೨೦

[ಇಪ್ಪತ್ತನೆಯ ಅಧ್ಯಾಯ]

ಭಾಗಸೂಚನಾ

ಇತರ ಆರು ದ್ವೀಪಗಳ ಮತ್ತು ಲೋಕಾಲೋಕ ಪರ್ವತದ ವರ್ಣನೆ

(ಗದ್ಯ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅತಃ ಪರಂ ಪ್ಲಕ್ಷಾದೀನಾಂ ಪ್ರಮಾಣಲಕ್ಷಣಸಂಸ್ಥಾನತೋ ವರ್ಷವಿಭಾಗ ಉಪವರ್ಣ್ಯತೇ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜೇಂದ್ರನೇ! ಇನ್ನು ಪ್ರಮಾಣ, ಲಕ್ಷಣ ಮತ್ತು ಸ್ಥಿತಿಗನುಸಾರ ಪ್ಲಕ್ಷವೇ ಮುಂತಾದ ದ್ವೀಪಗಳ ವರ್ಷವಿಭಾಗಗಳನ್ನು ವರ್ಣಿಸಲಾಗುವುದು. ॥1॥

(ಗದ್ಯ - 2)

ಮೂಲಮ್

ಜಂಬೂದ್ವೀಪೋಯಂ ಯಾವತ್ಪ್ರಮಾಣವಿಸ್ತಾರ- ಸ್ತಾವತಾ ಕ್ಷಾರೋದಧಿನಾ ಪರಿವೇಷ್ಟಿತೋ ಯಥಾ ಮೇರುರ್ಜಂಬ್ವಾಖ್ಯೇನ ಲವಣೋದಧಿರಪಿ ತತೋ ದ್ವಿಗುಣ- ವಿಶಾಲೇನ ಪ್ಲಕ್ಷಾಖ್ಯೇನ ಪರಿಕ್ಷಿಪ್ತೋ ಯಥಾ ಪರಿಖಾ ಬಾಹ್ಯೋಪವನೇನ ಪ್ಲಕ್ಷೋ ಜಂಬೂಪ್ರಮಾಣೋ ದ್ವೀಪಾಖ್ಯಾಕರೋ ಹಿರಣ್ಮಯ ಉತ್ಥಿತೋ ಯತ್ರಾ- ಗ್ನಿರುಪಾಸ್ತೇ ಸಪ್ತಜಿಹ್ವಸ್ತಸ್ಯಾಧಿಪತಿಃ ಪ್ರಿಯವ್ರತಾತ್ಮಜ ಇಧ್ಮ- ಜಿಹ್ವಃ ಸ್ವಂ ದ್ವೀಪಂ ಸಪ್ತವರ್ಷಾಣಿ ವಿಭಜ್ಯ ಸಪ್ತವರ್ಷ- ನಾಮಭ್ಯ ಆತ್ಮಜೇಭ್ಯ ಆಕಲಯ್ಯ ಸ್ವಯಮಾತ್ಮ ಯೋಗೇನೋಪರರಾಮ ॥

ಅನುವಾದ

ಮೇರು ಪರ್ವತವು ಜಂಬೂದ್ವೀಪ ದಿಂದ ಸುತ್ತುವರಿದಂತೆಯೇ ಜಂಬೂದ್ವೀಪವು ತನ್ನಷ್ಟೇ ಅಳತೆ-ವಿಸ್ತಾರಗಳುಳ್ಳ ಲವಣಸಮುದ್ರದಿಂದ ಸುತ್ತು ವರಿಯಲ್ಪಟ್ಟಿದೆ. ಕಂದಕವು ಹೊರಗಿನ ಉಪವನಗಳಿಂದ ಬಳಸಿಕೊಂಡಿರುವಂತೆಯೇ ಲವಣಸಮುದ್ರವೂ ಕೂಡ ತನ್ನಿಂದ ಎರಡರಷ್ಟು ವಿಸ್ತಾರವುಳ್ಳ ಪ್ಲಕ್ಷದ್ವೀಪದಿಂದ ಸುತ್ತು ವರಿಯಲ್ಪಟ್ಟಿದೆ. ಜಂಬೂದ್ವೀಪದಲ್ಲಿ ಎಷ್ಟು ದೊಡ್ಡ ನೇರಳೆ ಮರವಿರುವುದೋ ಇಲ್ಲಿ ಅಷ್ಟೇ ವಿಸ್ತಾರವುಳ್ಳ ಸುವರ್ಣ ಮಯ ಪ್ಲಕ್ಷ (ಬಸರೀಮರ) ವೃಕ್ಷವಿದೆ. ಅದರಿಂದಲೇ ಇದರ ಹೆಸರು ಪ್ಲಕ್ಷ ದ್ವೀಪವೆಂದಾಯಿತು. ಇಲ್ಲಿ ಏಳು ನಾಲಿಗೆಗಳುಳ್ಳ ಅಗ್ನಿದೇವನು ವಿರಾಜಿಸುತ್ತಿರುವನು. ಈ ದ್ವೀಪದ ಅಧಿಪತಿಯು ಪ್ರಿಯವ್ರತಪುತ್ರ ಇಧ್ವಜಿಹ್ವ ಮಹಾ ರಾಜನಿದ್ದನು. ಅವನು ಇದನ್ನು ಏಳುವರ್ಷಗಳಾಗಿ ವಿಂಗಡಿಸಿ, ಅವನ್ನು ಆಯಾ ವರ್ಷದ ಹೆಸರನ್ನೇ ಹೊಂದಿದ ತನ್ನ ಪುತ್ರರಿಗೆ ಒಪ್ಪಿಸಿ, ತಾನು ಅಧ್ಯಾತ್ಮಯೋಗವನ್ನು ಆಶ್ರಯಿಸಿ ಮುಕ್ತನಾದನು. ॥2॥

(ಗದ್ಯ - 3)

ಮೂಲಮ್

ಶಿವಂ ಯವಸಂ ಸುಭದ್ರಂ ಶಾಂತಂ ಕ್ಷೇಮಮಮೃತಮಭಯಮಿತಿ ವರ್ಷಾಣಿ ತೇಷು ಗಿರಯೋ ನದ್ಯಶ್ಚ ಸಪ್ತೈವಾಭಿಜ್ಞಾತಾಃ ॥

ಅನುವಾದ

ಶಿವ, ಯವಸ, ಸುಭದ್ರ, ಶಾಂತ, ಕ್ಷೇಮ, ಅಮೃತ ಮತ್ತು ಅಭಯ ಎಂಬಿವೇ ಆ ಏಳು ವರ್ಷಗಳು. ಇವುಗಳಲ್ಲಿಯೂ ಏಳು ಪರ್ವತಗಳು ಹಾಗೂ ಏಳು ನದಿಗಳೂ ಪ್ರಸಿದ್ಧವಾಗಿವೆ. ॥3॥

(ಗದ್ಯ - 4)

ಮೂಲಮ್

ಮಣಿಕೂಟೋ ವಜ್ರಕೂಟ ಇಂದ್ರಸೇನೋ ಜ್ಯೋತಿಷ್ಮಾನ್ಸುಪರ್ಣೋ ಹಿರಣ್ಯಷ್ಠೀವೋ ಮೇಘಮಾಲ ಇತಿ ಸಪ್ತಶೈಲಾಃ ಅರುಣಾ ನೃಮ್ಣಾಂಗಿರಸೀ ಸಾವಿತ್ರೀ ಸುಪ್ರಭಾತಾ ಋತಂಭರಾ ಸತ್ಯಂಭರಾ ಇತಿ ಮಹಾನದ್ಯಃ ಯಾಸಾಂ ಜಲೋಪಸ್ಪರ್ಶನವಿಧೂತರಜಸ್ತಮಸೋ ಹಂಸಪತಂಗೋರ್ಧ್ವಾಯನಸತ್ಯಾಂಗಸಂಜ್ಞಾಶ್ಚತ್ವಾರೋ ವರ್ಣಾಃ ಸಹಸ್ರಾಯುಷೋ ವಿಬುಧೋಪಮ- ಸಂದರ್ಶನಪ್ರಜನನಾಃ ಸ್ವರ್ಗದ್ವಾರಂ ತ್ರಯ್ಯಾ ವಿದ್ಯಯಾ ಭಗವಂತಂ ತ್ರಯೀಮಯಂ ಸೂರ್ಯಮಾತ್ಮಾನಂ ಯಜಂತೇ ॥

ಅನುವಾದ

ಮಣಿಕೂಟ, ವಜ್ರ ಕೂಟ, ಇಂದ್ರಸೇನ, ಜ್ಯೋತಿಷ್ಮಾನ್, ಸುಪರ್ಣ, ಹಿರಣ್ಯ ಷ್ಠೀವ ಮತ್ತು ಮೇಘಮಾಲ ಎಂಬ ಏಳು ಮೆರೆಯಾಗಿರುವ ಪರ್ವತಗಳು. ಅರುಣಾ, ನೃಮ್ಣಾ, ಆಂಗೀರಸೀ, ಸಾವಿತ್ರೀ, ಸುಪ್ರಭಾತಾ, ಋತಂಭರಾ ಹಾಗೂ ಸತ್ಯಂಭರಾ ಎಂಬ ಏಳು ಮಹಾನದಿಗಳು. ಅಲ್ಲಿ ಹಂಸ, ಪತಂಗ, ಊರ್ಧ್ವಾಯನ, ಸತ್ಯಾಂಕ ಎಂಬ ನಾಲ್ಕು ವರ್ಣಗಳಿಗೆ ಸೇರಿದ ಜನರಿದ್ದಾರೆ. ಇವರು ಮೇಲೆ ಹೇಳಿದ ನದಿಗಳಲ್ಲಿ ಸ್ನಾನಮಾಡಿ ಇವರ ರಜೋಗುಣ-ತಮೋಗುಣ ಕಳೆದುಕೊಂಡವರಾಗಿ ಸಾವಿರ ವರ್ಷಗಳ ಆಯುಸ್ಸುಳ್ಳವರಾಗಿದ್ದಾರೆ. ಇವರ ಶರೀರಗಳಲ್ಲಿ ದೇವತೆಗಳಂತೆ ಬಳಲಿಕೆ, ಬೆವರು ಮುಂತಾದವುಗಳು ಇರುವುದಿಲ್ಲ. ಸಂತಾನೋತ್ಪತ್ತಿಯೂ ಅವರಂತೆಯೇ ಇರು ತ್ತದೆ. ಇವರು ತ್ರಯೀ ವಿದ್ಯೆಮೂಲಕ ಮೂರೂ ವೇದಗಳಲ್ಲಿ ವರ್ಣಿಸಿರುವ ಸ್ವರ್ಗದ ದ್ವಾರದಂತಿರುವ ಆತ್ಮಸ್ವರೂಪ ನಾದ ಭಗವಾನ್ ಸೂರ್ಯನನ್ನು ಉಪಾಸಿಸುತ್ತಾರೆ. ॥4॥

(ಗದ್ಯ - 5)

ಮೂಲಮ್

ಪ್ರತ್ನಸ್ಯ ವಿಷ್ಣೋ ರೂಪಂ ಯತ್ಸತ್ಯಸ್ಯರ್ತಸ್ಯ ಬ್ರಹ್ಮಣಃ ಅಮೃತಸ್ಯ ಚ ಮೃತ್ಯೋಶ್ಚ ಸೂರ್ಯಮಾತ್ಮಾನಮೀಮಹೀತಿ॥

ಅನುವಾದ

‘ಸತ್ಯಕ್ಕೂ (ಆಚರಣೆಯಲ್ಲಿರುವ ಧರ್ಮ), ಋತಕ್ಕೂ (ನಿಯಮರೂಪದಲ್ಲಿರುವ ಧರ್ಮ), ವೇದಕ್ಕೂ, ಅಮೃತಕ್ಕೂ, ಮೃತ್ಯುವಿಗೂ ಆತ್ಮಸ್ವರೂಪನಾದ ಪುರಾಣ ಪುರುಷನಾದ, ವಿಷ್ಣುಸ್ವರೂಪಿಯಾದ ಸೂರ್ಯಭಗವಂತ ನನ್ನು ನಾವು ಶರಣು ಹೊಂದುತ್ತೇವೆ’ ಎಂದು ಆ ಸೂರ್ಯ ದೇವನನ್ನು ಸ್ತೋತ್ರಮಾಡುತ್ತಾರೆ. ॥5॥

(ಗದ್ಯ - 6)

ಮೂಲಮ್

ಪ್ಲಕ್ಷಾದಿಷು ಪಂಚಸು ಪುರುಷಾಣಾಮಾಯುರಿಂದ್ರಿಯಮೋಜಃ ಸಹೋ ಬಲಂ ಬುದ್ಧಿರ್ವಿಕ್ರಮ ಇತಿ ಚ ಸರ್ವೇಷಾವೌತ್ಪತ್ತಿಕೀ ಸಿದ್ಧಿರವಿಶೇಷೇಣ ವರ್ತತೇ ॥

ಅನುವಾದ

ಪ್ಲಕ್ಷ ಮುಂತಾದ ಐದು ದ್ವೀಪಗಳಲ್ಲಿ ಎಲ್ಲ ಮನುಷ್ಯರಿಗೂ ಹುಟ್ಟಿನಿಂದಲೇ ಆಯುಸ್ಸು, ಮನೋಬಲ, ಇಂದ್ರಿಯಬಲ, ಶಾರೀರಿಕಬಲ, ಬುದ್ಧಿ, ಪರಾಕ್ರಮ ಇವುಗಳು ಸಮಾನವಾಗಿ ಸಿದ್ಧ ವಾಗಿಯೇ ಇರುತ್ತವೆ. ॥6॥

(ಗದ್ಯ - 7)

ಮೂಲಮ್

ಪ್ಲಕ್ಷಃ ಸ್ವಸಮಾನೇನೇಕ್ಷುರಸೋದೇನಾವೃತೋ ಯಥಾ ತಥಾ ದ್ವೀಪೋಪಿ ಶಾಲ್ಮಲೋ ದ್ವಿಗುಣವಿಶಾಲಃ ಸಮಾನೇನ ಸುರೋದೇನಾವೃತಃ ಪರಿವೃಂಕ್ತೇ ॥

ಅನುವಾದ

ಪ್ಲಕ್ಷದ್ವೀಪವು ತನ್ನಷ್ಟೇ ವಿಸ್ತಾರವುಳ್ಳ ಕಬ್ಬಿನರಸದ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ಇವರ ಮುಂದೆ ಅದಕ್ಕೆ ಎರಡರಷ್ಟು ವಿಸ್ತಾರವಾದ ಶಾಲ್ಮಲೀದ್ವೀಪವಿದೆ. ಇದು ತನ್ನಷ್ಟೇ ವಿಸ್ತಾರವುಳ್ಳ ಮದ್ಯದ ಸಮುದ್ರದಿಂದ ಬಳಸಲ್ಪಟ್ಟಿದೆ. ॥7॥

(ಗದ್ಯ - 8)

ಮೂಲಮ್

ಯತ್ರ ಹ ವೈ ಶಾಲ್ಮಲೀ ಪ್ಲಕ್ಷಾಯಾಮಾ ಯಸ್ಯಾಂ ವಾವ ಕಿಲ ನಿಲಯಮಾಹುರ್ಭಗವತಶ್ಛಂದಃಸ್ತುತಃ ಪತತಿರಾಜಸ್ಯ ಸಾ ದ್ವೀಪಹೂತಯೇ ಉಪಲಕ್ಷ್ಯತೇ ॥

ಅನುವಾದ

ಪ್ಲಕ್ಷದ್ವೀಪದ ಬಸರೀಮರದಂತೆ ಇದರಲ್ಲಿ ಶಾಲ್ಮಲೀ (ಬೂರುಗದ) ವೃಕ್ಷವಿದೆ. ಈ ವೃಕ್ಷವೇ ತನ್ನ ವೇದಮಯ ರೆಕ್ಕೆಗಳಿಂದ ಭಗವಂತನನ್ನು ಸ್ತುತಿಸುವ ಪಕ್ಷಿರಾಜ ಗರುಡ ದೇವರ ನಿವಾಸಸ್ಥಾನವಾಗಿದೆ. ಇದೇ ಈ ದ್ವೀಪದ ಹೆಸರಿಗೆ ಕಾರಣವೆಂದು ಹೇಳುತ್ತಾರೆ. ॥8॥

(ಗದ್ಯ - 9)

ಮೂಲಮ್

ತದ್ದ್ವಿಧೀಪಾಧಿಪತಿಃ ಪ್ರಿಯವ್ರತಾತ್ಮಜೋ ಯಜ್ಞಬಾಹುಃ ಸ್ವಸುತೇಭ್ಯಃ ಸಪ್ತಭ್ಯಸ್ತನ್ನಾಮಾನಿ ಸಪ್ತವರ್ಷಾಣಿ ವ್ಯಭಜತ್ಸುರೋಚನಂ ಸೌಮನಸ್ಯಂ ರಮಣಕಂ ದೇವವರ್ಷಂ ಪಾರಿಭದ್ರಮಾಪ್ಯಾಯನಮವಿಜ್ಞಾತಮಿತಿ ॥

ಅನುವಾದ

ಈ ದ್ವೀಪಕ್ಕೆ ಅಧಿಪತಿಯಾಗಿ ಪ್ರಿಯವ್ರತಪುತ್ರ ಯಜ್ಞಬಾಹು ಮಹಾರಾಜನಿದ್ದನು. ಅವನು ಇದನ್ನು ಸುಲೋಚನ, ಸೌಮನಸ್ಯ, ರಮಣಕ, ದೇವವರ್ಷ, ಪಾರಿಭದ್ರ, ಆಪ್ಯಾಯನ ಮತ್ತು ಅವಿಜ್ಞಾತ ಎಂಬ ಏಳು ವಿಭಾಗ ಮಾಡಿದನು. ಇವುಗಳನ್ನು ಅದೇ ಹೆಸರುಳ್ಳ ತನ್ನ ಪುತ್ರರಿಗೆ ಒಪ್ಪಿಸಿಕೊಟ್ಟಿದ್ದನು. ॥9॥

(ಗದ್ಯ - 10)

ಮೂಲಮ್

ತೇಷು ವರ್ಷಾದ್ರಯೋ ನದ್ಯಶ್ಚ ಸಪ್ತೈವಾಭಿಜ್ಞಾತಾಃ ಸ್ವರಸಃ ಶತಶೃಂಗೋ ವಾಮದೇವಃ ಕುಂದೋ ಮುಕುಂದಃ ಪುಷ್ಪವರ್ಷಃ ಸಹಸ್ರಶ್ರುತಿರಿತಿ ಅನುಮತಿಃ ಸಿನೀವಾಲೀ ಸರಸ್ವತೀ ಕುಹೂ ರಜನೀ ನಂದಾ ರಾಕೇತಿ ॥

ಅನುವಾದ

ಇದರಲ್ಲಿಯೂ ಏಳು ವರ್ಷ ಪರ್ವತಗಳೂ, ಏಳು ನದಿಗಳೂ ಪ್ರಸಿದ್ಧವಾಗಿವೆ. ಸ್ವರಸ, ಶತಶೃಂಗ, ವಾಮದೇವ, ಕುಂದ, ಮುಕುಂದ, ಪುಷ್ಪವರ್ಷ, ಹಾಗೂ ಸಹಶ್ರುತಿ ಇವು ಏಳು ಪರ್ವತಗಳು ಹಾಗೂ ಅನುಮತಿ, ಸಿನೀವಾಲಿ, ಸರಸ್ವತಿ, ಕುಹೂ, ರಜನೀ, ನಂದಾ ಮತ್ತು ರಾಕಾ ಎಂಬ ಏಳು ನದಿಗಳು. ॥10॥

(ಗದ್ಯ - 11)

ಮೂಲಮ್

ತದ್ವರ್ಷಪುರುಷಾಃ ಶ್ರುತಧರವೀರ್ಯಧರವಸುಂಧ- ರೇಷಂಧರಸಂಜ್ಞಾ ಭಗವಂತಂ ವೇದಮಯಂ ಸೋಮ- ಮಾತ್ಮಾನಂ ವೇದೇನ ಯಜಂತೇ ॥

ಅನುವಾದ

ಈ ವರ್ಷದಲ್ಲಿ ಶ್ರುತಧರ, ವೀರ್ಯಧರ, ವಸುಂಧರ, ಇಷಂಧರ ಎಂಬ ನಾಲ್ಕು ವರ್ಣದ ಜನರು ವಾಸಿಸುತ್ತಾ, ವೇದಮಯ ಆತ್ಮಸ್ವರೂಪನಾದ ಭಗವಾನ್ ಚಂದ್ರನನ್ನು ವೇದಮಂತ್ರಗಳಿಂದ ಉಪಾಸನೆ ಮಾಡುತ್ತಾರೆ. ॥11॥

(ಶ್ಲೋಕ - 12)

ಮೂಲಮ್

ಸ್ವಗೋಭಿಃ ಪಿತೃದೇವೇಭ್ಯೋ ವಿಭಜನ್ ಕೃಷ್ಣಶುಕ್ಲಯೋಃ ।
ಪ್ರಜಾನಾಂ ಸರ್ವಾಸಾಂ ರಾಜಾಂಧಃ ಸೋಮೋ ನ ಆಸ್ತ್ವಿತಿ ॥

ಅನುವಾದ

ಶುಕ್ಲಪಕ್ಷ ಮತ್ತು ಕೃಷ್ಣಪಕ್ಷಗಳಲ್ಲಿ ತನ್ನ ಕಿರಣಗಳಿಂದ ವಿಭಾಗಗೈದು ದೇವತೆಗಳಿಗೆ, ಪಿತೃಗಳಿಗೆ ಹಾಗೂ ಸಮಸ್ತ ಪ್ರಾಣಿಗಳಿಗೆ ಅನ್ನವನ್ನು ಕೊಡುವಂತಹ ಆ ಚಂದ್ರದೇವನು ನಮಗೆ ರಾಜ (ರಂಜನೆ ಮಾಡುವವ) ನಾಗಲೀ ಎಂದು ಸ್ತುತಿಸುತ್ತಾರೆ. ॥12॥

(ಗದ್ಯ - 13)

ಮೂಲಮ್

ಏವಂ ಸುರೋದಾದ್ಬಹಿಸ್ತದ್ವಗುಣಃ ಸಮಾನೇನಾವೃತೋ ಘೃತೋದೇನ ಯಥಾಪೂರ್ವಃ ಕುಶದ್ವೀಪೋ ಯಸ್ಮಿನ್ಕುಶಸ್ತಂಬೋ ದೇವಕೃತಸ್ತದ್ದ್ವಿಧೀಪಾಖ್ಯಾಕರೋ ಜ್ವಲನ ಇವಾಪರಃ ಸ್ವಶಷ್ಪರೋಚಿಷಾ ದಿಶೋ ವಿರಾಜಯತಿ ॥

ಅನುವಾದ

ಇದೇ ರೀತಿಯಲ್ಲಿ ಮದ್ಯಸಮುದ್ರದ ಮುಂದೆ ಅದಕ್ಕೆ ಎರಡರಷ್ಟು ವಿಸ್ತಾರವುಳ್ಳ ಕುಶದ್ವೀಪವಿದೆ. ಹಿಂದೆ ಹೇಳಿದ ದ್ವೀಪಗಳಂತೆ ಇದೂ ಕೂಡ ತನ್ನಷ್ಟೇ ವಿಸ್ತಾರವಾದ ತುಪ್ಪದ ಸಮುದ್ರದಿಂದ ಬಳಸಲ್ಪಟ್ಟಿದೆ. ಇದರಲ್ಲಿ ಭಗವಂತನು ರಚಿಸಿದ ಒಂದು ದರ್ಭೆಯ ತೆಂಡೆಯಿರುವುದರಿಂದಲೇ ಇದಕ್ಕೆ ಕುಶದ್ವೀಪ ಎಂಬ ಹೆಸರಾಯಿತು. ಇದು ಮತ್ತೊಂದು ಅಗ್ನಿದೇವನಂತೆ ತನ್ನ ಕೋಮಲ ಹುಲ್ಲುಗಳ ಕಾಂತಿಯಿಂದ ಎಲ್ಲ ದಿಕ್ಕುಗಳನ್ನು ಬೆಳಗಿಸುತ್ತದೆ. ॥13॥

(ಗದ್ಯ - 14)

ಮೂಲಮ್

ತದ್ವಿಧೀಪಪತಿಃ ಪ್ರೈಯವ್ರತೋ ರಾಜನ್ ಹಿರಣ್ಯರೇತಾ ನಾಮ ಸ್ವಂ ದ್ವೀಪಂ ಸಪ್ತಭ್ಯಃ ಸ್ವಪುತ್ರೇಭ್ಯೋ ಯಥಾಭಾಗಂ ವಿಭಜ್ಯ ಸ್ವಯಂ ತಪ ಆತಿಷ್ಠತ ವಸುವಸುದಾನದೃಢರುಚಿನಾಭಿಗುಪ್ತಸ್ತುತ್ಯವ್ರತವಿವಿಕ್ತವಾಮದೇವನಾಮಭ್ಯಃ ॥

ಅನುವಾದ

ರಾಜೇಂದ್ರನೇ! ಪ್ರಿಯವ್ರತನ ಪುತ್ರ ಹಿರಣ್ಯರೇತ ಮಹಾರಾಜನು ಈ ದ್ವೀಪಕ್ಕೆ ಅಧಿಪತಿಯು. ಇವನು ಇದನ್ನು ಏಳು ವಿಭಾಗ ಗಳಾಗಿ ವಿಂಗಡಿಸಿ ಅವುಗಳನ್ನು ತನ್ನ ಏಳು ಪುತ್ರರಾದ ವಸು, ವಸುದಾನ, ದೃಢರುಚಿ, ನಾಭಿಗುಪ್ತ, ಸ್ತುತ್ಯವ್ರತ, ವಿವಿಕ್ತ ಮತ್ತು ವಾಮದೇವ ಇವರಿಗೆ ಹಂಚಿಕೊಟ್ಟು ತಾನು ತಪಸ್ಸ ನ್ನಾಚರಿಸಲು ಹೊರಟು ಹೋದನು. ॥14॥

(ಗದ್ಯ - 15)

ಮೂಲಮ್

ತೇಷಾಂ ವರ್ಷೇಷು ಸೀಮಾಗಿರಯೋ ನದ್ಯಶ್ಚಾಭಿಜ್ಞಾತಾಃ ಸಪ್ತಸಪ್ತೈವ ಚಕ್ರಶ್ಚತುಃಶೃಂಗಃ ಕಪಿಲಶ್ಚಿತ್ರಕೂಟೋ ದೇವಾನೀಕ ಊರ್ಧ್ವರೋಮಾ ದ್ರವಿಣ ಇತಿ ರಸಕುಲ್ಯಾ ಮಧುಕುಲ್ಯಾ ಮಿತ್ರವಿಂದಾ ಶ್ರುತವಿಂದಾ ದೇವಗರ್ಭಾ ಘೃತಚ್ಯುತಾ ಮಂತ್ರ ಮಾಲೇತಿ ॥

ಅನುವಾದ

ಅವುಗಳ ಗಡಿಗಳನ್ನು ನಿರ್ಧರಿಸುವ ಏಳು ಪರ್ವತಗಳು ಮತ್ತು ಏಳು ನದಿಗಳೂ ಇವೆ. ಚಕ್ರ, ಚತುಃಶೃಂಗ, ಕಪಿಲ, ಚಿತ್ರಕೂಟ, ದೇವಾನೀಕ, ಊರ್ಧ್ವರೋಮಾ ಮತ್ತು ದ್ರವಿಣ ಇವು ಏಳು ಪರ್ವತಗಳೂ, ರಸಕುಲ್ಯಾ, ಮಧುಕುಲ್ಯಾ, ಮಿತ್ರ ವಿಂದಾ, ಶ್ರುತವಿಂದಾ, ದೇವಗರ್ಭಾ, ಘೃತಚ್ಯುತಾ ಮತ್ತು ಮಂತ್ರಮಾಲಾ ಎಂಬ ಏಳು ನದಿಗಳು ಪ್ರಸಿದ್ಧವಾಗಿವೆ. ॥15॥

(ಗದ್ಯ - 16)

ಮೂಲಮ್

ಯಾಸಾಂ ಪಯೋಭಿಃ ಕುಶದ್ವೀಪೌಕಸಃ ಕುಶಲಕೋವಿದಾಭಿಯುಕ್ತಕುಲಕಸಂಜ್ಞಾ ಭಗವಂತಂ ಜಾತವೇದಸರೂಪಿಣಂ ಕರ್ಮಕೌಶಲೇನ ಯಜಂತೇ ॥

ಅನುವಾದ

ಈ ನದಿಗಳಲ್ಲಿ ಮಿಂದು ಕುಶದ್ವೀಪ ನಿವಾಸಿಗಳಾದ ಕುಶಲ, ಕೋವಿದ, ಅಭಿಯುಕ್ತ ಹಾಗೂ ಕುಲಕರೆಂಬ ನಾಲ್ಕು ವರ್ಣದ ಪುರುಷರು ಅಗ್ನಿಸ್ವರೂಪನಾದ ಭಗವಾನ್ ಶ್ರೀಹರಿಯನ್ನು ಯಜ್ಞಾದಿ ಕರ್ಮಕೌಶಲ್ಯದಿಂದ ಉಪಾಸನೆಮಾಡಿ ಹೀಗೆ ಸ್ತುತಿಸುತ್ತಾರೆ. ॥6॥

(ಗದ್ಯ - 17)

ಮೂಲಮ್

ಪರಸ್ಯ ಬ್ರಹ್ಮಣಃ ಸಾಕ್ಷಾಜ್ಜಾತವೇದೋಸಿ ಹವ್ಯವಾಟ್ ದೇವಾನಾಂ ಪುರುಷಾಂಗಾನಾಂ ಯಜ್ಞೇನ ಪುರುಷಂ ಯಜೇತಿ ॥

ಅನುವಾದ

ಎಲೈ ಅಗ್ನಿ ದೇವನೇ! ನೀನು ಪರಬ್ರಹ್ಮನಿಗೆ ಸಾಕ್ಷಾತ್ತಾಗಿ ಹವಿಸ್ಸನ್ನು ಮುಟ್ಟಿಸುವವನಾಗಿರುವೆ. ಆದ್ದರಿಂದ ಶ್ರೀಭಗವಂತನಿಗೆ ಅಂಗಭೂತರಾದ ದೇವತೆಗಳ ಕುರಿತು ನಾವು ಮಾಡುವ ಯಜ್ಞಗಳ ಮೂಲಕ ಶ್ರೀಹರಿಗೆ ಯಜ್ಞಪೂಜೆಯು ಸಂತೃಪ್ತಿ ಯುಂಟಾಗುವಂತೆ ಮಾಡು. ॥17॥

(ಗದ್ಯ - 18)

ಮೂಲಮ್

ತಥಾ ಘೃತೋದಾದ್ಬಹಿಃ ಕ್ರೌಂಚದ್ವೀಪೋ ದ್ವಿಗುಣಃ ಸ್ವಮಾನೇನ ಕ್ಷೀರೋದೇನ ಪರಿತ ಉಪಕ್ಲ್ೃಪ್ತೋ ವೃತೋ ಯಥಾ ಕುಶದ್ವೀಪೋ ಘೃತೋದೇನ ಯಸ್ಮಿನ್ ಕ್ರೌಂಚೋ ನಾಮ ಪರ್ವತರಾಜೋ ದ್ವೀಪನಾಮನಿರ್ವರ್ತಕ ಆಸ್ತೇ ॥

ಅನುವಾದ

ಎಲೈ ರಾಜನೇ! ಮತ್ತೆ ಘೃತಸಮುದ್ರದ ಮುಂದೆ ಅದಕ್ಕೆ ಎರಡರಷ್ಟು ವಿಸ್ತಾರವುಳ್ಳ ಕ್ರೌಂಚದ್ವೀಪವಿದೆ. ಕುಶದ್ವೀಪವು ತುಪ್ಪದ ಸಮುದ್ರದಿಂದ ಸುತ್ತುವರಿದಂತೆ ತನ್ನಷ್ಟೇ ವಿಸ್ತಾರವಾದ ಹಾಲಿನ ಸಮುದ್ರದಿಂದ ಈ ಕ್ರೌಂಚದ್ವೀಪವು ಸುತ್ತು ವರಿಯಲ್ಪಟ್ಟಿದೆ. ಇಲ್ಲಿ ಕ್ರೌಂಚವೆಂಬ ದೊಡ್ಡ ಪರ್ವತವಿದೆ. ಅದರಿಂದ ಇದರ ಹೆಸರು ಕ್ರೌಂಚದ್ವೀಪವೆಂದಾಯಿತು. ॥18॥

(ಗದ್ಯ - 19)

ಮೂಲಮ್

ಯೋಸೌ ಗುಹಪ್ರಹರಣೋನ್ಮಥಿತನಿತಂಬ- ಕುಂಜೋಪಿ ಕ್ಷೀರೋದೇನಾಸಿಚ್ಯಮಾನೋ ಭಗವತಾ ವರುಣೇನಾಭಿಗುಪ್ತೋ ವಿಭಯೋ ಬಭೂವ ॥

ಅನುವಾದ

ಈ ಪರ್ವತವು ಹಿಂದೆ ಕಾರ್ತಿಕೇಯಸ್ವಾಮಿಯ ಶಕ್ತ್ಯಾಯುಧದಿಂದ ಭೇದಿಸಲ್ಪಟ್ಟು ಗಾಯಗೊಳಿಸಿದ್ದರೂ ಕ್ಷೀರಸಮುದ್ರದಿಂದ ನೆನೆಸಲ್ಪಟ್ಟು, ವರುಣದೇವರಿಂದ ರಕ್ಷಣೆಗೊಂಡು ನಿರ್ಭಯವಾಯಿತು. ॥19॥

(ಗದ್ಯ - 20)

ಮೂಲಮ್

ತಸ್ಮಿನ್ನಪಿ ಪ್ರೈಯವ್ರತೋ ಘೃತಪೃಷ್ಠೋ ನಾಮಾಧಿಪತಿಃ ಸ್ವೇ ದ್ವೀಪೇ ವರ್ಷಾಣಿ ಸಪ್ತ ವಿಭಜ್ಯ ತೇಷು ಪುತ್ರನಾಮಸು ಸಪ್ತರಿಕ್ಥಾದಾನ್ ವರ್ಷಪಾನ್ನಿವೇಶ್ಯ ಸ್ವಯಂ ಭಗವಾನ್ಭಗವತಃ ಪರಮಕಲ್ಯಾಣಯಶಸ ಆತ್ಮಭೂತಸ್ಯ ಹರೇಶ್ಚರಣಾರವಿಂದಮುಪಜಗಾಮ ॥

ಅನುವಾದ

ಪ್ರಿಯವ್ರತನ ಪುತ್ರ ಮಹಾರಾಜಾ ಘೃತಪೃಷ್ಠನು ಇಲ್ಲಿಯ ಅಧಿಪತಿಯು. ಅವನು ಮಹಾಜ್ಞಾನಿಯಾಗಿದ್ದನು. ಅವನು ಇದನ್ನು ಏಳು ವರ್ಷಗಳಾಗಿ ವಿಂಗಡಿಸಿ ಅವುಗಳಲ್ಲಿ ಅದೇ ಹೆಸರಿನ ತನ್ನ ಏಳು ಪುತ್ರರನ್ನು ಉತ್ತರಾಧಿಕಾರಿಗಳಾಗಿ ನೇಮಿಸಿ ತಾನು ಸಮಸ್ತ ಜೀವಿಗಳಿಗೆ ಅಂತರಾತ್ಮನಾಗಿ ಪರಮ ಮಂಗಲಮಯ ಕೀರ್ತಿಯುಳ್ಳ ಭಗವಾನ್ ಶ್ರೀಹರಿಯ ಅಡಿದಾವರೆಗಳನ್ನು ಶರಣು ಹೊಂದಿದನು. ॥20॥

(ಗದ್ಯ - 21)

ಮೂಲಮ್

ಆಮೋ ಮಧುರುಹೋ ಮೇಘಪೃಷ್ಠಃ ಸುಧಾಮಾ ಭ್ರಾಜಿಷ್ಠೋ ಲೋಹಿತಾರ್ಣೋ ವನಸ್ಪತಿರಿತಿ ಘೃತಪೃಷ್ಠಸುತಾಸ್ತೇಷಾಂ ವರ್ಷಗಿರಯಃ ಸಪ್ತ ಸಪ್ತೈವ ನದ್ಯಶ್ಚಾಭಿಖ್ಯಾತಾಃ ಶುಕ್ಲೋ ವರ್ಧಮಾನೋ ಭೋಜನ ಉಪಬರ್ಹಿಣೋ ನಂದೋ ನಂದನಃ ಸರ್ವ- ತೋಭದ್ರ ಇತಿ ಅಭಯಾ ಅಮೃತೌಘಾ ಆರ್ಯಕಾ ತೀರ್ಥವತೀ ವೃತ್ತಿರೂಪವತೀ ಪವಿತ್ರವತೀ ಶುಕ್ಲೇತಿ ॥

ಅನುವಾದ

ಆಮ, ಮಧುರುಹ, ಮೇಘಪೃಷ್ಠ, ಸುಧಾಮಾ, ಭ್ರಾಜಿಷ್ಠ, ಲೋಹಿತಾರ್ಣ ಮತ್ತು ವನಸ್ಪತಿ ಎಂಬುವರೇ ಘೃತಪೃಷ್ಠನ ಏಳು ಪುತ್ರರು. ಅವರ ವರ್ಷಗಳಲ್ಲಿಯೂ ಏಳು ಪರ್ವತ ಗಳು ಮತ್ತು ಏಳು ನದಿಗಳು ಹರಿಯುತ್ತಿದ್ದುವು. ಶುಕ್ಲ, ವರ್ಧಮಾನ, ಭೋಜನ, ಉಪಬರ್ಹಿಣ, ನಂದ, ನಂದನ ಮತ್ತು ಸರ್ವತೋಭದ್ರ ಎಂಬ ಏಳೂ ಪರ್ವತಗಳೂ; ಅಭಯಾ, ಅಮೃತೌಘಾ, ಆರ್ಯಕಾ, ತೀರ್ಥವತಿ, ವೃತ್ತಿ ರೂಪವತೀ, ಪವಿತ್ರವತೀ ಹಾಗೂ ಶುಕ್ಲಾ ಎಂಬ ಏಳು ನದಿಗಳು. ॥21॥

(ಗದ್ಯ - 22)

ಮೂಲಮ್

ಯಾಸಾಮಂಭಃ ಪವಿತ್ರಮಮಲಮುಪಯುಂಜಾನಾಃ ಪುರುಷಋಷಭದ್ರವಿಣದೇವಕಸಂಜ್ಞಾ ವರ್ಷಪುರುಷಾ ಆಪೋಮಯಂ ದೇವಮಪಾಂ ಪೂರ್ಣೇನಾಂಜಲಿನಾ ಯಜಂತೇ ॥

ಅನುವಾದ

ಅವುಗಳ ಪವಿತ್ರವೂ, ನಿರ್ಮಲವೂ ಆದ ಜಲವನ್ನು ಸೇವಿಸುವ ಪುರುಷ, ಋಷಭ, ದ್ರವಿಣ ಮತ್ತು ದೇವಕ ಎಂಬ ನಾಲ್ಕು ವರ್ಣಗಳಿಗೆ ಸೇರಿದ ಅಲ್ಲಿಯ ನಿವಾಸಿಗಳು ನೀರುತುಂಬಿದ ಅಂಜಲಿಗಳಿಂದ ನೀರಿನ ದೇವತೆಯಾದ ವರುಣದೇವರನ್ನು ಉಪಾಸನೆಮಾಡುವರು. ॥22॥

(ಶ್ಲೋಕ - 23)

ಮೂಲಮ್

ಆಪಃ ಪುರುಷವೀರ್ಯಾಃ ಸ್ಥ ಪುನಂತೀರ್ಭೂರ್ಭುವಃ ಸುವಃ ।
ತಾ ನಃ ಪುನೀತಾಮೀವಘ್ನೀಃ ಸ್ಪೃಶತಾಮಾತ್ಮನಾ ಭುವ ಇತಿ ॥

ಅನುವಾದ

(ಅವರು ಈ ಮಂತ್ರದಿಂದ ಜಲಾಧಿಪತಿಯನ್ನು ಸ್ತುತಿಸುವರು) ಎಲೈ ಜಲ ದೇವತೆಯೇ! ನೀನು ಪರಮ ಪುರುಷನಿಂದ ಸಾಮರ್ಥ್ಯವನ್ನು ಪಡೆದಿದ್ದೀಯೆ. ಭೂಃ ಭುವಃ ಸುವಃ ಎಂಬ ಮೂರು ಲೋಕಗಳನ್ನೂ ಪವಿತ್ರಗೊಳಿಸುತ್ತಿರುವೆ. ಏಕೆಂದರೆ, ಸ್ವಾಭಾವಿಕವಾಗಿಯೇ ಪಾಪಗಳನ್ನು ನಾಶಮಾಡುವವನಾಗಿರುವೆ. ನಾವು ನಮ್ಮ ಶರೀರಗಳಿಂದ ನಿನ್ನನ್ನು ಸ್ಪರ್ಶಿಸುತ್ತೇವೆ, ನೀನು ನಮ್ಮ ಅಂಗಗಳನ್ನು ಪವಿತ್ರಗೊಳಿಸು. ॥23॥

(ಗದ್ಯ - 24)

ಮೂಲಮ್

ಏವಂ ಪುರಸ್ತಾತ್ಕ್ಷೀರೋದಾತ್ಪರಿತ ಉಪವೇಶಿತಃ ಶಾಕದ್ವೀಪೋ ದ್ವಾತ್ರಿಂಶಲ್ಲಕ್ಷಯೋಜನಾಯಾಮಃ ಸಮಾನೇನ ಚ ದಧಿಮಂಡೋದೇನ ಪರೀತೋ ಯಸ್ಮಿನ್ ಶಾಕೋ ನಾಮ ಮಹೀರುಹಃ ಸ್ವಕ್ಷೇತ್ರವ್ಯಪದೇಶಕೋ ಯಸ್ಯ ಹ ಮಹಾಸುರಭಿಗಂಧಸ್ತಂ ದ್ವೀಪಮನುವಾಸಯತಿ ॥

ಅನುವಾದ

ಹೀಗೆಯೇ ಕ್ಷೀರಸಮುದ್ರದಿಂದ ಮುಂದೆ ಅದರ ನಾಲ್ಕು ಕಡೆಗಳಲ್ಲಿಯೂ ಮೂವತ್ತೆರಡುಲಕ್ಷ ಯೋಜನ ವಿಸ್ತಾರವುಳ್ಳ ಶಾಕ ದ್ವೀಪವಿದೆ. ಇದು ತನ್ನಷ್ಟೇ ವಿಸ್ತಾರವಾದ ಮೊಸರಿನ ಸಮುದ್ರದಿಂದ ಬಳಸಿಕೊಂಡಿದೆ. ಈ ದ್ವೀಪದಲ್ಲಿ ಶಾಕವೆಂಬ ಹೆಸರಿನ ಮಹಾವೃಕ್ಷವೊಂದುಂಟು. ಈ ಕ್ಷೇತ್ರಕ್ಕೆ ಶಾಕದ್ವೀಪವೆಂಬ ಹೆಸರು ಬರಲು ಈ ವೃಕ್ಷವೇ ಕಾರಣವು. ಈ ವೃಕ್ಷವು ಅದ್ಭುತವಾದ ಪರಿಮಳದಿಂದ ಘಮಘಮಿ ಸುತ್ತಾ ಇಡೀ ದ್ವೀಪವನ್ನು ತನ್ನ ಸುವಾಸನೆಯಿಂದ ತುಂಬುತ್ತಿದೆ. ॥24॥

(ಗದ್ಯ - 25)

ಮೂಲಮ್

ತಸ್ಯಾಪಿ ಪ್ರೈಯವ್ರತ ಏವಾಧಿಪತಿರ್ನಾಮ್ನಾ ಮೇಧಾತಿಥಿಃ ಸೋಪಿ ವಿಭಜ್ಯ ಸಪ್ತ ವರ್ಷಾಣಿ ಪುತ್ರನಾಮಾನಿ ತೇಷು ಸ್ವಾತ್ಮಜಾನ್ ಪುರೋಜವಮನೋಜವಪವಮಾನಧೂಮ್ರಾನೀಕಚಿತ್ರರೇಬಹುರೂಪವಿಶ್ವಧಾರಸಂಜ್ಞಾ- ನ್ನಿಧಾಪ್ಯಾಧಿಪತೀನ್ಸ್ವಯಂ ಭಗವತ್ಯನಂತ ಆವೇಶಿತಮತಿಸ್ತಪೋವನಂ ಪ್ರವಿವೇಶ ॥

ಅನುವಾದ

ಇದರ ಅಧಿಪತಿಯಾದ ಮೇಧಾತಿಥಿಯೂ ಪ್ರಿಯವ್ರತರಾಜನ ಪುತ್ರನೇ. ಅವನೂ ಕೂಡ ತನ್ನ ಈ ದ್ವೀಪವನ್ನು ಏಳು ವರ್ಷಗಳನ್ನಾಗಿ ವಿಂಗಡಿಸಿ, ಅವುಗಳ ಆಧಿಪತ್ಯವನ್ನು ಆಯಾ ದ್ವೀಪದ ಹೆಸರನ್ನೇ ಹೊಂದಿರುವ ತನ್ನ ಪುತ್ರರಾದ ಪುರೋಜವ, ಮನೋಜವ, ಪವಮಾನ, ಧೂಮ್ರಾನೀಕ, ಚಿತ್ರರೇಫ, ಬಹುರೂಪ ಮತ್ತು ವಿಶ್ವಧಾರ ಎಂಬ ಏಳು ಮಂದಿಗೆ ಒಪ್ಪಿಸಿಕೊಟ್ಟು ತಾನು ಭಗವಾನ್ ಅನಂತನಲ್ಲಿ ದತ್ತಚಿತ್ತನಾಗಿ ತಪೋವನಕ್ಕೆ ತೆರಳಿದನು.॥25॥

(ಗದ್ಯ - 26)

ಮೂಲಮ್

ಏತೇಷಾಂ ವರ್ಷಮರ್ಯಾದಾಗಿರಯೋ ನದ್ಯಶ್ಚ ಸಪ್ತ ಸಪ್ತೈವ ಈಶಾನ ಉರುಶೃಂಗೋ ಬಲಭದ್ರಃ ಶತಕೇಸರಃ ಸಹಸ್ರ- ಸ್ರೋತೋ ದೇವಪಾಲೋ ಮಹಾನಸ ಇತಿ ಅನಘಾ ಯುರ್ದಾ ಉಭಯಸ್ಪೃಷ್ಟಿರಪರಾಜಿತಾ ಪಂಚಪದೀ ಸಹಸ್ರಸ್ರುತಿರ್ನಿಜಧೃತಿರಿತಿ ॥

ಅನುವಾದ

ಈ ವರ್ಷಗಳಲ್ಲಿಯೂ ಏಳು ಪರ್ವತಗಳೂ, ಏಳು ನದಿಗಳು ಇವೆ. ಈಶಾನ, ಉರುಶೃಂಗ, ಬಲಭದ್ರ, ಶತಕೇಸರ, ಸಹಸ್ರ ಸ್ರೋತ, ದೇವಪಾಲ ಮತ್ತು ಮಹಾನಸ ಎಂಬ ಏಳು ಗಿರಿಗಳು ಇದರ ಎಲ್ಲೆಯನ್ನು ನಿರ್ಧರಿಸುವುವು. ಅನಘಾ, ಆಯುರ್ದಾ, ಉಭಯಪೃಷ್ಟಿ, ಅಪರಾಜಿತಾ, ಪಂಚಪದೀ, ಸಹಸ್ರಶ್ರುತಿ, ಹಾಗೂ ನಿಜಧೃತಿ ಎಂಬಿವೇ ಆ ಏಳು ಮಹಾನದಿಗಳು. ॥26॥

(ಗದ್ಯ - 27)

ಮೂಲಮ್

ತದ್ವರ್ಷಪುರುಷಾ ಋತವ್ರತಸತ್ಯವ್ರತದಾನವ್ರತಾನುವ್ರತನಾಮಾನೋ ಭಗವಂತಂ ವಾಯ್ವಾತ್ಮಕಂ ಪ್ರಾಣಾಯಾಮವಿಧೂತ ರಜಸ್ತಮಸಃ ಪರಮಸಮಾಧಿನಾ ಯಜಂತೇ ॥

ಅನುವಾದ

ಆ ವರ್ಷದಲ್ಲಿರುವ ಋತವ್ರತ, ಸತ್ಯ ವ್ರತ, ದಾನವ್ರತ ಮತ್ತು ಅನುವ್ರತರೆಂಬ ನಾಲ್ಕು ವರ್ಣದವರು. ಇವರು ಪ್ರಾಣಾಯಾಮದಿಂದ ತಮ್ಮ ರಜೋ ಗುಣ-ತಮೋಗುಣಗಳನ್ನು ನೀಗಿದವರಾಗಿ ವಾಯುರೂಪೀ ಶ್ರೀಹರಿಯನ್ನು ಆರಾಧಿಸುತ್ತಾರೆ. ಈ ಮಂತ್ರವನ್ನು ಜಪಿಸುತ್ತಾ ಅವರು ಶ್ರೀಹರಿಯನ್ನು ಉಪಾಸನೆ ಮಾಡುತ್ತಾರೆ. ॥27॥

(ಶ್ಲೋಕ - 28)

ಮೂಲಮ್

ಅಂತಃ ಪ್ರವಿಶ್ಯ ಭೂತಾನಿ ಯೋ ಬಿಭರ್ತ್ಯಾತ್ಮಕೇತುಭಿಃ ।
ಅಂತರ್ಯಾಮೀಶ್ವರಃ ಸಾಕ್ಷಾತ್ಪಾತು ನೋ ಯದ್ವಶೇ ಸ್ಫುಟಮ್ ॥

ಅನುವಾದ

ಯಾರು ತನ್ನ ಪ್ರಾಣಾಪಾನಾದಿ ವೃತ್ತಿಗಳೆಂಬ ಧ್ವಜಗಳೊಡನೆ ಕೂಡಿ ಪ್ರಾಣಿಗಳ ಒಳಹೊಕ್ಕು ಅವುಗಳನ್ನು ರಕ್ಷಿಸುತ್ತಿರುವನೋ ಮತ್ತು ಸಮಸ್ತ ದೃಶ್ಯ ಜಗತ್ತು ಯಾರ ಅಧೀನವಾಗಿದೆಯೋ ಆ ಸಾಕ್ಷಾತ್ ಅಂತರ್ಯಾಮಿ ವಾಯುರೂಪನಾದ ಭಗವಂತನು ನಮ್ಮನ್ನು ರಕ್ಷಿಸಲಿ. ॥28॥

ಮೂಲಮ್

(ಗದ್ಯ - 29)
ಏವಮೇವ ದಧಿಮಂಡೋದಾತ್ಪರತಃ ಪುಷ್ಕರದ್ವೀಪಸ್ತತೋ ದ್ವಿಗುಣಾಯಾಮಃ ಸಮಂತತ ಉಪಕಲ್ಪಿತಃ ಸಮಾನೇನ ಸ್ವಾದೂದಕೇನ ಸಮುದ್ರೇಣ ಬಹಿರಾವೃತೋ ಯಸ್ಮಿನ್ಬೃಹತ್ಪುಷ್ಕರಂ ಜ್ವಲನಶಿಖಾಮಲಕನಕಪತ್ರಾಯುತಾಯುತಂ ಭಗವತಃ ಕಮಲಾಸನಸ್ಯಾಧ್ಯಾಸನಂ ಪರಿಕಲ್ಪಿತಮ್ ॥

ಅನುವಾದ

ಹೀಗೆಯೇ ಮೊಸರಿನ ಸಮುದ್ರದ ಮುಂದೆ ಅದರ ನಾಲ್ಕೂ ಕಡೆಗಳಲ್ಲಿ ಅದಕ್ಕೆ ಎರಡರಷ್ಟು ವಿಸ್ತಾರವುಳ್ಳ ಪುಷ್ಕರದ್ವೀಪವಿದೆ. ಅದನ್ನು ಸುತ್ತಲೂ ಅಷ್ಟೇ ವಿಸ್ತಾರವಾದ ಸಿಹಿನೀರಿನ ಸಮುದ್ರವು ಬಳಸಿಕೊಂಡಿದೆ. ಅಲ್ಲಿ ಲಕ್ಷಾಂತರ ಸುವರ್ಣಮಯವಾದ ದಳಗಳಿಂದ ಕೂಡಿದ ಅಗ್ನಿಶಿಖೆ ಯಂತೆ ಬೆಳಗುತ್ತಿರುವ ಒಂದು ದೊಡ್ಡ ಕೆಂದಾವರೆ ಇದೆ. ಅದು ಬ್ರಹ್ಮದೇವರ ಆಸನವೆಂದು ತಿಳಿಯಲಾಗುತ್ತದೆ. (ಆ ಕಮಲದಿಂದಲೇ ಆ ದ್ವೀಪಕ್ಕೆ ಪುಷ್ಕರದ್ವೀಪವೆಂಬ ಹೆಸರಾಯಿತು). ॥29॥

(ಗದ್ಯ - 30)

ಮೂಲಮ್

ತದ್ದ್ವಿಧೀಪಮಧ್ಯೇ ಮಾನಸೋತ್ತರನಾಮೈಕ ಏವಾರ್ವಾಚೀನ ಪರಾಚೀನವರ್ಷಯೋರ್ಮರ್ಯಾದಾಚಲೋಯುತ ಯೋಜನೋಚ್ಛ್ರಾಯಾಯಾಮೋ ಯತ್ರ ತು ಚತಸೃಷು ದಿಕ್ಷು ಚತ್ವಾರಿ ಪುರಾಣಿ ಲೋಕಪಾಲಾನಾಮಿಂದ್ರಾದೀನಾಂ ಯದುಪರಿಷ್ಟಾತ್ಸೂರ್ಯರಥಸ್ಯ ಮೇರುಂ ಪರಿಭ್ರಮತಃ ಸಂವತ್ಸರಾತ್ಮಕಂ ಚಕ್ರಂ ದೇವಾನಾಮಹೋರಾತ್ರಾಭ್ಯಾಂ ಪರಿಭ್ರಮತಿ ॥

ಅನುವಾದ

ಅದರ ನಟ್ಟನಡುವೆ ಪೂರ್ವ-ಪಶ್ಚಿಮಗಳ ಗಡಿಯನ್ನು ನಿರ್ಧರಿಸುವ ಮಾನಸೋತ್ತರವೆಂಬ ಒಂದೇ ಪರ್ವತವಿದೆ. ಇದು ಹತ್ತುಸಾವಿರ ಯೋಜನ ಎತ್ತರವೂ, ಅಷ್ಟೇ ಉದ್ದವೂ ಇದೆ. ಅದರ ಮೇಲೆ ನಾಲ್ಕೂ ದಿಕ್ಕುಗಳಲ್ಲಿಯೂ ಕ್ರಮವಾಗಿ ಇಂದ್ರನೇ ಮುಂತಾದ ಲೋಕಪಾಲರ ನಾಲ್ಕು ಪುರಗಳಿವೆ. ಆ ಪರ್ವತದ ಮೇಲ್ಗಡೆಯಲ್ಲಿ ಸಂಚರಿಸುವ ಸೂರ್ಯದೇವರ ರಥದ ಸಂವತ್ಸರವೆಂಬ ಚಕ್ರವು ದೇವತೆಗಳಿಗೆ ಹಗಲೂ-ರಾತ್ರಿಗಳೆನಿಸಿದ ಉತ್ತರಾಯಣ ಮತ್ತು ದಕ್ಷಿಣಾಯನರೂಪವಾಗಿ ಸದಾ ಸುತ್ತುತ್ತಿರುತ್ತದೆ. ॥30॥

(ಗದ್ಯ - 31)

ಮೂಲಮ್

ತದ್ದ್ವಿಧೀಪಸ್ಯಾ- ಪ್ಯಧಿಪತಿಃ ಪ್ರೈಯವ್ರತೋ ವೀತಿಹೋತ್ರೋ ನಾಮೈತಸ್ಯಾತ್ಮಜೌ ರಮಣಕಧಾತಕಿನಾಮಾನೌ ವರ್ಷಪತೀ ನಿಯುಜ್ಯ ಸ ಸ್ವಯಂ ಪೂರ್ವಜವದ್ಭಗವತ್ಕರ್ಮಶೀಲ ಏವಾಸ್ತೇ ॥

ಅನುವಾದ

ಆ ದ್ವೀಪಕ್ಕೆ ಅಧಿಪತಿಯಾಗಿ ಪ್ರಿಯವ್ರತಪುತ್ರನಾದ ವೀತಿಹೋತ್ರ ಮಹಾರಾಜನೂ ಕೂಡ ತನ್ನ ಪುತ್ರರಾದ ರಮಣಕ ಮತ್ತು ಧಾತಕಿ ಎಂಬುವರಿಗೆ ಎರಡು ವರ್ಷಗಳ ಆಧಿಪತ್ಯವನ್ನು ಒಪ್ಪಿಸಿ ತನ್ನ ಅಣ್ಣಂದಿರಂತೆ ಭಗವತ್ಸೇವೆಯಲ್ಲೇ ತತ್ಪರನಾಗಿದ್ದಾನೆ. ॥31॥

(ಶ್ಲೋಕ - 32)

ಮೂಲಮ್

ತದ್ವರ್ಷಪುರುಷಾ ಭಗವಂತಂ ಬ್ರಹ್ಮರೂಪಿಣಂ ಸಕರ್ಮಕೇಣ ಕರ್ಮಣಾರಾಧಯಂತೀದಂ ಚೋದಾಹರಂತಿ ॥

ಅನುವಾದ

ಅಲ್ಲಿಯ ನಿವಾಸಿಗಳು ಬ್ರಹ್ಮರೂಪಿಯಾದ ಶ್ರೀಭಗವಂತನನ್ನು ಬ್ರಹ್ಮಲೋಕಪ್ರಾಪ್ತಿಯನ್ನು ಮಾಡಿಸುವಂತಹ ಕರ್ಮಗಳಿಂದ ಆರಾಧಿಸುತ್ತಾ ಈ ಮಂತ್ರಜಪದಿಂದ ಸ್ತುತಿಸುತ್ತಾರೆ ॥32॥

(ಶ್ಲೋಕ - 33)

ಮೂಲಮ್

ಯತ್ತತ್ಕರ್ಮಮಯಂ ಲಿಂಗಂ
ಬ್ರಹ್ಮಲಿಂಗಂ ಜನೋರ್ಚಯೇತ್ ।
ಏಕಾಂತಮದ್ವಯಂ ಶಾಂತಂ
ತಸ್ಮೈ ಭಗವತೇ ನಮ ಇತಿ ॥

ಅನುವಾದ

ಕರ್ಮಫಲಸ್ವರೂಪನೂ, ಬ್ರಹ್ಮಸ್ವರೂಪವನ್ನು ಪ್ರಕಾಶಪಡಿಸುವವನೂ, ಬ್ರಹ್ಮ (ವೇದ) ಪ್ರತಿಪಾದ್ಯನೂ, ಪರಬ್ರಹ್ಮವೊಂದರಲ್ಲೇ ತತ್ಪರನೂ, ಅದ್ವಿತೀಯನೂ, ಸರ್ವರಿಂದ ಪೂಜಿತನೂ, ಶಾಂತಸ್ವರೂಪಿಯೂ ಆದ ಭಗವಾನ್ ಬ್ರಹ್ಮದೇವರಿಗೆ ನಮಸ್ಕಾರವು. ॥33॥

(ಗದ್ಯ - 34)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ತತಃ ಪರಸ್ತಾಲ್ಲೋಕಾಲೋಕನಾಮಾಚಲೋ ಲೋಕಾಲೋಕಯೋರಂತರಾಲೇ ಪರಿತ ಉಪಕ್ಷಿಪ್ತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಆ ಸಿಹಿನೀರಿನಿಂದಾಚೆ ಲೋಕಾಲೋಕವೆಂಬ ಪರ್ವತವಿದೆ. ಅದು ಸೂರ್ಯನ ಬೆಳಕುಬೀಳುವ ಪ್ರದೇಶಗಳಿಗೂ ಮತ್ತು ಬೆಳಕು ಬೀಳದ ಕತ್ತಲೆಯ ಪ್ರದೇಶಗಳಿಗೂ ಗಡಿಯಾಗಿ ಮಧ್ಯಭಾಗದಲ್ಲಿದೆ. ॥34॥

(ಗದ್ಯ - 35)

ಮೂಲಮ್

ಯಾವನ್ಮಾನಸೋತ್ತರಮೇರ್ವೋರಂತರಂ ತಾವತೀ ಭೂಮಿಃ ಕಾಂಚನ್ಯನ್ಯಾದರ್ಶತಲೋಪಮಾ ಯಸ್ಯಾಂ ಪ್ರಹಿತಃ ಪದಾರ್ಥೋ ನ ಕಥಂಚಿತ್ಪುನಃ ಪ್ರತ್ಯುಪಲಭ್ಯತೇ ತಸ್ಮಾತ್ಸರ್ವಸತ್ತ್ವಪರಿಹೃತಾಸೀತ್ ॥

ಅನುವಾದ

ಮೇರುವಿನಿಂದ ಹಿಡಿದು ಮಾನಸೋತ್ತರ ಪರ್ವತದವರೆಗೆ ಎಷ್ಟು ದೂರವಿದೆಯೋ, ಅಷ್ಟೇ ವಿಸ್ತಾರವುಳ್ಳ ಭೂಮಿಯು ಸಿಹಿನೀರಿನ ಸಮುದ್ರದ ಆಚೆಗೆ ಇದೆ. ಅದರ ಮುಂದೆ ಕನ್ನಡಿಯಂತೆ ಶುದ್ಧವಾದ ಸ್ವರ್ಣಭೂಮಿಯಿದೆ. ಅದರಲ್ಲಿ ಬಿದ್ದ ವಸ್ತುವು ಮತ್ತೆ ಸಿಗುವುದಿಲ್ಲ. ಆದ್ದರಿಂದ ಅಲ್ಲಿ ದೇವತೆಗಳಲ್ಲದೆ ಬೇರೆ ಯಾವ ಪ್ರಾಣಿಯೂ ವಾಸಿಸುವುದಿಲ್ಲ. ॥35॥

ಮೂಲಮ್

(ಗದ್ಯ - 36)
ಲೋಕಾಲೋಕ ಇತಿ ಸಮಾಖ್ಯಾ ಯದನೇನಾಚಲೇನ ಲೋಕಾಲೋಕಸ್ಯಾಂತರ್ವರ್ತಿನಾವಸ್ಥಾಪ್ಯತೇ ॥

ಅನುವಾದ

ಲೋಕಾ ಲೋಕ ಪರ್ವತವು ಬೆಳಕು ಮತ್ತು ಕತ್ತಲೆಗಳ ಪ್ರದೇಶಗಳೆ ರಡಕ್ಕೂ ನಡುವೆ ಗಡಿಯಾಗಿದೆ. ಇದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ॥36॥

(ಗದ್ಯ - 37)

ಮೂಲಮ್

ಸ ಲೋಕತ್ರಯಾಂತೇ ಪರಿತ ಈಶ್ವರೇಣ ವಿಹಿತೋ ಯಸ್ಮಾತ್ಸೂರ್ಯಾದೀನಾಂ ಧ್ರುವಾಪವರ್ಗಾಣಾಂ ಜ್ಯೋತಿ- ರ್ಗಣಾನಾಂ ಗಭಸ್ತಯೋರ್ವಾಚೀನಾಂಸೀಲ್ಲೋಕಾ- ನಾವಿತನ್ವಾನಾ ನ ಕದಾಚಿತ್ಪರಾಚೀನಾ ಭವಿತುಮುತ್ಸ- ಹಂತೇ ತಾವದುನ್ನಹನಾಯಾಮಃ ॥

ಅನುವಾದ

ಪರಮಾತ್ಮನು ಇದನ್ನು ಮೂರೂ ಲೋಕಗಳಿಗೂ ಹೊರಗೆ ಅವುಗಳ ನಾಲ್ಕೂ ಕಡೆಗಳ ಎಲ್ಲೆಗಳ ರೂಪದಲ್ಲಿ ಸ್ಥಾಪಿಸಿರುವನು. ಇದರ ಒಂದು ಕಡೆಯಿಂದ-ಮೂರು ಲೋಕಗಳನ್ನು ಪ್ರಕಾಶಿತ ಗೊಳಿಸುವ ಸೂರ್ಯನಿಂದ ಹಿಡಿದು ಧ್ರುವಲೋಕದವರೆಗಿನ ಸಮಸ್ತ ಜ್ಯೋತಿಮಂಡಲಗಳ ಕಿರಣಗಳು ಮತ್ತೊಂದು ಕಡೆಗೆ ಹೋಗದಷ್ಟು ಈ ಪರ್ವತವು ಎತ್ತರ ಮತ್ತು ಉದ್ದವಿದೆ. ॥37॥

(ಗದ್ಯ - 38)

ಮೂಲಮ್

ಏತಾವಾಲ್ಲೋಕವಿನ್ಯಾಸೋ ಮಾನಲಕ್ಷಣಸಂಸ್ಥಾಭಿರ್ವಿಚಿಂತಿತಃ ಕವಿಭಿಃ ಸ ತು ಪಂಚಾಶತ್ಕೋಟಿಗಣಿತಸ್ಯ ಭೂ-ಗೋಲಸ್ಯ ತುರೀಯಭಾಗೋಯಂ ಲೋಕಾಲೋಕಾಚಲಃ ॥

ಅನುವಾದ

ವಿದ್ವಾಂಸರು ಪ್ರಮಾಣ, ಲಕ್ಷಣ ಮತ್ತು ಸ್ಥಿತಿಗನು ಸಾರವಾಗಿ ಸಮಸ್ತ ಲೋಕಗಳ ವಿಸ್ತಾರವು ಇಷ್ಟೇ ಎಂದು ನಿರೂಪಿಸಿದ್ದಾರೆ. ಈ ಇಡೀ ಭೂಗೋಳವು ಐವತ್ತು ಕೋಟಿ ಯೋಜನ ವಿಸ್ತಾರವಾಗಿದೆ. ಇದರ ನಾಲ್ಕನೆಯ ಒಂದಂಶ (ಹನ್ನೆರಡುವರೆ ಕೋಟಿ ಯೋಜನ ವಿಸ್ತಾರವುಳ್ಳ) ಈ ಲೋಕಾಲೋಕ ಪರ್ವತವಿದೆ. ॥38॥

(ಗದ್ಯ - 39)

ಮೂಲಮ್

ತದುಪರಿಷ್ಟಾಚ್ಚತಸೃಷ್ವಾಶಾಸ್ವಾತ್ಮಯೋನಿನಾಖಿಲಜಗದ್ಗುರುಣಾಧಿನಿವೇಶಿತಾ ಯೇ ದ್ವಿರದಪತಯ ಋಷಭಃ ಪುಷ್ಕರಚೂಡೋ ವಾಮನೋಪರಾಜಿತ ಇತಿ ಸಕಲಲೋಕಸ್ಥಿತಿಹೇತವಃ ॥

ಅನುವಾದ

ಇದರ ಮೇಲೆ ನಾಲ್ಕೂ ದಿಕ್ಕುಗಳಲ್ಲಿ ಸಮಸ್ತ ಜಗತ್ತಿಗೆ ಗುರುವಾದ ಸ್ವಯಂ ಭೂಬ್ರಹ್ಮದೇವರು ಸಮಸ್ತ ಲೋಕಗಳ ಸ್ಥಿತಿಗಾಗಿ ಋಷಭ, ಪುಷ್ಕರ ಚೂಡ, ವಾಮನ ಮತ್ತು ಅಪರಾಜಿತ ಎಂಬ ನಾಲ್ಕು ಗಜರಾಜರನ್ನು ನಿಯುಕ್ತಗೊಳಿಸಿರುವರು. ॥39॥

(ಗದ್ಯ - 40)

ಮೂಲಮ್

ತೇಷಾಂ ಸ್ವವಿಭೂತೀನಾಂ ಲೋಕಪಾಲಾನಾಂ ಚ ವಿವಿಧವೀರ್ಯೋಪ ಬೃಂಹಣಾಯ ಭಗವಾನ್ಪರಮಮಹಾಪುರುಷೋ ಮಹಾವಿಭೂತಿಪತಿರಂತರ್ಯಾಮ್ಯಾತ್ಮನೋ ವಿಶುದ್ಧ ಸತ್ತ್ವಂ ಧರ್ಮಜ್ಞಾನವೈರಾಗ್ಯೈಶ್ವರ್ಯಾದ್ಯಷ್ಟಮಹಾಸಿದ್ಧ್ಯುಪಲ- ಕ್ಷಣಂ ವಿಷ್ವಕ್ಸೇನಾದಿಭಿಃ ಸ್ವಪಾರ್ಷದಪ್ರವರೈಃ ಪರಿವಾರಿತೋ ನಿಜವರಾಯುಧೋಪಶೋಭಿತೈರ್ನಿಜಭುಜದಂಡೈಃ ಸಂಧಾರಯಮಾಣಸ್ತಸ್ಮಿನ್ ಗಿರಿವರೇ ಸಮಂತಾತ್ಸಕಲಲೋ- ಕಸ್ವಸ್ತಯ ಆಸ್ತೇ ॥

ಅನುವಾದ

ಆ ದಿಗ್ಗಜಗಳ ಮತ್ತು ತನ್ನ ಅಂಶಸ್ವರೂಪರಾದ ಇಂದ್ರಾದಿ ಲೋಕಪಾಲರ ವಿವಿಧ ಶಕ್ತಿಯನ್ನು ವೃದ್ಧಿಪಡಿಸಲಿಕ್ಕಾಗಿ ಹಾಗೂ ಸಮಸ್ತ ಲೋಕಗಳ ಕ್ಷೇಮಕ್ಕಾಗಿಯೂ ಪರಮೈ ಶ್ವರ್ಯದ ಅಧಿಪತಿಯೂ, ಸರ್ವಾಂತರ್ಯಾಮಿಯೂ ಆದ ಪರಮಪುರುಷ ಶ್ರೀಹರಿಯು ತನ್ನ ವಿಶ್ವಕ್ಸೇನ ಮುಂತಾದ ಪಾರ್ಷದರೊಂದಿಗೆ ಈ ಪರ್ವತದಲ್ಲಿ ಎಲ್ಲ ಕಡೆಗಳಲ್ಲಿಯೂ ವಿರಾಜಿಸುತ್ತಿರುವನು. ಸ್ವಾಮಿಯು ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯಗಳೇ ಮುಂತಾದ ಅಷ್ಟಸಿದ್ಧಿಗಳಿಂದ ಸಂಪನ್ನನಾಗಿ ತನ್ನ ದಿವ್ಯ ಶುದ್ಧ ಸತ್ತ್ವಮಯವಾದ ದಿವ್ಯ ಮಂಗಳ ವಿಗ್ರಹದಲ್ಲಿ ಶಂಖ- ಚಕ್ರಾದಿ ದಿವ್ಯಾಯುಧಗಳನ್ನು ಕರಗಳಲ್ಲಿ ಧರಿಸಿ ಮೆರೆಯುತ್ತಿದ್ದಾನೆ. ॥40॥

(ಗದ್ಯ - 41)

ಮೂಲಮ್

ಆಕಲ್ಪಮೇವಂ ವೇಷಂ ಗತ ಏಷ ಭಗವಾನಾತ್ಮಯೋಗಮಾಯಯಾ ವಿರಚಿತವಿವಿಧಲೋ- ಕಯಾತ್ರಾಗೋಪೀಥಾ ಯೇತ್ಯರ್ಥಃ ॥

ಅನುವಾದ

ಹೀಗೆ ತನ್ನ ಯೋಗಮಾಯೆಯಿಂದ ರಚಿಸಿದ ವಿವಿಧ ಲೋಕಗಳ ವ್ಯವಸ್ಥೆಯನ್ನು ಸುರಕ್ಷಿತವಾಗಿಡಲು ಅವನು ಇದೇ ಲೀಲಾಮಯರೂಪದಿಂದ ಕಲ್ಪಾಂತ್ಯದ ವರೆಗೆ ಅಲ್ಲಿ ಎಲ್ಲ ಕಡೆಗಳಲ್ಲಿ ನೆಲೆಸಿರುವನು. ॥41॥

(ಗದ್ಯ - 42)

ಮೂಲಮ್

ಯೋಂ- ತರ್ವಿಸ್ತಾರ ಏತೇನ ಹ್ಯಲೋಕಪರಿಮಾಣಂ ಚ ವ್ಯಾಖ್ಯಾತಂ ಯದ್ಬಹಿರ್ಲೋಕಾಲೋಕಾಚಲಾತ್ ತತಃ ಪರಸ್ತಾದ್ಯೋಗೇಶ್ವರಗತಿಂ ವಿಶುದ್ಧಾಮುದಾಹರಂತಿ ॥

ಅನುವಾದ

ಲೋಕಾಲೋಕದ ಒಳಗಿನ ಭೂಭಾಗದ ಎಷ್ಟು ವಿಸ್ತಾರ ವಿದೆಯೋ, ಅದರಿಂದ ಅದರ ಹೊರಗಿನ ಕತ್ತಲೆಯ ಪ್ರದೇಶದ ವಿಸ್ತಾರದ ವ್ಯಾಖ್ಯೆಯನ್ನು ಮಾಡಿದಂತಾಯಿತು. ಅಲ್ಲಿಂದ ಆಚೆಗಾದರೋ ಕೇವಲ ಯೋಗೇಶ್ವರರೇ ಸಂಚರಿಸಬಲ್ಲರು. ॥42॥

(ಶ್ಲೋಕ - 43)

ಮೂಲಮ್

ಅಂಡಮಧ್ಯಗತಃ ಸೂರ್ಯೋ
ದ್ಯಾವಾಭೂಮ್ಯೋರ್ಯದಂತರಮ್ ।
ಸೂರ್ಯಾಂಡಗೋಲಯೋರ್ಮಧ್ಯೇ
ಕೋಟ್ಯಃ ಸ್ಯುಃ ಪಂಚವಿಂಶತಿಃ ॥

ಅನುವಾದ

ಎಲೈ ರಾಜನೇ! ಸ್ವರ್ಗ - ಪೃಥಿವಿಯ ನಡುವೆ ಬ್ರಹ್ಮಾಂಡದ ಕೇಂದ್ರವೇ ಸೂರ್ಯನ ಸ್ಥಿತಿಯಾಗಿದೆ. ಸೂರ್ಯ ಹಾಗೂ ಬ್ರಹ್ಮಾಂಡಗೋಲದ ನಡುವೆ ಎಲ್ಲ ಕಡೆಯಿಂದ ಇಪ್ಪತ್ತೈದು ಕೋಟಿ ಯೋಜನಗಳ ಅಂತರವಿದೆ. ॥43॥

(ಗದ್ಯ - 44)

ಮೂಲಮ್

ಮೃತೇಂಡ ಏಷ ಏತಸ್ಮಿನ್ ಯನ್ಯದಭೂತ್ತತೋ ಮಾರ್ತಂಡ ಇತಿ ವ್ಯಪದೇಶಃ ಹಿರಣ್ಯಗರ್ಭ ಇತಿ ಯದ್ ಹಿರಣ್ಯಾಂಡಸಮುದ್ಭವಃ ॥

ಅನುವಾದ

ಸೂರ್ಯನು ಈ ಮೃತ ಅರ್ಥಾತ್ ಸತ್ತಂತೆ (ಅಚೇತನ) ಇರುವ ಅಂಡದಲ್ಲಿ ವೈರಾಜರೂಪದಿಂದ ಬೆಳಗುತ್ತಿರುವುದರಿಂದಲೇ ಇವನ ಹೆಸರು ‘ಮಾರ್ತಾಂಡ’ವೆಂದಾಯಿತು. ಇವನು ಹಿರಣ್ಯಮಯ (ಜ್ಯೋತಿರ್ಮಯ) ಬ್ರಹ್ಮಾಂಡದಿಂದ ಪ್ರಕಟನಾದ್ದರಿಂದ ಇವನನ್ನು ‘ಹಿರಣ್ಯಗರ್ಭ’ ಎಂದೂ ಹೇಳುತ್ತಾರೆ. ॥44॥

(ಶ್ಲೋಕ - 45)

ಮೂಲಮ್

ಸೂರ್ಯೇಣ ಹಿ ವಿಭಜ್ಯಂತೇ ದಿಶಃ ಖಂ ದ್ಯೌರ್ಮಹೀ ಭಿದಾ ।
ಸ್ವರ್ಗಾಪವರ್ಗೌ ನರಕಾ ರಸೌಕಾಂಸಿ ಚ ಸರ್ವಶಃ ॥

ಅನುವಾದ

ಸೂರ್ಯನಿಂದಲೇ ದಿಕ್ಕು, ಆಕಾಶ, ದ್ಯುಲೋಕ (ಅಂತರಿಕ್ಷ), ಭೂರ್ಲೋಕ, ಸ್ವರ್ಗ ಮತ್ತು ಮೋಕ್ಷದ ಪ್ರದೇಶ, ನರಕ ಮತ್ತು ರಸಾತಳ ಹಾಗೂ ಎಲ್ಲ ಭಾಗಗಳ ವಿಭಾಗವಾಗುತ್ತದೆ. ॥45॥

(ಶ್ಲೋಕ - 46)

ಮೂಲಮ್

ದೇವತಿರ್ಯಙ್ಮನುಷ್ಯಾಣಾಂ ಸರೀಸೃಪಸವೀರುಧಾಮ್ ।
ಸರ್ವಜೀವನಿಕಾಯಾನಾಂ ಸೂರ್ಯ ಆತ್ಮಾ ದೃಗೀಶ್ವರಃ ॥

ಅನುವಾದ

ಸೂರ್ಯನೇ ದೇವತೆಗಳು, ತಿರ್ಯಕ್, ಮನುಷ್ಯ, ಸರೀಸೃಪ ಮತ್ತು ವೃಕ್ಷ-ಲತಾದಿ ಸಮಸ್ತ ಜೀವಸಮೂಹದ ಆತ್ಮಾ ಹಾಗೂ ನೇತ್ರೇಂದ್ರಿಯದ ಅಧಿಷ್ಠಾತೃನಾಗಿದ್ದಾನೆ. ॥46॥

ಅನುವಾದ (ಸಮಾಪ್ತಿಃ)

ಇಪ್ಪತ್ತನೆಯ ಅಧ್ಯಾಯವು ಮುಗಿಯಿತು. ॥20॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಭುವನಕೋಶವರ್ಣನೇ ಸಮುದ್ರವರ್ಷಸಂನಿವೇಶಪರಿಮಾಣಲಕ್ಷಣೋ ನಾಮ ವಿಂಶೋಽಧ್ಯಾಯಃ ॥20॥