೦೧

[ಮೊದಲನೆಯ ಅಧ್ಯಾಯ]

ಭಾಗಸೂಚನಾ

ಅಜಾಮಿಳೋಪಾಖ್ಯಾನ ಪ್ರಾರಂಭ

ಮೂಲಮ್ (ವಾಚನಮ್)

ರಾಜೋವಾಚ

(ಶ್ಲೋಕ-1)

ಮೂಲಮ್

ನಿವೃತ್ತಿಮಾರ್ಗಃ ಕಥಿತಃ ಆದೌ ಭಗವತಾ ಯಥಾ ।
ಕ್ರಮಯೋಗೋಪಲಬ್ಧೇನ ಬ್ರಹ್ಮಣಾ ಯದಸಂಸೃತಿಃ ॥

ಅನುವಾದ

ಪರೀಕ್ಷಿತ ಮಹಾರಾಜನು ಕೇಳಿದನು — ಭಗವಾನ್ ಶುಕಮಹಾಮುನಿಗಳೇ! ನೀವು ಹಿಂದೆ (ದ್ವಿತೀಯ ಸ್ಕಂಧದಲ್ಲಿ) ನನಗೆ ನಿವೃತ್ತಿಮಾರ್ಗವನ್ನು ವರ್ಣಿಸಿದಿರಿ. ಆ ಮಾರ್ಗಗಳ ಮೂಲಕ ಅರ್ಚಿರಾದಿಗತಿಯಿಂದ ಕ್ರಮವಾಗಿ ಜೀವನು ಬ್ರಹ್ಮಲೋಕಕ್ಕೆ ಹೋಗುತ್ತಾನೆ ಹಾಗೂ ಕಲ್ಪಾಂತ್ಯದಲ್ಲಿ ಬ್ರಹ್ಮದೇವರೊಡನೆ ಮುಕ್ತನಾಗುತ್ತಾನೆ ಎಂಬುದನ್ನು ತಿಳಿಸಿರುವಿರಿ. ॥1॥

(ಶ್ಲೋಕ-2)

ಮೂಲಮ್

ಪ್ರವೃತ್ತಿಲಕ್ಷಣಶ್ಚೈವ ತ್ರೈಗುಣ್ಯವಿಷಯೋ ಮುನೇ ।
ಯೋಽಸಾವಲೀನಪ್ರಕೃತೇರ್ಗುಣಸರ್ಗಃ ಪುನಃ ಪುನಃ ॥

ಅನುವಾದ

ಮುನಿವರ್ಯರೇ! ಇದಲ್ಲದೆ ಪ್ರವೃತ್ತಿಮಾರ್ಗ ವನ್ನೂ (ತೃತೀಯ ಸ್ಕಂಧದಲ್ಲಿ) ಚೆನ್ನಾಗಿ ವರ್ಣಿಸಿದ್ದೀರಿ. ಅದರಿಂದ ತ್ರಿಗುಣಮಯ ಸ್ವರ್ಗಾದಿ ಲೋಕಗಳು ಪ್ರಾಪ್ತ ವಾಗುತ್ತವೆ. ಹಾಗೂ ಪ್ರಕೃತಿಯ ಸಂಬಂಧವು ಕಳಚಿಹೋಗದಿರುವುದರಿಂದ ಜೀವನು ಪದೇ-ಪದೇ ಜನ್ಮ-ಮರಣದ ಚಕ್ರದಲ್ಲಿ ಸಿಲುಕಿಕೊಳ್ಳುವನು.॥2॥

(ಶ್ಲೋಕ-3)

ಮೂಲಮ್

ಅಧರ್ಮಲಕ್ಷಣಾ ನಾನಾ ನರಕಾಶ್ಚಾನುವರ್ಣಿತಾಃ ।
ಮನ್ವಂತರಶ್ಚ ವ್ಯಾಖ್ಯಾತ ಆದ್ಯಃ ಸ್ವಾಯಂಭುವೋ ಯತಃ ॥

ಅನುವಾದ

ಅಧರ್ಮವನ್ನು ಆಚರಿಸು ವುದರಿಂದ ಅನೇಕ ನರಕಗಳು ದೊರೆಯುತ್ತವೆ ಮತ್ತು ಐದನೆಯ ಸ್ಕಂಧದಲ್ಲಿ ಅವನ್ನು ವಿಸ್ತಾರವಾಗಿ ವರ್ಣಿಸಿದಿರಿ. ನಾಲ್ಕನೆಯ ಸ್ಕಂಧದಲ್ಲಿ ಆ ಮೊದಲನೆಯ ಮನ್ವಂತರವನ್ನು ವರ್ಣಿಸಿ ಅದರ ಅಧಿಪತಿಯು ಸ್ವಾಯಂಭುವ ಮನುವಾಗಿದ್ದನು ಎಂಬುದನ್ನು ತಿಳಿಸಿದಿರಿ. ॥3॥

(ಶ್ಲೋಕ-4)

ಮೂಲಮ್

ಪ್ರಿಯವ್ರತೋತ್ತಾನಪದೋರ್ವಂಶಸ್ತಚ್ಚರಿತಾನಿ ಚ ।
ದ್ವೀಪವರ್ಷಸಮುದ್ರಾದ್ರಿನದ್ಯುದ್ಯಾನವನಸ್ಪತೀನ್ ॥

ಅನುವಾದ

ಜೊತೆಗೆ ನಾಲ್ಕನೆಯ ಮತ್ತು ಐದನೆಯ ಸ್ಕಂಧದಲ್ಲಿ ಪ್ರಿಯವ್ರತ ಹಾಗೂ ಉತ್ತಾನಪಾದ ಇವರ ವಂಶವನ್ನು, ಚರಿತ್ರೆಯನ್ನು, ಹಾಗೆಯೇ ದ್ವೀಪ, ವರ್ಷ, ಸಮುದ್ರ, ಪರ್ವತ, ನದಿ, ಉದ್ಯಾನ ಹಾಗೂ ಬೇರೆ-ಬೇರೆ ದ್ವೀಪಗಳು, ವೃಕ್ಷಗಳು ಇವನ್ನೂ ನಿರೂಪಿಸಿದಿರಿ.॥4॥

(ಶ್ಲೋಕ-5)

ಮೂಲಮ್

ಧರಾಮಂಡಲಸಂಸ್ಥಾನಂ ಭಾಗಲಕ್ಷಣಮಾನತಃ ।
ಜ್ಯೋತಿಷಾಂ ವಿವರಾಣಾಂ ಚ ಯಥೇದಮಸೃಜದ್ವಿಭುಃ ॥

ಅನುವಾದ

ಭೂಮಂಡಲದ ಸ್ಥಿತಿ, ಅದರ ದ್ವೀಪ-ವರ್ಷಾದಿಗಳ ವಿಭಾಗ, ಅವುಗಳ ಲಕ್ಷಣ ಹಾಗೂ ವಿಸ್ತಾರ, ನಕ್ಷತ್ರಗಳ ಸ್ಥಿತಿ, ಅತಲ-ವಿತಲ ಮುಂತಾದ ಏಳು ಪಾತಾಳಗಳನ್ನೂ ಭಗವಂತನು ಹೇಗೆ ಸೃಷ್ಟಿಸಿದನು? ಎಂಬುದನ್ನು ವರ್ಣಿಸಿದಿರಿ. ॥5॥

(ಶ್ಲೋಕ-6)

ಮೂಲಮ್

ಅಧುನೇಹ ಮಹಾಭಾಗ ಯಥೈವ ನರಕಾನ್ನರಃ ।
ನಾನೋಗ್ರಯಾತನಾನ್ನೇಯಾತ್ತನ್ಮೇ ವ್ಯಾಖ್ಯಾತುಮರ್ಹಸಿ ॥

ಅನುವಾದ

ಮಹಾತ್ಮರೇ! ಯಾವುದರ ಅನುಷ್ಠಾನದಿಂದ ಮನುಷ್ಯನಿಗೆ ಅನೇಕಾನೇಕ ಭಯಂಕರ ಯಾತನೆಗಳಿಂದ ತುಂಬಿದ ನರಕಕ್ಕೆ ಹೋಗಬೇಕಾಗುವುದಿಲ್ಲವೋ ಅಂತಹ ಉಪಾಯವನ್ನು ತಿಳಿಯಲು ನಾನು ಬಯಸುತ್ತಿರುವೆನು. ದಯಮಾಡಿ ಅದನ್ನು ನನಗೆ ಉಪದೇಶಿಸಿರಿ. ॥6॥

(ಶ್ಲೋಕ-7)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ನ ಚೇದಿಹೈವಾಪಚಿತಿಂ ಯಥಾಂಹಸಃ
ಕೃತಸ್ಯ ಕುರ್ಯಾನ್ಮನಉಕ್ತಿಪಾಣಿಭಿಃ ।
ಧ್ರುವಂ ಸ ವೈ ಪ್ರೇತ್ಯ ನರಕಾನುಪೈತಿ
ಯೇ ಕೀರ್ತಿತಾ ಮೇ ಭವತಸ್ತಿಗ್ಮಯಾತನಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ರಾಜನೇ! ಮನಸ್ಸು, ಮಾತು ಮತ್ತು ಶರೀರದಿಂದ ಮನುಷ್ಯನು ಪಾಪಗಳನ್ನು ಮಾಡುತ್ತಾನೆ. ಅವನು ಆ ಪಾಪಗಳಿಗೆ ಇದೇ ಜನ್ಮದಲ್ಲಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳದಿದ್ದರೆ ಸತ್ತಮೇಲೆ ಅವನು ಖಂಡಿತವಾಗಿ ಆ ಭಯಂಕರ ಯಾತನೆಗಳಿಂದ ತುಂಬಿದ ನರಕಗಳಿಗೆ ಹೋಗಬೇಕಾಗುತ್ತದೆ. ಇದನ್ನು ನಾನು ಹಿಂದೆಯೇ (ಐದನೆಯ ಸ್ಕಂಧದಲ್ಲಿ) ನಿನಗೆ ತಿಳಿಸಿರುವೆನು. ॥7॥

(ಶ್ಲೋಕ-8)

ಮೂಲಮ್

ತಸ್ಮಾತ್ಪುರೈವಾಶ್ವಿಹ ಪಾಪನಿಷ್ಕೃತೌ
ಯತೇತ ಮೃತ್ಯೋರವಿಪದ್ಯತಾತ್ಮನಾ ।
ದೋಷಸ್ಯ ದೃಷ್ಟ್ವಾ ಗುರುಲಾಘವಂ ಯಥಾ
ಭಿಷಕ್ ಚಿಕಿತ್ಸೇತ ರುಜಾಂ ನಿದಾನವಿತ್ ॥

ಅನುವಾದ

ಇದರಿಂದ ತುಂಬಾ ಸಾವಧಾನತೆಯಿಂದ, ಎಚ್ಚರವಾಗಿದ್ದು, ರೋಗ ಮತ್ತು ಮೃತ್ಯುವಿನ ಮೊದಲೇ ಅತಿಶೀಘ್ರವಾಗಿ ಪಾಪಗಳಲ್ಲಿ ಯಾವುದು ದೊಡ್ಡದು - ಯಾವುದು ಚಿಕ್ಕದು ಎಂದು ವಿಚಾರಮಾಡಿ ಮರ್ಮಜ್ಞನಾದ ವೈದ್ಯನು ರೋಗದ ಕಾರಣ ಮತ್ತು ಗುರು-ಲಾಘವಗಳನ್ನು ಮನಗಂಡು ಒಡನೆಯೇ ಚಿಕಿತ್ಸೆ ಮಾಡುವಂತೆ ಅವುಗಳಿಗೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ॥8॥

(ಶ್ಲೋಕ-9)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ದೃಷ್ಟಶ್ರುತಾಭ್ಯಾಂ ಯತ್ಪಾಪಂ ಜಾನನ್ನಪ್ಯಾತ್ಮನೋಹಿತಮ್ ।
ಕರೋತಿ ಭೂಯೋ ವಿವಶಃ ಪ್ರಾಯಶ್ಚಿತ್ತಮಥೋ ಕಥಮ್ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹಾತ್ಮರೇ! ಮನುಷ್ಯನು ರಾಜದಂಡ, ಸಮಾಜದಂಡ ಮುಂತಾದ ಲೌಕಿಕ ಮತ್ತು ಶಾಸ್ತ್ರೋಕ್ತ ನರಕಗಮನವೇ ಮುಂತಾದ ಪಾರಲೌಕಿಕ ಕಷ್ಟಗಳು ತನ್ನ ಶತ್ರುಗಳಾಗಿವೆ ಎಂದು ತಿಳಿದರೂ ಪಾಪವಾಸನೆಗಳಿಗೆ ವಿವಶನಾಗಿ ಮತ್ತೆ-ಮತ್ತೆ ಅಂತಹುದೇ ಪಾಪಕರ್ಮಗಳಲ್ಲಿ ಪ್ರವೃತ್ತನಾಗುತ್ತಾನೆ. ಇಂತಹ ಸ್ಥಿತಿಯಲ್ಲಿ ಅವನ ಪಾಪಗಳ ಪ್ರಾಯಶ್ಚಿತ್ತವು ಹೇಗಾಗಬಲ್ಲದು? ॥9॥

(ಶ್ಲೋಕ-10)

ಮೂಲಮ್

ಕ್ವಚಿನ್ನಿವರ್ತತೇಭದ್ರಾತ್ಕ್ವಚಿಚ್ಚರತಿ ತತ್ಪುನಃ ।
ಪ್ರಾಯಶ್ಚಿತ್ತ ಮತೋಪಾರ್ಥಂ ಮನ್ಯೇ ಕುಂಜರಶೌಚವತ್ ॥

ಅನುವಾದ

ಮನುಷ್ಯನು ಕೆಲವೊಮ್ಮೆ ಪ್ರಾಯಶ್ಚಿತ್ತಾದಿಗಳ ಮೂಲಕ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ. ಕೆಲವೊಮ್ಮೆ ಪುನಃ ಅದನ್ನು ಮಾಡತೊಡಗುತ್ತಾನೆ. ಇಂತಹ ಸ್ಥಿತಿಯಲ್ಲಿ ಮನುಷ್ಯನು ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಆನೆಯ ಸ್ನಾನದಂತೇ ವ್ಯರ್ಥವೆಂದೇ ನಾನು ತಿಳಿಯುತ್ತೇನೆ. ॥10॥

(ಶ್ಲೋಕ-11)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕರ್ಮಣಾ ಕರ್ಮನಿರ್ಹಾರೋ ನ ಹ್ಯಾತ್ಯಂತಿಕ ಇಷ್ಯತೇ ।
ಅವಿದ್ವದಧಿಕಾರಿತ್ವಾತ್ ಪ್ರಾಯಶ್ಚಿತ್ತಂ ವಿಮರ್ಶನಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ರಾಜನೇ! ವಾಸ್ತವವಾಗಿ ಕರ್ಮದಿಂದ ಕರ್ಮವು ನಿಶ್ಶೇಷವಾಗಿ ನಾಶವಾಗುವುದಿಲ್ಲ. ಏಕೆಂದರೆ, ಅಜ್ಞಾನಿಗಳೇ ಕರ್ಮಕ್ಕೆ ಅಧಿಕಾರಿಗಳಾಗಿದ್ದಾರೆ. ಅಜ್ಞಾನವು ಇರುವಾಗ ಪಾಪವಾಸನೆಗಳು ಪೂರ್ಣವಾಗಿ ಅಳಿದುಹೋಗುವುದಿಲ್ಲ. ಆದ್ದರಿಂದ ನಿಜವಾದ ಪ್ರಾಯಶ್ಚಿತ್ತವಾದರೋ ತತ್ತ್ವಜ್ಞಾನವೇ ಆಗಿದೆ. ॥11॥

(ಶ್ಲೋಕ-12)

ಮೂಲಮ್

ನಾಶ್ನತಃ ಪಥ್ಯಮೇವಾನ್ನಂ ವ್ಯಾಧಯೋಭಿಭವಂತಿ ಹಿ ।
ಏವಂ ನಿಯಮಕೃದ್ರಾಜನ್ ಶನೈಃ ಕ್ಷೇಮಾಯ ಕಲ್ಪತೇ ॥

ಅನುವಾದ

ಒಳ್ಳೆಯ ಪಥ್ಯವಾದ ಆಹಾರವನ್ನೇ ಸೇವಿಸುವವನಿಗೆ ರೋಗಗಳು ಬಾಧಿಸುವುದಿಲ್ಲ. ಒಂದೊಮ್ಮೆ ರೋಗಗ್ರಸ್ತನಾದರೂ ಬೇಗನೇ ಗುಣಮುಖನಾಗುವನು. ಪರೀಕ್ಷಿತನೇ! ಹಾಗೆಯೇ ನಿಯಮಗಳನ್ನು ಪಾಲಿಸುವವನು ಸ್ವಲ್ಪ-ಸ್ವಲ್ಪವಾಗಿ ಪಾಪವಾಸನೆಗಳಿಂದ ಮುಕ್ತನಾಗಿ ಶ್ರೇಯಸ್ಕರವಾದ ತತ್ತ್ವಜ್ಞಾನವನ್ನು ಪಡೆಯುವುದರಲ್ಲಿ ಸಮರ್ಥನಾಗುವನು. ॥12॥

(ಶ್ಲೋಕ-13)

ಮೂಲಮ್

ತಪಸಾ ಬ್ರಹ್ಮಚರ್ಯೇಣ ಶಮೇನ ಚ ದಮೇನ ಚ ।
ತ್ಯಾಗೇನ ಸತ್ಯಶೌಚಾಭ್ಯಾಂ ಯಮೇನ ನಿಯಮೇನ ಚ ॥

(ಶ್ಲೋಕ-14)

ಮೂಲಮ್

ದೇಹವಾಗ್ಬುದ್ಧಿಜಂ ಧೀರಾ ಧರ್ಮಜ್ಞಾಃ ಶ್ರದ್ಧಯಾನ್ವಿತಾಃ ।
ಕ್ಷಿಪಂತ್ಯಘಂ ಮಹದಪಿ ವೇಣುಗುಲ್ಮಮಿವಾನಲಃ ॥

ಅನುವಾದ

ಬಿದಿರುಮೇಳೆಗೆ ತಗುಲಿದ ಬೆಂಕಿಯು ಇಡೀ ಬಿದುರುಪೊದೆಯನ್ನೇ ಸುಟ್ಟುಹಾಕು ವಂತೆಯೇ ಧರ್ಮಜ್ಞರೂ, ಶ್ರದ್ಧಾವಂತರೂ ಆದ ಧೀರರು ತಪಸ್ಸು, ಬ್ರಹ್ಮಚರ್ಯ, ಇಂದ್ರಿಯದಮನ, ಮನಸ್ಸಿನ ಸ್ಥೈರ್ಯ, ದಾನ, ಸತ್ಯ, ಒಳ-ಹೊರಗಿನ ಪವಿತ್ರತೆ ಮತ್ತು ಯಮ-ನಿಯಮಗಳು ಎಂಬ ಒಂಭತ್ತು ಸಾಧನೆಗಳಿಂದ ಮನಸ್ಸು, ಮಾತು, ಶರೀರಗಳಿಂದ ಮಾಡಲಾದ ಅತಿದೊಡ್ಡ ಪಾಪಗಳನ್ನೂ ಕೂಡ ನಾಶಮಾಡಿ ಬಿಡುವರು. ॥13-14॥

(ಶ್ಲೋಕ-15)

ಮೂಲಮ್

ಕೇಚಿತ್ಕೇವಲಯಾ ಭಕ್ತ್ಯಾ ವಾಸುದೇವಪರಾಯಣಾಃ ।
ಅಘಂ ಧುನ್ವಂತಿ ಕಾರ್ತ್ಸ್ನ್ಯೇನ ನೀಹಾರಮಿವ ಭಾಸ್ಕರಃ ॥

ಅನುವಾದ

ಭಗವಂತನಲ್ಲಿ ಶರಣಾದ ವಿರಳವಾಗಿರುವ ಭಕ್ತರು ಕೇವಲ ಭಕ್ತಿಯಿಂದಲೇ ಸೂರ್ಯನು ಇಬ್ಬನಿಯನ್ನು ಕಳೆಯುವಂತೆ ತಮ್ಮ ಸಮಸ್ತ ಪಾಪಗಳನ್ನು ಕಳೆದುಕೊಳ್ಳುವರು. ॥15॥

(ಶ್ಲೋಕ-16)

ಮೂಲಮ್

ನ ತಥಾ ಹ್ಯಘವಾನ್ರಾಜನ್ಪೂಯೇತ ತಪಆದಿಭಿಃ ।
ಯಥಾ ಕೃಷ್ಣಾರ್ಪಿತಪ್ರಾಣಸ್ತತ್ಪೂರುಷನಿಷೇವಯಾ ॥

ಅನುವಾದ

ಎಲೈ ಮಹಾರಾಜನೇ! ಪಾಪಿಯಾದ ಮನುಷ್ಯನಿಗೆ ತನ್ನನ್ನು ಭಗವಾನ್ ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಿಕೊಂಡು ಆತನನ್ನೂ, ಅವನ ಭಕ್ತರನ್ನೂ ಸೇವಿಸುವುದರಿಂದ ಉಂಟಾಗುವಷ್ಟು ಶುದ್ಧಿಯು ತಪಸ್ಸು ಮುಂತಾದವುಗಳಿಂದ ಉಂಟಾಗುವುದಿಲ್ಲ.॥16॥

(ಶ್ಲೋಕ-17)

ಮೂಲಮ್

ಸಧ್ರೀಚೀನೋ ಹ್ಯಯಂ ಲೋಕೇ
ಪಂಥಾಃ ಕ್ಷೇಮೋಕುತೋಭಯಃ ।
ಸುಶೀಲಾಃ ಸಾಧವೋ ಯತ್ರ
ನಾರಾಯಣಪರಾಯಣಾಃ ॥

ಅನುವಾದ

ಜಗತ್ತಿನಲ್ಲಿ ಈ ಭಕ್ತಿಪಂಥವೇ ಸರ್ವಶ್ರೇಷ್ಠವೂ, ಭಯ ರಹಿತವೂ, ಕಲ್ಯಾಣಪ್ರದವೂ ಆಗಿದೆ. ಏಕೆಂದರೆ, ಈ ಮಾರ್ಗದಲ್ಲಿ ಭಗವತ್ಪರಾಯಣರೂ, ಶೀಲವಂತರೂ ಆದ ಸಾಧುಗಳು ನಡೆಯುತ್ತಾರೆ. ॥17॥

(ಶ್ಲೋಕ-18)

ಮೂಲಮ್

ಪ್ರಾಯಶ್ಚಿತ್ತಾನಿ ಚೀರ್ಣಾನಿ ನಾರಾಯಣಪರಾಙ್ಮುಖಮ್ ।
ನ ನಿಷ್ಪುನಂತಿ ರಾಜೇಂದ್ರ ಸುರಾಕುಂಭಮಿವಾಪಗಾಃ ॥

ಅನುವಾದ

ಪರೀಕ್ಷಿತನೇ! ಮದ್ಯ ತುಂಬಿದ ಗಡಿಗೆಯನ್ನು ನದಿಗಳು ಶುದ್ಧವಾಗಿಸಲಾರವೋ, ಹಾಗೆಯೇ ಶ್ರೀಭಗವಂತನಿಗೆ ವಿಮುಖರಾದ ಮನುಷ್ಯರು ದೊಡ್ಡ-ದೊಡ್ಡ ಪ್ರಾಯಶ್ಚಿತ್ತಗಳನ್ನು ಮತ್ತೆ-ಮತ್ತೆ ಮಾಡಿಕೊಂಡರೂ ಅವರು ಪವಿತ್ರರಾಗಲಾರರು. ॥18॥

(ಶ್ಲೋಕ-19)

ಮೂಲಮ್

ಸಕೃನ್ಮನಃ ಕೃಷ್ಣಪದಾರವಿಂದಯೋ-
ರ್ನಿವೇಶಿತಂ ತದ್ಗುಣರಾಗಿ ಯೈರಿಹ ।
ನ ತೇ ಯಮಂ ಪಾಶಭೃತಶ್ಚ ತದ್ಭಟಾನ್
ಸ್ವಪ್ನೇಪಿ ಪಶ್ಯಂತಿ ಹಿ ಚೀರ್ಣನಿಷ್ಕೃತಾಃ ॥

ಅನುವಾದ

ಶ್ರೀಭಗವಂತನ ಗುಣಗಳ ಸೇವನೆಯಲ್ಲಿ ಅನುರಾಗವುಳ್ಳ ತಮ್ಮ ಮನಸ್ಸೆಂಬ ದುಂಬಿಗೆ ಶ್ರೀಕೃಷ್ಣನ ಅಡಿದಾವರೆಗಳ ಮಕರಂದ ರಸವನ್ನು ಒಂದು ಬಾರಿ ಪಾನಮಾಡಿಸುವವನು ಎಲ್ಲ ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡಂತೆಯೇ ಸರಿ. ಅಂಥವರು ಕನಸಿನಲ್ಲಿಯೂ ಯಮರಾಜನನ್ನೂ, ಅವನ ಪಾಶಧರಿಸಿದ ದೂತರನ್ನೂ ನೋಡಲಾರನು. ಮತ್ತೆ ನರಕದ ಮಾತೆಲ್ಲಿದೆ? ॥19॥

(ಶ್ಲೋಕ-20)

ಮೂಲಮ್

ಅತ್ರ ಚೋದಾಹರಂತೀಮಮಿತಿಹಾಸಂ ಪುರಾತನಮ್ ।
ದೂತಾನಾಂ ವಿಷ್ಣುಯಮಯೋಃ ಸಂವಾದಸ್ತಂ ನಿಬೋಧ ಮೇ ॥

ಅನುವಾದ

ಪರೀಕ್ಷಿದ್ರಾಜನೇ! ಈ ವಿಷಯದಲ್ಲಿ ಮಹಾತ್ಮರು ಒಂದು ಪ್ರಾಚೀನ ಇತಿಹಾಸವನ್ನು ಹೇಳುತ್ತಾರೆ. ಅದರಲ್ಲಿ ಭಗವಾನ್ ವಿಷ್ಣು ದೂತರಿಗೂ, ಯಮದೂತರಿಗೂ ನಡೆದ ಸಂವಾದವಿದೆ. ಅದನ್ನು ನಿನಗೆ ಹೇಳುತ್ತೇನೆ, ಕೇಳು. ॥20॥

(ಶ್ಲೋಕ-21)

ಮೂಲಮ್

ಕಾನ್ಯಕುಬ್ಜೇ ದ್ವಿಜಃ ಕಶ್ಚಿದ್ದಾಸೀಪತಿರಜಾಮಿಲಃ ।
ನಾಮ್ನಾ ನಷ್ಟಸದಾಚಾರೋ ದಾಸ್ಯಾಃ ಸಂಸರ್ಗದೂಷಿತಃ ॥

ಅನುವಾದ

ಕಾನ್ಯಕುಬ್ಜದೇಶದಲ್ಲಿ ಅಜಾಮಿಳನೆಂಬ ಓರ್ವ ಬ್ರಾಹ್ಮಣನಿದ್ದನು. ಅವನು ಒಬ್ಬ ದಾಸಸ್ತ್ರೀಯನ್ನು ಹೆಂಡತಿಯನ್ನಾಗಿಸಿಕೊಂಡು ಆಕೆಯ ಸಹವಾಸದಿಂದ ದೂಷಿತನಾಗಿ ಸದಾಚಾರವನ್ನು ತೊರೆದು ಪೂರ್ಣಭ್ರಷ್ಟನಾಗಿದ್ದನು. ॥21॥

(ಶ್ಲೋಕ-22)

ಮೂಲಮ್

ವಂದ್ಯಕ್ಷಕೈತವೈಶ್ಚೌರ್ಯೈರ್ಗರ್ಹಿತಾಂ ವೃತ್ತಿಮಾಸ್ಥಿತಃ ।
ಬಿಭ್ರತ್ಕುಟುಂಬಮಶುಚಿರ್ಯಾತಯಾಮಾಸ ದೇಹಿನಃ ॥

ಅನುವಾದ

ಆ ಪತಿತನು ಕೆಲವೊಮ್ಮೆ ಲೂಟಿ ಮಾಡುವುದು, ಕೆಲವೊಮ್ಮೆ ಕಳ್ಳತನಮಾಡುವುದು ಮುಂತಾದ ನೀಚವೃತ್ತಿಗಳಿಂದ ತನ್ನ ಕುಟುಂಬವನ್ನು ಸಾಕುತ್ತಿದ್ದನು. ಹಾಗೂ ಪ್ರಾಣಿಗಳಿಗೆ ತುಂಬಾ ಪೀಡೆಯನ್ನುಂಟುಮಾಡುತ್ತಿದ್ದನು. ॥22॥

(ಶ್ಲೋಕ-23)

ಮೂಲಮ್

ಏವಂ ನಿವಸತಸ್ತಸ್ಯ ಲಾಲಯಾನಸ್ಯ ತತ್ಸುತಾನ್ ।
ಕಾಲೋತ್ಯಗಾನ್ಮಹಾನ್ರಾಜನ್ನಷ್ಟಾಶೀತ್ಯಾಯುಷಃ ಸಮಾಃ ॥

ಅನುವಾದ

ಮಹಾರಾಜನೇ! ಹೀಗೆ ಆ ದಾಸಿಯ ಸಹವಾಸದಲ್ಲಿರುತ್ತಾ ಆಕೆಯ ಮಕ್ಕಳನ್ನು ಲಾಲಿಸಿ-ಪಾಲಿಸುತ್ತಾ ಆತನ ಆಯುಸ್ಸಿನ ಬಹುಭಾಗವು ಅಂದರೆ ಎಂಭತ್ತೆಂಟು ವರ್ಷಗಳು ಕಳೆದು ಹೋದವು.॥23॥

(ಶ್ಲೋಕ-24)

ಮೂಲಮ್

ತಸ್ಯ ಪ್ರವಯಸಃ ಪುತ್ರಾ ದಶ ತೇಷಾಂ ತು ಯೋವಮಃ ।
ಬಾಲೋ ನಾರಾಯಣೋ ನಾಮ್ನಾಪಿತ್ರೋಶ್ಚ ದಯಿತೋ ಭೃಶಮ್ ॥

ಅನುವಾದ

ಮುದುಕನಾದ ಅಜಾಮಿಳನಿಗೆ ಹತ್ತು ಪುತ್ರರಿದ್ದರು. ಅವರಲ್ಲಿ ಎಲ್ಲರಿಗಿಂತಲೂ ಕಿರಿಯವನ ಹೆಸರು ‘ನಾರಾಯಣ’ ಎಂದಿತ್ತು. ತಂದೆ-ತಾಯಿಯರು ಅವನನ್ನು ತುಂಬಾ ಪ್ರೀತಿಸುತ್ತಿದ್ದರು. ॥24॥

(ಶ್ಲೋಕ-25)

ಮೂಲಮ್

ಸ ಬದ್ಧಹೃದಯಸ್ತಸ್ಮಿನ್ನರ್ಭಕೇ ಕಲಭಾಷಿಣಿ ।
ನಿರೀಕ್ಷಮಾಣಸ್ತಲ್ಲೀಲಾಂ ಮುಮುದೇ ಜರಠೋ ಭೃಶಮ್ ॥

ಅನುವಾದ

ಮುದುಕ ಅಜಾಮಿಳನು ಕಡುಮೋಹದಿಂದ ತನ್ನ ಪೂರ್ಣವಾದ ಮನಸ್ಸನ್ನು ಆ ಪುತ್ರನಲ್ಲಿಟ್ಟಿದ್ದನು. ಆತನ ತೊದಲುನುಡಿಗಳನ್ನು ಕೇಳುತ್ತಾ ಅವನ ಆಟ-ಪಾಟಗಳನ್ನು ನೋಡುತ್ತಾ ಆನಂದಪಡುತ್ತಿದ್ದನು. ॥25॥

(ಶ್ಲೋಕ-26)

ಮೂಲಮ್

ಭುಂಜಾನಃ ಪ್ರಪಿಬನ್ಖಾದನ್ ಬಾಲಕಸ್ನೇಹಯಂತ್ರಿತಃ ।
ಭೋಜಯನ್ಪಾಯಯನ್ಮೂಢೋ ನ ವೇದಾಗತಮಂತಕಮ್ ॥

ಅನುವಾದ

ಹುಡುಗನ ಸ್ನೇಹಪಾಶದಲ್ಲಿ ಬಂಧಿತನಾದ ಅವನು ತಾನು ತಿನ್ನುವಾಗ, ಕುಡಿಯುವಾಗ ಅವನಿಗೂ ತಿನ್ನಿಸುತ್ತಾ ಕಾಲಕಳೆಯುತ್ತಿದ್ದ ಆ ಮೂಢನಿಗೆ ಮೃತ್ಯುವು ತಲೆಯ ಮೇಲೆ ಬಂದು ಕುಳಿತಿರುವುದು ತಿಳಿಯದೇ ಹೋಯಿತು. ॥26॥

(ಶ್ಲೋಕ-27)

ಮೂಲಮ್

ಸ ಏವಂ ವರ್ತಮಾನೋಜ್ಞೋ ಮೃತ್ಯುಕಾಲ ಉಪಸ್ಥಿತೇ ।
ಮತಿಂ ಚಕಾರ ತನಯೇ ಬಾಲೇ ನಾರಾಯಣಾಹ್ವಯೇ ॥

ಅನುವಾದ

ಆ ಮೂರ್ಖನು ಹೀಗೆ ತನ್ನ ಜೀವನವನ್ನು ಸಾಗಿಸುತ್ತಿರುವಾಗ ಕೊನೆಗಾಲವು ಬಂದೇಬಿಟ್ಟಿತು. ಆಗಲೂ ಅವನು ತನ್ನ ಪುತ್ರ ನಾರಾಯಣನ ಕುರಿತೇ ಚಿಂತಿಸುತ್ತಿದ್ದನು. ॥27॥

(ಶ್ಲೋಕ-28)

ಮೂಲಮ್

ಸ ಪಾಶಹಸ್ತಾಂಸೀನ್ದೃಷ್ಟ್ವಾ ಪುರುಷಾನ್ ಭೃಶದಾರುಣಾನ್ ।
ವಕ್ರತುಂಡಾನೂರ್ಧ್ವರೋಮ್ಣ ಆತ್ಮಾನಂ ನೇತುಮಾಗತಾನ್ ॥

ಅನುವಾದ

ಇಷ್ಟರಲ್ಲಿ ತನ್ನನ್ನು ಸೆಳೆದೊಯ್ಯಲು ಅತ್ಯಂತ ಭಯಂಕರರಾದ ಮೂವರು ಯಮದೂತರು ಬಂದಿರುವುದನ್ನು ಅವನು ನೋಡಿದನು. ಅವರು ಕೈಯಲ್ಲಿ ಪಾಶಗಳನ್ನು ಹಿಡಿದಿದ್ದು, ಅವರ ಮುಖಗಳು ಸೊಟ್ಟಗಿದ್ದವು. ಶರೀರದ ಮೇಲೆ ರೋಮಗಳು ನಿಮಿರಿ ನಿಂತಿದ್ದವು. ॥28॥

(ಶ್ಲೋಕ-29)

ಮೂಲಮ್

ದೂರೇ ಕ್ರೀಡನಕಾಸಕ್ತಂ ಪುತ್ರಂ ನಾರಾಯಣಾಹ್ವಯಮ್ ।
ಪ್ಲಾವಿತೇನ ಸ್ವರೇಣೋಚ್ಚೈರಾಜುಹಾವಾಕುಲೇಂದ್ರಿಯಃ ॥

ಅನುವಾದ

ಆಗ ಬಾಲಕನಾದ ನಾರಾಯಣನು ಸ್ವಲ್ಪ ದೂರದಲ್ಲಿ ಆಡುತ್ತಿದ್ದನು. ಯಮದೂತರನ್ನು ಕಂಡು ಅಜಾಮಿಳನು ಅತ್ಯಂತ ವ್ಯಾಕುಲನಾಗಿ, ಭಯಗೊಂಡು ಗಟ್ಟಿಯಾಗಿ ‘ನಾರಾಯಣಾ’ ಎಂದು ಕೂಗಿದನು. ॥29॥

(ಶ್ಲೋಕ-30)

ಮೂಲಮ್

ನಿಶಮ್ಯ ಮ್ರಿಯಮಾಣಸ್ಯ ಬ್ರುವತೋ ಹರಿಕೀರ್ತನಮ್ ।
ಭರ್ತುರ್ನಾಮ ಮಹಾರಾಜ ಪಾರ್ಷದಾಃ ಸಹಸಾಪತನ್ ॥

ಅನುವಾದ

ಭಗವಂತನ ಪಾರ್ಷದರು ನೋಡಿದರು ಇವನು ಸಾಯುವಾಗ ನಮ್ಮ ಸ್ವಾಮಿಯಾದ ಭಗವಾನ್ ನಾರಾಯಣನ ಹೆಸರನ್ನು ಹೇಳುತ್ತಿದ್ದಾನೆ. ಅವನ ನಾಮದ ಕೀರ್ತನೆ ಮಾಡುತ್ತಿದ್ದಾನೆ. ಆದ್ದರಿಂದ ಅವರು ಅತ್ಯಧಿಕ ವೇಗದಿಂದ ತಟ್ಟನೇ ಅಲ್ಲಿಗೆ ಬಂದು ತಲುಪಿದರು. ॥30॥

(ಶ್ಲೋಕ-31)

ಮೂಲಮ್

ವಿಕರ್ಷತೋಂತರ್ಹೃದಯಾದ್ದಾಸೀಪತಿಮಜಾಮಿಲಮ್ ।
ಯಮಪ್ರೇಷ್ಯಾನ್ವಿಷ್ಣುದೂತಾ ವಾರಯಾಮಾಸುರೋಜಸಾ ॥

ಅನುವಾದ

ಆ ಸಮಯದಲ್ಲಿ ಯಮನ ದೂತರು ದಾಸೀಪತಿಯಾದ ಅಜಾಮಿಳನ ಶರೀರದಿಂದ ಅವನ ಸೂಕ್ಷ್ಮಶರೀರವನ್ನು ಸೆಳೆಯುತ್ತಿದ್ದರು. ವಿಷ್ಣುದೂತರು ಅವರನ್ನು ಬಲವಂತವಾಗಿ ತಡೆದರು. ॥31॥

(ಶ್ಲೋಕ-32)

ಮೂಲಮ್

ಊಚುರ್ನಿಷೇಧಿತಾಸ್ತಾಂಸ್ತೇ ವೈವಸ್ವತಪುರಃಸರಾಃ ।
ಕೇ ಯೂಯಂ ಪ್ರತಿಷೇದ್ಧಾರೋ ಧರ್ಮರಾಜಸ್ಯ ಶಾಸನಮ್ ॥

ಅನುವಾದ

ಅವರು ಹೀಗೆ ತಡೆದಾಗ ಯಮನ ದೂತರು ವಿಷ್ಣುದೂತರಲ್ಲಿ ಹೇಳಿದರು ಅರೇ! ಯಮ ಧರ್ಮನ ಶಾಸನವನ್ನು ತಡೆಯುವವರು ನೀವು ಯಾರು? ॥32॥

(ಶ್ಲೋಕ-33)

ಮೂಲಮ್

ಕಸ್ಯ ವಾ ಕುತ ಆಯಾತಾಃ ಕಸ್ಮಾದಸ್ಯ ನಿಷೇಧಥ ।
ಕಿಂ ದೇವಾ ಉಪದೇವಾ ವಾ ಯೂಯಂ ಕಿಂ ಸಿದ್ಧಸತ್ತಮಾಃ ॥

ಅನುವಾದ

ನೀವು ಯಾರ ದೂತರು? ಎಲ್ಲಿಂದ ಬಂದಿರುವಿರಿ? ಇವನನ್ನು ಕೊಂಡುಹೋಗುವುದನ್ನು ಏಕೆ ತಡೆಯುತ್ತಿರುವಿರಿ? ನೀವು ಯಾರಾದರೂ ದೇವತೆಗಳೋ, ಉಪದೇವತೆಗಳೋ, ಅಥವಾ ಸಿದ್ಧಶ್ರೇಷ್ಠರಾಗಿದ್ದೀರೋ? ॥33॥

(ಶ್ಲೋಕ-34)

ಮೂಲಮ್

ಸರ್ವೇ ಪದ್ಮಪಲಾಶಾಕ್ಷಾಃ ಪೀತಕೌಶೇಯವಾಸಸಃ ।
ಕಿರೀಟನಃ ಕುಂಡಲಿನೋ ಲಸತ್ಪುಷ್ಕರಮಾಲಿನಃ ॥

ಅನುವಾದ

ನಿಮ್ಮೆಲ್ಲರ ಕಣ್ಣುಗಳು ಕಮಲದ ದಳಗಳಂತೆ ಸುಂದರ ಸುಕುಮಾರವಾಗಿವೆ. ನೀವು ಹಳದಿಬಣ್ಣದ ರೇಶ್ಮೆಯ ವಸ್ತ್ರವನ್ನು ಧರಿಸಿರುವಿರಿ. ನಿಮ್ಮ ತಲೆಯ ಮೇಲೆ ಕಿರೀಟವೂ, ಕಿವಿಗಳಲ್ಲಿ ಕುಂಡಲಗಳೂ, ಕತ್ತಿನಲ್ಲಿ ಕಮಲಗಳ ಮಾಲೆಗಳು ಬೆಳಗುತ್ತಿವೆ. ॥34॥

(ಶ್ಲೋಕ-35)

ಮೂಲಮ್

ಸರ್ವೇ ಚ ನೂತ್ನವಯಸಃ ಸರ್ವೇ ಚಾರುಚತುರ್ಭುಜಾಃ ।
ಧನುರ್ನಿಷಂಗಾಸಿಗದಾಶಂಖಚಕ್ರಾಂಬುಜಶ್ರಿಯಃ ॥

ಅನುವಾದ

ನೀವೆಲ್ಲರೂ ತರುಣರಾಗಿದ್ದೀರಿ. ಸುಂದರವಾದ ನಾಲ್ಕು-ನಾಲ್ಕು ನೀಡುತೋಳುಗಳಿದ್ದು, ಎಲ್ಲರ ಕರಕಮಲಗಳಲ್ಲಿ ಧನುಷ್ಯ, ಬಾಣ, ಖಡ್ಗ, ಗದೆ, ಶಂಖ, ಚಕ್ರ, ಕಮಲ ಮುಂತಾದವುಗಳು ಶೋಭಿಸುತ್ತಿವೆ. ॥35॥

(ಶ್ಲೋಕ-36)

ಮೂಲಮ್

ದಿಶೋ ವಿತಿಮಿರಾಲೋಕಾಃ ಕುರ್ವಂತಃ ಸ್ವೇನ ರೋಚಿಷಾ ।
ಕಿಮರ್ಥಂ ಧರ್ಮಪಾಲಸ್ಯ ಕಿಂಕರಾನ್ನೋ ನಿಷೇಧಥ ॥

ಅನುವಾದ

ನಿಮ್ಮಗಳ ದೇಹಕಾಂತಿಯಿಂದ ಎಲ್ಲ ದಿಕ್ಕುಗಳ ಅಂಧಕಾರ ಮತ್ತು ಪ್ರಾಕೃತ ಪ್ರಕಾಶವೂ ದೂರವಾಗುತ್ತಿದೆ. ನಾವು ಯಮ ಧರ್ಮನ ಸೇವಕರು. ನಮ್ಮನ್ನು ನೀವುಗಳು ಏಕೆ ತಡೆಯುತ್ತಿದ್ದೀರಿ? ॥36॥

(ಶ್ಲೋಕ-37)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯುಕ್ತೇ ಯಮದೂತೈಸ್ತೈರ್ವಾಸುದೇವೋಕ್ತಕಾರಿಣಃ ।
ತಾನ್ ಪ್ರತ್ಯೂಚುಃ ಪ್ರಹಸ್ಯೇದಂ ಮೇಘನಿರ್ಹ್ರಾದಯಾ ಗಿರಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಯಮದೂತರು ಹೀಗೆ ಕೇಳಿದಾಗ ಭಗವಾನ್ ನಾರಾಯಣನ ಆಜ್ಞಾಕಾರಿ ಪಾರ್ಷದರು ನಗುತ್ತಾ ಮೇಘ ಗಂಭೀರವಾದ ಮಾತುಗಳಿಂದ ಅವರಲ್ಲಿ ಹೀಗೆ ಹೇಳಿದರು. ॥37॥

(ಶ್ಲೋಕ-38)

ಮೂಲಮ್ (ವಾಚನಮ್)

ವಿಷ್ಣುದೂತಾ ಊಚುಃ

ಮೂಲಮ್

ಯೂಯಂ ವೈ ಧರ್ಮರಾಜಸ್ಯ ಯದಿ ನಿರ್ದೇಶಕಾರಿಣಃ ।
ಬ್ರೂತ ಧರ್ಮಸ್ಯ ನಸ್ತತ್ತ್ವಂ ಯಚ್ಚ ಧರ್ಮಸ್ಯ ಲಕ್ಷಣಮ್ ॥

ಅನುವಾದ

ಭಗವಂತನ ಪಾರ್ಷದರು ಹೇಳಿದರು — ಎಲೈ ಯಮ ದೂತರಿರಾ! ನೀವುಗಳು ನಿಜವಾಗಿ ಯಮಧರ್ಮನ ಆಜ್ಞಾಕಾರಿಗಳಾಗಿದ್ದರೆ ಧರ್ಮದ ಲಕ್ಷಣ ಮತ್ತು ಧರ್ಮದ ತತ್ತ್ವವನ್ನು ತಿಳಿಸೋಣವಾಗಲಿ. ॥38॥

(ಶ್ಲೋಕ-39)

ಮೂಲಮ್

ಕಥಂಸ್ವಿದ್ ಧ್ರಿಯತೇ ದಂಡಃ ಕಿಂ ವಾಸ್ಯ ಸ್ಥಾನಮೀಪ್ಸಿತಮ್ ।
ದಂಡ್ಯಾಃ ಕಿಂ ಕಾರಿಣಃ ಸರ್ವೇ ಆಹೋಸ್ವಿತ್ಕತಿಚಿನ್ನೃಣಾಮ್ ॥

ಅನುವಾದ

ದಂಡನೆಯನ್ನು ಹೇಗೆ ಕೊಡಲಾಗುತ್ತದೆ? ದಂಡನೆಗೆ ಯಾವನು ಪಾತ್ರನು? ಮನುಷ್ಯರಲ್ಲಿ ಪಾಪವನ್ನು ಆಚರಿಸಿದವರೆಲ್ಲರೂ ದಂಡನೆಗೆ ಅರ್ಹರೋ, ಅಥವಾ ಅವರಲ್ಲಿ ಕೆಲವರೋ? ಎಂಬುದನ್ನು ತಿಳಿಸಿರಿ. ॥39॥

(ಶ್ಲೋಕ-40)

ಮೂಲಮ್ (ವಾಚನಮ್)

ಯಮದೂತಾ ಊಚುಃ

ಮೂಲಮ್

ವೇದಪ್ರಣಿಹಿತೋಧರ್ಮೋ ಹ್ಯಧರ್ಮಸ್ತದ್ವಿಪರ್ಯಯಃ ।
ವೇದೋ ನಾರಾಯಣಃ ಸಾಕ್ಷಾತ್ಸ್ವಯಂಭೂರಿತಿ ಶುಶ್ರುಮ ॥

ಅನುವಾದ

ಯಮದೂತರು ಹೇಳಿದರು — ವೇದಗಳು ವಿಧಿಸಿದ ಕರ್ಮಗಳೇ ಧರ್ಮವು. ನಿಷೇಧ ಮಾಡಿರುವುದೆಲ್ಲವೂ ಅಧರ್ಮವಾಗಿದೆ. ವೇದಗಳು ಸ್ವಯಂ ಭಗವಂತನ ಸ್ವರೂಪಗಳಾಗಿವೆ. ಅವು ಅವನ ಸ್ವಾಭಾವಿಕ ಶ್ವಾಸ-ಉಚ್ಛ್ವಾಸಗಳು ಹಾಗೂ ಸ್ವಯಂಪ್ರಕಾಶ ಜ್ಞಾನವಾಗಿದೆ ಎಂದು ನಾವು ಕೇಳಿದ್ದೇವೆ. ॥40॥

(ಶ್ಲೋಕ-41)

ಮೂಲಮ್

ಯೇನ ಸ್ವಧಾಮ್ನ್ಯಮೀ ಭಾವಾ ರಜಃಸತ್ತ್ವತಮೋಮಯಾಃ ।
ಗುಣನಾಮಕ್ರಿಯಾರೂಪೈರ್ವಿಭಾವ್ಯಂತೇ ಯಥಾತಥಮ್ ॥

ಅನುವಾದ

ಜಗತ್ತಿನ ರಜೋಮಯ, ಸತ್ತ್ವಮಯ, ತಮೋಮಯ ಎಲ್ಲ ಪದಾರ್ಥಗಳು, ಎಲ್ಲ ಪ್ರಾಣಿಗಳು ತಮ್ಮ ಪರಮಾಶ್ರಯ ಭಗವಂತನಲ್ಲೇ ನೆಲೆಸಿವೆ. ವೇದವೇ ಅವುಗಳ ಗುಣ, ನಾಮ, ಕರ್ಮ, ರೂಪ ಮುಂತಾದವುಗಳಿಗೆ ಅನುಸಾರವಾಗಿ ಅವುಗಳನ್ನು ಯಥಾಯೋಗ್ಯವಾಗಿ ವಿಭಾಜಿಸುತ್ತವೆ. ॥41॥

(ಶ್ಲೋಕ-42)

ಮೂಲಮ್

ಸೂರ್ಯೋಗ್ನಿಃ ಖಂ ಮರುದ್ಗಾವಃ ಸೋಮಃ ಸಂಧ್ಯಾಹನೀ ದಿಶಃ ।
ಕಂ ಕುಃ ಕಾಲೋ ಧರ್ಮ ಇತಿ ಹ್ಯೇತೇ ದೈಹ್ಯಸ್ಯ ಸಾಕ್ಷಿಣಃ ॥

ಅನುವಾದ

ಜೀವಿಯು ಶರೀರ ಅಥವಾ ಮನೋವೃತ್ತಿಯಿಂದ ಮಾಡುವ ಕರ್ಮಗಳಿಗೆ ಸೂರ್ಯ, ಅಗ್ನಿ, ಆಕಾಶ, ವಾಯು, ಇಂದ್ರಿಯಗಳು, ಚಂದ್ರ, ಸಂಧ್ಯೆಗಳು, ರಾತ್ರಿ, ಹಗಲು, ದಿಕ್ಕುಗಳು, ನೀರು, ಪೃಥಿವಿ, ಕಾಲ ಮತ್ತು ಧರ್ಮ ಇವುಗಳು ಸಾಕ್ಷಿಯಾಗಿರುತ್ತವೆ. ॥42॥

ಮೂಲಮ್

(ಶ್ಲೋಕ-43)
ಏತೈರಧರ್ಮೋ ವಿಜ್ಞಾತಃ ಸ್ಥಾನಂ ದಂಡಸ್ಯ ಯುಜ್ಯತೇ ।
ಸರ್ವೇ ಕರ್ಮಾನುರೋಧೇನ ದಂಡಮರ್ಹಂತಿ ಕಾರಿಣಃ ॥

ಅನುವಾದ

ಇವುಗಳ ಮೂಲಕ ಅಧರ್ಮವು ಯಾವುದು ಎಂಬುದು ಪತ್ತೆ ಮಾಡಿ ದಂಡನೆಯ ನಿರ್ಣಯವಾಗುತ್ತದೆ. ಪಾಪಕರ್ಮ ಮಾಡುವ ಎಲ್ಲ ಮನುಷ್ಯರು ತಮ್ಮ-ತಮ್ಮ ಕರ್ಮಗಳಿಗೆ ಅನುಸಾರ ದಂಡನೆಗೆ ಯೋಗ್ಯರಾಗುವರು. ॥43॥

(ಶ್ಲೋಕ-44)

ಮೂಲಮ್

ಸಂಭವಂತಿ ಹಿ ಭದ್ರಾಣಿ ವಿಪರೀತಾನಿ ಚಾನಘಾಃ ।
ಕಾರಿಣಾಂ ಗುಣಸಂಗೋಸ್ತಿ ದೇಹವಾನ್ನ ಹ್ಯಕರ್ಮಕೃತ್ ॥

ಅನುವಾದ

ಎಲೈ ಪುಣ್ಯಾತ್ಮರೇ! ಕರ್ಮ ಮಾಡುವ ಪ್ರಾಣಿಗಳಿಗೆ ಗುಣಗಳೊಂದಿಗೆ ಸಂಬಂಧ ಇದ್ದೇ ಇರುತ್ತದೆ. ಅದರಿಂದ ಎಲ್ಲರಿಂದಲೂ ಕೆಲವು ಪಾಪಗಳು, ಕೆಲವು ಪುಣ್ಯಗಳು ಆಗುತ್ತಿರುತ್ತವೆ. ದೇಹವನ್ನು ಹೊತ್ತ ಯಾವ ಪುರುಷನೂ ಕೂಡ ಕರ್ಮಗಳನ್ನು ಮಾಡದೆ ಇರಲಾರದು. ॥44॥

(ಶ್ಲೋಕ-45)

ಮೂಲಮ್

ಯೇನ ಯಾವಾನ್ಯಥಾಧರ್ಮೋ ಧರ್ಮೋ ವೇಹ ಸಮೀಹಿತಃ ।
ಸ ಏವ ತತ್ಫಲಂ ಭುಂಕ್ತೇ ತಥಾ ತಾವದಮುತ್ರ ವೈ ॥

ಅನುವಾದ

ಈ ಲೋಕದಲ್ಲಿ ಯಾವ ಮನುಷ್ಯನು ಎಷ್ಟು ರೀತಿಯ ಧರ್ಮ ಮತ್ತು ಅಧರ್ಮವನ್ನು ಮಾಡುವನೋ ಅವನು ಪರಲೋಕದಲ್ಲಿ ಅಷ್ಟಷ್ಟೇ ಫಲವನ್ನು ಭೋಗಿಸುತ್ತಾನೆ. ॥45॥

(ಶ್ಲೋಕ-46)

ಮೂಲಮ್

ಯಥೇಹ ದೇವಪ್ರವರಾಸೈವಿಧ್ಯಮುಪಲಭ್ಯತೇ ।
ಭೂತೇಷು ಗುಣವೈಚಿತ್ರ್ಯಾತ್ತಥಾನ್ಯತ್ರಾನುಮೀಯತೇ ॥

ಅನುವಾದ

ಎಲೈ ದೇವಶಿಖಾಮಣಿಗಳೇ! ಸತ್ತ್ವ, ರಜ, ತಮ ಈ ತ್ರಿಗುಣಗಳ ಭೇದದಿಂದ ಈ ಲೋಕದಲ್ಲಿ ಪುಣ್ಯಾತ್ಮರು, ಪಾಪಾತ್ಮರು ಮತ್ತು ಪಾಪ-ಪುಣ್ಯ ಇದರಿಂದ ಕೂಡಿದವರು ಅಥವಾ ಸುಖಿಗಳು, ದುಃಖಿಗಳು ಮತ್ತು ಸುಖ-ದುಃಖವೆರಡರಿಂದಲೂ ಕೂಡಿದ ಮೂರು ರೀತಿಯ ಪ್ರಾಣಿಗಳು ಕಂಡುಬರುತ್ತವೆ. ಹಾಗೆಯೇ ಪರಲೋಕದಲ್ಲಿಯೂ ಅವರ ತ್ರಿವಿಧತೆಯನ್ನು ಊಹಿಸಬಹುದು. ॥46॥

(ಶ್ಲೋಕ-47)

ಮೂಲಮ್

ವರ್ತಮಾನೋನ್ಯಯೋಃ ಕಾಲೋ ಗುಣಾಭಿಜ್ಞಾಪಕೋ ಯಥಾ ।
ಏವಂ ಜನ್ಮಾನ್ಯಯೋರೇತದ್ ಧರ್ಮಾಧರ್ಮನಿದರ್ಶನಮ್ ॥

ಅನುವಾದ

ವರ್ತಮಾನ ಕಾಲದಿಂದ ಭೂತ ಮತ್ತು ಭವಿಷ್ಯತ್ತನ್ನು ಊಹಿಸಬಹುದೋ, ಹಾಗೆಯೇ ವರ್ತಮಾನ ಜನ್ಮದ ಪಾಪ-ಪುಣ್ಯಗಳನ್ನೂ ಕೂಡಾ ಭೂತ ಹಾಗೂ ಭವಿಷ್ಯತ್ತಿನಿಂದ ಊಹಿಸಬಹುದು. ॥47॥

(ಶ್ಲೋಕ-48)

ಮೂಲಮ್

ಮನಸೈವ ಪುರೇ ದೇವಃ ಪೂರ್ವರೂಪಂ ವಿಪಶ್ಯತಿ ।
ಅನುಮೀಮಾಂಸತೇಪೂರ್ವಂ ಮನಸಾ ಭಗವಾನಜಃ ॥

ಅನುವಾದ

ನಮ್ಮ ಸ್ವಾಮಿಯಾದ ಅಜನ್ಮಾ ಭಗವಾನ್ ಸರ್ವಜ್ಞ ಯಮ ರಾಜರು ಎಲ್ಲರ ಅಂತಃಕರಣದಲ್ಲಿ ವಿರಾಜಮಾನರಾಗಿದ್ದಾರೆ. ಅದರಿಂದ ಅವರು ತಮ್ಮ ಮನಸ್ಸಿನಿಂದಲೇ ಎಲ್ಲರ ಹಿಂದಿನ ರೂಪಗಳನ್ನು ನೋಡಿಕೊಳ್ಳುವರು. ಜೊತೆಗೆ ಅವರ ಮುಂದಿನ ಸ್ವರೂಪವನ್ನೂ ವಿಚಾರಮಾಡಿಕೊಳ್ಳುವರು. ॥48॥

(ಶ್ಲೋಕ-49)

ಮೂಲಮ್

ಯಥಾಜ್ಞಸ್ತಮಸಾ ಯುಕ್ತ ಉಪಾಸ್ತೇ ವ್ಯಕ್ತಮೇವ ಹಿ ।
ನ ವೇದ ಪೂರ್ವಮಪರಂ ನಷ್ಟಜನ್ಮಸ್ಮೃತಿಸ್ತಥಾ ॥

ಅನುವಾದ

ಮಲಗಿರುವ ಅಜ್ಞಾನಿಯು ಸ್ವಪ್ನದ ಸಮಯದಲ್ಲಿ ಕಂಡು ಬರುವ ಕಲ್ಪಿತ ಶರೀರವನ್ನೇ ತನ್ನ ನಿಜವಾದ ಶರೀರವೆಂದು ತಿಳಿಯುತ್ತಾನೆ. ಮಲಗಿರುವ ಅಥವಾ ಎಚ್ಚರಗೊಳ್ಳುವ ಶರೀರವನ್ನು ಮರೆತುಬಿಡುತ್ತಾನೆ. ಹೀಗೆಯೇ ಜೀವಿಯೂ ಕೂಡ ತನ್ನ ಹಿಂದಿನ ಜನ್ಮಗಳ ನೆನಪನ್ನು ಮರೆತು ಬಿಡುತ್ತಾನೆ ಮತ್ತು ವರ್ತಮಾನದ ಶರೀರವನ್ನು ಬಿಟ್ಟು ಹಿಂದಿನ-ಮುಂದಿನ ಶರೀರಗಳ ಸಂಬಂಧದಲ್ಲಿ ಏನನ್ನು ತಿಳಿಯುವುದಿಲ್ಲ. ॥49॥

(ಶ್ಲೋಕ-50)

ಮೂಲಮ್

ಪಂಚಭಿಃ ಕುರುತೇ ಸ್ವಾರ್ಥಾನ್ ಪಂಚ ವೇದಾಥ ಪಂಚಭಿಃ ।
ಏಕಸ್ತು ಷೋಡಶೇನ ತ್ರೀನ್ಸ್ವಯಂ ಸಪ್ತದಶೋಶ್ನುತೇ ॥

ಅನುವಾದ

ಸಿದ್ಧಪುರುಷರೇ! ಜೀವಿಯು ಈ ಶರೀರದಲ್ಲಿ ಕರ್ಮೇಂದ್ರಿಯಗಳಿಂದ ಕೊಟ್ಟು- ಕೊಳ್ಳುವುದು, ನಡೆದಾಡುವುದು ಮುಂತಾದ ಕೆಲಸವನ್ನು ಮಾಡು ತ್ತಾನೆ. ಐದು ಜ್ಞಾನೇಂದ್ರಿಯಗಳಿಂದ ರೂಪ, ರಸ ಮುಂತಾದ ಐದು ವಿಷಯಗಳನ್ನು ಅನುಭವಿಸುತ್ತಾನೆ. ಹದಿನಾರನೆಯ ಮನಸ್ಸಿನೊಂದಿಗೆ ಸ್ವಯಂ ಹದಿನೇಳನೆಯವನಾಗಿ ಕೂಡಿ ಕೊಂಡು ಒಬ್ಬಂಟಿಗನಾಗಿಯೇ ಮನಸ್ಸು, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಈ ಮೂರರ ವಿಷಯಗಳನ್ನು ಭೋಗಿಸುತ್ತಾನೆ. ॥50॥

(ಶ್ಲೋಕ-51)

ಮೂಲಮ್

ತದೇತತ್ ಷೋಡಶಕಲಂ ಲಿಂಗಂ ಶಕ್ತಿತ್ರಯಂ ಮಹತ್ ।
ಧತ್ತೇನು ಸಂಸೃತಿಂ ಪುಂಸಿ ಹರ್ಷಶೋಕಭಯಾರ್ತಿದಾಮ್ ॥

ಅನುವಾದ

ಜೀವಿಯ ಈ ಹದಿನಾರು ಕಲೆ ಮತ್ತು ಸತ್ತ್ವಾದಿ ಮೂರು ಗುಣಗಳುಳ್ಳ ಲಿಂಗಶರೀರವು ಅನಾದಿಯಾಗಿದೆ. ಇದೇ ಜೀವಿಯನ್ನು ಪದೇ-ಪದೇ ಹರ್ಷ, ಶೋಕ, ಭಯ ಮತ್ತು ಪೀಡೆಗಳನ್ನು ಕೊಡುವ ಜನ್ಮ- ಮರಣದ ಚಕ್ರದಲ್ಲಿ ಕೆಡಹುತ್ತದೆ. ॥51॥

(ಶ್ಲೋಕ-52)

ಮೂಲಮ್

ದೇಹ್ಯಜ್ಞೋಜಿತಷಡ್ವರ್ಗೋ ನೇಚ್ಛನ್ಕರ್ಮಾಣಿ ಕಾರ್ಯತೇ ।
ಕೋಶಕಾರ ಇವಾತ್ಮಾನಂ ಕರ್ಮಣಾಚ್ಛಾದ್ಯ ಮುಹ್ಯತಿ ॥

ಅನುವಾದ

ಅಜ್ಞಾನಕ್ಕೆ ವಶನಾಗಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಆರು ಶತ್ರುಗಳ ಮೇಲೆ ವಿಜಯವನ್ನು ಪಡೆಯ ದಿರುವ ಜೀವನಿಗೆ ಇಚ್ಛೆ ಇಲ್ಲದಿದ್ದರೂ ಬೇರೆ-ಬೇರೆ ವಾಸನೆ ಗಳ ಅನುಸಾರ ಅನೇಕ ಕರ್ಮಗಳನ್ನು ಮಾಡಬೇಕಾಗು ತ್ತದೆ. ಅಂತಹ ಸ್ಥಿತಿಯಲ್ಲಿ ಅವನು ರೇಶ್ಮೆಹುಳದಂತೆ ತಾನು ಕರ್ಮದ ಬಲೆಯಲ್ಲಿ ಸಿಕ್ಕಿಕೊಳ್ಳುವನು ಮತ್ತು ಹಾಗೆ ತನ್ನ ಕೈಯಾರೆ ಮೋಹಕ್ಕೆ ಬಲಿಯಾಗುತ್ತಾನೆ. ॥52॥

(ಶ್ಲೋಕ-53)

ಮೂಲಮ್

ನ ಹಿ ಕಶ್ಚಿತ್ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
ಕಾರ್ಯತೇ ಹ್ಯವಶಃ ಕರ್ಮ ಗುಣೈಃ ಸ್ವಾಭಾವಿಕೈರ್ಬಲಾತ್ ॥

ಅನುವಾದ

ಯಾವುದೇ ಶರೀರಧಾರೀ ಜೀವನು ಕರ್ಮಮಾಡದೆ ಒಂದು ಕ್ಷಣವೂ ಇರಲಾರನು. ಪ್ರತಿಯೋರ್ವ ಪ್ರಾಣಿಯ ಸ್ವಾಭಾವಿಕ ಗುಣಗಳೇ ಬಲವಂತವಾಗಿ ವಿವಶಗೊಳಿಸಿ ಅವನಿಂದ ಕರ್ಮಗಳನ್ನು ಮಾಡಿಸುತ್ತವೆ. ॥53॥

(ಶ್ಲೋಕ-54)

ಮೂಲಮ್

ಲಬ್ಧ್ವಾ ನಿಮಿತ್ತಮವ್ಯಕ್ತಂ ವ್ಯಕ್ತಾವ್ಯಕ್ತಂ ಭವತ್ಯುತ ।
ಯಥಾಯೋನಿ ಯಥಾಬೀಜಂ ಸ್ವಭಾವೇನ ಬಲೀಯಸಾ ॥

ಅನುವಾದ

ಜೀವಿಯು ತನ್ನ ಹಿಂದಿನ ಜನ್ಮಗಳ ಪಾಪ-ಪುಣ್ಯಮಯ ಸಂಸ್ಕಾರಗಳನುಸಾರವಾಗಿ ಸ್ಥೂಲ ಮತ್ತು ಸೂಕ್ಷ್ಮ ಶರೀರಗಳನ್ನು ಹೊಂದುತ್ತಾನೆ. ಅದರ ಸ್ವಾಭಾವಿಕ ಹಾಗೂ ಪ್ರಬಲ ವಾಸನೆಗಳು ಕೆಲವೊಮ್ಮೆ ಅವನಿಗೆ ತಾಯಿಯಂತೆ (ಸ್ತ್ರೀರೂಪವನ್ನು) ಮಾಡುತ್ತವೆ. ಕೆಲವೊಮ್ಮೆ ತಂದೆಯಂತೆ (ಪುರುಷ ರೂಪವನ್ನು) ಮಾಡುತ್ತವೆ. ॥54॥

(ಶ್ಲೋಕ-55)

ಮೂಲಮ್

ಏಷ ಪ್ರಕೃತಿಸಂಗೇನ ಪುರುಷಸ್ಯ ವಿಪರ್ಯಯಃ ।
ಆಸೀತ್ ಸ ಏವ ನಚಿರಾದೀಶಸಂಗಾದ್ವಿಲೀಯತೇ ॥

ಅನುವಾದ

ಪ್ರಕೃತಿಯ ಸಂಸರ್ಗ ಉಂಟಾದ್ದರಿಂದಲೇ ಪುರುಷನು ತನ್ನ ವಾಸ್ತವಿಕ ಸ್ವರೂಪಕ್ಕಿಂತ ವಿಪರೀತವಾದ ಲಿಂಗಶರೀರವೇ ತಾನೆಂದು ತಿಳಿದುಕೊಳ್ಳುವನು. ಈ ವಿರುದ್ಧವಾದ ಬುದ್ಧಿಯು ಭಗವಂತನ ಭಜನೆಯಿಂದ ಬೇಗನೇ ಹೊರಟುಹೋಗುವುದು.॥55॥

(ಶ್ಲೋಕ-56)

ಮೂಲಮ್

ಅಯಂ ಹಿ ಶ್ರುತಸಂಪನ್ನಃ ಶೀಲವೃತ್ತಗುಣಾಲಯಃ ।
ಧೃತವ್ರತೋ ಮೃದುರ್ದಾಂತಃ ಸತ್ಯವಾನ್ಮಂತ್ರವಿಚ್ಛುಚಿಃ ॥

ಅನುವಾದ

ಎಲೈ ದೇವತೆಗಳಿರಾ! ನಿಮಗೆ ತಿಳಿದೇ ಇರುವಂತೆ ಈ ಅಜಾಮಿಳನು ದೊಡ್ಡ ಶಾಸ್ತ್ರಜ್ಞನಾಗಿದ್ದನು. ಶೀಲ, ಸದ್ಗುಣ, ಸದಾಚಾರಗಳ ನಿಧಿಯಾಗಿದ್ದನು. ಬ್ರಹ್ಮಚಾರಿಯೂ, ವಿನಯಿಯೂ, ಜಿತೇಂದ್ರಿಯನೂ, ಸತ್ಯನಿಷ್ಠನೂ, ಮಂತ್ರ ಜ್ಞನೂ, ಪವಿತ್ರಾತ್ಮನೂ ಆಗಿದ್ದನು. ॥56॥

(ಶ್ಲೋಕ-57)

ಮೂಲಮ್

ಗುರ್ವಗ್ನ್ಯತಿಥಿವೃದ್ಧಾನಾಂ ಶುಶ್ರೂಷುರ್ನಿರಹಂಕೃತಃ ।
ಸರ್ವಭೂತಸುಹೃತ್ಸಾಧುರ್ಮಿತವಾಗನಸೂಯಕಃ ॥

ಅನುವಾದ

ಇವನು ಗುರುಗಳ, ಅಗ್ನಿಯ, ಅತಿಥಿಗಳ, ಹಿರಿಯರ ಸೇವೆ ಮಾಡಿದ್ದನು. ಅಹಂಕಾರವಾದರೋ ಇವನಲ್ಲಿ ಇರಲೇ ಇಲ್ಲ. ಎಲ್ಲ ಪ್ರಾಣಿಗಳಿಗೂ ಹಿತವನ್ನೇ ಬಯಸುತ್ತಾ, ಉಪಕಾರ ಮಾಡುತ್ತಾ, ಆವಶ್ಯಕತೆ ಇದ್ದಷ್ಟೇ ಮಾತಾಡುತ್ತಿದ್ದನು. ಯಾರು ದೋಷಗಳನ್ನು, ಎತ್ತಿ ಆಡುತ್ತಿರಲಿಲ್ಲ. ॥57॥

(ಶ್ಲೋಕ-58)

ಮೂಲಮ್

ಏಕದಾಸೌ ವನಂ ಯಾತಃ ಪಿತೃಸಂದೇಶಕೃದ್ವಿಜಃ ।
ಆದಾಯ ತತ ಆವೃತ್ತಃ ಲಪುಷ್ಪಸಮಿತ್ಕುಶಾನ್ ॥

ಅನುವಾದ

ಒಂದು ದಿನ ಈ ಬ್ರಾಹ್ಮಣನು ತನ್ನ ತಂದೆಯ ಅಪ್ಪಣೆಯಂತೆ ಕಾಡಿಗೆ ಹೋಗಿ ಫಲ-ಪುಷ್ಪ, ಸಮಿಧೆ, ದರ್ಭೆಗಳನ್ನು ಎತ್ತಿಕೊಂಡು ಮನೆಗೆ ಹಿಂದಿರುಗುತ್ತಿದ್ದನು. ॥58॥

(ಶ್ಲೋಕ-59)

ಮೂಲಮ್

ದದರ್ಶ ಕಾಮಿನಂ ಕಂಚಿಚ್ಛೂದ್ರಂ ಸಹ ಭುಜಿಷ್ಯಯಾ ।
ಪೀತ್ವಾ ಚ ಮಧು ಮೈರೇಯಂ ಮದಾಘೂರ್ಣಿತನೇತ್ರಯಾ ॥

(ಶ್ಲೋಕ-60)

ಮೂಲಮ್

ಮತ್ತಯಾ ವಿಶ್ಲಥನ್ನೀವ್ಯಾ ವ್ಯಪೇತಂ ನಿರಪತ್ರಪಮ್ ।
ಕ್ರೀಡಂತಮನು ಗಾಯಂತಂ ಹಸಂತಮನಯಾಂತಿಕೇ ॥

ಅನುವಾದ

ಮರಳಿ ಬರುತ್ತಿರುವಾಗ ದಾರಿಯಲ್ಲಿ ಓರ್ವ ಭ್ರಷ್ಟನಾದ ವೃಷಲನು ಅತಿಕಾಮಿಯೂ, ನಿರ್ಲಜ್ಜನೂ ಆಗಿ ಹೆಂಡವನ್ನು ಕುಡಿದು ವೇಶ್ಯೆಯೊಂದಿಗೆ ವಿಹರಿಸುತ್ತಿದ್ದನು. ವೇಶ್ಯೆಯೂ ಮದ್ಯ ಕುಡಿದು ಉನ್ಮತ್ತಳಾಗಿ, ಕಣ್ಣುಗಳನ್ನು ತಿರುಗಿಸುತ್ತಾ, ಅರ್ಧನಗ್ನಸ್ಥಿತಿಯಲ್ಲಿದ್ದಳು. ಆ ಶೂದ್ರನು ಆ ವೇಶ್ಯೆಯೊಂದಿಗೆ ಕೆಲವೊಮ್ಮೆ ನಗುತ್ತಾ, ಹಾಡುತ್ತಾ, ನಾನಾ ಬಗೆಯ ಕುಚೇಷ್ಟೆಗಳನ್ನು ಮಾಡುತ್ತಾ ಅವಳನ್ನು ಸಂತೋಷ ಪಡಿಸುತ್ತಿದ್ದನು.॥59-60॥

(ಶ್ಲೋಕ-61)

ಮೂಲಮ್

ದೃಷ್ಟ್ವಾ ತಾಂ ಕಾಮಲಿಪ್ತೇನ ಬಾಹುನಾ ಪರಿರಂಭಿತಾಮ್ ।
ಜಗಾಮ ಹೃಚ್ಛಯವಸಂ ಸಹಸೈವ ವಿಮೋಹಿತಃ ॥

ಅನುವಾದ

ಓ ಪುಣ್ಯಾತ್ಮರಿರಾ! ಆ ಶೂದ್ರನು ಭುಜಗಳಿಗೆ ಕಾಮೋದ್ದೀಪಕ ವಾದ ಅಂಗರಾಗವನ್ನು ಬಳಿದು ಕೊಂಡು ಅವುಗಳಿಂದ ಆ ಕುಲಟೆಯನ್ನು ಆಲಿಂಗಿಸಿಕೊಂಡಿದ್ದನು. ಅಜಾಮಿಳನು ಅವರನ್ನು ನೋಡಿ ಇದ್ದಕ್ಕಿದ್ದಂತೆ ಅವನ ಮನಸ್ಸು ಮೋಹ ಗೊಂಡು ಕಾಮಪರವಶನಾಗಿಬಿಟ್ಟನು. ॥61॥

(ಶ್ಲೋಕ-62)

ಮೂಲಮ್

ಸ್ತಂಭಯನ್ನಾತ್ಮನಾತ್ಮಾನಂ ಯಾವತ್ಸತ್ತ್ವಂ ಯಥಾಶ್ರುತಮ್ ।
ನ ಶಶಾಕ ಸಮಾಧಾತುಂ ಮನೋ ಮದನವೇಪಿತಮ್ ॥

ಅನುವಾದ

ಅಜಾಮಿಳನು ತನ್ನ ಧೈರ್ಯ, ಜ್ಞಾನಕ್ಕನುಸಾರ ತನ್ನ ಕಾಮ ಪರವಶವಾದ ಮನಸ್ಸನ್ನು ತಡೆಯಲು ಬಹಳ ಮಟ್ಟಿಗೆ ಪ್ರಯತ್ನಿಸಿದನು. ಆದರೆ ಸರ್ವತ್ರ ಸರ್ವಪ್ರಯತ್ನ ಮಾಡಿದರೂ ಅವನು ಮನಸ್ಸನ್ನು ಹತೋಟಿಗೆ ತಂದುಕೊಳ್ಳಲು ಅಸಮರ್ಥನಾದನು. ॥62॥

(ಶ್ಲೋಕ-63)

ಮೂಲಮ್

ತನ್ನಿಮಿತ್ತಸ್ಮರವ್ಯಾಜಗ್ರಹಗ್ರಸ್ತೋ ವಿಚೇತನಃ ।
ತಾಮೇವ ಮನಸಾ ಧ್ಯಾಯನ್ ಸ್ವಧರ್ಮಾದ್ವಿರರಾಮ ಹ ॥

ಅನುವಾದ

ಆ ವೇಶ್ಯೆಯನ್ನು ನಿಮಿತ್ತವಾಗಿಸಿ ಕಾಮಪಿಶಾಚಿಯು ಅಜಾಮಿಳನ ಮನಸ್ಸನ್ನು ಆಕ್ರಮಿಸಿ ಬಿಟ್ಟಿತು. ಇವನ ಸದಾಚಾರ ಮತ್ತು ಶಾಸ್ತ್ರಜ್ಞಾನವು ಕರಗಿ ಹೋಯಿತು. ಈಗ ಇವನು ಮನಸ್ಸಿನಲ್ಲೇ ಆ ವೇಶ್ಯೆಯನ್ನು ಚಿಂತಿಸುತ್ತಾ ತನ್ನ ಧರ್ಮದಿಂದ ವಿಮುಖನಾಗಿ ಬಿಟ್ಟನು. ॥63॥

(ಶ್ಲೋಕ-64)

ಮೂಲಮ್

ತಾಮೇವ ತೋಷಯಾಮಾಸ ಪಿತ್ರ್ಯೇಣಾರ್ಥೇನ ಯಾವತಾ ।
ಗ್ರಾಮ್ಯೈರ್ಮನೋರಮೈಃ ಕಾಮೈಃ ಪ್ರಸೀದೇತ ಯಥಾ ತಥಾ ॥

ಅನುವಾದ

ಅಜಾಮಿಳನು ಆಕೆಯನ್ನು ಸಂತೋಷಪಡಿಸಲಿಕ್ಕಾಗಿ ಅತಿ ಸುಂದರವಾದ ವಸ್ತ್ರ-ಒಡವೆಗಳನ್ನು ತಂದು ಕೊಡತೊಡಗಿದನು. ತನ್ನ ತಂದೆಯ ಎಲ್ಲ ಸಂಪತ್ತನ್ನೂ ವೆಚ್ಚ ಮಾಡಿ ಆ ಕುಲಟೆಯನ್ನು ಮೆಚ್ಚಿಸಿದನು. ಅವಳು ಯಾವುದರಿಂದ ಪ್ರಸನ್ನವಾಗಿರುವಳೋ ಅದೇ ರೀತಿಯ ಚೇಷ್ಟೆಗಳನ್ನು ಮಾಡುತ್ತಿದ್ದನು. ॥64॥

(ಶ್ಲೋಕ-65)

ಮೂಲಮ್

ವಿಪ್ರಾಂ ಸ್ವಭಾರ್ಯಾಮಪ್ರೌಢಾಂ ಕುಲೇ ಮಹತಿಲಂಭಿತಾಮ್ ।
ವಿಸಸರ್ಜಾಚಿರಾತ್ಪಾಪಃ ಸ್ವೈರಿಣ್ಯಾಪಾಂಗವಿದ್ಧಧೀಃ ॥

ಅನುವಾದ

ಆ ಸ್ವೇಚ್ಛಾಚಾರಿಣಿಯ ಕಡೆಗಣ್ಣ ನೋಟದಿಂದ ಇವನು ಸೂರೆಗೊಂಡಿದ್ದನು. ಅದರಿಂದ ಕುಲೀನೆಯೂ, ತರುಣಿಯೂ ಆದ ತನ್ನ ವಿವಾಹಿತ ಬ್ರಾಹ್ಮಣೀ ಪತ್ನಿಯನ್ನು ತೊರೆದುಬಿಟ್ಟನು. ಇನ್ನು ಈತನ ಪಾಪಕ್ಕೆ ಎಲ್ಲೆ ಏನು ಬಂತು? ॥65॥

(ಶ್ಲೋಕ-66)

ಮೂಲಮ್

ಯತಸ್ತತಶ್ಚೋಪನಿನ್ಯೇ ನ್ಯಾಯತೋನ್ಯಾಯತೋ ಧನಮ್ ।
ಬಭಾರಾಸ್ಯಾಃ ಕುಟುಂಬಿನ್ಯಾಃ ಕುಟುಂಬಂ ಮಂದಧೀರಯಮ್ ॥

ಅನುವಾದ

ದುಷ್ಟಬುದ್ಧಿಯಾದ ಇವನು ನ್ಯಾಯದಿಂದಿರಲೀ, ಅನ್ಯಾಯದಿಂದಿರಲೀ, ಹೇಗಾದರೂ ಸಿಕ್ಕಿದಲ್ಲಿಂದ ಹಣವನ್ನು ಸಂಪಾದಿಸುತ್ತಾ ಆ ವೇಶ್ಯೆಯ ದೊಡ್ಡ ಕುಟುಂಬವನ್ನು ಸಾಕುವುದರಲ್ಲೇ ಆಸಕ್ತನಾದನು. ॥66॥

(ಶ್ಲೋಕ-67)

ಮೂಲಮ್

ಯದಸೌ ಶಾಸಮುಲ್ಲಂಘ್ಯ ಸ್ವೈರಚಾರ್ಯಾರ್ಯಗರ್ಹಿತಃ ।
ಅವರ್ತತ ಚಿರಂ ಕಾಲಮಘಾಯುರಶುಚಿರ್ಮಲಾತ್ ॥

ಅನುವಾದ

ಈ ಪಾಪಿಯು ಶಾಸ್ತ್ರಜ್ಞಾನವನ್ನು ಮೀರಿ ಸ್ವೇಚ್ಛಾಚಾರಿಯಾಗಿ ನಡೆದುಕೊಳ್ಳುವುದರಿಂದ ಇವನು ಸತ್ಪುರುಷರಿಂದ ನಿಂದಿತನಾಗಿದ್ದಾನೆ. ಇವನು ಅನೇಕ ದಿನಗಳವರೆಗೆ ವೇಶ್ಯೆಯ ಮಲಕ್ಕೆ ಸಮಾನವಾದ, ಅಪವಿತ್ರವಾದ ಅನ್ನದಿಂದ ತನ್ನ ಜೀವನವನ್ನು ಕಳೆದನು. ಹೀಗೆ ಇವನ ಇಡೀ ಜೀವನವೇ ಪಾಪಮಯವಾಗಿದೆ. ॥67॥

(ಶ್ಲೋಕ-68)

ಮೂಲಮ್

ತತ ಏನಂ ದಂಡಪಾಣೇಃ ಸಕಾಶಂ ಕೃತಕಿಲ್ಬಿಷಮ್ ।
ನೇಷ್ಯಾಮೋಕೃತನಿರ್ವೇಶಂ ಯತ್ರ ದಂಡೇನ ಶುಧ್ಯತಿ ॥

ಅನುವಾದ

ಇವನು ಇಂದಿನವರೆಗೆ ತನ್ನ ಪಾಪಗಳಿಗೆ ಯಾವ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿಲ್ಲ. ಅದಕ್ಕಾಗಿ ಈಗ ನಾವು ಈ ಪಾಪಿಯನ್ನು ದಂಡಪಾಣಿಯಾದ ಭಗವಾನ್ ಯಮರಾಜನ ಬಳಿಗೆ ಕೊಂಡು ಹೋಗುವೆವು. ಅಲ್ಲಿ ಇವನು ತನ್ನ ಪಾಪಗಳನ್ನು ಭೋಗಿಸಿ ಶುದ್ಧನಾಗಿ ಹೋಗುವನು. ॥68॥

ಅನುವಾದ (ಸಮಾಪ್ತಿಃ)

ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಷಷ್ಠ ಸ್ಕಂಧೇ ಅಜಾಮಿಲೋಪಾಖ್ಯಾನೇ ಪ್ರಥಮೋಽಧ್ಯಾಯಃ ॥1॥