೧೭

[ಹದಿನೇಳನೆಯ ಅಧ್ಯಾಯ]

ಭಾಗಸೂಚನಾ

ಗಂಗಾದೇವಿಯ ವರ್ಣನೆ ಭಗವಾನ್ ಶಂಕರನು ಮಾಡಿದ ಸಂಕರ್ಷಣ ಸ್ತುತಿ

(ಗದ್ಯ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ತತ್ರ ಭಗವತಃ ಸಾಕ್ಷಾದ್ಯಜ್ಞಲಿಂಗಸ್ಯ ವಿಷ್ಣೋರ್ವಿಕ್ರಮತೋ ವಾಮಪಾದಾಂಗುಷ್ಠನಖನಿರ್ಭಿನ್ನೋರ್ಧ್ವಾಂಡ ಕಟಾಹವಿವರೇಣಾಂತಃಪ್ರವಿಷ್ಟಾ ಯಾ ಬಾಹ್ಯಜಲಧಾರಾ ತಚ್ಚರಣಪಂಕಜಾವನೇಜನಾರುಣಕಿಂಜಲ್ಕೋಪರಂಜಿತಾ- ಖಿಲಜಗದಘಮಲಾಪಹೋಪಸ್ಪರ್ಶನಾಮಲಾ ಸಾಕ್ಷಾದ್ಭಗವತ್ಪದೀತ್ಯನುಪಲಕ್ಷಿತವಚೋಭಿಧೀಯಮಾನಾತಿಮ- ಹತಾ ಕಾಲೇನ ಯುಗಸಹಸ್ರೋಪಲಕ್ಷಣೇನ ದಿವೋ ಮೂರ್ಧನ್ಯವತತಾರ ಯತ್ತದ್ವಿಷ್ಣುಪದಮಾಹುಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಯಜ್ಞ ಮೂರ್ತಿಯಾದ ಸಾಕ್ಷಾತ್ ಭಗವಾನ್ ಮಹಾವಿಷ್ಣುವು ಬಲಿಚಕ್ರವರ್ತಿಯ ಯಜ್ಞಶಾಲೆಯಲ್ಲಿ ಮೂರುಲೋಕಗಳನ್ನು ಅಳೆಯಲು ತನ್ನ ಪಾದಗಳನ್ನು ಚಾಚಿದಾಗ ಅವನ ಎಡಪಾದದ ಅಂಗುಷ್ಠದ ಉಗುರಿನಿಂದ ಬ್ರಹ್ಮಾಂಡ ಕಟಾಹದ ಮೇಲ್ಭಾಗವು ಒಡೆದು ಹೋಯಿತು. ಆ ರಂಧ್ರದ ಮೂಲಕ ಬ್ರಹ್ಮಾಂಡದ ಹೊರಗೆ ಹರಿದುಬಂದ ಜಲಧಾರೆಯು ಭಗವಂತನ ಚರಣಕಮಲವನ್ನು ತೊಳೆದುದರಿಂದ ಅದಕ್ಕೆ ಅಂಟಿಕೊಂಡಿದ್ದ ಕುಂಕುಮ-ಕೇಸರಗಳಿಂದ ಅದು ಕೆಂಪೇರಿತು. ಆ ನಿರ್ಮಲಧಾರೆಯ ಸ್ಪರ್ಶವಾದೊ ಡನೆಯೇ ಜಗತ್ತಿನ ಸರ್ವಪಾಪಗಳೂ ತೊಳೆದು ಹೋಗುತ್ತವೆ. ಆದರೆ ಅದು ಮಾತ್ರ ಪೂರ್ಣವಾಗಿ ಶುದ್ಧ ವಾಗಿಯೇ ಇರುತ್ತದೆ. ಮೊದಲಿಗೆ ಬೇರೆ ಯಾವುದೇ ಹೆಸರಿ ನಿಂದ ಕರೆಯದೆ ‘ಭಗವತ್ಪದೀ’ ಎಂದೇ ಕರೆಯುತ್ತಿದ್ದರು. ಆ ಧಾರೆಯು ಸಾವಿರ ಯುಗಗಳು ಕಳೆದ ಬಳಿಕ ಸ್ವರ್ಗದ ಶಿರೋಭಾಗದಲ್ಲಿ ‘ವಿಷ್ಣುಪದ’ ವೆಂದೂ ಕರೆಯಲ್ಪಡುವ ಧ್ರುವಲೋಕಕ್ಕೆ ಇಳಿಯಿತು. ॥1॥

(ಗದ್ಯ - 2)

ಮೂಲಮ್

ಯತ್ರ ಹ ವಾವ ವೀರವ್ರತ ಔತ್ತಾನಪಾದಿಃ ಪರಮ ಭಾಗವತೋಸ್ಮತ್ಕುಲದೇವತಾಚರಣಾರವಿಂದೋದಕಮಿತಿ ಯಾಮನುಸವನಮುತ್ಕೃಷ್ಯಮಾಣಭಗವದ್ಭಕ್ತಿಯೋಗೇನ ದೃಢಂ ಕ್ಲಿದ್ಯಮಾನಾಂತರ್ಹೃದಯ ಔತ್ಕಂಠ್ಯವಿವಶಾಮೀಲಿ- ತಲೋಚನಯುಗಲಕುಡ್ಮಲವಿಗಲಿತಾಮಲಬಾಷ್ಪಕಲಯಾ- ಭಿವ್ಯಜ್ಯಮಾನರೋಮಪುಲಕಕುಲಕೋಧುನಾಪಿ ಪರಮಾದರೇಣ ಶಿರಸಾ ಬಿಭರ್ತಿ ॥

ಅನುವಾದ

ವೀರವ್ರತ ಪರೀಕ್ಷಿತನೇ! ಆ ಧ್ರುವಲೋಕದಲ್ಲಿಯೇ ಉತ್ತಾನಪಾದನ ಪುತ್ರನೂ ಪರಮ ಭಾಗವತೋತ್ತಮನೂ ಆದ ಧ್ರುವನು ವಾಸಿಸುವನು. ಅವನು ಪ್ರತಿದಿನವೂ ವೃದ್ಧಿಹೊಂದುತ್ತಿರುವ ಭಕ್ತಿ ಯೋಗದಿಂದ ‘ಇದು ನಮ್ಮ ಕುಲದೇವತೆಯ ಶ್ರೀಪಾದ ತೀರ್ಥವಾಗಿದೆ’ ಎಂದು ತಿಳಿದುಕೊಂಡು ಇಂದೂ ಕೂಡ ಆ ಜಲವನ್ನು ತುಂಬಾ ಆದರದಿಂದ ತಲೆಯಲ್ಲಿ ಧರಿಸುತ್ತಾನೆ. ದೃಢವಾದ ಭಕ್ತಿಯೋಗದಿಂದ ಹೃದಯವು ಗದ್ಗದಿತನಾಗಿ ಉತ್ಕಂಠತೆಯಿಂದ ಪರವಶನಾಗಿ ಮುಚ್ಚಿಕೊಂಡಿರುವ ತನ್ನ ನೇತ್ರಕಮಲಗಳಿಂದ ನಿರ್ಮಲವಾದ ಆನಂದ ಬಾಷ್ಪಗಳು ಹರಿಯತೊಡಗಿ, ಶರೀರವು ರೋಮಾಂಚವಾಗುತ್ತದೆ. ॥2॥

(ಗದ್ಯ - 3)

ಮೂಲಮ್

ತತಃ ಸಪ್ತಋಷಯಸ್ತತ್ಪ್ರಭಾವಾಭಿಜ್ಞಾ ಯಾಂ ನನು ತಪಸ ಆತ್ಯಂತಿಕೀ ಸಿದ್ಧಿರೇತಾವತೀ ಭಗವತಿ ಸರ್ವಾತ್ಮನಿ ವಾಸುದೇವೇನುಪರತಭಕ್ತಿಯೋಗಲಾಭೇನೈವೊಪೇಕ್ಷಿ- ತಾನ್ಯಾರ್ಥಾತ್ಮಗತಯೋ ಮುಕ್ತಿಮಿವಾಗತಾಂ ಮುಮುಕ್ಷವ ಇವ ಸಬಹುಮಾನಮದ್ಯಾಪಿ ಜಟಾಜೂಟೈರುದ್ವಹಂತಿ ॥

ಅನುವಾದ

ಇದಾದ ಬಳಿಕ ಆತ್ಮನಿಷ್ಠರಾದ ಸಪ್ತರ್ಷಿಗಳು ಆ ತೀರ್ಥದ ಮಹಿಮೆಯನ್ನರಿತು ‘ಇದೇ ನಮ್ಮ ತಪಸ್ಸಿನ ಕೊನೆಯ ಸಿದ್ಧಿ’ ಎಂದು ತಿಳಿದುಕೊಂಡು ಇಂದೂ ಕೂಡ ಮುಮುಕ್ಷುಗಳು ಪ್ರಾಪ್ತವಾದ ಮುಕ್ತಿಯನ್ನು ತಮ್ಮ ಜಟಾಜೂಟದಲ್ಲಿ ಧರಿಸಿಕೊಳ್ಳುವಂತೆ ಅದನ್ನು ಆದರ ಪೂರ್ವಕವಾಗಿ ಧರಿಸಿಕೊಳ್ಳುವರು. ಆ ಸಪ್ತರ್ಷಿಗಳು ಆತ್ಮಜ್ಞಾನವನ್ನು ಕಡೆಗಣಿಸಿ ಸರ್ವಾತ್ಮಕನಾದ ವಾಸುದೇವನನ್ನು ಕುರಿತು ನಿಶ್ಚಲವಾದ ಭಕ್ತಿಯೋಗವನ್ನೇ ತಮ್ಮ ಪರಮಾರ್ಥವೆಂದು ಭಾವಿಸಿ ಇತರ ಎಲ್ಲ ಕಾಮನೆಗಳನ್ನು ತೊರೆಯುವರು. ಇಂತಹ ನಿಷ್ಕಾಮರೂ ಕೂಡ ತಮ್ಮ ಶಿರಸ್ಸಿನಲ್ಲಿ ಪರಮಾದರದಿಂದ ತಳೆಯುತ್ತಿರುವ ತೀರ್ಥವದು. ॥3॥

(ಗದ್ಯ - 4)

ಮೂಲಮ್

ತತೋನೇಕಸಹಸ್ರಕೋಟಿವಿಮಾನಾನೀಕಸಂ ಕುಲದೇವಯಾನೇನಾವತರಂತೀಂದುಮಂಡಲಮಾವಾರ್ಯ ಬ್ರಹ್ಮಸದನೇ ನಿಪತತಿ ॥

ಅನುವಾದ

ಈ ದಿವ್ಯ ಗಂಗೆಯು ಅಲ್ಲಿಂದ ಕೋಟ್ಯಂತರ ವಿಮಾನಗಳಿಂದ ಸುತ್ತುವರಿಯಲ್ಪಟ್ಟಿರುವ ಆಕಾಶಮಾರ್ಗವಾಗಿ ಹರಿದು ಬಂದು ಚಂದ್ರಮಂಡಲವನ್ನು ನೆನೆಸುತ್ತಾ, ಮೇರುವಿನ ಶಿಖರದಲ್ಲಿರುವ ಬ್ರಹ್ಮಲೋಕದಲ್ಲಿ ಬಂದು ಬೀಳುವಳು. ॥4॥

(ಗದ್ಯ - 5)

ಮೂಲಮ್

ತತ್ರ ಚತುರ್ಧಾ ಭಿದ್ಯಮಾನಾ ಚತುರ್ಭಿರ್ನಾಮಭಿಶ್ಚತುರ್ದಿಶಮಭಿಸ್ಪಂದಂತೀ ನದನದೀಪತಿಮೇವಾಭಿನಿವಿಶತಿ ಸೀತಾಲಕನಂದಾ ಚಕ್ಷುರ್ಭದ್ರೇತಿ ॥

ಅನುವಾದ

ಅಲ್ಲಿ ಅದು ಸೀತಾ, ಅಲಕನಂದಾ, ಚಕ್ಷು ಮತ್ತು ಭದ್ರಾ ಎಂಬ ನಾಲ್ಕು ಹೆಸರುಗಳಿಂದ ಕವಲೊಡೆದು ಬೇರೆ-ಬೇರೆಯಾಗಿ ನಾಲ್ಕು ದಿಕ್ಕುಗಳಲ್ಲಿ ಹರಿಯುತ್ತಾ ಕಡೆಗೆ ನದ- ನದಿಗಳಿಗೆ ಅಧಿಪತಿಯಾದ ಸಮುದ್ರವನ್ನು ಸೇರುವುದು. ॥5॥

(ಗದ್ಯ - 6)

ಮೂಲಮ್

ಸೀತಾ ತು ಬ್ರಹ್ಮಸದನಾತ್ಕೇಸರಾಚಲಾದಿಗಿರಿಶಿಖರೇಭ್ಯೋಧೋಧಃ ಪ್ರಸ್ರವಂತೀ ಗಂಧಮಾದನಮೂರ್ಧಸು ಪತಿತ್ವಾಂತರೇಣ ಭದ್ರಾಶ್ವವರ್ಷಂ ಪ್ರಾಚ್ಯಾಂ ದಿಶಿ ಕ್ಷಾರಸಮುದ್ರಮಭಿ- ಪ್ರವಿಶತಿ ॥

ಅನುವಾದ

ಇವುಗಳಲ್ಲಿ ಸೀತಾ ಎಂಬ ಧಾರೆಯು ಬ್ರಹ್ಮಪುರಿಯಿಂದ ಧುಮುಕಿ ಕೇಸರಾಚಲವೇ ಮುಂತಾದ ಗಿರಿಗಳ ಸರ್ವೋಚ್ಚ ಶಿಖರಗಳ ಮಾರ್ಗವಾಗಿ ಕೆಳಗಡೆಗೆ ಹರಿಯುತ್ತಾ ಗಂಧಮಾದನದ ಶಿಖರಗಳ ಮೇಲೆ ಬಂದು ಬೀಳುವುದು. ಮತ್ತೆ ಭದ್ರಾಶ್ವವರ್ಷವನ್ನು ನೆನೆಸುತ್ತಾ ಪೂರ್ವದ ಲವಣ ಸಮುದ್ರದಲ್ಲಿ ಹೋಗಿಸೇರುವುದು. ॥6॥

(ಗದ್ಯ - 7)

ಮೂಲಮ್

ಏವಂ ಮಾಲ್ಯವಚ್ಛಿಖರಾನ್ನಿಷ್ಪತಂತೀ ತತೋನುಪರತವೇಗಾ ಕೇತುಮಾಲಮಭಿ ಚಕ್ಷುಃ ಪ್ರತೀಚ್ಯಾಂ ದಿಶಿ ಸರಿತ್ಪತಿಂ ಪ್ರವಿಶತಿ ॥

ಅನುವಾದ

ಹೀಗೆಯೇ ಚಕ್ಷು ಎಂಬ ಧಾರೆಯು ಮಾಲ್ಯವತ್ಪರ್ವತದ ಶಿಖರವನ್ನು ತಲುಪಿ ಅಲ್ಲಿಂದ ಅಡೆ-ತಡೆಯಿಲ್ಲದೆ ಕೇತುಮಾಲ ವರ್ಷದಲ್ಲಿ ಹರಿಯುತ್ತಾ ಪಶ್ಚಿಮದ ಕ್ಷಾರಸಮುದ್ರವನ್ನು ಸೇರುತ್ತದೆ. ॥7॥

(ಗದ್ಯ - 8)

ಮೂಲಮ್

ಭದ್ರಾ ಚೋತ್ತ- ರತೋ ಮೇರುಶಿರಸೋ ನಿಪತಿತಾ ಗಿರಿಶಿಖರಾದ್ಗಿರಿಶಿಖರಮತಿಹಾಯ ಶೃಂಗವತಃ ಶೃಂಗಾದವಸ್ಯಂದಮಾನಾ ಉತ್ತರಾಂಸ್ತು ಕುರೂನಭಿತ ಉದೀಚ್ಯಾಂ ದಿಶಿ ಜಲಧಿಮಭಿಪ್ರವಿಶತಿ ॥

ಅನುವಾದ

ಭದ್ರಾ ಎಂಬ ಧಾರೆಯು ಮೇರು ಪರ್ವತದ ಶಿಖರದಿಂದ ಉತ್ತರದ ಕಡೆಗೆ ಧುಮುಕಿ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ಹೋಗುತ್ತಾ ಕೊನೆಗೆ ಶೃಂಗವಾನ್ ಶಿಖರದಿಂದ ಧುಮುಕಿ ಉತ್ತರ ಕುರುದೇಶದ ಮಾರ್ಗವಾಗಿ ಉತ್ತರದ ಕಡೆಗೆ ಹರಿಯುತ್ತಾ ಸಮುದ್ರವನ್ನು ಸೇರುವುದು. ॥8॥

(ಗದ್ಯ - 9)

ಮೂಲಮ್

ತಥೈವಾಲಕನಂದಾ ದಕ್ಷಿಣೇನ ಬ್ರಹ್ಮಸದನಾದ್ಬಹೂನಿ ಗಿರಿಕೂಟಾನ್ಯತಿಕ್ರಮ್ಯ ಹೇಮಕೂಟಾದ್ಧೈಮ- ಕೂಟಾನ್ಯತಿರಭಸತರರಂಹಸಾ ಲುಠಯಂತೀ ಭಾರತ- ಮಭಿವರ್ಷಂ ದಕ್ಷಿಣಸ್ಯಾಂ ದಿಶಿ ಜಲಧಿಮಭಿಪ್ರವಿಶತಿ ಯಸ್ಯಾಂ ಸ್ನಾನಾರ್ಥಂ ಚಾಗಚ್ಛತಃ ಪುಂಸಃ ಪದೇ ಪದೇಶ್ವಮೇಧ- ರಾಜಸೂಯಾದೀನಾಂ ಲಂ ನ ದುರ್ಲಭಮಿತಿ ॥

ಅನುವಾದ

ಅಲಕನಂದಾ ಎಂಬ ಧಾರೆಯು ಬ್ರಹ್ಮಪುರದಿಂದ ದಕ್ಷಿಣದ ಕಡೆಗೆ ಧುಮುಕಿ ಅನೇಕ ಗಿರಿ-ಶಿಖರಗಳನ್ನು ದಾಟಿ ಹೇಮಕೂಟ ಪರ್ವತಕ್ಕೆ ತಲುಪುವುದು. ಅಲ್ಲಿಂದ ಮಿತಿಮೀರಿದ ವೇಗದಿಂದ ಹಿಮಾಲಯದ ಶಿಖರ ಗಳನ್ನು ಸೀಳುತ್ತಾ ಭಾರತ ವರ್ಷಕ್ಕೆ ಬಂದು ಮತ್ತೆ ದಕ್ಷಿಣದ ಕಡೆಗೆ ಸಮುದ್ರವನ್ನು ಸೇರುವುದು. ಇದರಲ್ಲಿ ಸ್ನಾನ ಮಾಡಲು ಬರುವ ಜನರಿಗೆ ಹೆಜ್ಜೆ-ಹೆಜ್ಜೆಗೆ ಅಶ್ವಮೇಧ ಮತ್ತು ರಾಜಸೂಯ ಮುಂತಾದ ಯಜ್ಞಗಳ ಫಲವೂ ಸುಲಭವಾಗಿ ದೊರೆಯುವುದರಲ್ಲಿ ಸಂಶಯವೇ ಇಲ್ಲ. ॥9॥

(ಗದ್ಯ - 10)

ಮೂಲಮ್

ಅನ್ಯೇ ಚ ನದಾ ನದ್ಯಶ್ಚ ವರ್ಷೇ ವರ್ಷೇ ಸಂತಿ ಬಹುಶೋ ಮೇರ್ವಾದಿಗಿರಿದುಹಿತರಃ ಶತಶಃ ॥

ಅನುವಾದ

ಇದಲ್ಲದೆ ಪ್ರತಿವರ್ಷದಲ್ಲಿಯೂ ಮೇರುವೇ ಮುಂತಾದ ಪರ್ವತಗಳಿಂದ ಹುಟ್ಟಿ ಬರುವ ಇನ್ನೂ ನೂರಾರು ನದ-ನದಿಗಳು ಇವೆ.॥10॥

(ಗದ್ಯ - 11)

ಮೂಲಮ್

ತತ್ರಾಪಿ ಭಾರತಮೇವ ವರ್ಷಂ ಕರ್ಮಕ್ಷೇತ್ರಮನ್ಯಾನ್ಯಷ್ಟ ವರ್ಷಾಣಿ ಸ್ವರ್ಗಿಣಾಂ ಪುಣ್ಯಶೇಷೋಪಭೋಗಸ್ಥಾನಾನಿ ಭೌಮಾನಿ ಸ್ವರ್ಗಪದಾನಿ ವ್ಯಪದಿಶಂತಿ ॥

ಅನುವಾದ

ಈ ಎಲ್ಲ ವರ್ಷಗಳಲ್ಲಿಯೂ ಭಾರತವರ್ಷವೇ ಕರ್ಮ ಭೂಮಿಯಾಗಿದೆ. ಉಳಿದ ಎಂಟು ವರ್ಷಗಳೂ ಸ್ವರ್ಗ ವಾಸಿಗಳಾದ ಜೀವರು ಸ್ವರ್ಗದಲ್ಲಿ ತಮ್ಮ ಭೋಗಗಳನ್ನು ಅನುಭವಿಸಿದ ಬಳಿಕ ಉಳಿದ ಪುಣ್ಯಫಲಗಳನ್ನು ಅನುಭವಿಸುವ ಸ್ಥಾನಗಳು. ಆದುದರಿಂದ ಇದನ್ನು ಭೂಲೋಕದ ಸ್ವರ್ಗವೆಂದೂ ಹೇಳುತ್ತಾರೆ. ॥11॥

(ಗದ್ಯ - 12)

ಮೂಲಮ್

ಏಷು ಪುರುಷಾಣಾಮಯುತಪುರುಷಾಯುರ್ವರ್ಷಾಣಾಂ ದೇವಕಲ್ಪಾನಾಂ ನಾಗಾಯುತಪ್ರಾಣಾನಾಂ ವಜ್ರಸಂಹನನಬಲವಯೋಮೋದಪ್ರಮುದಿತಮಹಾಸೌರತಮಿಥುನವ್ಯವಾಯಾಪವರ್ಗವರ್ಷಧೃತೈಕಗರ್ಭಕಲತ್ರಾಣಾಂ ತತ್ರ ತು ತ್ರೇತಾಯುಗಸಮಃ ಕಾಲೋ ವರ್ತತೇ ॥

ಅನುವಾದ

ಅಲ್ಲಿಯ ದೇವಸದೃಶ ರಾದ ಮನುಷ್ಯರಿಗೆ ಮಾನವರ ಗಣನೆಗನುಸಾರವಾಗಿ ಹತ್ತುಸಾವಿರ ವರ್ಷದ ಆಯುಸ್ಸು ಇರುತ್ತದೆ. ಅವರಲ್ಲಿ ಹತ್ತುಸಾವಿರ ಆನೆಗಳ ಬಲವಿರುತ್ತದೆ. ಅವರ ವಜ್ರದಂತಹ ದೃಢವಾದ ಶರೀರದಲ್ಲಿರುವ ಶಕ್ತಿ, ಯೌವನ, ಉಲ್ಲಾಸ ಇವುಗಳಿಂದ ಅವರು ಹೆಚ್ಚು-ಕಾಲದವರೆಗೆ ಮೈಥುನ ಮುಂತಾದ ವಿಷಯಗಳನ್ನು ಅನುಭವಿಸುತ್ತಿರುತ್ತಾರೆ. ಕೊನೆ ಯಲ್ಲಿ ಭೋಗಗಳು ಮುಗಿದುಹೋಗಿ ಇನ್ನು ಒಂದು ವರ್ಷ ಬಾಕಿ ಇರುವಾಗ ಅವರ ಸ್ತ್ರೀಯರು ಗರ್ಭವತಿಯರಾಗುತ್ತಾರೆ. ಹೀಗೆ ಅಲ್ಲಿ ಸದಾಕಾಲ ತ್ರೇತಾಯುಗದಂತೆ ಸಮಯ ಇರುತ್ತದೆ. ॥12॥

(ಗದ್ಯ - 13)

ಮೂಲಮ್

ಯತ್ರ ಹ ದೇವಪತಯಃ ಸ್ವೈಃ ಸ್ವೈರ್ಗಣನಾಯಕೈರ್ವಿಹಿತಮಹಾರ್ಹಣಾಃ ಸರ್ವರ್ತುಕುಸುಮಸ್ತಬಕಲಕಿಸಲಯಶ್ರಿಯಾನಮ್ಯಮಾನವಿಟಪಲತಾವಿಟಪಿಭಿರುಪಶುಂಭಮಾನರುಚಿರಕಾನನಾಶ್ರಮಾಯತನವರ್ಷಗಿರಿದ್ರೋಣೀಷು ತಥಾ ಚಾಮಲಜಲಾಶಯೇಷು ವಿಕ- ಚವಿವಿಧನವವನರುಹಾಮೋದಮುದಿತರಾಜಹಂಸಜಲಕುಕ್ಕುಟಕಾರಂಡವಸಾರಸಚಕ್ರವಾಕಾದಿಭಿರ್ಮಧುಕರನಿಕರಾಕೃತಿಭಿರುಪಕೂಜಿತೇಷು ಜಲಕ್ರೀಡಾದಿಭಿರ್ವಿಚಿತ್ರವಿನೋದೈಃ ಸುಲಲಿತಸುರಸುಂದರೀಣಾಂ ಕಾಮಕಲಿಲವಿಲಾಸಹಾಸಲೀಲಾವಲೋಕಾಕೃಷ್ಟಮನೋದೃಷ್ಟಯಃ ಸ್ವೈರಂ ವಿಹರಂತಿ ॥

ಅನುವಾದ

ಅಲ್ಲಿ ಇರುವ ಆಶ್ರಮ, ಭವನ, ವರ್ಷ, ಪರ್ವತದ ತಪ್ಪಲುಗಳು, ಅಲ್ಲಿಯ ಸುಂದರ ವನ-ಉಪವನಗಳೂ ಎಲ್ಲ ಋತುಗಳಲ್ಲಿ ಹೂವುಗಳ ಗೊಂಚಲು, ಫಲಗಳು ಮತ್ತು ಹೊಸ ಚಿಗುರುಗಳ ಶೋಭೆಯ ಭಾರದಿಂದ ಬಾಗಿರುವ ಕೊಂಬೆಗಳಿಂದ, ಲತೆಗಳಿಂದ ವೃಕ್ಷಗಳಿಂದ ಸುಶೋಭಿತವಾಗಿವೆ. ಅಲ್ಲಿ ನಿರ್ಮಲ ನೀರಿನಿಂದ ತುಂಬಿರುವ ಅನೇಕ ಜಲಾಶಯಗಳೂ ಇವೆ. ಅವುಗಳಲ್ಲಿ ಬಗೆ-ಬಗೆಯ ಕಮಲಗಳು ಅರಳಿವೆ. ಆ ಕಮಲಗಳ ಸುಗಂಧದಿಂದ ಆನಂದಿತವಾದ ರಾಜಹಂಸ, ನೀರುಕೋಳಿ, ಕಾರಂಡವ, ಸಾರಸ, ಚಕ್ರವಾಕ ಮುಂತಾದ ನೀರುಹಕ್ಕಿಗಳು ಬಗೆ-ಬಗೆಯಾಗಿ ಚಿಲಿಪಿಲಿಗುಟ್ಟುತ್ತಾ ಕ್ರೀಡಿಸುತ್ತವೆ. ಬೇರೆ-ಬೇರೆ ಜಾತಿಯ ಮತ್ತಭೃಂಗಗಳು ಮಧುರವಾಗಿ ಝೇಂಕರಿಸುತ್ತಿವೆ. ಈ ಆಶ್ರಮಗಳಲ್ಲಿ, ಭವನಗಳಲ್ಲಿ, ತಪ್ಪಲುಗಳಲ್ಲಿ, ಜಲಾಶಯಗಳಲ್ಲಿ ಅಲ್ಲಿರುವ ದೇವೇಶ್ವರರು ಪರಮ ಸುಂದರಿಯಾದ ದೇವಾಂಗನೆಯರೊಡನೆ, ಅವರ ಕಾಮೋನ್ಮಾದ ಸೂಚಕ ಕಿರುನಗೆ, ಸವಿನೋಟಗಳಿಂದ ಮನಸ್ಸು, ನೇತ್ರಗಳು ಸೂರೆ ಹೋದ ಕಾರಣ ಜಲಕ್ರೀಡಾದಿ ನಾನಾರೀತಿಯ ಆಟಗಳನ್ನಾಡುತ್ತಾ ಸ್ವಚ್ಛಂದವಾಗಿವಿಹರಿಸುತ್ತಿರುವರು. ಅವರ ಪ್ರಧಾನವಾದ ಅನುಚರರು ಅನೇಕ ಪ್ರಕಾರದ ಸಾಮಗ್ರಿಗಳಿಂದ ಅವರನ್ನು ಆದರಿಸುತ್ತಾ-ಸತ್ಕರಿಸುತ್ತಾ ಇರುತ್ತಾರೆ. ॥13॥

(ಗದ್ಯ - 14)

ಮೂಲಮ್

ನವಸ್ವಪಿ ವರ್ಷೇಷು ಭಗವಾನ್ನಾರಾಯಣೋ ಮಹಾಪುರುಷಃ ಪುರುಷಾಣಾಂ ತದನುಗ್ರಹಾಯಾತ್ಮತತ್ತ್ವ- ವ್ಯೆಹೇನಾತ್ಮನಾದ್ಯಾಪಿ ಸಂನಿಧೀಯತೇ ॥

ಅನುವಾದ

ಈ ಒಂಭತ್ತು ವರ್ಷಗಳಲ್ಲಿಯೂ ಪರಮಪುರುಷ ಭಗವಾನ್ ನಾರಾಯಣನು ಅಲ್ಲಿಯ ಜನರನ್ನು ಅನುಗ್ರಹಿಸುವುದಕ್ಕಾಗಿ ಈಗಲೂ ಕೂಡ ತನ್ನ ವ್ಯೆಹಾತ್ಮಕವಾದ ಬೇರೆ-ಬೇರೆ ಮೂರ್ತಿಗಳಿಂದ ವಿರಾಜಮಾನನಾಗಿದ್ದಾನೆ. ॥14॥

(ಗದ್ಯ - 15)

ಮೂಲಮ್

ಇಲಾ- ವೃತೇ ತು ಭಗವಾನ್ ಭವ ಏಕ ಏವ ಪುಮಾನ್ನ ಹ್ಯನ್ಯಸ್ತತ್ರಾಪರೋ ನಿರ್ವಿಶತಿ ಭವಾನ್ಯಾಃ ಶಾಪನಿಮಿತ್ತಜ್ಞೋ ಯತ್ಪ್ರವೇಕ್ಷ್ಯತಃ ಸೀಭಾವಸ್ತತ್ಪಶ್ಚಾದ್ವಕ್ಷ್ಯಾಮಿ ॥

ಅನುವಾದ

ಇಳಾವೃತ ವರ್ಷದಲ್ಲಿ ಭಗವಾನ್ ಶಂಕರನೊಬ್ಬನೇ ಪುರುಷನು. ಪಾರ್ವತಿದೇವಿಯು ಕೊಟ್ಟಿರುವ ಶಾಪವನ್ನು ಅರಿತವರಾದ ಯಾವ ಪುರುಷರೂ ಅಲ್ಲಿ ಪ್ರವೇಶಿಸುವುದಿಲ್ಲ. ಏಕೆಂದರೆ ಅಲ್ಲಿಗೆ ಹೋದವನು ಸ್ತ್ರೀರೂಪವನ್ನೇ ಪಡೆಯುವನು. ಈ ಪ್ರಸಂಗವನ್ನು ನಾವು ಮುಂದೆ (ನವಮ ಸ್ಕಂಧದಲ್ಲಿ) ವರ್ಣಿಸುವೆವು. ॥15॥

(ಗದ್ಯ - 16)

ಮೂಲಮ್

ಭವಾನೀ- ನಾಥೈಃ ಸೀಗಣಾರ್ಬುದಸಹಸ್ರೈರವರುಧ್ಯಮಾನೋ ಭಗವತಶ್ಚತುರ್ಮೂರ್ತೇರ್ಮಹಾಪುರುಷಸ್ಯ ತುರೀಯಾಂ ತಾಮಸೀಂ ಮೂರ್ತಿಂ ಪ್ರಕೃತಿಮಾತ್ಮನಃ ಸಂಕರ್ಷಣ ಸಂಜ್ಞಾಮಾತ್ಮಸಮಾಧಿರೂಪೇಣಸನ್ನಿಧಾಪ್ಯೈತದಭಿಗೃಣನ್ ಭವ ಉಪಧಾವತಿ ॥

ಅನುವಾದ

ಅಲ್ಲಿ ಪಾರ್ವತಿದೇವಿಯು ಮತ್ತು ಅವಳ ಕೋಟ್ಯಂತರ ದಾಸಿಯರಿಂದ ಸೇವಿತನಾದ ಭಗವಾನ್ ಶಂಕರನು ಪರಮಪುರುಷ ಪರಮಾತ್ಮನ ವಾಸುದೇವ, ಪ್ರದ್ಯುಮ್ನ, ಅನಿರುದ್ಧ ಮತ್ತು ಸಂಕರ್ಷಣ ಎಂಬ ಚತುರ್ವ್ಯೆಹ ಮೂರ್ತಿಗಳಲ್ಲಿ ತನಗೆ ಕಾರಣವಾಗಿರುವ ಸಂಕರ್ಷಣ ಎಂಬ ತಮೋಗುಣ ಪ್ರಧಾನವಾದ ನಾಲ್ಕನೆಯ ಮೂರ್ತಿಯನ್ನು ಧ್ಯೇಯ ಮೂರ್ತಿಯನ್ನಾಗಿ ಮನಸ್ಸಿನಲ್ಲಿ ನೆಲೆಗೊಳಿಸಿಕೊಂಡು, ಈ ಮಂತ್ರವನ್ನು ಜಪಿಸುತ್ತಾ ಉಪಾಸನೆ ಮಾಡುತ್ತಿರುವನು.* ॥16॥

ಟಿಪ್ಪನೀ
  • ಭಗವಂತನ ವಿಗ್ರಹವು ಶುದ್ಧ ಸತ್ತ್ವಮಯವೇ ಆಗಿದ್ದರೂ ಸಂಹಾರವೇ ಮುಂತಾದ ಕಾರ್ಯಗಳಿಗಾಗಿ ತಮೋಗುಣ ಪ್ರಧಾನವಾದ ಸಂಕರ್ಷಣ ದೇಹವನ್ನು ಧರಿಸುತ್ತಾನೆ. ಅದಕ್ಕಾಗಿ ಇದನ್ನು ತಾಮಸೀಮೂರ್ತಿ ಎಂದು ಹೇಳುತ್ತಾರೆ. ಆದರೆ ಆತನಲ್ಲಿ ಯಾವ ವಿಕಾರವನ್ನೂ ಉಂಟುಮಾಡುವುದಿಲ್ಲ.

(ಗದ್ಯ - 17)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಓಂ ನಮೋ ಭಗವತೇ ಮಹಾಪುರುಷಾಯ ಸರ್ವಗುಣ- ಸಂಖ್ಯಾನಾಯಾನಂತಾಯಾವ್ಯಕ್ತಾಯ ನಮ ಇತಿ ॥

(ಶ್ಲೋಕ - 18)

ಮೂಲಮ್

ಭಜೇ ಭಜನ್ಯಾರಣಪಾದಪಂಕಜಂ
ಭಗಸ್ಯ ಕೃತ್ಸ್ನಸ್ಯ ಪರಂ ಪರಾಯಣಮ್
ಭಕ್ತೇಷ್ವಲಂ ಭಾವಿತಭೂತಭಾವನಂ
ಭವಾಪಹಂ ತ್ವಾ ಭವಭಾವಮೀಶ್ವರಮ್ ॥

ಅನುವಾದ

ಭಗವಾನ್ ಶಂಕರನು ಹೇಳುತ್ತಾನೆ — ಓಂ ಸರ್ವ ಗುಣಗಳ ಅಭಿವ್ಯಕ್ತಿಗೂ ಕಾರಣವಾಗಿರುವ, ಅನಂತನೂ, ಅವ್ಯಕ್ತ ಮೂರ್ತಿಯೂ ಆಗಿರುವುದು. ಓಂಕಾರಸ್ವರೂಪಿ ಯಾದ ಪರಮಪುರುಷ ಶ್ರೀಭಗವಂತನಿಗೆ ನಮೋ ನಮಃ. ಭಜನೆಗೆ ಯೋಗ್ಯವಾದ ಭಗವಂತನೇ! ನಿನ್ನ ಅಡಿದಾವರೆ ಗಳು ಭಕ್ತರಿಗೆ ಪರಮಾಶ್ರಯವಾಗಿವೆ. ನೀನು ಸಮಸ್ತ ಐಶ್ವರ್ಯಗಳಿಗೂ ಪರಮಾಶ್ರಯನು. ಭಕ್ತರ ಮುಂದೆ ಭೂತಭಾವನನಾದ ನಿನ್ನ ಸ್ವರೂಪವನ್ನು ಪ್ರಕಟಗೊಳಿಸಿ, ಅವರನ್ನು ಭವಬಂಧನದಿಂದ ಬಿಡುಗಡೆ ಮಾಡುವವನು ನೀನೇ. ಭಕ್ತರಲ್ಲದವರನ್ನು ಸಂಸಾರ ಬಂಧನದಲ್ಲಿ ಕೆಡಹುವವನೂ ನೀನೇ. ಇಂತಹ ಸರ್ವೇಶ್ವರನಾದ ನಿನ್ನನ್ನು ನಾನು ಭಜಿಸುತ್ತೇನೆ. ॥17-18॥

(ಶ್ಲೋಕ - 19)

ಮೂಲಮ್

ನ ಯಸ್ಯ ಮಾಯಾಗುಣಚಿತ್ತವೃತ್ತಿಭಿಃ
ನಿರೀಕ್ಷತೋ ಹ್ಯಣ್ವಪಿ ದೃಷ್ಟಿರಜ್ಯತೇ
ಈಶೇ ಯಥಾ ನೋಜಿತಮನ್ಯುರಂಹಸಾಂ
ಕಸ್ತಂ ನ ಮನ್ಯೇತ ಜಿಗೀಷುರಾತ್ಮನಃ ॥

ಅನುವಾದ

ಪ್ರಭೋ! ನಾವು ಕ್ರೋಧದ ವೇಗವನ್ನು ಜಯಿಸಲು ಅಸಮರ್ಥರು ಮತ್ತು ತತ್ಕಾಲದಲ್ಲೇ ಪಾಪದಿಂದ ಲಿಪ್ತರಾಗಿ ಹೋಗುತ್ತೇವೆ. ಆದರೆ ನೀನಾದರೋ ಜಗತ್ತನ್ನು ನಿಯಮಿಸಲಿಕ್ಕಾಗಿ ನಿರಂತರವಾಗಿ ಸಾಕ್ಷಿರೂಪದಿಂದ ಅದರ ಎಲ್ಲ ವ್ಯಾಪಾರಗಳನ್ನು ನೋಡುತ್ತಾ ಇರುವೆ. ಆದರೂ ಈ ಮಾಯಾಮಯವಾದ ಗುಣ ಮತ್ತು ಚಿತ್ತವೃತ್ತಿಗಳು ನಿನ್ನ ಮೇಲೆ ಎಳ್ಳಷ್ಟು ಪ್ರಭಾವವನ್ನು ಬೀರು ವುದಿಲ್ಲ. ಹೀಗಿರುವಾಗ ಮನಸ್ಸನ್ನು ವಶಪಡಿಸಿಕೊಳ್ಳಬೇಕೆಂಬ ಇಚ್ಛೆಯುಳ್ಳ ಯಾವನು ತಾನೇ ನಿನ್ನನ್ನು ಆದರಿಸುವುದಿಲ್ಲ. ॥19॥

(ಶ್ಲೋಕ - 20)

ಮೂಲಮ್

ಅಸದ್ದೃಶೋ ಯಃ ಪ್ರತಿಭಾತಿ ಮಾಯಯಾ
ಕ್ಷೀಬೇವ ಮಧ್ವಾಸವತಾಮ್ರಲೋಚನಃ
ನ ನಾಗವಧ್ವೋರ್ಹಣ ಈಶಿರೇ ಹ್ರಿಯಾ
ಯತ್ಪಾದಯೋಃ ಸ್ಪರ್ಶನಧರ್ಷಿತೇಂದ್ರಿಯಾಃ ॥

ಅನುವಾದ

ನಿನ್ನಮಾಯೆಗೆ ವಶರಾಗಿ, ಅಸತ್ತಾಗಿರುವ ಶರೀರಾದಿಗಳಲ್ಲಿ ಆತ್ಮ ಬುದ್ಧಿಯನ್ನಿಟ್ಟಿರುವ ಪಾಮರರ ದೃಷ್ಟಿಗೆ ನೀನು ಮದ್ಯ, ಆಸವ ಮುಂತಾದವುಗಳ ಸೇವನೆ ಯಿಂದ ಮತ್ತೇರಿ ಕಣ್ಣು ಕೆಂಪೇರಿದವನಂತೆ ಕಾಣಿಸು ತ್ತಿದ್ದೀಯೇ. ನೀನು ಪರಮ ರಮಣೀಯ ಮೂರ್ತಿಯು. ನಿನ್ನ ಸೇವೆಮಾಡಲು ಬಂದ ನಾಗಪತ್ನಿಯರು ನಿನ್ನ ಚರಣಸ್ಪರ್ಶದಿಂದಲೇ ಮನಸ್ಸು ಚಂಚಲಗೊಂಡವರಾಗಿ ಲಜ್ಜೆಯಿಂದ ನಿನ್ನನ್ನು ಪೂಜಿಸಲು ಅಸಮರ್ಥರಾಗುವರು. ॥20॥

(ಶ್ಲೋಕ - 21)

ಮೂಲಮ್

ಯಮಾಹುರಸ್ಯ ಸ್ಥಿತಿಜನ್ಮಸಂಯಮಂ
ತ್ರಿಭಿರ್ವಿಹೀನಂ ಯಮನಂತಮೃಷಯಃ
ನ ವೇದ ಸಿದ್ಧಾರ್ಥಮಿವ ಕ್ವಚಿತ್ಸ್ಥಿತಂ
ಭೂಮಂಡಲಂ ಮೂರ್ಧಸಹಸ್ರಧಾಮಸು ॥

ಅನುವಾದ

ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ಲಯಗಳಿಗೆ ನೀನೇ ಕಾರಣವೆಂದು ವೇದಮಂತ್ರಗಳು ಹೇಳುತ್ತವೆ. ಆದರೂ ನೀನು ಸ್ವತಃ ಈ ಮೂರು ವಿಕಾರಗಳಿಂದ ರಹಿತನಾಗಿರುವೆ. ಅದಕ್ಕಾಗಿ ನಿನ್ನನ್ನು ‘ಅನಂತ’ ಎಂದು ಹೇಳುತ್ತಾರೆ. ನಿನ್ನ ಸಾವಿರ ಹೆಡೆಗಳ ಮೇಲೆ ಈ ಬ್ರಹ್ಮಾಂಡವು ಸಾಸಿವೆ ಕಾಳಿನಂತೆ ಇಡಲ್ಪಟ್ಟಿದೆ. ಅದರ ಅರಿವೇ ನಿನಗೆ ಆಗದಷ್ಟು ಹಗುರವಾಗಿ ಅದನ್ನು ಧರಿಸಿಕೊಂಡಿರುವೆ. ॥21॥

(ಶ್ಲೋಕ - 22)

ಮೂಲಮ್

ಯಸ್ಯಾದ್ಯ ಆಸೀದ್ಗುಣವಿಗ್ರಹೋ ಮಹಾನ್
ವಿಜ್ಞಾನಧಿಷ್ಣ್ಯೋ ಭಗವಾನಜಃ ಕಿಲ
ಯತ್ಸಂಭವೋಹಂ ತ್ರಿವೃತಾ ಸ್ವತೇಜಸಾ
ವೈಕಾರಿಕಂ ತಾಮಸಮೈಂದ್ರಿಯಂ ಸೃಜೇ ॥

ಅನುವಾದ

ಯಾರಿಂದ ಉತ್ಪನ್ನ ನಾದ ನಾನು ಅಹಂಕಾರರೂಪವಾದ ನಿನ್ನ ತ್ರಿಗುಣಮಯ ವಾದ ತೇಜಸ್ಸಿನಿಂದ ದೇವತೆಗಳನ್ನು, ಇಂದ್ರಿಯಗಳನ್ನು ಮತ್ತು ಪ್ರಾಣಿಗಳನ್ನು ರಚಿಸುತ್ತೇನೆಯೋ, ಆ ವಿಜ್ಞಾನಕ್ಕೆ ಆಶ್ರಯರಾದ ಬ್ರಹ್ಮ ದೇವರೂ ಕೂಡ ನಿನ್ನ ಮಹತ್ತತ್ತ್ವವೆಂಬ ಮೊದಲನೆಯ ಗುಣಮಯ ಸ್ವರೂಪರೇ ಆಗಿದ್ದಾರೆ.॥22॥

(ಶ್ಲೋಕ - 23)

ಮೂಲಮ್

ಏತೇ ವಯಂ ಯಸ್ಯ ವಶೇ ಮಹಾತ್ಮನಃ
ಸ್ಥಿತಾಃ ಶಕುಂತಾ ಇವ ಸೂತ್ರಯಂತ್ರಿತಾಃ
ಮಹಾನಹಂ ವೈಕೃತ ತಾಮಸೇಂದ್ರಿಯಾಃ
ಸೃಜಾಮ ಸರ್ವೇ ಯದನುಗ್ರಹಾದಿದಮ್ ॥

ಅನುವಾದ

ಎಲೈ ಮಹಾತ್ಮನೇ! ಮಹತ್ತತ್ತ್ವ, ಅಹಂಕಾರ, ಇಂದ್ರಿಯಾ ಭಿಮಾನಿದೇವತೆಗಳು, ಇಂದ್ರಿಯಗಳು, ಪಂಚಭೂತಗಳೇ ಮುಂತಾದ ನಾವೆಲ್ಲರೂ ದಾರದಿಂದ ಕಟ್ಟಲ್ಪಟ್ಟ ಪಕ್ಷಿಯಂತೆ ನಿನ್ನ ಕ್ರಿಯಾಶಕ್ತಿಗೆ ವಶರಾಗಿ ನಿನ್ನ ಕೃಪೆಯಿಂದಲೇ ಈ ಜಗತ್ತನ್ನು ನಿರ್ಮಿಸುತ್ತೇವೆ. ॥23॥

(ಶ್ಲೋಕ - 24)

ಮೂಲಮ್

ಯನ್ನಿರ್ಮಿತಾಂ ಕರ್ಹ್ಯಪಿ ಕರ್ಮಪರ್ವಣೀಂ
ಮಾಯಾಂ ಜನೋಯಂ ಗುಣಸರ್ಗಮೋಹಿತಃ
ನ ವೇದ ನಿಸ್ತಾರಣಯೋಗಮಂಜಸಾ
ತಸ್ಮೈ ನಮಸ್ತೇ ವಿಲಯೋದಯಾತ್ಮನೇ ॥

ಅನುವಾದ

ಸತ್ತ್ವಾದಿ ಗುಣಗಳ ಸೃಷ್ಟಿಯಿಂದ ಮೋಹಿತನಾದ ಈ ಜೀವನು ನೀನೇ ರಚಿಸಿರುವ ಮತ್ತು ಕರ್ಮಬಂಧನದಲ್ಲಿ ಕಟ್ಟಿಹಾಕುವ ಮಾಯೆಯನ್ನು ಎಂದಾದರೂ ತಿಳಿದುಕೊಳ್ಳಬಹುದು. ಆದರೆ ಅದರಿಂದ ಬಿಡುಗಡೆಹೊಂದುವ ಉಪಾಯವು ಆತನಿಗೆ ಸುಲಭವಾಗಿ ತಿಳಿಯುವುದಿಲ್ಲ. ಈ ಜಗತ್ತಿನ ಉತ್ಪತ್ತಿ ಮತ್ತು ಪ್ರಳಯವು ನಿನ್ನ ರೂಪಗಳೇ ಆಗಿವೆ. ಇಂತಹ ನಿನಗೆ ನಾನು ಪದೇ-ಪದೇ ನಮಸ್ಕರಿಸುತ್ತೇನೆ. ॥24॥

ಅನುವಾದ (ಸಮಾಪ್ತಿಃ)

ಹದಿನೇಳನೆಯ ಅಧ್ಯಾಯವು ಮುಗಿಯಿತು. ॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಸಪ್ತದಶೋಽಧ್ಯಾಯಃ ॥17॥