೧೯

[ಹತ್ತೊಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಕಿಂಪುರುಷವರ್ಷ ಮತ್ತು ಭಾರತವರ್ಷಗಳ ವರ್ಣನೆ

(ಗದ್ಯ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕಿಂಪುರುಷೇ ವರ್ಷೇ ಭಗವಂತಮಾದಿಪುರುಷಂ ಲಕ್ಷ್ಮಣಾಗ್ರಜಂ ಸೀತಾಭಿರಾಮಂ ರಾಮಂ ತಚ್ಚರಣಸಂ- ನಿಕರ್ಷಾಭಿರತಃ ಪರಮಭಾಗವತೋ ಹನುಮಾನ್ ಸಹ ಕಿಂಪುರುಷೈರವಿರತಭಕ್ತಿರುಪಾಸ್ತೇ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಮಹಾರಾಜನೇ! ಕಿಂಪುರುಷವರ್ಷದಲ್ಲಿ ಶ್ರೀಲಕ್ಷ್ಮಣನ ಅಣ್ಣನೂ, ಆದಿ ಪುರುಷನೂ, ಸೀತೆಯ ಹೃದಯಾಭಿರಾಮನೂ ಆದ ಭಗವಾನ್ ಶ್ರೀರಾಮಚಂದ್ರನ ಅಡಿದಾವರೆಗಳ ಸಾನ್ನಿಧ್ಯ ದಲ್ಲಿ ಸದಾ ಆಸಕ್ತನಾಗಿರುವ ಪರಮಭಾಗವತೋತ್ತಮ ಆಂಜನೇಯನು ಇತರ ಕಿನ್ನರರಿಂದೊಡಗೂಡಿ ನಿಶ್ಚಲವಾದ ಭಕ್ತಿಭಾವದಿಂದ ಶ್ರೀರಾಮದೇವರನ್ನು ಉಪಾಸನೆ ಮಾಡುತ್ತಿರುವನು. ॥1॥

(ಗದ್ಯ - 2)

ಮೂಲಮ್

ಆರ್ಷ್ಟಿಷೇಣೇನ ಸಹ ಗಂಧರ್ವೈರನುಗೀಯಮಾನಾಂ ಪರಮಕಲ್ಯಾಣೀಂ ಭರ್ತೃಭಗವತ್ಕಥಾಂ ಸಮುಪಶೃಣೋತಿ ಸ್ವಯಂ ಚೇದಂ ಗಾಯತಿ ॥

ಅನುವಾದ

ಅಲ್ಲಿ ಇತರ ಗಂಧರ್ವರೊಡನೆ ಆರ್ಷ್ಟಿ ಷೇಣನು ಪ್ರಭುವಾದ ಶ್ರೀರಾಮದೇವರ ಪರಮ ಕಲ್ಯಾಣ ಗುಣಮಯವಾದ ಕಥೆಯನ್ನು ಗಾನಮಾಡುತ್ತಿರುವನು. ಹನುಮಂತನು ಅದನ್ನು ಕೇಳಿ ಸವಿಯುತ್ತಾ ತಾನು ಈ ಮಂತ್ರವನ್ನು ಜಪಿಸುತ್ತಾ ಶ್ರೀರಾಮದೇವರನ್ನು ಹೀಗೆ ಸ್ತುತಿಸುವನು. ॥2॥

(ಗದ್ಯ - 3)

ಮೂಲಮ್

ಓಂ ನಮೋ ಭಗವತೇ ಉತ್ತಮ- ಶ್ಲೋಕಾಯ ನಮ ಆರ್ಯಲಕ್ಷಣಶೀಲವ್ರತಾಯ ನಮ ಉಪಶಿಕ್ಷಿತಾತ್ಮನ ಉಪಾಸಿತಲೋಕಾಯ ನಮಃ ಸಾಧುವಾದನಿಕಷಣಾಯ ನಮೋ ಬ್ರಹ್ಮಣ್ಯದೇವಾಯ ಮಹಾಪುರುಷಾಯ ಮಹಾರಾಜಾಯ ನಮ ಇತಿ ॥

ಅನುವಾದ

ಓಂಕಾರಸ್ವರೂಪನೂ, ಉತ್ತಮ ಕೀರ್ತಿಯುಳ್ಳವನೂ ಆದ ಭಗವಾನ್ ಶ್ರೀರಾಮನಿಗೆ ನಮಸ್ಕಾರವು. ಆರ್ಯರ ಲಕ್ಷಣ, ಶೀಲ ಮತ್ತು ವ್ರತಗಳಿಂದ ಸಂಪನ್ನನಾಗಿರುವ ಪ್ರಭುವಿಗೆ ನಮಸ್ಕಾರವು. ಪರಮ ಸಂಯಮದಿಂದ ಕೂಡಿದ ಚಿತ್ತವುಳ್ಳವನಾಗಿ, ಲೋಕಾ ರಾಧನೆಯಲ್ಲಿ ತತ್ಪರನಾಗಿ, ಸಾಧುತ್ವಕ್ಕೆ ಒರೆಗಲ್ಲಾಗಿರುವ ಸ್ವಾಮಿಗೆ ನಮಸ್ಕಾರವು. ಬ್ರಾಹ್ಮಣರಿಗೆ ಹಿತಕರವಾಗಿರುವ ದೇವನಿಗೆ ನಮಸ್ಕಾರವು. ಮಹಾಪುರುಷನೂ, ಮಹಾರಾಜನೂ ಆದ ಶ್ರೀರಾಮಚಂದ್ರನಿಗೆ ಪುನಃ ಪುನಃ ನನ್ನ ನಮಸ್ಕಾರಗಳು.॥3॥

(ಶ್ಲೋಕ - 4)

ಮೂಲಮ್

ಯತ್ತದ್ವಿಶುದ್ಧಾನುಭವಮಾತ್ರಮೇಕಂ
ಸ್ವತೇಜಸಾ ಧ್ವಸ್ತಗುಣವ್ಯವಸ್ಥಮ್
ಪ್ರತ್ಯಕ್ ಪ್ರಶಾಂತಂ ಸುಧಿಯೋಪಲಂಭನಂ
ಹ್ಯನಾಮರೂಪಂ ನಿರಹಂ ಪ್ರಪದ್ಯೇ ॥

ಅನುವಾದ

ಓ ಭಗವಂತಾ! ಪರಿಶುದ್ಧ ಜ್ಞಾನಸ್ವರೂಪನೂ, ಅದ್ವಿತೀಯನೂ, ತ್ರಿಗುಣಾತೀತವಾದ ತನ್ನ ತೇಜಃಸ್ವರೂಪದ ತ್ರಿಗುಣ ಕಾರ್ಯಗಳ ರಚನೆಯನ್ನು ತೊಡೆದುಹಾಕಿದ ತುರೀಯನೂ, ಅಂತರಾತ್ಮನೂ, ಪ್ರಶಾಂತನೂ, ಶುದ್ಧವಾದ ಬುದ್ಧಿಯಿಂದಲೇ ಗ್ರಹಿಸಲ್ಪಡುವವನೂ, ನಾಮ-ರೂಪ ರಹಿತನೂ, ಅಹಂಭಾವ ರಹಿತನೂ ಆದ ನಿನ್ನನ್ನು ಶರಣು ಹೊಂದುತ್ತೇನೆ. ॥4॥

(ಶ್ಲೋಕ - 5)

ಮೂಲಮ್

ಮರ್ತ್ಯಾವತಾರಸ್ತ್ವಿಹ ಮರ್ತ್ಯಶಿಕ್ಷಣಂ
ರಕ್ಷೋವಧಾಯೈವ ನ ಕೇವಲಂ ವಿಭೋಃ
ಕುತೋನ್ಯಥಾ ಸ್ಯಾದ್ರಮತಃ ಸ್ವ ಆತ್ಮನಃ
ಸೀತಾಕೃತಾನಿ ವ್ಯಸನಾನೀಶ್ವರಸ್ಯ ॥

ಅನುವಾದ

ಪ್ರಭೋ! ನಿನ್ನ ಮನುಷ್ಯಾ ವತಾರವು ಕೇವಲ ರಾಕ್ಷಸರ ಸಂಹಾರಕ್ಕಷ್ಟೇ ಅಲ್ಲ; ಇದರ ಮುಖ್ಯ ಉದ್ದೇಶ ಮನುಷ್ಯರಿಗೆ ಶಿಕ್ಷಣ ನೀಡುವುದೇ ಆಗಿದೆ. ಇಲ್ಲದಿದ್ದರೆ ತನ್ನ ಸ್ವರೂಪದಲ್ಲೇ ಸದಾ ರಮಿಸುತ್ತಿರುವ ಆನಂದಮಯನೂ, ಸರ್ವೇಶ್ವರನೂ ಆದ ನಿನಗೆ ಸೀತಾ ದೇವಿಯ ಅಗಲಿಕೆಯ ದುಃಖವು ಹೇಗಾಗಬಲ್ಲದು? ॥5॥

(ಶ್ಲೋಕ - 6)

ಮೂಲಮ್

ನ ವೈ ಸ ಆತ್ಮಾತ್ಮವತಾಂ ಸುಹೃತ್ತಮಃ
ಸಕ್ತಸಿಲೋಕ್ಯಾಂ ಭಗವಾನ್ವಾಸುದೇವಃ
ನ ಸೀಕೃತಂ ಕಶ್ಮಲಮಶ್ನುವೀತ
ನ ಲಕ್ಷ್ಮಣಂ ಚಾಪಿ ವಿಹಾತುಮರ್ಹತಿ ॥

ಅನುವಾದ

ನೀನು ಧೀರ ಪುರುಷರ ಆತ್ಮನಾಗಿದ್ದು,* ಪ್ರಿಯತಮ ಭಗವಾನ್ ವಾಸುದೇವನಾಗಿರುವೆ. ಮೂರುಲೋಕಗಳಲ್ಲಿ ಯಾವುದೇ ವಸ್ತುವಿನಲ್ಲಿಯೂ ನಿನಗೆ ಆಸಕ್ತಿಯು ಇಲ್ಲ. ಇಂತಹ ನಿನಗೆ ಸ್ತ್ರೀ ಸಂಬಂಧವಾದ ದುಃಖವಾಗಲೀ, ಪ್ರಾಣಪ್ರಿಯನಾದ ತಮ್ಮನಾದ ಲಕ್ಷ್ಮಣನನ್ನು ತೊರೆಯುವ ಪ್ರಸಂಗವಾಗಲೀ ಹೇಗೆ ಒದಗುತ್ತಿದ್ದವು? ॥6॥

ಟಿಪ್ಪನೀ
  • ‘ಭಗವಂತನಾದರೋ ಎಲ್ಲರ ಆತ್ಮನಾಗಿರುವನು. ಹಾಗಿರುವಾಗ ಇಲ್ಲಿ ಅವನನ್ನು ಆತ್ಮವಾನ್ (ಧೀರ) ಪುರುಷರ ಆತ್ಮಾ ಎಂದು ಏಕೆ ಹೇಳಲಾಗಿದೆ?’ ಎಂಬ ಪ್ರಶ್ನೆ ಇಲ್ಲಿ ಉಂಟಾಗಬಹುದು. ಇದರ ಉತ್ತರ ಅವನು ಎಲ್ಲರ ಆತ್ಮನಾಗಿದ್ದರೂ ಅವನನ್ನು ಕೇವಲ ಆತ್ಮಜ್ಞಾನಿಗಳೇ ತಮ್ಮ ಆತ್ಮರೂಪದಿಂದ ಅನುಭವಿಸುತ್ತಾರೆ ಬೇರೆಯವರು ಇಲ್ಲ. ಶ್ರುತಿಯಲ್ಲಿ ಆತ್ಮಸಾಕ್ಷಾತ್ಕಾರ ಮಾತುಬರುವಲ್ಲಿ ಆತ್ಮನನ್ನು ತಿಳಿದವರಿಗೆ ‘ಧೀರ’ ಎಂಬ ಶಬ್ದದ ಪ್ರಯೋಗ ಮಾಡಲಾಗಿದೆ. ‘ಕಶ್ಚಿದ್ಧೀರಃ ಪ್ರತ್ಯಗಾತ್ಮಾನಮೈಕ್ಷತ’ ‘ನಃ ಶುಶ್ರುಮಧೀರಾಣಾಮ್’ ಇತ್ಯಾದಿ. ಅದಕ್ಕಾಗಿ ಇಲ್ಲಿಯೂ ಭಗವಂತನನ್ನು ಆತ್ಮವಾನ್ ಅಥವಾ ಧೀರಪುರುಷರ ಆತ್ಮಾ ಎಂದು ಹೇಳಲಾಗಿದೆ.
    ಒಮ್ಮೆ ಭಗವಾನ್ ಶ್ರೀರಾಮನು ಏಕಾಂತದಲ್ಲಿ ಓರ್ವ ದೇವದೂತನೊಂದಿಗೆ ಮಾತಾಡುತ್ತಿದ್ದನು. ಆಗ ಲಕ್ಷ್ಮಣನು ಕಾವಲಾಗಿದ್ದನು. ‘ಈ ಸಮಯದಲ್ಲಿ ಯಾರಾದರೂ ಒಳಗೆ ಬಂದರೆ ಅವನು ನನ್ನ ಕೈಯಿಂದ ಕೊಲ್ಲಲ್ಪಡುವನು’ ಎಂಬ ಭಗವಂತನ ಆಜ್ಞೆ ಇತ್ತು. ಇಷ್ಟರಲ್ಲಿ ದುರ್ವಾಸಮಹಾಮುನಿಗಳು ಆಗಮಿಸಿದರು. ಅವರು ಲಕ್ಷ್ಮಣನನ್ನು ಒಳಗೆ ಹೋಗಿ ತಾನು ಬಂದಿರುವ ಸಮಾಚಾರ ತಿಳಿಸುವಂತೆ ಒತ್ತಾಯಿಸಿದರು. ಲಕ್ಷ್ಮಣನು ಹಾಗೆ ಮಾಡಲು ಇದರಿಂದ ತನ್ನ ಪ್ರತಿಜ್ಞೆಗನುಸಾರ ಭಗವಂತನು ಚಿಂತಿತನಾದನು. ಆಗ ವಸಿಷ್ಠರು ಹೇಳಿದರು ಲಕ್ಷ್ಮಣನನ್ನು ಕೊಲ್ಲದೆ ಅವನನ್ನು ತ್ಯಜಿಸಿಬಿಡು. ಏಕೆಂದರೆ ತನ್ನ ಪ್ರಿಯಜನರ ತ್ಯಾಗವು ಮರಣದಂಡನೆಗೆ ಸಮಾನವಾಗಿದೆ. ಇದರಿಂದ ಭಗವಂತನು ಅವನನ್ನು ತ್ಯಜಿಸಿಬಿಟ್ಟನು.

(ಶ್ಲೋಕ - 7)

ಮೂಲಮ್

ನ ಜನ್ಮ ನೂನಂ ಮಹತೋ ನ ಸೌಭಗಂ
ನ ವಾಙ್ನ ಬುದ್ಧಿರ್ನಾಕೃತಿಸ್ತೋಷಹೇತುಃ
ತೈರ್ಯದ್ವಿಸೃಷ್ಟಾನಪಿ ನೋ ವನೌಕಸ-
ಶ್ಚಕಾರ ಸಖ್ಯೇ ಬತ ಲಕ್ಷ್ಮಣಾಗ್ರಜಃ ॥

ಅನುವಾದ

ನಿನ್ನ ಈ ವ್ಯಾಪಾರಗಳೆಲ್ಲ ಕೇವಲ ಲೋಕಶಿಕ್ಷಣಕ್ಕಾಗಿಯೇ ಇವೆ. ಲಕ್ಷ್ಮಣಾಗ್ರ ಜನೇ! ಉತ್ತಮ ಕುಲದಲ್ಲಿ ಹುಟ್ಟುವುದು, ಸುಂದರತೆ, ವಾಕ್ಚಾತುರ್ಯ, ಬುದ್ಧಿಮತ್ತೆ, ಉತ್ತಮವಾದ ಆಕೃತಿ ಇವುಗಳಲ್ಲಿ ಯಾವ ಗುಣವು ನಿನ್ನ ಪ್ರಸನ್ನತೆಗೆ ಕಾರಣವಾಗಲಾರದು. ಇದನ್ನು ತೋರಿಸುವುದಕ್ಕಾಗಿ ಇವೆಲ್ಲ ಗುಣಗಳಿಂದ ರಹಿತರಾದ ನಮ್ಮಂತಹ ವನವಾಸೀ ವಾನರರೊಂದಿಗೆ ಸ್ನೇಹವನ್ನು ಬೆಳೆಸಿದೆ. ॥7॥

(ಶ್ಲೋಕ - 8)

ಮೂಲಮ್

ಸುರೋಸುರೋ ವಾಪ್ಯಥ ವಾನರೋ ನರಃ
ಸರ್ವಾತ್ಮನಾ ಯಃ ಸುಕೃತಜ್ಞಮುತ್ತಮಮ್
ಭಜೇತ ರಾಮಂ ಮನುಜಾಕೃತಿಂ ಹರಿಂ
ಯ ಉತ್ತರಾನನಯತ್ಕೋಸಲಾನ್ದಿವಮಿತಿ ॥

ಅನುವಾದ

ದೇವತೆಗಳು, ಅಸುರರು, ವಾನರರು, ಮನುಷ್ಯರು ಇವರಲ್ಲಿ ಯಾರೇ ಆಗಿರಲೀ, ಎಲ್ಲ ರೀತಿಯಿಂದಲೂ ಶ್ರೀರಾಮ ರೂಪನಾದ ನಿನ್ನನ್ನೇ ಭಜಿಸಬೇಕು. ಏಕೆಂದರೆ, ನೀನು ಮನುಷ್ಯರೂಪದಲ್ಲಿ ಸಾಕ್ಷಾತ್ ಶ್ರೀಹರಿಯೇ ಆಗಿರುವೆ. ನಿನ್ನ ಸೇವಕರು ಮಾಡಿದ ಅಲ್ಪ ಸೇವೆಯನ್ನು ಬಹಳ ಹೆಚ್ಚು ಎಂದು ನೀನು ತಿಳಿಯುತ್ತೀಯೆ. ನೀನು ನಿನ್ನ ದಿವ್ಯಧಾಮಕ್ಕೆ ತೆರಳುವಾಗ ಸಮಸ್ತ ಉತ್ತರಕೋಸಲ ನಿವಾಸಿಗಳನ್ನು ನಿನ್ನ ಜೊತೆಗೆ ಒಯ್ದಿರುವಂತಹ ಆಶ್ರಿತವತ್ಸಲನಾಗಿರುವೆ.॥8॥

(ಗದ್ಯ - 9)

ಮೂಲಮ್

ಭಾರತೇಪಿ ವರ್ಷೇ ಭಗವಾನ್ನರನಾರಾಯಣಾಖ್ಯ ಆಕಲ್ಪಾಂತಮುಪಚಿತಧರ್ಮಜ್ಞಾನವೈರಾಗ್ಯೈಶ್ವರ್ಯೋ- ಪಶಮೋಪರಮಾತ್ಮೋಪಲಂಭನಮನುಗ್ರಹಾಯಾತ್ಮ ವತಾಮನುಕಂಪಯಾ ತಪೋವ್ಯಕ್ತಗತಿಶ್ಚರತಿ ॥

ಅನುವಾದ

ಭಾರತವರ್ಷದಲ್ಲಿಯೂ ಭಗವಂತನು ಕರುಣೆಯಿಂದ ನರ-ನಾರಾಯಣರೂಪವನ್ನು ಧರಿಸಿ ಸಂಯಮಶೀಲರಾದ ಮನುಷ್ಯರ ಮೇಲೆ ಅನುಗ್ರಹವನ್ನು ತೋರುವುದಕ್ಕಾಗಿ ಕಲ್ಪದ ಕೊನೆಯವರೆಗೂ ಅವ್ಯಕ್ತರೂಪದಿಂದ ತಪಸ್ಸು ಮಾಡುತ್ತಾ ಇರುವನು. ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯ, ಇಂದ್ರಿಯಜಯ, ಶಾಂತಿ ಇವುಗಳು ಉತ್ತರೋತ್ತರ ವೃದ್ಧಿಹೊಂದಿ ಆತ್ಮಸಾಕ್ಷಾತ್ಕಾರವನ್ನು ದೊರಕಿಸುವ ತಪಸ್ಸಿನ ಆದರ್ಶವನ್ನು ತೋರುತ್ತಿದ್ದಾನೆ. ॥9॥

(ಗದ್ಯ - 10)

ಮೂಲಮ್

ತಂ ಭಗವಾನ್ನಾರದೋ ವರ್ಣಾಶ್ರಮವತೀಭಿರ್ಭಾರತೀಭಿಃ ಪ್ರಜಾಭಿರ್ಭಗವತ್ಪ್ರೋಕ್ತಾಭ್ಯಾಂ ಸಾಂಖ್ಯಯೋಗಾಭ್ಯಾಂ ಭಗವದನುಭಾವೋಪವರ್ಣನಂ ಸಾವರ್ಣೇರುಪದೇಕ್ಷ್ಯಮಾಣಃ ಪರಮಭಕ್ತಿಭಾವೇನೋಪಸರತಿ ಇದಂ ಚಾಭಿಗೃಣಾತಿ ॥

ಅನುವಾದ

ಅಲ್ಲಿ ಭಗವಾನ್ ನಾರದಮುನಿಗಳು ಶ್ರೀಭಗವಂತನು ಸ್ವತಃ ಉಪದೇಶಿಸಿದ ಸಾಂಖ್ಯ ಮತ್ತು ಯೋಗಶಾಸ್ತ್ರದ ಸಹಿತ ಭಗವನ್ಮಹಿಮೆಯನ್ನು ಪ್ರಕಟಪಡಿಸುವ ಪಾಂಚರಾತ್ರಾಗಮವನ್ನು ಸಾವರ್ಣಿ ಮನುವಿಗೆ ಉಪದೇಶ ಮಾಡುತ್ತಾ-ಅತ್ಯಂತ ಭಕ್ತಿಯಿಂದ ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತಿರುವ ಭಾರತವರ್ಷದ ಪ್ರಜೆಗಳೊಂದಿಗೆ ಭಗವಾನ್ ನರ-ನಾರಾಯಣಸ್ವಾಮಿಯನ್ನು ಉಪಾಸನೆ ಮಾಡುತ್ತಾ, ಈ ಮಂತ್ರವನ್ನು ಜಪಿಸುತ್ತಾ, ಭಗವಂತನ ಸ್ತೋತ್ರಗಳನ್ನು ಹಾಡುತ್ತಾ ಸ್ತುತಿಸುತ್ತಿರುವರು. ॥10॥

ಮೂಲಮ್

(ಗದ್ಯ - 11)
ಓಂ ನಮೋ ಭಗವತೇ ಉಪಶಮಶೀ- ಲಾಯೋಪರತಾನಾತ್ಮ್ಯಾಯ ನಮೋಕಿಂಚನವಿತ್ತಾಯ ಋಷಿಋಷಭಾಯ ನರನಾರಾಯಣಾಯ ಪರಮಹಂಸ- ಪರಮಗುರವೇ ಆತ್ಮಾರಾಮಾಧಿಪತಯೇ ನಮೋ ನಮ ಇತಿ ॥

ಅನುವಾದ

‘ಓಂಕಾರಸ್ವರೂಪನೂ, ಅಹಂಕಾರ ರಹಿತನೂ, ನಿರ್ಧನರ ನಿಧಿಯೂ, ಶಾಂತ ಸ್ವಭಾವನೂ ಆದ ಋಷಿಶ್ರೇಷ್ಠ ಭಗವಾನ್ ನರ-ನಾರಾಯಣನಿಗೆ ನಮಸ್ಕಾರವು. ಪರಮಹಂಸರಿಗೆ ಪರಮ ಗುರುವೂ, ಆತ್ಮಾರಾಮರ ಅಧೀಶ್ವರನೂ ಆದ ಅವನಿಗೆ ಮತ್ತೆ-ಮತ್ತೆ ನಮಸ್ಕಾರಗಳು.’ ॥11॥

ಮೂಲಮ್ (ವಾಚನಮ್)

ಗಾಯತಿ ಚೇದಮ್

(ಶ್ಲೋಕ - 12)

ಮೂಲಮ್

ಕರ್ತಾಸ್ಯ ಸರ್ಗಾದಿಷು ಯೋ ನ ಬಧ್ಯತೇ
ನ ಹನ್ಯತೇ ದೇಹಗತೋಪಿ ದೈಹಿಕೈಃ
ದ್ರಷ್ಟುರ್ನ ದೃಗ್ಯಸ್ಯ ಗುಣೈರ್ವಿದೂಷ್ಯತೇ
ತಸ್ಮೈ ನಮೋಸಕ್ತವಿವಿಕ್ತಸಾಕ್ಷಿಣೇ ॥

ಅನುವಾದ

ಮತ್ತೆ ಹೀಗೆ ಹಾಡುತ್ತಿರುತ್ತಾರೆ ‘ಯಾವಾತನು ವಿಶ್ವದ ಉತ್ಪತ್ತಿ ಮುಂತಾದವುಗಳ ಕರ್ತಾ ಆಗಿದ್ದರೂ ಕರ್ತೃತ್ವದ ಅಭಿಮಾನದಿಂದ ಬಂಧಿತನಾಗುವುದಿಲ್ಲವೋ, ಶರೀರದಲ್ಲಿದ್ದರೂ ಅದರ ಧರ್ಮಗಳಾದ ಹಸಿವು-ಬಾಯಾರಿಕೆ ಮುಂತಾದವುಗಳಿಗೆ ವಶನಾಗುವುದಿಲ್ಲವೋ, ದೃಷ್ಟಾ ಆಗಿದ್ದರೂ ಯಾರ ದೃಷ್ಟಿಯು ದೃಶ್ಯದ ಗುಣ-ದೋಷಗಳಿಂದ ದೂಷಿತವಾಗುವುದಿಲ್ಲವೋ, ಅಂತಹ ಅಸಂಗ ಹಾಗೂ ವಿಶುದ್ಧ ಸಾಕ್ಷಿ ರೂಪನಾದ ಭಗವಾನ್ ನರ-ನಾರಾಯಣನಿಗೆ ನಮಸ್ಕಾರವು. ॥12॥

(ಶ್ಲೋಕ - 13)

ಮೂಲಮ್

ಇದಂ ಹಿ ಯೋಗೇಶ್ವರ ಯೋಗನೈಪುಣಂ
ಹಿರಣ್ಯಗರ್ಭೋ ಭಗವಾಂಜಗಾದ ಯತ್
ಯದಂತಕಾಲೇ ತ್ವಯಿ ನಿರ್ಗುಣೇ ಮನೋ
ಭಕ್ತ್ಯಾ ದಧೀತೋಜ್ಝಿತದುಷ್ಕಲೇವರಃ ॥

ಅನುವಾದ

ಎಲೈ ಯೋಗೇಶ್ವರನೇ! ಹಿರಣ್ಯಗರ್ಭ ಬ್ರಹ್ಮದೇವರು ‘ಮನುಷ್ಯನು ಅಂತ್ಯಕಾಲದಲ್ಲಿ ದೇಹಾಭಿಮಾನವನ್ನು ಬಿಟ್ಟು ಭಕ್ತಿಯಿಂದ ಪ್ರಾಕೃತಗುಣರಹಿತವಾದ ನಿನ್ನ ಸ್ವರೂಪದಲ್ಲಿ ಮನಸ್ಸನ್ನು ತೊಡಗಿಸುವುದೇ ಯೋಗಸಾಧನೆಯ ಎಲ್ಲಕ್ಕಿಂತ ದೊಡ್ಡ ಕುಶಲತೆಯಾಗಿದೆ’ ಎಂದು ಹೇಳಿರುವರು. ॥13॥

(ಶ್ಲೋಕ - 14)

ಮೂಲಮ್

ಯಥೈಹಿಕಾಮುಷ್ಮಿಕಕಾಮಲಂಪಟಃ
ಸುತೇಷು ದಾರೇಷು ಧನೇಷು ಚಿಂತಯನ್
ಶಂಕೇತ ವಿದ್ವಾನ್ಕುಕಲೇವರಾತ್ಯಯಾದ್
ಯಸ್ತಸ್ಯ ಯತ್ನಃ ಶ್ರಮ ಏವ ಕೇವಲಮ್ ॥

ಅನುವಾದ

ಲೌಕಿಕ ಮತ್ತು ಪಾರಲೌಕಿಕ ಭೋಗಗಳಲ್ಲಿ ಲಂಪಟನಾಗಿರುವ ಮೂಢ ಮನುಷ್ಯನು ಮಕ್ಕಳು, ಮಡದಿ, ಹಣ ಮುಂತಾದವುಗಳನ್ನೇ ಚಿಂತಿಸುತ್ತಾ ಮೃತ್ಯುವಿಗೆ ಹೆದರುವಂತೆಯೇ ವಿದ್ವಾಂಸರೂ ಕೂಡ ‘ಈ ನಿಂದ್ಯವಾದ ದೇಹವನ್ನು ಬಿಟ್ಟುಹೋಗಬೇಕಲ್ಲ’ ಎಂದು ಹೆದರಿದರೆ, ಅವನು ಜ್ಞಾನವನ್ನು ಪಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವೇ ಸರಿ. ॥14॥

(ಶ್ಲೋಕ - 15)

ಮೂಲಮ್

ತನ್ನಃ ಪ್ರಭೋ ತ್ವಂ ಕುಕಲೇವರಾರ್ಪಿತಾಂ
ತ್ವನ್ಮಾಯಯಾಹಂಮಮತಾಮಧೋಕ್ಷಜ
ಭಿಂದ್ಯಾಮ ಯೇನಾಶು ವಯಂ ಸುದುರ್ಭಿದಾಂ
ವಿಧೇಹಿ ಯೋಗಂ ತ್ವಯಿ ನಃ ಸ್ವಭಾವಮಿತಿ ॥

ಅನುವಾದ

ಆದ್ದರಿಂದ ಓ ಅಧೋಕ್ಷಜನೇ! ನೀನು ನಮಗೆ ನಿನ್ನ ಸ್ವಾಭಾವಿಕವಾದ ಪ್ರೇಮ ರೂಪವಾದ ಭಕ್ತಿಯೋಗವನ್ನು ಅನುಗ್ರಹಿಸು. ಹೇ ಪ್ರಭೋ! ಈ ನಿಂದನೀಯವಾದ ಶರೀರದಲ್ಲಿ ನಿನ್ನ ಮಾಯೆಯಿಂದ ಬೇರು ಬಿಟ್ಟಿರುವೆ. ಭೇದಿಸಲು ಅತಿಕಷ್ಟವಾಗಿರುವ ಅಹಂತೆ-ಮಮತೆಯನ್ನು ಆ ಭಕ್ತಿಯೋಗದಿಂದ ನಾವು ಒಡನೆಯೇ ಕತ್ತರಿಸಿ ಹಾಕುವೆವು. ॥15॥

(ಗದ್ಯ - 16)

ಮೂಲಮ್

ಭಾರತೇಪ್ಯಸ್ಮಿನ್ ವರ್ಷೇ ಸರಿಚ್ಛೈಲಾಃ ಸಂತಿ ಬಹವೋ ಮಲಯೋ ಮಂಗಲಪ್ರಸ್ಥೋ ಮೈನಾಕಸಿ ಕೂಟ ಋಷಭಃ ಕೂಟಕಃ ಕೊಲ್ಲಕಃ ಸಹ್ಯೋ ದೇವಗಿರಿರ್ಋಷ್ಯಮೂಕಃ ಶ್ರೀಶೈಲೋ ವೇಂಕಟೋ ಮಹೇಂದ್ರೋ ವಾರಿಧಾರೋ ವಿಂಧ್ಯಃ ಶುಕ್ತಿಮಾನೃಕ್ಷಗಿರಿಃ ಪಾರಿಯಾತ್ರೋ ದ್ರೋಣ- ಶ್ಚಿತ್ರಕೂಟೋ ಗೋವರ್ಧನೋ ರೈವತಕಃ ಕಕುಭೋ ನೀಲೋ ಗೋಕಾಮುಖ ಇಂದ್ರಕೀಲಃ ಕಾಮಗಿರಿರಿತಿ ಚಾನ್ಯೇ ಚ ಶತಸಹಸ್ರಶಃ ಶೈಲಾಸ್ತೇಷಾಂ ನಿತಂಬಪ್ರಭವಾ ನದಾ ನದ್ಯಶ್ಚ ಸಂತ್ಯಸಂಖ್ಯಾತಾಃ ॥

ಅನುವಾದ

ಎಲೈ ರಾಜೇಂದ್ರನೇ! ಈ ಭಾರತವರ್ಷದಲ್ಲಿಯೂ ಕೂಡ ಬಹುಸಂಖ್ಯೆಯ ಪರ್ವತಗಳೂ, ನದಿಗಳೂ ಇವೆ. ಮಲಯ, ಮಂಗಲಪ್ರಸ್ಥ, ಮೈನಾಕ, ತ್ರಿಕೂಟ, ಋಷಭ, ಕೂಟಕ, ಕೊಲ್ಲಕ, ಸಹ್ಯ, ದೇವಗಿರಿ, ಋಷ್ಯಮೂಕ, ಶ್ರೀಶೈಲ, ವೇಂಕಟ, ಮಹೇಂದ್ರ, ವಾರಿಧಾರ, ವಿಂಧ್ಯ, ಶುಕ್ತಿಮಾನ್, ಋಕ್ಷಗಿರಿ, ಪಾರಿಯಾತ್ರ, ದ್ರೋಣ, ಚಿತ್ರಕೂಟ, ಗೋವರ್ಧನ, ರೈವತಕ, ಕಕುಭ, ನೀಲ, ಗೋಕಾಮುಖ, ಇಂದ್ರಕೀಲ ಮತ್ತು ಕಾಮಗಿರಿ ಮುಂತಾದವುಗಳು ಇನ್ನೂ ನೂರಾರು, ಸಾವಿರಾರು ಗಿರಿಗಳೂ ಹಾಗೂ ಅವುಗಳ ತಪ್ಪಲುಗಳಿಂದ ಹುಟ್ಟುವ ನದ-ನದಿಗಳು ಲೆಕ್ಕವಿಲ್ಲದಷ್ಟಿವೆ. ॥16॥

(ಗದ್ಯ - 17)

ಮೂಲಮ್

ಏತಾಸಾಮಪೋ ಭಾರತ್ಯಃ ಪ್ರಜಾ ನಾಮಭಿರೇವ ಪುನಂತೀನಾಮಾತ್ಮನಾ ಚೋಪಸ್ಪೃಶಂತಿ ॥

ಅನುವಾದ

ಈ ನದಿಗಳ ನಾಮಸ್ಮರಣೆಯೂ ಕೂಡ ಜೀವರನ್ನು ಪವಿತ್ರಗೊಳಿಸುತ್ತದೆ. ಇವುಗಳ ತೀರ್ಥದಲ್ಲಿ ಭಾರತ ವರ್ಷದ ಪ್ರಜೆಗಳು ಸ್ನಾನಾದಿಗಳನ್ನು ಮಾಡುತ್ತಾರೆ. ॥17॥

(ಗದ್ಯ - 18)

ಮೂಲಮ್

ಚಂದ್ರ- ವಸಾ ತಾಮ್ರಪರ್ಣೀ ಅವಟೋದಾ ಕೃತಮಾಲಾ ವೈಹಾ- ಯಸೀ ಕಾವೇರಿ ವೇಣೀ ಪಯಸ್ವಿನೀ ಶರ್ಕರಾವರ್ತಾ ತುಂಗಭದ್ರಾ ಕೃಷ್ಣಾ ವೇಣ್ಯಾ ಭೀಮರಥೀ ಗೋದಾವರೀ ನಿರ್ವಿಂಧ್ಯಾ, ಪಯೋಷ್ಣೀ ತಾಪೀ ರೇವಾ ಸುರಸಾ ನರ್ಮದಾ ಚರ್ಮಣ್ವತೀ ಸಿಂಧುರಂಧಃ ಶೋಣಶ್ಚ ನದೌ ಮಹಾನದೀ ವೇದಸ್ಮೃತಿರ್ಋಷಿಕುಲ್ಯಾ ತ್ರಿಸಾಮಾ ಕೌಶಿಕೀ ಮಂದಾಕಿನೀ ಯಮುನಾ ಸರಸ್ವತೀ ದೃಷದ್ವತೀ ಗೋಮತೀ ಸರಯೂ ರೋಧಸ್ವತೀ ಸಪ್ತವತೀ ಸುಷೋಮಾ ಶತದ್ರೂಶ್ಚಂದ್ರಭಾಗಾ ಮರುದ್ವಧಾ ವಿತಸ್ತಾ ಅಸಿಕ್ನೀ ವಿಶ್ವೇತಿ ಮಹಾನದ್ಯಃ ॥

ಅನುವಾದ

ಈ ನದಿಗಳಲ್ಲಿ ಚಂದ್ರವಸಾ, ತಾಮ್ರಪರ್ಣಿ, ಅವಟೋದಾ, ಕೃತಮಾಲಾ, ವೈಹಾಯಸೀ, ಕಾವೇರೀ, ವೇಣೀ, ಪಯಸ್ವಿನೀ, ಶರ್ಕರಾವರ್ತಾ, ತುಂಗಭದ್ರಾ, ಕೃಷ್ಣಾ, ವೇಣ್ಯಾ, ಭೀಮರಥೀ, ಗೋದಾವರೀ, ನಿರ್ವಿಂಧ್ಯಾ, ಪಯೋಷ್ಣೀ, ತಾಪೀ, ರೇವಾ, ಸುರಸಾ, ನರ್ಮದಾ, ಚರ್ಮಣ್ವತೀ, ಸಿಂಧು, ಅಂಧ, ಶೋಣ (ನದಿಗಳು), ಮಹಾನದೀ, ವೇದಸ್ಮೃತಿ, ಋಷಿಕುಲ್ಯಾ, ತ್ರಿಸಾಮಾ, ಕೌಶಿಕೀ, ಮಂದಾಕಿನೀ, ಯಮುನಾ, ಸರಸ್ವತೀ, ದೃಷದ್ವತೀ, ಗೋಮತೀ, ಸರಯೂ, ರೋಧಸ್ವತೀ, ಸಪ್ತವತೀ, ಸುಷೋಮಾ, ಶತದ್ರೂ, ಚಂದ್ರಭಾಗಾ, ಮರುಧ್ವಧಾ, ವಿತಸ್ತಾ, ಅಸಿಕ್ನೀ, ವಿಶ್ವಾ ಎಂಬಿವು ಮಹಾ ನದಿಗಳೆನಿಸುವವು. ॥18॥

(ಗದ್ಯ - 19)

ಮೂಲಮ್

ಅಸ್ಮಿನ್ನೇವ ವರ್ಷೇ ಪುರುಷೈರ್ಲಬ್ಧಜನ್ಮಭಿಃ ಶುಕ್ಲ-ಲೋಹಿತ-ಕೃಷ್ಣವರ್ಣೇನ ಸ್ವಾರಬ್ಧೇನ ಕರ್ಮಣಾದಿವ್ಯಮಾನುಷ ನಾರಕಗತಯೋ ಬಹ್ವ್ಯ ಆತ್ಮನ ಆನುಪೂರ್ವ್ಯೇಣ ಸರ್ವಾ ಹ್ಯೇವ ಸರ್ವೇಷಾಂ ವಿಧೀಯಂತೇ ಯಥಾವರ್ಣ ವಿಧಾನಮಪವರ್ಗಶ್ಚಾಪಿ ಭವತಿ ॥

ಅನುವಾದ

ಈ ಭಾರತವರ್ಷದಲ್ಲಿ ಜನ್ಮ ವನ್ನು ಪಡೆದ ಮನುಷ್ಯರು ತಾವು ಮಾಡಿದ ಸಾತ್ತ್ವಿಕ, ರಾಜಸ, ತಾಮಸ ಎಂಬ ಕರ್ಮಗಳನುಸಾರವಾಗಿ ಕ್ರಮ ವಾಗಿ ನಾನಾ ರೀತಿಯ ದೇವತಾ, ಮನುಷ್ಯ ಮತ್ತು ನಾರಕೀ ಯೋನಿಗಳು ದೊರೆಯುತ್ತವೆ. ಏಕೆಂದರೆ, ಕರ್ಮಾನು ಸಾರವಾಗಿ ಎಲ್ಲ ಜೀವರಿಗೆ ಎಲ್ಲಾ ಯೋನಿಗಳು ದೊರೆಯಬಲ್ಲವು. ಇದೇ ವರ್ಷದಲ್ಲಿ ತಮ್ಮ-ತಮ್ಮ ವರ್ಣಾಶ್ರಮ ಧರ್ಮಗಳನ್ನು ವಿಧಿವತ್ತಾಗಿ ಅನುಷ್ಠಾನ ಮಾಡುವುದರಿಂದ ಮೋಕ್ಷವೂ ಕೂಡ ಪ್ರಾಪ್ತವಾಗ ಬಲ್ಲುದು. ॥19॥

(ಗದ್ಯ - 20)

ಮೂಲಮ್

ಯೋಸೌ ಭಗವತಿ ಸರ್ವಭೂತಾತ್ಮನ್ಯನಾತ್ಮ್ಯೇನಿರುಕ್ತೇನಿಲಯನೇ ಪರಮಾತ್ಮನಿ ವಾಸುದೇವೇ- ನನ್ಯನಿಮಿತ್ತ ಭಕ್ತಿಯೋಗಲಕ್ಷಣೋ ನಾನಾಗತಿನಿಮಿತ್ತಾವಿದ್ಯಾಗ್ರಂಥಿರಂಧನದ್ವಾರೇಣ ಯದಾ ಹಿ ಮಹಾಪುರುಷ- ಪುರುಷಪ್ರಸಂಗಃ ॥

ಅನುವಾದ

ಪರೀಕ್ಷಿತನೇ! ಸಮಸ್ತ ಭೂತಗಳಿಗೂ ಆತ್ಮನಾಗಿಯೂ, ರಾಗಾದಿ ದೋಷಗಳಿಂದ ರಹಿತನೂ, ಅನಿರ್ವಚ ನೀಯನೂ, ನಿರಾಧಾರನಾದ ಪರಮಾತ್ಮ ಭಗವಾನ್ ವಾಸುದೇವನಲ್ಲಿ ಅನನ್ಯ, ಅಹೈತುಕೀ ಭಕ್ತಿಭಾವವೇ ಈ ಮೋಕ್ಷಪದವಾಗಿದೆ. ಈ ಭಕ್ತಿಭಾವವು ಅನೇಕ ರೀತಿಯ ಗತಿಗಳನ್ನು ಪ್ರಕಟಗೊಳಿಸುವ ಅವಿದ್ಯೆ ಎಂಬ ಹೃದಯ ಗ್ರಂಥಿಯು ಕಡಿದುಹೋಗಿ, ಭಗವಂತನ ಪ್ರೇಮೀಭಕ್ತರ ಸಮಾಗಮ ದೊರೆತಾಗಲೇ ಉಂಟಾಗುತ್ತದೆ. ॥20॥

(ಶ್ಲೋಕ - 21)

ಮೂಲಮ್

ಏತದೇವ ಹಿ ದೇವಾ ಗಾಯಂತಿ
ಅಹೋ ಅಮೀಷಾಂ ಕಿಮಕಾರಿ ಶೋಭನಂ
ಪ್ರಸನ್ನ ಏಷಾಂ ಸ್ವಿದುತ ಸ್ವಯಂ ಹರಿಃ
ಯೈರ್ಜನ್ಮ ಲಬ್ಧಂ ನೃಷು ಭಾರತಾಜಿರೇ
ಮುಕುಂದಸೇವೌಪಯಿಕಂ ಸ್ಪೃಹಾ ಹಿ ನಃ ॥

ಅನುವಾದ

ದೇವತೆಗಳೂ ಕೂಡ ಭಾರತವರ್ಷದಲ್ಲಿ ಹುಟ್ಟಿದ ಮನುಷ್ಯರ ಮಹಿಮೆಯನ್ನು ಈ ರೀತಿ ಹಾಡುತ್ತಾರೆ ಆಹಾ! ಭಾರತವರ್ಷದಲ್ಲಿ ಭಗವಂತನ ಸೇವೆಗೆ ಯೋಗ್ಯ ವಾದ ಮನುಷ್ಯಜನ್ಮವನ್ನು ಪಡೆದವರು ಯಾವ ಪುಣ್ಯ ಮಾಡಿರುವರೋ! ಅಥವಾ ಇವರ ಮೇಲೆ ಸ್ವಯಂ ಶ್ರೀಹರಿಯೇ ಪ್ರಸನ್ನನಾಗಿರುವನೇ! ಇಂತಹ ಪರಮ ಸೌಭಾಗ್ಯಕ್ಕಾಗಿಯೇ ನಾವು ನಿರಂತರವಾಗಿ ಆಸೆಪಡುತ್ತಿರುತ್ತೇವೆ.॥21॥

(ಶ್ಲೋಕ - 22)

ಮೂಲಮ್

ಕಿಂ ದುಷ್ಕರೈರ್ನಃ ಕ್ರತುಭಿಸ್ತಪೋವ್ರತೈ-
ರ್ದಾನಾದಿಭಿರ್ವಾ ದ್ಯುಜಯೇನ ಲ್ಗುನಾ
ನ ಯತ್ರ ನಾರಾಯಣಪಾದಪಂಕಜ-
ಸ್ಮೃತಿಃ ಪ್ರಮುಷ್ಟಾತಿಶಯೇಂದ್ರಿಯೋತ್ಸವಾತ್ ॥

ಅನುವಾದ

ಭಾರೀ ಕಷ್ಟಮಯ ಯಜ್ಞಗಳನ್ನು, ತಪಸ್ಸನ್ನು, ವ್ರತಗಳನ್ನು ಮಾಡಿ ಪಡೆದ ಈ ತುಚ್ಛವಾದ ಸ್ವರ್ಗದ ಅಧಿಕಾರದಿಂದಲಾದರೂ ಏನು ಲಾಭವಿದೆ? ಇಲ್ಲಿ ಇಂದ್ರಿಯಗಳ ಭೋಗಗಳ ಹೆಚ್ಚಳದಿಂದ ಸ್ಮರಣ ಶಕ್ತಿಯು ಕಸಿಯಲ್ಪಟ್ಟು ಶ್ರೀಮನ್ನಾರಾಯಣನ ಚರಣ ಕಮಲಗಳ ಸ್ಮೃತಿಯು ಉಂಟಾಗುವುದೇ ಇಲ್ಲ. ॥22॥

(ಶ್ಲೋಕ - 23)

ಮೂಲಮ್

ಕಲ್ಪಾಯುಷಾಂ ಸ್ಥಾನಜಯಾತ್ಪುನರ್ಭವಾತ್
ಕ್ಷಣಾಯುಷಾಂ ಭಾರತಭೂಜಯೋ ವರಮ್
ಕ್ಷಣೇನ ಮರ್ತ್ಯೇನ ಕೃತಂ ಮನಸ್ವಿನಃ
ಸಂನ್ಯಸ್ಯ ಸಂಯಾಂತ್ಯಭಯಂ ಪದಂ ಹರೇಃ ॥

ಅನುವಾದ

ಇಲ್ಲಿಯ ಸ್ವರ್ಗದ ನಿವಾಸಿಗಳ ಆಯುಸ್ಸು ಒಂದು ಕಲ್ಪದವರೆಗೆ ಇದ್ದರೂ ಇಲ್ಲಿಂದ ಪುನಃ ಸಂಸಾರಚಕ್ರಕ್ಕೆ ಮರಳ ಬೇಕಾಗುತ್ತದೆ. ಬ್ರಹ್ಮಲೋಕಕ್ಕಿಂತಲೂ ಭಾರತ ಭೂಮಿಯಲ್ಲಿ ಅಲ್ಪಾಯುವಾಗಿ ಹುಟ್ಟುವುದು ಶ್ರೇಷ್ಠವಾಗಿದೆ. ಏಕೆಂದರೆ, ಇಲ್ಲಿ ಧೀರ ಪುರುಷರು ಒಂದು ಕ್ಷಣದಲ್ಲಿ ತನ್ನ ಈ ಮರ್ತ್ಯಶರೀರದಿಂದ ಮಾಡಿರುವ ಸಮಸ್ತ ಕರ್ಮಗಳನ್ನು ಶ್ರೀಭಗವಂತನಿಗೆ ಅರ್ಪಿಸಿ ಅವನ ಅಭಯಪದವನ್ನು ಪಡೆದುಕೊಳ್ಳಬಲ್ಲರು.॥23॥

(ಶ್ಲೋಕ - 24)

ಮೂಲಮ್

ನ ಯತ್ರ ವೈಕುಂಠ ಕಥಾಸುಧಾಪಗಾ
ನ ಸಾಧವೋ ಭಾಗವತಾಸ್ತದಾಶ್ರಯಾಃ
ನ ಯತ್ರ ಯಜ್ಞೇಶಮಖಾ ಮಹೋತ್ಸವಾಃ
ಸುರೇಶಲೋಕೋಪಿ ನ ವೈ ಸ ಸೇವ್ಯತಾಮ್ ॥

ಅನುವಾದ

ಎಲ್ಲಿ ಶ್ರೀಹರಿಯ ಕಥಾಮೃತದ ನದಿಗಳು ಹರಿಯುವುದಿಲ್ಲವೋ, ಆ ನದಿಗಳ ಉಗಮಸ್ಥಾನವಾದ ಭಗವದ್ಭಕ್ತರಾದ ಸಾಧುಗಳು ವಾಸಿಸುವುದಿಲ್ಲವೋ, ಎಲ್ಲಿ ನೃತ್ಯ-ಗೀತಾದಿಗಳೊಂದಿಗೆ ಭಗವಾನ್ ಯಜ್ಞಪುರುಷನ ಪೂಜೆ-ಅರ್ಚನೆಗಳು ನಡೆಯುವುದಿಲ್ಲವೋ ಅದು ಬ್ರಹ್ಮಲೋಕವೇ ಆಗಿದ್ದರೂ ಅದನ್ನು ಸೇವಿಸಬಾರದು. ॥24॥

(ಶ್ಲೋಕ - 25)

ಮೂಲಮ್

ಪ್ರಾಪ್ತಾ ನೃಜಾತಿಂ ತ್ವಿಹ ಯೇ ಚ ಜಂತವೋ
ಜ್ಞಾನಕ್ರಿಯಾದ್ರವ್ಯಕಲಾಪಸಂಭೃತಾಮ್
ನ ವೈ ಯತೇರನ್ನಪುನರ್ಭವಾಯ ತೇ
ಭೂಯೋ ವನೌಕಾ ಇವ ಯಾಂತಿ ಬಂಧನಮ್ ॥

ಅನುವಾದ

ಭಾರತ ವರ್ಷದಲ್ಲಿ ವಿವೇಕ ಬುದ್ಧಿ, ಅದಕ್ಕೆ ಅನುಗುಣವಾದ ಕರ್ಮ ಗಳು ಮತ್ತು ಆ ಕರ್ಮಗಳನ್ನು ಆಚರಿಸುವುದಕ್ಕೆ ಉಪ ಯೋಗಪಡುವ ದ್ರವ್ಯವೇ ಮುಂತಾದ ಸಾಮಗ್ರಿಗಳಿಂದ ಸಂಪನ್ನವಾದ ಮನುಷ್ಯಜನ್ಮವನ್ನು ಪಡೆದಿದ್ದರೂ ಯಾರು ಹುಟ್ಟು-ಸಾವುಗಳ ಸುಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುವುದಿಲ್ಲವೋ ಅವರು ಬೇಡನು ಒಡ್ಡಿದ ಬೋನು-ಬಲೆಗಳಿಂದ ತಪ್ಪಿಸಿಕೊಂಡರೂ ಆಮಿಷಗಳ ಆಸೆಯಿಂದ ಮತ್ತೆ ಅಲ್ಲಿ ಸಿಕ್ಕಿಹಾಕಿಕೊಳ್ಳುವ ಅರಣ್ಯವಾಸಿ ಗಳಾದ ಪಶು-ಪಕ್ಷಿಗಳಿಗೆ ಸಮಾನರು. ॥25॥

(ಶ್ಲೋಕ - 26)

ಮೂಲಮ್

ಯೈಃ ಶ್ರದ್ಧಯಾ ಬರ್ಹಿಷಿ ಭಾಗಶೋ ಹವಿ-
ರ್ನಿರುಪ್ತಮಿಷ್ಟಂ ವಿಧಿಮಂತ್ರವಸ್ತುತಃ
ಏಕಃ ಪೃಥಙ್ನಾಮಭಿರಾಹುತೋ ಮುದಾ
ಗೃಹ್ಣಾತಿ ಪೂರ್ಣಃ ಸ್ವಯಮಾಶಿಷಾಂ ಪ್ರಭುಃ ॥ 26 ॥

ಅನುವಾದ

ಆಹಾ! ಎಂತಹ ಭಾಗ್ಯಶಾಲಿಗಳು ಈ ಭಾರತದೇಶದ ನಿವಾಸಿಗಳು! ಇವರು ಯಜ್ಞಗಳಲ್ಲಿ ಬೇರೆ-ಬೇರೆ ದೇವತೆಗಳನ್ನು ಉದ್ದೇಶಿಸಿ ಭಾಗಗಳನ್ನು ಇರಿಸಿ ವಿಧಿ, ಮಂತ್ರ ಮತ್ತು ದ್ರವ್ಯಾದಿಗಳೊಡನೆ ಶ್ರದ್ಧೆಯಿಂದ ಹವಿಸ್ಸನ್ನು ಸಮರ್ಪಿಸಿದಾಗ ಇಂದ್ರಾದಿ ನಾನಾ ನಾಮಗಳಿಂದ ಕರೆಯಲ್ಪಡುವ ಸಮಸ್ತ ಕಾಮನೆಗಳನ್ನು ಪೂರ್ಣಗೊಳಿಸುವ ಪೂರ್ಣಕಾಮನಾದ ಶ್ರೀಹರಿಯು ಅವೆಲ್ಲವನ್ನು ತಾನೇ ಪ್ರಸನ್ನತೆಯಿಂದ ಸ್ವೀಕಾರಮಾಡುವನು. ॥26॥

(ಶ್ಲೋಕ - 27)

ಮೂಲಮ್

ಸತ್ಯಂ ದಿಶತ್ಯರ್ಥಿತಮರ್ಥಿತೋ ನೃಣಾಂ
ನೈವಾರ್ಥದೋ ಯತ್ಪುನರರ್ಥಿತಾ ಯತಃ
ಸ್ವಯಂ ವಿಧತ್ತೇ ಭಜತಾಮನಿಚ್ಛತಾ-
ಮಿಚ್ಛಾಪಿಧಾನಂ ನಿಜಪಾದಪಲ್ಲವಮ್ ॥ 27 ॥

ಅನುವಾದ

ಭಕ್ತರು ಯಾವುದಾದರೂ ಕಾಮನೆಯಿಂದ ಭಗವಂತನಲ್ಲಿ ಬೇಡಿ ದರೂ, ಅವನು ಅವರಿಗೆ ಬೇಡಿದ ಪದಾರ್ಥಗಳನ್ನು ಕರುಣಿಸುತ್ತಾನೆ ಎಂಬುದು ಸರಿಯೇ. ಆದರೆ ಇದು ಭಗವಂತನ ನಿಜವಾದ ವರದಾನವಾಗಲಾರದು. ಏಕೆಂದರೆ, ಅ ಪದಾರ್ಥಗಳನ್ನು ಪಡೆದ ಬಳಿಕವೂ ಮನುಷ್ಯನ ಮನಸ್ಸಿನಲ್ಲಿ ಪುನಃ ಕಾಮನೆಗಳು ಏಳುತ್ತವೆ. ಇದರ ಬದಲಿಗೆ ಭಗವಂತನನ್ನು ನಿಷ್ಕಾಮರಾಗಿ ಭಜಿಸುವವರಿಗೆ ಅವನು ತನ್ನ ಸಾಕ್ಷಾತ್ ಚರಣಕಮಲಗಳನ್ನೇ ಕರುಣಿಸುವನು. ಅವು ಬೇರೆ ಎಲ್ಲ ಇಚ್ಛೆಗಳನ್ನು ಇಲ್ಲವಾಗಿಸುವಂತಹವುಗಳಾಗಿವೆ. ॥27॥

(ಶ್ಲೋಕ - 28)

ಮೂಲಮ್

ಯದ್ಯತ್ರ ನಃ ಸ್ವರ್ಗಸುಖಾವಶೇಷಿತಂ
ಸ್ವಿಷ್ಟಸ್ಯ ಸೂಕ್ತಸ್ಯ ಕೃತಸ್ಯ ಶೋಭನಮ್
ತೇನಾಜನಾಭೇ ಸ್ಮೃತಿಮಜ್ಜನ್ಮ ನಃ ಸ್ಯಾದ್
ವರ್ಷೇ ಹರಿರ್ಯದ್ಭಜತಾಂ ಶಂ ತನೋತಿ ॥

ಅನುವಾದ

ಆದ್ದರಿಂದ ಇಷ್ಟರವರೆಗೆ ಸ್ವರ್ಗ ಸುಖಗಳನ್ನು ಭೋಗಿಸಿದ ಬಳಿಕ ನಾವು ಹಿಂದೆ ಮಾಡಿದ ಯಜ್ಞ, ಪ್ರವಚನ, ಶುಭಕರ್ಮಗಳಿಂದ ಏನಾದರೂ ಪುಣ್ಯ ಉಳಿದಿದ್ದರೆ, ಅದರ ಪ್ರಭಾವದಿಂದ ನಮಗೆ ಈ ಭಾರತವರ್ಷದಲ್ಲಿ ಭಗವಂತನ ಸ್ಮೃತಿಯಿಂದ ಕೂಡಿದ ಮನುಷ್ಯ ಜನ್ಮವು ಸಿಗಲಿ. ಏಕೆಂದರೆ, ಶ್ರೀಹರಿಯು ತನ್ನನ್ನು ಭಜಿಸುವವನ ಎಲ್ಲ ರೀತಿಯ ಶ್ರೇಯಸ್ಸನ್ನು ಮಾಡುತ್ತಾನೆ. ॥28॥

(ಗದ್ಯ - 29)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಜಂಬೂದ್ವೀಪಸ್ಯ ಚ ರಾಜನ್ನುಪದ್ವೀಪಾನಷ್ಟೌ ಹೈಕ ಉಪದಿಶಂತಿ ಸಗರಾತ್ಮಜೈರಶ್ವಾನ್ವೇಷಣ ಇಮಾಂ ಮಹೀಂ ಪರಿತೋ ನಿಖನದ್ಭಿರುಪಕಲ್ಪಿತಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿದ್ರಾಜನೇ! ಹಿಂದೆ ಸಗರನ ಪುತ್ರರು ತಮ್ಮ ಯಜ್ಞಾಶ್ವವನ್ನು ಹುಡುಕು ತ್ತಿರುವಾಗ ಈ ಪೃಥಿವಿಯನ್ನು ನಾಲ್ಕೂ ಕಡೆಗಳಿಂದ ಅಗೆದಿದ್ದರು. ಅದರಿಂದ ಜಂಬೂದ್ವೀಪದ ಅಂತರ್ಗತ ಎಂಟು ಉಪದ್ವೀಪಗಳು ಉಂಟಾದುವು ಎಂದು ಕೆಲವರು ಹೇಳುತ್ತಾರೆ. ॥29॥

(ಗದ್ಯ - 30)

ಮೂಲಮ್

ತದ್ಯಥಾ ಸ್ವರ್ಣಪ್ರಸ್ಥಶ್ಚಂದ್ರಶುಕ್ಲ ಆವರ್ತನೋ ರಮಣಕೋ ಮಂದ- ರಹರಿಣಃ ಪಾಂಚಜನ್ಯಃ ಸಿಂಹಲೋ ಲಂಕೇತಿ ॥

ಅನುವಾದ

ಅವು ಸ್ವರ್ಣಪ್ರಸ್ಥ, ಚಂದ್ರಶುಕ್ಲ, ಆವರ್ತನ, ರಮಣಕ, ಮಂದರಹರಿಣ, ಪಾಂಚಜನ್ಯ, ಸಿಂಹಳ ಮತ್ತು ಲಂಕಾ ಎಂಬುದಾಗಿವೆ. ॥30॥

(ಗದ್ಯ - 31)

ಮೂಲಮ್

ಏವಂ ತವ ಭಾರತೋತ್ತಮ ಜಂಬೂದ್ವೀಪವರ್ಷವಿಭಾಗೋ ಯಥೋಪದೇಶಮುಪವರ್ಣಿತ ಇತಿ ॥

ಅನುವಾದ

ಭರತಶ್ರೇಷ್ಠನೇ! ಹೀಗೆ ನಾನು ಗುರುಮುಖದಿಂದ ಕೇಳಿದಂತೆಯೇ ನಿನಗೆ ಜಂಬೂ ದ್ವೀಪದ ವರ್ಷಗಳ ವಿಭಾಗವನ್ನು ಹೇಳಿರುವೆನು. ॥31॥

ಅನುವಾದ (ಸಮಾಪ್ತಿಃ)

ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥19॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಜಂಬೂದ್ವೀಪವರ್ಣನಂ ನಾಮೈಕೋನವಿಂಶೋಽಧ್ಯಾಯಃ ॥19॥