[ಹನ್ನೆರಡನೆಯ ಅಧ್ಯಾಯ]
ಭಾಗಸೂಚನಾ
ರಹೂಗಣನ ಪ್ರಶ್ನೆ ಮತ್ತು ಭರತಮುನಿಯ ಉತ್ತರ
(ಶ್ಲೋಕ -1)
ಮೂಲಮ್ (ವಾಚನಮ್)
ರಹೂಗಣ ಉವಾಚ
ಮೂಲಮ್
ನಮೋ ನಮಃ ಕಾರಣವಿಗ್ರಹಾಯ
ಸ್ವರೂಪತುಚ್ಛೀಕೃತವಿಗ್ರಹಾಯ ।
ನಮೋವಧೂತ ದ್ವಿಜಬಂಧುಲಿಂಗ-
ನಿಗೂಢನಿತ್ಯಾನುಭವಾಯ ತುಭ್ಯಮ್ ॥
ಅನುವಾದ
ರಹೂಗಣರಾಜನು ಹೇಳಿದನು — ಪೂಜ್ಯರೇ! ನಾನು ನಿಮಗೆ ನಮಸ್ಕಾರ ಮಾಡುತ್ತೇನೆ. ತಾವು ಜಗತ್ತಿನ ಉದ್ಧಾರ ಕ್ಕಾಗಿಯೇ ಈ ದೇಹವನ್ನು ಧರಿಸಿರುವಿರಿ. ಯೋಗೀಶ್ವರರೇ! ತಾವು ಪರಮಾನಂದಮಯ ನಿಜಸ್ವರೂಪವನ್ನು ಅನು ಭವಿಸುತ್ತಿದ್ದರೂ, ಅದನ್ನು ಮರೆಮಾಚಿ ಜನಸಾಮಾನ್ಯರ ದೃಷ್ಟಿಯಲ್ಲಿ ಓರ್ವ ಬಡ ಬ್ರಾಹ್ಮಣನಂತೆ ಕಾಣಿಸಿಕೊಂಡಿ ರುವ ಅವಧೂತರಾದ ನಿಮಗೆ ಮತ್ತೆ-ಮತ್ತೆ ನಮಸ್ಕಾರವು. ॥1॥
(ಶ್ಲೋಕ - 2)
ಮೂಲಮ್
ಜ್ವರಾಮಯಾರ್ತಸ್ಯ ಯಥಾಗದಂ ಸತ್
ನಿದಾಘದಗ್ಧಸ್ಯ ಯಥಾ ಹಿಮಾಂಭಃ ।
ಕುದೇಹಮಾನಾಹಿವಿದಷ್ಟದೃಷ್ಟೇಃ
ಬ್ರಹ್ಮನ್ವಚಸ್ತೇಮೃತವೌಷಧಂ ಮೇ ॥
ಅನುವಾದ
ಬ್ರಾಹ್ಮಣಶ್ರೇಷ್ಠರೇ! ಜ್ವರದಿಂದ ಪೀಡಿತನಾದ ರೋಗಿಗೆ ದಿವ್ಯವಾದ ಔಷಧಿಯೂ, ಬಿಸಿಲಿನ ಬೇಗೆಯಿಂದ ಬೆಂದವನಿಗೆ ಶೀತಲ ಜಲವೂ ಅಮೃತತುಲ್ಯವಾಗಿರು ವಂತೆಯೇ ದೇಹಾಭಿಮಾನವೆಂಬ ವಿಷಸರ್ಪದಿಂದ ಕಚ್ಚಲ್ಪಟ್ಟು ವಿವೇಕದೃಷ್ಟಿಯನ್ನು ಕಳಕೊಂಡ ನನಗೆ ನಿಮ್ಮ ಮಾತುಗಳು ಅಮೃತಮಯ ಔಷಧದಂತೆ ಇವೆ. ॥2॥
(ಶ್ಲೋಕ - 3)
ಮೂಲಮ್
ತಸ್ಮಾದ್ಭವಂತಂ ಮಮ ಸಂಶಯಾರ್ಥಂ
ಪ್ರಕ್ಷ್ಯಾಮಿ ಪಶ್ಚಾದಧುನಾ ಸುಬೋಧಮ್ ।
ಅಧ್ಯಾತ್ಮಯೋಗಗ್ರಥಿತಂ ತವೋಕ್ತ-
ಮಾಖ್ಯಾಹಿ ಕೌತೂಹಲಚೇತಸೋ ಮೇ ॥
ಅನುವಾದ
ಭೂಸುರರೇ! ಅಧ್ಯಾತ್ಮರಹಸ್ಯದ ಬಗ್ಗೆ ನನಗೆ ಉಂಟಾದ ಸಂಶಯಗಳನ್ನು ಆಮೇಲೆ ಅರಿಕೆಮಾಡಿಕೊಳ್ಳುವೆನು. ಮೊದಲಿಗೆ ಈಗ ನೀವು ನುಡಿದ ಅಧ್ಯಾತ್ಮ ಯೋಗಮಯ ಉಪದೇಶವನ್ನು ಅರ್ಥಮಾಡಿಕೊಳ್ಳುವುದು ನನಗೆ ಕಷ್ಟ ವಾಗಿದೆ. ಅದನ್ನು ಸರಳವಾಗಿ ತಿಳಿಸಿರಿ. ಇದನ್ನು ತಿಳಿಯ ಬೇಕೆಂಬ ಉತ್ಕಂಠತೆ ನನಗೆ ಇದೆ. ॥3॥
(ಶ್ಲೋಕ - 4)
ಮೂಲಮ್
ಯದಾಹ ಯೋಗೇಶ್ವರ ದೃಶ್ಯಮಾನಂ
ಕ್ರಿಯಾಲಂ ಸದ್ವ್ಯವಹಾರಮೂಲಮ್ ।
ನ ಹ್ಯಂಜಸಾ ತತ್ತ್ವವಿಮರ್ಶನಾಯ
ಭವಾನಮುಷ್ಮಿನ್ ಭ್ರಮತೇ ಮನೋ ಮೇ ॥
ಅನುವಾದ
ಯೋಗೇಶ್ವರರೇ! ‘ಭಾರವನ್ನು ಎತ್ತುವ ಕ್ರಿಯೆಯು, ಅದರಿಂದ ಉಂಟಾಗುವ ಶ್ರಮ ರೂಪೀ ಫಲವು ಇವೆರಡೂ ಪ್ರತ್ಯಕ್ಷವಾಗಿದ್ದರೂ ಕೇವಲ ವ್ಯವಹಾರಕ್ಕಾಗಿಯೇ ಇದೆ, ವಾಸ್ತವವಾಗಿ ಸತ್ಯವಾಗಿಲ್ಲ, ತತ್ತ್ವವಿಚಾರವನ್ನು ಮಾಡಿದಾಗ ಇವು ನಿಲ್ಲುವುದಿಲ್ಲ’ ಎಂದು ನೀವು ಹೇಳಿದಿರಲ್ಲ. ಈ ವಿಷಯದಲ್ಲಿ ನನ್ನ ಬುದ್ಧಿಯು ಭ್ರಮಿಸುತ್ತಿದೆ. ಇದರ ಮರ್ಮವು ನನ್ನ ಅರಿವಿಗೆ ಬರುತ್ತಿಲ್ಲ. ನಿಮ್ಮ ಆಶಯವನ್ನು ವಿವರಿಸುವವರಾಗಿರಿ. ॥4॥
(ಶ್ಲೋಕ - 5)
ಮೂಲಮ್ (ವಾಚನಮ್)
ಬ್ರಾಹ್ಮಣ ಉವಾಚ
ಮೂಲಮ್
ಅಯಂ ಜನೋ ನಾಮ ಚಲನ್ಪೃಥಿವ್ಯಾಂ
ಯಃ ಪಾರ್ಥಿವಃ ಪಾರ್ಥಿವ ಕಸ್ಯ ಹೇತೋಃ ।
ತಸ್ಯಾಪಿ ಚಾಂಘ್ರ್ಯೋರಧಿ ಗುಲ್ಫಜಂಘಾ-
ಜಾನೂರುಮಧ್ಯೋರಶಿರೋಧರಾಂಸಾಃ ॥
ಅನುವಾದ
ಜಡಭರತನೆಂದನು — ಎಲೈ ಪೃಥಿವೀಪತೇ! ಈ ದೇಹವು ಪೃಥಿವಿಯ ವಿಕಾರವಾಗಿದೆ. ಕಲ್ಲು-ಮಣ್ಣುಗಳಿಗೂ ಇದಕ್ಕೂ ಯಾವ ಭೇದವಿದೆ? ಯಾವುದೋ ಕಾರಣದಿಂದ ಈ ವಿಕಾರವು ಭೂಮಿಯಲ್ಲಿ ನಡೆಯ ತೊಡಗಿದಾಗ ಭಾರಹೊರುವುದು ಮುಂತಾದ ಹೆಸರುಗಳು ಉಂಟಾಗುತ್ತವೆ. ಇದಕ್ಕೆ ಎರಡು ಕಾಲುಗಳಿವೆ. ಕ್ರಮವಾಗಿ ಮೇಲಕ್ಕೆ ಹಿಮ್ಮಡಿಗಳು, ಮೇಗಾಲು, ಮಂಡಿಗಳು, ತೊಡೆಗಳು, ಸೊಂಟವೂ, ಎದೆಯೂ, ಕುತ್ತಿಗೆಯೂ, ಭುಜಗಳೂ ಮುಂತಾದ ಅವಯವಗಳಿಗೆ. ॥5॥
(ಶ್ಲೋಕ - 6)
ಮೂಲಮ್
ಅಂಸೇಧಿ ದಾರ್ವೀ ಶಿಬಿಕಾ ಚ ಯಸ್ಯಾಂ
ಸೌವೀರರಾಜೇತ್ಯಪದೇಶ ಆಸ್ತೇ ।
ಯಸ್ಮಿನ್ ಭವಾನ್ರೂಢನಿಜಾಭಿಮಾನೋ
ರಾಜಾಸ್ಮಿ ಸಿಂಧುಷ್ವಿತಿ ದುರ್ಮದಾಂಧಃ ॥
ಅನುವಾದ
ಆ ಹೆಗಲ ಮೇಲೆ ಮರದ ಪಲ್ಲಕ್ಕಿ ಇಡಲ್ಪಟ್ಟಿದೆ. ಅದರಲ್ಲಿಯೂ ಸೌವೀರ ರಾಜನೆಂಬ ಒಂದು ಪಾರ್ಥಿವ ವಿಕಾರ ಕುಳಿತಿದೆ. ಅದರಲ್ಲಿ ಆತ್ಮಬುದ್ಧಿಯನ್ನು ಆರೋಪಗೊಳಿಸಿದ್ದರಿಂದ ನೀನು ‘ನಾನು ಸಿಂಧುದೇಶದ ರಾಜನಾಗಿದ್ದೇನೆ’ ಎಂಬ ಪ್ರಬಲ ಮದದಿಂದ ಕುರುಡನಾಗಿದ್ದೀಯೆ. ॥6॥
(ಶ್ಲೋಕ - 7)
ಮೂಲಮ್
ಶೋಚ್ಯಾನಿಮಾಂಸ್ತ್ವಮಧಿಕಷ್ಟದೀನಾನ್
ವಿಷ್ಟ್ಯಾ ನಿಗೃಹ್ಣನ್ನಿರನುಗ್ರಹೋಸಿ ।
ಜನಸ್ಯ ಗೋಪ್ತಾಸ್ಮಿ ವಿಕತ್ಥಮಾನೋ
ನ ಶೋಭಸೇ ವೃದ್ಧಸಭಾಸು ಧೃಷ್ಟಃ ॥
ಅನುವಾದ
ಆದರೆ ಇದರಿಂದ ನಿನ್ನ ಯಾವುದೇ ಶ್ರೇಷ್ಠತೆ ಸಿದ್ಧವಾಗುವುದಿಲ್ಲ. ನಿಜವಾಗಿ ನೀನೊಬ್ಬ ಕಡುಕ್ರೂರಿಯಾಗಿರುವೆ. ನೀನು ಈ ಬಡಪಾಯಿ ಬೋಯಿಗಳನ್ನು ಹಿಡಿದುತಂದು ಬಿಟ್ಟಿಯಾಗಿ ಪಲ್ಲಕ್ಕಿಯನ್ನು ಹೊರಿಸುತ್ತಿರುವೆ. ಮತ್ತೆ ‘ನಾನು ಪ್ರಜೆಗಳನ್ನು ರಕ್ಷಿಸುವವನು’ ಎಂದು ಮಹಾಪುರುಷರ ಸಭೆಯಲ್ಲಿ ಬಡಾಯಿ ಕೊಚ್ಚಿಕೊಂಡಿರುವೆ. ಇದು ನಿನಗೆ ಏನೂ ಶೋಭಿಸುವುದಿಲ್ಲ. ॥7॥
(ಶ್ಲೋಕ - 8)
ಮೂಲಮ್
ಯದಾ ಕ್ಷಿತಾವೇವ ಚರಾಚರಸ್ಯ
ವಿದಾಮ ನಿಷ್ಠಾಂ ಪ್ರಭವಂ ಚ ನಿತ್ಯಮ್ ।
ತನ್ನಾಮತೋನ್ಯದ್ ವ್ಯವಹಾರಮೂಲಂ
ನಿರೂಪ್ಯತಾಂ ಸತ್ಕ್ರಿಯಯಾನುಮೇಯಮ್ ॥
ಅನುವಾದ
ಸಮಸ್ತ ಚರಾಚರ ಪ್ರಾಣಿಗಳು ಯಾವಾಗಲೂ ಪೃಥಿವಿಯಿಂದಲೇ ಉಂಟಾಗಿ, ಪೃಥಿವಿ ಯಲ್ಲೇ ಲೀನವಾಗಿ ಹೋಗುತ್ತವೆ ಎಂಬುದನ್ನು ನಾವು ನೋಡುತ್ತೇವೆ. ಆದ್ದರಿಂದ ಅವುಗಳ ಕ್ರಿಯಾಭೇದದಿಂದ ಅವಕ್ಕೆ ಬೇರೆ-ಬೇರೆ ಹೆಸರುಗಳು ಉಂಟಾಗಿವೆ. ಇದಲ್ಲದೆ ವ್ಯವಹಾರಕ್ಕೆ ಇನ್ನೇನು ಮೂಲವಿದೆ ಹೇಳು. ॥8॥
(ಶ್ಲೋಕ - 9)
ಮೂಲಮ್
ಏವಂ ನಿರುಕ್ತಂ ಕ್ಷಿತಿಶಬ್ದವೃತ್ತ-
ಮಸನ್ನಿಧಾನಾತ್ಪರಮಾಣವೋ ಯೇ ।
ಅವಿದ್ಯಯಾ ಮನಸಾ ಕಲ್ಪಿತಾಸ್ತೇ
ಯೇಷಾಂ ಸಮೂಹೇನ ಕೃತೋ ವಿಶೇಷಃ ॥
ಅನುವಾದ
ಹೀಗೆಯೇ ‘ಪೃಥಿವಿ’ ಶಬ್ದದ ವ್ಯವಹಾರವೂ ಮಿಥ್ಯೆಯೇ ಆಗಿದೆ, ವಾಸ್ತವಿಕವಾಗಿಲ್ಲ. ಏಕೆಂದರೆ, ಇದೂ ತನ್ನ ಉಪಾ ದಾನ ಕಾರಣವಾದ ಸೂಕ್ಷ್ಮ ಪರಮಾಣುಗಳಲ್ಲಿ ಲೀನವಾಗಿ ಹೋಗುತ್ತದೆ. ಯಾವುದರ ಸೇರುವಿಕೆಯಿಂದ ಪೃಥಿವೀ ರೂಪವಾದ ಕಾರ್ಯದ ಸಿದ್ಧಿಯಾಗುತ್ತದೋ ಆ ಪರಮಾಣು ಗಳೂ ಅವಿದ್ಯೆಗೆ ವಶವಾದ ಮನಸ್ಸಿನ ಕಲ್ಪನೆಯೇ ಆಗಿದೆ. ನಿಜವಾಗಿ ಅದರ ಅಸ್ತಿತ್ವವೂ ಇಲ್ಲ. ॥9॥
(ಶ್ಲೋಕ - 10)
ಮೂಲಮ್
ಏವಂ ಕೃಶಂ ಸ್ಥೂಲಮಣುರ್ಬೃಹದ್ಯದ್
ಅಸಚ್ಚ ಸಜ್ಜೀವಮಜೀವಮನ್ಯತ್ ।
ದ್ರವ್ಯಸ್ವಭಾವಾಶಯಕಾಲಕರ್ಮ-
ನಾಮ್ನಾಜಯಾವೇಹಿ ಕೃತಂ ದ್ವಿತೀಯಮ್ ॥
ಅನುವಾದ
ಹೀಗೆಯೇ ಇನ್ನೂ ಏನೆಲ್ಲ ದಪ್ಪ-ತೆಳ್ಳಗೆ, ಚಿಕ್ಕದು-ದೊಡ್ಡದು, ಕಾರ್ಯ ಕಾರಣ ಹಾಗೂ ಚೇತನ-ಅಚೇತನ ಮುಂತಾದ ಗುಣ ಗಳಿಂದ ಕೂಡಿದ ದ್ವೈತ ಪ್ರಪಂಚವಿದೆಯೋ ಅದನ್ನು ಕೂಡ ದ್ರವ್ಯ, ಸ್ವಭಾವ, ಆಶಯ, ಕಾಲ ಮತ್ತು ಕರ್ಮ ಮುಂತಾದ ಹೆಸರುಗಳುಳ್ಳ ಭಗವಂತನ ಮಾಯೆಯ ಕಾರ್ಯವೇ ಆಗಿದೆ ಎಂದು ತಿಳಿ. ॥10॥
(ಶ್ಲೋಕ - 11)
ಮೂಲಮ್
ಜ್ಞಾನಂ ವಿಶುದ್ಧಂ ಪರಮಾರ್ಥಮೇಕ-
ಮನಂತರಂ ತ್ವಬಹಿರ್ಬ್ರಹ್ಮ ಸತ್ಯಮ್ ।
ಪ್ರತ್ಯಕ್ ಪ್ರಶಾಂತಂ ಭಗವಚ್ಛಬ್ದಸಂಜ್ಞಂ
ಯದ್ವಾಸುದೇವಂ ಕವಯೋ ವದಂತಿ ॥
ಅನುವಾದ
ಪರಿಶುದ್ಧವೂ, ಜ್ಞಾನ ಸ್ವರೂಪವೂ, ಪರಮಾರ್ಥವೂ, ವಿಕಾರ ರಹಿತವೂ, ನಿರಂತರವಾಗಿ ಒಳಗೆ-ಹೊರಗೆ ತುಂಬಿಕೊಂಡಿರುವುದೂ, ಪ್ರತ್ಯಗಾನಂದವೂ ಆದ ಪರಬ್ರಹ್ಮಪರಮಾತ್ಮನೇ ಪರಮ ಸತ್ಯವು. ಅದನ್ನೇ ‘ಭಗವಂತ’ ಎಂದೂ ವಾಸುದೇವನೆಂದೂ ಜ್ಞಾನಿಗಳು ಹೇಳುತ್ತಾರೆ. ॥11॥
(ಶ್ಲೋಕ - 12)
ಮೂಲಮ್
ರಹೂಗಣೈತತ್ತಪಸಾ ನ ಯಾತಿ
ನ ಚೇಜ್ಯಯಾ ನಿರ್ವಪಣಾದ್ ಗೃಹಾದ್ವಾ
ನ ಚ್ಛಂದಸಾ ನೈವ ಜಲಾಗ್ನಿಸೂರ್ಯೈ-
ರ್ವಿನಾ ಮಹತ್ಪಾದರಜೋಭಿಷೇಕಮ್ ॥
ಅನುವಾದ
ರಹೂಗಣನೇ! ಮಹಾಪುರುಷರ ಪಾದಧೂಳಿಯಿಂದ ಅಭಿಷೇಕ ಮಾಡಿಕೊಳ್ಳದಿದ್ದರೆ ಕೇವಲ ತಪಸ್ಸು, ಯಜ್ಞವೇ ಮುಂತಾದ ವೈದಿಕ ಕರ್ಮಗಳು, ಅನ್ನಾದಿದಾನಗಳು, ಅತಿಥಿಸೇವೆ, ದೀನದರಿದ್ರರ ಸೇವೆ ಮುಂತಾದ ಗೃಹಸ್ಥೋಚಿತವಾದ ಧರ್ಮಗಳ ಅನುಷ್ಠಾನ ದಿಂದಾಗಲೀ, ವೇದಾಧ್ಯಯನದಿಂದಾಗಲೀ ಜಲ, ಅಗ್ನಿ ಅಥವಾ ಸೂರ್ಯರೇ ಮುಂತಾದವರ ಉಪಾಸನೆಯಿಂದಾಗಲೀ, ಯಾವುದೇ ಸಾಧನೆಯಿಂದಾಗಲೀ ಈ ಪರಮಾತ್ಮಜ್ಞಾನವು ಲಭಿಸಲಾರದು. ॥12॥
(ಶ್ಲೋಕ - 13)
ಮೂಲಮ್
ಯತ್ರೋತ್ತಮಶ್ಲೋಕಗುಣಾನುವಾದಃ
ಪ್ರಸ್ತೂಯತೇ ಗ್ರಾಮ್ಯಕಥಾವಿಘಾತಃ ।
ನಿಷೇವ್ಯಮಾಣೋನುದಿನಂ ಮುಮುಕ್ಷೋ-
ರ್ಮತಿಂ ಸತೀಂ ಯಚ್ಛತಿ ವಾಸುದೇವೇ ॥
ಅನುವಾದ
ಇದರ ಕಾರಣ ಮಹಾ ಪುರುಷರ ಸಮಾಜದಲ್ಲಿ ಸದಾ ಪವಿತ್ರವಾದ ಕೀರ್ತಿಯುಳ್ಳ ಶ್ರೀಹರಿಯ ಗುಣಗಳ ವರ್ಣನೆಯೇ ನಡೆಯುತ್ತದೆ. ಗ್ರಾಮ್ಯಸುಖಗಳ ಸಮಾಜವು ಅಲ್ಲಿಗೆ ಸುಳಿಯುವುದೇ ಇಲ್ಲ. ಅಂತಹ ಸಂತರ ಸಂಗದಲ್ಲಿ ಶ್ರೀಭಗವಂತನ ಕಥೆಗಳನ್ನು ನಿತ್ಯವೂ ಸೇವನೆ ಮಾಡುತ್ತಿದ್ದರೆ, ಅದು ಮೋಕ್ಷವನ್ನು ಬಯಸುವ ಮನುಷ್ಯನ ಶುದ್ಧವಾದ ಬುದ್ಧಿಯನ್ನು ಭಗವಾನ್ ವಾಸುದೇವನಲ್ಲಿ ನೆಲೆಗೊಳಿಸುವುದು. ॥13॥
(ಶ್ಲೋಕ - 14)
ಮೂಲಮ್
ಅಹಂ ಪುರಾ ಭರತೋ ನಾಮ ರಾಜಾ
ವಿಮುಕ್ತದೃಷ್ಟಶ್ರುತಸಂಗಬಂಧಃ ।
ಆರಾಧನಂ ಭಗವತ ಈಹಮಾನೋ
ಮೃಗೋಭವಂ ಮೃಗಸಂಗಾದ್ಧತಾರ್ಥಃ ॥
ಅನುವಾದ
ಹಿಂದಿನ ಜನ್ಮದಲ್ಲಿ ನಾನು ಭರತನೆಂಬ ರಾಜನಾಗಿದ್ದೆನು. ಐಹಿಕ ಮತ್ತು ಪಾರಲೌಕಿಕ ಎರಡೂ ವಿಧದ ವಿಷಯಗಳಿಂದ ವಿರಕ್ತನಾಗಿ ಭಗವಂತನ ಆರಾಧನೆಯಲ್ಲಿ ತೊಡಗಿದ್ದೆ. ಹೀಗಿದ್ದರೂ ಒಂದು ಮೃಗದಲ್ಲಿ ಆಸಕ್ತನಾದ್ದರಿಂದ ನಾನು ಪರಮಾರ್ಥ ದಿಂದ ಭ್ರಷ್ಟನಾಗಿ ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಹುಟ್ಟಬೇಕಾಯಿತು. ॥14॥
(ಶ್ಲೋಕ - 15)
ಮೂಲಮ್
ಸಾ ಮಾಂ ಸ್ಮೃತಿರ್ಮೃಗದೇಹೇಪಿ ವೀರ
ಕೃಷ್ಣಾರ್ಚನಪ್ರಭವಾ ನೋ ಜಹಾತಿ ।
ಅಥೋ ಅಹಂ ಜನಸಂಗಾದಸಂಗೋ
ವಿಶಂಕಮಾನೋವಿವೃತಶ್ಚರಾಮಿ ॥
ಅನುವಾದ
ಆದರೆ ಭಗವಾನ್ ಶ್ರೀಕೃಷ್ಣನ ಆರಾಧನೆಯ ಪ್ರಭಾವದಿಂದ ಆ ಜಿಂಕೆಯ ಯೋನಿ ಯಲ್ಲಿಯೂ ನನ್ನ ಪೂರ್ವಜನ್ಮದ ಸ್ಮೃತಿಯು ಅಳಿಯಲಿಲ್ಲ. ಅದರಿಂದಲೇ ಈಗ ನಾನು ಜನರ ಸಹವಾಸಕ್ಕೆ ಹೆದರಿ ಯಾವಾಗಲೂ ಅಸಂಗಭಾವದಿಂದ ಗುಪ್ತ ರೂಪದಿಂದಲೇ ಸಂಚರಿಸುತ್ತಿದ್ದೇನೆ. ॥15॥
(ಶ್ಲೋಕ - 16)
ಮೂಲಮ್
ತಸ್ಮಾನ್ನರೋಸಂಗ ಸುಸಂಗಜಾತ-
ಜ್ಞಾನಾಸಿನೇಹೈವ ವಿವೃಕ್ಣಮೋಹಃ ।
ಹರಿಂ ತದೀಹಾಕಥನಶ್ರುತಾಭ್ಯಾಂ
ಲಬ್ಧಸ್ಮೃತಿರ್ಯಾತ್ಯತಿಪಾರಮಧ್ವನಃ ॥
ಅನುವಾದ
ಸಾರಾಂಶ ಇಷ್ಟೇ ವಿರಕ್ತ ರಾದ ಮಹಾಪುರುಷರ ಸಂಗದಿಂದ ಉಂಟಾದ ಜ್ಞಾನವೆಂಬ ಖಡ್ಗದಿಂದ ಮನುಷ್ಯನು ಈ ಲೋಕದಲ್ಲಿಯೇ ತನ್ನ ಮೋಹ ಬಂಧನವನ್ನು ಕತ್ತರಿಸಿಹಾಕಿ, ಶ್ರೀಹರಿಯ ಲೀಲಾಕಥೆಗಳ ಶ್ರವಣ, ಕೀರ್ತನ, ಮನನ ಇವುಗಳಿಂದ ಶ್ರೀಭಗವಂತನ ನಿರಂತರ ಸ್ಮೃತಿಯನ್ನು ಪಡೆದು ಸುಲಭವಾಗಿ ಸಂಸಾರ ಮಾರ್ಗವನ್ನು ದಾಟಿ ಶ್ರೀಭಗವಂತನನ್ನು ಹೊಂದುವನು. ॥16॥
ಅನುವಾದ (ಸಮಾಪ್ತಿಃ)
ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಬ್ರಾಹ್ಮಣ-ರಹೂಗಣಸಂವಾದೇ ದ್ವಾದಶೋಽಧ್ಯಾಯಃ ॥12॥