[ಇಪ್ಪತ್ತಮೂರನೆಯ ಅಧ್ಯಾಯ]
ಮೂಲಮ್
ಶಿಶುಮಾರ ಚಕ್ರದ ವರ್ಣನೆ
(ಗದ್ಯ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥ ತಸ್ಮಾತ್ಪರತಸಯೋದಶಲಕ್ಷಯೋಜನಾಂತರತೋ ಯತ್ತದ್ವಿಷ್ಣೋಃ ಪರಮಂ ಪದಮಭಿವದಂತಿ ಯತ್ರ ಹ ಮಹಾಭಾಗವತೋ ಧ್ರುವ ಔತ್ತಾನಪಾದಿರಗ್ನಿನೇಂದ್ರೇಣ ಪ್ರಜಾಪತಿನಾ ಕಶ್ಯಪೇನ ಧರ್ಮೇಣ ಚ ಸಮಕಾಲಯುಗ್ಭಿಃ ಸಬಹುಮಾನಂ ದಕ್ಷಿಣತಃ ಕ್ರಿಯಮಾಣ ಇದಾನೀಮಪಿ ಕಲ್ಪಜೀವಿನಾಮಾಜೀವ್ಯ ಉಪಾಸ್ತೆ ತಸ್ಯೇಹಾನುಭಾವ ಉಪವರ್ಣಿತಃ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜೇಂದ್ರನೇ! ಸಪ್ತರ್ಷಿಮಂಡಲಕ್ಕಿಂತ ಹದಿಮೂರುಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಧ್ರುವಲೋಕವಿದೆ. ಇದನ್ನು ಭಗವಾನ್ ವಿಷ್ಣುವಿನ ಪರಮಪದವೆಂದು ಹೇಳುತ್ತಾರೆ. ಇಲ್ಲಿ ಉತ್ತಾನಪಾದನ ಪುತ್ರನಾದ ಪರಮಭಾಗವತೋತ್ತಮ ಧ್ರುವನು ಬೆಳಗುತ್ತಿದ್ದಾನೆ. ಅಗ್ನಿ, ಇಂದ್ರ, ಪ್ರಜಾಪತಿ, ಕಶ್ಯಪ ಮತ್ತು ಧರ್ಮ ಇವರೆಲ್ಲರೂ ಒಟ್ಟಿಗೆ ಅತ್ಯಾದರಪೂರ್ವಕ ವಾಗಿ ಆ ಧ್ರುವನನ್ನು ಪ್ರದಕ್ಷಿಣೆ ಮಾಡುತ್ತಿದ್ದಾರೆ. ಈಗಲೂ ಕೂಡ ಕಲ್ಪಾಂತ್ಯದವರೆಗೆ ಜೀವಿಸಿರುವ ಚಿರಂಜೀವಿಗಳಿಗೆ ಈ ಧ್ರುವನೇ ಆಧಾರ. ಈ ಲೋಕದ ಪ್ರಭಾವವನ್ನು ನಾನು ಹಿಂದೆಯೇ (ನಾಲ್ಕನೆಯ ಸ್ಕಂಧದಲ್ಲಿ) ವರ್ಣಿಸಿರುವೆನು. ॥1॥
(ಗದ್ಯ - 2)
ಮೂಲಮ್
ಸ ಹಿ ಸರ್ವೇಷಾಂ ಜ್ಯೋತಿರ್ಗಣಾನಾಂ ಗ್ರಹನಕ್ಷತ್ರಾದೀನಾಮನಿಮಿಷೇಣಾವ್ಯಕ್ತರಂಹಸಾ ಭಗವತಾ ಕಾಲೇನ ಭ್ರಾಮ್ಯಮಾಣಾನಾಂ ಸ್ಥಾಣುರಿವಾವಷ್ಟಂಭ ಈಶ್ವರೇಣ ವಿಹಿತಃ ಶಶ್ವದವಭಾಸತೇ ॥
ಅನುವಾದ
ಸದಾಕಾಲ ಎಚ್ಚರವಾಗಿರುವ ಅವ್ಯಕ್ತಗತಿಯುಳ್ಳ ಭಗವಾನ್ಕಾಲನ ಮೂಲಕ ಗ್ರಹನಕ್ಷತ್ರಾದಿ ಜ್ಯೋತಿರ್ಗಣಗಳೆಲ್ಲರೂ ನಿರಂತರ ತಿರುಗುತ್ತಾ ಇರುತ್ತಾರೆ. ಭಗವಂತನು ಧ್ರುವಲೋಕವನ್ನೇ ಅವರೆಲ್ಲರ ಆಧಾರಸ್ತಂಭವಾಗಿ ನಿಯಮಿಸಿರುವನು. ಆದ್ದರಿಂದ ಈ ಧ್ರುವಲೋಕವು ಒಂದೇ ಜಾಗದಲ್ಲಿ ಇದ್ದು ಸದಾ ಪ್ರಕಾಶಿಸುತ್ತಾ ಇರುತ್ತದೆ. ॥2॥
(ಗದ್ಯ - 3)
ಮೂಲಮ್
ಯಥಾ ಮೇಢೀಸ್ತಂಭ ಆಕ್ರಮಣಪಶವಃ ಸಂಯೋಜಿತಾಸಿಭಿಸಿಭಿಃ ಸವನೈರ್ಯಥಾಸ್ಥಾನಂ ಮಂಡಲಾನಿ ಚರಂತ್ಯೇವಂ ಭಗಣಾ ಗ್ರಹಾದಯ ಏತಸ್ಮಿನ್ನಂತರ್ಬಹಿರ್ಯೋಗೇನ ಕಾಲಚಕ್ರ ಆಯೋಜಿತಾ ಧ್ರುವಮೇವಾವಲಂಬ್ಯ ವಾಯುನೋದೀರ್ಯಮಾಣಾ ಆಕಲ್ಪಾಂತಂ ಪರಿಚಂಕ್ರಮಂತಿ ನಭಸಿ ಯಥಾ ಮೇಘಾಃ ಶ್ಯೇನಾದಯೋ ವಾಯುವಶಾಃ ಕರ್ಮಸಾರಥಯಃ ಪರಿವರ್ತಂತೇ ಏವಂ ಜ್ಯೋತಿರ್ಗಣಾಃ ಪ್ರಕೃತಿಪುರುಷಸಂಯೋಗಾನುಗೃಹೀತಾಃ ಕರ್ಮನಿರ್ಮಿತಗತಯೋ ಭುವಿ ನ ಪತಂತಿ ॥
ಅನುವಾದ
ಧಾನ್ಯವನ್ನು ತುಳಿಸುವುದಕ್ಕಾಗಿ ಮೇಟಿಯ ಕಂಬಕ್ಕೆ ಹಗ್ಗಗಳಿಂದ ಬಿಗಿಯಲ್ಪಟ್ಟ ಎತ್ತುಗಳು ಎಂದಿಗೂ ಆ ನೆಲೆಯನ್ನು ಬಿಡದೆ ಮಂಡಲಾಕಾರವಾಗಿ ಆ ಕಂಬವನ್ನೇ ಸುತ್ತುತ್ತಿರುವಂತೆಯೇ, ಸೂರ್ಯನೇ ಮುಂತಾದ ಗ್ರಹರೂ, ನಕ್ಷತ್ರಗಳೂ ಆ ಕಾಲಚಕ್ರದ ಒಳಗೂ-ಹೊರಗೂ ಅದರಲ್ಲಿ ನೇಮಕ ಗೊಂಡು ಧ್ರುವಲೋಕವನ್ನೇ ಆಶ್ರಯಿಸಿ, ವಾಯುವಿನ ಪ್ರೇರಣೆಯಿಂದ ಕಲ್ಪದ ಕೊನೆಯ ವರೆಗೆ ತಿರುಗುತ್ತಾ ಇರುತ್ತವೆ. ಮೋಡಗಳೂ, ಹದ್ದು ಮೊದಲಾದ ಹಕ್ಕಿಗಳು ಕರ್ಮಗಳಿಗೆ ಅಧೀನರಾಗಿ ವಾಯುವಿಗೆ ಅಧೀನರಾಗಿ ಆಕಾಶದಲ್ಲಿ ಹಾರುತ್ತಾ ಇರುವಂತೆಯೇ, ಗ್ರಹ-ನಕ್ಷತ್ರಾದಿಗಳು ತಮ್ಮ-ತಮ್ಮ ಕರ್ಮಗಳಿಗನು ಸಾರವಾಗಿ ಭೂಮಿಗೆ ಬೀಳದೆ ಆ ಕಾಲಚಕ್ರದಲ್ಲೇ ಸುತ್ತುತ್ತಿರುವರು.॥3॥
(ಗದ್ಯ - 4)
ಮೂಲಮ್
ಕೇಚನೈತಜ್ಜ್ಯೋತಿರನೀಕಂ ಶಿಶುಮಾರಸಂಸ್ಥಾನೇನ ಭಗವತೋ ವಾಸುದೇವಸ್ಯ ಯೋಗಧಾರಣಾಯಾಮನುವರ್ಣಯಂತಿ ॥
ಅನುವಾದ
ಕೆಲವರು ಭಗವಂತನ ಯೋಗಮಾಯೆಯ ಆಧಾರದಲ್ಲಿ ನೆಲೆಸಿರುವ ಈ ಜ್ಯೋತಿಶ್ಚಕ್ರವನ್ನು ಶಿಶುಮಾರಚಕ್ರದ ರೂಪದಲ್ಲಿ ವರ್ಣಿಸುತ್ತಾರೆ. ॥4॥
(ಗದ್ಯ - 5)
ಮೂಲಮ್
ಯಸ್ಯ ಪುಚ್ಛಾಗ್ರೇವಾಕ್ಶಿರಸಃ ಕುಂಡಲೀಭೂತದೇಹಸ್ಯ ಧ್ರುವ ಉಪಕಲ್ಪಿತಸ್ತಸ್ಯ ಲಾಂಗೂಲೇ ಪ್ರಜಾಪತಿರಗ್ನಿರಿಂದ್ರೋ ಧರ್ಮ ಇತಿ ಪುಚ್ಛಮೂಲೇ ಧಾತಾ ವಿಧಾತಾ ಚ ಕಟ್ಯಾಂ ಸಪ್ತರ್ಷಯಃ ತಸ್ಯ ದಕ್ಷಿಣಾವರ್ತಕುಂಡಲೀಭೂತಶರೀರಸ್ಯ ಯಾನ್ಯುದಗಯನಾನಿ ದಕ್ಷಿಣಪಾರ್ಶ್ವೇ ತು ನಕ್ಷತ್ರಾಣ್ಯುಪಕಲ್ಪಯಂತಿ ದಕ್ಷಿಣಾಯನಾನಿ ತು ಸವ್ಯೇ ಯಥಾ ಶಿಶುಮಾರಸ್ಯ ಕುಂಡಲಾಭೋಗಸನ್ನಿವೇಶಸ್ಯ ಪಾರ್ಶ್ವಯೋರುಭಯೋರಪ್ಯವಯವಾಃ ಸಮಸಂಖ್ಯಾ ಭವಂತಿ ಪೃಷ್ಠೇ ತ್ವಜವೀಥೀ ಆಕಾಶಗಂಗಾ ಚೋದರತಃ ॥
ಅನುವಾದ
ಈ ಶಿಶುಮಾರವು ಕುಂಡಲದ ಅಕಾರದಲ್ಲಿ ಸುತ್ತಿಕೊಂಡಿರುವ ಸರ್ಪದಂತಿದೆ. ಇದು ತಲೆಕೆಳಗಾಗಿ ಬಾಲವನ್ನು ಮೇಲಿಟ್ಟುಕೊಂಡಿದೆ. ಅದರ ಬಾಲದ ತುದಿಯಲ್ಲಿ ಧ್ರುವನು ಬೆಳಗುತ್ತಿದ್ದಾನೆ. ಬಾಲದ ಮಧ್ಯಭಾಗದಲ್ಲಿ ಪ್ರಜಾಪತಿ, ಅಗ್ನಿ, ಇಂದ್ರ ಮತ್ತು ಧರ್ಮ ಇವರು ಪ್ರಕಾಶಿಸುತ್ತಿದ್ದಾರೆ. ಬಾಲದ ಬುಡದಲ್ಲಿ ಧಾತಾ ಮತ್ತು ವಿಧಾತಾ ಎಂಬುವರಿದ್ದಾರೆ. ಇದರ ಕಟಿ ಪ್ರದೇಶದಲ್ಲಿ ಸಪ್ತರ್ಷಿಗಳಿದ್ದಾರೆ. ಈ ಶಿಶುಮಾರವು ಪ್ರದಕ್ಷಿಣಾಕಾರವಾಗಿ ಮಂಡಲದ ಆಕಾರದಲ್ಲಿ ದೇಹವನ್ನು ಸುತ್ತಿಕೊಂಡಿದೆ. ಅದರ ಬಲಗಡೆಯಲ್ಲಿ ಅಭಿಜಿತ್ತೆಂಬ ನಕ್ಷತ್ರದಿಂದ ಪ್ರಾರಂಭವಾಗಿ ಪುನರ್ವಸು ನಕ್ಷತ್ರದವರೆಗಿನ ಉತ್ತರಾಯಣದ ಹದಿನಾಲ್ಕು ನಕ್ಷತ್ರಗಳಿವೆ. ಪುಷ್ಯದಿಂದ ಹಿಡಿದು ಉತ್ತರಾಷಾಢಾವರೆಗಿನ ದಕ್ಷಿಣಾಯನದ ಹದಿನಾಲ್ಕು ನಕ್ಷತ್ರಗಳು ಎಡಭಾಗದಲ್ಲಿವೆ. ಹೀಗೆ ಆ ಶಿಶುಮಾರ ಚಕ್ರದ ಎರಡೂ ಪಕ್ಕದಲ್ಲಿಯೂ ಅಶ್ವಿನಿಯೇ ಮುಂತಾದ ಇಪ್ಪತ್ತೆಂಟು ನಕ್ಷತ್ರಗಳು ಸಮಸಂಖ್ಯೆಯ ಅವಯವಗಳಾಗಿವೆ. ಕುಂಡಲಾಕಾರದ ರಚನೆಯಲ್ಲಿ ಎರಡೂ ಕಡೆಯ ಅಂಗಗಳು ಸಮನಾಗಿರುವಂತೆ ಇಲ್ಲಿ ನಕ್ಷತ್ರಗಳ ಸಂಖ್ಯೆಯೂ ಸಮವಾಗಿದೆ. ಅದರ ಬೆನ್ನಿನಲ್ಲಿ ಅಜವಿಥಿಯೂ (ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ ಎಂಬ ಮೂರು ನಕ್ಷತ್ರಗಳ ಗುಂಪು) ಇದೆ. ಉದರದಲ್ಲಿ ಆಕಾಶಗಂಗೆಯು ಪ್ರಕಾಶಿಸುತ್ತಿದೆ.॥5॥
(ಗದ್ಯ - 6)
ಮೂಲಮ್
ಪುನರ್ವಸುಪುಷ್ಯೌ ದಕ್ಷಿಣವಾಮಯೋಃ ಶ್ರೋಣ್ಯೋರಾರ್ದ್ರಾಶ್ಲೇಷೇ ಚ ದಕ್ಷಿಣವಾಮಯೋಃ ಪಶ್ಚಿಮಯೋಃ ಪಾದಯೋ ರಭಿಜಿದುತ್ತರಾಷಾಢೇ ದಕ್ಷಿಣವಾಮಯೋರ್ನಾಸಿಕಯೋರ್ಯಥಾಸಂಖ್ಯಂ ಶ್ರವಣ ಪೂರ್ವಾಷಾಢೇ ದಕ್ಷಿಣವಾಮಯೋರ್ಲೋಚನಯೋರ್ಧನಿಷ್ಠಾ ಮೂಲಂ ಚ ದಕ್ಷಿಣವಾಮಯೋಃ ಕರ್ಣಯೋರ್ಮಘಾದೀನ್ಯಷ್ಟ ನಕ್ಷತ್ರಾಣಿ ದಕ್ಷಿಣಾಯನಾನಿವಾಮಪಾರ್ಶ್ವವಂಕ್ರಿಷು ಯುಂಜೀತ ತಥೈವ ಮೃಗಶೀರ್ಷಾದೀನ್ಯುದಗಯನಾನಿ ದಕ್ಷಿಣಪಾರ್ಶ್ವವಂಕ್ರಿಷು ಪ್ರಾತಿಲೋಮ್ಯೇನ ಪ್ರಯುಂಜೀತ ಶತಭಿಷಾಜ್ಯೇಷ್ಠೇಸ್ಕಂದಯೋರ್ದಕ್ಷಿಣವಾಮಯೋರ್ನ್ಯಸೇತ್ ॥
ಅನುವಾದ
ಎಲೈ ರಾಜನೇ! ಇದರ ಬಲ-ಎಡಭಾಗಗಳ ಕಟಿಗಳಲ್ಲಿ ಪುನರ್ವಸು ಮತ್ತು ಪುಷ್ಯ ನಕ್ಷತ್ರಗಳಿವೆ. ಹಿಂದು ಗಡೆಯ ಬಲ ಮತ್ತು ಎಡ ಪಾದಗಳಲ್ಲಿ ಆರ್ದ್ರಾ ಮತ್ತು ಆಶ್ಲೇಷಾ ನಕ್ಷತ್ರಗಳಿವೆ. ಬಲ-ಎಡಭಾಗದ ಮೂಗಿನ ಹೊಳ್ಳೆಗಳಲ್ಲಿ ಕ್ರಮವಾಗಿ ಅಭಿಜಿತ್ ಮತ್ತು ಉತ್ತರಾಷಾಢಾ ನಕ್ಷತ್ರಗಳಿವೆ. ಹೀಗೆಯೇ ಬಲ-ಎಡ ನೇತ್ರಗಳಲ್ಲಿ ಶ್ರವಣ ಹಾಗೂ ಪೂರ್ವಾಷಾಢಾ ನಕ್ಷತ್ರಗಳೂ, ಹಾಗೆಯೇ ಬಲ-ಎಡ ಕಿವಿಗಳಲ್ಲಿ ಧನಿಷ್ಠಾ ಮತ್ತು ಮೂಲಾ ನಕ್ಷತ್ರಗಳಿವೆ. ಮಘಾ ಮುಂತಾದ ದಕ್ಷಿಣಾಯನದ ಎಂಟು ನಕ್ಷತ್ರಗಳು ಎಡ ಪಕ್ಕೆಲುಬಿನಲ್ಲಿ ಮತ್ತು ವಿಪರೀತ ಕ್ರಮದಿಂದ ಮೃಗಶಿರಾ ಮುಂತಾದ ಉತ್ತರಾಯಣದ ಎಂಟು ನಕ್ಷತ್ರಗಳು ಬಲದ ಪಕ್ಕೆಲುಬಿನಲ್ಲಿದೆ. ಶತಭಿಷಾ ಮತ್ತು ಜ್ಯೇಷ್ಠಾ ಇವೆರಡು ನಕ್ಷತ್ರಗಳು ಕ್ರಮವಾಗಿ ಬಲ ಮತ್ತು ಎಡ ಹೆಗಲುಗಳಲ್ಲಿ ಇವೆ. ॥6॥
(ಗದ್ಯ - 7)
ಮೂಲಮ್
ಉತ್ತರಾಹನಾವಗಸ್ತಿರಧರಾಹನೌ ಯಮೋ ಮುಖೇಷು ಚಾಂಗಾರಕಃ ಶನೈಶ್ಚರ ಉಪಸ್ಥೇ ಬೃಹಸ್ಪತಿಃ ಕಕುದಿ ವಕ್ಷಸ್ಯಾದಿತ್ಯೋ ಹೃದಯೇ ನಾರಾಯಣೋ ಮನಸಿ ಚಂದ್ರೋ ನಾಭ್ಯಾಮುಶನಾ ಸ್ತನಯೋರಶ್ವಿನೌ ಬುಧಃ ಪ್ರಾಣಾಪಾನಯೋ ರಾಹುರ್ಗಲೇ ಕೇತವಃ ಸರ್ವಾಂಗೇಷು ರೋಮಸು ಸರ್ವೇ ತಾರಾಗಣಾಃ ॥
ಅನುವಾದ
ಅದರ ಮೇಲಿನ ದವಡೆಯಲ್ಲಿ ನಕ್ಷತ್ರರೂಪರಾದ ಅಗಸ್ತ್ಯರೂ, ಕೆಳಗಿನ ದವಡೆಯಲ್ಲಿ ನಕ್ಷತ್ರರೂಪನಾದ ಯಮನೂ, ಮುಖಗಳಲ್ಲಿ ಮಂಗಳನೂ, ಲಿಂಗಪ್ರದೇಶದಲ್ಲಿ ಶನಿಯೂ, ಕತ್ತಿನ ಹೆರಳಿನಲ್ಲಿ ಬೃಹಸ್ಪತಿಯೂ, ಎದೆಯಲ್ಲಿ ಸೂರ್ಯನೂ, ಹೃದಯದಲ್ಲಿ ನಾರಾಯಣನೂ, ಮನಸ್ಸಿನಲ್ಲಿ ಚಂದ್ರನೂ, ಹೊಕ್ಕುಳಲ್ಲಿ ಶುಕ್ರನೂ, ಸ್ತನಗಳಲ್ಲಿ ಅಶ್ವಿನೀ ದೇವತೆಗಳೂ, ಪ್ರಾಣಾಪಾನಗಳಲ್ಲಿ ಬುಧನೂ, ಕತ್ತಿನಲ್ಲಿ ರಾಹುವೂ, ಸಮಸ್ತ ಅಂಗಗಳಲ್ಲಿ ಕೇತುವೂ, ರೋಮಗಳಲ್ಲಿ ಸಮಸ್ತ ತಾರೆಗಳೂ ನೆಲೆಸಿವೆ.॥7॥
(ಗದ್ಯ - 8)
ಮೂಲಮ್
ಏತದು ಹೈವ ಭಗವತೋ ವಿಷ್ಣೋಃ ಸರ್ವದೇವತಾಮಯಂ ರೂಪಮಹರಹಃ ಸಂಧ್ಯಾಯಾಂ ಪ್ರಯತೋ ವಾಗ್ಯತೋ ನಿರೀಕ್ಷಮಾಣ ಉಪತಿಷ್ಠೇತ ನಮೋ ಜ್ಯೋತಿರ್ಲೋಕಾಯ ಕಾಲಾಯನಾಯಾನಿಮಿಷಾಂ ಪತಯೇ ಮಹಾಪುರುಷಾಯಾಭಿಧೀಮಹೀತಿ ॥
ಅನುವಾದ
ಎಲೈ ರಾಜನೇ! ಇದು ಭಗವಂತನಾದ ವಿಷ್ಣುವಿನ ಸರ್ವದೇವಮಯ ಸ್ವರೂಪವಾಗಿದೆ. ಪ್ರತಿದಿನವು ಸಾಯಂ ಕಾಲದಲ್ಲಿ ಪವಿತ್ರ ಮತ್ತು ಮೌನವಾಗಿ ಇದನ್ನು ದರ್ಶನ ಮಾಡುತ್ತಾ ಶ್ರೀಭಗವಂತನನ್ನು ಚಿಂತಿಸಬೇಕು ಹಾಗೂ ಈ ಮಂತ್ರವನ್ನು ಜಪಿಸುತ್ತಾ ಭಗವಂತನನ್ನು ಸ್ತುತಿಸಬೇಕು ‘ಸಮಸ್ತ ಜ್ಯೋತಿರ್ಗಣಗಳಿಗೆಲ್ಲಾ ಆಶ್ರಯನೂ, ಕಾಲಚಕ್ರ ಸ್ವರೂಪಿಯೂ, ಸರ್ವ ದೇವತಾಧಿಪತಿಯೂ ಆದ ಪರಮ ಪುರುಷ ಪರಮಾತ್ಮನನ್ನು ನಾವು ನಮಸ್ಕಾರಪೂರ್ವಕ ಧ್ಯಾನಿಸುತ್ತೇವೆ. ॥8॥
(ಶ್ಲೋಕ - 9)
ಮೂಲಮ್
ಗ್ರಹರ್ಕ್ಷತಾರಾಮಯಮಾಧಿದೈವಿಕಂ
ಪಾಪಾಪಹಂ ಮಂತ್ರಕೃತಾಂ ತ್ರಿಕಾಲಮ್
ನಮಸ್ಯತಃ ಸ್ಮರತೋ ವಾ ತ್ರಿಕಾಲಂ
ನಶ್ಯೇತ ತತ್ಕಾಲಜಮಾಶು ಪಾಪಮ್ ॥
ಅನುವಾದ
ಗ್ರಹ, ನಕ್ಷತ್ರ ಮತ್ತು ತಾರೆಗಳ ರೂಪದಲ್ಲಿ ಭಗವಂತನ ಅಧಿದೈವಿಕರೂಪವೇ ಪ್ರಕಾಶಿಸುತ್ತಿದೆ. ಅದು ತ್ರಿಕಾಲಗಳಲ್ಲಿಯೂ ಮೇಲೆ ಹೇಳಿದ ಮಂತ್ರವನ್ನು ಜಪಿಸುವವನ ಎಲ್ಲ ಪಾಪಗಳನ್ನು ನಾಶಪಡಿಸುತ್ತದೆ. ಪ್ರಾತಃಕಾಲ, ಮಧ್ಯಾಹ್ನಕಾಲ, ಸಾಯಂಕಾಲಗಳೆಂಬ ಮೂರೂ ಕಾಲಗಳಲ್ಲಿ ಶ್ರೀಭಗವಂತನ ಈ ಅಧಿದೈವಿಕಸ್ವರೂಪವನ್ನು ಪ್ರತಿದಿನವೂ ಚಿಂತಿಸುವವನ ಮತ್ತು ವಂದನೆಮಾಡುವವನ ಪಾಪಗಳು ಒಡನೆಯೇ ನಾಶವಾಗಿ ಹೋಗುತ್ತವೆ. ॥9॥
ಅನುವಾದ (ಸಮಾಪ್ತಿಃ)
ಇಪ್ಪತ್ತಮೂರನೆಯ ಅಧ್ಯಾಯವು ಮುಗಿಯಿತು. ॥23॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಶಿಶುಮಾರಸಂಸ್ಥಾವರ್ಣನಂ ನಾಮ ತ್ರಯೋವಿಂಶೋಽಧ್ಯಾಯಃ ॥23॥