೧೮

[ಹದಿನೆಂಟನೆಯ ಅಧ್ಯಾಯ]

ಭಾಗಸೂಚನಾ

ಬೇರೆ-ಬೇರೆ ವರ್ಷಗಳ ವರ್ಣನೆ

(ಗದ್ಯ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತಥಾ ಚ ಭದ್ರಶ್ರವಾ ನಾಮ ಧರ್ಮಸುತಸ್ತತ್ಕುಲಪತಯಃ ಪುರುಷಾ ಭದ್ರಾಶ್ವವರ್ಷೇ ಸಾಕ್ಷಾದ್ಭಗವತೋ ವಾಸುದೇವಸ್ಯ ಪ್ರಿಯಾಂ ತನುಂ ಧರ್ಮಮಯೀಂ ಹಯಶೀರ್ಷಾಭಿಧಾನಾಂ ಪರಮೇಣ ಸಮಾಧಿನಾ ಸಂನಿಧಾಪ್ಯೇದಮಭಿಗೃಣಂತ ಉಪಧಾವಂತಿ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ಭದ್ರಾಶ್ವವೆಂಬ ವರ್ಷದಲ್ಲಿ ಧರ್ಮಪುತ್ರ ಭದ್ರ ಶ್ರವನೂ ಮತ್ತು ಆತನ ಮುಖ್ಯರಾದ ಸೇವಕರು ಭಗವಾನ್ ವಾಸುದೇವನನ್ನು ‘ಹಯಗ್ರೀವ’ ಎಂಬ ಧರ್ಮಮಯವೂ, ಪ್ರಿಯವೂ ಆದ ಮೂರ್ತಿಯನ್ನು ಅತ್ಯಂತ ಸಮಾಧಿನಿಷ್ಠೆಯಿಂದ ಹೃದಯಲ್ಲಿ ನೆಲೆಗೊಳಿಸಿಕೊಂಡು ಈ ಮಂತ್ರವನ್ನು ಜಪಿಸುತ್ತಾ ಹೀಗೆ ಸ್ತುತಿಸುತ್ತಾರೆ. ॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ಭದ್ರಶ್ರವಸ ಊಚುಃ

ಮೂಲಮ್

ಓಂ ನಮೋ ಭಗವತೇ ಧರ್ಮಾಯಾತ್ಮವಿಶೋಧನಾಯ ನಮ ಇತಿ ॥

ಅನುವಾದ

ಭದ್ರಶ್ರವನೂ ಮತ್ತು ಅವನ ಸೇವಕರು ಹೇಳುತ್ತಾರೆ ‘ಚಿತ್ತವನ್ನು ವಿಶುದ್ಧಗೊಳಿಸುವಂತಹ ಓಂಕಾರಸ್ವರೂಪನಾದ ಭಗವಾನ್ ಧರ್ಮಮೂರ್ತಿಗೆ ನಮೋ ನಮಃ ॥2॥

(ಶ್ಲೋಕ - 3)

ಮೂಲಮ್

ಅಹೋ ವಿಚಿತ್ರಂ ಭಗವದ್ವಿಚೇಷ್ಟಿತಂ
ಘ್ನಂತಂ ಜನೋಯಂ ಹಿ ಮಿಷನ್ನ ಪಶ್ಯತಿ
ಧ್ಯಾಯನ್ನ ಸದ್ಯರ್ಹಿ ವಿಕರ್ಮ ಸೇವಿತುಂ
ನಿರ್ಹೃತ್ಯ ಪುತ್ರಂ ಪಿತರಂ ಜಿಜೀವಿಷತಿ ॥

ಅನುವಾದ

ಆಹಾ! ಭಗವಂತನ ಲೀಲೆಗಳು ತುಂಬಾ ವಿಚಿತ್ರವಾಗಿದೆ. ಅದರಿಂದಲೇ ಇಡೀ ಜಗತ್ತನ್ನು ಸಂಹರಿಸುತ್ತಿರುವ ಮೃತ್ಯು ವನ್ನು ಕಣ್ಣಾರೆ ಕಾಣುತ್ತಿದ್ದರೂ ಕಾಣದವನಂತೆ ಇದ್ದಾನೆ ಈ ಜೀವನು. ತುಚ್ಛವಾದ ವಿಷಯ ಸುಖಗಳನ್ನು ಸೇವಿಸು ವುದಕ್ಕಾಗಿಯೇ ಪಾಪಮಯ ವಿಚಾರಗಳನ್ನೇ ಚಿಂತಿಸುತ್ತಿದ್ದಾನೆ. ಮೃತನಾದ ತಮ್ಮ ಪುತ್ರನ ಮತ್ತು ತಂದೆಯ ಶವ ವನ್ನು ತಮ್ಮ ಕೈಯಿಂದಲೇ ದಹನಮಾಡಿ ಬಂದಿದ್ದರೂ ತಾವು ಬದುಕಿರಬೇಕೆಂದು ಬಯಸುತ್ತಾರಲ್ಲ! ॥3॥

(ಶ್ಲೋಕ - 4)

ಮೂಲಮ್

ವದಂತಿ ವಿಶ್ವಂ ಕವಯಃ ಸ್ಮ ನಶ್ವರಂ
ಪಶ್ಯಂತಿ ಚಾಧ್ಯಾತ್ಮವಿದೋ ವಿಪಶ್ಚಿತಃ
ತಥಾಪಿ ಮುಹ್ಯಂತಿ ತವಾಜ ಮಾಯಯಾ
ಸುವಿಸ್ಮಿತಂ ಕೃತ್ಯಮಜಂ ನತೋಸ್ಮಿತಮ್ ॥

ಅನುವಾದ

ಎಲೈ ಜನ್ಮ ರಹಿತನಾದ ಪ್ರಭುವೇ! ಜಗತ್ತನ್ನು ನಶ್ವರವೆಂದು ವಿದ್ವಾಂಸರು ಹೇಳುತ್ತಾರೆ ಮತ್ತು ಸೂಕ್ಷ್ಮದರ್ಶಿಗಳಾದ ಆತ್ಮಜ್ಞಾನಿಗಳು ಹೀಗೆಯೇ ನೋಡಿಯೂ ನೋಡುತ್ತಾರೆ. ಆದರೂ ನಿನ್ನ ಮಾಯೆಯಿಂದ ಜನರು ಮೋಹಿತರಾಗುತ್ತಿದ್ದಾರೆ. ನೀನು ಅನಾದಿಯಾಗಿದ್ದು, ನಿನ್ನ ಕೃತ್ಯಗಳು ತುಂಬಾ ವಿಸ್ಮಯಮಯವಾಗಿವೆ. ನಾವು ನಿನಗೆ ನಮಸ್ಕರಿಸುತ್ತಿದ್ದೇವೆ. ॥4॥

(ಶ್ಲೋಕ - 5)

ಮೂಲಮ್

ವಿಶ್ವೋದ್ಭವಸ್ಥಾನನಿರೋಧಕರ್ಮ ತೇ
ಹ್ಯಕರ್ತುರಂಗೀಕೃತಮಪ್ಯಪಾವೃತಃ
ಯುಕ್ತಂ ನ ಚಿತ್ರಂ ತ್ವಯಿ ಕಾರ್ಯಕಾರಣೇ
ಸರ್ವಾತ್ಮನಿ ವ್ಯತಿರಿಕ್ತೇ ಚ ವಸ್ತುತಃ ॥

ಅನುವಾದ

ಓ ಪರಮಾತ್ಮನೇ! ನೀನು ಕರ್ತೃತ್ವರಹಿತನೂ, ಮಾಯೆಯ ಆವರಣದಿಂದ ಅತೀತನಾಗಿದ್ದರೂ ಜಗತ್ತಿನ ಉತ್ಪತ್ತಿ, ಸ್ಥಿತಿ, ಪ್ರಳಯ ಇವುಗಳನ್ನು ನಿನ್ನದೇ ಕರ್ಮಗಳೆಂದು ತಿಳಿಯಲಾಗಿದೆ. ಅದು ಸರಿಯೇ. ಇದರಲ್ಲಿ ಯಾವ ಆಶ್ಚರ್ಯದ ಮಾತೂ ಇಲ್ಲ. ಏಕೆಂದರೆ, ಸರ್ವಾತ್ಮ ರೂಪದಿಂದ ನೀನೇ ಸಮಸ್ತ ಕಾರ್ಯಗಳ ಕಾರಣನಾಗಿರುವೆ ಮತ್ತು ತನ್ನ ಶುದ್ಧಸ್ವರೂಪದಲ್ಲಿ ಇದ್ದು ಈ ಕಾರ್ಯ-ಕಾರಣಭಾವದಿಂದ ಅತೀತನಾಗಿರುವೆ. ॥5॥

(ಶ್ಲೋಕ - 6)

ಮೂಲಮ್

ವೇದಾನ್ ಯುಗಾಂತೇ ತಮಸಾ ತಿರಸ್ಕೃತಾನ್
ರಸಾತಲಾದ್ಯೋ ನೃತುರಂಗವಿಗ್ರಹಃ
ಪ್ರತ್ಯಾದದೇ ವೈ ಕವಯೇಭಿಯಾಚತೇ
ತಸ್ಮೈ ನಮಸ್ತೇವಿತಥೇಹಿತಾಯ ಇತಿ ॥

ಅನುವಾದ

ನಿನ್ನ ದಿವ್ಯಮಂಗಳ ವಿಗ್ರಹವು ಮನುಷ್ಯ ಮತ್ತು ಕುದುರೆ ಸೇರಿದ ಹಯಗ್ರೀವರೂಪವಾಗಿದೆ. ಪ್ರಳಯಕಾಲದಲ್ಲಿ ತಮೋಗುಣ ಪ್ರಧಾನರಾದ ದೈತ್ಯರು ವೇದಗಳನ್ನು ಕದ್ದು ಕೊಂಡು ಹೋಗಿದ್ದಾಗ ಬ್ರಹ್ಮದೇವರ ಪ್ರಾರ್ಥನೆಯಂತೆ ನೀನು ಆ ವೇದಗಳನ್ನು ರಸಾತಲದಿಂದ ತಂದುಕೊಟ್ಟೆ. ಇಂತಹ ಅಮೋಘ ಲೀಲೆಗಳನ್ನು ನಡೆಸುವ ಸತ್ಯಸಂಕಲ್ಪನಾದ ನಿನಗೆ ನಾವು ನಮಸ್ಕರಿಸುತ್ತೇವೆ. ॥6॥

(ಗದ್ಯ - 7)

ಮೂಲಮ್

ಹರಿವರ್ಷೇ ಚಾಪಿ ಭಗವಾನ್ನರಹರಿರೋಪೇಣಾಸ್ತೇ ತದ್ರೂಪಗ್ರಹಣನಿಮಿತ್ತಮುತ್ತರತ್ರಾಭಿಧಾಸ್ಯೇ ತದ್ದಯಿತಂ ರೂಪಂ ಮಹಾಪುರುಷಗುಣಭಾಜನೋ ಮಹಾಭಾಗವತೋ ದೈತ್ಯದಾನವಕುಲತೀರ್ಥೀಕರಣಶೀಲಾಚರಿತಃ ಪ್ರಹ್ಲಾದೋವ್ಯವಧಾನಾನನ್ಯಭಕ್ತಿಯೋಗೇನ ಸಹ ತದ್ವರ್ಷಪುರುಷೈರುಪಾಸ್ತೇ ಇದಂ ಚೋದಾಹರತಿ ॥

ಅನುವಾದ

ಹರಿವರ್ಷ ಖಂಡದಲ್ಲಿ ಭಗವಂತನು ನರಸಿಂಹರೂಪದಿಂದ ಬೆಳಗುತ್ತಿದ್ದಾನೆ. ಅವನು ಈ ರೂಪವನ್ನು ಏಕೆ ಧರಿಸಿದನು ಎಂಬುದನ್ನು ಮುಂದೆ (ಏಳನೆಯ ಸ್ಕಂಧದಲ್ಲಿ) ವರ್ಣಿಸಲಾಗುವುದು. ಭಗವಂತನ ಆ ಪ್ರಿಯರೂಪವನ್ನು ಮಹಾಭಾಗವತೋತ್ತಮ ಪ್ರಹ್ಲಾದರು ಆ ವರ್ಷದ ಇತರ ಪುರುಷರೊಂದಿಗೆ ನಿಷ್ಕಾಮ ಹಾಗೂ ಅನನ್ಯಭಕ್ತಿಯಿಂದ ಉಪಾಸಿಸುತ್ತಾರೆ. ಈ ಪ್ರಹ್ಲಾದರು ಮಹಾಪುರುಷರಿಗೆ ಉಚಿತವಾದ ಗುಣ ಗಳಿಂದ ಸಂಪನ್ನರಾಗಿರುವರು. ಇವರು ತಮ್ಮ ಶೀಲ, ಆಚರಣೆಗಳಿಂದ ದೈತ್ಯ ಮತ್ತು ದಾನವರ ಕುಲ ವನ್ನು ಪವಿತ್ರಗೊಳಿಸಿದವರು. ಅವರು ಈ ಮಂತ್ರದ ಸ್ತೋತ್ರ- ಜಪ-ಪಾರಾಯಣೆಯನ್ನು ಮಾಡುತ್ತಾ ಇರುತ್ತಾರೆ ॥7॥

(ಗದ್ಯ - 8)

ಮೂಲಮ್

ಓಂ ನಮೋ ಭಗವತೇ ನರಸಿಂಹಾಯ ನಮಸ್ತೇಜಸ್ತೇಜಸೇ ಆವಿರಾವಿರ್ಭವ ವಜ್ರನಖ ವಜ್ರದಂಷ್ಟ್ರ ಕರ್ಮಾಶಯಾನ್ ರಂಧಯ ರಂಧಯ ತಮೋ ಗ್ರಸ ಗ್ರಸ ಓಂ ಸ್ವಾಹಾ ಅಭಯಮಭಯಮಾತ್ಮನಿ ಭೂಯಿಷ್ಠಾ ಓಂ ಕ್ಷ್ರೌಮ್ ॥

ಅನುವಾದ

‘ಓಂಕಾರಸ್ವರೂಪನಾದ ಭಗವಾನ್ ಶ್ರೀನರಸಿಂಹನಿಗೆ ನಮಸ್ಕಾರವು. ತೇಜಸ್ಸುಗಳಿಗೆಲ್ಲ ತೇಜಸ್ಸನ್ನು ಅನುಗ್ರಹಿಸುವ ಪರಮ ತೇಜೋಮಯ ಮೂರ್ತಿಯಾದ ನಿನಗೆ ನಮಸ್ಕಾರವು. ಹೇ ವಜ್ರನಖನೇ! ಹೇ ವಜ್ರದಂಷ್ಟ್ರನೇ! ನೀನು ನಮ್ಮ ಮುಂದೆ ಪ್ರಕಟನಾಗು! ಪ್ರಕಟನಾಗು! ನಮ್ಮ ಕರ್ಮ ವಾಸನೆಗಳನ್ನು ಸುಟ್ಟು ಹಾಕು! ಸುಟ್ಟುಹಾಕು! ನಮ್ಮ ಅಜ್ಞಾನ ರೂಪವಾದ ಅಂಧಕಾರವನ್ನು ನಾಶಮಾಡು! ನಾಶ ಮಾಡು! ಓಂ ಸ್ವಾಹಾ! ನಮ್ಮ ಅಂತಃ ಕರಣದಲ್ಲಿ ಅಭಯ ದಾನವನ್ನು ನೀಡುತ್ತಾ ಪ್ರಕಾಶಿತನಾಗು. ‘ಓಂ ಕ್ಷ್ರೌಮ್’ ॥8॥

(ಶ್ಲೋಕ - 9)

ಮೂಲಮ್

ಸ್ವಸ್ತ್ಯಸ್ತು ವಿಶ್ವಸ್ಯ ಖಲಃ ಪ್ರಸೀದತಾಂ
ಧ್ಯಾಯಂತು ಭೂತಾನಿ ಶಿವಂ ಮಿಥೋ ಧಿಯಾ
ಮನಶ್ಚ ಭದ್ರಂ ಭಜತಾದಧೋಕ್ಷಜೇ
ಆವೇಶ್ಯತಾಂ ನೋ ಮತಿರಪ್ಯಹೈತುಕೀ ॥

ಅನುವಾದ

ಸ್ವಾಮಿ! ವಿಶ್ವಕ್ಕೆ ಕಲ್ಯಾಣವುಂಟಾಗಲಿ. ದುಷ್ಟರ ಬುದ್ಧಿಯು ಶುದ್ಧವಾಗಲೀ. ಎಲ್ಲ ಪ್ರಾಣಿಗಳಲ್ಲಿಯೂ ಪರಸ್ಪರ ಸದ್ಭಾವನೆ ಉಂಟಾಗಲಿ. ಎಲ್ಲರೂ ಒಬ್ಬರನ್ನೊಬ್ಬರ ಹಿತವನ್ನು ಚಿಂತಿಸಲಿ. ನಮ್ಮ ಮನಸ್ಸು ಶುಭವಾದ ಮಾರ್ಗದಲ್ಲಿ ಪ್ರವೃತ್ತವಾಗಲಿ. ನಮ್ಮೆಲ್ಲರ ಬುದ್ಧಿಯು ನಿಷ್ಕಾಮ ಭಾವದಿಂದ ಭಗವಾನ್ ಶ್ರೀಹರಿಯಲ್ಲಿ ಪ್ರವೇಶಿಸಲಿ. ॥9॥

(ಶ್ಲೋಕ - 10)

ಮೂಲಮ್

ಮಾಗಾರದಾರಾತ್ಮಜವಿತ್ತಬಂಧುಷು
ಸಂಗೋ ಯದಿ ಸ್ಯಾದ್ಭಗವತ್ಪ್ರಿಯೇಷು ನಃ
ಯಃ ಪ್ರಾಣವೃತ್ತ್ಯಾ ಪರಿತುಷ್ಟ ಆತ್ಮವಾನ್
ಸಿದ್ಧ್ಯತ್ಯದೂರಾನ್ನ ತಥೇಂದ್ರಿಯಪ್ರಿಯಃ ॥

ಅನುವಾದ

ಪ್ರಭೋ! ಮನೆ, ಹೆಂಡತಿ, ಮಕ್ಕಳು, ಹಣ, ಬಂಧು-ಬಾಂಧವರಲ್ಲಿ ನಮಗೆ ಆಸಕ್ತಿಯು ಇಲ್ಲದಿರಲಿ. ಇರುವುದಾದರೆ ಕೇವಲ ಭಗವಂತನ ಪ್ರೇಮೀಭಕ್ತರಲ್ಲಿ ಇರಲಿ. ಶರೀರನಿರ್ವಹಣೆಗಾಗಿ ಅನಿವಾರ್ಯವಾಗಿ ಬೇಕಾಗಿರುವಷ್ಟು ದ್ರವ್ಯಗಳಿಂದಲೇ ಸಂತೋಷಪಡುವ ಸಂಯಮಿಗಳಿಗೆ ಶೀಘ್ರದಲ್ಲಿಯೇ ಸಿದ್ಧಿಯು ಉಂಟಾಗುವುದು. ಇಂದ್ರಿಯ ಲೋಲುಪರಾದ ಜನರಿಗೆ ಸಿದ್ಧಿಯು ದೊರೆಯುವುದೇ ಇಲ್ಲ. ॥10॥

(ಶ್ಲೋಕ - 11)

ಮೂಲಮ್

ಯತ್ಸಂಗಲಬ್ಧಂ ನಿಜವೀರ್ಯವೈಭವಂ
ತೀರ್ಥಂ ಮುಹುಃ ಸಂಸ್ಪೃಶತಾಂ ಹಿ ಮಾನಸಮ್
ಹರತ್ಯಜೋಂತಃ ಶ್ರುತಿಭಿರ್ಗತೋಂಗಜಂ
ಕೋ ವೈ ನ ಸೇವೇತ ಮುಕುಂದವಿಕ್ರಮಮ್ ॥

ಅನುವಾದ

ಆ ಭಕ್ತರ ಸಂಗದಲ್ಲಿದ್ದರೆ ಶ್ರೀಭಗವಂತನ ಅಸಾಧಾರಣವಾದ ಶಕ್ತಿಯನ್ನು ಮತ್ತು ಪ್ರಭಾವವನ್ನು ಪ್ರಕಟಿಸುವ ತೀರ್ಥಸಮಾನವಾದ ಪವಿತ್ರ ಕಥೆಗಳ ಶ್ರವಣಭಾಗ್ಯ ಉಂಟಾಗುವುದು. ಅವನ್ನು ಮತ್ತೆ- ಮತ್ತೆ ಕೇಳುವವರ ಕಿವಿಗಳ ಮೂಲಕ ಹೃದಯವನ್ನು ಪ್ರವೇಶ ಮಾಡಿ ಅವರ ಎಲ್ಲ ರೀತಿಯ ದೈಹಿಕ ಮತ್ತು ಮಾನಸಿಕ ದೋಷಗಳನ್ನು ನಾಶಪಡಿಸುವುದು. ಹೀಗಿರುವಾಗ ಭಗವದ್ಭಕ್ತರ ಸಂಗವನ್ನು ಯಾರು ತಾನೇ ಮಾಡುವುದಿಲ್ಲ. ॥11॥

(ಶ್ಲೋಕ - 12)

ಮೂಲಮ್

ಯಸ್ಯಾಸ್ತಿ ಭಕ್ತಿರ್ಭಗವತ್ಯಕಿಂಚನಾ
ಸರ್ವೈರ್ಗುಣೈಸ್ತತ್ರ ಸಮಾಸತೇ ಸುರಾಃ
ಹರಾವಭಕ್ತಸ್ಯ ಕುತೋ ಮಹದ್ಗುಣಾ
ಮನೋರಥೇನಾಸತಿ ಧಾವತೋ ಬಹಿಃ ॥

ಅನುವಾದ

ಭಗವಂತನಲ್ಲಿ ನಿಷ್ಕಾಮ ಭಕ್ತಿಯುಳ್ಳವನ ಹೃದಯದಲ್ಲಿ ಸಮಸ್ತ ದೇವತೆಗಳು ಧರ್ಮ-ಜ್ಞಾನಾದಿ ಸಮಸ್ತ ಸದ್ಗುಣ ಗಳೊಡನೆ ಸದಾ ವಾಸಿಸುತ್ತವೆ. ಆದರೆ ಭಗವಂತನ ಭಕ್ತ ನಲ್ಲದವನಲ್ಲಿ ಮಹಾಪುರುಷರ ಆ ಗುಣಗಳು ಹೇಗೆ ಬರ ಬಲ್ಲವು? ಅವನಾದರೋ ಬಗೆ-ಬಗೆಯ ಸಂಕಲ್ಪಗಳನ್ನು ಮಾಡಿ ನಿರಂತರವಾಗಿ ತುಚ್ಛವಾದ ಹೊರಗಿನ ವಿಷಯಗಳ ಕಡೆಗೆ ಓಡುತ್ತಿರುತ್ತಾನೆ. ॥12॥

(ಶ್ಲೋಕ - 13)

ಮೂಲಮ್

ಹರಿರ್ಹಿ ಸಾಕ್ಷಾದ್ಭಗವಾನ್ ಶರೀರಿಣಾ-
ಮಾತ್ಮಾ ಝಷಾಣಾಮಿವ ತೋಯಮೀಪ್ಸಿತಮ್
ಹಿತ್ವಾ ಮಹಾಂಸ್ತಂ ಯದಿ ಸಜ್ಜತೇ ಗೃಹೇ
ತದಾ ಮಹತ್ತ್ವಂ ವಯಸಾ ದಂಪತೀನಾಮ್ ॥

ಅನುವಾದ

ನೀರು ಮೀನುಗಳಿಗೆ ಪ್ರಿಯವಾಗಿದ್ದು, ಅವುಗಳ ಜೀವನವೇ ಆಗಿರುವಂತೆ, ಸಾಕ್ಷಾತ್ ಶ್ರೀಹರಿಯೇ ಸಮಸ್ತ ದೇಹಧಾರಿಗಳ ಪ್ರಿಯತಮ ಆತ್ಮಾ ಆಗಿದ್ದಾನೆ. ಅವನನ್ನು ಬಿಟ್ಟು ಯಾರಾದರೂ ಮಹತ್ವಾಭಿಮಾನಿಯು ಮನೆಯಲ್ಲೇ ಆಸಕ್ತನಾಗಿದ್ದರೆ ಆ ಸ್ಥಿತಿಯಲ್ಲಿ ಪತ್ನೀ-ಪುತ್ರರಿಂದ ಉಂಟಾದ ದೊಡ್ಡಸ್ತಿಕೆಯು ಕೇವಲ ವಯಸ್ಸಿನಿಂದಲೇ ತಿಳಿಯಲಾಗುತ್ತದೆ. ಗುಣಗಳ ದೃಷ್ಟಿಯಿಂದ ಅಲ್ಲ. ॥13॥

(ಶ್ಲೋಕ - 14)

ಮೂಲಮ್

ತಸ್ಮಾದ್ರಜೋರಾಗವಿಷಾದಮನ್ಯು-
ಮಾನಸ್ಪೃಹಾಭಯದೈನ್ಯಾಧಿಮೂಲಮ್
ಹಿತ್ವಾ ಗೃಹಂ ಸಂಸೃತಿಚಕ್ರವಾಲಂ
ನೃಸಿಂಹಪಾದಂ ಭಜತಾಕುತೋಭಯಮಿತಿ ॥

ಅನುವಾದ

ಆದ್ದರಿಂದ ಅಸುರರೇ! ನೀವು ತೃಷ್ಣೆ, ಆಸಕ್ತಿ, ವಿಷಾದ, ಕ್ರೋಧ, ಅಭಿಮಾನ, ಇಚ್ಛೆ, ಭಯ, ದೈನ್ಯ ಮತ್ತು ಮಾನಸಿಕ ಸಂತಾಪ ಇವುಗಳ ಮೂಲವಾದ ಹಾಗೂ ಜನ್ಮ-ಮರಣರೂಪವಾದ ಸಂಸಾರಕ್ಕೆ ಕಾರಣವಾದ ಮನೆಯೇ ಮುಂತಾದವುಗಳನ್ನು ತ್ಯಜಿಸಿ ಭಗವಾನ್ ನರಸಿಂಹನ ನಿರ್ಭಯ ಚರಣಗಳನ್ನು ಆಶ್ರಯಿಸಿರಿ. ॥14॥

(ಗದ್ಯ - 15)

ಮೂಲಮ್

ಕೇತುಮಾಲೇಪಿ ಭಗವಾನ್ ಕಾಮದೇವಸ್ವರೂಪೇಣ ಲಕ್ಷ್ಮ್ಯಾಃ ಪ್ರಿಯಚಿಕೀರ್ಷಯಾ ಪ್ರಜಾಪತೇರ್ದುಹಿ- ತೃಣಾಂ ಪುತ್ರಾಣಾಂ ತದ್ವರ್ಷಪತೀನಾಂ ಪುರುಷಾಯುಷಾಹೋರಾತ್ರಪರಿಸಂಖ್ಯಾನಾನಾಂ ಯಾಸಾಂ ಗರ್ಭಾ ಮಹಾಪುರುಷಮಹಾಸತೇಜಸೋದ್ವೇಜಿತಮನಸಾಂ ವಿಧ್ವಸ್ತಾ ವ್ಯಸವಃ ಸಂವತ್ಸರಾಂತೇ ವಿನಿಪತಂತಿ ॥

ಅನುವಾದ

ಕೇತುಮಾಲವರ್ಷದಲ್ಲಿ ಭಗವಂತನು ಶ್ರೀಲಕ್ಷ್ಮೀದೇವಿಗೂ ಹಾಗೂ ಸಂವತ್ಸರನೆಂಬ ಪ್ರಜಾಪತಿಯ ಪುತ್ರ-ಪುತ್ರಿಯರಿಗೂ ಪ್ರಿಯವನ್ನುಂಟುಮಾಡುವುದಕ್ಕಾಗಿ ಭಗವಾನ್ ಕಾಮದೇವನ (ಪ್ರದ್ಯುಮ್ನಮೂರ್ತಿ) ರೂಪದಲ್ಲಿ ನೆಲೆಸುವನು. ಆ ಸಂವತ್ಸರ ಪ್ರಜಾಪತಿಯ ಪುತ್ರಿಯರು ರಾತ್ರಿಗೂ, ಪುತ್ರರು ಹಗಲಿಗೂ ಅಭಿಮಾನಿದೇವತೆಗಳು. ಇವರ ಸಂಖ್ಯೆಯು ಮನುಷ್ಯರ ನೂರು ವರ್ಷಗಳ ಆಯುಸ್ಸಿನ ಹಗಲೂ-ರಾತ್ರಿಗಳಷ್ಟು. ಅಂದರೆ ಪುತ್ರರ ಸಂಖ್ಯೆಯು ಮೂವತ್ತಾರುಸಾವಿರ ಮತ್ತು ಪುತ್ರಿಯರ ಸಂಖ್ಯೆಯು ಅಷ್ಟೇ ಇರುತ್ತದೆ. ಇವರೇ ಈ ವರ್ಷದ ಅಧಿಪತಿಗಳು. ಆ ಕನ್ಯೆಯರು ಪರಮಪುರುಷ ನಾರಾಯಣನ ಶ್ರೇಷ್ಠ ಅಸನಾದ ಸುದರ್ಶನಚಕ್ರದ (ಕಾಲಚಕ್ರದ) ತೇಜದಿಂದ ಹೆದರಿ, ಪ್ರತೀ ವರ್ಷದ ಕೊನೆಯಲ್ಲಿ ಅವರ ಗರ್ಭ (ಕಲಾ-ಕಾಷ್ಠಾ ಮುಂತಾದ ಕಾಲವಿಭಾಗಗಳು) ಗಳು ಬಿದ್ದುಹೋಗುವುವು. ॥15॥

(ಗದ್ಯ - 16)

ಮೂಲಮ್

ಅತೀವ ಸುಲಲಿತಗತಿವಿಲಾಸವಿಲಸಿತರುಚಿರಹಾ ಸಲೇಶಾವಲೋಕಲೀಲಯಾಕಿಂಚಿದುತ್ತಂಭಿತಸುಂದರ- ಭ್ರೂಮಂಡಲಸುಭಗವದನಾರವಿಂದಶ್ರಿಯಾ ರಮಾಂ ರಮಯನ್ನಿಂದ್ರಿಯಾಣಿ ರಮಯತೇ ॥

ಅನುವಾದ

ಅಲ್ಲಿ ಪ್ರದ್ಯುಮ್ನ ರೂಪಿಯಾದ ಶ್ರೀಭಗವಂತನು ತನ್ನ ಮನೋಹರವಾದ ಮಂದಗಮನದಿಂದಲೂ, ಕಮನೀಯವಾದ ಕಿರುನಗೆಯಿಂದಲೂ, ಬೆಡಗಿನಿಂದ ಕೂಡಿದ ಕಡೆಗಣ್ಣ ವಿಲಾಸ ದಿಂದಲೂ, ಕೊಂಚ ಮೇಲೆದ್ದ ಸುಂದರವಾದ ಹುಬ್ಬು ಗಳಿಂದಲೂ ಮೆರೆಯುತ್ತಿರುವ ವದನಾರವಿಂದದಿಂದ ರೂಪ-ಲಾವಣ್ಯಗಳ ಕಾಂತಿಯ ಮಳೆಗರೆಯುತ್ತಾ ರಮಾ ದೇವಿಯನ್ನು ಆನಂದಗೊಳಿಸುತ್ತಾ ತಾನೂ ಆನಂದ ಪಡುತ್ತಿರುವನು. ॥16॥

(ಗದ್ಯ - 17)

ಮೂಲಮ್

ತದ್ಭಗವತೋ ಮಾಯಾಮಯಂ ರೂಪಂ ಪರಮಸ- ಮಾಧಿಯೋಗೇನ ರಮಾದೇವೀ ಸಂವತ್ಸರಸ್ಯ ರಾತ್ರಿಷು ಪ್ರಜಾಪತೇರ್ದುಹಿತೃಭಿರುಪೇತಾಹಃಸು ಚ ತದ್ಭರ್ತೃಭಿರುಪಾಸ್ತೇ ಇದಂ ಚೋದಾಹರತಿ ॥

ಅನುವಾದ

ಶ್ರೀಲಕ್ಷ್ಮೀದೇವಿಯು ಶ್ರೀಭಗವಂತನ ಅದ್ಭುತವಾದ ಸ್ವರೂಪವನ್ನು ಪರಮ ಸಮಾಧಿಯೋಗದಿಂದ ರಾತ್ರಿಯಲ್ಲಿ ಸಂವತ್ಸರ ಪ್ರಜಾಪತಿಯ ಪುತ್ರಿಯ ರೊಡನೆಯೂ, ಹಗಲಿನಲ್ಲಿ ಆತನ ಪುತ್ರರೊಡನೆಯೂ ಆರಾಧನೆಮಾಡುತ್ತಾ ಈ ಮಂತ್ರದ ಜಪದಿಂದ ಸ್ವಾಮಿಯನ್ನು ಸ್ತುತಿಸುವಳು. ॥17॥

(ಗದ್ಯ - 18)

ಮೂಲಮ್

ಓಂ ಹ್ರಾಂ ಹ್ರೀಂ ಹ್ರೂಂ ಓಂ ನಮೋ ಭಗವತೇ ಹೃಷೀಕೇಶಾಯ ಸರ್ವಗುಣವಿಶೇಷೈರ್ವಿಲಕ್ಷಿತಾತ್ಮನೇ ಆಕೂತೀನಾಂ ಚಿತ್ತೀನಾಂ ಚೇತಸಾಂ ವಿಶೇಷಾಣಾಂ ಚಾಧಿಪತಯೇ ಷೋಡಶಕಲಾಯಚ್ಛಂದೋಮಯಾಯ ಅನ್ನಮಯಾಯ ಅಮೃತಮಯಾಯ ಸರ್ವಮಯಾಯ ಸಹಸೇ ಓಜಸೇ ಬಲಾಯ ಕಾಂತಾಯ ಕಾಮಾಯ ನಮಸ್ತೇ ಉಭಯತ್ರ ಭೂಯಾತ್ ॥

ಅನುವಾದ

‘ಓಂ ಹ್ರಾಂ ಹ್ರೀಂ ಹ್ರೂಂ ಬೀಜಮಂತ್ರಗಳಿಂದ ನಿನಗೆ ನಮೋ ನಮಃ. ಇಂದ್ರಿಯಗಳಿಗೆ ನಿಯಾಮಕನೂ, ಸಮಸ್ತ ಕಲ್ಯಾಣಗುಣಾತಿಶಯಗಳ ಮೂರ್ತಿಯೂ, ಕ್ರಿಯಾಶಕ್ತಿಗೂ, ಜ್ಞಾನಶಕ್ತಿಗೂ, ಸಂಕಲ್ಪ-ನಿಶ್ಚಯಗಳೇ ಮುಂತಾದ ಚಿತ್ತದ ಧರ್ಮಗಳಿಗೂ, ಅವುಗಳ ವಿಷಯಗಳಿಗೆ ಅಧಿಪತಿಯೂ, ಹನ್ನೊಂದು ಇಂದ್ರಿಯಗಳು ಮತ್ತು ಐದು ವಿಷಯಗಳೆಂಬ ಹದಿನಾರು ಕಲೆಗಳಿಂದ ತುಂಬಿರುವವನೂ, ವೇದ ಮಯನೂ, ಅನ್ನಮಯನೂ, ಅಮೃತಮಯನೂ, ಸರ್ವಮಯನೂ, ಸಹಸ್ಸು (ಮನಶ್ಶಕ್ತಿ) ಓಜಸ್ಸು (ಇಂದ್ರಿಯಶಕ್ತಿ) ಬಲ (ದೇಹಶಕ್ತಿ) ಸ್ವರೂಪನೂ, ಪರಮಸುಂದರನೂ ಆದ ಭಗವಂತನಾದ ಕಾಮ ದೇವನಿಗೆ (ಒಳಗೆ ಮತ್ತು ಹೊರಗೆ) ಎರಡೂ ಕಡೆಗಳಲ್ಲಿಯೂ ನಮಸ್ಕಾರವು. ॥18॥

(ಶ್ಲೋಕ - 19)

ಮೂಲಮ್

ಸಿಯೋ ವ್ರತೈಸ್ತ್ವಾ ಹೃಷಿಕೇಶ್ವರಂ ಸ್ವತೋ
ಹ್ಯಾರಾಧ್ಯ ಲೋಕೇ ಪತಿಮಾಶಾಸತೇನ್ಯಮ್
ತಾಸಾಂ ನ ತೇ ವೈ ಪರಿಪಾಂತ್ಯಪತ್ಯಂ
ಪ್ರಿಯಂ ಧನಾಯೂಂಷಿ ಯತೋಸ್ವತಂತ್ರಾಃ ॥

ಅನುವಾದ

ಭಗವಂತಾ! ನೀನು ಇಂದ್ರಿಯಗಳ ಅಧೀಶ್ವರನಾಗಿರುವೆ. ಸ್ತ್ರೀಯರು ಬಗೆ-ಬಗೆಯ ಕಠೋರ ವ್ರತಗಳಿಂದ ನಿನ್ನನ್ನೇ ಆರಾಧಿಸುತ್ತಾ ಬೇರೆ ಲೌಕಿಕ ಪತಿಗಳನ್ನು ಇಚ್ಛಿಸುತ್ತಾ ಇರುತ್ತಾರೆ. ಪತಿ ಎಂದರೆ ಪಾಲಿಸುವವನೆಂದರ್ಥ. ಆದರೆ ಅವರು ತನ್ನ ಪ್ರಿಯ ಪುತ್ರ, ಧನ ಮತ್ತು ಆಯುಸ್ಸನ್ನು ರಕ್ಷಿಸಿಕೊಳ್ಳಲಾರರು. ಏಕೆಂದರೆ ಅವರು ಸ್ವತಃ ಅಸ್ವತಂತ್ರರಾಗಿರುವರು. ॥19॥

(ಶ್ಲೋಕ - 20)

ಮೂಲಮ್

ಸ ವೈ ಪತಿಃ ಸ್ಯಾದಕುತೋಭಯಃ ಸ್ವಯಂ
ಸಮಂತತಃ ಪಾತಿ ಭಯಾತುರಂ ಜನಮ್
ಸ ಏಕ ಏವೇತರಥಾ ಮಿಥೋ ಭಯಂ
ನೈವಾತ್ಮಲಾಭಾದಧಿ ಮನ್ಯತೇ ಪರಮ್ ॥

ಅನುವಾದ

ನಿಜವಾದ ಪತಿಯು (ಪಾಲಿಸುವವನು) ಸ್ವಯಂ ಪೂರ್ಣವಾಗಿ ನಿರ್ಭಯನಾಗಿ, ಭಯಭೀತರಾದ ಇತರ ಜನರನ್ನು ಎಲ್ಲ ರೀತಿಯಿಂದ ರಕ್ಷಿಸಬಲ್ಲನೋ ಅವನೇ ಆಗಿರುವನು. ಇಂತಹ ಪತಿಯು ಏಕಮಾತ್ರ ನೀನೇ ಆಗಿರುವೆ. ಒಬ್ಬರಿಂದ ಹೆಚ್ಚು ಈಶ್ವರರನ್ನು ಒಪ್ಪಿಕೊಂಡರೆ ಅವರಲ್ಲಿ ಒಬ್ಬರಿಗೊಬ್ಬರಿಂದ ಭಯಉಂಟಾಗುವ ಸಂಭವವು ಇದೆ. ಆದುದರಿಂದ ವಿಶ್ವಕ್ಕೆಲ್ಲಾ ಒಬ್ಬನೇ ಪತಿಯಾಗಿರುವ ನಿನ್ನ ಲಾಭಕ್ಕಿಂತಲೂ ಅಧಿಕವಾದ ಬೇರಾವುದನ್ನೂ ನಾನು ಎಣಿಸುವುದಿಲ್ಲ. ॥20॥

(ಶ್ಲೋಕ - 21)

ಮೂಲಮ್

ಯಾ ತಸ್ಯ ತೇ ಪಾದಸರೋರುಹಾರ್ಹಣಂ
ನಿಕಾಮಯೇತ್ಸಾಖಿಲಕಾಮಲಂಪಟಾ
ತದೇವ ರಾಸೀಪ್ಸಿತಮೀಪ್ಸಿತೋರ್ಚಿತೋ
ಯದ್ಭಗ್ನಯಾಚ್ಞಾ ಭಗವನ್ ಪ್ರತಪ್ಯತೇ ॥

ಅನುವಾದ

ಭಗವಂತಾ! ನಿನ್ನ ಚರಣಕಮಲಗಳನ್ನು ಪೂಜಿಸುತ್ತಾ ಬೇರೆ ಏನನ್ನೂ ಬಯಸದಿರುವ ಸ್ತ್ರೀಯಳ ಎಲ್ಲ ಕಾಮನೆಗಳು ಪೂರ್ಣವಾಗುತ್ತವೆ. ಆದರೆ ಯಾವುದಾದರೊಂದು ಕಾಮನೆಯಿಂದ ನಿನ್ನನ್ನು ಉಪಾಸನೆ ಮಾಡಿದರೆ, ಅವಳಿಗೆ ಭೋಗವು ಸಮಾಪ್ತವಾದಾಗ ನಾಶಹೊಂದುವಂತಹ ವಸ್ತುವನ್ನೇ ಕೊಡುವೆ. ಅದರಿಂದ ಅವಳು ಸಂತಪ್ತಳಾಗಬೇಕಾಗುತ್ತದೆ. ॥21॥

(ಶ್ಲೋಕ - 22)

ಮೂಲಮ್

ಮತ್ಪ್ರಾಪ್ತಯೇಜೇಶಸುರಾಸುರಾದಯ-
ಸ್ತಪ್ಯಂತ ಉಗ್ರಂ ತಪ ಐಂದ್ರಿಯೇಧಿಯಃ
ಋತೇ ಭವತ್ಪಾದಪರಾಯಣಾನ್ನ ಮಾಂ
ವಿಂದಂತ್ಯಹಂ ತ್ವದ್ಧೃದಯಾ ಯತೋಜಿತ ॥

ಅನುವಾದ

ಎಲೈ ಅಜಿತನೇ! ನನ್ನನ್ನು (ಐಶ್ವರ್ಯವನ್ನು) ಪಡೆಯಲಿಕ್ಕಾಗಿ ಇಂದ್ರಿಯಸುಖದ ಅಭಿಲಾಷಿಗಳಾದ ಬ್ರಹ್ಮ-ರುದ್ರರೇ ಮುಂತಾದ ಸಮಸ್ತ ಸುರಾಸುರರು ಘೋರತಪಸ್ಸನ್ನು ಆಚರಿಸುತ್ತಾರೆ. ಆದರೆ ನಿನ್ನ ಚರಣಕಮಲಗಳ ಆಶ್ರಯ ಪಡೆದ ಭಕ್ತರಲ್ಲದೆ ನನ್ನನ್ನು ಯಾರೂ ಪಡೆಯಲಾರರು. ಏಕೆಂದರೆ, ನನ್ನ ಮನಸ್ಸಾದರೋ ನಿನ್ನಲ್ಲೇ ನೆಲೆಸಿದೆ. ॥22॥

(ಶ್ಲೋಕ - 23)

ಮೂಲಮ್

ಸ ತ್ವಂ ಮಮಾಪ್ಯಚ್ಯುತ ಶೀರ್ಷ್ಣಿ ವಂದಿತಂ
ಕರಾಂಬುಜಂ ಯತ್ತ್ವದಧಾಯಿ ಸಾತ್ವತಾಮ್
ಬಿಭರ್ಷಿ ಮಾಂ ಲಕ್ಷ್ಮ ವರೇಣ್ಯ ಮಾಯಯಾ
ಕ ಈಶ್ವರಸ್ಯೇಹಿತಮೂಹಿತುಂ ವಿಭುರಿತಿ ॥

ಅನುವಾದ

ಅಚ್ಯುತನೇ! ನೀನು ನಿನ್ನ ವಂದನೀಯ ಕರಕಮಲವನ್ನು ಭಕ್ತರ ಮಸ್ತಕದಲ್ಲಿರಿಸುವಂತೆ ನನ್ನ ತಲೆಯ ಮೇಲೆಯೂ ಇರಿಸು. ಎಲೈ ವರೇಣ್ಯನೇ! ನನ್ನನ್ನು ಕೇವಲ ಶ್ರೀಲಾಂಛನ (ಚಿಹ್ನೆ) ರೂಪದಲ್ಲಿ ವಕ್ಷಃಸ್ಥಳದಲ್ಲಿ ಧರಿಸಿದ್ದೀಯೆ. ಸರ್ವ ಸಮರ್ಥನು ನೀನು. ನೀನು ನಿನ್ನ ಮಾಯೆಯಿಂದ ಮಾಡುವ ಲೀಲೆಗಳ ರಹಸ್ಯವನ್ನು ಯಾವನು ತಿಳಿಯಬಲ್ಲನು? ॥23॥

(ಗದ್ಯ - 24)

ಮೂಲಮ್

ರಮ್ಯಕೇ ಚ ಭಗವತಃ ಪ್ರಿಯತಮಂ ಮಾತ್ಸ್ಯಮ- ವತಾರರೂಪಂ ತದ್ವರ್ಷಪುರುಷಸ್ಯ ಮನೋಃ ಪ್ರಾಕ್ಪ್ರದ- ರ್ಶಿತಂ ಸ ಇದಾನೀಮಪಿ ಮಹತಾ ಭಕ್ತಿಯೋಗೇ- ನಾರಾಧಯತೀದಂ ಚೋದಾಹರತಿ ॥

(ಗದ್ಯ - 25)

ಮೂಲಮ್

ಓಂ ನಮೋ ಭಗವತೇ ಮುಖ್ಯತಮಾಯ ನಮಃ ಸತ್ತ್ವಾಯ ಪ್ರಾಣಾಯೌಜಸೇ ಸಹಸೇ ಬಲಾಯ ಮಹಾಮತ್ಸ್ಯಾಯ ನಮ ಇತಿ ॥

ಅನುವಾದ

ರಮ್ಯಕ ವರ್ಷದಲ್ಲಿ ಭಗವಂತನು ಅಲ್ಲಿಯ ಅಧಿಪತಿ ಯಾದ ಮನುವಿಗೆ ಹಿಂದೆ ತನ್ನ ಪರಮಪ್ರಿಯ ಮತ್ಸ್ಯರೂಪವನ್ನು ತೋರಿದ್ದನು. ಮನುವು ಈಗಲೂ ಭಗವಂತನ ಅದೇ ರೂಪವನ್ನು ಅತ್ಯಂತ ಭಕ್ತಿಭಾವದಿಂದ ಉಪಾಸನೆ ಮಾಡುತ್ತಿದ್ದಾನೆ. ಅವನು ಈ ಮಂತ್ರವನ್ನು ಜಪಿಸುತ್ತಾ, ಸ್ತುತಿಸುತ್ತಿದ್ದಾನೆ ಬಲರೂಪವಾದ ಮುಖ್ಯ ಪ್ರಾಣರೂಪಿಯೂ, ಮನೋಬಲ-ಬುದ್ಧಿಬಲ-ದೇಹಬಲರೂಪಿಯೂ, ಓಂಕಾರದ ಪರಮಾರ್ಥವೂ ಆಗಿರುವ ಸರ್ವಶ್ರೇಷ್ಠನಾದ ಭಗವಾನ್ ಮಹಾಮತ್ಸ್ಯನಿಗೆ ಮತ್ತೆ-ಮತ್ತೆ ನಮಸ್ಕಾರಗಳು. ॥24-25॥

(ಶ್ಲೋಕ - 26)

ಮೂಲಮ್

ಅಂತರ್ಬಹಿಶ್ಚಾಖಿಲಲೋಕಪಾಲಕೈ-
ರದೃಷ್ಟರೂಪೋ ವಿಚರಸ್ಯುರುಸ್ವನಃ
ಸ ಈಶ್ವರಸ್ತ್ವಂ ಯ ಇದಂ ವಶೇನಯ-
ನ್ನಾಮ್ನಾ ಯಥಾ ದಾರುಮಯೀಂ ನರಃ ಸಿಯಮ್ ॥

ಅನುವಾದ

ಪ್ರಭೋ! ನಟನು ಸೂತ್ರದ ಬೊಂಬೆಯನ್ನು ಕುಣಿಸುವಂತೆಯೇ ನೀನು ಬ್ರಾಹ್ಮಣಾದಿ ನಾಮಗಳ ಹಗ್ಗದಿಂದ ಇಡೀ ವಿಶ್ವವನ್ನು ತನ್ನ ಅಧೀನದಲ್ಲಿಟ್ಟುಕೊಂಡು ಕುಣಿಸುತ್ತಿರುವೆ. ಆದ್ದರಿಂದ ನೀನೇ ಎಲ್ಲರ ಪ್ರೇರಕನಾಗಿರುವೆ. ನಿನ್ನನ್ನು ಬ್ರಹ್ಮಾದಿ ಲೋಕಪಾಲರೂ ಕೂಡ ನೋಡಲಾರರು. ಆದರೂ ನೀನು ಸಮಸ್ತ ಪ್ರಾಣಿಗಳ ಒಳಗೆ ಪ್ರಾಣ ರೂಪದಿಂದ, ಹೊರಗೆ ವಾಯುರೂಪದಿಂದ ನಿರಂತರವಾಗಿ ಸಂಚರಿಸುತ್ತಿರುವೆ. ವೇದವೇ ನಿನ್ನ ಮಹಾಶಬ್ದವಾಗಿದೆ. ॥26॥

(ಶ್ಲೋಕ - 27)

ಮೂಲಮ್

ಯಂ ಲೋಕಪಾಲಾಃ ಕಿಲ ಮತ್ಸರಜ್ವರಾ
ಹಿತ್ವಾ ಯತಂತೋಪಿ ಪೃಥಕ್ಸಮೇತ್ಯ ಚ
ಪಾತುಂ ನ ಶೇಕುರ್ದ್ವಿಪದಶ್ಚ ತುಷ್ಪದಃ
ಸರೀಸೃಪಂ ಸ್ಥಾಣು ಯದತ್ರ ದೃಶ್ಯತೇ ॥

ಅನುವಾದ

ಒಮ್ಮೆ ಇಂದ್ರಾದಿ ಇಂದ್ರಿಯಾಭಿಮಾನಿ ದೇವತೆಗಳಿಗೆ ಪ್ರಾಣ ಸ್ವರೂಪನಾದ ನಿನ್ನಲ್ಲಿ ಮತ್ಸರ ಉಂಟಾಗಿ ನಿನ್ನೊಡನೆ ಸ್ಪರ್ಧಿಸಿದರು. ಆಗ ನೀನು ಅವರನ್ನು ಬಿಟ್ಟು ದೇಹದಿಂದ ಅಗಲಿದಾಗ, ಅವರು ಎಷ್ಟೇ ಪ್ರಯತ್ನಿಸಿದರೂ ಒಬ್ಬೊಬ್ಬರಾಗಲೀ ಅಥವಾ ಒಟ್ಟಿಗೆ ಸೇರಿಕೊಂಡಾಗಲೀ ಮನುಷ್ಯ, ಪಶು, ಸ್ಥಾವರ-ಜಂಗಮ ಮುಂತಾದ ಕಂಡು ಬರುವ ಯಾವ ದೇಹವನ್ನೂ ರಕ್ಷಿಸಲಾರದೆ ಹೋದರು. ॥27॥

(ಶ್ಲೋಕ - 28)

ಮೂಲಮ್

ಭವಾನ್ ಯುಗಾಂತಾರ್ಣವ ಊರ್ಮಿಮಾಲಿನಿ
ಕ್ಷೋಣೀಮಿಮಾಮೋಷಧಿವೀರುಧಾಂ ನಿಧಿಮ್
ಮಯಾ ಸಹೋರು ಕ್ರಮತೇಜ ಓಜಸಾ
ತಸ್ಮೈ ಜಗತ್ಪ್ರಾಣಗಣಾತ್ಮನೇ ನಮ ಇತಿ ॥

ಅನುವಾದ

‘ಎಲೈ ಜನ್ಮರಹಿತನಾದ ಸ್ವಾಮಿಯೇ! ನೀನು ನನ್ನೊಡನೆ ಸಮಸ್ತ ಔಷಧಿಗಳಿಗೂ ಮತ್ತು ಲತೆಗಳಿಗೂ ಆಶ್ರಯವಾಗಿರುವ ಈ ಪೃಥಿವಿಯನ್ನು ತೆಗೆದುಕೊಂಡು ದೊಡ್ಡ-ದೊಡ್ಡ ಎತ್ತರವಾದ ಅಲೆಗಳಿಂದ ಕೂಡಿದ ಪ್ರಳಯ ಸಮುದ್ರದಲ್ಲಿ ಭಾರೀ ಉತ್ಸಾಹದಿಂದ ವಿಹರಿಸಿದೆ. ನೀನು ಜಗತ್ತಿನ ಸಮಸ್ತ ಪ್ರಾಣಿಸಮುದಾಯದ ನಿಯಾಮಕ ನಾಗಿರುವೆ. ನಿನಗೆ ನನ್ನ ನಮಸ್ಕಾರವು.’ ॥28॥

(ಗದ್ಯ - 29)

ಮೂಲಮ್

ಹಿರಣ್ಮಯೇಪಿ ಭಗವಾನ್ನಿವಸತಿ ಕೂರ್ಮತನುಂ ಬಿಭ್ರಾಣಸ್ತಸ್ಯ ತತ್ಪ್ರಿಯತಮಾಂ ತನುಮರ್ಯಮಾ ಸಹ ವರ್ಷಪುರುಷೈಃ ಪಿತೃಗಣಾಧಿಪತಿರುಪಧಾವತಿ ಮಂತ್ರ- ಮಿಮಂ ಚಾನುಜಪತಿ ॥

ಅನುವಾದ

ಹಿರಣ್ಮಯವರ್ಷದಲ್ಲಿ ಶ್ರೀಭಗವಂತನು ಕಚ್ಛಪರೂಪವನ್ನು ಧರಿಸಿ ವಾಸಿಸುವನು. ಅಲ್ಲಿಯ ನಿವಾಸಿಗಳೊಡನೆ ಪಿತೃಗಳ ರಾಜನಾದ ಅರ್ಯಮನು ಭಗವಂತನ ಪ್ರಿಯತಮವಾದ ಕೂರ್ಮ ಮೂರ್ತಿಯನ್ನು ಉಪಾಸನೆ ಮಾಡುತ್ತಾ ಈ ಮಂತ್ರವನ್ನು ನಿರಂತರವಾಗಿ ಜಪಿಸುತ್ತಿರುವನು. ॥29॥

(ಗದ್ಯ - 30)

ಮೂಲಮ್

ಓಂ ನಮೋ ಭಗವತೇ ಅಕೂಪಾರಾಯ ಸರ್ವಸತ್ತ್ವಗುಣವಿಶೇಷಣಾಯಾನುಪಲಕ್ಷಿತಸ್ಥಾನಾಯ ನಮೋ ವರ್ಷ್ಮಣೇ ನಮೋ ಭೂಮ್ನೇ ನಮೋ ನಮೋವಸ್ಥಾನಾಯ ನಮಸ್ತೇ ॥

ಅನುವಾದ

‘ಸಮಸ್ತ ಸತ್ತ್ವಗುಣ ಸಂಪನ್ನನೂ, ತಿಳಿಯಲಾಗದ ನೆಲೆಯುಳ್ಳವನೂ, ಮಹಾದೇಹನೂ, ಮಹಾ ಪುರುಷನೂ, ವಿನಾಶರಹಿತನೂ, ಸರ್ವಾಧಾರನೂ ಆದ ಕೂರ್ಮರೂಪೀ ಭಗವಂತನೇ! ನಿನಗೆ ಮತ್ತೆ-ಮತ್ತೆ ನಮಸ್ಕಾರಗಳು. ॥30॥

(ಶ್ಲೋಕ - 31)

ಮೂಲಮ್

ಯದ್ರೂಪಮೇತನ್ನಿಜಮಾಯಯಾರ್ಪಿತ
ಮರ್ಥಸ್ವರೂಪಂ ಬಹುರೂಪರೂಪಿತಮ್
ಸಂಖ್ಯಾ ನ ಯಸ್ಯಾಸ್ತ್ಯಯಥೋಪಲಂಭನಾತ್
ತಸ್ಮೈ ನಮಸ್ತೇವ್ಯಪದೇಶರೂಪಿಣೇ ॥

ಅನುವಾದ

ಭಗವಂತನೇ! ಅನೇಕ ರೂಪಗಳಲ್ಲಿ ಕಂಡು ಬರುವ ಈ ದೃಶ್ಯ ಪ್ರಪಂಚವು ಮಿಥ್ಯೆಯೇ ಆಗಿದ್ದು, ವಾಸ್ತವವಾಗಿ ಇದರ ಯಾವುದೇ ಗಣನೆ ಇಲ್ಲದಿದ್ದರೂ, ಇದು ಮಾಯೆಯಿಂದ ಪ್ರಕಾಶಿತವಾಗುವ ನಿನ್ನ ಸ್ವರೂಪವೇ ಆಗಿದೆ. ಇಂತಹ ಅನಿರ್ವಚನೀಯನಾದ ನಿನಗೆ ನನ್ನ ನಮಸ್ಕಾರಗಳು. ॥31॥

(ಶ್ಲೋಕ - 32)

ಮೂಲಮ್

ಜರಾಯುಜಂ ಸ್ವೇದಜಮಂಡಜೋದ್ಭಿದಂ
ಚರಾಚರಂ ದೇವರ್ಷಿಪಿತೃಭೂತಮೈಂದ್ರಿಯಮ್
ದ್ಯೌಃ ಖಂ ಕ್ಷಿತಿಃ ಶೈಲಸರಿತ್ಸಮುದ್ರ-
ದ್ವೀಪಗ್ರಹರ್ಕ್ಷೇತ್ಯಭಿಧೇಯ ಏಕಃ ॥

ಅನುವಾದ

ಜರಾಯುಜ, ಸ್ವೇದಜ, ಅಂಡಜ, ಉದ್ಭಿಜ್ಜ, ಜಂಗಮ, ಸ್ಥಾವರ, ದೇವತೆಗಳು, ಪಿತೃಗಳು, ಋಷಿಗಳು, ಭೂತಗಳು, ಇಂದ್ರಿಯಗಳು, ಸ್ವರ್ಗ, ಆಕಾಶ, ಪೃಥಿವಿ, ಪರ್ವತ, ನದಿ, ಸಮುದ್ರ, ದ್ವೀಪ, ಗ್ರಹ ಮತ್ತು ನಕ್ಷತ್ರ ಮುಂತಾದ ಬೇರೆ-ಬೇರೆ ಹೆಸರುಗಳಿಂದ ಕರೆಯ ಲ್ಪಡುವವನು ನೀನೊಬ್ಬನೇ. ॥32॥

(ಶ್ಲೋಕ - 33)

ಮೂಲಮ್

ಯಸ್ಮಿನ್ನಸಂಖ್ಯೇಯವಿಶೇಷನಾಮ-
ರೂಪಾಕೃತೌ ಕವಿಭಿಃ ಕಲ್ಪಿತೇಯಮ್
ಸಂಖ್ಯಾ ಯಯಾ ತತ್ತ್ವದೃಶಾಪನೀಯತೇ
ತಸ್ಮೈ ನಮಃ ಸಾಂಖ್ಯನಿದರ್ಶನಾಯ ತೇ ಇತಿ ॥

ಅನುವಾದ

ನೀನು ಅಸಂಖ್ಯ ವಾದ ನಾಮ-ರೂಪ-ಆಕೃತಿಗಳಿಂದ ಕೂಡಿರುವೆ. ನಿನ್ನಲ್ಲಿ ಕಪಿಲರೇ ಮುಂತಾದ ಮಹರ್ಷಿಗಳಿಂದ ಕಲ್ಪಿತವಾದ 24 ತತ್ತ್ವಗಳು ಯಾವ ತತ್ತ್ವಜ್ಞಾನದಿಂದ ನೀಗಿಸಲ್ಪಡುವುದೋ ಅಂತಹ ಸಾಂಖ್ಯಸಿದ್ಧಾಂತ ರೂಪಿಯಾದ ನಿನಗೆ ನನ್ನ ನಮಸ್ಕಾರಗಳು. ॥33॥

(ಗದ್ಯ - 34)

ಮೂಲಮ್

ಉತ್ತರೇಷು ಚ ಕುರುಷು ಭಗವಾನ್ಯಜ್ಞಪುರುಷಃ ಕೃತವರಾಹರೂಪ ಆಸ್ತೇ ತಂ ತು ದೇವೀ ಹೈಷಾ ಭೂಃ ಸಹ ಕುರುಭಿರಸ್ಖಲಿತಭಕ್ತಿಯೋಗೇನೋಪಧಾವತಿ ಇಮಾಂ ಚ ಪರಮಾಮುಪನಿಷದಮಾವರ್ತಯತಿ ॥

ಅನುವಾದ

ಉತ್ತರಕುರುವರ್ಷದಲ್ಲಿ ಭಗವಾನ್ ಯಜ್ಞಪುರುಷನು ವರಾಹ ರೂಪವನ್ನು ಧರಿಸಿ ವಿರಾಜಿಸುತ್ತಿರುವನು. ಅಲ್ಲಿಯ ನಿವಾಸಿಗಳೊಡನೆ ಸಾಕ್ಷಾತ್ ಪೃಥಿವಿದೇವಿಯು ನಿಶ್ಚಲವಾದ ಭಕ್ತಿಯೋಗದಿಂದ ಆ ಯಜ್ಞವರಾಹಸ್ವಾಮಿಯನ್ನು ಉಪಾಸನೆಮಾಡುತ್ತಾ ಈ ಮಂತ್ರವನ್ನು ಜಪಿಸುತ್ತಿರುವಳು ॥34॥

(ಗದ್ಯ - 35)

ಮೂಲಮ್

ಓಂ ನಮೋ ಭಗವತೇ ಮಂತ್ರತತ್ತ್ವಲಿಂಗಾಯ ಯಜ್ಞಕ್ರತವೇ ಮಹಾಧ್ವರಾವಯವಾಯ ಮಹಾಪುರುಷಾಯ ನಮಃ ಕರ್ಮ ಶುಕ್ಲಾಯ ತ್ರಿಯುಗಾಯ ನಮಸ್ತೇ ॥

ಅನುವಾದ

ಓ ಭಗವಂತನೇ! ಯಾರ ತತ್ತ್ವವನ್ನು ಮಂತ್ರಗಳಿಂದ ತಿಳಿಯಲಾಗುತ್ತದೋ, ಯಾರು ಯಜ್ಞ ಮತ್ತು ಕ್ರತುಸ್ವರೂಪನೋ, ದೊಡ್ಡ-ದೊಡ್ಡ ಯಜ್ಞಗಳು ಯಾರ ಅವಯವಗಳಾಗಿವೆಯೋ, ಆ ಓಂಕಾರಸ್ವರೂಪನೂ, ಶುಕ್ಲಮಯ ತ್ರಿಯುಗಮೂರ್ತಿಯೂ, ಆದ ಭಗವಾನ್ ಪುರುಷೋತ್ತಮ ವರಾಹಸ್ವಾಮಿಗೆ ಮತ್ತೆ-ಮತ್ತೆ ನಮಸ್ಕಾರಗಳು. ॥35॥

(ಶ್ಲೋಕ - 36)

ಮೂಲಮ್

ಯಸ್ಯ ಸ್ವರೂಪಂ ಕವಯೋ ವಿಪಶ್ಚಿತೋ
ಗುಣೇಷು ದಾರುಷ್ವಿವ ಜಾತವೇದಸಮ್
ಮಥ್ನಂತಿ ಮಥ್ನಾ ಮನಸಾ ದಿದೃಕ್ಷವೋ
ಗೂಢಂ ಕ್ರಿಯಾರ್ಥೈರ್ನಮ ಈರಿತಾತ್ಮನೇ ॥

ಅನುವಾದ

ಋತ್ವಿಜರು ಅರಣಿ ಎಂಬ ಕಟ್ಟಿಗೆಯನ್ನು ಕಡೆದು ಅಡಗಿರುವ ಅಗ್ನಿಯನ್ನು ಪ್ರಕಟಗೊಳಿಸುವಂತೆಯೇ ಕರ್ಮಾಸಕ್ತಿ ಮತ್ತು ಕರ್ಮಫಲದ ಕಾಮನೆಯಿಂದ ಅಡಗಿರುವ ಯಾರ ರೂಪವನ್ನು ನೋಡುವ ಇಚ್ಛೆಯಿಂದ ತತ್ತ್ವಾನ್ವೇಷಣೆಯಲ್ಲಿ ನಿಷ್ಣಾತರಾದ ಪಂಡಿತ ಜ್ಞಾನಿಗಳು ತಮ್ಮ ವಿವೇಕದಿಂದ ಕೂಡಿದ ಮನರೂಪೀ ಮಂಥನಕಾಷ್ಠದಿಂದ ಶರೀರ ಮತ್ತು ಇಂದ್ರಿಯಗಳನ್ನು ಕಡೆದು ನಿನ್ನ ಸ್ವರೂಪವನ್ನು ಕಾಣುವರು. ಹೀಗೆ ಭಕ್ತರಿಗೆ ಮಾತ್ರ ನಿಜಸ್ವರೂಪವನ್ನು ತೋರಿಸುವ ನಿನಗೆ ನಮಸ್ಕಾರವು. ॥36॥

(ಶ್ಲೋಕ - 37)

ಮೂಲಮ್

ದ್ರವ್ಯಕ್ರಿಯಾಹೇತ್ವಯನೇಶಕರ್ತೃಭಿ-
ರ್ಮಾಯಾಗುಣೈರ್ವಸ್ತುನಿರೀಕ್ಷಿತಾತ್ಮನೇ
ಅನ್ವೀಕ್ಷಯಾಂಗಾತಿಶಯಾತ್ಮಬುದ್ಧಿಭಿ-
ರ್ನಿರಸ್ತಮಾಯಾಕೃತಯೇ ನಮೋ ನಮಃ ॥

ಅನುವಾದ

ವಿಚಾರ ಹಾಗೂ ಯಮ-ನಿಯಮಾದಿ ಯೋಗಸಾಧನೆಯಿಂದ ನಿಶ್ಚಯಾತ್ಮಿಕವಾದ ಬುದ್ಧಿಯು ಉಂಟಾದ ಮಹಾಪುರುಷರು ದ್ರವ್ಯ (ವಿಷಯ), ಕ್ರಿಯೆ (ಇಂದ್ರಿಯಗಳ ವ್ಯಾಪಾರ), ಹೇತು (ಇಂದ್ರಿಯಾಧಿಷ್ಠಿತ ದೇವತೆಗಳು), ಅಯನ (ಶರೀರ), ಈಶ, ಕಾಲ ಮತ್ತು ಕರ್ತಾ (ಅಹಂಕಾರ) ಮುಂತಾದ ಮಾಯೆಯ ಕಾರ್ಯವನ್ನು ನೋಡಿ ಯಾರ ನಿಜವಾದ ಸ್ವರೂಪವನ್ನು ನಿಶ್ಚಯಿಸುವರೋ, ಅಂತಹ ಮಾಯಾ ಆಕೃತಿಗಳಿಂದ ರಹಿತನಾದ ನಿನಗೆ ಮತ್ತೆ-ಮತ್ತೆ ನಮಸ್ಕಾರಗಳು. ॥37॥

(ಶ್ಲೋಕ - 38)

ಮೂಲಮ್

ಕರೋತಿ ವಿಶ್ವಸ್ಥಿತಿ ಸಂಯಮೋದಯಂ
ಯಸ್ಯೇಪ್ಸಿತಂ ನೇಪ್ಸಿತಮೀಕ್ಷಿತುರ್ಗುಣೈಃ
ಮಾಯಾ ಯಥಾಯೋ ಭ್ರಮತೇ ತದಾಶ್ರಯಂ
ಗ್ರಾವ್ಣೋ ನಮಸ್ತೇ ಗುಣಕರ್ಮಸಾಕ್ಷಿಣೇ ॥

ಅನುವಾದ

ಸರ್ವಕ್ಕೂ ಸಾಕ್ಷಿಯಾಗಿರುವ ನಿನ್ನ ಪೃಥ್ವಿಯೇ ಮುಂತಾದ ಸಂಕಲ್ಪವು ತನಗಾಗಿ ಇರದೆ ಸಮಸ್ತ ಪ್ರಾಣಿಗಳಿಗಾಗಿ ಇರುತ್ತದೆ. ಮಾಯೆ ಎಂಬುದು ಜಡವಾಗಿದ್ದರೂ ನಿನ್ನ ಸಾನ್ನಿಧ್ಯವನ್ನು ಪಡೆದು ಸೂಜಿಗಲ್ಲು ಜಡವಾದ ಕಬ್ಬಿಣವನ್ನು ಆಡಿಸುವಂತೆ ತನ್ನ ಗುಣಗಳಿಂದ ಜಗತ್ತಿನ ಸೃಷ್ಟಿಯೇ ಮುಂತಾದ ಕಾರ್ಯಗಳನ್ನು ನಡೆಸುತ್ತಿದೆ. ಹೀಗೆ ಎಲ್ಲರ ಮನಸ್ಸುಗಳಿಗೂ, ಗುಣಗಳಿಗೂ, ಕರ್ಮಗಳಿಗೂ ಸಾಕ್ಷಿಯಾಗಿರುವ ನಿನಗೆ ಅನಂತ ನಮಸ್ಕಾರಗಳು. ॥38॥

(ಶ್ಲೋಕ - 39)

ಮೂಲಮ್

ಪ್ರಮಥ್ಯ ದೈತ್ಯಂ ಪ್ರತಿವಾರಣಂ ಮೃಧೇ
ಯೋ ಮಾಂ ರಸಾಯಾ ಜಗದಾದಿಸೂಕರಃ
ಕೃತ್ವಾಗ್ರದಂಷ್ಟ್ರೇ ನಿರಗಾದುದನ್ವತಃ
ಕ್ರೀಡನ್ನಿವೇಭಃ ಪ್ರಣತಾಸ್ಮಿ ತಂ ವಿಭುಮಿತಿ ॥

ಅನುವಾದ

ನೀನು ಜಗತ್ತಿನ ಕಾರಣವಾದ ಆದಿಸೂಕರನಾಗಿರುವೆ. ಒಂದು ಆನೆಯು ಮತ್ತೊಂದು ಆನೆಯನ್ನು ಹಿಡಿಯುವಂತೆ, ಗಜರಾಜನಂತೆ ಕ್ರೀಡಿಸುತ್ತಾ ನೀನು ಪ್ರತಿದ್ವಂದೀ ಹಿರಣ್ಯಾಕ್ಷ ದೈತ್ಯನನ್ನು ಯುದ್ಧದಲ್ಲಿ ಸಂಹರಿಸಿ ನನ್ನನ್ನು ತನ್ನ ಕೋರೆದಾಡೆಗಳ ತುದಿಯಲ್ಲಿ ಇಟ್ಟುಕೊಂಡು ರಸಾತಳದಿಂದ ಪ್ರಳಯ ಪಯೋಧಿಯಿಂದ ಹೊರಗೆ ತಂದಿದ್ದೆ. ಸರ್ವಶಕ್ತಿವಂತನಾದ ನಿನಗೆ ನಾನು ಪುನಃ ಪುನಃ ನಮಸ್ಕರಿಸುತ್ತೇನೆ. ॥39॥

ಅನುವಾದ (ಸಮಾಪ್ತಿಃ)

ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಭುವನಕೋಶವರ್ಣನಂ ನಾಮಾಷ್ಟಾದಶೋಽಧ್ಯಾಯಃ ॥18॥