ಶ್ರೀಕೃಷ್ಣನ ಸಂಕೀರ್ತನ ಮಾತ್ರದಿಂದಲೇ ಜೀವಿಗಳು ಬಂಧನದಿಂದ ಮುಕ್ತರಾಗಿ ಪರಮಾತ್ಮನನ್ನು ಪಡೆದುಕೊಳ್ಳುವರು.
ಹೀಗೆ ಒಂದೇ ಬಾರಿ ನಾಮೋಚ್ಚಾರದ ಅನಂತ ಮಹಿಮೆಯನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಲ್ಲಿ ಮೂಲ ಪ್ರಸಂಗದಲ್ಲಿ ‘ಸಕೃದುಚ್ಚರಿತಂ’ ಎಂಬುದರ ಉಲ್ಲೇಖವಾಗಿದೆ. ಪದೇ-ಪದೇ ನಾಮೋಚ್ಚಾರಣೆಯ ವಿಧಾನವು. ಮುಂದೆ ಇನ್ನೂ ಪಾಪಗಳು ಉಂಟಾಗದಿರಲೆಂದೇ ಇದೆ. ಭಗವಂತನ ನಾಮವನ್ನು ಕೊಂಡಾಡುವುದರಿಂದ ಭೂತ, ವರ್ತಮಾನ, ಭವಿಷ್ಯದ ಎಲ್ಲ ಪಾಪಗಳು ಭಸ್ಮವಾಗಿ ಹೋಗುವುವು.
ವರ್ತಮಾನಂ ಚ ಯತ್ ಪಾಪಂ ಯದ್ ಭೂತಂ ಯದ್ ಭವಿಷ್ಯತಿ । ತತ್ಸರ್ವಂ ನಿರ್ದಹತ್ಯಾಶು ಗೋವಿಂದಾನಲಕೀರ್ತನಮ್ ॥
ಹೀಗಿದ್ದರೂ ಭಗವತ್ಪ್ರೇಮಿಯಾದ ಜೀವಿಯು ಪಾಪಗಳ ನಾಶದ ಬಗ್ಗೆ ಹೆಚ್ಚು ದೃಷ್ಟಿ ಇರಿಸಬಾರದು. ಅವನಿಗಾದರೋ ಭಕ್ತಿ-ಭಾವದ ದೃಢತೆಗಾಗಿಯೇ ಭಗವಂತನ ಚರಣಗಳಲ್ಲಿ ಹೆಚ್ಚೆಚ್ಚು ಪ್ರೇಮ-ಭಕ್ತಿಯು ಬೆಳೆಯಲಿ ಈ ದೃಷ್ಟಿಯಿಂದ ಹಗಲು-ರಾತ್ರಿ, ನಿತ್ಯ-ನಿರಂತರ ಭಗವಂತನ ಮಧುರವಾದ ನಾಮಗಳ ಜಪವನ್ನು ಮಾಡಬೇಕು. ನಿಷ್ಕಾಮತೆ ಹೆಚ್ಚಿದಷ್ಟು ನಾಮದ ಪೂರ್ಣತೆ ಪ್ರಕಟಗೊಳ್ಳುವುದು, ಅನುಭವಕ್ಕೆ ಬರುವುದು.
ನಾಮದ ಮಹಿಮೆ ವಾಸ್ತವಿಕವಲ್ಲ, ಅರ್ಥವಾದ ಮಾತ್ರವಾಗಿದೆ ಎಂಬ ಕಲ್ಪನೆ ಅನೇಕ ತಾರ್ಕಿಕರ ಮನಸ್ಸಿನಲ್ಲಿ ಏಳುತ್ತದೆ. ಅವರ ಮನಸ್ಸಿನಲ್ಲಿ ಮದ್ಯದ ಒಂದು ತೊಟ್ಟು ಕೂಡ ಪತಿತನನ್ನಾಗಿಸಲು ಸಾಕಷ್ಟಿದೆ ಎಂಬ ಧೋರಣೆ ಇರುತ್ತದೆ. ಆದರೆ ಭಗವಂತನ ಒಂದೇ ನಾಮವೂ ಕೂಡ ಪರಮ ಶ್ರೇಯಸ್ಕರವಾಗಿದೆ ಎಂಬ ವಿಶ್ವಾಸ ಉಂಟಾಗುವುದಿಲ್ಲ. ಭಗವನ್ನಾಮದ ಮಹಿಮೆಯನ್ನು ಅರ್ಥವಾದವೆಂದು ತಿಳಿಯುವುದು ಮಹಾಪಾಪವೆಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ — ಪುರಾಣೇಷ್ವರ್ಥವಾದತ್ವಂ ಯೇ ವದಂತಿ ನರಾಧಮಾಃ ತೈರರ್ಜಿತಾನಿ ಪುಣ್ಯಾನಿ ತದ್ವದೇವ ಭವಂತಿ ಹಿ ॥


ಮನ್ನಾಮಕೀರ್ತನಫಲಂ ವಿವಿಧಂ ನಿಶಮ್ಯ ನ ಶ್ರದ್ಧಧಾತಿ ಮನುತೇ ಯದುತಾರ್ಥವಾದಮ್ ।
ಯೋ ಮಾನುಷಸ್ತಮಿಹ ದುಃಖಚಯೇ ಕ್ಷಿಪಾಮಿ ಸಂಸಾರಘೋರವಿವಿಧಾರ್ತಿನಿಪೀಡಿತಾಂಗಮ್ ॥


ಅರ್ಥವಾದಂ ಹರೇರ್ನಾಮ್ನಿ ಸಂಭಾವಯತಿ ಯೋ ನರಃ । ಸ ಪಾಪಿಷ್ಠೋ ಮನುಷ್ಯಾಣಾಂ ನರಕೇ ಪತತಿ ಸ್ಫುಟಮ್ ॥
ಪುರಾಣಗಳಲ್ಲಿ ಅರ್ಥವಾದದ ಕಲ್ಪನೆ ಮಾಡುವ ನರಾಧಮನು ಗಳಿಸಿದ ಪುಣ್ಯಗಳು ಅರ್ಥವಾದದಂತೆ ವ್ಯರ್ಥವಾಗಿ ಹೋಗುತ್ತವೆ.


ನನ್ನ ನಾಮ-ಕೀರ್ತನೆಯ ವಿವಿಧ ಫಲಗಳನ್ನು ಕೇಳಿ ಅದರಲ್ಲಿ ಶ್ರದ್ಧೆ ಇಡುವುದಿಲ್ಲವೋ ಮತ್ತು ಅದನ್ನು ಅರ್ಥವಾದವೆಂದು ತಿಳಿಯುವ ಮನುಷ್ಯನಿಗೆ ಸಂಸಾರದ ನಾನಾ ಘೋರ ಕಷ್ಟಗಳಿಂದ ಪೀಡಿತವಾಗಬೇಕಾಗುತ್ತದೆ. ಅವನನ್ನು ನಾನು ಅನೇಕ ದುಃಖಗಳಲ್ಲಿ ಕೆಡಹುತ್ತೇನೆ.


ಭಗವಂತನ ನಾಮದಲ್ಲಿ ಅರ್ಥವಾದವನ್ನು ಎಣಿಸುವ ಮನುಷ್ಯನು ಅತ್ಯಂತ ಪಾಪಿಯಾಗಿದ್ದಾನೆ ಮತ್ತು ಅವನಿಗೆ ನರಕದಲ್ಲಿ ಬೀಳಬೇಕಾಗುತ್ತದೆ.

(ಶ್ಲೋಕ-20)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತ ಏವಂ ಸುವಿನಿರ್ಣೀಯ ಧರ್ಮಂ ಭಾಗವತಂ ನೃಪ ।
ತಂ ಯಾಮ್ಯಪಾಶಾನ್ನಿರ್ಮುಚ್ಯ ವಿಪ್ರಂ ಮೃತ್ಯೋರಮೂಮುಚನ್ ॥

ಅನುವಾದ

ಶ್ರೀಶುಕ ಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ಹೀಗೆ ಭಗವಂತನ ಪಾರ್ಷದರು ಭಾಗವತ ಧರ್ಮದ ಸಮಗ್ರವಾದ ನಿರ್ಣಯವನ್ನು ತಿಳಿಸಿ, ಅಜಾಮಿಳನನ್ನು ಯಮನ ದೂತರಿಂದ ಬಿಡಿಸಿ ಮೃತ್ಯುಮುಖದಿಂದ ಪಾರು ಮಾಡಿದರು. ॥20॥

(ಶ್ಲೋಕ-21)

ಮೂಲಮ್

ಇತಿ ಪ್ರತ್ಯುದಿತಾ ಯಾಮ್ಯಾ ದೂತಾ ಯಾತ್ವಾ ಯಮಾಂತಿಕೇ ।
ಯಮರಾಜ್ಞೇ ಯಥಾ ಸರ್ವಮಾಚಚಕ್ಷುರರಿಂದಮ ॥

ಅನುವಾದ

ಪ್ರಿಯ ಪರೀಕ್ಷಿತನೇ! ಪಾರ್ಷದರ ಈ ಮಾತನ್ನು ಕೇಳಿ ಯಮದೂತರು ಯಮಧರ್ಮನ ಬಳಿಗೆ ಹೋಗಿ, ಅವರಿಗೆ ಇವೆಲ್ಲ ವೃತ್ತಾಂತವನ್ನು ಇದ್ದಂತೆಯೇ ತಿಳಿಸಿದರು. ॥21॥

(ಶ್ಲೋಕ-22)

ಮೂಲಮ್

ದ್ವಿಜಃ ಪಾಶಾದ್ವಿನಿರ್ಮುಕ್ತೋ ಗತಭೀಃ ಪ್ರಕೃತಿಂ ಗತಃ ।
ವವಂದೇ ಶಿರಸಾ ವಿಷ್ಣೋಃ ಕಿಂಕರಾನ್ದರ್ಶನೋತ್ಸವಃ ॥

ಅನುವಾದ

ಅಜಾಮಿಳನು ಯಮದೂತರ ಪಾಶಗಳಿಂದ ಬಿಡುಗಡೆಹೊಂದಿ ನಿರ್ಭಯನಾಗಿ, ಸ್ವಸ್ಥನಾದನು. ಅವನು ವಿಷ್ಣುಕಿಂಕರ ದರ್ಶನದಿಂದ ಆನಂದಮಗ್ನನಾಗಿ ಅವರಿಗೆ ತಲೆಬಾಗಿ ವಂದಿಸಿದನು.॥22॥

(ಶ್ಲೋಕ-23)

ಮೂಲಮ್

ತಂ ವಿವಕ್ಷುಮಭಿಪ್ರೇತ್ಯ ಮಹಾಪುರುಷಕಿಂಕರಾಃ ।
ಸಹಸಾ ಪಶ್ಯತಸ್ತಸ್ಯ ತತ್ರಾಂತರ್ದಧಿರೇನಘ ॥

ಅನುವಾದ

ಪುಣ್ಯಾತ್ಮನಾದ ರಾಜನೇ! ಅಜಾಮಿಳನು ಏನೋ ಹೇಳಲು ಬಯಸುತ್ತಿರುವನೆಂದು ನೋಡಿ ಭಗವಂತನ ಪಾರ್ಷದರು ಅವನು ನೋಡುತ್ತಿರುವಂತೆ ಅಲ್ಲೇ ಅಂತರ್ಧಾನ ಹೊಂದಿದರು.॥23॥

(ಶ್ಲೋಕ-24)

ಮೂಲಮ್

ಅಜಾಮಿಲೋಪ್ಯಥಾಕರ್ಣ್ಯ ದೂತಾನಾಂ ಯಮಕೃಷ್ಣಯೋಃ ।
ಧರ್ಮಂ ಭಾಗವತಂ ಶುದ್ಧಂ ತ್ರೈವಿದ್ಯಂ ಚ ಗುಣಾಶ್ರಯಮ್ ॥

ಅನುವಾದ

ಈ ಸಂದರ್ಭದಲ್ಲಿ ಅಜಾಮಿಳನು ಭಗವಂತನ ಪಾರ್ಷದರಿಂದ ವಿಶುದ್ಧವಾದ ಭಾಗವತ ಧರ್ಮವನ್ನು ಮತ್ತು ಯಮದೂತರಿಂದ ವೇದೋಕ್ತವಾದ ಪ್ರವೃತ್ತಿ ಧರ್ಮವನ್ನು ಕೇಳಿದ್ದನು. ॥24॥

(ಶ್ಲೋಕ-25)

ಮೂಲಮ್

ಭಕ್ತಿಮಾನ್ ಭಗವತ್ಯಾಶು ಮಾಹಾತ್ಮ್ಯಶ್ರವಣಾದ್ಧರೇಃ ।
ಅನುತಾಪೋ ಮಹಾನಾಸೀತ್ಸ್ಮರತೋಶುಭಮಾತ್ಮನಃ ॥

ಅನುವಾದ

ಸರ್ವಪಾಪಹಾರಿಯಾದ ಭಗವಂತನ ಮಹಿಮೆಯನ್ನೂ ಕೇಳಿದ್ದರಿಂದ ಅಜಾಮಿಳನ ಹೃದಯದಲ್ಲಿ ಆಗಲೇ ಭಕ್ತಿಯ ಉದಯವಾಯಿತು. ಈಗ ಅವನಿಗೆ ತನ್ನ ಪಾಪಗಳು ನೆನಪಾಗಿ ಭಾರೀ ಪಶ್ಚಾತ್ತಾಪ ಉಂಟಾಯಿತು. ॥25॥

(ಶ್ಲೋಕ-26)

ಮೂಲಮ್

ಅಹೋ ಮೇ ಪರಮಂ ಕಷ್ಟಮಭೂದವಿಜಿತಾತ್ಮನಃ ।
ಯೇನ ವಿಪ್ಲಾವಿತಂ ಬ್ರಹ್ಮ ವೃಷಲ್ಯಾಂ ಜಾಯತಾತ್ಮನಾ ॥

ಅನುವಾದ

ಅವನು ಮನಸ್ಸಿನಲ್ಲೇ ಅಂದು ಕೊಂಡನು ಅಯ್ಯೋ! ನಾನು ಇಂದ್ರಿಯಗಳಿಗೆ ಎಂತಹ ಗುಲಾಮನಾಗಿಬಿಟ್ಟೆ! ಈ ದಾಸಿಯ ಗರ್ಭದಿಂದ ಪುತ್ರರನ್ನು ಪಡೆದು ನಾನು ಬ್ರಾಹ್ಮಣ್ಯವನ್ನು ಹಾಳು ಮಾಡಿಕೊಂಡೆನಲ್ಲ! ಇದೆಂತಹ ದುಃಖದ ಸಂಗತಿಯಾಗಿದೆ!॥26॥

(ಶ್ಲೋಕ-27)

ಮೂಲಮ್

ಧಿಂಗ್ಮಾಂ ವಿಗರ್ಹಿತಂ ಸದ್ಭಿರ್ದುಷ್ಕೃತಂ ಕುಲಕಜ್ಜಲಮ್ ।
ಹಿತ್ವಾ ಬಾಲಾಂ ಸತೀಂ ಯೋಹಂ ಸುರಾಪಾಮಸತೀಮಗಾಮ್ ॥

ಅನುವಾದ

ಇಂತಹ ಕಡುಪಾಪಿ ಯಾದ ನನಗೆ ಧಿಕ್ಕಾರವಿರಲಿ! ಸತ್ಪುರುಷರ ನಿಂದೆಗೆ ಪಾತ್ರನಾದ ಪಾಪಾತ್ಮನು ನಾನು. ನನ್ನ ಕುಲಕ್ಕೆ ಕಳಂಕವನ್ನು ತಂದ ಪಾಪಿಯು ನಾನು. ಅಯ್ಯೋ! ಶಿವನೇ! ಕಿರುವಯಸ್ಸಿನಲ್ಲಿದ್ದ ಸಾಧ್ವಿಯಾದ ಪತ್ನಿಯನ್ನು ತೊರೆದು, ಹೆಂಡಕುಡಿಯುವ ಕುಲಟೆಯ ಸಹವಾಸ ಮಾಡಿದೆನಲ್ಲ! ॥27॥

(ಶ್ಲೋಕ-28)

ಮೂಲಮ್

ವೃದ್ಧಾವನಾಥೌ ಪಿತರೌ ನಾನ್ಯಬಂಧೂ ತಪಸ್ವಿನೌ ।
ಅಹೋ ಮಯಾಧುನಾ ತ್ಯಕ್ತಾವಕೃತಜ್ಞೇನ ನೀಚವತ್ ॥

ಅನುವಾದ

ಎಂತಹ ನೀಚನು ನಾನು! ನನ್ನ ತಂದೆ-ತಾಯಂದಿರು ವೃದ್ಧರೂ, ತಪಸ್ವಿಗಳೂ ಆಗಿದ್ದರು. ಸರ್ವಥಾ ಅಸಹಾಯಕರಾದ ಅವರ ಸೇವೆ-ಶುಶ್ರೂಷೆ ಮಾಡುವವರು ಬೇರೆ ಯಾರೂ ಇಲ್ಲದಿದ್ದರೂ ನಾನೂ ಅವರನ್ನು ತೊರೆದು ಬಿಟ್ಟೆನಲ್ಲ! ಅಯ್ಯೋ! ನಾನು ಎಷ್ಟು ಕೃತಘ್ನನಾಗಿದ್ದೇನೆ! ॥28॥

(ಶ್ಲೋಕ-29)

ಮೂಲಮ್

ಸೋಹಂ ವ್ಯಕ್ತಂ ಪತಿಷ್ಯಾಮಿ ನರಕೇ ಭೃಶದಾರುಣೇ ।
ಧರ್ಮಘ್ನಾಃ ಕಾಮಿನೋ ಯತ್ರ ವಿಂದಂತಿ ಯಮಯಾತನಾಃ ॥

ಅನುವಾದ

ಈಗ ನಾನು ಧರ್ಮಘಾತಕರಾದ ಪಾಪಾತ್ಮರೂ, ಕಾಮುಕರೂ ಅನೇಕ ರೀತಿಯ ಯಮ ಯಾತನೆಗಳನ್ನೂ ಅನು ಭವಿಸುವ ಅತ್ಯಂತ ಭಯಂಕರವಾದ ನರಕದಲ್ಲಿ ಬೀಳಬೇಕಾಗುವುದು.॥29॥

(ಶ್ಲೋಕ-30)

ಮೂಲಮ್

ಕಿಮಿದಂ ಸ್ವಪ್ನ ಆಹೋಸ್ವಿತ್ ಸಾಕ್ಷಾದ್ದೃಷ್ಟಮಿಹಾದ್ಭುತಮ್ ।
ಕ್ವ ಯಾತಾ ಅದ್ಯ ತೇ ಯೇ ಮಾಂ ವ್ಯಕರ್ಷನ್ ಪಾಶಪಾಣಯಃ ॥

ಅನುವಾದ

ಈಗ ನಾನು ಕಂಡಿರುವ ಅದ್ಭುತವಾದ ದೃಶ್ಯವು ಸ್ವಪ್ನವೋ? ಅಥವಾ ಜಾಗ್ರತ ಸ್ಥಿತಿಯ ಪ್ರತ್ಯಕ್ಷ ಅನುಭವವೋ? ಈಗ ತಾನೇ ಕೈಯಲ್ಲಿ, ಪಾಶಗಳನ್ನೂ ಹಿಡಿದುಕೊಂಡು ನನ್ನನ್ನು ಸೆಳೆಯುತ್ತಿ ದ್ದವರು ಎಲ್ಲಿಗೆ ಹೋದರು? ॥30॥

ಮೂಲಮ್

(ಶ್ಲೋಕ-31)
ಅಥ ತೇ ಕ್ವ ಗತಾಃ ಸಿದ್ಧಾಶ್ಚತ್ವಾರಶ್ಚಾರುದರ್ಶನಾಃ ।
ವ್ಯಮೋಚಯನ್ನೀಯಮಾನಂ ಬದ್ಧ್ವಾ ಪಾಶೈರಧೋ ಭುವಃ ॥

ಅನುವಾದ

ಅವರು ನನ್ನನ್ನು ಪಾಶಗಳಿಂದ ಬಂಧಿಸಿ ಭೂಮಿಯ ಕೆಳಗಡೆಗೆ ಸೆಳೆದೊಯ್ಯುತ್ತಿದ್ದರು. ಆದರೆ ಅತ್ಯಂತ ಸುಂದರ ರಾದ ನಾಲ್ಕುಮಂದಿಸಿದ್ಧರು ಬಂದು ನನ್ನನ್ನು ಬಿಡಿಸಿದರಲ್ಲ! ಈಗ ಅವರೆಲ್ಲಿಗೆ ಹೋದರು? ॥31॥

(ಶ್ಲೋಕ-32)

ಮೂಲಮ್

ಅಥಾಪಿ ಮೇ ದುರ್ಭಗಸ್ಯ ವಿಬುಧೋತ್ತಮದರ್ಶನೇ ।
ಭವಿತವ್ಯಂ ಮಂಗಲೇನ ಯೇನಾತ್ಮಾ ಮೇ ಪ್ರಸೀದತಿ ॥

ಅನುವಾದ

ನಾನು ಈ ಜನ್ಮದಲ್ಲಿ ಮಹಾಪಾಪಿ ಆಗಿದ್ದರೂ, ಹಿಂದಿನ ಜನ್ಮದಲ್ಲಿ ಖಂಡಿತವಾಗಿಯೂ ಶುಭಕರ್ಮಗಳನ್ನು ಮಾಡಿರಲೇಬೇಕು. ಅದರಿಂದಲೇ ನನಗೆ ಈ ಶ್ರೇಷ್ಠ ದೇವತೆಗಳ ದರ್ಶನವಾದುದು. ಅವರನ್ನು ನೆನೆದು ನನ್ನ ಮನಸ್ಸು ಈಗಲೂ ಆನಂದದಿಂದ ತುಂಬಿಹೋಗುತ್ತದೆ.॥32॥

(ಶ್ಲೋಕ-33)

ಮೂಲಮ್

ಅನ್ಯಥಾ ಮ್ರಿಯಮಾಣಸ್ಯ ನಾಶುಚೇರ್ವೃಷಲೀಪತೇಃ ।
ವೈಕುಂಠನಾಮ ಗ್ರಹಣಂ ಜಿಹ್ವಾ ವಕ್ತುಮಿಹಾರ್ಹತಿ ॥

ಅನುವಾದ

ನಾನು ಕುಲಟೆಯ ಸಂಗ ಮಾಡಿದವನೂ, ಅತ್ಯಂತ ಅಪವಿತ್ರನೂ ಆಗಿರುವೆ. ಹಿಂದಿನ ಜನ್ಮದಲ್ಲಿ ನಾನು ಪುಣ್ಯವನ್ನು ಮಾಡದಿದ್ದರೆ ಸಾಯುವ ಸಮಯದಲ್ಲಿ ನನ್ನ ನಾಲಿಗೆಯು ಭಗವಂತನ ಮಧುರ ವಾದ ನಾಮವನ್ನು ಹೇಗೆ ಉಚ್ಚರಿಸುತ್ತಿತ್ತು? ॥33॥

(ಶ್ಲೋಕ-34)

ಮೂಲಮ್

ಕ್ವ ಚಾಹಂ ಕಿತವಃ ಪಾಪೋ ಬ್ರಹ್ಮಘ್ನೋ ನಿರಪತ್ರಪಃ ।
ಕ್ವ ಚ ನಾರಾಯಣೇತ್ಯೇತದ್ಭಗವನ್ನಾಮ ಮಂಗಲಮ್ ॥

ಅನುವಾದ

ಮಹಾಕಪಟಿಯೂ, ಪಾಪಿಯೂ, ನಿರ್ಲಜ್ಜನೂ, ಬ್ರಹ್ಮ ತೇಜವನ್ನು ನಾಶಮಾಡಿದವನೂ ಆದ ನಾನೆಲ್ಲಿ? ಭಗವಂತನ ಆ ಪರಮಮಂಗಲಮಯ ‘ನಾರಾಯಣ’ ನಾಮವೆಲ್ಲಿ? (ನಿಜವಾಗಿ ನಾನು ಕೃತಾರ್ಥನೇ ಆಗಿರುವೆನು.) ॥34॥

(ಶ್ಲೋಕ-35)

ಮೂಲಮ್

ಸೋಹಂ ತಥಾ ಯತಿಷ್ಯಾಮಿ ಯತಚಿತ್ತೇಂದ್ರಿಯಾನಿಲಃ ।
ಯಥಾ ನ ಭೂಯ ಆತ್ಮಾನಮಂಧೇ ತಮಸಿ ಮಜ್ಜಯೇ ॥

ಅನುವಾದ

ಈಗ ನಾನು ನನ್ನ ಮನಸ್ಸು, ಇಂದ್ರಿಯಗಳು ಮತ್ತು ಪ್ರಾಣಗಳನ್ನು ವಶಪಡಿಸಿಕೊಂಡು ಮತ್ತೆ ಘೋರವಾದ, ಅಂಧಕಾರ ಮಯವಾದ ನರಕದಲ್ಲಿ ಬೀಳದಂತೆ ಪ್ರಯತ್ನಿಸುವೆನು.॥35॥

(ಶ್ಲೋಕ-36)

ಮೂಲಮ್

ವಿಮುಚ್ಯ ತಮಿಮಂ ಬಂಧಮವಿದ್ಯಾಕಾಮಕರ್ಮಜಮ್ ।
ಸರ್ವಭೂತಸುಹೃಚ್ಛಾಂತೋ ಮೈತ್ರಃ ಕರುಣ ಆತ್ಮವಾನ್ ॥

ಅನುವಾದ

ಅಜ್ಞಾನಕ್ಕೆ ವಶನಾದ ನಾನು ಶರೀರವನ್ನೇ ನಾನೆಂದು ತಿಳಿದು ಅದಕ್ಕಾಗಿ ದೊಡ್ಡ-ದೊಡ್ಡ ಕಾಮನೆಗಳನ್ನು ಮಾಡಿದೆ. ಅದನ್ನು ಪೂರ್ಣಗೊಳಿಸಲಿಕ್ಕಾಗಿ ಅನೇಕ ಕರ್ಮಗಳನ್ನು ಮಾಡಿದೆ. ಅದರ ಫಲವೇ ಈ ಬಂಧನವಾಗಿದೆ. ಈಗ ನಾನು ಇದನ್ನು ಹರಿದೊಗೆದು ಸಮಸ್ತ ಪ್ರಾಣಿಗಳ ಹಿತವನ್ನೇ ಮಾಡುವೆನು. ವಾಸನೆಗಳನ್ನು ಶಾಂತಗೊಳಿಸಿ, ಎಲ್ಲರೊಂದಿಗೆ ಮಿತ್ರರಂತೆ ವ್ಯವಹರಿಸುವೆನು. ದುಃಖಿತರ ಮೇಲೆ ದಯೆಗೈದು, ಪೂರ್ಣಸಂಯಮದೊಂದಿಗೆ ಇರುವೆನು.॥36॥

(ಶ್ಲೋಕ-37)

ಮೂಲಮ್

ಮೋಚಯೇ ಗ್ರಸ್ತಮಾತ್ಮಾನಂ ಯೋಷಿನ್ಮಯ್ಯಾತ್ಮಮಾಯಯಾ ।
ವಿಕ್ರೀಡಿತೋ ಯಯೈವಾಹಂ ಕ್ರೀಡಾಮೃಗ ಇವಾಧಮಃ ॥

ಅನುವಾದ

ಭಗವಂತನ ಮಾಯೆಯೇ ಸ್ತ್ರೀಯಾಗಿ ಅಧಮನಾದ ನನ್ನನ್ನು ಮೋಸಗೊಳಿಸಿತು ಹಾಗೂ ಕ್ರೀಡಾಮೃಗ (ಆಟದ ಪ್ರಾಣಿ)ದಂತೆ ನನ್ನನ್ನು ತುಂಬಾ ಕುಣಿಸಿತು. ಈಗ ನಾನು ಆ ಮಾಯೆಯಿಂದ ಬಿಡುಗಡೆ ಹೊಂದುವೆ. ॥37॥

(ಶ್ಲೋಕ-38)

ಮೂಲಮ್

ಮಮಾಹಮಿತಿ ದೇಹಾದೌ ಹಿತ್ವಾ ಮಿಥ್ಯಾರ್ಥಧೀರ್ಮತಿಮ್ ।
ಧಾಸ್ಯೇ ಮನೋ ಭಗವತಿ ಶುದ್ಧಂ ತತ್ಕೀರ್ತನಾದಿಭಿಃ ॥

ಅನುವಾದ

ಈಗ ನಾನು ಸದ್ವಸ್ತುವಾದ ಪರಮಾತ್ಮನನ್ನು ಗುರುತಿಸಿರುವೆನು. ಆದ್ದರಿಂದ ಇನ್ನು ನಾನು ಶರೀರಾದಿಗಳಲ್ಲಿ ‘ನಾನು-ನನ್ನದು’ ಎಂಬ ಭಾವವನ್ನು ತೊರೆದು, ಭಗವಂತನ ಕೀರ್ತನಾದಿಗಳಿಂದ ನನ್ನ ಮನಸ್ಸನ್ನು ಶುದ್ಧಗೊಳಿಸಿ ಅದನ್ನು ಭಗವಂತನಲ್ಲಿ ತೊಡಗಿಸುವೆನು ಎಂದು ಅವನು ಅಂದುಕೊಂಡನು.॥38॥

(ಶ್ಲೋಕ-39)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಜಾತಸುನಿರ್ವೇದಃ ಕ್ಷಣಸಂಗೇನ ಸಾಧುಷು ।
ಗಂಗಾದ್ವಾರಮುಪೇಯಾಯ ಮುಕ್ತಸರ್ವಾನುಬಂಧನಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನ ಪಾರ್ಷದರಾದ ಆ ಮಹಾತ್ಮರ ಕ್ಷಣಕಾಲದ ಸತ್ಸಂಗದಿಂದಲೇ ಅಜಾಮಿಳನ ಚಿತ್ತದಲ್ಲಿ ತೀವ್ರವಾದ ವೈರಾಗ್ಯ ಉಂಟಾಗಿ, ಸಂಸಾರದ ಎಲ್ಲ ಸಂಬಂಧಗಳನ್ನೂ, ಮೋಹವನ್ನೂ ತೊರೆದು ಹರಿದ್ವಾರಕ್ಕೆ ಹೊರಟು ಹೋದನು. ॥39॥

(ಶ್ಲೋಕ-40)

ಮೂಲಮ್

ಸ ತಸ್ಮಿಂದೇವಸದನ ಆಸೀನೋ ಯೋಗಮಾಶ್ರಿತಃ ।
ಪ್ರತ್ಯಾಹೃತೇಂದ್ರಿಯಗ್ರಾಮೋ ಯುಯೋಜ ಮನ ಆತ್ಮನಿ ॥

ಅನುವಾದ

ಆ ದೇವಭೂಮಿಯಾದ ಪವಿತ್ರ ಕ್ಷೇತ್ರಕ್ಕೆ ಹೋಗಿ ಅವನು ಒಂದು ಭಗವಂತನ ಮಂದಿರದಲ್ಲಿ ಯೋಗಾಸನ ದಲ್ಲಿ ಕುಳಿತು, ಯೋಗವನ್ನು ಆಚರಿಸುತ್ತಾ ತನ್ನ ಎಲ್ಲ ಇಂದ್ರಿಯಗಳನ್ನು ವಿಷಯಗಳಿಂದ ತೊಡೆದು, ಮನಸ್ಸನ್ನು ಬುದ್ಧಿಯಲ್ಲಿ ಸೇರಿಸಿಬಿಟ್ಟನು. ॥40॥

(ಶ್ಲೋಕ-41)

ಮೂಲಮ್

ತತೋ ಗುಣೇಭ್ಯ ಆತ್ಮಾನಂ ವಿಯುಜ್ಯಾತ್ಮಸಮಾಧಿನಾ ।
ಯುಯುಜೇ ಭಗವದ್ಧಾಮ್ನಿ ಬ್ರಹ್ಮಣ್ಯನುಭವಾತ್ಮನಿ ॥

ಅನುವಾದ

ಅನಂತರ ಆತ್ಮ ಚಿಂತನೆಯಿಂದ ಬುದ್ಧಿಯನ್ನು ವಿಷಯಗಳಿಂದ ಬೇರ್ಪಡಿಸಿ, ಭಗವಂತನ ಧಾಮವಾದ ಅನುಭವಸ್ವರೂಪವಾದ ಪರಬ್ರಹ್ಮನಲ್ಲಿ ಸೇರಿಸಿಬಿಟ್ಟನು. ॥41॥

(ಶ್ಲೋಕ-42)

ಮೂಲಮ್

ಯರ್ಹ್ಯುಪಾರತಧೀಸ್ತಸ್ಮಿನ್ನದ್ರಾಕ್ಷೀತ್ಪುರುಷಾನ್ ಪುರಃ ।
ಉಪಲಭ್ಯೋಪಲಬ್ಧಾನ್ ಪ್ರಾಗ್ವವಂದೇ ಶಿರಸಾ ದ್ವಿಜಃ ॥

ಅನುವಾದ

ಹೀಗೆ ಅಜಾಮಿಳನ ಬುದ್ಧಿಯು ತ್ರಿಗುಣಮಯ ಪ್ರಕೃತಿಯಿಂದ ಮೀರಿ ಭಗವಂತನ ಸ್ವರೂಪದಲ್ಲಿ ನೆಲೆಸಿದಾಗ, ಅವನು ಹಿಂದೆ ನೋಡಿದ ನಾಲ್ಕೂ ಪಾರ್ಷದರು ತನ್ನ ಇದಿರ್ಗಡೆ ನಿಂತಿರುವುದನ್ನು ಕಂಡು ಅಜಾಮಿಳನು ತಲೆ ಬಾಗಿ ನಮಸ್ಕರಿಸಿದನು. ॥42॥

(ಶ್ಲೋಕ-43)

ಮೂಲಮ್

ಹಿತ್ವಾ ಕಲೇವರಂ ತೀರ್ಥೇ ಗಂಗಾಯಾಂ ದರ್ಶನಾದನು ।
ಸದ್ಯಃ ಸ್ವರೂಪಂ ಜಗೃಹೇ ಭಗವತ್ಪಾರ್ಶ್ವವರ್ತಿನಾಮ್ ॥

ಅನುವಾದ

ಅವರನ್ನು ದರ್ಶಿಸಿದ ಬಳಿಕ ಅವನು ಆ ತೀರ್ಥಕ್ಷೇತ್ರದ ಗಂಗಾತೀರದಲ್ಲಿ ತನ್ನ ಶರೀರವನ್ನು ತ್ಯಜಿಸಿದನು ಹಾಗೂ ಒಡನೆಯೇ ಭಗವಂತನ ಪಾರ್ಷದರ ಸ್ವರೂಪವನ್ನು ಪಡೆದುಕೊಂಡನು. ॥43॥

(ಶ್ಲೋಕ-44)

ಮೂಲಮ್

ಸಾಕಂ ವಿಹಾಯಸಾ ವಿಪ್ರೋ ಮಹಾಪುರುಷಕಿಂಕರೈಃ ।
ಹೈಮಂ ವಿಮಾನಮಾರುಹ್ಯ ಯಯೌ ಯತ್ರ ಶ್ರಿಯಃ ಪತಿಃ ॥

ಅನುವಾದ

ಅಜಾಮಿಳನು ಭಗವಂತನ ಪಾರ್ಷದರೊಂದಿಗೆ ಸ್ವರ್ಣ ಮಯ ವಿಮಾನದಲ್ಲಿ ಹತ್ತಿ ಆಕಾಶಮಾರ್ಗದಿಂದ ಭಗವಾನ್ ಲಕ್ಷ್ಮೀಪತಿಯ ನಿವಾಸಸ್ಥಾನವಾದ ವೈಕುಂಠವನ್ನು ಸೇರಿದನು.॥44॥

(ಶ್ಲೋಕ-45)

ಮೂಲಮ್

ಏವಂ ಸ ವಿಪ್ಲಾವಿತಸರ್ವಧರ್ಮಾ
ದಾಸ್ಯಾಃ ಪತಿಃ ಪತಿತೋ ಗರ್ಹ್ಯಕರ್ಮಣಾ ।
ನಿಪಾತ್ಯಮಾನೋ ನಿರಯೇ ಹತವ್ರತಃ
ಸದ್ಯೋ ವಿಮುಕ್ತೋ ಭಗವನ್ನಾಮ ಗೃಹ್ಣನ್ ॥

ಅನುವಾದ

ಪರೀಕ್ಷಿದ್ರಾಜನೇ! ಅಜಾಮಿಳನು ದಾಸಿಯ ಸಹವಾಸ ಮಾಡಿ ಎಲ್ಲ ಧರ್ಮ-ಕರ್ಮಗಳನ್ನು ಹಾಳುಗೆಡವಿದ್ದನು. ಅವನು ತನ್ನ ನಿಂದ್ಯ ಕರ್ಮಗಳಿಂದ ಪತಿತನಾಗಿದ್ದನು. ನಿಯಮಗಳಿಂದ ಚ್ಯುತನಾದ ಕಾರಣ ಅವನೂ ನರಕಕ್ಕೆ ಬೀಳುವವನಿದ್ದನು. ಆದರೆ ಭಗವಂತನ ನಾಮವನ್ನು ಒಂದೇ ಬಾರಿ ಉಚ್ಚರಿಸಿ ಅವನು ಅದರಿಂದ ತತ್ಕಾಲದಲ್ಲೇ ಮುಕ್ತನಾಗಿ ಹೋದನು. ॥45॥

(ಶ್ಲೋಕ-46)

ಮೂಲಮ್

ನಾತಃ ಪರಂ ಕರ್ಮನಿಬಂಧಕೃಂತನಂ
ಮುಮುಕ್ಷತಾಂ ತೀರ್ಥಪದಾನುಕೀರ್ತನಾತ್ ।
ನ ಯತ್ಪುನಃ ಕರ್ಮಸು ಸಜ್ಜತೇ ಮನೋ
ರಜಸ್ತಮೋಭ್ಯಾಂ ಕಲಿಲಂ ತತೋನ್ಯಥಾ ॥

ಅನುವಾದ

ಈ ಸಂಸಾರ ಬಂಧನ ದಿಂದ ಮುಕ್ತನಾಗಲು ಬಯಸುವವನಿಗೆ ತನ್ನ ಚರಣ ಸ್ಪರ್ಶದಿಂದ ತೀರ್ಥಕ್ಕೂ ತೀರ್ಥತ್ವವನ್ನು ಉಂಟು ಮಾಡುವ ಭಗವಂತನ ನಾಮಕ್ಕಿಂತ ಮಿಗಿಲಾದ ಯಾವ ಸಾಧನೆಯೂ ಇಲ್ಲ. ಏಕೆಂದರೆ, ನಾಮವನ್ನು ಆಶ್ರಯಿಸಿದ ಮನುಷ್ಯನ ಮನಸ್ಸು ಪುನಃ ಕರ್ಮಗಳ ಜಂಜಡದಲ್ಲಿ ಬೀಳಲಾರದು. ಭಗವನ್ನಾಮವಲ್ಲದೆ ಬೇರೆ ಯಾವುದೇ ಪ್ರಾಯಶ್ಚಿತ್ತವನ್ನು ಆಶ್ರಯಿಸದ ಮೇಲೆಯೂ ಮನಸ್ಸು ರಜೋಗುಣ ಮತ್ತು ತಮೋಗುಣಗಳಿಂದ ಗ್ರಸ್ತವಾಗಿರುತ್ತದೆ ಹಾಗೂ ಸಮೂಲ ವಾಗಿ ಪಾಪಗಳೂ ನಾಶವಾಗುವುದಿಲ್ಲ. ॥46॥

(ಶ್ಲೋಕ-47)

ಮೂಲಮ್

ಯ ಏವಂ ಪರಮಂ ಗುಹ್ಯಮಿತಿಹಾಸಮಘಾಪಹಮ್ ।
ಶೃಣುಯಾಚ್ಛ್ರದ್ಧಯಾ ಯುಕ್ತೋ ಯಶ್ಚ ಭಕ್ತ್ಯಾನುಕೀರ್ತಯೇತ್ ॥

(ಶ್ಲೋಕ-48)

ಮೂಲಮ್

ನ ವೈ ಸ ನರಕಂ ಯಾತಿ ನೇಕ್ಷಿತೋ ಯಮಕಿಂಕರೈಃ ।
ಯದ್ಯಪ್ಯಮಂಗಲೋ ಮರ್ತ್ಯೋ ವಿಷ್ಣುಲೋಕೇ ಮಹೀಯತೇ ॥

ಅನುವಾದ

ಪರೀಕ್ಷಿತನೇ! ಈ ಇತಿಹಾಸವು ಅತ್ಯಂತ ಗೋಪ್ಯವೂ, ಸಮಸ್ತ ಪಾಪಗಳನ್ನು ನಾಶಮಾಡುವಂತಹದೂ ಆಗಿದೆ. ಇದನ್ನು ಶ್ರದ್ಧಾ-ಭಕ್ತಿಗಳಿಂದ ಶ್ರವಣಿಸುವವನು, ಕೀರ್ತಿಸು ವವನು ಎಂದಿಗೂ ನರಕಕ್ಕೆ ಹೋಗುವುದಿಲ್ಲ. ಯಮ ದೂತರು ಕಣ್ಣೆತ್ತಿಯೂ ಆತನನ್ನು ನೋಡಲಾರರು. ಅವನ ಜೀವನವು ಪಾಪಮಯವಾಗಿದ್ದರೂ ವೈಕುಂಠ ಲೋಕದಲ್ಲಿ ಅವನು ಪೂಜಿಸಲ್ಪಡುತ್ತಾನೆ. ॥47-48॥

(ಶ್ಲೋಕ-49)

ಮೂಲಮ್

ಮ್ರಿಯಮಾಣೋ ಹರೇರ್ನಾಮ ಗೃಣನ್ಪುತ್ರೋಪಚಾರಿತಮ್ ।
ಅಜಾಮಿಲೋಪ್ಯಗಾದ್ಧಾಮ ಕಿಂ ಪುನಃ ಶ್ರದ್ಧಯಾ ಗೃಣನ್ ॥

ಅನುವಾದ

ಎಲೈ ರಾಜನೇ! ನೋಡು! ಅಜಾಮಿಳನಂತಹ ಪಾಪಿಯು ಸಾಯುವಾಗ ತನ್ನ ಪುತ್ರನನ್ನು ಕೂಗುವ ನೆಪದಿಂದ ಭಗವಂತನ ನಾಮವನ್ನು ಉಚ್ಚರಿಸಿದನು. ಅವನಿಗೂ ವೈಕುಂಠದ ಪ್ರಾಪ್ತಿಯಾಗಿಹೋಯಿತು. ಹಾಗಿರುವಾಗ ಶ್ರದ್ಧೆಯಿಂದ ಭಗವನ್ನಾಮವನ್ನು ಉಚ್ಚರಿಸುವವರ ಕುರಿತು ಹೇಳುವುದೇನಿದೆ? ॥49॥

ಅನುವಾದ (ಸಮಾಪ್ತಿಃ)

ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ
ಅಜಾಮೀಳೋಪಾಖ್ಯಾನೇ ದ್ವಿತೀಯೋಽಧ್ಯಾಯಃ ॥2॥