೦೭

[ಏಳನೆಯ ಅಧ್ಯಾಯ]

ಭಾಗಸೂಚನಾ

ಭರತೋಪಾಖ್ಯಾನ

(ಗದ್ಯ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಭರತಸ್ತು ಮಹಾಭಾಗವತೋ ಯದಾ ಭಗವತಾವನಿತಲಪರಿಪಾಲನಾಯ ಸಂಚಿಂತಿತಸ್ತದನುಶಾಸನಪರಃ ಪಂಚಜನೀಂ ವಿಶ್ವರೂಪದುಹಿತರಮುಪಯೇಮೇ ॥

ಅನುವಾದ

ಶ್ರೀಶುಕಮುನಿಗಳು ಹೇಳುತ್ತಾರೆ — ಅಯ್ಯಾ ರಾಜೇಂದ್ರನೇ! ಭರತಮಹಾರಾಜನು ದೊಡ್ಡ ಭಗವದ್ಭಕ್ತ ನಾಗಿದ್ದನು. ಭಗವಾನ್ ಋಷಭದೇವರು ತನ್ನಿಚ್ಛೆಯಂತೆ ಅವನನ್ನು ಭೂಮಂಡಲವನ್ನು ಪಾಲಿಸಲಿಕ್ಕಾಗಿ ನೇಮಿಸಿ ದ್ದರು. ಭರತನು ತಂದೆಯ ಆಜ್ಞೆಯನ್ನು ಶಿರಸಾವಹಿಸಿ, ವಿಶ್ವರೂಪನ ಕನ್ಯೆಯಾದ ಪಂಚಜನಿಯನ್ನು ವಿವಾಹವಾದನು. ॥1॥

(ಗದ್ಯ - 2)

ಮೂಲಮ್

ತಸ್ಯಾಮು ಹ ವಾ ಆತ್ಮಜಾನ್ಕಾರ್ತ್ಸ್ನ್ಯೇನಾನುರೂಪಾನಾತ್ಮನಃ ಪಂಚ ಜನಯಾಮಾಸ ಭೂತಾದಿರಿವ ಭೂತಸೂಕ್ಷ್ಮಾಣಿ ॥

(ಗದ್ಯ - 3)

ಮೂಲಮ್

ಸುಮತಿಂ ರಾಷ್ಟ್ರಭೃತಂ ಸುದರ್ಶನಮಾವರಣಂ ಧೂಮ್ರಕೇತುಮಿತಿ ಅಜನಾಭಂ ನಾಮೈತದ್ವರ್ಷಂ ಭಾರತಮಿತಿ ಯತ ಆರಭ್ಯ ವ್ಯಪದಿಶಂತಿ ॥

ಅನುವಾದ

ತಾಮಸಾಹಂಕಾರವು ಶಬ್ದವೇ ಮುಂತಾದ ಐದು ತನ್ಮಾತ್ರೆಗಳನ್ನು ಉತ್ಪನ್ನಮಾಡುವಂತೆ, ಭರತನು ಪಂಚಜನಿಯಲ್ಲಿ ತನಗೆ ಸಮಾನರಾದ ಸುಮತಿ, ರಾಷ್ಟ್ರಭೃತ್, ಸುದರ್ಶನ, ಆವರಣ ಮತ್ತು ಧೂಮ್ರಕೇತು ಎಂಬ ಐದು ಪುತ್ರರನ್ನು ಪಡೆದನು. ಅಜನಾಭವರ್ಷವೆಂದು ಕರೆಯಲ್ಪಡುತ್ತಿದ್ದ ಈ ವರ್ಷಕ್ಕೆ ಭರತಚಕ್ರವರ್ತಿಯ ಕಾಲದಿಂದ ‘ಭಾರತವರ್ಷ’ ಎಂಬ ಹೆಸರಾಯಿತು. ॥2-3॥

(ಗದ್ಯ - 4)

ಮೂಲಮ್

ಸ ಬಹುವಿನ್ಮಹೀಪತಿಃ ಪಿತೃಪಿತಾಮಹವದುರುವತ್ಸಲತಯಾ ಸ್ವೇ ಸ್ವೇ ಕರ್ಮಣಿ ವರ್ತಮಾನಾಃ ಪ್ರಜಾಃ ಸ್ವಧರ್ಮಮನುವರ್ತಮಾನಃ ಪರ್ಯಪಾಲಯತ್ ॥

ಅನುವಾದ

ಮಹಾಪ್ರಾಜ್ಞನಾದ ಆ ಭರತಸಾರ್ವಭೌಮನು ತಮ್ಮ-ತಮ್ಮ ಕರ್ಮಗಳಲ್ಲಿ ತೊಡಗಿದ್ದ ಪ್ರಜೆಗಳನ್ನು ತನ್ನ ತಂದೆ, ತಾತಂದಿರಂತೆ ತಾನೂ ಸ್ವಧರ್ಮಾಚರಣೆಯಲ್ಲಿ ನಿರತನಾಗಿದ್ದು, ಅತ್ಯಂತ ವಾತ್ಸಲ್ಯದಿಂದ ಪಾಲಿಸತೊಡಗಿದನು. ॥4॥

(ಗದ್ಯ - 5)

ಮೂಲಮ್

ಈಜೇ ಚ ಭಗವಂತಂ ಯಜ್ಞಕ್ರತುರೂಪಂ ಕ್ರತುಭಿರುಚ್ಚಾವಚೈಃ ಶ್ರದ್ಧಯಾಹೃತಾಗ್ನಿಹೋತ್ರದರ್ಶಪೂರ್ಣಮಾಸ- ಚಾತುರ್ಮಾಸ್ಯಪಶುಸೋಮಾನಾಂ ಪ್ರಕೃತಿವಿಕೃತಿಭಿರನುಸವನಂ ಚಾತುರ್ಹೋತ್ರವಿಧಿನಾ ॥

ಅನುವಾದ

ಅವನು ಹೋತಾ, ಅಧ್ವರ್ಯು, ಉದ್ಗಾತಾ ಮತ್ತು ಬ್ರಹ್ಮಾ ಎಂಬ ನಾಲ್ವರು ಋತ್ವಿಜರಿಂದ ನಡೆಸಲ್ಪಡಬೇಕಾದ ಚಾತು ರ್ಹೋತ್ರವೆಂಬ ಕರ್ಮವಿಧಿಯಂತೆ ಅಗ್ನಿಹೋತ್ರ, ದರ್ಶ, ಪೂರ್ಣಮಾಸ, ಚಾತುರ್ಮಾಸ್ಯ, ಪಶು ಮತ್ತು ಸೋಮಗಳೆಂಬ ಯಜ್ಞಗಳನ್ನು ಅವುಗಳ ಪ್ರಕೃತಿ ಮತ್ತು ವಿಕೃತಿ ಎಂಬ ಎರಡು ವಿಧಾನಗಳಿಂದಲೂ ಆಯಾಕಾಲಗಳಲ್ಲಿ ಶ್ರದ್ಧಾ ಪೂರ್ವಕ ಆಚರಿಸಿ ಯಜ್ಞರೂಪನಾದ ಶ್ರೀಭಗವಂತನನ್ನು ಆರಾಧಿಸಿದನು. ॥5॥

(ಗದ್ಯ - 6)

ಮೂಲಮ್

ಸಂಪ್ರಚರತ್ಸು ನಾನಾಯಾಗೇಷು ವಿರಚಿತಾಂಗಕ್ರಿಯೇಷ್ವಪೂರ್ವಂ ಯತ್ತ ತ್ಕ್ರಿಯಾಲಂ ಧರ್ಮಾಖ್ಯಂ ಪರೇ ಬ್ರಹ್ಮಣಿ
ಯಜ್ಞಪುರುಷೇ ಸರ್ವದೇವತಾಲಿಂಗಾನಾಂ ಮಂತ್ರಾಣಾಮರ್ಥನಿಯಾ- ಮಕತಯಾ ಸಾಕ್ಷಾತ್ಕರ್ತರಿ ಪರದೇವತಾಯಾಂ ಭಗವತಿ ವಾಸುದೇವ ಏವ ಭಾವಯಮಾನ ಆತ್ಮನೈಪುಣ್ಯಮೃದಿತಕಷಾಯೋ ಹವಿಃಷ್ವಧ್ವರ್ಯುಭಿರ್ಗೃಹ್ಯಮಾಣೇಷು ಸ ಯಜಮಾನೋ ಯಜ್ಞಭಾಜೋ ದೇವಾಂಸ್ತಾನ್ಪುರುಷಾ ವಯವೇಷ್ವಭ್ಯಧ್ಯಾಯತ್ ॥

ಅನುವಾದ

ಹೀಗೆ ಅಂಗ ಮತ್ತು ಕ್ರಿಯೆಗಳಿಂದ ಕೂಡಿದ ಬೇರೆ-ಬೇರೆ ಯಜ್ಞಗಳನ್ನು ಅನುಷ್ಠಾನ ಮಾಡುವಾಗ ಅಧ್ವರ್ಯುವು ಆಹುತಿಯನ್ನು ಸಮರ್ಪಿಸುವುದಕ್ಕಾಗಿ ಹವಿಸ್ಸನ್ನು ಕೈಯಲ್ಲಿ ಎತ್ತಿಕೊಂಡಾಗ ಯಜಮಾನ ನಾದ ಭರತನು ಆ ಯಜ್ಞ ಕರ್ಮದಿಂದ ಒದಗುವ ಪುಣ್ಯ ಫಲವನ್ನು ಯಜ್ಞಪುರುಷನಾದ ಭಗವಾನ್ ವಾಸುದೇವನಿಗೆ ಅರ್ಪಿಸಿಬಿಡುತ್ತಿದ್ದನು. ವಾಸ್ತವವಾಗಿ ಆ ಪರಬ್ರಹ್ಮನೇ ಇಂದ್ರಾದಿ ಸಮಸ್ತ ದೇವತೆಗಳ ಪ್ರಕಾಶಕನೂ, ಮಂತ್ರಗಳ ನಿಜವಾದ ಪ್ರತಿಪಾದ್ಯನೂ ಹಾಗೂ ಆ ದೇವತೆಗಳ ನಿಯಾ ಮಕನೂ ಆಗಿದ್ದರಿಂದ ಮುಖ್ಯಕರ್ತೃವೂ, ಪ್ರಧಾನದೇವನೂ ಆತನೇ ಆಗಿದ್ದಾನೆ. ಹೀಗೆ ತನ್ನ ಭಗವದರ್ಪಣ ಬುದ್ಧಿರೂಪ ವಾದ ಕುಶಲತೆಯಿಂದ ಹೃದಯದ ರಾಗ-ದ್ವೇಷಾದಿ ಕಶ್ಮಲ ಗಳನ್ನು ತೊಳೆದುಕೊಂಡು, ಅವನು ಯಜ್ಞಭೋಕ್ತೃಗಳಾದ ಸೂರ್ಯನೇ ಮುಂತಾದ ದೇವತೆಗಳನ್ನು ಭಗವಂತನ ನೇತ್ರವೇ ಮುಂತಾದ ಅವಯವಗಳಲ್ಲಿ ಧ್ಯಾನ ಮಾಡುತ್ತಿದ್ದನು. ॥6॥

(ಗದ್ಯ - 7)

ಮೂಲಮ್

ಏವಂ ಕರ್ಮವಿಶುದ್ಧ್ಯಾ ವಿಶುದ್ಧಸತ್ತ್ವಸ್ಯಾಂತರ್ಹೃದಯಾಕಾಶಶರೀರೇ ಬ್ರಹ್ಮಣಿ ಭಗವತಿ ವಾಸುದೇವೇ ಮಹಾಪುರುಷ ರೂಪೋಪಲಕ್ಷಣೇ ಶ್ರೀವತ್ಸಕೌಸ್ತುಭವನಮಾಲಾರಿದರಗದಾದಿಭಿರುಪಲಕ್ತೇ ನಿಜಪುರುಷ ಹೃಲ್ಲಿಖಿತೇನಾತ್ಮನಿ ಪುರುಷರೂಪೇಣ ವಿರೋಚಮಾನ ಉಚ್ಚೈಸ್ತರಾಂ ಭಕ್ತಿರನುದಿನ ಮೇಧಮಾನರಯಾ ಜಾಯತ ॥

ಅನುವಾದ

ಈ ರೀತಿಯ ಕರ್ಮಶುದ್ಧಿಯಿಂದ ಆತನ ಅಂತಃಕರಣವು ಪರಿಶುದ್ಧವಾಯಿತು. ಆಗ ಆತನಿಗೆ-ಶ್ರೀವತ್ಸ, ಕೌಸ್ತುಭ, ವನಮಾಲೆ, ಚಕ್ರ, ಶಂಖ ಮತ್ತು ಗದೆ ಮುಂತಾದ ದಿವ್ಯಾಭರಣ ಮತ್ತು ದಿವ್ಯಾಯುಧಗಳಿಂದ ಶೋಭಿಸುತ್ತಾ, ನಾರದರೇ ಮುಂತಾದ ತನ್ನ ಭಕ್ತರ ಹೃದಯ ದಲ್ಲಿ ಚಿತ್ರದಂತೆ ನಿಶ್ಚಲವಾಗಿ ನೆಲೆಸುವವನಾಗಿ, ಅಂತರ್ಯಾಮಿ ರೂಪದಲ್ಲಿ ಬೆಳಗುತ್ತಾ, ಹೃದಯಾಕಾಶದಲ್ಲೇ ಕಾಣಿಸಿಕೊಳ್ಳುವ ಬ್ರಹ್ಮಸ್ವರೂಪನೂ, ಮಹಾಪುರುಷ ಲಕ್ಷಣ ಸಂಪನ್ನನೂ ಆದ ಭಗವಾನ್ ಶ್ರೀವಾಸುದೇವನಲ್ಲಿ ದಿನ- ದಿನವೂ ವೇಗವಾಗಿ ವೃದ್ಧಿ ಹೊಂದುವ ಶ್ರೇಷ್ಠವಾದ ಭಕ್ತಿಯು ಉಂಟಾಯಿತು. ॥7॥

(ಗದ್ಯ - 8)

ಮೂಲಮ್

ಏವಂ ವರ್ಷಾಯುತಸಹಸ್ರಪರ್ಯಂತಾವಸಿತಕರ್ಮ ನಿರ್ವಾಣಾವಸರೋಧಿಭುಜ್ಯಮಾನಂ ಸ್ವತನಯೇಭ್ಯೋ ರಿಕ್ಥಂ ಪಿತೃಪೈತಾಮಹಂ ಯಥಾದಾಯಂ ವಿಭಜ್ಯ ಸ್ವಯಂ ಸಕಲಸಂಪನ್ನಿಕೇತಾತ್ಸ್ವನಿಕೇತಾತ್ಪುಲಹಾಶ್ರಮಂ ಪ್ರವವ್ರಾಜ ॥

ಅನುವಾದ

ಈ ಪ್ರಕಾರ ಒಂದುಕೋಟಿ ವರ್ಷಗಳು ಕಳೆಯಲು, ಆತನಿಗೆ ರಾಜ್ಯಭೋಗದ ಪ್ರಾರಬ್ಧವು ಕ್ಷೀಣಿಸಿಹೋಯಿತು ಎಂದು ತಿಳಿದು, ತಾನು ಅನುಭವಿಸಿದ ವಂಶಪರಂಪರಾಗತವಾದ ತನ್ನ ಸಂಪತ್ತನ್ನು ಯಥೋಚಿತವಾಗಿ ತನ್ನ ಪುತ್ರರಿಗೆ ಹಂಚಿಕೊಟ್ಟನು. ಮತ್ತೆ ಸರ್ವ ಸಂಪತ್ತುಗಳಿಂದ ತುಂಬಿದ ತನ್ನ ಅರಮನೆಯನ್ನೂ ಬಿಟ್ಟು ಅವನು ಪುಲಹಾಶ್ರಮಕ್ಕೆ ಹೊರಟು ಹೋದನು. ॥8॥

(ಗದ್ಯ - 9)

ಮೂಲಮ್

ಯತ್ರ ಹ ವಾವ ಭಗವಾನ್ ಹರಿರದ್ಯಾಪಿ ತತ್ರತ್ಯಾನಾಂ ನಿಜಜನಾನಾಂ ವಾತ್ಸಲ್ಯೇನ ಸಂನಿಧಾಪ್ಯತ ಇಚ್ಛಾ- ರೂಪೇಣ ॥

ಅನುವಾದ

ಈ ಪುಲಹಾಶ್ರಮದಲ್ಲಿ ವಾಸಿಸುವ ಭಕ್ತರಮೇಲೆ ಶ್ರೀಭಗವಂತನಿಗೆ ಅತೀವ ವಾತ್ಸಲ್ಯವಿದೆ. ಅವನು ಇಂದಿಗೂ ಕೂಡ ಅವರಿಗೆ ಇಷ್ಟದೇವತೆಯ ರೂಪದಲ್ಲಿ ದೊರೆಯುತ್ತಾನೆ. ॥9॥

(ಗದ್ಯ - 10)

ಮೂಲಮ್

ಯತ್ರಾಶ್ರಮಪದಾನ್ಯುಭಯತೋನಾ ಭಿಭಿರ್ದೃಷಚ್ಚಕ್ರೈಶ್ಚಕ್ರನದೀ ನಾಮ ಸರಿತ್ಪ್ರವರಾ ಸರ್ವತಃ ಪವಿತ್ರೀಕರೋತಿ ॥

ಅನುವಾದ

ಅಲ್ಲಿ ಚಕ್ರನದಿ (ಗಂಡಕೀ) ಎಂಬ ಪ್ರಸಿದ್ಧವಾದ ನದಿಯು ಮೇಲೆ ಮತ್ತು ಕೆಳಗೆ ಎರಡೂ ಕಡೆಗಳಲ್ಲಿಯೂ ನಾಭಿಯಂತಹ ಗುರುತುಗಳನ್ನು ಹೊಂದಿರುವ ಚಕ್ರಾಕಾರವಾದ ಶಾಲಗ್ರಾಮ ಶಿಲೆಯೊಡನೆ ಎಲ್ಲ ಕಡೆಗಳಿಂದಲೂ ಋಷಿಗಳ ಆಶ್ರಮಗಳನ್ನು ಪವಿತ್ರಗೊಳಿಸುತ್ತಿದೆ. ॥10॥

(ಗದ್ಯ - 11)

ಮೂಲಮ್

ತಸ್ಮಿನ್ ವಾವ ಕಿಲ ಸ ಏಕಲಃ ಪುಲಹಾಶ್ರಮೋಪವನೇ ವಿವಿಧಕುಸುಮಕಿಸಲಯತುಲಸಿಕಾಂಬುಭಿಃ ಕಂದಮೂಲ ಲೋಪಹಾರೈಶ್ಚ ಸಮೀಹಮಾನೋ ಭಗವತ ಆರಾಧನಂ ವಿವಿಕ್ತ ಉಪರತ ವಿಷಯಾಭಿಲಾಷ ಉಪಭೃತೋಪಶಮಃ ಪರಾಂ ನಿರ್ವೃತಿಮವಾಪ ॥

ಅನುವಾದ

ಆ ಪುಲಹಾಶ್ರಮದ ಉಪವನದಲ್ಲಿ ಭರತನು ಏಕಾಂತ ವಾದ ಜಾಗದಲ್ಲಿ ಒಬ್ಬಂಟಿಗನಾಗಿದ್ದು ಅನೇಕ ಪ್ರಕಾರದ ಪತ್ರ, ಪುಷ್ಪ, ತುಳಸೀದಳ, ಜಲ ಮತ್ತು ಗೆಡ್ಡೆ-ಗೆಣಸುಗಳೇ ಮುಂತಾದ ನೈವೇದ್ಯಗಳಿಂದ ಶ್ರೀಭಗವಂತನನ್ನು ಆರಾಧಿಸುತ್ತಿದ್ದನು. ಇದರಿಂದ ಅವನ ಅಂತಃಕರಣವು ಎಲ್ಲ ವಿಷಯಾಭಿಲಾಷೆಗಳನ್ನು ಕಳಕೊಂಡು ಪ್ರಶಾಂತವಾಯಿತು ಮತ್ತು ಅವನಿಗೆ ಪರಮಾನಂದ ಪ್ರಾಪ್ತವಾಯಿತು. ॥11॥

(ಗದ್ಯ - 12)

ಮೂಲಮ್

ತಯೇತ್ಥಮವಿರತ- ಪುರುಷಪರಿಚರ್ಯಯಾ ಭಗವತಿ ಪ್ರವರ್ಧಮಾನಾನುರಾಗಭರದ್ರುತಹಯಶೈಥಿಲ್ಯಃ ಪ್ರಹರ್ಷವೇಗೇನಾತ್ಮನ್ಯು ದ್ಭಿದ್ಯಮಾನರೋಮಪುಲಕಕುಲಕ ಔತ್ಕಂಠ್ಯಪ್ರವೃತ್ತ- ಪ್ರಣಯಬಾಷ್ಪನಿರುದ್ಧಾವಲೋಕನಯನ ಏವಂ ನಿಜ ರಮಣಾರುಣಚರಣಾರವಿಂದಾನುಧ್ಯಾನಪರಿಚಿತಭಕ್ತಿ- ಯೋಗೇನ ಪರಿಪ್ಲುತಪರಮಾಹ್ಲಾದಗಂಭೀರಹೃದಯ-ಹ್ರದಾವಗಾಢಧಿಷಣಸ್ತಾಮಪಿ ಕ್ರಿಯಮಾಣಾಂ ಭಗವತ್ಸಪರ್ಯಾಂ ನ ಸಸ್ಮಾರ ॥

ಅನುವಾದ

ಹೀಗೆ ಅವನು ನಿಯಮಪೂರ್ವಕವಾಗಿ ಶ್ರೀಭಗವಂತನ ಕೈಂಕರ್ಯವನ್ನು ಮಾಡತೊಡಗಲು, ಅದರಿಂದ ಪ್ರೇಮದ ವೇಗವು ಹೆಚ್ಚುತ್ತಾ ಹೃದಯವು ಕರಗಿ ಶಾಂತವಾಯಿತು. ಆನಂದದ ಪ್ರಬಲವಾದ ವೇಗದಿಂದ ಶರೀರದಲ್ಲಿ ರೋಮಾಂಚನವುಂಟಾಯಿತು. ಉತ್ಕಂಠತೆಯ ಕಾರಣ ಕಣ್ಣುಗಳಲ್ಲಿ ಪ್ರೇಮಾಶ್ರುಗಳು ಹರಿದುಬಂದು ಕಣ್ಣುಗಳ ನೋಟವು ಮಂದವಾಯಿತು. ಕಡೆಗೆ ತನ್ನ ಪ್ರಿಯತಮನ ಕೆಂಪಾದ ಅಡಿದಾವರೆಗಳ ಧ್ಯಾನದಿಂದ ಭಕ್ತಿಯೋಗವು ಸಿದ್ಧಿಸಿತು. ಪರಮಾನಂದದಿಂದ ತುಂಬಿದ ಹೃದಯವೆಂಬ ಆಳವಾದ ಸರೋವರದಲ್ಲಿ ಬುದ್ಧಿಯು ಮುಳುಗಿ ಹೋಗಿದ್ದ ರಿಂದ ನಿಯಮ ಪೂರ್ವಕವಾಗಿ ಮಾಡುತ್ತಿದ್ದ ಶ್ರೀಭಗವಂತನ ಪೂಜೆಯ ಸ್ಮರಣೆಯೂ ಉಳಿಯಲಿಲ್ಲ. ॥12॥

(ಗದ್ಯ - 13)

ಮೂಲಮ್

ಇತ್ಥಂ ಧೃತಭಗವದ್ವ್ರತ ಐಣೇಯಾಜಿನವಾಸಸಾನುಸವನಾಭಿಷೇಕಾರ್ದ್ರಕಪಿಶಕುಟಿಲ ಜಟಾಕಲಾಪೇನ ಚ ವಿರೋಚಮಾನಃ ಸೂರ್ಯರ್ಚಾ ಭಗವಂತಂ ಹಿರಣ್ಮಯಂ ಪುರುಷಮುಜ್ಜಿಹಾನೇ ಸೂರ್ಯ ಮಂಡಲೇಭ್ಯುಪತಿಷ್ಠನ್ನೇತದು ಹೋವಾಚ ॥

ಅನುವಾದ

ಹೀಗೆ ಆತನು ಭಗವತ್ಸೇವೆಯ ನಿಯಮದಲ್ಲಿಯೇ ತತ್ಪರನಾಗಿ ರುತ್ತಿದ್ದನು. ದೇಹದಲ್ಲಿ ಜಿಂಕೆಯ ಚರ್ಮವನ್ನು ಧರಿಸುತ್ತಿದ್ದನು. ತ್ರಿಕಾಲಗಳಲ್ಲಿಯೂ ಸ್ನಾನಮಾಡಿ ನೆನೆಯುತ್ತಲೇ ಇದ್ದುದರಿಂದ ಕೂದಲುಗಳು ಬೂದುಬಣ್ಣದ ಗುಂಗುರು ಕೂದಲುಗಳು ಜಟೆಗಳಾಗಿದ್ದವು. ಇದರಿಂದ ಅವನು ಬಹುಸುಂದರವಾಗಿ ಕಾಣುತ್ತಿದ್ದನು. ಉದಯಗೊಂಡ ಸೂರ್ಯಮಂಡಲದಲ್ಲಿ ಸೂರ್ಯ ಸಂಬಂಧವಾದ ಋಕ್ಕುಗಳ ಮೂಲಕ ಜ್ಯೋತಿರ್ಮಯ ಪರಮಪುರುಷ ಭಗವಂತನಾದ ಶ್ರೀಮನ್ನಾರಾಯಣನನ್ನು ಆರಾಧಿಸುತ್ತಾ ಈ ಪ್ರಕಾರ ಹೇಳುತ್ತಿದ್ದನು. ॥13॥

(ಗದ್ಯ - 14)

ಮೂಲಮ್

ಪರೋರಜಃ ಸವಿತುರ್ಜಾತವೇದೋ ದೇವಸ್ಯ ಭರ್ಗೋ ಮನಸೇದಂ ಜಜನ ಸುರೇತಸಾದಃ ಪುನರಾವಿಶ್ಯ ಚಷ್ಟೇ ಹಂಸಂ ಗೃಧ್ರಾಣಂ ನೃಷದ್ರಿಂಗಿರಾಮಿಮಃ ॥

ಅನುವಾದ

ಭಗವಾನ್ ಸೂರ್ಯನ ಕರ್ಮಫಲದಾಯಕನಾದ ತೇಜಸ್ಸು ಪ್ರಕೃತಿಯಿಂದ ಅತೀತವಾಗಿದೆ. ತನ್ನ ಸಂಕಲ್ಪದ ಮೂಲಕ ಈ ಜಗತ್ತನ್ನು ಸೃಷ್ಟಿಸಿದ್ದಾನೆ. ಮತ್ತೆ ಅವನೇ ಅಂತರ್ಯಾಮಿ ರೂಪದಿಂದ ಇದರಲ್ಲಿ ಪ್ರವೇಶಮಾಡಿ ತನ್ನ ಚಿತ್ಶಕ್ತಿಯ ಮೂಲಕ ವಿಷಯಾಸಕ್ತಿಯುಳ್ಳ ಜೀವಿಗಳನ್ನು ರಕ್ಷಿಸುತ್ತಾನೆ. ನಾನು ಬುದ್ಧಿ ಪ್ರವರ್ತಕನಾದ ಆ ತೇಜಸ್ಸನ್ನು ಶರಣು ಹೊಂದುವೆನು. ॥14॥

ಅನುವಾದ (ಸಮಾಪ್ತಿಃ)

ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಭರತಚರಿತೇ ಭಗವತ್ಪರಿಚರ್ಯಾಯಾಂ ಸಪ್ತಮೋಽಧ್ಯಾಯಃ ॥7॥