೨೨

[ಇಪ್ಪತ್ತೆರಡನೆಯ ಅಧ್ಯಾಯ]

ಭಾಗಸೂಚನಾ

ಬೇರೆ-ಬೇರೆ ಗ್ರಹಗಳ ಸ್ಥಿತಿ ಮತ್ತು ಗತಿಗಳ ವರ್ಣನೆ

(ಗದ್ಯ - 1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಯದೇತದ್ಭಗವತ ಆದಿತ್ಯಸ್ಯ ಮೇರುಂ ಧ್ರುವಂ ಚ ಪ್ರದಕ್ಷಿಣೇನ ಪರಿಕ್ರಾಮತೋ ರಾಶೀನಾಮಭಿಮುಖಂ ಪ್ರಚಲಿತಂ ಚಾಪ್ರದಕ್ಷಿಣಂ ಭಗವತೋಪವರ್ಣಿತಮಮುಷ್ಯ ವಯಂ ಕಥಮನುಮಿಮೀಮಹೀತಿ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ‘ಮಹಾತ್ಮರೇ! ಭಗವಾನ್ ಆದಿತ್ಯನು ಮೇರುಗಿರಿಯನ್ನು ಮತ್ತು ಧ್ರುವಲೋಕವನ್ನು ಪ್ರದಕ್ಷಿಣಾಕಾರವಾಗಿ ಸುತ್ತುತ್ತಿದ್ದರೂ ರಾಶಿಗಳಿಗೆ ಎದುರಾಗಿ ಅಪ್ರದಕ್ಷಿಣವಾಗಿಯೇ ಬಳಸುತ್ತಾನೆ ಎಂದು ತಾವು ಹೇಳಿದಿರಿ. ಇದನ್ನು ನಾವು ಹೇಗೆ ಅರ್ಥೈಸಿಕೊಳ್ಳಬಹುದು ತಿಳಿಸೋಣವಾಗಲಿ.’ ॥1॥

(ಗದ್ಯ - 2)

ಮೂಲಮ್ (ವಾಚನಮ್)

ಸ ಹೋವಾಚ

ಮೂಲಮ್

ಯಥಾ ಕುಲಾಲಚಕ್ರೇಣ ಭ್ರಮತಾ ಸಹ ಭ್ರಮತಾಂ ತದಾಶ್ರಯಾಣಾಂ ಪಿಪೀಲಿಕಾದೀನಾಂ ಗತಿರನ್ಯೈವ ಪ್ರದೇ- ಶಾಂತರೇಷ್ವಪ್ಯುಪಲಭ್ಯಮಾನತ್ವಾದೇವಂ ನಕ್ಷತ್ರರಾಶಿಭಿರುಪಲಕ್ಷಿತೇನ ಕಾಲಚಕ್ರೇಣ ಧ್ರುವಂ ಮೇರುಂ ಚ ಪ್ರದಕ್ಷಿಣೇನ ಪರಿಧಾವತಾ ಸಹ ಪರಿಧಾವಮಾನಾನಾಂ ತದಾಶ್ರಯಾಣಾಂ ಸೂರ್ಯಾದೀನಾಂ ಗ್ರಹಾಣಾಂ ಗತಿರನ್ಯೈವ ನಕ್ಷತ್ರಾಂತರೇ ರಾಶ್ಯಂತರೇ ಚೋಪಲಭ್ಯಮಾನತ್ವಾತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹಾರಾಜನೇ! ಕುಂಬಾರನ ತಿರುಗುತ್ತಿರುವ ಚಕ್ರದಮೇಲೆ ಕುಳಿತ ಅದ ರೊಂದಿಗೆ ತಿರುಗುತ್ತಿರುವ ಇರುವೆಯೇ ಮುಂತಾದವುಗಳ ಗತಿಯು ಅದರಿಂದ ಭಿನ್ನವೇ ಆಗಿದೆ. ಏಕೆಂದರೆ, ಅದು ಬೇರೆ-ಬೇರೆ ಸಮಯದಲ್ಲಿ ಆ ಚಕ್ರದ ಬೇರೆ-ಬೇರೆ ಸ್ಥಾನಗಳಲ್ಲಿ ನೋಡಲ್ಪಡುತ್ತದೆ. ಹಾಗೆಯೇ ನಕ್ಷತ್ರ ಮತ್ತು ರಾಶಿಗಳಿಂದ ಕಂಡುಬರುವ ಕಾಲಚಕ್ರದಲ್ಲಿ ಬಿದ್ದು ಧ್ರುವ ಮತ್ತು ಮೇರುವನ್ನು ಬಲಕ್ಕಿಟ್ಟು ತಿರುಗುವ ಸೂರ್ಯನೇ ಮುಂತಾದ ಗ್ರಹಗಳ ಗತಿಯು ವಾಸ್ತವವಾಗಿ ಅದರಿಂದ ಭಿನ್ನವೇ ಆಗಿದೆ. ಏಕೆಂದರೆ ಅವನು ಕಾಲಭೇದದಿಂದ ಬೇರೆ-ಬೇರೆ ರಾಶಿ ಮತ್ತು ನಕ್ಷತ್ರಗಳಲ್ಲಿ ಕಂಡುಬರುತ್ತಿರುವನು. ॥2॥

(ಗದ್ಯ - 3)

ಮೂಲಮ್

ಸ ಏಷ ಭಗವಾನಾದಿಪುರುಷ ಏವ ಸಾಕ್ಷಾನ್ನಾರಾಯಣೋ ಲೋಕಾನಾಂ ಸ್ವಸ್ತಯ ಆತ್ಮಾನಂ ತ್ರಯೀ- ಮಯಂ ಕರ್ಮವಿಶುದ್ಧಿನಿಮಿತ್ತಂ ಕವಿಭಿರಪಿ ಚ ವೇದೇನ ವಿಜಿಜ್ಞಾಸ್ಯಮಾನೋ ದ್ವಾದಶಧಾ ವಿಭಜ್ಯ ಷಟ್ಸು ವಸಂತಾ- ದಿಷ್ವ ತುಷು ಯಥೋಪಜೋಷಮೃತುಗುಣಾನ್ವಿದಧಾತಿ ॥

ಅನುವಾದ

ಜಗತ್ತಿಗೆ ಕಾರಣನೂ, ಸಾಕ್ಷಾತ್ ನಾರಾಯಣ ಸ್ವರೂಪನೂ ಆಗಿರುವ ಆದಿಪುರುಷನಾದ ಭಗವಾನ್ ಸೂರ್ಯದೇವನು ವೇದ ಮಂತ್ರದರ್ಶಿಗಳಾದ ಜ್ಞಾನಿಗಳೂ ಮತ್ತು ವೇದಗಳೂ ತಿಳಿಯಲು ಬಯಸುವ ಸ್ವರೂಪವುಳ್ಳವನು. ಆದರೂ ಆತನು ಲೋಕಗಳ ಕ್ಷೇಮಕ್ಕಾಗಿ ವೇದರೂಪಿಯಾದ ತನ್ನನ್ನು ಹನ್ನೆರಡು ಬಗೆಗಳನ್ನಾಗಿ ವಿಭಾಗಿಸಿಕೊಂಡು ಚೈತ್ರವೇ ಮುಂತಾದ ಹನ್ನೆರಡು ಮಾಸಗಳಲ್ಲಿ ಪ್ರತಿಯೊಂದರಲ್ಲಿಯೂ ಒಂದೊಂದು ಹೆಸರಿನಿಂದ ಕೂಡಿ ಜೀವಿಗಳು ಆಯಾಕರ್ಮಫಲವನ್ನು ಭೋಗಿಸುವುದಕ್ಕಾಗಿ ವಸಂತವೇ ಮುಂತಾದ ಆರು ಋತುಗಳಲ್ಲಿಯೂ ಅವುಗಳ ಯಥಾಯೋಗ್ಯ ಗುಣಧರ್ಮಗಳನ್ನು ಉಂಟುಮಾಡುತ್ತಾನೆ. ॥3॥

(ಗದ್ಯ - 4)

ಮೂಲಮ್

ತಮೇತಮಿಹ ಪುರುಷಾಸಯ್ಯಾ ವಿದ್ಯಯಾ ವರ್ಣಾಶ್ರಮಾಚಾರಾನುಪಥಾ ಉಚ್ಚಾವಚೈಃ ಕರ್ಮಭಿರಾಮ್ನಾತೈರ್ಯೋಗ ವಿತಾನೈಶ್ಚ ಶ್ರದ್ಧಯಾ ಯಜಂತೋಂಜಸಾ ಶ್ರೇಯಃ ಸಮಧಿಗಚ್ಛಂತಿ ॥

ಅನುವಾದ

ಈ ಲೋಕದಲ್ಲಿ ವರ್ಣಾಶ್ರಮಧರ್ಮವನ್ನು ಅನುಸರಿಸುವವರು ವೇದ ತ್ರಯದ ಮೂಲಕ ಪ್ರತಿಪಾದಿತ ಸಣ್ಣ-ದೊಡ್ಡ ಕರ್ಮಗಳಿಂದ ಇಂದ್ರಾದಿ ದೇವತೆಗಳ ರೂಪದಲ್ಲಿ ಮತ್ತು ಯೋಗ ಸಾಧನೆಯಿಂದ ಅಂತರ್ಯಾಮಿರೂಪದಲ್ಲಿ ಸೂರ್ಯ ನಾರಾಯಣನನ್ನು ಶ್ರದ್ಧೆಯಿಂದ ಆರಾಧಿಸಿ ಸುಲಭವಾಗಿ ಪರಮಪದವನ್ನು ಪಡೆದುಕೊಳ್ಳುವರು. ॥4॥

(ಗದ್ಯ - 5)

ಮೂಲಮ್

ಅಥ ಸ ಏಷ ಆತ್ಮಾ ಲೋಕಾನಾಂ ದ್ಯಾವಾಪೃಥಿವ್ಯೋರಂತರೇಣ ನಭೋ- ವಲಯಸ್ಯ ಕಾಲಚಕ್ರಗತೋ ದ್ವಾದಶ ಮಾಸಾನ್ ಭುಂಕ್ತೇ ರಾಶಿಸಂಜ್ಞಾನ್ ಸಂವತ್ಸರಾವಯವಾನ್ಮಾಸಃ ಪಕ್ಷದ್ವಯಂ ದಿವಾ ನಕ್ತಂ ಚೇತಿ ಸಪಾದರ್ಕ್ಷದ್ವಯಮುಪದಿಶಂತಿ ಯಾವತಾ ಷಷ್ಠಮಂಶಂ ಭುಂಜೀತ ಸ ವೈ ಋತುರಿತ್ಯು- ಪದಿಶ್ಯತೇ ಸಂವತ್ಸರಾವಯವಃ ॥

ಅನುವಾದ

ಭಗವಾನ್ ಸೂರ್ಯನು ಸಮಸ್ತ ಲೋಕಗಳ ಆತ್ಮನು. ಅವನು ಪೃಥಿವಿ ಮತ್ತು ದ್ಯುಲೋಕದ ಮಧ್ಯದಲ್ಲಿ ನೆಲೆಸಿರುವ ಆಕಾಶ ಮಂಡಲದೊಳಗೆ ಕಾಲಚಕ್ರದಲ್ಲಿ ಸ್ಥಿತನಾಗಿ ಸಂವತ್ಸರದ ಅವಯವಗಳಾದ ಮೇಷವೇ ಮುಂತಾದ ರಾಶಿಗಳಿಂದ ಪ್ರಸಿದ್ಧವಾದ ಹನ್ನೆರಡು ತಿಂಗಳುಗಳನ್ನು ಭೋಗಿಸುತ್ತಾನೆ. ಇದರಲ್ಲಿನ ಪ್ರತಿಯೊಂದು ತಿಂಗಳು ಚಂದ್ರನಿಂದ ಶುಕ್ಲ ಮತ್ತು ಕೃಷ್ಣ ಎಂಬ ಎರಡು ಪಕ್ಷಗಳನ್ನು ಪಿತೃಗಳ ಮಾನದಿಂದ ಒಂದು ರಾತ್ರಿ ಹಾಗೂ ಒಂದು ಹಗಲು ಎಂದೂ ಸೌರ ಮಾನದಿಂದ ಎರಡುಕಾಲು ನಕ್ಷತ್ರಗಳಿಂದ ತಿಳಿಸಲಾಗುತ್ತದೆ. ಸೂರ್ಯನು ಈ ಸಂವತ್ಸರದ ಆರನೆಯ ಒಂದು ಭಾಗವನ್ನು ಭೋಗಿಸುವ ಅವಯವದ ಹೆಸರು ‘ಋತು’ ಎಂದು ಹೇಳಲಾಗುತ್ತದೆ. ॥5॥

(ಗದ್ಯ - 6)

ಮೂಲಮ್

ಅಥ ಚ ಯಾವ- ತಾರ್ಧೇನ ನಭೋವೀಥ್ಯಾಂ ಪ್ರಚರತಿ ತಂ ಕಾಲಮಯನಮಾಚಕ್ಷತೇ ॥

ಅನುವಾದ

ಭಗವಾನ್ ಸೂರ್ಯನು ಖಗೋಳದ ಅರ್ಧಭಾಗವಾಗಿರುವ ಆರು ರಾಶಿಗಳನ್ನು ದಾಟುವ ಕಾಲವನ್ನು ‘ಅಯನ’ವೆಂದು ಕರೆಯುತ್ತಾರೆ. ॥6॥

(ಗದ್ಯ - 7)

ಮೂಲಮ್

ಅಥ ಚ ಯಾವನ್ನಭೋಮಂಡಲಂ ಸಹ ದ್ಯಾವಾಪೃಥಿವ್ಯೋರ್ಮಂಡಲಾಭ್ಯಾಂ ಕಾರ್ತ್ಸ್ನ್ಯೇನ ಸ ಹ ಭುಂಜೀತ ತಂ ಕಾಲಂ ಸಂವತ್ಸರಂ ಪರಿವತ್ಸರಮಿಡಾ- ವತ್ಸರಮನುವತ್ಸರಂ ವತ್ಸರಮಿತಿ ಭಾನೋರ್ಮಾಂದ್ಯಶೈ- ಘ್ರ್ಯಸಮಗತಿಭಿಃ ಸಮಾಮನಂತಿ ॥

ಅನುವಾದ

ಹಾಗೆಯೇ ಸೂರ್ಯನು ತನ್ನ ಮಂದಗತಿ, ತೀವ್ರಗತಿ ಮತ್ತು ಸಮಾನಗತಿಗಳಿಂದ ಸ್ವರ್ಗ ಮತ್ತು ಭೂಮಂಡಲದ ಸಹಿತ ಇಡೀ ಆಕಾಶವನ್ನು ಸುತ್ತುಬರುವ ಕಾಲವನ್ನು ಗತಿಭೇದದಿಂದ ಸಂವತ್ಸರ, ಪರಿವತ್ಸರ, ಇಡಾವತ್ಸರ, ಅನುವತ್ಸರ ಅಥವಾ ವತ್ಸರವೆಂದು ಕರೆಯುತ್ತಾರೆ. ॥7॥

(ಗದ್ಯ - 8)

ಮೂಲಮ್

ಏವಂ ಚಂದ್ರಮಾ ಅರ್ಕಗಭಸ್ತಿಭ್ಯ ಉಪರಿಷ್ಟಾಲ್ಲಕ್ಷಯೋಜನತ ಉಪಲಭ್ಯಮಾನೋರ್ಕಸ್ಯ ಸಂವತ್ಸರಭುಕ್ತಿಂ ಪಕ್ಷಾಭ್ಯಾಂ ಮಾಸಭುಕ್ತಿಂ ಸಪಾದರ್ಕ್ಷಾಭ್ಯಾಂ ದಿನೇನೈವ ಪಕ್ಷಭುಕ್ತಿಮಗ್ರಚಾರೀ ದ್ರುತತರಗಮನೋ ಭುಂಕ್ತೇ ॥

ಅನುವಾದ

ಹೀಗೆಯೇ ಸೂರ್ಯನ ಕಿರಣಗಳಿಂದ ಒಂದು ಲಕ್ಷ ಯೋಜನ ಮೇಲ್ಗಡೆ ಚಂದ್ರನಿದ್ದಾನೆ. ಅವನ ಗತಿಯು ಅತಿ ಶೀಘ್ರವಾಗಿರುವುದರಿಂದ ಎಲ್ಲ ನಕ್ಷತ್ರಗಳಿಂದಲೂ ಮುಂದೆ ಇರುತ್ತಾನೆ. ಇವನು ಸೂರ್ಯನ ಒಂದು ವರ್ಷದ ಮಾರ್ಗ ವನ್ನು ಒಂದು ತಿಂಗಳಿನಲ್ಲಿ, ಒಂದು ತಿಂಗಳ ಮಾರ್ಗವನ್ನು ಎರಡುಕಾಲು ದಿನಗಳಲ್ಲಿಯೂ ಮತ್ತು ಒಂದು ಪಕ್ಷದ ಮಾರ್ಗವನ್ನು ಒಂದೇ ದಿನದಲ್ಲಿ ದಾಟಿ ಬಿಡುತ್ತಾನೆ. ॥8॥

(ಗದ್ಯ - 9)

ಮೂಲಮ್

ಅಥ ಚಾಪೂರ್ಯಮಾಣಾಭಿಶ್ಚ ಕಲಾಭಿರಮರಾಣಾಂ ಕ್ಷೀಯಮಾಣಾಭಿಶ್ಚ ಕಲಾಭಿಃ ಪಿತೃಣಾಮಹೋರಾತ್ರಾಣಿ ಪೂರ್ವಪಕ್ಷಾಪರಪಕ್ಷಾಭ್ಯಾಂ ವಿತನ್ವಾನಃ ಸರ್ವಜೀವನಿವಹಪ್ರಾಣೋ ಜೀವಶ್ಚೈಕಮೇಕಂ ನಕ್ಷತ್ರಂ ತ್ರಿಂಶತಾ ಮುಹೂರ್ತೈರ್ಭುಂಕ್ತೇ ॥

ಅನುವಾದ

ಚಂದ್ರನು ಕೃಷ್ಣಪಕ್ಷದಲ್ಲಿ ಕ್ಷೀಣವಾಗುವ ಕಲೆಗಳಿಂದ ಪಿತೃಗಳ ಮತ್ತು ಶುಕ್ಲಪಕ್ಷದಲ್ಲಿ ಬೆಳೆಯುತ್ತಿರುವ ಕಲೆಗಳಿಂದ ದೇವತೆಗಳ ಹಗಲು-ರಾತ್ರಿಯ ವಿಭಾಗವನ್ನು ಮಾಡುತ್ತಾನೆ ಹಾಗೂ ಮೂವತ್ತು ಮುಹೂರ್ತಗಳಲ್ಲಿ ಒಂದೊಂದು ನಕ್ಷತ್ರವನ್ನು ದಾಟುತ್ತಾನೆ. ಅವನು ಅನ್ನಮಯ ಮತ್ತು ಅಮೃತಮಯವಾದ್ದರಿಂದ ಸಮಸ್ತ ಜೀವರ ಪ್ರಾಣ ಹಾಗೂ ಜೀವನನಾಗಿದ್ದಾನೆ. ॥9॥

(ಗದ್ಯ - 10)

ಮೂಲಮ್

ಯ ಏಷ ಷೋಡಶಕಲಃ ಪುರುಷೋ ಭಗವಾನ್ಮನೋಮಯೋನ್ನಮಯೋಮೃತ- ಮಯೋ ದೇವಪಿತೃಮನುಷ್ಯಭೂತಪಶುಪಕ್ಷಿಸರೀಸೃಪವೀರುಧಾಂ ಪ್ರಾಣಾಪ್ಯಾಯನಶೀಲತ್ವಾತ್ಸರ್ವಮಯ ಇತಿ ವರ್ಣಯಂತಿ ॥

ಅನುವಾದ

ಇವನು ಹದಿನಾರು ಕಲೆಗಳಿಂದ ಕೂಡಿ ಮನೋಮಯ, ಅನ್ನಮಯ, ಅಮೃತಮಯ, ಪುರುಷಸ್ವರೂಪ ಭಗವಾನ್ ಚಂದ್ರನು ದೇವತೆಗಳು, ಪಿತೃಗಳು, ಮನುಷ್ಯರು, ಭೂತ, ಪಶು, ಪಕ್ಷಿ, ಸರೀಸೃಪ ಮತ್ತು ವೃಕ್ಷವೇ ಮುಂತಾದ ಸಮಸ್ತ ಪ್ರಾಣಿಗಳ ಪ್ರಾಣಗಳನ್ನು ಪೋಷಿಸುತ್ತಾನೆ; ಅದಕ್ಕಾಗಿ ಇವನಿಗೆ ಸರ್ವಮಯ ಎಂದು ಹೇಳುತ್ತಾರೆ. ॥10॥

(ಗದ್ಯ - 11)

ಮೂಲಮ್

ತತ ಉಪರಿಷ್ಟಾತಿಲಕ್ಷಯೋಜನತೋ ನಕ್ಷತ್ರಾಣಿ ಮೇರುಂ ದಕ್ಷಿಣೇನೈವ ಕಾಲಾಯನ ಈಶ್ವರಯೋಜಿತಾನಿ ಸಹಾಭಿಜಿತಾಷ್ಟಾವಿಂಶತಿಃ ॥

ಅನುವಾದ

ಚಂದ್ರನಿಂದ ಮೂರು ಲಕ್ಷಯೋಜನಗಳಷ್ಟು ಮೇಲೆ ಅಭಿಜಿತ್ ನಕ್ಷತ್ರವೂ ಸೇರಿ ಇಪ್ಪತ್ತೆಂಟು ನಕ್ಷತ್ರಗಳಿವೆ. ಭಗವಂತನು ಇವುಗಳನ್ನು ಕಾಲಚಕ್ರದಲ್ಲಿ ನೇಮಿಸಿರುವುದರಿಂದ ಮೇರುವನ್ನು ಬಲಕ್ಕೆ ಇಟ್ಟುಕೊಂಡು ಪ್ರದಕ್ಷಿಣೆ ಮಾಡುತ್ತಿವೆ. ॥11॥

(ಗದ್ಯ - 12)

ಮೂಲಮ್

ತತ ಉಪರಿಷ್ಟಾದುಶನಾ ದ್ವಿಲಕ್ಷಯೋಜನತ ಉಪಲಭ್ಯತೇ ಪುರತಃ ಪಶ್ಚಾತ್ಸಹೈವ ವಾರ್ಕಸ್ಯ ಶೈಘ್ರ್ಯಮಾಂದ್ಯಸಾಮ್ಯಾ- ಭಿರ್ಗತಿಭಿರರ್ಕವಚ್ಚರತಿ ಲೋಕಾನಾಂ ನಿತ್ಯದಾನುಕೂಲ ಏವ ಪ್ರಾಯೇಣ ವರ್ಷಯಂಶ್ಚಾರೇಣಾನುಮೀಯತೇ ಸ ವೃಷ್ಟಿವಿಷ್ಟಂಭಗ್ರಹೋಪಶಮನಃ ॥

ಅನುವಾದ

ಇವುಗಳಿಂದ ಎರಡು ಲಕ್ಷಯೋಜನಗಳಷ್ಟು ಮೇಲೆ ಶುಕ್ರಗ್ರಹವು ಗೋಚರಿಸುತ್ತದೆ. ಇವನು ಸೂರ್ಯನ ಶೀಘ್ರ, ಮಂದ ಮತ್ತು ಸಮಾನ ಗತಿಗಳನುಸಾರ ಅವನಂತೆಯೇ ಕೆಲವೊಮ್ಮೆ ಮುಂದೆ, ಕೆಲವೊಮ್ಮೆ ಹಿಂದೆ, ಕೆಲವೊಮ್ಮೆ ಜೊತೆ-ಜೊತೆಗೆ ಇದ್ದು ಸಂಚರಿಸುತ್ತಾನೆ. ಇವನು ಮಳೆಗರೆಯುವ ಗ್ರಹನಾಗಿದ್ದಾನೆ. ಅದಕ್ಕಾಗಿ ಜನರಿಗೆ ಪ್ರಾಯಶಃ ಸದಾಕಾಲ ಅನುಕೂಲನಾಗಿಯೇ ಇರುತ್ತಾನೆ. ಇವನ ಗತಿಯಿಂದ ಮಳೆಯನ್ನು ತಡೆಯುವ ಗ್ರಹರನ್ನು ಶಾಂತಗೊಳಿಸುತ್ತಾನೆ ಎಂಬ ಅನುಮಾನ ಉಂಟಾಗುತ್ತದೆ. ॥12॥

(ಗದ್ಯ - 13)

ಮೂಲಮ್

ಉಶನಸಾ ಬುಧೋ ವ್ಯಾಖ್ಯಾತಸ್ತತ ಉಪರಿಷ್ಟಾದ್ವಲಕ್ಷಯೋಜನತೋ ಬುಧಃ ಸೋಮಸುತ ಉಪಲಭ್ಯಮಾನಃ ಪ್ರಾಯೇಣ ಶುಭಕೃದ್ಯದಾರ್ಕಾದ್ವ್ಯತಿರಿಚ್ಯೇತ ತದಾತಿವಾತಾಭ್ರಪ್ರಾಯಾನಾವೃಷ್ಟ್ಯಾಧಿಭಯಮಾಶಂಸತೇ ॥

ಅನುವಾದ

ಶುಕ್ರನ ಗತಿಯ ಜೊತೆ-ಜೊತೆಗೆ ಬುಧನ ವ್ಯಾಖ್ಯೆಯು ಆದಂತಾಯಿತು. ಶುಕ್ರನಂತೆಯೇ ಬುಧನ ಗತಿಯನ್ನು ತಿಳಿದುಕೊಳ್ಳಬೇಕು. ಚಂದ್ರಪುತ್ರನಾದ ಈ ಬುಧನು ಶುಕ್ರನಿಂದ ಎರಡುಲಕ್ಷ ಯೋಜನಗಳಷ್ಟು ಮೇಲೆ ಇದ್ದಾನೆ. ಇವನು ಪ್ರಾಯಶಃ ಮಂಗಲಕಾರಿಯೇ ಆಗಿದ್ದಾನೆ. ಆದರೆ ಸೂರ್ಯನ ಗತಿಯನ್ನು ಬಿಟ್ಟು ಮುಂದಕ್ಕೆ ಹೋದರೆ ಬಿರುಗಾಳಿ, ಮೋಡಗಳು ಮತ್ತು ಅನಾವೃಷ್ಟಿಗಳನ್ನು ಸೂಚಿಸುತ್ತಾನೆ. ॥13॥

(ಶ್ಲೋಕ - 14)

ಮೂಲಮ್

ಅತ ಊರ್ಧ್ವಮಂಗಾರಕೋಪಿ ಯೋಜನಲಕ್ಷದ್ವಿತಯ ಉಪಲಭ್ಯಮಾನಸಿಭಿಸಿಭಿಃ ಪಕ್ಷೈರೇಕೈಕಶೋ ರಾಶೀನ್ದ್ವಾದಶಾನುಭುಂಕ್ತೇ ಯದಿ ನ ವಕ್ರೇಣಾಭಿವರ್ತತೇ ಪ್ರಾಯೇಣಾಶುಭಗ್ರಹೋಘಶಂಸಃ ॥

ಅನುವಾದ

ಬುಧಗ್ರಹನಿಂದ ಎರಡುಲಕ್ಷ ಯೋಜನಗಳಷ್ಟು ಮೇಲೆ ಮಂಗಳಗ್ರಹವಿದೆ. ಇವನು ವಕ್ರಗತಿಯಿಂದ ನಡೆಯದಿದ್ದರೆ ಒಂದೊಂದು ರಾಶಿಯನ್ನು ಮೂರು-ಮೂರು ಪಕ್ಷಗಳಲ್ಲಿ ಭೋಗಿಸುತ್ತಾ ಹನ್ನೆರಡೂ ರಾಶಿಯನ್ನು ದಾಟುತ್ತಾನೆ. ಇವನು ಅಶುಭಗ್ರಹನಾಗಿದ್ದು ಪ್ರಾಯಶಃ ಅಮಂಗಳ ಸೂಚಕನೇ ಆಗಿದ್ದಾನೆ. ॥14॥

(ಗದ್ಯ - 15)

ಮೂಲಮ್

ತತ ಉಪರಿಷ್ಟಾದ್ವಲಕ್ಷಯೋಜನಾಂತರಗತೋ ಭಗವಾನ್ ಬೃಹಸ್ಪತಿರೇಕೈಕಸ್ಮಿನ್ರಾಶೌ ಪರಿವತ್ಸರಂ ಪರಿವತ್ಸರಂ ಚರತಿ ಯದಿ ನ ವಕ್ರಃ ಸ್ಯಾತ್ಪ್ರಾಯೇಣಾನುಕೂಲೋ ಬ್ರಾಹ್ಮಣಕುಲಸ್ಯ ॥

ಅನುವಾದ

ಮಂಗಳನಿಗಿಂತ ಎರಡುಲಕ್ಷ ಯೋಜನಗಳಷ್ಟು ದೂರದಲ್ಲಿ ಭಗವಾನ್ ಬೃಹಸ್ಪತಿಯಿದ್ದಾನೆ. ಇವನು ವಕ್ರಗತಿಯಿಂದ ನಡೆಯದಿದ್ದರೆ ಒಂದೊಂದು ರಾಶಿಯನ್ನು ಒಂದು ವರ್ಷದಲ್ಲಿ ಭೋಗಿಸುತ್ತಾನೆ. ಇವನು ಸಾಮಾನ್ಯವಾಗಿ ಬ್ರಾಹ್ಮಣ ಕುಲಕ್ಕೆ ಅನುಕೂಲವಾಗಿ ಇರುತ್ತಾನೆ. ॥15॥

(ಗದ್ಯ - 16)

ಮೂಲಮ್

ತತ ಉಪರಿಷ್ಟಾದ್ಯೋಜನಲಕ್ಷದ್ವಯಾತ್ಪ್ರತೀಯಮಾನಃ ಶನೈಶ್ಚರ ಏಕೈಕಸ್ಮಿನ್ರಾಶೌ ತ್ರಿಂಶನ್ಮಾಸಾನ್ವಿಲಂಬಮಾನಃ ಸರ್ವಾ- ನೇವಾನುಪರ್ಯೇತಿ ತಾವದ್ಭಿರನುವತ್ಸರೈಃ ಪ್ರಾಯೇಣ ಹಿ ಸರ್ವೇಷಾಮಶಾಂತಿಕರಃ ॥

ಅನುವಾದ

ಬೃಹಸ್ಪತಿಗಿಂತ ಎರಡುಲಕ್ಷ ಯೋಜನಗಳಷ್ಟು ಮೇಲೆ ಶನೈಶ್ಚರನು ಕಂಡುಬರುತ್ತಾನೆ. ಇವನು ಮೂವತ್ತು ತಿಂಗಳು ತನಕ ಒಂದೊಂದು ರಾಶಿಯಲ್ಲಿ ಇರುತ್ತಾನೆ. ಆದ್ದರಿಂದ ಇವನಿಗೆ ಎಲ್ಲ ರಾಶಿಗಳನ್ನು ದಾಟಲು ಮೂವತ್ತು ವರ್ಷಗಳು ಬೇಕಾಗುತ್ತವೆ. ಇವನು ಸಾಮಾನ್ಯವಾಗಿ ಎಲ್ಲರಿಗೆ ಅಶಾಂತಿಕಾರಕನಾಗಿದ್ದಾನೆ. ॥16॥

(ಗದ್ಯ - 17)

ಮೂಲಮ್

ತತ ಉತ್ತರಸ್ಮಾದೃಷಯ ಏಕಾದಶಲಕ್ಷಯೋಜನಾಂತರ ಉಪಲಭ್ಯಂತೇ ಯ ಏವ ಲೋಕಾನಾಂ ಶಮನುಭಾವಯಂತೋ ಭಗವತೋ ವಿಷ್ಣೋರ್ಯತ್ಪರಮಂ ಪದಂ ಪ್ರದಕ್ಷಿಣಂ ಪ್ರಕ್ರಮಂತಿ ॥

ಅನುವಾದ

ಶನಿಗ್ರಹದ ಮೇಲೆ ಹನ್ನೆರಡು ಲಕ್ಷಯೋಜನ ದೂರದಲ್ಲಿ ಕಶ್ಯಪಾದಿ ಸಪ್ತರ್ಷಿಗಳು ಕಂಡು ಬರುವರು. ಇವರು ಎಲ್ಲ ಲೋಕಗಳಿಗೂ ಮಂಗಳವನ್ನು ಬಯಸುತ್ತಾ ಭಗವಾನ್ ವಿಷ್ಣುವಿನ ಪರಮಪದವಾದ ಧ್ರುವಲೋಕವನ್ನು ಪ್ರದಕ್ಷಿಣೆ ಮಾಡುತ್ತಾರೆ. ॥17॥

ಅನುವಾದ (ಸಮಾಪ್ತಿಃ)

ಇಪ್ಪತ್ತೆರಡನೆಯ ಅಧ್ಯಾಯವು ಮುಗಿಯಿತು. ॥22॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಜ್ಯೋತಿಶ್ಚಕ್ರವರ್ಣನೇ ದ್ವಾವಿಂಶೋಽಧ್ಯಾಯಃ ॥22॥