೧೩

[ಹದಿಮೂರನೆಯ ಅಧ್ಯಾಯ]

ಭಾಗಸೂಚನಾ

ಭರತಮುನಿಯಿಂದ ಭವಾಟವಿಯ ವರ್ಣನೆ ರಹೂಗಣನ ಸಂಶಯ ಪರಿಹಾರ

(ಶ್ಲೋಕ - 1)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ದುರತ್ಯಯೇಧ್ವನ್ಯಜಯಾ ನಿವೇಶಿತೋ
ರಜಸ್ತಮಃಸತ್ತ್ವವಿಭಕ್ತಕರ್ಮದೃಕ್ ।
ಸ ಏಷ ಸಾರ್ಥೋರ್ಥಪರಃ ಪರಿಭ್ರಮನ್
ಭವಾಟವೀಂ ಯಾತಿ ನ ಶರ್ಮ ವಿಂದತಿ ॥

ಅನುವಾದ

ಜಡಭರತನು ಹೇಳುತ್ತಾನೆ — ಎಲೈ ರಾಜೇಂದ್ರನೇ! ಈ ಜೀವಸಮುದಾಯವು ಸುಖರೂಪವಾದ ಧನದಲ್ಲಿ ಆಸಕ್ತವಾಗಿ ದೇಶ-ದೇಶಾಂತರದಲ್ಲಿ ಸುತ್ತಾಡಿ ವ್ಯಾಪಾರ ಮಾಡು ವಂತಹ ವ್ಯಾಪಾರಿಗಳ ಗುಂಪಿನಂತೆ ಇದೆ. ಇದನ್ನು ಮಾಯೆಯು ದುಸ್ತರವಾದ ಪ್ರವೃತ್ತಿಮಾರ್ಗದಲ್ಲಿ ತೊಡಗಿಸಿದೆ. ಅದಕ್ಕಾಗಿ ಇದರ ದೃಷ್ಟಿಯು ಸಾತ್ತ್ವಿಕ, ರಾಜಸ, ತಾಮಸ ಎಂಬ ಭೇದದಿಂದ ನಾನಾ ವಿಧದ ಕರ್ಮಗಳ ಕಡೆಗೆ ಹೋಗುತ್ತಿರುತ್ತದೆ. ಆ ಕರ್ಮಗಳಲ್ಲಿ ಅಲೆಯುತ್ತಾ-ಅಲೆಯುತ್ತಾ ಈ ಸಂಸಾರ ರೂಪವಾದ ಗೊಂಡಾರಣ್ಯಕ್ಕೆ ತಲುಪುತ್ತದೆ. ಅಲ್ಲಿ ಅದಕ್ಕೆ ಸ್ವಲ್ಪವೂ ನೆಮ್ಮದಿಯು ಸಿಗುವುದಿಲ್ಲ. ॥1॥

(ಶ್ಲೋಕ - 2)

ಮೂಲಮ್

ಯಸ್ಯಾಮಿಮೇ ಷಣ್ನರದೇವ ದಸ್ಯವಃ
ಸಾರ್ಥಂ ವಿಲುಂಪಂತಿ ಕುನಾಯಕಂ ಬಲಾತ್ ।
ಗೋಮಾಯವೋ ಯತ್ರ ಹರಂತಿ ಸಾರ್ಥಿಕಂ
ಪ್ರಮತ್ತಮಾವಿಶ್ಯ ಯಥೋರಣಂ ವೃಕಾಃ ॥

ಅನುವಾದ

ಮಹಾರಾಜನೇ! ಆ ಅರಣ್ಯದಲ್ಲಿ ಆರುಕಳ್ಳರಿದ್ದಾರೆ. ಈ ವ್ಯಾಪಾರಿಗಳ ತಂಡದ ನಾಯಕನು ಅತಿದುಷ್ಟನಾಗಿರುವನು. ಅವನ ನೇತೃತ್ವದಲ್ಲಿ ಇವನು ಅಲ್ಲಿಗೆ ತಲುಪಿದಾಗ ಈ ದರೋಡೆ ಕೋರರು ಬಲಾತ್ಕಾರದಿಂದ ಇವನ ಎಲ್ಲ ಸಂಪತ್ತನ್ನು ಲೂಟಿಮಾಡುತ್ತಾರೆ. ತೋಳಗಳು ಕುರಿಯ ಮಂದೆಯಲ್ಲಿ ನುಗ್ಗಿ ಅವನ್ನು ಎಳೆದುಕೊಂಡು ಹೋಗುವಂತೆ, ಅವುಗಳ ಜೊತೆಯಲ್ಲಿರುವ ನರಿಗಳು ಇವನು ಅಸಾವಧಾನ ವೆಂದರಿತು ಇವನ ಧನವನ್ನು ಅತ್ತ-ಇತ್ತ ಸೆಳೆದಾಡುತ್ತವೆ. ॥2॥

(ಶ್ಲೋಕ - 3)

ಮೂಲಮ್

ಪ್ರಭೂತವೀರುತ್ತೃಣಗುಲ್ಮಗಹ್ವರೇ
ಕಠೋರದಂಶೈರ್ಮಶಕೈರುಪದ್ರುತಃ ।
ಕ್ವಚಿತ್ತು ಗಂಧರ್ವಪುರಂ ಪ್ರಪಶ್ಯತಿ
ಕ್ವಚಿತ್ಕ್ವಚಿಚ್ಚಾಶುರಯೋಲ್ಮುಕಗ್ರಹಮ್ ॥

ಅನುವಾದ

ಆ ಕಾಡು ಬಹಳಷ್ಟು ಲತೆ, ಹುಲ್ಲು, ಪೊದೆಗಳಿಂದ ನಿಬಿಡವಾಗಿದ್ದು ತುಂಬಾ ದುರ್ಗಮವಾಗಿದೆ. ಅದರಲ್ಲಿ ಕ್ರೂರವಾದ ಕಾಡುಕೋಣ, ಕಾಡುಸೊಳ್ಳೆಗಳು ಇವನನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ. ಅಲ್ಲಿ ಇವನಿಗೆ ಕೆಲವೊಮ್ಮೆ ಗಂಧರ್ವನಗರವು ಕಂಡುಬಂದರೆ, ಕೆಲವೊಮ್ಮೆ ಥಳ-ಥಳಿಸುವ ಕೊಳ್ಳಿ-ಪಿಶಾಚಿಗಳೂ ಕಣ್ಮುಂದೆ ಬಂದು ಬಿಡುತ್ತವೆ. ॥3॥

(ಶ್ಲೋಕ - 4)

ಮೂಲಮ್

ನಿವಾಸತೋಯದ್ರವಿಣಾತ್ಮಬುದ್ಧಿ-
ಸ್ತತಸ್ತತೋ ಧಾವತಿ ಭೋ ಅಟವ್ಯಾಮ್ ।
ಕ್ವಚಿಚ್ಚ ವಾತ್ಯೋತ್ಥಿತಪಾಂಸುಧೂಮ್ರಾ
ದಿಶೋ ನ ಜಾನಾತಿ ರಜಸ್ವಲಾಕ್ಷಃ ॥

ಅನುವಾದ

ಈ ವ್ಯಾಪಾರಿ ಸಮುದಾಯವು ಈ ಕಾಡಿನಲ್ಲಿ ವಾಸಸ್ಥಾನ, ನೀರು ಮತ್ತು ಧನಾದಿಗಳಲ್ಲಿ ಆಸಕ್ತವಾಗಿ ಅತ್ತ-ಇತ್ತ ಅಲೆಯುತ್ತಿರುತ್ತದೆ. ಕೆಲಮೊಮ್ಮೆ ಬಿರುಗಾಳಿಯಿಂದ ಎದ್ದಿರುವ ಧೂಳಿನಿಂದ ಎಲ್ಲ ದಿಕ್ಕುಗಳು ಮುಚ್ಚಿದಂತೆ ಆಗುತ್ತವೆ. ಮತ್ತು ಇವನ ಕಣ್ಣುಗಳಲ್ಲಿಯೂ ತುಂಬಿಹೋಗುತ್ತದೆ. ಆಗ ಇವನಿಗೆ ದಿಗ್ಭ್ರಮೆಯುಂಟಾಗುತ್ತದೆ. ॥4॥

(ಶ್ಲೋಕ - 5)

ಮೂಲಮ್

ಅದೃಶ್ಯಝಿಲ್ಲೀಸ್ವನಕರ್ಣಶೂಲ
ಉಲೂಕವಾಗ್ಭಿರ್ವ್ಯಥಿತಾಂತರಾತ್ಮಾ ।
ಅಪುಣ್ಯವೃಕ್ಷಾನ್ ಶ್ರಯತೇ ಕ್ಷುಧಾರ್ದಿತೋ
ಮರೀಚಿತೋಯಾನ್ಯಭಿಧಾವತಿ ಕ್ವಚಿತ್ ॥

ಅನುವಾದ

ಕೆಲವೊಮ್ಮೆ ಇವನಿಗೆ ಕಾಣಸಿಗದಿರುವ ಝಿಲ್ಲೀಕ್ರಿಮಿಗಳ ಕರ್ಣಕರ್ಕಶವಾದ ಶಬ್ದಗಳು ಕೇಳಿಸುತ್ತಿದ್ದರೆ, ಕೆಲವೊಮ್ಮೆ ಗೂಬೆಗಳ ಕೂಗಿನಿಂದ ಇವನ ಚಿತ್ತವು ದುಃಖಿತವಾಗುತ್ತದೆ. ಕೆಲವೊಮ್ಮೆ ಇವನಿಗೆ ಹಸಿವು ಕಾಡಿದಾಗ ಇವನು ನಿಂದನೀಯ ವೃಕ್ಷಗಳನ್ನು ಆಶ್ರಯಿಸ ತೊಡಗುವನು. ಕೆಲವೊಮ್ಮೆ ಬಾಯರಿಕೆಯಿಂದ ಬಳಲಿದಾಗ ಬಿಸಿಲ್ಗುದುರೆಯ ಕಡೆಗೆ ಓಡತೊಡಗುವನು. ॥5॥

(ಶ್ಲೋಕ - 6)

ಮೂಲಮ್

ಕ್ವಚಿದ್ವಿತೋಯಾಃ ಸರಿತೋಭಿಯಾತಿ
ಪರಸ್ಪರಂ ಚಾಲಷತೇ ನಿರಂಧಃ ।
ಆಸಾದ್ಯ ದಾವಂ ಕ್ವಚಿದಗ್ನಿತಪ್ತೋ
ನಿರ್ವಿದ್ಯತೇ ಕ್ವ ಚ ಯಕ್ಷೈರ್ಹೃತಾಸುಃ ॥

ಅನುವಾದ

ಕೆಲವೊಮ್ಮೆ ನೀರಿಲ್ಲದ ನದಿಗಳ ಕಡೆಗೆ ಹೋಗುತ್ತಾನೆ. ಕೆಲವೊಮ್ಮೆ ಅನ್ನವು ಸಿಗದಿದ್ದಾಗ ಪರಸ್ಪರ ಒಬ್ಬರ ನ್ನೊಬ್ಬರು ಭೋಜನವನ್ನು ಬಯಸುತ್ತಾರೆ. ಕೆಲವೊಮ್ಮೆ ಕಾಡು ಗಿಚ್ಚಿನಲ್ಲಿ ನುಗ್ಗಿ ಬೆಂಕಿಯಿಂದ ಬೆಂದುಹೋಗುತ್ತಾರೆ. ಕೆಲವೊಮ್ಮೆ ಯಕ್ಷರು ಇವನ ಪ್ರಾಣಗಳನ್ನು ಎಳೆದಾಡ ತೊಡಗಿದಾಗ ಇವನು ದುಃಖಿತನಾಗುವನು. ॥6॥

(ಶ್ಲೋಕ - 7)

ಮೂಲಮ್

ಶೂರೈರ್ಹೃತಸ್ವಃ ಕ್ವ ಚ ನಿರ್ವಿಣ್ಣಚೇತಾಃ
ಶೋಚನ್ ವಿಮುಹ್ಯನ್ನುಪಯಾತಿ ಕಶ್ಮಲಮ್ ।
ಕ್ವಚಿಚ್ಚ ಗಂಧರ್ವಪುರಂ ಪ್ರವಿಷ್ಟಃ
ಪ್ರಮೋದತೇ ನಿರ್ವೃತವನ್ಮುಹೂರ್ತಮ್ ॥

ಅನುವಾದ

ಕೆಲವೊಮ್ಮೆ ತನ್ನಿಂದ ಬಲಿಷ್ಠರಾದವರು ಇವನ ಧನವನ್ನು ಕಸಿದುಕೊಂಡಾಗ ಇವನು ದುಃಖಿತನಾಗಿ ಶೋಕ ಮತ್ತು ಮೋಹದಿಂದ ಎಚ್ಚರತಪ್ಪುವನು. ಕೆಲವೊಮ್ಮೆ ಗಂಧರ್ವನಗರವನ್ನು ತಲುಪಿ ಒಂದು ಕ್ಷಣವಾದರೂ ಎಲ್ಲ ದುಃಖಗಳನ್ನು ಮರೆತು ಸಂತೋಷಪಡುವನು. ॥7॥

(ಶ್ಲೋಕ - 8)

ಮೂಲಮ್

ಚಲನ್ಕ್ವಚಿತ್ಕಂಟಕಶರ್ಕರಾಂಘ್ರಿ-
ರ್ನಗಾರುರುಕ್ಷುರ್ವಿಮನಾ ಇವಾಸ್ತೇ ।
ಪದೇ ಪದೇಭ್ಯಂತರವಹ್ನಿನಾರ್ದಿತಃ
ಕೌಟುಂಬಿಕಃ ಕ್ರುಧ್ಯತಿ ವೈ ಜನಾಯ ॥

ಅನುವಾದ

ಕೆಲವೊಮ್ಮೆ ಪರ್ವತಗಳ ಮೇಲೆ ಹತ್ತಲು ಬಯಸಿದರೆ ಕಲ್ಲು-ಮುಳ್ಳು ಗಳಿಂದ ಕಾಲು ಜರಡಿಯಂತಾಗಿ ಖಿನ್ನನಾಗುವನು. ಕುಟುಂಬವು ದೊಡ್ಡದಾಗಿ ಬೆಳೆದು ಜೀವಿಕೆಯು ನಡೆಯದಿದ್ದಾಗ ಹಸಿವಿನ ಬಾಧೆಯಿಂದ ತನ್ನ ಬಂಧು-ಬಾಂಧವರ ಮೇಲೆ ರೇಗತೊಡಗುತ್ತಾನೆ. ॥8॥

(ಶ್ಲೋಕ - 9)

ಮೂಲಮ್

ಕ್ವಚಿನ್ನಿಗೀರ್ಣೋಜಗರಾಹಿನಾ ಜನೋ
ನಾವೈತಿ ಕಿಂಚಿದ್ವಿಪಿನೇಪವಿದ್ಧಃ ।
ದಷ್ಟಃ ಸ್ಮ ಶೇತೇ ಕ್ವ ಚ ದಂದಶೂಕೈ-
ರಂಧೋಂಧಕೂಪೇ ಪತಿತಸ್ತಮಿಸ್ರೇ ॥

ಅನುವಾದ

ಕೆಲವೊಮ್ಮೆ ಹೆಬ್ಬಾವಿಗೆ ತುತ್ತಾಗಿ ಕಾಡಿನಲ್ಲಿ ಎಸೆದಿರುವ ಹೆಣದಂತೆ ಬಿದ್ದುಕೊಳ್ಳುವನು. ಆಗ ಇವನಿಗೆ ಯಾವ ಎಚ್ಚರವೂ ಇರುವುದಿಲ್ಲ. ಕೆಲವೊಮ್ಮೆ ಬೇರೆ ವಿಷಸರ್ಪದ ಪ್ರಭಾವದಿಂದ ಕುರುಡ ನಾಗಿ ಯಾವುದೋ ಕತ್ತಲ ಬಾವಿಯಲ್ಲಿ ಬಿದ್ದುಬಿಡುತ್ತಾನೆ ಹಾಗೂ ಘೋರವಾದ ದುಃಖಮಯ ಅಂಧಕಾರದಲ್ಲಿ ಜ್ಞಾನತಪ್ಪಿ ಬಿದ್ದಿರುತ್ತಾನೆ. ॥9॥

(ಶ್ಲೋಕ - 10)

ಮೂಲಮ್

ಕರ್ಹಿ ಸ್ಮ ಚಿತ್ ಕ್ಷುದ್ರರಸಾನ್ವಿಚಿನ್ವಂ-
ಸ್ತನ್ಮಕ್ಷಿಕಾಭಿರ್ವ್ಯಥಿತೋ ವಿಮಾನಃ ।
ತತ್ರಾತಿಕೃಚ್ಛ್ರಾತ್ಪ್ರತಿಲಬ್ಧಮಾನೋ
ಬಲಾದ್ವಿಲುಂಪಂತ್ಯಥ ತಂ ತತೋನ್ಯೇ ॥

ಅನುವಾದ

ಕೆಲವೊಮ್ಮೆ ಜೇನನ್ನು ಹುಡುಕ ತೊಡಗುವನು. ಆಗ ಜೇನುನೊಣಗಳು ಇವನನ್ನು ಕಚ್ಚಿ ಪೀಡಿಸುವವು ಹಾಗೂ ಇವನ ಅಭಿಮಾನವೆಲ್ಲವೂ ನಾಶವಾಗಿ ಹೋಗುತ್ತದೆ. ಯಾವುದೇ ರೀತಿಯಿಂದ ಅನೇಕ ಕಷ್ಟಗಳನ್ನು ಎದುರಿಸಿ ಜೇನು ಸಿಕ್ಕಿದರೂ ಬಲಾತ್ಕಾರದಿಂದ ಬೇರೆಯವರು ಕಸಿದುಕೊಳ್ಳುವರು. ॥10॥

(ಶ್ಲೋಕ - 11)

ಮೂಲಮ್

ಕ್ವಚಿಚ್ಚ ಶೀತಾತಪವಾತವರ್ಷ-
ಪ್ರತಿಕ್ರಿಯಾಂ ಕರ್ತುಮನೀಶ ಆಸ್ತೇ ।
ಕ್ವಚಿನ್ ಮಿಥೋ ವಿಪಣನ್ಯಚ್ಚ ಕಿಂಚಿದ್
ವಿದ್ವೇಷಮೃಚ್ಛತ್ಯುತ ವಿತ್ತಶಾಠ್ಯಾತ್ ॥

ಅನುವಾದ

ಕೆಲವೊಮ್ಮೆ ಚಳಿ, ಸೆಕೆ, ಚಂಡಮಾರುತ, ಮಳೆ ಇವುಗಳಿಂದ ತನ್ನನ್ನು ಕಾಪಾಡಿಕೊಳ್ಳಲು ಅಸಮರ್ಥನಾಗುತ್ತಾನೆ. ಕೆಲವೊಮ್ಮೆ ತಮ್ಮ-ತಮ್ಮಲ್ಲಿ ಸ್ವಲ್ಪ ವ್ಯಾಪಾರ ಮಾಡುತ್ತಾನೆ, ಧನದ ಲೋಭದಿಂದ ಬೇರೆಯವರಿಗೆ ಮೋಸಮಾಡಿ ಅವರಲ್ಲಿ ವೈರವನ್ನು ಕಟ್ಟಿಕೊಳ್ಳುತ್ತಾನೆ. ॥11॥

(ಶ್ಲೋಕ - 12)

ಮೂಲಮ್

ಕ್ವಚಿತ್ ಕ್ವ್ವಚಿತ್ ಕ್ಷೀಣಧನಸ್ತು ತಸ್ಮಿನ್
ಶಯ್ಯಾಸನಸ್ಥಾನವಿಹಾರಹೀನಃ ।
ಯಾಚನ್ ಪರಾದಪ್ರತಿಲಬ್ಧಕಾಮಃ
ಪಾರಕ್ಯದೃಷ್ಟಿರ್ಲಭತೇವಮಾನಮ್ ॥

ಅನುವಾದ

ಕೆಲವೊಮ್ಮೆ ಆ ಸಂಸಾರಾರಣ್ಯದಲ್ಲಿ ಹಣವನ್ನು ಕಳೆದುಕೊಂಡು ಹಾಸಿಗೆ, ಹೊದಿಕೆ, ಆಸನ, ಮನೆ, ವಾಹನ ಯಾವುದೂ ಇಲ್ಲದೆ ಅವುಗಳಿಗಾಗಿ ಇತರರನ್ನು ಬೇಡಬೇಕಾಗುವುದು. ಅವರು ಕೊಡದೆ ಹೋದರೆ ಅವುಗಳನ್ನು ಹೇಗಾದರೂ ಕಸಿದುಕೊಳ್ಳುವ ಕಳ್ಳದೃಷ್ಟಿ ಯನ್ನಿಟ್ಟು ತಿರಸ್ಕಾರಕ್ಕೆ ಒಳಗಾಗಬೇಕಾಗುತ್ತದೆ. ॥12॥

(ಶ್ಲೋಕ - 13)

ಮೂಲಮ್

ಅನ್ಯೋನ್ಯವಿತ್ತವ್ಯತಿಷಂಗವೃದ್ಧ-
ವೈರಾನುಬಂಧೋ ವಿವಹನ್ಮಿಥಶ್ಚ ।
ಅಧ್ವನ್ಯಮುಷ್ಮಿನ್ನುರುಕೃಚ್ಛ್ರವಿತ್ತ-
ಬಾಧೋಪಸರ್ಗೈರ್ವಿಹರನ್ ವಿಪನ್ನಃ ॥

ಅನುವಾದ

ಹೀಗೆ ವ್ಯಾವಹಾರಿಕ ಸಂಬಂಧದಿಂದ ಪರಸ್ಪರ ದ್ವೇಷ ಭಾವನೆ ಬೆಳೆದಿದ್ದರೂ ಆ ವಣಿಕ್ ಸಮೂಹವು ತಮ್ಮ-ತಮ್ಮಲ್ಲೇ ವಿವಾಹಾದಿ ಸಂಬಂಧಗಳನ್ನು ಸ್ಥಾಪಿಸುತ್ತದೆ. ಮತ್ತೆ ಈ ಮಾರ್ಗದಲ್ಲಿ ಬಗೆ-ಬಗೆಯ ಕಷ್ಟ, ಧನಕ್ಷಯ ಮುಂತಾದ ಕಷ್ಟಗಳನ್ನು ಅನುಭವಿಸುತ್ತಾ ಹೆಣದಂತೆ ಬದುಕಬೇಕಾಗುತ್ತದೆ. ॥13॥

(ಶ್ಲೋಕ - 14)

ಮೂಲಮ್

ತಾಂಸ್ತಾನ್ವಿಪನ್ನಾನ್ ಸ ಹಿ ತತ್ರ ತತ್ರ
ವಿಹಾಯ ಜಾತಂ ಪರಿಗೃಹ್ಯ ಸಾರ್ಥಃ ।
ಆವರ್ತತೇದ್ಯಾಪಿ ನ ಕಶ್ಚಿದತ್ರ
ವೀರಾಧ್ವನಃ ಪಾರಮುಪೈತಿ ಯೋಗಮ್ ॥

ಅನುವಾದ

ಜೊತೆಯವರಲ್ಲಿ ಸತ್ತು ಹೋದವರನ್ನು ಅಲ್ಲಲ್ಲೇ ಬಿಟ್ಟು, ಹೊಸದಾಗಿ ಹುಟ್ಟಿದವರೊಂದಿಗೆ ಆ ವ್ಯಾಪಾರಿ ಸಮೂಹವು ಪದೇ-ಪದೇ ಮುಂದೆ ಹೋಗುತ್ತಾ ಇರುತ್ತದೆ. ಎಲೈ ವೀರನೇ! ಅವರಲ್ಲಿ ಯಾವ ಪ್ರಾಣಿಯೂ ಇಂದಿನ ವರೆಗೆ ಮರಳಲಿಲ್ಲ. ಯಾರೂ ಕೂಡ ಈ ಸಂಕಟಮಯ ಮಾರ್ಗವನ್ನು ದಾಟಿ ಪರಮಾನಂದಮಯ ಯೋಗವನ್ನು ಆಶ್ರಯಿಸಲಿಲ್ಲ. ॥14॥

(ಶ್ಲೋಕ - 15)

ಮೂಲಮ್

ಮನಸ್ವಿನೋನಿರ್ಜಿತದಿಗ್ಗಜೇಂದ್ರಾ
ಮಮೇತಿ ಸರ್ವೇ ಭುವಿ ಬದ್ಧವೈರಾಃ ।
ಮೃಧೇ ಶಯೀರನ್ನ ತು ತದ್ ವ್ರಜಂತಿ
ಯನ್ನ್ಯಸ್ತದಂಡೋ ಗತವೈರೋಭಿಯಾತಿ ॥

ಅನುವಾದ

ಮಹಾವೀರಾಧಿವೀರರಾಗಿ ದೊಡ್ಡ-ದೊಡ್ಡ ದಿಗ್ಗಜರನ್ನೂ, ದಿಕ್ಪಾಲಕರನ್ನೂ ಗೆದ್ದವರೂ ಕೂಡ ‘ಈ ಭೂಮಿ ನನ್ನದು, ಈ ರಾಜ್ಯ ನನ್ನದು’ ಎಂಬ ಅಭಿಮಾನದಿಂದ ಪರಸ್ಪರ ದ್ವೇಷವನ್ನು ಕಟ್ಟಿಕೊಂಡು ಯುದ್ಧ ಭೂಮಿಯಲ್ಲಿ ಮಡಿದುಹೋಗುವರು. ಆದರೂ ಅವರಿಗೆ ವೈರಹೀನ ಪರಮಹಂಸರಿಗೆ ದೊರೆಯಬಹುದಾದ ಭಗವಾನ್ ವಿಷ್ಣುವಿನ ಆ ಅವಿನಾಶಿಯಾದ ಪದವುಸಿಗುವುದಿಲ್ಲ. ॥15॥

(ಶ್ಲೋಕ - 16)

ಮೂಲಮ್

ಪ್ರಸಜ್ಜ ತಿ ಕ್ವಾಪಿ ಲತಾಭುಜಾಶ್ರಯ-
ಸ್ತದಾಶ್ರಯಾವ್ಯಕ್ತಪದದ್ವಿಜಸ್ಪೃಹಃ ।
ಕ್ವಚಿತ್ಕದಾಚಿದ್ಧರಿಚಕ್ರತಸಸನ್
ಸಖ್ಯಂ ವಿಧತ್ತೇ ಬಕಕಂಕಗೃಧ್ರೈಃ ॥

ಅನುವಾದ

ಈ ಭವಾಟವಿಯಲ್ಲಿ ಅಲೆಯುತ್ತಿರುವ ವರ್ತಕರ ಗುಂಪು ಕೆಲವೊಮ್ಮೆ ಯಾವುದೋ ಲತೆಗಳನ್ನು ಆಶ್ರಯಿಸಿ, ಅದರ ಮೇಲೆ ವಾಸಿಸುವ ಮಧುರವಾಗಿ ಹಾಡುವ ಪಕ್ಷಿಗಳ ಮೋಹದಲ್ಲಿ ಸಿಕ್ಕಿಕೊಂಡುಬಿಡುತ್ತಾರೆ. ಕೆಲವೊಮ್ಮೆ ಸಿಂಹಗಳ ಗುಂಪಿಗೆ ಹೆದರಿ ಕೊಕ್ಕರೆ, ನೀರುಹಕ್ಕಿ, ಹದ್ದು ಇವುಗಳೊಡನೆ ಸ್ನೇಹ ಬೆಳಸುವರು. ॥16॥

(ಶ್ಲೋಕ - 17)

ಮೂಲಮ್

ತೈರ್ವಂಚಿತೋ ಹಂಸಕುಲಂ ಸಮಾವಿಶನ್
ನರೋಚಯನ್ ಶೀಲಮುಪೈತಿ ವಾನರಾನ್ ।
ತಜ್ಜಾತಿರಾಸೇನ ಸುನಿರ್ವೃತೇಂದ್ರಿಯಃ
ಪರಸ್ಪರೋದ್ವೀಕ್ಷಣವಿಸ್ಮೃತಾವಧಿಃ ॥

ಅನುವಾದ

ಅವರ ಮೋಸಕ್ಕೆ ಒಳಗಾದಾಗ ಹಂಸಪಕ್ಷಿಗಳ ಸಮೂಹವನ್ನು ಸೇರಲು ಬಯಸುತ್ತಾರೆ. ಆದರೆ ಅವರಿಗೆ ಇವುಗಳ ಆಚಾರ ಸರಿಬೀಳುವುದಿಲ್ಲ. ಅದಕ್ಕಾಗಿ ಕಪಿಗಳೊಡನೆ ಸೇರಿ ಅವುಗಳ ಜಾತಿ ಸ್ವಭಾವಕ್ಕನುಸಾರ ದಾಂಪತ್ಯಸುಖದಲ್ಲಿ ತೊಡಗಿದ್ದು ವಿಷಯ ಭೋಗಗಳಿಂದ ಇಂದ್ರಿಯಗಳನ್ನು ತೃಪ್ತಿಪಡಿಸಿಕೊಳ್ಳುತ್ತಿರುತ್ತಾರೆ. ಒಬ್ಬರು ಮತ್ತೊಬ್ಬರ ಮುಖವನ್ನು ನೋಡುತ್ತಾ-ನೋಡುತ್ತಾ ತಮ್ಮ ಆಯುಸ್ಸಿನ ಅವಧಿಯನ್ನು ಮರೆತುಬಿಡುತ್ತಾರೆ. ॥17॥

(ಶ್ಲೋಕ - 18)

ಮೂಲಮ್

ದ್ರುಮೇಷು ರಂಸ್ಯನ್ ಸುತದಾರವತ್ಸಲೋ
ವ್ಯವಾಯದೀನೋ ವಿವಶಃ ಸ್ವಬಂಧನೇ ।
ಕ್ವಚಿತ್ಪ್ರಮಾದಾದ್ಗಿರಿಕಂದರೇ ಪತನ್
ವಲ್ಲೀಂ ಗೃಹೀತ್ವಾ ಗಜಭೀತ ಆಸ್ಥಿತಃ ॥

ಅನುವಾದ

ಅಲ್ಲಿ ವೃಕ್ಷಗಳಲ್ಲಿ ಕ್ರೀಡಿಸುತ್ತಾ ಪತ್ನೀ-ಪುತ್ರರ ಸ್ನೇಹಪಾಶದಲ್ಲಿ ಬಂಧಿತನಾಗುತ್ತಾನೆ. ಇವರಲ್ಲಿ ಮೈಥುನದ ವಾಸನೆ ಎಷ್ಟು ಬೆಳೆಯುತ್ತದೆ ಎಂದರೆ ಬಗೆ-ಬಗೆಯ ದುರ್ವ್ಯವಹಾರಗಳಿಂದ ದೀನರಾಗಿದ್ದರೂ ಕೂಡ ಇವನು ವಿವಶನಾಗಿ ತನ್ನ ಬಂಧನವನ್ನು ಕಿತ್ತೊಗೆಯಲು ಸಾಹಸಮಾಡುವುದಿಲ್ಲ. ಕೆಲವೊಮ್ಮೆ ಎಚ್ಚರ ತಪ್ಪಿ ಪರ್ವತದ ಗುಹೆಯಲ್ಲಿ ಬೀಳತೊಡಗಿದಾಗ ಅದರಲ್ಲಿ ವಾಸಿಸುವ ಆನೆಗೆ ಹೆದರಿಕೊಂಡು ಯಾವುದೋ ಬಳ್ಳಿಯನ್ನು ಆಶ್ರಯಿಸಿ ನೇತಾಡುತ್ತಿರುವನು. ॥18॥

(ಶ್ಲೋಕ - 19)

ಮೂಲಮ್

ಅತಃ ಕಥಂಚಿತ್ಸ ವಿಮುಕ್ತ ಆಪದಃ
ಪುನಶ್ಚ ಸಾರ್ಥಂ ಪ್ರವಿಶತ್ಯರಿಂದಮ ।
ಅಧ್ವನ್ಯಮುಷ್ಮಿನ್ನಜಯಾ ನಿವೇಶಿತೋ
ಭ್ರಮಂಜನೋದ್ಯಾಪಿ ನ ವೇದ ಕಶ್ಚನ ॥

ಅನುವಾದ

ಎಲೈ ಪರಂತಪ! ಯಾವ ರೀತಿಯಿಂದಲಾದರೂ ಇವನು ಆ ಆಪತ್ತುಗಳಿಂದ ಬಿಡುಗಡೆ ಹೊಂದಿದರೂ ಪುನಃ ತನ್ನ ಗುಂಪನ್ನೇ ಸೇರಿಕೊಳ್ಳುವನು. ಮಾಯೆಯ ಪ್ರೇರಣೆಯಿಂದ ಒಮ್ಮೆ ಈ ಮಾರ್ಗಕ್ಕೆ ಬಂದುಬಿಟ್ಟರೆ, ಅವನಿಗೆ ಅಲೆಯುತ್ತಾ- ಅಲೆಯುತ್ತಾ ಕೊನೆಯವರೆಗೂ ತನ್ನ ಪರಮ ಪುರುಷಾರ್ಥದ ಅರಿವೇ ಉಂಟಾಗುವುದಿಲ್ಲ. ॥19॥

(ಶ್ಲೋಕ - 20)

ಮೂಲಮ್

ರಹೂಗಣ ತ್ವಮಪಿ ಹ್ಯಧ್ವನೋಸ್ಯ
ಸಂನ್ಯಸ್ತದಂಡಃ ಕೃತಭೂತಮೈತ್ರಃ ।
ಅಸಜ್ಜಿತಾತ್ಮಾ ಹರಿಸೇವಯಾ ಶಿತಂ
ಜ್ಞಾನಾಸಿಮಾದಾಯ ತರಾತಿಪಾರಮ್ ॥

ಅನುವಾದ

ರಹೂಗಣ ರಾಜನೇ! ನೀನೂ ಕೂಡ ಇದೇ ಮಾರ್ಗದಲ್ಲಿ ಅಲೆಯುತ್ತಿರುವೆ. ಅದಕ್ಕಾಗಿ ಈಗ ಪ್ರಜೆಗಳನ್ನು ದಂಡಿಸುವ ಕಾರ್ಯವನ್ನು ಬಿಟ್ಟು, ಸಮಸ್ತ ಪ್ರಾಣಿಗಳಿಗೂ ಮಿತ್ರನಾಗು. ವಿಷಯಗಳಲ್ಲಿ ಅನಾಸಕ್ತನಾಗಿ ಭಗವತ್ಸೇವೆ ಎಂಬ ಹರಿತವಾದ ಜ್ಞಾನ ಖಡ್ಗದಿಂದ ಈ ಮಾರ್ಗದಿಂದ ಪಾರಾಗಿಬಿಡು. ॥20॥

(ಶ್ಲೋಕ - 21)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಅಹೋ ನೃಜನ್ಮಾಖಿಲಜನ್ಮಶೋಭನಂ
ಕಿಂ ಜನ್ಮಭಿಸ್ತ್ವಪರೈರಪ್ಯಮುಷ್ಮಿನ್ ।
ನ ಯದ್ಧೃಷೀಕೇಶಯಶಃ ಕೃತಾತ್ಮನಾಂ
ಮಹಾತ್ಮನಾಂ ವಃ ಪ್ರಚುರಃ ಸಮಾಗಮಃ ॥

ಅನುವಾದ

ರಹೂಗಣರಾಜನು ಹೇಳಿದನು — ಆಹಾ! ಸಮಸ್ತ ಯೋನಿಗಳಲ್ಲಿ ಈ ಮನುಷ್ಯ ಜನ್ಮವೇ ಶ್ರೇಷ್ಠವಾಗಿದೆ. ಭಗವಾನ್ ಹೃಷೀಕೇಶನ ಪವಿತ್ರಕೀರ್ತಿಯಿಂದ ಶುದ್ಧಾಂತಃ ಕರಣವುಳ್ಳ ನಿಮ್ಮಂತಹ ಮಹಾತ್ಮರ ಸಮಾಗಮವು ಹೆಚ್ಚು- ಹೆಚ್ಚಾಗಿ ದೊರೆಯದಿರುವಲ್ಲಿ ಬೇರೆ-ಬೇರೆ ಲೋಕಗಳಲ್ಲಿ ಪ್ರಾಪ್ತವಾಗುವ ದೇವತೆಗಳೇ ಮುಂತಾದ ಶ್ರೇಷ್ಠ ಜನ್ಮಗಳಿಂದ ಯಾವ ಲಾಭವಿದೆ? ॥21॥

(ಶ್ಲೋಕ - 22)

ಮೂಲಮ್

ನ ಹ್ಯದ್ಭುತಂ ತ್ವಚ್ಚರಣಾಬ್ಜ ರೇಣುಭಿ-
ರ್ಹತಾಂಹಸೋ ಭಕ್ತಿರಧೋಕ್ಷಜೇಮಲಾ ।
ವೌಹೂರ್ತಿಕಾದ್ಯ ಸ್ಯ ಸಮಾಗಮಾಚ್ಚ ಮೇ
ದುಸ್ತರ್ಕಮೂಲೋಪಹತೋವಿವೇಕಃ ॥

ಅನುವಾದ

ನಿಮ್ಮ ಅಡಿದಾವರೆಗಳ ಧೂಳನ್ನು ಸೇವಿಸುವುದರಿಂದ ಎಲ್ಲ ಪಾಪ-ತಾಪಗಳು ನಾಶ ಹೊಂದಿರುವಂತಹ ಮಹಾನುಭಾವರಿಗೆ ಭಗವಂತನ ವಿಶುದ್ಧ ವಾದ ಭಕ್ತಿಯು ದೊರೆಯುವುದು ಏನೂ ವಿಚಿತ್ರವಲ್ಲ. ನನಗಾದರೋ ಎರಡುಗಳಿಗೆ ದೊರೆತ ನಿಮ್ಮ ಸತ್ಸಂಗದಿಂದ ನನ್ನ ಎಲ್ಲ ಕುತರ್ಕಮೂಲವಾದ ಅಜ್ಞಾನವು ನಾಶವಾಗಿ ಹೋಯಿತು. ॥22॥

(ಶ್ಲೋಕ - 23)

ಮೂಲಮ್

ನಮೋ ಮಹದ್ಭ್ಯೋಸ್ತು ನಮಃ ಶಿಶುಭ್ಯೋ
ನಮೋ ಯುವಭ್ಯೋ ನಮ ಆ ವಟುಭ್ಯಃ ।
ಯೇ ಬ್ರಾಹ್ಮಣಾ ಗಾಮವಧೂತಲಿಂಗಾ-
ಶ್ಚರಂತಿ ತೇಭ್ಯಃ ಶಿವಮಸ್ತು ರಾಜ್ಞಾಮ್ ॥

ಅನುವಾದ

ಬ್ರಹ್ಮಜ್ಞಾನಿಗಳಾದ ಮಹಾತ್ಮರು ಯಾವ ವಯಸ್ಸು, ಯಾವರೂಪದಲ್ಲಿ ಸಂಚರಿಸುವರೋ ತಿಳಿಯದು. ಆದ್ದರಿಂದ ಬ್ರಹ್ಮಜ್ಞಾನಿಗಳಲ್ಲಿ ವಯೋವೃದ್ಧ ರಾದವರಿಗೆ ನಮಸ್ಕಾರವು. ಶಿಶುಗಳಿಗೆ ನಮಸ್ಕಾರವು. ಯುವಕರಾಗಿರು ವವರಿಗೆ ನಮಸ್ಕಾರವು. ವಟುಗಳಿಗೆ ನಮಸ್ಕಾರವು. ನಿಮ್ಮಂತಹ ಬ್ರಹ್ಮಜ್ಞಾನಿಗಳಾದ ಬ್ರಾಹ್ಮಣರು ಅವಧೂತವೇಷದಿಂದ ಭೂಮಿಯಲ್ಲಿ ಸಂಚರಿಸುತ್ತಿರುವುದರಿಂದ ನಮ್ಮಂತಹ ಐಶ್ವರ್ಯ ಮದೋನ್ಮತ್ತ ರಾಜರಿಗೆ ಕಲ್ಯಾಣವೇ ಆಗಲಿ. ॥23॥

(ಶ್ಲೋಕ - 24)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಯೇವಮುತ್ತರಾಮಾತಃ ಸವೈ ಬ್ರಹ್ಮರ್ಷಿಸುತಃ ಸಿಂಧು- ಪತಯ ಆತ್ಮಸತತ್ತ್ವಂ ವಿಗಣಯತಃ ಪರಾನುಭಾವಃ ಪರಮ ಕಾರುಣಿಕತಯೋಪದಿಶ್ಯ ರಹೂಗಣೇನ ಸಕರುಣಮಭಿ ವಂದಿತಚರಣ ಆಪೂರ್ಣಾರ್ಣವ ಇವ ನಿಭೃತಕರಣೋರ್ಮ್ಯಾಶಯೋ ಧರಣಿಮಿಮಾಂ ವಿಚಚಾರ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಉತ್ತರಾ ನಂದನನೇ! ಹೀಗೆ ಆ ಪರಮಪ್ರಭಾವಶಾಲಿಯಾದ ಬ್ರಹ್ಮರ್ಷಿ ಪುತ್ರರು ತನ್ನನ್ನು ಅಪಮಾನಗೊಳಿಸಿದ ಸಿಂಧುನರೇಶ ರಹೂ ಗಣನನ್ನೂ ಕೂಡ ಅತ್ಯಂತ ಕರುಣೆಯಿಂದ ಆತ್ಮತತ್ತ್ವವನ್ನು ಉಪದೇಶಿಸಿದರು. ಆಗ ರಹೂಗಣರಾಜನು ದೀನನಾಗಿ ಅವರ ಚರಣಗಳಿಗೆ ವಂದಿಸಿಕೊಂಡನು. ಮತ್ತೆ ಅವನು ತುಂಬಿದ ಸಮುದ್ರದಂತೆ ಶಾಂತ ಚಿತ್ತನಾಗಿ, ಇಂದ್ರಿಯಗಳಿಂದ ಉಪರತನಾಗಿ ಭೂಮಿಯಲ್ಲಿ ಸಂಚರಿಸತೊಡಗಿದನು. ॥24॥

(ಶ್ಲೋಕ - 25)

ಮೂಲಮ್

ಸೌವೀರಪತಿರಪಿ ಸುಜನಸಮವಗತಪರಮಾತ್ಮಸತತ್ತ್ವ ಆತ್ಮನ್ಯವಿದ್ಯಾಧ್ಯಾರೋಪಿತಾಂ ಚ ದೇಹಾತ್ಮಮತಿಂ ವಿಸಸರ್ಜ ಏವಂ ಹಿ ನೃಪ ಭಗವದಾಶ್ರಿತಾಶ್ರಿತಾನುಭಾವಃ ॥

ಅನುವಾದ

ಅವರ ಸತ್ಸಂಗದಿಂದ ಪರಮಾತ್ಮ ತತ್ತ್ವದ ಜ್ಞಾನವನ್ನು ಪಡೆದು ಸೌವೀರದೊರೆ ರಹೂಗಣನೂ ಕೂಡ ಅಂತಃ ಕರಣದಲ್ಲಿ ಅವಿದ್ಯೆಯಿಂದ ಆರೋಪಿತವಾದ ದೇಹಾತ್ಮ ಬುದ್ಧಿಯನ್ನು ತ್ಯಜಿಸಿದನು. ರಾಜನೇ! ಭಗವದಾಶ್ರಿತ ಅನನ್ಯ ಭಕ್ತರಲ್ಲಿ ಶರಣಾಗುವವನ ಪ್ರಭಾವ ಹೀಗೆ ಇರುತ್ತದೆ. ಅವರ ಬಳಿಯಲ್ಲಿ ಅವಿದ್ಯೆಯು ನಿಲ್ಲಲಾರದು. ॥25॥

(ಶ್ಲೋಕ - 26)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಯೋ ಹ ವಾ ಇಹ ಬಹುವಿದಾ ಮಹಾಭಾಗವತ ತ್ವಯಾಭಿಹಿತಃ ಪರೋಕ್ಷೇಣ ವಚಸಾ ಜೀವಲೋಕಭವಾಧ್ವಾ ಸ ಹ್ಯಾರ್ಯಮನೀಷಯಾ ಕಲ್ಪಿತವಿಷಯೋ ನಾಂಜ ಸಾವ್ಯತ್ಪನ್ನಲೋಕಸಮಧಿಗಮಃ ಅಥ ತದೇವೈತ ದ್ದುರವಗಮಂ ಸಮವೇತಾನುಕಲ್ಪೇನ ನಿರ್ದಿಶ್ಯತಾಮಿತಿ ॥

ಅನುವಾದ

ಪರೀಕ್ಷಿದ್ರಾಜನು ಹೇಳಿದನು — ಭಾಗವತೋತ್ತಮರಾದ ಮುನಿಶ್ರೇಷ್ಠರೇ! ತಾವು ವಿದ್ವಾಂಸರಾಗಿದ್ದೀರಿ. ನೀವು ರೂಪಕದ ಮೂಲಕ ಅಪ್ರತ್ಯಕ್ಷರೂಪದಿಂದ ಜೀವಿಗಳ ಸಂಸಾರರೂಪವಾದ ಮಾರ್ಗವನ್ನು ವರ್ಣಿಸಿರುವಿರಿ. ಆ ವಿಷಯದ ಕಲ್ಪನೆಯನ್ನು ವಿವೇಕಿಗಳ ಬುದ್ಧಿಯೇ ಮಾಡ ಬಲ್ಲದು ; ಅಲ್ಪಬುದ್ಧಿಯುಳ್ಳವರ ಅರಿವಿಗೆ ಅದು ಸುಲಭವಾಗಿ ಬರಲಾರದು. ಆದ್ದರಿಂದ ಈ ದುರ್ಬೋಧ ವಿಷಯದ ರೂಪಕವನ್ನು ಸ್ಪಷ್ಟವಾಗಿ ಬಿಡಿಸಿಹೇಳಬೇಕು ಎಂದು ಪ್ರಾರ್ಥಿಸಿಕೊಂಡನು. ॥26॥

ಅನುವಾದ (ಸಮಾಪ್ತಿಃ)

ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ತ್ರಯೋದಶೋಽಧ್ಯಾಯಃ ॥13॥