[ಇಪ್ಪತ್ತೊಂದನೆಯ ಅಧ್ಯಾಯ]
ಭಾಗಸೂಚನಾ
ಸೂರ್ಯನ ರಥ ಮತ್ತು ಅದರ ಗತಿಗಳ ವರ್ಣನೆ
(ಗದ್ಯ - 1)
ಮೂಲಮ್ (ವಾಚನಮ್)
ಶ್ರೀ ಶುಕ ಉವಾಚ
ಮೂಲಮ್
ಏತಾವಾನೇವ ಭೂವಲಯಸ್ಯ ಸಂನಿವೇಶಃ ಪ್ರಮಾಣ ಲಕ್ಷಣತೋ ವ್ಯಾಖ್ಯಾತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ಇಲ್ಲಿಯವರೆಗೆ ನಿನಗೆ ಇಡೀ ಭೂಮಂಡಲದ ವಿಸ್ತಾರವನ್ನು ಲಕ್ಷಣ-ಪ್ರಮಾಣಗಳೊಡನೆ ವಿವರಿಸಿದೆನು. (ಇನ್ನು ಖಗೋಳದ ಸ್ವರೂಪವನ್ನು ವಿವರಿಸುವೆನು.) ॥1॥
(ಗದ್ಯ - 2)
ಮೂಲಮ್
ಏತೇನ ಹಿ ದಿವೋ ಮಂಡಲಮಾನಂ ತದ್ವಿದ ಉಪದಿಶಂತಿ ಯಥಾ ದ್ವಿದಲಯೋರ್ನಿಷ್ಪಾವಾದೀನಾಂ ತೇ ಅಂತರೇಣಾಂತರಿಕ್ಷಂ ತದುಭಯಸಂಧಿತಮ್ ॥
ಅನುವಾದ
ಭೂಮಂಡಲದ ವಿಸ್ತಾರಕ್ಕನುಸಾರವಾಗಿಯೇ ದ್ಯುಲೋಕದ ಪರಿಮಾಣವನ್ನು ವಿದ್ವಾಂಸರು ನಿರೂಪಿಸುತ್ತಾರೆ. ಅವರೆಯೇ ಮುಂತಾದ ದ್ವಿದಳ ಧಾನ್ಯಗಳ ಒಂದು ಹೋಳಿನ ಪರಿಮಾಣವನ್ನು ತಿಳಿದಾಗ ಮತ್ತೊಂದರ ಪರಿಮಾಣವೂ ತಿಳಿಯುವಂತೆ ಭೂಲೋಕದ ಪರಿಮಾಣದಿಂದಲೇ ದ್ಯುಲೋಕದ ಪರಿಮಾಣವನ್ನು ತಿಳಿದುಕೊಳ್ಳಬೇಕು. ಇವೆರಡರ ನಡುವೆ ಅಂತರಿಕ್ಷ ಲೋಕವಿದೆ. ಇದು ಇವೆರಡರ ಸಂಧಿಸ್ಥಾನವಾಗಿದೆ. ॥2॥
(ಗದ್ಯ - 3)
ಮೂಲಮ್
ಯನ್ಮಧ್ಯಗತೋ ಭಗವಾಂಸ್ತಪತಾಂಪತಿಸ್ತಪನ ಆತಪೇನ ತ್ರಿಲೋಕೀಂ ಪ್ರತಪತ್ಯವಭಾಸಯತ್ಯಾತ್ಮಭಾಸಾ ಸ ಏಷ ಉದಗಯನದಕ್ಷಿಣಾಯನವೈಷುವತಸಂಜ್ಞಾಭಿರ್ಮಾಂದ್ಯಶೈಘ್ರ್ಯಸಮಾನಾಭಿರ್ಗತಿಭಿರಾರೋಹಣಾವರೋಹಣಸಮಾನಸ್ಥಾನೇಷು ಯಥಾಸವನಮಭಿಪದ್ಯಮಾನೋ ಮಕರಾದಿಷು ರಾಶಿಷ್ವಹೋರಾತ್ರಾಣಿ ದೀರ್ಘಹ್ರಸ್ವಸಮಾನಾನಿ ವಿಧತ್ತೆ ॥
ಅನುವಾದ
ಇದರ ಮಧ್ಯಭಾಗದಲ್ಲಿ ಇರುವ ಗ್ರಹ-ನಕ್ಷತ್ರಗಳ ಅಧಿಪತಿ ಭಗವಾನ್ ಸೂರ್ಯನು ಮೂರೂ ಲೋಕಗಳಿಗೆ ತನ್ನ ಬಿಸಿಲು ಮತ್ತು ಪ್ರಕಾಶಗಳನ್ನು ಬೀರುತ್ತಿರುವನು. ಅವನು ಉತ್ತರಾಯಣ, ದಕ್ಷಿಣಾಯನ ಮತ್ತು ವಿಷುವತ್ ಎಂಬ ನಾಮಗಳಿಂದ ಕ್ರಮವಾಗಿ ಮಂದ, ಶೀಘ್ರ ಮತ್ತು ಸಮಾನ ಗತಿಗಳಿಂದ ನಡೆಯುತ್ತಾ ಸಮಯಕ್ಕೆ ಸರಿಯಾಗಿ ಮಕರಾದಿ ರಾಶಿಗಳಲ್ಲಿ ಮೇಲೆ, ಕೆಳಗೆ ಮತ್ತು ಸಮಾನ ಸ್ಥಾನಗಳಲ್ಲಿ ಸಂಚರಿಸುತ್ತಾ ಹಗಲು-ರಾತ್ರೆಗಳನ್ನು ದೊಡ್ಡದು-ಸಣ್ಣದು ಅಥವಾ ಸಮಾನವಾಗಿ ಮಾಡುತ್ತಾನೆ.॥3॥
(ಗದ್ಯ - 4)
ಮೂಲಮ್
ಯದಾ ಮೇಷತುಲಯೋರ್ವರ್ತತೇ ತದಾಹೋರಾತ್ರಾಣಿ ಸಮಾನಾನಿ ಭವಂತಿ ಯದಾ ವೃಷಭಾದಿಷು ಪಂಚಸು ಚ ರಾಶಿಷು ಚರತಿ ತದಾಹಾನ್ಯೇವ ವರ್ಧಂತೇ ಹ್ರಸತಿ ಚ ಮಾಸಿ ಮಾಸ್ಯೇಕೈಕಾಘಟಿಕಾ ರಾತ್ರಿಷು ॥
ಅನುವಾದ
ಸೂರ್ಯನು ಮೇಷರಾಶಿ-ತುಲಾರಾಶಿಯಲ್ಲಿ ಬಂದಾಗ ಹಗಲು-ರಾತ್ರಿಗಳು ಸಮವಾಗಿರುತ್ತವೆ. ವೃಷಭವೇ ಮುಂತಾದ ಐದು ರಾಶಿಗಳಲ್ಲಿ ಸಂಚರಿಸುವಾಗ ಪ್ರತಿತಿಂಗಳ ರಾತ್ರಿಗಳಲ್ಲಿ ಒಂದೊಂದು ಗಳಿಗೆ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಅದೇ ಲೆಕ್ಕದಲ್ಲಿ ಹಗಲು ಬೆಳೆಯುತ್ತಾ ಹೋಗುತ್ತದೆ. ॥4॥
(ಗದ್ಯ - 5)
ಮೂಲಮ್
ಯದಾ ವೃಶ್ಚಿಕಾದಿಷು ಪಂಚಸು ವರ್ತತೇ ತದಾಹೋರಾತ್ರಾಣಿ ವಿಪರ್ಯಯಾಣಿ ಭವಂತಿ ॥
ಅನುವಾದ
ವೃಶ್ಚಿಕವೇ ಮುಂತಾದ ಐದು ರಾಶಿಗಳಲ್ಲಿ ಅವನು ಸಂಚರಿಸುವಾಗ ಹಗಲು-ರಾತ್ರಿಗಳ ಪ್ರಮಾಣವು ಅದಕ್ಕೆ ವಿರುದ್ಧವಾಗಿ ಆಗುವುದು. ॥5॥
(ಗದ್ಯ - 6)
ಮೂಲಮ್
ಯಾವದ್ದಕ್ಷಿಣಾಯನಮಹಾನಿ ವರ್ಧಂತೇ ಯಾವದುದಗಯನಂ ರಾತ್ರಯಃ ॥
ಅನುವಾದ
ಹೀಗೆ ದಕ್ಷಿಣಾಯನವು ಪ್ರಾರಂಭವಾಗುವ ತನಕ ಹಗಲು ಹಿಗ್ಗುತ್ತಾ ಹೋಗುವುವು. ಉತ್ತರಾಯಣವು ಬರುವವರೆವಿಗೂ ರಾತ್ರಿಯು ಹೆಚ್ಚುತ್ತಾ ಹೋಗುವುದು. ॥6॥
(ಗದ್ಯ - 7)
ಮೂಲಮ್
ಏವಂ ನವ ಕೋಟಯ ಏಕಪಂಚಾಶಲ್ಲಕ್ಷಾಣಿ ಯೋಜನಾನಾಂ ಮಾನಸೋತ್ತರಗಿರಿಪರಿವರ್ತನಸ್ಯೋಪದಿಶಂತಿ ತಸ್ಮಿನ್ನೈಂದ್ರೀಂ ಪುರೀಂ ಪೂರ್ವಸ್ಮಾನ್ಮೇರೋರ್ದೇವಧಾನೀಂ ನಾಮ ದಕ್ಷಿಣತೋ ಯಾಮ್ಯಾಂ ಸಂಯಮನೀಂ ನಾಮ ಪಶ್ಚಾದ್ವಾರುಣೀಂ ನಿಮ್ಲೋಚನೀಂ ನಾಮ ಉತ್ತರತಃ ಸೌಮ್ಯಾಂ ವಿಭಾವರೀಂ ನಾಮ ತಾಸೂದಯಮಧ್ಯಾಹ್ನಾಸ್ತಮಯನಿಶೀಥಾನೀತಿ ಭೂತಾನಾಂ ಪ್ರವೃತ್ತಿನಿವೃತ್ತಿನಿಮಿತ್ತಾನಿ ಸಮಯವಿಶೇಷೇಣ ಮೇರೋಶ್ಚತುರ್ದಿಶಮ್ ॥
ಅನುವಾದ
ಹೀಗೆ ಮಾನಸೋತ್ತರ ಪರ್ವತದ ಮೇಲೆ ಸೂರ್ಯನ ಪ್ರದಕ್ಷಿಣೆಯ ಮಾರ್ಗವು ಒಂಭತ್ತುಕೋಟಿ ಐವತ್ತೊಂದು ಲಕ್ಷ ಯೋಜನವೆಂದು ವಿದ್ವಾಂಸರು ಹೇಳುತ್ತಾರೆ. ಆ ಪರ್ವತದಲ್ಲಿ ಮೇರುವಿನ ಪೂರ್ವದ ಕಡೆಗೆ ಇಂದ್ರನ ದೇವಧಾನೀ, ದಕ್ಷಿಣದಲ್ಲಿ ಯಮರಾಜನ ಸಂಯಮನೀ, ಪಶ್ಚಿಮದಲ್ಲಿ ವರುಣನ ನಿಮ್ಲೋಚನೀ ಮತ್ತು ಉತ್ತರದಲ್ಲಿ ಚಂದ್ರನ ವಿಭಾವರೀ ಹೆಸರಿನ ಪುರಿಗಳು ಇವೆ. ಈ ಪುರಿಗಳಲ್ಲಿ ಮೇರುವಿನ ನಾಲ್ಕೂ ಕಡೆಗಳಲ್ಲಿ ಕಾಲ-ಕಾಲಗಳಲ್ಲಿ ಕ್ರಮವಾಗಿ ಸೂರ್ಯೋದಯ, ಮಧ್ಯಾಹ್ನ, ಸಾಯಂಕಾಲ ಮತ್ತು ಅರ್ಧರಾತ್ರಿ ಆಗುತ್ತಾ ಇರುತ್ತವೆ. ಇವುಗಳಿಂದಾಗಿಯೇ ಸಮಸ್ತ ಜೀವನ ಪ್ರವೃತ್ತಿ ಮತ್ತು ನಿವೃತ್ತಿಗಳು ಆಗುತ್ತಾ ಇರುತ್ತವೆ. ॥7॥
(ಗದ್ಯ - 8)
ಮೂಲಮ್
ತತ್ರತ್ಯಾನಾಂ ದಿವಸಮಧ್ಯಂಗತ ಏವ ಸದಾದಿತ್ಯಸ್ತಪತಿ ಸವ್ಯೇನಾಚಲಂ ದಕ್ಷಿಣೇನ ಕರೋತಿ ॥
ಅನುವಾದ
ಸುಮೇರು ಪರ್ವತದಲ್ಲಿ ವಾಸಿಸುವವರಿಗಾದರೋ ಸೂರ್ಯನ ಸದಾಕಾಲ ಮಧ್ಯಾಹ್ನದಲ್ಲಿರುವಂತೆಯೇ ಸುಡುತ್ತಿರುವನು. ಅವನು ತನ್ನ ಗತಿಗನುಸಾರವಾಗಿ ಅಶ್ವಿನಿಯೇ ಮುಂತಾದ ನಕ್ಷತ್ರಗಳ ಕಡೆಗೆ-ಮೇರುವನ್ನು ಎಡಗಡೆ ಇರುವಂತೆ ನಡೆದರೂ ಇಡೀ ಜ್ಯೋತಿರ್ಮಂಡಲವನ್ನು ತಿರುಗಿಸುವಂತಹ ನಿರಂತರ ಬಲಗಡೆಗೆ ಬೀಸುತ್ತಾ ವಾಯುವಿನ ಮೂಲಕ ತಿರುಗಿಸುವುದರಿಂದ ಸೂರ್ಯನು ಬಲಗಡೆಗೆ ಇರಿಸಿ ನಡೆದಂತೆ ಕಂಡುಬರುತ್ತಾನೆ. ॥8॥
(ಗದ್ಯ - 9)
ಮೂಲಮ್
ಯತ್ರೋದೇತಿ ತಸ್ಯ ಹ ಸಮಾನ- ಸೂತ್ರನಿಪಾತೇ ನಿಮ್ಲೋಚತಿ ಯತ್ರ ಕ್ವಚನ ಸ್ಯಂದೇನಾಭಿತಪತಿ ತಸ್ಯ ಹೈಷ ಸಮಾನಸೂತ್ರನಿಪಾತೇ ಪ್ರಸ್ವಾಪಯತಿ ತತ್ರ ಗತಂ ನ ಪಶ್ಯಂತಿ ಯೇ ತಂ ಸಮನುಪಶ್ಯೇರನ್ ॥
ಅನುವಾದ
ಯಾವ ಪುರದಲ್ಲಿ ಭಗವಾನ್ ಸೂರ್ಯನು ಉದಯಿಸುತ್ತಾನೋ ಅದರ ಸರಿಯಾಗಿ ಇನ್ನೊಂದು ತುದಿಯ ಪುರಿಯಲ್ಲಿ ಅವನು ಅಸ್ತನಾದಂತೆ ಕಾಣುತ್ತಾನೆ. ಎಲ್ಲಿ ಮಧ್ಯಾಹ್ನದ ಉರಿಬಿಸಿಲಲ್ಲಿ ಬೆವರಿನಿಂದ ಉರಿಯುತ್ತಾರೋ ಅದಕ್ಕೆ ಸರಿಯಾಗಿ ಇನ್ನೊಂದು ತುದಿಯಲ್ಲಿ ಅರ್ಧರಾತ್ರಿಯಾದ ಕಾರಣ ಅವರು ನಿದ್ರಾವಶರಾಗಿರು ವರು. ಯಾವ ಜನರಿಗೆ ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ಸ್ಪಷ್ಟವಾಗಿ ಕಾಣಿಸುತ್ತಿರುವವರಿಗೆ ಸೂರ್ಯನು ಸೌಮದಿಶೆಯಲ್ಲಿ ತಲುಪಿದಾಗ ಅವನ ದರ್ಶನ ವಾಗಲಾರದು. ॥9॥
(ಗದ್ಯ - 10)
ಮೂಲಮ್
ಯದಾ ಚೈಂದ್ರ್ಯಾಃ ಪುರ್ಯಾಃ ಪ್ರಚಲತೇ ಪಂಚದಶಘಟಿಕಾಭಿರ್ಯಾಮ್ಯಾಂ ಸಪಾದಕೋಟಿದ್ವಯಂ ಯೋಜನಾನಾಂ ಸಾರ್ಧದ್ವಾದಶಲಕ್ಷಾಣಿ ಸಾಧಿಕಾನಿ ಚೋಪಯಾತಿ ॥
ಅನುವಾದ
ಸೂರ್ಯನು ಇಂದ್ರನ ಪುರಿಯಿಂದ ಹೊರಟಾಗ ಮೊದಲ ಹದಿನೈದು ಗಳಿಗೆಯಲ್ಲಿ ಎರಡುಕೋಟಿ ಮೂವತ್ತೇಳುಲಕ್ಷ ಎಪ್ಪತ್ತೈದು ಸಾವಿರ ಯೋಜನಗಳ ದೂರದಲ್ಲಿರುವ ಯಮನ ಪುರಿಯನ್ನು ತಲುಪುವನು. ॥10॥
(ಗದ್ಯ - 11)
ಮೂಲಮ್
ಏವಂ ತತೋ ವಾರುಣೀಂ ಸೌಮ್ಯಾಮೈಂದ್ರೀಂ ಚ ಪುನಸ್ತಥಾನ್ಯೇ ಚ ಗ್ರಹಾಃ ಸೋಮಾದಯೋ ನಕ್ಷತ್ರೈಃ ಸಹ ಜ್ಯೋತಿಶ್ಚಕ್ರೇ ಸಮಭ್ಯುದ್ಯಂತಿ ಸಹ ವಾ ನಿಮ್ಲೋಚಂತಿ ॥
ಅನುವಾದ
ಹೀಗೆಯೇ ಕ್ರಮ ವಾಗಿ ವರುಣನ ಮತ್ತು ಚಂದ್ರನಪುರಗಳನ್ನು ದಾಟಿ ಅರವತ್ತು ಗಳಿಗೆಯಲ್ಲಿ ಪುನಃ ಇಂದ್ರನ ಪುರಿಯನ್ನು ತಲುಪುತ್ತಾನೆ. ಹೀಗೆಯೇ ಚಂದ್ರನೇ ಮುಂತಾದ ಬೇರೆ ಗ್ರಹಗಳೂ ಜ್ಯೋತಿ ಶ್ಚಕ್ರದಲ್ಲಿ ಬೇರೆ ನಕ್ಷತ್ರಗಳೊಂದಿಗೆ ಉದಯಿಸಿ, ಅಸ್ತವಾಗುತ್ತಾ ಇರುತ್ತಾರೆ. ॥11॥
(ಗದ್ಯ - 12)
ಮೂಲಮ್
ಏವಂ ಮುಹೂರ್ತೇನ ಚತುಸಿಂಶಲ್ಲಕ್ಷಯೋಜನಾನ್ಯಷ್ಟಶತಾಧಿಕಾನಿ ಸೌರೋ ರಥಸಯೀಮಯೋಸೌ ಚತಸೃಷು ಪರಿವರ್ತತೇ ಪುರೀಷು ॥
ಅನುವಾದ
ಹೀಗೆಯೇ ಸೂರ್ಯದೇವನ ವೇದಮಯ ರಥವು ಒಂದು ಮುಹೂರ್ತದಲ್ಲಿ ಮೂವತ್ತನಾಲ್ಕು ಲಕ್ಷ ಎಂಟುನೂರು ಯೋಜನಗಳ ಲೆಕ್ಕದಲ್ಲಿ ನಡೆಯುತ್ತಾ ನಾಲ್ಕೂ ಪುರಗಳಲ್ಲಿ ಸಂಚರಿಸುತ್ತಿರುವುದು. ॥12॥
(ಗದ್ಯ - 13)
ಮೂಲಮ್
ಯಸ್ಯೈಕಂ ಚಕ್ರಂ ದ್ವಾದಶಾರಂ ಷಣ್ನೇಮಿ ತ್ರಿಣಾಭಿ ಸಂವತ್ಸರಾತ್ಮಕಂ ಸಮಾಮನಂತಿ ತಸ್ಯಾಕ್ಷೋ ಮೇರೋರ್ಮೂರ್ಧನಿ ಕೃತೋ ಮಾನಸೋತ್ತರೇ ಕೃತೇತರಭಾಗೋ ಯತ್ರ ಪ್ರೋತಂ ರವಿರಥಚಕ್ರಂ ತೈಲಯಂತ್ರಚಕ್ರವದ್ಭ್ರಮನ್ಮಾನಸೋತ್ತರಗಿರೌ ಪರಿಭ್ರಮತಿ ॥
ಅನುವಾದ
ಸೂರ್ಯದೇವನ ರಥಕ್ಕೆ ಸಂವತ್ಸರವೆಂಬ ಒಂದೇ ಒಂದು ಚಕ್ರವಿದೆ. ಹನ್ನೆರಡು ಮಾಸಗಳೇ ಅದರ ಅರೆಕಾಲುಗಳು. ಆರು ಋತುಗಳೇ ಅದರ ಪಟ್ಟಿ (ಅಂಚು)ಗಳು. ಚಾತುರ್ಮಾಸ್ಯವೇ (ನಾಲ್ಕು ತಿಂಗಳುಗಳು) ಅದರ ನಾಭಿಯು. ಈ ರಥದ ಅಚ್ಚಿನ ಒಂದು ತುದಿಯು ಮೇರುಪರ್ವತದ ಶಿಖರದಲ್ಲಿ ನಿಂತಿದೆ ಮತ್ತು ಇನ್ನೊಂದು ಮಾನಸೋತ್ತರ ಪರ್ವತದ ಮೇಲಿದೆ. ಅಚ್ಚಿಗೆ ಸೇರಿಕೊಂಡಿರುವ ಈ ಚಕ್ರವು ಎಣ್ಣೆಯ ಗಾಣದ ಚಕ್ರದಂತೆ ಮಾನಸೋತ್ತರ ಪರ್ವತದ ಮೇಲೆ ಸುತ್ತುತ್ತಾ ಇರುತ್ತದೆ. ॥13॥
(ಗದ್ಯ - 14)
ಮೂಲಮ್
ತಸ್ಮಿನ್ನಕ್ಷೇ ಕೃತಮೂಲೋ ದ್ವಿತೀಯೋಕ್ಷಸ್ತುರ್ಯಮಾನೇನ ಸಮ್ಮಿತಸ್ತೈಲಯಂತ್ರಾಕ್ಷವದ್ಧ್ರುವೇ ಕೃತೋಪರಿಭಾಗಃ ॥
ಅನುವಾದ
ಈ ಅಚ್ಚಿನಲ್ಲಿ ಜೋಡಿಸಲ್ಪಟ್ಟ ಮೂಲಭಾಗವುಳ್ಳ ಮತ್ತೊಂದು ಅಚ್ಚು ಇದೆ. ಅದು ಉದ್ದದಲ್ಲಿ ಇದರ ನಾಲ್ಕನೆಯ ಒಂದಂಶವಿದೆ. ಅದರ ಮೇಲ್ಭಾಗವು ಎಣ್ಣೆಯ ಗಾಣದ ಅಚ್ಚಿನಂತೆ ಧ್ರುವಲೋಕಕ್ಕೆ ಜೋಡಿಸಲ್ಪಟ್ಟಿದೆ.॥14॥
(ಗದ್ಯ - 15)
ಮೂಲಮ್
ರಥನೀಡಸ್ತು ಷಟ್ತ್ರಿಂಶಲ್ಲಕ್ಷಯೋಜನಾಯತಸ್ತತ್ತುರೀಯಭಾಗವಿಶಾಲಸ್ತಾವಾನ್ರವಿರಥಯುಗೋ ಯತ್ರ ಹಯಾಶ್ಛಂದೋನಾಮಾನಃ ಸಪ್ತಾರುಣಯೋಜಿತಾ ವಹಂತಿ ದೇವಮಾದಿತ್ಯಮ್ ॥
ಅನುವಾದ
ಈ ರಥದಲ್ಲಿ ಕೂರುವ ಜಾಗವು ಮೂವತ್ತಾರು ಲಕ್ಷ ಯೋಜನ ಉದ್ದವೂ, ಒಂಭತ್ತು ಲಕ್ಷಯೋಜನ ಅಗಲವು ಇದೆ. ಇದರ ನೊಗವು ಮೂವತ್ತಾರು ಲಕ್ಷಯೋಜನ ಉದ್ದವಾಗಿದೆ. ಅದರಲ್ಲಿ ಅರುಣನೆಂಬ ಸಾರಥಿಯು ಗಾಯತ್ರಿಯೇ ಮುಂತಾದ ಹೆಸರುಳ್ಳ ಏಳು ಕುದುರೆಗಳನ್ನು ಹೂಡಿರುವನು. ಅವನೇ ಈ ರಥದಲ್ಲಿ ಕುಳಿತಿರುವ ಭಗವಾನ್ ಸೂರ್ಯದೇವನನ್ನು ಕೊಂಡುಹೋಗುತ್ತಾನೆ. ॥15॥
(ಗದ್ಯ - 16)
ಮೂಲಮ್
ಪುರಸ್ತಾತ್ಸವಿತುರರುಣಃ ಪಶ್ಚಾಚ್ಚ ನಿಯುಕ್ತಃ ಸೌತ್ಯೇ ಕರ್ಮಣಿ ಕಿಲಾಸ್ತೇ ॥
ಅನುವಾದ
ಸೂರ್ಯದೇವನ ಮುಂದೆ ಅವನ ಕಡೆಗೆ ಮುಖಮಾಡಿ ಕುಳಿತಿರುವ ಅರುಣನು ಅವನ ಸಾರಥ್ಯದ ಕಾರ್ಯವನ್ನು ಮಾಡುತ್ತಾನೆ. ॥16॥
(ಗದ್ಯ - 17)
ಮೂಲಮ್
ತಥಾ ವಾಲಖಿಲ್ಯಾ ಋಷಯೋಂಗುಷ್ಠಪರ್ವಮಾತ್ರಾಃ ಷಷ್ಟಿ- ಸಹಸ್ರಾಣಿ ಪುರತಃ ಸೂರ್ಯಂ ಸೂಕ್ತವಾಕಾಯ ನಿಯುಕ್ತಾಃ ಸಂಸ್ತುವಂತಿ ॥
ಅನುವಾದ
ಭಗವಾನ್ ಸೂರ್ಯನ ಮುಂದೆ ಹೆಬ್ಬೆರಳಿನ ಗಿಣ್ಣಿನಷ್ಟು ಪ್ರಮಾಣವುಳ್ಳ ವಾಲಖಿಲ್ಯರೇ ಮುಂತಾದ ಅರವತ್ತುಸಾವಿರ ಮಂದಿ ಋಷಿಗಳು ಸ್ವಸ್ತಿವಾಚನಕ್ಕಾಗಿ ನಿಯುಕ್ತರಾಗಿದ್ದಾರೆ. ಅವರು ಸೂರ್ಯನನ್ನು ಸ್ತುತಿಸುತ್ತಾ ಇರುತ್ತಾರೆ. ॥17॥
(ಗದ್ಯ - 18)
ಮೂಲಮ್
ತಥಾನ್ಯೇ ಚ ಋಷಯೋ ಗಂಧರ್ವಾಪ್ಸರಸೋ ನಾಗಾಗ್ರಾಮಣ್ಯೋ ಯಾತುಧಾನಾ ದೇವಾ ಇತ್ಯೇಕೈಕಶೋ ಗಣಾಃ ಸಪ್ತ ಚತುರ್ದಶ ಮಾಸಿ ಮಾಸಿ ಭಗವಂತಂ ಸೂರ್ಯಮಾತ್ಮಾನಂ ನಾನಾನಾಮಾನಂ ಪೃಥಙ್ನಾನಾನಾಮಾನಃ ಪೃಥಕ್ಕರ್ಮಭಿರ್ದ್ವಂದ್ವಶ ಉಪಾಸತೇ ॥
ಅನುವಾದ
ಇವರಲ್ಲದೆ ಋಷಿಗಳು, ಗಂಧರ್ವರು, ಅಪ್ಸರೆಯರು, ನಾಗರು, ಯಕ್ಷರು, ರಾಕ್ಷಸರು, ದೇವತೆಗಳು ಇವರುಗಳೂ ಕೂಡ ಆತನನ್ನು ಆರಾಧಿಸುತ್ತಿರುವರು. ಇವರ ಸಂಖ್ಯೆ ಒಟ್ಟು ಹದಿನಾಲ್ಕು. ಆದರೆ ಜೋಡಿಗಳಾಗಿರುವುದ ರಿಂದ ಏಳು ಗಣಗಳೆನಿಸುತ್ತಾರೆ. ಪ್ರತಿಯೊಂದು ತಿಂಗಳಲ್ಲಿ ಬೇರೆ-ಬೇರೆ ಹೆಸರುಳ್ಳವರಾಗಿ ತಮ್ಮ ಬೇರೆ-ಬೇರೆ ಕರ್ಮಗಳಿಂದ ಪ್ರತಿಯೊಂದು ತಿಂಗಳಿನಲ್ಲಿಯೂ ಬೇರೆ-ಬೇರೆ ಹೆಸರುಗಳನ್ನು ಧರಿಸುವ ಆತ್ಮಸ್ವರೂಪ ಭಗವಾನ್ ಸೂರ್ಯನನ್ನು ಇಬ್ಬರಿಬ್ಬರು ಕೂಡಿ ಉಪಾಸನೆ ಮಾಡುತ್ತಾರೆ. ॥18॥
(ಗದ್ಯ - 19)
ಮೂಲಮ್
ಲಕ್ಷೋತ್ತರಂ ಸಾರ್ಧನವಕೋಟಿಯೋಜನಪರಿಮಂಡಲಂ ಭೂವಲಯಸ್ಯ ಕ್ಷಣೇನ ಸಗ- ವ್ಯೆತ್ಯುತ್ತರಂ ದ್ವಿಸಹಸ್ರಯೋಜನಾನಿ ಸ ಭುಂಕ್ತೇ ॥
ಅನುವಾದ
ಹೀಗೆ ಸೂರ್ಯ ಭಗವಂತನು ಭೂಮಂಡಲದ ಒಂಭತ್ತು ಕೋಟಿ ಐವತ್ತೊಂದು ಲಕ್ಷ ಯೋಜನ ಉದ್ದದ ಪ್ರದಕ್ಷಿಣೆಯಲ್ಲಿ ಪ್ರತಿಯೊಂದು ಕ್ಷಣದಲ್ಲಿ ಎರಡುಸಾವಿರದ ಎರಡು ಯೋಜನವನ್ನು ದಾಟಿಬಿಡುವನು. ॥19॥
ಅನುವಾದ (ಸಮಾಪ್ತಿಃ)
ಇಪ್ಪತ್ತೊಂದನೆಯ ಅಧ್ಯಾಯವು ಮುಗಿಯಿತು. ॥21॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಜ್ಯೋತಿಶ್ಚಕ್ರಸೂರ್ಯರಥಮಂಡಲವರ್ಣನಂ ನಾಮೈಕವಿಂಶೋಽಧ್ಯಾಯಃ ॥21॥