೧೬

[ಹದಿನಾರನೆಯ ಅಧ್ಯಾಯ]

ಭಾಗಸೂಚನಾ

ಭುವನ ಕೋಶದ ವರ್ಣನೆ

(ಗದ್ಯ - 1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಉಕ್ತಸ್ತ್ವಯಾ ಭೂಮಂಡಲಾಯಾಮವಿಶೇಷೋ ಯಾವ- ದಾದಿತ್ಯಸ್ತಪತಿ ಯತ್ರ ಚಾಸೌ ಜ್ಯೋತಿಷಾಂ ಗಣೈಶ್ಚಂದ್ರಮಾ ವಾ ಸಹ ದೃಶ್ಯತೇ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮುನಿವರ್ಯರೇ! ಸೂರ್ಯನ ಪ್ರಕಾಶವು ಎಲ್ಲಿಯವರೆಗೆ ಪಸರಿಸಿದೆಯೋ, ನಕ್ಷತ್ರ ಗಣಸಮೇತನಾಗಿ ಚಂದ್ರನು ಕಾಣಿಸುತ್ತಾನೋ ಅಲ್ಲಿಯವರೆಗಿನ ಭೂಮಂಡಲದ ವಿಸ್ತಾರವನ್ನು ತಾವು ಸಂಕ್ಷೇಪವಾಗಿ ತಿಳಿಸಿರುವಿರಿ. ॥1॥

(ಗದ್ಯ - 2)

ಮೂಲಮ್

ತತ್ರಾಪಿ ಪ್ರಿಯವ್ರತರಥಚರಣ- ಪರಿಖಾತೈಃ ಸಪ್ತಭಿಃ ಸಪ್ತ ಸಿಂಧವ ಉಪಕ್ಲ್ೃಪ್ತಾ ಯತ ಏತಸ್ಯಾಃ ಸಪ್ತದ್ವೀಪವಿಶೇಷವಿಕಲ್ಪಸ್ತ್ವಯಾ ಭಗವನ್ಖಲು ಸೂಚಿತ ಏತದೇವಾಖಿಲಮಹಂ ಮಾನತೋ ಲಕ್ಷಣತಶ್ಚ ಸರ್ವಂ ವಿಜಿಜ್ಞಾಸಾಮಿ ॥

ಅನುವಾದ

ಅದರಲ್ಲಿಯೂ ಪ್ರಿಯವ್ರತ ಮಹಾರಾಜನ ರಥದ ಚಕ್ರಗಳಿಂದ ಏಳು ಲೋಕಗಳಿಂದ ಏಳು ಸಮುದ್ರಗಳು ಉಂಟಾಗಿದ್ದವು. ಅದರಿಂದ ಈ ಭೂಮಂಡಲದಲ್ಲಿ ಏಳು ದ್ವೀಪಗಳ ವಿಭಾಗ ವಾಯಿತು ಎಂದು ತಾವು ತಿಳಿಸಿದ್ದೀರಿ. ಆದ್ದರಿಂದ ಪೂಜ್ಯರೇ! ಈಗ ನಾನು ಇವೆಲ್ಲವುಗಳ ವಿಸ್ತಾರ ಮತ್ತು ಲಕ್ಷಣಗಳ ಸಹಿತ ಎಲ್ಲ ವಿವರಣೆಯನ್ನು ಕೇಳಲು ಬಯಸುತ್ತೇನೆ. ॥2॥

(ಗದ್ಯ - 3)

ಮೂಲಮ್

ಭಗವತೋ ಗುಣಮಯೇ ಸ್ಥೂಲರೂಪ ಆವೇಶಿತಂ ಮನೋ ಹ್ಯಗುಣೇಪಿ ಸೂಕ್ಷ್ಮತಮ ಆತ್ಮಜ್ಯೋತಿಷಿ ಪರೇ ಬ್ರಹ್ಮಣಿ ಭಗವತಿ ವಾಸುದೇವಾಖ್ಯೇ ಕ್ಷಮಮಾವೇಶಿತುಂ ತದು ಹೈತದ್ಗುರೋರ್ಹಸ್ಯನುವರ್ಣಯಿತುಮಿತಿ ॥

ಅನುವಾದ

ಏಕೆಂದರೆ, ಯಾವ ಮನಸ್ಸು ಭಗವಂತನ ಈ ಗುಣಮಯ ಸ್ಥೂಲವಿಗ್ರಹದಲ್ಲಿ ತೊಡಗಿದರೆ, ಅವನ ವಾಸುದೇವ ಎಂದು ಕರೆಯಲ್ಪಡುವ ಸ್ವಯಂ ಪ್ರಕಾಶವೂ, ನಿರ್ಗುಣವೂ, ಬ್ರಹ್ಮಸ್ವರೂಪವೂ ಆದ ಸೂಕ್ಷ್ಮತಮ ಸ್ವರೂಪದಲ್ಲಿ ನೆಲೆಗೊಳ್ಳಲು ಸಂಭವವಿದೆ. ಆದ್ದರಿಂದ ಗುರುವರ್ಯರೇ! ಈ ವಿಷಯವನ್ನು ವಿಶದ ವಾಗಿ ವರ್ಣಿಸುವ ಕೃಪೆ ಮಾಡಬೇಕು. ॥3॥

(ಗದ್ಯ - 4)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ನ ವೈ ಮಹಾರಾಜ ಭಗವತೋ ಮಾಯಾಗುಣ- ವಿಭೂತೇಃ ಕಾಷ್ಠಾಂ ಮನಸಾ ವಚಸಾ ವಾಧಿಗಂತುಮಲಂ ವಿಬುಧಾಯುಷಾಪಿ ಪುರುಷಸ್ತಸ್ಮಾತ್ಪ್ರಾಧಾನ್ಯೇನೈವ ಭೂಗೋಲಕವಿಶೇಷಂ ನಾಮರೂಪಮಾನಲಕ್ಷಣತೋ ವ್ಯಾಖ್ಯಾಸ್ಯಾಮಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ಮಹಾರಾಜನೇ! ಭಗವಂತನ ಮಾಯೆಯ ಗುಣಗಳು ಅಳತೆಯನ್ನು ಮೀರಿವೆ. ಅವು ಎಷ್ಟು ವಿಸ್ತಾರವಾಗಿದೆ ಎಂದರೆ ದೇವತೆಗಳ ಆಯುಸ್ಸನ್ನು ಪಡೆದರೂ ಮನಸ್ಸು ಮತ್ತು ಮಾತುಗಳಿಂದ ಅವುಗಳ ಮಹಿಮೆಯನ್ನು, ನಾಮ-ರೂಪಗಳನ್ನು ತಿಳಿಸಲು ಸಾಧ್ಯವಾಗಲಾರದು. ಆದುದರಿಂದ ನಾನು ಮುಖ್ಯವಾಗಿ ಭೂಗೋಳದ ನಾಮ, ರೂಪ, ಪ್ರಮಾಣ ಮತ್ತು ಲಕ್ಷಣಗಳನ್ನು ವರ್ಣಿಸುವೆನು. ॥4॥

(ಗದ್ಯ - 5)

ಮೂಲಮ್

ಯೋ ವಾಯಂ ದ್ವೀಪಃ ಕುವಲಯ- ಕಮಲಕೋಶಾಭ್ಯಂತರಕೋಶೋ ನಿಯುತಯೋಜನ- ವಿಶಾಲಃ ಸಮವರ್ತುಲೋ ಯಥಾ ಪುಷ್ಕರಪತ್ರಮ್ ॥

ಅನುವಾದ

ಭೂಮಂಡಲರೂಪೀ ಕಮಲದ ಕೋಶದಂತಿರುವ ಸಪ್ತ ದ್ವೀಪಗಳಲ್ಲಿ ಎಲ್ಲಕ್ಕಿಂತ ಒಳಗಿನ ಕೋಶವು ನಾವು ವಾಸಮಾಡುತ್ತಿರುವ ಈ ಜಂಬೂದ್ವೀಪವಾಗಿದೆ. ಇದರ ವಿಸ್ತಾರವು ಒಂದು ಲಕ್ಷಯೋಜನಗಳು. ಇದು ಕಮಲ ಪತ್ರದಂತೆ ದುಂಡಗೆ ಸಮವಾಗಿದೆ. ॥5॥

(ಗದ್ಯ - 6)

ಮೂಲಮ್

ಯಸ್ಮಿನ್ನವ ವರ್ಷಾಣಿ ನವಯೋಜನಸಹಸ್ರಾಯಾಮಾನ್ಯಷ್ಟಭಿರ್ಮರ್ಯಾದಾಗಿರಿಭಿಃ ಸುವಿಭಕ್ತಾನಿ ಭವಂತಿ ॥

ಅನುವಾದ

ಈ ಜಂಬೂ ದ್ವೀಪದೊಳಗೆ ಒಂಭತ್ತು ಸಾವಿರ ಯೋಜನಗಳಷ್ಟು ವಿಸ್ತಾರ ವುಳ್ಳ (ಇಳಾವೃತ, ಭರತವರ್ಷ, ಹರಿ ವರ್ಷ, ಕಿಂಪುರುಷ ವರ್ಷ, ರಮ್ಯಕ, ಹಿರಣ್ಮಯ, ಕುರು, ಭದ್ರಾಶ್ವ ಮತ್ತು ಕೇತುಮಾಲ) ಒಂಭತ್ತು ವರ್ಷ (ವಿಭಾಗ) ಗಳಿವೆ. ಈ ವರ್ಷಗಳು (ನೀಲ, ಶ್ವೇತ, ಶೃಂಗವಂತ, ನಿಷಧ, ಹೇಮ ಕೂಟ, ಹಿಮಾಲಯ, ಮಾಲ್ಯವಂತ ಮತ್ತು ಗಂಧಮಾದನ ಎಂಬ) ಎಂಟು ಕುಲ ಪರ್ವತಗಳಿಂದ ವಿಂಗಡಿಸಲ್ಪಟ್ಟಿವೆ. ॥6॥

(ಗದ್ಯ - 7)

ಮೂಲಮ್

ಏಷಾಂ ಮಧ್ಯೇ ಇಲಾವೃತಂ ನಾಮಾಭ್ಯಂತರ ವರ್ಷಂ ಯಸ್ಯ ನಾಭ್ಯಾಮವಸ್ಥಿತಃ ಸರ್ವತಃ ಸೌವರ್ಣಃ ಕುಲಗಿರಿರಾಜೋ ಮೇರುರ್ದ್ವೀಪಾಯಾಮಸಮುನ್ನಾಹಃ ಕರ್ಣಿಕಾಭೂತಃ ಕುವಲಯಕಮಲಸ್ಯ ಮೂರ್ಧನಿ ದ್ವಾತ್ರಿಂಶತ್ಸಹಸ್ರಯೋಜನವಿತತೋ ಮೂಲೇ ಷೋಡಶ-ಸಹಸ್ರಂ ತಾವತಾಂತರ್ಭೂಮ್ಯಾಂ ಪ್ರವಿಷ್ಟಃ ॥

ಅನುವಾದ

ಇವುಗಳ ನಟ್ಟನಡುವೆ ಇಳಾವೃತವೆಂಬ ಹತ್ತನೆಯ ವರ್ಷವಿದೆ. ಇದರ ಮಧ್ಯದಲ್ಲಿ ಕುಲ ಪರ್ವತಗಳ ರಾಜ ಮೇರು ಪರ್ವತವಿದೆ. ಅದು ಭೂಮಂಡಲ ರೂಪೀ ಕಮಲದ ಕರ್ಣಿಕೆಯಂತೆ ಇದೆ. ಅದು ಮೇಲಿಂದ- ಕೆಳಗಿನವರೆಗೆ ಇಡೀ ಸುವರ್ಣಮಯವಾಗಿದೆ ಮತ್ತು ಒಂದು ಲಕ್ಷಯೋಜನ ಎತ್ತರವಾಗಿದೆ. ಅದರ ಶಿಖರದ ವಿಸ್ತಾರವು ಮೂವತ್ತೆರಡು ಸಾವಿರ ಯೋಜನಗಳು, ಕೆಳಗಡೆಯಲ್ಲಿ ಹದಿನಾರು ಸಾವಿರ ಯೋಜನಗಳಷ್ಟು ಭೂಮಿಯಲ್ಲಿ ಹೂತಿದೆ. ಅಂದರೆ ಭೂಮಿಯ ಹೊರಗೆ ಎಂಭತ್ತನಾಲ್ಕು ಲಕ್ಷಯೋಜನ ಎತ್ತರವಾಗಿ ಕಾಣುವುದು. ॥7॥

(ಗದ್ಯ - 8)

ಮೂಲಮ್

ಉತ್ತರೋತ್ತರೇಣೇಲಾವೃತಂ ನೀಲಃ ಶ್ವೇತಃ ಶೃಂಗವಾನಿತಿ ತ್ರಯೋ ರಮ್ಯಕಹಿರಣ್ಮಯಕುರೂಣಾಂ ವರ್ಷಾಣಾಂ ಮರ್ಯಾದಾಗಿರಯಃ ಪ್ರಾಗಾಯತಾ ಉಭಯತಃ ಕ್ಷಾರೋದಾವಧಯೋ ದ್ವಿಸಹಸ್ರಪೃಥವ ಏಕೈಕಶಃ ಪೂರ್ವಸ್ಮಾತ್ಪೂರ್ವಸ್ಮಾದುತ್ತರ ಉತ್ತರೋ ದಶಾಂಶಾಧಿಕಾಂಶೇನ ದೈರ್ಘ್ಯ ಏವ ಹ್ರಸಂತಿ ॥

ಅನುವಾದ

ಇಳಾವೃತವರ್ಷದ ಉತ್ತರದಲ್ಲಿ ಕ್ರಮಶಃ ನೀಲ, ಶ್ವೇತ ಮತ್ತು ಶೃಂಗವಾನ್ ಎಂಬ ಮೂರು ಪರ್ವತಗಳಿವೆ. ಅವು ರಮ್ಯಕ, ಹಿರಣ್ಮಯ, ಮತ್ತು ಕುರು ಎಂಬ ವರ್ಷಗಳ ಸೀಮೆಯನ್ನು ನಿರ್ಧರಿಸುತ್ತವೆ. ಅವು ಪೂರ್ವದಿಂದ ಪಶ್ಚಿಮ ದವರೆಗೆ ಉಪ್ಪುನೀರಿನ ಸಮುದ್ರದವರೆಗೆ ಹರಡಿಕೊಂಡಿವೆ. ಅವುಗಳಲ್ಲಿ ಪ್ರತಿಯೊಂದರ ಅಗಲವು ಎರಡುಸಾವಿರ ಯೋಜನಗಳಿವೆ ಹಾಗೂ ಉದ್ದದಲ್ಲಿ ಮೊದಲನೆಯದಕ್ಕಿಂತ ಹಿಂದಿನದು ಕ್ರಮವಾಗಿ ಹತ್ತನೆಯ ಒಂದಂಶದಿಂದ ಹೆಚ್ಚು-ಕಡಿಮೆ ಇದೆ. ಅಗಲ ಮತ್ತು ಎತ್ತರ ಎಲ್ಲದರಲ್ಲಿ ಒಂದೇ ಸಮವಾಗಿದೆ. ॥8॥

(ಗದ್ಯ - 9)

ಮೂಲಮ್

ಏವಂ ದಕ್ಷಿಣೇನೇಲಾವೃತಂ ನಿಷಧೋ ಹೇಮಕೂಟೋ ಹಿಮಾಲಯ ಇತಿ ಪ್ರಾಗಾಯತಾ ಯಥಾನೀಲಾದಯೋ- ಯುತಯೋಜನೋತ್ಸೇಧಾ ಹರಿವರ್ಷಕಿಂಪುರುಷಭಾರ- ತಾನಾಂ ಯಥಾಸಂಖ್ಯಮ್ ॥

ಅನುವಾದ

ಇದೇ ರೀತಿಯಲ್ಲಿ ಇಳಾವೃತದ ದಕ್ಷಿಣದಲ್ಲಿ ಒಂದಾದ ಮೇಲೆ ಒಂದರಂತೆ ನಿಷಧ, ಹೇಮಕೂಟ, ಹಿಮಾಲಯ ಎಂಬ ಮೂರು ಪರ್ವತಗಳಿವೆ. ಇವೂ ಕೂಡ ನೀಲವೇ ಮುಂತಾದ ಪರ್ವತಗಳಂತೆ ಪೂವ-ಪಶ್ಚಿಮದ ಕಡೆಗೆ ಹರಡಿ ಕೊಂಡಿವೆ ಮತ್ತು ಹತ್ತುಸಾವಿರ ಯೋಜನ ಎತ್ತರವಾಗಿವೆ. ಇವುಗಳಿಂದ ಕ್ರಮವಾಗಿ ಹರಿವರ್ಷ, ಕಿಂಪುರುಷವರ್ಷ, ಭಾರತವರ್ಷದ ಸೀಮೆಗಳ ವಿಭಾಗವಾಗುತ್ತದೆ. ॥9॥

(ಗದ್ಯ - 10)

ಮೂಲಮ್

ತಥೈವೇಲಾವೃತಮಪರೇಣ ಪೂರ್ವೇಣ ಚ ಮಾಲ್ಯವದ್ಗಂಧಮಾದನಾವಾನೀಲನಿಷಧಾಯತೌ ದ್ವಿಸಹಸ್ರಂ ಪಪ್ರಥತುಃ ಕೇತುಮಾಲಭದ್ರಾಶ್ವಯೋಃ ಸೀಮಾನಂ ವಿದಧಾತೇ ॥

ಅನುವಾದ

ಇಳಾವೃತದ ಪೂರ್ವ ಮತ್ತು ಪಶ್ಚಿಮದ ಕಡೆಗೆ ಉತ್ತರದಲ್ಲಿ ನೀಲಪರ್ವತ ಮತ್ತು ದಕ್ಷಿಣದಲ್ಲಿ ನಿಷಧ ಪರ್ವತದವರೆಗೆ ಹರಡಿರುವ ಗಂಧಮಾದನ ಹಾಗೂ ಮಾಲ್ಯವಾನ್ ಎಂಬ ಎರಡು ಪರ್ವತಗಳಿವೆ. ಇವುಗಳ ಅಗಲ ಎರಡೆರಡು ಸಾವಿರ ಯೋಜನಗಳಿವೆ. ಇವು ಭದ್ರಾಶ್ವ ಹಾಗೂ ಕೇತು ಮಾಲ ಎಂಬ ಎರಡು ವರ್ಷಗಳ ಸೀಮೆಯನ್ನು ನಿಶ್ಚಯಿಸುತ್ತವೆ. ॥10॥

(ಗದ್ಯ - 11)

ಮೂಲಮ್

ಮಂದರೋ ಮೇರುಮಂದರಃ ಸುಪಾರ್ಶ್ವಃ ಕುಮುದ ಇತ್ಯಯುತಯೋಜನವಿಸ್ತಾರೋನ್ನಾಹಾ ಮೇರೋಶ್ಚತುರ್ದಿಶಮವಷ್ಟಂಭಗಿರಯ ಉಪಕ್ಲ್ೃಪ್ತಾಃ ॥

ಅನುವಾದ

ಇವಲ್ಲದೆ ಮಂದರ, ಮೇರುಮಂದರ, ಸುಪಾರ್ಶ್ವ, ಕುಮುದ ಎಂಬ ಹತ್ತುಸಾವಿರ ಯೋಜನಗಳಷ್ಟು ಎತ್ತರ ಮತ್ತು ಅಷ್ಟೇ ವಿಸ್ತಾರವುಳ್ಳ ನಾಲ್ಕು ಪರ್ವತಗಳು ಮೇರುಪರ್ವತಕ್ಕೆ ನಾಲ್ಕೂ ಕಡೆಗಳಲ್ಲಿ ಆಧಾರಸ್ತಂಭಗಳಂತೆ ಉಂಟಾಗಿವೆ. ॥11॥

(ಗದ್ಯ - 12)

ಮೂಲಮ್

ಚತುರ್ಷ್ವೇತೇಷು ಚೂತಜಂಬೂಕದಂಬನ್ಯಗ್ರೋಧಾಶ್ಚತ್ವಾರಃ ಪಾದಪಪ್ರವರಾಃ ಪರ್ವತಕೇತವ ಇವಾಧಿಸಹಸ್ರಯೋಜನೋನ್ನಾಹಾಸ್ತಾವದ್ ವಿಟಪವಿತತಯಃಶತಯೋಜನಪರಿಣಾಹಾಃ ॥

ಅನುವಾದ

ಈ ನಾಲ್ಕು ಗಿರಿಗಳಲ್ಲಿಯೂ ಕ್ರಮವಾಗಿ ಅತಿದೊಡ್ಡದಾದ ಮಾವು, ನೇರಳೆ, ಈಚಲು ಮತ್ತು ಆಲದ ಮರಗಳು ಧ್ವಜಗಳಂತೆ ಕಂಗೊಳಿಸುತ್ತಿವೆ. ಇವುಗಳಲ್ಲಿ ಪ್ರತಿಯೊಂದು ಹನ್ನೊಂದು ಸಾವಿರಯೋಜನ ಎತ್ತರವಾಗಿವೆ ಹಾಗೂ ಇಷ್ಟೇ ಇವುಗಳ ಶಾಖೆ (ಕೊಂಬೆ) ಗಳ ವಿಸ್ತಾರವಾಗಿದೆ. ಇವುಗಳ ದಪ್ಪವೂ ನೂರು-ನೂರು ಯೋಜನಗಳಷ್ಟಿದೆ. ॥12॥

(ಗದ್ಯ - 13)

ಮೂಲಮ್

ಹ್ರದಾಶ್ಚತ್ವಾರಃ ಪಯೋಮಧ್ವಿಕ್ಷುರಸಮೃಷ್ಟಜಲಾ ಯದುಪ- ಸ್ಪರ್ಶಿನ ಉಪದೇವಗಣಾ ಯೋಗೈಶ್ವರ್ಯಾಣಿ ಸ್ವಾಭಾವಿಕಾನಿ ಭರತರ್ಷಭ ಧಾರಯಂತಿ ॥

ಅನುವಾದ

ಎಲೈ ಭರತಶ್ರೇಷ್ಠನೇ! ಈ ಪರ್ವತಗಳ ಮೇಲೆ ಕ್ರಮವಾಗಿ ಹಾಲು, ಜೇನುತುಪ್ಪ, ಕಬ್ಬಿನರಸ ಮತ್ತು ಸಿಹಿನೀರಿನಿಂದ ತುಂಬಿರುವ ನಾಲ್ಕು ಸರೋವರಗಳೂ ಇವೆ. ಇವುಗಳನ್ನು ಸೇವಿಸುವ ಯಕ್ಷ-ಕಿನ್ನರರೇ ಮುಂತಾದ ಉಪದೇವತೆಗಳಿಗೆ ಸ್ವಾಭಾವಿಕ ವಾಗಿಯೇ ಯೋಗಸಿದ್ಧಿಗಳು ಪ್ರಾಪ್ತವಾಗಿವೆ. ॥13॥

(ಗದ್ಯ - 14)

ಮೂಲಮ್

ದೇವೋದ್ಯಾನಾನಿ ಚ ಭವಂತಿ ಚತ್ವಾರಿ ನಂದನಂ ಚೈತ್ರರಥಂ ವೈಭ್ರಾಜಕಂ ಸರ್ವ- ತೋಭದ್ರಮಿತಿ ॥ 14 ॥

ಅನುವಾದ

ಇವುಗಳ ಮೇಲೆ ಕ್ರಮವಾಗಿ ನಂದನ, ಚೈತ್ರರಥ, ವೈಭ್ರಾಜಕ, ಸರ್ವತೋಭದ್ರ ಎಂಬ ನಾಲ್ಕು ದಿವ್ಯವಾದ ಉಪವನಗಳೂ ಇವೆ. ॥14॥

(ಗದ್ಯ - 15)

ಮೂಲಮ್

ಯೇಷ್ವಮರಪರಿವೃಢಾಃ ಸಹ ಸುರಲಲನಾಲಲಾಮಯೂಥಪತಯ ಉಪದೇವಗಣೈರುಪಗೀಯಮಾನಮಹಿಮಾನಃ ಕಿಲ ವಿಹರಂತಿ ॥

ಅನುವಾದ

ಇವುಗಳಲ್ಲಿ ಪ್ರಧಾನ-ಪ್ರಧಾನರಾದ ದೇವತೆಗಳು ಅನೇಕ ಸುರಸುಂದರಿಯರ ನಾಯಕರಾಗಿ ಜೊತೆ-ಜೊತೆಗೆ ವಿಹರಿಸುತ್ತಿರುತ್ತಾರೆ. ಆಗ ಗಂಧರ್ವರೇ ಮುಂತಾದ ಉಪದೇವತಾಗಣಗಳು ಇವರ ಮಹಿಮೆಯನ್ನು ಹೊಗಳುತ್ತಾ ಇರುತ್ತಾರೆ. ॥15॥

(ಗದ್ಯ - 16)

ಮೂಲಮ್

ಮಂದರೋತ್ಸಂಗ ಏಕಾದಶಶತಯೋಜನೋತ್ತುಂಗದೇವಚೂತಶಿರಸೋ ಗಿರಿಶಿಖರಸ್ಥೂಲಾನಿ ಲಾನ್ಯಮೃತ- ಕಲ್ಪಾನಿ ಪತಂತಿ ॥

ಅನುವಾದ

ಮಂದರಗಿರಿಯ ತಪ್ಪಲಿನಲ್ಲಿರುವ ಹನ್ನೊಂದುಸಾವಿರ ಯೋಜನ ಎತ್ತರವಾದ ಆ ಮಾವಿನ ಮರದಿಂದ ಗಿರಿಶಿಖರಗಳಷ್ಟು ದೊಡ್ಡದಾದ, ಅಮೃತದಂತೆ ಸ್ವಾದಿಷ್ಟವಾದ ಹಣ್ಣುಗಳು ಉದುರುತ್ತಾ ಇರುತ್ತವೆ. ॥16॥

(ಗದ್ಯ - 17)

ಮೂಲಮ್

ತೇಷಾಂ ವಿಶೀರ್ಯಮಾ- ಣಾನಾಮತಿಮಧುರಸುರಭಿಸುಗಂಧಿಬಹುಲಾರುಣರಸೋ- ದೇನಾರುಣೋದಾ ನಾಮ ನದೀ ಮಂದರಗಿರಿಶಿಖರಾನ್ನಿಪತಂತೀ ಪೂರ್ವೇಣೇಲಾವೃತಮುಪಪ್ಲಾವಯತಿ ॥

ಅನುವಾದ

ಅವು ಉದುರಿ ಒಡೆದು ಹೋದಾಗ ಅವುಗಳಿಂದ ಅದ್ಭುತವಾದ ಸುಗಂಧದಿಂದ ಕೂಡಿದ, ಸಿಹಿಯಾದ, ಕೆಂಪಾದ ರಸವು ಹರಿಯತೊಡಗುತ್ತದೆ. ಅದೇ ಅರುಣೋದಾ ಎಂಬ ನದಿಯಾಗಿ ಮಂದರಾಚಲದ ಶಿಖರದಿಂದ ಧುಮುಕಿ ತನ್ನ ಜಲದಿಂದ ಇಳಾವೃತವರ್ಷದ ಪೂರ್ವಭಾಗವನ್ನು ನೆನೆಸುತ್ತದೆ. ॥17॥

(ಗದ್ಯ - 18)

ಮೂಲಮ್

ಯದುಪಜೋಷಣಾದ್ಭವಾನ್ಯಾ ಅನುಚರೀಣಾಂ ಪುಣ್ಯಜನವಧೂನಾಮವಯವಸ್ಪರ್ಶಸುಗಂಧವಾತೋದಶಯೋ- ಜನಂ ಸಮಂತಾದನುವಾಸಯತಿ ॥

ಅನುವಾದ

ಶ್ರೀಪಾರ್ವತಿಯ ಅನುಚರಿಯರಾದ ಯಕ್ಷಪತ್ನಿಯರು ಈ ಜಲವನ್ನು ಸೇವಿಸುತ್ತಾರೆ. ಇದರಿಂದ-ಅವರ ಅಂಗಸ್ಪರ್ಶಮಾಡಿ ಬೀಸುವ ಗಾಳಿಯು ಸುತ್ತಲೂ ಹತ್ತತ್ತು ಯೋಜನದವರೆಗಿನ ಪ್ರದೇಶ ವನ್ನು ಸುಗಂಧದಿಂದ ತುಂಬಿ ಬರುವಷ್ಟು ಸುಗಂಧ ಅವರ ಮೈಯಿಂದ ಹೊರಡುತ್ತಿರುತ್ತದೆ. ॥18॥

(ಗದ್ಯ - 19)

ಮೂಲಮ್

ಏವಂ ಜಂಬೂಲಾನಾಮತ್ಯುಚ್ಚನಿಪಾತವಿಶೀರ್ಣಾನಾಮನಸ್ಥಿಪ್ರಾಯಾಣಾಮಿಭಕಾಯನಿಭಾನಾಂ ರಸೇನ ಜಂಬೂ ನಾಮ ನದೀ ಮೇರುಮಂದರಶಿಖರಾದಯುತಯೋಜನಾದವನಿತಲೇನಿ ಪತಂತೀ ದಕ್ಷಿಣೇನಾತ್ಮಾನಂ ಯಾವದಿಲಾವೃತಮುಪಸ್ಯಂದಯತಿ ॥

ಅನುವಾದ

ಹೀಗೆಯೇ ನೇರಳೇ ಮರದಿಂದ ಆನೆಗಳಷ್ಟು ಗಾತ್ರದ ದೊಡ್ಡ-ದೊಡ್ಡದಾದ ಬೀಜಗಳೇ ಇಲ್ಲದ ಹಣ್ಣುಗಳು ಉದುರುತ್ತವೆ. ಬಹಳ ಎತ್ತರದಿಂದ ಬೀಳುವುದರಿಂದ ಅವು ಒಡೆದು ಅದರ ರಸವು ಜಂಬೂ ಎಂಬ ನದಿಯಾಗಿ ಪ್ರಕಟಗೊಂಡು ಮಂದರ ಪರ್ವತದ ಹತ್ತುಸಾವಿರಯೋಜನ ಎತ್ತರವಾದ ಶಿಖರದಿಂದ ಕೆಳಗೆ ಧುಮುಕಿ ಇಳಾವೃತದ ದಕ್ಷಿಣದ ಭೂಭಾಗವನ್ನು ನೆನೆಸುತ್ತದೆ. ॥19॥

(ಗದ್ಯ - 20)

ಮೂಲಮ್

ತಾವದುಭಯೋರಪಿ ರೋಧಸೋರ್ಯಾ ಮೃತ್ತಿಕಾ ತದ್ರಸೇನಾನುವಿಧ್ಯಮಾನಾ ವಾಯ್ವರ್ಕಸಂಯೋಗವಿಪಾಕೇನ ಸದಾಮರಲೋಕಾಭರಣಂ ಜಾಂಬೂನದಂ ನಾಮ ಸುವರ್ಣಂ ಭವತಿ ॥

ಅನುವಾದ

ಆ ನದಿಯ ಎರಡೂ ದಡದ ಮಣ್ಣು ಆ ರಸದಿಂದ ನೆನೆದು ವಾಯು ಮತ್ತು ಸೂರ್ಯರ ಸಂಯೋಗದಿಂದ ಒಣಗಿದಾಗ ಅದೇ ದೇವಲೋಕವನ್ನು ವಿಭೂಷಿತ ಗೊಳಿಸುವ ‘ಜಾಂಬೂನದ’ ಎಂಬ ಭಂಗಾರವಾಗುತ್ತದೆ.॥20॥

(ಗದ್ಯ - 21)

ಮೂಲಮ್

ಯದುಹ ವಾವ ವಿಬುಧಾದಯಃ ಸಹ ಯುವತಿಭಿರ್ಮುಕುಟ- ಕಟಕಕಟಿಸೂತ್ರಾದ್ಯಾಭರಣರೂಪೇಣ ಖಲು ಧಾರ- ಯಂತಿ ॥

ಅನುವಾದ

ಇದನ್ನು ದೇವತೆಗಳು, ಗಂಧರ್ವರು ಮುಂತಾದವರ ತರುಣಿಯರಾದ ಸೀಯರ ಸಹಿತ ಕಿರೀಟ, ಕಂಕಣ, ಉಡಿದಾರ ಮುಂತಾದ ಆಭರಣಗಳ ರೂಪದಲ್ಲಿ ಧರಿಸುತ್ತಾರೆ.॥21॥

(ಗದ್ಯ - 22)

ಮೂಲಮ್

ಯಸ್ತು ಮಹಾಕದಂಬಃ ಸುಪಾರ್ಶ್ವನಿರೂಢೋ ಯಾಸ್ತಸ್ಯ ಕೋಟರೇಭ್ಯೋ ವಿನಿಃಸೃತಾಃ ಪಂಚಾಯಾಮಪರಿ- ಣಾಹಾಃ ಪಂಚ ಮಧುಧಾರಾಃ ಸುಪಾರ್ಶ್ವಶಿಖರಾತ್ಪತಂತ್ಯೋಪರೇಣಾತ್ಮಾನಮಿಲಾವೃತಮನುಮೋದಯಂತಿ ॥

ಅನುವಾದ

ಸುಪಾರ್ಶ್ವಪರ್ವತದ ಮೇಲೆ ಇರುವ ಈಚಲಮರದ ಐದು ಪೊಟರೆಗಳಿಂದ ಐದು ಮಾರುಗಳ ಗಾತ್ರವಿರುವ ಐದು ಜೇನು ತುಪ್ಪದ ಧಾರೆಗಳು ಹರಿದುಬರುತ್ತವೆ. ಅವು ಸುಪಾರ್ಶ್ವ ಶಿಖರದಿಂದ ಧುಮುಕಿ ಇಳಾವೃತವರ್ಷದ ಪಶ್ಚಿಮದ ಭಾಗವನ್ನು ತನ್ನ ಸುಗಂಧದಿಂದ ಸುವಾಸಿತಗೊಳಿಸುತ್ತವೆ. ॥22॥

(ಗದ್ಯ - 23)

ಮೂಲಮ್

ಯಾ ಹ್ಯುಪಯುಂಜಾನಾನಾಂ ಮುಖನಿರ್ವಾಸಿತೋ ವಾಯುಃ ಸಮಂತಾಚ್ಛತಯೋಜನಮನುವಾಸಯತಿ ॥

ಅನುವಾದ

ಆ ಜೇನುರಸವನ್ನು ಕುಡಿದವರ ಮುಖದಿಂದ ಹೊರಟ ವಾಯುವು ಸುತ್ತಲೂ ನೂರು-ನೂರು ಯೋಜನಗಳವರೆಗೆ ಅದರ ಸುಗಂಧವನ್ನು ಹರಡಿಕೊಳ್ಳುತ್ತದೆ.॥23॥

(ಗದ್ಯ - 24)

ಮೂಲಮ್

ಏವಂ ಕುಮುದನಿರೂಢೋ ಯಃ ಶತವಲ್ಸೋ ನಾಮ ವಟಸ್ತಸ್ಯ ಸ್ಕಂದೇಭ್ಯೋ ನೀಚೀನಾಃ ಪಯೋದಧಿಮಧು- ಘೃತಗುಡಾನ್ನಾದ್ಯಂಬರಶಯ್ಯಾಸನಾಭರಣಾದಯಃ ಸರ್ವ ಏವ ಕಾಮದುಘಾ ನದಾಃ ಕುಮುದಾಗ್ರಾತ್ಪತಂತಸ್ತಮು- ತ್ತರೇಣೇಲಾಮೃತಮುಪಯೋಜಯಂತಿ ॥

ಅನುವಾದ

ಇದೇ ರೀತಿ ಕುಮುದ ಪರ್ವತದಮೇಲೆ ಬೆಳೆದಿರುವ ಶತವಶ್ಯವೆಂಬ ಆಲದ ಮರದ ದೊಡ್ಡ ಕೊಂಬೆಗಳಿಂದ ಹರಿದುಬರುವ ಅನೇಕ ನದಗಳಿವೆ. ಅವೆಲ್ಲವೂ ಇಷ್ಟಾನು ಸಾರವಾದ ಭೋಗಗಳನ್ನು ಕೊಡುತ್ತವೆ. ಅವುಗಳಿಂದ ಹಾಲು, ಮೊಸರು, ಜೇನು, ತುಪ್ಪ, ಬೆಲ್ಲ, ಅನ್ನ, ವಸ್ತ್ರ, ಶಯ್ಯೆ, ಆಸನ ಮತ್ತು ಆಭೂಷಣ ಮುಂತಾದ ಎಲ್ಲ ಪದಾರ್ಥಗಳು ದೊರೆಯಬಲ್ಲವು. ಅವೆಲ್ಲವೂ ಕುಮುದ ಶಿಖರದಿಂದ ಧುಮುಕಿ ಇಳಾವೃತದ ಉತ್ತರದ ಭಾಗವನ್ನು ನೆನೆಸುತ್ತವೆ. ॥24॥

(ಗದ್ಯ - 25)

ಮೂಲಮ್

ಯಾನು- ಪಜುಷಾಣಾನಾಂ ನ ಕದಾಚಿದಪಿ ಪ್ರಜಾನಾಂ ವಲೀಪಲಿತಕ್ಲಮಸ್ವೇದದೌರ್ಗಂಧ್ಯಜರಾಮಯಮೃತ್ಯುಶೀತೋಷ್ಣವೈವರ್ಣ್ಯೋಪಸರ್ಗಾದಯಸ್ತಾಪವಿಶೇಷಾ ಭವಂತಿ ಯಾವಜ್ಜೀವಂ ಸುಖಂ ನಿರತಿಶಯಮೇವ ॥

ಅನುವಾದ

ಇವುಗಳು ಕೊಟ್ಟಿರುವ ಪದಾರ್ಥಗಳನ್ನು ಉಪಭೋಗಿಸುವುದರಿಂದ ಅಲ್ಲಿಯ ಪ್ರಜೆಗಳಲ್ಲಿ ತ್ವಚೆಯಲ್ಲಿ ನೆರಿಗೆ ಬೀಳುವುದು, ಕೂದಲು ಹಣ್ಣಾಗುವುದು, ಬಳಲಿಕೆ ಉಂಟಾಗುವುದು, ಮುಪ್ಪು, ರೋಗ, ಮೃತ್ಯು, ಶೀತ, ಸೆಕೆಯಪೀಡೆ, ಶರೀರವು ಕಾಂತಿಹೀನ ವಾಗುವುದು ಹಾಗೂ ಅವಯವಗಳು ತುಂಡರಿಸುವುದು ಮುಂತಾದ ಕಷ್ಟಗಳು ಎಂದೂ ತೊಂದರೆ ಕೊಡುವುದಿಲ್ಲ ಮತ್ತು ಜೀವನವಿಡೀ ಪೂರ್ಣಸುಖವು ದೊರೆಯುತ್ತದೆ. ॥25॥

(ಗದ್ಯ - 26)

ಮೂಲಮ್

ಕುರಂಗಕುರರಕುಸುಂಭವೈಕಂಕತ್ರಿಕೂಟಶಿಶಿರಪತಂಗರುಚಕನಿಷಧಶಿನೀವಾಸಕಪಿಲಶಂಖವೈದೂರ್ಯಜಾರುಧಿಹಂಸರ್ಷಭನಾಗಕಾಲಂಜರನಾರದಾದಯೋ ವಿಂಶತಿ ಗಿರಯೋ ಮೇರೋಃ ಕರ್ಣಿಕಾಯಾ ಇವ ಕೇಸರಭೂತಾ ಮೂಲದೇಶೇ ಪರಿತ ಉಪಕ್ಲ್ೃಪ್ತಾಃ ॥

ಅನುವಾದ

ಎಲೈ ರಾಜನೇ! ಕಮಲದ ಕರ್ಣಿಕೆಯ ಸುತ್ತಲೂ ಕೇಸರವಿರುವಂತೆ ಮೇರು ಪರ್ವತದ ಬುಡದಲ್ಲಿ ಅದರ ಸುತ್ತಲೂ ಕುರಂಗ, ಕುರರ, ಕುಸುಂಭ, ವೈಕಂಕ, ತ್ರಿಕೂಟ, ಶಿಶಿರ, ಪತಂಗ, ರುಚಕ, ನಿಷಧ, ಶಿನೀವಾಸ, ಕಪಿಲ, ಶಂಖ, ವೈಡೂರ್ಯ, ಜಾರುಧಿ, ಹಂಸ, ಋಷಭ, ನಾಗ, ಕಾಲಂಜರ ಮತ್ತು ನಾರದ ಮುಂತಾದ ಇಪ್ಪತ್ತು ಪರ್ವತಗಳು ಇನ್ನೂ ಇವೆ. ॥26॥

(ಗದ್ಯ - 27)

ಮೂಲಮ್

ಜಠರ- ದೇವಕೂಟೌ ಮೇರುಂ ಪೂರ್ವೇಣಾಷ್ಟಾ- ದಶಯೋಜನ ಸಹಸ್ರಮುದಗಾಯತೌ ದ್ವಿಸಹಸ್ರಂ ಪೃಥುತುಂಗೌ ಭವತಃ ಏವಮಪರೇಣ ಪವನಪಾರಿಯಾತ್ರೌ ದಕ್ಷಿಣೇನ ಕೈಲಾಸಕರವೀರೌ ಪ್ರಾಗಾಯತಾವೇವಮುತ್ತರತಸಿಶೃಂಗ- ಮಕರಾವಷ್ಟಭಿರೇತೈಃ ಪರಿಸ್ತೃತೋಗ್ನಿರಿವ ಪರಿತಶ್ಚಕಾಸ್ತಿ ಕಾಂಚನಗಿರಿಃ ॥

ಅನುವಾದ

ಇವಲ್ಲದೆ ಮೇರುವಿನ ಪೂರ್ವಕ್ಕೆ ಜಠರ, ದೇವಕೂಟ ಎಂಬ ಎರಡು ಪರ್ವತಗಳಿವೆ. ಅವು ಹದಿನೆಂಟು-ಹದಿನೆಂಟುಸಾವಿರ ಯೋಜನ ಉದ್ದ ಹಾಗೂ ಎರಡೆರಡು ಸಾವಿರ ಯೋಜನ ಅಗಲ ಮತ್ತು ಎತ್ತರವಾಗಿವೆ. ಹೀಗೆಯೇ ಪಶ್ಚಿಮದ ಕಡೆಗೆ ಪವನ, ಪಾರಿಯಾತ್ರ, ದಕ್ಷಿಣದ ಕಡೆಗೆ ಕೈಲಾಸ, ಕರವೀರ ಹಾಗೂ ಉತ್ತರಕ್ಕೆ ತ್ರಿಶೃಂಗ, ಮಕರ ಎಂಬ ಪರ್ವತಗಳು ಇವೆ. ಈ ಎಂಟು ಪರ್ವತಗಳಿಂದ ಸುತ್ತುವರಿದ ಸುವರ್ಣಗಿರಿ ಮೇರುವು ಅಗ್ನಿಯಂತೆ ಹೊಳೆಯುತ್ತದೆ. ॥27॥

ಮೂಲಮ್

(ಗದ್ಯ - 28)
ಮೇರೋರ್ಮೂರ್ಧನಿ ಭಗವತ ಆತ್ಮಯೋನೇರ್ಮಧ್ಯತ ಉಪಕ್ಲೃಪ್ತಾಂ ಪುರೀಮಯುತ ಯೋಜನಸಾಹಸ್ರೀಂ ಸಮಚತುರಸ್ರಾಂ ಶಾತಕೌಂಭೀಂ ವದಂತಿ ॥

ಅನುವಾದ

ಮೇರುವಿನ ಶಿಖರದ ನಟ್ಟನಡುವೆ ಭಗವಾನ್ ಬ್ರಹ್ಮದೇವರ ಸುವರ್ಣಮಯ ಪುರಿಯು ಇದೆ ಎಂದು ಹೇಳುತ್ತಾರೆ. ಅದು ಆಕಾರದಲ್ಲಿ ಚೌಕಾಕಾರವಾಗಿದ್ದು ಕೋಟಿ ಯೋಜನ ವಿಸ್ತಾರವಾಗಿದೆ. ॥28॥

(ಗದ್ಯ - 29)

ಮೂಲಮ್

ತಾಮನು ಪರಿತೋ ಲೋಕಪಾಲಾನಾ- ಮಷ್ಟಾನಾಂ ಯಥಾದಿಶಂ ಯಥಾರೂಪಂ ತುರೀಯ- ಮಾನೇನ ಪುರೋಷ್ಟಾವುಪಕ್ಲೃಪ್ತಾಃ ॥

ಅನುವಾದ

ಅದರ ಕೆಳಗೆ ಪೂರ್ವವೇ ಮುಂತಾದ ನಾಲ್ಕು ದಿಕ್ಕುಗಳಲ್ಲಿ ಮತ್ತು ಉಪದಿಕ್ಕುಗಳಲ್ಲಿ ಅವುಗಳ ಅಧಿಪತಿಗಳಾದ ಇಂದ್ರಾದಿ ಎಂಟು ಲೋಕಪಾಲಕರ ಎಂಟು ಪುರಗಳು ಇವೆ. ಅವು ತಮ್ಮ-ತಮ್ಮ ಒಡೆಯನಿಗನುರೂಪವಾಗಿ ಆಯಾಯಾ ದಿಕ್ಕುಗಳಲ್ಲಿ ಇವೆ ಹಾಗೂ ವಿಸ್ತಾರದಲ್ಲಿ ಬ್ರಹ್ಮದೇವರ ಪುರಕ್ಕಿಂತ ನಾಲ್ಕನೆಯ ಒಂದಂಶ ಇವೆ. ॥29॥

ಅನುವಾದ (ಸಮಾಪ್ತಿಃ)

ಹದಿನಾರನೆಯ ಅಧ್ಯಾಯವು ಮುಗಿಯಿತು. ॥16॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಭುವನಕೋಶವರ್ಣನಂ ನಾಮ ಷೋಡಶೋಽಧ್ಯಾಯಃ ॥16॥