೧೪

[ಹದಿನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಭವಾಟವಿಯ ಸ್ಪಷ್ಟೀಕರಣ

(ಶ್ಲೋಕ - 1)

ಮೂಲಮ್

ಸ ಹೋವಾಚ ಯ ಏಷ ದೇಹಾತ್ಮಮಾನಿನಾಂ ಸತ್ತ್ವಾದಿಗುಣವಿಶೇಷ- ವಿಕಲ್ಪಿತಕುಶಲಾಕುಶಲಸಮವಹಾರವಿನಿರ್ಮಿತವಿವಿಧದೇಹಾ- ವಲಿಭಿರ್ವಿಯೋಗಸಂಯೋಗಾದ್ಯನಾದಿಸಂಸಾರಾನುಭವಸ್ಯ ದ್ವಾರಭೂತೇನ ಷಡಿಂದ್ರಿಯವರ್ಗೇಣ ತಸ್ಮಿಂದುರ್ಗಾಧ್ವವದಸುಗಮೇಧ್ವನ್ಯಾಪತಿತ ಈಶ್ವರಸ್ಯ ಭಗವತೋ ವಿಷ್ಣೋರ್ವಶವರ್ತಿನ್ಯಾ ಮಾಯಯಾ ಜೀವ- ಲೋಕೋಯಂ ಯಥಾ ವಣಿಕ್ಸಾರ್ಥೋರ್ಥಪರಃ ಸ್ವದೇಹನಿಷ್ಪಾದಿತಕರ್ಮಾನುಭವಃ ಶ್ಮಶಾನವದಶಿವತಮಾಯಾಂ ಸಂಸಾರಾಟವ್ಯಾಂ ಗತೋ ನಾದ್ಯಾಪಿ ವಿಲಬಹುಪ್ರತಿಯೋಗೇಹಸ್ತತ್ತಾಪೋಪಶಮನೀಂ ಹರಿಗುರು- ಚರಣಾರವಿಂದಮಧುಕರಾನುಪದವೀಮವರುಂಧೇಯಸ್ಯಾಮು ಹ ವಾ ಏತೇ ಷಡಿಂದ್ರಿಯನಾಮಾನಃ ಕರ್ಮಣಾ ದಸ್ಯವ ಏವ ತೇ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ರಾಜನೇ! ದೇಹಾಭಿಮಾನಿಗಳಾದ ಜೀವರಿಂದ ಸತ್ತ್ವಾದಿ ಗುಣಗಳ ಭೇದದಿಂದ ಶುಭ, ಅಶುಭ ಮತ್ತು ಮಿಶ್ರ ಎಂಬ ಮೂರು ವಿಧದ ಕರ್ಮಗಳು ಆಗುತ್ತಾ ಇರುತ್ತವೆ. ಆ ಕರ್ಮಗಳ ಮೂಲಕವೇ ಉಂಟಾದ ನಾನಾರೀತಿಯ ಶರೀರಗಳೊಂದಿಗೆ ಉಂಟಾಗುವ ಸಂಯೋಗ-ವಿಯೋಗವೇ ಮುಂತಾದ ಅನಾದಿ ಸಂಸಾರವು ಜೀವಿಗೆ ಪ್ರಾಪ್ತವಾಗುತ್ತದೆ. ಅದನ್ನು ಅನುಭವಿಸಲು ಮನಸ್ಸು ಮತ್ತು ಐದು ಜ್ಞಾನೇಂದ್ರಿಯಗಳೆಂಬ ಆರು ಬಾಗಿಲುಗಳಿವೆ. ಅವುಗಳಿಂದ ವಿವಶನಾಗಿ ಈ ಜೀವಸಮೂಹವು ನಿಜವಾದ ಮಾರ್ಗವನ್ನು ಮರೆತು ಭಯಂಕರ ಕಾಡಿನಲ್ಲಿ ಅಲೆಯುತ್ತಾ ಧನದ ಲೋಭಿಗಳಾದ ವ್ಯಾಪಾರಿಗಳಂತೆ ಪರಮ ಸಮರ್ಥ ಭಗವಾನ್ ವಿಷ್ಣುವಿನಲ್ಲಿ ಆಶ್ರಿತವಾಗಿರುವ ಮಾಯೆಯ ಪ್ರೇರಣೆಯಿಂದ ದಟ್ಟವಾದ ಅಡವಿಯಂತಿರುವ ದುರ್ಗಮ ಮಾರ್ಗದಲ್ಲಿ ಬಿದ್ದು ಸಂಸಾರ ವನಕ್ಕೆ ಬಂದು ತಲುಪುತ್ತಾನೆ. ಈ ವನವು ಸ್ಮಶಾನದಂತೆ ಅತ್ಯಂತ ಅಶುಭವಾಗಿದೆ. ಇದರಲ್ಲಿ ಅಲೆಯುತ್ತಿರುವಾಗ ಅವನಿಗೆ ತನ್ನ ಶರೀರದಿಂದ ಮಾಡಿರುವ ಕರ್ಮಗಳನ್ನು ಅನುಭವಿಸಬೇಕಾಗುತ್ತದೆ. ಇಲ್ಲಿ ಅನೇಕ ವಿಘ್ನಗಳ ಕಾರಣದಿಂದ ಅವನಿಗೆ ತನ್ನ ವ್ಯಾಪಾರದಲ್ಲಿ ಸಫಲತೆ ದೊರೆಯದಿದ್ದರೂ ಇವನು ಅವರ ಶ್ರಮವನ್ನು ಶಾಂತಗೊಳಿಸುವಂತಹ ಶ್ರೀಹರಿಯ ಹಾಗೂ ಸದ್ಗುರುವಿನ ಚರಣಾರವಿಂದ ಮಕರಂದ-ಮಧುವಿನ ರಸಿಕ ಭಕ್ತ-ಭ್ರಮರಗಳ ಮಾರ್ಗವನ್ನು ಅನುಸರಿಸುವುದಿಲ್ಲ. ಈ ಸಂಸಾರ ವನದಲ್ಲಿ ಮನಸ್ಸಿನಸಹಿತ ಆರು ಇಂದ್ರಿಯಗಳೇ ನಮ್ಮ ಕರ್ಮಗಳ ದೃಷ್ಟಿಯಿಂದ ಕಳ್ಳರಂತೆ ಇದ್ದಾರೆ. ॥1॥

(ಶ್ಲೋಕ - 2)

ಮೂಲಮ್

ತದ್ಯಥಾ ಪುರುಷಸ್ಯ ಧನಂ ಯತ್ಕಿಂಚಿದ್ಧರ್ವೌಪಯಿಕಂ ಬಹುಕೃಚ್ಛ್ರಾಧಿಗತಂ ಸಾಕ್ಷಾ- ತ್ಪರಮಪುರುಷಾರಾಧನಲಕ್ಷಣೋ ಯೋಸೌ ಧರ್ಮಸ್ತಂ ತು ಸಾಂಪರಾಯ ಉದಾಹರಂತಿ ತದ್ಧರ್ಮ್ಯಂ ಧನಂ ದರ್ಶನಸ್ಪರ್ಶನಶ್ರವಣಾಸ್ವಾದನಾವಘ್ರಾಣ ಸಂಕಲ್ಪವ್ಯವಸಾಯಗೃಹಗ್ರಾಮ್ಯೋಪಭೋಗೇನ ಕುನಾಥಸ್ಯಾಜಿತಾತ್ಮನೋ ಯಥಾ ಸಾರ್ಥಸ್ಯ ವಿಲುಂಪಂತಿ ॥

ಅನುವಾದ

ಪುರುಷನು ಬಹಳ ಕಷ್ಟಪಟ್ಟು ಗಳಿಸಿದ ಧನವನ್ನು ಧರ್ಮಕ್ಕಾಗಿ ಉಪಯೋಗಿಸಬೇಕು. ಆ ಧರ್ಮವನ್ನು ಸಾಕ್ಷಾತ್ ಭಗವಾನ್ ಪರಮ ಪುರುಷನ ಆರಾಧನೆಯ ರೂಪದಲ್ಲಿ ಆಚರಿಸಿದರೆ ಅದನ್ನು ಪರಲೋಕದಲ್ಲಿ ನಿಃಶ್ರೇಯಸ್ಸಿನ ಸಾಧನವೆಂದು ಹೇಳಲಾಗಿದೆ. ಆದರೆ ಬುದ್ಧಿರೂಪೀ ಸಾರಥಿಯು ವಿವೇಕಹೀನನಾದಾಗ, ಮನಸ್ಸು ವಶದಲ್ಲಿ ಇಲ್ಲದಿದ್ದಾಗ ಆ ಮನುಷ್ಯನ ಧರ್ಮೋಪಯೋಗಿ ಆ ಧನವನ್ನು ಈ ಮನ ಸಹಿತ ಆರು ಇಂದ್ರಿಯಗಳು ನೋಡುವುದು, ಸ್ಪರ್ಶಿಸುವುದು, ಕೇಳುವುದು, ರುಚಿನೋಡುವುದು, ಮೂಸುವುದು, ಸಂಕಲ್ಪ-ವಿಕಲ್ಪಗಳನ್ನು ಮಾಡುವುದು ಮತ್ತು ನಿಶ್ಚಯಿಸು ವುದು ಈ ವೃತ್ತಿಗಳ ಮೂಲಕ ಗೃಹಸ್ಥೋಚಿತವಾದ ವಿಷಯಭೋಗಗಳಲ್ಲಿ ಸಿಕ್ಕಿಕೊಂಡುವಂಚಕನಾದ ಮುಖಂಡ ನನ್ನು ಅನುಸರಿಸುತ್ತಿರುವ ಹಾಗೂ ಎಚ್ಚರತಪ್ಪಿದ ವ್ಯಾಪಾರಿಗಳ ಗುಂಪಿನ ಧನವನ್ನು ಕಳ್ಳ-ಕಾಕರು ಲೂಟಿಮಾಡುವಂತೆ-ಲೂಟಿಮಾಡುತ್ತವೆ. ॥2॥

(ಶ್ಲೋಕ - 3)

ಮೂಲಮ್

ಅಥ ಚ ಯತ್ರ ಕೌಟುಂಬಿಕಾ ದಾರಾಪತ್ಯಾದಯೋ ನಾಮ್ನಾ ಕರ್ಮಣಾ ವೃಕಸೃಗಾಲಾ ಏವಾನಿಚ್ಛತೋಪಿ ಕದರ್ಯಸ್ಯ ಕುಟುಂಬಿನ ಉರಣಕವತ್ ಸಂರಕ್ಷ್ಯಮಾಣಂ ಮಿಷ- ತೋಪಿ ಹರಂತಿ ॥

ಅನುವಾದ

ಇಷ್ಟೇ ಅಲ್ಲ, ಆ ಸಂಸಾರವನದಲ್ಲಿ ವಾಸಿಸುವ ಅವನ ಸಂಬಂಧಿಗಳೂ ಕೂಡ ಹೆಸರಿಗೆ ಪತ್ನಿ-ಪುತ್ರರೆಂದು ಹೇಳಲ್ಪಟ್ಟರೂ ಅವರ ಕರ್ಮಗಳು ಸಾಕ್ಷಾತ್ ತೋಳ, ನರಿಗಳಂತೆ ಇರುತ್ತವೆ. ಆ ಅರ್ಥ ಲೋಲುಪ ಕುಟುಂಬಿಯ ಧನವನ್ನು ಅವನು ಇಚ್ಛಿಸದಿದ್ದರೂ ಕುರಿ ಕಾಯುವವರ ರಕ್ಷಣೆಯಲ್ಲಿದ್ದರೂ ತೋಳವು ಕುರಿಗಳನ್ನು ಎತ್ತಿಕೊಂಡು ಹೋಗುವಂತೆ ಅವರು ನೋಡು-ನೋಡುತ್ತಾ ಕಿತ್ತುಕೊಳ್ಳುವರು. ॥3॥

(ಶ್ಲೋಕ - 4)

ಮೂಲಮ್

ಯಥಾ ಹ್ಯನುವತ್ಸರಂ ಕೃಷ್ಯಮಾಣಮಪ್ಯದಗ್ಧಬೀಜಂ ಕ್ಷೇತ್ರಂ ಪುನರೇವಾವಪನಕಾಲೇ ಗುಲ್ಮತೃಣವೀರುದ್ಭಿರ್ಗಹ್ವರಮಿವ ಭವತ್ಯೇವಮೇವ ಗೃಹಾಶ್ರಮಃ ಕರ್ಮಕ್ಷೇತ್ರಂ ಯಸ್ಮಿನ್ನ ಹಿ ಕರ್ಮಾಣ್ಯುತ್ಸೀದಂತಿ ಯದಯಂ ಕಾಮಕರಂಡ ಏಷ ಆವಸಥಃ ॥

ಅನುವಾದ

ಯಾವುದೇ ಹೊಲದಲ್ಲಿರುವ ಕಸ-ಕಡ್ಡಿಗಳ ಬೀಜಗಳನ್ನು ಬೆಂಕಿಯಿಂದ ಸುಡದೆ ಇದ್ದರೆ ಪ್ರತಿವರ್ಷವೂ ಉಳಿಮೆ ಮಾಡಿದರೂ ಬೀಜನೆಡುವ ವೇಳೆಗೆ ಅವು ಪುನಃ ಕಳೆ-ಮೇಳೆಗಳು, ಬಳ್ಳಿಗಳು-ಪೊದೆಗಳು, ಹುಲ್ಲು ಮುಂತಾದವುಗಳು ದಟ್ಟವಾಗಿ ಬೆಳೆಯುವವು. ಹೀಗೆಯೇ ಈ ಗೃಹಸ್ಥಾಶ್ರಮವೂ ಕರ್ಮಭೂಮಿಯಾಗಿದೆ. ಇದರಲ್ಲಿಯೂ ಕರ್ಮಗಳನ್ನು ಪೂರ್ಣವಾಗಿ ಕಿತ್ತುಹಾಕಲು ಬರುವುದಿಲ್ಲ. ಏಕೆಂದರೆ, ಈ ಮನೆಯು ಕಾಮನೆಗಳ ಪೆಟ್ಟಿಗೆಯಾಗಿದೆ. ॥4॥

(ಶ್ಲೋಕ - 5)

ಮೂಲಮ್

ತತ್ರ ಗತೋ ದಂಶಮಶಕಸಮಾಪಸದೈರ್ಮನುಜೈಃ ಶಲಭಶಕುಂತತಸ್ಕರಮೂಷಕಾದಿಭಿರುಪರುಧ್ಯಮಾನಬಹಿಃ- ಪ್ರಾಣಃ ಕ್ವಚಿತ್ ಪರಿವರ್ತಮಾನೋಸ್ಮಿನ್ನಧ್ವನ್ಯವಿದ್ಯಾಕಾಮಕರ್ಮಭಿರುಪರಕ್ತಮನಸಾನುಪಪನ್ನಾರ್ಥಂ ನರಲೋಕಂ ಗಂಧರ್ವನಗರಮುಪಪನ್ನಮಿತಿ ಮಿಥ್ಯಾದೃಷ್ಟಿರನುಪಶ್ಯತಿ ॥

ಅನುವಾದ

ಈ ಗೃಹಸ್ಥಾಶ್ರಮದಲ್ಲಿರುವ ವ್ಯಕ್ತಿಗೆ ಹಣವು ಹೊರಗೆ ಓಡಾಡುವ ಪ್ರಾಣದಂತೆ ಪ್ರಿಯವಾಗಿರುವುದು. ಅವನಿಗೆ ಕಾಡುಕೋಣ, ಕಾಡುಸೊಳ್ಳೆಗಳಂತಿರುವ ನೀಚಪುರುಷರಿಂದ ಹಾಗೂ ಮಿಡತೆ, ಹಕ್ಕಿಗಳು, ಕಳ್ಳರೂ, ಇಲಿಗಳೂ ಮುಂತಾದವುಗಳಿಂದ ತೊಂದರೆ ಆಗುತ್ತಾ ಇರುತ್ತದೆ. ಕೆಲವೊಮ್ಮೆ ಈ ಮಾರ್ಗದಲ್ಲಿ ಅಲೆಯುತ್ತಾ-ಅಲೆಯುತ್ತಾ ಇವನು ಅವಿದ್ಯೆ, ಕಾಮನೆ ಮತ್ತು ಕರ್ಮಗಳಿಂದ ಕಲುಷಿತವಾದ ತನ್ನ ಚಿತ್ತದಿಂದ ದೃಷ್ಟಿದೋಷದ ಕಾರಣ ಈ ಮರ್ತ್ಯಲೋಕವನ್ನು ಗಂಧರ್ವನಗರದಂತೆ ಅಸತ್ತಾಗಿದ್ದರೂ ಸತ್ಯವೆಂದೇ ತಿಳಿಯತೊಡಗುತ್ತಾನೆ. ॥5॥

(ಶ್ಲೋಕ - 6)

ಮೂಲಮ್

ತತ್ರ ಚ ಕ್ವಚಿದಾತಪೋದಕನಿಭಾನ್ವಿಷಯಾನುಪಧಾವತಿ ಪಾನಭೋಜನವ್ಯವಾಯಾದಿವ್ಯಸನಲೋಲುಪಃ ॥

ಅನುವಾದ

ಮತ್ತೆ ಊಟ-ತಿಂಡಿ, ಸ್ತ್ರೀಪ್ರಸಂಗಾದಿ ವ್ಯಸನಗಳಲ್ಲಿ ಸಿಕ್ಕಿಬಿದ್ದು ಬಿಸಿಲ್ಗುದುರೆಯಂತೆ ಮಿಥ್ಯಾ ವಿಷಯಗಳ ಕಡೆಗೆ ಓಡಲು ತೊಡಗುತ್ತಾನೆ. ॥6॥

(ಶ್ಲೋಕ - 7)

ಮೂಲಮ್

ಕ್ವಚಿಚ್ಚಾಶೇಷದೋಷನಿಷದನಂ ಪುರೀಷವಿಶೇಷಂ ತದ್ವರ್ಣಗುಣನಿರ್ಮಿತಮತಿಃ ಸುವರ್ಣ- ಮುಪಾದಿತ್ಸತ್ಯಗ್ನಿಕಾಮಕಾತರ ಇವೋಲ್ಮುಕಪಿಶಾಚಮ್ ॥

ಅನುವಾದ

ಕೆಲವೊಮ್ಮೆ ಬುದ್ಧಿಯ ರಜೋಗುಣದಿಂದ ಪ್ರಭಾವಿತನಾದಾಗ ಎಲ್ಲ ಅನರ್ಥಗಳಿಗೆ ಮೂಲವಾದ ಅಗ್ನಿಯ ಮಲರೂಪವಾದ ಭಂಗಾರವನ್ನೇ ಸುಖದ ಸಾಧನವೆಂದು ತಿಳಿದು, ಅದನ್ನು ಪಡೆಯಲಿಕ್ಕಾಗಿ ಆಸೆಪಡುತ್ತಾ - ಕಾಡಿನಲ್ಲಿ ಛಳಿಯಿಂದ ಗಡ-ಗಡನೆ ನಡುಗುತ್ತಿರುವ ವ್ಯಕ್ತಿಯು ಬೆಂಕಿಗಾಗಿ ವ್ಯಾಕುಲನಾಗಿ ಕಾಡಿನಲ್ಲಿ ಓಡಾಡುವ ಕೊಳ್ಳಿಪಿಶಾಚಿಗಳನ್ನೇ ಬೆಂಕಿಯೆಂದು ಭ್ರಮಿಸಿ ಅವರ ಬಳಿ ಓಡಿಹೋಗಿ ಅವರ ಕೈಗೆ ಸಿಕ್ಕಿ ಒದ್ದಾಡುವಂತೆ ಪ್ರಯತ್ನಿಸುತ್ತಿರುತ್ತಾನೆ. ॥7॥

(ಶ್ಲೋಕ - 8)

ಮೂಲಮ್

ಅಥ ಕದಾಚಿನ್ನಿವಾಸಪಾನೀಯದ್ರವಿಣಾದ್ಯನೇಕಾತ್ಮೋಪಜೀವನಾಭಿನಿವೇಶ ಏತಸ್ಯಾಂ ಸಂಸಾರಾಟವ್ಯಾಮಿತಸ್ತತಃ ಪರಿಧಾವತಿ ॥

ಅನುವಾದ

ಕೆಲವೊಮ್ಮೆ ತನ್ನ ದೇಹಯಾತ್ರೆಗೆ ಬೇಕಾದ ಅನ್ನ, ನೀರು, ಹಣ ಮುಂತಾದವುಗಳನ್ನು ಗಳಿಸಬೇಕೆಂದು ಈ ಸಂಸಾರಾರಣ್ಯದಲ್ಲಿ ಅಲ್ಲಲ್ಲಿ ಅಲೆದಾಡುತ್ತಿರುವನು. ॥8॥

(ಶ್ಲೋಕ - 9)

ಮೂಲಮ್

ಕ್ವಚಿಚ್ಚ ವಾತ್ಯೌಪಮ್ಯಯಾ ಪ್ರಮದಯಾರೋಹಮಾರೋಪಿತಸ್ತತ್ಕಾಲರಜಸಾ ರಜನೀಭೂತ ಇವಾಸಾಧುಮ- ರ್ಯಾದೋರಜಸ್ವಲಾಕ್ಷೋಪಿ ದಿಗ್ದೇವತಾ ಅತಿರಜಸ್ವಲಮತಿರ್ನವಿಜಾನಾತಿ ॥

ಅನುವಾದ

ಕೆಲವೊಮ್ಮೆ ಸುಂಟರಗಾಳಿಯಂತೆ ಕಣ್ಣಿಗೆ ಮಣ್ಣೆರಚುವ ಸ್ತ್ರೀಗೆ ಮರುಳಾಗಿ ಆಕೆಯ ತೊಡೆಯಲ್ಲಿ ಕುಳಿತು ಕಾಮರಾಗದಿಂದ ಕುರುಡನಾಗಿ ಸತ್ಪುರುಷರ ಮರ್ಯಾದೆಯನ್ನೂ ಲೆಕ್ಕಿಸುವುದಿಲ್ಲ. ಆಗ ಕಣ್ಣುಗಳಲ್ಲಿ ರಜೋಗುಣದ ಧೂಳು ತುಂಬಿದ್ದರಿಂದ ತನ್ನ ಕರ್ಮಗಳ ಸಾಕ್ಷಿಯಾಗಿರುವ ದಿಕ್ಕುಗಳ ದೇವತೆಗಳನ್ನೂ ಮರೆಯುವಷ್ಟು ಬುದ್ಧಿಯು ಮಲಿನವಾಗಿ ಹೋಗುತ್ತದೆ. ॥9॥

(ಶ್ಲೋಕ - 10)

ಮೂಲಮ್

ಕ್ವಚಿತ್ಸಕೃದವಗತವಿಷಯವೈತಥ್ಯಃ ಸ್ವಯಂ ಪರಾಭಿಧ್ಯಾನೇನ ವಿಭ್ರಂಶಿತಸ್ಮೃತಿಸ್ತಯೈವ ಮರೀಚಿತೋಯಪ್ರಾಯಾಂಸ್ತಾನೇವಾಭಿಧಾವತಿ ॥

ಅನುವಾದ

ಕೆಲವೊಮ್ಮೆ ತಾನಾಗಿಯೇ ವಿಷಯಗಳ ಮಿಥ್ಯತ್ವವು ತಿಳಿದುಬಂದರೂ ಅನಾದಿಕಾಲದಿಂದ ದೇಹದಲ್ಲಿ ಆತ್ಮ ಬುದ್ಧಿಯು ಇರುವುದರಿಂದ ವಿವೇಕ-ಬುದ್ಧಿಯು ನಾಶವಾದ ಕಾರಣ ಆ ಬಿಸಿಲ್ಗುದುರೆಯಂತಿರುವ ವಿಷಯಗಳ ಕಡೆಗೆ ಪುನಃ ಓಡತೊಡಗುವನು. ॥10॥

(ಶ್ಲೋಕ - 11)

ಮೂಲಮ್

ಕ್ವಚಿದುಲೂಕಝಿಲ್ಲೀಸ್ವನವದತಿಪರುಷರಭಸಾಟೋಪಂ ಪ್ರತ್ಯಕ್ಷಂ ಪರೋಕ್ಷಂ ವಾ ರಿಪುರಾಜಕುಲ- ನಿರ್ಭರ್ತ್ಸಿತೇನಾತಿವ್ಯಥಿತಕರ್ಣಮೂಲಹೃದಯಃ ॥

ಅನುವಾದ

ಕೆಲವೊಮ್ಮೆ ಗೂಗೆಯ ಕೂಗಿನಂತೆ ಎದುರಿನಲ್ಲೇ ಕಟುವಾಗಿ ಮಾತನಾಡುವ ಶತ್ರುಗಳ ಮಾತುಗಳು ಮತ್ತು ಹುಳುವಿನಂತೆ ಪರೋಕ್ಷವಾಗಿ ರಾಜನ ಬೆದರಿಕೆಯ ಭೀಕರವಾದ ಭಾಷಣದಿಂದ ಕಿವಿಗಳಿಗೆ ಹಾಗೂ ಮನಸ್ಸಿಗೆ ತುಂಬಾ ವ್ಯಥೆ ಉಂಟಾಗುತ್ತದೆ. ॥11॥

(ಶ್ಲೋಕ - 12)

ಮೂಲಮ್

ಸ ಯದಾ ದುಗ್ಧಪೂರ್ವಸುಕೃತಸ್ತದಾ ಕಾರಸ್ಕರಕಾಕತುಂಡಾದ್ಯಪುಣ್ಯದ್ರುಮಲತಾವಿಷೋದಪಾನವದು- ಭಯಾರ್ಥಶೂನ್ಯದ್ರವಿಣಾನ್ ಜೀವನ್ಮೃತಾನ್ ಸ್ವಯಂ ಜೀವನ್ಮ್ರಿಯಮಾಣ ಉಪಧಾವತಿ ॥

ಅನುವಾದ

ಪೂರ್ವಪುಣ್ಯವನ್ನು ಕಳೆದುಕೊಂಡ ಈತನು ಬದುಕಿದ್ದರೂ ಸತ್ತವನಂತೆ ಆಗುವನು. ಕಡುಬಡವನಾಗಿ ದೈನ್ಯದಿಂದ ಕೂಡಿ ಇಹ-ಪರ ಜೀವನಗಳೆರಡಕ್ಕೂ ಸಾಧನವಾಗದಂತೆ ಹುಚ್ಚುಬೇವು, ಕಾಗೆಮೋರೆಯೇ ಮುಂತಾದ ಪಾಪ ವೃಕ್ಷಗಳಿಗೂ, ವಿಷದ ಬಳ್ಳಿ-ವಿಷದ ಬಾವಿಗಳಿಗೂ ಸಮನಾಗಿರುವ ಜಿಪುಣರಾದ ಹಣವಂತರನ್ನೂ ಆಶ್ರಯಿಸಬೇಕಾಗುವುದು. ॥12॥

(ಶ್ಲೋಕ - 13)

ಮೂಲಮ್

ಏಕದಾಸತ್ಪ್ರಸಂಗಾನ್ನಿಕೃತಮತಿರ್ವ್ಯದಕಸ್ರೋತಃಸ್ಖಲನವದುಭಯತೋಪಿ ದುಃಖದಂ ಪಾಖಂಡಮಭಿಯಾತಿ ॥

ಅನುವಾದ

ಕೆಲವೊಮ್ಮೆ ದುಷ್ಟ ಮನುಷ್ಯರ ಸಂಗದಿಂದ ಬುದ್ಧಿಯು ಕೆಟ್ಟುಹೋಗಿ ಒಣಗಿದ ನದಿಯಲ್ಲಿ ಬಿದ್ದು ದುಃಖಿಯಾಗುವಂತೆ ಈ ಲೋಕ ಮತ್ತು ಪರಲೋಕದಲ್ಲಿ ದುಃಖವನ್ನು ಕೊಡುವಂತಹ ಪಾಷಂಡಮತದಲ್ಲಿ ಸಿಕ್ಕಿಕೊಳ್ಳುವನು. ॥13॥

(ಶ್ಲೋಕ - 14)

ಮೂಲಮ್

ಯದಾ ತು ಪರಬಾಧಯಾಂಧ ಆತ್ಮನೇ ನೋಪನಮತಿ ತದಾ ಹಿ ಪಿತೃಪುತ್ರಬರ್ಹಿಷ್ಮತಃ ಪಿತೃಪುತ್ರಾನ್ವಾ ಸ ಖಲು ಭಕ್ಷಯತಿ ॥ ಬೇರೆಯವರನ್ನು ತೊಂದರೆಗೆ ಗುರಿ ಪಡಿಸಿದ್ದರಿಂದ ಅವನಿಗೆ ಅನ್ನವೂ ಸಿಗದಿದ್ದಾಗ, ಅವನು ತನ್ನ ತಂದೆ-ಮಕ್ಕಳಲ್ಲಿ ಅಥವಾ ಬಂಧುಗಳಲ್ಲಿ ಹುಲ್ಲುಕಡ್ಡಿಯಷ್ಟು ದ್ರವ್ಯವು ಕಂಡುಬಂದರೆ ತಂದೆ-ಮಕ್ಕಳನ್ನಾದರೂ ಪೀಡಿಸಿ ಅದನ್ನು ಕಸಿದುಕೊಳ್ಳಲು ಸಿದ್ಧನಾಗುತ್ತಾನೆ. ॥

(ಶ್ಲೋಕ - 15)

ಮೂಲಮ್

ಕ್ವಚಿದಾಸಾದ್ಯ ಗೃಹಂ ದಾವವತ್ಪ್ರಿಯಾರ್ಥವಿಧುರಮಸುಖೋದರ್ಕಂ ಶೋಕಾಗ್ನಿನಾ ದಹ್ಯಮಾನೋ ಭೃಶಂ ನಿರ್ವೇದಮುಪಗಚ್ಛತಿ ॥

ಅನುವಾದ

ಕೆಲವೊಮ್ಮೆ ಕಾಡ್ಗಿಚ್ಚಿನಂತಹ ಪ್ರಿಯ ವಿಷಯಗಳಿಂದ ಶೂನ್ಯವಾದ ಹಾಗೂ ಪರಿಣಾಮದಲ್ಲಿ ದುಃಖಮಯವಾದ ಮನೆಗೆ ತಲಪುತ್ತಾನೆ. ಆಗ ಅಲ್ಲಿ ಪ್ರಿಯ ಜನರ ವಿಯೋಗಾದಿಗಳಿಂದ ಅವನ ಶೋಕಾಗ್ನಿಯು ಭುಗಿಲೇಳುತ್ತದೆ. ಇದರಿಂದ ಸಂತಪ್ತನಾಗಿ ಅವನು ಬಹಳ ಖಿನ್ನನಾಗತೊಡಗುವನು. ॥15॥

(ಶ್ಲೋಕ - 16)

ಮೂಲಮ್

ಕ್ವಚಿತ್ ಕಾಲವಿಷಮಿತರಾಜಕುಲರಕ್ಷಸಾಪಹೃತಪ್ರಿಯತಮಧನಾಸುಃ ಪ್ರಮೃತಕ ಇವ ವಿಗತಜೀವಲಕ್ಷಣ ಆಸ್ತೇ ॥

ಅನುವಾದ

ಇನ್ನೊಮ್ಮೆ ಕಾಲನಂತೆ ಭಯಂಕರ ರಾಜಕುಲ ರೂಪನಾದ ರಾಕ್ಷಸನು ಇವನ ಪರಮಪ್ರಿಯ ಧನರೂಪೀ ಪ್ರಾಣಗಳನ್ನು ಕಸಿದುಕೊಂಡಾಗ, ಇವನು ಸತ್ತವನಂತೆ ನಿರ್ಜೀವನಾಗಿ ಹೋಗುತ್ತಾನೆ. ॥16॥

(ಶ್ಲೋಕ - 17)

ಮೂಲಮ್

ಕದಾಚಿನ್ಮನೋರಥೋಪಗತಪಿತೃಪಿತಾಮಹಾದ್ಯಸತ್ಸದಿತಿ ಸ್ವಪ್ನನಿರ್ವೃತಿಲಕ್ಷಣಮನುಭವತಿ ॥

ಅನುವಾದ

ಕೆಲವೊಮ್ಮೆ ಮನೋರಥ ಪದಾರ್ಥಗಳಂತೆ ಅತ್ಯಂತ ಅಸತ್ತಾದ ಪಿತಾ-ಪಿತಾಮಹರು ಮುಂತಾದ ಸಂಬಂಧಗಳನ್ನು ಸತ್ಯವೆಂದು ತಿಳಿದುಕೊಂಡು ಅವರ ಸಹವಾಸದಿಂದ ಸ್ವಪ್ನದಂತಿರುವ ಕ್ಷಣಿಕ ಸುಖವನ್ನು ಅನುಭವಿಸುತ್ತಾ ಇರುತ್ತಾನೆ. ॥17॥

(ಶ್ಲೋಕ - 18)

ಮೂಲಮ್

ಕ್ವಚಿದ್ಗೃಹಾಶ್ರ- ಮಕರ್ಮಚೋದನಾತಿಭರಗಿರಿಮಾರುರುಕ್ಷಮಾಣೋ ಲೋಕವ್ಯಸನಕರ್ಷಿತಮನಾಃ ಕಂಟಕಶರ್ಕರಾಕ್ಷೇತ್ರಂ ಪ್ರವಿಶನ್ನಿವ ಸೀದತಿ ॥

ಅನುವಾದ

ಗೃಹಸ್ಥಾಶ್ರಮಕ್ಕಾಗಿ ವಿಸ್ತಾರಮಾಡಲ್ಪಟ್ಟ ಮಹಾನ್ ಕರ್ಮವಿಧಾನದ ಅನುಷ್ಠಾನ ಮಾಡುವುದು ಯಾವುದೋ ಕಡಿದಾದ ಪರ್ವತವನ್ನು ಹತ್ತುವಂತೆಯೇ ಇದೆ. ಜನರು ಅತ್ತಕಡೆ ಪ್ರವೃತ್ತರಾಗಿರುವುದನ್ನು ಕಂಡು ಅವರಂತೆಯೇ ಇವನೂ ಅದನ್ನು ಆಚರಿಸಲು ಪ್ರಯತ್ನಿಸಿದಾಗ ಬಗೆ-ಬಗೆಯ ಕಷ್ಟಗಳಿಂದ ಕ್ಲೇಶಗೊಂಡು ಕಲ್ಲು-ಮುಳ್ಳುಗಳಿಂದ ತುಂಬಿದ ಭೂಮಿಯನ್ನು ತಲುಪಿದ ವ್ಯಕ್ತಿಯಂತೆ ದುಃಖಿತನಾಗುತ್ತಾನೆ. ॥18॥

(ಶ್ಲೋಕ - 19)

ಮೂಲಮ್

ಕ್ವಚಿಚ್ಚ ದುಃಸಹೇನ ಕಾಯಾಭ್ಯಂತರವಹ್ನಿನಾ ಗೃಹೀತಸಾರಃ ಸ್ವಕುಟುಂಬಾಯ ಕ್ರುಧ್ಯತಿ ॥

ಅನುವಾದ

ಕೆಲವೊಮ್ಮೆ ಜಠರಾಗ್ನಿಯ ಜ್ವಾಲೆಯೆಂಬ ಹಸಿವಿನಿಂದ ಪೀಡಿತನಾಗಿ ತನ್ನ ಕುಟುಂಬದ ಮೇಲೆಯೇ ಕ್ರೋಧಗೊಳ್ಳುವನು. ॥19॥

(ಶ್ಲೋಕ - 20)

ಮೂಲಮ್

ಸ ಏವ ಪುನರ್ನಿದ್ರಾಜಗರಗೃಹೀತೋಂಧೇ ತಮಸಿ ಮಗ್ನಃ ಶೂನ್ಯಾರಣ್ಯ ಇವ ಶೇತೇ ನಾನ್ಯತ್ಕಿಂಚನ ವೇದ ಶವ ಇವಾಪವಿದ್ಧಃ ॥

ಅನುವಾದ

ಮತ್ತೆ ನಿದ್ದೆಯೆಂಬ ಹೆಬ್ಬಾವಿನ ಹಿಡಿತಕ್ಕೆ ಸಿಕ್ಕಿಬಿದ್ದಾಗ ಅಜ್ಞಾನರೂಪವಾದ ಘೋರ ಅಂಧಕಾರದಲ್ಲಿ ಮುಳುಗಿ ಶೂನ್ಯವಾದ ಅರಣ್ಯದಲ್ಲಿ ಎಸೆಯಲ್ಪಟ್ಟ ಹೆಣದಂತೆ ಬಿದ್ದುಕೊಳ್ಳುವನು. ಆಗ ಅವನಿಗೆ ಯಾವುದರ ಜ್ಞಾನವೂ ಇರುವುದಿಲ್ಲ. ॥20॥

(ಶ್ಲೋಕ - 21)

ಮೂಲಮ್

ಕದಾಚಿದ್ಭಗ್ನಮಾನದಂಷ್ಟ್ರೋ ದುರ್ಜನದಂದಶೂಕೈರಲಬ್ಧನಿದ್ರಾಕ್ಷಣೋ ವ್ಯಥಿತಹೃದಯೇನಾನುಕ್ಷೀಯಮಾಣ- ವಿಜ್ಞಾನೋಂಧಕೂಪೇಂಧವತ್ಪತತಿ ॥

ಅನುವಾದ

ಕೆಲವೊಮ್ಮೆ ದುರ್ಜನರೆಂಬ ವಿಷಸರ್ಪಗಳು ಈತನನ್ನು ಬಲವಾಗಿ ಕಚ್ಚಿ ತಿರಸ್ಕರಿಸುತ್ತವೆ. ಆಗ ಇತರರನ್ನು ಕಚ್ಚಲು ಸಾಧನವಾಗಿದ್ದ ಇವನ ಗರ್ವವೆಂಬ ಹಲ್ಲುಗಳು ಮುರಿದು ಬೀಳುತ್ತವೆ. ಈತನಿಗೆ ಅಶಾಂತಿಯಿಂದ ನಿದ್ರೆಯು ಹತ್ತುವುದಿಲ್ಲ. ಮರ್ಮಸ್ಥಾನದಲ್ಲಿ ಪೀಡೆಯುಂಟಾಗುವುದರಿಂದ ಕ್ಷಣ-ಕ್ಷಣಕ್ಕೂ ವಿವೇಕಶಕ್ತಿಯು ಕ್ಷೀಣಿಸುತ್ತಿರುವಾಗ ಕೊನೆಗೆ ಕುರುಡನಂತೆ ಇವನು ನರಕರೂಪವಾದ ಕತ್ತಲ ಬಾವಿಯಲ್ಲಿ ಬಿದ್ದುಬಿಡುತ್ತಾನೆ. ॥21॥

(ಶ್ಲೋಕ - 22)

ಮೂಲಮ್

ಕರ್ಹಿ ಸ್ಮ ಚಿತ್ಕಾಮಮಧುಲವಾನ್ವಿಚಿನ್ವನ್ಯದಾ ಪರದಾರ ಪರ- ದ್ರವ್ಯಾಣ್ಯವರುಂಧಾನೋ ರಾಜ್ಞಾ ಸ್ವಾಮಿಭಿರ್ವಾ ನಿಹತಃ ಪತತ್ಯಪಾರೇ ನಿರಯೇ ॥

ಅನುವಾದ

ಕೆಲವೊಮ್ಮೆ ವಿಷಯಸುಖರೂಪವಾದ ಜೇನಹನಿಗಳನ್ನು ಅರಸುತ್ತಾ ಈತನು ಕಳ್ಳತನದಿಂದ ಪರಸೀಯರನ್ನೂ, ಪರಧನವನ್ನೂ ಆಶ್ರಯಿಸಲು ಹೋಗಿ ಅವರ ಯಜಮಾನರಿಂದಲೂ, ರಾಜನಿಂದಲೂ ಹೊಡೆದು ಸಾಯಿಸಲ್ಪಟ್ಟು ಅನಂತವೂ, ಅಪಾರವೂ ಆದ ನರಕದಲ್ಲಿ ಹೋಗಿ ಬೀಳುವನು. ॥22॥

(ಶ್ಲೋಕ - 23)

ಮೂಲಮ್

ಅಥ ಚ ತಸ್ಮಾದು- ಭಯಥಾಪಿ ಹಿ ಕರ್ಮಾಸ್ಮಿನ್ನಾತ್ಮನಃ ಸಂಸಾರಾವಪನಮು- ದಾಹರಂತಿ ॥

ಅನುವಾದ

ಇದರಿಂದಲೇ ಪ್ರವೃತ್ತಿಮಾರ್ಗದಲ್ಲಿದ್ದುಕೊಂಡು ಮಾಡಿದ ಲೌಕಿಕ ಮತ್ತು ವೈದಿಕ ಎರಡೂ ರೀತಿಯ ಕರ್ಮಗಳು ಜೀವನಿಗೆ ಸಂಸಾರವನ್ನೇ ದೊರಕಿಸಿಕೊಡುವವು ಎಂದು ಹೇಳುತ್ತಾರೆ. ॥23॥

(ಶ್ಲೋಕ - 24)

ಮೂಲಮ್

ಮುಕ್ತಸ್ತತೋ ಯದಿ ಬಂಧಾದ್ದೇ- ವದತ್ತ ಉಪಾಚ್ಛಿನತ್ತಿ ತಸ್ಮಾದಪಿ ವಿಷ್ಣುಮಿತ್ರ ಇತ್ಯನವಸ್ಥಿತಿಃ ॥

ಅನುವಾದ

ಈ ರಾಜರೇ ಮುಂತಾದವರ ಬಂಧನದಿಂದ ಅತಿ ಪ್ರಯಾಸದಿಂದ ಬಿಡುಗಡೆ ಹೊಂದಿದರೂ, ಅನ್ಯಾಯದಿಂದ ಅಪಹರಿಸಿದ್ದ ಆ ಸ್ತ್ರೀ ಮತ್ತು ಧನವನ್ನು ದೇವದತ್ತನೆಂಬ ಯಾರೋ ಮತ್ತೊಬ್ಬನು ಕಸಿದುಕೊಳ್ಳುವನು ಮತ್ತೆ ಅವನಿಂದಲೂ ವಿಷ್ಣುಮಿತ್ರನೆಂಬ ಯಾವನೋ ಮೂರನೇ ವ್ಯಕ್ತಿಯು ಕಿತ್ತುಕೊಳ್ಳುವನು. ಹೀಗೆ ಆ ಭೋಗಗಳು ಒಬ್ಬರಿಂದ ಮತ್ತೊಬ್ಬರ ಬಳಿಗೆ ಹೋಗುತ್ತಾ ಇರುತ್ತವೆ; ಒಂದೇ ಕಡೆ ಸ್ಥಿರವಾಗಿ ನಿಲ್ಲುವುದಿಲ್ಲ. ॥24॥

(ಶ್ಲೋಕ - 25)

ಮೂಲಮ್

ಕ್ವಚಿಚ್ಛ ಶೀತವಾತಾದ್ಯನೇಕಾಧಿದೈವಿಕಭೌತಿಕಾ- ತ್ಮೀಯಾನಾಂ ದಶಾನಾಂ ಪ್ರತಿನಿವಾರಣೇಕಲ್ಪೋ ದುರಂತ- ಚಿಂತಯಾ ವಿಷಣ್ಣ ಆಸ್ತೇ ॥

ಅನುವಾದ

ಕೆಲವೊಮ್ಮೆ ಚಳಿ-ಗಾಳಿ ಮುಂತಾದ ಅನೇಕ ಆಧಿದೈವಿಕ, ಆಧಿಭೌತಿಕ, ಆಧ್ಯಾತ್ಮಿಕ ದುಃಖಗಳನ್ನು ನಿವಾರಿಸಲು ಅಸಮರ್ಥವಾದ್ದರಿಂದ ಇವನು ಅಪಾರವಾದ ಚಿಂತೆಗಳಲ್ಲಿ ಮುಳುಗಿ ಮರುಗುವನು. ॥25॥

(ಶ್ಲೋಕ - 26)

ಮೂಲಮ್

ಕ್ವಚಿನ್ಮಿಥೋ ವ್ಯವ- ಹರನ್ಯತ್ಕಿಂಚಿದ್ಧನಮನ್ಯೇಭ್ಯೋ ವಾ ಕಾಕಿಣಿಕಾಮಾತ್ರಮಪ್ಯ- ಪಹರನ್ ಯತ್ಕಿಂಚಿದ್ವಾ ವಿದ್ವೇಷಮೇತಿ ವಿತ್ತಶಾಠ್ಯಾತ್ ॥

ಅನುವಾದ

ಕೆಲವೊಮ್ಮೆ ಕೊಟ್ಟು-ಕೊಳ್ಳುವ ವ್ಯವಹಾರ ಮಾಡುವಾಗ ಬೇರೆಯವರ ಕವಡೆಯಷ್ಟು ಸ್ವಲ್ಪ ಅಥವಾ ಅದಕ್ಕಿಂತಲೂ ಕಡಿಮೆ ಹಣವನ್ನು ಅಪಹರಿಸಿದರೆ ಈ ಮೋಸದಿಂದ ಅವನ ದ್ವೇಷಕ್ಕೆ ಪಾತ್ರನಾಗುತ್ತಾನೆ. ॥26॥

(ಶ್ಲೋಕ - 27)

ಮೂಲಮ್

ಅಧ್ವನ್ಯಮುಷ್ಮಿನ್ನಿಮ ಉಪಸರ್ಗಾಸ್ತಥಾ ಸುಖ- ದುಃಖರಾಗದ್ವೇಷಭಯಾಭಿಮಾನಪ್ರಮಾದೋನ್ಮಾದ- ಶೋಕಮೋಹಲೋಭಮಾತ್ಸರ್ಯೇರ್ಷ್ಯಾವಮಾನ- ಕ್ಷುತ್ಪಿಪಾಸಾಧಿವ್ಯಾಧಿಜನ್ಮಜರಾಮರಣಾದಯಃ ॥

ಅನುವಾದ

ಎಲೈ ರಾಜನೇ! ಈ ಮಾರ್ಗದಲ್ಲಿ ಹಿಂದೆ ಹೇಳಿದ ವಿಘ್ನಗಳನ್ನಲ್ಲದೆ ಸುಖ-ದುಃಖ, ರಾಗ-ದ್ವೇಷ, ಭಯ, ಅಭಿಮಾನ, ಪ್ರಮಾದ, ಉನ್ಮಾದ, ಶೋಕ, ಮೋಹ, ಲೋಭ, ಮತ್ಸರ, ಈರ್ಷ್ಯೆ ಅಪಮಾನ, ಹಸಿವು-ಬಾಯಾರಿಕೆ, ಆಧಿ-ವ್ಯಾಧಿ, ಹುಟ್ಟು, ಮುಪ್ಪು, ಸಾವು ಮುಂತಾದ ಇನ್ನೂ ಅನೇಕ ವಿಘ್ನಗಳಿವೆ. ॥27॥

(ಶ್ಲೋಕ - 28)

ಮೂಲಮ್

ಕ್ವಾಪಿ ದೇವಮಾಯಯಾ ಸಿಯಾ ಭುಜಲತೋಪಗೂಢಃ ಪ್ರಸ್ಕನ್ನವಿವೇಕವಿಜ್ಞಾನೋ ಯದ್ವಿಹಾರಗೃಹಾರಂಭಾ- ಕುಲಹೃದಯಸ್ತದಾಶ್ರಯಾವಸಕ್ತಸುತದುಹಿತೃಕಲತ್ರ- ಭಾಷಿತಾವಲೋಕವಿಚೇಷ್ಟಿತಾಪಹೃತಹೃದಯ ಆತ್ಮಾನ- ಮಜಿತಾತ್ಮಾಪಾರೇಂಧೇ ತಮಸಿ ಪ್ರಹಿಣೋತಿ ॥

ಅನುವಾದ

(ಈ ಬಹು ವಿಘ್ನಗಳುಳ್ಳ ಮಾರ್ಗದಲ್ಲಿ ಹೀಗೆ ಅಲೆಯುತ್ತಿರುವ ಜೀವನು) ಎಂದೋ ದೇವಮಾಯಾರೂಪಿಣಿಯಾದ ಸ್ತ್ರೀಯಳ ತೋಳ್ತೆಕ್ಕೆಯಲ್ಲಿ ಬಿದ್ದು ವಿವೇಕಹೀನನಾಗುವನು. ಅವಳಿಗಾಗಿ ವಿಹಾರಭವನ ಮುಂತಾದವುಗಳನ್ನು ಒದಗಿಸುವ ಚಿಂತೆಯಲ್ಲಿ ಮುಳುಗಿರುತ್ತಾನೆ. ಅವನ ಆಶ್ರಿತವಾಗಿರುವ ಪುತ್ರರು, ಪುತ್ರಿಯರು ಹಾಗೂ ಬೇರೆ-ಬೇರೆ ಸ್ತ್ರೀಯರ ಸವಿಮಾತು, ಓರೆನೋಟ ಮತ್ತು ಚೇಷ್ಟೆಗಳಲ್ಲಿ ಆಸಕ್ತನಾಗಿ, ಅವರಲ್ಲೇ ಚಿತ್ತವು ಸಿಕ್ಕಿಹಾಕಿಕೊಂಡಿರುವುದರಿಂದ ಅವನು ಇಂದ್ರಿಯಗಳ ಗುಲಾಮನಾಗಿ ಅಪಾರ ಅಂಧಕಾರಮಯ ನರಕದಲ್ಲಿ ಬೀಳುತ್ತಾನೆ. ॥28॥

(ಶ್ಲೋಕ - 29)

ಮೂಲಮ್

ಕದಾಚಿದೀಶ್ವರಸ್ಯ ಭಗವತೋ ವಿಷ್ಣೋಶ್ಚಕ್ರಾತ್ಪರಮಾಣ್ವಾದಿದ್ವಿಪರಾರ್ಧಾಪವರ್ಗಕಾಲೋಪಲಕ್ಷಣಾತ್ಪರಿ-ವರ್ತಿತೇನ ವಯಸಾ ರಂಹಸಾ ಹರತ ಆಬ್ರಹ್ಮತೃಣಸ್ತಂಬಾದೀನಾಂ ಭೂತಾನಾಮನಿಮಿಷತೋ ಮಿಷತಾಂ ವಿತ್ರಸ್ತಹೃದಯಸ್ತಮೇವೇಶ್ವರಂ ಕಾಲಚಕ್ರನಿಜಾಯುಧಂ ಸಾಕ್ಷಾದ್ಭಗವಂತಂ ಯಜ್ಞಪುರುಷಮ್ ಅನಾದೃತ್ಯ ಪಾಖಂಡದೇವತಾಃ ಕಂಕಗೃಧ್ರಬಕವಟಪ್ರಾಯಾ ಆರ್ಯಸಮಯಪರಿಹೃತಾಃ ಸಾಂಕೇತ್ಯೇನಾಭಿಧತ್ತೇ ॥

ಅನುವಾದ

ಕಾಲಚಕ್ರವು ಸಾಕ್ಷಾತ್ ಭಗವಾನ್ ವಿಷ್ಣುವಿನ ಆಯುಧವಾಗಿದೆ. ಅದು ಪರಮಾಣುವಿನಿಂದ ಹಿಡಿದು ದ್ವಿಪರಾರ್ಧ ದವರೆಗೆ ಕ್ಷಣ-ಘಟಿ ಮುಂತಾದ ಅವಯವಗಳಿಂದ ಕೂಡಿದೆ. ಅದು ಎಚ್ಚರವಾಗಿದ್ದು ನಿರಂತರವಾಗಿ ತಿರುಗುತ್ತಾ ಇರುತ್ತದೆ. ಬೇಗ-ಬೇಗನೇ ಬದಲಾಗುತ್ತಿರುವ ಬಾಲ್ಯ, ಯೌವನ ಮುಂತಾದ ಅವಸ್ಥೆಗಳೇ ಅದರ ವೇಗವಾಗಿದೆ. ಅದರ ಮೂಲಕ ಅದು ಬ್ರಹ್ಮನಿಂದ ಹಿಡಿದು ಅತಿಕ್ಷುದ್ರ ತೃಣದವರೆಗಿನ ಎಲ್ಲ ಪ್ರಾಣಿಗಳನ್ನು ನಿರಂತರ ಸಂಹಾರ ಮಾಡುತ್ತಾ ಇರುತ್ತದೆ. ಯಾರೂ ಅದರ ಗತಿ(ವೇಗ)ಯಲ್ಲಿ ಬಾಧೆಯನ್ನೊಡ್ಡಲಾರರು. ಅದಕ್ಕೆ ಭಯಪಟ್ಟು ಕೊಂಡಾದರೂ, ಈ ಕಾಲಚಕ್ರವು ಯಾರ ನಿಜ ಆಯುಧವಾಗಿದೆಯೋ ಆ ಸಾಕ್ಷಾತ್ ಭಗವಾನ್ ಯಜ್ಞಪುರುಷನ ಆರಾಧನೆಯನ್ನು ಬಿಟ್ಟು ಈ ಮಂದಮತಿ ಮನುಷ್ಯನು ಪಾಷಂಡಿಗಳ ವಂಚನೆಗೆ ಸಿಕ್ಕಿ, ಹದ್ದು, ಗೂಗೆ, ಬಕ ಮುಂತಾದ ಸಮೂಹದಂತೆ ಆರ್ಯಶಾಸ್ತ್ರ ಬಹಿಷ್ಕೃತ ದೇವತೆಗಳನ್ನು ಆಶ್ರಯಿಸುತ್ತಾನೆ. ಅವುಗಳನ್ನು ಕೇವಲ ವೇದಬಾಹ್ಯ ಅಪ್ರಾಮಾಣಿಕ ಆಗಮಗಳಲ್ಲೇ ಉಲ್ಲೇಖಿಸಲ್ಪಟ್ಟಿದೆ. ॥29॥

(ಶ್ಲೋಕ - 30)

ಮೂಲಮ್

ಯದಾ ಪಾಖಂಡಿಭಿರಾತ್ಮವಂಚಿತೈಸ್ತೈರುರು ವಂಚಿತೋ ಬ್ರಹ್ಮಕುಲಂ ಸಮಾವಸಂಸ್ತೇಷಾಂ ಶೀಲಮುಪನಯನಾದಿಶ್ರೌತಸ್ಮಾರ್ತಕರ್ಮಾನುಷ್ಠಾನೇನ ಭಗವತೋ ಯಜ್ಞ ಪುರುಷಸ್ಯಾರಾಧನಮೇವ ತದರೋಚಯನ್ ಶೂದ್ರಕುಲಂ ಭಜತೇ ನಿಗಮಾಚಾರೇಶುದ್ಧಿತೋ ಯಸ್ಯ ಮಿಥುನೀಭಾವಃ ಕುಟುಂಬಭರಣಂ ಯಥಾ ವಾನರಜಾತೇಃ ॥

ಅನುವಾದ

ಈ ಪಾಷಂಡರಾದರೋ ಸ್ವತಃ ಆಪತ್ತಿನಲ್ಲೇ ಇದ್ದಾರೆ. ಇವನೂ ಕೂಡ ಅವರ ಮೋಸದಲ್ಲಿ ಸಿಲುಕಿ ದುಃಖಿಯಾದಾಗ ಬ್ರಾಹ್ಮಣರನ್ನು ಶರಣಾಗುತ್ತಾನೆ. ಆದರೆ ಉಪನಯನ ಸಂಸ್ಕಾರದ ಬಳಿಕ ಶ್ರೌತ-ಸ್ಮಾರ್ತ ಕರ್ಮಗಳಿಂದ ಭಗವಾನ್ ಯಜ್ಞಪುರುಷನನ್ನು ಆರಾಧಿಸುವುದು ಮುಂತಾದ ಅವರ ಶಾಸ್ತ್ರೋಕ್ತ ಆಚಾರವು ಇವನಿಗೆ ಸರಿಬೀಳುವುದಿಲ್ಲ. ಅದಕ್ಕಾಗಿ ವೇದೋಕ್ತ ಆಚಾರಕ್ಕನುಕೂಲವಾಗಿ ತನ್ನಲ್ಲಿ ಶುದ್ಧಿ ಇಲ್ಲದ ಕಾರಣ ಇವನು ಕರ್ಮಶೂನ್ಯ ಶೂದ್ರಕುಲದಲ್ಲಿ ಪ್ರವೇಶಿಸುತ್ತಾನೆ. ಅವನ ಸ್ವಭಾವವು ಕಪಿಗಳಂತೆ ಕೇವಲ ಕುಟುಂಬ ಪೋಷಣೆ ಮತ್ತು ಸ್ತ್ರೀ ಸೇವನೆ ಮಾಡುವುದೇ ಆಗಿರುತ್ತದೆ. ॥30॥

(ಶ್ಲೋಕ - 31)

ಮೂಲಮ್

ತತ್ರಾಪಿ ನಿರವರೋಧಃ ಸ್ವೈರೇಣ ವಿಹರನ್ನತಿ- ಕೃಪಣಬುದ್ಧಿರನ್ಯೋನ್ಯಮುಖನಿರೀಕ್ಷಣಾದಿನಾ ಗ್ರಾಮ್ಯ- ಕರ್ಮಣೈವ ವಿಸ್ಮೃತಕಾಲಾವಧಿಃ ॥

ಅನುವಾದ

ಅಲ್ಲಿ ಅಡೆ-ತಡೆಯಿಲ್ಲದೆ ಸ್ವೇಚ್ಛೆಯಿಂದ ವಿಹರಿಸುವುದರಿಂದ ಇವನ ಬುದ್ಧಿಯು ಅತ್ಯಂತ ದೈನ್ಯವನ್ನು ಹೊಂದುವುದು. ಪರಸ್ಪರ ಮುಖನೋಡುತ್ತಿರುವುದು ಮುಂತಾದ ವಿಷಯ-ಭೋಗಗಳಲ್ಲಿ ಸಿಕ್ಕಿಕೊಂಡು ಅವನಿಗೆ ತನ್ನ ಮರಣಕಾಲದ ನೆನಪೂ ಕೂಡ ಇರುವುದಿಲ್ಲ. ॥31॥

(ಶ್ಲೋಕ - 32)

ಮೂಲಮ್

ಕ್ವಚಿದ್ ದ್ರುಮವದೈಹಿಕಾರ್ಥೇಷು ಗೃಹೇಷು ರಂಸ್ಯನ್ಯಥಾ ವಾನರಃ ಸುತದಾರವತ್ಸಲೋ ವ್ಯವಾಯಕ್ಷಣಃ ॥

ಅನುವಾದ

ವೃಕ್ಷಗಳಂತೆ ಐಹಿಕ ಸುಖಗಳ ಫಲವನ್ನು ಮಾತ್ರ ಕೊಡುವ ಮನೆಗಳಲ್ಲೇ ಸುಖವೆಂದು ತಿಳಿದು ವಾನರರಂತೆ ಸ್ತ್ರೀ-ಪುತ್ರಾದಿಗಳಲ್ಲಿಯೇ ಆಸಕ್ತನಾಗಿ ಇವನು ತನ್ನ ಎಲ್ಲ ಸಮಯವನ್ನು ಮೈಥುನಾದಿ ವಿಷಯಭೋಗಗಳಲ್ಲೇ ಕಳೆಯುತ್ತಾನೆ. ॥32॥

(ಶ್ಲೋಕ - 33)

ಮೂಲಮ್

ಏವಮಧ್ವನ್ಯವರುಂಧಾನೋ ಮೃತ್ಯುಗಜಭಯಾತ್ತಮಸಿ ಗಿರಿಕಂದರಪ್ರಾಯೇ ॥

ಅನುವಾದ

ಹೀಗೆ ಪ್ರವೃತ್ತಿಮಾರ್ಗದಲ್ಲಿ ಬಿದ್ದು ಸುಖ-ದುಃಖಗಳನ್ನು ಅನುಭವಿಸುತ್ತಾ ಈ ಜೀವನು ರೋಗರೂಪವಾದ ಗಿರಿ ಗುಹೆಯಲ್ಲಿ ಬಿದ್ದು ಅದರಲ್ಲಿರುವ ಮೃತ್ಯುರೂಪೀ ಮಹಾಗಜಕ್ಕೆ ಹೆದರುತ್ತಿರುತ್ತಾನೆ. ॥33॥

(ಶ್ಲೋಕ - 34)

ಮೂಲಮ್

ಕ್ವಚಿಚ್ಛೀತವಾತಾದ್ಯನೇಕದೈವಿಕಭೌತಿಕಾತ್ಮೀಯಾನಾಂ ದುಃಖಾನಾಂ ಪ್ರತಿನಿವಾರಣೇಕಲ್ಪೋ ದುರಂತವಿಷಯವಿಷಣ್ಣ ಆಸ್ತೇ ॥

ಅನುವಾದ

ಕೆಲವೊಮ್ಮೆ ಚಳಿ, ಗಾಳಿ ಮುಂತಾದ ಅನೇಕ ರೀತಿಯ ಆಧಿದೈವಿಕ, ಆಧಿಭೌತಿಕ ಮತ್ತು ಆಧ್ಯಾತ್ಮಿಕ ದುಃಖಗಳ ನಿವೃತ್ತಿಯನ್ನು ಮಾಡಿಕೊಳ್ಳಲು ಅಸಲನಾದಾಗ ಅಪಾರ ವಿಷಯಗಳ ಚಿಂತೆಗಳಿಂದ ಇವನು ಕಳವಳಪಡುವನು. ॥34॥

(ಶ್ಲೋಕ - 35)

ಮೂಲಮ್

ಕ್ವಚಿನ್ಮಿಥೋ ವ್ಯವಹರನ್ ಯತ್ಕಿಂಚಿದ್ಧನಮುಪಯಾತಿ ವಿತ್ತಶಾಠ್ಯೇನ ॥

ಅನುವಾದ

ಕೆಲವೊಮ್ಮೆ ಪರಸ್ಪರ ಕ್ರಯ-ವಿಕ್ರಯಗಳೇ ಮುಂತಾದ ವ್ಯಾಪಾರ ಮಾಡಿ ಜಿಪುಣತನದಿಂದ ವರ್ತಿಸಿದಾಗ ಇವನಿಗೆ ಸ್ವಲ್ಪ ಹಣವೂ ಕೈಸೇರುತ್ತದೆ. ॥35॥

(ಶ್ಲೋಕ - 36)

ಮೂಲಮ್

ಕ್ವಚಿತ್ ಕ್ಷೀಣಧನಃ ಶಯ್ಯಾಸನಾಶನಾದ್ಯುಪಭೋಗವಿಹೀನೋ ಯಾವದಪ್ರತಿಲಬ್ಧಮನೋರಥೋಪಗತಾದಾನೇವಸಿತಮತಿಸ್ತತಸ್ತತೋವಮಾನಾದೀನಿ ಜನಾದಭಿಲಭತೇ ॥

ಅನುವಾದ

ಕೆಲವೊಮ್ಮೆ ಧನವು ನಷ್ಟವಾಗಿ ಹೋಗಿ ಇವನ ಬಳಿ ಮಲಗಲು, ಕುಳಿತುಕೊಳ್ಳಲು ಮತ್ತು ತಿನ್ನುವುದೇ ಮುಂತಾದ ಯಾವ ಸಾಮಗ್ರಿಯೂ ಇರದಿದ್ದಾಗ, ತನಗೆ ಇಷ್ಟವಾದ ಭೋಗಗಳು ಸಿಗದಿರುವಾಗ ಅವನ್ನು ಕಳ್ಳತನವೇ ಮುಂತಾದ ಕೆಟ್ಟ ಉಪಾಯಗಳಿಂದ ಪಡೆಯಲು ನಿಶ್ಚಯಿಸುವನು. ಇದರಿಂದ ಅವನು ಅಲ್ಲಲ್ಲಿ ಬೇರೆಯವರ ಕೈಯಲ್ಲಿ ತುಂಬಾ ಅಪಮಾನಿತನಾಗಬೇಕಾಗುತ್ತದೆ. ॥36॥

(ಶ್ಲೋಕ - 37)

ಮೂಲಮ್

ಏವಂ ವಿತ್ತವ್ಯತಿಷಂಗವಿವೃದ್ಧವೈರಾನುಬಂಧೋಪಿ ಪೂರ್ವವಾಸನಯಾ ಮಿಥ ಉದ್ವಹತ್ಯಥಾಪವಹತಿ ॥

ಅನುವಾದ

ಹೀಗೆ ಧನದ ಆಸಕ್ತಿಯಿಂದ ಪರಸ್ಪರ ವೈರಭಾವವು ಹೆಚ್ಚಿದಾಗಲೂ ಕೂಡ ಇವನು ತನ್ನ ಹಿಂದಿನ ವಾಸನೆಗಳಿಂದ ವಿವಶನಾಗಿ ತಮ್ಮ-ತಮ್ಮಲ್ಲಿ ವಿವಾಹಾದಿ ಸಂಬಂಧವನ್ನು ಮಾಡುತ್ತಾ-ಬಿಡುತ್ತಾ ಇರುತ್ತಾನೆ. ॥37॥

ಮೂಲಮ್

(ಶ್ಲೋಕ - 38)
ಏತಸ್ಮಿನ್ ಸಂಸಾರಾಧ್ವನಿ ನಾನಾಕ್ಲೇಶೋಪಸರ್ಗಬಾಧಿತ ಆಪನ್ನವಿಪನ್ನೋಯತ್ರ ಯಸ್ತಮು ಹ ವಾವೇತರಸ್ತತ್ರ ವಿಸೃಜ್ಯ ಜಾತಂ ಜಾತಮುಪಾದಾಯ ಶೋಚನ್ಮುಹ್ಯನ್ ಬಿಭ್ಯದ್ವಿವದನ್ ಕ್ರಂದನ್ ಸಂಹೃಷ್ಯನ್ಗಾಯನ್ನಹ್ಯಮಾನಃ ಸಾಧುವರ್ಜಿತೋ ನೈವಾವರ್ತತೇದ್ಯಾಪಿ ಯತ ಆರಬ್ಧ ಏಷ ನರಲೋಕಸಾರ್ಥೋ ಯಮಧ್ವನಃ ಪಾರಮುಪದಿಶಂತಿ॥

ಅನುವಾದ

ಈ ಸಂಸಾರ ಮಾರ್ಗದಲ್ಲಿ ನಡೆಯುವ ಈ ಜೀವನು ಅನೇಕ ಪ್ರಕಾರದ ಕ್ಲೇಶ ಮತ್ತು ವಿಘ್ನ-ಬಾಧೆಗಳಿಂದ ತೊಂದರೆಗೊಳ ಗಾದರೂ, ಮಾರ್ಗದಲ್ಲಿ ಯಾರ ಮೇಲಾದರೂ ಆಪತ್ತು ಬಂದರೆ ಅಥವಾ ಯಾರಾದರೂ ಸತ್ತರೆ ಅವನನ್ನು ಅಲ್ಲೇ ಬಿಟ್ಟುಬಿಡುತ್ತಾನೆ ಮತ್ತು ಹೊಸದಾಗಿ ಹುಟ್ಟಿದವರೊಂದಿಗೆ ಕೂಡಿಕೊಳ್ಳುತ್ತಾನೆ. ಕೆಲವೊಮ್ಮೆ ಯಾರಿಗಾದರೂ ಶೋಕ ಪಡುತ್ತಾನೆ, ಯಾರದೋ ದುಃಖ ನೋಡಿ ಮೂರ್ಛಿತ ನಾಗುತ್ತಾನೆ. ಯಾರದಾದರೂ ವಿಯೋಗ ಉಂಟಾಗುವ ಆಶಂಕೆಯಿಂದ ಭಯಗೊಳ್ಳುವನು. ಯಾರೊಂದಿಗಾದರೂ ಜಗಳ ಕಾಯುತ್ತಾನೆ. ಎಲ್ಲಾದರೂ ಯಾವುದಾದರೂ ಮನಸ್ಸಿಗೆ ಅನುಕೂಲವಾದ ಮಾತು ನಡೆದರೆ ಸಂತೋಷದಿಂದ ಉಬ್ಬಿ ಹೋಗುತ್ತಾನೆ. ಕೆಲವೊಮ್ಮೆ ಹಾಡತೊಡಗು ವನು. ಕೆಲವೊಮ್ಮೆ ಹಾಗೆ ಅನುಕೂಲವಾಗಿ ಮಾತಾಡಿದವರಿಗಾಗಿ ಬಂಧನಕ್ಕೆ ಸಿಲುಕಲು ಹಿಂಜರಿಯುವುದಿಲ್ಲ. ಸಾಧುಗಳು ಇವನ ಬಳಿಗೆ ಎಂದಿಗೂ ಬರುವುದಿಲ್ಲ. ಇವನು ಸಾಧುಸಂಗದಿಂದ ಸದಾಕಾಲ ವಂಚಿತನಾಗಿರುತ್ತಾನೆ. ಹೀಗೆ ಇವನು ನಿರಂತರ ಮುಂದರಿಯುತ್ತಾ ಇರುತ್ತಾನೆ. ಎಲ್ಲಿಂದ ಈ ಯಾತ್ರೆಯ ಪ್ರಾರಂಭವಾಯಿತೋ, ಯಾರನ್ನು ಈ ಯಾತ್ರೆಯ ಕೊನೆಯ ನೆಲೆ ಎಂದು ಹೇಳುತ್ತಾರೋ, ಆ ಪರಮಾತ್ಮನ ಬಳಿಗೆ ಇವನು ಇಂದಿನವರೆಗೆ ಮರಳಲಿಲ್ಲ. ॥38॥

(ಶ್ಲೋಕ - 39)

ಮೂಲಮ್

ಯದಿದಂ ಯೋಗಾನುಶಾಸನಂ ನ ವಾ ಏತದವರುಂಧತೇ ಯನ್ನ್ಯಸ್ತದಂಡಾ ಮುನಯ ಉಪಶಮಶೀಲಾ ಉಪರ- ತಾತ್ಮಾನಃ ಸಮವಗಚ್ಛಂತಿ ॥

ಅನುವಾದ

ಪರಮಾತ್ಮನವರೆಗಾದರೂ ಯೋಗಶಾಸ್ತ್ರದ ಗತಿಯೂ ಇಲ್ಲ. ಎಲ್ಲ ಪ್ರಕಾರದ ದಂಡ (ಶಾಸನ)ಗಳನ್ನು ತ್ಯಾಗಮಾಡಿ ಬಿಟ್ಟಿರುವ, ನಿವೃತ್ತಿಪರಾಯಣರೂ ಆತ್ಮ ಸಂಯಮಿಗಳೂ ಆದ ಮುನಿಜನರು ಅವನನ್ನು ಪಡೆದು ಕೊಳ್ಳಬಲ್ಲರು. ॥39॥

(ಶ್ಲೋಕ - 40)

ಮೂಲಮ್

ಯದಪಿ ದಿಗಿಭಜಯಿನೋ ಯಜ್ವಿನೋ ಯೇ ವೈ ರಾಜರ್ಷಯಃ ಕಿಂ ತು ಪರಂ ಮೃಧೇ ಶಯೀರನ್ನಸ್ಯಾಮೇವ ಮಮೇಯಮಿತಿ ಕೃತವೈರಾನುಬಂಧಾ ಯಾಂ ವಿಸೃಜ್ಯ ಸ್ವಯಮುಪಸಂಹೃತಾಃ ॥

ಅನುವಾದ

ದಿಗ್ಗಜಗಳನ್ನು ಗೆದ್ದುಕೊಂಡು ದೊಡ್ಡ-ದೊಡ್ಡ ಯಜ್ಞಗಳ ಅನುಷ್ಠಾನಗಳನ್ನು ಮಾಡುವ ರಾಜರ್ಷಿಗಳಿಗೂ ಅಲ್ಲಿಯವರೆಗೆ ಗತಿಯು ಇರುವುದಿಲ್ಲ. ಅವರು ರಣರಂಗದಲ್ಲಿ ಶತ್ರುಗಳೊಡನೆ ಹೋರಾಡುತ್ತಾ ಪ್ರಾಣಗಳನ್ನು ಕಳೆದುಕೊಳ್ಳುವರು. ಯಾವ ಭೂಮಿಗಾಗಿ ‘ಇದು ನನ್ನದು’ ಎಂದು ಅಭಿಮಾನಪಟ್ಟು ವೈರಕಟ್ಟಿಕೊಂಡಿದ್ದರೋ ಆ ಪೃಥಿವಿಯಲ್ಲೇ ತನ್ನ ಶರೀರವನ್ನು ತ್ಯಜಿಸಿ ಪರಲೋಕಕ್ಕೆ ಹೊರಟುಹೋಗುತ್ತಾರೆ. ಈ ಸಂಸಾರದಿಂದ ಅವರೂ ಪಾರಾಗಿ ಹೋಗುವುದಿಲ್ಲ. ॥40॥

(ಶ್ಲೋಕ - 41)

ಮೂಲಮ್

ಕರ್ಮವಲ್ಲೀಮವಲಂಬ್ಯ ತತ ಆಪದಃ ಕಥಂಚಿನ್ನರಕಾದ್ವಿಮುಕ್ತಃ ಪುನರಪ್ಯೇವಂ ಸಂಸಾರಾಧ್ವನಿ ವರ್ತಮಾನೋ ನರಲೋಕಸಾರ್ಥಮುಪ- ಯಾತಿ ಏವಮುಪರಿ ಗತೋಪಿ ॥

ಅನುವಾದ

ತಮ್ಮ ಪುಣ್ಯಕರ್ಮರೂಪಿಯಾದ ಲತೆಯನ್ನು ಆಶ್ರಯಿಸಿ ಯಾವ ರೀತಿಯಿಂದಾದರೂ ಈ ಜೀವನು ಈ ಆಪತ್ತು ಗಳಿಂದ ಅಥವಾ ನರಕದಿಂದ ಬಿಡುಗಡೆಯು ಹೊಂದಿದರೂ ಪುನಃ ಇದೇ ಸಂಸಾರಮಾರ್ಗದಲ್ಲಿ ಅಲೆಯುತ್ತಾ ಈ ಜನ ಸಮುದಾಯದಲ್ಲಿ ಸೇರಿಕೊಳ್ಳುವನು. ಸ್ವರ್ಗಾದಿ ಮೇಲಿನ ಲೋಕಗಳಿಗೆ ಹೋಗುವವರ ಸ್ಥಿತಿಯು ಇದೇ ಆಗಿದೆ. ॥41॥

(ಶ್ಲೋಕ - 42)

ಮೂಲಮ್

ತಸ್ಯೇದಮುಪಗಾಯಂತಿ ಆರ್ಷಭಸ್ಯೇಹ ರಾಜರ್ಷೇರ್ಮನಸಾಪಿ ಮಹಾತ್ಮನಃ ।
ನಾನುವರ್ತ್ಮಾರ್ಹತಿ ನೃಪೋ ಮಕ್ಷೀಕೇವ ಗರುತ್ಮತಃ ॥

ಅನುವಾದ

ಮಹಾರಾಜ ಪರೀಕ್ಷಿತನೇ! ರಾಜರ್ಷಿಯಾದ ಭರತನ ವಿಷಯದಲ್ಲಿ ಪಂಡಿತರಾದವರು ಹೀಗೆ ಹೇಳುತ್ತಾರೆ ಗರುಡನೊಡನೆ ಒಂದು ನೊಣವು ಹೇಗೆ ಸ್ಪರ್ಧಿಸಲಾರದೋ ಹಾಗೆಯೇ ರಾಜರ್ಷಿ ಮಹಾತ್ಮಾ ಭರತನ ಮಾರ್ಗವನ್ನು ಬೇರೆ ಯಾವ ರಾಜನೂ ಮನಸ್ಸಿನಿಂದಲೂ ಅನುಸರಿಸಲಾರನು. ॥42॥

(ಶ್ಲೋಕ - 43)

ಮೂಲಮ್

ಯೋ ದುಸ್ತ್ಯಜಾನ್ ದಾರಸುತಾನ್ಸುಹೃದ್ರಾಜ್ಯಂ ಹೃದಿಸ್ಪೃಶಃ ।
ಜಹೌ ಯುವೈವ ಮಲವದುತ್ತಮಶ್ಲೋಕಲಾಲಸಃ ॥

ಅನುವಾದ

ಅವನು ಪುಣ್ಯಶ್ಲೋಕನಾದ ಶ್ರೀಹರಿಯಲ್ಲಿ ಅನುರಕ್ತನಾಗಿ ಬೇರೆಯವರಿಗೆ ತ್ಯಾಗ ಮಾಡಲು ಬಹುಕಷ್ಟತರವಾದ ಅತಿಮನೋಹರವಾದ ಪತ್ನೀ, ಪುತ್ರ, ರಾಜ್ಯಾದಿಗಳನ್ನು ಯುವಕನಾಗಿರುವಾಗಲೇ ಮಲದಂತೆ ತ್ಯಜಿಸಿಬಿಟ್ಟಿದ್ದನು. ॥43॥

(ಶ್ಲೋಕ - 44)

ಮೂಲಮ್

ಯೋ ದುಸ್ತ್ಯಜಾನ್ ಕ್ಷಿತಿಸುತಸ್ವಜನಾರ್ಥದಾರಾನ್
ಪ್ರಾರ್ಥ್ಯಾಂ ಶ್ರಿಯಂ ಸುರವರೈಃ ಸದಯಾವಲೋಕಾಮ್ ।
ನೈಚ್ಛನ್ನೃಪಸ್ತದುಚಿತಂ ಮಹತಾಂ ಮಧುದ್ವಿಟ್
ಸೇವಾನುರಕ್ತಮನಸಾಮಭವೋಪಿ ಲ್ಗುಃ ॥

ಅನುವಾದ

ತ್ಯಜಿಸಲು ಅತಿಕಷ್ಟವಾಗಿರುವ ರಾಜ್ಯ, ಪುತ್ರರು, ಸ್ವಜನರು, ಸಂಪತ್ತು ಮತ್ತು ಪತ್ನೀಯನ್ನೂ ಹಾಗೂ ಯಾವಳ ದಯಾಕಟಾಕ್ಷಕ್ಕೆ ಬೀಳಬೇಕೆಂದು ದೊಡ್ಡ-ದೊಡ್ಡ ದೇವತೆ ಗಳು ಹಾತೊರೆಯುತ್ತಿರುತ್ತಾರೋ ಅಂತಹ ಲಕ್ಷ್ಮಿಯನ್ನೂ ಕೂಡ ಲೇಶ ಮಾತ್ರವೂ ಇಚ್ಛಿಸಲಿಲ್ಲವೋ ಅಂತಹ ಭರತ ಚಕ್ರವರ್ತಿಗೆ ಇದೆಲ್ಲವೂ ಉಚಿತವೇ ಆಗಿದೆ. ಏಕೆಂದರೆ, ಯಾವ ಮಹಾನುಭಾವರ ಚಿತ್ತವು ಭಗವಾನ್ ಮಧುಸೂದನನ ಸೇವೆಯಲ್ಲಿ ಅನುರಕ್ತವಾಗಿದೆಯೋ ಅವರ ದೃಷ್ಟಿಯಲ್ಲಿ ಮೋಕ್ಷಪದವೂ ಅತ್ಯಂತ ತುಚ್ಛವಾಗಿದೆ. ॥44॥

(ಶ್ಲೋಕ - 45)

ಮೂಲಮ್

ಯಜ್ಞಾಯ ಧರ್ಮಪತಯೇ ವಿಧಿನೈಪುಣಾಯ
ಯೋಗಾಯ ಸಾಂಖ್ಯಶಿರಸೇ ಪ್ರಕೃತೀಶ್ವರಾಯ ।
ನಾರಾಯಣಾಯ ಹರಯೇ ನಮ ಇತ್ಯುದಾರಂ
ಹಾಸ್ಯನ್ಮೃಗತ್ವಮಪಿ ಯಃ ಸಮುದಾಜಹಾರ ॥

ಅನುವಾದ

ಅವನು ಮೃಗಶರೀರವನ್ನು ಬಿಡಲು ಇಚ್ಛಿಸಿದಾಗ ಉಚ್ಚಸ್ವರದಲ್ಲಿ ಧರ್ಮವನ್ನು ರಕ್ಷಿಸುತ್ತಿರುವವನೂ, ಧರ್ಮಾನುಷ್ಠಾನದಲ್ಲಿ ನಿಪುಣನೂ, ಯೋಗ ಗಮ್ಯನೂ, ಸಾಂಖ್ಯದ ಪ್ರತಿಪಾದಕನೂ, ಪ್ರಕೃತಿಗೆ ಅಧೀಶ್ವರನೂ, ಆದ ಯಜ್ಞಮೂರ್ತಿ ಸರ್ವಾಂತರ್ಯಾಮಿ ಶ್ರೀಹರಿಗೆ ನಮಸ್ಕಾರವು ಎಂದು ಹೇಳಿದ್ದನು.॥45॥

(ಶ್ಲೋಕ - 46)

ಮೂಲಮ್

ಯ ಇದಂ ಭಾಗವತಸಭಾಜಿತಾವದಾತಗುಣ- ಕರ್ಮಣೋ ರಾಜರ್ಷೇರ್ಭರತಸ್ಯಾನುಚರಿತಂ ಸ್ವಸ್ತ್ಯಯ- ನಮಾಯುಷ್ಯಂ ಧನ್ಯಂ ಯಶಸ್ಯಂ ಸ್ವರ್ಗ್ಯಾಪವರ್ಗ್ಯಂ ವಾನುಶೃಣೋತ್ಯಾಖ್ಯಾಸ್ಯತ್ಯಭಿನಂದತಿ ಚ ಸರ್ವಾ ಏವಾ- ಶಿಷ ಆತ್ಮನ ಆಶಾಸ್ತೇ ನ ಕಾಂಚನ ಪರತ ಇತಿ ॥

ಅನುವಾದ

ಎಲೈ ರಾಜೇಂದ್ರಾ! ರಾಜರ್ಷಿ ಭರತನ ಪವಿತ್ರ ಗುಣ-ಕರ್ಮಗಳನ್ನು ಭಕ್ತರೂ ಕೂಡ ಪ್ರಶಂಸಿಸುತ್ತಾರೆ. ಅವನ ಈ ಪವಿತ್ರ ಚರಿತ್ರವು ಶ್ರೇಯಸ್ಕರವೂ, ಆಯುಸ್ಸು, ಸಂಪತ್ತನ್ನು ವೃದ್ಧಿಪಡಿಸುವುದೂ, ಲೋಕದಲ್ಲಿ ಸತ್ಕೀರ್ತಿಯನ್ನು ಹೆಚ್ಚಿಸು ವಂತಹುದೂ ಮತ್ತು ಸ್ವರ್ಗ-ಮೋಕ್ಷಗಳನ್ನು ದೊರಕಿಸಿಕೊಡುವುದೂ ಆಗಿದೆ. ಇದನ್ನು ಕೇಳುವವನೂ, ಹೇಳುವವನೂ ಮತ್ತು ಇದನ್ನು ಅಭಿನಂದಿಸುವವನೂ ಆದವನ ಎಲ್ಲ ಕಾಮನೆಗಳು ಪೂರ್ಣವಾಗಿ ಹೋಗುತ್ತವೆ. ಬೇರೆಯವರಲ್ಲಿ ಅವನಿಗೆ ಏನನ್ನೂ ಬೇಡಬೇಕಾಗಿ ಬರುವುದಿಲ್ಲ. ॥46॥

ಅನುವಾದ (ಸಮಾಪ್ತಿಃ)

ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು. ॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಭರತೋಪಾಖ್ಯಾನೇ ಪಾರೋಕ್ಷ್ಯವಿವರಣಂ ನಾಮ ಚತುರ್ದಶೋಽಧ್ಯಾಯಃ ॥14॥