೨೫

[ಇಪ್ಪತ್ತೈದನೆಯ ಅಧ್ಯಾಯ]

ಭಾಗಸೂಚನಾ

ಶ್ರೀಸಂಕರ್ಷಣದೇವರ ವರ್ಣನೆ ಮತ್ತು ಸ್ತುತಿ

(ಗದ್ಯ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತಸ್ಯ ಮೂಲದೇಶೇ ತ್ರಿಂಶದ್ಯೋಜನಸಹಸ್ರಾಂತರ ಆಸ್ತೇ ಯಾ ವೈ ಕಲಾ ಭಗವತಸ್ತಾಮಸೀ ಸಮಾಖ್ಯಾತಾನಂತ ಇತಿ ಸಾತ್ವತೀಯಾ ದ್ರಷ್ಟೃದೃಶ್ಯಯೋಃ ಸಂಕರ್ಷಣಮಹಮಿತ್ಯಭಿಮಾನಲಕ್ಷಣಂ ಯಂ ಸಂಕರ್ಷಣಮಿತ್ಯಾಚಕ್ಷತೇ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹಾರಾಜ! ಪಾತಾಳಲೋಕದ ಕೆಳಗೆ ಮೂವತ್ತುಸಾವಿರ ಯೋಜನಗಳ ದೂರದಲ್ಲಿ ಭಗವಾನ್ ಶ್ರೀನಾರಾಯಣನ ಕಲಾಮೂರ್ತಿ ಯಾಗಿ ತಾಮಸಾಹಂಕಾರಕ್ಕೆ ಅಭಿಮಾನಿಯಾಗಿರುವ ‘ಅನಂತ’ ಎಂದು ಪ್ರಸಿದ್ಧನಾದ ಆದಿಶೇಷನು ವಾಸವಾಗಿದ್ದಾನೆ. ಆತನು ಅಹಂಕಾರಕ್ಕೆ ಅಭಿಮಾನಿಯಾಗಿ ದೃಶ್ಯವಾದ ದೇಹೇಂದ್ರಿಯ ಮತ್ತು ಜಗತ್ತು ಇವುಗಳನ್ನು ನೋಡುವ ದೃಷ್ಟಾ ಜೀವನು ಅವುಗಳೊಂದಿಗೆ ತಾದಾತ್ಮ್ಯಹೊಂದುವುದು ಈ ಅಹಂಕಾರದಿಂದ. ಆದ್ದರಿಂದ ಪಾಂಚರಾತ್ರ ಆಗಮದ ಅನುಯಾಯಿ ಭಕ್ತರು ಇವನನ್ನು ಸಂಕರ್ಷಣನೆಂದು ಹೇಳುತ್ತಾರೆ. ॥1॥

(ಗದ್ಯ - 2)

ಮೂಲಮ್

ಯಸ್ಯೇದಂ ಕ್ಷಿತಿಮಂಡಲಂ ಭಗವತೋನಂತಮೂರ್ತೇಃ ಸಹಸ್ರಶಿರಸ ಏಕಸ್ಮಿನ್ನೇವ ಶೀರ್ಷಣಿ ಧ್ರಿಯಮಾಣಂ ಸಿದ್ಧಾರ್ಥ ಇವ ಲಕ್ಷ್ಯತೇ ॥

ಅನುವಾದ

ಭಗವಾನ್ ಅನಂತನಿಗೆ ಒಂದು ಸಾವಿರ ತಲೆಗಳಿವೆ. ಆ ಮಹಾಫಣಾಮಂಡಲದಲ್ಲಿ ಈ ಇಡೀ ಭೂಮಂಡಲವು ಒಂದೇ ಹೆಡೆಯಮೇಲೆ ಧರಿಸಲ್ಪಟ್ಟು ಒಂದು ಸಾಸಿವೆ ಕಾಳಿನಂತೆ ಕಾಣುತ್ತದೆ. ॥2॥

(ಗದ್ಯ - 3)

ಮೂಲಮ್

ಯಸ್ಯ ಹ ವಾ ಇದಂ ಕಾಲೇನೋಪಸಂಜಿಹೀರ್ಷತೋಮರ್ಷವಿರಚಿತರುಚಿರಭ್ರಮದ್ಭ್ರುವೋರಂತರೇಣ ಸಾಂಕರ್ಷಣೋ ನಾಮ ರುದ್ರ ಏಕಾದಶವ್ಯೆಹಸ್ಯಕ್ಷಸಿಶಿಖಂ ಶೂಲಮುತ್ತಂಭಯನ್ನುದತಿಷ್ಠತ್ ॥

ಅನುವಾದ

ಪ್ರಳಯಕಾಲವು ಬಂದಾಗ ಇವನಿಗೆ ಈ ವಿಶ್ವದ ಉಪಸಂಹಾರ ಮಾಡುವ ಇಚ್ಛೆ ಉಂಟಾದಾಗ ಕ್ರೋಧದಿಂದ ಹುಬ್ಬು ಗಂಟಿಕ್ಕಿ ತಿರುಗುತ್ತಿರುವ ಆತನ ಮನೋಹರ ಭ್ರುಕುಟಿಯ ಮಧ್ಯದಿಂದ ಸಂಕರ್ಷಣ ಎಂಬ ರುದ್ರರು ಪ್ರಕಟರಾಗುತ್ತಾರೆ. ಅವರ ವ್ಯೂಹ ಸಂಖ್ಯೆಯು ಹನ್ನೊಂದು ಇರುತ್ತದೆ. ಅವರೆಲ್ಲರೂ ಮುಕ್ಕಣ್ಣರಾಗಿ ಕೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾರೆ. ॥3॥

(ಗದ್ಯ - 4)

ಮೂಲಮ್

ಯಸ್ಯಾಂಘ್ರಿಕಮಲಯುಗಲಾರುಣವಿಶದನಖಮಣಿಷಂಡಮಂಡಲೇಷ್ವಹಿಪತಯಃ ಸಹ ಸಾತ್ವತರ್ಷಭೈರೇಕಾಂತಭಕ್ತಿಯೋಗೇನಾವನಮಂತಃ ಸ್ವವದನಾನಿ ಪರಿಸ್ಫುರತ್ಕುಂಡಲಪ್ರಭಾಮಂಡಿತಗಂಡಸ್ಥಲಾನ್ಯತಿಮನೋಹರಾಣಿ ಪ್ರಮುದಿತಮನಸಃ ಖಲು ವಿಲೋಕಯಂತಿ ॥

ಅನುವಾದ

ಭಗವಾನ್ ಸಂಕರ್ಷಣನ ಚರಣಕ ಮಲಗಳ ದುಂಡಾಗಿರುವ ಸ್ವಚ್ಛ ಮತ್ತು ಅರುಣ ವರ್ಣ ನಖಮಣಿಗಳ ಸಾಲುಗಳು ಹೊಳೆಯುತ್ತಾ ಇವೆ. ಬೇರೆ ಮುಖ್ಯ-ಮುಖ್ಯರಾದ ನಾಗರಾಜರು ಭಕ್ತರೊಡಗೂಡಿ ಅನನ್ಯ ಭಕ್ತಿಭಾವದಿಂದ ಅವನನ್ನು ವಂದಿಸುತ್ತಿರುವಾಗ ಆ ನಖಮಣಿಗಳಲ್ಲಿ ತಮ್ಮ ಕುಂಡಲಮಂಡಿತ ಕಾಂತಿಯುಕ್ತ ಕಮನೀಯ ಕಪೋಲಗಳುಳ್ಳ ಮುಖಾರವಿಂದದ ಮನಮೋಹಕವಾದ ಪ್ರತಿಬಿಂಬವನ್ನು ಕಂಡು ಅವರ ಮನಸ್ಸು ಆನಂದದಿಂದ ತುಂಬಿಹೋಗುತ್ತದೆ. ॥4॥

(ಗದ್ಯ - 5)

ಮೂಲಮ್

ಯಸ್ಯೈವ ಹಿ ನಾಗರಾಜಕುಮಾರ್ಯ ಆಶಿಷ ಆಶಾಸಾನಾಶ್ಚಾರ್ವಂಗವಲಯವಿಲಸಿತವಿಶದವಿಪುಲಧವಲಸುಭಗರುಚಿರಭುಜರಜತಸ್ತಂಭೇಷ್ವಗುರುಚಂದನಕುಂಕುಮಪಂಕಾನುಲೇಪೇನಾವಲಿಂಪಮಾನಾಸ್ತದಭಿಮರ್ಶನೋನ್ಮಥಿತಹೃದಯಮಕರಧ್ವಜಾವೇಶರುಚಿರಲಲಿತಸ್ಮಿತಾಸ್ತದನುರಾಗಮದಮುದಿತಮದವಿಘೂರ್ಣಿತಾರುಣಕರುಣಾವಲೋಕನಯನವದನಾರವಿಂದಂ ಸವ್ರೀಡಂ ಕಿಲ ವಿಲೋಕಯಂತಿ ॥

ಅನುವಾದ

ಅನೇಕ ನಾಗರಾಜರ ಕನ್ಯೆಯರು ವಿವಿಧ ಕಾಮನೆಗಳಿಂದ ಅವನ ಚೆಲುವಾದ ಅಂಗಮಂಡಲದಲ್ಲಿ ಬೆಳ್ಳಿಯ ಕಂಬಗಳಂತೆ ಬೆಳ್ಳಗೆ ಹೊಳೆಯುತ್ತಾ, ತೋಳ್ಬಳೆಗಳಿಂದ ಮಿರುಗುತ್ತಾ ದುಂಡು-ದುಂಡಾಗಿ ನೀಳವಾದ ತೋಳುಗಳಿಗೆ ಅಗರು, ಚಂದನ ಮತ್ತು ಕುಂಕುಮ ಕೇಸರಗಳ ಲೇಪವನ್ನು ಹಚ್ಚುತ್ತಿರುವರು. ಆತನ ಅಂಗ ಸ್ಪರ್ಶದಿಂದ ಅವರಲ್ಲಿ ಪ್ರೇಮಭಾವವು ಹರಿಯತೊಡಗುತ್ತದೆ. ಆಗ ಅವರು ಕರುಣಾಪೂರ್ಣವಾಗಿ ಕೆಂದಾವರೆಯಂತೆ ಕಂಗೊಳಿಸುವ ಕಣ್ಣುಗಳಿಂದ ಕೂಡಿ ಪ್ರೇಮೋನ್ಮಾದದಿಂದ ಆನಂದಗೊಂಡಿರುವ ಆತನ ಮುಖ ಕಮಲವನ್ನು ಮಧುರವೂ, ಮನೋಹರವೂ ಆದ ಕಿರುನಗೆಯಿಂದ ಲಜ್ಜಾಭಾವ ಸಹಿತವಾದ ಅನುರಾಗದಿಂದ ನೋಡುತ್ತಿರುವರು. ॥5॥

(ಗದ್ಯ - 6)

ಮೂಲಮ್

ಸ ಏವ ಭಗವಾನನಂತೋನಂತಗುಣಾರ್ಣವ ಆದಿದೇವ ಉಪಸಂಹೃತಾಮರ್ಷರೋಷವೇಗೋ ಲೋಕಾನಾಂ ಸ್ವಸ್ತಯ ಆಸ್ತೇ ॥

ಅನುವಾದ

ಅನಂತಗುಣಗಳ ಸಾಗರನಾದ ಆ ಆದಿದೇವ ಭಗವಾನ್ ಅನಂತನು ತನ್ನ ಅಸಹನೆ-ಕ್ರೋಧಗಳನ್ನು ಉಪಸಂಹಾರಮಾಡಿಕೊಂಡು ಸಮಸ್ತ ಲೋಕಗಳ ಕಲ್ಯಾಣಕ್ಕಾಗಿ ಅಲ್ಲಿ ವಿರಾಜಮಾನನಾಗಿದ್ದಾನೆ. ॥6॥

(ಗದ್ಯ - 7)

ಮೂಲಮ್

ಧ್ಯಾಯಮಾನಃ ಸುರಾಸುರೋರಗಸಿದ್ಧಗಂಧರ್ವ-ವಿದ್ಯಾಧರಮುನಿಗಣೈರನವರತಮದಮುದಿತವಿಕೃತವಿಹ್ವಲ- ಲೋಚನಃ ಸುಲಲಿತಮುಖರಿಕಾಮೃತೇನಾಪ್ಯಾಯಮಾನಃ ಸ್ವಪಾರ್ಷದವಿಬುಧಯೂಥಪತೀನಪರಿಮ್ಲಾನರಾಗನವ- ತುಲಸಿಕಾಮೋದಮಧ್ವಾಸವೇನ ಮಾದ್ಯನ್ಮಧುಕರವ್ರಾತ- ಮಧುರಗೀತಶ್ರಿಯಂ ವೈಜಯಂತೀಂ ಸ್ವಾಂ ವನಮಾಲಾಂ ನೀಲವಾಸಾ ಏಕಕುಂಡಲೋ ಹಲಕಕುದಿ ಕೃತಸುಭಗ- ಸುಂದರಭುಜೋ ಭಗವಾನ್ಮಾಹೇಂದ್ರೋ ವಾರಣೇಂದ್ರ ಇವ ಕಾಂಚನೀಂ ಕಕ್ಷಾಮುದಾರಲೀಲೋ ಬಿಭರ್ತಿ ॥

ಅನುವಾದ

ದೇವತೆಗಳು, ಅಸುರರು, ನಾಗರು, ಸಿದ್ಧರು, ಗಂಧರ್ವರು, ವಿದ್ಯಾಧರರು, ಮುನಿಗಣಗಳು ಆ ಭಗವಾನ್ ಅನಂತನನ್ನು ಧ್ಯಾನಿಸುತ್ತಾ ಇರುವರು. ಅವನ ನೇತ್ರಗಳು ನಿರಂತರವಾಗಿ ಆನಂದಾನುಭಾವದಿಂದ ಚಂಚಲವಾಗಿ ತಿರುಗುತ್ತಿರುವಂತೆ ಕಾಣುತ್ತಿವೆ. ಅವನು ಮಧುರವಾದ ವಚನಾಮೃತಗಳಿಂದ ತನ್ನ ಪಾರ್ಷದರನ್ನು ಮತ್ತು ದೇವತಾಗಣಗಳ ನಾಯಕರನ್ನು ಸಂತೋಷಗೊಳಿಸುತ್ತಿದ್ದಾನೆ. ಸ್ವಾಮಿಯ ಮೈಯಲ್ಲಿ ನೀಲಾಂಬರ ಹಾಗೂ ಕಿವಿಗಳಲ್ಲಿ ಕೇವಲ ಒಂದೇ ಕುಂಡಲವು ಹೊಳೆಯುತ್ತಿದೆ. ಎಂದೆಂದಿಗೂ ಬಾಡದೇ ಇರುವ ಹೊಸ ತುಲಸಿಯ ಸುವಾಸನೆ ಮತ್ತು ರಸಗಳ ಸೇವನೆಯಿಂದ ಮತ್ತೇರಿ ಝೇಂ ಕರಿಸುತ್ತಿರುವ ದುಂಬಿಗಳ ಸಂಗೀತದಿಂದ ಶೋಭಿಸುತ್ತಿರುವ ವೈಜಯಂತಿ ಎಂಬ ಸಾಟಿಯಿಲ್ಲದ ವನಮಾಲೆಯಿಂದ ಅಲಂಕೃತ ನಾಗಿರುವ ಸ್ವಾಮಿಯು ಸುವರ್ಣ ಮಾಲೆಯಿಂದ ಅಲಂಕೃತ ವಾದ ಐರಾವತದಂತೆ ರಾರಾಜಿಸುತ್ತಿದ್ದಾನೆ. ತನ್ನ ಸುಭಗವೂ, ಸುಂದರವೂ ಆದ ಭುಜವನ್ನು ನೇಗಿಲಿನ ಹಿಡಿಯಮೇಲೆ ಇರಿಸಿಕೊಂಡು ಮೆರೆಯುತ್ತಿದ್ದಾನೆ. ॥7॥

(ಗದ್ಯ - 8)

ಮೂಲಮ್

ಯ ಏಷ ಏವಮನುಶ್ರುತೋ ಧ್ಯಾಯಮಾನೋ ಮುಮುಕ್ಷೂಣಾಮನಾದಿಕಾಲಕರ್ಮವಾಸನಾಗ್ರಥಿತಮವಿದ್ಯಾಮಯಂ ಹೃದಯಗ್ರಂಥಿಂ ಸತ್ತ್ವರಜಸ್ತಮೋಮಯಮಂತರ್ಹೃದಯಂ ಗತ ಆಶು ನಿರ್ಭಿನತ್ತಿ ತಸ್ಯಾನುಭಾವಾನ್ ಭಗವಾನ್ ಸ್ವಾಯಂಭುವೋ ನಾರದಃ ಸಹ ತುಂಬುರುಣಾ ಸಭಾಯಾಂ ಬ್ರಹ್ಮಣಃ ಸಂಶ್ಲೋಕಯಾಮಾಸ ॥

ಅನುವಾದ

ಪರೀಕ್ಷಿದ್ರಾಜನೇ! ಹೀಗೆ ಭಗವಾನ್ ಅನಂತನ ಮಹಾತ್ಮ್ಯವನ್ನು ಶ್ರವಣಿಸುತ್ತಾ, ಧ್ಯಾನಮಾಡುವುದರಿಂದ ಮುಮುಕ್ಷುಗಳ ಹೃದಯದಲ್ಲಿ ಪ್ರಕಟಗೊಂಡು ಅವರ ಅನಾದಿಕಾಲದ ಕರ್ಮವಾಸನೆಗಳಿಂದ ಕಗ್ಗಂಟಾದ ಸತ್ತ್ವ, ರಜ, ತಮೋಗುಣರೂಪ ಅವಿದ್ಯಾಮಯವಾದ ಹೃದಯದ ಗಂಟನ್ನು ಒಡನೆಯೇ ಕತ್ತರಿಸಿ ಬಿಡುವನು. ಬ್ರಹ್ಮಪುತ್ರರಾದ ಭಗವಾನ್ ನಾರದರು ತುಂಬುರರು ಗಂಧರ್ವರೊಡನೆ ಒಮ್ಮೆ ಬ್ರಹ್ಮದೇವರ ಸಭೆಯಲ್ಲಿ ಆ ಸಂಕರ್ಷಣ ದೇವರ ಗುಣಗಳನ್ನು ಹೀಗೆ ಗಾನ ಮಾಡಿದರು. ॥8॥

(ಶ್ಲೋಕ - 9)

ಮೂಲಮ್

ಉತ್ಪತ್ತಿಸ್ಥಿತಿಲಯಹೇತವೋಸ್ಯ ಕಲ್ಪಾಃ
ಸತ್ತ್ವಾದ್ಯಾಃ ಪ್ರಕೃತಿಗುಣಾ ಯದೀಕ್ಷಯಾಸನ್
ಯದ್ರೂಪಂ ಧ್ರುವಮಕೃತಂ ಯದೇಕಮಾತ್ಮ-
ನ್ನಾನಾಧಾತ್ಕಥಮು ಹ ವೇದ ತಸ್ಯ ವರ್ತ್ಮ ॥

ಅನುವಾದ

ಜಗತ್ತಿನ ಉತ್ಪತ್ತಿ-ಸ್ಥಿತಿ-ಲಯಗಳಿಗೆ ಕಾರಣವಾಗಿರುವ ಸತ್ತ್ವವೇ ಮುಂತಾದ ಪ್ರಾಕೃತಗುಣಗಳು ಯಾರ ದೃಷ್ಟಿ (ಸಂಕಲ್ಪ) ಮಾತ್ರದಿಂದಲೇ ತಮ್ಮ-ತಮ್ಮ ಕಾರ್ಯವನ್ನು ಮಾಡಲು ಸಮರ್ಥವಾಗುವವೋ, ಯಾರ ಸ್ವರೂಪವು ಧ್ರುವ (ಅನಂತ) ಮತ್ತು ಅಕೃತ (ಅನಾದಿ)ಯಾಗಿದೆಯೋ, ಕೇವಲ ಒಬ್ಬನೇ ಆಗಿದ್ದರೂ ಈ ನಾನಾತ್ಮಕವಾದ ಪ್ರಪಂಚವನ್ನು ಯಾರು ತನ್ನಲ್ಲಿ ಧರಿಸಿಕೊಂಡಿರುವನೋ ಆ ಭಗವಾನ್ ಸಂಕರ್ಷಣನ ತತ್ತ್ವವನ್ನು ಯಾರಾದರೂ ಹೇಗೆ ತಾನೇ ತಿಳಿಯಬಲ್ಲರು? ॥9॥

(ಶ್ಲೋಕ - 10)

ಮೂಲಮ್

ಮೂರ್ತಿಂ ನಃ ಪುರುಕೃಪಯಾ ಬಭಾರ ಸತ್ತ್ವಂ
ಸಂಶುದ್ಧಂ ಸದಸದಿದಂ ವಿಭಾತಿ ಯತ್ರ
ಯಲ್ಲೀಲಾಂ ಮೃಗಪತಿರಾದದೇನವದ್ಯಾ-
ಮಾದಾತುಂ ಸ್ವಜನಮನಾಂಸ್ಯುದಾರವೀರ್ಯಃ ॥

ಅನುವಾದ

ಯಾರಲ್ಲಿ ಈ ಕಾರ್ಯ-ಕಾರಣರೂಪವಾದ ಇಡೀ ಪ್ರಪಂಚವು ತೋರುವುದೋ ಹಾಗೂ ತನ್ನ ನಿಜಜನರ ಚಿತ್ತವನ್ನು ಆಕರ್ಷಿಸಲಿಕ್ಕಾಗಿಯೇ ಮಾಡಿರುವ ಪರಾಕ್ರಮವುಳ್ಳ ಲೀಲೆಯನ್ನು ಪರಮಪರಾಕ್ರಮಿ ಸಿಂಹವು ಆದರ್ಶವೆಂದು ತಿಳಿದು ತನ್ನದಾಗಿಸಿ ಕೊಂಡಿದೆಯೋ, ಆ ಉದಾರ ವೀರ್ಯನಾದ ಭಗವಾನ್ ಸಂಕರ್ಷಣನು ನಮ್ಮ ಮೇಲೆ ಕೃಪೆಗೈದು ಈ ವಿಶುದ್ಧ ಸತ್ತ್ವಮಯ ಸ್ವರೂಪವನ್ನು ಧರಿಸಿರುವನು. ॥10॥

(ಶ್ಲೋಕ - 11)

ಮೂಲಮ್

ಯನ್ನಾಮ ಶ್ರುತಮನುಕೀರ್ತಯೇದಕಸ್ಮಾ-
ದಾರ್ತೋ ವಾ ಯದಿ ಪತಿತಃ ಪ್ರಲಂಭನಾದ್ವಾ
ಹನ್ತ್ಯಂಹಃ ಸಪದಿ ನೃಣಾಮಶೇಷಮನ್ಯಂ
ಕಂ ಶೇಷಾದ್ಭಗವತ ಆಶ್ರಯೇನ್ಮುಮುಕ್ಷುಃ ॥

ಅನುವಾದ

ಆತನ ನಾಮಮಹಿಮೆಯೂ ಅಪಾರವಾದುದು. ಪೀಡಿತವಾಗಿರಲೀ, ಪಾಪಿಯೇ ಆಗಿರಲೀ, ಆಕಸ್ಮಿಕವಾಗಿಯಾದರೂ, ವಿನೋದಕ್ಕಾದರೂ, ಮತ್ತೊಬ್ಬರು ಹೇಳಿದುದನ್ನು ಕೇಳಿ ಅಣಕಿಸುವುದಕ್ಕಾಗಲೀ, ಆತನ ದಿವ್ಯನಾಮವನ್ನು ಉಚ್ಚರಿಸಿದರೆ ತಾನು ಪಾಪಗಳಿಂದ ಬಿಡುಗಡೆ ಹೊಂದುವನು. ಅಷ್ಟೇ ಅಲ್ಲದೆ ಇತರ ಎಲ್ಲ ಪಾಪಗಳನ್ನೂ ಒಡನೆಯೇ ಧ್ವಂಸಮಾಡುವನು. ಮೋಕ್ಷವನ್ನು ಬಯಸುವವನು ಇಂತಹ ಶ್ರೀಶೇಷಭಗವಂತನನ್ನು ಬಿಟ್ಟು ಬೇರೆ ಯಾರನ್ನು ಆಶ್ರಯಿಸ ಬಲ್ಲನು? ॥11॥

(ಶ್ಲೋಕ - 12)

ಮೂಲಮ್

ಮೂರ್ಧನ್ಯರ್ಪಿತಮಣುವತ್ಸಹಸ್ರಮೂರ್ಧ್ನೋ
ಭೂಗೋಲಂ ಸಗಿರಿಸರಿತ್ಸಮುದ್ರಸತ್ತ್ವಮ್
ಆನಂತ್ಯಾದನಿಮಿತವಿಕ್ರಮಸ್ಯ ಭೂಮ್ನಃ
ಕೋ ವೀರ್ಯಾಣ್ಯಧಿಗಣಯೇತ್ಸಹಸ್ರಜಿಹ್ವಃ ॥

ಅನುವಾದ

ಬೆಟ್ಟ, ನದಿಗಳು, ಸಮುದ್ರ ಮುಂತಾದವುಗಳಿಂದ ಕೂಡಿದ ಈ ಇಡೀ ಭೂಮಂಡಲವು ಆ ಸಹಸ್ರಶೀರ್ಷ ಭಗವಂತನ ಒಂದು ತಲೆಯಲ್ಲಿ ಒಂದು ಧೂಳಿನ ಕಣದಂತೆ ನೆಲೆಸಿದೆ. ಅಂತಹ ಅನಂತಸ್ವಾಮಿಯ ಅನಂತವಾದ ಮಹಿಮೆಯನ್ನು ಯಾರೂ ತಿಳಿಯರು. ಸಾವಿರ ನಾಲಿಗೆಗಳಿದ್ದರೂ ಆ ಸರ್ವ ವ್ಯಾಪಕ ಭಗವಂತನ ಪರಾಕ್ರಮಗಳನ್ನು ಹೇಗೆ ಬಣ್ಣಿಸ ಬಲ್ಲನು? ॥12॥

(ಶ್ಲೋಕ - 13)

ಮೂಲಮ್

ಏವಂಪ್ರಭಾವೋ ಭಗವಾನನಂತೋ
ದುರಂತವೀರ್ಯೋರುಗುಣಾನುಭಾವಃ
ಮೂಲೇ ರಸಾಯಾಃ ಸ್ಥಿತ ಆತ್ಮತಂತ್ರೋ
ಯೋ ಲೀಲಯಾ ಕ್ಷ್ಮಾಂ ಸ್ಥಿತಯೇ ಬಿಭರ್ತಿ ॥

ಅನುವಾದ

ನಿಜವಾಗಿಯೂ ಅವನ ಅನಂತವಾದ ವೀರ್ಯ, ಅತಿಶಯವಾದ ಗುಣ ಮತ್ತು ಪ್ರಭಾವವು ಅಸೀಮ ವಾದುದು. ಇಂತಹ ಪ್ರಭಾವಶಾಲಿ ಭಗವಾನ್ ಅನಂತನು ರಸಾತಳದ ಮೂಲದಲ್ಲಿ ತನ್ನದೇ ಮಹಿಮೆಯಲ್ಲಿ ಸ್ಥಿತನಾಗಿ ಸ್ವತಂತ್ರನಾಗಿದ್ದಾನೆ ಮತ್ತು ಸಮಸ್ತ ಲೋಕಗಳ ಸ್ಥಿತಿಗಾಗಿ ಲೀಲೆಯಿಂದಲೇ ಈ ಪೃಥಿವಿಯನ್ನು ಧರಿಸಿರುವನು. ॥13॥

(ಗದ್ಯ - 14)

ಮೂಲಮ್

ಏತಾ ಹ್ಯೇವೇಹ ನೃಭಿರುಪಗಂತವ್ಯಾ ಗತಯೋ ಯಥಾಕರ್ಮವಿನಿರ್ಮಿತಾ ಯಥೋಪದೇಶಮನು- ವರ್ಣಿತಾಃ ಕಾಮಾನ್ ಕಾಮಯಮಾನೈಃ ॥

ಅನುವಾದ

ಎಲೈ ರಾಜನೇ! ಭೋಗಗಳನ್ನು ಬಯಸುವ ಮನುಷ್ಯರು ಹೊಂದಲು ಸಾಧ್ಯವಾಗುವಂತೆ ಶ್ರೀಭಗವಂತನು ಅದರ ಕರ್ಮಗಳಿಗೆ ಅನುಗುಣವಾಗಿ ನಿರ್ಮಿಸಿರುವ ಗತಿಗಳು ಇಷ್ಟೆ. ನಾನು ಗುರುಮುಖದಿಂದ ಕೇಳಿರುವ ರೀತಿಯಲ್ಲೇ ಇವನ್ನು ನಿನಗೆ ತಿಳಿಸಿದ್ದೇನೆ. ॥14॥

(ಗದ್ಯ - 15)

ಮೂಲಮ್

ಏತಾವತೀರ್ಹಿ ರಾಜನ್ ಪುಂಸಃ ಪ್ರವೃತ್ತಿಲಕ್ಷಣಸ್ಯ ಧರ್ಮಸ್ಯ ವಿಪಾಕಗತಯ ಉಚ್ಚಾವಚಾ ವಿಸದೃಶಾ ಯಥಾಪ್ರಶ್ನಂ ವ್ಯಾಚಖ್ಯೇ ಕಿಮನ್ಯತ್ಕಥಯಾಮ ಇತಿ ॥

ಅನುವಾದ

ಮನುಷ್ಯನಿಗೆ ಪ್ರವೃತ್ತಿ ರೂಪವಾದ ಧರ್ಮದ ಪರಿಣಾಮದಲ್ಲಿ ದೊರಕುವ ಪರಸ್ಪರ ವಿಲಕ್ಷಣದ ಉಚ್ಚ-ನೀಚ ಗತಿಗಳು ನಾನಾಪ್ರಕಾರದ್ದಾಗಿದೆ. ಇದನ್ನು ನಿನ್ನ ಪ್ರಶ್ನೆಗನುಸಾರವಾಗಿ ನಾನು ಹೇಳಿಯಾಯಿತು. ಈಗ ಹೇಳು. ಇನ್ನೇನು ಹೇಳಲಿ? ॥15॥

ಅನುವಾದ (ಸಮಾಪ್ತಿಃ)

ಇಪ್ಪತ್ತೈದನೆಯ ಅಧ್ಯಾಯವು ಮುಗಿಯಿತು. ॥25॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಭೂವಿವರವಿಧ್ಯುಪವರ್ಣನಂ ನಾಮ ಪಂಚವಿಂಶೋಽಧ್ಯಾಯಃ ॥25॥