೨೬

[ಇಪ್ಪತ್ತಾರನೆಯ ಅಧ್ಯಾಯ]

ಭಾಗಸೂಚನಾ

ನರಕಗಳ ಬೇರೆ-ಬೇರೆ ಗತಿಗಳ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಮಹರ್ಷ ಏತದ್ವೈಚಿತ್ರ್ಯಂ ಲೋಕಸ್ಯ ಕಥಮಿತಿ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹರ್ಷಿಗಳೇ! ಲೋಕದ ಜೀವಿಗಳಿಗೆ ಉಂಟಾಗುವ ಉಚ್ಚ-ನೀಚ ಗತಿಗಳಲ್ಲಿ ಇಷ್ಟೊಂದು ಭಿನ್ನತೆಗಳು ಏಕೆ ॥1॥

(ಗದ್ಯ - 2)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ತ್ರಿಗುಣತ್ವಾತ್ಕರ್ತುಃ ಶ್ರದ್ಧಯಾ ಕರ್ಮಗತಯಃ ಪೃಥಗ್ವಿಧಾಃ ಸರ್ವಾ ಏವ ಸರ್ವಸ್ಯ ತಾರತಮ್ಯೇನ ಭವಂತಿ ॥ 2 ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ಕರ್ಮ ಮಾಡುವವರಲ್ಲಿ ಸಾತ್ವಿಕರು, ರಾಜಸರು ಮತ್ತು ತಾಮಸರು ಎಂಬ ಮೂರು ಸ್ವಭಾವದ ಜನರಿರುತ್ತಾರೆ. ಅವರ ಶ್ರದ್ಧೆಗಳಲ್ಲಿಯೂ ಭೇದಗಳಿರುತ್ತವೆ. ಈ ರೀತಿ ಸ್ವಭಾವ ಮತ್ತು ಶ್ರದ್ಧೆಯ ಭೇದದಿಂದ ಅವರ ಗತಿಗಳಲ್ಲಿಯೂ ಭಿನ್ನತೆ ಉಂಟಾಗುತ್ತವೆ. ಇವೆಲ್ಲ ಗತಿಗಳು ಹೆಚ್ಚು-ಕಡಿಮೆ ಎಲ್ಲ ಕರ್ತೃಗಳಾದ ಜೀವರಿಗೆ ದೊರೆಯುತ್ತವೆ. ॥2॥

(ಗದ್ಯ - 3)

ಮೂಲಮ್

ಅಥೇದಾನೀಂ ಪ್ರತಿಷಿದ್ಧಲಕ್ಷಣಸ್ಯಾಧರ್ಮಸ್ಯ ತಥೈವ ಕರ್ತುಃ ಶ್ರದ್ಧಾಯಾ ವೈಸಾದೃಶ್ಯಾತ್ಕರ್ಮಲಂ ವಿಸದೃಶಂ ಭವತಿ ಯಾ ಹ್ಯನಾದ್ಯವಿದ್ಯಯಾ ಕೃತಕಾಮಾನಾಂ ತತ್ಪರಿಣಾಮಲಕ್ಷಣಾಃ ಸೃತಯಃ ಸಹಸ್ರಶಃ ಪ್ರವೃತ್ತಾಸ್ತಾಸಾಂ ಪ್ರಾಚುರ್ಯೇಣಾನುವರ್ಣಯಿಷ್ಯಾಮಃ ॥

ಅನುವಾದ

ಹೀಗೆಯೇ ನಿಷಿದ್ಧ ಕರ್ಮವಾದ ಪಾಪಗಳನ್ನು ಮಾಡು ವವರಿಗೂ ಅವರ ಶ್ರದ್ಧೆಗಳು ಬೇರೆ-ಬೇರೆಯಾಗಿರುವುದರಿಂದ ಅವರಿಗೆ ದೊರೆಯುವ ಫಲಗಳೂ ಬೇರೆ-ಬೇರೆ ಯಾಗುವುವು. ಆದುದರಿಂದ ಅನಾದಿಯಾದ ಅವಿದ್ಯೆಗೆ ವಶರಾಗಿ ಜೀವರು ಕಾಮನಾಪೂರ್ವಕವಾಗಿ ಆಚರಿಸುವ ನಿಷಿದ್ಧಕರ್ಮಗಳಿಂದ ಸಾವಿರಾರು ಬಗೆಯ ನರಕಗತಿಗಳು ಉಂಟಾಗುವವು. ಅವುಗಳನ್ನು ವಿಸ್ತಾರವಾಗಿ ವರ್ಣಿಸುವೆನು ಕೇಳು. ॥3॥

(ಗದ್ಯ - 4)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ನರಕಾ ನಾಮ ಭಗವನ್ಕಿಂ ದೇಶವಿಶೇಷಾ ಅಥವಾ ಬಹಿಸಿಲೋಕ್ಯಾ ಆಹೋಸ್ವಿದಂತರಾಲ ಇತಿ ॥ 4 ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಭಗವಂತರೇ! ತಾವು ವರ್ಣಿಸುವುದಾಗಿ ಹೇಳಿದ ಈ ನರಕಗಳು ಇದೇ ಭೂಮಿಯಲ್ಲಿರುವ ಯಾವುದಾದರೂ ದೇಶವಿಶೇಷಗಳೇ? ಅಥವಾ ತ್ರಿಲೋಕದಿಂದ ಹೊರಗೆ ಇವೆಯೇ? ಅಥವಾ ಇದರೊಳಗೆ ಯಾವುದಾದರೂ ಜಾಗದಲ್ಲಿವೆಯೇ? ॥4॥

(ಗದ್ಯ - 5)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಅಂತರಾಲ ಏವ ತ್ರಿಜಗತ್ಯಾಸ್ತು ದಿಶಿ ದಕ್ಷಿಣಸ್ಯಾಮಧಸ್ತಾದ್ಭೂಮೇರುಪರಿಷ್ಟಾಚ್ಚ ಜಲಾದ್ಯಸ್ಯಾಮಗ್ನಿಷ್ವಾ- ತ್ತಾದಯಃ ಪಿತೃಗಣಾ ದಿಶಿ ಸ್ವಾನಾಂ ಗೋತ್ರಾಣಾಂ ಪರಮೇಣ ಸಮಾಧಿನಾ ಸತ್ಯಾ ಏವಾಶಿಷ ಆಶಾಸಾನಾ ನಿವಸಂತಿ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ಇವು ತ್ರಿಲೋಕಗಳ ಒಳಗೆಯೇ ಇವೆ ಹಾಗೂ ದಕ್ಷಿಣದಿಕ್ಕಿನತ್ತ ಪೃಥಿವಿಯಿಂದ ಕೆಳಗೆ ನೀರಿನಮೇಲೆ ನಿಂತಿವೆ. ಇದೇ ದಿಕ್ಕಿನಲ್ಲಿ ಅಗ್ನಿಷ್ವಾತ್ತರೇ ಮುಂತಾದ ಪಿತೃಗಣಗಳೂ ಇರುತ್ತಾರೆ. ಇವರು ಅತ್ಯಂತ ಏಕಾಗ್ರತೆಯಿಂದ ತಮ್ಮ ವಂಶದಲ್ಲಿ ಜನಿಸಿದವರಿಗೆ ಮಂಗಳ ಉಂಟಾಗಲೆಂದು ಬಯಸುತ್ತಾ ಇರುತ್ತಾರೆ. ॥5॥

(ಗದ್ಯ - 6)

ಮೂಲಮ್

ಯತ್ರ ಹ ವಾವ ಭಗವಾನ್ಪಿತೃರಾಜೋ ವೈವಸ್ವತಃ ಸ್ವವಿಷಯಂ ಪ್ರಾಪಿತೇಷು ಸ್ವಪುರುಷೈರ್ಜಂತುಷು ಸಂಪರೇತೇಷು ಯಥಾಕರ್ಮಾವದ್ಯಂ ದೋಷಮೇ- ವಾನುಲ್ಲಂಘಿತಭಗವಚ್ಛಾಸನಃ ಸಗಣೋ ದಮಂ ಧಾರಯತಿ ॥

ಅನುವಾದ

ಆ ನರಕಲೋದಲ್ಲಿ ಸೂರ್ಯನ ಪುತ್ರ ಪಿತೃರಾಜನಾದ ಭಗವಾನ್ ಯಮನು ತನ್ನ ಸೇವಕರೊಂದಿಗೆ ಇರುತ್ತಾನೆ. ಭಗವಂತನ ಆಜ್ಞೆಯನ್ನು ಮೀರದೆ ತನ್ನ ದೂತರ ಮೂಲಕ ಅಲ್ಲಿಗೆ ತರಲ್ಪಟ್ಟ ಮೃತ ಪ್ರಾಣಿಗಳಿಗೆ ಅವರ ದುಷ್ಟಕರ್ಮಗಳಿಗನುಸಾರ ಪಾಪದ ಫಲಕ್ಕೆ ಶಿಕ್ಷೆಯನ್ನು ಕೊಡುತ್ತಾನೆ. ॥6॥

(ಗದ್ಯ - 7)

ಮೂಲಮ್

ತತ್ರ ಹೈಕೇ ನರಕಾನೇಕವಿಂಶತಿಂ ಗಣಯಂತಿ ಅಥ ತಾಂಸ್ತೇ ರಾಜನ್ನಾಮರೂಪಲಕ್ಷಣತೋನುಕ್ರ- ಮಿಷ್ಯಾಮಸ್ತಾಮಿಸ್ರೋಂಧತಾಮಿಸ್ರೋ ರೌರವೋ ಮಹಾರೌರವಃ ಕುಂಭೀಪಾಕಃ ಕಾಲಸೂತ್ರಮಸಿಪತ್ರವನಂ ಸೂಕರಮುಖಮಂಧಕೂಪಃ ಕೃಮಿಭೋಜನಃ ಸಂದಂಶಸ್ತಪ್ತಸೂರ್ಮಿರ್ವಜ್ರಕಂಟಕಶಾಲ್ಮಲೀ ವೈತರಣೀ ಪೂಯೋದಃಪ್ರಾಣರೋಧೋ ವಿಶಸನಂ ಲಾಲಾಭಕ್ಷಃ ಸಾರಮೇಯಾದನಮವೀಚಿರಯಃಪಾನಮಿತಿ ಕಿಂಚ ಕ್ಷಾರಕರ್ದಮೋ ರಕ್ಷೋಗಣಭೋಜನಃ ಶೂಲಪ್ರೋತೋ ದಂದಶೂಕೋವಟನಿರೋಧನಃ ಪರ್ಯಾವರ್ತನಃ ಸೂಚೀಮುಖಮಿತ್ಯಷ್ಟಾವಿಂಶತಿರ್ನರಕಾ ವಿವಿಧಯಾತನಾಭೂಮಯಃ ॥

ಅನುವಾದ

ಪರೀಕ್ಷಿತನೇ! ಕೆಲಜನರು ನರಕಗಳ ಸಂಖ್ಯೆ ಇಪ್ಪತ್ತೊಂದು ಎಂದು ತಿಳಿಸುತ್ತಾರೆ. ಈಗ ಅವುಗಳ ಹೆಸರು, ರೂಪ, ಲಕ್ಷಣ ಇವುಗಳನ್ನು ಕ್ರಮವಾಗಿ ವರ್ಣಿಸುವೆವು, ಕೇಳು. ತಾಮಿಸ್ರ, ಅಂಧತಾಮಿಸ್ರ, ರೌರವ, ಮಹಾರೌರವ, ಕುಂಭೀಪಾಕ, ಕಾಲಸೂತ್ರ, ಅಸಿಪತ್ರವನ, ಸೂಕರಮುಖ, ಅಂಧಕೂಪ, ಕೃಮಿಭೋಜನ, ಸಂದಂಶ, ತಪ್ತಸೂರ್ಮಿ, ವಜ್ರಕಂಟಕ, ಶಾಲ್ಮಲೀ, ವೈತರಣೀ, ಪೂಯೋದ, ಪ್ರಾಣರೋಧ, ವಿಶಸನ, ಲಾಲಾಭಕ್ಷ, ಸಾರಮೇಯಾದನ, ಅವೀಚಿ ಮತ್ತು ಅಯಃಪಾನ ಎಂಬಿವೇ ಆ ಇಪ್ಪತ್ತೊಂದು ನರಕಗಳು. ಇವುಗಳಲ್ಲದೆ ಕ್ಷಾರಕರ್ದಮ, ರಕ್ಷೋಗಣ ಭೋಜನ, ಶೂಲಪ್ರೋತ, ದಂದಶೂಕ, ಅವಟನಿರೋಧನ, ಪರ್ಯಾವರ್ತನ, ಸೂಚಿಮುಖ ಎಂಬ ಏಳು ಸೇರಿ ಒಟ್ಟು ಇಪ್ಪತ್ತೆಂಟು ನರಕಗಳು ಬಗೆ-ಬಗೆಯ ಯಾತನೆಗಳನ್ನು ಜೀವಿಗಳು ಅನುಭವಿಸುವ ಜಾಗಗಳು. ॥7॥

(ಗದ್ಯ - 8)

ಮೂಲಮ್

ತತ್ರ ಯಸ್ತು ಪರವಿತ್ತಾಪತ್ಯಕಲತ್ರಾಣ್ಯಪಹರತಿ ಸ ಹಿ ಕಾಲಪಾಶಬದ್ಧೋ ಯಮಪುರುಷೈರತಿಭಯಾನಕೈಸ್ತಾಮಿಸ್ರೇ ನರಕೇ ಬಲಾನ್ನಿಪಾತ್ಯತೇ ಅನಶನಾನುದಪಾನದಂಡತಾಡನಸಂತರ್ಜನಾದಿಭಿರ್ಯಾತನಾಭಿರ್ಯತ್ಯಮಾನೋ ಜಂತುರ್ಯತ್ರ ಕಶ್ಮಲಮಾಸಾದಿತ ಏಕದೈವ ಮೂರ್ಚ್ಛಾಮುಪಯಾತಿ ತಾಮಿಸ್ರಪ್ರಾಯೇ ॥

ಅನುವಾದ

ಮತ್ತೊಬ್ಬರ ಹಣ, ಹೆಂಡತಿ, ಅಥವಾ ಸಂತಾನವನ್ನು ಅಪಹರಿಸುವಂತಹ ಪಾಪಿಯನ್ನು ಭಯಂಕರರಾದ ಯಮದೂತರು ಕಾಲಪಾಶದಿಂದ ಕಟ್ಟಿ ಬಲಾತ್ಕಾರವಾಗಿ ತಾಮಿಸ್ರ ನರಕದಲ್ಲಿ ಕೆಡಹುವರು. ಆ ಅಂಧಕಾರಮಯ ನರಕದಲ್ಲಿ ಅವನಿಗೆ ಅನ್ನ-ನೀರು ಕೊಡದಿರುವುದು, ದೊಣ್ಣೆಗಳಿಂದ ಬಡಿಯುವುದು, ಭಯಪಡಿಸುವುದು ಮುಂತಾದ ಅನೇಕ ಉಪಾಯಗಳಿಂದ ಪೀಡಿಸಲಾಗುತ್ತದೆ. ಇದರಿಂದ ಅವನು ಅತ್ಯಂತ ದುಃಖಿತನಾಗಿ ಒಮ್ಮಿಂದೊಮ್ಮೆಗೆ ಮೂರ್ಛೆಹೋಗುವನು. ॥8॥

(ಗದ್ಯ - 9)

ಮೂಲಮ್

ಏವಮೇವಾಂಧತಾಮಿಸ್ರೇ ಯಸ್ತು ವಂಚಯಿತ್ವಾ ಪುರುಷಂ ದಾರಾದೀನುಪಯುಂಕ್ತೇ ಯತ್ರ ಶರೀರೀ ನಿಪಾತ್ಯಮಾನೋ ಯಾತನಾಸ್ಥೋ ವೇದನಯಾ ನಷ್ಟಮತಿರ್ನಷ್ಟದೃಷ್ಟಿಶ್ಚ ಭವತಿ ಯಥಾ ವನಸ್ಪತಿರ್ವೃಶ್ಚ್ಯಮಾನಮೂಲಸ್ತಸ್ಮಾದಂಧತಾಮಿಸ್ರಂ ತಮುಪದಿಶಂತಿ ॥

ಅನುವಾದ

ಹೀಗೆಯೇ ಮತ್ತೊಬ್ಬನಿಗೆ ಮೋಸಮಾಡಿ ಅವನ ಹೆಂಡತಿಯನ್ನು ಭೋಗಿಸುವವನು ಅಂಧತಾಮಿಸ್ರ ನರಕದಲ್ಲಿ ಬೀಳುವನು. ಅಲ್ಲಿಯ ಯಾತನೆಗಳಲ್ಲಿ ಬಿದ್ದು ಅವನು ಬೇರು ಕತ್ತರಿಸಿದ ಮರದಂತೆ ತತ್ತರಿಸುತ್ತಾ ಮತಿಗೆಟ್ಟು ಕುರುಡನಾಗುವನು. ಇದರಿಂದ ಈ ನರಕಕ್ಕೆ ಅಂಧತಾಮಿಸ್ರವೆಂದು ಹೇಳುತ್ತಾರೆ.॥9॥

(ಗದ್ಯ - 10)

ಮೂಲಮ್

ಯಸ್ತ್ವಿಹ ವಾ ಏತದಹಮಿತಿ ಮಮೇದಮಿತಿ ಭೂತದ್ರೋಹೇಣ ಕೇವಲಂ ಸ್ವಕುಟುಂಬಮೇವಾನುದಿನಂ ಪ್ರಪುಷ್ಣಾತಿ ಸ ತದಿಹ ವಿಹಾಯ ಸ್ವಯಮೇವ ತದಶುಭೇನ ರೌರವೇ ನಿಪತತಿ ॥

ಅನುವಾದ

ಈ ಲೋಕದಲ್ಲಿ ‘‘ಈ ಶರೀರವೇ ನಾನಾಗಿದ್ದೇನೆ ಮತ್ತು ಈ ಪತ್ನೀ, ಧನ ಇತ್ಯಾದಿಗಳೆಲ್ಲ ನನ್ನವು’’ ಎಂಬ ಬುದ್ಧಿಯಿಂದ ಕೂಡಿ ಬೇರೆ ಪ್ರಾಣಿಗಳಿಗೆ ದ್ರೋಹವನ್ನೆಸಗುತ್ತಾ ನಿರಂತರ ತನ್ನ ಕುಟುಂಬವನ್ನು ಸಾಕುವುದರಲ್ಲೇ ತೊಡಗಿರುವವನು ತನ್ನ ಶರೀರವನ್ನು ಬಿಟ್ಟ ಬಳಿಕ ತನ್ನ ಪಾಪಗಳಿಂದಾಗಿ ರೌರವವೆಂಬ ನರಕದಲ್ಲಿ ತಾನೇ ಬೀಳುವನು. ॥10॥

(ಗದ್ಯ - 11)

ಮೂಲಮ್

ಯೇ ತ್ವಿಹ ಯಥೈವಾಮುನಾ ವಿಹಿಂಸಿತಾ ಜಂತವಃ ಪರತ್ರ ಯಮಯಾತನಾಮುಪಗತಂ ತ ಏವ ರುರವೋ ಭೂತ್ವಾ ತಥಾ ತಮೇವ ವಿಹಿಂಸಂತಿ ತಸ್ಮಾದ್ರೌರವಮಿತ್ಯಾಹೂ ರುರುರಿತಿ ಸರ್ಪಾದತಿಕ್ರೂರ- ಸತ್ತ್ವಸ್ಯಾಪದೇಶಃ ॥

ಅನುವಾದ

ಅವನು ಈ ಲೋಕದಲ್ಲಿದ್ದಾಗ ಯಾವ ಜೀವಿಗಳಿಗೆ ಯಾವ ರೀತಿಯ ಕಷ್ಟವನ್ನು ಕೊಟ್ಟಿರುವನೋ, ಪರಲೋಕದಲ್ಲಿ ಯಮಯಾತನೆಯ ಸಮಯಬಂದಾಗ ಅದೇ ಜೀವರು ‘ರುರು’ ಎಂಬ ಕ್ರಿಮಿಯಾಗಿ ಅವನಿಗೆ ಅದೇ ರೀತಿಯಲ್ಲಿ ಕಷ್ಟಕೊಡುವರು. ಅದಕ್ಕಾಗಿ ಈ ನರಕದ ಹೆಸರು ‘ರೌರವ’ ಎಂದಿದೆ. ‘ರುರು’ ಎಂಬುದು ಸರ್ಪಕ್ಕಿಂತಲೂ ಹೆಚ್ಚು ಕ್ರೂರವಾದ ಒಂದು ಜೀವಿಯ ಹೆಸರು. ॥11॥

(ಗದ್ಯ - 12)

ಮೂಲಮ್

ಏವಮೇವ ಮಹಾರೌರವೋ ಯತ್ರ ನಿಪತಿತಂ ಪುರುಷಂ ಕ್ರವ್ಯಾದಾ ನಾಮ ರುರವಸ್ತಂ ಕ್ರವ್ಯೇಣ ಘಾತಯಂತಿ ಯಃ ಕೇವಲಂ ದೇಹಂಭರಃ ॥

ಅನುವಾದ

ಹೀಗೆಯೇ ಮಹಾರೌರವ ನರಕವಿದೆ. ಯಾರನ್ನೂ ಗಮನಿಸದೆ ಕೇವಲ ತನ್ನ ಶರೀರದ ಪೋಷಣೆಯಲ್ಲೇ ತೊಡಗಿದ ಪಾಪಿಯು ಈ ನರಕಕ್ಕೆ ಹೋಗುವನು. ಅಲ್ಲಿ ಹಸಿಮಾಂಸವನ್ನು ತಿನ್ನುವ ರುರುಗಳು ಇವನನ್ನು ಮಾಂಸಕ್ಕಾಗಿ ಕಡಿಯುತ್ತಾ ಇರುತ್ತಾರೆ.॥12॥

(ಗದ್ಯ - 13)

ಮೂಲಮ್

ಯಸ್ತ್ವಿಹ ವಾ ಉಗ್ರಃ ಪಶೂನ್ ಪಕ್ಷಿಣೋ ವಾ ಪ್ರಾಣತ ಉಪರಂಧಯತಿ ತಮಪಕರುಣಂ ಪುರುಷಾದೈರಪಿ ವಿಗ- ರ್ಹಿತಮಮುತ್ರ ಯಮಾನುಚರಾಃ ಕುಂಭೀಪಾಕೇ ತಪ್ತ- ತೈಲೇ ಉಪರಂಧಯಂತಿ ॥

ಅನುವಾದ

ಯಾವ ಕ್ರೂರಿಯು ಈ ಲೋಕದಲ್ಲಿ ತನ್ನ ಹೊಟ್ಟೆಯನ್ನು ಹೊರೆದುಕೊಳ್ಳಲು ಬದುಕಿರುವ ಪಶು-ಪಕ್ಷಿಗಳನ್ನು ಬೇಯಿಸುತ್ತಾನೋ ಆ ಹೃದಯಶೂನ್ಯ, ರಾಕ್ಷಸರಿಂದಲೂ ನೀಚನೆನಿಸಿದ ನರಾಧಮನನ್ನು ಯಮದೂತರು ಕುಂಭೀಪಾಕ ನರಕಕ್ಕೆ ಕೊಂಡುಹೋಗಿ ಅವನನ್ನು ಕುದಿಯುತ್ತಿರುವ ಎಣ್ಣೆಯ ಕಡಾಯಿಯಲ್ಲಿ ಬೇಯಿಸುವರು. ॥13॥

(ಗದ್ಯ - 14)

ಮೂಲಮ್

ಯಸ್ತ್ವಿಹ ಪಿತೃವಿಪ್ರ- ಬ್ರಹ್ಮಧ್ರುಕ್ಸ ಕಾಲಸೂತ್ರಸಂಜ್ಞಕೇ ನರಕೇ ಅಯುತಯೋ- ಜನಪರಿಮಂಡಲೇ ತಾಮ್ರಮಯೇ ತಪ್ತಖಲೇ ಉಪರ್ಯಧಸ್ತಾದಗ್ನ್ಯರ್ಕಾಭ್ಯಾಮತಿತಪ್ಯಮಾನೇಭಿನಿವೇಶಿತಃ ಕ್ಷುತ್ಪಿಪಾಸಾಭ್ಯಾಂ ಚ ದಹ್ಯಮಾನಾಂತರ್ಬಹಿಃಶರೀರ ಆಸ್ತೇ ಶೇತೇ ಚೇಷ್ಟತೇವತಿಷ್ಠತಿ ಪರಿಧಾವತಿ ಚ ಯಾವಂತಿ ಪಶುರೋಮಾಣಿ ತಾವದ್ವರ್ಷಸಹಸ್ರಾಣಿ ॥

ಅನುವಾದ

ಈ ಲೋಕದಲ್ಲಿ ತಂದೆ-ತಾಯಿ, ಬ್ರಾಹ್ಮಣರು ಮತ್ತು ವೇದ ಇವುಗಳನ್ನು ವಿರೋಧಿಸುವವನನ್ನು ಯಮದೂತರು ಕಾಲಸೂತ್ರವೆಂಬ ನರಕಕ್ಕೆ ಕೊಂಡು ಹೋಗುತ್ತಾರೆ. ಇದರ ಸುತ್ತಳತೆ ಹತ್ತುಸಾವಿರ ಯೋಜನವಿದೆ. ಇದರ ಭೂಮಿಯು ತಾಮ್ರದ್ದಾಗಿರುತ್ತದೆ. ಇದರಲ್ಲಿ ಕಾದಬಯಲು ಇದ್ದು ಮೇಲಿನಿಂದ ಸೂರ್ಯನ ಮತ್ತು ಕೆಳಗಿನಿಂದ ಅಗ್ನಿಯ ಉರಿಯಿಂದ ಸುಡುತ್ತಾ ಇರುತ್ತದೆ. ಅಲ್ಲಿಗೆ ಕೊಂಡುಹೋದ ಪಾಪೀ ಜೀವನು ಹಸಿವು-ಬಾಯಾರಿಕೆಯಿಂದ ದುಃಖಿತನಾಗುತ್ತಾನೆ ಮತ್ತು ಅವನ ಶರೀರವು ಒಳಗಿಂದ ಹೊರಗಿನಿಂದ ಸುಡಲು ತೊಡಗುತ್ತದೆ. ಇದರಿಂದ ಶಾಂತಿಯನ್ನು ಕಳಕೊಂಡ ಜೀವಿಯು ಕೆಲವೊಮ್ಮೆ ಕುಳಿತುಕೊಳ್ಳುವನು, ಕೆಲವೊಮ್ಮೆ ಮಲಗುವನು, ಕೆಲವೊಮ್ಮೆ ಒದ್ದಾಡುವನು, ಕೆಲವೊಮ್ಮೆ ನಿಲ್ಲುವನು, ಕೆಲವೊಮ್ಮೆ ಅತ್ತ-ಇತ್ತ ಓಡುವನು. ಹೀಗೆ ಆ ನರಪಶುವಿನ ಶರೀರದಲ್ಲಿ ರೋಮಗಳಿರುವಷ್ಟು ಸಾವಿರ ವರ್ಷಗಳವರೆಗೆ ಅವನಿಗೆ ಇಂತಹ ದುರ್ಗತಿ ಆಗುತ್ತಾ ಇರುತ್ತದೆ. ॥14॥

(ಗದ್ಯ - 15)

ಮೂಲಮ್

ಯಸ್ತ್ವಿಹ ವೈ ನಿಜವೇದಪಥಾದನಾಪದ್ಯಪಗತಃ ಪಾಖಂಡಂ ಚೋಪಗತಸ್ತಮಸಿಪತ್ರವನಂ ಪ್ರವೇಶ್ಯ ಕಶಯಾ ಪ್ರಹರಂತಿ ತತ್ರ ಹಾಸಾವಿತಸ್ತತೋ ಧಾವಮಾನ ಉಭಯತೋಧಾ- ರೈಸ್ತಾಲವನಾಸಿಪತ್ರೈಶ್ಛಿದ್ಯಮಾನಸರ್ವಾಂಗೋ ಹಾ ಹ- ತೋಸ್ಮೀತಿ ಪರಮಯಾ ವೇದನಯಾ ಮೂರ್ಚ್ಛಿತಃ ಪದೇ ಪದೇ ನಿಪತತಿ ಸ್ವಧರ್ಮಹಾ ಪಾಖಂಡಾನುಗತಂ ಲಂ ಭುಂಕ್ತೇ ॥

ಅನುವಾದ

ಯಾವುದೇ ಆಪತ್ತು ಬಾರದಿದ್ದರೂ ತನ್ನ ವೈದಿಕ ಮಾರ್ಗವನ್ನು ಬಿಟ್ಟು ಬೇರೆ ಪಾಷಂಡಮತವನ್ನು ಅನುಸರಿಸುವವನನ್ನು ಯಮದೂತರು ಅಸಿಪತ್ರವನವೆಂಬ ನರಕಕ್ಕೆ ಕೊಂಡುಹೋಗಿ ಚಾವಟಿಗೆಯಿಂದ ಹೊಡೆಯುತ್ತಾರೆ. ಏಟುಗಳಿಂದ ತಪ್ಪಿಸಿಕೊಳ್ಳಲು ಅವನು ಅಲ್ಲಲ್ಲಿ ಓಡತೊಡಗಿದಾಗ ಅವನ ಎಲ್ಲ ಅಂಗಗಳೂ ಎರಡೂ ಕಡೆಗಳಲ್ಲೂ ಅಲಗುಗಳಿಂದ ಕೂಡಿದ ಕತ್ತಿಯಂತೆ ತೀಕ್ಷ್ಣವಾದ ತಾಳೆಯ ಮರಗಳ ಎಲೆಗಳಿಂದ ಕತ್ತರಿಸಲ್ಪಡುವುವು. ಆ ವೇದನೆಯಿಂದ ಅಯ್ಯೋ ಸತ್ತೆನು! ಎಂದು ಕಿರಿಚಿಕೊಳ್ಳುತ್ತಾ ಹೆಜ್ಜೆ-ಹೆಜ್ಜೆಗೂ ಮೂರ್ಛಿತನಾಗಿ ಬೀಳತೊಡಗುವನು. ತನ್ನ ಧರ್ಮಕ್ಕೆ ದ್ರೋಹ ಮಾಡಿ ಪಾಷಂಡ ಧರ್ಮವನ್ನು ಅನುಸರಿಸುವುದರಿಂದ ಅವನಿಗೆ ಇಂತಹ ಕುಕರ್ಮದ ಫಲವನ್ನು ಅನುಭವಿಸಬೇಕಾಗುವುದು. ॥15॥

(ಗದ್ಯ - 16)

ಮೂಲಮ್

ಯಸ್ತ್ವಿಹ ವೈ ರಾಜಾ ರಾಜಪುರುಷೋ ವಾ ಅದಂಡ್ಯೇ ದಂಡಂ ಪ್ರಣಯತಿ ಬ್ರಾಹ್ಮಣೇ ವಾ ಶರೀರದಂಡಂ ಸ ಪಾಪೀಯಾನ್ನರಕೇಮುತ್ರ ಸೂಕರಮುಖೇ ನಿಪತತಿ ತತ್ರಾತಿಬಲೈರ್ವಿನಿಷ್ಪಿಷ್ಯಮಾಣಾವಯವೋ ಯಥೈವೇಹೇಕ್ಷು- ಖಂಡ ಆರ್ತಸ್ವರೇಣ ಸ್ವನಯನ್ ಕ್ವಚಿನ್ಮೂರ್ಚ್ಛಿತಃ ಕಶ್ಮಲಮುಪಗತೋ ಯಥೈವೇಹಾದೃಷ್ಟದೋಷಾ ಉಪರುದ್ಧಾಃ ॥ 16 ॥

ಅನುವಾದ

ಈ ಲೋಕದಲ್ಲಿ ಯಾರಾದರೂ ರಾಜನಾಗಲೀ, ಅವನ ಅಧಿಕಾರಿಯಾಗಲೀ ನಿರಪರಾಧಿಯಾದ ಮನುಷ್ಯನಿಗೆ ದಂಡನೆಯನ್ನು ವಿಧಿಸಿದರೆ ಅಥವಾ ಬ್ರಾಹ್ಮಣನಿಗೆ ಶರೀರ ದಂಡನೆಯನ್ನು ವಿಧಿಸಿದರೆ, ಆ ಮಹಾಪಾಪಿಯು ಸತ್ತು ಸೂಕರಮುಖವೆಂಬ ನರಕದಲ್ಲಿ ಬೀಳುವನು. ಅಲ್ಲಿ ಮಹಾ ಬಲಶಾಲಿಗಳಾದ ಯಮದೂತರು ಆತನನ್ನು ತುಳಿದು ಹಾಕುವರು. ಆಗ ಅಂಗಾಂಗಗಳು ಜಜ್ಜಿಹೋಗಿ ಗಾಣದಲ್ಲಿ ಸಿಕ್ಕಿದ ಕಬ್ಬಿನಂತೆ ಅರೆಯಲ್ಪಟ್ಟು ನೋವಿನಿಂದ ನರಳುತ್ತಾ ಆತನು ಹಿಂದೆ ಪೀಡಿಸಿದ್ದ ನಿರಪರಾಧಿಗಳು ಹೇಗೆ ಕೂಗಿಕೊಳ್ಳುತ್ತಿದ್ದರೋ ಹಾಗೆಯೇ ತಾನೂ ಅರಚುತ್ತಾ ಕೆಲವೊಮ್ಮೆ ಮೂರ್ಛಿತನಾಗುವನು.॥16॥

(ಗದ್ಯ - 17)

ಮೂಲಮ್

ಯಸ್ತ್ವಿಹ ವೈ ಭೂತಾನಾಮೀಶ್ವರೋಪಕಲ್ಪಿತವೃತ್ತೀನಾಮವಿವಿಕ್ತಪರವ್ಯಥಾನಾಂ ಸ್ವಯಂ ಪುರುಷೋಪಕಲ್ಪಿತ- ವೃತ್ತಿರ್ವಿವಿಕ್ತಪರವ್ಯಥೋ ವ್ಯಥಾಮಾಚರತಿ ಸ ಪರತ್ರಾಂಧಕೂಪೇ ತದಭಿದ್ರೋಹೇಣ ನಿಪತತಿ ತತ್ರ ಹಾಸೌ ತೈರ್ಜಂತುಭಿಃ ಪಶುಮೃಗಪಕ್ಷಿಸರೀಸೃಪೈರ್ಮಶಕಯೂಕಾಮತ್ಕುಣಮಕ್ಷಿಕಾದಿಭಿರ್ಯೇ ಕೇ ಚಾಭಿದ್ರುಗ್ಧಾಸ್ತೈಃ ಸರ್ವ- ತೋಭಿದ್ರುಹ್ಯಮಾಣಸ್ತಮಸಿ ವಿಹತನಿದ್ರಾನಿರ್ವೃತಿರಲಬ್ಧಾವಸ್ಥಾನಃ ಪರಿಕ್ರಾಮತಿ ಯಥಾ ಕುಶರೀರೇ ಜೀವಃ ॥

ಅನುವಾದ

ಶ್ರೀಭಗವಂತನು — ಮನುಷ್ಯನಿಗೆ ‘ಇದು ವಿಹಿತವಾದುದು, ಇದು ನಿಷಿದ್ಧವಾದುದು’ ಎಂಬ ವಿವೇಕದಿಂದ ಜೀವನದ ವೃತ್ತಿಯನ್ನು ಆರಿಸಿಕೊಂಡು ಅವಲಂಬಿಸಲು ನಿಯಮಿಸಿದ್ದಾನೆ. ಇತರರಿಗೆ ಉಂಟಾಗುವ ಕಷ್ಟಗಳ ಅರಿವೂ ಅವನಿಗೆ ಆಗುತ್ತದೆ. ಆದರೆ ತಿಗಣೆಯೇ ಮುಂತಾದ ಜೀವಿಗಳಿಗೆ ಈ ಅರಿವು ಇರುವುದಿಲ್ಲ. ತಮ್ಮಿಂದ ಇತರ ಜೀವಿಗಳಿಗೆ ಸಂಕಟವುಂಟಾಗುತ್ತದೆ ಎಂಬುದನ್ನರಿಯದೆ ತಮ್ಮ ಜೀವನಕ್ಕಾಗಿ ಅವು ಇತರರ ರಕ್ತವನ್ನು ಹೀರುತ್ತವೆ. ಆದುದರಿಂದ ತಿಳಿವಳಿಕೆಯುಳ್ಳ ಮನುಷ್ಯನು ಅವುಗಳಿಗೆ ಹಿಂಸೆ ಮಾಡಬಾರದು. ಹಾಗೆ ಹಿಂಸೆಮಾಡುವವನು ಅಂಧಕೂಪವೆಂಬ ನರಕದಲ್ಲಿ ಬೀಳುವನು. ಅಲ್ಲಿ ಅವನಿಂದ ಹಿಂದೆ ದ್ರೋಹಕ್ಕೆ ಬಲಿಯಾಗಿದ್ದ ಆ ಪಶು-ಪಕ್ಷಿ-ಮೃಗಗಳೂ, ಸರ್ಪವೇ ಮುಂತಾದ ಜಂತುಗಳೂ, ಸೊಳ್ಳೆ, ಹೇನು, ತಿಗಣೆ, ನೊಣಗಳೇ ಮುಂತಾದ ಕ್ರಿಮಿ-ಕೀಟಗಳು ಆತನನ್ನು ಎಲ್ಲ ಕಡೆಯಿಂದ ಕಚ್ಚಿ ನೋಯಿಸುವುವು. ಅದರಿಂದ ಅವನಿಗೆ ನಿದ್ರಾಭಂಗವಾಗಿ, ನೆಲೆಗಾಣದೆ ನೆಮ್ಮದಿಯನ್ನು ಕಳೆದುಕೊಂಡು ಅವನು ನರಕದ ಕಗ್ಗತ್ತಲೆಯಲ್ಲಿ ಕಡುರೋಗವುಳ್ಳ ದೇಹದಲ್ಲಿ ಹೇಗೋ ಹಾಗೇ ವಿಲ-ವಿಲನೆ ಒದ್ದಾಡುತ್ತಾನೆ. ॥17॥

(ಗದ್ಯ - 18)

ಮೂಲಮ್

ಯಸ್ತ್ವಿಹ ವಾ ಅಸಂವಿಭಜ್ಯಾಶ್ನಾತಿ ಯತ್ಕಿಂಚನೋಪನತಮನಿರ್ಮಿತಪಂಚಯಜ್ಞೋ ವಾಯಸಸಂಸ್ತುತಃ ಸ ಪರತ್ರ ಕೃಮಿಭೋಜನೇ ನರಕಾಧಮೇ ನಿಪತತಿ ತತ್ರ ಶತಸಹಸ್ರಯೋಜನೇ ಕೃಮಿಕುಂಡೇ ಕೃಮಿಭೂತಃ ಸ್ವಯಂ ಕೃಮಿಭಿರೇವ ಭಕ್ಷ್ಯಮಾಣಃ ಕೃಮಿಭೋಜನೋ ಯಾವತ್ತದಪ್ರತ್ತಾಪ್ರಹುತಾದೋನಿರ್ವೇಶಮಾತ್ಮಾನಂ ಯಾತಯತೇ ॥

ಅನುವಾದ

ಈ ಲೋಕದಲ್ಲಿ ಪಂಚಮಹಾಯಜ್ಞಗಳನ್ನು ಆಚರಿಸದೆ ತನಗೆ ದೊರೆತ ಪದಾರ್ಥಗಳನ್ನು ಇತರರಿಗೆ ಕೊಡದೆ ತಿನ್ನುವ ಮನುಷ್ಯನು ಕಾಗೆಗೆ ಸಮಾನನಾದವನು. ಅವನು ಪರಲೋಕದಲ್ಲಿ ಕ್ರಿಮಿಭೋಜನ ಎಂಬ ಕೀಳಾದ ನರಕದಲ್ಲಿ ಬೀಳುವನು. ಅಲ್ಲಿ ಒಂದು ಲಕ್ಷ ಯೋಜನ ಉದ್ದ-ಅಗಲದ ಒಂದು ಕ್ರಿಮಿಗಳ ಕುಂಡವಿದೆ. ಅದರಲ್ಲೇ ಅವನಿಗೂ ಕ್ರಿಮಿಯಾಗಿ ಇರಬೇಕಾಗುತ್ತದೆ. ಯಾರಿಗೂ ಕೊಡದೆ, ಹವನ ಮಾಡದೆ ತಿಂದ ದೋಷಗಳು, ಪಾಪಗಳ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳದ ಆ ಪಾಪಿಯ ದೋಷಗಳು ಶುದ್ಧವಾಗುವವರೆಗೆ ಅವನು ಅಲ್ಲೇ ಬಿದ್ದುಕೊಂಡು ಕಷ್ಟ ಅನುಭವಿಸಬೇಕಾಗುತ್ತದೆ. ಅಲ್ಲಿ ಕ್ರಿಮಿಗಳು ಅವನನ್ನು ಕಿತ್ತುತಿನ್ನುತ್ತಿರುತ್ತವೆ.॥18॥

(ಗದ್ಯ - 19)

ಮೂಲಮ್

ಯಸ್ತ್ವಿಹ ವೈ ಸ್ತೇಯೇನ ಬಲಾದ್ವಾ ಹಿರಣ್ಯರತ್ನಾದೀನಿ ಬ್ರಾಹ್ಮಣಸ್ಯ ವಾಪಹರತ್ಯನ್ಯಸ್ಯ ವಾನಾಪದಿ ಪುರುಷಸ್ತಮಮುತ್ರ ರಾಜನ್ಯಮಪುರುಷಾ ಅಯಸ್ಮಯೈರಗ್ನಿಪಿಂಡೈಃ ಸಂದಂಶೈಸ್ತ್ವಚಿ ನಿಷ್ಕುಷಂತಿ ॥

ಅನುವಾದ

ಈ ಲೋಕದಲ್ಲಿ ಆಪತ್ಕಾಲವಿದ್ದರೂ ಬ್ರಾಹ್ಮಣನಿಗೆ ಸೇರಿದ ಅಥವಾ ಇತರರಿಗೆ ಸೇರಿದ ಚಿನ್ನ-ರತ್ನಾದಿಗಳನ್ನು ಕಳ್ಳತನದಿಂದಾಗಲೀ, ಬಲಾತ್ಕಾರದಿಂದಾಗಲೀ ಕಿತ್ತುಕೊಳ್ಳುವವನನ್ನು ಸತ್ತಮೇಲೆ ಯಮದೂತರು ಸಂದಂಶವೆಂಬ ನರಕಕ್ಕೆ ಕೊಂಡುಹೋಗಿ ಕಾದಕಬ್ಬಿಣದ ಗುಂಡುಗಳಿಂದ ಸುಡುತ್ತಾ ಸಂದಂಶವೆಂಬ ಮುಳ್ಳುಗಳಿಂದ ಅವನ ಚರ್ಮವನ್ನು ಚುಚ್ಚುವರು. ॥19॥

(ಗದ್ಯ - 20)

ಮೂಲಮ್

ಯಸ್ತ್ವಿಹ ವಾ ಅಗಮ್ಯಾಂ ಸಿಯಮಗಮ್ಯಂ ವಾ ಪುರುಷಂ ಯೋಷಿದಭಿಗಚ್ಛತಿ ತಾವಮುತ್ರ ಕಶಯಾ ತಾಡಯಂತ- ಸ್ತಿಗ್ಮಯಾ ಸೂರ್ಮ್ಯಾ ಲೋಹಮಯ್ಯಾ ಪುರುಷಮಾಲಿಂಗಯಂತಿ ಸಿಯಂ ಚ ಪುರುಷರೂಪಯಾ ಸೂರ್ಮ್ಯಾ ॥

ಅನುವಾದ

ಈ ಲೋಕದಲ್ಲಿ ಸೇರಬಾರದ ಹೆಂಗಸಿನೊಡನೆ ಪುರುಷನು ರಮಿಸಿದರೆ ಅಥವಾ ಸೇರಬಾರದ ಗಂಡಸಿನೊಡನೆ ಹೆಂಗಸು ರಮಿಸಿದರೆ ಯಮದೂತರು ಆ ವ್ಯಭಿಚಾರಿಗಳನ್ನು ತಪ್ತಸೂರ್ಮಿ ಎಂಬ ನರಕಕ್ಕೆ ಕೊಂಡುಹೋಗಿ ಅಲ್ಲಿ ಅವರನ್ನು ಚಾವಟಿಯಿಂದ ಹೊಡೆಯುತ್ತಾರೆ. ಪುರುಷನಿಗೆ ಕಾದಕಬ್ಬಿಣದ ಸೀಬೊಂಬೆಯನ್ನು, ಸೀಗೆ ಕಾದ ಕಬ್ಬಿಣದ ಪುರುಷ ಬೊಂಬೆಯನ್ನು ಅಪ್ಪಿಕೊಳ್ಳಬೇಕಾಗುತ್ತದೆ. ॥20॥

(ಗದ್ಯ - 21)

ಮೂಲಮ್

ಯಸ್ತ್ವಿಹ ವೈ ಸರ್ವಾಭಿಗಮಸ್ತಮಮುತ್ರ ನಿರಯೇ ವರ್ತಮಾನಂ ವಜ್ರಕಂಟಕಶಾಲ್ಮಲೀಮಾರೋಪ್ಯ ನಿಷ್ಕರ್ಷಂತಿ ॥

ಅನುವಾದ

ಈ ಲೋಕದಲ್ಲಿ ಪಶುಗಳೇ ಮುಂತಾದ ಎಲ್ಲರೊಂದಿಗೆ ವ್ಯಭಿಚಾರ ಮಾಡುವವನನ್ನು ಸತ್ತಬಳಿಕ ಯಮದೂತರು ‘ವಜ್ರಕಂಟಕಶಾಲ್ಮಲೀ’ ಎಂಬ ನರಕದಲ್ಲಿ ಕೆಡಹುವರು. ಅಲ್ಲಿ ಆತನನ್ನು ವಜ್ರದಂತೆ ಕಠೋರವಾದ ಮುಳ್ಳುಗಳುಳ್ಳ ಬುರುಗದ ಮೇಲಕ್ಕೆ ಏರಿಸಿ ಅಲ್ಲಿಂದ ಸೆಳೆದಾಡುವರು. ॥21॥

(ಗದ್ಯ - 22)

ಮೂಲಮ್

ಯೇ ತ್ವಿಹ ವೈ ರಾಜನ್ಯಾ ರಾಜಪುರುಷಾ ವಾ ಅಪಾಖಂಡಾ ಧರ್ಮಸೇತೂನ್ ಭಿಂದಂತಿ ತೇ ಸಂಪರೇತ್ಯ ವೈತರಣ್ಯಾಂ ನಿಪತಂತಿ ಭಿನ್ನಮರ್ಯಾದಾಸ್ತಸ್ಯಾಂ ನಿರಯಪರಿಖಾಭೂತಾಯಾಂ ನದ್ಯಾಂ ಯಾದೋಗಣೈರಿತ- ಸ್ತತೋ ಭಕ್ಷ್ಯಮಾಣಾ ಆತ್ಮನಾ ನ ವಿಯುಜ್ಯಮಾನಾಶ್ಚಾಸುಭಿರುಹ್ಯಮಾನಾಃ ಸ್ವಾಘೇನ ಕರ್ಮಪಾಕಮನು- ಸ್ಮರಂತೋ ವಿಣ್ಮೂತ್ರಪೂಯಶೋಣಿತಕೇಶನಖಾಸ್ಥಿಮೇದೋಮಾಂಸವಸಾವಾಹಿನ್ಯಾಮುಪತಪ್ಯಂತೇ ॥

ಅನುವಾದ

ಈ ಲೋಕದಲ್ಲಿ ಶ್ರೇಷ್ಠಕುಲದಲ್ಲಿ ಹುಟ್ಟಿದ ರಾಜನಾಗಲೀ, ರಾಜನ ಅಧಿಕಾರಿಯಾಗಲೀ ನಾಸ್ತಿಕನಾಗಿ ಧರ್ಮ ಮರ್ಯಾದೆಯನ್ನು ಮೀರಿ ನಡೆಯುವವರು ಸತ್ತಮೇಲೆ ವೈತರಣೀ ನದಿಯಲ್ಲಿ ಎಸೆಯಲ್ಪಡುತ್ತಾರೆ. ಮಲ, ಮೂತ್ರ, ಕೀವು, ರಕ್ತ, ಕೂದಲು, ಉಗುರು, ಮೂಳೆ, ಕೊಬ್ಬು, ಮಾಂಸ, ಮಜ್ಜೆಗಳೇ ಮುಂತಾದ ಕೊಳಕು ಪದಾರ್ಥಗಳಿಂದ ತುಂಬಿ ನರಕಗಳ ಕೂಪದಂತೆ ಇರುವ ಆ ನದಿಯಲ್ಲಿ ಮುಳುಗಿದ ಅವನನ್ನು ಅಲ್ಲಿರುವ ಜಲಚರಪ್ರಾಣಿಗಳು ಕಚ್ಚಿತಿನ್ನುತ್ತವೆ. ಅದರಿಂದ ಎಷ್ಟೇ ಹಿಂಸೆಯುಂಟಾಗುತ್ತಿದ್ದರೂ ಅವರಿಗೆ ದೇಹವು ಬಿಟ್ಟುಹೋಗುವುದಿಲ್ಲ. ಪಾಪದ ಕಾರಣದಿಂದ ಪ್ರಾಣಗಳು ಅದನ್ನು ಧರಿಸಿಕೊಂಡಿರುತ್ತವೆ. ಅವನು ಆ ದುರ್ಗತಿಯನ್ನು ತನ್ನ ಪಾಪದ ಫಲವೆಂದು ತಿಳಿದುಕೊಂಡು ಮನಸ್ಸಿನಲ್ಲೇ ಕೊರಗುತ್ತಿರುವನು.॥22॥

ಮೂಲಮ್

(ಗದ್ಯ - 23)

ಮೂಲಮ್

ಯೇ ತ್ವಿಹ ವೈ ವೃಷಲೀಪತಯೋ ನಷ್ಟಶೌಚಾಚಾರ- ನಿಯಮಾಸ್ತ್ಯಕ್ತಲಜ್ಜಾಃ ಪಶುಚರ್ಯಾಂ ಚರಂತಿ ತೇ ಚಾಪಿ ಪ್ರೇತ್ಯ ಪೂಯವಿಣ್ಮೂತ್ರಶ್ಲೆಷ್ಮಮಲಾಪೂರ್ಣಾರ್ಣವೇ ವಿಪತಂತಿ ತದೇವಾತಿಬೀಭತ್ಸಿತಮಶ್ನಂತಿ ॥
ಯಾರು ಶೌಚ-ಆಚಾರಗಳ ನಿಯಮಗಳನ್ನು ತೊರೆದು, ನಾಚಿಕೆಯನ್ನು ಬಿಟ್ಟು ಈ ಲೋಕದಲ್ಲಿ ಅಧಮವರ್ಣದ ಸ್ತ್ರೀಯನ್ನು ಮದುವೆಯಾಗಿ ಪಶುಗಳಂತೆ ಆಚರಿಸುತ್ತಾರೋ ಅವರೂ ಕೂಡ ಸತ್ತನಂತರ ಕೀವು, ಮಲ-ಮೂತ್ರ ಮತ್ತು ಶ್ಲೇಷ್ಮಗಳಿಂದ ತುಂಬಿದ ಪುಯೋದವೆಂಬ ಸಮುದ್ರದಲ್ಲಿ ಬಿದ್ದು ಆ ಅತ್ಯಂತ ಹೇಯವಾದ ಪದಾರ್ಥಗಳನ್ನೇ ತಿನ್ನುತ್ತಾರೆ. ॥23॥

(ಗದ್ಯ - 24)

ಮೂಲಮ್

ಯೇ ತ್ವಿಹ ವೈ ಶ್ವಗರ್ದಭಪತಯೋ ಬ್ರಾಹ್ಮಣಾದಯೋ ಮೃಗಯಾವಿಹಾರಾ ಅತೀರ್ಥೇ ಚ ಮೃಗಾನ್ನಿಘ್ನಂತಿ ತಾನಪಿ ಸಂಪರೇತಾಂಲ್ಲಕ್ಷ್ಯಭೂತಾನ್ಯಮಪುರುಷಾ ಇಷುಭಿರ್ವಿಧ್ಯಂತಿ ॥

ಅನುವಾದ

ಈ ಲೋಕದಲ್ಲಿ ಬ್ರಾಹ್ಮಣಾದಿ ಉಚ್ಚವರ್ಣದ ಜನರು ನಾಯಿ ಅಥವಾ ಕತ್ತೆಯನ್ನು ಸಾಕುವವರನ್ನು ಮತ್ತು ಬೇಟೆಯಾಡುವುದರಲ್ಲೇ ತೊಡಗಿರುವವರನ್ನು, ಶಾಸ್ತ್ರಕ್ಕೆ ವಿರುದ್ಧವಾಗಿ ಪಶುಗಳನ್ನು ವಧಿಸುವವರನ್ನು ಸತ್ತಬಳಿಕ ‘ಪ್ರಾಣರೋಧ’ ಎಂಬ ನರಕದಲ್ಲಿ ಹಾಕಿಬಿಡುತ್ತಾರೆ. ಅಲ್ಲಿ ಯಮದೂತರು ಅವನನ್ನು ಗುರಿಯಾಗಿಸಿ ಬಾಣಗಳಿಂದ ಹೊಡೆಯುವರು. ॥24॥

(ಗದ್ಯ - 25)

ಮೂಲಮ್

ಯೇ ತ್ವಿಹ ವೈ ದಾಂಭಿಕಾ ದಂಭಯಜ್ಞೇಷು ಪಶೂನ್ವಿಶಸಂತಿ ತಾನಮುಷ್ಮಿಲ್ಲೋಕೇ ವೈಶಸೇ ನರಕೇ ಪತಿತಾನ್ನಿರಯಪತಯೋ ಯಾತಯಿತ್ವಾ ವಿಶಸಂತಿ ॥

ಅನುವಾದ

ಈ ಲೋಕದಲ್ಲಿ ದಾಂಭಿಕರಾಗಿ ಪಾಷಂಡಯಜ್ಞಗಳಲ್ಲಿ ಪಶುಗಳನ್ನು ವಧಿಸುವವರನ್ನು ಪರಲೋಕದಲ್ಲಿ ವೈಶಸ (ವಿಶಸನ) ಎಂಬ ನರಕಕ್ಕೆ ಹಾಕಿ, ಅಲ್ಲಿಯ ಅಧಿಕಾರಿಗಳು ಬಗೆ-ಬಗೆಯಾಗಿ ಹಿಂಸೆಪಡಿಸುವರು. ॥25॥

(ಗದ್ಯ - 26)

ಮೂಲಮ್

ಯಸ್ತ್ವಿಹ ವೈ ಸವರ್ಣಾಂ ಭಾರ್ಯಾಂ ದ್ವಿಜೋ ರೇತಃ ಪಾಯಯತಿ ಕಾಮಮೋಹಿತಸ್ತಂ ಪಾಪಕೃತಮಮುತ್ರ ರೇತಃ ಕುಲ್ಯಾಯಾಂ ಪಾತಯಿತ್ವಾ ರೇತಃ ಸಂಪಾಯಯಂತಿ ॥

ಅನುವಾದ

ಕಾಮಾತುರನಾದ ದ್ವಿಜನು ತನ್ನ ಸವರ್ಣಳಾದ ಹೆಂಡತಿಗೆ ತನ್ನ ರೇತಸ್ಸನ್ನು ಕುಡಿಸುವನೋ ಆ ಪಾಪಿಯನ್ನು ಮೃತನಾದ ಬಳಿಕ ಯಮದೂತರು ರೇತಸ್ಸಿನಿಂದ ತುಂಬಿದ ಲಾಲಾಭಕ್ಷವೆಂಬ ನದಿಯಲ್ಲಿ ಕೆಡಹಿ ಅವನಿಗೆ ರೇತಸ್ಸನ್ನೇ ಕುಡಿಸುವರು. ॥26॥

(ಗದ್ಯ - 27)

ಮೂಲಮ್

ಯೇ ತ್ವಿಹ ವೈ ದಸ್ಯವೋಗ್ನಿದಾ ಗರದಾ ಗ್ರಾಮಾನ್ಸಾರ್ಥಾನ್ವಾ ವಿಲುಂಪಂತಿ ರಾಜಾನೋ ರಾಜ ಭಟಾ ವಾ ತಾಂಶ್ಚಾಪಿ ಹಿ ಪರೇತ್ಯ ಯಮದೂತಾ ವಜ್ರದಂಷ್ಟ್ರಾಃ ಶ್ವಾನಃ ಸಪ್ತಶತಾನಿ ವಿಂಶತಿಶ್ಚ ಸರಭಸಂ ಖಾದಂತಿ ॥

ಅನುವಾದ

ಯಾವನಾದರೂ ರಾಜನಾಗಲೀ, ಅವನ ಅಧಿಕಾರಿಯಾಗಲೀ, ಅಥವಾ ಕಳ್ಳನಾಗಲೀ ಈ ಲೋಕದಲ್ಲಿ ಮನೆಗೆ ಬೆಂಕಿಹಚ್ಚುವುದು, ಮತ್ತೊಬ್ಬರಿಗೆ ವಿಷವುಣಿಸುವುದು, ಊರನ್ನು ಅಥವಾ ವ್ಯಾಪಾರಿಗಳನ್ನು ಲೂಟಿಮಾಡುವುದು ಮುಂತಾದ ಪಾತಕಗಳನ್ನು ಮಾಡಿದವರನ್ನು ಮರಣಾನಂತರ ಸಾರಮೇಯಾದನವೆಂಬ ನರಕದಲ್ಲಿ ಯಮದೂತರು, ವಜ್ರದಂತೆ ಕೋರೆದಾಡೆಗಳುಳ್ಳ ಏಳು ನೂರ ಇಪ್ಪತ್ತು ನಾಯಿಗಳಾಗಿ ಬಹಳ ಕ್ರೋಧದಿಂದ ಕಿತ್ತುತಿನ್ನುವರು.॥27॥

(ಗದ್ಯ - 28)

ಮೂಲಮ್

ಯಸ್ತ್ವಿಹ ವಾ ಅನೃತಂ ವದತಿ ಸಾಕ್ಷ್ಯೇ ದ್ರವ್ಯವಿನಿಮಯೇ ದಾನೇ ವಾ ಕಥಂಚಿತ್ಸ ವೈ ಪ್ರೇತ್ಯ ನರಕೇವೀಚಿಮತ್ಯಧಃಶಿರಾ ನಿರವಕಾಶೇ ಯೋಜನಶತೋಚ್ಛ್ರಾಯಾದ್ಗಿರಿಮೂರ್ಧ್ನಃ ಸಂಪಾತ್ಯತೇ ಯತ್ರ ಜಲಮಿವ ಸ್ಥಲಮಶ್ಮಪೃಷ್ಠಮವಭಾಸತೇ ತದವೀಚಿಮತ್ತಿಲಶೋ ವೀಶೀರ್ಯಮಾಣಶರೀರೋ ನ ಮ್ರಿಯಮಾಣಃ ಪುನರಾರೋಪಿತೋ ನಿಪತತಿ ॥

ಅನುವಾದ

ಈ ಲೋಕದಲ್ಲಿ ಸಾಕ್ಷಿ ಹೇಳುವಾಗ, ವ್ಯಾಪಾರದಲ್ಲಿ ಅಥವಾ ದಾನಕೊಡುವಾಗ ಸುಳ್ಳು ಹೇಳುವವನು ಸತ್ತಮೇಲೆ ಆಧಾರರಹಿತವಾದ ಅವೀಚಿಮಾನ್ ಎಂಬ ನರಕದಲ್ಲಿ ಬೀಳುತ್ತಾನೆ. ಅಲ್ಲಿ ಅವನನ್ನು ನೂರುಯೋಜನ ಎತ್ತರವಾದ ಪರ್ವತದ ತುದಿಯಿಂದ ತಲೆಕೆಳಗಾಗಿಸಿ ಬೀಳಿಸುವರು. ಆ ನರಕದ ಭೂಮಿಯು ನೀರಿನಂತೆ ಕಂಡುಬರುತ್ತದೆ. ಅದರಿಂದ ಇದನ್ನು ಅವೀಚಿಮಾನ್ ಎಂದು ಹೇಳುತ್ತಾರೆ. ಅಲ್ಲಿ ಬೀಳಿಸಿದಾಗ ಅವನ ಶರೀರವು ಚೂರು-ಚೂರಾದರೂ ಪ್ರಾಣಗಳು ಹೋಗುವುದಿಲ್ಲ. ಅದರಿಂದ ಅವನನ್ನು ಪದೇ-ಪದೇ ಮೇಲಕ್ಕೆ ಕೊಂಡು ಹೋಗಿ ಬೀಳಿಸುವರು. ॥28॥

(ಗದ್ಯ - 29)

ಮೂಲಮ್

ಯಸ್ತ್ವಿಹ ವೈ ವಿಪ್ರೋ ರಾಜನ್ಯೋ ವೈಶ್ಯೋ ವಾ ಸೋಮಪೀಥಸ್ತತ್ಕಲತ್ರಂ ವಾ ಸುರಾಂ ವ್ರತಸ್ಥೋಪಿ ವಾ ಪಿಬತಿ ಪ್ರಮಾದತಸ್ತೇಷಾಂ ನಿರಯಂ ನೀತಾನಾಮುರಸಿ ಪದಾಕ್ರಮ್ಯಾಸ್ಯೇ ವಹ್ನಿನಾ ದ್ರವಮಾಣಂ ಕಾರ್ಷ್ಣಾಯಸಂ ನಿಷಿಂಚಂತಿ ॥

ಅನುವಾದ

ಬ್ರಾಹ್ಮಣನಾಗಲೀ, ಬ್ರಾಹ್ಮಣಿಯಾಗಲೀ ಅಥವಾ ವ್ರತದಲ್ಲಿರುವವನಾಗಲೀ, ಬೇರೆ ಯಾವನೇ ಪ್ರಮಾದವಶನಾಗಿ ಮದ್ಯಪಾನ ಮಾಡಿದರೆ, ಕ್ಷತ್ರಿಯನು ಅಥವಾ ವೈಶ್ಯನು ಸೋಮಪಾನ ಮಾಡಿದರೆ ಇವರನ್ನು ಯಮದೂತರು ಅಯಃಪಾನವೆಂಬ ನರಕಕ್ಕೆ ಕೊಂಡುಹೋಗಿ, ಅವನ ಎದೆಯಮೇಲೆ ಕಾಲನ್ನಿಟ್ಟು ಅವನ ಬಾಯಲ್ಲಿ ಬೆಂಕಿಯಲ್ಲಿ ಕರಗಿಸಿದ ಕಬ್ಬಿಣದ ರಸವನ್ನು ಹುಯ್ಯುವರು. ॥29॥

(ಗದ್ಯ - 30)

ಮೂಲಮ್

ಅಥ ಚ ಯಸ್ತ್ವಿಹ ವಾ ಆತ್ಮಸಂಭಾವನೇನ ಸ್ವಯಮಧಮೋ ಜನ್ಮತಪೋವಿದ್ಯಾಚಾರವರ್ಣಾಶ್ರಮವತೋ ವರೀಯಸೋ ನ ಬಹು ಮನ್ಯೇತ ಸ ಮೃತಕ ಏವ ಮೃತ್ವಾ ಕ್ಷಾರಕರ್ದಮೇ ನಿರಯೇವಾಕ್ ಶಿರಾ ನಿಪಾತಿತೋ ದುರಂತಾ ಯಾತನಾ ಹ್ಯಶ್ನುತೇ ॥

ಅನುವಾದ

ತಾನು ಅಧಮನಾಗಿದ್ದರೂ ತನ್ನನ್ನು ಉತ್ತಮನೆಂದು ಭಾವಿಸಿಕೊಂಡು ಜನ್ಮ, ತಪಸ್ಸು, ವಿದ್ಯೆ, ಅಚರಣೆ, ವರ್ಣ, ಆಶ್ರಮ ಇವುಗಳಲ್ಲಿ ತನಗಿಂತ ಉತ್ತಮರಾದವರನ್ನು ವಿಶೇಷವಾಗಿ ಗೌರವಿಸದಿರುವವನು ಬದುಕಿದ್ದರೂ ಸತ್ತವನಂತೆ ತಿಳಿಯಬೇಕು. ಸತ್ತಮೇಲೆ ಅವನನ್ನು ಕ್ಷಾರಕರ್ದಮವೆಂಬ ನರಕದಲ್ಲಿ ತಲೆಕೆಳಗಾಗಿ ಬೀಳಿಸುತ್ತಾರೆ. ಅವನಿಗೆ ಅಲ್ಲಿ ಅನಂತ ಪೀಡೆಗಳನ್ನು ಭೋಗಿಸಬೇಕಾಗುತ್ತದೆ.॥30॥

(ಗದ್ಯ - 31)

ಮೂಲಮ್

ಯೇ ತ್ವಿಹ ವೈ ಪುರುಷಾಃ ಪುರುಷಮೇಧೇನ ಯಜಂತೇ ಯಾಶ್ಚ ಸಿಯೋ ನೃಪಶೂನ್ ಖಾದಂತಿ ತಾಂಶ್ಚ ತೇ ಪಶವ ಇವ ನಿಹತಾ ಯಮಸದನೇ ಯಾತಯಂತೋ ರಕ್ಷೋಗಣಾಃ ಸೌನಿಕಾ ಇವ ಸ್ವಧಿತಿನಾವದಾಯಾಸೃಕ್ಪಿಬಂತಿ ನೃತ್ಯಂತಿ ಚ ಗಾಯಂತಿ ಚ ಹೃಷ್ಯಮಾಣಾ ಯಥೇಹ ಪುರುಷಾದಾಃ ॥

ಅನುವಾದ

ಈ ಲೋಕದಲ್ಲಿ ನರಮೇಧವೇ ಮುಂತಾದವುಗಳ ಮೂಲಕ ಭೈರವ, ಯಕ್ಷ, ರಾಕ್ಷಸ ಮುಂತಾದವರನ್ನು ಪೂಜಿಸುವವರಿಗೆ, ಸ್ತ್ರೀಯು ಪಶುವಿನಂತೆ ಪುರುಷನನ್ನು ತಿನ್ನುವವಳಿಗೆ ಪಶುಗಳಂತೆ ಸತ್ತುಹೋದ ಆ ಪುರುಷರು ಯಮಲೋಕದಲ್ಲಿ ರಾಕ್ಷಸರಾಗಿ ಬಗೆ-ಬಗೆಯ ಕಷ್ಟಗಳನ್ನು ಕೊಡುತ್ತಾರೆ ಮತ್ತು ರಕ್ಷೋಗಣ ಭೋಜನವೆಂಬ ನರಕದಲ್ಲಿ ಕಟುಕರಂತೆ ಅವರನ್ನು ಕೊಡಲಿಯಿಂದ ಕತ್ತರಿಸಿ ಅವನ ರಕ್ತವನ್ನು ಕುಡಿಯುತ್ತಾರೆ. ಆ ಮಾಂಸವನ್ನು ತಿನ್ನುವವರು ಈ ಲೋಕದಲ್ಲಿ ಮಾಂಸಭಕ್ಷಣದಿಂದ ಆನಂದಿತರಾದಂತೆ, ಆ ರಾಕ್ಷಸರು ಅವನ ರಕ್ತವನ್ನು ಕುಡಿದು ಆನಂದಿತರಾಗಿ ಹಾಡುತ್ತಾ-ಕುಣಿಯುತ್ತಾ ಇರುತ್ತಾರೆ. ॥31॥

(ಗದ್ಯ - 32)

ಮೂಲಮ್

ಯೇ ತ್ವಿಹ ವಾ ಅನಾಗಸೋರಣ್ಯೇ ಗ್ರಾಮೇ ವಾ ವೈಶ್ರಂಭಕೈರುಪಸೃತಾನುಪವಿಶ್ರಂಭಯ್ಯ ಜಿಜೀವಿಷೂನ್ ಶೂಲಸೂತ್ರಾದಿಷೂಪಪ್ರೋತಾನ್ ಕ್ರೀಡ- ನಕತಯಾ ಯಾತಯಂತಿ ತೇಪಿ ಚ ಪ್ರೇತ್ಯ ಯಮ ಯಾತನಾಸು ಶೂಲಾದಿಷು ಪ್ರೋತಾತ್ಮಾನಃ ಕ್ಷುತ್ತೃಡ್ಭ್ಯಾಂ ಚಾಭಿಹತಾಃ ಕಂಕವಟಾದಿಭಿಶ್ಚೇತಸ್ತತಸ್ತಿಗ್ಮತುಂಡೈರಾಹನ್ಯ- ಮಾನಾ ಆತ್ಮಶಮಲಂ ಸ್ಮರಂತಿ ॥

ಅನುವಾದ

ಈ ಲೋಕದಲ್ಲಿ ಬದುಕಬೇಕೆಂದಿರುವ ಅರಣ್ಯದ ಅಥವಾ ಊರಿನ ನಿರಪರಾಧಿಗಳಾದ ಪ್ರಾಣಿಗಳನ್ನು ಬಗೆ-ಬಗೆಯ ಉಪಾಯಗಳಿಂದ ತಮ್ಮ ಬಳಿಗೆ ಬರಮಾಡಿಕೊಂಡು ಆ ಪ್ರಾಣಿಗಳನ್ನು ಶೂಲಕ್ಕೇರಿಸಿ ಅಥವಾ ಹಗ್ಗದಿಂದ ಬಿಗಿದು ಆಟವಾಡುತ್ತಾ ಅವುಗಳಿಗೆ ನಾನಾರೀತಿಯ ಪೀಡೆಗಳನ್ನು ಕೊಡುವವರನ್ನೂ ಕೂಡ ಮರಣಾನಂತರ ಯಮ ಯಾತನೆ ಯನ್ನು ಕೊಡುವ ‘ಶೂಲಪ್ರೋತ’ವೆಂಬ ನರಕದಲ್ಲಿ ಶೂಲವೇ ಮುಂತಾದವುಗಳಿಗೆ ಪೋಣಿಸಿ ಅವರಿಗೆ ಚಿತ್ರಹಿಂಸೆಗಳನ್ನು ಕೊಡುವರು. ಹಸಿವು-ಬಾಯಾರಿಕೆಗಳಿಂದ ಸಂಕಟಪಡುವಾಗ ಮತ್ತು ಹದ್ದು, ಗಿಡುಗಗಳೇ ಮುಂತಾದ ಹರಿತವಾದ ಕೊಕ್ಕುಗಳುಳ್ಳ ಭೀಕರವಾದ ನರಕದ ಹಕ್ಕಿಗಳಿಂದ ಕಚ್ಚಿ ತಿನ್ನುತ್ತಿರುವಾಗ ತಾನು ಮಾಡಿದ ಎಲ್ಲ ಪಾಪಗಳು ನೆನಪಾಗುತ್ತವೆ.॥32॥

(ಗದ್ಯ - 33)

ಮೂಲಮ್

ಯೇ ತ್ವಿಹ ವೈ ಭೂತಾನ್ಯುದ್ವೇಜಯಂತಿ ನರಾ ಉಲ್ಬಣಸ್ವಭಾವಾ ಯಥಾ ದಂದಶೂಕಾಸ್ತೇಪಿ ಪ್ರೇತ್ಯ ನರಕೇ ದಂದಶೂಕಾಖ್ಯೇ ನಿಪತಂತಿ ಯತ್ರ ನೃಪ ದಂದ- ಶೂಕಾಃ ಪಂಚಮುಖಾಃ ಸಪ್ತಮುಖಾ ಉಪಸೃತ್ಯ ಗ್ರಸಂತಿ ಯಥಾ ಬಿಲೇಶಯಾನ್ ॥

ಅನುವಾದ

ಎಲೈ ರಾಜನೇ! ಈ ಲೋಕದಲ್ಲಿ ಯಾರು ಸರ್ಪಗಳಂತೆ ಉಗ್ರ ಸ್ವಭಾವವುಳ್ಳವರು ಬೇರೆ ಜೀವಿಗಳಿಗೆ ಪೀಡೆಯನ್ನುಂಟು ಮಾಡುತ್ತಾರೋ ಅವರು ಸತ್ತಮೇಲೆ ದಂದಶೂಕವೆಂಬ ನರಕದಲ್ಲಿ ಬೀಳುವರು. ಅಲ್ಲಿ ಐದೈದು, ಏಳೇಳು ಹೆಡೆಗಳುಳ್ಳ ಸರ್ಪಗಳು ಅವನ ಬಳಿಗೆ ಬಂದು ಅವನನ್ನು ಇಲಿಯಂತೆ ನುಂಗಿಬಿಡುವುವು.॥33॥

(ಗದ್ಯ - 34)

ಮೂಲಮ್

ಯೇ ತ್ವಿಹ ವಾ ಅಂಧಾ- ವಟಕುಸೂಲಗುಹಾದಿಷು ಭೂತಾನಿ ನಿರುಂಧಂತಿ ತಥಾಮುತ್ರ ತೇಷ್ವೇವೋಪವೇಶ್ಯ ಸಗರೇಣ ವಹ್ನಿನಾ ಧೂಮೇನ ನಿರುಂಧಂತಿ ॥

ಅನುವಾದ

ಯಾರು ಇಲ್ಲಿ ಇತರ ಪ್ರಾಣಿಗಳನ್ನು ಕತ್ತಲೆಯ ಹಳ್ಳ-ಹಗೆವು-ಗುಹೆಗಳಲ್ಲಿ ಕೂಡಿಹಾಕುತ್ತಾರೋ ಅವರನ್ನು ಪರಲೋಕದಲ್ಲಿ ಯಮದೂತರು ಅಂತಹುದೇ ಕಗ್ಗತ್ತಲೆಯ ಸ್ಥಳದಲ್ಲಿ ಇರಿಸಿ ವಿಷಯುಕ್ತ ಹೊಗೆಯಿಂದ ಉಸಿರುಕಟ್ಟುವಂತೆ ಮಾಡುತ್ತಾರೆ. ಇದರಿಂದ ಈ ನರಕವನ್ನು ಅವಟನಿರೋಧ ಎಂದು ಹೇಳುತ್ತಾರೆ.॥34॥

(ಗದ್ಯ - 35)

ಮೂಲಮ್

ಯಸ್ತ್ವಿಹ ವಾ ಅತಿಥೀನಭ್ಯಾಗತಾನ್ವಾ ಗೃಹಪತಿರಸಕೃ- ದುಪಗತಮನ್ಯುರ್ದಿಧಕ್ಷುರಿವ ಪಾಪೇನ ಚಕ್ಷುಷಾ ನಿರೀಕ್ಷತೇ ತಸ್ಯ ಚಾಪಿ ನಿರಯೇ ಪಾಪದೃಷ್ಟೇರಕ್ಷಿಣೀ ವಜ್ರತುಂಡಾ ಗೃಧ್ರಾಃ ಕಂಕಕಾಕವಟಾದಯಃ ಪ್ರಸಹ್ಯೋರುಬಲಾದು- ತ್ಪಾಟಯಂತಿ ॥

ಅನುವಾದ

ಯಾವ ಗೃಹಸ್ಥನು ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ಪದೇ-ಪದೇ ಸುಟ್ಟುಬಿಡುವಂತೆ ಕುಟಿಲತೆಯಿಂದ ಅವರತ್ತ ಸಿಟ್ಟಿನಿಂದ ನೋಡುತ್ತಾನೋ ಅವನು ನರಕಕ್ಕೆ ಹೋದಾಗ ಆ ಪಾಪದೃಷ್ಟಿಯುಳ್ಳ ಕಣ್ಣುಗಳನ್ನು ಗಿಡುಗ, ಹದ್ದು, ಕಾಗೆ ಮುಂತಾದ ವಜ್ರದಂತೆ ಕೊಕ್ಕುಳ್ಳ ಪಕ್ಷಿಗಳು ಬಲವಂತವಾಗಿ ಕಿತ್ತುಬಿಡುವರು. ಈ ನರಕವನ್ನು ಪರ್ಯಾವರ್ತನವೆಂದು ಹೇಳುತ್ತಾರೆ.॥35॥

(ಗದ್ಯ - 36)

ಮೂಲಮ್

ಯಸ್ತ್ವಿಹ ವಾ ಆಢ್ಯಾಭಿಮತಿರಹಂಕೃತಿಸ್ತಿರ್ಯಕ್ಪ್ರೇಕ್ಷಣಃ ಸರ್ವತೋಭಿವಿಶಂಕೀ ಅರ್ಥವ್ಯಯನಾಶಚಿಂತಯಾ ಪರಿಶುಷ್ಯಮಾಣಹೃದಯವದನೋ ನಿರ್ವೃತಿಮನವಗತೋ ಗ್ರಹ ಇವಾರ್ಥಮಭಿರಕ್ಷತಿ ಸ ಚಾಪಿ ಪ್ರೇತ್ಯ ತದುತ್ಪಾದನೋತ್ಕರ್ಷಣಸಂರಕ್ಷಣಶಮಲಗ್ರಹಃ ಸೂಚೀಮುಖೇ ನರಕೇ ನಿಪತತಿ ಯತ್ರ ಹ ವಿತ್ತಗ್ರಹಂ ಪಾಪಪುರುಷಂ ಧರ್ಮರಾಜಪುರುಷಾ ವಾಯಕಾ ಇವ ಸರ್ವತೋಂಗೇಷು ಸೂತ್ರೈಃ ಪರಿವಯಂತಿ ॥

ಅನುವಾದ

ಈ ಲೋಕದಲ್ಲಿ ಕೆಲವು ವ್ಯಕ್ತಿಗಳು ತಮ್ಮನ್ನು ದೊಡ್ಡ ಶ್ರೀಮಂತರೆಂದು ತಿಳಿದುಕೊಂಡು ದುರಭಿಮಾನದಿಂದ ಎಲ್ಲರನ್ನು ವಕ್ರದೃಷ್ಟಿಯಿಂದ ನೋಡುತ್ತಾರೆ ಮತ್ತು ಎಲ್ಲರ ಮೇಲೂ ಸಂಶಯಪಡುತ್ತಾರೆ. ಹಣವು ಖರ್ಚಾಯಿತಲ್ಲಾ! ನಾಶವಾಗಿ ಹೋಯಿತಲ್ಲ! ಎಂಬ ಚಿಂತೆಯಿಂದ ಮನಸ್ಸು ಮುಖಗಳು ಒಣಗಿ ಹೋದವರಾಗಿ ಸ್ವಲ್ಪವೂ ನೆಮ್ಮದಿ ಯಿಲ್ಲದೆ ಯಕ್ಷರಂತೆ ಹಣದ ರಕ್ಷಣೆಯಲ್ಲೇ ಆಸಕ್ತರಾಗಿರುತ್ತಾರೆ. ಹಣದ ಸಂಪಾದನೆ, ಹಣವನ್ನು ಹೆಚ್ಚಿಸುವಿಕೆ, ಉಳಿಸುವಿಕೆ ಮುಂತಾದವುಗಳಿಗಾಗಿ ಬಗೆ-ಬಗೆಯ ಪಾಪಗಳನ್ನು ಮಾಡುತ್ತಾ ಇರುತ್ತಾರೆ. ಇಂತಹ ನರಾಧಮರು ಸತ್ತನಂತರ ಸೂಚೀಮುಖವೆಂಬ ನರಕದಲ್ಲಿ ಬೀಳುತ್ತಾರೆ. ಅಲ್ಲಿ ಆ ಅರ್ಧಪಿಶಾಚಿಯಾದ ಪಾಪಿಯ ಸರ್ವಾಂಗಗಳನ್ನು ಯಮದೂತರು ದರ್ಜಿಗಳಂತೆ ಸೂಜಿಯಿಂದ ಚುಚ್ಚಿ ದಾರಗಳಿಂದ ಹೊಲಿಯುವರು.॥36॥

(ಗದ್ಯ - 37)

ಮೂಲಮ್

ಏವಂವಿಧಾ ನರಕಾ ಯಮಾಲಯೇ ಸಂತಿ ಶತಶಃ ಸಹಸ್ರಶಸ್ತೇಷು ಸರ್ವೇಷು ಚ ಸರ್ವ ಏವಾಧರ್ಮವರ್ತಿನೋ ಯೇ ಕೇಚಿದಿಹೋದಿತಾ ಅನುದಿತಾಶ್ಚಾವನಿಪತೇ ಪರ್ಯಾಯೇಣ ವಿಶಂತಿ ತಥೈವ ಧರ್ಮಾನುವರ್ತಿನ ಇತರತ್ರ ಇಹ ತು ಪುನರ್ಭವೇ ತ ಉಭಯಶೇಷಾಭ್ಯಾಂ ನಿವಿಶಂತಿ ॥

ಅನುವಾದ

ರಾಜೇಂದ್ರನೇ! ಯಮಲೋಕದಲ್ಲಿ ಇದೇ ಪ್ರಕಾರದ ನೂರಾರು, ಸಾವಿರಾರು ನರಕಗಳಿವೆ. ಅವುಗಳಲ್ಲಿ ಯಾವುದನ್ನು ಇಲ್ಲಿ ಉಲ್ಲೇಖಿಸಲ್ಪಟ್ಟಿದೆಯೋ, ಯಾವುದರ ಕುರಿತು ಏನೂ ಹೇಳಲಿಲ್ಲವೋ ಅವೆಲ್ಲವುಗಳಲ್ಲಿ ಎಲ್ಲ ಅಧರ್ಮಪರಾಯಣ ಜೀವರು ತಮ್ಮ ಕರ್ಮಗಳನುಸಾರವಾಗಿ ಮತ್ತೆ-ಮತ್ತೆ ಹೋಗುತ್ತಿರುತ್ತಾರೆ. ಹೀಗೆಯೇ ಧರ್ಮಾತ್ಮರಾದ ಜನರು ಸ್ವರ್ಗಾದಿಗಳಿಗೆ ಹೋಗುತ್ತಾರೆ. ಹೀಗೆ ನರಕ ಮತ್ತು ಸ್ವರ್ಗದ ಭೋಗದಿಂದ ಇವರ ಹೆಚ್ಚಿನಂಶದ ಪಾಪ ಮತ್ತು ಪುಣ್ಯಗಳು ಕ್ಷೀಣವಾಗಿ ಹೋದಾಗ ಬಾಕಿ ಉಳಿದಿರುವ ಪುಣ್ಯಪಾಪರೂಪವಾದ ಕರ್ಮಗಳಂತೆ ಇವರು ಪುನಃ ಇದೇ ಲೋಕದಲ್ಲಿ ಹುಟ್ಟಲು ಮರಳುತ್ತಾರೆ.॥37॥

(ಗದ್ಯ - 38)

ಮೂಲಮ್

ನಿವೃತ್ತಿಲಕ್ಷಣಮಾರ್ಗ ಆದಾವೇವ ವ್ಯಾಖ್ಯಾತಃ ಏತಾವಾನೇವಾಂಡಕೋಶೋ ಯಶ್ಚತುರ್ದಶಧಾ ಪುರಾ- ಣೇಷು ವಿಕಲ್ಪಿತ ಉಪಗೀಯತೇ ಯತ್ತದ್ಭಗವತೋ ನಾರಾ- ಯಣಸ್ಯ ಸಾಕ್ಷಾನ್ಮಹಾಪುರುಷಸ್ಯ ಸ್ಥವಿಷ್ಠಂ ರೂಪ- ಮಾತ್ಮಮಾಯಾಗುಣಮಯಮನುವರ್ಣಿತಮಾದೃತಃ ಪಠತಿ ಶೃಣೋತಿ ಶ್ರಾವಯತಿ ಸ ಉಪಗೇಯಂ ಭಗವತಃ ಪರ- ಮಾತ್ಮನೋಗ್ರಾಹ್ಯಮಪಿ ಶ್ರದ್ಧಾಭಕ್ತಿವಿಶುದ್ಧಬುದ್ಧಿರ್ವೇದ ॥

ಅನುವಾದ

ಈ ಧರ್ಮ ಮತ್ತು ಅಧರ್ಮ ಎರಡರಿಂದಲೂ ವಿಲಕ್ಷಣವಾದ ನಿವೃತ್ತಿಮಾರ್ಗವನ್ನಾದರೋ ಮೊದಲಿಗೆ (ದ್ವಿತೀಯ ಸ್ಕಂಧದಲ್ಲಿ) ವರ್ಣಿಸಿ ಆಗಿದೆ. ಪುರಾಣಗಳಲ್ಲಿ ಹದಿನಾಲ್ಕು ಭುವನಗಳ ರೂಪದಲ್ಲಿ ವರ್ಣಿತವಾದ ಬ್ರಹ್ಮಾಂಡಕೋಶವು ಇಷ್ಟೇ ಇದೆ. ಇದು ಸಾಕ್ಷಾತ್ ಪರಮ ಪುರುಷ ಶ್ರೀಮನ್ನಾರಾಯಣನ ಮಾಯೆಯ ಗುಣಗಳಿಂದ ಕೂಡಿದ ಅತ್ಯಂತ ಸ್ಥೂಲ ಸ್ವರೂಪವಾಗಿದೆ. ಇದರ ವರ್ಣನೆಯನ್ನು ನಾನು ಮಾಡಿರುವೆನು. ಪರಮಾತ್ಮಾ ಭಗವಂತನ ನಿರ್ಗುಣ ಸ್ವರೂಪವನ್ನು ಉಪನಿಷತ್ತುಗಳಲ್ಲಿ ವರ್ಣಿತವಾಗಿದ್ದರೂ ಮನ-ಬುದ್ಧಿಗಳು ತಲುಪಲಾರದಷ್ಟು ಹೊರಗಿದೆ; ದೂರವಿದೆ. ಆದರೂ ಈ ಸ್ಥೂಲರೂಪದ ವರ್ಣನೆಯನ್ನು ಆದರದಿಂದ ಓದುವವನ, ಕೇಳುವವನ, ಹೇಳುವವನ ಬುದ್ಧಿಯು ಶ್ರದ್ಧೆ ಮತ್ತು ಭಕ್ತಿಯ ಕಾರಣದಿಂದ ಶುದ್ಧವಾಗುತ್ತದೆ ಮತ್ತು ಅವನು ಆ ಸೂಕ್ಷ್ಮರೂಪ ವನ್ನು ಕೂಡ ಅನುಭವಿಸಬಲ್ಲನು.॥38॥

(ಶ್ಲೋಕ - 39)

ಮೂಲಮ್

ಶ್ರುತ್ವಾ ಸ್ಥೂಲಂ ತಥಾ ಸೂಕ್ಷ್ಮಂ
ರೂಪಂ ಭಗವತೋ ಯತಿಃ
ಸ್ಥೂಲೇ ನಿರ್ಜಿತಮಾತ್ಮಾನಂ ಶನೈಃ
ಸೂಕ್ಷ್ಮಂ ಧಿಯಾ ನಯೇದಿತಿ ॥

ಅನುವಾದ

ಯತಿಯಾದವನು ಭಗವಂತನ ಸ್ಥೂಲ ಮತ್ತು ಸೂಕ್ಷ್ಮ ಎರಡೂ ರೂಪಗಳನ್ನು ಶ್ರವಣಿಸಿ ಮೊದಲಿಗೆ ಸ್ಥೂಲರೂಪದಲ್ಲಿ ಚಿತ್ತವನ್ನು ಸ್ಥಿರಗೊಳಿಸಬೇಕು. ಮತ್ತೆ ನಿಧಾನವಾಗಿ ಅಲ್ಲಿಂದ ತೊಡೆದು ಅದನ್ನು ಸೂಕ್ಷ್ಮದಲ್ಲಿ ತೊಡಗಿಸಬೇಕು.॥39॥

(ಶ್ಲೋಕ - 40)

ಮೂಲಮ್

ಭೂದ್ವೀಪವರ್ಷಸರಿದದ್ರಿನಭಃಸಮುದ್ರ-
ಪಾತಾಲದಿಙ್ನರಕಭಾಗಣಲೋಕಸಂಸ್ಥಾ
ಗೀತಾ ಮಯಾ ತವ ನೃಪಾದ್ಭುತಮೀಶ್ವರಸ್ಯ
ಸ್ಥೂಲಂ ವಪುಃ ಸಕಲಜೀವನಿಕಾಯಧಾಮ ॥

ಅನುವಾದ

ಪರೀಕ್ಷಿತನೇ! ನಾನು ನಿನಗೆ ಪೃಥಿವಿ, ಅದರ ಅಂತರ್ಗತ ದ್ವೀಪ, ವರ್ಷ, ನದಿ, ಪರ್ವತ, ಆಕಾಶ, ಸಮುದ್ರ, ಪಾತಾಳ, ದಿಕ್ಕುಗಳು, ನರಕ, ಜ್ಯೋತಿರ್ಗಣ ಮತ್ತು ಲೋಕಗಳ ಸ್ಥಿತಿಯನ್ನು ವರ್ಣಿಸಿರುವೆನು. ಇದೇ ಭಗವಂತನ ಅತಿ ಅದ್ಭುತ ಸ್ಥೂಲರೂಪವಾಗಿದೆ. ಅದು ಸಮಸ್ತ ಜೀವಿಗಳಿಗೆ ಆಶ್ರಯವಾಗಿದೆ.॥40॥

ಅನುವಾದ (ಸಮಾಪ್ತಿಃ)

ಇಪ್ಪತ್ತಾರನೆಯ ಅಧ್ಯಾಯವು ಮುಗಿಯಿತು.॥26॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ನರಕಾನುವರ್ಣನಂ ನಾಮ ಷಡ್ವಿಂಶೋಽಧ್ಯಾಯಃ ॥26॥
ಐದನೆಯ ಸ್ಕಂಧವು ಸಂಪೂರ್ಣವಾಯಿತು.