[ಹನ್ನೊಂದನೆಯ ಅಧ್ಯಾಯ]
ಭಾಗಸೂಚನಾ
ರಹೂಗಣರಾಜನಿಗೆ ಭರತಮುನಿಯ ಉಪದೇಶ
(ಶ್ಲೋಕ - 1)
ಮೂಲಮ್ (ವಾಚನಮ್)
ಬ್ರಾಹ್ಮಣ ಉವಾಚ
ಮೂಲಮ್
ಅಕೋವಿದಃ ಕೋವಿದವಾದವಾದಾನ್
ವದಸ್ಯಥೋ ನಾತಿವಿದಾಂ ವರಿಷ್ಠಃ ।
ನ ಸೂರಯೋ ಹಿ ವ್ಯವಹಾರಮೇನಂ
ತತ್ತ್ವಾವಮರ್ಶೇನ ಸಹಾಮನಂತಿ ॥
ಅನುವಾದ
ಜಡಭರತನು ಹೇಳಿದನು — ಎಲೈ ರಾಜನೇ! ನೀನು ಅಜ್ಞಾನಿಯಾಗಿದ್ದರೂ ಪಂಡಿತರಂತೆ ಪ್ರೌಢವಾದವಾದ- ವಿವಾದಗಳ ಮಾತನ್ನು ಆಡುತ್ತಿರುವೆ. ಇದರಿಂದ ಶ್ರೇಷ್ಠ ಜ್ಞಾನಿಗಳಲ್ಲಿ ನಿನ್ನನ್ನು ಪರಿಗಣಿಸಲಾಗುವುದಿಲ್ಲ. ತತ್ತ್ವಜ್ಞಾನಿಗಳು ಈ ಅವಿಚಾರಸಿದ್ಧವಾದ ಸ್ವಾಮಿ-ಸೇವಕ ಮುಂತಾದ ವ್ಯವಹಾರಗಳನ್ನು ಪರಮಾರ್ಥದೊಡನೆ ಸೇರಿಸಿಹೇಳುವುದಿಲ್ಲ. ॥1॥
(ಶ್ಲೋಕ - 2)
ಮೂಲಮ್
ತಥೈವ ರಾಜನ್ನುರುಗಾರ್ಹಮೇಧ-
ವಿತಾನವಿದ್ಯೋರುವಿಜೃಂಭಿತೇಷು ।
ನ ವೇದವಾದೇಷು ಹಿ ತತ್ತ್ವವಾದಃ
ಪ್ರಾಯೇಣ ಶುದ್ಧೋ ನು ಚಕಾಸ್ತಿ ಸಾಧುಃ ॥
ಅನುವಾದ
ರಾಜನೇ! ಗೃಹಸ್ಥ ಜನರಿಗೆ ಉಚಿತವಾಗಿರುವ ಯಜ್ಞವಿಧಿಯ ವಿಸ್ತಾರದಲ್ಲಿಯೇ ಹೆಚ್ಚಾಗಿ ಆಸಕ್ತವಾಗಿರುವ ವೈದಿಕ ಕರ್ಮಕಾಂಡದ ಬಗೆಗೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಪರಿಶುದ್ಧವಾದ ತತ್ತ್ವಜ್ಞಾನದ ಅಭಿ ವ್ಯಕ್ತಿಯು ಸಾಮಾನ್ಯವಾಗಿ ಆ ವೇದವಾದಗಳಲ್ಲಿಯೂ ಪೂರ್ಣವಾಗಿ ಆಗಿಲ್ಲ. ॥2॥
(ಶ್ಲೋಕ - 3)
ಮೂಲಮ್
ನ ತಸ್ಯ ತತ್ತ್ವಗ್ರಹಣಾಯ ಸಾಕ್ಷಾದ್
ವರೀಯಸೀರಪಿ ವಾಚಃ ಸಮಾಸನ್ ।
ಸ್ವಪ್ನೇ ನಿರುಕ್ತ್ಯಾ ಗೃಹಮೇಧಿಸೌಖ್ಯಂ
ನ ಯಸ್ಯ ಹೇಯಾನುಮಿತಂ ಸ್ವಯಂ ಸ್ಯಾತ್ ॥
ಅನುವಾದ
ಈ ಗೃಹಸ್ಥ ಜನೋಚಿತ ಯಜ್ಞಾದಿ ಕರ್ಮಗಳಿಂದ ದೊರೆಯುವ ಸ್ವರ್ಗಾದಿ ಸುಖಗಳು ಕನಸಿನಂತೆ ಹೇಯವೆಂದು ಯಾವನಿಗೆ ತಿಳಿಯುವುದಿಲ್ಲವೋ ಆತನಿಗೆ ತತ್ತ್ವಜ್ಞಾನವನ್ನುಂಟು ಮಾಡುವುದಕ್ಕೆ ಶ್ರೇಷ್ಠತಮವಾದ ಉಪನಿಷದ್ವಾಣಿಗಳೂ ಸಮರ್ಥವಾಗಿಲ್ಲ. ॥3॥
(ಶ್ಲೋಕ - 4)
ಮೂಲಮ್
ಯಾವನ್ಮನೋ ರಜಸಾ ಪೂರುಷಸ್ಯ
ಸತ್ತ್ವೇನ ವಾ ತಮಸಾ ವಾನುರುದ್ಧಮ್ ।
ಚೇತೋಭಿರಾಕೂತಿಭಿರಾತನೋತಿ
ನಿರಂಕುಶಂ ಕುಶಲಂ ಚೇತರಂ ವಾ ॥
ಅನುವಾದ
ಮನುಷ್ಯನ ಮನಸ್ಸು, ಸತ್ತ್ವ, ರಜ, ತಮ ಈ ಗುಣಗಳಿಗೆ ವಶವಾಗಿರುವ ತನಕ ಅದು ನಿರಂಕುಶವಾಗಿ ಅವನ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಿಂದ ಶುಭಾ ಶುಭ ಕರ್ಮಗಳನ್ನು ಮಾಡಿಸುತ್ತಲೇ ಇರುತ್ತದೆ. ॥4॥
(ಶ್ಲೋಕ - 5)
ಮೂಲಮ್
ಸ ವಾಸನಾತ್ಮಾ ವಿಷಯೋಪರಕ್ತೋ
ಗುಣಪ್ರವಾಹೋ ವಿಕೃತಃ ಷೋಡಶಾತ್ಮಾ ।
ಬಿಭ್ರತ್ಪೃಥಙ್ನಾಮಭಿ ರೂಪಭೇದ-
ಮಂತರ್ಬಹಿಷ್ಟ್ವಂ ಚ ಪುರೈಸ್ತನೋತಿ ॥
ಅನುವಾದ
ಈ ಮನಸ್ಸು ವಾಸನಾಮಯ, ವಿಷಯಾಸಕ್ತ ಗುಣಗಳಿಂದ ಪ್ರೇರಿತವಾಗಿ, ವಿಕಾರಿ ಮತ್ತು ಭೂತಗಳು ಹಾಗೂ ಇಂದ್ರಿಯರೂಪವಾದ ಹದಿನಾರು ಕಲೆಗಳಲ್ಲಿ ಮುಖ್ಯವಾದುದು. ಇದೇ ಬೇರೆ-ಬೇರೆ ಹೆಸರುಗಳಿಂದ ದೇವತೆಗಳು ಹಾಗೂ ಮನುಷ್ಯರೇ ಮುಂತಾದ ರೂಪವನ್ನು ಧರಿಸಿ ಶರೀರರೂಪೀ ಉಪಾಧಿಗಳ ಭೇದದಿಂದ ಜೀವನಲ್ಲಿ ಉಚ್ಚ-ನೀಚಭಾವಗಳನ್ನು ತೋರ್ಪಡಿಸುತ್ತದೆ. ॥5॥
(ಶ್ಲೋಕ - 6)
ಮೂಲಮ್
ದುಃಖಂ ಸುಖಂ ವ್ಯತಿರಿಕ್ತಂ ಚ ತೀವ್ರಂ
ಕಾಲೋಪಪನ್ನಂ ಲಮಾವ್ಯನಕ್ತಿ ।
ಆಲಿಂಗ್ಯ ಮಾಯಾರಚಿತಾಂತರಾತ್ಮಾ
ಸ್ವದೇಹಿನಂ ಸಂಸೃತಿಚಕ್ರಕೂಟಃ ॥
ಅನುವಾದ
ಈ ಮಾಯಾಮಯ ಮನಸ್ಸು ಸಂಸಾರಚಕ್ರಕ್ಕೆ ಮೂಲ ವಾದುದು. ಇದೇ ತನ್ನ ದೇಹದ ಅಭಿಮಾನೀ ಜೀವಿಯೊಂದಿಗೆ ಸೇರಿಕೊಂಡು ಆಯಾ ಕಾಲಕ್ಕೆ ಅನುಗುಣವಾಗಿ ಅವಶ್ಯವಾಗಿ ಬರುವ ಸುಖ-ದುಃಖಗಳನ್ನಾಗಲೀ, ಮೋಹವನ್ನಾಗಲೀ ಜೀವನಿಗೆ ಉಂಟು ಮಾಡುವುದು. ॥6॥
(ಶ್ಲೋಕ - 7)
ಮೂಲಮ್
ತಾವಾನಯಂ ವ್ಯವಹಾರಃ ಸದಾವಿಃ
ಕ್ಷೇತ್ರಜ್ಞ ಸಾಕ್ಷೋ ಭವತಿ ಸ್ಥೂಲಸೂಕ್ಷ್ಮಃ ।
ತಸ್ಮಾನ್ಮನೋ ಲಿಂಗಮದೋ ವದಂತಿ
ಗುಣಾಗುಣತ್ವಸ್ಯ ಪರಾವರಸ್ಯ ॥
ಅನುವಾದ
ಈ ಮನಸ್ಸು ಇರುವ ತನಕ ಜಾಗ್ರತ್ ಮತ್ತು ಸ್ವಪ್ನಾವಸ್ಥೆಯ ವ್ಯವಹಾರಗಳು ಪ್ರಕಾಶಿತವಾಗಿ ಜೀವಿಯು ದೃಶ್ಯನಾಗುತ್ತಾನೆ. ಅದಕ್ಕಾಗಿ ಪಂಡಿತರು ಮನಸ್ಸನ್ನೇ ತ್ರಿಗುಣಮಯ ಅಥವಾ ಸಂಸಾರದ ಮತ್ತು ಗುಣಾತೀತ ಪರಮೋತ್ಕೃಷ್ಟ ಮೋಕ್ಷ ಪದದ ಕಾರಣವೆಂದು ಹೇಳುತ್ತಾರೆ. ॥7॥
(ಶ್ಲೋಕ - 8)
ಮೂಲಮ್
ಗುಣಾನುರಕ್ತಂ ವ್ಯಸನಾಯ ಜಂತೋಃ
ಕ್ಷೇಮಾಯ ನೈರ್ಗುಣ್ಯಮಥೋ ಮನಃ ಸ್ಯಾತ್ ।
ಯಥಾ ಪ್ರದೀಪೋ ಘೃತವರ್ತಿಮಶ್ನನ್
ಶಿಖಾಃ ಸಧೂಮಾ ಭಜತಿ ಹ್ಯನ್ಯದಾ ಸ್ವಮ್ ।
ಪದಂ ತಥಾ ಗುಣಕರ್ಮಾನುಬದ್ಧಂ
ವೃತ್ತೀರ್ಮನಃ ಶ್ರಯತೇನ್ಯತ್ರ ತತ್ತ್ವಮ್ ॥
ಅನುವಾದ
ವಿಷಯಾಸಕ್ತ ಮನಸ್ಸೇ ಜೀವಿಯನ್ನು ಸಂಸಾರದ ಸಂಕಟದಲ್ಲಿ ಕೆಡಹುತ್ತದೆ. ವಿಷಯಹೀನವಾದಾಗ ಅದು ಜೀವಿಗೆ ಶಾಂತಿಮಯ ಮೋಕ್ಷಪದವನ್ನು ದೊರಕಿಸಿ ಕೊಡುತ್ತದೆ, ದೀಪವು ತುಪ್ಪದ ಬತ್ತಿಯಲ್ಲಿ ಹೊತ್ತಿಕೊಂಡು ಉರಿಯುವಾಗ ಹೊಗೆಯಿಂದ ಕೂಡಿದ ಜ್ವಾಲೆಗಳನ್ನು ಉಗುಳುವುದು. ತುಪ್ಪವು ಮುಗಿದಾಗ ಅದು ತನ್ನ ಕಾರಣ ಅಗ್ನಿತತ್ತ್ವದಲ್ಲಿ ಲೀನವಾಗಿ ಹೋಗುತ್ತದೆ. ಹೀಗೆಯೇ ವಿಷಯ ಮತ್ತು ಕರ್ಮಗಳಲ್ಲಿ ಆಸಕ್ತವಾದ ಮನಸ್ಸು ಬಗೆ-ಬಗೆಯ ವೃತ್ತಿಗಳನ್ನು ಆಶ್ರಯಿಸಿ ಇರುತ್ತದೆ ಮತ್ತು ಇವುಗಳಿಂದ ಮುಕ್ತವಾದಾಗ ಅದು ತನ್ನ ತತ್ತ್ವದಲ್ಲಿ ಲೀನವಾಗುತ್ತದೆ. ॥8॥
(ಶ್ಲೋಕ - 9)
ಮೂಲಮ್
ಏಕಾದಶಾಸನ್ಮನಸೋ ಹಿ ವೃತ್ತಯ
ಆಕೂತಯಃ ಪಂಚ ಧಿಯೋಭಿಮಾನಃ ।
ಮಾತ್ರಾಣಿ ಕರ್ಮಾಣಿ ಪುರಂ ಚ ತಾಸಾಂ
ವದಂತಿ ಹೈಕಾದಶ ವೀರ ಭೂಮೀಃ ॥
ಅನುವಾದ
ಎಲೈ ವೀರನೇ! ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು, ಒಂದು ಅಹಂಕಾರ ಈ ಹನ್ನೊಂದು ಮನಸ್ಸಿನ ವೃತ್ತಿಗಳು. ಐದು ಪ್ರಕಾರದ ಕರ್ಮಗಳು, ಐದು ತನ್ಮಾತ್ರೆಗಳು, ಒಂದು ಶರೀರ ಈ ಹನ್ನೊಂದು ಆ ವೃತ್ತಿಗಳಿಗೆ ಆಧಾರವಾಗಿರುವ ವಿಷಯಗಳೆಂದು ಹೇಳಲಾಗಿವೆ. ॥9॥
(ಶ್ಲೋಕ - 10)
ಮೂಲಮ್
ಗಂಧಾಕೃತಿಸ್ಪರ್ಶರಸಶ್ರವಾಂಸಿ
ವಿಸರ್ಗರತ್ಯರ್ತ್ಯಭಿಜಲ್ಪಶಿಲ್ಪಾಃ ।
ಏಕಾದಶಂ ಸ್ವೀಕರಣಂ ಮಮೇತಿ
ಶಯ್ಯಾಮಹಂ ದ್ವಾದಶಮೇಕ ಆಹುಃ ॥
ಅನುವಾದ
ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ಐದು ಜ್ಞಾನೇಂದ್ರಿಯಗಳ ವಿಷಯಗಳು. ಮಲತ್ಯಾಗ, ಸಂಭೋಗ, ನಡಿಗೆ, ಭಾಷಣ, ಕೊಟ್ಟು- ಕೊಳ್ಳುವ ವ್ಯಾಪಾರ ಈ ಐದು ಕರ್ಮೇಂದ್ರಿಯಗಳ ವಿಷಯಗಳು. ಶರೀರವನ್ನು ‘ಇದು ನನ್ನನ್ನು’ ಎಂದು ಸ್ವೀಕರಿಸುವುದು ಅಹಂಕಾರದ ವಿಷಯವಾಗಿದೆ. ಕೆಲವರು ಅಹಂಕಾರವನ್ನು ಮನಸ್ಸಿನ ಹನ್ನೆರಡನೆಯ ವೃತ್ತಿ ಮತ್ತು ಅದರ ಆಶ್ರಯ ಶರೀರವನ್ನು ಹನ್ನೆರಡನೆಯ ವಿಷಯವೆಂದು ತಿಳಿಯುತ್ತಾರೆ. ॥10॥
(ಶ್ಲೋಕ - 11)
ಮೂಲಮ್
ದ್ರವ್ಯಸ್ವಭಾವಾಶಯಕರ್ಮಕಾಲೈ-
ರೇಕಾದಶಾಮೀ ಮನಸೋ ವಿಕಾರಾಃ ।
ಸಹಸ್ರಶಃ ಶತಶಃ ಕೋಟಿಶಶ್ಚ
ಕ್ಷೇತ್ರಜ್ಞತೋ ನ ಮಿಥೋ ನ ಸ್ವತಃ ಸ್ಯುಃ ॥
ಅನುವಾದ
ಮನಸ್ಸಿನ ಈ ಹನ್ನೊಂದು ವೃತ್ತಿಗಳೂ ದ್ರವ್ಯ (ವಿಷಯ), ಸ್ವಭಾವ, ಆಶಯ (ಸಂಸ್ಕಾರ), ಕರ್ಮ ಮತ್ತು ಕಾಲದ ಮೂಲಕ ನೂರಾರು, ಸಾವಿರಾರು, ಕೋಟ್ಯಂತರ ಭೇದಗಳಾಗಿ ಪರಿ ಣಾಮ ಹೊಂದುತ್ತವೆ. ಆದರೆ ಅವುಗಳ ಇರುವಿಕೆಯು ಕ್ಷೇತ್ರಜ್ಞನಾದ ಆತ್ಮನ ಇರುವಿಕೆಯಿಂದಲೇ ಇವೆ. ಸ್ವತಃ ಅಥವಾ ಪರಸ್ಪರ ಸೇರುವಿಕೆಯಿಂದಲ್ಲ. ॥11॥
(ಶ್ಲೋಕ - 12)
ಮೂಲಮ್
ಕ್ಷೇತ್ರಜ್ಞ ಏತಾ ಮನಸೋ ವಿಭೂತೀ-
ರ್ಜೀವಸ್ಯ ಮಾಯಾರಚಿತಸ್ಯ ನಿತ್ಯಾಃ ।
ಆವಿರ್ಹಿತಾಃ ಕ್ವಾಪಿ ತಿರೋಹಿತಾಶ್ಚ
ಶುದ್ಧೋ ವಿಚಷ್ಟೇ ಹ್ಯವಿಶುದ್ಧಕರ್ತುಃ ॥
ಅನುವಾದ
ಹೀಗಿದ್ದರೂ ಮನಸ್ಸಿನೊಂದಿಗೆ ಕ್ಷೇತ್ರಜ್ಞನಿಗೆ ಯಾವ ಸಂಬಂಧವೂ ಇಲ್ಲ. ಇದಾದರೋ ಜೀವಿಯದೇ ಮಾಯಾ ನಿರ್ಮಿತ ಉಪಾಧಿಯಾಗಿದೆ. ಇದು ಪ್ರಾಯಶಃ ಸಂಸಾರ ಬಂಧನದಲ್ಲಿ ಕೆಡಹುವ ಅಶುದ್ಧ ಕರ್ಮಗಳಲ್ಲೇ ಪ್ರವೃತ್ತ ವಾಗಿರುತ್ತದೆ. ಮೇಲೆ ಹೇಳಿದ ಇವುಗಳ ವೃತ್ತಿಗಳು ಪ್ರವಾಹ ರೂಪದಿಂದ ನಿತ್ಯವಾಗಿಯೇ ಇರುತ್ತವೆ. ಜಾಗ್ರತ್ ಮತ್ತು ಸ್ವಪ್ನದ ಸಮಯದಲ್ಲಿ ಅವು ಪ್ರಕಟಗೊಳ್ಳುತ್ತವೆ ಮತ್ತು ಸುಷುಪ್ತಿಯಲ್ಲಿ ಅಡಗಿರುತ್ತವೆ. ಇವೆರಡೂ ಅವಸ್ಥೆಗಳಲ್ಲಿ ವಿಶುದ್ಧನೂ, ಚಿನ್ಮಾತ್ರನೂ ಆದ ಕ್ಷೇತ್ರಜ್ಞನು ಮನಸ್ಸಿನ ಈ ವೃತ್ತಿಗಳನ್ನು ಸಾಕ್ಷಿರೂಪದಿಂದ ನೋಡುತ್ತಾನೆ. ॥12॥
(ಶ್ಲೋಕ - 13)
ಮೂಲಮ್
ಕ್ಷೇತ್ರಜ್ಞ ಆತ್ಮಾ ಪುರುಷಃ ಪುರಾಣಃ
ಸಾಕ್ಷಾತ್ಸ್ವಯಂಜ್ಯೋತಿರಜಃ ಪರೇಶಃ ।
ನಾರಾಯಣೋ ಭಗವಾನ್ವಾಸುದೇವಃ
ಸ್ವಮಾಯಯಾತ್ಮನ್ಯವಧೀಯಮಾನಃ ॥
ಅನುವಾದ
ಈ ಕ್ಷೇತ್ರಜ್ಞ ಪರಮಾತ್ಮನು ಸರ್ವವ್ಯಾಪಕನೂ, ಜಗತ್ತಿನ ಮೂಲ ಕಾರಣನೂ, ಪರಿಪೂರ್ಣನೂ, ಅಪರೋಕ್ಷನೂ, ಸ್ವಯಂ ಪ್ರಕಾಶನೂ, ಜನ್ಮರಹಿತನೂ, ಬ್ರಹ್ಮಾದಿಗಳಿಗೂ ನಿಯಾಮಕನೂ ಮತ್ತು ತನ್ನ ಅಧೀನದಲ್ಲಿರುವ ಮಾಯೆಯ ಮೂಲಕ ಎಲ್ಲರ ಅಂತಃಕರಣದಲ್ಲಿ ಇದ್ದು ಜೀವರನ್ನು ಪ್ರೇರಿತಗೊಳಿಸುವ ಸಮಸ್ತ ಪ್ರಾಣಿಗಳ ಆಶ್ರಯಸ್ವರೂಪನೂ ಆದ ಭಗವಾನ್ ವಾಸುದೇವನೇ ಆಗಿದ್ದಾನೆ. ॥13॥
(ಶ್ಲೋಕ - 14)
ಮೂಲಮ್
ಯಥಾನಿಲಃ ಸ್ಥಾವರಜಂಗಮಾನಾ-
ಮಾತ್ಮಸ್ವರೂಪೇಣ ನಿವಿಷ್ಟ ಈಶೇತ್ ।
ಏವಂ ಪರೋ ಭಗವಾನ್ವಾಸುದೇವಃ
ಕ್ಷೇತ್ರಜ್ಞ ಆತ್ಮೇದಮನುಪ್ರವಿಷ್ಟಃ ॥
ಅನುವಾದ
ವಾಯುವು ಸಮಸ್ತ ಸ್ಥಾವರ-ಜಂಗಮ ಪ್ರಾಣಿಗಳಲ್ಲಿ ಪ್ರಾಣ ರೂಪದಿಂದ ಸೇರಿಕೊಂಡು ಅವುಗಳನ್ನು ಪ್ರೇರೇಪಿಸು ವಂತೆಯೇ ಆ ಪರಮೇಶ್ವರ ಭಗವಾನ್ ವಾಸುದೇವನು ಸರ್ವಸಾಕ್ಷಿ ಆತ್ಮಸ್ವರೂಪದಿಂದ ಈ ಸಮಸ್ತ ಪ್ರಪಂಚದಲ್ಲಿ ಓತಪ್ರೋತನಾಗಿದ್ದಾನೆ. ॥14॥
(ಶ್ಲೋಕ - 15)
ಮೂಲಮ್
ನ ಯಾವದೇತಾಂ ತನುಭೃನ್ನರೇಂದ್ರ
ವಿಧೂಯ ಮಾಯಾಂ ವಯುನೋದಯೇನ ।
ವಿಮುಕ್ತಸಂಗೋ ಜಿತಷಟ್ಸಪತ್ನೋ
ವೇದಾತ್ಮತತ್ತ್ವಂ ಭ್ರಮತೀಹ ತಾವತ್ ॥
(ಶ್ಲೋಕ - 16)
ಮೂಲಮ್
ನ ಯಾವದೇತನ್ಮನ ಆತ್ಮಲಿಂಗಂ
ಸಂಸಾರತಾಪಾವಪನಂ ಜನಸ್ಯ ।
ಯಚ್ಛೋಕಮೋಹಾಮಯರಾಗಲೋಭ-
ವೈರಾನುಬಂಧಂ ಮಮತಾಂ ವಿಧತ್ತೇ ॥
ಅನುವಾದ
ರಾಜನೇ! ಮನುಷ್ಯನು ಜ್ಞಾನೋದಯದ ಮೂಲಕ ಈ ಮಾಯೆಯನ್ನು ತಿರಸ್ಕರಿಸಿ, ಎಲ್ಲದರ ಆಸಕ್ತಿಯನ್ನು ಬಿಟ್ಟು, ಕಾಮ-ಕ್ರೋಧಾದಿ ಆರು ಶತ್ರುಗಳನ್ನು ಗೆದ್ದುಕೊಂಡು ಆತ್ಮತತ್ತ್ವವನ್ನು ತಿಳಿದುಕೊಳ್ಳು ವುದಿಲ್ಲವೋ ಮತ್ತು ಆತ್ಮನ ಉಪಾಧಿರೂಪವಾದ ಮನಸ್ಸನ್ನು ಸಂಸಾರವು ದುಃಖದ ಕ್ಷೇತ್ರವೆಂದು ತಿಳಿಯುವುದಿಲ್ಲವೋ ಅವನು ಈ ಲೋಕದಲ್ಲಿ ಹೀಗೆಯೇ ಅಲೆಯುತ್ತಾ ಇರುತ್ತಾನೆ. ಏಕೆಂದರೆ, ಈ ಚಿತ್ತವೇ ಅವನ ಶೋಕ, ಮೋಹ, ರೋಗ, ರಾಗ, ಲೋಭ ಮತ್ತು ವೈರ ಮುಂತಾದ ಸಂಸ್ಕಾರಗಳು ಹಾಗೂ ಮಮತೆಯನ್ನು ವೃದ್ಧಿಪಡಿಸುತ್ತಾ ಇರುತ್ತದೆ. ॥15-16॥
(ಶ್ಲೋಕ - 17)
ಮೂಲಮ್
ಭ್ರಾತೃವ್ಯಮೇನಂ ತದದಭ್ರವೀರ್ಯ-
ಮುಪೇಕ್ಷಯಾಧ್ಯೇಧಿತಮಪ್ರಮತ್ತಃ ।
ಗುರೋರ್ಹರೇಶ್ಚರಣೋಪಾಸನಾಸೋ
ಜಹಿ ವ್ಯಲೀಕಂ ಸ್ವಯಮಾತ್ಮಮೋಷಮ್ ॥
ಅನುವಾದ
ಈ ಮನಸ್ಸೇ ನಿನ್ನ ದೊಡ್ಡ ಬಲಿಷ್ಠವಾದ ಶತ್ರುವಾಗಿದೆ. ನೀನು ಉಪೇಕ್ಷೆ ಮಾಡಿದ್ದರಿಂದ ಇದರ ಶಕ್ತಿಯು ಇನ್ನೂ ಹೆಚ್ಚಿದೆ. ಇದು ಸ್ವಯಂ ಸರ್ವಥಾ ಮಿಥ್ಯೆಯಾಗಿದ್ದರೂ ನಿನ್ನ ಆತ್ಮ ಸ್ವರೂಪವನ್ನು ಮರೆಮಾಚುತ್ತಿದೆ. ಅದಕ್ಕಾಗಿ ನೀನು ಸಾವಧಾನವಾಗಿದ್ದು ಶ್ರೀಗುರು ಮತ್ತು ಹರಿಯ ಚರಣಗಳ ಉಪಾಸನೆಯೆಂಬ ಶಸ್ತ್ರದಿಂದ ಇದನ್ನು ಕೊಂದುಬಿಡು. ॥17॥
ಅನುವಾದ (ಸಮಾಪ್ತಿಃ)
ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಬ್ರಾಹ್ಮಣ-ರಹೂಗಣಸಂವಾದೇ ಏಕಾದಶೋಽಧ್ಯಾಯಃ ॥11॥