೨೪

[ಇಪ್ಪತ್ತನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ರಾಹುವೇ ಮುಂತಾದವರ ಸ್ಥಿತಿ ಅತಲವೇ ಮುಂತಾದ ಅಧೋಲೋಕಗಳ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಧಸ್ತಾತ್ಸವಿತುರ್ಯೋಜನಾಯುತೇ ಸ್ವರ್ಭಾನುರ್ನಕ್ಷತ್ರವಚ್ಚರತೀತ್ಯೇಕೇ ಯೋಸಾವಮರತ್ವಂ ಗ್ರಹತ್ವಂ ಚಾಲಭತ ಭಗವದನುಕಂಪಯಾ ಸ್ವಯಮಸುರಾಪಸದಃ ಸೈಂಹಿಕೇಯೋ ಹ್ಯತದರ್ಹಸ್ತಸ್ಯ ತಾತ ಜನ್ಮ ಕರ್ಮಾಣಿ ಚೋಪರಿಷ್ಟಾದ್ವಕ್ಷ್ಯಾಮಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹಾರಾಜನೇ! ಸೂರ್ಯನಿಗಿಂತಲೂ ಹತ್ತುಸಾವಿರ ಯೋಜನಗಳಷ್ಟು ಕೆಳಗೆ ರಾಹುವು ನಕ್ಷತ್ರಗಳಂತೆ ಸಂಚರಿಸುತ್ತಿದ್ದಾನೆ ಎಂದು ಕೆಲವರು ಹೇಳುತ್ತಾರೆ. ಸಿಂಹಿಕೆಯ ಪುತ್ರನಾದ ಈ ರಾಹುವು ರಾಕ್ಷಸಾಧಮನಾಗಿ ದೇವತ್ವಕ್ಕೆ ಅಯೋಗ್ಯನಾಗಿದ್ದರೂ ಶ್ರೀಭಗವಂತನ ಕೃಪೆಯಿಂದ ದೇವತ್ವವನ್ನೂ, ಗ್ರಹತ್ವವನ್ನೂ ಪಡೆದುಕೊಂಡನು. ಇವನ ಹುಟ್ಟು ಮತ್ತು ಕರ್ಮಗಳನ್ನು ನಾವು ಮುಂದೆ ವರ್ಣಿಸುವೆವು. ॥1॥

(ಶ್ಲೋಕ - 2)

ಮೂಲಮ್

ಯದದಸ್ತರಣೇರ್ಮಂಡಲಂ ಪ್ರತಪತಸ್ತದ್ವಿಸ್ತರತೋ ಯೋಜನಾಯುತಮಾಚಕ್ಷತೇ ದ್ವಾದಶಸಹಸ್ರಂ ಸೋಮಸ್ಯ ತ್ರಯೋದಶಸಹಸ್ರಂ ರಾಹೋರ್ಯಃ ಪರ್ವಣಿ ತದ್ವ್ಯವಧಾನಕೃದ್ವೈರಾನುಬಂಧಃ ಸೂರ್ಯಾಚಂದ್ರಮಸಾವಭಿಧಾವತಿ ॥

ಅನುವಾದ

ಅತ್ಯಂತ ಉಜ್ವಲವಾಗಿ ಬೆಳಗು ತ್ತಿರುವ ಸೂರ್ಯಮಂಡಲವು ಹತ್ತುಸಾವಿರ ಯೋಜನಗಳಷ್ಟು ವಿಸ್ತಾರವಾಗಿದೆಯೆಂದು ಹೇಳುತ್ತಾರೆ. ಹೀಗೆಯೇ ಚಂದ್ರಮಂಡಲದ ವಿಸ್ತಾರವು ಹನ್ನೆರಡುಸಾವಿರ ಯೋಜನಗಳಿವೆ ಮತ್ತು ರಾಹುವಿನ ಮಂಡಲವು ಹದಿಮೂರುಸಾವಿರ ಯೋಜನ ವಿಸ್ತಾರವಾಗಿದೆ. ಅಮೃತಪಾನದ ಸಮಯ ರಾಹುವು ದೇವತೆಯ ವೇಷದಲ್ಲಿ ಸೂರ್ಯ ಮತ್ತು ಚಂದ್ರರ ನಡುವೆ ಬಂದು ಕುಳಿತಿದ್ದನು. ಆಗ ಸೂರ್ಯ-ಚಂದ್ರರು ಇದರ ರಹಸ್ಯವನ್ನು ಬಯಲಾಗಿಸಿದರು. ಆ ವೈರವನ್ನು ಸಾಧಿಸಲಿಕ್ಕಾಗಿ ಅಮಾವಾಸ್ಯೆ ಮತ್ತು ಪೌರ್ಣಮಿಯ ದಿನಗಳಲ್ಲಿ ಅವರ ಮೇಲೆ ಆಕ್ರಮಿಸುತ್ತಾನೆ.॥2॥

(ಶ್ಲೋಕ - 3)

ಮೂಲಮ್

ತನ್ನಿಶಮ್ಯೋಭಯತ್ರಾಪಿ ಭಗವತಾ ರಕ್ಷಣಾಯ ಪ್ರಯುಕ್ತಂ ಸುದರ್ಶನಂ ನಾಮ ಭಾಗವತಂ ದಯಿತಮಸಂ ತತ್ತೇಜಸಾ ದುರ್ವಿಷಹಂ ಮುಹುಃ ಪರಿವರ್ತಮಾನಮಭ್ಯವಸ್ಥಿತೋ ಮುಹೂರ್ತಮುದ್ವಿಜಮಾನಶ್ಚಕಿತಹೃದಯ ಆರಾದೇವ ನಿವರ್ತತೇ ತದುಪರಾಗಮಿತಿ ವದಂತಿ ಲೋಕಾಃ ॥

ಅನುವಾದ

ಇದನ್ನು ನೋಡಿ ಭಗವಂತನು ಸೂರ್ಯ-ಚಂದ್ರರನ್ನು ರಕ್ಷಿಸಲಿಕ್ಕಾಗಿ ಅವರ ಬಳಿಯಲ್ಲಿ ತನ್ನ ಸುದರ್ಶನ ಚಕ್ರವನ್ನು ನೇಮಿಸಿರುವನು. ಅದು ನಿರಂತರ ಸುತ್ತುತ್ತಾ ಇರುವುದರಿಂದ ರಾಹುವು ತಡೆಯಲಾರದ ಅದರ ತೇಜದಿಂದ ಉದ್ವಿಗ್ನನಾಗಿ, ಚಕಿತನಾಗಿ ಮುಹೂರ್ತಕಾಲ ಮಾತ್ರ ಅವರ ಇದಿರಿಗೆ ಇದ್ದು ಮತ್ತೆ ಮರಳಿ ಹೊರಟು ಹೋಗುತ್ತಾನೆ. ಅವನು ಅವರ ಮುಂದೆ ಇದ್ದು ಅವರನ್ನು ಮರೆಮಾಡುವ ಕಾಲವನ್ನು ‘ಗ್ರಹಣ’ವೆಂದು ಹೇಳುತ್ತಾರೆ.॥3॥

(ಶ್ಲೋಕ - 4)

ಮೂಲಮ್

ತತೋಧಸ್ತಾತ್ಸಿದ್ಧಚಾರಣವಿದ್ಯಾಧರಾಣಾಂ ಸದನಾನಿ ತಾವನ್ಮಾತ್ರ ಏವ ॥

ಅನುವಾದ

ರಾಹುವಿನಿಂದ ಹತ್ತುಸಾವಿರ ಯೋಜನಗಳಷ್ಟು ಕೆಳಗೆ ಸಿದ್ಧರೂ, ಚಾರಣರೂ ಮತ್ತು ವಿದ್ಯಾಧರರೂ ಮುಂತಾದವರ ಸ್ಥಾನವಿದೆ.॥4॥

(ಶ್ಲೋಕ - 5)

ಮೂಲಮ್

ತತೋಧಸ್ತಾದ್ಯಕ್ಷರಕ್ಷಃಪಿಶಾಚ- ಪ್ರೇತಭೂತಗಣಾನಾಂ ವಿಹಾರಾಜಿರಮಂತರಿಕ್ಷಂ ಯಾವ- ದ್ವಾಯುಃ ಪ್ರವಾತಿ ಯಾವನ್ಮೇಘಾ ಉಪಲಭ್ಯಂತೇ ॥

ಅನುವಾದ

ಅವರಿಂದ ಕೆಳಗೆ ವಾಯುವಿನ ಗತಿ ಇರುವತನಕ ಮತ್ತು ಮೋಡಗಳು ಕಾಣಿಸುವವರೆಗೆ ಅಂತರಿಕ್ಷ ಲೋಕವಿದೆ. ಇದು ಯಕ್ಷರು, ರಾಕ್ಷಸರು, ಪಿಶಾಚಿಗಳು, ಪ್ರೇತಗಳು ಮತ್ತು ಭೂತಗಳು ಇವರ ವಿಹಾರಸ್ಥಳವಾಗಿದೆ. ॥5॥

(ಶ್ಲೋಕ - 6)

ಮೂಲಮ್

ತತೋಧಸ್ತಾಚ್ಛತಯೋಜನಾಂತರ ಇಯಂ ಪೃಥಿವೀ ಯಾವದ್ಧಂಸಭಾಸಶ್ಯೇನಸುಪರ್ಣಾದಯಃ ಪತತಿಪ್ರವರಾ ಉತ್ಪತಂತೀತಿ ॥

ಅನುವಾದ

ಅಲ್ಲಿಂದ ಕೆಳಗೆ ನೂರು ಯೋಜನಗಳಷ್ಟು ದೂರ ದಲ್ಲಿ ಈ ಭೂಮಿಯು ಇದೆ. ಹಂಸಗಳು, ಗಿಡುಗಗಳು, ಹದ್ದುಗಳು ಮತ್ತು ಗರುಡನೇ ಮುಂತಾದ ಮುಖ್ಯ-ಮುಖ್ಯ ಪಕ್ಷಿಗಳು ಹಾರಬಲ್ಲವೋ ಅಲ್ಲಿಯವರೆಗೆ ಭೂಮಿಯ ಸೀಮೆಯಾಗಿದೆ. ॥6॥

(ಗದ್ಯ - 5)

ಮೂಲಮ್

ಉಪವರ್ಣಿತಂ ಭೂಮೇರ್ಯಥಾಸಂನಿವೇಶಾವಸ್ಥಾನಮವನೇರಪ್ಯಧಸ್ತಾತ್ಸಪ್ತ ಭೂವಿವರಾ ಏಕೈಕಶೋ ಯೋಜನಾಯುತಾಂತರೇಣಾಯಾಮವಿಸ್ತಾರೇಣೋಪಕ್ಲ್ೃಪ್ತಾ ಅತಲಂ ವಿತಲಂ ಸುತಲಂ ತಲಾತಲಂ ಮಹಾತಲಂ ರಸಾತಲಂ ಪಾತಾಲಮಿತಿ ॥

ಅನುವಾದ

ಭೂಮಿಯ ವಿಸ್ತಾರ ಮತ್ತು ಸ್ಥಿತಿ ಮುಂತಾದವುಗಳ ವರ್ಣನೆಯಾದರೋ ಆಗಿಹೋಗಿದೆ. ಇದರ ಕೆಳಗೆ ಅತಲ, ವಿತಲ, ಸುತಲ, ತಲಾತಲ, ಮಹಾತಲ, ರಸಾತಲ ಮತ್ತು ಪಾತಾಲ ಎಂಬ ಏಳು ಲೋಕಗಳಿವೆ. ಇವುಗಳು ಭೂಮಿಯ ಮಹಾಬಿಲಗಳ ರೂಪದಲ್ಲಿರುವ ಲೋಕಗಳು. ಇವು ಒಂದರ ಕೆಳಗೆ ಒಂದರಂತೆ ಹತ್ತತ್ತು ಸಾವಿರ ಯೋಜನಗಳಷ್ಟು ದೂರದಲ್ಲಿ ನಿಂತಿವೆ. ಇವುಗಳಲ್ಲಿ ಪ್ರತಿಯೊಂದರ ಉದ್ದ-ಅಗಲವು ಹತ್ತತ್ತುಸಾವಿರ ಯೋಜನಗಳಷ್ಟೇ ಇದೆ. ॥7॥

(ಗದ್ಯ - 8)

ಮೂಲಮ್

ಏತೇಷು ಹಿ ಬಿಲಸ್ವರ್ಗೇಷು ಸ್ವರ್ಗಾದಪ್ಯ ಕಕಾಮಭೋಗೈಶ್ವರ್ಯಾನಂದಭೂತಿವಿಭೂತಿಭಿಃ ಸುಸಮೃದ್ಧಭವನೋದ್ಯಾನಾ- ಕ್ರೀಡವಿಹಾರೇಷು ದೈತ್ಯದಾನವಕಾದ್ರವೇಯಾ ನಿತ್ಯ- ಪ್ರಮುದಿತಾನುರಕ್ತಕಲತ್ರಾಪತ್ಯಬಂಧುಸುಹೃದನುಚರಾ ಗೃಹಪತಯ ಈಶ್ವರಾದಪ್ಯಪ್ರತಿಹತಕಾಮಾ ಮಾಯಾ- ವಿನೋದಾ ನಿವಸಂತಿ ॥

ಅನುವಾದ

ಈ ಭೂಮಿಯ ಬಿಲಗಳೂ ಕೂಡ ಒಂದು ರೀತಿಯ ಸ್ವರ್ಗವೇ ಆಗಿವೆ. ಇವುಗಳಲ್ಲಿ ಸ್ವರ್ಗಕ್ಕಿಂತಲೂ ಮಿಗಿಲಾದ ವಿಷಯಭೋಗ, ಐಶ್ವರ್ಯ, ಆನಂದ, ಸಂತಾನಸುಖ ಮತ್ತು ಧನ-ಸಂಪತ್ತುಗಳಿವೆ. ಇಲ್ಲಿಯ ವೈಭವೋಪೇತ ಭವನಗಳಲ್ಲಿ, ಉದ್ಯಾನಗಳಲ್ಲಿ, ಕ್ರೀಡಾಸ್ಥಳಗಳಲ್ಲಿ ದೈತ್ಯರು, ದಾನವರು, ನಾಗಗಳು ಬಗೆ-ಬಗೆಯ ಮಾಯಾಮಯ ಕ್ರೀಡೆಗಳನ್ನು ಆಡುತ್ತಾ ವಾಸಿಸು ತ್ತಾರೆ. ಅವರೆಲ್ಲರೂ ಗೃಹಸ್ಥ ಧರ್ಮವನ್ನು ಪಾಲಿಸುವವರಾಗಿದ್ದಾರೆ. ಅವರ ಪತ್ನೀ, ಪುತ್ರರು, ಬಂಧು-ಬಾಂಧವರು, ಸೇವಕರು ಇವರಲ್ಲಿ ಬಹಳಷ್ಟು ಪ್ರೀತಿಯನ್ನಿಡುತ್ತಾ ಸದಾ ಕಾಲ ಸಂತೋಷ ಚಿತ್ತರಾಗಿರುತ್ತಾರೆ. ಅವರ ಭೋಗಗಳಲ್ಲಿ ತೊಂದರೆಯನ್ನುಂಟು ಮಾಡಲು ಇಂದ್ರಾದಿಗಳಲ್ಲಿಯೂ ಸಾಮರ್ಥ್ಯವಿಲ್ಲ. ॥8॥

(ಗದ್ಯ - 9)

ಮೂಲಮ್

ಯೇಷು ಮಹಾರಾಜ ಮಯೇನ ಮಾಯಾವಿನಾ ವಿನಿರ್ಮಿತಾಃ ಪುರೋ ನಾನಾಮಣಿಪ್ರವರಪ್ರವೇಕವಿರಚಿತವಿಚಿತ್ರಭವನಪ್ರಾಕಾರ- ಗೋಪುರಸಭಾಚೈತ್ಯಚತ್ವರಾಯತನಾದಿಭಿರ್ನಾಗಾಸುರ- ಮಿಥುನಪಾರಾವತಶುಕಸಾರಿಕಾಕೀರ್ಣಕೃತ್ರಿಮಭೂಮಿಭಿ-ರ್ವಿವರೇಶ್ವರಗೃಹೋತ್ತಮೈಃ ಸಮಲಂಕೃತಾಶ್ಚಕಾಸತಿ ॥

ಅನುವಾದ

ಮಹಾರಾಜಾ! ಈ ಬಿಲರೂಪೀ ಲೋಕಗಳಲ್ಲಿ ಮಾಯಾವಿ ಮಯದಾನವನಿಂದ ರಚಿಸಲ್ಪಟ್ಟ ಅನೇಕ ಪುರಗಳು ಶೋಭಿಸುತ್ತಾ ಬೆಳಗುತ್ತಿವೆ. ಅವುಗಳು ಅನೇಕ ಜಾತಿಯ ಸುಂದರ, ಶ್ರೇಷ್ಠ ಮಣಿ-ರತ್ನಗಳಿಂದ ರಚಿತವಾದ, ಚಿತ್ರ-ವಿಚಿತ್ರವಾದ ಭವನಗಳು, ಕೋಟೆಗಳು, ನಗರದ್ವಾರಗಳು, ಸಭಾಭವನಗಳು, ಮಂದಿರಗಳು, ದೊಡ್ಡ-ದೊಡ್ಡ ಅಂಗಳಗಳು, ಅರಮನೆಗಳು ಇವುಗಳಿಂದ ಶೋಭಿಸುತ್ತಿವೆ. ಅವುಗಳ ಕೃತ್ರಿಮವಾದ ಭೂಪ್ರದೇಶಗಳಲ್ಲಿ ನಾಗ ದಂಪತಿಗಳೂ, ಅಸುರ ದಂಪತಿಗಳೂ, ಪಾರಿವಾಳ, ಗಿಳಿ, ಸಾರಿಕೆಗಳೇ ಮುಂತಾದ ಪಕ್ಷಿಗಳ ಜೋಡಿಗಳು ನಲಿಯುತ್ತಿರುವುವು. ಪಾತಾಳದ ಅಧಿಪತಿಗಳ ಇಂತಹ ಭವ್ಯ ಭವನಗಳು ಆ ಪುರಿಗಳ ಶೋಭೆಯನ್ನು ಹೆಚ್ಚಿಸುತ್ತಿವೆ. ॥9॥

(ಗದ್ಯ - 10)

ಮೂಲಮ್

ಉದ್ಯಾನಾನಿ ಚಾತಿತರಾಂ ಮನಇಂದ್ರಿಯಾನಂದಿಭಿಃ ಕುಸುಮ ಲಸ್ತಬಕಸುಭಗಕಿಸಲಯಾವನತರುಚಿರವಿಟಪವಿಟಪಿನಾಂ ಲತಾಂಗಾಲಿಂಗಿತಾನಾಂ ಶ್ರೀಭಿಃ ಸಮಿಥುನವಿವಿಧವಿಹಂಗಮಜಲಾಶಯಾನಾಮಮಲಜಲಪೂರ್ಣಾನಾಂ ಝಷಕುಲೋಲ್ಲಂಘನಕ್ಷುಭಿತನೀರನೀರಜಕುಮುದಕುವಲಯಕಹ್ಲಾರನೀಲೋತ್ಪಲಲೋಹಿತಶತಪತ್ರಾದಿವನೇಷು ಕೃತನಿಕೇತನಾನಾಮೇಕವಿಹಾರಾಕುಲಮಧುರವಿವಿಧಸ್ವನಾದಿಭಿರಿಂದ್ರಿಯೋತ್ಸವೈರಮರಲೋಕಶ್ರಿಯಮತಿಶಯಿತಾನಿ ॥

ಅನುವಾದ

ಅಲ್ಲಿಯ ಉದ್ಯಾನವನಗಳು ತನ್ನ ಶೋಭೆಯಿಂದ ದೇವಲೋಕದ ಉದ್ಯಾನಗಳ ಶೋಭೆಯನ್ನು ನಾಚಿಸುತ್ತವೆ. ಹೂವು-ಹಣ್ಣುಗಳ ಗೊಂಚಲುಗಳ ಮತ್ತು ಚಿಗುರೆಲೆಗಳ ಭಾರದಿಂದ ಬಾಗಿ-ಬಳುಕುತ್ತಾ ಸುಂದರವಾದ ಕೊಂಬೆಗಳಿಂದ ಕೂಡಿ ಬಗೆ-ಬಗೆಯ ಬಳ್ಳಿಗಳಿಂದ ಆಲಿಂಗಿತ ವಾಗಿರುವ ಅಲ್ಲಿಯ ವೃಕ್ಷಗಳು ಕಣ್ಮನಗಳನ್ನು ಸೂರೆಗೊಳ್ಳುತ್ತಿವೆ. ಅಲ್ಲಿನ ನಿರ್ಮಲ ಜಲದಿಂದ ತುಂಬಿದ ಅನೇಕ ಜಲಾಶಯಗಳ ಸೌಂದರ್ಯದಿಂದ ಆ ಉದ್ಯಾನಗಳು ತುಂಬಾ ಶೋಭಿಸುತ್ತಿವೆ. ಆ ಜಲಾಶಯಗಳಲ್ಲಿ ವಾಸಿಸುವ ಮೀನುಗಳು ಆಟವಾಡುತ್ತಾ ಮೇಲಕ್ಕೆ ನೆಗೆದಾಗ ಅವುಗಳ ನೀರು ಅಲ್ಲಾಡತೊಡಗುತ್ತದೆ. ಜೊತೆಗೆ ನೀರಿನಲ್ಲಿ ಅರಳಿ ನಿಂತ ಕನ್ನೈದಿಲೆ, ಕೆಂದಾವರೆ, ಬೆಳ್ತಾವರೆ, ಕುವಲಯ, ಕಲ್ಹಾರ, ನೀಲಕಮಲ, ನೂರುದಳಗಳ ತಾವರೆ ಮುಂತಾದ ಹೂವುಗಳು ಅಲ್ಲಾಡುತ್ತವೆ. ಈ ಕಮಲವನದಲ್ಲಿ ವಾಸಿಸುವ ಪಕ್ಷಿಗಳು ಎಡೆಬಿಡದೆ ಕ್ರೀಡಿಸುತ್ತಾ ಕಿವಿಗಿಂಪಾಗಿ ಬಗೆ-ಬಗೆಯಾಗಿ ಕಲ-ಕಲ ನಿನಾದ ಮಾಡುತ್ತಾ ಇರುತ್ತವೆ. ಅದನ್ನು ಕೇಳಿದ ಮನಸ್ಸು-ಇಂದ್ರಿಯಗಳಿಗೆ ಹಬ್ಬದ ರಸದೌತಣ ದೊರೆತಂತಾಗುತ್ತದೆ.॥10॥

(ಗದ್ಯ - 11)

ಮೂಲಮ್

ಯತ್ರ ಹ ವಾವ ನ ಭಯಮ- ಹೋರಾತ್ರಾದಿಭಿಃ ಕಾಲವಿಭಾಗೈರುಪಲಕ್ಷ್ಯತೇ ॥

ಅನುವಾದ

ಅಲ್ಲಿ ಸೂರ್ಯ ಪ್ರಕಾಶವು ತಲುಪುವುದಿಲ್ಲ. ಅದರಿಂದ ಹಗಲು-ರಾತ್ರಿಗಳ ಅಡಚಣೆಯಿಲ್ಲ.॥11॥

(ಗದ್ಯ - 12)

ಮೂಲಮ್

ಯತ್ರ ಹಿ ಮಹಾಹಿಪ್ರವರಶಿರೋಮಣಯಃ ಸರ್ವಂ ತಮಃ ಪ್ರಬಾಧಂತೇ ॥

ಅನುವಾದ

ಅಲ್ಲಿಯ ಎಲ್ಲ ಅಂಧಕಾರವನ್ನು ದೊಡ್ಡ-ದೊಡ್ಡ ನಾಗಗಳ ಹೆಡೆಗಳಲ್ಲಿರುವ ಮಣಿಗಳೇ ದೂರ ಮಾಡುವುವು.॥12॥

(ಗದ್ಯ - 13)

ಮೂಲಮ್

ನ ವಾ ಏತೇಷು ವಸತಾಂ ದಿವ್ಯೌಷಧಿರಸರಸಾಯನಾನ್ನಪಾನಸ್ನಾನಾದಿಭಿರಾಧಯೋ ವ್ಯಾಧಯೋ ವಲೀಪಲಿತಜರಾದಯಶ್ಚ ದೇಹವೈವರ್ಣ್ಯದೌರ್ಗಂಧ್ಯಸ್ವೇದಕ್ಲಮಗ್ಲಾನಿರಿತಿ ವಯೋವಸ್ಥಾಶ್ಚ ಭವಂತಿ ॥

ಅನುವಾದ

ಅಲ್ಲಿ ವಾಸಿಸುವ ನಿವಾಸಿಗಳು ದಿವ್ಯವಾದ ಔಷಧಿಗಳನ್ನು, ರಸಾಯನಗಳನ್ನು, ರಸವನ್ನು ಸೇವಿಸುತ್ತಾ ಅವುಗಳಿಂದಲೇ ಅನ್ನ-ಪಾನ-ಸ್ನಾನಾದಿಗಳನ್ನು ಮಾಡುವರು. ಅವೆಲ್ಲ ಪದಾರ್ಥಗಳು ದಿವ್ಯವಾಗಿರುತ್ತವೆ. ಈ ದಿವ್ಯ ವಸ್ತುಗಳ ಸೇವನೆಯಿಂದ ಅವರಿಗೆ ಮಾನಸಿಕ, ಶಾರೀರಿಕ ರೋಗಗಳು ಉಂಟಾಗುವುದಿಲ್ಲ. ಚರ್ಮ ಸುಕ್ಕಾಗುವುದು, ಕೂದಲು ಹಣ್ಣಾಗುವುದು, ಮುದುಕರಾಗುವುದು, ಶರೀರವು ಕಾಂತಿಹೀನವಾಗುವುದು, ಶರೀರದಲ್ಲಿ ದುರ್ಗಂಧ ಉಂಟಾಗುವುದು, ಬೆವರುವುದು ಬಳಲಿಕೆ, ಅಶಕ್ತತೆ ಉಂಟಾಗುವುದು. ವಯಸ್ಸಿಗೆ ತಕ್ಕಂತೆ ಶರೀರದಲ್ಲಿ ಬದಲಾವಣೆ ಮುಂತಾದ ಯಾವ ವಿಕಾರಗಳೂ ಉಂಟಾಗುವುದಿಲ್ಲ. ಅವರು ಸದಾಕಾಲ ಸುಂದರ, ಆರೋಗ್ಯವಂತ, ತಾರುಣ್ಯದಿಂದಿದ್ದು, ಶಕ್ತಿಸಂಪನ್ನರಾಗಿರುತ್ತಾರೆ. ॥13॥

(ಗದ್ಯ - 14)

ಮೂಲಮ್

ನ ಹಿ ತೇಷಾಂ ಕಲ್ಯಾಣಾನಾಂ ಪ್ರಭವತಿ ಕುತಶ್ಚ ನ ಮೃತ್ಯುರ್ವಿನಾ ಭಗವತ್ತೇಜಸಶ್ಚಕ್ರಾಪದೇಶಾತ್ ॥

ಅನುವಾದ

ಆ ಪುಣ್ಯ ಪುರುಷರಿಗೆ ಭಗವಂತನ ತೇಜಸ್ಸಿನ ರೂಪವಾದ ಸುದರ್ಶನಚಕ್ರವಲ್ಲದೆ ಬೇರೆ ಯಾವ ಸಾಧನೆಯಿಂದಲೂ ಮೃತ್ಯುವು ಉಂಟಾಗುವುದಿಲ್ಲ. ॥14॥

(ಗದ್ಯ - 15)

ಮೂಲಮ್

ಯಸ್ಮಿನ್ ಪ್ರವಿಷ್ಟೇಸುರವಧೂನಾಂ ಪ್ರಾಯಃ ಪುಂಸವನಾನಿ ಭಯಾದೇವ ಸ್ರವಂತಿ ಪತಂತಿ ಚ ॥

ಅನುವಾದ

ಸುದರ್ಶನ ಚಕ್ರವು ಬಂದೊಡನೆಯೇ ಅಸುರ ರಮಣಿಯರಿಗೆ ಗರ್ಭಸ್ರಾವ ಮತ್ತು ಗರ್ಭಪಾತಗಳು* ಉಂಟಾಗುವುವು. ॥15॥

ಟಿಪ್ಪನೀ
  • ‘‘ಆ ಚತುರ್ಥಾದ್ಭವೇತ್ಸ್ರಾವಃ ಪಾತಃ ಪಂಚಮ ಷಷ್ಠಯೋಃ’’ ಅರ್ಥಾತ್ ನಾಲ್ಕನೇ ತಿಂಗಳವರೆಗೆ ಗರ್ಭವು ಬಿದ್ದುಹೋದರೆ ಅದನ್ನು ‘ಗರ್ಭಸ್ರಾವ’ ಎಂದು ಹೇಳುತ್ತಾರೆ. ಐದನೇ, ಆರನೇ ತಿಂಗಳಲ್ಲಿ ಬಿದ್ದರೆ ಅದು ‘ಗರ್ಭಪಾತ’ ಎಂದು ಹೇಳುತ್ತಾರೆ.

(ಗದ್ಯ - 16)

ಮೂಲಮ್

ಅಥಾತಲೇ ಮಯಪುತ್ರೋಸುರೋ ಬಲೋ ನಿವಸತಿ ಯೇನ ಹ ವಾ ಇಹ ಸೃಷ್ಟಾಃ ಷಣ್ಣವತಿರ್ಮಾಯಾಃ ಕಾಶ್ಚನಾದ್ಯಾಪಿ ಮಾಯಾವಿನೋ ಧಾರಯಂತಿ ಯಸ್ಯ ಚ ಜೃಂಭಮಾಣಸ್ಯ ಮುಖತಸಯಃ ಸೀಗಣಾ ಉದಪದ್ಯಂತ ಸ್ವೈರಿಣ್ಯಃ ಕಾಮಿನ್ಯಃ ಪುಂಶ್ಚಲ್ಯ ಇತಿ ಯಾ ವೈ ವಿಲಾಯನಂ ಪ್ರವಿಷ್ಟಂ ಪುರುಷಂ ರಸೇನ ಹಾಟಕಾಖ್ಯೇನ ಸಾಧಯಿತ್ವಾ ಸ್ವವಿಲಾಸಾವಲೋಕನಾನುರಾಗಸ್ಮಿತಸಂಲಾಪೋಪಗೂಹನಾದಿಭಿಃ ಸ್ವೈರಂ ಕಿಲ ರಮಯಂತಿ ಯಸ್ಮಿನ್ನುಪಯುಕ್ತೇ ಪುರುಷ ಈಶ್ವರೋಹಂ ಸಿದ್ಧೋಹಮಿತ್ಯಯುತ- ಮಹಾಗಜಬಲಮಾತ್ಮಾನಮಭಿಮನ್ಯಮಾನಃ ಕತ್ಥತೇ ಮದಾಂಧ ಇವ ॥

ಅನುವಾದ

ಅತಲ ಲೋಕದಲ್ಲಿ ಮಯದಾನವನ ಪುತ್ರ ಅಸುರ ಬಲನು ಇರುತ್ತಾನೆ. ಅವನು ತೊಂಭತ್ತಾರು ರೀತಿಯ ಮಾಯೆಗಳನ್ನು ಸೃಷ್ಟಿಸಿರುವನು. ಅವುಗಳಲ್ಲಿ ಕೆಲ-ಕೆಲವು ಇಂದೂ ಕೂಡ ಮಾಯಾವೀ ಜನರಲ್ಲಿ ಕಂಡುಬರುತ್ತವೆ. ಆ ಬಲಾಸುರನು ಒಮ್ಮೆ ಆಕಳಿಸಿದಾಗ ಅವನ ಬಾಯಿಂದ ಸ್ವೈರಿಣೀ, ಕಾಮಿನೀ ಮತ್ತು ಪುಂಶ್ಚಲೀ ಎಂಬ ಮೂರು ರೀತಿಯ ಸ್ತ್ರೀಯರು ಜನಿಸಿದರು. (ಇವರಲ್ಲಿ ತನ್ನ ವರ್ಣಕ್ಕೆ ಸೇರಿದ ಪುರುಷನಲ್ಲಿ ಮಾತ್ರ ರಮಿಸುವವಳು ಸ್ವೈರಿಣಿಯೆಂದೂ, ಇತರ ವರ್ಣದವರೊಡನೆ ರಮಿಸುವವಳು ಕಾಮಿನಿಯೆಂದೂ, ಅತ್ಯಂತ ಚಂಚಲೆಯಾದ ಸ್ವಭಾವ ಉಳ್ಳವಳು ಪುಂಶ್ಚಲೀ ಎಂದೂ ಹೇಳುತ್ತಾರೆ.) ಆ ಸ್ತ್ರೀಯರು ಆ ಲೋಕದಲ್ಲಿ ವಾಸಿಸುವ ಪುರುಷರಿಗೆ ಹಾಟಕ ಎಂಬ ರಸವನ್ನು ಕುಡಿಸಿ ಅವರನ್ನು ಸಂಭೋಗ ಸಮರ್ಥರನ್ನಾಗಿಸಿ ವಶಪಡಿಸಿಕೊಂಡು, ತಮ್ಮ ಹಾವ-ಭಾವಗಳಿಂದಲೂ, ತುಂಬಿದ ನೋಟಗಳಿಂದಲೂ, ಕಿರುನಗೆಯಿಂದಲೂ, ಸವಿ ಮಾತು ಮತ್ತು ಆಲಿಂಗನೆಗಳಿಂದಲೂ ಯಥೇಷ್ಟವಾಗಿ ಅವರೊಂದಿಗೆ ರಮಿಸುವರು. ಆ ಹಾಟಕ ರಸವನ್ನು ಕುಡಿದ ಮನುಷ್ಯನು ಮತ್ತಿನಿಂದ ಕುರುಡನಂತಾಗಿ ತಾನು ಹತ್ತು ಸಾವಿರ ಆನೆಗಳಷ್ಟು ಬಲವುಳ್ಳವನು ಎಂದು ಭಾವಿಸಿಕೊಂಡು ‘ನಾನೇ ಈಶ್ವರನು, ನಾನೇ ಸಿದ್ಧನು!’ ಎಂದು ಬಡಬಡಿಸತೊಡಗುವನು. ॥16॥

(ಗದ್ಯ - 17)

ಮೂಲಮ್

ತತೋಧಸ್ತಾದ್ವಿತಲೇ ಹರೋ ಭಗವಾನ್ಹಾಟಕೇಶ್ವರಃ ಸ್ವಪಾರ್ಷದಭೂತಗಣಾವೃತಃ ಪ್ರಜಾಪತಿಸರ್ಗೋಪ- ಬೃಂಹಣಾಯ ಭವೋ ಭವಾನ್ಯಾ ಸಹ ಮಿಥುನೀಭೂತ ಆಸ್ತೇ ಯತಃ ಪ್ರವೃತ್ತಾ ಸರಿತ್ಪ್ರವರಾ ಹಾಟಕೀ ನಾಮ ಭವಯೋರ್ವೀರ್ಯೇಣ ಯತ್ರ ಚಿತ್ರಭಾನುರ್ಮಾತರಿಶ್ವನಾ ಸಮಿಧ್ಯಮಾನ ಓಜಸಾ ಪಿಬತಿ ತನ್ನಿಷ್ಠ್ಯೂತಂ ಹಾಟಕಾಖ್ಯಂ ಸುವರ್ಣಂ ಭೂಷಣೇನಾಸುರೇಂದ್ರಾವ ರೋಧೇಷು ಪುರುಷಾಃ ಸಹ ಪುರುಷೀಭಿರ್ಧಾರಯಂತಿ ॥

ಅನುವಾದ

ಅದರ ಕೆಳಗಿನ ವಿತಲ ಲೋಕದಲ್ಲಿ ಭಗವಾನ್ ಹಾಟಕೇಶ್ವರನೆಂಬ ಹೆಸರಿನಿಂದ ಮಹಾದೇವನು ತನ್ನ ಪಾರ್ಷದರಾದ ಭೂತ ಗಣಗಳೊಂದಿಗೆ ವಾಸಮಾಡುತ್ತಾನೆ. ಅವನು ಪ್ರಜಾಪತಿಯ ಸೃಷ್ಟಿಯನ್ನು ವೃದ್ಧಿಪಡಿಸಲಿಕ್ಕಾಗಿ ಭವಾನಿಯೊಂದಿಗೆ ವಿಹರಿಸುತ್ತಾ ಇರುತ್ತಾನೆ. ಅವರಿಬ್ಬರ ತೇಜದಿಂದ ಅಲ್ಲಿ ಹಾಟಕೀ ಎಂಬ ಶ್ರೇಷ್ಠ ನದಿಯೊಂದು ಹರಿಯುತ್ತಿರುವುದು. ಅದರ ನೀರನ್ನು ವಾಯುವಿನಿಂದ ಪ್ರಜ್ವಲಿತವಾದ ಅಗ್ನಿಯು ತುಂಬಾ ಉತ್ಸಾಹದಿಂದ ಕುಡಿಯುತ್ತಾನೆ. ಅವನು ಕುಡಿದು ಉಗುಳುವ ಆ ರುದ್ರ ವೀರ್ಯಕ್ಕೆ ಹಾಟಕ ಸುವರ್ಣವೆಂದು ಹೆಸರು. ಆ ಸುವರ್ಣದಿಂದ ಮಾಡಿದ ಆಭರಣಗಳನ್ನು ದೈತ್ಯರಾಜನ ಅಂತಃಪುರದ ಸ್ತ್ರೀ-ಪುರುಷರೆಲ್ಲರೂ ಧರಿಸುತ್ತಾರೆ. ॥17॥

(ಗದ್ಯ - 18)

ಮೂಲಮ್

ತತೋಧಸ್ತಾತ್ಸುತಲೇ ಉದಾರಶ್ರವಾಃ ಪುಣ್ಯಶ್ಲೋಕೋ ವಿರೋಚನಾತ್ಮಜೋ ಬಲಿರ್ಭಗವತಾ ಮಹೇಂದ್ರಸ್ಯ ಪ್ರಿಯಂ ಚಿಕೀರ್ಷಮಾಣೇನಾದಿತೇರ್ಲಬ್ಧಕಾಯೋ ಭೂತ್ವಾ ವಟುವಾಮನರೂಪೇಣ ಪರಾಕ್ಷಿಪ್ತಲೋಕತ್ರಯೋ ಭಗವದನುಕಂಪಯೈವ ಪುನಃ ಪ್ರವೇಶಿತ ಇಂದ್ರಾದಿಷ್ವವಿದ್ಯಮಾನಯಾ ಸುಸಮೃದ್ಧಯಾ ಶ್ರಿಯಾಭಿಜುಷ್ಟಃ ಸ್ವಧರ್ಮೇಣಾರಾಧಯಂಸ್ತಮೇವ ಭಗವಂತಮಾರಾಧನೀಯಮಪಗತಸಾಧ್ವಸ ಆಸ್ತೇಧುನಾಪಿ ॥

ಅನುವಾದ

ವಿತಲದ ಕೆಳಗೆ ಸುತಲಲೋಕದಲ್ಲಿ ಮಹಾಯಶಸ್ವಿಯೂ, ಪವಿತ್ರಕೀರ್ತಿಯೂ ಆದ ವಿರೋಚನಪುತ್ರ ಬಲಿಯು ವಾಸವಾಗಿದ್ದಾನೆ. ಶ್ರೀಭಗವಂತನು ಇಂದ್ರನಿಗೆ ಪ್ರಿಯವನ್ನುಂಟು ಮಾಡಲು ಅದಿತಿಯ ಗರ್ಭದಿಂದ ವಾಮನವಟುವಿನ ರೂಪದಲ್ಲಿ ಅವತರಿಸಿ ಬಲಿಚಕ್ರವರ್ತಿಯಿಂದ ತ್ರಿಲೋಕಗಳನ್ನು ಕಿತ್ತುಕೊಂಡಿದ್ದನು. ಮತ್ತೆ ಭಗವಂತನ ಕೃಪೆಯಿಂದಲೇ ಅವನಿಗೆ ಈ ಲೋಕದಲ್ಲಿ ಪ್ರವೇಶವು ದೊರೆಯಿತು. ಇಂದ್ರನೇ ಮುಂತಾದವರಲ್ಲಿಯೂ ಇಲ್ಲದೆ ಇರುವ ಉತ್ಕೃಷ್ಟವಾದ ಸಂಪತ್ತನ್ನು ಭಗವದನುಗ್ರಹದಿಂದ ಅಲ್ಲಿ ಪಡೆದುಕೊಂಡು ಮಹಾತ್ಮನಾದ ಬಲಿಯು ತನ್ನ ಪೂಜ್ಯತಮನಾದ ಪ್ರಭುವನ್ನು ಧರ್ಮಾಚರಣೆಯ ಮೂಲಕ ಆರಾಧಿಸುತ್ತಾ ಇಂದಿಗೂ ಯಾವ ಭಯವೂ ಇಲ್ಲದೆ ವಾಸವಾಗಿದ್ದಾನೆ. ॥18॥

(ಗದ್ಯ - 19)

ಮೂಲಮ್

ನೋ ಏವೈತತ್ಸಾಕ್ಷಾತ್ಕಾರೋ ಭೂಮಿದಾನಸ್ಯ ಯತ್ತದ್ಭಗವತ್ಯಶೇಷಜೀವನಿಕಾಯಾನಾಂ ಜೀವಭೂತಾತ್ಮಭೂತೇ ಪರಮಾತ್ಮನಿ ವಾಸುದೇವೇ ತೀರ್ಥತಮೇ ಪಾತ್ರ ಉಪಪನ್ನೇ ಪರಯಾ ಶ್ರದ್ಧಯಾ ಪರಮಾದರಸಮಾಹಿತಮನಸಾ ಸಂಪ್ರತಿಪಾದಿತಸ್ಯ ಸಾಕ್ಷಾದಪವರ್ಗದ್ವಾರಸ್ಯ ಯದ್ಬಿಲನಿಲಯೈಶ್ವರ್ಯಮ್ ॥

ಅನುವಾದ

ಎಲೈ ರಾಜೇಂದ್ರನೇ! ಸಮಸ್ತ ಜೀವಿಗಳ ನಿಯಾಮಕನೂ, ಆತ್ಮ ಸ್ವರೂಪನೂ ಆದ ಪರಮಾತ್ಮನಾದ ಭಗವಾನ್ ಶ್ರೀವಾಸುದೇವನಂತಹ ಪೂಜ್ಯತಮ, ಪವಿತ್ರತಮ ಸತ್ಪಾತ್ರವು ಬಂದಾಗ ಅವನಿಗೆ ಅತ್ಯಂತ ಶ್ರದ್ಧೆ-ಆದರಗಳಿಂದ ಸ್ಥಿರವಾದ ಚಿತ್ತದಿಂದ ಮಾಡಿದ ಭೂಮಿ ದಾನಕ್ಕಾಗಿ ಬಲೀಂದ್ರನಿಗೆ ದೊರೆತ ಸುತಲಲೋಕದ ಐಶ್ವರ್ಯವು ಮುಖ್ಯಲವಲ್ಲ. ಈ ಐಶ್ವರ್ಯವಾದರೋ ಅನಿತ್ಯವಾಗಿದೆ. ಆದರೆ ಆ ಭೂಮಿದಾನವಾದರೋ ಸಾಕ್ಷಾತ್ ಮೋಕ್ಷದ ದ್ವಾರವೇ ಆಗಿದೆ. ॥19॥

(ಗದ್ಯ - 20)

ಮೂಲಮ್

ಯಸ್ಯ ಹ ವಾವ ಕ್ಷುತಪತನಪ್ರಸ್ಖಲನಾದಿಷು ವಿವಶಃ ಸಕೃನ್ನಾಮಾಭಿಗೃಣನ್ ಪುರುಷಃ ಕರ್ಮಬಂಧನಮಂಜಸಾ ವಿಧುನೋತಿ ಯಸ್ಯ ಹೈವ ಪ್ರತಿಬಾಧನಂ ಮುಮುಕ್ಷವೋನ್ಯಥೈವೋ ಪಲಭಂತೇ ॥

ಅನುವಾದ

ಮುಮುಕ್ಷುಗಳು ಯೋಗಸಾಧನೆ ಮುಂತಾದ ಬೇರೆ ಉಪಾಯಗಳನ್ನು ಆಶ್ರಯಿಸಿ ಕರ್ಮಬಂಧನವನ್ನು ಬಹಳ ಕಷ್ಟದಿಂದ ಕಡಿದುಕೊಳ್ಳಲಾರರೋ, ಅಂತಹ ಕರ್ಮ ಬಂಧನವನ್ನು ಭಗವಂತನ ದಿವ್ಯನಾಮವನ್ನು ಸೀನುವಾಗ, ಬೀಳುವಾಗ, ಕೆಮ್ಮುವಾಗ, ವಿವಶವಾದಾಗ ಒಮ್ಮೆ ಕೊಂಡಾಡಿದರೆ ಮನುಷ್ಯನು ಸುಲಭ ವಾಗಿ ಕಳೆದುಕೊಳ್ಳುವನು. ॥20॥

(ಗದ್ಯ - 21)

ಮೂಲಮ್

ತದ್ಭಕ್ತಾನಾಮಾತ್ಮವತಾಂ ಸರ್ವೇಷಾಮಾತ್ಮನ್ಯಾತ್ಮದ ಆತ್ಮತಯೈವ ॥

ಅನುವಾದ

ಆದುದರಿಂದ ಸಂಯಮೀ ಭಕ್ತರಿಗೆ ಮತ್ತು ಜ್ಞಾನಿಗಳಿಗೆ ತನ್ನ ಸ್ವರೂಪವನ್ನೇ ಪ್ರದಾನ ಮಾಡುವ ಸಮಸ್ತ ಪ್ರಾಣಿಗಳ ಆತ್ಮನಾದ ಶ್ರೀಭಗವಂತನಿಗೆ ಆತ್ಮಭಾವದಿಂದ ಮಾಡಿದ ಭೂಮಿದಾನಕ್ಕೆ ಈ ಸುತಲ ಲೋಕದ ಪ್ರಾಪ್ತಿಯು ಮುಖ್ಯಫಲವಾಗಲಾರದು.॥21॥

(ಗದ್ಯ - 22)

ಮೂಲಮ್

ನ ವೈ ಭಗವಾನ್ನೂನಮಮುಷ್ಯಾನುಜಗ್ರಾಹ ಯದುತ ಪುನರಾತ್ಮಾನುಸ್ಮೃತಿಮೋಷಣಂ ಮಾಯಾಮಯಭೋಗೈಶ್ವರ್ಯಮೇವಾತನುತೇತಿ ॥

ಅನುವಾದ

ತನ್ನ ಸರ್ವಸ್ವವನ್ನು ಸಮರ್ಪಣೆಮಾಡಿದ ಭಕ್ತಶ್ರೇಷ್ಠನಾದ ಬಲೀಂದ್ರನಿಗೆ ಶ್ರೀಭಗವಂತನು ಆ ಸಮರ್ಪಣೆಯ ಬದಲಿಗೆ ತನ್ನನ್ನು ಮರೆಸುವಂತಹ ಈ ಮಾಯಾಮಯವಾದ ಐಶ್ವರ್ಯವಷ್ಟನ್ನೇ ಕೊಟ್ಟಿದ್ದರೆ ಅದು ದೊಡ್ಡ ಅನು ಗ್ರಹವೇನೂ ಆಗುತ್ತಿರಲಿಲ್ಲ. ॥22॥

(ಗದ್ಯ - 23)

ಮೂಲಮ್

ಯತ್ತದ್ ಭಗವತಾನಧಿಗತಾನ್ಯೋಪಾಯೇನ ಯಾಚ್ಞಾಚ್ಛಲೇನಾಪಹೃತಸ್ವಶರೀರಾವಶೇಷಿತ-ಲೋಕತ್ರಯೋ ವರುಣಪಾಶೈಶ್ಚ ಸಂಪ್ರತಿಮುಕ್ತೋ ಗಿರಿದರ್ಯಾಂ ಚಾಪವಿದ್ಧ ಇತಿ ಹೋವಾಚ ॥

ಅನುವಾದ

ಬೇರಾವ ಉಪಾಯ ವನ್ನು ಕಾಣದೆ ಶ್ರೀಭಗವಂತನು ಯಾಚನೆಮಾಡುವ ಕಪಟ ವ್ಯಾಜದಿಂದ ಆತನ ತ್ರೈಲೋಕ್ಯರಾಜ್ಯವನ್ನು ಕಿತ್ತುಕೊಂಡು ಶರೀರ ಮಾತ್ರವೇ ಉಳಿಯುವಂತೆ ಮಾಡಿ, ವರುಣಪಾಶದಿಂದ ಕಟ್ಟಿ ಪರ್ವತದ ಗುಹೆಯಲ್ಲಿ ಹಾಕಿ ಭಗವಂತನು ಮೊದಲಿಗೆ ಎರಡು ಪಾದಗಳಿಂದ ಭೂಮ್ಯಾಕಾಶವನ್ನು ಅಳೆದುಕೊಂಡಿದ್ದು ಮೂರನೇ ಪಾದವನ್ನು ಎಲ್ಲಿಡಲೀ ಎಂದು ಕೇಳಿದಾಗ ಬಲಿ ಚಕ್ರವರ್ತಿಯು ಆತ್ಮಸಮರ್ಪಣ ಮಾಡಿಕೊಂಡು ನನ್ನ ತಲೆಯ ಮೇಲೆ ಇರಿಸೆಂದು ಹೇಳಿದನು. ಇಂತಹ ಭಾಗವತೋತ್ತಮನಾದ ಬಲಿಯು ಹೀಗೆ ಅಂದುಕೊಂಡನು. ॥23॥

(ಗದ್ಯ - 24)

ಮೂಲಮ್

ನೂನಂ ಬತಾಯಂ ಭಗವಾನರ್ಥೇಷು ನ ನಿಷ್ಣಾತೋ ಯೋಸಾವಿಂದ್ರೋ ಯಸ್ಯ ಸಚಿವೋ ಮಂತ್ರಾಯ ವೃತ ಏಕಾಂತತೋ ಬೃಹಸ್ಪತಿಸ್ತಮತಿಹಾಯ ಸ್ವಯಮುಪೇಂದ್ರೇಣಾತ್ಮಾನಮಯಾಚತಾತ್ಮನಶ್ಚಾಶಿಷೋ ನೋ ಏವ ತದ್ದಾಸ್ಯಮತಿಗಂಭೀರವಯಸಃ ಕಾಲಸ್ಯ ಮನ್ವಂತರಪರಿವೃತ್ತಂ ಕಿಯಲ್ಲೋಕತ್ರಯಮಿದಮ್ ॥

ಅನುವಾದ

ಈ ಐಶ್ವರ್ಯಶಾಲಿಯಾದ ಇಂದ್ರನು ವಿದ್ವಾಂಸನಾಗಿದ್ದರೂ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವಿಷಯದಲ್ಲಿ ಕುಶಲನಲ್ಲ. ಈತನು ತನ್ನ ಸಮ್ಮತಿಯನ್ನು ಪಡೆಯಲಿಕ್ಕಾಗಿ ಇತರರನ್ನು ಬಿಟ್ಟು ಮಹಾ ಬುದ್ಧಿಶಾಲಿಯಾದ ಬೃಹಸ್ಪತಿಯನ್ನೇ ತನ್ನ ಮಂತ್ರಿಯನ್ನಾಗಿಸಿ ಕೊಂಡನು. ಆದರೂ ಅವಿವೇಕದಿಂದ ಆತನನ್ನು ಅನಾದರಿಸಿ ಶ್ರೀಭಗವಂತನಿಂದ ಆತನ ದಾಸ್ಯವನ್ನು ಕೇಳಿಕೊಳ್ಳದೆ ಆತನ ಮೂಲಕ ತನಗಾಗಿ ನನ್ನಿಂದ ಭೋಗಗಳನ್ನೇ ಬೇಡಿದನು. ಈ ತ್ರೈಲೋಕ್ಯರಾಜ್ಯವೇನೂ ಸ್ಥಿರವಲ್ಲ. ಅನಂತಕಾಲದ ಒಂದು ಅವಯವವಾಗಿರುವ ಒಂದು ಮನ್ವಂತರಕಾಲ ಮಾತ್ರ ಇರುವುದು. ಶ್ರೀಭಗವಂತನ ಕೈಂಕರ್ಯದ ಮುಂದೆ ಈ ತುಚ್ಛವಾದ ಭೋಗಗಳಿಗೆ ಯಾವ ಬೆಲೆ ಇದೆ? ॥24॥

(ಗದ್ಯ - 25)

ಮೂಲಮ್

ಯಸ್ಯಾನು- ದಾಸ್ಯಮೇವಾಸ್ಮತ್ಪಿತಾಮಹಃ ಕಿಲ ವವ್ರೇ ನ ತು ಸ್ವಪಿತ್ರ್ಯಂ ಯದುತಾಕುತೋಭಯಂ ಪದಂ ದೀಯಮಾನಂ ಭಗವತಃ ಪರಮಿತಿ ಭಗವತೋಪರತೇ ಖಲು ಸ್ವಪಿತರಿ ॥

ಅನುವಾದ

ನಮ್ಮ ತಾತನಾದ ಪ್ರಹ್ಲಾದನಾದರೋ ಶ್ರೀಭಗವಂತನಿಂದ ತನ್ನ ತಂದೆಯಾದ ಹಿರಣ್ಯಕಶಿಪು ಸಂಹರಿಸಲ್ಪಟ್ಟಾಗ ಆ ಭಗವಂತನಿಂದ ಭಗವತ್ಸೇವೆಯ ವರವನ್ನು ಮಾತ್ರ ಬೇಡಿ ಕೊಂಡನು. ಭಗವಂತನು ತನಗೆ ನಿಷ್ಕಂಟಕವಾದ ತಂದೆಯ ರಾಜ್ಯವನ್ನು ಕೊಡುವವನಾಗಿದ್ದರೂ,ಅದು ಭಗವಂತನಿಂದ ದೂರ ಮಾಡುವುದು ಎಂದರಿತು ಅದನ್ನು ಸ್ವೀಕರಿಸಲಿಲ್ಲ. ॥25॥

(ಗದ್ಯ - 26)

ಮೂಲಮ್

ತಸ್ಯ ಮಹಾನುಭಾವಸ್ಯಾನುಪಥಮಮೃಜಿತಕಷಾಯಃ ಕೋ ವಾಸ್ಮದ್ವಿಧಃ ಪರಿಹೀಣಭಗವದನುಗ್ರಹ ಉಪಜಿಗಮಿಷತೀತಿ ॥

ಅನುವಾದ

ಅವರು ದೊಡ್ಡ ಮಹಾನುಭಾವರಾಗಿದ್ದರು. ನನ್ನ ಮೇಲಾದರೋ ಭಗವಂತನ ಕೃಪೆಯೂ ಇಲ್ಲ. ನನ್ನ ವಾಸನೆಗಳೂ ಶಾಂತವಾಗಲಿಲ್ಲ. ಮತ್ತೆ ನನ್ನಂತಹ ಯಾವನು ಅವರ ಬಳಿಗೆ ತಲುಪುವ ಸಾಹಸ ಮಾಡಿಯಾನು? ॥26॥

(ಗದ್ಯ - 27)

ಮೂಲಮ್

ತಸ್ಯಾನುಚರಿತಮುಪರಿಷ್ಟಾದ್ವಿಸ್ತರಿಷ್ಯತೇ ಯಸ್ಯ ಭಗವಾನ್ ಸ್ವಯಮಖಿಲಜಗದ್ಗುರುರ್ನಾರಾಯಣೋ ದ್ವಾರಿ ಗದಾಪಾಣಿರವತಿಷ್ಠತೇ ನಿಜಜನಾನುಕಂಪಿತಹೃದಯೋ ಯೇನಾಂಗುಷ್ಠೇನ ಪದಾ ದಶಕಂಧರೋ ಯೋಜನಾಯುತಾಯುತಂ ದಿಗ್ವಿಜಯ ಉಚ್ಚಾಟಿತಃ ॥

ಅನುವಾದ

ರಾಜೇಂದ್ರನೇ! ಈ ಬಲಿಯ ಚರಿತ್ರವನ್ನು ಮುಂದೆ (ಎಂಟನೆಯ ಸ್ಕಂಧದಲ್ಲಿ) ನಾವು ವಿಸ್ತಾರವಾಗಿ ಹೇಳುವೆವು. ತನ್ನ ಭಕ್ತರ ಕುರಿತು ಭಗವಂತನ ಹೃದಯವು ದಯೆಯಿಂದ ತುಂಬಿರುತ್ತದೆ. ಅದರಿಂದಲೇ ಅಖಿಲ ಜಗತ್ತಿನ ಪೂಜನೀಯ ಗುರುವಾಗಿರುವ ಭಗವಾನ್ ನಾರಾಯಣನು ಕೈಯಲ್ಲಿ ಗದೆಯನ್ನು ಧರಿಸಿಕೊಂಡು ಸುತಲಲೋಕದಲ್ಲಿ ಬಲಿ ಚಕ್ರವರ್ತಿಯ ಮನೆಯ ಬಾಗಿಲಲ್ಲಿ ಸದಾಕಾಲ ಉಪಸ್ಥಿತ ನಾಗಿದ್ದಾನೆ. ದುರಹಂಕಾರಿ ರಾವಣನು ಒಮ್ಮೆ ದಿಗ್ವಿಜಯ ಮಾಡುತ್ತಾ ಸುತಲ ಲೋಕಕ್ಕೆ ಬಂದಾಗ ಭಗವಂತನು ಅವನನ್ನು ತನ್ನ ಕಾಲಿನ ಅಂಗುಷ್ಠದಿಂದಲೇ ಲಕ್ಷಾಂತರ ಯೋಜನ ದೂರಕ್ಕೆ ಎಸೆದು ಬಿಟ್ಟಿದ್ದನು. ॥27॥

(ಗದ್ಯ - 28)

ಮೂಲಮ್

ತತೋಧಸ್ತಾತ್ತಲಾತಲೇ ಮಯೋ ನಾಮ ದಾನವೇಂದ್ರಸಿಪುರಾಧಿಪತಿರ್ಭಗವತಾ ಪುರಾರಿಣಾ ತ್ರಿಲೋಕೀಶಂ ಚಿಕೀರ್ಷುಣಾ ನಿರ್ದಗ್ಧಸ್ವಪುರತ್ರಯಸ್ತತ್ಪ್ರಸಾದಾಲ್ಲಬ್ಧಪದೋ ಮಾಯಾವಿನಾಮಾಚಾರ್ಯೋ ಮಹಾದೇವೇನ ಪರಿರಕ್ಷಿತೋ ವಿಗತಸುದರ್ಶನಭಯೋ ಮಹೀಯತೇ ॥

ಅನುವಾದ

ಸುತಲ ಲೋಕದ ಕೆಳಗೆ ತಲಾತಲಲೋಕವಿದೆ. ಅಲ್ಲಿ ತ್ರಿಪುರಾಧಿಪತಿ ದಾನವರಾಜ ಮಯನು ಇರುತ್ತಾನೆ. ಹಿಂದೆ ತ್ರಿಲೋಕಕ್ಕೆ ಮಂಗಳವನ್ನುಂಟು ಮಾಡುವುದಕ್ಕಾಗಿ ಭಗವಾನ್ ಶಂಕರನು ಅವನ ಮೂರೂ ಪುರವನ್ನು ಸುಟ್ಟುಬೂದಿ ಮಾಡಿದ್ದನು. ಮತ್ತೆ ಅವನ ಕೃಪೆಯಿಂದಲೇ ಮಯನಿಗೆ ಈ ಸ್ಥಾನವು ದೊರೆಯಿತು. ಮಯನು ಮಾಯಾವಿಗಳ ಪರಮ ಗುರುವಾಗಿದ್ದಾನೆ ಮತ್ತು ದೇವ ದೇವ ಮಹಾದೇವನಿಂದ ಸುರಕ್ಷಿತನಾಗಿದ್ದಾನೆ. ಅದರಿಂದ ಅವನಿಗೆ ಸುದರ್ಶನಚಕ್ರ ದಿಂದಲೂ ಯಾವುದೇ ಭಯವಿಲ್ಲ. ಅಲ್ಲಿಯ ನಿವಾಸಿಗಳು ಅವನನ್ನು ತುಂಬಾ ಆದರಿಸುತ್ತಾರೆ. ॥28॥

(ಗದ್ಯ - 29)

ಮೂಲಮ್

ತತೋಧಸ್ತಾನ್ಮಹಾತಲೇ ಕಾದ್ರವೇಯಾಣಾಂ ಸರ್ಪಾಣಾಂ ನೈಕಶಿರಸಾಂ ಕ್ರೋಧವಶೋ ನಾಮ ಗಣಃ ಕುಹಕತಕ್ಷಕಕಾಲೀಯಸುಷೇಣಾದಿಪ್ರಧಾನಾ ಮಹಾಭೋಗವಂತಃ ಪತತಿರಾಜಾಧಿಪತೇಃ ಪುರುಷವಾಹಾದನವರತಮುದ್ವಿಜಮಾನಾಃ ಸ್ವಕಲತ್ರಾಪತ್ಯಸುಹೃತ್ಕುಟುಂಬಸಂಗೇನ ಕ್ವಚಿತ್ಪ್ರಮತ್ತಾ ವಿಹರಂತಿ ॥

ಅನುವಾದ

ಅದರ ಕೆಳಗೆ ಮಹಾತಲದಲ್ಲಿ ಕದ್ರುವಿನಿಂದ ಉತ್ಪನ್ನರಾದ ಅನೇಕ ತಲೆಗಳುಳ್ಳ ‘ಕ್ರೋಧವಶ’ರೆಂಬ ಸರ್ಪಗಳ ಒಂದು ಸಮುದಾಯವು ವಾಸಿಸುತ್ತದೆ. ಅವರಲ್ಲಿ ಕುಹಕ, ತಕ್ಷಕ, ಕಾಲಿಯ ಮತ್ತು ಸುಷೇಣ ಮುಂತಾದವರು ಮುಖ್ಯ ರಾಗಿದ್ದಾರೆ. ಅವರಿಗೆ ದೊಡ್ಡ-ದೊಡ್ಡ ಹೆಡೆಗಳಿವೆ. ಅವರು ಸದಾಕಾಲ ಭಗವಂತನ ವಾಹನನಾದ ಪಕ್ಷಿರಾಜ ಗರುಡನಿಗೆ ಹೆದರುತ್ತಾ ಇರುತ್ತಾರೆ. ಹೀಗಿದ್ದರೂ ಕೆಲವೊಮ್ಮೆ ತಮ್ಮ ಪತ್ನೀ, ಪುತ್ರರು, ಮಿತ್ರರು, ಬಂಧು-ಬಾಂಧವರ ಸಂಗದಲ್ಲಿ ಮತ್ತೇರಿ ವಿಹರಿಸುತ್ತಾ ಇರುವರು. ॥29॥

(ಗದ್ಯ - 30)

ಮೂಲಮ್

ತತೋಧಸ್ತಾದ್ರಸಾತಲೇ ದೈತೇಯಾ ದಾನವಾಃ ಪಣಯೋ ನಾಮ ನಿವಾತಕವಚಾಃ ಕಾಲೇಯಾ ಹಿರಣ್ಯಪುರವಾಸಿನ ಇತಿ ವಿಬುಧಪ್ರತ್ಯನೀಕಾ ಉತ್ಪತ್ತ್ಯಾ ಮಹೌಜಸೋ ಮಹಾಸಾಹಸಿನೋ ಭಗವತಃ ಸಕಲಲೋಕಾನುಭಾವಸ್ಯ ಹರೇರೇವ ತೇಜಸಾ ಪ್ರತಿಹತಬಲಾವಲೇಪಾ ಬಿಲೇಶಯಾ ಇವ ವಸಂತಿ ಯೇ ವೈ ಸರಮಯೇಂದ್ರದೂತ್ಯಾ ವಾಗ್ಭಿರ್ಮಂತ್ರವರ್ಣಾಭಿರಿಂದ್ರಾದ್ಬಿಭ್ಯತಿ ॥

ಅನುವಾದ

ಅದರ ಕೆಳಗೆ ರಸಾತಲದಲ್ಲಿ ‘ಪಣಿ’ ಎಂಬ ದೈತ್ಯರು-ದಾನವರು ಇರುತ್ತಾರೆ. ಇವರು ನಿವಾತಕವಚ, ಕಾಲೇಯ ಮತ್ತು ಹಿರಣ್ಯ ಪುರವಾಸಿಗಳು ಎಂದೂ ಕರೆಸಲ್ಪಡುವರು. ಇವರಿಗೆ ದೇವತೆಗಳೊಂದಿಗೆ ವೈರವಿದೆ. ಇವರು ಹುಟ್ಟಿನಿಂದಲೇ ಅತಿಬಲಾಢ್ಯರೂ, ಮಹಾನ್ ಸಾಹಸಿಗಳೂ ಆಗಿರುತ್ತಾರೆ. ಆದರೆ ಸಮಸ್ತ ಲೋಕಗಳಲ್ಲಿ ಹರಡಿರುವ ಪ್ರಭಾವವುಳ್ಳ ಶ್ರೀಹರಿಯ ತೇಜದಿಂದ ಬಲ-ಅಭಿಮಾನಗಳು ಚೂರು-ಚೂರಾಗಿ ಹೋದಕಾರಣ ಇವರು ಸರ್ಪಗಳಂತೆ ಅಡಗಿಕೊಂಡೇ ಇರುವರು ಹಾಗೂ ಇಂದ್ರನ ದೂತಿಯಾದ ಸರಮಾ ಎಂಬ ದೇವಶುನಿಯು ನುಡಿದ ಮಂತ್ರ ರೂಪವಾದ* ಶಾಪಕ್ಕೆ ಹೆದರಿ ಇಂದ್ರನಿಗೆ ಭಯ ಪಡುತ್ತಾರೆ. ॥30॥

ಟಿಪ್ಪನೀ
  • ಪಣಿಗಳೆಂಬ ದೈತ್ಯರು ಪೃಥ್ವಿಯನ್ನು ಅಪಹರಿಸಿ ರಸಾತಳದಲ್ಲಿ ಬಚ್ಚಿಟ್ಟರು. ಆಗ ಇಂದ್ರನು ಅದನ್ನು ಹುಡುಕುವುದಕ್ಕಾಗಿ ಸರಮಾ ಎಂಬ ಒಂದು ದೂತಿಯನ್ನು ಕಳಿಸಿದ್ದನು. ಸರಮೆಯು ದೈತ್ಯರಲ್ಲಿ ಸಂಧಿಮಾಡಲು ಬಯಸಿದಳು. ಆದರೆ ಸರಮೆಯು ಸಂಧಿಮಾಡದೆ ಇಂದ್ರನನ್ನು ಸ್ತುತಿಸುತ್ತಾ ‘ಹತಾ ಇಂದ್ರೇಣ ಪಣಯಃ ಶಯಧ್ವಮ್’ (ಎಲೈ ಪಣಿಗಳೇ ! ನೀವು ಇಂದ್ರನ ಕೈಯಿಂದ ಹತರಾಗಿ ಭೂಮಿಯಲ್ಲಿ ಮಲಗಿಬಿಡಿರಿ) ಎಂದು ಶಪಿಸಿದಳು. ಈ ಶಾಪದಿಂದಾಗಿ ಅವರಿಗೆ ಇಂದ್ರನ ಭಯವು ಪೀಡಿಸುತ್ತಿರುವುದು ; ಎಂಬ ಒಂದು ಕಥೆಯಿದೆ.

(ಗದ್ಯ - 31)

ಮೂಲಮ್

ತತೋಧಸ್ತಾತ್ಪಾತಾಲೇ ನಾಗಲೋಕಪತಯೋ ವಾಸು- ಕಿಪ್ರಮುಖಾಃ ಶಂಖಕುಲಿಕಮಹಾಶಂಖಶ್ವೇತಧನಂಜಯ- ಧೃತರಾಷ್ಟ್ರಶಂಖಚೂಡಕಂಬಲಾಶ್ವತರದೇವದತ್ತಾದಯೋ ಮಹಾ ಭೋಗಿನೋ ಮಹಾಮರ್ಷಾ ನಿವಸಂತಿ ಯೇ- ಷಾಮು ಹ ವೈ ಪಂಚಸಪ್ತದಶಶತಸಹಸ್ರಶೀರ್ಷಾಣಾಂ ಣಾಸು ವಿರಚಿತಾ ಮಹಾಮಣಯೋ ರೋಚಿಷ್ಣವಃ ಪಾತಾಲವಿವರತಿಮಿರನಿಕರಂ ಸ್ವರೋಚಿಷಾ ವಿಧಮಂತಿ ॥

ಅನುವಾದ

ರಸಾತಳದ ಕೆಳಗೆ ಪಾತಾಳವಿದೆ. ಅಲ್ಲಿ ಶಂಖ, ಕುಲಿಕ, ಮಹಾ ಶಂಖ ಶ್ವೇತ ಧನಂಜಯ, ಧೃತರಾಷ್ಟ್ರ, ಶಂಖಚೂಡ, ಕಂಬಲ, ಅಶ್ವತರ ಮತ್ತು ದೇವದತ್ತ ಮುಂತಾದ ಭಾರೀ ಕ್ರೋಧವುಳ್ಳ ದೊಡ್ಡ-ದೊಡ್ಡ ಹೆಡೆಯುಳ್ಳ ನಾಗಗಳು ವಾಸಿಸುತ್ತಾರೆ. ಇವರಲ್ಲಿ ವಾಸುಕಿಯು ಮುಖ್ಯನಾಗಿದ್ದಾನೆ. ಅವರಲ್ಲಿ ಕೆಲವರಿಗೆ ಐದು, ಕೆಲವರಿಗೆ ಏಳು, ಕೆಲವರಿಗೆ ಹತ್ತು, ಕೆಲವರಿಗೆ ನೂರು ಮತ್ತು ಕೆಲವರಿಗೆ ಸಾವಿರ ಹೆಡೆಗಳಿವೆ. ಅವರ ಹೆಡೆಗಳಲ್ಲಿ ಹೊಳೆಯುತ್ತಿರುವ ಮಣಿಗಳು ತಮ್ಮ ಪ್ರಕಾಶದಿಂದ ಪಾತಾಳಲೋಕದ ಎಲ್ಲ ಕತ್ತಲೆಯನ್ನು ದೂರಗೊಳಿಸುತ್ತಾರೆ. ॥31॥

ಅನುವಾದ (ಸಮಾಪ್ತಿಃ)

ಇಪ್ಪತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥24॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ರಾಹ್ವಾದಿಸ್ಥಿತಿಬಿಲಸ್ವರ್ಗಮರ್ಯಾದಾನಿರೂಪಣಂ ನಾಮ ಚತುರ್ವಿಂಶೋಽಧ್ಯಾಯಃ ॥24॥