೧೦

[ಹತ್ತನೆಯ ಅಧ್ಯಾಯ]

ಭಾಗಸೂಚನಾ

ಜಡಭರತ ಮತ್ತು ರಹೂಗಣ ರಾಜನ ಭೇಟಿ

(ಗದ್ಯ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಥ ಸಿಂಧುಸೌವೀರಪತೇ ರಹೂಗಣಸ್ಯ ವ್ರಜತ ಇಕ್ಷುಮತ್ಯಾಸ್ತಟೇ ತತ್ಕುಲಪತಿನಾ ಶಿಬಿಕಾವಾಹ ಪುರುಷಾನ್ವೇಷಣಸಮಯೇ ದೈವೇನೋಪಸಾದಿತಃ ಸ ದ್ವಿಜವರ ಉಪಲಬ್ಧ ಏಷ ಪೀವಾ ಯುವಾ ಸಂಹನನಾಂಗೋ ಗೋಖರವದ್ಧುರಂ ವೋಢುಮಲಮಿತಿ ಪೂರ್ವವಿಷ್ಟಿಗೃಹೀತೈಃ ಸಹ ಗೃಹೀತಃ ಪ್ರಸಭಮತದರ್ಹ ಉವಾಹ ಶಿಬಿಕಾಂ ಸ ಮಹಾನುಭಾವಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಒಮ್ಮೆ ಸಿಂಧು-ಸೌವೀರ ದೇಶದ ಒಡೆಯ ರಹೂಗಣ ಮಹಾರಾಜನು ಪಲ್ಲಕ್ಕಿಯನ್ನೇರಿ ಹೋಗುತ್ತಿದ್ದಾಗ ದಾರಿಯಲ್ಲಿ ಇಕ್ಷುಮತಿ ನದಿಯ ತೀರದಲ್ಲಿ ಪಲ್ಲಕ್ಕಿಯನ್ನು ಹೊರುವ ಬೋಯಿಗಳ ನಾಯಕನಿಗೆ ಒಬ್ಬ ಬೋಯಿಯ ಆವಶ್ಯಕತೆ ಒದಗಿತು. ಅದಕ್ಕಾಗಿ ಬೋಯಿಯನ್ನು ಹುಡುಕುತ್ತಿದ್ದಾಗ ದೈವವಶದಿಂದ ಅವನಿಗೆ ಬ್ರಾಹ್ಮಣ ಶ್ರೇಷ್ಠನಾದ ಈ ಜಡಭರತನು ಸಿಕ್ಕಿದನು. ‘ಈ ಮನುಷ್ಯನು ಹೃಷ್ಟ- ಪುಷ್ಟನಾಗಿ ದೃಢಕಾಯನಾಗಿದ್ದಾನೆ, ತರುಣನಾಗಿದ್ದಾನೆ. ಇವನ ಅಂಗಾಂಗ ಗಳು ಗಟ್ಟಿ-ಮುಟ್ಟಾಗಿವೆ. ಆದ್ದರಿಂದ ಈತನು ಎತ್ತು-ಕತ್ತೆ ಗಳಂತೆ ಭಾರವನ್ನು ಚೆನ್ನಾಗಿ ಹೊರಬಲ್ಲನು’ ಎಂದು ಯೋಚಿಸಿ, ಆತನು ಬಿಟ್ಟಿ ಕೆಲಸಕ್ಕೆ ಸಿಕ್ಕಿದ್ದರಿಂದ ಇತರ ಬೋಯಿಗಳ ಜೊತೆಗೆ ಭರತನನ್ನೂ ಬಲಾತ್ಕಾರವಾಗಿ ಹಿಡಿದುತಂದು ಪಲ್ಲಕ್ಕಿಯನ್ನು ಹೊರೆಸಿಬಿಟ್ಟನು. ಮಹಾತ್ಮನಾದ ಭರತನು ಯಾವ ರೀತಿಯಿಂದಲೂ ಇಂತಹ ಕೆಲಸಕ್ಕೆ ಯೋಗ್ಯನಲ್ಲದಿದ್ದರೂ ಅವನು ಏನನ್ನೂ ಮರು ಮಾತಾಡದೆ ಸುಮ್ಮನೆ ಪಲ್ಲಕ್ಕಿಯನ್ನು ಹೊತ್ತು ನಡೆದನು. ॥1॥

(ಗದ್ಯ - 2)

ಮೂಲಮ್

ಯದಾ ಹಿ ದ್ವಿಜವರಸ್ಯೇಷುಮಾತ್ರಾವಲೋಕಾನುಗತೇರ್ನ ಸಮಾಹಿತಾ ಪುರುಷಗತಿಸ್ತದಾ ವಿಷಮಗತಾಂ ಸ್ವಶಿಬಿಕಾಂ ರಹೂಗಣ ಉಪಧಾರ್ಯ ಪುರುಷಾನಧಿವಹತ ಆಹ ಹೇ ವೋಢಾರಃ ಸಾಧ್ವತಿಕ್ರಮತ ಕಿಮಿತಿ ವಿಷಮಮುಹ್ಯತೇ ಯಾನಮಿತಿ॥

ಅನುವಾದ

ಆ ದ್ವಿಜಶ್ರೇಷ್ಠನು ತನ್ನ ಕಾಲ್ಕೆಳಗೆ ಯಾವುದೇ ಜೀವಿಯೂ ಹಿಂಸೆಗೊಳಗಾಗಬಾರದೆಂಬ ಭಯದಿಂದ ಒಂದು ಬಾಣದಷ್ಟು ಮುಂದಿನ ಭೂಮಿಯನ್ನು ನೋಡಿ ನಡೆಯುತ್ತಿದ್ದನು. ಅದರಿಂದ ಬೇರೆ ಬೋಯಿಗಳ ಜೊತೆಗೆ ಇವನ ನಡಿಗೆ ಸರಿಹೊಂದುತ್ತಿರಲಿಲ್ಲ. ಆದ್ದರಿಂದ ಪಲ್ಲಕ್ಕಿಯು ಅಡ್ಡಾದಿಡ್ಡಿ ಯಾಗುವುದನ್ನು ಕಂಡು ರಾಜಾರಹೂಗಣನು ಪಲ್ಲಕ್ಕಿಯನ್ನು ಹೊರುವವರಿಗೆ ಕುರಿತು ‘ಎಲೈ ಬೋಯಿಗಳೇ! ಸರಿಯಾಗಿ ನಡೆಯಿರಿ. ಪಲ್ಲಕ್ಕಿಯನ್ನು ಏಕೆ ಹೀಗೆ ಮೇಲಕ್ಕೂ-ಕೆಳಕ್ಕೂ ತೂಗುತ್ತಾ ಹೆಜ್ಜೆಹಾಕುತ್ತಿದ್ದೀರಲ್ಲ?’ ಎಂದು ಆಕ್ಷೇಪಿಸಿದನು.॥2॥

(ಗದ್ಯ - 3)

ಮೂಲಮ್

ಅಥ ತ ಈಶ್ವರವಚಃ ಸೋಪಾಲಂಭಮುಪಾಕರ್ಣ್ಯೋಪಾಯತುರೀಯಾಚ್ಛಂಕಿತಮನಸಸ್ತಂ ವಿಜ್ಞಾಪಯಾಂಬಭೂವುಃ ॥

ಅನುವಾದ

ರಾಜನ ಆ ಆಕ್ಷೇಪಾರ್ಹವಾದ ಮಾತನ್ನು ಕೇಳಿ, ತಮಗೆ ಶಿಕ್ಷೆಯಾದೀತೆಂಬ ಭಯದಿಂದ ಅವರು ರಾಜನಲ್ಲಿ ಹೀಗೆ ವಿನಂತಿಸಿಕೊಂಡರು. ॥3॥

(ಗದ್ಯ - 4)

ಮೂಲಮ್

ನ ವಯಂ ನರದೇವ ಪ್ರಮತ್ತಾ ಭವನ್ನಿಯಮಾನುಪಥಾಃ ಸಾಧ್ವೇವ ವಹಾಮಃ ಅಯಮಧುನೈವ ನಿಯುಕ್ತೋಪಿ ನ ದ್ರುತಂ ವ್ರಜತಿ ನಾನೇನ ಸಹ ವೋಢುಮು ಹ ವಯಂ ಪಾರಯಾಮ ಇತಿ ॥

ಅನುವಾದ

ಮಹಾಪ್ರಭುಗಳೇ! ನಾವೇನು ಮೈಮರೆತಿಲ್ಲ. ತಮ್ಮ ನಿಯಮ-ಮರ್ಯಾದೆಗಳಿಗೆ ಅನುಗುಣವಾಗಿ ಸರಿಯಾಗಿಯೇ ಪಲ್ಲಕ್ಕಿಯನ್ನು ಸಾಗಿಸುತ್ತಿದ್ದೇವೆ. ಆದರೆ ಈ ಹೊಸ ಬೋಯಿಯು ಈಗ ತಾನೇ ಪಲ್ಲಕ್ಕಿಯನ್ನು ಹೊರಲು ನೇಮಿ ಸಲ್ಪಟ್ಟಿದ್ದರೂ ಬೇಗೆ-ಬೇಗನೇ ನಡೆಯುತ್ತಿಲ್ಲ. ನಾವು ಈತನೊಡನೆ ಪಲ್ಲಕ್ಕಿಯನ್ನು ಹೊರಲಾರೆವು. ॥4॥

(ಗದ್ಯ - 5)

ಮೂಲಮ್

ಸಾಂಸರ್ಗಿಕೋ ದೋಷ ಏವ ನೂನಮೇಕಸ್ಯಾಪಿ ಸರ್ವೇಷಾಂ ಸಾಂಸರ್ಗಿಕಾಣಾಂ ಭವಿತುಮರ್ಹತೀತಿ ನಿಶ್ಚಿತ್ಯ ನಿಶಮ್ಯ ಕೃಪಣವಚೋ ರಾಜಾ ರಹೂಗಣ ಉಪಾಸಿತವೃದ್ಧೋಪಿ ನಿಸರ್ಗೇಣ ಬಲಾತ್ಕೃತ ಈಷದುತ್ಥಿತಮನ್ಯುರ ವಿಸ್ಪಷ್ಟಬ್ರಹ್ಮತೇಜಸಂ ಜಾತವೇದಸಮಿವ ರಜಸಾವೃತಮತಿರಾಹ ॥

ಅನುವಾದ

ಬೋಯಿಗಳ ಈ ದೀನವಾದ ಮಾತನ್ನು ಕೇಳಿ ರಹೂಗಣ ರಾಜನು ‘ಸಂಸರ್ಗದಿಂದ ಉಂಟಾದ ದೋಷವು ಒಬ್ಬ ನಲ್ಲಿದ್ದರೂ ಆತನೊಡನೆ ಸಂಬಂಧವನ್ನು ಇಟ್ಟುಕೊಂಡಿರುವ ಎಲ್ಲ ಮನುಷ್ಯರಲ್ಲಿಯೂ ಹರಡುವುದು. ಅದಕ್ಕಾಗಿ ಇದಕ್ಕೆ ಪ್ರತೀಕಾರ ಮಾಡದೇ ಇದ್ದರೆ ಎಲ್ಲ ಬೋಯಿಗಳ ನಡಿಗೆಯು ಕೆಟ್ಟುಹೋಗುವುದು.’ ಈ ರೀತಿಯಲ್ಲಿ ಯೋಚಿಸಿದ ರಾಜನಿಗೆ ಸ್ವಲ್ಪ ಕೋಪವೂ ಉಂಟಾಯಿತು. ಅವನು ಮಹಾಪುರುಷರ ಸೇವೆಮಾಡಿದ್ದರೂ ಕ್ಷತ್ರಿಯ ಸ್ವಭಾವಕ್ಕೆ ವಶನಾಗಿ ಬಲವಂತವಾಗಿ ಅವನ ಬುದ್ಧಿಯು ರಜೋಗುಣದಿಂದ ತುಂಬಿಹೋಯಿತು. ಆಗ ಆತನು ಬೂದಿ ಮುಚ್ಚಿದ್ದ ಕೆಂಡದಂತೆ ಬ್ರಹ್ಮತೇಜಸ್ಸು ಪ್ರಕಟವಾಗದೆ ಮರೆಗೊಂಡಿದ್ದ ಆ ಬ್ರಾಹ್ಮಣಶ್ರೇಷ್ಠನಿಗೆ ಈ ರೀತಿಯಾಗಿ ವ್ಯಂಗ್ಯದಿಂದ ತುಂಬಿದ ಮಾತುಗಳನ್ನು ಆಡಿದನು ॥5॥

(ಗದ್ಯ - 6)

ಮೂಲಮ್

ಅಹೋ ಕಷ್ಟಂ ಭ್ರಾತರ್ವ್ಯಕ್ತಮುರು ಪರಿಶ್ರಾಂತೋ ದೀರ್ಘ ಮಧ್ವಾನಮೇಕ ಏವ ಊಹಿವಾನ್ಸುಚಿರಂ ನಾತಿಪೀವಾ ನ ಸಂಹನನಾಂಗೋ ಜರಸಾಚೋಪದ್ರುತೋ ಭವಾನ್ ಸಖೇ ನೋ ಏವಾಪರ ಏತೇ ಸಂಘಟ್ಟಿನ ಇತಿ ಬಹು ವಿಪ್ರಲಬ್ಧೋಪ್ಯವಿದ್ಯಯಾ ರಚಿತದ್ರವ್ಯಗುಣಕರ್ಮಾಶಯಸ್ವಚರಮ ಕಲೇವರೇವಸ್ತುನಿ ಸಂಸ್ಥಾನವಿಶೇಷೇಹಂಮಮೇತ್ಯನಧ್ಯಾರೋ ಪಿತಮಿಥ್ಯಾಪ್ರತ್ಯಯೋ ಬ್ರಹ್ಮಭೂತಸ್ತೂಷ್ಣೀಂ ಶಿಬಿಕಾಂ ಪೂರ್ವವದುವಾಹ ॥

ಅನುವಾದ

‘ಅಯ್ಯೋ ಪಾಪ! ನಿನಗೆ ತುಂಬಾ ಆಯಾಸವಾಗಿರಬೇಕು. ಯಾರ ಸಹಾಯವೂ ಇಲ್ಲದೆ ಬಹುದೂರ ಬಹುಕಾಲದವರೆಗೂ ನೀನೊಬ್ಬನೇ ಪಲ್ಲಕ್ಕಿಯನ್ನು ಹೊತ್ತು ಬಂದಿರುವೆ. ನಿನ್ನ ದೇಹವೂ ಅಷ್ಟೇನೂ ದಪ್ಪವಾಗಿಲ್ಲ. ಅಂಗಗಳೂ ದೃಢವಾಗಿಲ್ಲ. ಜೊತೆಗೆ ಮುಪ್ಪು ನಿನ್ನನ್ನು ಆಕ್ರಮಿಸಿ ಅದುಮಿಹಾಕಿದೆಯಲ್ಲವೇ?’ ಹೀಗೆ ಬಹಳಷ್ಟು ಕಟಕಿಯನ್ನು ರಾಜನು ನುಡಿದರೂ ಅವನು ಹಿಂದಿನಂತೆಯೇ ಸುಮ್ಮನೆ ಪಲ್ಲಕ್ಕಿಯನ್ನು ಹೊತ್ತು ನಡೆಯು ತ್ತಿದ್ದನು. ರಾಜನ ಮಾತುಗಳನ್ನು ಆತನು ಸ್ವಲ್ಪವೂ ಕೆಟ್ಟದಾಗಿ ಭಾವಿಸಲಿಲ್ಲ. ಏಕೆಂದರೆ, ಪಂಚಭೂತಗಳು, ಇಂದ್ರಿಯಗಳು, ಅಂತಃಕರಣಗಳ ಸಮುದಾಯವಾದ ಈ ತನ್ನ ಕೊನೆಯ ಶರೀರವು ಅವಿದ್ಯೆಯ ಕಾರ್ಯವೇ ಆಗಿದೆ ಎಂದು ಆತನು ಅರಿತಿದ್ದನು. ಅದು ವಿವಿಧ ಅಂಗಗಳಿಂದ ಕೂಡಿಕೊಂಡು ಕಾಣಿಸಿಕೊಂಡಿದ್ದರೂ ವಸ್ತುತಃ ಇರಲೇ ಇಲ್ಲ. ಅದಕ್ಕಾಗಿ ಅದರಲ್ಲಿ ಅವನಿಗೆ ‘ನಾನು-ನನ್ನದು’ ಎಂಬ ಮಿಥ್ಯಾ ಅಧ್ಯಾಸವು ಸರ್ವಥಾ ಹೊರಟುಹೋಗಿತ್ತು ಮತ್ತು ಅವನು ಬ್ರಹ್ಮಸ್ವರೂಪನೇ ಆಗಿದ್ದನು. ॥6॥

(ಗದ್ಯ - 7)

ಮೂಲಮ್

ಅಥ ಪುನಃ ಸ್ವಶಿಬಿಕಾಯಾಂ ವಿಷಮಗತಾಯಾಂ ಪ್ರಕುಪಿತ ಉವಾಚ ರಹೂಗಣಃ ಕಿಮಿದಮರೇ ತ್ವಂ ಜೀವನ್ಮೃತೋ ಮಾಂ ಕದರ್ಥೀಕೃತ್ಯ ಭರ್ತೃಶಾಸನಮ- ತಿಚರಸಿ ಪ್ರಮತ್ತಸ್ಯ ಚ ತೇ ಕರೋಮಿ ಚಿಕಿತ್ಸಾಂ ದಂಡಪಾಣಿರಿವ ಜನತಾಯಾ ಯಥಾ ಪ್ರಕೃತಿಂ ಸ್ವಾಂ ಭಜಿಷ್ಯಸ ಇತಿ ॥

ಅನುವಾದ

ತಾನು ಇಷ್ಟು ಹೇಳಿದರೂ ಪಲ್ಲಕ್ಕಿಯು ಸರಿಯಾಗಿ ಹೋಗದೆ ಇರುವುದನ್ನು ಕಂಡು ರಾಜನು ಕ್ರೋಧದಿಂದ ಕೆಂಡಕಾರುತ್ತಾ ಆ ಭರತಮುನಿಯನ್ನು ‘ಎಲವೋ! ಇದೇನಿದು? ನೀನು ಜೀವಂತನಾಗಿದ್ದರೂ ಸತ್ತಿರುವೆಯಾ? ನನ್ನನ್ನು ತಿರಸ್ಕರಿಸಿ ನನ್ನ ಆಜ್ಞೆಯನ್ನು ಉಲ್ಲಂಘಿಸಿದ್ದೀಯೆ. ದಂಡಪಾಣಿಯಾದ ಯಮಧರ್ಮರಾಜನು ಜನರಿಗೆ ಅಪ ರಾಧಕ್ಕಾಗಿ ಶಿಕ್ಷೆಯನ್ನು ಕೊಡುವಂತೆ ನಾನು ನಿನಗೆ ಈಗಲೇ ತಕ್ಕ ಚಿಕಿತ್ಸೆಯನ್ನು ಮಾಡುತ್ತೇನೆ. ಆಗ ನಿನ್ನ ಬುದ್ಧಿಯು ಸರಿಹೋಗುವುದು’ ಎಂದು ಗದರಿಸಿದನು. ॥7॥

(ಗದ್ಯ - 8)

ಮೂಲಮ್

ಏವಂ ಬಹ್ವಬದ್ಧಮಪಿ ಭಾಷಮಾಣಂ ನರದೇವಾಭಿಮಾನಂ ರಜಸಾ ತಮಸಾನುವಿದ್ಧೇನ ಮದೇನ ತಿರಸ್ಕೃತಾಶೇಷಭಗವತ್ಪ್ರಿಯನಿಕೇತಂ ಪಂಡಿತಮಾನಿನಂ ಸ ಭಗವಾನ್ ಬ್ರಾಹ್ಮಣೋ ಬ್ರಹ್ಮಭೂತಃ ಸರ್ವಭೂತ ಸುಹೃದಾತ್ಮಾ ಯೋಗೇಶ್ವರಚರ್ಯಾಯಾಂ ನಾತಿವ್ಯತ್ಪನ್ನಮತಿಂ ಸ್ಮಯಮಾನ ಇವ ವಿಗತಸ್ಮಯ ಇದಮಾಹ ॥

ಅನುವಾದ

ಹೀಗೆ ತಾನು ರಾಜನೆಂಬ ದುರಭಿಮಾನದಿಂದ ರಹೂಗಣ ರಾಜನು ಮನಬಂದಂತೆ ಮಾತುಗಳನ್ನಾಡಿದನು. ತನ್ನನ್ನು ಮಹಾಪಂಡಿತನೆಂದು ಭಾವಿಸಿಕೊಂಡು ರಜೋಗುಣ- ತಮೋಗುಣಗಳಿಂದ ಕೂಡಿದ ಅಹಂಕಾರಕ್ಕೆ ವಶನಾಗಿ, ಶ್ರೀಭಗವಂತನ ಅನನ್ಯ ಪ್ರೇಮಕ್ಕೆ ಪಾತ್ರನಾದ, ಭಕ್ತಶ್ರೇಷ್ಠ ನಾದ ಭರತನನ್ನು ತಿರಸ್ಕಾರ ಮಾಡಿದನು. ಯೋಗೇಶ್ವರರ ನಡೆಯು ಹೇಗಿರುತ್ತದೆ? ಎಂಬುದರ ಪರಿಚಯವೇ ಆತನಿಗೆ ಇರಲಿಲ್ಲ. ಆತನ ಆ ಅಪಕ್ವವಾದ ಬುದ್ಧಿಯನ್ನು ನೋಡಿ ಸಮಸ್ತಪ್ರಾಣಿಗಳಲ್ಲಿಯೂ ಸೌಹಾರ್ದ ತುಂಬಿದ ಆತ್ಮವುಳ್ಳವನಾಗಿ ಬ್ರಹ್ಮದಲ್ಲಿ ನೆಲೆಗೊಂಡಿದ್ದ ಆ ಬ್ರಾಹ್ಮ ಣೋತ್ತಮನು ನಸುನಕ್ಕು ಯಾವ ಬಗೆಯ ಅಭಿಮಾನವೂ ಇಲ್ಲದೆ ಆ ರಾಜನಿಗೆ ಹೀಗೆಂದನು ॥8॥

(ಶ್ಲೋಕ - 9)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ತ್ವಯೋದಿತಂ ವ್ಯಕ್ತಮವಿಪ್ರಲಬ್ಧಂ
ಭರ್ತುಃ ಸ ಮೇ ಸ್ಯಾದ್ಯದಿ ವೀರ ಭಾರಃ
ಗಂತುರ್ಯದಿ ಸ್ಯಾದಧಿಗಮ್ಯಮಧ್ವಾ
ಪೀವೇತಿ ರಾಶೌ ನ ವಿದಾಂ ಪ್ರವಾದಃ ॥

ಅನುವಾದ

ಜಡಭರತನು ಹೇಳಿದನು — ಎಲೈ ವೀರನೇ! ನೀನು ಹೇಳಿರುವುದು ಯಥಾರ್ಥವಾಗಿದೆ. ಅದರಲ್ಲಿ ಉಪಹಾಸ ವೇನೂ ಇಲ್ಲ. ಭಾರವೆಂಬ ವಸ್ತು ಇರುವುದಾದರೆ ಅದು ಹೊರುವವನಿಗೆ ಇದೆ. ಮಾರ್ಗ ಇರುವುದಾದರೆ ಅದು ನಡೆಯುವವನಿಗೆ ಇದೆ. ದಪ್ಪನಾಗಿರುವುದು ಅದರದ್ದೇ ಆಗಿದೆ; ಇವೆಲ್ಲವೂ ಶರೀರಕ್ಕಾಗಿಯೇ ಹೇಳಲಾಗುವುದು, ಆತ್ಮನಿಗೆ ಅಲ್ಲ. ಜ್ಞಾನಿಗಳು ಹೀಗೆ ಮಾತಾಡುವುದಿಲ್ಲ. ॥9॥

(ಶ್ಲೋಕ - 10)

ಮೂಲಮ್

ಸ್ಥೌಲ್ಯಂ ಕಾರ್ಶ್ಯಂ ವ್ಯಾಧಯ ಆಧಯಶ್ಚ
ಕ್ಷುತ್ತೃಡ್ಭಯಂ ಕಲಿರಿಚ್ಛಾ ಜರಾ ಚ
ನಿದ್ರಾ ರತಿರ್ಮನ್ಯುರಹಂಮದಃ ಶುಚೋ
ದೇಹೇನ ಜಾತಸ್ಯ ಹಿ ಮೇ ನ ಸಂತಿ ॥

ಅನುವಾದ

ದಪ್ಪನಾಗಿರುವಿಕೆ, ತೆಳ್ಳಗಿರುವಿಕೆ, ದೈಹಿಕ-ಮಾನಸಿಕ ರೋಗಗಳು, ಹಸಿವು-ಬಾಯಾರಿಕೆಗಳು, ಭಯ, ಧೈರ್ಯ, ಇಚ್ಛೆ, ಮುಪ್ಪು, ನಿದ್ರೆ, ಸೀ-ಪುರುಷರತಿ, ಕ್ರೋಧ, ದೈನ್ಯ, ಅಹಂಕಾರ, ಮದ ಮತ್ತು ಶೋಕ ಇವೆಲ್ಲ ಧರ್ಮಗಳು ದೇಹಾಭಿಮಾನದಿಂದಾಗಿ ಉಂಟಾಗುವ ಜೀವನಲ್ಲಿ ಇರುತ್ತವೆ. ನನ್ನಲ್ಲಿ ಇವುಗಳು ಲೇಶಮಾತ್ರವೂ ಇಲ್ಲ. ॥10॥

(ಶ್ಲೋಕ - 11)

ಮೂಲಮ್

ಜೀವನ್ಮೃತತ್ವಂ ನಿಯಮೇನ ರಾಜನ್
ಆದ್ಯಂತವದ್ಯದ್ವಿಕೃತಸ್ಯ ದೃಷ್ಟಮ್
ಸ್ವಸ್ವಾಮ್ಯಭಾವೋ ಧ್ರುವ ಈಡ್ಯ ಯತ್ರ
ತರ್ಹ್ಯುಚ್ಯತೇಸೌ ವಿಧಿಕೃತ್ಯಯೋಗಃ ॥

ಅನುವಾದ

ರಾಜನೇ! ಬದುಕಿದ್ದರೂ ಸತ್ತವನು ಎಂದು ನೀನು ಹೇಳಿದ ಮಾತು ಎಷ್ಟು ವಿಕಾರಿ ಪದಾರ್ಥಗಳಿವೆಯೋ ಅವೆಲ್ಲವುಗಳಲ್ಲಿ ನಿಯಮಿತ ರೂಪದಿಂದ ಇವೆರಡು ಮಾತುಗಳು ಕಂಡುಬರುತ್ತವೆ. ಏಕೆಂದರೆ, ಅವೆಲ್ಲವೂ ಆದಿ-ಅಂತ್ಯಗಳು ಇರುವಂತಹವುಗಳು. ಎಲೈ ಯಶಸ್ವೀರಾಜನೇ! ಸ್ವಾಮಿ-ಸೇವಕ-ಭಾವ ಸ್ಥಿರವಾಗಿರು ವಲ್ಲಿಯೇ ಆಜ್ಞಾ-ಪಾಲನಾದಿಗಳ ನಿಯಮ ಹೊಂದಬಲ್ಲದು. ॥11॥

(ಶ್ಲೋಕ - 12)

ಮೂಲಮ್

ವಿಶೇಷಬುದ್ಧೇರ್ವಿವರಂ ಮನಾಕ್ ಚ
ಪಶ್ಯಾಮ ಯನ್ನ ವ್ಯವಹಾರತೋನ್ಯತ್
ಕ ಈಶ್ವರಸ್ತತ್ರ ಕಿಮೀಶಿತವ್ಯಂ
ತಥಾಪಿ ರಾಜನ್ ಕರವಾಮ ಕಿಂ ತೇ ॥

ಅನುವಾದ

‘ನೀನು ರಾಜನಾಗಿದ್ದಿ ಮತ್ತು ನಾನು ಪ್ರಜೆ ಯಾಗಿದ್ದೇನೆ’ ಈ ರೀತಿಯ ಭೇದ ಬುದ್ಧಿಯು ವ್ಯವಹಾರವಲ್ಲದೆ ಬೇರೆ ಯಾವುದೂ ಕಂಡುಬರುವುದಿಲ್ಲ. ಪರಮಾರ್ಥ ದೃಷ್ಟಿಯಿಂದ ನೋಡಿದರೆ, ಯಾರನ್ನು ಸ್ವಾಮಿ ಯಾರನ್ನು ಸೇವಕನೆಂದು ಹೇಳುವುದು? ಆದರೂ ರಾಜನೇ! ನಿನಗೆ ಸ್ವಾಮಿತ್ವದ ಅಭಿಮಾನವಿದ್ದರೆ ಹೇಳು, ನಾನು ನಿನ್ನ ಯಾವ ಸೇವೆಮಾಡಲಿ? ॥12॥

(ಶ್ಲೋಕ - 13)

ಮೂಲಮ್

ಉನ್ಮತ್ತಮತ್ತಜಡವತ್ಸ್ವಸಂಸ್ಥಾಂ
ಗತಸ್ಯ ಮೇ ವೀರ ಚಿಕಿತ್ಸಿತೇನ
ಅರ್ಥಃ ಕಿಯಾನ್ ಭವತಾ ಶಿಕ್ಷಿತೇನ
ಸ್ತಬ್ಧಪ್ರಮತ್ತಸ್ಯ ಚ ಪಿಷ್ಟಪೇಷಃ ॥

ಅನುವಾದ

ವೀರನೇ! ನಾನು ಉನ್ಮತ್ತ, ಜಡನಂತೆ ನನ್ನ ಸ್ಥಿತಿಯಲ್ಲೇ ಇರುತ್ತೇನೆ. ನನಗೆ ಚಿಕಿತ್ಸೆಮಾಡಿ ನಿನಗೆ ಏನು ಸಿಗುವುದಿದೆ? ವಾಸ್ತವವಾಗಿ ನಾನು ಜಡ ಮತ್ತು ಪ್ರಮಾದಿಯೇ ಆಗಿದ್ದರೆ ನನಗೆ ಶಿಕ್ಷೆ ಕೊಡುವುದು ಪಿಷ್ಟಪೇಷಣದಂತೆ ವ್ಯರ್ಥವೇಆದೀತಲ್ಲ! ॥13॥

(ಶ್ಲೋಕ - 14)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏತಾವದನುವಾದಪರಿಭಾಷಯಾ ಪ್ರತ್ಯುದೀರ್ಯ ಮುನಿವರ ಉಪಶಮಶೀಲ ಉಪರತಾನಾತ್ಮ್ಯನಿಮಿತ್ತ ಉಪಭೋಗೇನ ಕರ್ಮಾರಬ್ಧಂ ವ್ಯಪನಯನ್ ರಾಜಯಾನಮಪಿ ತಥೋವಾಹ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಜಡಭರತ ಮಹಾಮುನಿಯು ರಾಜನಿಗೆ ಯಥಾರ್ಥವಾದ ತತ್ತ್ವವನ್ನು ಉಪದೇಶಮಾಡುತ್ತಾ ಹೀಗೆ ಉತ್ತರ ಹೇಳಿ ಮೌನವಾದನು. ಅವನಲ್ಲಿ ದೇಹಾತ್ಮಬುದ್ಧಿಗೆ ಹೇತುಭೂತವಾದ ಅಜ್ಞಾನವು ನಿವೃತ್ತವಾಗಿ ಹೋಗಿತ್ತು, ಅದರಿಂದ ಅವನು ಪರಮ ಶಾಂತನಾಗಿದ್ದನು. ಆದ್ದರಿಂದ ಇಷ್ಟು ಹೇಳಿ ಭೋಗದ ಮೂಲಕ ಪ್ರಾರಬ್ಧವನ್ನು ಕ್ಷಯ ಗೊಳಿಸಲಿಕ್ಕಾಗಿ ಅವನು ಪುನಃ ಮೊದಲಿನಂತೆಯೇ ಆ ಪಲ್ಲಕ್ಕಿಯನ್ನು ಹೆಗಲಮೇಲೇರಿಸಿ ನಡೆಯತೊಡಗಿದನು. ॥14॥

(ಶ್ಲೋಕ - 15)

ಮೂಲಮ್

ಸ ಚಾಪಿ ಪಾಂಡವೇಯ ಸಿಂಧುಸೌವೀರಪತಿಸ್ತತ್ತ್ವಜಿಜ್ಞಾಸಾಯಾಂ ಸಮ್ಯಕ್-ಶ್ರದ್ಧಯಾಧಿಕೃತಾಧಿಕಾರಸ್ದ್ಧೃದಯ ಗ್ರಂಥಿಮೋಚನಂ ದ್ವಿಜವಚ ಆಶ್ರುತ್ಯ ಬಹುಯೋಗಗ್ರಂಥಸಮ್ಮತಂ ತ್ವರಯಾವರುಹ್ಯ ಶಿರಸಾ ಪಾದಮೂಲಮುಪಸೃತಃ ಕ್ಷಮಾಪಯನ್ ವಿಗತನೃಪದೇವಸ್ಮಯ ಉವಾಚ ॥

ಅನುವಾದ

ಸಿಂಧು-ಸೌವೀರಪತಿಯಾದ ರಹೂಗಣನೂ ಕೂಡ ತನ್ನ ಉತ್ತಮ ಶ್ರದ್ಧೆಯಿಂದ ತತ್ತ್ವಜ್ಞಾನದ ಪೂರ್ಣ ಅಧಿಕಾರಿಯಾಗಿದ್ದನು. ಅನೇಕ ಯೋಗ ಗ್ರಂಥಗಳಿಂದ ಸಮರ್ಥಿತವಾದ ಹೃದಯ ಗ್ರಂಥಿಯು ಕತ್ತರಿಸುವಂತಹ ಆ ಬ್ರಾಹ್ಮಣೋತ್ತಮನ ವಚನವನ್ನು ಕೇಳಿ ಆ ರಾಜನು ಒಡನೆಯೇ ಪಲ್ಲಕ್ಕಿಯಿಂದ ಇಳಿದುಬಂದನು. ಅವನ ರಾಜ ಮದವು ಪೂರ್ಣವಾಗಿ ಹೊರಟು ಹೋಗಿತ್ತು. ಅವನು ಜಡಭರತನ ಕಾಲಿಗೆ ಬಿದ್ದು ತನ್ನ ಅಪರಾಧಕ್ಕೆ ಕ್ಷಮೆಯನ್ನು ಬೇಡುತ್ತಾ ಹೀಗೆಂದನು. ॥15॥

(ಶ್ಲೋಕ - 16)

ಮೂಲಮ್

ಕಸ್ತ್ವಂ ನಿಗೂಢಶ್ಚರಸಿ ದ್ವಿಜಾನಾಂ
ಬಿಭರ್ಷಿ ಸೂತ್ರಂ ಕತಮೋವಧೂತಃ ।
ಕಸ್ಯಾಸಿ ಕುತ್ರತ್ಯ ಇಹಾಪಿ ಕಸ್ಮಾತ್
ಕ್ಷೇಮಾಯ ನಶ್ಚೇದಸಿ ನೋತ ಶುಕ್ಲಃ ॥

ಅನುವಾದ

ಎಲೈ ಮಹಾತ್ಮರೇ! ವೇಷಾಂತರದಲ್ಲಿ ಸಂಚರಿಸುತ್ತಿರುವ ತಾವು ಯಾರು? ಯಜ್ಞೋಪವೀತವನ್ನು ಧರಿಸಿರುವುದರಿಂದ ತಾವು ಬ್ರಾಹ್ಮಣರಿರಬೇಕು. ದತ್ತಾತ್ರೇಯರೇ ಮುಂತಾದ ಅವಧೂತರಲ್ಲಿ ಯಾರಾಗಿದ್ದೀರಿ? ತಾವು ಯಾರ ಪುತ್ರರು? ತಮ್ಮ ಜನ್ಮಸ್ಥಳ ಯಾವುದು? ಇಲ್ಲಿಗೆ ತಾವು ಹೇಗೆ ಪಾದ ಬೆಳೆಸಿದಿರಿ? ನಮಗೆ ಮಂಗಳವನ್ನುಂಟು ಮಾಡುವುದಕ್ಕಾಗಿ ತಾವು ದಯಮಾಡಿಸಿದ್ದರೆ ಶುದ್ಧ ಸತ್ತ್ವಮಯ ಮೂರ್ತಿಯಾದ ಸಾಕ್ಷಾತ್ ಭಗವಾನ್ ಕಪಿಲ ದೇವರೇ ತಾವಲ್ಲ ತಾನೇ? ॥16॥

(ಶ್ಲೋಕ - 17)

ಮೂಲಮ್

ನಾಹಂ ವಿಶಂಕೇ ಸುರರಾಜವಜ್ರಾತ್
ನ ತ್ರ್ಯಕ್ಷಶೂಲಾನ್ನ ಯಮಸ್ಯ ದಂಡಾತ್ ।
ನಾಗ್ನ್ಯರ್ಕಸೋಮಾನಿಲವಿತ್ತಪಾಸಾ-
ಚ್ಛಂಕೇ ಭೃಶಂ ಬ್ರಹ್ಮಕುಲಾವಮಾನಾತ್ ॥

ಅನುವಾದ

ನಾನು ಇಂದ್ರನ ವಜ್ರಾಯುಧಕ್ಕೆ ಹೆದರುವುದಿಲ್ಲ. ಮಹಾದೇವನ ತ್ರಿಶೂಲಕ್ಕೂ ಭಯಪಡುವುದಿಲ್ಲ. ಯಮರಾಜನ ದಂಡಕ್ಕೂ ಅಂಜುವುದಿಲ್ಲ. ನನಗೆ ಅಗ್ನಿ, ಸೂರ್ಯ, ಚಂದ್ರ, ವಾಯು ಮತ್ತು ಕುಬೇರ ಇವರ ಅಸ್ತ್ರ-ಶಸ್ತ್ರಗಳ ಯಾವ ಭಯವೂ ಇಲ್ಲ. ಆದರೆ ನಾನು ಬ್ರಾಹ್ಮಣಕುಲದ ಅಪಮಾನದಿಂದ ತುಂಬಾ ಹೆದರುತ್ತೇನೆ. ॥17॥

(ಶ್ಲೋಕ - 18)

ಮೂಲಮ್

ತದ್ ಬ್ರೂಹ್ಯಸಂಗೋ ಜಡವನ್ನಿಗೂಢ-
ವಿಜ್ಞಾನವೀರ್ಯೋ ವಿಚರಸ್ಯಪಾರಃ ।
ವಚಾಂಸಿ ಯೋಗಗ್ರಥಿತಾನಿ ಸಾಧೋ
ನ ನಃ ಕ್ಷಮಂತೇ ಮನಸಾಪಿ ಭೇತ್ತುಮ್ ॥

ಅನುವಾದ

ಆದ್ದರಿಂದ ಜ್ಞಾನ-ಶಕ್ತಿಗಳು ಪೂರ್ಣವಾಗಿದ್ದರೂ ಅವುಗಳನ್ನು ತೋರ್ಪಡಿಸದೆ ಮೂಢರಂತೆ ಕಾಣುತ್ತಾ, ಯಾರ ಸಂಗಕ್ಕೂ ಸೇರದೆ ಒಂಟಿಯಾಗಿ ಸಂಚರಿಸುತ್ತಿರುವ ತಾವು ಯಾರು? ತಮ್ಮ ಆಳವೇನು ಎಂಬುದು ತಿಳಿಯುತ್ತಿಲ್ಲ. ಯೋಗತತ್ತ್ವ ದಿಂದ ಸಂಪನ್ನವಾಗಿರುವ ತಮ್ಮ ಮಾತುಗಳು ಬುದ್ಧಿಯಿಂದ ಎಷ್ಟು ಆಲೋಚಿಸಿದರೂ ನನಗೆ ಅರ್ಥವಾಗುತ್ತಿಲ್ಲ. ನನ್ನ ಸಂದೇಹವೂ ಹೋಗುತ್ತಿಲ್ಲ. ॥18॥

(ಶ್ಲೋಕ - 19)

ಮೂಲಮ್

ಅಹಂ ಚ ಯೋಗೇಶ್ವರಮಾತ್ಮತತ್ತ್ವ-
ವಿದಾಂ ಮುನೀನಾಂ ಪರಮಂ ಗುರುಂ ವೈ ।
ಪ್ರಷ್ಟುಂ ಪ್ರವೃತ್ತಃ ಕಿಮಿಹಾರಣಂ ತತ್
ಸಾಕ್ಷಾದ್ಧರಿಂ ಜ್ಞಾನಕಲಾವತೀರ್ಣಮ್ ॥

ಅನುವಾದ

ಈ ಲೋಕದಲ್ಲಿ ಶರಣು ಹೊಂದುವುದಕ್ಕೆ ಯೋಗ್ಯವಾದ ಏಕೈಕ ವಸ್ತು ಯಾವುದು? ಎಂಬುದನ್ನು ಕೇಳುವುದಕ್ಕಾಗಿ ನಾನು ಆತ್ಮಜ್ಞಾನಿಗಳಾದ ಮುನಿಗಳಿಗೆಲ್ಲ ಪರಮಗುರುಗಳಾದ ಜ್ಞಾನಕಲೆಯಿಂದ ಅವತಾರ ಮಾಡಿರುವ ಸಾಕ್ಷಾತ್ ಶ್ರೀಹರಿಯಾಗಿರುವ ಭಗವಾನ್ ಕಪಿಲರಲ್ಲಿಗೆ ಹೋಗುತ್ತಿದ್ದೇನೆ. ॥19॥

(ಶ್ಲೋಕ - 20)

ಮೂಲಮ್

ಸ ವೈ ಭವಾಂಲ್ಲೋಕನಿರೀಕ್ಷಣಾರ್ಥ-
ಮವ್ಯಕ್ತಲಿಂಗೋ ವಿಚರತ್ಯಪಿಸ್ವಿತ್ ।
ಯೋಗೇಶ್ವರಾಣಾಂ ಗತಿಮಂಧಬುದ್ಧಿಃ
ಕಥಂ ವಿಚಕ್ಷೀತ ಗೃಹಾನುಬಂಧಃ ॥

ಅನುವಾದ

ಲೋಕಗಳ ಸ್ಥಿತಿಯನ್ನು ನೋಡುವುದಕ್ಕೋಸ್ಕರ ತಮ್ಮ ರೂಪವನ್ನು ಮರೆಸಿಕೊಂಡು ಓಡಾಡುತ್ತಿರುವ ಆ ಕಪಿಲಮುನಿಗಳೇ ತಾವಾಗಿದ್ದೀರೋ? ಗೃಹದಲ್ಲಿ ಆಸಕ್ತನಾಗಿರುವ ಬುದ್ಧಿ ಹೀನನಿಗೆ ಯೋಗೇಶ್ವರರ ಗತಿಯನ್ನು ಹೇಗೆ ತಾನೇ ತಿಳಿಯಲು ಸಾಧ್ಯವಾದೀತು? ॥20॥

(ಶ್ಲೋಕ - 21)

ಮೂಲಮ್

ದೃಷ್ಟಃ ಶ್ರಮಃ ಕರ್ಮತ ಆತ್ಮನೋ ವೈ
ಭರ್ತುರ್ಗಂತುರ್ಭವತಶ್ಚಾನುಮನ್ಯೇ ।
ಯಥಾಸತೋದಾನಯನಾದ್ಯಭಾವಾತ್
ಸಮೂಲ ಇಷ್ಟೋ ವ್ಯವಹಾರಮಾರ್ಗಃ ॥

ಅನುವಾದ

‘‘ನಾನು ಯುದ್ಧಾದಿ ಕರ್ಮಗಳಲ್ಲಿ ನನಗೆ ಶ್ರಮವಾಗುವುದನ್ನು ನೋಡಿದ್ದೇನೆ. ಅದಕ್ಕಾಗಿ ಭಾರಹೊತ್ತುಕೊಂಡು ಮಾರ್ಗದಲ್ಲಿ ನಡೆಯುವುದರಿಂದ ನಿಮಗೂ ಕೂಡ ಅವಶ್ಯವಾಗಿ ಶ್ರಮವಾಗಿರ ಬಹುದೆಂದು ತಿಳಿದೆ. ನನಗಾದರೋ ವ್ಯವಹಾರ ಮಾರ್ಗವೇ ಸತ್ಯವೆಂದು ತಿಳಿಯುತ್ತದೆ ಏಕೆಂದರೆ ಮಿಥ್ಯೆಯಾದ ಗಡಿಗೆಯಿಂದ ನೀರು ತರುವುದು ಮುಂತಾದ ಕಾರ್ಯಗಳು ಆಗುವುದಿಲ್ಲ. ॥21॥

(ಶ್ಲೋಕ - 22)

ಮೂಲಮ್

ಸ್ಥಾಲ್ಯಗ್ನಿತಾಪಾತ್ಪಯಸೋಭಿತಾಪ-
ಸ್ತತ್ತಾಪತಸ್ತಂಡುಲಗರ್ಭರಂಧಿಃ ।
ದೇಹೇಂದ್ರಿಯಾಸ್ವಾಶಯಸನ್ನಿಕರ್ಷಾತ್
ತತ್ಸಂಸೃತಿಃ ಪುರುಷಸ್ಯಾನುರೋಧಾತ್ ॥

ಅನುವಾದ

(ದೇಹಾದಿ ಧರ್ಮಗಳು ಆತ್ಮನ ಮೇಲೆ ಯಾವ ಪ್ರಭಾವವನ್ನೂ ಉಂಟು ಮಾಡುವುದಿಲ್ಲ. ಎಂಬ ಮಾತೂ ಇಲ್ಲ.) ಒಲೆಯ ಮೇಲಿಟ್ಟ ನೀರುತುಂಬಿದ ಪಾತ್ರೆಯು ಬೆಂಕಿಯಿಂದ ಕಾದಾಗ ಆ ನೀರು ಕುದಿಯತೊಡಗುತ್ತದೆ ಮತ್ತು ಅದರಲ್ಲಿ ಹಾಕಿದ ಅಕ್ಕಿಯ ಒಳಭಾಗವೂ ಬೆಂದುಹೋಗುತ್ತದೆ. ಹೀಗೆಯೇ ತನ್ನ ಉಪಾಧಿಗಳನ್ನು ಅನುವರ್ತಿಸುವ ಕಾರಣದಿಂದ ದೇಹ, ಇಂದ್ರಿಯಗಳು, ಪ್ರಾಣ ಮತ್ತು ಮನಸ್ಸು ಇವುಗಳ ಸನ್ನಿಧಿಯಿಂದ ಆತ್ಮನಿಗೂ ಕೂಡ ಅವುಗಳ ಧರ್ಮಗಳಾದ ಶ್ರಮಾದಿಗಳ ಅನುಭವ ಆಗಿಯೇ ಆಗುವುದು.॥22॥

(ಶ್ಲೋಕ - 23)

ಮೂಲಮ್

ಶಾಸ್ತಾಭಿಗೋಪ್ತಾ ನೃಪತಿಃ ಪ್ರಜಾನಾಂ
ಯಃ ಕಿಂಕರೋ ವೈ ನ ಪಿನಷ್ಟಿ ಪಿಷ್ಟಮ್ ।
ಸ್ವಧರ್ಮಮಾರಾಧನಮಚ್ಯುತಸ್ಯ
ಯದೀಹಮಾನೋ ವಿಜಹಾತ್ಯಘೌಘಮ್ ॥

ಅನುವಾದ

ರಾಜನು ಚಿಕಿತ್ಸೆಯ ರೂಪದಲ್ಲಿ ಅಪರಾಧಿಗಳಿಗೆ ದಂಡಾದಿ ವಿಧಿಗಳನ್ನು ವಿಧಿಸುವುದು ವ್ಯರ್ಥವೆಂದು ತಾವು ಹೇಳಿದಿರಿ. ಆದರೆ ರಾಜನಾದರೋ ಪ್ರಜೆಯ ಶಾಸನ ಮತ್ತು ಪಾಲನೆ ಮಾಡಲಿಕ್ಕಾಗಿ ನಿಯುಕ್ತನಾದ ಅವರ ದಾಸನೇ ಆಗಿದ್ದಾನೆ. ಅವನು ಉನ್ಮತ್ತರಿಗೆ ದಂಡವಿಧಿಸುವುದು ಹಿಟ್ಟನ್ನು ಪುನಃ ಬೀಸುವಂತೆ ವ್ಯರ್ಥವಾಗಲಾರದು. ಏಕೆಂದರೆ, ತನ್ನ ಧರ್ಮವನ್ನು ಪಾಲಿಸುವುದು ಭಗವಂತನ ಸೇವೆಯೇ ಆಗಿದೆ. ಅದನ್ನು ಆಚರಿಸುವವನು ತನ್ನ ಸಮಸ್ತ ಪಾಪರಾಶಿಯನ್ನು ನಾಶಮಾಡಿಬಿಡುತ್ತಾನೆ. ॥23॥

(ಶ್ಲೋಕ - 24)

ಮೂಲಮ್

ತನ್ಮೇ ಭವಾನ್ನರದೇವಾಭಿಮಾನ-
ಮದೇನ ತುಚ್ಛೀಕೃತಸತ್ತಮಸ್ಯ ।
ಕೃಷೀಷ್ಟ ಮೈತ್ರೀದೃಶಮಾರ್ತಬಂಧೋ
ಯಥಾ ತರೇ ಸದವಧ್ಯಾನಮಂಹಃ ॥

ಅನುವಾದ

ದೀನಬಂಧುಗಳೇ! ರಾಜನೆಂಬ ಅಭಿಮಾನದಿಂದ ಉನ್ಮತ್ತನಾಗಿ ನಾನು ನಿಮ್ಮಂತಹ ಪರಮ ಸಾಧುಗಳ ತಿರಸ್ಕಾರ ಮಾಡಿದೆ. ಈಗ ಇಂತಹ ಸಾಧುಗಳ ಅವಜ್ಞೆಯಂತಹ ಅಪರಾಧದಿಂದ ನಾನು ಮುಕ್ತನಾಗುವಂತೆ ಕೃಪೆದೋರಿರಿ.॥24॥

(ಶ್ಲೋಕ - 25)

ಮೂಲಮ್

ನ ವಿಕ್ರಿಯಾ ವಿಶ್ವಸುಹೃತ್ಸಖಸ್ಯ
ಸಾಮ್ಯೇನ ವೀತಾಭಿಮತೇಸ್ತವಾಪಿ ।
ಮಹದ್ವಿಮಾನಾತ್ಸ್ವಕೃತಾದ್ಧಿ ಮಾದೃಙ್
ನಂಕ್ಷ್ಯತ್ಯದೂರಾದಪಿ ಶೂಲಪಾಣಿಃ ॥

ಅನುವಾದ

ನೀವು ದೇಹಾಭಿಮಾನ ಶೂನ್ಯರೂ, ವಿಶ್ವಬಂಧುಗಳೂ, ಶ್ರೀಹರಿಯ ಅನನ್ಯ ಭಕ್ತರೂ ಆಗಿರುವಿರಿ. ಇದಕ್ಕಾಗಿ ಎಲ್ಲದರಲ್ಲಿ ಸಮಾನದೃಷ್ಟಿ ಇರುವುದರಿಂದ ಈ ಮಾನಾಪ ಮಾನದಿಂದಾಗಿ ನಿಮ್ಮಲ್ಲಿ ಯಾವುದೇ ವಿಕಾರ ಉಂಟಾಗಲಾರದು. ಆದರೂ ಓರ್ವ ಮಹಾಪುರುಷರ ಅಪಮಾನ ಮಾಡುವುದರಿಂದ ನನ್ನಂಥವನು ಸಾಕ್ಷಾತ್ ತ್ರಿಶೂಲ ಪಾಣಿಯಾದ ಮಹಾದೇವನಂತೆ ಪ್ರಭಾವ ಶಾಲಿಯಾಗಿದ್ದರೂ ತನ್ನ ಅಪರಾಧದಿಂದ ಖಂಡಿತವಾಗಿ ಕೆಲವೇ ದಿನಗಳಲ್ಲಿ ನಾಶವಾಗಿ ಹೋಗುವನು.॥25॥

ಅನುವಾದ (ಸಮಾಪ್ತಿಃ)

ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ದಶಮೋಽಧ್ಯಾಯಃ ॥10॥